ಭಾನುವಾರ, ನವೆಂಬರ್ 17, 2019

ತಹ ತಹ.. 102 ಅವೈಚಾರಿಕ ಅಧ್ಯಕ್ಷನ ವ್ಯರ್ಥ ಪ್ರಲಾಪ; ಸಾಹಿತ್ಯ ಅಕಾಡೆಮಿಗೆ ಒಕ್ಕರಿಸಿದೆ ಶಾಪ.



ಪ್ರಾರ್ಥನೆ ಇಲ್ಲದೇ ಹುಟ್ಟುವ ಮಕ್ಕಳು ಸಮಾಜಕ್ಕೆ ಶಾಪವಾಗುತ್ತಾರೆ.. ಎಂಬ ನುಡಿಮುತ್ತುಗಳು ಯಾವಾಗ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರ ಬಾಯಿಂದ ಉದುರಿ ಪತ್ರಿಕೆಯಲ್ಲಿ ಪ್ರಕಟವಾದವೋ ಆಗ ಹಲವಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ಈ ಡಾ.ಬಿ.ವಿ.ವಸಂತಕುಮಾರ ಎನ್ನುವ ಸಂಘಪರಿವಾರದ ಅಂಗಕ್ಕೆ  ಕ್ಯಾಕರಿಸಿ ಥೂಕರಿಸತೊಡಗಿದರು. ಸಾಹಿತ್ಯ ಅಕಾಡೆಮಿUಸೀ ವಸಂತಕುಮಾರ್ ಅತೀ ದೊಡ್ಡ ಶಾಪ, ಇವರ ಹೆತ್ತವರು ಸರಿಯಾಗಿ ಪ್ರಾರ್ಥನೆ ಮಾಡಿಲ್ಲವಾದ್ದರಿಂದ ಇಂತಹ ಸಮಾಜಭಂಜಕ ಮಗ ಹುಟ್ಟಿದ್ದು, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಆಗೋದಕ್ಕೆ ನಾಲಾಯಕ್ಕು.. ಎಂದೆಲ್ಲಾ ತರಾವರಿ ಕಾಮೆಂಟುಗಳು ವಾಟ್ಸಾಪ್ ಫೇಸ್ಬುಕ್‌ಗಳಲ್ಲಿ ಹರಿದಾಡತೊಡಗಿದವು. ಯಾವಾಗ ಸಿಕ್ಕಸಿಕ್ಕವರೆಲ್ಲಾ ಈ ಸೋಕಾಲ್ಡ್ ಚೆಡ್ಡಿ ಸಾಹಿತಿಗೆ ಮಂಗಳಾರತಿ ಮಾಡಲು ಶುರುಮಾಡಿದರೋ ಆಗ ಎಚ್ಚೆತ್ತುಕೊಂಡ ವಸಂತಕುಮಾರ್ ಎನ್ನುವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಮಹಾಶಯರು ತಾವಾಡಿದ ಮಾತುಗಳಿಗೆ ವಿತಂಡವಾದದ ಸಮರ್ಥನೆಗಳನ್ನೂ ಹಾಗೂ ಕ್ಷಮೆಯನ್ನೂ ಕೋರಿದ್ದು ಪ್ರಜಾವಾಣಿಯಲ್ಲಿ ಪ್ರಕಟಗೊಂಡಿತು.

ಆದರೆ.. ಕ್ಷಮಿಸಲಾರದ ಮಾತುಗಳನ್ನು ಆಡಿದವರನ್ನು ಕ್ಷಮಿಸುವುದಾದರೂ ಹೇಗೆ. ಮೊದಲಾದರೆ ವ್ಯಕ್ತಿಗತವಾಗಿ ಹೀಗೆ ಹೇಗೇಗೋ ನಾಲಿಗೆ ಹರಿಬಿಟ್ಟಿದ್ದರೆ ಯಾರೂ ಕೇಳಿಸಿಕೊಳ್ಳಲು ಹೋಗುತ್ತಿರಲಿಲ್ಲ, ಪ್ರಾಮುಖ್ಯತೆಯನ್ನೂ ಕೊಡುತ್ತಿರಲಿಲ್ಲ, ಇಷ್ಟಕ್ಕೂ ಈ ವಸಂತಕುಮಾರ್ ಯಾರು ಹಾಗೂ ಸಾಹಿತ್ಯಕ್ಷೇತ್ರದಲ್ಲಿ ಕಡಿದು ಕಟ್ಟೆ ಹಾಕಿದ್ದೇನು ಎಂಬುದೇ ಬಹುತೇಕರಿಗೆ ಗೊತ್ತಿರಲಿಲ್ಲ. ಆದರೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷತೆಯಂತಹ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾಗ ಇಂತಹ ಅಕ್ಷಮ್ಯ ಅವಿವೇಕದ ಮಾತುಗಳನ್ನು ಆಡಿ ಕ್ಷಮಿಸಿ ಎಂದು ಕೇಳಿದರೆ ಕ್ಷಮಿಸುವವರಾದರೂ ಯಾರು?

ನವೆಂಬರ್ 15 ರಂದು ನಡೆದ ಕನಕ ಜಯಂತಿಯ ಕಾರ್ಯಕ್ರಮದಲ್ಲಿ ಅಕಾಡೆಮಿಯ ಅಧ್ಯಕ್ಷ ಅಂತಾ ಆಹ್ವಾನಿಸಿ ಮಾತಾಡಲು ಅವಕಾಶಮಾಡಿಕೊಟ್ಟರೆ ಈ ಶಾಪಗ್ರಸ್ತ ವ್ಯಕ್ತಿ ಯಡವಟ್ಟು ಮಾತಾಡಿ ತಮ್ಮ ಯೋಗ್ಯತೆ ಎಂತಹುದು ಎಂಬುದನ್ನು ಜಗಜ್ಜಾಹೀರು ಮಾಡಿಕೊಂಡರು. ಹೇಳಿದ್ದಾದ ಮೇಲೆ ಸುಮ್ಮನಿರಲಾರದೆ ಪ್ರಜಾವಾಣಿ ವಾಚಕರವಾಣಿಗೆ ವ್ಯರ್ಥ ಸಮರ್ಥನೆ ಬರೆದು ತಮ್ಮ ಮನಸಿನ ಗಾಯವನ್ನು ಕೆರೆದುಕೊಂಡು ಅದರ ದುರ್ವಾಸನೆಯನ್ನು ಎಲ್ಲರಿಗೂ ಹಂಚಿಕೊಂಡರು. ಕನಕಜಯಂತಿ ದಿನ  ವೈದಿಕಶಾಹಿಯ ಈ ಅನಧೀಕೃತ ವಕ್ತಾರ ಹೇಳಿದ ಸಾರ ಇಷ್ಟೇ.. ಕನಕದಾಸರ ಹೆತ್ತವರು ತಿರುಪತಿ ತಮ್ಮಪ್ಪನಿಗೆ ಪ್ರಾರ್ಥನೆ ಮಾಡಿಕೊಂಡಿದ್ದರಿಂದಲೇ ಕನಕದಾಸರಂತವರು ಹುಟ್ಟಿದರು, ಹೀಗೆ ಪ್ರಾರ್ಥನೆ ಇಲ್ಲದೆ ಹುಟ್ಟುವ ಮಕ್ಕಳು ಸಮಾಜಕ್ಕೆ ಶಾಪವಾಗುತ್ತಾರೆ ಎಂದು. ತಮ್ಮ ಈ ಅಧಿಕಪ್ರಸಂಗತನದ ಮಾತಿಗೆ ಸ್ವಾಮಿವಿವೇಕಾನಂದರನ್ನು ಹೆಸರನ್ನು ಎಳೆತಂದು ವಿವೇಕಾನಂದರ ಮಾತನ್ನು ಉಲ್ಲೇಖಿಸಿದ್ದೇನೆ ಎಂದು ತಿಪ್ಪೇ ಸಾರಿಸಿ ರಂಗೋಲಿ ಬಿಟ್ಟು ಡ್ಯಾಮೇಜ್ ಕಂಟ್ರೋಲಿಗೆ ಪ್ರಯತ್ನಿಸಿದರು.

ವಿವೇಕಾನಂದರು ಯಾವಾಗ, ಯಾವ ಸಂದರ್ಭದಲ್ಲಿ, ಎಲ್ಲಿ ಪ್ರಾರ್ಥನೆ ಇಲ್ಲದೆ ಹುಟ್ಟುವ ಮಕ್ಕಳು ಸಮಾಜಕ್ಕೆ ಶಾಪವಾಗುತ್ತಾರೆ ಎಂದು ಹೇಳಿದರೋ ಗೊತ್ತಿಲ್ಲಾ. ಹಾಗೆ ಹೇಳಿದ್ದರೂ ಅದೇ ಪರಮ ಸತ್ಯವೂ ಅಲ್ಲಾ. ಯಾವುದೋ ಸಂದರ್ಭದಲ್ಲಿ ಆಡಿದ ಮಾತು ಸಾರ್ವಕಾಲಿಕ ಸತ್ಯವೂ ಅಗುವುದಿಲ್ಲ. ಇಷ್ಟೂ ಗೊತ್ತಿಲ್ಲದ ವ್ಯಕ್ತಿ ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷರಾಗಲೂ ಅರ್ಹರೂ ಅಲ್ಲಾ. ಕನಕದಾಸರಾದ ನಂತರ ಮಾತ್ರ ತಿರುಪತಿ ತಿಮ್ಮಪ್ಪನಿಗೆ ಮಾಡಿಕೊಂಡ ಪ್ರಾರ್ಥನೆ ಫಲಿಸಿತಾ.. ಕನಕದಾಸನಾಗುವ ಮೊದಲು ತಿಮ್ಮಪ್ಪನಾಯಕ ಪಾಳೇಗಾರನಾಗಿದ್ದಾಗ ಪಾಲ್ಗೊಂಡ ಕದನಗಳಲ್ಲಿ ಸಾವಿರಾರು ಜನರ ಮಾರಣ ಹೋಮ ಮಾಡಿ ರಕ್ತಪಾತ ಮಾಡಿದಾಗ ಪ್ರಾರ್ಥನೆಯ ಫಲ ಇರಲಿಲ್ಲವೇ? ಪ್ರಾರ್ಥನೆಗೂ ಹುಟ್ಟಿಗೂ ಎತ್ತನಿಂದೆತ್ತ ಸಂಬಂಧವಿದೆ.

ಈಗ ಈ ದೇಶಾದ್ಯಂತ ಕೋಮುವಾದದ ಹೆಸರಲ್ಲಿ, ಗೋವಿನ ಹೆಸರಲ್ಲಿ, ದೇವರ ಹೆಸರಲ್ಲಿ, ಧರ್ಮದ ಹೆಸರಲ್ಲಿ ಈ ವಸಂತಕುಮಾರ್‌ರವರು ಪ್ರತಿನಿಧಿಸುವ ಸಂಘಪರಿವಾರದವರು ಮಾಡುವ ಅಗಣಿತ ಹಲ್ಲೆ ಹತ್ಯೆಗಳನ್ನು ಪರಿಗಣಿಸಿದರೆ ಇವರ‍್ಯಾರ ಹೆತ್ತವರೂ ಪ್ರಾರ್ಥನೆ ಮಾಡಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಇವರ ವಾದದಂತೆಯೇ ಪ್ರಾರ್ಥನೆಯಿಂದ ಈ ಎಲ್ಲಾ ಪ್ರತಿಗಾಮಿ ವ್ಯಕ್ತಿ ಶಕ್ತಿಗಳು ಹುಟ್ಟಿದ್ದೇ ದಿಟವಾಗಿದ್ದರೆ ದೇಶದಲ್ಲಿ ಕೋಮು ಸಾಮರಸ್ಯ ಹಾಳು ಮಾಡುತ್ತಿರಲಿಲ್ಲ, ಗೋವಿನ ಹೆಸರಲ್ಲಿ ಗುಂಪು ಹತ್ಯೆಗಳು ನಡೆಯುತ್ತಿರಲಿಲ್ಲ. ಮತ ಮಂದಿರ ಮಸೀದಿಗಳ ನೆಪದಲ್ಲಿ ರಕ್ತಪಾತ ಆಗುತ್ತಿರಲಿಲ್ಲ. ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುತ್ತಿರಲಿಲ್ಲ, ಸಾರ್ವಜನಿಕವಾಗಿ ಸುಡುತ್ತಿರಲಿಲ್ಲ. ಸಮಾಜದ ಸೌಹಾರ್ಧತೆಗೆ ಶಾಪವಾಗಿ ಕಾಡುತ್ತಿರುವ ಈ ಮನುವಾದಿಗಳಿಗೆ, ವೈದಿಕಶಾಹಿಗಳಿಗೆ ಮೊದಲು ಪ್ರಾರ್ಥನೆ ಮಾಡಿ ನಂತರ ಮಕ್ಕಳನ್ನು ಹುಟ್ಟಿಸಲು ಈ ವಸಂತಕುಮಾರರಂತವರು ತಿಳಿಸಿ ಹೇಳಿದ್ದರೆ ಸಮಾಜ ನೆಮ್ಮದಿಯಾಗಿರುತ್ತಿತ್ತೇನೋ. ಪ್ರಾರ್ಥನೆಯಿಂದ ಈ ಉಡುಪಿ ಮಠದ ಪೂರ್ವೀಕರು ಹುಟ್ಟಿದ್ದರೆ ಕೃಷ್ಣದರ್ಶನಕ್ಕಾಗಿ ಬಂದ ಕನಕದಾಸರನ್ನು ಮಠದ ದ್ವಾರದಿಂದ ಹೊರಗೆ ಹಾಕುತ್ತಿರಲಿಲ್ಲ. ಹೀಗೆ ಶೂದ್ರರಿಗೆ, ದಲಿತರಿಗೆ ಶತಮಾನಗಳಿಂದ ಅಸಮಾನತೆಯನ್ನು ಸೃಷ್ಟಿಸಿ ಶಾಪವಾಗಿ ಕಾಡುತ್ತಿರಲಿಲ್ಲ. ಪಂಥಿಬೇಧ ಮಾಡುತ್ತಿರಲಿಲ್ಲ.

ಕನಕದಾಸರನ್ನು ಹೊಗಳುತ್ತಲೇ ತಮ್ಮ ವೈದಿಕತ್ವವನ್ನು ಬಲು ನಾಜೂಕಾಗಿ ಹೇಳುವ ಈ ವಸಂತಕುಮಾರರವರು ಕನಕರು ಉಡುಪಿಯ ಕೃಷ್ಣನನ್ನು ತಿರುಗಿಸಿದರು ಎಂಬುದರ ಅರ್ಥವೂ ಕೃಷ್ಣಭಕ್ತರನ್ನೂ ತಿರುಗಿಸಿದರು ಎಂಬುದಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಹೌದು ಅಬ್ರಾಹ್ಮಣರಾದ ಸಕಲ ಕೃಷ್ಣ ಭಕ್ತರನ್ನು ಗೋಡೆಯ ಆಚೆಗೆ ನಿಲ್ಲಿಸಿ ಕೃಷ್ಣದರ್ಶನ ಮಾಡಿಸುವ ಈ ಶ್ರೀಕೃಷ್ಣನ ಪಾಳೇಗಾರರಾದ ವೈದಿಕರು ಕೃಷ್ಣಭಕ್ತರನ್ನು ಗರ್ಭಗುಡಿಯ ಹಿಂದಿನ ಗೋಡೆಯಾಚೆಗೆ ತಿರುಗಿಸಿದ್ದೂ ಸತ್ಯ. ಎಲ್ಲಿ ಗರ್ಭಗುಡಿಯ ಪಾವಿತ್ರ್ಯತೆ ನಾಶವಾಗುವುದೋ ಎಂದು ಹೆದರಿದ ಪುರೋಹಿತರು ಜನಾಕ್ರೋಶಕ್ಕೆ ಹೆದರಿ ಹಿಂದಿನ ಗೋಡೆಯನ್ನು ಒಡೆದು ಕೃಷ್ಣನ ವಿಗ್ರಹವನ್ನು ತಿರುಗಿಸಿ ಜನರಿಗೆ ಹಿಂಬಾಗಿಲ ಮೂಲಕ ದರ್ಶನ ಭಾಗ್ಯ ಒದಗಿಸಿಕೊಟ್ಟು ತಮ್ಮ ಮಡಿಹುಡಿ ಪಾವಿತ್ರ್ಯತೆಯನ್ನು ಕಾಪಾಡಿಕೊಂಡಿದ್ದೂ ಚಾರಿತ್ರಿಕ ಸತ್ಯ. ಎಷ್ಟಾದರೂ ಈ ಪುರೋಹಿತ ಪುಂಗವರು ಪ್ರಾರ್ಥನೆಗೆ ಹುಟ್ಟಿದವರಲ್ಲವೇ..? ಸಂಘಪರಿವಾರದ ಕೃಪಾಕಟಾಕ್ಷದಿಂದ ಸಾಹಿತ್ಯ ಅಕಾಡೆಮಿಗೆ ಒಕ್ಕರಿಸಿದ ಈ ವಸಂತಕುಮಾರ್ ಎನ್ನುವ ಮಹನೀಯರಿಗೆ ಕುಲವಿಲ್ಲದ ಕನಕದಾಸರು ಬೇಕಾಗಿದೆಯಂತೆ. ಅದೇ ರೀತಿ ಸಾಹಿತ್ಯ ಅಕಾಡೆಮಿಗೂ ಜಾತಿ, ಕುಲ, ಮತ, ಸಂಘಪರಿವಾರದ ಸಿದ್ದಾಂತದ ಹಂಗಿಲ್ಲದ ವೈಚಾರಿಕ ಪ್ರಜ್ಞೆ ಇರುವ ಅಧ್ಯಕ್ಷರು ಬೇಕಾಗಿದ್ದಾರೆ.


ಈ ಹಿಂದೆಯೂ ಅಷ್ಟೇ. ಸಚಿವ ಸಿ.ಟಿ.ರವಿಯವರು ಕಳೆದ ನಾಲ್ಕು ದಶಕಗಳಿಂದ ಅಕಾಡೆಮಿ ಪ್ರಾಧಿಕಾರಕ್ಕೆ ಆಯ್ಕೆ ಆಗಿದ್ದ ಸಾಹಿತಿ ಕಲಾವಿದರನ್ನು ಮನೆಹಾಳರು ಎಂದು ಹೀಯಾಳಿಸಿದಾಗ ಇಡೀ ಸಾಹಿತ್ಯ ಹಾಗೂ ಕಲಾಲೋಕ ಸಿಡಿದೆದ್ದು ಪ್ರತಿರೋಧಿಸಿತ್ತು. ಆದರೆ.. ಆ ಸಚಿವರ ಹಂಗಿರಲ್ಲಿರುವ ಈ ವಸಂತಕುಮಾರ್ ಮಾತ್ರ ಸಚಿವರ ಹೇಳಿಕೆಯನ್ನು ಸಮರ್ಥಿಸಿಕೊಂಡು ಲೇಖನ ಬರೆದು ತಮ್ಮ ಮಾಲೀಕರಿಗೆ ನಿಷ್ಟೆಯನ್ನು ತೋರಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಇರುವುದು ವ್ಯಕ್ತಿಗತ ಹಿಡನ್ ಅಜೆಂಡಾಗಳನ್ನು ಪ್ರತಿಪಾದಿಸಲೂ ಅಲ್ಲಾ, ಸಂಘಪರಿವಾರದವರನ್ನು  ಮೆಚ್ಚಿಸಲಂತೂ ಮೊದಲೇ ಅಲ್ಲಾ. ಅಕಾಡೆಮಿ ಅಧ್ಯಕ್ಷರಾಗುವ ಮುನ್ನ ಎಬಿವಿಪಿ ರಾಷ್ಟ್ರೀಯ ಉಪಾದ್ಯಕ್ಷರಾಗಿದ್ದಾಗ ಏನೇ ಆಚಾರ ವಿಚಾರ ಸಿದ್ದಾಂತಗಳಿದ್ದರೆ ಇರಲಿ. ಆದರೆ ಅಕಾಡೆಮಿ ಅಧ್ಯಕ್ಷರಾದ ನಂತರ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಕೆಲಸಮಾಡುವ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು. ಸಿಕ್ಕ ಅವಕಾಶವನ್ನು ಸಮಗ್ರ ಸಾಹಿತ್ಯಕ್ಷೇತ್ರದ ವಿಸ್ತರಣೆಗಾಗಿ ಬಳಸಿಕೊಳ್ಳಬೇಕು. ನುಡಿದರೆ ಮಾತುಗಳು ಮುತ್ತಿನ ಹಾರದಂತಿರಬೇಕೆ ಹೊರತು ಸಂಘಪರಿವಾರದವರು ಮೆಚ್ಚಿ ಅಹುದಹುದೆನ್ನುವಂತೆ ಇರಬಾರದು. ಸಾಹಿತ್ಯ ಅಕಾಡೆಮಿಗೆ ಈಗಿರುವ ಅಧ್ಯಕ್ಷರು ಶಾಪವಾಗದೇ ಇರಲಿ ಎಂದು ಪ್ರಾರ್ಥಿಸೋಣ.

-ಶಶಿಕಾಂತ ಯಡಹಳ್ಳಿ   


        





ಮಂಗಳವಾರ, ಅಕ್ಟೋಬರ್ 22, 2019

ತಹ ತಹ..101 ಮನೆಹಾಳರಿಗೆ ಮಾರ್ಗದರ್ಶಿ ಸೂತ್ರ



ಸನ್ಮಾನ್ಯ ಸಂಸ್ಕೃತಿ ಸಚಿವರೆ..

ನೀವು ಸಾಹಿತಿ ಕಲಾವಿದರಿಗೆ ಮನೆಹಾಳರು ಎಂದಿದ್ದಕ್ಕೆ ಹಲವಾರು ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವಿರೋಧಿಸಲಿ ಬಿಡಿ ಅದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ. ಅದರೆ ಯಾರು ಏನೇ ಹೇಳಲಿ ನಾನು ಮಾತ್ರ ನಿಮ್ಮ ಮಾತನ್ನು ಅನುಮೋದಿಸುತ್ತೇನೆ, ಸಮರ್ಥಿಸಿಕೊಳ್ಳುತ್ತೇನೆ, ಒಪ್ಪಿಕೊಳ್ಳುತ್ತೇನೆ.

ಯಾಕೆಂದರೆ ನೀವು ಹೇಳಿದಂತೆ ಈ ಸಾಹಿತಿ ಕಲಾವಿದರೆಲ್ಲಾ ನಿಮ್ಮಾಣೆಗೂ ಮನೆಹಾಳರೇ.  ಬೇರೆಯವರ ಮನೆ ಹಾಳು ಮಾಡದಿದ್ದರೇನಾಯ್ತು ತಮ್ಮ ಮನೆಗಳನ್ನೇ ಹಾಳು ಮಾಡಿಕೊಂಡು ಕಲೆ ಸಾಹಿತ್ಯ ಅಂತಾ ಬದುಕುತ್ತಿದ್ದಾರೆ. ನಿಜವಾದ ಸಾಹಿತಿ ಕಲಾವಿದರ ಮನೆಗೆ ಹೋಗಿ ಅವರ ಹೆಂಡತಿ ಮಕ್ಕಳನ್ನು ಕೇಳಿದರೆ ಗೊತ್ತಾಗುತ್ತೆ ತಮ್ಮ ಮನೆಯವರಿಗೆ ಇವರು ಏನೂ ಮಾಡಿಲ್ಲವೆಂಬುದು. ಮಕ್ಕಳ ಬಗ್ಗೆ ಕಾಳಜಿ ತೋರಲಿಲ್ಲ, ಹೆಂಡತಿಯ ಬಗ್ಗೆ ಕಳಕಳಿ ತೋರಲಿಲ್ಲ, ಎಂದೂ ಸಂಜೆಗೆ ಸರಿಯಾಗಿ ಮನೆಗೆ ಹೋಗಿಲ್ಲ...ಮನೆಗೆ ಬಂದರೂ ಕಲೆ ಸಾಹಿತ್ಯ ಹೊರತು ಪಡಿಸಿ ಇವರಿಗೆ ಬೇರೆ ಪ್ರಪಂಚವೇ ಇಲ್ಲ.  ಕಲೆ ಸಾಹಿತ್ಯ ಸಂಸ್ಕೃತಿಗಾಗಿ ತಮ್ಮದೇ ಕುಟುಂಬವನ್ನು ನಿರ್ಲಕ್ಷಿಸಿದ ಇಂತವರಿಗೆ ಮನೆಹಾಳರು ಎನ್ನದೇ ಇನ್ನೇನು ತಾನೇ ಅನ್ನಲು ಸಾಧ್ಯ.. ಸರಿಯಾಗಿಯೇ ಹೇಳಿದ್ದೀರಿ.

ಇವರೆಲ್ಲಾ  ಮನೆಉದ್ಧಾರಕರನ್ನು ನೋಡಿ ಕಲಿಯುವುದು ಬೇಕಾದಷ್ಟಿದೆ. ಶೂನ್ಯದಿಂದ ನೂರಾರು ಕೋಟಿಗಳನ್ನು ಹೇಗೆ ಅಕ್ರಮವಾಗಿ ಸಂಪಾದಿಸಬೇಕು ಎಂಬುದನ್ನು  ಈ ಮನೆಹಾಳರೆಲ್ಲಾ ತಿಳಿದುಕೊಳ್ಳಬೇಕಿದೆ. ಕೋಮು ಸೌಹಾರ್ಧತೆಯನ್ನು ಹಾಳುಮಾಡಿ, ಧರ್ಮಾಂಧತೆಯ ವಿಷಬೀಜ ಬಿತ್ತಿ ಹೇಗೆ ಓಟುಗಳನ್ನು ಬೆಳೆದು ಅಧಿಕಾರದ ಫಲ ಪಡೆಯಬೇಕೆಂಬ (ಕು)ತಂತ್ರಗಾರಿಕೆಯನ್ನು ಈ ಮನೆಹಾಳರು ಅನುಕರಿಸಬೇಕಿದೆ. "ಸಮಾಜವನ್ನು ಒಡೆದು ಮನಸುಗಳ ನಡುವೆ ಕಂದರ ಸೃಷ್ಟಿಸಿ ತಮ್ಮ ಮನೆಯನ್ನು ಹೇಗೆ ಉದ್ದಾರ ಮಾಡಿಕೊಳ್ಳಬೇಕು, ಸಮಾಜದಿಂದ ಲೂಟಿ ಹೊಡೆದ ಸಂಪತ್ತಿನಲ್ಲಿ ಹೇಗೆ ಮಕ್ಕಳನ್ನು ವಿದೇಶದಲ್ಲಿ ಓದಿಸಬೇಕು, ಮುಂದಿನ ಹತ್ತಾರು ತಲೆಮಾರಿಗಾಗುವಷ್ಟು ಆಸ್ತಿ ಸಂಪಾದಿಸಬೇಕು" ಎನ್ನುವ ಗುಟ್ಟುಗಳನ್ನು ಈ ಮನೆಹಾಳರು ಅರಿತು ನಡೆದಿದ್ದರೆ ಈ ಹಾಳು ಕಲೆ ಸಾಹಿತ್ಯಗಳನ್ನೆಲ್ಲಾ ಬಿಟ್ಟು  ಅಧಿಕಾರ ಮತ್ತು ಸಿರಿವಂತಿಕೆ ಅನುಭವಿಸಬಹುದಾಗಿತ್ತು. 

ಆದರೆ ಬೇರೆಯವರ ಮನೆಹಾಳು ಮಾಡದೆ, ಸಮಾಜದ ಸಂಪತ್ತನ್ನು ಲೂಟಿಮಾಡದೆ, ಧರ್ಮಾಂಧತೆ ಬೀಜ ಬಿತ್ತಿ ಅಧಿಕಾರದ ಬೆಳೆ ತೆಗೆಯದೆ, ಜನರ ನಡುವಿನ ಶಾಂತಿ ಕದಡದೆ, ತಮ್ಮ ಸಂತಾನಕ್ಕೆ ಸಂಪತ್ತನ್ನು ಕೂಡಿಡದೇ ಇರುವ ಈ ಸಾಹಿತಿ ಕಲಾವಿದರು ಸಮಾಜವನ್ನು ಉದ್ದಾರ ಮಾಡುವ ಕಾಯಕದಲ್ಲಿ ನಿರತರಾಗಿ ತಮ್ಮ ಮನೆಯನ್ನು ಹಾಳುಮಾಡಿಕೊಂಡಿದ್ದಂತೂ ಅಪ್ಪಟ ಸತ್ಯ. ಸತ್ಯ ಹೇಳಲು ಸಂತನೇ ಬೇಕೆಂದೇನಿಲ್ಲ. ಸೈತಾನನ ಬಾಯಲ್ಲಿ ಸತ್ಯ ಬಂದರೂ ಅದು ಸತ್ಯವೇ. ಹೀಗಾಗಿ ತಮ್ಮ ಮನೆಯನ್ನು ಹಾಳು ಮಾಡಿಕೊಂಡ ಘನಘೋರ ಪ್ರಮಾದ ಮಾಡಿದವರನ್ನು ದೂರವಿಟ್ಟು ತಮ್ಮ ತಮ್ಮ ಮನೆಗಳನ್ನು ಉದ್ದಾರ ಮಾಡಿಕೊಳ್ಳುವಂತವರನ್ನು ಹಾಗೂ ನಿಮ್ಮ ತವರಾದ ಸಂಘದ ಹಿತಾಸಕ್ತಿಗಾಗಿ ದುಡಿದವರನ್ನು ಹಾಗೂ ದುಡಿಯುವಂತವರನ್ನು ಅಕಾಡೆಮಿ ಪ್ರಾಧಿಕಾರಗಳಿಗೆ ಅಧ್ಯಕ್ಷ ಸದಸ್ಯರನ್ನಾಗಿ ಆಯ್ಕೆ ಮಾಡಿದ ನಿಮ್ಮ ದೂರದೃಷ್ಟಿಯ ಕ್ರಮ ಅಭಿನಂದನೀಯ. 

ಅಪರೂಪಕ್ಕೊಮ್ಮೆ ನಿಜವನ್ನು ನುಡಿದ ನಂಜಿನ ನಾಲಿಗೆಗೆ ಬಹುಪರಾಕು. ಇನ್ಮೇಲೆ ಸಾಹಿತಿ ಕಲಾವಿದರು ಸಾಂಸ್ಕೃತಿಕ ಲೋಕದಲ್ಲಿ ಇರಬೇಕೆಂದರೆ ತಮ್ಮ ಮನೆಗಳನ್ನು ಹಾಳು ಮಾಡಿಕೊಂಡು ಮನೆಹಾಳರಾಗಿ ಕಲೋದ್ದಾರ ದೇಶೋದ್ದಾರಗಳನ್ನೆಲ್ಲಾ ಮಾಡದೇ  ಅವರಿವರ ಮನೆಮುರಿದು, ಸಮಾಜದ ಐಕ್ಯತೆ ಒಡೆದು, ತಮ್ಮ ಮನೆಗಳ ತಳಪಾಯ ಕಂಬಗಳನ್ನೆಲ್ಲಾ ಗಟ್ಟಿಗೊಳಿಸಿಕೊಂಡು, ಅಧಿಕಾರ ಮತ್ತು ಸಂಪನ್ಮೂಲಗಳನ್ನು ಪಡೆಯುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಬೇಕಿದೆ. ಈ ಮನೆಹಾಳರಿಗೆ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದರೆ ಇನ್ನೂ ಉತ್ತಮ. ಎಲ್ಲರೂ ನಿಮ್ಮನ್ನು ಮಾದರಿಯಾಗಿ ಸ್ವೀಕರಿಸಿ ಉದ್ದಾರವಾಗಲಿ. 

ಜೈ ಶ್ರೀರಾಮ್

- ಶಶಿಕಾಂತ ಯಡಹಳ್ಳಿ

ತಹ ತಹ - 100.. ಮನೆಹಾಳರು ಯಾರು?.. ಕಿತ್ತೆಸೆಯಬೇಕಿದೆ ನಂಜಿನ ನಾಲಿಗೆಯ ಬೇರು..



ಅದ್ಯಾಕೊ ಎಂದೋ ಕೇಳಿದ ಕಥೆಯೊಂದು ನೆನಪಾಯ್ತು. ಒಂಚೂರು ಬದಲಾಯಿಸಿ ಹೇಳುತ್ತಿದ್ದೇನಷ್ಟೇ.
 
ಎಲ್ಲಿಂದಲೋ ಹಿಡಿದುಕೊಂಡು ಬಂದ ಎರಡು ಗಿಳಿಮರಿಗಳನ್ನು ಸಂತೆಯಲಿಟ್ಟು ಮಾರಲಾಗುತ್ತಿತ್ತು. ಒಬ್ಬ ಕಲಾವಿದ ಒಂದನ್ನು ಕೊಂಡು ಮನೆಗೆ ತೆಗೆದುಕೊಂಡು ಹೋಗಿ ಸಾಕಿದ. ಇನ್ನೊಂದನ್ನು ಕೋಮುವಾದಿಯೊಬ್ಬ ಖರೀದಿಸಿ ಸಾಕಿದ. ಮರಿಗಳು ಬೆಳೆದು ಗಿಳಿಗಳಾದವು. ತನ್ನ ಸುತ್ತಲಿನ ಪರಿಸರಕ್ಕೆ ಸ್ಪಂದಿಸಿ ಮಾತನಾಡತೊಡಗಿದವು. ಕಲಾವಿದನ ಮನೆಗೆ ಯಾರೇ ಬಂದರೂ ಅಲ್ಲಿದ್ದ ಗಿಳಿ 'ನಮಸ್ಕಾರ, ಬನ್ನಿ ಕುಳಿತುಕೊಳ್ಳಿ,  ಚೆನ್ನಾಗಿದ್ದೀರಾ' ಎಂದು ಕಕ್ಕುಲಾತಿಯಿಂದ ಉಲಿಯುತ್ತಿತ್ತು. ಅದನ್ನು ಕೇಳಿದವರಿಗೆಲ್ಲ ಸಂತಸವಾಗುತ್ತಿತ್ತು. ಕೋಮುವಾದಿಯ ಮನೆಯ ಗಿಳಿ ಮಾತ್ರ ಯಾರೇ ಬಂದರೂ "ಹಿಡೀರಿ ಹೊಡೀರಿ ಬಿಡಬೇಡಿ ಬೆಂಕಿ ಹಚ್ಚಿ.." ಎಂದೆಲ್ಲಾ ಅರಚುತ್ತಿತ್ತು. ಕೇಳಿದವರಿಗೆ ದಿಗಿಲಾದರೆ ಮನೆಯ ಮಾಲೀಕನಿಗೆ ಕರ್ಣಾನಂದವಾಗುತ್ತಿತ್ತು. 

ಈಗ ಅಂತದೇ ಒಂದು ಗಿಳಿಗೆ ಮಂತ್ರಿಗಿರಿ ಸಿಕ್ಕಿದೆ. 'ಸಾಹಿತಿ ಕಲಾವಿದರಿಗೆಲ್ಲಾ ಮನೆಮುರುಕರು' ಎಂದು  ಅರಚುತ್ತಿದೆ. ಕಲಾವಿದರ ಮನೆಯ ಗಿಳಿಸಂತಾನ ಮಾತ್ರ  ಅದ್ಯಾಕೋ ಆತಂಕದಿಂದ ಮೌನವಹಿಸಿವೆ.

ಹೌದು.. ಸಂಸ್ಕೃತಿ ಇಲಾಖೆಯ ಹಾಲಿ ಸಚಿವರ ನಾಲಿಗೆ ಮಾಮೂಲಿನಂತೆ ನಂಜು ಕಾರುತ್ತಿದೆ. 

ಇಷ್ಟಕ್ಕೂ ಆದದ್ದಾದರೂ ಏನಂದರೆ.. ಅಕಾಡೆಮಿ ಪ್ರಾಧಿಕಾರಗಳಿಗೆ ಆಯ್ಕೆ ಆದವರ ಅಧಿಕಾರದ ಅವಧಿಯನ್ನು ಅಕಾಲಿಕವಾಗಿ ವಜಾ ಮಾಡಿದ ಬಿಜೆಪಿ ಸರಕಾರ ಮೂರು ತಿಂಗಳ ನಂತರ ಸಂಘಪರಿವಾರದ ಸಾಂಗತ್ಯ ಹೊಂದಿರುವವರನ್ನು ಅಕಾಡೆಮಿಗಳ ನಿಯಮಾವಳಿ (ಬೈಲಾ) ಹಾಗೂ ಸಾಂಸ್ಕೃತಿಕ ನೀತಿಯನ್ನು ಉಲ್ಲಂಘಿಸಿ ಆಯ್ಕೆ ಮಾಡಿತು. ಸಂಸ್ಕೃತಿ ಸಚಿವಾಲಯದ ಸಚಿವರಾದ ಮಾನ್ಯ ಸಿ.ಟಿ.ರವಿಯವರು ಅಕ್ಟೋಬರ್ 18 ರಂದು ಹೊಸದಾಗಿ ಆಯ್ಕೆಯಾದ ಎಲ್ಲಾ ಅಕಾಡೆಮಿ ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಸದಸ್ಯರ ಸಭೆಯನ್ನು ವಿಧಾನಸಭೆಯ ಸಭಾಂಗಣದಲ್ಲಿ ಕರೆದಿದ್ದರು. ಎಲ್ಲರಿಗೂ ಶುಭಹಾರೈಸಿ ಸಾಧ್ಯವಾದರೆ ಒಂದಿಷ್ಟು ಮಾರ್ಗದರ್ಶನ ನೀಡಿ ಕಳಿಸಿದ್ದರೆ ಈ ಲೇಖನ ಬರೆಯುವ ಅಗತ್ಯವೇ ಇರಲಿಲ್ಲ. 

ಆದರೆ.. ಹಿಂದೆ ಕಲಿತದ್ದನ್ನ ಈ ಕೋಮುಗಿಳಿ ಹೇಗೆ ತಾನೇ ಮರೆತು ಬದಲಾದೀತು.  *"ಅಕಾಡೆಮಿ ಪ್ರಾಧಿಕಾರಗಳಿಗೆ ಈಗ ಆಯ್ಕೆ ಮಾಡುವಾಗ ಮನೆಹಾಳರನ್ನು ದೂರವಿಟ್ಟಿದ್ದೇವೆ. ಸಾಂಸ್ಕೃತಿಕ ಕ್ಷೇತ್ರವನ್ನು ಕದಡುವ, ಒಡೆಯುವ ಮನಸ್ಥಿತಿ ಇರುವವರನ್ನು ನಾವು ಆಯ್ಕೆ ಮಾಡಿಲ್ಲ. ಮನೆಹಾಳು ಮಂದಿಗೆ ಅಧಿಕಾರ ಕೊಟ್ಟಿಲ್ಲ. ಸಾಂಸ್ಕೃತಿಕ ಕ್ಷೇತ್ರದ ಕೆಲ ಮನೆಮುರುಕರು ಬಂದರೆ ಎಲ್ಲವನ್ನೂ ಹಾಳುಮಾಡುತ್ತಾರೆ..."* ಎಂದು ಸಂಘಪರಿವಾರದ ಈ ಪ್ರಮುಖ ಅಂಗದ ನಾಲಿಗೆ ಉಲಿಯಿತು. ಇದನ್ನು ಕೇಳಿಯೂ ಆಯ್ಕೆಯಾದ ಋಣದಲ್ಲಿರುವ ಎಲ್ಲಾ ಅಕಾಡೆಮಿ ಪ್ರಾಧಿಕಾರದ ಅಧ್ಯಕ್ಷ- ಸದಸ್ಯರುಗಳೂ ಮೌನ ಸಮ್ಮತಿ ಸೂಚಿಸಿ ಜಾಣಕಿವುಡು ಕುರುಡನ್ನು ತೋರಿದ್ದೊಂದು ಸಾಂಸ್ಕೃತಿಕ ದುರಂತ.

ಪ್ರಭುತ್ವದ ತಪ್ಪು ನಿರ್ಧಾರಗಳನ್ನು ಜನವಿರೋಧಿ ನಿಲುವುಗಳನ್ನು ವಿರೋಧಿಸುವವರನ್ನು ದೇಶದ್ರೋಹಿಗಳು ಎಂದು ಆರೋಪಿಸಿ ಕಿರುಕುಳ ಕೊಡುವ ಉರಿ ನಾಲಿಗೆಯವರಲ್ಲಿ ಉದುರುವುದೇ ಇಂತಹ ನಂಜಿನ ಪದಗಳು. ಇಲ್ಲಿ ಈಗ "ಮನೆಮುರುಕರು ಯಾರು? ಎನ್ನುವ ಪ್ರಶ್ನೆ ಪ್ರಮುಖವಾಗಿದೆ. ಯಾವ ಸಾಹಿತಿ ಕಲಾವಿದರು ಯಾರ ಮನೆಯನ್ನು ಮುರಿದಿದ್ದಾರೆ? ಇಲ್ಲಿವರೆಗೂ ಅಕಾಡೆಮಿ ಪ್ರಾಧಿಕಾರಕ್ಕೆ ಆಯ್ಕೆ ಆದವರಲ್ಲಿ ಯಾರು ಸಾಂಸ್ಕೃತಿಕ ಕ್ಷೇತ್ರವನ್ನು ಹಾಳುಮಾಡಿದ್ದಾರೆ?. ಕದಡುವ ಒಡೆಯುವ ಮನಸ್ಥಿತಿ ಯಾರು ಹೊಂದಿದ್ದಾರೆ..?"  ಎನ್ನುವುದಕ್ಕೆ ಮೊದಲು ಸಚಿವರು ಉತ್ತರಿಸಬೇಕಾಗಿದೆ. 

'ತಲೆ ಕತ್ತರಿಸುತ್ತೇವೆ, ಬೆಂಕಿ ಹಚ್ಚುತ್ತೇವೆ' ಎಂದು ಸಾರ್ವಜನಿಕವಾಗಿ ಕಿಚ್ಚು ಹಚ್ಚುವ, 'ಸಂವಿಧಾನವನ್ನು ಬದಲಾಯಿಸುತ್ತೇವೆ' ಎಂದು ಹೇಳುವ, ಸಂವಿಧಾನವನ್ನೇ ಸಾರ್ವತ್ರಿಕವಾಗಿ ಸುಡುವ ಇಂತಹ ದೇಶಭಂಜಕ ಸಂಘಪರಿವಾರದ ಅಂಗಗಳು ಮನೆಮುರುಕರೋ ಅಥವಾ ಸರಕಾರಗಳ ಜನದ್ರೋಹಿ ನೀತಿಗಳ ವಿರುದ್ದ ಎಚ್ಚರದ ದ್ವನಿಯಾಗಿರುವ ಸಾಹಿತಿ ಕಲಾವಿದರು ಮನೆಮುರುಕರೋ?..  ಚಿಕ್ಕಮಗಳೂರಿನಲ್ಲಿ ಕೋಮುಸೌಹಾರ್ಧತೆಗೆ ಕಿಚ್ಚು ಹಚ್ಚಿ, ಬಾಬಾಬುಡನ್ ಗಿರಿಗೆ ದ್ವೇಷದ ಬೆಂಕಿ ಇಟ್ಟು ಅದರ ಶಾಖದಲ್ಲಿ ಅಧಿಕಾರದ ಸುಖ ಅನುಭವಿಸುತ್ತಿರುವ ಈ ಸಚಿವ ಮಹಾಶಯರು ಮತಧರ್ಮದ ಹೆಸರಲ್ಲಿ ಜನರನ್ನು ಒಡೆದಾಳುವ ಮನೆಮುರುಕರೋ.. ಇಲ್ಲವೇ ಕೋಮುಸೌಹಾರ್ದವನ್ನು ಸಾರುವ ನಾಟಕಗಳನ್ನು ಮಾಡುವ ಕಲಾವಿದರು, ಧರ್ಮದ್ವೇಷವನ್ನು ವಿರೋಧಿಸುವಂತಹ ಬರಹಗಳನ್ನು ಬರೆಯುವ ಸಾಹಿತಿಗಳು ಮನೆಮುರುಕರೋ..?  

ನಿಜ ಏನೆಂದರೆ ಹಲವಾರು ಸಾಹಿತಿ ಕಲಾವಿದರು ಕಲೆ ಸಾಹಿತ್ಯದ ಮೇಲಿನ ಪ್ರೀತಿ ಮತ್ತು ವ್ಯಾಮೋಹದಿಂದ ತಮ್ಮ ಮನೆಯನ್ನು ಮುರಿದುಕೊಂಡು, ಕುಟುಂಬದ ವಿರೋಧವನ್ನು ಎದುರಿಸಿಕೊಂಡು ಸಾಂಸ್ಕೃತಿಕ ಲೋಕಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ಕೊಟ್ಟಿರುವುದಕ್ಕೇ ಬೇಕಾದಷ್ಟು ಉದಾಹರಣೆಗಳಿವೆ. ಆದರೆ ಬೇರೆಯವರ ಮನೆ ಮುರಿಯುವ ಇಲ್ಲವೇ ಸಾಂಸ್ಕೃತಿಕ ಕ್ಷೇತ್ರವನ್ನು ಕದಡುವ ಇಲ್ಲವೇ ಒಡೆಯುವ ಕೆಲಸವನ್ನೂ ನಿಜವಾದ ಸಾಹಿತಿ ಕಲಾವಿದರು ಮಾಡಿಲ್ಲ ಮಾಡುವುದೂ ಇಲ್ಲ.. ಹಾಗೇನಾದರೂ ಮಾಡಿದ್ದರೆ ಅಂತವರು ಸಾಹಿತಿ ಕಲಾವಿದರೇ ಅಲ್ಲ ಎನ್ನುವ ಅರಿವು ಈ ನಂಜಿನ ನಾಲಿಗೆಯವರಿಗಿಲ್ಲ. 

ಇಷ್ಟಕ್ಕೂ ಈಗ ಸಾಂಸ್ಕೃತಿಕ ಕ್ಷೇತ್ರವನ್ನು ಕದಡಿ ಒಡೆದವರು ಯಾರು? ಇದೇ ಬಿಜೆಪಿ ಪಕ್ಷದ ಸರಕಾರದವರು. ಎಲ್ಲಾ ಅಕಾಡೆಮಿ ಪ್ರಾಧಿಕಾರಗಳಿಗೆ ಆಯ್ಕೆಯಾಗಿದ್ದ ಅಧ್ಯಕ್ಷ ಸದಸ್ಯರುಗಳು ತಮ್ಮ ಇತಿಮಿತಿಯಲ್ಲಿ ಅಧಿಕಾರಿಗಳ ಅಡೆತಡೆ ಕಿರುಕುಳಗಳ ನಡುವೆಯೂ ತಮ್ಮ ಕಾರ್ಯವ್ಯಾಪ್ತಿಯ ಕೆಲಸಗಳನ್ನು ಮಾಡಿಕೊಂಡಿದ್ದರು. ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದರು. ಅವರೆಲ್ಲರ ಅವಧಿ ಮುಗಿಯಲು ಇನ್ನೂ ಒಂದು ವರ್ಷ ಬಾಕಿ ಇತ್ತು.  ಅವಧಿ ಪೂರ್ವದಲ್ಲಿ ಯಾವುದೇ ಕಾರಣವನ್ನೂ ಕೊಡದೇ ಅಕಾಲಿಕವಾಗಿ ಅಕಾಡೆಮಿ ಪ್ರಾಧಿಕಾರಗಳ ಆಯ್ಕೆಗಳನ್ನೆಲ್ಲಾ ಸಾರಾಸಗಟಾಗಿ ವಜಾಮಾಡಿದ್ದು ಸಾಂಸ್ಕೃತಿಕ ಕ್ಷೇತ್ರವನ್ನು ಕದಡುವ ಒಡೆಯುವ ಕೆಲಸ ಅಲ್ಲವಾ? ಸರಕಾರಗಳೇ ಒಪ್ಪಿದ್ದ ಬೈಲಾ ನಡಾವಳಿಗಳು ಮತ್ತು ಸಾಂಸ್ಕೃತಿಕ ನೀತಿಯನ್ನು ಉಲ್ಲಂಘಿಸಿ ಅವಧಿಪೂರ್ವದಲ್ಲಿ ಅಕಾಡೆಮಿ ಪ್ರಾಧಿಕಾರದ ಕಾರ್ಯನಿರತರನ್ನು ನಿಯಮ ಬಾಹಿರವಾಗಿ  ಮನೆಗೆ ಕಳಿಸಿದ್ದು ಮನೆಮುರುಕತನವಲ್ಲವಾ? ರಂಗಕೈಂಕರ್ಯದಲ್ಲಿ ತೊಡಗಿದ್ದ ರಂಗಾಯಣಗಳ ನಿರ್ದೇಶಕರನ್ನು ಹೊರಗೆ ಕಳಿಸಿ ರಂಗಾಯಣದ ನಡಾವಳಿಗಳಿಗೆ ವಿರುದ್ದವಾಗಿ ರಂಗಸಮಾಜದ ಸದಸ್ಯರ ಆಯ್ಕೆಯನ್ನೂ ರದ್ದು ಮಾಡಿದ್ದು ಕದಡುವ ಒಡೆಯುವ ಮನೆಮುರುಕ ನಡೆಯಲ್ಲವಾ?

ಹಿಂದಿನ ಸರಕಾರವೊಂದು ಇದೇ ಕೆಲಸ ಮಾಡಿತೆಂದು ದ್ವೇಷಸಾಧನೆಗೋ, ಸ್ವಾರ್ಥ ಸಾಧನೆಗೋ ಈ ಸರಕಾರವೂ ಅದನ್ನೇ ಮಾಡಿ, ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳು ಸರಿಯಾಗಿ ಕೆಲಸಮಾಡದಂತೆ ಅಡ್ಡಿ ಮಾಡಿ, ಜನರ ತೆರಿಗೆ ಹಣ ಪೋಲಾಗುವುದಕ್ಕೆ ಕಾರಣವಾಗಿದ್ದು ಕದಡುವ ಕಾರ್ಯ ಅಲ್ಲವಾ?

ಹೇಳುತ್ತಾ ಹೋದರೆ ಈ ಆಳುವ ಅಧಿಕಾರಸ್ತರು ಮಾಡುವ ಬೇಕಾದಷ್ಟು ಮನೆಮುರುಕ ಕೆಲಸಗಳ ಪಟ್ಟಿ ಇದೆ. ಈ ಬಹುತೇಕ ಸ್ವಾರ್ಥಿ ರಾಜಕಾರಣಿಗಳ ಕಸುಬೇ ಸಮಾಜದ ಶಾಂತಿಯನ್ನು ಕದಡುವ ಹಾಗೂ ಸೌಹಾರ್ಧತೆಯನ್ನು ಒಡೆಯುವುದಾಗಿದೆ. ಇವರು ಮಾಡುವ ಕೆಡುವುವ ಕೆಲಸಗಳನ್ನು ಮರೆಮಾಚಲು ಕಟ್ಟುವ ಕೆಲಸದಲ್ಲಿ ನಿರತರಾಗಿರುವ ಸಾಹಿತಿ ಕಲಾವಿದರ ಮೇಲೆ ಆರೋಪ ಮಾಡುತ್ತಿರುವುದು ಅಕ್ಷಮ್ಯ. ಇಂತಹ ನಂಜಿನ ಆರೋಪವನ್ನು ಆಲಿಸಿ ಅರಗಿಸಿಕೊಳ್ಳುವ ಬದಲು ಸಾಹಿತಿ ಕಲಾವಿದರು ವಿರೋಧಿಸಲೇಬೇಕಿದೆ. ಸಾಂಸ್ಕೃತಿಕ ಕ್ಷೇತ್ರದ ಮೇಲೆ ಯಾರೇ ದಾಳಿ ದಬ್ಬಾಳಿಕೆ ಮಾಡಿದರೂ ಜಾತಿ ಧರ್ಮ ಪಕ್ಷಗಳನ್ನು ಪಕ್ಕಕ್ಕಿಟ್ಟು ಪ್ರತಿಭಟಿಸುವ ಮಹತ್ಕಾರ್ಯವನ್ನು ಕನ್ನಡ ಸಾಂಸ್ಕೃತಿಕ ಲೋಕ ಮಾಡುತ್ತಲೇ ಬಂದಿದೆ. ಸಾಹಿತಿ ಕಲಾವಿದರಿಗೆ ಆತ್ಮಗೌರವ ಹಾಗೂ ಸ್ವಾಭಿಮಾನ ಎಲ್ಲಕ್ಕಿಂತಾ ಬಹುಮುಖ್ಯವಾದದ್ದು. ಸಾಂಸ್ಕೃತಿಕ ಹಿತಾಸಕ್ತಿಗೆ ದಕ್ಕೆಯಾದಾಗ ಸಿಡಿದೇಳುವಂತಹುದು. "ಕಲಾವಿದರು ಕದಡುವವರಲ್ಲ ಕಟ್ಟುವವರು ಸಮಾಜದ ಎಚ್ಚರದ ದ್ವನಿಗಳು" ಎಂಬುದನ್ನು ದೊಡ್ಡ ದ್ವನಿಯಲ್ಲಿ ಸಾರಬೇಕಿದೆ. ಸಾಧ್ಯವಾದ ಎಲ್ಲಾ ರೀತಿಯಲ್ಲೂ ಸಚಿವರ ಅನುಚಿತ ಮಾತುಗಳನ್ನು ವಿರೋಧಿಸಬೇಕಿದೆ. ಎಲ್ಲವನ್ನೂ ಒಡೆದಾಳುವ ಹಾಗೆ ಸಾಂಸ್ಕೃತಿಕ ಕ್ಷೇತ್ರವನ್ನೂ ಒಡೆಯುವ ಹುನ್ನಾರದ ವಿರುದ್ದ ಸಿಡಿದೇಳಬೇಕಿದೆ. ಇಲ್ಲವಾದರೆ ಸಾಂಸ್ಕೃತಿಕ ಲೋಕದ ಮೇಲೆ ಪ್ರಭುತ್ವ ಮಾಡುವ ದಬ್ಬಾಳಿಕೆ ದಮನಗಳಿಗೆ ಬಲಿಯಾಗಲು ಸಿದ್ದವಾಗಬೇಕಿದೆ.

ಅಗೋ ಅಲ್ಲಿ ಕೋಮುವಾದಿಗಳು ಸಾಕಿದ ಕೋಮುಸೌಹಾರ್ಧ ಕದಡಿದ ಗಿಳಿ " ಮನೆಮುರುಕರು, ಮನೆಮುರುಕರು.." ಅಂತಾ ಅರಚುತ್ತಿದೆ. ಕಲಾವಿದರ ಮನೆಯಂಗಳದ ಗಿಳಿಗಳು ಈಗ ಸುಮ್ಮನಿದ್ದರೆ ಸರ್ವನಾಶ. ಮೌನವಾಗಿದ್ದರೆ ವಿನಾಶ..

- ಶಶಿಕಾಂತ ಯಡಹಳ್ಳಿ