ಗುರುವಾರ, ಮೇ 25, 2017

ತಹ ತಹ..... 93 ಏಸೂ ಯಕ್ಷಪ್ರಸಂಗಕ್ಕೆ ಮತೀಯವ್ಯಾಧಿಗಳ ಕಾಟ; ನಿಲ್ಲಬೇಕು ಕೋಮುವಾದಿಗಳ ಆಟ:







ಕರಾವಳಿ ಜಿಲ್ಲೆಗಳಲ್ಲಿ ಹಿಂದೆಂದಿಗಿಂತಲೂ ಈಗ ಮತೀಯವಾದ ಮಿತಿಮೀರಿದ್ದಂತೂ ನಿರ್ವಿವಾದ. ಕೋಮುವಾದಿ ಶಕ್ತಿಗಳು ಈ ಬುದ್ದಿವಂತರ ನಾಡಲ್ಲಿ ಬೇರು ಬಿಟ್ಟು ಸಮಾಜವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಲೇ ಬಂದಿವೆ. ಈಗ ಈ ಮತಿಯ ಶಕ್ತಿಗಳ ಉರಿಗಣ್ಣು ಕಲೆಯ ಮೇಲೂ ಬಿದ್ದಿದೆ. ಯಾವುದನ್ನು ಮಾಡಬೇಕು.. ಯಾವುದನ್ನು ಮಾಡಬಾರದು ಎಂಬ ಅನಧೀಕೃತ ಆದೇಶಗಳು ಜಾರಿಯಾಗುತ್ತಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ವಿವಾದ ಜೋರಾಗಿದೆ. ಮಹಾಚೇತನ-ಏಸುಕ್ರಿಸ್ತ ಮಹಾತ್ಮೆ ಎನ್ನುವ ಯಕ್ಷಗಾನ ಪ್ರಸಂಗದ ಪುಸ್ತಕವೊಂದು ಮೇ 27ರಂದು ಮಂಗಳೂರಿನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಹಾಗೂ ಅವತ್ತು ಈ ಪುಸ್ತಕ ಆಧಾರಿತ ತಾಳಮದ್ದಳೆ ಪ್ರದರ್ಶನವೂ ಏರ್ಪಾಡಾಗಿದೆ. ಏಸೂ ಕ್ರಿಸ್ತನ ಬದುಕಿನ ಕತೆಯನ್ನು ಯಕ್ಷಕಲೆಯ ಮೂಲಕ ಹೇಳುವುದು ಈ ಪ್ರಸಂಗದ ಉದ್ದೇಶವಾಗಿದೆ.  ಮತೀಯವಾದಿಗಳ ಮಂಡೆಗೆ ಬೆಂಕಿ ಹತ್ತಿಕೊಳ್ಳಲು ಇನ್ನೇನು ತಾನೇ ಬೇಕು? ತಗೋ ಶುರುವಾಯಿತು ಪೇಸ್ಬುಕ್, ವಾಟ್ಸಾಪ್, ಟ್ವೀಟರ್‌ಗಳಲ್ಲಿ ಹಿಂದೂತ್ವದ ಗುತ್ತಿಗೆದಾರರಿಂದ ಹುಸಿ ಗರ್ಜನೆ. ಏಸುವಿನ ಪ್ರಸಂಗ ಕುರಿತು ಯಕ್ಷಗಾನ ಪುಸ್ತಕ ಬರೆದಿದ್ದೇ ತಪ್ಪು, ಪ್ರಕಟಿಸಿದ್ದಂತೂ ಅಪರಾಧ, ಇನ್ನು ತಾಳಮದ್ದಲೆ ಮಾಡಿ ಜನರ ಮುಂದೆ ಪ್ರದರ್ಶಿಸುವುದಂತೂ ಮಹಾಪರಾಧ.. ಎಂಬಂತೆ ಹಿಂದುತ್ವದ ಭಾವಿಯೊಳಗಿಳಿದು ಮೆದುಳು ಮಲಿನ ಮಾಡಿಕೊಂಡ ಕಪ್ಪೆಗಳು ನಿರಂತರವಾಗಿ ಒಟಗುಡತೊಡಗಿದವು.  ಪುಸ್ತಕ ಬರೆದವರನ್ನು, ತಾಳಮದ್ದಲೆ ಆಯೋಜಿಸಿದವರನ್ನು ಅಷ್ಟೇಯಾಕೆ ಅದರಲ್ಲಿ ಭಾಗವಹಿಸುವ ಕಲಾವಿದರನ್ನು ವಾಚಾಮ ಗೋಚರವಾಗಿ ನಿಂದಿಸತೊಡಗಿದವು.

ಯಕ್ಷಗಾನ ಹಿಂದೂಗಳ ಕಲೆಯಾಗಿದ್ದು ಕ್ರಿಸ್ತನನ್ನು ವೈಭವೀಕರಿಸುವುದು ಅಕ್ಷಮ್ಯ ಅಪರಾಧ ಎನ್ನುವಂತೆ ಹಿಂದುತ್ವದ ಉಗ್ರ ಪ್ರತಿಪಾದಕರು ಗುಲ್ಲೆಬ್ಬಿಸಿದ್ದಾರೆ. ಯಕ್ಷಗಾನ ಕಲೆಯನ್ನು ಧರ್ಮಾತೀತವಾಗಿ ಜನರು ನೋಡಿ ಬೆಳೆಸಿದ್ದಾರೆ. ಅದು ಹಿಂದೂಗಳ ಕಲೆಯಾಗಿರದೇ ಜನರ ಕಲೆಯಾಗಿದೆ. ಜನಪದ ಕಲೆಯಾಗಿದೆ. ಅದನ್ನು ಕೆಲವು ಮೇಲ್ವರ್ಗದವರು ಹೈಜಾಕ್ ಮಾಡಿದ್ದು ನಿಜವಾದರೂ ಕಾಸು ಕೊಟ್ಟು ಅಹೋರಾತ್ರಿ ನೋಡಿ ಉತ್ತೇಜಿಸಿದ ಪ್ರೇಕ್ಷಕರು ಎಲ್ಲಾ ಧರ್ಮೀಯರಾಗಿದ್ದಾರೆ. ಆದರೆ ಈಗ ಈ ಮತಾಂಧರಿಗೆ ಯಕ್ಷಗಾನವು ಹಿಂದೂಗಳ ಕಲೆಯಾಗಿದೆ. ಅದರಲ್ಲೂ ಪುರೋಹಿತಶಾಹಿ ಕಲೆ ಎಂದೂ ನಂಬಿಸಲಾಗುತ್ತದೆ. ಈಗ ಮತಾಂತರದ ಆರೋಪವನ್ನು ಯಕ್ಷಗಾನ ಪ್ರಸಂಗದ ಮೇಲೆ ಹಾಕಿ ವಿಕ್ಷಿಪ್ತ ಸಂಚಲನ ಸೃಷ್ಟಿಸುವ ಹುನ್ನಾರ ಸೃಷ್ಟಿಸಲಾಗುತ್ತಿದೆ. 

ಏಸುವಿನ ಯಕ್ಷಗಾನ ಪ್ರಸಂಗ ಎಲ್ಲಿ ಮತಾಂತರಕ್ಕೆ ಪ್ರಚೋದಿಸುವುದೋ ಎಂಬ ಆತಂಕ ಈ ಕೋಮುವಾದಿಗಳಿಗೆ. ಕಪೋಲ ಕಲ್ಪಿತ ಹಿಂದೂ ಪುರಾಣಗಳನ್ನು ನೋಡಿ ಅದೆಷ್ಟು ಜನ ಅನ್ಯ ಧರ್ಮಿಯರು ಹಿಂದೂಗಳಾಗಿ ಮತಾಂತರ ಹೊಂದಿದ್ದಾರೆ? ಹಾಗೆಯೇ ಅನ್ಯ ಧರ್ಮದ ದೇವರುಗಳ ನಾಟಕ-ಯಕ್ಷಗಾನಗಳನ್ನು ನೋಡಿದಾಕ್ಷಣ ಪ್ರೇರೇಪಿತರಾಗಿ ಹಿಂದೂಗಳೆನ್ನುವವರು ಅನ್ಯ ಧರ್ಮಕ್ಕೆ  ಮತಾಂತರ ಹೊಂದಿ ಬಿಡುತ್ತಾರಾ? ನಾಟಕ, ಯಕ್ಷಗಾನಗಳಿಗೆ ಅಲ್ಲಾಡಿ ಹೋಗುವಷ್ಟು ದುರ್ಬಲವಾಗಿದೆಯಾ ಇವರು ಪ್ರತಿಪಾದಿಸುವ ಹಿಂದೂ ಧರ್ಮ? ಕೇವಲ ಒಂದು ಯಕ್ಷಗಾನ ಪ್ರಸಂಗದಿಂದ  ನೋಡಿದವರು ಮತಾಂತರ ಹೊಂದುತ್ತಾರೆಂಬದು ಈ ಧರ್ಮಾಂಧರ ಆರೋಪವೇ ನಿಜವಾದಲ್ಲಿ ರಾಜ್ಯಾಂದ್ಯಂತ ಇರುವ ಕ್ರಿಶ್ಚಿಯನ್ ಶಾಲೆ ಕಾಲೇಜುಗಳಲ್ಲಿ ಓದುವ ಲಕ್ಷಾಂತರ ಹಿಂದೂ ಧರ್ಮಿಯರ ಮಕ್ಕಳೆಲ್ಲಾ ಮತಾಂತರಗೊಳ್ಳಬೇಕಾಗಿತ್ತಲ್ಲವೇ?   

ಇಷ್ಟಕ್ಕೂ ಇದೇನೂ ಹೊಸದಾಗಿ ಬರೆದ ಯಕ್ಷಪ್ರಸಂಗವಂತೂ ಅಲ್ಲವೇ ಅಲ್ಲಾ. ನಾಲ್ಕು ದಶಕದ ಹಿಂದೆಯೇ ಮುಳಿಯ ಕೇಶವಯ್ಯ ಎನ್ನುವವರು ಈ ..ಏಸೂ ಮಹಾತ್ಮೆ ಬರೆದು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದರು. ಹಾಗೂ ಆ ಪ್ರಸಂಗವು ಕಲಾವರಳಿ ಕರ್ನಾಟಕ ಅಷ್ಟೇ ಅಲ್ಲಾ ಬಾಂಬೆಯಲ್ಲಿಯೂ ಸಹ ಪ್ರದರ್ಶನ ಆಗಿತ್ತು. ನೂರಾರು ಪ್ರದರ್ಶನಗಳನ್ನು ಕಂಡು ಜನಪ್ರೀಯವಾಗಿದ್ದ ಈ ಯಕ್ಷಪ್ರಸಂಗವು ಆಗ ಇಂಗ್ಲೀಷ್ ಹಾಗೂ ಜರ್ಮನ್ ಭಾಷೆಗೂ ಅನುವಾದಗೊಂಡು ಪ್ರದರ್ಶನಗೊಂಡಿತ್ತು. ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಮಲ್ಪೆ ರಾಮದಾಸ ಸಾಮಗರವರೇ ಏಸುವಿನ ಪಾತ್ರ ವಹಿಸಿದ್ದರು. ಈಗ ಮುಳಿಯ ಕೇಶವಯ್ಯನವರ ಮಕ್ಕಳು ಈಗ ಅದೇ ಕೃತಿಯನ್ನು ಮುದ್ರಿಸಿ ಪ್ರಕಟಿಸುತ್ತಿದ್ದಾರೆ. ಈ ಕೃತಿಯಲ್ಲಿ ಚಂದಸ್ಸಿನ ಚೌಕಟ್ಟಿನಲ್ಲಿ ರಚನೆಯಾದ 200 ಪದ್ಯಗಳಿವೆ. ಯಕ್ಷಗಾನ ಪ್ರಸಂಗಕ್ಕೆ ಬೇಕಾದ ರಸಾನುಭವವನ್ನೂ ಸೇರಿಸಲಾಗಿದೆ. ಆದರೆ.. ಆಗೆಲ್ಲಾ ಇರದ ಪ್ರತಿರೋಧ ಈಗ್ಯಾಕೆ ಶುರುವಾಯಿತು? ಅದೇ ಪುಸ್ತಕದ ಬಿಡುಗಡೆಯ ದಿನ, ಹಳೇ ಯಕ್ಷಗಾನದ ತಾಳಮದ್ದಲೆಯ ಸಮಯದಲ್ಲಿ ಯಾಕೆ ಈ ಮತೀಯವಾದಿಗಳು ಮತ್ತೇರಿದಂತೆ ಆಡತೊಡಗಿದವು. ಯಾಕೆಂದರೆ ಆಗ ಇಡೀ ಕರಾವಳಿ ಪ್ರದೇಶದಲ್ಲಿ ಕೋಮುಸಾಮರಸ್ಯೆ ತುಂಬಿತ್ತು. ಕೋಮುಗಳಿ ನಡುವೆ ದಳ್ಳುರಿ  ಹಚ್ಚುವ ಶಕ್ತಿಗಳು ಪ್ರಭಲವಾಗಿರಲಿಲ್ಲಾ. ಜನರು ನಾಟಕವನ್ನು ನಾಟಕವಾಗಿ,,, ಯಕ್ಷಗಾನವನ್ನು ಯಕ್ಷಕಲೆಯಾಗಿ ನೋಡುತ್ತಿದ್ದರು. ಆದರೆ.. ಕಳೆದೆರಡು ದಶಕಗಳಿಂದ ಕರಾವಳಿಯ ಚಿತ್ರಣವೇ ಕೇಸರೀಕರಣಗೊಂಡಿದೆ. ಹಿಂದೂ ಶ್ರೇಷ್ಟತೆಯ ವ್ಯಸನವನ್ನು ವ್ಯವಸ್ಥಿತವಾಗಿ ಬಿಂಬಿಸಲಾಗಿದೆ. ಅನ್ಯ ಧರ್ಮಗಳ ತುಚ್ಚೀಕರಣವನ್ನೂ ಯುವಕರ ಮೆದುಳಲ್ಲಿ ತುರುಕಲಾಗಿದೆ. 


ಕಲೆಯನ್ನು ಕಲೆಯಾಗಿ ಆಸ್ವಾದಿಸಬೇಕು.. ಧರ್ಮವನ್ನು ಖಾಸಗಿ ಆಚರಣೆಯಾಗಿ ಪಾಲಿಸಬೇಕು.. ಎಲ್ಲಾ ಧರ್ಮದ ದೇವರುಗಳೂ ಒಂದೇ ಎನ್ನುವ ಭಾವನೆ ಇರಬೇಕು ಎನ್ನುವ ಕನಿಷ್ಟ ವಿವೇಕವೂ ಇಲ್ಲದ ಈ ಬ್ರೇನ್‌ವಾಷ್ಡ್ ಹಿಂದುತ್ವವಾದಿಗಳಿಗೆ ಕಲೆ ಸಂಸ್ಕೃತಿಯ ಬಗ್ಗೆ ಅರಿವೇ ಇಲ್ಲವಾಗಿದೆ. ಎಲ್ಲವನ್ನೂ ಧರ್ಮಕ್ಕೆ ತಗಲಾಕುವ ತುರ್ತಿಗೆ ಬಿದ್ದು ಸಾಮಾಜಿಕ ಸೌಹಾರ್ಧತೆಯನ್ನು ಕೆಡಿಸುವ ಹುನ್ನಾರಗಳು ವ್ಯವಸ್ಥಿತವಾಗಿಯೇ ನಡೆಯುತ್ತಿವೆ. ನಾಟಕ ಇಲ್ಲವೇ ಯಕ್ಷಪ್ರಸಂಗಗಳನ್ನು ನೋಡಿ ಜನರು ಬದಲಾಗುವುದಾಗಿದ್ದರೆ ಈಗಾಗಲೇ ಇಡೀ ಸಮಾಜವೇ ಸತ್ಯ ನಿಷ್ಟೆ ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳಬೇಕಿತ್ತು. ಈ ಮತೀಯವಾದಿ ಮನಸ್ಥಿತಿಯ ಮಹನೀಯರು ಎಂದೋ ಕೋಮುಸೌಹಾರ್ಧತೆಯನ್ನು ಒಪ್ಪಿಕೊಳ್ಳಬೇಕಾಗಿತ್ತು. ಯಾಕೆಂದರೆ ಯಕ್ಷಗಾನದ ಬಹುತೇಕ ಪ್ರಸಂಗಗಳು ಉತ್ತಮ ಮೌಲ್ಯಗಳನ್ನೇ ಹೇಳುತ್ತವೆ. ಯಾವುದೇ ಪ್ರಸಂಗ ಕಳ್ಳನಾಗು, ಸುಳ್ಳನಾಗು, ಧರ್ಮಾಂಧನಾಗು, ಹಿಂಸೆಯನ್ನು ಪ್ರಚೋದಿಸು ಎಂದು ಹೇಳುವುದಿಲ್ಲಾ. ಹೀಗಿರುವಾಗ ಅನ್ಯ ಧರ್ಮದ ದೇವರ ಮಹಾತ್ಮೆ ಯಕ್ಷಗಾನವಾಗಿ ಪ್ರಕಟಗೊಂಡರೆ.. ಹಾಗೂ ಪ್ರದರ್ಶನವಾದರೆ ನೋಡಿದವರು ಮತಾಂತರಗೊಳ್ಳುತ್ತಾರೆ ಎನ್ನುವುದೇ ಅತ್ಯಂತ ಅಪ್ರಭುದ್ದ ವಿವೇಕರಹಿತವಾದ ಗ್ರಹಿಕೆ.

ಈ ಮತೀಯ ಶಕ್ತಿಗಳಿಗೆ ಬೇಕಾದದ್ದು ಯಕ್ಷ ಪ್ರಸಂಗದ ನೆಪದಲ್ಲಿ ಕೋಮುದ್ವೇಷವನ್ನು ಹೆಚ್ಚಿಸುವುದು ಹಾಗೂ ಸಾಧ್ಯವಾದರೆ ಹಚ್ಚಿದ ಕಿಡಿಗೆ ತಾವೇ ಗಾಳಿ ಹಾಕಿ.. ಉನ್ಮಾದದ ತೈಲ ಸುರಿದು ಬೆಂಕಿಯಾಗಿ ಮಾರ್ಪಡಿಸಿ ಅಲ್ಪಸಂಖ್ಯಾತರಲ್ಲಿ ಅಭದ್ರತೆಯ ಭಾವವನ್ನು ಹುಟ್ಟಿಸುವುದು ಹಾಗೂ ಹಿಂದುತ್ವ ರಕ್ಷಕರಾಗಿ ತಮ್ಮನ್ನು ಗುರುತಿಸಿಕೊಳ್ಳುವುದು. ಇದಕ್ಕಾಗಿ ಯಾವುದೇ ಕಾರಣ ಸಿಕ್ಕರೂ ಸಾಕು ಇವರ ಹಿಂದುತ್ವ ತಕ್ಷಣ ಜಾಗೃತವಾಗಿಬಿಡುತ್ತದೆ. ಮತೀಯವಾದ ವ್ಯಾಧಿಯಾಗಿ ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸಿ ಆ ನಂತರ ಸಮಾಜದಲ್ಲಿ ಹರಡುತ್ತದೆ.

ಮೂಲಭೂತವಾಗಿ ಕರಾವಳಿ ಕರ್ನಾಟಕದಲ್ಲಿ ಪ್ರಸಿದ್ಧವಾಗಿರುವ ಯಕ್ಷಗಾನ ಬಯಲಾಟವು ಜಾನಪದ ಕಲೆ. ಶೂದ್ರರು, ದಲಿತರು ಹಾಗೂ ದುಡಿಯುವ ವರ್ಗದವರು ಸೇರಿ ಬಯಲಾಟ ಪರಂಪರೆಯನ್ನು ಕಟ್ಟಿ ತಲೆಮಾರುಗಳಿಂದ ಬೆಳೆಸುತ್ತಾ ಬಂದಿದ್ದಾರೆ. ಬರುಬರುತ್ತಾ ಉತ್ತರ ಕರ್ನಾಟಕದಲ್ಲಿ ಬಯಲಾಟದ ಪ್ರಕಾರಗಳಾದ ದೊಡ್ಡಾಟ ಸಣ್ಣಾಟಗಳು ಅವತ್ತಿನಿಂದ ಇವತ್ತಿನವರೆಗೂ ದುಡಿಯುವ ವರ್ಗಗಳ ಪಾಲ್ಗೊಳ್ಳುವಿಕೆಯಲ್ಲೇ ನಡೆದು ಬರುತ್ತವೆ. ಆದರೆ ಬಯಲಾಟದ ಪ್ರಕಾರವೇ ಆದ ಯಕ್ಷಗಾನವು ಕರಾವಳಿ ಪ್ರದೇಶದಲ್ಲಿ ಬರುಬರುತ್ತಾ ಬ್ರಾಹ್ಮಣ ವರ್ಗದವರ ಪಾಲಾಗುತ್ತದೆ. ಯಕ್ಷಗಾನದ ಜನಪ್ರೀಯತೆಯನ್ನು ಕಂಡು ಬ್ರಾಹ್ಮಣ ಸಮುದಾಯದವರು ಈ ಕಲೆಯಲ್ಲಿ ತೊಡಗಿಕೊಳ್ಳುತ್ತಾರೆ ಹಾಗೂ ಧರ್ಮಸ್ಥಳದಂತಹ ಧಾರ್ಮಿಕ ಕ್ಷೇತ್ರಗಳು ಯಕ್ಷಗಾನಕ್ಕೆ ಅಪಾರವಾದ ಬೆಂಬಲವನ್ನು ಕೊಡುತ್ತಾ ಬಂದಿವೆ. ಹೀಗಾಗಿ ಕರಾವಳಿ ಕರ್ನಾಟಕದ ಬಹುತೇಕ ಯಕ್ಷಗಾನ ತಂಡಗಳು ಈಗಲೂ ಮೇಲ್ವರ್ಗದವರ ನಿರ್ವಹಣೆಯಲ್ಲಿವೆ. ಈ ಮತೀಯವಾದಿ ಶಕ್ತಿಗಳೂ ಸಹ ಯಕ್ಷಗಾನವೆಂದರೆ ಹಿಂದೂಗಳ ಅದರಲ್ಲೂ ಬ್ರಾಹ್ಮಣರ ಕಲೆ ಎಂದೇ ತಿಳಿದಂತಿವೆ. ಆದರೆ.. ಯಾವ ಕಲೆಯೂ ಒಂದು ವರ್ಗಕ್ಕೆ ಸೀಮಿತವಾಗಿರುವುದಿಲ್ಲಾ. ಹಾಗೇನಾದರೂ ಸೀಮಿತವಾದಲ್ಲಿ ಅದು ಜನರ ಕಲೆಯಾಗಿ ಉಳಿಯುವುದಿಲ್ಲಾ.. 


ಹಾಗೆಯೇ ಜನಮಾನಸದಲ್ಲಿರುವ ಈ ಪ್ರದರ್ಶಕ ಕಲೆಗಳು ದೇವರು, ಧರ್ಮ ಹಾಗೂ ಆಚರಣೆಗಳನ್ನು ಯಾವಾಗಲೂ ಚಿಕಿತ್ಸಕ ನೋಟದಲ್ಲೇ ನೋಡಿ ವಿಶ್ಲೇಷಿಸುತ್ತವೆ. ದೇವರನ್ನು ಭಜಿಸುವ, ಟೀಕಿಸುವ, ಹಾಗೂ ವಿಶ್ಲೇಷಿಸುವ ಆರೋಗ್ಯಕರ  ಬಹುತೇಕ ನಾಟಕಗಳಲ್ಲಿ ಹಾಗೂ ಯಕ್ಷ ಪ್ರಸಂಗಗಳಲ್ಲಿ ದೇವರುಗಳನ್ನು ಲೇವಡಿ ಮಾಡಲಾಗಿದೆ.. ಟೀಕಿಸಲಾಗಿದೆ.. ರಾವಣನನ್ನೇ ವೈಭವೀಕರಿಸಿ ಮಹಾ ಶಿವಭಕ್ತ ಎಂದು ಸಾರುವ ಪ್ರಸಂಗಗಳೂ ಪ್ರದರ್ಶನಗೊಂಡಿವೆ. ಪೌರಾಣಿಕ ಪಾತ್ರಗಳನ್ನು ವಿಮರ್ಶಿಸಲಾಗುತ್ತದೆ.. ಧರ್ಮದೊಳಗಿನ ಮೌಡ್ಯಗಳನ್ನು ಪ್ರಶ್ನಿಸಲಾಗುತ್ತದೆ. ಹೀಗಾಗಿ  ಪ್ರದರ್ಶಕ ಕಲೆಗಳು ಮತೀಯವಾದವನ್ನು ಪ್ರಚೋದಿಸುವುದಿಲ್ಲಾ. ಆದರೆ ಈ ಮತೀಯವ್ಯಾಧಿಗಳು ಕಲೆಯನ್ನು ಕಲೆಯಾಗಿ ಇರಲು ಬಿಡುತ್ತಿಲ್ಲಾ. ಯಕ್ಷಗಾನ ಆರಾಧಕ ಕಲೆಯಾಗಿದ್ದರೂ.. ಆಸ್ತಿಕತೆಯ ಕಲ್ಪಿತ ಮೌಲ್ಯವನ್ನು ಪ್ರಶ್ನಿಸಿದರೂ ಎಂದೂ ಕೋಮುಸಂಘರ್ಷಕ್ಕೆ ಪ್ರಚೋದಿಸುವುದಿಲ್ಲಾ. ಕೆಲವಾರು ಪ್ರಸಂಗಗಳಲ್ಲಿ ಹಿಂದೂ ಮುಸ್ಲಿಂ ಕೋಮುಸಾಮರಸ್ಯವನ್ನೂ ಪ್ರತಿಪಾದಿಸಲಾಗಿದೆ. ಎಲ್ಲಾ ದೇವರೂ ಒಂದೇ ಹಾಗೂ ಎಲ್ಲಾ ಧರ್ಮದವರೂ ಅವರವರ ಧರ್ಮಕ್ಕೆ ಬದ್ಧರಾಗಿರಬೇಕು ಎನ್ನುವ ತತ್ವವನ್ನೇ ಬಹುತೇಕ ಯಕ್ಷಪ್ರಸಂಗಗಳು ಸಾರಿವೆ. ಅನ್ಯ ಧರ್ಮಿಯರ ಪಾತ್ರವನ್ನು ಕೀಳಾಗಿ ಚಿತ್ರಿಸುವ ಉದಾಹರಣೆಗಳೂ ಇವೆಯಾದರು ಅವು ಕಡಿಮೆ.

ಈಗ ಏಸು ಕ್ರಿಸ್ತನ ಮಹಿಮೆಯನ್ನು ಸಾರುವ ಯಕ್ಷಪ್ರಸಂಗಕ್ಕೆ ಎಂದೂ ಇಲ್ಲದ ವಿರೋಧ ಯಾಕೆ ವ್ಯಕ್ತವಾಗುತ್ತಿದೆ?. ಯಾಕೆಂದರೆ ಕರಾವಳಿ ಕರ್ನಾಟಕದಲ್ಲಿ ಮತೀಯವಾದಿಗಳ ಸಂಖ್ಯೆ ಹೆಚ್ಚುತ್ತಿದೆ. ಹಿಂದುತ್ವದ ಹುಸಿ ವೈಭವೀಕರಣ ಜಾಸ್ತಿಯಾಗುತ್ತಿದೆ. ಈ ವಿಕ್ಷಿಪ್ತ ಮನಸ್ಥಿತಿ ಯಕ್ಷಗಾನದಂತಹ ಕಲೆಯ ಕ್ಷೇತ್ರವನ್ನೂ ಪೀಡಿಸುತ್ತಿದೆ. ಕೋಮುವಾದಿ ಪಕ್ಷ ಹಾಗೂ ಸಂಘಟನೆಗಳು ಸದಾ ಪ್ರಚಾರದಲ್ಲಿರಲು ಹಾಗೂ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಎಲ್ಲಾ ಸಂದರ್ಭಗಳನ್ನೂ ಉಪಯೋಗಿಸಿಕೊಳ್ಳುತ್ತವೆ. ಕಲೆಯೂ ಸಹ ಇದಕ್ಕೆ ಹೊರತಲ್ಲಾ. ಇದು ಸಾಮಾಜಿಕ ಸೌಹಾರ್ಧತೆಗೆ ಅಪಾಯಕಾರಿಯಾಗಿದೆ. ಏಸೂಕ್ರಿಸ್ತನ ಯಕ್ಷಪ್ರಸಂಗದಿಂದ ಯಾವ ಮತಾಂತರವೂ ಸಾಧ್ಯವಿಲ್ಲವಾದರೂ ಈ ಹಿಂದುತ್ವವಾದಿಗಳ ಮತಾಂಧತೆಯನ್ನಂತೂ ಉದ್ದೀಪನಗೊಳಿಸಿದೆ. ಇವರ ಉದ್ದೀಪನೆ ಉನ್ಮಾದವಾಗಿ ಜನರಲ್ಲಿ ತಳಮಳವನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ.

ಕರಾವಳಿ ಕರ್ನಾಟಕದಲ್ಲಿ ಇರುವವರೆಲ್ಲರೂ ಮತೀಯವಾದಿಗಳಲ್ಲಾ. ಬಹುಸಂಖ್ಯಾತರಿಗೆ ಈ ಕೋಮು ಗಲಭೆ, ಹಿಂಸಾಪಾತ, ಧರ್ಮದ್ವೇಷಗಳು ಬೇಕಾಗೆ ಇಲ್ಲಾ. ಆದರೆ.. ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾದರೂ ಈ ಮತೀಯವಾದಿಗಳು ತಮ್ಮ ಧರ್ಮದ್ವೇಷ ಪ್ರಚೋದನೆಯನ್ನು ಸಮಾಜದಲ್ಲಿ ಪಸರಿಸಿ ಆತಂಕದ ವಾತಾವರಣವನ್ನು ನಿರ್ಮಿಸುತ್ತಲೆ ಇರುತ್ತಾರೆ. ಅದರಲ್ಲೇ ಅವರ ಅಸ್ತಿತ್ವವಿದೆ. ಆದರೆ ಈ ಹುನ್ನಾರಗಳನ್ನು ಪ್ರಜ್ಞಾವಂತರು ಪ್ರತಿರೋಧಿಸಬೇಕು. ಮತೀಯಶಕ್ತಿಗಳ ಈ ಅತಿರೇಕವನ್ನು ದಕ್ಷಿಣ ಕನ್ನಡ ಮಾತ್ರವಲ್ಲಾ ಇಡೀ ಕರ್ನಾಟಕದ ಕಲಾವಿದರು, ರಂಗಕರ್ಮಿಗಳು, ಯಕ್ಷಗಾನ ತಂಡಗಳ ಮುಖ್ಯಸ್ತರುಗಳು ಹಾಗೂ ಸಾಹಿತ್ಯಕ- ಸಾಂಸ್ಕೃತಿಕ ಲೋಕದ ನಾಯಕರುಗಳು ಖಂಡಿಸಬೇಕು. ಕಲೆಯ ವಿಚಾರದಲ್ಲಿ ನಿರ್ಬಂಧಗಳನ್ನು ಹಾಕಲು ಬಯಸುವ ಕೋಮುವಾದಿಗಳ ಕುತಂತ್ರವನ್ನು ಧಿಕ್ಕರಿಸಬೇಕು. ಯಕ್ಷಗಾನ ಕಲಾವಿದರುಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸಬೇಕು. ಹಿಂದುತ್ವವಾದಿಗಳ ಹಿಕ್ಮತ್ತನ್ನು ಸೋಲಿಸಬೇಕಿದೆ.  

  -ಶಶಿಕಾಂತ ಯಡಹಳ್ಳಿ      






ಮಂಗಳವಾರ, ಮೇ 2, 2017

ತಹ ತಹ.... 92 ಬೆಂಕಿಯಿಂದ ಬೆಂಕಿ ನಂದಿಸಲಾದೀತೆ? ಯುದ್ದೋನ್ಮಾದ ನೆಮ್ಮದಿ ತಂದೀತೆ?






ದ್ವೇಷ ಮತ್ತು ದೇಶಭಕ್ತಿ ಎರಡೂ ಅತಿಯಾದರೆ ಅದಕ್ಕೆ ಯುದ್ದೋನ್ಮಾದ ಎನ್ನುತ್ತಾರೆ. ದೇಶಭಕ್ತಿಯ ಮೇನಿಯಾವನ್ನು ದೇಶವಾಸಿಗಳಲ್ಲಿ ಹಬ್ಬಿಸಲು ದ್ವೇಷವನ್ನು ಹೆಚ್ಚಿಸುವ ಕೆಲಸವನ್ನು ಆಳುವ ಪ್ರಭುತ್ವಗಳು ಮಾಡುತ್ತಲೇ ಇರುತ್ತವೆ. ಯುದ್ದೋನ್ಮಾದ ಹೆಚ್ಚಾದಷ್ಟೂ ಆಳುವವರಿಗೆ ತಮ್ಮ ಎಲ್ಲ ನ್ಯೂನ್ಯತೆಯನ್ನು ಮುಚ್ಚಿಕೊಂಡು ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಅನುಕೂಲವಾಗುತ್ತದೆ. ಇದಕ್ಕೆ ಪಾಕಿಸ್ತಾನವೂ ಹೊರತಲ್ಲಾ ಹಿಂದೂಸ್ತಾನವೂ ಹಿಂದೆ ಬಿದ್ದಿಲ್ಲಾ. ಪಾಕಿಸ್ತಾನಕ್ಕೆ ಈಗ ದೇಶಭಕ್ತಿಯ ಮೇನಿಯಾ ಹುಟ್ಟಿಸುವ ಅಗತ್ಯವಿದೆ. ಆ ದೇಶದ ಜನರನ್ನು ದಿಕ್ಕುತಪ್ಪಿಸಲು ಈಗ ಯುದ್ದೋನ್ಮಾದ ಸೃಷ್ಟಿಸುವ ತರಾತುರಿ ಇದೆ. ಅದಕ್ಕಾಗಿಯೇ ಮೇ 1 ರಂದು ಭಾರತದ ಗಡಿ ದಾಟಿ ಬಂದ ಪಾಕಿ ಸೈನಿಕರು ಇಬ್ಬರು ಭಾರತೀಯ ಯೋಧರನ್ನು ಗುಂಡಿಕ್ಕಿ ಕೊಂದು ಶಿರಚ್ಚೇದನ ಮಾಡಿ ತಮ್ಮ ಕ್ರೌರ್ಯವನ್ನು ಮೆರೆದಿದ್ದಾರೆ. ಪಾಕಿಸ್ಥಾನದ ಸೇನಾ ಮುಖ್ಯಸ್ಥ ಜನರಲ್ ಕಮಾರ್ ಜಾವೇದ್ ಬಾಜ್ವಾ ನಿಯಂತ್ರಣ ರೇಖೆಯ ಕೆಲವೆಡೆ ಬೇಟಿ ನೀಡಿ ಕಾಶ್ಮೀರಿಗಳಿಗೆ ಬೆಂಬಲ ಘೋಷಿಸಿದ ಮರುದಿನವೇ ಈ ಕುಕೃತ್ಯ ನಡೆದಿದೆ. 11ನೇ ಶಿಖ್ ರೆಜಿಮೆಂಟಿನ ಸುಬೇದಾರ್ ಪರಮ್‌ಜೀತ್ ಸಿಂಗ್ ಮತ್ತು ಬಿಎಸೆಫ್‌ನ 200ನೇ ಬೆಟಾಲಿಯನ್‌ನ ಹೆಡ್ ಕಾನ್ ಸ್ಟೇಬಲ್ ಪ್ರೇಮ್ ಸಾಗರ್ ಪಾಕಿ ಸೈನಿಕರ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ.

2016 ಸೆಪ್ಟಂಬರ್ 29ರಂದು ಭಾರತದ ಸೈನಿಕರು ಪಾಕ್ ಗಡಿಯೊಳಗೆ ನುಗ್ಗಿ ಏಳು ಟೆರೆರಿಸಟ್ ಕ್ಯಾಂಪಗಳ ಮೇಲೆ ದಾಳಿ ಮಾಡಿ 50ರಷ್ಟು ಭಯೋತ್ಪಾದಕರು ಹಾಗೂ ಅವರಿಗೆ ಕಾವಲಾಗಿದ್ದ ಪಾಕ್ ಸೈನಿಕರನ್ನು ಹತ್ಯೆ ಗೈದು ಮರಳಿದ್ದರು. ಇದಕ್ಕೆ ಸರ್ಮಿಕಲ್ ಸ್ಟ್ರೈಕ್ ಎಂದು ಕರೆದ ಬಿಜೆಪಿ ಸರಕಾರ ಭಾರತದಾದ್ಯಂತ ದೇಶಭಕ್ತಿಯ ಮೇನಿಯಾವನ್ನು ಹುಟ್ಟುಹಾಕಿತ್ತು. ಪಾಕಿಸ್ತಾನದ ದುರಹಂಕಾರವನ್ನು ಮೆಟ್ಟಿ ನಿಂತೆವು ಎಂದು ಅಗ್ಗರಿಸಿತ್ತು. ಆದರೆ ಬೆಂಕಿ ಇಂದಾ ಬೆಂಕಿ ನಂದಿಸಲು ಸಾಧ್ಯವೆ. ಈಗ ಪಾಕಿಸ್ಥಾನ ತನಗಾದ ಅವಮಾನಕ್ಕೆ ಪ್ರತಿಯಾಗಿ ಪಾಕಿಸ್ತಾನದ ಮಿಲಿಟರಿಯು ತನ್ನ ಸೈನಿಕರನ್ನು ಬೆಳಿಗ್ಗೆ 8.30 ಗಂಟೆಗೆ ಭಾರತದ ಜಮ್ಮು ಕಾಶ್ಮೀರದ ಪೂಂಛ್ ಗಡಿ ದಾಟಿಸಿ ಇಬ್ಬರು ಭಾರತೀಯ ಸೈನಿಕರನ್ನು ನಿರ್ಧಯವಾಗಿ ಕೊಂದು ಸುರಕ್ಷಿತವಾಗಿ ವಾಪಸ್ ಹೋಗಿದ್ದಾರೆ. ಪಾಕ್ ಮಿಲಿಟರಿಯು ಭಾರತದ ಸರ್ಜಿಕಲ್ ಸ್ಟ್ರೈಕಿಗೆ ಪ್ರತಿಕಾರ ತೀರಿಸಿಕೊಂಡಿದೆ. ಅದನ್ನು ಆ ದೇಶದಲ್ಲಿರುವ ಯುದ್ದೋನ್ಮಾದಿಗಳು ಸಂಭ್ರಮಿಸುತ್ತಿದ್ದಾರೆ. ಇತ್ತ ಭಾರತೀಯರಲ್ಲಿ ಆಕ್ರೋಶ ಉರಿಬೆಂಕಿಯಾಗಿದೆ. ಮತ್ತೆ ಸೇಡಿನ ಮಾತುಗಳು ಪ್ರತಿದ್ವನಿಸುತ್ತಿದೆ. ಒಂದು ತಲೆಗೆ ಐವತ್ತು ತಲೆ ತೆಗೆಯಬೇಕೆಂದು ಹುತಾತ್ಮ ಯೋಧನ ಮಗಳೇ ಅವಲತ್ತುಕೊಂಡಿದ್ದಾಳೆ. ಅಲ್ಲಲ್ಲಿ ಪಾಕ್ ದ್ವಜವನ್ನು ಸುಟ್ಟುಹಾಕಲಾಗಿದೆ. ಭದ್ರತಾ ಪಡೆಗಳು ಪಾಕ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಸಜ್ಜಾಗಿದ್ದು ಸೂಕ್ತ ಸಮಯಕ್ಕಾಗಿ ಕಾಯುತ್ತಿವೆ. 

ಇದು ಸಧ್ಯಕ್ಕೆ ಮುಗಿಯುವ ಸಮಸ್ಯೆಯಲ್ಲಾ. ಹೀಗೆಯೇ ಸಮರದಾಹ ಹಾಗೂ ದ್ವೇಷಗಳು ಎರಡೂ ದೇಶಗಳಲ್ಲಿ ಆಳುವ ವರ್ಗಗಳು ಬೆಳೆಸುತ್ತಾ ಹೋದಂತೆ ಎರಡೂ ಕಡೆ ರಕ್ತಪಾತಗಳು ನಿರಂತರ. ಸರ್ಜಿಕಲ್ ದಾಳಿಯಿಂದಾ ಪಾಕ್ ಬಾಲ ಮುದುರಿಕುಳಿತಿದೆ ಎಂದು ನಕಲಿ ದೇಶಭಕ್ತರು ಪುಂಗಿದ್ದೆಲ್ಲಾ ಅಸತ್ಯವೆಂದು ಈಗ ಗೊತ್ತಾಗುತ್ತಿದೆ.  ಹಳೆಯ ನೋಟ್ ರದ್ದತಿಯಿಂದಾ ಗಡಿ ಭಯೋತ್ಪಾದನೆ ಕಡಿಮೆಯಾಗುತ್ತದೆ ಎನ್ನುವ ಪ್ರಧಾನಿ ಮೋದಿಯವರ ಮಾತುಗಳೆಲ್ಲಾ ಹುಸಿಹೋಗಿವೆ. ಸರ್ಜಿಕಲ್ ಸ್ಟ್ರೈಕ್ ಮಾಡುವ ಮುನ್ನ ಪಾಕ್ ಆಕ್ರಮಿತ ಕಾಶ್ಮೀರದ ಗಡಿರೇಖೆಯಲ್ಲಿ ಪಾಕಿಸ್ತಾನ ಸೇನಾ ಬೆಂಬಲಿತ ಸುಮಾರು 35 ರಷ್ಟು ಉಗ್ರಗಾಮಿಗಳ ತರಬೇತಿ ಕ್ಯಾಂಪಗಳಿದ್ದವು. ಅದರಲ್ಲಿ 7 ಕ್ಯಾಂಪ್ ಗಳನ್ನು ಭಾರತೀಯ ಸೈನಿಕರು ದ್ವಂಸಗೊಳಿಸಿದರು. ಆದರೆ..  ಕಳೆದ ನಾಲ್ಕು  ತಿಂಗಳಲ್ಲಿ ಉಗ್ರರ ತರಬೇತಿ ಕೇಂದ್ರಗಳ ಸಂಖ್ಯೆ ೫೫ ರಷ್ಟನ್ನು ದಾಟಿದೆ. ಅಂದರೆ.. ಸರ್ಜಿಕಲ್ ಸ್ಟ್ರೈಕ್ ಮಾಡುವುದರಿಂದಾಗಲೀ ಇಲ್ಲವೇ ನೋಟ್ ಬಂಧಿ ಮಾಡುವುದರಿಂದಾಗಲೀ ಈ ಉಗ್ರಗಾಮಿಗಳ ಉಪಟಳವನ್ನು ನಾಶಮಾಡಲು  ಸಾಧ್ಯವಿಲ್ಲ ಹಾಗೂ ಪಾಕಿಸ್ತಾನಿ ಸೇನೆಯ ದುಸ್ಸಾಹಸಗಳನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲಾ. 2013 ರಲ್ಲಿ ಗಡಿ  ನಿಯಂತ್ರಣ ರೇಖೆ ಬಳಿ ಕರ್ತವ್ಯ ನಿರತವಾಗಿದ್ದ ಯೋಧ ಲ್ಯಾನ್ಸ್ ನಾಯಕ್ ಹೇಮರಾಜ್ ಮೇಲೆ ಪಾಕ್ ಸೈನಿಕರು ದಾಳಿ ಮಾಡಿ ಶಿರಚ್ಚೇದ ಮಾಡದ್ದಾಗ ನಮ್ಮ ಕೇಂದ್ರ ಸರಕಾರವು ನಮ್ಮ ಒಬ್ಬ ಯೋಧನ ತಲೆ ಕಡಿದರೆ ನಾವು ಅವರ ಹತ್ತು ತಲೆಗಳನ್ನು ಉರುಳಿಸುತ್ತೇವೆ ಎಂದು ಹೇಳಿತ್ತು. ಆದರೆ.. ಇಲ್ಲಿವರೆಗೂ ಪಾಕ್ ಸೈನಿಕರ ತಲೆಗಳಂತೂ ಉದುರಲಿಲ್ಲಾ.. ಈ ರೀತಿಯ ಉನ್ಮಾದದ ಹೇಳಿಕೆಗಳಿಗಂತೂ ಬರವಿಲ್ಲಾ. ಯಾಕೆಂದರೆ ಈ ಹಿಂಸೆ ಪ್ರತಿಹಿಂಸೆಗಳು ಸಮರದಾಹಕ್ಕೆ ಪರಿಹಾರ ಅಲ್ಲವೇ ಅಲ್ಲಾ. ಯುದ್ದ ಎನ್ನುವುದು ದೇಶಭಕ್ತರು ಅಂದುಕೊಂಡಷ್ಟು ಸುಲಭಸಾಧ್ಯವಾಗಿಲ್ಲ. ಅಣ್ವಸ್ತ್ರಗಳನ್ನು ಹೊಂದಿದ ಎರಡು ರಾಷ್ಟ್ರಗಳು ಯುದ್ದಕ್ಕೆ ನಿಂತರ ಎರಡೂ ದೇಶಗಳು ಉರಿದು ಬೂದಿಯಾಗುತ್ತವೆ. ಇಂತಹ ಸಂದಿಗ್ದ ಸಂದರ್ಭದಲ್ಲಿ ಸಮರದಾಹ ಹಾಗೂ ಯುದ್ದೋನ್ಮಾದಗಳ ವಿನಾಶಕಾರಿ ಮಾರ್ಗವನ್ನು ಬಿಟ್ಟು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ.

ಭಯೋತ್ಪಾದನೆ ಎನ್ನುವುದು ಈಗ ಒಂದು ದೇಶಕ್ಕೆ ಸೀಮಿತವಾದದ್ದಲ್ಲಾ. ಅದು ಈಗ ಜಾಗತಿಕ ಸಮಸ್ಯೆಯಾಗಿದೆ. ಬಹುತೇಕ ದೇಶಗಳು ಈ ಧಾರ್ಮಿಕ ಉಗ್ರಗಾಮಿಗಳ ಅಟ್ಟಹಾಸಕ್ಕೆ ನಲುಗಿವೆ. ಹೀಗಾಗಿ  ಉಗ್ರಗಾಮಿಗಳಿಂದ ಹಿಂಸೆಗೊಳಗಾದ ಎಲ್ಲಾ ದೇಶಗಳನ್ನೂ ಒಂದುಗೂಡಿಸಿ ಭಯೋತ್ಪಾದಕರ ವಿರುದ್ಧ ಜಾಗತಿಕವಾಗಿ ಯುದ್ದಸಾರಬೇಕಾಗಿದೆ. ಉಗ್ರರಿಗೆ ನೆಲೆಯನ್ನು ಒದಗಿಸಿ ತರಬೇತಿಯನ್ನು ಕೊಟ್ಟು ಸಾಕುತ್ತಿರುವ ಪಾಕಿಸ್ತಾನದ ಮಿಲಿಟರಿಯ ವಿರುದ್ಧ ಎಲ್ಲಾ ದೇಶಗಳನ್ನು ಎತ್ತಿಕಟ್ಟುವ ಕೆಲಸವನ್ನು ಭಾರತ ಮಾಡಬೇಕಾಗಿದೆ. ಎಲ್ಲಿವರೆಗೂ ಪಾಕಿಸ್ತಾನವನ್ನು ಜಾಗತಿಕವಾಗಿ ಒಂಟಿ ಮಾಡಲಾಗುವುದಿಲ್ಲವೋ ಅಲ್ಲಿವರೆಗೂ ಆ ದೇಶದ ಯುದ್ದೋನ್ಮಾದಿಗಳ ಅಟ್ಟಹಾಸ ನಿಲ್ಲುವುದಿಲ್ಲಾ. ಉಗ್ರರ ರಕ್ತಪಾತದಾಟ ಕೊನೆಯಾಗುವುದಿಲ್ಲಾ. ಅಂತರಾಷ್ಟ್ರೀಯ ಒತ್ತಡಕ್ಕೊಳಗಾಗಿ ಪಾಕಿಸ್ತಾನದ ಸೈನೈವೇ ಆ ದೇಶದೊಳಗಿನ ಉಗ್ರರನ್ನು ಮಟ್ಟಹಾಕುವಂತಹ ಸನ್ನಿವೇಶವನ್ನು ಸೃಷಿಸಬೇಕಾಗಿದೆ. ಅದರ ನಾಯಕತ್ವವನ್ನು ಭಾರತವೇ ವಹಿಸಿಕೊಳ್ಳಬೇಕಿದೆ. ಚೀನಾದ ಬೆಂಬಲ ಪಾಕಿಸ್ತಾನಕ್ಕೆ ಅಚಲವಾಗಿರುವವರೆಗೂ ಇದು ಅಷ್ಟೊಂದು ಸುಲಭ ಸಾಧ್ಯವಲ್ಲಾ. ಆದರೆ.. ಉತ್ತರ ಕೋರಿಯಾಗೂ ಸಹ ಚೀನಾ ಬೆಂಬಲವಿದ್ದರೂ ಜಾಗತಿಕ ದೇಶಗಳ ಒತ್ತಾಯಕ್ಕೆ ಚೀನಾ ಮಣಿಯಲೇಬೇಕಾಗಿದೆ.. ಉತ್ತರ ಕೋರಿಯಾಗೆ ಸಂಯಮದ ಪಾಠವನ್ನು ಚೀನಾ ಹೇಳುವಂತಾಗಿದೆ. ಅದೇ ರೀತಿ ಅಂತರ್ರಾಷ್ಟ್ರೀಯ ಒತ್ತಡವನ್ನು ಚೀನಾದ ಮೇಲೂ ತರುವ ಮೂಲಕ ಪಾಕಿಸ್ತಾನವೇ ತನ್ನ ಒಡಲೊಳಗಿಟ್ಟು ಪೋಷಿಸುತ್ತಿರುವ ಉಗ್ರಗಾಮಿಗಳನ್ನು ನಾಶಮಾಡಲೇಬೇಕಾದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಬೇಕಾಗಿರುವುದು ಈಗ ಭಾರತಕ್ಕೆ ಅನಿವಾರ್ಯವಾಗಿದೆ. ಅದು ಬಿಟ್ಟು ಈ ಯುದ್ದೋತ್ಪಾದನೆ, ಸರ್ಜಿಕಲ್ ಸ್ಟ್ರೈಕ್‌ಗಳೆಲ್ಲಾ ಕೇವಲ ದ್ವೇಷದ ಕಿಚ್ಚನ್ನು ಹೆಚ್ಚಿಸುವ ಹಾಗೂ ದೇಶವಾಸಿಗಳಲ್ಲಿ ದೇಶಭಕ್ತಿಯ ಕೆಚ್ಚನ್ನು ಸೃಷ್ಟಿಸುವ ಹಾಗೂ ಆಳುವ ಸರಕಾರಗಳ ವೈಪಲ್ಯಗಳನ್ನು ಮರೆಸುವ ತಂತ್ರಗಾರಿಕೆಯಾಗಿವೆ. ಇದನ್ನು ಭಾರತದ ಪ್ರಜ್ಞಾವಂತ ಜನರು ಅರಿಯಬೇಕಾಗಿದೆ. ರಕ್ತಕ್ಕೆ ರಕ್ತ, ಕತ್ತಿಗೆ ಕತ್ತಿ ಎನ್ನುವ ಹಿಂಸೋತ್ಪಾದಕ ಪ್ರಚೋದನೆಗೊಳಗಾಗದೇ ಉಗ್ರದಮನದತ್ತ ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸಬೇಕಿದೆ. ಎಲ್ಲಾ ದೇಶಗಳ ಗಡಿಗಳಲ್ಲಿ ಶಾಂತಿ ನೆಮ್ಮದಿ ನೆಲೆಸಬೇಕಿದೆ. ಬಂದೂಕಿನ ಬಾಯೊಳಗೆ ಗುಬ್ಬಿಗಳು ಗೂಡುಕಟ್ಟಿ ಮರಿಮಾಡಬೇಕಿದೆ.  

 - ಶಶಿಕಾಂತ ಯಡಹಳ್ಳಿ  









ಸೋಮವಾರ, ಮೇ 1, 2017

ತಹ ತಹ..... 91 ಮೇ ಡೆ ಘೋಷಣೆ ಭಾಷಣಗಳನು ಮೀರಿ ತುರ್ತಾಗಿ ಆಗಬೇಕಿದೆ ಜನಾಲೋಂದನ ಜಾರಿ :



 
ಪ್ರತಿ ವರ್ಷದಂತೆ ಈ ಸಲವೂ ಸಹ ಮೇ 1 ಬಂದಿದೆ. ವಿಶ್ವ ಕಾರ್ಮಿಕ ದಿನಾಚರಣೆ ಎನ್ನುವುದು ಮೇ ಒಂದರಂದು ಖಡ್ಡಾಯವಾಗಿ ನಡೆಯುವ ಸಾಂಪ್ರದಾಯಿಕ ಶುಷ್ಕ ಆಚರಣೆಂiiಂತಾಗಿದೆ. ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಶಕ್ತಾನುಸಾರ ಭಾಷಣ ಘೋಷಣೆ ಹಾಗೂ ರ‍್ಯಾಲಿಗಳು ಈ ದಿನದಂದು ನಡೆದುಕೊಂಡು ಬರುತ್ತಲೇ ಇವೆ. ಇಷ್ಟೆಲ್ಲಾ ಕಾರ್ಮಿಕ ಸಂಘಟನೆಗಳು, ಇಂತಹ ಸಂಘಟನೆಗಳಲ್ಲಿ ನೋಂದಾಯಿತ ಕೋಟ್ಯಾಂತರ ಸಂಘಟಿತ ಕಾರ್ಮಿಕರು, ಸಾವಿರಾರು ಬುದ್ದಿವಂತ ಕಾರ್ಮಿಕ ನಾಯಕರುಗಳು ಇದ್ದರೂ ಕಾರ್ಮಿಕರ ಬದುಕಂತೂ ವರ್ಷದಿಂದ ವರ್ಷಕ್ಕೆ ಅತಂತ್ರಗೊಳ್ಳುತ್ತಿದೆ. ಜಾಗತೀಕರಣದ ಮಾಯಾಜಾಲ ಕಾರ್ಮಿಕ ವರ್ಗವನ್ನೇ ಹಿಡಿದು ಹಿಂಡಿ ಹಿಪ್ಪೆ ಮಾಡುತ್ತಿದೆ. ಕಾರ್ಮಿಕರನ್ನು ಮನುಷ್ಯರನ್ನಾಗಿ ಪರಿಗಣಿಸದೇ ಯಂತ್ರಗಳ ಹಾಗೆ ದುಡಿಸಿಕೊಳ್ಳುವ ಹುನ್ನಾರಗಳು ಬಹುತೇಕ ಖಾಸಗಿ ಕಾರ್ಖಾನೆಗಳಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ. ಇರುವ ಸರಕಾರಿ ಸಾಮ್ಯದ ಕಾರ್ಖಾನೆಗಳನ್ನೂ ಸಹ ಖಾಸಗೀಕರಣ ಮಾಡಲು ಕೇಂದ್ರ ಸರಕಾರ ಹಾತೊರೆಯುತ್ತಿದೆ. ಬಿಇಎಂಎಲ್ ಕಾರ್ಖಾನೆ ಖಾಸಗೀಕರಣಕ್ಕೆ ಮುಂದಿನ ಬಲಿಪಶುವಾಗುವುದರಲ್ಲಿದೆ.


ಲಕ್ಷಾಂತರ ಸಂಘಟಿತ ಕಾರ್ಮಿಕರಿದ್ದರೂ, ಹಲವಾರು ಪ್ರಮುಖ ಕಾರ್ಮಿಕ ಸಂಘಟನೆಗಳಿದ್ದರೂ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಅದರ ಅಸೋಸಿಯೇಟ್ ಬ್ಯಾಂಕ್‌ಗಳ ವಿಲೀನವನ್ನು ತಪ್ಪಿಸಲಾಗಲಿಲ್ಲಾ. ಸಾವಿರಾರು ಜನರು ಬಲವಂತದ ನಿವೃತ್ತಿ ಪಡೆಯುವುದನ್ನು ನಿಲ್ಲಿಸಲಾಗಲಿಲ್ಲಾ. ಕಾರ್ಮಿಕ ಸಂಘಟನೆಗಳು ಸಾಂಕೇತಿಕವಾಗಿ ಧರಣಿ ಪ್ರತಿಭಟನೆ ಬಂದ್‌ಗಳನ್ನು ಕಾಲಕಾಲಕ್ಕೆ ಮಾಡಿ ಯಾಂತ್ರಿಕವಾಗಿ ತಮ್ಮ ಕರ್ತವ್ಯವನ್ನು ನಿಭಾಯಿದರೂ ಎಸ್ ಬಿಐ ಬ್ಯಾಂಕ್ ಕಾರ್ಮಿಕ ನೌಕರ ವರ್ಗದವರ ವೃತ್ತಿ ಬದುಕು ಅತಂತ್ರವಾಗುವುದನ್ನು ಬದಲಾಯಿಸಲಾಗಲೇ ಇಲ್ಲಾ. ಯಾವಾಗ ಆಳುವ ಪ್ರಭುತ್ವ ಎನ್ನುವುದು ಬಂಡವಾಳಶಾಹಿ ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿಯನ್ನು ಕಾಪಾಡಲು ಪಣತೊಡುತ್ತದೋ ಆಗ ಬಂಡವಾಳಶಾಹಿಗಳ ಮಾಲೀಕತ್ವದಲ್ಲಿರುವ ಎಲ್ಲಾ ಕಾರ್ಖಾನೆ ಕಛೇರಿಗಳ ಉತ್ಪಾದನಾ ಕೇಂದ್ರಗಳಲ್ಲಿರುವ ಕಾರ್ಮಿಕರು, ನೌಕರರು ಹಾಗೂ ಅಧಿಕಾರಿಗಳ ವೃತಿಬದುಕು ಮಾಲೀಕರ ಮರ್ಜಿಗೆ ಒಳಗಾಗುವುದರಲ್ಲಿ ಸಂದೇಹವಿಲ್ಲಾ.


ಇದಕ್ಕೆ ಪತ್ರಿಕಾರಂಗವೂ ಹೊರತಲ್ಲಾ. ಮೊದಲು ಬಿಗಿಯಾದ ಕಾರ್ಮಿಕ ಕಾನೂನುಗಳಿಂದಾಗಿ ಯಾವುದೇ ದೊಡ್ಡ ಪತ್ರಿಕೆಯಿಂದಾ ಒಬ್ಬ ನೌಕರನನ್ನೂ ಇದ್ದಕ್ಕಿದ್ದಂತೆ ನೌಕರಿಯಿಂದಾ ತೆಗೆದುಹಾಕುವಂತಿರಲಿಲ್ಲಾ. ಅಮ್ಮಮ್ಮಾ ಅಂದರೆ ಟ್ರಾನ್ಸಪರ್ ಮಾಡಿ ತೊಂದರೆ ಕೊಡಬಹುದಾಗಿತ್ತು. ಆದರೆ.. ಯಾವಾಗ ಪತ್ರಿಕೋದ್ಯಮವು ದೊಡ್ಡ ದೊಡ್ಡ ಬಂಡವಾಳಶಾಹಿ ಮಾಲಿಕರ ಹಿಡಿತಕ್ಕೊಳಗಾಯಿತೋ, ಯಾವಾಗ ಕೋಟ್ಯಾಂತರ ಹಣವನ್ನು ಹಾಕಿದ ಬಂಡವಾಳಶಾಹಿಗಳು ಚಾನೆಲ್‌ಗಳನ್ನು ಆರಂಭಿಸಿದರೋ ಆಗ ಇಡೀ ಮೀಡಿಯಾಂಗ ಎನ್ನುವುದೇ ಆಯಾ ಮಾಲೀಕರ ಮರ್ಜಿಗೆ ಒಳಗಾಯಿತು. ಖಾಯಂ ನೌಕರರಿಂದ ಅಧೀಕೃತವಾಗಿ ರಾಜೀನಾಮೆ ಪತ್ರಗಳನ್ನು ಪಡೆದುಕೊಂಡು ಗುತ್ತಿಗೆ ಆಧಾರದ ಮೇಲೆ ನೌಕರಿ ಮಾಡುವ ಒಪ್ಪಂದಕ್ಕೆ ಬಲವಂತವಾಗಿ ಒಪ್ಪಿಸಲಾಯಿತು. ಸಮಾಜಕ್ಕೆ ಸ್ವಾತಂತ್ರ್ಯ, ಸ್ವಾಭಿಮಾನ, ಸ್ವಾವಲಂಬನೆಯ ಪಾಠ ಹೇಳುವ ಪತ್ರಕರ್ತರಿಗೆಲ್ಲಾ ವೃತ್ತಿ ಭದ್ರತೆ ಇಲ್ಲದೇ ಗುತ್ತಿಗೆ ನೌಕರರಾಗಿ ಯಾವಾಗಲೂ ಅತಂತ್ರ ಸ್ಥಿತಿಯಲ್ಲೇ ಕೆಲಸ ಮಾಡಬೇಕಾಗಿ ಬಂದಿರುವುದು ವಿಪರ್ಯಾಸ. ಪತ್ರಿಕೋದ್ಯಮದಲ್ಲಿ ನೌಕರರನ್ನು ಗುಲಾಮರನ್ನಾಸುವ ಈ ಹುನ್ನಾರವನ್ನು, ಪತ್ರಕರ್ತರನ್ನು ಅತಂತ್ರರನ್ನಾಗಿಸಿ ಆಟವಾಡುವ ಮಾಲೀಕರ ದಮನವನ್ನು ಯಾರೆಂದರೆ ಯಾರೂ ಪ್ರಶ್ನಿಸಲಿಲ್ಲಾ. ಕನಿಷ್ಟ ಪತ್ರಿಕೆಗಳಲ್ಲಿ ಬರೆದು ತಮ್ಮ ಆಕ್ರೋಶವನ್ನೂ ಹೊರಹಾಕಲಿಲ್ಲಾ. ಇರುವ ನೌಕರಿಯನ್ನು ಉಳಿಸಿಕೊಂಡರೆ ಸಾಕು ಎಂದುಕೊಂಡು ಗುತ್ತಿಗೆ ನೌಕರರಾಗಲು ಒಪ್ಪಿಕೊಂಡರು. ಪತ್ರಕರ್ತರ ಹಿತಕಾಯಲು ಇರುವ ಸಂಘಗಳು ಜಾಣಕುರಡನ್ನು ವ್ಯಕ್ತಪಡಿಸಿದವು.  ಕಾರ್ಮಿಕ ಸಂಘಗಳು ಪತ್ರಿಕಾ ಮಾಲೀಕರಿಂದಾದ ನೌಕರರ ಹಕ್ಕುಗಳ ದಮನವನ್ನು ಪ್ರತಿಭಟಿಸದೆ ಮೌನತಾಳಿದವು.  ಈಗ ಮೀಡಿಯಾಂಗದ ಎಲ್ಲಾ ನೌಕರ ವರ್ಗದವರು ಗುತ್ತಿಗೆಯ ನೌಕರರು ಹಾಗೂ ಯಾವಾಗ ಬೇಕಾದರೂ ಅವರನ್ನು ನೌಕರಿಯಿಂದ ತೆಗೆದು ಹಾಕಬಹುದು ಇಲ್ಲವೇ ಮೂರು ವರ್ಷಗಳ ಗುತ್ತಿಗೆ ಮುಗಿದ ತಕ್ಷಣ ನೌಕರಿಯಿಂದ ಹೊರಗೆ ಹಾಕಬಹುದು. 


ಇದೊಂದೆ ಕ್ಷೇತ್ರವಲ್ಲಾ. ಎಲ್ಲಾ ಖಾಸಗಿ ರಂಗದಲ್ಲೂ ನೌಕರರ ಶೋಷಣೆ ನಿರಂತರವಾಗಿದೆ. ವೃತ್ತಿಸ್ಥಿರತೆಯ ಗ್ಯಾರಂಟಿ ಇಲ್ಲದೇ ಇರುವುದರಿಂದ ನೌಕರರು ಸಂಘಟಿತರಾಗಿ ಪ್ರತಿಭಟನೆಗೆ ಇಳಿಯಲೂ ಹೆದರುವ ಪರಿಸ್ಥಿತಿ ಇದೆ. ಮ್ಯಾನೇಜಮೆಂಟ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗಲೇಬೇಕಾದ ಪರಿಸ್ಥಿತಿ ಕಾರ್ಮಿಕರದ್ದಾಗಿದೆ. ಇದನ್ನು ಅರಿತ ಕಾರ್ಮಿಕ ಸಂಘಟನೆಯ ನಾಯಕರೂ ಸಹ ಕಾರ್ಮಿಕರ ಮೂಲಭೂತ ಹಕ್ಕುಗಳ ಪ್ರಶ್ನೆಗಳಿಗಾಗಿ ಹೋರಾಟವನ್ನು ಸಂಘಟಿಸುವ ಬದಲು ತಮ್ಮ ಸಂಘಟನೆಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕಾರ್ಮಿಕರ ವೇತನ ಬತ್ತೆಗಳ ಹೆಚ್ಚಳಕ್ಕಾಗಿ ಮ್ಯಾನೇಜಮೆಂಟ್ ಜೊತೆಗೆ ಡೀಲ್‌ಗಿಳಿಯುವ ಸೇಫ್ ಮಾರ್ಗವನ್ನು ಹುಡುಕಿಕೊಂಡಿವೆ.  

ಇದರ ಜೊತೆಗೆ ಕಾರ್ಮಿಕರ ಪರವಾಗಿ ಇರುವ ಕಾನೂನುಗಳೆಲ್ಲವನ್ನೂ ಒಂದೊಂದಾಗಿ ಬಂಡವಾಳಿಗರ ಹಿತಾಸಕ್ತಿಗೆ ಪರವಾಗಿ ಬದಲಾಯಿಸುವ ಕೆಲಸವನ್ನು ಆಳುವ ಪ್ರಭುತ್ವ ಮಾಡುತ್ತಲೇ ಬಂದಿದೆ. ಇದೆಲ್ಲವೂ ಕಾರ್ಮಿಕ ಸಂಘಟನೆಗಳಿಗೆ, ಈ ಸಂಘಟನೆಗಳ ಮಾತೃಪಕ್ಷಗಳಿಗೆ ಗೊತ್ತಿಲ್ಲದ ಸಂಗತಿ ಏನಲ್ಲಾ. ಆದರೆ.. ಈ ಯಾವ ಸಂಘಟನೆಗಳು ಹಾಗೂ ಕಮ್ಯೂನಿಸ್ಟ್ ಪಕ್ಷಗಳಿಗೂ ಇಲ್ಲಿವರೆಗೂ ಜನಾಂದೋನಗಳನ್ನು ಹುಟ್ಟು ಹಾಕಲು ಸಾಧ್ಯವಾಗಿಲ್ಲಾ ಹಾಗೂ ಆ ನಿಟ್ಟಿನಲ್ಲಿ ಅವು ಕೆಲಸವನ್ನೂ ಮಾಡುತ್ತಿಲ್ಲಾ. ಇತ್ತೀಚೆಗೆ ಬೆಂಗಳೂರಿನ ಬಾಷ್ ಮೈಕೋ ಕಾಪೋರೇಟ್ ಕಂಪನಿಯಲ್ಲಿ ಕೆಲಸದ ಸಮಯ ಹಾಗೂ ಸವಲತ್ತುಗಳಿಗಾಗಿ ಕೆಲವಾರು ಕಾರ್ಮಿಕರು ವರ್ಷಾನುಗಂಟಲೇ ಹೋರಾಟ ಮಾಡಿದರು. ಆದರೂ ಮ್ಯಾನೇಜಮೆಂಟ್ ಮಣಿಯಲಿಲ್ಲ. ನೌಕರಿ ಕಳೆದುಕೊಳ್ಳುವ ಪರಿಸ್ಥಿತಿ ಬಂದಾಗ ಕೆಲವರು ಮ್ಯಾನೇಜಮೆಂಟ್ ಹೇಳಿದ್ದಕ್ಕೆ ಒಪ್ಪಿಕೊಂಡು ಹೆಚ್ಚು ಸಮಯ ದುಡಿಯಲು ಒಪ್ಪಿ ಮತ್ತೆ ಕೆಲಸಕ್ಕೆ ಸೇರಿದರು. ಹಠಕೆ ಬಿದ್ದು ಕೊನೆಯವರೆಗೂ ಹೋರಾಟದ ಹಾದಿಯನ್ನು ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಮುನ್ನಡೆಸಿದ ನೂರಾರು ಕಾರ್ಮಿಕರು ಕೆಲಸ ಕಳೆದುಕೊಂಡರು. ನೌಕರಿಯನ್ನು ನಂಬಿಕೊಂಡಿದ್ದ ಕುಟುಂಬ ಸಾಲಸೋಲಕ್ಕೆ ತುತ್ತಾಗಿ ಕಷ್ಟಕ್ಕೆ ಸಿಲುಕಿತು. ಮೇ ಡೇ ಕಾರ್ಮಿಕ ಸಂಘಟನೆಗಳು ನಿರುದ್ಯೋಗಿಗಳಾದ ಈ ನೌಕರರಿಗೆ ನ್ಯಾಯ ಕೊಡಿಸಲು ಆಗಲೇ ಇಲ್ಲಾ. ಕಾರ್ಮಿಕ ಸಂಘಟನೆಗಳ ಮಿತಿ ಇಷ್ಟೇ ಎಂದು ತಿಳಿದ ಉಳಿದ ಕಾರ್ಮಿಕರು ಮಾಲೀಕರ ವಿರುದ್ಧ ತಮ್ಮ ಹಕ್ಕುಗಳಿಗಾಗಿ ತಿರುಗಿ ಬೀಳುವ ಸಾಹಸ ಮಾಡದೇ ಈಗ ದಿನಕ್ಕೆ ಹನ್ನೆರಡು ತಾಸಿಗಿಂತಲೂ ಹೆಚ್ಚು ಕಾಲ ಡಬಲ್ ಶಿಪ್ಟಲ್ಲಿ ಯಂತ್ರಗಳ ಜೊತೆಗೆ ಯಂತ್ರವಾಗಿ ಬದುಕುತ್ತಿದ್ದಾರೆ. ಕಾರ್ಮಿಕರ ಹಕ್ಕು ಹಾಗೂ ಸವಲತ್ತುಗಳಿಂದ ವಂಚಿತರಾಗಿದ್ದಾರೆ. 


ಇದು ಕೇವಲ ಒಂದೆರಡು ಕಾರ್ಖಾನೆಗಳ ಉದಾಹರಣೆಗಳಲ್ಲಾ. ದೇಶಾದ್ಯಂತ ಬಹುತೇಕ ಕಾರ್ಮಿಕರ ಪರಿಸ್ಥಿತಿ ಇದಕ್ಕಿಂತ ಬಿನ್ನವಾಗೇನೂ ಇಲ್ಲ. ಸಂಘಟಿತ, ಸುಶಿಕ್ಷಿತ ನೌಕರರ ಪರಿಸ್ಥಿತಿಯೇ ಹೀಗೆ ಅತಂತ್ರವಾಗಿರುವಾಗ ಇನ್ನು ಅಸಂಘಟಿತ ವಲಯದ ಕಾರ್ಮಿಕ ವರ್ಗದ ಪರಿಸ್ಥಿತಿ ಇನ್ನೂ ಘೋರವಾಗಿದೆ. ಖಾಯಂ ಕೆಲಸಗಳಿಲ್ಲದೇ ಸರಕಾರದ ಭಾಗ್ಯಗಳ ಮೇಲೆ ಬದುಕುವಂತಹ ನಿಕೃಷ್ಟ ಪರಿಸ್ಥಿತಿಗೆ ಕೂಲಿ ಕಾರ್ಮಿಕ ವರ್ಗದವರು ನೂಕಲ್ಪಟ್ಟಿದ್ದಾರೆ. ವಿಶ್ವದ ಕಾರ್ಮಿಕರೇ ಒಂದಾಗಿ ಎಂದು ಕರೆಕೊಡುವ ಕಾರ್ಮಿಕ ಸಂಘಟನೆಗಳಲ್ಲೇ ಮೊದಲು ಐಕ್ಯತೆಗಳಿಲ್ಲಾ. ಶತಮಾನದ ಹಿಂದಿನ ಮಾರ್ಕ್ಸವಾದಿ ಕಾರ್ಮಿಕ ಸಿದ್ದಾಂತದ ಮಾನದಂಡಗಳನ್ನೇ ಇನ್ನೂ ಹಿಡಿದುಕೊಂಡು ಕಾರ್ಮಿಕ ಕ್ರಾಂತಿ ಮಾಡಿ ದೇಶದ ಆಡಳಿತದ ಚುಕ್ಕಾಣಿ ಹಿಡಿಯುವ ಭ್ರಮೆಯಲ್ಲಿ ಕಮ್ಯೂನಿಸ್ಟ್ ಪಕ್ಷಗಳ ನಾಯಕರುಗಳಿದ್ದಾರೆ. ಆದರೆ.. ಈಗ ಉತ್ಪಾದನೆ ಹಾಗೂ ಉತ್ಪಾದಕ ಸಂಬಂಧಗಳಲ್ಲಿ ತೀವ್ರವಾದ ಬದಲಾವಣೆಗಳಾಗಿವೆ. ಕಾರ್ಮಿಕ ವರ್ಗಗಳಲ್ಲೂ ಸಹ ಬೌದ್ದಿಕ ವಲಯ ಹಾಗೂ ದೈಹಿಕ ವಲಯ ಎಂದು ವಿಭಾಗೀಕರಣವಾಗಿದೆ. ಲಕ್ಷಾಂತರ ರೂಪಾಯಿಗಳ ಸಂಬಳ ಪಡೆಯುವ ಐಟಿ ಬಿಟಿ ವಲಯದ ನೌಕರರೂ ಸಹ ಹೈಟೆಕ್ ಕಾರ್ಮಿಕರೇ ಆಗಿದ್ದಾರೆ. ಈ ಹೈಟೆಕ್ ಕಾರ್ಮಿಕರಿಗೂ ಸಹ ಕೆಲಸದ ಭದ್ರತೆ ಎನ್ನುವುದಿಲ್ಲಾ. ಮಾಡುವ ಕೆಲಸಕ್ಕೆ ಸಮಯದ ಮಿತಿ ಎನ್ನುವುದಿಲ್ಲಾ. ಎಂಟು ಗಂಟೆಗಳ ಕೆಲಸ ಎನ್ನುವುದು ಮೇ ಡೇ ಘೋಷಣೆ. ಆದರೆ.. ಈ ಹೈಟೆಕ್ ಕಾರ್ಮಿಕರು ರಾತ್ರಿ ಹಗಲು ಎನ್ನುವ ಪ್ರಜ್ಞೆ ಕೂಡಾ ಇಲ್ಲದೇ, ಮನೆ ಕಛೇರಿ ಎನ್ನುವ ಭಿನ್ನತೆ ಇಲ್ಲದೇ ಕೂತಲ್ಲೇ ಕೂತು ಬೌದ್ದಿಕ ಕೆಲಸದಲ್ಲಿ ನಿರತರಾಗಿರುತ್ತಾರೆ. ನಿರಂತರ ಕೆಲಸ ಮಾಡಿ ಇರುವ ಎಲ್ಲಾ ಸಾಮರ್ಥ್ಯವನ್ನೂ ಹಾಕಿದರೆ ಮಾತ್ರ ನೌಕರಿ ಉಳಿಸಿಕೊಳ್ಳಲು ಸಾಧ್ಯ. ಇಲ್ಲವಾದರೆ ಹೈರ್ ಆಂಡ್ ಪೈರ್ ರೂಲ್ ಅಪ್ಲೈ ಆಗುತ್ತದೆ. ಮತ್ತೆ ನಿರುದ್ಯೋಗಿಯಾಗಿ ಕೆಲಸಕ್ಕೆ ಜಾಬ್ ಡಾಟ್ ಕಾಮ್ ಗಳಿಗೆ ಅಪ್ಲೈ ಮಾಡುತ್ತಾ ಕೂಡಬೇಕಾಗುತ್ತದೆ. ವ್ಯಕ್ತಿಗತವಾಗಿ ದೈಹಿಕ ಹಾಗೂ ಮಾನಸಿಕ ಆರೋಗ್ಯ  ಮತ್ತು ಕೌಟುಂಬಿಕ ನೆಮ್ಮದಿಯನ್ನು ಹಾಳು ಮಾಡಿಕೊಂಡು ಹಣದ ಹಿಂದೆ ಬಿದ್ದಿರುವ ಈ ಹೈಟೆಕ್ ಕಾರ್ಮಿಕ ವಲಯವನ್ನೂ ಸಹ ಈ ಮಾರ್ಕ್ಸವಾದಿ ಕಾರ್ಮಿಕ ಸಂಘಟನೆಗಳು ಮುಟ್ಟಬೇಕಾಗಿದೆ.

ಈಗ ಇಡೀ ವ್ಯವಸ್ಥೆಯೇ ಸಾವಕಾಶವಾಗಿ ಕಾರ್ಪೋರೇಟ್ ಕಂಪನಿಗಳ ಹಿಡಿತಕ್ಕೆ ಒಳಗಾಗುತ್ತಿದೆ. ಜನರ ಪ್ರತಿನಿಧಿಗಳು ಎನ್ನಿಸಿಕೊಂಡ ಈ ದೇಶವಾಳುವವರು ಬಂಡವಾಳಶಾಹಿಗಳ ಹಿತಾಸಕ್ತಿಗಾಗಿ ತಮ್ಮ ಅಧಿಕಾರವನ್ನು ಬಳಸುತ್ತಿದ್ದಾರೆ.  ಸ್ವತಃ ಪ್ರಧಾನಿಯೇ ಅಂಬಾನಿ ಆದಾನಿಗಳಂತಹ ದೇಸಿ ಬ್ರಹತ್ ಬಂಡವಾಳಿಗರು ಹಾಗೂ ವಿದೇಶಿ ಕಾರ್ಪೋರೇಟ್ ಕಂಪನಿಗಳ ಮ್ಯಾನೇಜರ್ ರೀತಿಯಲ್ಲಿ ವರ್ತಿಸುತ್ತಿದ್ದು ಅವರ ವ್ಯವಹಾರಗಳಿಗೆ ಪೂರಕವಾಗಿ ಕಾನೂನುಗಳು ರೂಪಿಸಲ್ಪಡುತ್ತಿವೆ. ನೋಟ್ ಬ್ಯಾನ್ ಹಾಗೂ ಕ್ಯಾಶಲೆಸ್‌ಗಳ ಹಿಂದೆ ಇದೇ ಬಂಡವಾಳಶಾಹಿ ಕಂಪನಿಗಳ ಹಿತಾಸಕ್ತಿ ಅಡಗಿದೆ. ಆದರೆ.. ಈ ಹುನ್ನಾರಗಳ ಬಗ್ಗೆ ಎಡಪಂಥೀಯ ಕಾರ್ಮಿಕ ಸಂಘಟನೆ ಹಾಗೂ ಪಕ್ಷಗಳು ಜನಾಲೋಂಧನಗಳನ್ನು ಹುಟ್ಟು ಹಾಕುವಲ್ಲಿ ವಿಫಲವಾಗಿವೆ. ಬಹುಸಂಖ್ಯಾತ ಕಾರ್ಮಿಕರು ಹಾಗೂ ಶ್ರಮಜೀವಿ ವರ್ಗಗಳು ಮತ್ತೆ ಆಧುನಿಕ ಗುಲಾಮಗಿರಿಗೆ ಒಳಗಾಗುತ್ತಿದ್ದಾರೆ. ಇಡೀ ದೇಶದ ಆಡಳಿತ ವ್ಯವಸ್ಥೆ ಪ್ಯಾಸಿಸಂ ಕಡೆಗೆ ವಾಲುತ್ತಿದೆ. ಪ್ಯಾಸಿಸಂ ಪೂರ್ಣಪ್ರಮಾಣದಲ್ಲಿ ಬಂದರೆ ದೇಶದ ಎಲ್ಲಾ ದುಡಿಯುವ ವರ್ಗ ಶತಮಾನಗಳ ಕಾಲ ದಮನವನ್ನು ಅನುಭವಿಸುವುದಂತೂ ಗ್ಯಾರಂಟಿ. ಹಾಗೇನಾದರೂ ಆದರೆ ಅದರ ಹೊಣೆಗಾರಿಕೆಯನ್ನು ಕಾರ್ಮಿಕ ಸಂಘಟನೆಗಳ ನಾಯಕರುಗಳು ಹಾಗೂ ಎಡಪಂಥೀಯ ಸಂಘಟನೆಗಳೇ ಹೊರಬೇಕಾಗುತ್ತದೆ. ಆಧುನಿಕ ಗುಲಾಮಗಿರಿ ಯುಗಕ್ಕೆ ದಾರಿಮಾಡಿಕೊಟ್ಟ ಮಹಾಪರಾದದ ಪಾಪಪ್ರಜ್ಞೆಯಲ್ಲಿ ಈ ಎಲ್ಲಾ ಸಂಘಟನೆಗಳು ಹಾಗೂ ಪಕ್ಷಗಳು ನರಳಬೇಕಾಗುತ್ತದೆ.


ಎಲ್ಲಿವರೆಗೂ ಎಲ್ಲಾ ರೀತಿಯ ಸಂಘಟಿತ ಹಾಗೂ ಅಸಂಘಟಿತ ವಲಯಗಳ ದುಡಿಯುವ ಜನರು ಸ್ವಾಭಿಮಾನದಿಂದ ಬದುಕುವಂತಹ ವ್ಯವಸ್ಥೆ ನಿರ್ಮಿಸಲು ಈ ಕಾರ್ಮಿಕ ಸಂಘಟನೆಗಳು ಶತಾಯ ಗತಾಯ ಕೆಲಸ ಮಾಡುವುದಿಲ್ಲವೋ. ಎಲ್ಲಿವರೆಗೂ ಈ ಎಡರಂಗದ ಪಕ್ಷಗಳು ಹಾಗೂ ಸಂಘಟನೆಗಳು ತಮ್ಮೆಲ್ಲಾ ಸೈದ್ದಾಂತಿಕ ಭಿನ್ನಾಭಿಪ್ರಾಯಗಳನ್ನು ಮರೆತು ದುಡಿಯುವ ವರ್ಗಗಳ ವಿಮೋಚನೆಯತ್ತ ತಮ್ಮ ಐಕ್ಯ ಹೋರಾಟವನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಮುನ್ನಡೆಸುವುದಿಲ್ಲವೋ ಅಲ್ಲಿವರೆಗೂ ಮೇ ಡೇ ಎನ್ನುವುದು ಕೇವಲ ವಾರ್ಷಿಕ ಶುಷ್ಕ ಆಚರಣೆಯಾಗುತ್ತದೆ. ಒಂದು ಕಡೆಯಿಂದಾ ದೇಶದ ಆಳುವ ವರ್ಗ ದುಡಿಯುವ ವರ್ಗಗಳನ್ನು ಸದಾ ಅತಂತ್ರದಲ್ಲಿಟ್ಟು ಶೋಷಿಸುತ್ತಲೇ ತಮ್ಮ ಬಂಡವಾಳಶಾಹಿ ಸಾಮ್ರಾಜ್ಯವನ್ನು ವಿಸ್ತರಿಸುತ್ತಿದ್ದರೆ.. ಇನ್ನೊಂದು ಕಡೆಗೆ ಜನವಿರೋಧಿಕ ವ್ಯವಸ್ಥೆಯ ವಿರುದ್ಧ ಜನಾಂದೋಲನಗಳನ್ನು ರೂಪಿಸಿ ದುಡಿಯುವ ವರ್ಗಗಳ ಹಕ್ಕುಗಳಿಗಾಗಿ ಹೋರಾಡಬೇಕಾದ ಸಂಘಟನೆಗಳು ಹಾಗೂ ಪಕ್ಷಗಳು ವಿಘಟನೆಗೊಳ್ಳುತ್ತಾ ಸಾಗುತ್ತಿವೆ. ಬಂಡವಾಳಶಾಹಿ ಶಕ್ತಿಗಳು ತಮ್ಮ ತಾಕತ್ತನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದ್ದರೆ.. ಕಾರ್ಮಿಕ ಸಂಘಟನೆಗಳು ಹಾಗೂ ಎಡಪಂಥೀಯ ಪಕ್ಷಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಿವೆ. ಇದರಿಂದಾಗಿ ಬಂಡವಾಳಿಗರ ಬಣ್ಣ ಬಣ್ಣದ ಮಾತುಗಳಿಗೆ, ಬಂಡವಾಳಿಗರ ಪೋಷಣೆಯಲ್ಲಿರುವ ರಾಜಕಾರಣಿಗಳ ಹುಸಿ ಬರವಸೆಗಳು ಹಾಗೂ ತಾತ್ಕಾಲಿಕ ಭಾಗ್ಯ ಯೋಜನೆಗಳಿಗೆ ಮರುಳಾದ ಮಹಾಜನತೆ ಮತ್ತೆ ಮತ್ತೆ ಈ ಭ್ರಷ್ಟರನ್ನು ಹಾಗೂ ಬಂಡವಾಳಿಗರ ಹಿತರಕ್ಷಕರನ್ನು ತಮ್ಮ ಪ್ರತಿನಿಧಿಗಳಾಗಿ ಆರಿಸಿ ಕಳಿಸುತ್ತಲೇ ಇರುತ್ತಾರೆ. ಜನರಲ್ಲಿ ಜಾಗೃತಿ ಮೂಡಿಸಿ ಹೋರಾಟ ರೂಪಿಸುವಲ್ಲಿ ಎಲ್ಲಾ ನಮೂನಿಯ ಎಡರಂಗದವರು ಅಸಫಲರಾಗುತ್ತಿದ್ದಾರೆ. ಇಂತಹ ಆತಂಕಕಾರಿ ಸನ್ನಿವೇಶದಲ್ಲಿ ಮೇ ಡೇ ದಿನ ಇನಕ್ಯೂಲಾಬ್ ಜಿಂದಾಬಾದ್ ಎಂದು ಘೋಷಣೆಗಳನ್ನು ಕೂಗಿದರೆ ಪ್ರಯೋಜನವಾದರೂ ಏನು. ಕಾರ್ಮಿಕ ಸಂಘಟನೆಗಳ ನಾಯಕರುಗಳಲ್ಲೇ ಒಮ್ಮತ ಇಲ್ಲದಿರುವಾಗ ವಿಶ್ವ ಕಾರ್ಮಿಕರೇ ಒಂದಾಗಿ ಹೋರಾಟಕ್ಕೆ ಮುಂದಾಗಿ ಎಂದು ಘೋಷಣೆಗಳ ಗರ್ಜಿಸುವುದರಿಂದ ಆಗುವುದಾದರೂ ಏನು.


ಎಲ್ಲಕ್ಕಿಂತಲೂ ಮೊದಲು ಕಾರ್ಮಿಕ ಸಂಘಟನೆಗಳು ಬದಲಾದ ಕಾಲಕ್ಕೆ ತಕ್ಕಂತೆ ತಮ್ಮ ಸಿದ್ದಾಂತಗಳನ್ನು ಬದಲಾಯಿಸಿಕೊಳ್ಳಬೇಕಿದೆ.  ಕಾರ್ಮಿಕರ ಹಿತರಕ್ಷಣೆ ಮಾಡುತ್ತೇವೆನ್ನುವ ಎಲ್ಲಾ ಎಡಪಂಥೀಯ ಕಾರ್ಮಿಕ ಸಂಘಟನೆಗಳು ತಮ್ಮೆಲ್ಲಾ ಭಿನ್ನಾಭಿಪ್ರಾಯವನ್ನು ಮರೆತು ಐಕ್ಯ ಹೋರಾಟಗಳನ್ನು ನಿರಂತರವಾಗಿ ಮುನ್ನಡೆಸಬೇಕಾಗಿದೆ. ಬೌದ್ದಿಕ ಆಗೂ ದೈಹಿಕ ಶ್ರಮಜೀವಿಗಳ ಅತಂತ್ರ ಬದುಕಿನ ಹಿಂದಿನ ಹುನ್ನಾರಗಳ ವಿರುದ್ದ ಜನರನ್ನು ಜಾಗೃತಗೊಳಿಸಬೇಕಾಗಿದೆ. ಕೆಲಸದ ಭದ್ರತೆ, ಕನಿಷ್ಟ ಸವಲತ್ತುಗಳು ಹಾಗೂ ಸ್ವಾಭಿಮಾನದ ಬದುಕನ್ನು ಎಲ್ಲಾ ರೀತಿಯ ದುಡಿಯುವ ವರ್ಗ ಪಡೆಯುವವರೆಗೂ ಜನಹೋರಾಟ ನಿರಂತರವಾಗಿ ಜಾರಿಯಲ್ಲಿಡಬೇಕಿದೆ. ಜನ ಶೋಷಕ ಬಂಡವಾಳಿಗರ  ವಿರುದ್ದ ದುಡಿಯುವ ಜನತೆಯನ್ನು ಒಟ್ಟುಗೂಡಿಸಿ ಯುದ್ದವನ್ನೇ ಸಾರಬೇಕಿದೆ. ಆಗ ಹೆಮ್ಮೆಯಿಂದಾ ಮೇ ಡೇ ದಿನ ಇನ್‌ಕ್ಯೂಲಾಬ್ ಜಿಂದಾಬಾದ್ ಎಂದು ಹೇಳಬಹುದಾಗಿದೆ. ಹಲವಾರು ಜನ ಕಾರ್ಮಿಕರು ಮೇ 1 ರಂದು ರಕ್ತವನ್ನು ಹರಿಸಿ ತ್ಯಾಗ ಬಲಿದಾನ ಮಾಡಿ ವಿಶ್ವ ಕಾರ್ಮಿಕರಿಗೆ ಕನಿಷ್ಟ ಹಕ್ಕುಗಳನ್ನು ಜಾರಿಗೆ ಬರುವಂತೆ ಮಾಡಿದರು. ಈಗ ಅವುಗಳನ್ನಾದರೂ ಕಾಪಾಡಿಕೊಳ್ಳುವ ಕೆಲಸವನ್ನು ಕೆಂಬಾವುಟದವರು ಮಾಡಬೇಕಿದೆ. ಕಾರ್ಮಿಕ ಸಂಘಟನೆ ಹಾಗೂ ಪಕ್ಷಗಳ ನಾಯಕರುಗಳು ತಮ್ಮ ಸಾಂಪ್ರದಾಯಿಕ ಸ್ಟ್ರ್ಯಾಟಜಿಯನ್ನು ಬದಲಾಯಿಸಿ ಆತ್ಮಶೋಧನೆ ಮಾಡಿಕೊಂಡು ದುಡಿಯುವ ಜನರ ಹಕ್ಕುಗಳನ್ನು ಕಾಪಾಡಲು ಹೊಸ ಮಾರ್ಗಗಳನ್ನು ಆನ್ವೇಷಿಸಬೇಕಿದೆ. ಮತ್ತೆ ದುಡಿಯುವ ಜನರ ನಡುವಿನಿಂದ ನಿಜವಾದ ಜನನಾಯಕರು ಹುಟ್ಟಿಬರಬೇಕಿದೆ. ಎಲ್ಲಾ ದುಡಿಯುವ ವರ್ಗದ ಜನತೆ ಒಕ್ಕೋರಲಿನಿಂದ ನಾವು ಬೆವರನು ಸುರಿಸಿ ದುಡಿಯುವ ಜನ ನಮ್ಮ ಬೆವರಿನ ಪಾಲನು ಕೇಳುವೆವು, ತುಂಡು ಭೂಮಿಯಲ್ಲಾ, ಒಂದು ದೇಶವಲ್ಲಾ ಇಡೀ ಭೂಗೋಳವನೇ ಕೇಳುವೆವು.. ಎಂದು ಹಾಡಬೇಕಿದೆ. ಮೇ ಡೇ ಉದ್ದೇಶ ಸಫಲವಾಗಬೇಕಿದೆ. 

   - ಶಶಿಕಾಂತ ಯಡಹಳ್ಳಿ