ಬುಧವಾರ, ಫೆಬ್ರವರಿ 1, 2017

ತಹ ತಹ..... 75 ‘ಭಾರತ ಭಾಗ್ಯ ವಿಧಾತ ‘ದಲ್ಲಿ ಗಾಂಧಿಗಿರಿ;



ದಲಿತ ಸೂರ್ಯನಿಗೆ ಟಾರ್ಚ ಹಾಕಿದ ರೂಪಕ  :
 


ಭಾರತದ ಸಂವಿಧಾನ ಕರಡು ಸಮಿತಿಗೆ ಡಾ.ಅಂಬೇಡ್ಕರ್‌ರವರನ್ನು ಅಧ್ಯಕ್ಷರಾಗಲೇಬೇಕೆಂದು ಹೇಳಿ ಒತ್ತಾಯಿಸಿದವರು ಯಾರು? ಅದು ಮಹತ್ಮಾ ಗಾಂಧಿಯವರು. ಬಾಬಾಸಾಹೇಬರು ಆ ಸಮಿತಿಗೆ ಅಧ್ಯಕ್ಷರಾಗುವವರೆಗೂ ಅಂಬೇಡ್ಕರರವರನ್ನು ಬ್ರಾಹ್ಮಣ ಕುಲದವರು ಎಂದು ತಿಳಿದುಕೊಂಡಿದ್ದವರು ಯಾರು? ಅದು ಗಾಂಧೀಜಿಯವರು. ಅಂಬೇಡ್ಕರರು ಅಸ್ಪೃಷ್ಯ ಜನಾಂಗದವರೆಂದು ಗೊತ್ತಾದ ತಕ್ಷಣ ಅಸ್ಪೃಶ್ಯ ಜನಾಂಗದ ಏಳಿಗೆಗಾಗಿ ಬದುಕನ್ನೇ ಮುಡುಪಾಗಿಡುತ್ತೇನೆ.. ಅವರನ್ನು ಹರಿಜನರೆಂದು ಗೌರವಿಸುತ್ತೇನೆ ಎಂದು ಹೇಳಿದವರು ಯಾರು? ಅದೂ ಸಹ ಎಂ.ಕೆ.ಗಾಂಧಿ.

ಸತ್ಯದ ತಲೆಯ ಮೇಲೆ ಹೊಡೆದಂತಹ ಇಂತಹ ಹಸಿ ಸುಳ್ಳುಗಳನ್ನು ವೈಭವಪೂರ್ವಕವಾಗಿ ಕರ್ನಾಟಕದ ಜನತೆಗೆ ಮುಟ್ಟಿಸಲು ದೊಡ್ಡ ಮಟ್ಟದ ತಯಾರಿ ಮಾಡಿಕೊಂಡಿದ್ದು ಯಾರು? ಅದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಎಂದರೆ ಅಚ್ಚರಿ ಆಗದೇ ಇರದು. ಹೌದು.. ವಾರ್ತಾ ಇಲಾಖೆ ಮಹತ್ವಾಂಕಾಂಕ್ಷೆಯಿಂದಾ ಭಾರತ ಭಾಗ್ಯ ವಿಧಾತ ಎನ್ನುವ ಧ್ವನಿ ಹಾಗೂ ಬೆಳಕಿನ ದೃಶ್ಯ ವೈಭವಗಳ ರೂಪಕವನ್ನು ಪ್ರಾಯೋಜಿಸಿದೆ. ಈ ರೂಪಕದ ಮೊದಲ ಪ್ರದರ್ಶನವು ಫೆಬ್ರುವರಿ 1 ರಂದು ಕಲಾಗ್ರಾಮದಲ್ಲಿ ಅದ್ದೂರಿಯಾಗಿ ನಡೆಯಿತು. ಮೂರು ಕೋಟಿ ರೂಪಾಯಿಗಳ ಈ ಸಂಭ್ರಮದ ಸರಕಾರಿ ಪ್ರಾಜೆಕ್ಟಿಗೆ ತಕರಾರೇನಿಲ್ಲಾ. ಕೆಳ ತಳ ಸಮುದಾಯದವರಿಗೆ ಬದುಕು ಹಾಗೂ ಬೆಳಕನ್ನು ಕೊಡಬಯಸಿದ ಡಾ.ಅಂಬೇಡ್ಕರರ ಬದುಕು ಹಾಗೂ ಸಾಧನೆಯ ಕುರಿತು ರೂಪಕದ ಮೂಲಕ ಜನರಿಗೆ ತಿಳಿಸುವ ಪ್ರಯತ್ನದಲ್ಲಿ ಅಪ್ರಾಮಾಣಿಕತೆ ಏನಿಲ್ಲಾ. ಆದರೆ.. ತಕರಾರಿರುವುದು ಇತಿಹಾಸವನ್ನು ಹೊಸದಾಗಿ ಕಟ್ಟುವ ವಿಕ್ಷಿಪ್ತ ಪ್ರಯತ್ನದ ಕುರಿತು. ಅಂಬೇಡ್ಕರರ ಸಾಧನೆಯನ್ನು ಹೇಳುತ್ತಲೇ ಅವರ ಮಹೋನ್ನತ ಸಾಧನೆಯ ಹಿಂದಿನ ರೂವಾರಿ ಗಾಂಧಿ ಎಂದು ಸಮರ್ಥನೆ ಮಾಡಿಕೊಂಡಿರುವ ಕುರಿತು.

ಮಹಾತ್ಮಾಗಾಂಧಿಯನ್ನು ಕಿಂಗ್‌ಮೇಕರ್ ಮಾಡುವ ಎಲ್ಲಾ ಸಾಧ್ಯತೆಗಳೂ ಈ ರೂಪಕದಲ್ಲಿವೆ. ಡಾ.ಅಂಬೇಡ್ಕರ್ ಸ್ವಯಂಪ್ರಭೆ ಇರುವ ಸೂರ್ಯ. ಸೂರ್ಯನಿಗೆ ಬೇರೆಯವರು ಬೆಳಕು ಕೊಡುವ ಅಗತ್ಯವಿದೆಯಾ? ಆದರೆ ಸೂರ್ಯನಿಗೇ ಟಾರ್ಚ ಹಾಕಿ ಟಾರ್ಚಿನ ಸಹಾಯದಿಂದಲೇ ಆ ಸೂರ್ಯ ಬೆಳಗಿದ್ದು ಎಂದು ಹೇಳುವುದು ಬಹುದೊಡ್ಡ ಕುಚೋದ್ಯ. ಇಂತಹ ಚಾರಿತ್ರಿಕ ಬ್ಲಂಡರ್ ಅನ್ನು ಬೇರೆ ಯಾರೋ ಮಾಡಿದ್ದರೆ ಇಷ್ಟೊಂದು ಬೇಸರವಾಗುತ್ತಿರಲಿಲ್ಲ. ಆದರೆ ಒಂದು ಸರಕಾರಿ ಸಂಸ್ಥೆ ಜನರ ಕೊಟ್ಯಾಂತರ ಹಣವನ್ನು ಖರ್ಚು ಮಾಡಿ  ಅಂಬೇಡ್ಕರವರ ಕುರಿತು ರೂಪಕವನ್ನು ಮಾಡಿ ಅದರಲ್ಲಿ ಅಂಬೇಡ್ಕರರನ್ನು ಸಂವಿಧಾನದ ಶಿಲ್ಪಿಯನ್ನಾಗಿಸುವ ಹಿಂದೆ ಗಾಂಧೀಜಿಯವರ ಒತ್ತಾಸೆ ಇದೆ ಎಂದು ಸಮರ್ಥಿಸಿಕೊಂಡಿದ್ದನ್ನು ಅರಗಿಸಿಕೊಳ್ಳುವುದಾದರೂ ಹೇಗೆ. ರೂಪಕ ನೋಡಿದ ಕೇಳಿದ ಅನುಭವಿಸಿದ ಈಗಿನ ತಲೆಮಾರಿನ ಜನತೆ ಇದನ್ನೇ ಸತ್ಯ ಎಂದು ತಿಳಿದುಕೊಂಡರೆ ಇತಿಹಾಸಕ್ಕೆ ಅಪಚಾರವಾದೀತು. ಅಂಬೇಡ್ಕರರಂತಹ ಸ್ವಯಂಪ್ರತಿಭೆಗೆ ಅವಮಾನವಾದೀತು.

ಮೇಲ್ವರ್ಗದ ಪರವಾದ ಧೋರಣೆಹೊಂದಿ ರಾಜಕೀಯ ಕಾರಣಕ್ಕಾಗಿ ಅಸ್ಪೃಷ್ಯರ ಪರವಾದ ಅನುಕಂಪವನ್ನು ಹೊಂದಿದ್ದ ಗಾಂಧಿಯವರ ಭಿನ್ನ ನಡೆ ನುಡಿಗಳು ಅವರ ಬಗ್ಗೆ ಆಳವಾಗಿ ಅಧ್ಯಯನ ಮಾಡಿದವರಿಗೆ ಗೊತ್ತಾಗದಿರುವ ಸತ್ಯವೇನಲ್ಲಾ. ಬಹುಸಂಖ್ಯಾತ ದಲಿತರಿಗೆ ಎರಡು ಮತಗಳನ್ನು ಚಲಾಯಿಸುವ ಹಕ್ಕು ಬೇಕು ಹಾಗೂ ದಲಿತರಿಗೆ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಸಮಾನ ಹಕ್ಕುಗಳು ಬೇಕು ಎಂದು ಆಗ್ರಹಿಸಿ ಒತ್ತಾಯಿಸಿದ ಅಂಬೇಡ್ಕರರನ್ನು ಶತಾಯ ಗತಾಯ ವಿರೋಧಿಸಿ ಉಪವಾಸ ಕೂತು ಭಾವನಾತ್ಮಕ ಬ್ಲಾಕ್ಮೇಲ್ ತಂತ್ರದಿಂದ ಮಣಿಸಿದವರು ಗಾಂಧಿ ಮಹಾತ್ಮರು. ಎಲ್ಲಿ ಹಿಂದೂ ಧರ್ಮದಿಂದ ದಲಿತಜನಾಂಗ ದೂರಾಗಿ ಪುರೋಹಿತಶಾಹಿ ಪ್ರಣೀತ ಹಿಂದುತ್ವದ ಪರಿಕಲ್ಪನೆ ಒಡೆದು ಹೋಗುತ್ತದೋ ಎಂದು ಆತಂಕಗೊಂಡವರು ಗಾಂಧಿ. ದಲಿತರ ಪರವಾದ ಅಂಬೇಡ್ಕರವರ ಅನೇಕ ಪ್ರಸ್ತಾಪಗಳನ್ನು ತರಾವರಿ ತಂತ್ರಗಾರಿಕೆಯಿಂದ ಜಾರಿಯಾಗದಂತೆ ನೋಡಿಕೊಂಡವರು ಗಾಂಧಿ. ಅಂತರಂಗದಲ್ಲಿ ಹಾಗೂ ಬಹಿರಂಗದಲ್ಲಿ ಕೆಳ-ತಳಸಮುದಾಯದ ಐಕಾನ್ ಆದ ಅಂಬೇಡ್ಕರರನ್ನು ವಿರೋಧಿಸುತ್ತಲೇ ಬಂದವರು ಗಾಂಧಿ. ಗಾಂಧೀಜಿಯವರ ಈ ಎಲ್ಲಾ ತಂತ್ರಗಾರಿಕೆಯನ್ನು ಅರಿತಿದ್ದ ಬಾಬಾಸಾಹೇಬರು ಬ್ರಿಟೀಷ ಸರಕಾರವನ್ನೇ ದಲಿತರ ಪರ ಕಾನೂನುಗಳಿಗಾಗಿ ಒತ್ತಾಯಿಸುತ್ತಿದ್ದರು.  ಅಂಬೇಡ್ಕರರ ಅಸಾಮಾನ್ಯ ಪ್ರತಿಭೆ ಹಾಗೂ ಜ್ಞಾನವನ್ನು ಮಾನ್ಯ ಮಾಡಿದ್ದ ಬ್ರಿಟೀಷ್ ಸರಕಾರ ಬಾಬಾಸಾಹೇಬರ ಪರವಾಗಿತ್ತು. ಸಂವಿಧಾನ ಭಾರತದ ಪ್ರಾಂತೀಯ ಸಭೆಗಳಿಂದ ಆಯ್ಕೆಯಾದ ಸದಸ್ಯರುಗಳು ಸಂವಿಧಾನ ರಚನಾ ಸಮಿತಿಯ ಸದಸ್ಯರುಗಳನ್ನು ಆಯ್ಕೆ ಮಾಡಿದರು. ಆಗಲೂ ಗಾಂಧಿ ಹಾಗೂ ಕೆಲವಾರು ಮನುವಾದಿಗಳು ಅಂಬೇಡ್ಕರರನ್ನು ಸಂವಿಧಾನ ಕರಡು ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡುವ ಪ್ರಸ್ತಾಪಕ್ಕೆ ಅಡ್ಡಗಾಲು ಹಾಕಲು ಪ್ರಯತ್ನಿಸಿತು. ಆದರೆ. ಸಂವಿಧಾನ ರಚನಾ ಸಮಿತಿಯಲ್ಲಿದ್ದ ಮೂವತ್ತಕ್ಕೂ ಹೆಚ್ಚು ಸದಸ್ಯರುಗಳು ಹಾಗೂ ಮೂವರು  ಬ್ರಿಟೀಷ್ ಮಂತ್ರಿಗಳ ಬೆಂಬಲದಿಂದಾಗಿ ಡಾ.ಅಂಬೇಡ್ಕರರು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾದರು. ಆಗಲೂ ಸಹ  ಸಂವಿಧಾನ ರಚನಾ ಸಭೆಯ ಅಧ್ಯಕ್ಷರನ್ನಾಗಿ ಡಾ.ರಾಜೇಂದ್ರ ಪ್ರಸಾದ್‌ರವರನ್ನು ಆಯ್ಕೆಮಾಡಲಾಗಿತ್ತು. ಹೀಗೆ ಹೇಳುತ್ತಾ ಹೋದರೆ ಇನ್ನು ಬೇಕಾದಷ್ಟು ಸಂಗತಿಗಳು ಚರಿತ್ರೆಯಲ್ಲಿ ದಾಖಲಾಗಿವೆ. ಸ್ವತಃ ಡಾ.ಅಂಬೇಡ್ಕರರೇ ಸಂವಿಧಾನ ರಚನೆಯ ಹಿಂದೆ ಮುಂದೆ ಇರುವ ಹಲವಾರು ವಿಚಾರಗಳ ಬಗ್ಗೆ ಪ್ರಸ್ತಾಪಿಸಿ ಬರೆದಿದ್ದಾರೆ. ಆದರೆ.. ಇವೆಲ್ಲವನ್ನು ಪರಿಗಣಿಸದೇ ಈ ರೂಪಕದ ಹಿಂದಿನ ಪಂಡಿತರುಗಳು ಅಂಬೇಡ್ಕರರನ್ನು ಸಂವಿಧಾನ ಕರಡು ಸಮಿತಿಗೆ ಅಧ್ಯಕ್ಷರನ್ನಾಗಿಸಿದ್ದು ಗಾಂಧಿಯವರೇ ಎನ್ನುವಂತೆ ಬಿಂಬಿಸಿದ್ದಾರೆ.

 ಗಾಂಧೀಜಿಯವರಿಗೆ ಅಂಬೇಡ್ಕರರು ಯಾವ ಜಾತಿಯವರು ಎನ್ನುವುದೇ ಗೊತ್ತಿರಲಿಲ್ಲ ಎನ್ನುವುದು ಈ ರೂಪಕದ ಇನ್ನೊಂದು ಕುತರ್ಕ. ಹಾಗೂ ಅಂಬೇಡ್ಕರರು ಅಸ್ಪೃಷ್ಯ ಜಾತಿಯವರು ಎಂದು ಗೊತ್ತಾದ ತಕ್ಷಣ ಆ ಕೆಳ ಸಮುದಾಯದವರಿಗಾಗಿ ಜೀವನ ಮುಡುಪಾಗಿಡುತ್ತೇನೆಂದು ಗಾಂಧಿ ಘೋಷಿಸುವುದು ಮತ್ತೊಂದು ಅರಗಿಸಿಕೊಳ್ಳಲಾಗದ ನಿರ್ಣಯ. ಯಾಕೆ ಈ ರೀತಿ ಮಿಥ್ ಗಳನ್ನು ಹೊಸದಾಗಿ ಸೃಷ್ಟಿಸಲು ಈ ರೂಪಕದ ನಿರ್ಮಾತೃಗಳು ಪ್ರಯತ್ನಿಸಿದರು.    ಎಲ್ಲಾ ಕ್ರೆಡಿಟ್‌ನ್ನು ಗಾಂಧಿಯವರ ಮಹಾತ್ಮಗಿರಿಯ ಅಕೌಂಟಿಗೆ ಜಮೆ ಮಾಡುವ ಉದ್ದೇಶದ ಹಿಂದಿರುವ ಒತ್ತಾಸೆ ಎಂತಹುದು. ಕೇವಲ ಮೇಲ್ವರ್ಗದವರೋ ಇಲ್ಲವೇ ಗಾಂಧಿಯವರ ಅಂಧಾನುಯಾಯಿಗಳೋ ಈ ರೀತಿಯ ಪ್ರಯತ್ನ ಮಾಡಿದ್ದರೆ ಮೆಚ್ಚಬಹುದಾಗಿತ್ತು. ಈಗ ಬಿಜೆಪಿಯವರು ಅಂತರಂಗದಲ್ಲಿ ಶತಾಯಗತಾಯ ವಿರೋಧಿಸುವ ಗಾಂಧಿ, ಅಂಬೇಡ್ಕರ್‌ರವರನ್ನೂ ತಮ್ಮ ರಾಜಕೀಯ ಕಾರಣಕ್ಕಾಗಿ ಹೊಗಳುವುದನ್ನು ಶುರುಹಚ್ಚಿಕೊಂಡಿರುವ ಹಿಂದಿನ ಕುತಂತ್ರವನ್ನೂ ಅರಿಯಬಹುದು. ಆದರೆ.. ಈ ಭಾರತ ಭಾಗ್ಯ ವಿಧಾತ ಎನ್ನುವ ಸರಕಾರಿ ರೂಪಕದ ಪರಿಕಲ್ಪನೆ ವಾರ್ತಾ ಇಲಾಖೆಯ ನಿರ್ದೇಶಕರಾದ ಎನ್.ಆರ್.ವಿಶುಕುಮಾರ್‌ರವರದು ಹಾಗೂ ರೂಪಕದ ನಿರ್ದೇಶನ ಬಿ.ಎಂ.ಗಿರಿರಾಜ್‌ರವರದು.  ಆದರೆ ಅಕಸ್ಮಾತ್ ಇವರಿಬ್ಬರ ಗ್ರಹಿಕೆಯಲ್ಲಿ ತಪ್ಪಾದರೆ ತಿದ್ದಲೆಂದೇ ಸಲಹಾ ಮಂಡಳಿಯೊಂದನ್ನು ಮಾಡಲಾಗಿದೆ. ಅದರಲ್ಲಿ ದಲಿತ ಸಮುದಾಯದ ನಾಯಕರೆಂದು ಗುರುತಿಸಿಕೊಂಡಿದ್ದ ಡಾ.ಸಿದ್ದಲಿಂಗಯ್ಯ, ಎಲ್.ಹನುಮಂತಯ್ಯನವರೂ ಇದ್ದಾರೆ. ಅಂಬೇಡ್ಕರ್ ಅದ್ಯಯನ ಕೇಂದ್ರದ ನಿರ್ದೇಶಕರಾಗಿರುವ ಡಾ.ಎಸ್ ನರೇಂದ್ರಕುಮಾರ್‌ರವರೂ ಇದ್ದಾರೆ. ಸರಕಾರಿ ಕೃಪಾಪೋಷಿತ ಪಂಡಿತರಾದ ಹಂಸಲೇಖ, ಸಿ.ಬಸವಲಿಂಗಯ್ಯ ಹಾಗೂ ಡಾ.ಕೆ.ವೈ.ನಾರಾಯಣಸ್ವಾಮಿಯವರು ಗೌರವ ಸಲಹೆಗಾರರಾಗಿದ್ದಾರೆ. ಆದರೂ ಅಂಬೇಡ್ಕರ್ ರೂಪಕದಲ್ಲಿ ಗಾಂಧಿಗಿರಿಯನ್ನು ಸಮರ್ಥಿಸಿಕೊಳ್ಳಲಾಗಿದೆ. ಇದರಲ್ಲಿ ಯಾರ ಪಾತ್ರ ಎಷ್ಟು ಎಂದು ಗೊತ್ತಿಲ್ಲಾ. ಆದರೆ ಕೆವೈಎನ್ ರವರಂತಹ ರಾಜಾಶ್ರಿತ ಪಂಡತರು ರೂಪಕದ ಗಾಂಧಿಯನ್ ನಿಲುವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹಾಗೂ ಅವರ ಅಂಧಾನುಯಾಯಿ ದಲಿತ ಶಿಷ್ಯಪಡೆ ತಲೆ ಅಲ್ಲಾಡಿಸುತ್ತಿದೆ. ಇನ್ನು ಕೆಲವು ಮೇಲ್ವರ್ಗದವರು ಹಾಗೂ ದಲಿತ ವಿರೋಧಿ ಜನಿವಾರಿಗಳು ಈ ರೂಪಕದ ಗಾಂಧಿಪರ ನಿಲುವನ್ನು ಸಂಭ್ರಮಿಸಿ ಅಂಬೇಡ್ಕರ್ ಸಂವಿಧಾನ ಶಿಲ್ಪಿಯಾಗಲು ಗಾಂಧೀಜಿ ಕಾರಣವೆಂದು ಸಮರ್ಥಿಸಿಕೊಳ್ಳುತ್ತಾ ವಿತಂಡವಾದಕ್ಕಿಳಿಯುತ್ತಿದ್ದಾರೆ.

ಆದರೆ ಈ ಸಮರ್ಥಕರು ಹಾಗೂ ವಿತಂಡವಾದಿಗಳಿಗಿಂತಾ ಈ ರೂಪಕದ ನಿರ್ದೇಶಕರಾದ ಬಿ.ಎಂ.ಗಿರಿರಾಜ್ ರವರ ಪ್ರಾಮಾಣಿಕತೆ ನಿಜಕ್ಕೂ ಮೆಚ್ಚುವಂತಹುದು. ರೂಪಕ ಪ್ರದರ್ಶನದ ನಂತರ ಎಲ್ಲರೂ ರೂಪಕವನ್ನು ಹಾಗೂ ಅದಕ್ಕೆ ಕಾರಣೀಕರ್ತರಾದವರನ್ನು ಹೊಗಳಿ ಅಟಕ್ಕೇರಿಸುತ್ತಿರುವಾಗ ತಲ್ಲಣದಿಂದ ತಳಮಳಿಸುತ್ತಿದ್ದವರು ಗಿರಿರಾಜ್. ರೂಪಕದಲ್ಲಾದ ನ್ಯೂನ್ಯತೆಗಳ ಬಗ್ಗೆ ಅವರಿಗೆ ಗೊತ್ತಾಗಿಹೋಗಿತ್ತು. ತಪ್ಪುಗಳು ಯಾರಿಂದಲೇ ಆಗಿದ್ದರೂ ಅದರ ಹೊಣೆ ಹೊರಬೇಕಾಗಿದ್ದು ರೂಪಕದ ನಿರ್ದೇಶಕರಾದವರೇ ಎನ್ನುವುದು ಗಿರಿರಾಜ್‌ರವರಿಗೆ ಮನದಟ್ಟಾಗಿತ್ತು. ಕೊನೆಗೂ ರೂಪಕದ ಕುರಿತು ತಮ್ಮ ಅತೃಪ್ತಿಯನ್ನು ತೋಡಿಕೊಂಡು ನ್ಯೂನ್ಯತೆಗಳನ್ನು ಸರಿಪಡಿಸಲು ಇನ್ನೊಂದು ಅವಕಾಶ ಕೊಡಿ.. ತಪ್ಪುಗಳನ್ನು ತಿದ್ದಿಕೊಳ್ಳುವೆ ಎಂದು ವೇದಿಕೆಯ ಮೇಲಿಂದಲೇ ಪ್ರೇಕ್ಷಕರ ಪಾದಕ್ಕೆ ನಮಸ್ಕರಿಸಿ ತಪ್ಪೊಪ್ಪಿಕೊಂಡಿದ್ದಂತೂ ಮರೆಯಲಾಗದ ಸಂಗತಿ. ಆ ಒಂದು ಸಾರ್ವಜನಿಕ ತಪ್ಪೊಪ್ಪಿಗೆಯಿಂದಾ ಗಿರಿ ಅಲ್ಲಿದ್ದ ಎಲ್ಲರಿಗಿಂತಲೂ ದೊಡ್ಡವರಾಗಿ ಬಿಟ್ಟರು. ಆತ್ಮಸಾಕ್ಷಿಯನ್ನು ಬಿಟ್ಟು ರೂಪಕವನ್ನು ಆಹಾ ಓಹೋ ಎಂದು ಸಮರ್ಥಿಸಿಕೊಳ್ಳುತ್ತಿದ್ದವರ ಕೆನ್ನೆಗೆ ಗಿರಿರಾಜ್ ಬಾರಿಸಿದಂತೆ ಕೆಲವರಿಗಾದರೂ ಭಾಸವಾಗಿದ್ದಂತೂ ಸತ್ಯ. ತಪ್ಪನ್ನು ಒಪ್ಪಿಕೊಂಡು ಸರಿಪಡಿಸುತ್ತೇನೆ ಇನ್ನೊಂದು ಅವಕಾಶ ಕೊಡಿ ಎಂದು ಸಾರ್ವತ್ರಿಕವಾಗಿ ಕೇಳಿದ ಗಿರಿರಾಜ್ ಪ್ರಾಮಾಣಿಕತೆ ನಿಜಕ್ಕೂ ವಿತಂಡವಾದಿಗಳಿಗೆ ಹಾಗೂ ಹೊಗಳುಬಟ್ಟರಿಗೆ ಪಾಠವಾಗಬೇಕು ಹಾಗೂ ತಪ್ಪುಗಳನ್ನು ಸಮರ್ಥಿಸಿಕೊಳ್ಳುವವರಿಗೆ ಮಾದರಿಯಾಗಬೇಕು.
   
ಆದರೆ.. ಒಂದು ಸರಕಾರಿ ಸಾಂಸ್ಕೃತಿಕ ಕಾರ್ಯಕ್ರಮ ಎಂದರೆ ಇತಿಹಾಸವನ್ನು ತಿರುಚಿದರೂ ಸರಿ ಆದರೆ ಯಾರ ಮನಸ್ಸಿಗೂ ನೋವಾಗಬಾರದು ಎನ್ನುವ ನಿಲುವನ್ನು ಹೊಂದಿರುತ್ತದೆ. ಈ ರೂಪಕದ ಉದ್ದೇಶ ಉದಾತ್ತವಾಗಿರಬಹುದು. ಗಾಂಧಿ ಹಾಗೂ ಅಂಬೇಡ್ಕರರನ್ನು ನಾಯಕರನ್ನಾಗಿ ನಿರೂಪಿಸುವ ಮಹೋನ್ನತ ಬಯಕೆಯೂ ಇರಬಹುದು. ಆದರೆ ಇಂತಹ ಕಲ್ಪಿತ ಆಶಯಗಳಿಗಾಗಿ ಇತಿಹಾಸವನ್ನು ತಿರುಚುವ ಇಲ್ಲವೇ ಮರುನಿರ್ಮಿಸುವ ಪ್ರಯತ್ನ ಅನುಕರಣೀಯವಲ್ಲ.   ಅಂಬೇಡ್ಕರರು ಭಾರತ ಭಾಗ್ಯ ವಿಧಾತ ಎಂದು ಹೇಳುತ್ತಲೇ ಈ ವಿಧಾತನಿಗೆ ದಾತನಾಗಿದ್ದು ಗಾಂಧಿ ಎನ್ನುವುದನ್ನೂ ಪ್ರತಿಪಾದಿಸುವ ಅನಿವಾರ್ಯತೆ ಈ ರೂಪಕದ ನಿರ್ಮಾತೃಗಳಿಗೆ ಇರಬಹುದು. ಅಂಬೇಡ್ಕರ್‌ರವರ ರಾಜಕೀಯ ದೃಷ್ಟಿಕೋನದಲ್ಲಿ ಗಾಂಧಿ ಪ್ರತಿನಾಯಕ, ಗಾಂಧೀಜಿಯವರ ದೃಷ್ಟಿಕೋನದಲಿ ಬಾಬಾಸಾಹೇಬರು ಖಳನಾಯಕ ಎನ್ನುವುದು ಬಹುತೇಕ ಸಂದರ್ಭದಲ್ಲಿ ಸಾಬೀತಾಗಿದೆ. ಆದರೆ.. ಈ ರೂಪಕದಲ್ಲಿ ಇಬ್ಬರನ್ನೂ ನಾಯಕರನ್ನಾಗಿ ಮಾಡುವ ದಾವಂತದಲ್ಲಿ ಗಾಂಧೀಜಿಯನ್ನ ಕಿಂಗ್‌ಮೇಕರ್ ಮಾಡುವ ಅಗತ್ಯವಿರಲಿಲ್ಲ. ಅಂಬೇಡ್ಕರ್ ಜಾತಿ ಯಾವುದೆಂದು ಗೊತ್ತಾದ ತಕ್ಷಣ ಗಾಂಧೀಜಿಯ ಮನಪರಿವರ್ತನೆಯಾಗಿ ದಲಿತೋದ್ದಾರಕನನ್ನಾಗಿ ತೋರಿಸುವ ಅನಿವಾರ್ಯತೆ ಇರಲಿಲ್ಲ. ಇನ್ನೂ ರಾಜ್ಯಾದ್ಯಂತ ೩೦ ಜಿಲ್ಲೆಗಳಲ್ಲಿ ಈ ರೂಪಕವು ಪ್ರದರ್ಶನಗೊಳ್ಳಲಿದೆ. ಮುಂದಿನ ಪ್ರದರ್ಶನದಲ್ಲಾದರೂ ಈ ಐತಿಹಾಸಿಕ ನ್ಯೂನ್ಯತೆಗಳನ್ನು ಸರಿಪಡಿಸುವ ಅಗತ್ಯವಿದೆ. ಇಲ್ಲವಾದರೆ ಅಂಬೇಡ್ಕರ್ ವಾದಿಗಳಷ್ಟೇ ಅಲ್ಲಾ ಪ್ರಗತಿಪರ ವ್ಯಕ್ತಿಗಳೆಲ್ಲಾ ಪ್ರತಿಭಟಿಸಬೇಕಾಗುತ್ತದೆ. ಒಂದು ಉದಾತ್ತ ಉದ್ದೇಶದ ರೂಪಕ ಸುಖಾಸುಮ್ಮನೇ ವಿವಾದಕ್ಕೆ ಒಳಗಾಗುತ್ತದೆ.

ಇಂತಹ ಚಾರಿತ್ರಿಕ ವಿವಾದಾಸ್ಪಕ ಸನ್ನಿವೇಶಗಳನ್ನು ಹೊರತು ಪಡಿಸಿ, ಮುಂದಿನ ಪ್ರದರ್ಶನದಲ್ಲಿ ಬದಲಾಯಿಸಿಕೊಳ್ಳಬಹುದಾದ ತಾಂತ್ರಿಕ ಹಾಗೂ ಅಭಿನಯ ಸಂಬಂಧಿತ ನ್ಯೂನ್ಯತೆಗಳನ್ನು ಹೊರತುಪಡಿಸಿ ಇಡೀ ರೂಪಕ ನಿಜಕ್ಕೂ ಅತ್ಯದ್ಬುತವಾಗಿ ಮೂಡಿಬಂದಿದೆ. ಒಂದೂವರೆ ಗಂಟೆಗಳ ಕಾಲಾವಧಿಯಲ್ಲಿ ಅಂಬೇಡ್ಕರರ ವೇದನೆ ಸಾಧನೆ ಹಾಗೂ ಬದುಕನ್ನು ಕಟ್ಟಿಕೊಡುವಲ್ಲಿ ವಿಶುಕುಮಾರರವರ ಪರಿಕಲ್ಪನೆ ಹಾಗೂ ಬಿ.ಎಂ.ಗಿರಿರಾಜ್‌ರವರ ಸಾಹಿತ್ಯ-ಹಾಗೂ ನಿರ್ದೇಶನ ಯಶಸ್ವಿಯಾಗಿದೆ. ಇನ್ನೂ ಕೆಲವೊಂದಿಷ್ಟು ಬದಲಾವಣೆಗಳೊಂದಿಗೆ ಭಾರತ ಭಾಗ್ಯ ವಿಧಾತನ ಕುರಿತ ರೂಪಕ ಕರ್ನಾಟಕದ ಜನತೆಯನ್ನು ತಲುಪಬೇಕಾಗಿದೆ ಹಾಗೂ ಸರಕಾರ ಹೆಚ್ಚು ಜನರನ್ನು ತಲುಪಿಸಲು ಪ್ರಯತ್ನ ಮಾಡಬೇಕಿದೆ.    

           -ಶಶಿಕಾಂತ ಯಡಹಳ್ಳಿ