ದ್ವೇಷ ಮತ್ತು ದೇಶಭಕ್ತಿ ಎರಡೂ
ಅತಿಯಾದರೆ ಅದಕ್ಕೆ ಯುದ್ದೋನ್ಮಾದ ಎನ್ನುತ್ತಾರೆ. ದೇಶಭಕ್ತಿಯ ಮೇನಿಯಾವನ್ನು ದೇಶವಾಸಿಗಳಲ್ಲಿ ಹಬ್ಬಿಸಲು
ದ್ವೇಷವನ್ನು ಹೆಚ್ಚಿಸುವ ಕೆಲಸವನ್ನು ಆಳುವ ಪ್ರಭುತ್ವಗಳು ಮಾಡುತ್ತಲೇ ಇರುತ್ತವೆ. ಯುದ್ದೋನ್ಮಾದ
ಹೆಚ್ಚಾದಷ್ಟೂ ಆಳುವವರಿಗೆ ತಮ್ಮ ಎಲ್ಲ ನ್ಯೂನ್ಯತೆಯನ್ನು ಮುಚ್ಚಿಕೊಂಡು ಜನರ ಗಮನವನ್ನು ಬೇರೆ ಕಡೆಗೆ
ಸೆಳೆಯಲು ಅನುಕೂಲವಾಗುತ್ತದೆ. ಇದಕ್ಕೆ ಪಾಕಿಸ್ತಾನವೂ ಹೊರತಲ್ಲಾ ಹಿಂದೂಸ್ತಾನವೂ ಹಿಂದೆ ಬಿದ್ದಿಲ್ಲಾ.
ಪಾಕಿಸ್ತಾನಕ್ಕೆ ಈಗ ದೇಶಭಕ್ತಿಯ ಮೇನಿಯಾ ಹುಟ್ಟಿಸುವ ಅಗತ್ಯವಿದೆ. ಆ ದೇಶದ ಜನರನ್ನು ದಿಕ್ಕುತಪ್ಪಿಸಲು
ಈಗ ಯುದ್ದೋನ್ಮಾದ ಸೃಷ್ಟಿಸುವ ತರಾತುರಿ ಇದೆ. ಅದಕ್ಕಾಗಿಯೇ ಮೇ 1 ರಂದು ಭಾರತದ ಗಡಿ ದಾಟಿ ಬಂದ ಪಾಕಿ
ಸೈನಿಕರು ಇಬ್ಬರು ಭಾರತೀಯ ಯೋಧರನ್ನು ಗುಂಡಿಕ್ಕಿ ಕೊಂದು ಶಿರಚ್ಚೇದನ ಮಾಡಿ ತಮ್ಮ ಕ್ರೌರ್ಯವನ್ನು
ಮೆರೆದಿದ್ದಾರೆ. ಪಾಕಿಸ್ಥಾನದ ಸೇನಾ ಮುಖ್ಯಸ್ಥ ಜನರಲ್ ಕಮಾರ್ ಜಾವೇದ್ ಬಾಜ್ವಾ ನಿಯಂತ್ರಣ ರೇಖೆಯ
ಕೆಲವೆಡೆ ಬೇಟಿ ನೀಡಿ ಕಾಶ್ಮೀರಿಗಳಿಗೆ ಬೆಂಬಲ ಘೋಷಿಸಿದ ಮರುದಿನವೇ ಈ ಕುಕೃತ್ಯ ನಡೆದಿದೆ. 11ನೇ ಶಿಖ್
ರೆಜಿಮೆಂಟಿನ ಸುಬೇದಾರ್ ಪರಮ್ಜೀತ್ ಸಿಂಗ್ ಮತ್ತು ಬಿಎಸೆಫ್ನ 200ನೇ ಬೆಟಾಲಿಯನ್ನ ಹೆಡ್ ಕಾನ್
ಸ್ಟೇಬಲ್ ಪ್ರೇಮ್ ಸಾಗರ್ ಪಾಕಿ ಸೈನಿಕರ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ.
2016 ಸೆಪ್ಟಂಬರ್ 29ರಂದು
ಭಾರತದ ಸೈನಿಕರು ಪಾಕ್ ಗಡಿಯೊಳಗೆ ನುಗ್ಗಿ ಏಳು ಟೆರೆರಿಸಟ್ ಕ್ಯಾಂಪಗಳ ಮೇಲೆ ದಾಳಿ ಮಾಡಿ 50ರಷ್ಟು
ಭಯೋತ್ಪಾದಕರು ಹಾಗೂ ಅವರಿಗೆ ಕಾವಲಾಗಿದ್ದ ಪಾಕ್ ಸೈನಿಕರನ್ನು ಹತ್ಯೆ ಗೈದು ಮರಳಿದ್ದರು. ಇದಕ್ಕೆ
ಸರ್ಮಿಕಲ್ ಸ್ಟ್ರೈಕ್ ಎಂದು ಕರೆದ ಬಿಜೆಪಿ ಸರಕಾರ ಭಾರತದಾದ್ಯಂತ ದೇಶಭಕ್ತಿಯ ಮೇನಿಯಾವನ್ನು ಹುಟ್ಟುಹಾಕಿತ್ತು.
ಪಾಕಿಸ್ತಾನದ ದುರಹಂಕಾರವನ್ನು ಮೆಟ್ಟಿ ನಿಂತೆವು ಎಂದು ಅಗ್ಗರಿಸಿತ್ತು. ಆದರೆ ಬೆಂಕಿ ಇಂದಾ ಬೆಂಕಿ
ನಂದಿಸಲು ಸಾಧ್ಯವೆ. ಈಗ ಪಾಕಿಸ್ಥಾನ ತನಗಾದ ಅವಮಾನಕ್ಕೆ ಪ್ರತಿಯಾಗಿ ಪಾಕಿಸ್ತಾನದ ಮಿಲಿಟರಿಯು ತನ್ನ
ಸೈನಿಕರನ್ನು ಬೆಳಿಗ್ಗೆ 8.30 ಗಂಟೆಗೆ ಭಾರತದ ಜಮ್ಮು ಕಾಶ್ಮೀರದ ಪೂಂಛ್ ಗಡಿ ದಾಟಿಸಿ ಇಬ್ಬರು ಭಾರತೀಯ
ಸೈನಿಕರನ್ನು ನಿರ್ಧಯವಾಗಿ ಕೊಂದು ಸುರಕ್ಷಿತವಾಗಿ ವಾಪಸ್ ಹೋಗಿದ್ದಾರೆ. ಪಾಕ್ ಮಿಲಿಟರಿಯು ಭಾರತದ
ಸರ್ಜಿಕಲ್ ಸ್ಟ್ರೈಕಿಗೆ ಪ್ರತಿಕಾರ ತೀರಿಸಿಕೊಂಡಿದೆ. ಅದನ್ನು ಆ ದೇಶದಲ್ಲಿರುವ ಯುದ್ದೋನ್ಮಾದಿಗಳು
ಸಂಭ್ರಮಿಸುತ್ತಿದ್ದಾರೆ. ಇತ್ತ ಭಾರತೀಯರಲ್ಲಿ ಆಕ್ರೋಶ ಉರಿಬೆಂಕಿಯಾಗಿದೆ. ಮತ್ತೆ ಸೇಡಿನ ಮಾತುಗಳು
ಪ್ರತಿದ್ವನಿಸುತ್ತಿದೆ. ಒಂದು ತಲೆಗೆ ಐವತ್ತು ತಲೆ ತೆಗೆಯಬೇಕೆಂದು ಹುತಾತ್ಮ ಯೋಧನ ಮಗಳೇ ಅವಲತ್ತುಕೊಂಡಿದ್ದಾಳೆ.
ಅಲ್ಲಲ್ಲಿ ಪಾಕ್ ದ್ವಜವನ್ನು ಸುಟ್ಟುಹಾಕಲಾಗಿದೆ. ಭದ್ರತಾ ಪಡೆಗಳು ಪಾಕ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು
ಸಜ್ಜಾಗಿದ್ದು ಸೂಕ್ತ ಸಮಯಕ್ಕಾಗಿ ಕಾಯುತ್ತಿವೆ.
ಇದು ಸಧ್ಯಕ್ಕೆ ಮುಗಿಯುವ ಸಮಸ್ಯೆಯಲ್ಲಾ.
ಹೀಗೆಯೇ ಸಮರದಾಹ ಹಾಗೂ ದ್ವೇಷಗಳು ಎರಡೂ ದೇಶಗಳಲ್ಲಿ ಆಳುವ ವರ್ಗಗಳು ಬೆಳೆಸುತ್ತಾ ಹೋದಂತೆ ಎರಡೂ ಕಡೆ
ರಕ್ತಪಾತಗಳು ನಿರಂತರ. ಸರ್ಜಿಕಲ್ ದಾಳಿಯಿಂದಾ ಪಾಕ್ ಬಾಲ ಮುದುರಿಕುಳಿತಿದೆ ಎಂದು ನಕಲಿ ದೇಶಭಕ್ತರು
ಪುಂಗಿದ್ದೆಲ್ಲಾ ಅಸತ್ಯವೆಂದು ಈಗ ಗೊತ್ತಾಗುತ್ತಿದೆ.
ಹಳೆಯ ನೋಟ್ ರದ್ದತಿಯಿಂದಾ ಗಡಿ ಭಯೋತ್ಪಾದನೆ ಕಡಿಮೆಯಾಗುತ್ತದೆ ಎನ್ನುವ ಪ್ರಧಾನಿ ಮೋದಿಯವರ
ಮಾತುಗಳೆಲ್ಲಾ ಹುಸಿಹೋಗಿವೆ. ಸರ್ಜಿಕಲ್ ಸ್ಟ್ರೈಕ್ ಮಾಡುವ ಮುನ್ನ ಪಾಕ್ ಆಕ್ರಮಿತ ಕಾಶ್ಮೀರದ ಗಡಿರೇಖೆಯಲ್ಲಿ
ಪಾಕಿಸ್ತಾನ ಸೇನಾ ಬೆಂಬಲಿತ ಸುಮಾರು 35 ರಷ್ಟು ಉಗ್ರಗಾಮಿಗಳ ತರಬೇತಿ ಕ್ಯಾಂಪಗಳಿದ್ದವು. ಅದರಲ್ಲಿ
7 ಕ್ಯಾಂಪ್ ಗಳನ್ನು ಭಾರತೀಯ ಸೈನಿಕರು ದ್ವಂಸಗೊಳಿಸಿದರು. ಆದರೆ.. ಕಳೆದ ನಾಲ್ಕು
ತಿಂಗಳಲ್ಲಿ ಉಗ್ರರ ತರಬೇತಿ ಕೇಂದ್ರಗಳ ಸಂಖ್ಯೆ ೫೫ ರಷ್ಟನ್ನು ದಾಟಿದೆ. ಅಂದರೆ.. ಸರ್ಜಿಕಲ್
ಸ್ಟ್ರೈಕ್ ಮಾಡುವುದರಿಂದಾಗಲೀ ಇಲ್ಲವೇ ನೋಟ್ ಬಂಧಿ ಮಾಡುವುದರಿಂದಾಗಲೀ ಈ ಉಗ್ರಗಾಮಿಗಳ ಉಪಟಳವನ್ನು
ನಾಶಮಾಡಲು ಸಾಧ್ಯವಿಲ್ಲ ಹಾಗೂ ಪಾಕಿಸ್ತಾನಿ ಸೇನೆಯ
ದುಸ್ಸಾಹಸಗಳನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲಾ. 2013 ರಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಕರ್ತವ್ಯ ನಿರತವಾಗಿದ್ದ ಯೋಧ ಲ್ಯಾನ್ಸ್
ನಾಯಕ್ ಹೇಮರಾಜ್ ಮೇಲೆ ಪಾಕ್ ಸೈನಿಕರು ದಾಳಿ ಮಾಡಿ ಶಿರಚ್ಚೇದ ಮಾಡದ್ದಾಗ ನಮ್ಮ ಕೇಂದ್ರ ಸರಕಾರವು
“ನಮ್ಮ
ಒಬ್ಬ ಯೋಧನ ತಲೆ ಕಡಿದರೆ ನಾವು ಅವರ ಹತ್ತು ತಲೆಗಳನ್ನು ಉರುಳಿಸುತ್ತೇವೆ” ಎಂದು ಹೇಳಿತ್ತು. ಆದರೆ..
ಇಲ್ಲಿವರೆಗೂ ಪಾಕ್ ಸೈನಿಕರ ತಲೆಗಳಂತೂ ಉದುರಲಿಲ್ಲಾ.. ಈ ರೀತಿಯ ಉನ್ಮಾದದ ಹೇಳಿಕೆಗಳಿಗಂತೂ ಬರವಿಲ್ಲಾ.
ಯಾಕೆಂದರೆ ಈ ಹಿಂಸೆ ಪ್ರತಿಹಿಂಸೆಗಳು ಸಮರದಾಹಕ್ಕೆ ಪರಿಹಾರ ಅಲ್ಲವೇ ಅಲ್ಲಾ. ಯುದ್ದ ಎನ್ನುವುದು ದೇಶಭಕ್ತರು
ಅಂದುಕೊಂಡಷ್ಟು ಸುಲಭಸಾಧ್ಯವಾಗಿಲ್ಲ. ಅಣ್ವಸ್ತ್ರಗಳನ್ನು ಹೊಂದಿದ ಎರಡು ರಾಷ್ಟ್ರಗಳು ಯುದ್ದಕ್ಕೆ
ನಿಂತರ ಎರಡೂ ದೇಶಗಳು ಉರಿದು ಬೂದಿಯಾಗುತ್ತವೆ. ಇಂತಹ ಸಂದಿಗ್ದ ಸಂದರ್ಭದಲ್ಲಿ ಸಮರದಾಹ ಹಾಗೂ ಯುದ್ದೋನ್ಮಾದಗಳ
ವಿನಾಶಕಾರಿ ಮಾರ್ಗವನ್ನು ಬಿಟ್ಟು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ.
ಭಯೋತ್ಪಾದನೆ ಎನ್ನುವುದು ಈಗ
ಒಂದು ದೇಶಕ್ಕೆ ಸೀಮಿತವಾದದ್ದಲ್ಲಾ. ಅದು ಈಗ ಜಾಗತಿಕ ಸಮಸ್ಯೆಯಾಗಿದೆ. ಬಹುತೇಕ ದೇಶಗಳು ಈ ಧಾರ್ಮಿಕ
ಉಗ್ರಗಾಮಿಗಳ ಅಟ್ಟಹಾಸಕ್ಕೆ ನಲುಗಿವೆ. ಹೀಗಾಗಿ ಉಗ್ರಗಾಮಿಗಳಿಂದ
ಹಿಂಸೆಗೊಳಗಾದ ಎಲ್ಲಾ ದೇಶಗಳನ್ನೂ ಒಂದುಗೂಡಿಸಿ ಭಯೋತ್ಪಾದಕರ ವಿರುದ್ಧ ಜಾಗತಿಕವಾಗಿ ಯುದ್ದಸಾರಬೇಕಾಗಿದೆ.
ಉಗ್ರರಿಗೆ ನೆಲೆಯನ್ನು ಒದಗಿಸಿ ತರಬೇತಿಯನ್ನು ಕೊಟ್ಟು ಸಾಕುತ್ತಿರುವ ಪಾಕಿಸ್ತಾನದ ಮಿಲಿಟರಿಯ ವಿರುದ್ಧ
ಎಲ್ಲಾ ದೇಶಗಳನ್ನು ಎತ್ತಿಕಟ್ಟುವ ಕೆಲಸವನ್ನು ಭಾರತ ಮಾಡಬೇಕಾಗಿದೆ. ಎಲ್ಲಿವರೆಗೂ ಪಾಕಿಸ್ತಾನವನ್ನು
ಜಾಗತಿಕವಾಗಿ ಒಂಟಿ ಮಾಡಲಾಗುವುದಿಲ್ಲವೋ ಅಲ್ಲಿವರೆಗೂ ಆ ದೇಶದ ಯುದ್ದೋನ್ಮಾದಿಗಳ ಅಟ್ಟಹಾಸ ನಿಲ್ಲುವುದಿಲ್ಲಾ.
ಉಗ್ರರ ರಕ್ತಪಾತದಾಟ ಕೊನೆಯಾಗುವುದಿಲ್ಲಾ. ಅಂತರಾಷ್ಟ್ರೀಯ ಒತ್ತಡಕ್ಕೊಳಗಾಗಿ ಪಾಕಿಸ್ತಾನದ ಸೈನೈವೇ
ಆ ದೇಶದೊಳಗಿನ ಉಗ್ರರನ್ನು ಮಟ್ಟಹಾಕುವಂತಹ ಸನ್ನಿವೇಶವನ್ನು ಸೃಷಿಸಬೇಕಾಗಿದೆ. ಅದರ ನಾಯಕತ್ವವನ್ನು
ಭಾರತವೇ ವಹಿಸಿಕೊಳ್ಳಬೇಕಿದೆ. ಚೀನಾದ ಬೆಂಬಲ ಪಾಕಿಸ್ತಾನಕ್ಕೆ ಅಚಲವಾಗಿರುವವರೆಗೂ ಇದು ಅಷ್ಟೊಂದು
ಸುಲಭ ಸಾಧ್ಯವಲ್ಲಾ. ಆದರೆ.. ಉತ್ತರ ಕೋರಿಯಾಗೂ ಸಹ ಚೀನಾ ಬೆಂಬಲವಿದ್ದರೂ ಜಾಗತಿಕ ದೇಶಗಳ ಒತ್ತಾಯಕ್ಕೆ
ಚೀನಾ ಮಣಿಯಲೇಬೇಕಾಗಿದೆ.. ಉತ್ತರ ಕೋರಿಯಾಗೆ ಸಂಯಮದ ಪಾಠವನ್ನು ಚೀನಾ ಹೇಳುವಂತಾಗಿದೆ. ಅದೇ ರೀತಿ
ಅಂತರ್ರಾಷ್ಟ್ರೀಯ ಒತ್ತಡವನ್ನು ಚೀನಾದ ಮೇಲೂ ತರುವ ಮೂಲಕ ಪಾಕಿಸ್ತಾನವೇ ತನ್ನ ಒಡಲೊಳಗಿಟ್ಟು ಪೋಷಿಸುತ್ತಿರುವ
ಉಗ್ರಗಾಮಿಗಳನ್ನು ನಾಶಮಾಡಲೇಬೇಕಾದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಬೇಕಾಗಿರುವುದು ಈಗ ಭಾರತಕ್ಕೆ
ಅನಿವಾರ್ಯವಾಗಿದೆ. ಅದು ಬಿಟ್ಟು ಈ ಯುದ್ದೋತ್ಪಾದನೆ, ಸರ್ಜಿಕಲ್ ಸ್ಟ್ರೈಕ್ಗಳೆಲ್ಲಾ ಕೇವಲ ದ್ವೇಷದ
ಕಿಚ್ಚನ್ನು ಹೆಚ್ಚಿಸುವ ಹಾಗೂ ದೇಶವಾಸಿಗಳಲ್ಲಿ ದೇಶಭಕ್ತಿಯ ಕೆಚ್ಚನ್ನು ಸೃಷ್ಟಿಸುವ ಹಾಗೂ ಆಳುವ ಸರಕಾರಗಳ
ವೈಪಲ್ಯಗಳನ್ನು ಮರೆಸುವ ತಂತ್ರಗಾರಿಕೆಯಾಗಿವೆ. ಇದನ್ನು ಭಾರತದ ಪ್ರಜ್ಞಾವಂತ ಜನರು ಅರಿಯಬೇಕಾಗಿದೆ.
ರಕ್ತಕ್ಕೆ ರಕ್ತ, ಕತ್ತಿಗೆ ಕತ್ತಿ ಎನ್ನುವ ಹಿಂಸೋತ್ಪಾದಕ ಪ್ರಚೋದನೆಗೊಳಗಾಗದೇ ಉಗ್ರದಮನದತ್ತ ಪರ್ಯಾಯ
ಮಾರ್ಗಗಳ ಬಗ್ಗೆ ಯೋಚಿಸಬೇಕಿದೆ. ಎಲ್ಲಾ ದೇಶಗಳ ಗಡಿಗಳಲ್ಲಿ ಶಾಂತಿ ನೆಮ್ಮದಿ ನೆಲೆಸಬೇಕಿದೆ. ಬಂದೂಕಿನ
ಬಾಯೊಳಗೆ ಗುಬ್ಬಿಗಳು ಗೂಡುಕಟ್ಟಿ ಮರಿಮಾಡಬೇಕಿದೆ.
- ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ