ಶುಕ್ರವಾರ, ಅಕ್ಟೋಬರ್ 14, 2016

ತಹ ತಹ....2 ಪೊಲೀಸರನ್ನು ಹೊಡೆಯಿರಿ... ಸೈನಿಕರನ್ನು ಹೊಗಳಿರಿ :

ತಹ ತಹ....2


'
ರಾಜ್ಯದಲ್ಲಿರೋದು ತಲೆಕೆಟ್ಟ ಸರಕಾರ.ಆಮ್ನೆಸ್ಟಿ ಸಂಸ್ಥೆ ರಕ್ಷಿಸುವ ಯತ್ನ ಮಾಡುವ ಮೂಲಕ ದೇಶದ್ರೋಹಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದೆ. ಸೇನೆ ವಿರುದ್ಧ ಘೋಷಣೆ ಕೂಗಿದವರ ಬಂಧನಕ್ಕೆ ಒತ್ತಡಗಳು ಹೆಚ್ಚುತ್ತಿದ್ದರೂ ಸರಕಾರ ಕ್ರಮ ಕೈಗೊಳ್ಳುತ್ತಿಲ್ಲವಾದ್ದರಿಂದ ಹೋರಾಟದ ಕಿಚ್ಚು ನಾಡಿನ ಉದ್ದಗಲಕ್ಕೂ ವ್ಯಾಪಿಸುತ್ತಿದೆ..." ಎಂದು ಶ್ರೀಮಾನ್ಯ ಯಡಿಯೂರಪ್ಪನವರು  ನಿನ್ನೆ ಟೌನ್ ಹಾಲ್ ಮುಂದೆ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಗುಡುಗಿದರು.

ಎಂತಾ ಮುತ್ತಿನಂತಾ ದೇಶಭಕ್ತಿಯ ಮಾತುಗಳವು. ಸೇನೆ ಬೇಕಾದಷ್ಟು ದೌರ್ಜನ್ಯ ಮಾಡಿದರೇನಾಯಿತು ಅದು ದೇಶ ಸೇವೆಯ ಭಾಗವೇ. ವಿಚಾರಣೆ ಹೆಸರಲ್ಲಿ  ಅಮಾಯಕರ ಕೊಲೆ ಸುಲಿಗೆ ಲೂಟಿ ಅತ್ಯಾಚಾರ ಮಾಡಿದರೇನಾಯಿತು ಅದನ್ನು ವಿರೋಧಿಸುವುದೂ ದೇಶದ್ರೋಹವೇ. ದೇಶದ್ರೋಹಿಗಳಿಗೆ ಏನಾಗಿದೆ... ಸುಖಾ ಸುಮ್ಮನೇ ಮಿಲಿಟರಿ ವಿರುದ್ಧ ಘೋಷಣೆ ಕೂಗ್ತಾರೆ. ದೇಶಕ್ಕಾಗಿ ಸೇನೆ ಮಾಡುವ ಅನ್ಯಾಯ ಅತ್ಯಾಚಾರಗಳನ್ನ ಸಹಿಸಿಕೊಳ್ಳೋದು ದೇಶಭಕ್ತಿಯ ಸಂಕೇತ ಎಂದು ದೇಶವಿರೋಧಿಗಳಿಗೆ ಯಾರು ತಿಳಿಹೇಳಬೇಕು. ಏನೋ ದೇಶದ ಪುಣ್ಯ.... ನಮ್ಮ ಪರಮ ಪವಿತ್ರ ದೇಶ ದೇಶಭಕ್ತರ ಆಡಳಿತದಲ್ಲಿ ಸುಖವಾಗಿದೆ ದಲಿತರು ಹಾಗೂ ಅಲ್ಪಸಂಖ್ಯಾತರು, ಪ್ರಗತಿಪರರು ಸುಮ್ಮನೇ ಶೋಷಣೆ ಎಂದು ಬಾಯಿ ಬಡಿದುಕೊಳ್ತಾರೆ. ದೇಶಕ್ಕಾಗಿ ಮಾನ ಪ್ರಾಣ ಸುಖ ಶಾಂತಿ ಸ್ವಾತಂತ್ರ್ಯಗಳ ತ್ಯಾಗಕ್ಕೆ ಸದಾ ಸಿದ್ದರಾಗಿರಬೇಕು ಎಂದು ಇವರಿಗೆ ಹೇಗೆ ತಿಳಿಹೇಳಬೇಕು. 

ಸೇನೆ ಅಂದ್ರೇನು... ದೇಶರಕ್ಷಕರ ವಿರುದ್ಧ ಘೋಷಣೆ ಕೂಗೋದು ಅಂದ್ರೇನು..?  ಇಂತಹ ದೇಶದ್ರೋಹವನ್ನು ಸಹಿಸಲು ಸಾಧ್ಯವೇ ಇಲ್ಲಾ ..  ಮನುಷ್ಯರಿಗಿಂತಾ ದೇಶ ಮುಖ್ಯ.. ದೇಶಕ್ಕಿಂತಾ ದೇಶಭಕ್ತಿ ಮುಖ್ಯಪ್ರಶ್ನಾತೀತರಾದ ವೀರ ಸೈನಿಕರಿಗೆ ಯಾರಾದರೂ ಏನಾದರೂ ಅಂದರೆ ದೇಶರಕ್ಷಣೆಯ ಗುತ್ತಿಗೆದಾರರು ಹೇಗೆ ಸುಮ್ಮನೆ ಕೈಕಟ್ಟಿಕೊಂಡು ಕುಳಿತುಕೊಳ್ಳಲು ಸಾಧ್ಯ. ದೇಶಭಕ್ತರೆಂಬ ಕಟ್ಟಾಳುಗಳ ಕಾಲಾಳು ಯಡಿಯೂರಪ್ಪ ಹೇಳಿದ್ದರಲ್ಲೂ ಪಾಯಿಂಟ್ ಐತೆ..  ಅವರ ಪ್ರತಿ ಮಾತಿನ ಹಿಂದೆ ಓಟ ಬ್ಯಾಂಕ್ ಲೆಕ್ಕಾಚಾರ ಐತೆ.... ಇಲ್ಲದಿದ್ದರೆ ಪರಮ ಪವಿತ್ರ ಚಾರಿತ್ರ್ಯದ ಮಹಾ ನಾಯಕ ಯಡಿಯೂರು ಬೀದಿಗೆ ಬಂದು ಹೀಗೆ ಕಂಠಶೋಷಣೆ ಮಾಡಿಕೊಳ್ಳುತ್ತಿದ್ದರಾ? ನಿಜವಾದ ದೇಶಭಕ್ತಿ ಅಂದರೆ ಇದು...
 

ಇನ್ನೊಬ್ಬ ಮಹಾ ದೇಶಭಕ್ತರಾದ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಹಾಕಿದ ಅವಾಜಿಗೆ ಪೋಲೀಸ್ ಇಲಾಖೆಯೆ ನಡುಗಬೇಕಿತ್ತು. " ಆಮ್ನೆಸ್ಟಿ ಕಚೇರಿ ಎದುರು ಪ್ರತಿಭಟನೆ ನಿರತ ಕಾರ್ಯಕರ್ತರ ಮೇಲೆ ಲಾಟಿ ಬೀಸಿದ ಡಿಸಿಪಿ ಸತೀಶ ಕುಮಾರ್ ನಿನಗೆ ಮಾನ ಮರ್ಯಾದೆ ಇದ್ದರೆ ಯುನಿಫಾರಂ ಕಳಚಿಟ್ಟು ಹೊರಗೆ ಬಾ. ನಮ್ಮ ಯುವ ಮೋರ್ಚಾ ಕಾರ್ಯಕರ್ತರ ಕೈಗೆ ಸಿಗು. ಆಗ ತೋರಿಸು ನಿನ್ನ ಪೌರುಷ" ಎಂದು  ಸಾರ್ವಜನಿಕವಾಗಿಯೇ ಧಮಕಿ ಹಾಕಿದ್ದಾರೆ. ಇದಪ್ಪಾ ನಿಜವಾಗಲೂ ಪೌರುಷ ಅಂದ್ರೆ. ಪೊಲೀಸರು ದೇಶಭಕ್ತ ವಟುಗಳ ಮೇಲೆ ಕೈಮಾಡಿದ್ದಂತೂ ಅಕ್ಷಮ್ಯ ಅಪರಾಧ. ಅದಕ್ಕಾಗಿ ಭಕ್ತರಿಗೆ ಅಧಿಕಾರಿ ವರದಿರಹಿತವಾಗಿ ಸಿಕ್ಕರೆ ಹಿಡಿದು ಹಲ್ಲೆ ಮಾಡಲು ಕರೆ ಕೊಟ್ಟ ನಾಯಕನನ್ನು ಹೊಗಳಲೇಬೇಕು. ಸೈನಿಕರೋ ದೇಶ ಕಾಯೋರು...ಅಮಾಯಕ ಜನರ ಮೇಲೆ ಹಲ್ಲೆ ಮಾಡಿ ಸಾಯಿಸಿದ್ರೆ ಅದು ದೇಶಭಕ್ತಿ. ಆದರೆ ಪೊಲೀಸರು ಗಲಭೆ ಮಾಡೋರ ಮೇಲೂ ಕೈಮಾಡಬಾರದು. ಮಾಡಿದ್ರೆ ಅದು ಮಾನವ ಹಕ್ಕಿನ ಉಲ್ಲಂಘನೆ. ನಮ್ಮ ಸಂಘಿಗಳ ನಿಯಮಗಳನ್ನು ಅರಿಯದ ಪೊಲೀಸರೂ ಜನದ್ರೋಹಿಗಳೇ ಸೈಪೊಲೀಸ್ ಅಧಿಕಾರಿ ತನ್ನ ಡ್ಯೂಟಿ ತಾನು ಮಾಡಿದ್ದರೂ ದೇಶಭಕ್ತರ ಮೇಲೆ ಕೈಮಾಡಕೂಡದಿತ್ತು. ನಮ್ಮ ದೇಶಭಕ್ತರ ಪ್ಯಾಸಿಸ್ಟ್ ಸರಕಾರ ದೇಶಾದ್ಯಂತ ಎಲ್ಲಾ ರಾಜ್ಯದಲ್ಲೂ  ಬಂದಾಗ ಪೊಲೀಸರನ್ನೆಲ್ಲಾ ಹೊಡೆದೋಡಿಸಿ ಎಲ್ಲಾ ಕಡೆ ಮಿಲಿಟರಿ ಸೈನಿಕರನ್ನೇ ನಿಯಮಿಸುವದನ್ನು ಯಾರೂ ತಡೆಯಲು ಸಾಧ್ಯವೇ ಇಲ್ಲ. ಯಾಕೆಂದರೆ ದೇಶಭಕ್ತರು ಏನೇ ಮಾಡಿದರೂ ಅದು ಕೇವಲ ಮನುಷ್ಯರಿಗಾಗಿ ಅಲ್ಲಾ ದೇಶಕ್ಕಾಗಿ ಅನ್ನುವ ವಿವೇಚನೆ ದೇಶದ್ರೋಹಿಗಳಿಗೆ ಇರಬೇಕು
 
ಬೊಲೋ ಭಾರತ್ ಜನತಾ ಪಕ್ಷಕೀ  ಜೈ...   ಒಂದೇ ಸಂಘ ಪರಿವಾರಂ..

.

                                                                  - ಶಶಿಕಾಂತ ಯಡಹಳ್ಳಿ

ತಹ ತಹ 1 ಸ್ವರ್ಗ ನರಕ ಬೇರಿಲ್ಲ ಕಾಣಿರೋ

ತಹ ತಹ ....1



"ನಮ್ಮ ಸೈನಿಕರ ರುಂಡ ಕತ್ತರಿಸಿ ಮುಂಡವನ್ನು ರವಾನಿಸುವ, ಗಡಿಯೊಳಗೆ ಭಯೋತ್ಪಾದಕರನ್ನು ನೂಕುವ, ಅಫೀಮನ್ನು ಕಳ್ಳಸಾಗಣೆ ಮಾಡಿ ನಮ್ಮ ಯುವಪೀಳಿಗೆಯನ್ನು ದುಶ್ಚಟಗಳ ದಾಸರಾಗಿ ಮಾಡುತ್ತಿರುವ ಪಾಪಿ ಪಾಕಿಸ್ಥಾನದ ಕರಾಳ ಮುಖದ ಪರಿಚಯ ನಟಿ ರಮ್ಯಾಗೆ ಇಲ್ಲ..." ಎಂದು ನಿನ್ನೆ ನಮ್ಮ ಗೌರವಾಣ್ವಿತ ಸಂಸದೆ ಶೋಭಾರವರು ತಮ್ಮ ಪಕ್ಷಕ್ಕೆ ಶೋಭೆ ತರುವಂತಾ ಮಾತು ಉದುರಿಸಿದ್ದಾರೆ.
 
ಸಂಸದೆ ಮಾತಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಜಗತ್ತಿನ ಬೇರೆ ಯಾವ ದೇಶದವರನ್ನಾದರೂ ಬೇಕಾದರೆ ಒಳ್ಳೆಯವರು ಅಂದರೂ ಪರವಾಗಿಲ್ಲ... ಆದರೆ ಪಾಪಿ ಪಾಕಿಗಳನ್ನು ಒಳ್ಳೆಜನ ಎಂದು ಹೇಳುವ ದುಸ್ಸಾಹಸ ಮಾಡಿದ ರಮ್ಯಾರನ್ನು ದೇಶದ್ರೋಹದ ಅಪರಾಧದಲ್ಲಿ ಬಂಧಿಸಿ... ವಿಚಾರಣೆ ನಡೆಸಿ ಆದಷ್ಟು ಬೇಗ ಗಲ್ಲಿಗೇರಿಸಬೇಕು. ಶತ್ರು ದೇಶವನ್ನು ಹೊಗಳುವುದು ಎಂದರೆ ಕಡಿಮೆ ಅಪರಾಧಾನಾ..?  ಹಾಂ. ಹಾಗೆಯೆ ದುಷ್ಟ ದುರುಳ ಪಾಕಿಸ್ಥಾನದ ಜೊತೆಗೆ ಯಾರ್ಯಾರು ಉತ್ತಮ ಸಂಬಂಧಕ್ಕೆ ಪ್ರಯತ್ನಿಸಿದ್ದಾರೋ ಅವರೆಲ್ಲಾ ಮಹಾ ದೇಶದ್ರೋಹಿಗಳು. ಕರಾಳ ಶತ್ರುಗಳ ಜೊತೆಗೆ ಬಾಂಧವ್ಯ ಎಂದೂ ಸಾಧ್ಯವಿಲ್ಲ ಎಂಬುದು ಪರಮ ಪುಣ್ಯ ಭೂಮಿಯಲಿ ಜನಿಸಿದ ಹಿಂದೂಗಳಿಗೆಲ್ಲಾ ಗೊತ್ತಾಗಲೇಬೇಕು. ಪಾಕಿ ಪರವಾಗಿರುವವರು ಯಾವುದೇ ಪಕ್ಷದಲ್ಲಿರಲಿ ಅವರೆಲ್ಲಾ ದೇಶದ್ರೋಹಿಗಳಲ್ಲದೇ  ಮತ್ತೇನು..
.

ಮೊಟ್ಟ ಮೊದಲು ಶಾಂತಿ ಸೌಹಾರ್ಧತೆಗಾಗಿ ಪಾಕಿಸ್ಥಾನವೆಂಬ ನರಕಕ್ಕೆ ಬಸ್ ಸೇವೆ ಆರಂಭಿಸಿ ವೈರಿಗಳತ್ತ ಸ್ನೇಹಹಸ್ತ ಚಾಚಿದ ಅಂದಿನ ಪ್ರಧಾನಿ ವಾಜಪೇಯಿಯವರನ್ನು ದೇಶದ್ರೋಹಿ ಎಂದು ಘೋಷಿಸಿ ವಿಚಾರಣೆ ನಡೆಸಿ ಶಿಕ್ಷಿಸಬೇಕು. ಪರಮ ಪಾಪಿ ದೇಶಕ್ಕೆ ಹೋಗಿ ನರಕದ ಸಂಸ್ಥಾಪಕ ಜಿನ್ನಾರನ್ನು ಮಹಾನ್ ದೇಶಭಕ್ತ ಎನ್ನುವಂತೆ ಹೊಗಳಿದ ಲಾಲಕೃಷ್ಣ ಅಡ್ವಾಣಿಯವರನ್ನು  ಮಹಾರಾಜದ್ರೋಹಿ ಎಂದು ಘೋಷಿಸಿ ಗರಿಷ್ಟ ಶಿಕ್ಷೆ ವಿಧಿಸಬೇಕುಸಂಸತ್ತಿನ ಅನುಮತಿ ಪಡೆಯದೇ, ಯಾರೆಂದರೆ ಯಾರಿಗೂ ಒಂದು ಮಾತು ಸಹ ತಿಳಿಸದೇ ಏಕಾಏಕಿ ಪಾಕಿಸ್ಥಾನಕ್ಕೆ ಹೋಗಿ ಶತ್ರುದೇಶದ ಪ್ರಧಾನಿಯ ಮನೆಯ ಔತನಕೂಟದಲ್ಲಿ ತಿಂದುಂಡು ಬಂದ ಹಾಲಿ ಪ್ರಧಾನಿ ಮೋದಿಯವರನ್ನು ಕೂಡಲೇ ಪದಚ್ಯುತಗೊಳಿಸಿ... ದೇಶದ್ರೋಹದ ಆರೋಪ ಹೊರೆಸಿ ವಿಚಾರಣೆ ಇಲ್ಲದೇ ಶಿಕ್ಷೆ ಜಾರಿಗೊಳಿಸಬೇಕು.

ನ್ಯಾಯ ಅಂದರೆ ಎಲ್ಲರಿಗೂ ಒಂದೇ ಅಲ್ಲವೇ ಶೋಬಾ ತಾಯಿ. ಮೊದಲು ದೊಡ್ಡ ದೊಡ್ಡ ದೇಶದ್ರೋಹಿಗಳಿಗೆ ರಾಜದ್ರೋಹದ ಆರೋಪದ ಮೇಲೆ ಶಿಕ್ಷಿಸಿದರೆ ರಮ್ಯಾನಂತಾ ನಟಿಯರಿಗೆ ಪಾಕಿಸ್ಥಾನದ ಜನ ಒಳ್ಳೆಯವರು ಎಂದು ಹೇಳುವ ದೈರ್ಯವಾದರೂ ಎಲ್ಲಿ ಬಂದೀತು..   ದೇಶಭಕ್ತೆ ಶೋಭಾರವರು ಕೂಡಲೇ ಮಾಡಬೇಕಾದ ಕೆಲಸವೆಂದರೆ ಖತರ್ನಾಕ್ ಶತ್ರು ದೇಶದವರ ಪರ ಯಾರೇ ಒಂದೇ ಒಂದು ಶಬ್ದ ಮಾತಾಡಿದರೂ ಅದನ್ನು ರಾಜದ್ರೋಹ ಎಂದು ತಿಳಿದು ಗರಿಷ್ಟ ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೊಳಿಸಲು ಸಂಸತ್ತಿನಲ್ಲಿ ಹಕ್ಕೋತ್ತಾಯ ಮಂಡಿಸಬೇಕು ಹಾಗೂ ಸ್ವಾತಂತ್ರ್ಯಾ ನಂತರ ಪಾಕಿಸ್ಥಾನದ ಜೊತೆ ಯಾರು ಸ್ನೇಹ ಹಸ್ತ ಚಾಚಿದ್ದಾರೋ... ಸೌಹಾರ್ಧತೆ ಬಯಸಿದ್ದಾರೋ... ಅವರು ಅದೆಷ್ಟೇ ಪ್ರಭಾವಶಾಲಿಗಳಾಗಿರಲಿ ಅವರಿಗೆಲ್ಲ ದೇಶದ್ರೋಹಿ ಪಟ್ಟ ಕಟ್ಟಿ ಪಾಕಿಸ್ಥಾನವೆಂಬೋ  ಭೂಲೋಕದ  ನರಕಕ್ಕೆ ಗಡಿಪಾರು ಮಾಡಬೇಕು.. ಶೋಭಾರವರಿಗೆ  ಜಯವಾಗಲಿ..
.
ಶೊಭಾರಂತಾ ದೇಶಭಕ್ತರು ಅಮರರಾಗಲಿ... ಇಂತಾ ಅಪ್ರತಿಮ ದೇಶಭಕ್ತರಿರುವುದರಿಂದಲೇ ದೇಶಾದ್ಯಂತ ಅತಿವೃಷ್ಟಿ ಅನಾವೃಷ್ಟಿಗಳು ನಿರಂತರವಾಗಿವೆ ಎಂಬುದು ನೆನಪಿರಲಿ...

                                                                          - ಶಶಿಕಾಂತ ಯಡಹಳ್ಳಿ