ಶುಕ್ರವಾರ, ಮಾರ್ಚ್ 17, 2023

ವದಂತಿಗಳಲ್ಲಿ ಸಂಭ್ರಮಿಸುವ ಮೇನಿಯಾ ಪೀಡಿತರು ಮತ್ತು ಗೋದಿ ಮೀಡಿಯಾಗಳು*

ತಹ ತಹ..


ನಾನೇನೂ ಮಲ್ಲಿಕಾರ್ಜುನ ಖರ್ಗೆಯವರ ಅಭಿಮಾನಿ ಏನಲ್ಲ.. ಆದರೆ ಮೊನ್ನೆ ಸಂಸತ್ತಿನಲ್ಲಿ ಮೋದಿಯವರ ಕುರಿತು ಖರ್ಗೆ ಸಾಹೇಬರು ಸಿಡಿಸಿದ ಲೇವಡಿ ಇದೆಯಲ್ಲಾ ಅದು ಮೋದಿ ಮೇನಿಯಾ ಪೀಡಿತ ಭಕ್ತ ಗಣಾಧಿಗಳೆಲ್ಲಾ ಮುಟ್ಟಿನೋಡಿಕೊಳ್ಳುವಂತಹದ್ದು. ಖರ್ಗೆಯವರು ಹೇಳಿದ್ದಿಷ್ಟೇ.. " ನಮ್ಮ ದೇಶದ  RRR ಸಿನೆಮಾ ಹಾಡಿಗೆ ಆಸ್ಕರ್ ಪ್ರಶಸ್ತಿ ಬಂದಿದ್ದು ಅಭಿನಂದನೀಯ. ಆದರೆ ದಯವಿಟ್ಟು ಬಿಜೆಪಿಯವರು "ಈ  ಹಾಡು ಬರೆದವರು, ಈ ಸಿನೆಮಾ ನಿರ್ದೇಶಿಸಿದವರು ಮೋದಿಯವರು" ಎಂದು ಪ್ರಚಾರ ಮಾಡಿ ಕ್ರೆಡಿಟ್ ತೆಗೆದುಕೊಳ್ಳದಿರಲಿ" ಎಂದು ವಿಡಂಬನೆ ಮಾಡಿ ಇಡೀ ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದರು. ಖರ್ಗೆಯವರ ಮಾತಿನ ಒಳಾರ್ಥ ಅದೆಷ್ಟು ಸಂಸದರಿಗೆ ಅರ್ಥವಾಯಿತೋ ಗೊತ್ತಿಲ್ಲ, ಮೋದಿ ಅಂಧಾಭಿಮಾನಿಗಳಿಗಂತೂ ಇಂತಹ ಸೂಕ್ಷ್ಮಗಳು ಅರ್ಥವಾಗುವುದೂ ಇಲ್ಲ. 

ಸುಳ್ಳು ಸುದ್ದಿಗಳನ್ನು ಹುಟ್ಟಿಸಿ ಮೋದಿಯವರನ್ನು ವೈಭವೀಕರಿಸಿ ಜನರ ಭಾವಲೋಕದಲಿ ಭ್ರಮೆಯನ್ನು ಬಿತ್ತುವ ಸಂಘಿ ಸಂತಾನಗಳ ತಂತ್ರಗಾರಿಕೆ ನಿರಾಕರಿಸುವಂತಿಲ್ಲ. ಈ ಮಾತಿಗೆ ಪೂರಕವಾಗಿ ಹಾಗೂ ಖರ್ಗೆಯವರ ಲೇವಡಿಗೆ ಪುರಾವೆಯಾಗಿ ಮೋದಿಯವರು ನೊಬೆಲ್ ಶಾಂತಿ ಪ್ರಶಸ್ತಿಗೆ ಪ್ರಬಲ ಸ್ಪರ್ಧಿ ಎಂಬ ಗಾಳಿ ಸುದ್ದಿಯನ್ನು ಸತ್ಯದ ತಲೆಯ ಮೇಲೆ ಹೊಡೆದವರಂತೆ ದೇಶಾದ್ಯಂತ ಹಾರಿಬಿಡಲಾಯಿತು. ಇದನ್ನು ತಿಳಿದ ಭಕ್ತಾಸುರರು ಆನಂದಾತಿರೇಕದಿಂದ ಸಾಮಾಜಿಕ ಜಾಲತಾಣಗಳಲ್ಲಿ ಕುಣಿದಾಡಿದರು. ಕೆಲವು ಗೋದಿ ಮಾಧ್ಯಮಗಳು ಖಚಿತತೆ ಪಡೆದುಕೊಳ್ಳದೇ ಈ ವದಂತಿಯನ್ನು ಪ್ರಚಾರಪಡಿಸುತ್ತಾ ಉಘೆ ಉಘೆ ಹೇಳತೊಡಗಿದವು. 

"ನರೇಂದ್ರ ಮೋದಿಯವರು ಈ ವರ್ಷದ ನೊಬೆಲ್ ಪ್ರಶಸ್ತಿಗೆ  ಪ್ರಬಲ ಸ್ಪರ್ಧಿಯಾಗಿದ್ದಾರೆ" ಎಂದು ನೊಬೆಲ್ ಪ್ರಶಸ್ತಿ ಸಮಿತಿಯ ಉಪನಾಯಕ ಅಸ್ಲೆ ಟೋಜೆಯವರು ಹೇಳಿದ್ದಾರೆ ಎಂಬ ವದಂತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಲಾಯಿತು. ಇದನ್ನು ನಂಬಿದ ವಾರ್ತಾಭಾರತಿ ಯಂತಹ ಪತ್ರಿಕೆಯು ತನ್ನ ಆನ್ ಲೈನ್ ವರ್ಷನ್ನಿನಲ್ಲಿ ಈ ಸುದ್ದಿಯನ್ನು ಪ್ರಕಟಿಸಿತು. ಈ ವದಂತಿಯನ್ನೇ ದಿಟವೆಂದು ನಂಬಿದ ಸಂಘೀ ವಟುಗಳು ಕುಂಡಿ ಬಡಿದುಕೊಂಡು ಕುಣಿದಾಡಿದವು. ಆದರೆ ಈ ಸುಳ್ಳು ಸಂಭ್ರಮ ಹೆಚ್ಚು ಸಮಯ ನಿಲ್ಲಲಿಲ್ಲ. ಯಾಕೆಂದರೆ ಇಂತಹ ವದಂತಿ ಬಗ್ಗೆ ತಿಳಿದು ಬೆಚ್ಚಿ ಬಿದ್ದ ನೊಬೆಲ್ ಸಮಿತಿಯ ಅಸ್ಲೆ ಟೋಜೆಯವರು ಎಎನ್ ಐ ಸುದ್ದಿವಾಹಿನಿಯಲ್ಲಿ ಈ ಸುಳ್ಳು ಸುದ್ದಿಯನ್ನು ನಿರಾಕರಿಸಿದ್ದು ಹಾಗೂ ಅವರ ಸಂದರ್ಶನದ ವಿಡಿಯೋ ವೈರಲ್ ಆಗಿದ್ದು ಮಬ್ಬಕ್ತರ ಆಸೆಯ ಬೆಂಕಿಗೆ ತಣ್ಣೀರೆರಚಿದಂತಾಯಿತು. ಇದೊಂದು ಆಧಾರರಹಿತ ಸುಳ್ಳು ಸುದ್ದಿ ಎಂದು ಈ ವದಂತಿ ಪ್ರಚಾರಪಡಿಸಿದ ಚಾನೆಲ್ ಹೆಡ್ ಗಳಿಗೆ ಗೊತ್ತಿಲ್ಲದ ಸಂಗತಿ ಏನಲ್ಲ. ಆದರೆ ಬಿಕರಿಗೊಂಡ ಈ ಮಾಧ್ಯಮಗಳಿಗೆ ಇಂತಹ ವದಂತಿಗಳನ್ನು ಹರಡುವುದರ ಮೂಲಕ ತಮ್ಮ ಮೋದಿ ಭಕ್ತಿಯನ್ನು ಸಾಬೀತುಪಡಿಸುವ ಹಾಗೂ ಜನರಲ್ಲಿ ಭ್ರಮೆಯನ್ನು ಬಿತ್ತುವ ಹಠ. ಸುದ್ದಿ ಸುಳ್ಳು ಎಂದು ಗೊತ್ತಾದ ಮೇಲಾದರೂ ಆಧಾರರಹಿತ ಸುದ್ದಿಯನ್ನು ಪ್ರಚಾರ ಮಾಡಿದ್ದಕ್ಕೆ ಈ ಗೋದಿ ಮೀಡಿಯಾಗಳಿಗೆ ಪಶ್ಚಾತ್ತಾಪವೂ ಇಲ್ಲ, ಕ್ಷಮೆಕೇಳುವ ಔದಾರ್ಯವಂತೂ ಇಲ್ಲವೇ ಇಲ್ಲ. 

ಈ ಮೋದಿ ಮಹಿಮೆಯನ್ನು ಸಾರುವಂತಹ ವದಂತಿ ಹಬ್ಬಿಸಿದ ಮೇನಿಯಾ ಪೀಡಿತರಿಗೆ, ಗೋದಿ ಮಾಧ್ಯಮಗಳಿಗೆ ನೊಬೆಲ್ ಪ್ರಶಸ್ತಿಯ ನಿಯಮಗಳ ಬಗ್ಗೆ ಗೊತ್ತಿರಲಿಕ್ಕಿಲ್ಲ. ಪ್ರಶಸ್ತಿ ಪ್ರಕಟವಾಗುವ ಕೊನೆಯ ಕ್ಷಣದವರೆಗೂ ಪ್ರಶಸ್ತಿ ಪುರಸ್ಕೃತರ ಹೆಸರು ಬಹಿರಂಗವಾಗಲು ನೊಬೆಲ್ ಸಮಿತಿಯಲ್ಲಿ ಅವಕಾಶವಿಲ್ಲ. ಇಷ್ಟಿದ್ದರೂ ಚಾಳಿಬಿದ್ದ ಮೋದಿ ಬಹುಪರಾಕುಪೀಡಿತ ಗೋಬೆಲ್ ಪ್ರಣೀತ ಭಕ್ತರಿಗೆ ಆಗಾಗ ಇಂತಹ ವದಂತಿಗಳನ್ನು ಹಬ್ಬಿಸದಿದ್ದರೆ ನಿದ್ದೆ ಬರೋದಿಲ್ಲ. 

ಇಂತಹ ವ್ಯಕ್ತಿ ವೈಭವೀಕೃತ ವದಂತಿಗಳನ್ನು ಸಂಘ ಪರಿವಾರದವರು ಕಳೆದೊಂದು ದಶಕದಿಂದ ಸೃಷ್ಟಿಸಿ ಸಮಾಜದೊಳಗೆ ಸಾಂಕ್ರಾಮಿಕಗೊಳಿಸುತ್ತಾ ಬಂದಿರುವುದು ಗೊತ್ತಿರುವವರಿಗೆ ಖರ್ಗೆಯವರು ಮಾಡಿದ ಲೇವಡಿ ಖಂಡಿತ ಅರ್ಥವಾಗುತ್ತದೆ. ಮೇನಿಯಾಪೀಡಿತರಿಗೆ ಖರ್ಗೆಯವರ ವಿಡಂಬನೆಯಲ್ಲೂ ಮೋದಿ ಮಹಾತ್ಮೆಯದ್ದೇ ದರ್ಶನವಾಗುತ್ತದೆ.

ಇಷ್ಟಕ್ಕೂ ಭಾರತಕ್ಕೆ ನೊಬೆಲ್ ಶಾಂತಿ ಪ್ರಶಸ್ತಿ ಬಂದರೆ ಸ್ವಾಗತಾರ್ಹವೇ? ಆದರೆ ಅದಕ್ಕೆ ಗೋದ್ರಾ ಹತ್ಯಾಕಾಂಡದಲಿ ಸಾವಿರಾರು ಜನರ ಮಾರಣ ಹೋಮದ ರಕ್ತದ ಕಲೆಗಳನ್ನು ಅಂಟಿಸಿಕೊಂಡ ಮೋದಿಯವರು ಈ ವಿಶ್ವಶಾಂತಿ ಪ್ರಶಸ್ತಿಗೆ ಅದೆಷ್ಟು ಅರ್ಹರು? ಎನ್ನುವ ಪ್ರಶ್ನೆ ಕಾಡದೇ ಇರದು. 

- ಶಶಿಕಾಂತ ಯಡಹಳ್ಳಿ

ಗುರುವಾರ, ಮಾರ್ಚ್ 9, 2023

ಮಹಿಳಾ ದಿನಾಚರಣೆ ಮತ್ತು ಮನುವ್ಯಾಧಿ ಪೀಡಿತರ ಧೋರಣೆ


 ತಹ ತಹ..

ಮಹಿಳಾ ದಿನಾಚರಣೆ ಮತ್ತು ಮನುವ್ಯಾಧಿ ಪೀಡಿತರ ಧೋರಣೆ

ಮಾರ್ಚ 8, ವಿಶ್ವ ಮಹಿಳಾ ದಿನಾಚರಣೆ. ಜಗತ್ತಿನಾದ್ಯಂತ ಹಲವು ಮಹಿಳೆಯರು ತಮಗಾಗಿ ವರ್ಷದಲ್ಲೊಂದು ದಿನ ಮೀಸಲಿದೆಯಲ್ಲಾ ಎಂದು ಸಮಾಧಾನಪಟ್ಟರೆ, ಮಹಿಳೆಯರ ಪರವಾಗಿ ಶುಭಾಶಯಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡು ಕೆಲವು ಪುರುಷರು ಸಂಭ್ರಮಿಸುತ್ತಿದ್ದಾರೆ. ಇದ್ಯಾವುದರ ಅರಿವೇ ಇಲ್ಲದ ಕೋಟ್ಯಾಂತರ ಕೃಷಿ ಕೂಲಿ ಕಾರ್ಮಿಕ ಮಹಿಳೆಯರು ಎಂದಿನಂತೆ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾರೆ. 

ಆದರೆ.. ಬಹುತೇಕ ಪುರುಷರಲ್ಲಿರುವ ಪಿತೃಪ್ರಧಾನ ಶ್ರೇಷ್ಟತೆಯ ವ್ಯಸನ ಹಾಗೂ ಮಹಿಳೆಯರ ಮನದಲ್ಲಿ ಬಿತ್ತಲಾಗಿರುವ ಪುರುಷ ಪ್ರಧಾನ ಆಶಯಗಳು ಅಳಿಯದೇ ಸಮಾನತೆ, ಸ್ವಾತಂತ್ರ್ಯ ಎನ್ನುವುದು ಮಹಿಳೆಯರಿಗೆ ಕನ್ನಡಿಯೊಳಗಿನ ಗಂಟು. ಸಾಂಪ್ರದಾಯಿಕ ಸಂಕೇತಗಳನ್ನು ಮಹಿಳೆಯರ ಮೇಲೆ ಹೇರಿಕೆ ಮಾಡಲಾಗಿದ್ದು ಅವುಗಳಿಂದ ಹೊರಬರುವ ಪ್ರಯತ್ನವನ್ನು ಮಾಡುವ ಮಹಿಳೆಯರನ್ನು  ನಿಂದಿಸಿ, ವಿರೋಧಿಸಿ ರೂಢಿಗತ ಸಂಪ್ರದಾಯದೊಳಗೆ ಸ್ತ್ರೀಕುಲವನ್ನು ಕಟ್ಟಿ ಹಾಕುವ ಪ್ರಯತ್ನವನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತಿದೆ. ಜಾತಿ ಕುಲ ಮತ  ಧರ್ಮ ಸಂಸ್ಕೃತಿಯ ಹೆಸರನ್ನು ಬಳಸಿ ವಿಮೋಚನೆ ಬಯಸುವ ಮಹಿಳೆಯರ ಸ್ವಾತಂತ್ರ್ಯವನ್ನು ದಮನಿಸಲು ಪ್ರಯತ್ನಿಸಲಾಗುತ್ತಿದೆ.

ಇದಕ್ಕೊಂದು ಜ್ವಲಂತ ಉದಾಹರಣೆ ಇಲ್ಲಿದೆ. ಇದೇ ಮಾರ್ಚ್ 8 ರಂದು ಕೋಲಾರದಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಹಿಳಾ ದಿನಾಚರಣೆಯ ಅಂಗವಾಗಿ ಎಕ್ಪೋ ಒಂದನ್ನು ಆಯೋಜಿಸಿತ್ತು. ಈ ಈವೆಂಟಿಗೆ ಆಗಮಿಸಿದ ಕೋಲಾರದ ಬಿಜೆಪಿ ಸಂಸದ ಮುನಿಸ್ವಾಮಿಯವರಿಗೆ ಮಳಿಗೆಯೊಂದರಲ್ಲಿ ಕುಂಕುಮ ಹಚ್ಚದೇ ಸೀರೆ ವ್ಯಾಪಾರ ಮಾಡುತ್ತಿದ್ದ ಮಹಿಳೆಯನ್ನು ಕಂಡು ಸಿಟ್ಟು ನೆತ್ತಿಗೇರಿತು. ಅವರೊಳಗಿನ ಸನಾತನಿ ಸೈತಾನ ಎಚ್ಚರಗೊಂಡು ಸಂತೆಯಲಿ ನಿಂತು ಕೂಗಾಡತೊಡಗಿತು. ತಲೆಯೊಳಗೆ ಲವ್ ಜಿಹಾದ್ ಎನ್ನುವ ಸಂದೇಹದ ಪಿಶಾಚಿ ಕುಣಿದಾಡತೊಡಗಿತು. 

"ಹಣೆಗೆ ಕುಂಕುಮ ಯಾಕೆ ಹಾಕಿಲ್ಲ? ಗಂಡ ಬದುಕಿದ್ದಾನೆ ತಾನೆ? ಯಾರಾದರೂ ಹಣ ಕೊಟ್ಟು ಬಲವಂತವಾಗಿ ಮತಾಂತರ ಮಾಡಿದ್ದಾರಾ?" ಎಂದು ಮುನಿಸ್ವಾಮಿ ಎನ್ನುವ ಈ ಮತಿಹೀನ ಸಂಸದ ಮನುವ್ಯಾಧಿಪೀಡಿತನಾಗಿ ಕೂಗಾಡಿದ್ದರಲ್ಲಿ ಅಚ್ಚರಿ ಏನಿಲ್ಲ. ಯಾಕೆಂದರೆ ಈ ಮನುವಾದಿ ಕೋಮುಪೀಡಿತರ ಮನಸ್ಥಿತಿಯೇ ಮಹಿಳಾ ವಿರೋಧಿಯಾಗಿದೆ. "ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ" ಎನ್ನುವ ವೈದಿಕಶಾಹಿ ಸಂತಾನಗಳು ಮಹಿಳೆಯರ ವ್ಯಕ್ತಿಗತ ಸ್ವಾತಂತ್ರ್ಯವನ್ನು  ಕುಂಕುಮ ಬಳೆ ಕಾಲುಂಗರ ತಾಳಿ ಹಾಗೂ ಸಾಂಪ್ರದಾಯಿಕ ಉಡುಗೆಗಳಲ್ಲಿ ಕಟ್ಟಿ ಹಾಕುತ್ತಲೇ ಬಂದಿದ್ದಾರೆ. ಇದಕ್ಕೆ ಈ ಸಂಸದರಾದ ಮುನಿಸ್ವಾಮಿ ಮಹಾತ್ಮರು ಹೊರತೇನಲ್ಲ. 

ಇಷ್ಟಕ್ಕೂ ಮಹಿಳೆಯರು ಹಣೆಗೆ ಕುಂಕುಮ ಇಡಲೇಬೇಕಾ? ಗಂಡ ಸತ್ತವರು ಕುಂಕುಮ ಇಡಬಾರದಾ? ಕುಂಕುಮ ಹಚ್ಚದೇ ಇದ್ದವರು ಮತಾಂತರಿಗಳಾ? 

ಜಗತ್ತು ಸಮಾತನ ಸಂಪ್ರದಾಯದ ಹಲವಾರು ಸಂಕೋಲನೆಗಳನ್ನು ಹಿಂದೆ ಬಿಟ್ಟು ಮುಂದೆ ಹೋಗುತ್ತಿದ್ದರೆ ಈ ಸನಾತನಿ ಸಂತಾನಗಳು ಮನುಕುಲವನ್ನು ಹಿಮ್ಮುಖವಾಗಿ ತಿರುಗಿಸಿ ಸಂಪ್ರದಾಯದ ಗೂಟಕ್ಕೆ ಮಹಿಳೆಯರನ್ನು ಕಟ್ಟಿ ಹಾಕಿ ಪುರುಷಪ್ರಧಾನ ಪಾರಂಪರ್ಯದ ಪಾಳೆಗಾರಿಕೆಯನ್ನು ಮುಂದುವರೆಸಿಕೊಂಡು ಹೋಗಲು ಶತಾಯ ಗತಾಯ ಪ್ರಯತ್ನಿಸುತ್ತಿದ್ದಾರೆ. 

ಕುಂಕುಮ ಆಭರಣ ಉಂಗುರ ಉಡುಪುಗಳು ಅವರವರ ಇಷ್ಟಕ್ಕೆ ಸಂಬಂಧಿಸಿದ ವ್ಯಕ್ತಿಗತ ಅಳವಡಿಕೆಗಳು. ಇಂತಹುಗಳನ್ನೇ  ಹಾಕಬೇಕು, ಇಂತವುಗಳನ್ನು ತ್ಯಜಿಸಬೇಕು ಎಂದು ಖಡ್ಡಾಯಗೊಳಿಸುವ ಯಾವುದೇ ಹಕ್ಕನ್ನೂ ಸಂವಿಧಾನವು ಯಾವುದೇ ಸಂಪ್ರದಾಯವಾದಿಗಳಿಗೂ ಕೊಟ್ಟಿಲ್ಲ. ಸನಾತನ ಸಂಕೇತಗಳ ಸಂಕೋಲೆಗಳನ್ನು ಧರಿಸುವುದು ಖಡ್ಡಾಯವೂ ಅಲ್ಲ. ಆದರೂ ಧಾರ್ಮಿಕ ಹಿನ್ನೆಲೆಯಲ್ಲಿ  ಭಾವನಾತ್ಮಕವಾಗಿ ಮಹಿಳೆಯರ ಮೇಲೆ ಈ ಎಲ್ಲಾ ಸಂಕೇತಗಳನ್ನು ಹೇರಿ ಭ್ರಮೆ ಹುಟ್ಟಿಸಲಾಗಿದೆ. ಇಂತಹ ಭ್ರಮೆಗೆ ಒಳಗಾದ ಅನೇಕಾನೇಕ ಮಹಿಳೆಯರೂ ಸಹ ತಮ್ಮ ಮೇಲೆ ಹೇರಲಾದ ಸಂಕೋಲೆಗಳನ್ನು ಸಂಪ್ರದಾಯದ ಮೌಲ್ಯಗಳೆಂದು ಸಮರ್ಥಿಸಿಕೊಳ್ಳುತ್ತಾರೆ. ಯಾರಾದರೂ ಪ್ರಶ್ನಿಸಿದರೆ ಇಲ್ಲವೇ ಪ್ರತಿರೋಧಿಸಿದರೆ ಅಂತವರನ್ನು  ಧರ್ಮದ್ರೋಹಿಗಳು ಎಂದು ನಿಂದಿಸಿ, ಸಂಪ್ರದಾಯದ ವಿರೋಧಿಗಳು ಎಂದು ಹಂಗಿಸಲಾಗುತ್ತದೆ. ಈ ಸತ್ ಸಂಪ್ರದಾಯ ಎಲ್ಲಾ ಧರ್ಮಗಳಲ್ಲೂ ಹಾಸುಹೊಕ್ಕಾಗಿದ್ದು ಪುರುಷರಿಗಿಂತ ಮಹಿಳೆಯರ ಮೇಲೆಯೇ ಸಾಂಪ್ರದಾಯಿಕ ದಮನ ಹೆಚ್ಚಾಗಿದೆ. ಗಂಡಸರಿಗಿಲ್ಲದ ಆಚರಣೆ ನಿಯಮಾವಳಿಗಳನ್ನು ಹೆಣ್ಮಕ್ಕಳ ಮೇಲೆ ಹೇರಿಕೆ ಮಾಡಿ ಲಿಂಗತಾರತಮ್ಯವನ್ನು ಖಾಯಂ ಆಗಿ ಉಳಿಸಿಕೊಂಡು ಪುರುಷಪ್ರಧಾನತೆಯನ್ನು ಖಾಯಂಗೊಳಿಸಲು ಇಂತಹ ರೂಢಿಗತ ಅಘೋಷಿತ ನಿಯಮಾವಳಿಗಳನ್ನು ಸ್ತ್ರೀಕುಲದ ಮೇಲೆ ಹೇರಿಕೆ ಮಾಡಲಾಗಿದೆ. ಮಹಿಳಾ ದಿನಾಚರಣೆಯ ದಿನದಂದೇ ಮಹಿಳೆಗೆ ಸಾರ್ವಜನಿಕವಾಗಿ ನಿಂದಿಸಿ ತನ್ನ ಮಹಿಳಾ ವಿರೋಧಿ ನಿಲುವನ್ನು ಬಹಿರಂಗಗೊಳಿಸಿದ ಸಂಸದ ಮುನಿಸ್ವಾಮಿಯವರಿಗೆ ಧಿಕ್ಕಾರವಿರಲಿ. ಇಂತಹುದೇ ಮಹಿಳಾ ವಿರೋಧಿಯಾದ ಮನುವಾದಿ ಪ್ರಣೀತ ಹಿಂದುತ್ವ ಧರ್ಮವನ್ನು ಆಚರಣೆಗೆ ತರಲು ಪ್ರಯತ್ನಿಸುತ್ತಿರುವ ಕೇಸರಿಪಕ್ಷ ಹಾಗೂ ಅದರ ಹಿಂದಿನ ಸೂತ್ರಧಾರಿ ಸಂಘ ಪರಿವಾರದ ಕುರಿತು ಮಹಿಳೆಯರು ಎಚ್ಚರದಿಂದ ಇರಬೇಕಾಗಿದೆ. ಹಿಂದೂಧರ್ಮ ಸಂಸ್ಥಾಪನೆಗಾಗಿ ಭಾವನಾತ್ಮಕ ಭ್ರಮೆಗಳನ್ನು ಹುಟ್ಟಿಸುತ್ತಾ ಸ್ತ್ರೀಕುಲವನ್ನು ಮಾನಸಿಕ ಗುಲಾಮತನಕ್ಕೆ ಕಟ್ಟಿ ಹಾಕುವ ಮಹಿಳಾ ವಿರೋಧಿ ತಂತ್ರಗಾರಿಕೆಯನ್ನು ವಿರೋಧಿಸಲೇಬೇಕಿದೆ. ಮಹಿಳಾ ವಿರೋಧಿತನಕ್ಕೆ ಸಂಸದ ಮುನಿಸ್ವಾಮಿ ಕೇವಲ ಒಂದು ಉದಾಹರಣೆ ಮಾತ್ರ ಆಗಿದ್ದರೆ ಈ ಘಟನೆಯನ್ನು ನಿರ್ಲಕ್ಷಿಸಬಹುದಾಗಿತ್ತು. ಆದರೆ ಮುನಿಸ್ವಾಮಿ ಪ್ರತಿನಿಧಿಸುವ ಪಕ್ಷದ ಹಿಡನ್ ಅಜೆಂಡಾ ಸ್ತ್ರೀಕುಲ ಕಂಟಕವಾಗಿದೆ. ಅಷ್ಟೇ ಯಾಕೆ ಬೇರೆಲ್ಲಾ ರಾಜಕೀಯ ಪಕ್ಷ, ಸಂಘಟನೆ, ಧರ್ಮಗಳಲ್ಲೂ ಸಹ ಲಿಂಗತಾರತಮ್ಯವನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲಿಸುವವರು, ಆಚರಿಸುವವರು, ಹೇರಿಕೆ ಮಾಡುವವರು ಸಕ್ರೀಯರಾಗಿದ್ದಾರೆ. ತಮ್ಮ ಮನೆಗಳಲ್ಲಿರುವ ಮಹಿಳೆಯರಿಗೆ ಕನಿಷ್ಟ ಸ್ವಾತಂತ್ರ್ಯವನ್ನೂ ಕೊಡಲು ಹಿಂದೆಮುಂದೆ ನೋಡುವ ಅನೇಕ ಪುರುಷರೂ ಮಹಿಳಾ ದಿನಾಚರಣೆಯನ್ನು ವೈಭವೀಕರಿಸಿ ಶುಭಾಶಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಯಾರೇನೇ ಒಪ್ಪಲಿ ಇಲ್ಲಾ ಬಿಡಲಿ ಈ ದೇಶದ ಬಹುತೇಕ ಪುರುಷರ ಅಂತರಂಗದಲ್ಲಿ ಈ ಮುನಿಸ್ವಾಮಿಯಂತಹ ಮನುವಾದಿ ಸಂತಾನಗಳ ಸೈತಾನ ಗುಣವಿಶೇಷ ಮನೆಮಾಡಿಕೊಂಡಿದೆ. ಪುರುಷ ಪ್ರಧಾನ ವ್ಯವಸ್ಥೆಯ ಮೌಲ್ಯಗಳೂ ಸಹ ಅನೇಕ ಮಹಿಳೆಯರ ಮನದಲ್ಲಿ ಬೇರುಬಿಟ್ಟಿವೆ. ಹೀಗಾಗಿ ಲಿಂಗ ಸಮಾನತೆ ಹಾಗೂ ಮಹಿಳಾ ಸ್ವಾತಂತ್ರ್ಯ ಎನ್ನುವುದು ಮರೀಚಿಕೆಯಾಗಿದೆ.

ಯಾವುದೇ ಸಂಸ್ಕೃತಿ ಸಂಪ್ರದಾಯವಾಗಿರಲಿ ವ್ಯಕ್ತಿಗತ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿದ್ದರೆ ಅದಕ್ಕೆ ಧಿಕ್ಕಾರವಿರಲಿ. ಯಾವುದೇ ಧರ್ಮವಿರಲಿ ಸಂಪ್ರದಾಯದ ಹೆಸರಲ್ಲಿ ಮಹಿಳೆಯರ ದಮನ ಮಾಡುತ್ತಿದ್ದರೆ ಅದಕ್ಕೆ ಪ್ರತಿರೋಧ ಇರಲಿ. ವಿಶ್ವ ಮಹಿಳಾ ದಿನಾಚರಣೆ ಎಂಬುದು ಸಂಪ್ರದಾಯದ ಹೆಸರಲ್ಲಿ ಹೊರೆಸಲಾದ ಬಲವಂತದ ಹೇರಿಕೆಯನ್ನು ವಿರೋಧಿಸುವ ದಿನವಾಗಲಿ.

- ಶಶಿಕಾಂತ ಯಡಹಳ್ಳಿ