ಭಾನುವಾರ, ನವೆಂಬರ್ 17, 2019

ತಹ ತಹ.. 102 ಅವೈಚಾರಿಕ ಅಧ್ಯಕ್ಷನ ವ್ಯರ್ಥ ಪ್ರಲಾಪ; ಸಾಹಿತ್ಯ ಅಕಾಡೆಮಿಗೆ ಒಕ್ಕರಿಸಿದೆ ಶಾಪ.



ಪ್ರಾರ್ಥನೆ ಇಲ್ಲದೇ ಹುಟ್ಟುವ ಮಕ್ಕಳು ಸಮಾಜಕ್ಕೆ ಶಾಪವಾಗುತ್ತಾರೆ.. ಎಂಬ ನುಡಿಮುತ್ತುಗಳು ಯಾವಾಗ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರ ಬಾಯಿಂದ ಉದುರಿ ಪತ್ರಿಕೆಯಲ್ಲಿ ಪ್ರಕಟವಾದವೋ ಆಗ ಹಲವಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ಈ ಡಾ.ಬಿ.ವಿ.ವಸಂತಕುಮಾರ ಎನ್ನುವ ಸಂಘಪರಿವಾರದ ಅಂಗಕ್ಕೆ  ಕ್ಯಾಕರಿಸಿ ಥೂಕರಿಸತೊಡಗಿದರು. ಸಾಹಿತ್ಯ ಅಕಾಡೆಮಿUಸೀ ವಸಂತಕುಮಾರ್ ಅತೀ ದೊಡ್ಡ ಶಾಪ, ಇವರ ಹೆತ್ತವರು ಸರಿಯಾಗಿ ಪ್ರಾರ್ಥನೆ ಮಾಡಿಲ್ಲವಾದ್ದರಿಂದ ಇಂತಹ ಸಮಾಜಭಂಜಕ ಮಗ ಹುಟ್ಟಿದ್ದು, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಆಗೋದಕ್ಕೆ ನಾಲಾಯಕ್ಕು.. ಎಂದೆಲ್ಲಾ ತರಾವರಿ ಕಾಮೆಂಟುಗಳು ವಾಟ್ಸಾಪ್ ಫೇಸ್ಬುಕ್‌ಗಳಲ್ಲಿ ಹರಿದಾಡತೊಡಗಿದವು. ಯಾವಾಗ ಸಿಕ್ಕಸಿಕ್ಕವರೆಲ್ಲಾ ಈ ಸೋಕಾಲ್ಡ್ ಚೆಡ್ಡಿ ಸಾಹಿತಿಗೆ ಮಂಗಳಾರತಿ ಮಾಡಲು ಶುರುಮಾಡಿದರೋ ಆಗ ಎಚ್ಚೆತ್ತುಕೊಂಡ ವಸಂತಕುಮಾರ್ ಎನ್ನುವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಮಹಾಶಯರು ತಾವಾಡಿದ ಮಾತುಗಳಿಗೆ ವಿತಂಡವಾದದ ಸಮರ್ಥನೆಗಳನ್ನೂ ಹಾಗೂ ಕ್ಷಮೆಯನ್ನೂ ಕೋರಿದ್ದು ಪ್ರಜಾವಾಣಿಯಲ್ಲಿ ಪ್ರಕಟಗೊಂಡಿತು.

ಆದರೆ.. ಕ್ಷಮಿಸಲಾರದ ಮಾತುಗಳನ್ನು ಆಡಿದವರನ್ನು ಕ್ಷಮಿಸುವುದಾದರೂ ಹೇಗೆ. ಮೊದಲಾದರೆ ವ್ಯಕ್ತಿಗತವಾಗಿ ಹೀಗೆ ಹೇಗೇಗೋ ನಾಲಿಗೆ ಹರಿಬಿಟ್ಟಿದ್ದರೆ ಯಾರೂ ಕೇಳಿಸಿಕೊಳ್ಳಲು ಹೋಗುತ್ತಿರಲಿಲ್ಲ, ಪ್ರಾಮುಖ್ಯತೆಯನ್ನೂ ಕೊಡುತ್ತಿರಲಿಲ್ಲ, ಇಷ್ಟಕ್ಕೂ ಈ ವಸಂತಕುಮಾರ್ ಯಾರು ಹಾಗೂ ಸಾಹಿತ್ಯಕ್ಷೇತ್ರದಲ್ಲಿ ಕಡಿದು ಕಟ್ಟೆ ಹಾಕಿದ್ದೇನು ಎಂಬುದೇ ಬಹುತೇಕರಿಗೆ ಗೊತ್ತಿರಲಿಲ್ಲ. ಆದರೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷತೆಯಂತಹ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾಗ ಇಂತಹ ಅಕ್ಷಮ್ಯ ಅವಿವೇಕದ ಮಾತುಗಳನ್ನು ಆಡಿ ಕ್ಷಮಿಸಿ ಎಂದು ಕೇಳಿದರೆ ಕ್ಷಮಿಸುವವರಾದರೂ ಯಾರು?

ನವೆಂಬರ್ 15 ರಂದು ನಡೆದ ಕನಕ ಜಯಂತಿಯ ಕಾರ್ಯಕ್ರಮದಲ್ಲಿ ಅಕಾಡೆಮಿಯ ಅಧ್ಯಕ್ಷ ಅಂತಾ ಆಹ್ವಾನಿಸಿ ಮಾತಾಡಲು ಅವಕಾಶಮಾಡಿಕೊಟ್ಟರೆ ಈ ಶಾಪಗ್ರಸ್ತ ವ್ಯಕ್ತಿ ಯಡವಟ್ಟು ಮಾತಾಡಿ ತಮ್ಮ ಯೋಗ್ಯತೆ ಎಂತಹುದು ಎಂಬುದನ್ನು ಜಗಜ್ಜಾಹೀರು ಮಾಡಿಕೊಂಡರು. ಹೇಳಿದ್ದಾದ ಮೇಲೆ ಸುಮ್ಮನಿರಲಾರದೆ ಪ್ರಜಾವಾಣಿ ವಾಚಕರವಾಣಿಗೆ ವ್ಯರ್ಥ ಸಮರ್ಥನೆ ಬರೆದು ತಮ್ಮ ಮನಸಿನ ಗಾಯವನ್ನು ಕೆರೆದುಕೊಂಡು ಅದರ ದುರ್ವಾಸನೆಯನ್ನು ಎಲ್ಲರಿಗೂ ಹಂಚಿಕೊಂಡರು. ಕನಕಜಯಂತಿ ದಿನ  ವೈದಿಕಶಾಹಿಯ ಈ ಅನಧೀಕೃತ ವಕ್ತಾರ ಹೇಳಿದ ಸಾರ ಇಷ್ಟೇ.. ಕನಕದಾಸರ ಹೆತ್ತವರು ತಿರುಪತಿ ತಮ್ಮಪ್ಪನಿಗೆ ಪ್ರಾರ್ಥನೆ ಮಾಡಿಕೊಂಡಿದ್ದರಿಂದಲೇ ಕನಕದಾಸರಂತವರು ಹುಟ್ಟಿದರು, ಹೀಗೆ ಪ್ರಾರ್ಥನೆ ಇಲ್ಲದೆ ಹುಟ್ಟುವ ಮಕ್ಕಳು ಸಮಾಜಕ್ಕೆ ಶಾಪವಾಗುತ್ತಾರೆ ಎಂದು. ತಮ್ಮ ಈ ಅಧಿಕಪ್ರಸಂಗತನದ ಮಾತಿಗೆ ಸ್ವಾಮಿವಿವೇಕಾನಂದರನ್ನು ಹೆಸರನ್ನು ಎಳೆತಂದು ವಿವೇಕಾನಂದರ ಮಾತನ್ನು ಉಲ್ಲೇಖಿಸಿದ್ದೇನೆ ಎಂದು ತಿಪ್ಪೇ ಸಾರಿಸಿ ರಂಗೋಲಿ ಬಿಟ್ಟು ಡ್ಯಾಮೇಜ್ ಕಂಟ್ರೋಲಿಗೆ ಪ್ರಯತ್ನಿಸಿದರು.

ವಿವೇಕಾನಂದರು ಯಾವಾಗ, ಯಾವ ಸಂದರ್ಭದಲ್ಲಿ, ಎಲ್ಲಿ ಪ್ರಾರ್ಥನೆ ಇಲ್ಲದೆ ಹುಟ್ಟುವ ಮಕ್ಕಳು ಸಮಾಜಕ್ಕೆ ಶಾಪವಾಗುತ್ತಾರೆ ಎಂದು ಹೇಳಿದರೋ ಗೊತ್ತಿಲ್ಲಾ. ಹಾಗೆ ಹೇಳಿದ್ದರೂ ಅದೇ ಪರಮ ಸತ್ಯವೂ ಅಲ್ಲಾ. ಯಾವುದೋ ಸಂದರ್ಭದಲ್ಲಿ ಆಡಿದ ಮಾತು ಸಾರ್ವಕಾಲಿಕ ಸತ್ಯವೂ ಅಗುವುದಿಲ್ಲ. ಇಷ್ಟೂ ಗೊತ್ತಿಲ್ಲದ ವ್ಯಕ್ತಿ ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷರಾಗಲೂ ಅರ್ಹರೂ ಅಲ್ಲಾ. ಕನಕದಾಸರಾದ ನಂತರ ಮಾತ್ರ ತಿರುಪತಿ ತಿಮ್ಮಪ್ಪನಿಗೆ ಮಾಡಿಕೊಂಡ ಪ್ರಾರ್ಥನೆ ಫಲಿಸಿತಾ.. ಕನಕದಾಸನಾಗುವ ಮೊದಲು ತಿಮ್ಮಪ್ಪನಾಯಕ ಪಾಳೇಗಾರನಾಗಿದ್ದಾಗ ಪಾಲ್ಗೊಂಡ ಕದನಗಳಲ್ಲಿ ಸಾವಿರಾರು ಜನರ ಮಾರಣ ಹೋಮ ಮಾಡಿ ರಕ್ತಪಾತ ಮಾಡಿದಾಗ ಪ್ರಾರ್ಥನೆಯ ಫಲ ಇರಲಿಲ್ಲವೇ? ಪ್ರಾರ್ಥನೆಗೂ ಹುಟ್ಟಿಗೂ ಎತ್ತನಿಂದೆತ್ತ ಸಂಬಂಧವಿದೆ.

ಈಗ ಈ ದೇಶಾದ್ಯಂತ ಕೋಮುವಾದದ ಹೆಸರಲ್ಲಿ, ಗೋವಿನ ಹೆಸರಲ್ಲಿ, ದೇವರ ಹೆಸರಲ್ಲಿ, ಧರ್ಮದ ಹೆಸರಲ್ಲಿ ಈ ವಸಂತಕುಮಾರ್‌ರವರು ಪ್ರತಿನಿಧಿಸುವ ಸಂಘಪರಿವಾರದವರು ಮಾಡುವ ಅಗಣಿತ ಹಲ್ಲೆ ಹತ್ಯೆಗಳನ್ನು ಪರಿಗಣಿಸಿದರೆ ಇವರ‍್ಯಾರ ಹೆತ್ತವರೂ ಪ್ರಾರ್ಥನೆ ಮಾಡಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಇವರ ವಾದದಂತೆಯೇ ಪ್ರಾರ್ಥನೆಯಿಂದ ಈ ಎಲ್ಲಾ ಪ್ರತಿಗಾಮಿ ವ್ಯಕ್ತಿ ಶಕ್ತಿಗಳು ಹುಟ್ಟಿದ್ದೇ ದಿಟವಾಗಿದ್ದರೆ ದೇಶದಲ್ಲಿ ಕೋಮು ಸಾಮರಸ್ಯ ಹಾಳು ಮಾಡುತ್ತಿರಲಿಲ್ಲ, ಗೋವಿನ ಹೆಸರಲ್ಲಿ ಗುಂಪು ಹತ್ಯೆಗಳು ನಡೆಯುತ್ತಿರಲಿಲ್ಲ. ಮತ ಮಂದಿರ ಮಸೀದಿಗಳ ನೆಪದಲ್ಲಿ ರಕ್ತಪಾತ ಆಗುತ್ತಿರಲಿಲ್ಲ. ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುತ್ತಿರಲಿಲ್ಲ, ಸಾರ್ವಜನಿಕವಾಗಿ ಸುಡುತ್ತಿರಲಿಲ್ಲ. ಸಮಾಜದ ಸೌಹಾರ್ಧತೆಗೆ ಶಾಪವಾಗಿ ಕಾಡುತ್ತಿರುವ ಈ ಮನುವಾದಿಗಳಿಗೆ, ವೈದಿಕಶಾಹಿಗಳಿಗೆ ಮೊದಲು ಪ್ರಾರ್ಥನೆ ಮಾಡಿ ನಂತರ ಮಕ್ಕಳನ್ನು ಹುಟ್ಟಿಸಲು ಈ ವಸಂತಕುಮಾರರಂತವರು ತಿಳಿಸಿ ಹೇಳಿದ್ದರೆ ಸಮಾಜ ನೆಮ್ಮದಿಯಾಗಿರುತ್ತಿತ್ತೇನೋ. ಪ್ರಾರ್ಥನೆಯಿಂದ ಈ ಉಡುಪಿ ಮಠದ ಪೂರ್ವೀಕರು ಹುಟ್ಟಿದ್ದರೆ ಕೃಷ್ಣದರ್ಶನಕ್ಕಾಗಿ ಬಂದ ಕನಕದಾಸರನ್ನು ಮಠದ ದ್ವಾರದಿಂದ ಹೊರಗೆ ಹಾಕುತ್ತಿರಲಿಲ್ಲ. ಹೀಗೆ ಶೂದ್ರರಿಗೆ, ದಲಿತರಿಗೆ ಶತಮಾನಗಳಿಂದ ಅಸಮಾನತೆಯನ್ನು ಸೃಷ್ಟಿಸಿ ಶಾಪವಾಗಿ ಕಾಡುತ್ತಿರಲಿಲ್ಲ. ಪಂಥಿಬೇಧ ಮಾಡುತ್ತಿರಲಿಲ್ಲ.

ಕನಕದಾಸರನ್ನು ಹೊಗಳುತ್ತಲೇ ತಮ್ಮ ವೈದಿಕತ್ವವನ್ನು ಬಲು ನಾಜೂಕಾಗಿ ಹೇಳುವ ಈ ವಸಂತಕುಮಾರರವರು ಕನಕರು ಉಡುಪಿಯ ಕೃಷ್ಣನನ್ನು ತಿರುಗಿಸಿದರು ಎಂಬುದರ ಅರ್ಥವೂ ಕೃಷ್ಣಭಕ್ತರನ್ನೂ ತಿರುಗಿಸಿದರು ಎಂಬುದಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಹೌದು ಅಬ್ರಾಹ್ಮಣರಾದ ಸಕಲ ಕೃಷ್ಣ ಭಕ್ತರನ್ನು ಗೋಡೆಯ ಆಚೆಗೆ ನಿಲ್ಲಿಸಿ ಕೃಷ್ಣದರ್ಶನ ಮಾಡಿಸುವ ಈ ಶ್ರೀಕೃಷ್ಣನ ಪಾಳೇಗಾರರಾದ ವೈದಿಕರು ಕೃಷ್ಣಭಕ್ತರನ್ನು ಗರ್ಭಗುಡಿಯ ಹಿಂದಿನ ಗೋಡೆಯಾಚೆಗೆ ತಿರುಗಿಸಿದ್ದೂ ಸತ್ಯ. ಎಲ್ಲಿ ಗರ್ಭಗುಡಿಯ ಪಾವಿತ್ರ್ಯತೆ ನಾಶವಾಗುವುದೋ ಎಂದು ಹೆದರಿದ ಪುರೋಹಿತರು ಜನಾಕ್ರೋಶಕ್ಕೆ ಹೆದರಿ ಹಿಂದಿನ ಗೋಡೆಯನ್ನು ಒಡೆದು ಕೃಷ್ಣನ ವಿಗ್ರಹವನ್ನು ತಿರುಗಿಸಿ ಜನರಿಗೆ ಹಿಂಬಾಗಿಲ ಮೂಲಕ ದರ್ಶನ ಭಾಗ್ಯ ಒದಗಿಸಿಕೊಟ್ಟು ತಮ್ಮ ಮಡಿಹುಡಿ ಪಾವಿತ್ರ್ಯತೆಯನ್ನು ಕಾಪಾಡಿಕೊಂಡಿದ್ದೂ ಚಾರಿತ್ರಿಕ ಸತ್ಯ. ಎಷ್ಟಾದರೂ ಈ ಪುರೋಹಿತ ಪುಂಗವರು ಪ್ರಾರ್ಥನೆಗೆ ಹುಟ್ಟಿದವರಲ್ಲವೇ..? ಸಂಘಪರಿವಾರದ ಕೃಪಾಕಟಾಕ್ಷದಿಂದ ಸಾಹಿತ್ಯ ಅಕಾಡೆಮಿಗೆ ಒಕ್ಕರಿಸಿದ ಈ ವಸಂತಕುಮಾರ್ ಎನ್ನುವ ಮಹನೀಯರಿಗೆ ಕುಲವಿಲ್ಲದ ಕನಕದಾಸರು ಬೇಕಾಗಿದೆಯಂತೆ. ಅದೇ ರೀತಿ ಸಾಹಿತ್ಯ ಅಕಾಡೆಮಿಗೂ ಜಾತಿ, ಕುಲ, ಮತ, ಸಂಘಪರಿವಾರದ ಸಿದ್ದಾಂತದ ಹಂಗಿಲ್ಲದ ವೈಚಾರಿಕ ಪ್ರಜ್ಞೆ ಇರುವ ಅಧ್ಯಕ್ಷರು ಬೇಕಾಗಿದ್ದಾರೆ.


ಈ ಹಿಂದೆಯೂ ಅಷ್ಟೇ. ಸಚಿವ ಸಿ.ಟಿ.ರವಿಯವರು ಕಳೆದ ನಾಲ್ಕು ದಶಕಗಳಿಂದ ಅಕಾಡೆಮಿ ಪ್ರಾಧಿಕಾರಕ್ಕೆ ಆಯ್ಕೆ ಆಗಿದ್ದ ಸಾಹಿತಿ ಕಲಾವಿದರನ್ನು ಮನೆಹಾಳರು ಎಂದು ಹೀಯಾಳಿಸಿದಾಗ ಇಡೀ ಸಾಹಿತ್ಯ ಹಾಗೂ ಕಲಾಲೋಕ ಸಿಡಿದೆದ್ದು ಪ್ರತಿರೋಧಿಸಿತ್ತು. ಆದರೆ.. ಆ ಸಚಿವರ ಹಂಗಿರಲ್ಲಿರುವ ಈ ವಸಂತಕುಮಾರ್ ಮಾತ್ರ ಸಚಿವರ ಹೇಳಿಕೆಯನ್ನು ಸಮರ್ಥಿಸಿಕೊಂಡು ಲೇಖನ ಬರೆದು ತಮ್ಮ ಮಾಲೀಕರಿಗೆ ನಿಷ್ಟೆಯನ್ನು ತೋರಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಇರುವುದು ವ್ಯಕ್ತಿಗತ ಹಿಡನ್ ಅಜೆಂಡಾಗಳನ್ನು ಪ್ರತಿಪಾದಿಸಲೂ ಅಲ್ಲಾ, ಸಂಘಪರಿವಾರದವರನ್ನು  ಮೆಚ್ಚಿಸಲಂತೂ ಮೊದಲೇ ಅಲ್ಲಾ. ಅಕಾಡೆಮಿ ಅಧ್ಯಕ್ಷರಾಗುವ ಮುನ್ನ ಎಬಿವಿಪಿ ರಾಷ್ಟ್ರೀಯ ಉಪಾದ್ಯಕ್ಷರಾಗಿದ್ದಾಗ ಏನೇ ಆಚಾರ ವಿಚಾರ ಸಿದ್ದಾಂತಗಳಿದ್ದರೆ ಇರಲಿ. ಆದರೆ ಅಕಾಡೆಮಿ ಅಧ್ಯಕ್ಷರಾದ ನಂತರ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಕೆಲಸಮಾಡುವ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು. ಸಿಕ್ಕ ಅವಕಾಶವನ್ನು ಸಮಗ್ರ ಸಾಹಿತ್ಯಕ್ಷೇತ್ರದ ವಿಸ್ತರಣೆಗಾಗಿ ಬಳಸಿಕೊಳ್ಳಬೇಕು. ನುಡಿದರೆ ಮಾತುಗಳು ಮುತ್ತಿನ ಹಾರದಂತಿರಬೇಕೆ ಹೊರತು ಸಂಘಪರಿವಾರದವರು ಮೆಚ್ಚಿ ಅಹುದಹುದೆನ್ನುವಂತೆ ಇರಬಾರದು. ಸಾಹಿತ್ಯ ಅಕಾಡೆಮಿಗೆ ಈಗಿರುವ ಅಧ್ಯಕ್ಷರು ಶಾಪವಾಗದೇ ಇರಲಿ ಎಂದು ಪ್ರಾರ್ಥಿಸೋಣ.

-ಶಶಿಕಾಂತ ಯಡಹಳ್ಳಿ