ನಾನೇನೂ ಮಲ್ಲಿಕಾರ್ಜುನ ಖರ್ಗೆಯವರ ಅಭಿಮಾನಿ ಏನಲ್ಲ.. ಆದರೆ ಮೊನ್ನೆ ಸಂಸತ್ತಿನಲ್ಲಿ ಮೋದಿಯವರ ಕುರಿತು ಖರ್ಗೆ ಸಾಹೇಬರು ಸಿಡಿಸಿದ ಲೇವಡಿ ಇದೆಯಲ್ಲಾ ಅದು ಮೋದಿ ಮೇನಿಯಾ ಪೀಡಿತ ಭಕ್ತ ಗಣಾಧಿಗಳೆಲ್ಲಾ ಮುಟ್ಟಿನೋಡಿಕೊಳ್ಳುವಂತಹದ್ದು. ಖರ್ಗೆಯವರು ಹೇಳಿದ್ದಿಷ್ಟೇ.. " ನಮ್ಮ ದೇಶದ RRR ಸಿನೆಮಾ ಹಾಡಿಗೆ ಆಸ್ಕರ್ ಪ್ರಶಸ್ತಿ ಬಂದಿದ್ದು ಅಭಿನಂದನೀಯ. ಆದರೆ ದಯವಿಟ್ಟು ಬಿಜೆಪಿಯವರು "ಈ ಹಾಡು ಬರೆದವರು, ಈ ಸಿನೆಮಾ ನಿರ್ದೇಶಿಸಿದವರು ಮೋದಿಯವರು" ಎಂದು ಪ್ರಚಾರ ಮಾಡಿ ಕ್ರೆಡಿಟ್ ತೆಗೆದುಕೊಳ್ಳದಿರಲಿ" ಎಂದು ವಿಡಂಬನೆ ಮಾಡಿ ಇಡೀ ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದರು. ಖರ್ಗೆಯವರ ಮಾತಿನ ಒಳಾರ್ಥ ಅದೆಷ್ಟು ಸಂಸದರಿಗೆ ಅರ್ಥವಾಯಿತೋ ಗೊತ್ತಿಲ್ಲ, ಮೋದಿ ಅಂಧಾಭಿಮಾನಿಗಳಿಗಂತೂ ಇಂತಹ ಸೂಕ್ಷ್ಮಗಳು ಅರ್ಥವಾಗುವುದೂ ಇಲ್ಲ.
ಸುಳ್ಳು ಸುದ್ದಿಗಳನ್ನು ಹುಟ್ಟಿಸಿ ಮೋದಿಯವರನ್ನು ವೈಭವೀಕರಿಸಿ ಜನರ ಭಾವಲೋಕದಲಿ ಭ್ರಮೆಯನ್ನು ಬಿತ್ತುವ ಸಂಘಿ ಸಂತಾನಗಳ ತಂತ್ರಗಾರಿಕೆ ನಿರಾಕರಿಸುವಂತಿಲ್ಲ. ಈ ಮಾತಿಗೆ ಪೂರಕವಾಗಿ ಹಾಗೂ ಖರ್ಗೆಯವರ ಲೇವಡಿಗೆ ಪುರಾವೆಯಾಗಿ ಮೋದಿಯವರು ನೊಬೆಲ್ ಶಾಂತಿ ಪ್ರಶಸ್ತಿಗೆ ಪ್ರಬಲ ಸ್ಪರ್ಧಿ ಎಂಬ ಗಾಳಿ ಸುದ್ದಿಯನ್ನು ಸತ್ಯದ ತಲೆಯ ಮೇಲೆ ಹೊಡೆದವರಂತೆ ದೇಶಾದ್ಯಂತ ಹಾರಿಬಿಡಲಾಯಿತು. ಇದನ್ನು ತಿಳಿದ ಭಕ್ತಾಸುರರು ಆನಂದಾತಿರೇಕದಿಂದ ಸಾಮಾಜಿಕ ಜಾಲತಾಣಗಳಲ್ಲಿ ಕುಣಿದಾಡಿದರು. ಕೆಲವು ಗೋದಿ ಮಾಧ್ಯಮಗಳು ಖಚಿತತೆ ಪಡೆದುಕೊಳ್ಳದೇ ಈ ವದಂತಿಯನ್ನು ಪ್ರಚಾರಪಡಿಸುತ್ತಾ ಉಘೆ ಉಘೆ ಹೇಳತೊಡಗಿದವು.
"ನರೇಂದ್ರ ಮೋದಿಯವರು ಈ ವರ್ಷದ ನೊಬೆಲ್ ಪ್ರಶಸ್ತಿಗೆ ಪ್ರಬಲ ಸ್ಪರ್ಧಿಯಾಗಿದ್ದಾರೆ" ಎಂದು ನೊಬೆಲ್ ಪ್ರಶಸ್ತಿ ಸಮಿತಿಯ ಉಪನಾಯಕ ಅಸ್ಲೆ ಟೋಜೆಯವರು ಹೇಳಿದ್ದಾರೆ ಎಂಬ ವದಂತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಲಾಯಿತು. ಇದನ್ನು ನಂಬಿದ ವಾರ್ತಾಭಾರತಿ ಯಂತಹ ಪತ್ರಿಕೆಯು ತನ್ನ ಆನ್ ಲೈನ್ ವರ್ಷನ್ನಿನಲ್ಲಿ ಈ ಸುದ್ದಿಯನ್ನು ಪ್ರಕಟಿಸಿತು. ಈ ವದಂತಿಯನ್ನೇ ದಿಟವೆಂದು ನಂಬಿದ ಸಂಘೀ ವಟುಗಳು ಕುಂಡಿ ಬಡಿದುಕೊಂಡು ಕುಣಿದಾಡಿದವು. ಆದರೆ ಈ ಸುಳ್ಳು ಸಂಭ್ರಮ ಹೆಚ್ಚು ಸಮಯ ನಿಲ್ಲಲಿಲ್ಲ. ಯಾಕೆಂದರೆ ಇಂತಹ ವದಂತಿ ಬಗ್ಗೆ ತಿಳಿದು ಬೆಚ್ಚಿ ಬಿದ್ದ ನೊಬೆಲ್ ಸಮಿತಿಯ ಅಸ್ಲೆ ಟೋಜೆಯವರು ಎಎನ್ ಐ ಸುದ್ದಿವಾಹಿನಿಯಲ್ಲಿ ಈ ಸುಳ್ಳು ಸುದ್ದಿಯನ್ನು ನಿರಾಕರಿಸಿದ್ದು ಹಾಗೂ ಅವರ ಸಂದರ್ಶನದ ವಿಡಿಯೋ ವೈರಲ್ ಆಗಿದ್ದು ಮಬ್ಬಕ್ತರ ಆಸೆಯ ಬೆಂಕಿಗೆ ತಣ್ಣೀರೆರಚಿದಂತಾಯಿತು. ಇದೊಂದು ಆಧಾರರಹಿತ ಸುಳ್ಳು ಸುದ್ದಿ ಎಂದು ಈ ವದಂತಿ ಪ್ರಚಾರಪಡಿಸಿದ ಚಾನೆಲ್ ಹೆಡ್ ಗಳಿಗೆ ಗೊತ್ತಿಲ್ಲದ ಸಂಗತಿ ಏನಲ್ಲ. ಆದರೆ ಬಿಕರಿಗೊಂಡ ಈ ಮಾಧ್ಯಮಗಳಿಗೆ ಇಂತಹ ವದಂತಿಗಳನ್ನು ಹರಡುವುದರ ಮೂಲಕ ತಮ್ಮ ಮೋದಿ ಭಕ್ತಿಯನ್ನು ಸಾಬೀತುಪಡಿಸುವ ಹಾಗೂ ಜನರಲ್ಲಿ ಭ್ರಮೆಯನ್ನು ಬಿತ್ತುವ ಹಠ. ಸುದ್ದಿ ಸುಳ್ಳು ಎಂದು ಗೊತ್ತಾದ ಮೇಲಾದರೂ ಆಧಾರರಹಿತ ಸುದ್ದಿಯನ್ನು ಪ್ರಚಾರ ಮಾಡಿದ್ದಕ್ಕೆ ಈ ಗೋದಿ ಮೀಡಿಯಾಗಳಿಗೆ ಪಶ್ಚಾತ್ತಾಪವೂ ಇಲ್ಲ, ಕ್ಷಮೆಕೇಳುವ ಔದಾರ್ಯವಂತೂ ಇಲ್ಲವೇ ಇಲ್ಲ.
ಈ ಮೋದಿ ಮಹಿಮೆಯನ್ನು ಸಾರುವಂತಹ ವದಂತಿ ಹಬ್ಬಿಸಿದ ಮೇನಿಯಾ ಪೀಡಿತರಿಗೆ, ಗೋದಿ ಮಾಧ್ಯಮಗಳಿಗೆ ನೊಬೆಲ್ ಪ್ರಶಸ್ತಿಯ ನಿಯಮಗಳ ಬಗ್ಗೆ ಗೊತ್ತಿರಲಿಕ್ಕಿಲ್ಲ. ಪ್ರಶಸ್ತಿ ಪ್ರಕಟವಾಗುವ ಕೊನೆಯ ಕ್ಷಣದವರೆಗೂ ಪ್ರಶಸ್ತಿ ಪುರಸ್ಕೃತರ ಹೆಸರು ಬಹಿರಂಗವಾಗಲು ನೊಬೆಲ್ ಸಮಿತಿಯಲ್ಲಿ ಅವಕಾಶವಿಲ್ಲ. ಇಷ್ಟಿದ್ದರೂ ಚಾಳಿಬಿದ್ದ ಮೋದಿ ಬಹುಪರಾಕುಪೀಡಿತ ಗೋಬೆಲ್ ಪ್ರಣೀತ ಭಕ್ತರಿಗೆ ಆಗಾಗ ಇಂತಹ ವದಂತಿಗಳನ್ನು ಹಬ್ಬಿಸದಿದ್ದರೆ ನಿದ್ದೆ ಬರೋದಿಲ್ಲ.
ಇಂತಹ ವ್ಯಕ್ತಿ ವೈಭವೀಕೃತ ವದಂತಿಗಳನ್ನು ಸಂಘ ಪರಿವಾರದವರು ಕಳೆದೊಂದು ದಶಕದಿಂದ ಸೃಷ್ಟಿಸಿ ಸಮಾಜದೊಳಗೆ ಸಾಂಕ್ರಾಮಿಕಗೊಳಿಸುತ್ತಾ ಬಂದಿರುವುದು ಗೊತ್ತಿರುವವರಿಗೆ ಖರ್ಗೆಯವರು ಮಾಡಿದ ಲೇವಡಿ ಖಂಡಿತ ಅರ್ಥವಾಗುತ್ತದೆ. ಮೇನಿಯಾಪೀಡಿತರಿಗೆ ಖರ್ಗೆಯವರ ವಿಡಂಬನೆಯಲ್ಲೂ ಮೋದಿ ಮಹಾತ್ಮೆಯದ್ದೇ ದರ್ಶನವಾಗುತ್ತದೆ.
ಇಷ್ಟಕ್ಕೂ ಭಾರತಕ್ಕೆ ನೊಬೆಲ್ ಶಾಂತಿ ಪ್ರಶಸ್ತಿ ಬಂದರೆ ಸ್ವಾಗತಾರ್ಹವೇ? ಆದರೆ ಅದಕ್ಕೆ ಗೋದ್ರಾ ಹತ್ಯಾಕಾಂಡದಲಿ ಸಾವಿರಾರು ಜನರ ಮಾರಣ ಹೋಮದ ರಕ್ತದ ಕಲೆಗಳನ್ನು ಅಂಟಿಸಿಕೊಂಡ ಮೋದಿಯವರು ಈ ವಿಶ್ವಶಾಂತಿ ಪ್ರಶಸ್ತಿಗೆ ಅದೆಷ್ಟು ಅರ್ಹರು? ಎನ್ನುವ ಪ್ರಶ್ನೆ ಕಾಡದೇ ಇರದು.
- ಶಶಿಕಾಂತ ಯಡಹಳ್ಳಿ