ಅವತ್ತು ನಿಜಕ್ಕೂ ನನ್ನ ಕಣ್ಣಲ್ಲಿ ನೀರಾಡತೊಡಗಿತ್ತು. ಅಂದು ಜನವರಿ 17 ಸಿಜಿಕೆ
ರಾಷ್ಟ್ರೀಯ ರಂಗೋತ್ಸವದ ಕೊನೆಯ ದಿನ. ನಾಟಕಶುರುವಾಗುವುದಕ್ಕಿಂತ ಅರ್ಧ ಗಂಟೆ ಮುಂಚೆ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ
ಹಾಕಿದ ಮಂಟಪದಲ್ಲಿ ರಾಮಚಂದ್ರ ಹಡಪದ ಹಾಡು ಹಾಡುತ್ತಿದ್ದರು. ಇನ್ನೇನು ಗಾಯನ ಗೋಷ್ಠಿ ಮುಗಿಯುವುದರಲ್ಲಿತ್ತು.
ಕೊಟ್ಟಕೊನೆಯ ಹಾಡು ಹೊರಹೊಮ್ಮಿಬಂತು.
"ಹೊರಟಿರುವೆ ಹೋಗಿಬಿಡು ತಡೆಯಲಾರೆ
ಹೊರಡುವ ಮುಂಚೆ ಒಂದು ಮಾತು
ಹೇಳಿ ಹೋಗು ಕಾರಣ."
ಹೀಗೆ ಶುರುವಾಗುವ ಹಾಡು ಹಡಪದವರ ಆರ್ಧ ಕಂಠದಲ್ಲಿ ಅಲೆಅಲೆಯಾಗಿ
ಹರಿದುಬಂತು. ಕೊಟ್ಟಕೊನೆಯ ಚರಣ
"ದೇಹ ನಾನು ಪ್ರಾಣ ನೀನು ಬಿಟ್ಟು ಇರಲುಂಟೆ
ಅಗಲಿದರೆ ಕೊನೆಗುಳಿವುದು ಸಾವು, ಹೋಗುವುದಾದರೆ ಹೋಗಿಬಿಡು
ಹೇಳಿ ಹೋಗು ಕಾರಣ."
ಇದರಲ್ಲಿ
ಸಾವು...... ಅನ್ನೋದನ್ನಾ ಹಡಪದರವರು ದೀರ್ಘಾಲಾಪನ ಮಾಡಿದಾಗ ನಿಜಕ್ಕೂ ಕಣ್ಣ ಕೊಳದಲ್ಲಿ ನೀರ ಹನಿಗಳ ಒರತೆ. ಸುತ್ತಲೂ ಕಣ್ಣಾಡಿಸಿದರೆ ಅಕ್ಕಪಕ್ಕದವರ ಕಣ್ಣಲ್ಲೂ
ಅದೇನೋ ಶೋಕ ಮಡುಗಟ್ಟಿತ್ತು. ನನಗಂತೂ ಅದ್ಯಾಕೋ ಶೋಕಕ್ಕಿಂತ ಸಂತಸದ ಕಣ್ಣಿರು ಕಣ್ಣತುಂಬಾ ಹನಿಗಟ್ಟಿತು.
ಯಾಕೆಂದರೆ.....
ಅದು
ನಾನೇ ಬರೆದ ಕವಿತೆಯಾಗಿತ್ತು.
ಮೂರು
ವಾರಗಳ ಮೊದಲು ಈ ಕವಿತೆಯನ್ನು ಬರೆದು ಫೇಸ್ ಬುಕ್ ನಲ್ಲಿ ಸುಮ್ಮನೆ ಪೋಸ್ಟ್ ಮಾಡಿದ್ದೆ. ಅದು ಹೇಗೋ
ರಾಮಚಂದ್ರ ಹಡಪದರವರ ಕಣ್ಣಿಗೆ ಅದು ಬಿದ್ದಿತು. ಸಂಗೀತಕ್ಕಳವಡಿಸಬಹುದಾ? ಎಂದು ಕೇಳಿದರು. ಧಾರಾಳವಾಗಿ
ಎಂದೆ. ಆಮೇಲೆ ಆ ವಿಷಯ ಮರೆತೇ ಬಿಟ್ಟಿದ್ದೆ. ಆದರೆ ಹಡಪದ ಮರೆತಿರಲಿಲ್ಲ. ಆ ಕವಿತೆಗೊಂದು ಸುಮಧುರ ಸಂಗೀತವನ್ನು ಕಂಪೋಸ್ ಮಾಡಿ, ಅನನ್ಯವಾಗಿ
ರಾಗಸಂಯೋಜನೆ ಮಾಡಿ ಮೊನ್ನೆ ಎಲ್ಲರೆದುರು ಅದ್ಬುತವಾಗಿ ಹಾಡಿಯೇ ಬಿಟ್ಟರು. ಓದುವ ಕವಿತೆಯೊಂದು ಹಾಡಾಗಿ
ಹರಿದು ಬಂದು ಕೇಳುಗರ ಮನಕಲಕಿ ಮೋಡಿಮಾಡಿದ ಪರಿಯನ್ನು ಹೀಗೆ ಹೇಳುವುದಕ್ಕಿಂತ ಕೇಳುವುದೇ ಉತ್ತಮ.
ಇದೊಂದು
ದಾಂಪತ್ಯ ವಿರಹ ಗೀತೆ. ಅದ್ಯಾಕೋ ಗಂಡನೊಂದಿಗೆ ಮುನಿಸಿಕೊಂಡ ಹೆಂಡತಿ ಗಂಡನನ್ನು ತೊರೆದು ಮನೆಬಿಟ್ಟು
ಹೋಗಲು ನಿರ್ಧರಿಸಿದಾಗ ಹೆಂಡತಿಯನ್ನು ತೀವ್ರವಾಗಿ ಪ್ರೀತಿಸುತ್ತಿರುವ ಗಂಡ ಆಕೆಯನ್ನು "ಹೇಳಿ
ಹೋಗು ಕಾರಣ' ಎಂದು ಕೇಳುವ ಸನ್ನಿವೇಶವನ್ನು ಕರುಣಾರಸದಲ್ಲಿ
ಅನಾವರಣಗೊಳಿಸುವ ಕವಿತೆ. ಇದು ನನ್ನ ಬದುಕಿನ ಅನುಭವವೇ
ಆಗಿದ್ದರಿಂದ ಹಡಪದರವರು ಹಾಡುವಾಗ ನಾನು ಪ್ಲಾಷ್ ಬ್ಯಾಕ್
ಗೆ ಹೋಗಿ ಹಿಂದೆ ನಡೆದ ದೃಶ್ಯವನ್ನು ಮತ್ತೆ ಅನುಭವಿಸಿದಂತಾಯಿತು.
ಇದು
ನನ್ನದೇ ಅನುಭವವಾಗಿದ್ದರಿಂದ ನನ್ನ ಕಣ್ಣಲ್ಲಿ ನೀರು ಬಂದಿರುವುದು ಸ್ವಾಭಾವಿಕ. ಆದರೆ ಬೇರೆಯವರಲ್ಲೂ
ಈ ಕವಿತೆ ಭಾವನೆಯನ್ನು ಹೊಮ್ಮಿಸಿದ್ದಾದರೂ ಹೇಗೆ? ಬಹುಷಃ ಎಲ್ಲರೂ ಒಮ್ಮಿಲ್ಲೊಮ್ಮೆ ತಮ್ಮ ಬದುಕಲ್ಲಿ
ಯಾವುದೋ ಪ್ರೀತಿಸುವ ಜೀವದಿಂದ ದೂರವಾಗುವ ಪ್ರಸಂಗವನ್ನು ಅನುಭವಿಸಿರುತ್ತಾರೆ. ಈ ಕವಿತೆ ಕೇಳಿದಾಗ
ಆ ಅಗಲಿಕೆಯನ್ನು ನೆನಪಿಗೆ ತಂದುಕೊಂಡು ಭಾವಪರವಶರಾಗುತ್ತಾರೇನೋ?
ನಿಜವಾದ ಕಾರಣ ನನಗೆ ಗೊತ್ತಿಲ್ಲ. ಈ ಹಾಡು ಕೇಳಿದ
ರಂಗನಿರಂತರದ ಜಿಪಿಓ ಚಂದ್ರು ಮತ್ತು ಇತರ ಕೆಲವು ರಂಗಕರ್ಮಿಗಳು "ನಿಜಕ್ಕೂ ನಮ್ಮ ಕಣ್ಣಲ್ಲಿ
ನೀರು ಬಂತು ಸಾರ್" ಎಂದಾಗ ನನಗೆ ನಿಜವಾಗಿ ಅಚ್ಚರಿ. ಆದರೂ ಕವಿತೆಯೊಂದು ಕಣ್ಣೀರು ತರಿಸುತ್ತದೆಂಬುದನ್ನು
ನನ್ನ ಮನಸ್ಸು ನಂಬಲು ಸಾಧ್ಯವಿರಲಿಲ್ಲ,

ಆದರೆ
ಇಂದು ರಾತ್ರಿ ರಾಮಚಂದ್ರ ಹಡಪದರವರು ಬಾಂಬೆಯಿಂದ ಪೋನ್ ಮಾಡಿದರು. ಆಗ ತಾನೆ ಅವರು ಹಾಡಿನ ಕಾರ್ಯಕ್ರಮ
ಮುಗಿಸಿ ರೈಲ್ವೇ ಸ್ಟೇಶನ್ ನತ್ತ ಟ್ಯಾಕ್ಸಿಯಲ್ಲಿ ಹೊರಟಿದ್ದರು. "ಸರ್
ಇಂದು ಬಾಂಬೆಯ ಕರ್ನಾಟಕ ಸಂಘದಲ್ಲಿ ಏರ್ಪಡಿಸಲಾಗಿದ್ದ ಗೀತಗಾಯನ ಕಾರ್ಯಕ್ರಮದಲ್ಲಿ ನಿಮ್ಮ 'ಹೇಳು ಹೋಗು
ಕಾರಣ' ಹಾಡು ಹಾಡಿದೆ ನಿಜಕ್ಕೂ ಕೇಳಿದವರೆಲ್ಲರಲ್ಲೂ ಭಾವತೀವ್ರತೆಯನ್ನುಂಟು ಮಾಡುವಲ್ಲಿ ಯಶಸ್ವಿಯಾಯಿತು.
ಕೆಲವರು ನಿಜಕ್ಕೂ ಕಣ್ಣೀರಾದರು. ಎಲ್ಲಾ ಹಾಡುಗಳಿಗಿಂತ
ಈ ಹಾಡು ತುಂಬಾ ಮನಮಿಡಿಯುವಂತೆ ಮೂಡಿ ಬಂದಿತು. ಇಂತಹ ಹಾಡನ್ನು ಬರೆದು ಕೊಟ್ಟ ನಿಮಗೆ ಥ್ಯಾಂಕ್ಸ
ಸರ್" ಎಂದು ಹಾಡಿನ ಎಫೆಕ್ಟನ್ನು ವಿವರಿಸತೊಡಗಿದರು.
''ಕವಿತೆಯೊಂದು ಬರೆದ ಮೇಲೆ ಅದು ನನ್ನದಲ್ಲ. ಅದನ್ನು
ಹಾಡುವ ಮೂಲಕ ಜನರಿಗೆ ತಲುಪಿಸುತ್ತಿರುವ ನಿಮ್ಮದು. ಜಡ ಅಕ್ಷರಗಳಲ್ಲಿದ್ದ ಕವಿತೆಗೆ ಸ್ವರಸಂಯೋಜಿಸಿ ಜೀವ ಕೊಟ್ಟ ನಿಮಗೆ ಆ ಕವಿತೆಯ ಯಶಸ್ಸು ಸೇರಬೇಕು.
ಅಭಿನಂದನೆಗಳು" ಎಂದು ಹಡಪದರವರನ್ನು ಅಭಿನಂದಿಸಿದೆ.
ನನಗ್ಯಾಕೋ
ಅನುಮಾನ ಶುರುವಾಯಿತು. ಕವಿತೆಯೊಂದು ಕಣ್ಣೀರಿಗೆ ಕಾರಣವಾಗುತ್ತದೆಂಬುದನ್ನು ನನಗೆ ನಂಬಲಾಗಲಿಲ್ಲ.
ಗುರುರಾಜ ಹೊಸಕೋಟೆಯವರು 'ತಾಯಿ ಸತ್ತ ಮೇಲೆ...' ಹಾಡು ಹಾಡುವಾಗ ನಾನು ಬಿಕ್ಕಿ ಬಿಕ್ಕಿ ಅತ್ತಿದ್ದ
ನೆನಪು. ಆದರೆ ಈ ನನ್ನ ಕವಿತೆ ಅಂತಹ ಕರುಣಾಜನಕ ಕಥೆಯನ್ನಂತೂ ಕಟ್ಟಿಕೊಡುತ್ತಿಲ್ಲ. ಆದರೂ ಕೇಳುಗರು
ಯಾಕೆ ಹೀಗೆ ಭಾವತೀವ್ರತೆಯನ್ನು ಅನುಭವಿಸುತ್ತಾರೆ. ಅನುಮಾನ ಬಂದಾಗ ಪರಿಹರಿಸಿಕೊಳ್ಳುವುದುತ್ತಮ ಎಂದು
ಬಾಂಬೆ ಕರ್ನಾಟಕ ಸಂಘದಲ್ಲಿ ನನಗೆ ಆತ್ಮೀಯರಾದ ರಂಗಕರ್ಮಿಯವರಿಗೆ ಪೋನ್ ಮಾಡಿದೆ. ಕಾರ್ಯಕ್ರಮದ ಬಗ್ಗೆ
ವಿಚಾರಿಸಿದೆ. ಹಾಡುಗಳು ಮಾಡಿದ ಮೋಡಿಯ ಕುರಿತು ಕೇಳಿದೆ. ಯಾವ ಹಾಡು ಮನಕಲಕಿತು ಹೇಳಿ ಎಂದೆ. ಅವರು
ಹೇಳಿದ್ದೇನೆಂದರೆ "ಬಹುತೇಕ ಹಾಡುಗಳು ಈಗಾಗಲೇ
ಹಲವಾರು ಸಲ ಶ್ರವ್ಯ ದೃಶ್ಯ ಮಾಧ್ಯಮಗಳಲ್ಲಿ ಕೇಳಿದ್ದವೇ ಆಗಿದ್ದವು ಆದರೆ 'ಹೇಳಿ ಹೋಗು ಕಾರಣ' ಎನ್ನುವ ಹೊಸ ಭಾವಗೀತೆ ನಿಜಕ್ಕೂ ಮನಕಲುಕಿತು. ಕೆಲವರ ಕಣ್ಣಲ್ಲಿ
ನೀರಾಡಿತು' ಎಂದು ಉತ್ತರಿಸಿದರು. ಆಗ ರಾಮಚಂದ್ರ ಹಡಪದರವರು ಹೇಳಿದ ಮಾತು ನಿಜವಿರಬೇಕು ಎಂದು ನಂಬಿಕೆ
ಬಂದಿತು.
ನಿಜ
ಹೇಳಬೇಕೆಂದರೆ ಕೇಳಿದವರ ಭಾವತೀವ್ರತೆಗೆ ಕವಿತೆ ಕಾರಣವಾಗಿರಲಿಲ್ಲ. ಅದನ್ನು ಹಾಡಿದವರು ಕಟ್ಟಿಕೊಟ್ಟ ರಾಗ, ಆ ರಾಗ ಕಟ್ಟಿಕೊಟ್ಟ
ಭಾವಗಳು ಕಾರಣವಾಗಿದ್ದವು. ಅಕ್ಷರದೊಳಗಿನ ಭಾವನೆಯನ್ನು ಹಡಪದವರು ತಮ್ಮ ಸಿರಿಕಂಠದಲ್ಲಿ ಭಾವನಾತ್ಮಕವಾಗಿ
ಕೇಳುಗರಿಗೆ ತಲುಪಿಸಿದ್ದರು. ಹೀಗಾಗಿ ಈ ಹಾಡಿನ ಯಶಸ್ಸು ಸಂಪೂರ್ಣವಾಗಿ ಸಂಗೀತ ಸಂಯೋಜನೆ ಮಾಡಿ ಹಾಡಿದ
ರಾಮಚಂದ್ರ ಹಡಪದರವರಿಗೆ ಸಲ್ಲಬೇಕು. ಕವಿತೆ ಕೇವಲ ನೆಪಮಾತ್ರ. ಹೀಗೆ ನೆಪಮಾತ್ರದ ಕವಿತೆಯನ್ನು ಹಾಡಿನ
ಮೂಲಕ ಜನರ ಭಾವಲೋಕಕ್ಕೆ ತಲುಪಿಸುತ್ತಿರುವ ಹಡಪದ ನಿಜಕ್ಕೂ ಅಭಿನಂದನಾರ್ಹರು.
ನಿಮ್ಮ
ಓದಿಗೆ ಇರಲಿ ಎಂದು ಕವಿತೆಯ ಪಠ್ಯವನ್ನು ಇಲ್ಲಿ ಕೊಟ್ಟಿದ್ದೇನೆ ಓದಿ.
ದಾಂಪತ್ಯ ಗೀತೆ :
(ಕವಿತೆ)
ಹೊರಟಿರುವೆ ಹೋಗಿಬಿಡು ತಡೆಯಲಾರೆ
ಹೊರಡುವ ಮುಂಚೆ ಒಂದು ಮಾತು
ಹೇಳಿ ಹೋಗು ಕಾರಣ.
ಮನಸು ಬಾರ, ಬದುಕಿನ ಪಯಣ ಬಲು ದೂರ
ನಡುಮಧ್ಯದಲ್ಲೆದ್ದು ಹೋಗುವುದಾದರೆ ಹೋಗಿಬಿಡು
ಹೇಳಿ ಹೋಗು ಕಾರಣ.
ಆಡುತಿರುವೆವು
ಒಲವಿನಾಟ, ದಾಂಪತ್ಯದ ಸವಿಯೂಟ
ಆಟ ಕೆಡಿಸಿ
ಊಟ ಬಿಸಾಕಿ ಹೋಗುವುದಾದರೆ ಹೋಗಿಬಿಡು
ಹೇಳಿ ಹೋಗು ಕಾರಣ.
ಬದುಕು ನೆರಳುಬೆಳಕಿನಾಟ, ಚಿತ್ತ ಬಂದತ್ತ
ಓಟ
ನೆರಳ ನಂಬಿ ಬೆಳಕ ನಂದಿಸಿ ಹೋಗುವುದಾದರೆ ಹೋಗಿಬಿಡು
ಹೇಳಿ ಹೋಗು ಕಾರಣ.
ಚಿತ್ರ ನಾನು ಚಿತ್ರ ನೀನು, ಚಿತ್ತವಿಲ್ಲದ ಚಿತ್ರ ಉಂಟೆ
ಚಿತ್ತ ಬಂದತ್ತ ಹೊರಡುವುದಾದರೆ ಹೋಗಿಬಿಡು
ಹೇಳಿ ಹೋಗು ಕಾರಣ.
ಕಡಲು ಹಡಗಿನ ಬಂಧ ನಮ್ಮ ಸಂಬಂಧ
ಅಲೆಗಳ ಹೊಡೆತಕ್ಕೆ ಹೆದರಿ ಹೊರಡುವುದಾದರೆ ಹೋಗಿಬಿಡು
ಹೇಳಿ ಹೋಗು ಕಾರಣ.
ಬಾಳ ಬಂಡಿಯ ಗಾಳಿಗಳು ನಾವು ಜೊತೆ ಓಡಲೇ ಬೇಕು
ಬಂಡಿ ಬಿಟ್ಟು ಇರುವುದೇ ಗಾಲಿ, ಹೋಗುವುದಾದರೆ ಹೋಗಿಬಿಡು
ಹೇಳಿ ಹೋಗು ಕಾರಣ.
ದೇಹ ನಾನು ಪ್ರಾಣ ನೀನು ಬಿಟ್ಟು ಇರಲುಂಟೆ
ಅಗಲಿದರೆ ಕೊನೆಗುಳಿವುದು ಸಾವು, ಹೋಗುವುದಾದರೆ ಹೋಗಿಬಿಡು
ಹೇಳಿ ಹೋಗು ಕಾರಣ.
ಆದರೆ
ನಿಜಕ್ಕೂ ಈ ಕವಿತೆ ನಿಮ್ಮ ಮನ ಮುಟ್ಟಬೇಕೆಂದರೆ ಹಡಪದರ
ದ್ವನಿಯಲ್ಲಿ ಆ ಹಾಡನ್ನೊಮ್ಮೆ ಕೇಳಿ.
-ಶಶಿಕಾಂತ
ಯಡಹಳ್ಳಿ