ಸನ್ಮಾನ್ಯ ಸಂಸ್ಕೃತಿ ಸಚಿವರೆ..
ನೀವು
ಸಾಹಿತಿ ಕಲಾವಿದರಿಗೆ ಮನೆಹಾಳರು ಎಂದಿದ್ದಕ್ಕೆ ಹಲವಾರು ಜನ ವಿರೋಧ
ವ್ಯಕ್ತಪಡಿಸುತ್ತಿದ್ದಾರೆ. ವಿರೋಧಿಸಲಿ ಬಿಡಿ ಅದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ.
ಅದರೆ ಯಾರು ಏನೇ ಹೇಳಲಿ ನಾನು ಮಾತ್ರ ನಿಮ್ಮ ಮಾತನ್ನು ಅನುಮೋದಿಸುತ್ತೇನೆ,
ಸಮರ್ಥಿಸಿಕೊಳ್ಳುತ್ತೇನೆ, ಒಪ್ಪಿಕೊಳ್ಳುತ್ತೇನೆ.
ಯಾಕೆಂದರೆ
ನೀವು ಹೇಳಿದಂತೆ ಈ ಸಾಹಿತಿ ಕಲಾವಿದರೆಲ್ಲಾ ನಿಮ್ಮಾಣೆಗೂ ಮನೆಹಾಳರೇ. ಬೇರೆಯವರ ಮನೆ
ಹಾಳು ಮಾಡದಿದ್ದರೇನಾಯ್ತು ತಮ್ಮ ಮನೆಗಳನ್ನೇ ಹಾಳು ಮಾಡಿಕೊಂಡು ಕಲೆ ಸಾಹಿತ್ಯ ಅಂತಾ
ಬದುಕುತ್ತಿದ್ದಾರೆ. ನಿಜವಾದ ಸಾಹಿತಿ ಕಲಾವಿದರ ಮನೆಗೆ ಹೋಗಿ ಅವರ ಹೆಂಡತಿ ಮಕ್ಕಳನ್ನು
ಕೇಳಿದರೆ ಗೊತ್ತಾಗುತ್ತೆ ತಮ್ಮ ಮನೆಯವರಿಗೆ ಇವರು ಏನೂ ಮಾಡಿಲ್ಲವೆಂಬುದು. ಮಕ್ಕಳ ಬಗ್ಗೆ
ಕಾಳಜಿ ತೋರಲಿಲ್ಲ, ಹೆಂಡತಿಯ ಬಗ್ಗೆ ಕಳಕಳಿ ತೋರಲಿಲ್ಲ, ಎಂದೂ ಸಂಜೆಗೆ ಸರಿಯಾಗಿ ಮನೆಗೆ
ಹೋಗಿಲ್ಲ...ಮನೆಗೆ ಬಂದರೂ ಕಲೆ ಸಾಹಿತ್ಯ ಹೊರತು ಪಡಿಸಿ ಇವರಿಗೆ ಬೇರೆ ಪ್ರಪಂಚವೇ
ಇಲ್ಲ. ಕಲೆ ಸಾಹಿತ್ಯ ಸಂಸ್ಕೃತಿಗಾಗಿ ತಮ್ಮದೇ ಕುಟುಂಬವನ್ನು ನಿರ್ಲಕ್ಷಿಸಿದ ಇಂತವರಿಗೆ
ಮನೆಹಾಳರು ಎನ್ನದೇ ಇನ್ನೇನು ತಾನೇ ಅನ್ನಲು ಸಾಧ್ಯ.. ಸರಿಯಾಗಿಯೇ ಹೇಳಿದ್ದೀರಿ.
ಇವರೆಲ್ಲಾ
ಮನೆಉದ್ಧಾರಕರನ್ನು ನೋಡಿ ಕಲಿಯುವುದು ಬೇಕಾದಷ್ಟಿದೆ. ಶೂನ್ಯದಿಂದ ನೂರಾರು ಕೋಟಿಗಳನ್ನು
ಹೇಗೆ ಅಕ್ರಮವಾಗಿ ಸಂಪಾದಿಸಬೇಕು ಎಂಬುದನ್ನು ಈ ಮನೆಹಾಳರೆಲ್ಲಾ ತಿಳಿದುಕೊಳ್ಳಬೇಕಿದೆ.
ಕೋಮು ಸೌಹಾರ್ಧತೆಯನ್ನು ಹಾಳುಮಾಡಿ, ಧರ್ಮಾಂಧತೆಯ ವಿಷಬೀಜ ಬಿತ್ತಿ ಹೇಗೆ ಓಟುಗಳನ್ನು
ಬೆಳೆದು ಅಧಿಕಾರದ ಫಲ ಪಡೆಯಬೇಕೆಂಬ (ಕು)ತಂತ್ರಗಾರಿಕೆಯನ್ನು ಈ ಮನೆಹಾಳರು
ಅನುಕರಿಸಬೇಕಿದೆ. "ಸಮಾಜವನ್ನು ಒಡೆದು ಮನಸುಗಳ ನಡುವೆ ಕಂದರ ಸೃಷ್ಟಿಸಿ ತಮ್ಮ ಮನೆಯನ್ನು
ಹೇಗೆ ಉದ್ದಾರ ಮಾಡಿಕೊಳ್ಳಬೇಕು, ಸಮಾಜದಿಂದ ಲೂಟಿ ಹೊಡೆದ ಸಂಪತ್ತಿನಲ್ಲಿ ಹೇಗೆ
ಮಕ್ಕಳನ್ನು ವಿದೇಶದಲ್ಲಿ ಓದಿಸಬೇಕು, ಮುಂದಿನ ಹತ್ತಾರು ತಲೆಮಾರಿಗಾಗುವಷ್ಟು ಆಸ್ತಿ
ಸಂಪಾದಿಸಬೇಕು" ಎನ್ನುವ ಗುಟ್ಟುಗಳನ್ನು ಈ ಮನೆಹಾಳರು ಅರಿತು ನಡೆದಿದ್ದರೆ ಈ ಹಾಳು ಕಲೆ
ಸಾಹಿತ್ಯಗಳನ್ನೆಲ್ಲಾ ಬಿಟ್ಟು ಅಧಿಕಾರ ಮತ್ತು ಸಿರಿವಂತಿಕೆ ಅನುಭವಿಸಬಹುದಾಗಿತ್ತು.
ಆದರೆ
ಬೇರೆಯವರ ಮನೆಹಾಳು ಮಾಡದೆ, ಸಮಾಜದ ಸಂಪತ್ತನ್ನು ಲೂಟಿಮಾಡದೆ, ಧರ್ಮಾಂಧತೆ ಬೀಜ ಬಿತ್ತಿ
ಅಧಿಕಾರದ ಬೆಳೆ ತೆಗೆಯದೆ, ಜನರ ನಡುವಿನ ಶಾಂತಿ ಕದಡದೆ, ತಮ್ಮ ಸಂತಾನಕ್ಕೆ ಸಂಪತ್ತನ್ನು
ಕೂಡಿಡದೇ ಇರುವ ಈ ಸಾಹಿತಿ ಕಲಾವಿದರು ಸಮಾಜವನ್ನು ಉದ್ದಾರ ಮಾಡುವ ಕಾಯಕದಲ್ಲಿ
ನಿರತರಾಗಿ ತಮ್ಮ ಮನೆಯನ್ನು ಹಾಳುಮಾಡಿಕೊಂಡಿದ್ದಂತೂ ಅಪ್ಪಟ ಸತ್ಯ. ಸತ್ಯ ಹೇಳಲು ಸಂತನೇ
ಬೇಕೆಂದೇನಿಲ್ಲ. ಸೈತಾನನ ಬಾಯಲ್ಲಿ ಸತ್ಯ ಬಂದರೂ ಅದು ಸತ್ಯವೇ. ಹೀಗಾಗಿ ತಮ್ಮ ಮನೆಯನ್ನು
ಹಾಳು ಮಾಡಿಕೊಂಡ ಘನಘೋರ ಪ್ರಮಾದ ಮಾಡಿದವರನ್ನು ದೂರವಿಟ್ಟು ತಮ್ಮ ತಮ್ಮ ಮನೆಗಳನ್ನು
ಉದ್ದಾರ ಮಾಡಿಕೊಳ್ಳುವಂತವರನ್ನು ಹಾಗೂ ನಿಮ್ಮ ತವರಾದ ಸಂಘದ ಹಿತಾಸಕ್ತಿಗಾಗಿ
ದುಡಿದವರನ್ನು ಹಾಗೂ ದುಡಿಯುವಂತವರನ್ನು ಅಕಾಡೆಮಿ ಪ್ರಾಧಿಕಾರಗಳಿಗೆ ಅಧ್ಯಕ್ಷ
ಸದಸ್ಯರನ್ನಾಗಿ ಆಯ್ಕೆ ಮಾಡಿದ ನಿಮ್ಮ ದೂರದೃಷ್ಟಿಯ ಕ್ರಮ ಅಭಿನಂದನೀಯ.
ಅಪರೂಪಕ್ಕೊಮ್ಮೆ
ನಿಜವನ್ನು ನುಡಿದ ನಂಜಿನ ನಾಲಿಗೆಗೆ ಬಹುಪರಾಕು. ಇನ್ಮೇಲೆ ಸಾಹಿತಿ ಕಲಾವಿದರು
ಸಾಂಸ್ಕೃತಿಕ ಲೋಕದಲ್ಲಿ ಇರಬೇಕೆಂದರೆ ತಮ್ಮ ಮನೆಗಳನ್ನು ಹಾಳು ಮಾಡಿಕೊಂಡು ಮನೆಹಾಳರಾಗಿ
ಕಲೋದ್ದಾರ ದೇಶೋದ್ದಾರಗಳನ್ನೆಲ್ಲಾ ಮಾಡದೇ ಅವರಿವರ ಮನೆಮುರಿದು, ಸಮಾಜದ ಐಕ್ಯತೆ
ಒಡೆದು, ತಮ್ಮ ಮನೆಗಳ ತಳಪಾಯ ಕಂಬಗಳನ್ನೆಲ್ಲಾ ಗಟ್ಟಿಗೊಳಿಸಿಕೊಂಡು, ಅಧಿಕಾರ ಮತ್ತು
ಸಂಪನ್ಮೂಲಗಳನ್ನು ಪಡೆಯುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಬೇಕಿದೆ. ಈ ಮನೆಹಾಳರಿಗೆ
ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದರೆ ಇನ್ನೂ ಉತ್ತಮ. ಎಲ್ಲರೂ ನಿಮ್ಮನ್ನು
ಮಾದರಿಯಾಗಿ ಸ್ವೀಕರಿಸಿ ಉದ್ದಾರವಾಗಲಿ.
ಜೈ ಶ್ರೀರಾಮ್
- ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ