ಅದ್ಯಾಕೊ ಎಂದೋ ಕೇಳಿದ ಕಥೆಯೊಂದು ನೆನಪಾಯ್ತು. ಒಂಚೂರು ಬದಲಾಯಿಸಿ ಹೇಳುತ್ತಿದ್ದೇನಷ್ಟೇ.
ಎಲ್ಲಿಂದಲೋ
ಹಿಡಿದುಕೊಂಡು ಬಂದ ಎರಡು ಗಿಳಿಮರಿಗಳನ್ನು ಸಂತೆಯಲಿಟ್ಟು ಮಾರಲಾಗುತ್ತಿತ್ತು. ಒಬ್ಬ
ಕಲಾವಿದ ಒಂದನ್ನು ಕೊಂಡು ಮನೆಗೆ ತೆಗೆದುಕೊಂಡು ಹೋಗಿ ಸಾಕಿದ. ಇನ್ನೊಂದನ್ನು
ಕೋಮುವಾದಿಯೊಬ್ಬ ಖರೀದಿಸಿ ಸಾಕಿದ. ಮರಿಗಳು ಬೆಳೆದು ಗಿಳಿಗಳಾದವು. ತನ್ನ ಸುತ್ತಲಿನ
ಪರಿಸರಕ್ಕೆ ಸ್ಪಂದಿಸಿ ಮಾತನಾಡತೊಡಗಿದವು. ಕಲಾವಿದನ ಮನೆಗೆ ಯಾರೇ ಬಂದರೂ ಅಲ್ಲಿದ್ದ
ಗಿಳಿ 'ನಮಸ್ಕಾರ, ಬನ್ನಿ ಕುಳಿತುಕೊಳ್ಳಿ, ಚೆನ್ನಾಗಿದ್ದೀರಾ' ಎಂದು ಕಕ್ಕುಲಾತಿಯಿಂದ
ಉಲಿಯುತ್ತಿತ್ತು. ಅದನ್ನು ಕೇಳಿದವರಿಗೆಲ್ಲ ಸಂತಸವಾಗುತ್ತಿತ್ತು. ಕೋಮುವಾದಿಯ ಮನೆಯ
ಗಿಳಿ ಮಾತ್ರ ಯಾರೇ ಬಂದರೂ "ಹಿಡೀರಿ ಹೊಡೀರಿ ಬಿಡಬೇಡಿ ಬೆಂಕಿ ಹಚ್ಚಿ.." ಎಂದೆಲ್ಲಾ
ಅರಚುತ್ತಿತ್ತು. ಕೇಳಿದವರಿಗೆ ದಿಗಿಲಾದರೆ ಮನೆಯ ಮಾಲೀಕನಿಗೆ ಕರ್ಣಾನಂದವಾಗುತ್ತಿತ್ತು.
ಈಗ
ಅಂತದೇ ಒಂದು ಗಿಳಿಗೆ ಮಂತ್ರಿಗಿರಿ ಸಿಕ್ಕಿದೆ. 'ಸಾಹಿತಿ ಕಲಾವಿದರಿಗೆಲ್ಲಾ
ಮನೆಮುರುಕರು' ಎಂದು ಅರಚುತ್ತಿದೆ. ಕಲಾವಿದರ ಮನೆಯ ಗಿಳಿಸಂತಾನ ಮಾತ್ರ ಅದ್ಯಾಕೋ
ಆತಂಕದಿಂದ ಮೌನವಹಿಸಿವೆ.
ಹೌದು.. ಸಂಸ್ಕೃತಿ ಇಲಾಖೆಯ ಹಾಲಿ ಸಚಿವರ ನಾಲಿಗೆ ಮಾಮೂಲಿನಂತೆ ನಂಜು ಕಾರುತ್ತಿದೆ.
ಇಷ್ಟಕ್ಕೂ
ಆದದ್ದಾದರೂ ಏನಂದರೆ.. ಅಕಾಡೆಮಿ ಪ್ರಾಧಿಕಾರಗಳಿಗೆ ಆಯ್ಕೆ ಆದವರ ಅಧಿಕಾರದ ಅವಧಿಯನ್ನು
ಅಕಾಲಿಕವಾಗಿ ವಜಾ ಮಾಡಿದ ಬಿಜೆಪಿ ಸರಕಾರ ಮೂರು ತಿಂಗಳ ನಂತರ ಸಂಘಪರಿವಾರದ ಸಾಂಗತ್ಯ
ಹೊಂದಿರುವವರನ್ನು ಅಕಾಡೆಮಿಗಳ ನಿಯಮಾವಳಿ (ಬೈಲಾ) ಹಾಗೂ ಸಾಂಸ್ಕೃತಿಕ ನೀತಿಯನ್ನು
ಉಲ್ಲಂಘಿಸಿ ಆಯ್ಕೆ ಮಾಡಿತು. ಸಂಸ್ಕೃತಿ ಸಚಿವಾಲಯದ ಸಚಿವರಾದ ಮಾನ್ಯ ಸಿ.ಟಿ.ರವಿಯವರು
ಅಕ್ಟೋಬರ್ 18 ರಂದು ಹೊಸದಾಗಿ ಆಯ್ಕೆಯಾದ ಎಲ್ಲಾ ಅಕಾಡೆಮಿ ಪ್ರಾಧಿಕಾರಗಳ ಅಧ್ಯಕ್ಷರು
ಹಾಗೂ ಸದಸ್ಯರ ಸಭೆಯನ್ನು ವಿಧಾನಸಭೆಯ ಸಭಾಂಗಣದಲ್ಲಿ ಕರೆದಿದ್ದರು. ಎಲ್ಲರಿಗೂ
ಶುಭಹಾರೈಸಿ ಸಾಧ್ಯವಾದರೆ ಒಂದಿಷ್ಟು ಮಾರ್ಗದರ್ಶನ ನೀಡಿ ಕಳಿಸಿದ್ದರೆ ಈ ಲೇಖನ ಬರೆಯುವ
ಅಗತ್ಯವೇ ಇರಲಿಲ್ಲ.
ಆದರೆ..
ಹಿಂದೆ ಕಲಿತದ್ದನ್ನ ಈ ಕೋಮುಗಿಳಿ ಹೇಗೆ ತಾನೇ ಮರೆತು ಬದಲಾದೀತು. *"ಅಕಾಡೆಮಿ
ಪ್ರಾಧಿಕಾರಗಳಿಗೆ ಈಗ ಆಯ್ಕೆ ಮಾಡುವಾಗ ಮನೆಹಾಳರನ್ನು ದೂರವಿಟ್ಟಿದ್ದೇವೆ. ಸಾಂಸ್ಕೃತಿಕ
ಕ್ಷೇತ್ರವನ್ನು ಕದಡುವ, ಒಡೆಯುವ ಮನಸ್ಥಿತಿ ಇರುವವರನ್ನು ನಾವು ಆಯ್ಕೆ ಮಾಡಿಲ್ಲ.
ಮನೆಹಾಳು ಮಂದಿಗೆ ಅಧಿಕಾರ ಕೊಟ್ಟಿಲ್ಲ. ಸಾಂಸ್ಕೃತಿಕ ಕ್ಷೇತ್ರದ ಕೆಲ ಮನೆಮುರುಕರು
ಬಂದರೆ ಎಲ್ಲವನ್ನೂ ಹಾಳುಮಾಡುತ್ತಾರೆ..."* ಎಂದು ಸಂಘಪರಿವಾರದ ಈ ಪ್ರಮುಖ ಅಂಗದ ನಾಲಿಗೆ
ಉಲಿಯಿತು. ಇದನ್ನು ಕೇಳಿಯೂ ಆಯ್ಕೆಯಾದ ಋಣದಲ್ಲಿರುವ ಎಲ್ಲಾ ಅಕಾಡೆಮಿ ಪ್ರಾಧಿಕಾರದ
ಅಧ್ಯಕ್ಷ- ಸದಸ್ಯರುಗಳೂ ಮೌನ ಸಮ್ಮತಿ ಸೂಚಿಸಿ ಜಾಣಕಿವುಡು ಕುರುಡನ್ನು ತೋರಿದ್ದೊಂದು
ಸಾಂಸ್ಕೃತಿಕ ದುರಂತ.
ಪ್ರಭುತ್ವದ
ತಪ್ಪು ನಿರ್ಧಾರಗಳನ್ನು ಜನವಿರೋಧಿ ನಿಲುವುಗಳನ್ನು ವಿರೋಧಿಸುವವರನ್ನು ದೇಶದ್ರೋಹಿಗಳು
ಎಂದು ಆರೋಪಿಸಿ ಕಿರುಕುಳ ಕೊಡುವ ಉರಿ ನಾಲಿಗೆಯವರಲ್ಲಿ ಉದುರುವುದೇ ಇಂತಹ ನಂಜಿನ ಪದಗಳು.
ಇಲ್ಲಿ ಈಗ "ಮನೆಮುರುಕರು ಯಾರು? ಎನ್ನುವ ಪ್ರಶ್ನೆ ಪ್ರಮುಖವಾಗಿದೆ. ಯಾವ ಸಾಹಿತಿ
ಕಲಾವಿದರು ಯಾರ ಮನೆಯನ್ನು ಮುರಿದಿದ್ದಾರೆ? ಇಲ್ಲಿವರೆಗೂ ಅಕಾಡೆಮಿ ಪ್ರಾಧಿಕಾರಕ್ಕೆ
ಆಯ್ಕೆ ಆದವರಲ್ಲಿ ಯಾರು ಸಾಂಸ್ಕೃತಿಕ ಕ್ಷೇತ್ರವನ್ನು ಹಾಳುಮಾಡಿದ್ದಾರೆ?. ಕದಡುವ
ಒಡೆಯುವ ಮನಸ್ಥಿತಿ ಯಾರು ಹೊಂದಿದ್ದಾರೆ..?" ಎನ್ನುವುದಕ್ಕೆ ಮೊದಲು ಸಚಿವರು
ಉತ್ತರಿಸಬೇಕಾಗಿದೆ.
'ತಲೆ
ಕತ್ತರಿಸುತ್ತೇವೆ, ಬೆಂಕಿ ಹಚ್ಚುತ್ತೇವೆ' ಎಂದು ಸಾರ್ವಜನಿಕವಾಗಿ ಕಿಚ್ಚು ಹಚ್ಚುವ,
'ಸಂವಿಧಾನವನ್ನು ಬದಲಾಯಿಸುತ್ತೇವೆ' ಎಂದು ಹೇಳುವ, ಸಂವಿಧಾನವನ್ನೇ ಸಾರ್ವತ್ರಿಕವಾಗಿ
ಸುಡುವ ಇಂತಹ ದೇಶಭಂಜಕ ಸಂಘಪರಿವಾರದ ಅಂಗಗಳು ಮನೆಮುರುಕರೋ ಅಥವಾ ಸರಕಾರಗಳ ಜನದ್ರೋಹಿ
ನೀತಿಗಳ ವಿರುದ್ದ ಎಚ್ಚರದ ದ್ವನಿಯಾಗಿರುವ ಸಾಹಿತಿ ಕಲಾವಿದರು ಮನೆಮುರುಕರೋ?..
ಚಿಕ್ಕಮಗಳೂರಿನಲ್ಲಿ ಕೋಮುಸೌಹಾರ್ಧತೆಗೆ ಕಿಚ್ಚು ಹಚ್ಚಿ, ಬಾಬಾಬುಡನ್ ಗಿರಿಗೆ ದ್ವೇಷದ
ಬೆಂಕಿ ಇಟ್ಟು ಅದರ ಶಾಖದಲ್ಲಿ ಅಧಿಕಾರದ ಸುಖ ಅನುಭವಿಸುತ್ತಿರುವ ಈ ಸಚಿವ ಮಹಾಶಯರು
ಮತಧರ್ಮದ ಹೆಸರಲ್ಲಿ ಜನರನ್ನು ಒಡೆದಾಳುವ ಮನೆಮುರುಕರೋ.. ಇಲ್ಲವೇ ಕೋಮುಸೌಹಾರ್ದವನ್ನು
ಸಾರುವ ನಾಟಕಗಳನ್ನು ಮಾಡುವ ಕಲಾವಿದರು, ಧರ್ಮದ್ವೇಷವನ್ನು ವಿರೋಧಿಸುವಂತಹ ಬರಹಗಳನ್ನು
ಬರೆಯುವ ಸಾಹಿತಿಗಳು ಮನೆಮುರುಕರೋ..?
ನಿಜ
ಏನೆಂದರೆ ಹಲವಾರು ಸಾಹಿತಿ ಕಲಾವಿದರು ಕಲೆ ಸಾಹಿತ್ಯದ ಮೇಲಿನ ಪ್ರೀತಿ ಮತ್ತು
ವ್ಯಾಮೋಹದಿಂದ ತಮ್ಮ ಮನೆಯನ್ನು ಮುರಿದುಕೊಂಡು, ಕುಟುಂಬದ ವಿರೋಧವನ್ನು ಎದುರಿಸಿಕೊಂಡು
ಸಾಂಸ್ಕೃತಿಕ ಲೋಕಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ಕೊಟ್ಟಿರುವುದಕ್ಕೇ
ಬೇಕಾದಷ್ಟು ಉದಾಹರಣೆಗಳಿವೆ. ಆದರೆ ಬೇರೆಯವರ ಮನೆ ಮುರಿಯುವ ಇಲ್ಲವೇ ಸಾಂಸ್ಕೃತಿಕ
ಕ್ಷೇತ್ರವನ್ನು ಕದಡುವ ಇಲ್ಲವೇ ಒಡೆಯುವ ಕೆಲಸವನ್ನೂ ನಿಜವಾದ ಸಾಹಿತಿ ಕಲಾವಿದರು
ಮಾಡಿಲ್ಲ ಮಾಡುವುದೂ ಇಲ್ಲ.. ಹಾಗೇನಾದರೂ ಮಾಡಿದ್ದರೆ ಅಂತವರು ಸಾಹಿತಿ ಕಲಾವಿದರೇ ಅಲ್ಲ
ಎನ್ನುವ ಅರಿವು ಈ ನಂಜಿನ ನಾಲಿಗೆಯವರಿಗಿಲ್ಲ.
ಇಷ್ಟಕ್ಕೂ
ಈಗ ಸಾಂಸ್ಕೃತಿಕ ಕ್ಷೇತ್ರವನ್ನು ಕದಡಿ ಒಡೆದವರು ಯಾರು? ಇದೇ ಬಿಜೆಪಿ ಪಕ್ಷದ
ಸರಕಾರದವರು. ಎಲ್ಲಾ ಅಕಾಡೆಮಿ ಪ್ರಾಧಿಕಾರಗಳಿಗೆ ಆಯ್ಕೆಯಾಗಿದ್ದ ಅಧ್ಯಕ್ಷ ಸದಸ್ಯರುಗಳು
ತಮ್ಮ ಇತಿಮಿತಿಯಲ್ಲಿ ಅಧಿಕಾರಿಗಳ ಅಡೆತಡೆ ಕಿರುಕುಳಗಳ ನಡುವೆಯೂ ತಮ್ಮ ಕಾರ್ಯವ್ಯಾಪ್ತಿಯ
ಕೆಲಸಗಳನ್ನು ಮಾಡಿಕೊಂಡಿದ್ದರು. ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದರು. ಅವರೆಲ್ಲರ
ಅವಧಿ ಮುಗಿಯಲು ಇನ್ನೂ ಒಂದು ವರ್ಷ ಬಾಕಿ ಇತ್ತು. ಅವಧಿ ಪೂರ್ವದಲ್ಲಿ ಯಾವುದೇ
ಕಾರಣವನ್ನೂ ಕೊಡದೇ ಅಕಾಲಿಕವಾಗಿ ಅಕಾಡೆಮಿ ಪ್ರಾಧಿಕಾರಗಳ ಆಯ್ಕೆಗಳನ್ನೆಲ್ಲಾ
ಸಾರಾಸಗಟಾಗಿ ವಜಾಮಾಡಿದ್ದು ಸಾಂಸ್ಕೃತಿಕ ಕ್ಷೇತ್ರವನ್ನು ಕದಡುವ ಒಡೆಯುವ ಕೆಲಸ ಅಲ್ಲವಾ?
ಸರಕಾರಗಳೇ ಒಪ್ಪಿದ್ದ ಬೈಲಾ ನಡಾವಳಿಗಳು ಮತ್ತು ಸಾಂಸ್ಕೃತಿಕ ನೀತಿಯನ್ನು ಉಲ್ಲಂಘಿಸಿ
ಅವಧಿಪೂರ್ವದಲ್ಲಿ ಅಕಾಡೆಮಿ ಪ್ರಾಧಿಕಾರದ ಕಾರ್ಯನಿರತರನ್ನು ನಿಯಮ ಬಾಹಿರವಾಗಿ ಮನೆಗೆ
ಕಳಿಸಿದ್ದು ಮನೆಮುರುಕತನವಲ್ಲವಾ? ರಂಗಕೈಂಕರ್ಯದಲ್ಲಿ ತೊಡಗಿದ್ದ ರಂಗಾಯಣಗಳ
ನಿರ್ದೇಶಕರನ್ನು ಹೊರಗೆ ಕಳಿಸಿ ರಂಗಾಯಣದ ನಡಾವಳಿಗಳಿಗೆ ವಿರುದ್ದವಾಗಿ ರಂಗಸಮಾಜದ
ಸದಸ್ಯರ ಆಯ್ಕೆಯನ್ನೂ ರದ್ದು ಮಾಡಿದ್ದು ಕದಡುವ ಒಡೆಯುವ ಮನೆಮುರುಕ ನಡೆಯಲ್ಲವಾ?
ಹಿಂದಿನ
ಸರಕಾರವೊಂದು ಇದೇ ಕೆಲಸ ಮಾಡಿತೆಂದು ದ್ವೇಷಸಾಧನೆಗೋ, ಸ್ವಾರ್ಥ ಸಾಧನೆಗೋ ಈ ಸರಕಾರವೂ
ಅದನ್ನೇ ಮಾಡಿ, ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳು ಸರಿಯಾಗಿ ಕೆಲಸಮಾಡದಂತೆ ಅಡ್ಡಿ ಮಾಡಿ,
ಜನರ ತೆರಿಗೆ ಹಣ ಪೋಲಾಗುವುದಕ್ಕೆ ಕಾರಣವಾಗಿದ್ದು ಕದಡುವ ಕಾರ್ಯ ಅಲ್ಲವಾ?
ಹೇಳುತ್ತಾ
ಹೋದರೆ ಈ ಆಳುವ ಅಧಿಕಾರಸ್ತರು ಮಾಡುವ ಬೇಕಾದಷ್ಟು ಮನೆಮುರುಕ ಕೆಲಸಗಳ ಪಟ್ಟಿ ಇದೆ. ಈ
ಬಹುತೇಕ ಸ್ವಾರ್ಥಿ ರಾಜಕಾರಣಿಗಳ ಕಸುಬೇ ಸಮಾಜದ ಶಾಂತಿಯನ್ನು ಕದಡುವ ಹಾಗೂ
ಸೌಹಾರ್ಧತೆಯನ್ನು ಒಡೆಯುವುದಾಗಿದೆ. ಇವರು ಮಾಡುವ ಕೆಡುವುವ ಕೆಲಸಗಳನ್ನು ಮರೆಮಾಚಲು
ಕಟ್ಟುವ ಕೆಲಸದಲ್ಲಿ ನಿರತರಾಗಿರುವ ಸಾಹಿತಿ ಕಲಾವಿದರ ಮೇಲೆ ಆರೋಪ ಮಾಡುತ್ತಿರುವುದು
ಅಕ್ಷಮ್ಯ. ಇಂತಹ ನಂಜಿನ ಆರೋಪವನ್ನು ಆಲಿಸಿ ಅರಗಿಸಿಕೊಳ್ಳುವ ಬದಲು ಸಾಹಿತಿ ಕಲಾವಿದರು
ವಿರೋಧಿಸಲೇಬೇಕಿದೆ. ಸಾಂಸ್ಕೃತಿಕ ಕ್ಷೇತ್ರದ ಮೇಲೆ ಯಾರೇ ದಾಳಿ ದಬ್ಬಾಳಿಕೆ ಮಾಡಿದರೂ
ಜಾತಿ ಧರ್ಮ ಪಕ್ಷಗಳನ್ನು ಪಕ್ಕಕ್ಕಿಟ್ಟು ಪ್ರತಿಭಟಿಸುವ ಮಹತ್ಕಾರ್ಯವನ್ನು ಕನ್ನಡ
ಸಾಂಸ್ಕೃತಿಕ ಲೋಕ ಮಾಡುತ್ತಲೇ ಬಂದಿದೆ. ಸಾಹಿತಿ ಕಲಾವಿದರಿಗೆ ಆತ್ಮಗೌರವ ಹಾಗೂ
ಸ್ವಾಭಿಮಾನ ಎಲ್ಲಕ್ಕಿಂತಾ ಬಹುಮುಖ್ಯವಾದದ್ದು. ಸಾಂಸ್ಕೃತಿಕ ಹಿತಾಸಕ್ತಿಗೆ ದಕ್ಕೆಯಾದಾಗ
ಸಿಡಿದೇಳುವಂತಹುದು. "ಕಲಾವಿದರು ಕದಡುವವರಲ್ಲ ಕಟ್ಟುವವರು ಸಮಾಜದ ಎಚ್ಚರದ
ದ್ವನಿಗಳು" ಎಂಬುದನ್ನು ದೊಡ್ಡ ದ್ವನಿಯಲ್ಲಿ ಸಾರಬೇಕಿದೆ. ಸಾಧ್ಯವಾದ ಎಲ್ಲಾ
ರೀತಿಯಲ್ಲೂ ಸಚಿವರ ಅನುಚಿತ ಮಾತುಗಳನ್ನು ವಿರೋಧಿಸಬೇಕಿದೆ. ಎಲ್ಲವನ್ನೂ ಒಡೆದಾಳುವ ಹಾಗೆ
ಸಾಂಸ್ಕೃತಿಕ ಕ್ಷೇತ್ರವನ್ನೂ ಒಡೆಯುವ ಹುನ್ನಾರದ ವಿರುದ್ದ ಸಿಡಿದೇಳಬೇಕಿದೆ.
ಇಲ್ಲವಾದರೆ ಸಾಂಸ್ಕೃತಿಕ ಲೋಕದ ಮೇಲೆ ಪ್ರಭುತ್ವ ಮಾಡುವ ದಬ್ಬಾಳಿಕೆ ದಮನಗಳಿಗೆ
ಬಲಿಯಾಗಲು ಸಿದ್ದವಾಗಬೇಕಿದೆ.
ಅಗೋ
ಅಲ್ಲಿ ಕೋಮುವಾದಿಗಳು ಸಾಕಿದ ಕೋಮುಸೌಹಾರ್ಧ ಕದಡಿದ ಗಿಳಿ " ಮನೆಮುರುಕರು,
ಮನೆಮುರುಕರು.." ಅಂತಾ ಅರಚುತ್ತಿದೆ. ಕಲಾವಿದರ ಮನೆಯಂಗಳದ ಗಿಳಿಗಳು ಈಗ ಸುಮ್ಮನಿದ್ದರೆ
ಸರ್ವನಾಶ. ಮೌನವಾಗಿದ್ದರೆ ವಿನಾಶ..
- ಶಶಿಕಾಂತ ಯಡಹಳ್ಳಿ