ಈ ಒಂದು ಅಮಾನುಷ ಹತ್ಯೆ ಈ
ರೀತಿಯಲ್ಲಿ ಸಂಚಲನವನ್ನು ಹುಟ್ಟಿಸುತ್ತದೆಂದು ಸ್ವತಃ ಕೊಲೆ ಮಾಡಿದವರಿಗೆ ಹಾಗೂ ಕೊಲೆ ಮಾಡಿಸಿದವರಿಗೆ
ಗೊತ್ತೇ ಇರಲಿಲ್ಲ. ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಮತಾಂಧರ ಹಿಂಸಾಪಾತದ
ಕೃತ್ಯ ಇಷ್ಟೊಂದು ದೊಡ್ಡ ಸುದ್ದಿ ಆದೀತೆಂಬ ಕಲ್ಪನೆಯೂ ಆ ಪಾತಕಿಗಳ ಮಹಾಪೋಷಕರಿಗೂ ಬಂದಿರಲಿಲ್ಲ. ರಾಜ್ಯದಲ್ಲಷ್ಟೇ
ಅಲ್ಲಾ ದೇಶಾದ್ಯಂತ ಪ್ರತಿಭಟನೆಗಳು ಹೀಗೆಲ್ಲಾ ತೀವ್ರತೆಯನ್ನು ಪಡೆಯುತ್ತವೆ ಎಂಬ ಊಹೆಯೂ ಆ ಕೋಮುವಾದಿ
ಪಡೆಗಳಿಗೆ ಅಂದಾಜಿರಲಿಲ್ಲ. ಅಂತಿಮ ದರ್ಶನಕ್ಕೆ ಜನರು ತಂಡೋಪತಂಡವಾಗಿ ಹರಿದು ಬರುತ್ತಾರೆಂಬ ಆಲೋಚನೆಯೂ
ಆ ದುರುಳರಿಗಿರಲಿಲ್ಲ. ಕೊಂದವರು ಇಲ್ಲಿ ಹೇಡಿಗಳಾಗಿದ್ದರೆ ಕೊಲೆಯಾದವರು ಗಟ್ಟಿ ಮನಸ್ಸಿನ ದಿಟ್ಟ ಮಹಿಳೆಯಾಗಿದ್ದರು.
ಹೌದು... ಅವರು ಗೌರಿ ಲಂಕೇಶ್.
ಕನ್ನಡ ನಾಡು ಕಂಡ ಅತ್ಯಂತ ನಿಷ್ಟುರ ಪತ್ರಕರ್ತ ಪ್ರಗತಿಪರ ಚಿಂತಕ ಲಂಕೇಶ್ರವರ ಮಗಳಾಗಿದ್ದವರು. ತಮ್ಮ
ಪ್ರಖರವಾದ ಲೇಖನಗಳು, ಜನಮುಖಿ ಚಿಂತನೆಗಳು ಹಾಗೂ ಜನಪರ ಹೋರಾಟಗಳಿಂದಾಗಿ ಗೌರಿ ಲಂಕೇಶರವರು ನಾಡಿನಾದ್ಯಂತ
ಗುರುತಿಸಿಕೊಂಡಿದ್ದವರು. ಹಿಂದುತ್ವವಾದಿಗಳು ಹುಟ್ಟಿಸುವ ಉನ್ಮಾದವನ್ನು, ಮತಾಂಧ ಶಕ್ತಿಗಳ ಹಿಂಸಾಪಾತಗಳನ್ನು,
ಕೋಮುವಾದಿಗಳ ಒಳ ಹುನ್ನಾರಗಳನ್ನು ತಮ್ಮ ಗೌರಿ ಲಂಕೇಶ ಪತ್ರಿಕೆಯ ಮೂಲಕ ನಿರಂತರವಾಗಿ ಬೆತ್ತಲೆಗೊಳಿಸುತ್ತಲೇ
ಬಂದಿದ್ದರು. ಕೋಮು ಸೌಹಾರ್ಧತೆಗಾಗಿ ಸಂಘಟನಾತ್ಮಕ ಪ್ರಯತ್ನಗಳನ್ನು ಮಾಡಿದ್ದರು. ಆಳುವ ವರ್ಗಗಳ ಜನವಿರೋಧಿತನಗಳ
ವಿರುದ್ಧ ನಡೆದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಇದನ್ನು ಕೋಮುವಾದಿ ಪಡೆಗಳಿಗೆ ಸಹಿಸಿಕೊಳ್ಳಲು
ಸಾಧ್ಯವಾಗಲೇ ಇಲ್ಲಾ. ತಮ್ಮ ಕರಾಳ ಮುಖವಾಡಗಳೆಲ್ಲಾ ಬಯಲು ಮಾಡುತ್ತಿದ್ದ ಬೆಳಕನ್ನೇ ನಂದಿಸಿಬಿಟ್ಟರು.
ಮತಾಂಧ ಆಗುಂತಕರು 2017 ಸೆಪ್ಟಂಬರ್ 5ರಂದು ಗೌರಿಯವರ ಮನೆಯ ಆವರಣದಲ್ಲಿ ಹೊಂಚು ಹಾಕಿ ಗುಂಡಿಟ್ಟು
ಕೊಂದುಬಿಟ್ಟರು. ಜೀವಪರ ದ್ವನಿಯೊಂದು ಮೌನವಾಯಿತು. ಪ್ರಜ್ಞಾವಂತ ಜೀವವೊಂದು ನಿರ್ಜಿವಗೊಂಡಿತು. ಈ
ನಾಡಿನ ಸಮಸ್ತ ಪ್ರಗತಿಪರ, ಪ್ರಜ್ಞಾವಂತ ಮನಸುಗಳಿಗೆ ಅನಿರೀಕ್ಷಿತ ಆಘಾತವನ್ನುಂಟುಮಾಡಿತು.
ಮತಿಹೀನ ಮತಾಂಧರು ಮಾಡುತ್ತಿರುವುದು
ಇದೇ ಮೊದಲನೆಯ ಹತ್ಯೆ ಏನಲ್ಲಾ. ಕಳೆದ ಮೂರುವರೆ ಸಾವಿರ ವರ್ಷಗಳ ಈ ದೇಶದ ಮನುಕುಲದ ಇತಿಹಾಸವನ್ನೊಮ್ಮೆ
ನೋಡಿದರೆ ಬುದ್ದನಿಂದ ಬಸವಣ್ಣನವರೆಗೆ ಮನುಧರ್ಮದ ಶೋಷಣೆಯ ವಿರುದ್ಧ ದ್ವನಿಯೆತ್ತಿ ಜನಜಾಗೃತಿ ಮೂಡಿಸಿದವರನ್ನೆಲ್ಲಾ
ಕೊಲೆ ಮಾಡುತ್ತಲೇ ಬರಲಾಗಿದೆ. ತೀರಾ ಇತ್ತೀಚೆಗೆ ಮಹಾರಾಷ್ಟ್ರದ
ಮೌಢ್ಯ ವಿರೋಧಿ ಆಂದೋಲನದ ನೇತೃತ್ವವಹಿಸಿದ್ದ ವಿಚಾರವಾದಿ ನರೇಂದ್ರ ದಾಬೋಲ್ಕರ್ ರವರನ್ನು 2013 ಆಗಸ್ಟ್
20 ರಂದು ಪುಣೆಯಲ್ಲಿ ಕೊಲ್ಲಲಾಯಿತು. ಎಡಪಂಥೀಯ ವಿಚಾರಧಾರೆಯ ಗೋವಿಂಧ ಪನ್ಸಾರೆಯವರನ್ನು 2015 ಫೆಬ್ರವರಿ
16 ರಂದು ಕೊಲ್ಲಾಪುರದಲ್ಲಿ ಹತ್ಯೆಮಾಡಲಾಯಿತು. ಹಾಗೆಯೇ ಕರ್ನಾಟಕದ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿಯವರನ್ನು
2015 ಆಗಸ್ಟ್ 30 ರಂದು ಧಾರವಾಡದಲ್ಲಿ ಸಾಯಿಸಲಾಯಿತು. ಈಗ 2017ರ ಸೆಪ್ಟಂಬರ್ 5 ರಂದು ಜನಪರ ಹೋರಾಟಗಳಲ್ಲಿ
ತೊಡಗಿಸಿಕೊಂಡಿದ್ದ ಪತ್ರಕರ್ತೆ ಗೌರಿ ಲಂಕೇಶರನ್ನು ಬಲಿ ತೆಗೆದುಕೊಳ್ಳಲಾಯಿತು.
ವ್ಯಕ್ತಿಗಳನ್ನು ಕೊಲೆ ಮಾಡಿ
ಗೆದ್ದೆವೆಂಬ ಭ್ರಮೆಯಲ್ಲಿರುವ ಕೊಲೆಪಾತಕ ಶಕ್ತಿಗಳಿಗೆ ಒಂದು ಸತ್ಯ ಇಲ್ಲಿವರೆಗೂ ತಿಳಿದಿಲ್ಲ. ಬುದ್ದನನ್ನು
ಕೊಂದು ತದನಂತರ ಬೌದ್ದ ಧರ್ಮವನ್ನೇ ದೇಶಭ್ರಷ್ಟ ಗೊಳಿಸಿದರೂ ಸಾವಿರಾರು ವರ್ಷಗಳ ನಂತರವೂ ಬುದ್ದ ಎಲ್ಲರ
ಅರಿವಿನ ಬೆಳಕಾಗಿ ದಾರಿದೀಪವಾಗಿದ್ದಾನೆ. ಬಸವಣ್ಣ ಹಾಗೂ ಅವರ ಶಿವಶರಣರನ್ನು ಹತ್ಯೆ ಮಾಡಲಾಯಿತಾದರೂ
ಅವರ ಜ್ಯಾತ್ಯಾತೀತ ವಿಚಾರಗಳನ್ನು ಕೊಲ್ಲಲು ಸಾಧ್ಯವಾಗಲೇ ಇಲ್ಲಾ. ಈಗಲೂ ಶಿವಶರಣರು ಜನರೆದೆಯಲ್ಲಿ
ಬೇರುಬಿಟ್ಟಿದ್ದಾರೆ. ಗಾಂಧಿಯನ್ನೂ ಸಹ ಈ ಧರ್ಮಾಧ ಪಡೆ ಹತ್ಯೆ ಮಾಡಿತಾದರೂ ಗಾಂಧೀಜಿ ಪ್ರತಿಪಾದಿಸಿದ
ಸತ್ಯ, ಅಹಿಂಸೆ ತತ್ವಗಳನ್ನು ನಾಶಮಾಡಲು ಆಗಲೇ ಇಲ್ಲಾ.. ಆಗುವುದೂ ಇಲ್ಲಾ. ಇಂತಹ ಎಲ್ಲಾ ಮಹನೀಯರೂ
ಹಾಗೂ ಅವರು ಪ್ರತಿಪಾದಿಸಿದ ಸಿದ್ದಾಂತಗಳು ಅವರು ಬದುಕಿದ್ದಾಗಿನಿಕಿಂತಾ ಹುತಾತ್ಮರಾದ ಮೇಲೆಯೇ ಬಹುಸಂಖ್ಯಾತ
ಸಮುದಾಯವನ್ನು ಕಾಲದೇಶಾತೀತವಾಗಿ ಆವರಿಸಿಕೊಂಡು ಆದರಣೀಯರಾಗಿದ್ದಾರೆ. ಇಂದಿಲ್ಲಾ ನಾಳೆ ನಾಶವಾಗಬಹುದಾದ
ಬೌತಿಕ ದೇಹವನ್ನು ಕೊಲ್ಲಬಹುದೇ ವಿನಃ ಅವರು ಪ್ರತಿಪಾದಿಸಿದ ವೈಚಾರಿಕತೆಯನ್ನು ನಾಶ ಮಾಡುವುದಂತೂ ಅಸಾಧ್ಯದ
ಮಾತು. ಇಂದು ಒಬ್ಬ ವಿಚಾರವಾದಿಯ ಪ್ರತಿಭಟನೆಯ ದ್ವನಿಯನ್ನು ಅಡಗಿಸಿದರೆ ಇಂದಲ್ಲಾ ನಾಳೆ ಅದೇ ದ್ವನಿ
ಹಲವಾರು ಕೊರಳುಗಳಲ್ಲಿ ಮಾರ್ಧನಿಸುತ್ತದೆ ಎನ್ನುವುದು ಐತಿಹಾಸಿಕ ಸತ್ಯ. ಆದರೆ.. ಈ ಮನುವಾದಿ ಪ್ರೇರಿತ
ಕೊಲೆಪಾತಕರಿಗೆ ಇದೆಲ್ಲಾ ಅರ್ಥವಾಗುವುದಂತೂ ಸಾಧ್ಯವೇ ಇಲ್ಲಾ.. ಇನ್ನೆಷ್ಟು ಜನ ಸೈದ್ದಾಂತಿಕ ಬದ್ದತೆಗೆ
ಬಲಿಯಾಗಬೇಕಾಗುತ್ತದೋ ಗೊತ್ತಿಲ್ಲಾ. ಗೌರಿ ಲಂಕೇಶ್ರ ಆಶಯವನ್ನು ಮುಂದುವರೆಸಿಕೊಂಡು ಹೋಗುವ ಪ್ರಜ್ಞಾವಂತರಿಗಂತೂ
ಕೊರತೆ ಇಲ್ಲಾ.
ಈಗ ಹತ್ಯೆಯಾದ ನಾಲ್ಕೂ ಜನರೂ
ಸಕ್ರೀಯ ರಾಜಕಾರಣಿಗಳಾಗಿರಲಿಲ್ಲಾ.. ಮಂತ್ರಿ ಮಾನ್ಯರೂ ಆಗಿರಲಿಲ್ಲಾ. ಭ್ರಷ್ಟ ದುಷ್ಟರಂತೂ ಅಲ್ಲವೇ
ಅಲ್ಲಾ. ಸಮಾಜವಿರೋಧಿ ಕೃತ್ಯಗಳಲ್ಲಿ ತೊಡಗಿಕೊಂಡವರಲ್ಲಾ.. ಇವರ ಸಾವಿನಿಂದ ಯಾರಿಗೂ ಆರ್ಥಿಕವಾಗಿ ಲಾಭಗಳೂ
ಇರಲಿಲ್ಲ. ಆದರೂ ಯಾಕೆ ಹತ್ಯೆಗೊಳಗಾದರು? ಯಾಕೆಂದರೆ.. ಇವರು ರೂಢಿಗತ ಮೌಢ್ಯಗಳ ವಿರುದ್ದ ದ್ವನಿ ಎತ್ತಿದ್ದರು.
ಕೋಮುದ್ವೇಷಗಳಂತಹ ಸಮಾಜವಿರೋಧಿ ಕೃತ್ಯಗಳನ್ನು ನಿರಂತರವಾಗಿ ಖಂಡಿಸುತ್ತಿದ್ದರು. ಶೋಷಣಾಮುಕ್ತ ಸ್ವಸ್ಥ
ಸಶಕ್ತ ಸಮಾಜ ನಿರ್ಮಾಣದ ಕುರಿತು ಕನಸು ಕಾಣುತ್ತಿದ್ದರು. ದೇಶವನ್ನು ಜಾತಿ, ಮತ, ಧರ್ಮಗಳ ಮೂಲಕ ಒಡೆಯುವ
ವಿನಾಶಕಾರಿ ಶಡ್ಯಂತ್ರಗಳ ವಿರುದ್ಧ ತಿರುಗಿ ಬಿದ್ದಿದ್ದರು. ಹಾಗೂ ಮನುಕುಲ ವಿರೋಧಿ ವ್ಯಕ್ತಿಗಳು ಹಾಗೂ
ಶಕ್ತಿಗಳ ಶಡ್ಯಂತ್ರಗಳನ್ನು ಜನತೆಯ ಮುಂದೆ ತಮ್ಮ ಮಾಧ್ಯಮಗಳ ಮೂಲಕ ಬೆತ್ತಲುಗೊಳಿಸುತ್ತಿದ್ದರು. ಮತೀಯವಾದಿಗಳ
ವಿರುದ್ಧ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದರು. ಇದು ಮತೀಯಶಕ್ತಿಗಳಿಗೆ ಸಹಿಸಲು ಸಾಧ್ಯವೇ ಇಲ್ಲದಾಯಿತು.
ತಮ್ಮ ಮುಖವಾಡಗಳನ್ನು ಬೆತ್ತಲೆಗೊಳಿಸುವವರನ್ನು ಬಲಿ ಪಡೆಯಲು ಆರಂಭಿಸಿದರು. ಇದೇ ಕಾರಣಕ್ಕೆ ಗೌರಿ ಲಂಕೇಶರವರ ಹತ್ಯೆ ಮಾಡಲಾಯಿತು.
ಲಂಕೇಶ್ ಎನ್ನುವ ದೈತ್ಯ ಪ್ರತಿಭೆಯ
ಮಗಳಾಗಿದ್ದರೂ, ಎಲ್ಲಾ ಅನುಕೂಲಗಳ ಜೊತೆಗೆ ಬೆಳೆದಿದ್ದರೂ ಗೌರಿಯವರ ಹಾದಿ ಅಷೊಂದು ಸುಗಮವಾಗಿರಲಿಲ್ಲಾ.
ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾಬ್ಯಾಸ ಮುಗಿಸಿ, ದೆಹಲಿಯ ಜೆಎನ್ಯು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ
ಕಲಿತಾದ ನಂತರ ಟೈಮ್ಸ್ ಆಪ್ ಇಂಡಿಯಾ ಎನ್ನುವ ಆಂಗ್ಲ ಪತ್ರಿಕೆಯಿಂದಾ ತಮ್ಮ ಪತ್ರಕರ್ತ ವೃತ್ತಿಯನ್ನು
ಆರಂಭಿಸಿದರು. ಆಂಗ್ಲಭಾಷೆಯಲ್ಲಿ ಪ್ರಭುತ್ವ ಪಡೆದು, ತನಿಖಾ ಪತ್ರಿಕೋದ್ಯಮದಲ್ಲಿ ಕೌಶಲ್ಯವನ್ನು ಹೊಂದಿದ್ದ
ಗೌರಿಯವರು ರಾಷ್ಟ್ರೀಯ ಪತ್ರಿಕೋದ್ಯಮದಲ್ಲೇ ಮುಂದುವರೆಯಬಹುದಾಗಿತ್ತು. ಆದರೆ 2000 ನೇ ಇಸ್ವಿಯಲ್ಲಿ
ಲಂಕೇಶ್ರವರ ಅಕಾಲಿಕ ಸಾವು ಗೌರಿಯವರನ್ನು ಕರ್ನಾಟಕದ ಪತ್ರಿಕೋದ್ಯಮಕ್ಕೆ ಎಳೆತಂದಿತು. ಅಲ್ಲಿಂದ ಅವರ
ಹೋರಾಟದ ಬದುಕು ಆರಂಭವಾಯಿತು.
ತಂದೆಯವರ ಜನಪ್ರೀಯ ಲಂಕೇಶ್
ವಾರಪತ್ರಿಕೆಯನ್ನು ಅವರ ಆಶಯಕ್ಕೆ ದಕ್ಕೆ ಬಾರದಂತೆ ಮುನ್ನಡೆಸಿಕೊಂಡು ಹೋಗಬೇಕೆಂದರೆ ಸಹೋದರ ಇಂದ್ರಜಿತ್
ಲಂಕೇಶ್ರವರ ಅಸಹಕಾರ ಗೌರಿಯವರನ್ನು ಹೈರಾಣಾಗಿಸಿತು. ತೀವ್ರವಾದ ಭಿನ್ನಾಭಿಪ್ರಾಯ ಹಾಗೂ ನಿತ್ಯ ಸಂಘರ್ಷಗಳ
ಜೊತೆಗೆ ಸಹೋದರನ ಪಾಲುದಾರಿಕೆಯಲ್ಲಿ ಲಂಕೇಶ್ ಪತ್ರಿಕೆಯಲ್ಲಿ ಮುಂದುವರೆಯಲು ಅಸಾಧ್ಯವಾದಾಗ ತಮ್ಮದೇ
ಆದ ಗೌರಿ ಲಂಕೇಶ್ ಪತ್ರಿಕೆಯನ್ನು ಆರಂಭಿಸಿದರು. ಆರಂಭಿಕ ಬಂಡವಾಳದ ಸಮಸ್ಯೆ, ನುರಿತ ಬರಹಗಾರರ ಕೊರತೆ
ಹಾಗೂ ಸ್ವತಃ ಕನ್ನಡ ಭಾಷೆಯ ಮೇಲೆ ಪ್ರಭುತ್ವ ಇಲ್ಲದ ತಾಪತ್ರಯಗಳೆಲ್ಲವನ್ನೂ ಆದಷ್ಟು ಬೇಗ ಬಗೆಹರಿಸಿಕೊಂಡು
ಪ್ರತಿ ವಾರ ಸೈದ್ದಾಂತಿಕ ಬದ್ಧತೆಯಿಂದ, ಜನಪರ ದ್ಯೇಯ ದೋರಣೆಯಲ್ಲಿ ರಾಜಿಯಾಗದೇ, ಜಾಹೀರಾತು ರಹಿತವಾಗಿ
ಪತ್ರಿಕೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದೇ ಒಂದು ವಿಸ್ಮಯ.
ಕೇವಲ ಪತ್ರಿಕೆಯ ಮೂಲಕವೇ ತಮ್ಮ
ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಿದ್ದರೆ ಗೌರಕ್ಕ ಸಹ ನಿಂತ ನೀರಾಗುತ್ತಿದ್ದರೋ ಏನೋ. ಆದರೆ..
ಸಾಮಾಜಿಕ ಹೊಣೆಗಾರಿಕೆಯ ಜವಾಬ್ದಾರಿಯನ್ನು ವಿಸ್ತರಿಸಿಕೊಂಡರು. ನಾಲ್ಕು ಗೋಡೆಗಳಿಂದ ಹೊರ ಬಂದು ಜನರ
ಸಮಸ್ಯೆಗಳಿಗೆ ಸ್ಪಂದಿಸುವ ಕಾಯಕವನ್ನು ದಿಟ್ಟತೆಯಿಂದ ಮಾಡಿದರು. 2002ರಲ್ಲಿ ಗುಜರಾತಿನಲ್ಲಿ ನಡೆದ
ಕೋಮುದ್ವೇಷದ ಮಾರಣಹೋಮ ಗೌರಿಯವರನ್ನು ತಲ್ಲಣಗೊಳಿಸಿತು. ಮತಾಂಧರು ಮಾಡಿದ ನರಹತ್ಯೆಗಳು ತಳಮಳಗಳನ್ನು
ಹುಟ್ಟು ಹಾಕಿದವರು. ಅವತ್ತಿನಿಂದ ಕೋಮುವಾದಿಗಳನ್ನು ಶತಾಯ ಗತಾಯ ವಿರೋಧಿಸತೊಡಗಿದರು. ನಾಡಿನಾದ್ಯಂತ
ಕೋಮುಸೌಹಾರ್ಧತೆಗೆ ಶ್ರಮಿಸತೊಡಗಿದರು. ನಂತರ 2003ರಲ್ಲಿ ಚಿಕ್ಕಮಗಳೂರಿನ ಬಾಬಾಬುಡನ್ಗಿರಿಯಲ್ಲಿ
ಸಂಘಪರಿವಾರಿಗಳು ಧಾರ್ಮಿಕ ಅಸಹನೆಯನ್ನು ಬಿತ್ತಿ ಕೋಮುಪ್ರಚೋದನೆಗಿಳಿದಾಗ ಗೌರಕ್ಕ ಸಿಡಿದೆದ್ದರು.
ಕೋಮುವಾದಿಗಳ ವಿರುದ್ಧ ಹೋರಾಟವನ್ನೂ ಹಮ್ಮಿಕೊಂಡು ಜೈಲುವಾಸವನ್ನೂ ಅನುಭವಿಸಿದರು. ಪ್ರಗತಿಪರ ಆಲೋಚನೆಯ
ಸಮಾನ ಮನಸ್ಕರ ಜೊತೆ ಸೇರಿ 2004ರಲ್ಲಿ “ಕೋಮು ಸೌಹಾರ್ಧ ವೇದಿಕೆ”ಯನ್ನು ಹುಟ್ಟು ಹಾಕಿ ಸಂಘಿಗಳ
ಹುನ್ನಾರಗಳನ್ನು ತಡೆದು ಅಲ್ಲಿ ಕೋಮುಸೌಹಾರ್ಧ ವಾತಾವರಣವನ್ನು ಮರುಸ್ಥಾಪಿಸಲು ಪ್ರಯತ್ನಿಸಿದರು. ಅವತ್ತಿನಿಂದ
ಇವತ್ತಿನವರೆಗೂ ಪ್ರತಿವರ್ಷ ಬಾಬಾಬುಡನ್ಗಿರಿಯ ದತ್ತಪೀಠದಲ್ಲಿ ಸಂಘಪರಿವಾರದವರು ಕಾನೂನುಭಂಗ ಮಾಡುತ್ತಾ
ಭಕ್ತರನ್ನು ಪ್ರಚೋದಿಸುತ್ತಲೇ ಇದ್ದಾರೆ.. ಅವರ ಮಂತ್ರಕ್ಕೆ ತಿರುಮಂತ್ರ ಹಾಕುವ ಕೆಲಸವನ್ನು ಕೋಮು
ಸೌಹಾರ್ಧ ವೇದಿಕೆ ಮಾಡುತ್ತಲೇ ಬಂದಿದೆ. ಗೌರಿ ಲಂಕೇಶ್ ಸದಾ ಮುಂಚೂಣಿಯಲ್ಲಿದ್ದೇ ಇದ್ದು ಪತ್ರಿಕೆ
ಹಾಗೂ ಹೋರಾಟದ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿರುವುದು ಕೋಮುವಾದಿ ಪಡೆಯನ್ನು ಕೆರಳಿಸಿತು.
ಅವತ್ತಿನಿಂದಲೂ ಗೌರಿಯವರ ಮೇಲೆ
ಸೇಡಿನ ಮನೋಭಾವವನ್ನು ಸಂಘಪರಿವಾರದವರು ಬೆಳೆಸಿಕೊಂಡೇ ಬಂದರು. ದೇಶಾದ್ಯಂತ ಎಲ್ಲಿಯೇ ಆಗಲಿ ಕೋಮುಪ್ರಚೋದಿತ
ಗಲಭೆಗಳಾದರೆ ಅದನ್ನು ವಿರೋಧಿಸಿ ಕೋಮುವಾದಿಗಳ ಶಡ್ಯಂತ್ರವನ್ನು ಬಯಲುಗೊಳಿಸುತ್ತಲೇ ಬಂದರು. ಸೂರತ್ಕಲ್
ಗಲಭೆ, ಚರ್ಚ ಮೇಲಿನ ದಾಳಿ, ನೈತಿಕ ಪೊಲೀಸ್ಗಿರಿ.. ಹೀಗೆ ಎಲ್ಲೆಲ್ಲಿ ಮನುವಾದಿಗಳ ಅಟ್ಟಹಾಸ ಇರುತ್ತಿತ್ತೋ
ಅಲ್ಲಲ್ಲಿ ಗೌರಕ್ಕನ ಪ್ರತಿಭಟನೆಯೂ ಇದ್ದೇ ಇರುತ್ತಿತ್ತು. ಪತ್ರಿಕೆ ಎನ್ನುವುದು ಸಮಾಜವಿರೋಧಿ ಶಕ್ತಿಗಳ
ವಿರುದ್ಧ ಅಕ್ಷರಾಸ್ತ್ರವಾಗಿ ಮಾರ್ಪಾಡಾಯಿತು. ಬಜರಂಗದಳವು ಪಾಕಿಸ್ತಾನದ ಬಾವುಟ ಹಾರಿಸಿ ಗಲಭೆ ಹುಟ್ಟುಹಾಕಿದ
ಪ್ರಕರಣ, ಮಲೇಗಾಂವ್ ಸ್ಪೋಟದಂತಹ ಸಂಘಪರಿವಾರದ ಭಯೋತ್ಪಾದನೆಗಳನ್ನು ಖಂಡಿಸಿ ಪತ್ರಿಕೆಯ ಮೂಲಕ ಜನರಿಗೆ
ತಿಳಿಸಿ ಸಂಘಪರಿವಾರದ ದುಷ್ಟತನಗಳ ವಿರುದ್ಧ ಜನಾಭಿಪ್ರಾಯ ರೂಪಿಸಲು ಸತತವಾಗಿ ಪ್ರಯತ್ನಿಸಿದರು. ಮೋದಿ
ಮೇನಿಯಾ ಶುರುವಾಗಿ ಏನೆನೆಲ್ಲಾ ಅನಾಹುತಗಳಾದವು ಎನ್ನುವುದನ್ನು ತಮ್ಮ ಪ್ರತಿವಾರದ ಪತ್ರಿಕಾ ಅಂಕಣಗಳಲ್ಲಿ
ಬರೆದರು. ಅದು ಹೇಗೆ ಈ ಸಂಘಪರಿವಾರ ಹಾಗೂ ಪ್ರಧಾನಿ ಮೋದಿ ಜನರಲ್ಲಿ ರಾಷ್ಟ್ರೀಯತೆಯ ಉನ್ಮಾದ ಹಾಗೂ
ಅಚ್ಚೇ ದಿನ್ ಎನ್ನುವ ಭ್ರಮೆಯನ್ನು ಹುಟ್ಟುಹಾಕಿ ಇಡೀ ದೇಶದ ದಿಕ್ಕು ತಪ್ಪಿಸಿದ್ದಾರೆ ಎನ್ನುವುದನ್ನು
ಎಳೆಎಳೆಯಾಗಿ ತಮ್ಮ ಲೇಖನಗಳಲ್ಲಿ ಬಿಡಿಸಿಟ್ಟರು. ಇನ್ನೇನು
ಬೇಕು ಈ ಸಂಘಿಗಳ ಮಂಗಗಳ ಬಾಲಕ್ಕೆ ಬೆಂಕಿ ಹಚ್ಚಲು.
ಗೌರಿ ಎಂದರೆ ಸಾಕು ಮೋದಿ ಭಕ್ತಾದಿಗಳು ಬೆಚ್ಚಿ ಬೀಳತೊಡಗಿದರು. ಗೌರಿಯವರು ಎತ್ತಿದ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕೊಡಲು ಅಸಮರ್ಥರಾದ
ಭಕ್ತಾದಿಗಳು ಅವರನ್ನು ಜಾಲತಾಣಗಳಲ್ಲಿ ಅಶ್ಲೀಲಕರವಾಗಿ ನಿಂದಿಸಿ ವಿಕೃತ ಸಂತೋಷ ಅನುಭವಿಸತೊಡಗಿದರು.
ಯಾವಾಗ ನಕ್ಸಲ್ ಸಿದ್ದಾಂತವನ್ನು
ಒಪ್ಪಿಕೊಂಡಿರುವವರನ್ನು ಮುಖ್ಯವಾಹಿನಿಗೆ ತರುವ ಕೆಲಸದಲ್ಲಿ ಗೌರಿ ಆಸಕ್ತಿವಹಿಸಿ ಸರಕಾರವನ್ನೂ ಒಪ್ಪಿಸಿದರೋ
ಆಗ ಸಂಘಿಗಳಿಗೆ ಸಂಕಟ ಶುರುವಾಯಿತು. ನಕ್ಸಲರು ಅಂದರೆ ಕನಸಿನಲ್ಲೂ ಬೆಚ್ಚಿಬೀಳುವ ಪರಿವಾರಿಗಳಿಗೆ ಕಾಡಲ್ಲಿರುವ
ನಕ್ಸಲ್ ವಾದಿಗಳು ಅಧೀಕೃತವಾಗಿ ನಾಡಿಗೆ ಬಂದರೆ ತಮ್ಮ ಮುಖವಾಡಗಳು ಬಯಲಾಗಲಿವೆ ಎನ್ನುವ ಸಂಗತಿ ಗೊತ್ತಾಗಿದ್ದೇ
ಚಟಪಡಿಕೆ ಶುರುವಾಯಿತು. 2004 ರಲ್ಲೇ ಶಾಂತಿಗಾಗಿ
ನಾಗರೀಕರು ಎನ್ನುವ ಸಮಾನಮನಸ್ಕರ ವೇದಿಕೆಯಡಿಯಲ್ಲಿ ಅತ್ತ ಮಾವೋವಾದಿಗಳು ಹಾಗೂ ಇತ್ತ ಕಾಂಗ್ರೆಸ್ ಸರಕಾರದ
ಮನವೊಲಿಸಿ ನಕ್ಸಲ್ ಚಳುವಳಿಯಲ್ಲಿ ತೊಡಗಿಸಿಕೊಂಡು ಕಾಡು ಸೇರಿದವರನ್ನು ಮತ್ತೆ ಸಮಾಜದ ಮುಖ್ಯವಾಹಿನಿಗೆ
ತರುವ ಸಂಧಾನ ಪ್ರಯತ್ನ ಗೌರಿಯವರ ನೇತೃತ್ವದಲ್ಲಿ ನಡೆಯಿತು. ನಕ್ಸಲ್ ವಾದಿಗಳು ಹಿಂಸಾಮಾರ್ಗ ತೊರೆದು
ಜನರ ನಡುವೆಯೇ ಇದ್ದು ಪ್ರಜಾಸತ್ತಾತ್ಮಕ ಹೋರಾಟಗಳಿಂದ ವ್ಯವಸ್ಥೆಯನ್ನು ಬದಲಾಯಿಸಲು ಜನಹೋರಾಟಗಳನ್ನು
ಸಂಘಟಿಸಬೇಕು ಎನ್ನುವುದು ಗೌರಿಯವರ ಆಶಯವಾಗಿತ್ತು. ಹಾಗೂ ಆ ಸಂಧಾನ ಪ್ರಕ್ರಿಯೆಯಲ್ಲಿ ಗೌರಿ ಯಶಸ್ವಿಯೂ
ಆದರು. ನೂರ್ ಶ್ರೀಧರ್, ಸಿರಿಮನೆ ನಾಗರಾಜ್ ಮುಂತಾದ ಭೂಗತ ಮಾವೋವಾದಿ ಕಾಮ್ರೇಡ್ಗಳನ್ನು ಕಾನೂನಾತ್ಮಕವಾಗಿ
ಮುಖ್ಯವಾಹಿನಿಗೆ ಸೇರ್ಪಡೆಯಾಗುವಂತೆ ಮಾಡಿದರು. ಹಾಗೆ ಕಾನೂನಿನ ಬಿಕ್ಕಟ್ಟುಗಳಿಂದ ಪಾರಾಗಿ ಹೊರಗೆ
ಬಂದ ಈ ಕಾಮ್ರೇಡ್ಗಳು ಸುಮ್ಮನೇ ಕೂಡದೇ ಗೌರಿಯವರ ಆಶಯದಂತೆ ಜನರ ಸಂಘಟನೆಯಲ್ಲಿ ತೊಡಗಿದರು. ಕೋಮುವಾದಿಗಳ
ವಿರುದ್ಧ ತೊಡೆ ತಟ್ಟಿ ನಿಂತರು. ಅನೇಕಾನೇಕ ಹೋರಾಟಗಳನ್ನು ಸಂಘಟಿಸಿದರು. ಗ್ರಾಮ ಶಹರ ಪಟ್ಟಣಗಳಲ್ಲೆಲ್ಲಾ
ಜನರನ್ನು ಜಾಗೃತ ಗೊಳಿಸತೊಡಗಿದರು. ಮೋದಿ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ತಳಮಟ್ಟದಲ್ಲಿ ಜನಾಭಿಪ್ರಾಯ
ರೂಪಿಸತೊಡಗಿದರು. ಇದರಿಂದಾಗಿ ಸಂಘಪರಿವಾರದವರು ಬೆಚ್ಚಿ ಬಿದ್ದರು. ತಮ್ಮ ಅಸ್ತಿತ್ವಕ್ಕೆ ಆತಂಕ ಆರಂಭವಾಗಿದ್ದನ್ನು
ಕಂಡು ಹಲ್ಲು ಮಸಿಯತೊಡಗಿದರು. ಮೊದಲಾದರೆ ನಕ್ಸಲರ ಮೇಲೆ ದೇಶದ್ರೋಹದ ಆರೋಪ ಮಾಡಿ ಎನ್ ಕೌಂಟರ್ ಮಾಡಿಸಬಹುದಾಗಿತ್ತು. ಆದರೆ ಯಾವಾಗ ಅದೇ ನಕ್ಸಲ್ ಯುವಕರು ಹಿಂಸೆಯನ್ನು ತೊರೆದು
ಜನರ ನಡುವೆಯೇ ಪ್ರಜಾಸತ್ತಾತ್ಮಕ ರೀತಿಯಲ್ಲಿ ಜನಹೋರಾಟಗಳನ್ನು ಸಂಘಟಿಸಿ ಸಂಘಪರಿವಾರದ ಬುಡಕ್ಕೆ ಬಿಸಿನೀರು
ಕಾಯಿಸತೊಡಗಿದರೋ ಸಂಘಿಗಳು ತತ್ತರಿಸತೊಡಗಿದರು. ಕರ್ನಾಟಕದಲ್ಲೂ ತಮ್ಮ ಆಡಳಿತವನ್ನು ಜಾರಿಗೊಳಿಸಬೇಕೆಂದು
ಪ್ರಯತ್ನಿಸುತ್ತಿದ್ದ ಬಿಜೆಪಿಗಳಿಗೆ ಈ ಸಂಘಟನೆಗಳ ಪ್ರತಿರೋಧದಿಂದಾಗಿ ಹಿನ್ನಡೆಯಾಗತೊಡಗಿತು. ಅವರ
ಸಿಟ್ಟು ಕಾಡಲ್ಲಿದ್ದ ಮಾವೋವಾದಿಗಳನ್ನು ನಾಡಿಗೆ ಕರೆತಂದು ತಮ್ಮ ವಿರುದ್ದ ಹೋರಾಟಕ್ಕೆ ನಿಲ್ಲಿಸಿದ
ಗೌರಿ ಲಂಕೇಶರ ಮೇಲೆ ತಿರುಗಿತು.
ಕೋಮುವಾದಿ ಪಡೆಗಳು ಗೌರಿ ಲಂಕೇಶರವರನ್ನು
ಹೆದರಿಸಿ ಬೆದರಿಸಿ ಬಾಯಿ ಮುಚ್ಚಿಸಲು ಬೇಕಾದಷ್ಟು ಪ್ರಯತ್ನ ಮಾಡಿತು. ಸಾಮಾಜಿಕ ಜಾಲತಾಣಗಳಲ್ಲಿ ಗೌರಿಯವರ
ವಿರುದ್ಧ ಪೇಕು ಭಕ್ತಾದಿಗಳು ನಿಂದನಾಸ್ತುತಿಯನ್ನು ಆರಂಭಿಸಿ ಅವರ ನೈತಿಕ ಸ್ತೈರ್ಯವನ್ನು ಹಾಳುಮಾಡಲು
ಪ್ರಯತ್ನಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ಅತಿಥಿಯಾಗಿ ಬಾಗವಹಿಸಿದ್ದಾಗ ಸಂಘಪರಿವಾರದ
ಅಂಗಗಳಾದ ಎಬಿವಿಪಿ ಹಾಗೂ ಭಜರಂಗದಳದ ಮಂಗಗಳು ಗೌರಿಯವರ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದರು. ಇತ್ತೀಚೆಗೆ
ದಾವಣಗೆರೆಯಲ್ಲಿ ನಡೆದ ಲಂಕೇಶ್ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗೌರಿ ಲಂಕೇಶ್ ಪತ್ರಿಕೆಯ
ಅಂಕಣಕಾರಾದ ಯೊಗೇಶ್ ಮಾಸ್ತರರ ಮೇಲೆ ಮಸಿ ಬಳಿದು ಹಲ್ಲೆ ಮಾಡಲಾಯಿತು. ಬೆದರಿಕೆಯ ಪತ್ರಗಳು ಹಾಗೂ ಪೋನ್ಗಳಿಗಂತೂ
ಲೆಕ್ಕವೇ ಇರಲಿಲ್ಲಾ. ಇಂತಹ ನಿಂದನೆ, ಹಲ್ಲೆ, ಬೆದರಿಕೆಗಳಿಗೆಲ್ಲಾ ಅಂಜದೇ ಯಾವಾಗ ಕೋಮುವಾದಿಗಳ ವಿರುದ್ಧ
ಅಘೋಷಿತ ಸಮರವನ್ನು ಗೌರಿಯವರು ಸಾರಿದರೋ ಆಗ ಮತಾಂಧರ ಪಿತ್ತ ನೆತ್ತಿಗೇರಿತು. ಈ ಪ್ರತಿರೋಧದ ದಿಟ್ಟ
ದ್ವನಿಯನ್ನು ಖಾಯಂ ಆಗಿ ನಿಲ್ಲಿಸಿ ಬಿಡುವ ನಿರ್ಧಾರಕ್ಕೆ ಬಂದರು. ಅದಕ್ಕೆ ಸೆಪ್ಟಂಬರ್ 5 ರಂದು ಮುಹೂರ್ತ
ಇಟ್ಟು ಹೇಡಿಗಳಂತೆ ಕತ್ತಲಲ್ಲಿ ಹೊಂಚು ಹಾಕಿ ಗುಂಡಿಟ್ಟು ಕೊಂದು ಕತ್ತಲಲ್ಲಿ ಓಡಿಹೋದರು.
ಗೌರಿಯವರ ಹತ್ಯೆ ಯಾರಿಂದ ಯಾವಕಾರಣಕ್ಕಾಗಿ
ಆಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ.. ಜನರ ದಿಕ್ಕು ತಪ್ಪಿಸಿ ತಮ್ಮ ತಲೆ ಹಾಗೂ ನೆಲೆ ರಕ್ಷಿಸಿಕೊಳ್ಳುವ
ಕೆಲಸವನ್ನು ಮಾಡುವಲ್ಲಿ ಸಂಘಪರಿವಾರದ ಪಡೆ ನಿರತವಾಗಿದೆ. ಸಾವಿನ ಸುದ್ದಿ ತಿಳಿದು ಇನ್ನೂ ಗಂಟೆ ಕೂಡಾ
ಕಳೆದಿರಲಿಲ್ಲಾ ಆರ್ ಎಸ್ ಎಸ್ ಮೆಂಟಾಲಿಟಿಯ ವಾಹಿನಿಗಳು “ನಕ್ಸಲರಿಂದ ಗೌರಿ ಹತ್ಯೆ” ಎನ್ನುವ ಸುಳ್ಳು ಸುದ್ದಿಯನ್ನು
ಪ್ರಚಾರ ಮಾಡತೊಡಗಿದವು. ಕಾಂಗ್ರೆಸ್ ಸರಕಾರದಲ್ಲಿ ಎಂಎಲ್ಸಿ ಆಗಲು ಪ್ರಯತ್ನಿಸಿ ವಿಫಲಗೊಂಡು ಬಿಜೆಪಿ
ಸೇರಿದ ಗೌರಿಯವರ ಸಹೋದರ ಇಂದ್ರಜಿತ್ ಕೂಡಾ ನಕ್ಸರೇ ತನ್ನ ಅಕ್ಕನನ್ನು ಕೊಂದಿರುವ ಬಗ್ಗೆ ಗುಮಾನಿ ಇದೆ
ಎಂದು ಹೇಳಿಕೆ ಕೊಡತೊಡಗಿದರು. ಇದು ಕೋತಿ ತಾನು ಬೆಣ್ಣೆ ತಿಂದು ಮೇಕೆಯ ಬಾಯಿಗೆ ಸವರಿದಂತಾ ಪ್ರಕರಣ.
ಚುನಾವಣೆಯ ವರ್ಷದಲ್ಲಿ ಬಿಜೆಪಿಗೆ ಎಲ್ಲಿ ಗೌರಿ ಹತ್ಯೆ ಹಿನ್ನಡೆಯನ್ನು ಒದಗಿಸುತ್ತದೋ ಎನ್ನುವ ಭಯದಿಂದ
ಬಿಜೆಪಿ ಹಾಗೂ ಅದರ ಸಮರ್ಥಕರು ಗೌರಿ ಕೊಲೆಯನ್ನು ನಕ್ಸಲರ ತಲೆಗೆ ಕಟ್ಟಲು ಪ್ರಯತ್ನಿಸುತ್ತಿದ್ದಾರೆ.
ಇದು ನಿಜಕ್ಕೂ ಖಂಡನೀಯವಾದದ್ದು. ನಕ್ಸಲರು ಈ ಮತಾಂಧ ಭಯೋತ್ಪಾದಕರಂತೆ ಹೇಡಿಗಳಲ್ಲಾ. ಜನವಿರೋಧಿಗಳನ್ನು
ಅವರು ಕೊಲೆ ಮಾಡಿದ್ದರೆ ಈ ಕಾರಣಕ್ಕೆ ಮಾಡಿದ್ದೇವೆ ಎಂದು ಘೋಷಿಸಿಕೊಳ್ಳುತ್ತಾರೆ. ಆದರೆ.. ವಿಚಾರವಾದಿಗಳನ್ನು
ಟಾರ್ಗೆಟ್ ಮಾಡಿ ಕೊಲ್ಲಿಸಿ ನಾವೇನೂ ಮಾಡೇ ಇಲ್ಲಾ ಎನ್ನುವ ಈ ಗೋಸುಂಬೆ ಧರ್ಮಾಂಧರು ಜಗತ್ತಿನ ಅತೀ
ಅಪಾಯಕಾರಿ ಭಯೋತ್ಪಾದಕರು ಎಂಬುದರಲ್ಲಿ ಎರಡು ಮಾತಿಲ್ಲಾ. ನೇರವಾಗಿ ಕದನಕ್ಕೆ ನಿಂತವರನ್ನು ಎದುರಿಸಬಹುದು..
ಹೀಗೆ ಹೇಡಿಗಳಂತೆ ಅವಿತುಕೊಂಡು ಕೊಂದು ಓಡಿಹೋಗಿ ನಾವೇನೂ ಮಾಡಿಸಿಯೇ ಇಲ್ಲಾ ಎನ್ನುವವರನ್ನು ಮಟ್ಟಹಾಕಲು
ಹೊಸ ಪಟ್ಟುಗಳೇ ಬೇಕಿವೆ.
ಗೌರಿ ಲಂಕೇಶರವರು ಶಾಂತಿ ಅಹಿಂಸೆಗಾಗಿ
ಹೋರಾಡಿದ ಧೀರ ದಿಟ್ಟ ಮಹಿಳೆ. ಹಿಂಸಾ ಮಾರ್ಗದಲ್ಲಿ ಸiಸಮಾಜ ನಿರ್ಮಾಣ ಮಾಡುವ ನಕ್ಸಲರನ್ನು ಮುಖ್ಯವಾಹಿನಿಗೆ
ಸೇರಿಸಿ ಅಹಿಂಸಾತ್ಮಕ ಹೋರಾಟದ ಮಾರ್ಗದಲ್ಲಿ ತೊಡಗಿಕೊಳ್ಳುವಂತೆ ಮಾಡಿದವರು. ಅಲ್ಪಸಂಖ್ಯಾತರ ಬದುಕುವ
ಹಕ್ಕುಗಳಿಗಾಗಿ, ಕೋಮು ಸಾಮರಸ್ಯಕ್ಕಾಗಿ, ಮಾನವ ಹಕ್ಕುಗಳಿಗಾಗಿ,
ಜಾತ್ಯಾತೀತ ಮೌಲ್ಯಗಳಿಗಾಗಿ, ಪ್ರಜಾಸತ್ತಾತ್ಮಕ ಮೌಲ್ಯಗಳಿಗಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ
ನಿರಂತರವಾಗಿ ಹೋರಾಡಿದವರು. ಕೋಮುವಾದ ಹಾಗೂ ಜಾತೀವಾದಗಳ ವಿರುದ್ಧ ಅಘೋಷಿತ ಯುದ್ದವನ್ನೇ ಸಾರಿದ್ದರು.
ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ಧತೆ ಕಾಪಾಡಿಕೊಂಡು ಸ್ವಸ್ಥ ಸಮಾಜವನ್ನು ನಿರ್ಮಿಸುವ ತಮ್ಮ ಆಶಯಕ್ಕೆ
ಪೂರಕವಾಗಿ ದಲಿತ, ಮಹಿಳಾ, ರೈತ, ಪ್ರಗತಿಪರ, ಎಡಪಂಥೀಯ ಸಂಘಟನೆಗಳ ಜೊತೆಗೆ ಸದಾ ಸಂಪರ್ಕವನ್ನಿಟ್ಟುಕೊಂಡಿದ್ದರು.
ಇಂತಾ ಜೀವಪರವಾಗಿರುವ ಮಹಿಳೆಯನ್ನು ಜೀವವಿರೋಧಿಗಳು ಮಾತ್ರ ಕೊಲ್ಲಲು ಸಾಧ್ಯ!. ಆ ಜೀವವಿರೋಧಿಗಳು ಯಾರು
ಎನ್ನುವುದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ.
ಇಂದಿಲ್ಲಾ ನಾಳೆ ಕೊಲೆಪಾತಕರು
ಸಿಕ್ಕಿ ಬೀಳಬಹುದು. ಜಾಳು ಜಾಳಾದ ಈ ಕಾನೂನು ವ್ಯವಸ್ಥೆ ಹಾಗೂ ರಾಜಕೀಯ ಒತ್ತಡಗಳಲ್ಲಿ ಅವರು ಕಾನೂನು
ಹಿಡಿತದಿಂದ ಪಾರಾಗಲೂ ಬಹುದು. ಇಲ್ಲವೇ ಶಿಕ್ಷೆಗೂ ಗುರಿಯಾಗಬಹುದು. ಆದರೆ.. ಗೌರಿಯಂತಹ ದಿಟ್ಟ ಪತ್ರಕರ್ತೆ,
ಜನಪರ ಬದ್ದತೆಯುಳ್ಳ ಹೋರಾಟಗಾರ್ತಿ ಮತ್ತೆ ಮರಳಿ ದೊರೆಯಲು ಸಾಧ್ಯವೇ ಇಲ್ಲಾ. ಕೊಂದವರು ಇಲ್ಲಿ ಕೇವಲ
ಕೊಲ್ಲಿಸುವವರ ಕೈಯಲ್ಲಿರುವ ಪರಿಕರಗಳಾಗಿದ್ದಾರಷ್ಟೇ. ಆದರೆ ಸೈದ್ದಾಂತಿಕ ಭಿನ್ನತೆಯಿರುವವರನ್ನು ಕೊಲ್ಲ
ಬಯಸುವ ಮತಾಂಧ ಶಕ್ತಿಗಳು ನಾಶವಾಗದೇ ಈ ಕೊಲೆಗಳು ನಿಲ್ಲುವುದಿಲ್ಲಾ. ಕೊಲೆಗಡುಕರ ಹಿಂದಿರುವವರ ಉದ್ದೇಶ
ಕೇವಲ ಒಬ್ಬ ಕಲಬುರ್ಗಿ ಇಲ್ಲವೇ ಗೌರಿಯವರ ಹತ್ಯೆ ಮಾತ್ರವಲ್ಲಾ.. ಈ ಸಾಂಕೇತಿಕ ಕೊಲೆಗಳ ಮೂಲಕ ಮೌಢ್ಯಗಳ
ವಿರುದ್ದ, ಕೋಮುವಾದಿಗಳ ವಿರುದ್ದ, ಸಂಘಪರಿವಾರದ ಜನವಿರೋಧಿತನಗಳ ವಿರುದ್ದ ಇರುವವರ ಬಾಯಿಮುಚ್ಚಿಸುವ
ಹುನ್ನಾರವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡಿ ಪ್ಯಾಸಿಸ್ಟ್ ಪ್ರಭುತ್ವವನ್ನು ಸ್ಥಾಪಿಸುವುದೇ
ಈ ಮನುವಾದಿ ದುಷ್ಟ ಶಕ್ತಿಗಳ ಶಡ್ಯಂತ್ರವಾಗಿದೆ. ಆದರೆ.. ಮನುಕುಲದ ಇತಿಹಾಸ ಹೇಳುತ್ತದೆ ದಮನ ಹೆಚ್ಚಿದಷ್ಟೂ
ದಂಗೆ ತೀವ್ರಗೊಳ್ಳುತ್ತದೆ ಎಂದು. ಗೌರಿಯಂತಹ ಜನಪರ ಹೋರಾಟಗಾರ್ತಿಯವರ ಸಾವು ವ್ಯರ್ಥವಾಗುವುದಿಲ್ಲಾ.
ಪ್ರಜ್ಞಾವಂತರ ಎದೆಯಲ್ಲಿ ಬೂದಿ ಮುಚ್ಚಿದ ಬೆಂಕಿಯಾಗಿ ಉರಿಯುತ್ತದೆ. ಸಮಯ ಸಂದರ್ಬ ನೋಡಿಕೊಂಡು, ಮತ್ತೆ
ಜನಹೋರಾಟದ ತೀವ್ರತೆಯ ಗಾಳಿ ಬೀಸಿದಾಗ ಬೆಂಕಿ ಪ್ರಜ್ವಲಿಸುತ್ತದೆ. ಈ ಕೋಮುವಾದಿ ಮನುಪಡೆಯನ್ನು ಸುಟ್ಟು
ಹಾಕುತ್ತದೆ. ಅಂತಹ ಕಾಲ ಬೇಗ ಬರಲಿ, ಹುತಾತ್ಮಳಾದ ಗೌರಿಯವರ ಹಿಂಸಾರಹಿತ ಸಮಸಮಾಜದ ಆಶಯ ನಿರ್ಮಾಣಗೊಳ್ಳಲಿ
ಎಂಬುದು ಎಲ್ಲಾ ಪ್ರಗತಿಪರರ ಅಂತರಂಗದ ಬಯಕೆಯಾಗಿದೆ. ಗೌರಿಯವರ ಭೌತಿಕ ದೇಹ ಇಲ್ಲವಾದರೂ ಅವರ ವೈಚಾರಿಕತೆ
ಹಾಗೂ ಸೈದ್ದಾಂತಿಕ ಬದ್ದತೆಗಳು ಬದುಕಿರುವವರಿಗೆ ಮಾದರಿಯಾಗಬೇಕಿದೆ.
ದೀಪವೊಂದನು ಆರಿಸಿ
ಬೆಳಕ ಕೊಂದೆನೆಂದು
ಸೊಕ್ಕಿನಿಂದ ಬೀಗದಿರು..
ಮತ್ತೆ ಪಂಜುಗಳ ಹಚ್ಚುವ
ಕೆಚ್ಚೆದೆಯ ಮನಸುಗಳ
ತಡೆಯುವವರು ಯಾರು..?
-ಶಶಿಕಾಂತ ಯಡಹಳ್ಳಿ