ಮಂಗಳವಾರ, ಜನವರಿ 30, 2024

ರಂಗಾಯಣಗಳಿಗೆ ನಿರ್ದೇಶಕರು ಬೇಕಾ? ಇಲ್ಲವೇ ಆಡಳಿತಾಧಿಕಾರಿಗಳೇ ಸಾಕಾ?

ತಹ ತಹ - 501

ರಂಗಾಯಣಗಳಿಗೆ ನಿರ್ದೇಶಕರು ಬೇಕಾ? ಇಲ್ಲವೇ ಆಡಳಿತಾಧಿಕಾರಿಗಳೇ ಸಾಕಾ?


ಕನ್ನಡ ನಾಡಿನ ಹೆಮ್ಮೆಯ ಸರಕಾರಿ ಸಾಂಸ್ಕೃತಿಕ ಸಂಸ್ಥೆ ರಂಗಾಯಣ ಎಂದು ಹೆಮ್ಮೆಯಿಂದ ಹೇಳುವ ಕಾಲವೊಂದಿತ್ತು. ಬಿ.ವಿ.ಕಾರಂತರ ದೂರದೃಷ್ಟಿಯ ಫಲವಾಗಿ ಅಸ್ತಿತ್ವಕ್ಕೆ ಬಂದ ಮೈಸೂರು ರಂಗಾಯಣ ಈಗ ಕರ್ನಾಟಕದಾದ್ಯಂತ ಮೈಸೂರು ಸೇರಿದಂತೆ ಧಾರವಾಡ, ಕಲಬುರಗಿ, ಶಿವಮೊಗ್ಗ, ಕಾರ್ಕಳ ಹಾಗೂ ದಾವಣಗೆರೆ ಹೀಗೆ ಆರು ಪ್ರದೇಶಗಳಲ್ಲಿ ಸ್ಥಾಪನೆಗೊಂಡಿದೆ. ಆಧುನಿಕ ರಂಗಭೂಮಿ, ವೃತ್ತಿರಂಗಭೂಮಿ, ಜಾನಪದ ರಂಗಭೂಮಿಯನ್ನು ಉಳಿಸಿ ಬೆಳೆಸುವ ಕಾಯಕವನ್ನು ಈ ಎಲ್ಲಾ ರಂಗಾಯಣಗಳ ಹೊಣೆಗಾರಿಕೆಯಾಗಿದೆ.

ಆದರೆ ಈಗ ಆಗುತ್ತಿರುವುದೇನು.? ಎಲ್ಲಾ ರಂಗಾಯಣಗಳೂ ನಿರ್ದೇಶಕರಿಲ್ಲದೇ ಏದುಸಿರು ಬಿಡುತ್ತಿವೆ. ಒಂದೆರಡು ಮಲಗಿವೆ, ಇನ್ನೆರಡು ಹೇಗೋ ಉಸಿರಾಡುತ್ತಿವೆ, ಇರುವುದರಲ್ಲೇ ಮೈಸೂರಿನ ರಂಗಾಯಣ ಒಂದಿಷ್ಟು ಅಸ್ತಿತ್ವ ಉಳಿಸಿಕೊಂಡಿದೆ. ಯಾಕೆ ಹೀಗೆ? 

ಕಾರಣ ಎರಡು. ಒಂದು ಕಾಂಗ್ರೆಸ್ ಸರಕಾರ ಬಂದು ಎಂಟು ತಿಂಗಳಾಗಿದ್ದರೂ ಇನ್ನೂ ಯಾವುದೇ ರಂಗಾಯಣಕ್ಕೆ ನಿರ್ದೇಶಕರ ನೇಮಕಾತಿ ಆಗದೇ ಇರುವುದು. ಎರಡನೆಯದಾಗಿ ರಂಗಚಟುವಟಿಕೆಗಳಿಗೆ ಬೇಕಾದಷ್ಡು ಅನುದಾನ ಬಿಡುಗಡೆಯಾಗದೇ ಇರುವುದು. ಒಂದು ಇನ್ನೊಂದರ ಮೇಲೆ ಅವಲಂಬಿತವಾಗಿವೆ. ಸರಕಾರಕ್ಕೆ ಇವು ಎರಡೂ ಮುಖ್ಯವೆಂದು ಅನ್ನಿಸುತ್ತಿಲ್ಲ. ಹಿರಿಯ ರಂಗಕರ್ಮಿಗಳೂ ಇದಕ್ಕಾಗಿ ತೀವ್ರ ಒತ್ತಡ ಹೇರುತ್ತಿಲ್ಲ. ಅವರಿಗೂ ಅವರದೇ ಆದ ಕಾರಣಗಳಿವೆ. ಎಲ್ಲಿ ಸರಕಾರದ ವಿಳಂಬ ಧೋರಣೆಯನ್ನು ಪ್ರಶ್ನಿಸಿದರೆ ತಮಗೆ ಸಿಗಬಹುದಾದ ಅಕಾಡೆಮಿ ಪ್ರಾಧಿಕಾರ ರಂಗಾಯಣಗಳ ಹುದ್ದೆಗಳು ಸಿಕ್ಕದೆ ಹೋಗಬಹುದು ಎಂಬುದು ಹಿರಿಯ ಸಾಹಿತಿ ಕಲಾವಿದ ರಂಗಕರ್ಮಿಗಳ ಆತಂಕ ಇರಬಹುದು. ಒತ್ತಡ ಬರದೇ, ಯಾವುದೇ ಲಾಭವಿಲ್ಲದೇ ಯಾವುದನ್ನೂ ಮಾಡಲು ಸರಕಾರಗಳು ಸಿದ್ದವಿರುವುದಿಲ್ಲ.

ಸಾಂಸ್ಕೃತಿಕ ಸಂಸ್ಥೆಗಳಿಗೆ ಆಯ್ಕೆ ಮಾಡುವುದು ರಾಜಕೀಯದವರಿಗೆ ಓಟಿನ ದಾರಿಯೂ ಅಲ್ಲಾ, ಅನುದಾನ ಕೊಡುವುದರಿಂದ ಲಾಭವೂ ಇಲ್ಲ. ಹೀಗಾಗಿ ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳ ಬಗ್ಗೆ ಈ ಸರಕಾರಗಳಿಗೆ ಹಾಗೂ ಸಚಿವರುಗಳಿಗೆ ದಿವ್ಯ ನಿರ್ಲಕ್ಷ. ಇದಕ್ಕೆ ವ್ಯತಿರಿಕ್ತವಾಗಿ ಜಾತಿ ಆಧಾರಿತ ಜಯಂತಿಗಳನ್ನು ಆಯೋಜಿಸಲು ಅಧಿಕಾರಿಗಳು, ಸರಕಾರಗಳು ಹಾಗೂ ಸಚಿವರುಗಳು ಅತೀ ಆಸಕ್ತಿ ವಹಿಸುತ್ತವೆ. ಯಾಕೆಂದರೆ ಅಲ್ಲಿ ಓಟು ನೋಟು ಎರಡೂ ದೊರೆಯುತ್ತವೆ. ವಜ್ರಮಹೋತ್ಸವದ ನೆಪದಲ್ಲಿ 24 ಕೋಟಿ ಖರ್ಚು ಮಾಡಿ ಇರುವುದರಲ್ಲೇ ಸುಸಜ್ಜಿತವಾಗಿರುವ ರವೀಂದ್ರ ಕಲಾಕ್ಷೇತ್ರವನ್ನು ಆಧುನೀಕರಣ ಮಾಡಲು ಖುದ್ದಾಗಿ ಸಂಸ್ಕೃತಿ ಇಲಾಖೆಯ ಸಚಿವರೇ ಮುತುವರ್ಜಿವಹಿಸುತ್ತಾರೆ. ಅದೇ ಆಸಕ್ತಿ ಸರಕಾರಿ ಕೃಪಾಪೋಷಿತ ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕಾತಿ ಮಾಡಲು ಹಾಗೂ ಅನುದಾನ ಬಿಡುಗಡೆ ಮಾಡಲು ತೋರುವುದಿಲ್ಲ.

ಈಗ ರಂಗಾಯಣಗಳು ಸರಕಾರಿ ಆಡಳಿತಾಧಿಕಾರಿಗಳ ಸುಪರ್ಧಿಯಲ್ಲಿವೆ. ರಂಗಭೂಮಿಯ ಆಳ ಅಗಲ ಎತ್ತರ ಗೊತ್ತಿಲ್ಲದ, ಕ್ರಿಯಾಶೀಲತೆ ಇಲ್ಲದ ಅಧಿಕಾರಿಗಳು ಸಾಂಸ್ಕೃತಿಕ ಸಂಸ್ಥೆಯನ್ನು ಮುನ್ನಡೆಸಲು ಹೇಗೆ ಸಾಧ್ಯ? ಆಡಳಿತಕ್ಕೂ ಕ್ರಿಯಾಶೀಲತೆಗೂ ಸಾಮ್ಯತೆ ಅತೀ ಕಡಿಮೆ. ಇಂತಹ ಸಂದರ್ಭದಲ್ಲಿ ಆಡಳಿತಾಧಿಕಾರಿಗಳ ಮೇಲೆಯೇ ರಂಗಾಯಣಗಳ ಪಯಣ ಮುಂದುವರಿಯಲಿ ಎನ್ನುವ ಸರಕಾರದ ಧೋರಣೆ ರಂಗಕ್ರಿಯೆಗೆ ಮಾರಕ. 

ಈಗ ಮೈಸೂರು ರಂಗಾಯಣ ಪ್ರತಿ ವರ್ಷ ಆಚರಿಸುವ "ಬಹುರೂಪಿ ರಾಷ್ಟ್ರೀಯ ರಂಗೋತ್ಸವ- 2024" ಆಯೋಜಿಸಬೇಕಿದೆ. ಮಾರ್ಚ್ 7 ರಿಂದ 11ರವರೆಗೆ ಬಹುರೂಪಿ ನಾಟಕೋತ್ಸವಕ್ಕೆ ದಿನಾಂಕವೂ ನಿಗಧಿಯಾಗಿದೆ. ಆದರೆ ರಂಗಾಯಣ ಯಜಮಾನರಿಲ್ಲದ ಮನೆಯಾಗಿದೆ. ರಂಗಾಯಣದ ಬಹುತೇಕ ಅನುಭವಿ ಹಿರಿಯ ಕಲಾವಿದರು ರಿಟೈರ್ಡ್ ಆಗಿಯಾಗಿದೆ. ಮೊದಲು ನಿರ್ದೇಶಕರನ್ನು ಆಯ್ಕೆ ಮಾಡಿ ನಂತರ ರಂಗೋತ್ಸವ ಮಾಡುವುದು ಅಪೇಕ್ಷಣೀಯ. ಈ ಕುರಿತು ಮೈಸೂರು ರಂಗಾಯಣದ ಆಡಳಿತಾಧಿಕಾರಿ ನಿರ್ಮಲಾ ಮಠಪತಿವರನ್ನು ಕೇಳಿದರೆ "ನಿರ್ದೇಶಕರಿಲ್ಲದ ಕೊರತೆ ಏನೂ ಕಾಣುತ್ತಿಲ್ಲ. ಎಂದಿನಂತೆ ಚಟುವಟಿಕೆಗಳು ನಡೆಯುತ್ತಿದ್ದು ರಂಗೋತ್ಸವದ ತಯಾರಿ ನಡೆದಿದೆ" ಎಂದು ಉತ್ತರಿಸುತ್ತಾರೆ. ಹಾಗಾದರೆ ನಿರ್ದೇಶಕರ ಅಗತ್ಯವೇ ಇಲ್ಲವೆಂದಮೇಲೆ ಎಲ್ಲಾ ರಂಗಾಯಣಗಳ‌ನ್ನು ಖಾಯಂ ಆಗಿ ಅಧಿಕಾರಿಗಳೇ ನೋಡಿಕೊಳ್ಳಬಹುದಾಗಿದೆ ಅಲ್ಲವೇ? 'ನಿರ್ದೇಶಕರಿಗಾಗಿ ಕಾಯದೇ ರಂಗಾಯಣದ ಚಟುವಟಿಕೆಗಳನ್ನು ನೋಡಿಕೊಳ್ಳಿ' ಎಂದು ಸಂಸ್ಕೃತಿ ಇಲಾಖೆಯ ಸಚಿವರು ಎಲ್ಲಾ ಆಡಳಿತಾಧಿಕಾರಿಗಳಿಗೆ ಸೂಚಿಸಿದ್ದಾರಂತೆ. 

ಅಲ್ಲಿಗೆ ಗೊತ್ತಾಯಿತಲ್ಲ ರಂಗಾಯಣ ಅಧಿಕಾರಿಗಳ ಪಾಲು ಎಂದು. ರಂಗಾಯಣ ಎಂದರೆ ಈವೆಂಟ್ ಮ್ಯಾನೇಜ್ಮೆಂಟ್ ಎಂದು ಸಂಸ್ಕೃತಿ ಸಚಿವರು ಭಾವಿಸಿದಂತಿದೆ. ಜಯಂತಿಗಳ ಮಾದರಿಯಲ್ಲಿ ಅಧಿಕಾರಿಗಳ ಮೂಲಕ ನಿಭಾಯಿಸಬಹುದು ಎಂದು ನಿರ್ಧರಿಸಿದಂತಿದೆ. ಆದರೆ ರಂಗ ಸಂಸ್ಥೆ ಮುನ್ನಡೆಸುವುದು, ನಾಟಕಗಳನ್ನು ಕಟ್ಟುವುದು ಎಂದರೆ ಆಡಳಿತ ನಡೆಸಿದಂತಲ್ಲಾ, ಈವೆಂಟ್ ಮ್ಯಾನೇಜ್ಮೆಂಟ್ ಅಂತೂ ಮೊದಲೇ ಅಲ್ಲ. ನಾಟಕದ ಆಯ್ಕೆಯಿಂದಾ ಸೂಕ್ತ ಕಲಾವಿದರು ನಿರ್ದೇಶಕರು ತಂತ್ರಜ್ಞರ ಆಯ್ಕೆಯವರೆಗೂ, ತಾಲಿಂನಿಂದ ಪ್ರದರ್ಶನದವರೆಗೂ ಕ್ರಿಯಾಶೀಲವಾಗಿ ಯೋಚಿಸುವವರು ಬೇಕಾಗುತ್ತದೆ. ಹಾಗೆ ಕಟ್ಟಿದ ನಾಟಕವನ್ನು ರಂಗಾಸಕ್ತರಿಗೆ ಪರಿಣಾಮಕಾರಿಯಾಗಿ ತಲುಪಿಸಬೇಕಾಗುತ್ತದೆ. ಅದನ್ನು ರಂಗಭೂಮಿಯಲ್ಲಿ ಅಪಾರವಾದ ಅನುಭವ ಇರುವವರು ಮಾತ್ರ ಮಾಡಲು ಸಾಧ್ಯ. ಅಂತಹ ಕ್ರಿಯಾಶೀಲ ನಿರ್ದೇಶಕರಿಗಾಗಿ ರಂಗಾಯಣಗಳು ಕಾಯುತ್ತಿವೆ. ಆದರೆ ಸರಕಾರ ಮನಸ್ಸು ಮಾಡುತ್ತಿಲ್ಲ. 

ವಾರ್ಷಿಕ ಮುವತ್ತು ಲಕ್ಷ ಅನುದಾನ ಕೊಟ್ಟು ರಂಗಾಯಣ ಎನ್ನುವ ಬಿಳಿಯಾಣೆಯನ್ನು ಚೆನ್ನಾಗಿ ಸಾಕಿ ಎಂದು ಹೇಳಿದರೆ ಅಧಿಕಾರಿಗಳಾಗಾದರೂ ಏನು ಮಾಡಲು ಸಾಧ್ಯ? ಈ ಹಣ ಕಲಾವಿದರು ಹಾಗೂ ಸಿಬ್ಬಂದಿಯ ಸಂಬಳಕ್ಕೆ ಹಾಗೂ ಕಚೇರಿ ನಿರ್ವಹಣೆಗೇ ಸಾಲದು ಇನ್ನು ನಾಟಕಗಳನ್ನು ನಿರ್ಮಿಸುವುದು ಹೇಗೆ? ರಂಗ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುವುದು ಹೇಗೆ? ರಂಗೋತ್ಸವಗಳನ್ನು ನಡೆಸುವುದು ಹೇಗೆ? ಅಧಿಕಾರಿಗಳಿಗೆ ರಂಗಭೂಮಿ ಕುರಿತ ಆಳವಾದ ಅನುಭವವೂ ಇಲ್ಲ, ಮಹತ್ವಾಂಕಾಕ್ಷೆಗಳಂತೂ ಮೊದಲೇ ಇರುವುದಿಲ್ಲ. ಬೇಕಾದಷ್ಟು ಆರ್ಥಿಕ ನೆರವೂ ಸಿಕ್ಕುವುದಿಲ್ಲ. ಇದ್ದದ್ದರಲ್ಲಿ ಹೇಗೋ ಸಾವರಿಸಿಕೊಂಡು ಸಂತೆ ಹೊತ್ತಿಗೆ ಮೂರು ಮೊಳ ನೇಯ್ದು ಮಾರುವ ಕೆಲಸ ಮಾಡಬಹುದಷ್ಟೇ. 

ಕಳೆಗುಂದಿದ ರಂಗಾಯಣಕ್ಕೆ ಮತ್ತೆ ಹೊಳಪು ತರಲು ಮೊದಲು ಎಲ್ಲಾ ರಂಗಾಯಣಗಳಿಗೂ ಅನುಭವೀ ರಂಗಕರ್ಮಿಗಳನ್ನು ನಿರ್ದೇಶಕರನ್ನಾಗಿ ಸರಕಾರ ಕೂಡಲೇ ಆಯ್ಕೆ ಮಾಡಬೇಕಾಗಿದೆ. ಈ ಹಿಂದಿನ ಬಿಜೆಪಿ ಸರಕಾರವು ಕೇಶವಕೃಪಾ ಕಟಾಕ್ಷದವರನ್ನು ನೇರವಾಗಿ ನೇಮಕ ಮಾಡಿ ರಂಗಾಯಣವನ್ನು ಸಂಘದ ಕಾರ್ಯಾಲಯ ಮಾಡಿದಂತೆ ಮಾಡದೇ ರಂಗಸಮಾಜದ ಸಲಹೆ ಸೂಚನೆಯ ಮೇರೆಗೆ ನಿರ್ದೇಶಕರ ಆಯ್ಕೆ ನಡೆಯಬೇಕಿದೆ. ನಿರ್ದೇಶಕರುಗಳ ಆಯ್ಕೆಗೆ ಪೂರ್ವಭಾವಿಯಾಗಿ ರಂಗಸಮಾಜಕ್ಕೆ ರಂಗಾನುಭವಿ ಸದಸ್ಯರುಗಳನ್ನು ಸಂಸ್ಕೃತಿ ಇಲಾಖೆ ಆಯ್ಕೆ ಮಾಡಬೇಕಿದೆ. ರಂಗಸಮಾಜದ ಸದಸ್ಯರುಗಳು ಸಭೆ ಸೇರಿ ಸೂಚಿಸುವ ಅರ್ಹ ಕ್ರಿಯಾಶೀಲ ರಂಗಕರ್ಮಿಗಳ ಪಟ್ಟಿಯಲ್ಲಿ ಅತ್ಯಂತ ಸೂಕ್ತವಾದವರನ್ನು ರಂಗಾಯಣಗಳಿಗೆ ನಿರ್ದೇಶಕರನ್ನಾಗಿ ಸಚಿವಾಲಯವು ನೇಮಕಾತಿ ಮಾಡಬೇಕಿದೆ. ನಾಳೆಯಿಂದಲೇ ಈ ಪ್ರಕ್ರಿಯೆ ಶುರುಮಾಡಿದರೂ ನಿರ್ದೇಶಕರುಗಳ ಅಯ್ಕೆಗೆ ಕನಿಷ್ಟ ಎರಡು ಮೂರು ತಿಂಗಳುಗಳೇ ಬೇಕಾಗಬಹುದು. ಈ ನಿಟ್ಟಿನಲ್ಲಿ ಸಂಸ್ಕೃತಿ ಇಲಾಖೆಯ ಸಚಿವರು ಕಾರ್ಯಪ್ರವೃತ್ತರಾಗಬೇಕಾಗಿದೆ. 

ಆದರೆ ಅಧಿಕಾರಿಗಳ ಮೂಲಕ ಸಾಂಸ್ಕೃತಿಕ ಸಂಸ್ಥೆಗಳ ಮೇಲೆ ಹಿಡಿತ ಹೊಂದಲು ಸಂಸ್ಕೃತಿ ಸಚಿವಾಲಯ ನಿರ್ಧರಿಸಿದಂತಿದೆ. ಸುವರ್ಣ ಕರ್ನಾಟಕದ ವಿಶೇಷ ಪ್ರಶಸ್ತಿಗಳಿಗೆ ಸಲಹಾ ಸಮಿತಿಯನ್ನು ನೇಮಿಸುವ ಬದಲಾಗಿ ನೇರವಾಗಿ ಅಧಿಕಾರಿಗಳೇ ಸಾಧಕರ ಹೆಸರನ್ನು ಸೂಚಿಸುವಂತೆ ಇಲಾಖೆಯ ಸಚಿವರು ಪರಮಾನು ಹೊರಡಿಸಿದ್ದಾರೆ. ಯಾವುದೇ ಅಡೆತಡೆ ಇಲ್ಲದೇ ತಮಗೆ ಬೇಕಾದವರಿಗೆ ಪ್ರಶಸ್ತಿ ಕೊಡಲು ಆಯ್ಕೆ ಸಮಿತಿಯ ಬದಲಾಗಿ ಅಧಿಕಾರಿಗಳ ಆಯ್ಕೆಗೆ ಮನ್ನಣೆ ಕೊಡಲಾಗಿದೆ. ಇದೇ ರೀತಿ ರಂಗಾಯಣಗಳ ಪರಿಸ್ಥಿತಿ ಸಹ. ಅಧಿಕಾರಿಗಳ ಮೂಲಕ ರಂಗಾಯಣವನ್ನು ನೇರವಾಗಿ ಸಚಿವಾಲಯ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು. ಯಾವುದೇ ಅಧಿಕಾರಿ ಸಚಿವರನ್ನು ಪ್ರಶ್ನಿಸುವ ಮಾತೇ ಇಲ್ಲ. ಅದೇ ಅನುಭವಿ ಹಿರಿಯ ರಂಗಕರ್ಮಿಗಳನ್ನು ರಂಗಾಯಣಗಳಿಗೆ ನಿರ್ದೇಶಕರನ್ನಾಗಿ ನೇಮಿಸಿದ್ದೇ ಆದರೆ ಸಚಿವಾಲಯದ ರಂಗವಿರೋಧಿ ಆದೇಶಗಳನ್ನು ಪ್ರಶ್ನಿಸುತ್ತಾರೆ. ಹೆಚ್ಚುವರಿ ಅನುದಾನಗಳನ್ನು ಕೇಳುತ್ತಾರೆ. ಆಡಳಿತಾಧಿಕಾರಿ ಹಾಗೂ ನಿರ್ದೇಶಕರ ನಡುವೆ ಸಂಘರ್ಷ ನಿರಂತರವಾಗಿರುತ್ತದೆ. ಅದಕ್ಕೆ ನಿರ್ದೇಶಕರು ಯಾಕೆ ಬೇಕು? ಅಧಿಕಾರಿಗಳೇ ಸಾಕು! ಎನ್ನುವ ನಿರ್ಧಾರಕ್ಕೆ ಸಂಸ್ಕೃತಿ ಇಲಾಖೆ ಹಾಗೂ ಸರಕಾರ ಬಂದಂತಿದೆ. ಈ ನಿರ್ಣಯ ಖಂಡಿತವಾಗಿಯೂ ಖಂಡನೀಯ. 

ಹೀಗೆ ಸರಕಾರಿ ಅನುದಾನಿತ ಸಾಂಸ್ಕೃತಿಕ ಸಂಸ್ಥೆಗಳನ್ನು ಅಧಿಕಾರೀಕರಣ ಮಾಡುವ ಹುನ್ನಾರವನ್ನು ಸಾಂಸ್ಕೃತಿಕ ಲೋಕದ ಸಾಹಿತಿ ಕಲಾವಿದರು, ರಂಗಕರ್ಮಿ ತಂತ್ರಜ್ಞರುಗಳು ವಿರೋಧಿಸಲೇಬೇಕಿದೆ. ಆದಷ್ಟು ಬೇಗ ಅಕಾಡೆಮಿ ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ನೇಮಕಾತಿ ಮಾಡಲು ಸರಕಾರವನ್ನು ಒತ್ತಾಯಿಸಬೇಕಿದೆ. ರಂಗಸಮಾಜಕ್ಕೆ ಸದಸ್ಯರುಗಳನ್ನು ಆಯ್ಕೆ ಮಾಡಿ ಆ ಮೂಲಕ ರಂಗಾಯಣಗಳಿಗೆ ನಿರ್ದೇಶಕರನ್ನು ನೇಮಕಾತಿ ಮಾಡಲು ಕ್ರಮ ತೆಗೆದುಕೊಳ್ಳಬೇಕೆಂದು ನೇರವಾಗಿ ಮುಖ್ಯಮಂತ್ರಿಗಳಿಗೆ ಆಗ್ರಹಿಸಬೇಕಿದೆ. ರಂಗಾಯಣಗಳು ಮತ್ತೆ ಮೊದಲಿನಂತೆ ಕ್ರಿಯಾಶೀಲವಾಗಬೇಕಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ರಂಗಭೂಮಿಯ ಹೆಸರನ್ನು ಉಳಿಸಿ ಬೆಳೆಸಬೇಕಿದೆ.

- ಶಶಿಕಾಂತ ಯಡಹಳ್ಳಿ.
  30-01-2024

ಹನುಮಧ್ವಜದ ಹೆಸರಲ್ಲಿ ಭಾವಪ್ರಚೋದನೆ; ಚುನಾವಣಾ ಪೂರ್ವತಯಾರಿ ಯೋಜನೆ

ತಹ ತಹ - 500

ಹನುಮಧ್ವಜದ ಹೆಸರಲ್ಲಿ ಭಾವಪ್ರಚೋದನೆ; ಚುನಾವಣಾ ಪೂರ್ವತಯಾರಿ ಯೋಜನೆ


ಕೇಸರಿ ಪಡೆಗಳ ಪೂರ್ವ ತಯಾರಿ ಯೋಜನೆ ಅಂದ್ರೆ ಹೀಗಿರುತ್ತದೆ. ಜನರಲ್ಲಿರುವ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಿ, ಶಾಂತಿ ಸೌಹಾರ್ಧತೆಗೆ ಭಂಗ ತಂದು, ಅಸಹನೆ ಸೃಷ್ಟಿಸುವುದು ಈ ಮತಾಂಧ ಸಂಘ ಪರಿವಾರಿಗರಿಗೆ ಸುಲಭದ ಸಂಗತಿಯಾಗಿದೆ. ಅದಕ್ಕೆ ಉದಾಹರಣೆಯಾಗಿ ಮಂಡ್ಯದ ಕೆರಗೋಡು ಪ್ರಕರಣವನ್ನು ನೋಡಬಹುದಾಗಿದೆ. ಪ್ಯಾಸಿಸ್ಟ್ ಶಕ್ತಿಗಳ ಪರ್ಪೆಕ್ಟ್ ಪ್ಲಾನಿಂಗ್ ಹೇಗಿರುತ್ತದೆ ಎಂದು ತಿಳಿಯಬಹುದಾಗಿದೆ. 

ಎಲ್ಲಿ ಬಿಜೆಪಿ ಶಕ್ತಿ ಕಡಿಮೆ ಇದೆಯೋ ಅದನ್ನು ವಿಸ್ತರಿಸಲು ಅಲ್ಲಿಯ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಕೆರಗೋಡನ್ನು ಆಯ್ಕೆ ಮಾಡಿಕೊಳ್ಳಲಾಯ್ತು.

ಅಲ್ಲಿರುವ ಬಿಜೆಪಿ ಬೆಂಬಲದ ಧಾರ್ಮಿಕ ಮತಾಂಧ ಸಂಘಟನೆಯನ್ನು ಗುರುತಿಸುವುದು. ಗೌರಿಶಂಕರ ಸೇವಾ ಟ್ರಸ್ಟ್ ನ್ನು ಗುರುತಿಸಿ ದ್ವಜಸ್ಥಂಭ ಸ್ಥಾಪನೆಗೆ ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಅಲ್ಲಿ ಸಲ್ಲಿಸಲಾಯ್ತು.

ಗ್ರಾಮ ಪಂಚಾಯತಿಯ ಸರಕಾರಿ ಜಾಗದಲ್ಲಿ ಧಾರ್ಮಿಕ ಧ್ವಜಸ್ಥಂಭ ಸ್ಥಾಪಿಸಲು ಕಾನೂನಲ್ಲಿ ಅವಕಾಶ ಇಲ್ಲವಾದ್ದರಿಂದ ರಾಷ್ಟ್ರದ್ವಜ ಹಾಗೂ ಕನ್ನಡ ದ್ವಜ ಹಾರಿಸಲೆಂದು ದ್ವಜಸ್ಥಂಭ ನಿರ್ಮಿಸುತ್ತೇವೆಂದು ಮುಚ್ಚಳಿಕೆ ಬರೆದುಕೊಟ್ಟು ಪಂಚಾಯತಿಯಿಂದ ಅನುಮತಿ ಪಡೆದು ನಿರ್ಮಾಣ ಕಾರ್ಯ ಶುರುಮಾಡುವುದು. ಹೇಳದ್ದು 60 ' ಎತ್ತರದ ಕಂಬ, ನಿರ್ಮಿಸಿದ್ದು 108 ಅಡಿ ಎತ್ತರದ ಸ್ಥಂಭ. ಎತ್ತರದ ಬಗ್ಗೆ ಯಾರೂ ಕೇಳಲಿಲ್ಲ ಕೇಳಿದ್ದರೂ ರಾಷ್ಟ್ರದ್ವಜ ಎನ್ನುವ ನೆಪ. ಪ್ರಶ್ನಿಸಿದ್ದರೆ ರಾಷ್ಟ್ರದ್ರೋಹಿ ಎನ್ನುವ ಆರೋಪ.

ಮುಚ್ಚಳಿಕೆ  ಪ್ರಕಾರ ಆ ಸ್ತಂಭದಲ್ಲಿ ಹಾರಿಸಬೇಕಾದದ್ದು ರಾಷ್ಟ್ರಧ್ವಜ, ಆದರೆ ಧರ್ಮಾಂಧರ ಯೋಜನೆಯ ಪ್ರಕಾರ ಅಲ್ಲಿ ಹಾರಿಸಿದ್ದು ಹನುಮಧ್ವಜ. ಯಾಕೆಂದು ಕೇಳಿದಾಗ ಮೂರು ದಿನ ಹಾರಿಸಿ ಇಳಿಸುತ್ತೇವೆಂದು ಪಂಚಾಯತಿಯವರಿಗೆ ಸಮಜಾಯಿಸಿ ಕೊಡಲಾಯಿತಾದರೂ ಅದನ್ನೂ ಉಲ್ಲಂಘಿಸಿ ಹನುಮಧ್ವಜ ಇಳಿಸಲು ನಿರಾಕರಣೆ.

ಜನವರಿ 26 ಭಾರತದ ಗಣರಾಜ್ಯೋತ್ಸವದ ದಿನ ರಾಷ್ಟ್ರದ್ವಜ ಹಾರಬೇಕಿತ್ತು ಆದರೆ ಹನುಮಧ್ವಜ ತೆರುವಾಗಲೇ ಇಲ್ಲ. ವಿಷಯ ಜಿಲ್ಲಾಡಳಿತಕ್ಕೆ ತಲುಪಿತೊ ಅಥವಾ ಇವರೇ ತಲುಪಿಸಿದರೋ ಗೊತ್ತಿಲ್ಲ. ಪೊಲೀಸರ ರಕ್ಷಣೆಯಲ್ಲಿ ಬಂದ ಅಧಿಕಾರಿಗಳು ಹನುಮಧ್ವಜ ಇಳಿಸಿ ರಾಷ್ಟ್ರದ್ವಜ ಹಾರಿಸಿ ತಮ್ಮ ಕರ್ತವ್ಯ ನಿಭಾಯಿಸಿದರು.

ಇಲ್ಲಿಗೆ ಕೇಸರಿಪಡೆಯವರು ಅಂದುಕೊಂಡಂತೆ ಮೊದಲನೇ ಹಂತದ ಕಾರ್ಯಾಚರಣೆ ಮುಗಿದು ಎರಡನೇ ಹಂತಕ್ಕೆ ವಿಸ್ತರಿಸಲು ವೇದಿಕೆ ಸಜ್ಜುಗೊಳಿಸಲಾಯ್ತು. ಹನುಮಧ್ವಜಕ್ಕೆ ಅಪಮಾನ ಮಾಡಲಾಗಿದೆಯೆಂದು ಊರವರನ್ನೆಲ್ಲಾ ಸೇರಿಸಲಾಯ್ತು. ಹಿಂದೂ ಧರ್ಮಕ್ಕೆ ಅಪಚಾರವೆಂದು ಸುದ್ದಿ ಹಬ್ಬಿಸಿ ಸುತ್ತಲಿನ ಹನ್ನೆರಡು ಹಳ್ಳಿಯ ಜನರನ್ನು ಕೆರಗೋಡಿಗೆ ಬರುವಂತೆ ಮಾಡಲಾಯಿತು. ಮಂಡ್ಯ ಜಿಲ್ಲೆಯ ಸಂಘ ಪರಿವಾರದ ಅಂಗಗಳಾದ ಬಿಜೆಪಿ, ವಿಶ್ವ ಹಿಂದೂ ಪರಿಷತ್ತು ಹಾಗೂ ಭಜರಂಗದಳದ ಕಾರ್ಯಕರ್ತರನ್ನು ಕರೆಸಿಕೊಳ್ಳಲಾಯಿತು. ಗಲಾಟೆ ವಾಗ್ವಾದ ಆರಂಭಿಸಿ ಪೊಲೀಸರ ಜೊತೆ ಸಂಘರ್ಷ ಶುರುವಾಯಿತು. 

ಇಂತಹ ಸುವರ್ಣ ಅವಕಾಶಕ್ಕಾಗಿಯೇ ಕಾಯುತ್ತಿದ್ದ   ಕೇಸರಿ ಪಕ್ಷದ ರಾಜ್ಯ ನಾಯಕರ ಪಡೆ ಕೈಯಲ್ಲಿ ಕೇಸರಿ ದ್ವಜ ಹಿಡಿದು ಹಿಂಡು ಹಿಂಡಾಗಿ ಕೆರಗೋಡು ಗ್ರಾಮಕ್ಕೆ ಲಗ್ಗೆ ಇಟ್ಟಿತು. ಪೊಲೀಸರು ಹಾಕಿದ ಬ್ಯಾರಿಕೇಡ್ ಗಳನ್ನು ತಳ್ಳಿ ನುಗ್ಗಿ ಕಾನೂನನ್ನು ಉಲ್ಲಂಘಿಸಲಾಯ್ತು. ಭಾವಪ್ರಚೋದನಾತ್ಮಕ ಭಾಷಣ ಮಾಡಲಾಯ್ತು. ಹಿಂದೂ ವಿರೋಧಿ ಸರಕಾರ ಎಂದು ಕೂಗಾಡಿದ್ದಾಯ್ತು. ಈ ನಾಯಕರನ್ನು ಪೊಲೀಸರು ಬಂಧಿಸಬೇಕು. ಅದು ರಾಜ್ಯಾದ್ಯಂತ ಪ್ರಚೋದನೆಗೆ ಪ್ರೇರಕವಾಗಬೇಕು ಎನ್ನುವುದು ಹಾಗೂ ಒಂದು ಗ್ರಾಮದ ಸಮಸ್ಯೆಯನ್ನು ರಾಜ್ಯಾದ್ಯಂತ ವಿಸ್ತರಿಸಬೇಕು ಎಂಬುದು ಬಿಜೆಪಿಗರ ಮೆಗಾ ಪ್ಲಾನಿಂಗ್ ಆಗಿತ್ತು. 

ಬಿಜೆಪಿಗರು ಹಚ್ಚಿದ ಕೋಮುಕಿಡಿಗೆ ತುಪ್ಪ ಸುರಿದು ಬೆಂಕಿಯಾಗಿಸುವ ಕೆಲಸವನ್ನು ಸಂಘ ಪರಿವಾರದ ಅಂಗಗಳೇ ಆಗಿರುವ ಮಾರಿಕೊಂಡ ಮಾಧ್ಯಮಗಳು ಅವ್ಯಾಹತವಾಗಿ ಮಾಡಿದವು. ಧ್ವಜಸ್ಥಂಭದ ನಿರ್ಮಾಣಕ್ಕೂ ಮುಂಚೆ ಬರೆದುಕೊಟ್ಟ ಮುಚ್ಚಳಿಕೆ ಹಾಗೂ ಶರತ್ತುಗಳಿರುವ ಅನುಮತಿ ಪತ್ರಗಳ ವಿಷಯ ಮರೆಮಾಚಿ 'ಹನುಮಧ್ವಜವನ್ನು ಬಲವಂತವಾಗಿ ಇಳಿಸಿ ಅಪಮಾನ ಮಾಡಿದರು'  ಎನ್ನುವ ಹುಸಿ ಸಂಗತಿಯನ್ನು ಮೀಡಿಯಾಂಗಗಳು ಪ್ರಚೋದನಾತ್ಮಕವಾಗಿ ಪ್ರಚಾರ ಮಾಡಿದವು. 

ಕಮಲಪಡೆ ಅಂದುಕೊಂಡಂತೆ ಆಯಿತು. ಕಾನೂನು ಸುವ್ಯವಸ್ಥೆಯ ಭಾಗವಾಗಿ ಪೊಲೀಸರು ಮಾಮೂಲಿಯಂತೆ ಪ್ರಚೋದನೆ ಮಾಡುತ್ತಿದ್ದ ಕೇಸರಿ ನಾಯಕರನ್ನು ಬಂಧಿಸಿ ಕರೆದೊಯ್ದು ನಂತರ ಬಿಡುಗಡೆ ಮಾಡಿದರು. ಈ ಎಲ್ಲಾ ಪೂರ್ವಯೋಜಿತ ಹೈಡ್ರಾಮಾವನ್ನು ಮಾಧ್ಯಮಗಳು ಇನ್ನಷ್ಟು ಮಸಾಲೆ ಬೆರೆಸಿ 'ಹಿಂದೂಗಳ ಭಾವನೆಗಳಿಗೆ ದಕ್ಕೆ ಆಯ್ತು' ಎನ್ನುವಂತೆ ಬಿಂಬಿಸಿ ರಾಜ್ಯ ಸರಕಾರದ ವಿರುದ್ದ ರಾಜ್ಯದ ಜನರು ಆಕ್ರೋಶಗೊಳ್ಳುವಂತೆ ಮಾಡಲು ಪ್ರಯತ್ನಿಸಿದರು. 

ಮತ್ತೆ ಸಂಘ ಪರಿವಾರಿಗರಿಂದ ಅಲ್ಲಲ್ಲಿ ಪ್ರತಿಭಟನೆ, ಬಜರಂಗದಳದವರಿಂದ ಉಗ್ರ ಹೇಳಿಕೆ, ಮಂಡ್ಯ ಬಂದ್ ಗೆ ಕರೆ, ರಾಜ್ಯಾದ್ಯಂತ ಪ್ರತಿಭಟನೆ ವಿಸ್ತರಿಸುವ ಘೋಷಣೆ ಇವೆಲ್ಲವೂ ಮಾಮೂಲು.

ಅಂತೂ ಇಂತೂ ಒಂದು ಹಂತದಲ್ಲಿ ಸಂಘಿಗಳ ಯೋಜನೆ ಯಶಸ್ವಿಯಾಯಿತು. ಕೋಮುಸೌಹಾರ್ಧಕ್ಕೆ ಹೆಸರಾದ ಮಂಡ್ಯದ ನೆಲದಲ್ಲಿ ಕೋಮುದ್ವೇಷದ ಬೀಜ ಬಿತ್ತಲಾಯಿತು. ಹನುಮನ ಹೆಸರಲ್ಲಿ ಹಿಂದೂ ಭಾವನೆ ಕೆರಳಿಸಿ, ಅದನ್ನು ಆಳುವ ಸರಕಾರದ ವಿರುದ್ದ ತಿರುಗಿಸಿದರೆ  ಕೇಸರಿಗರ ಉದ್ದೇಶ ಈಡೇರಿದಂತಾಯ್ತು. 

ಯಾಕೆಂದರೆ ಇನ್ನು ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಇದೆ. ಈಗಾಗಲೇ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಸೋತು ಸುಣ್ಣವಾಗಿದೆ. ಆ ಪಕ್ಷಕ್ಕೆ ಸಮರ್ಥ ನಾಯಕತ್ವವೇ ಇಲ್ಲವಾಗಿದೆ. ಮತ್ತೆ ಲೋಕಸಭೆಯಲ್ಲಿ ಅತೀ ಹೆಚ್ಚು ಸೀಟು ಗೆಲ್ಲಲು ಈಗ ಬಿಜೆಪಿಗೆ ಉಳಿದದ್ದು ಮೋದಿ ಎನ್ನುವ ಬ್ರ್ಯಾಂಡ್ ನೇಮ್. ಕಳೆದ ಸಲ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆ ಬ್ರ್ಯಾಂಡ್ ಕೂಡಾ ವರ್ಕೌಟ್ ಆಗಲಿಲ್ಲ. ಹೀಗಾಗಿ ಈಗ ಬಿಜೆಪಿಗರಿಗೆ ಉಳಿದಿರುವುದು ರಾಮ ನಾಮ ಹಾಗೂ ಹನುಮಧ್ವಜಗಳಂತಹ ಭಾವನಾತ್ಮಕ ವಿಷಯಗಳು ಮಾತ್ರ. 

ಮಂಡ್ಯದಲ್ಲಿ ಬಿಜೆಪಿಗೆ ಗಟ್ಟಿ ನೆಲೆಯಿಲ್ಲ. ಜೆಡಿಎಸ್ ಜೊತೆ ಕೈಜೋಡಿಸಿ ಇಡೀ ಮಂಡ್ಯವನ್ನು ಕೇಸರೀಕರಣ ಮಾಡಲು ಅವರಿಗೆ ಇದೇ ಸದಾವಕಾಶ. ಅದಕ್ಕಾಗಿ ಜೆಡಿಎಸ್ ನ ಅವಕಾಶವಾದಿ ನಾಯಕ ಕುಮಾರಸ್ವಾಮಿಯವರಿಗೂ ಕೇಸರಿ ಶಾಲು ಹಾಕಿಸಿ ಹನುಮ ಜಪ ಮಾಡಲು ಹಚ್ಚಿ ಮಂಡ್ಯದ ಒಕ್ಕಲಿಗರ ಮತವನ್ನು ಕ್ರೂಢೀಕರಿಸಲು ಈ ಹನುಮದದ್ವಜ ಪ್ರಸಂಗ ಸೃಷ್ಟಿಸಲಾಗಿದೆ. ಕೇಸರಿಗರ ಬ್ರಹನ್ನಾಟಕದಲ್ಲಿ ಕುಮಾರಸ್ವಾಮಿ ಕೂಡಾ ಪಾತ್ರದಾರಿಗಳಾಗಿದ್ದಾರೆ. 

ಈ ಸಂಘ ಪರಿವಾರಕ್ಕೆ ರಾಷ್ಟ್ರಧ್ವಜಕ್ಕಿಂತಲೂ ಹನುಮಧ್ವಜಕ್ಕೆ ಅತೀ ಮಹತ್ವ. ದೇಶದ ಕಾನೂನಿಗಿಂತಲೂ ಧಾರ್ಮಿಕ ಭಾವನೆಗಳೇ ಅವರಿಗೆ ಮುಖ್ಯ. ಸಂವಿಧಾನಕ್ಕಿಂತಲೂ ಧರ್ಮವೇ ದೊಡ್ಡದು. ಹಿಂದೂರಾಷ್ಟ್ರ ಮಾಡುತ್ತೇನೆ ಎನ್ನುವವರಿಗೆ, ಸಂವಿಧಾನ ಬದಲಾಯಿಸಲೆಂದೇ ಬಂದಿರುವವರಿಗೆ ದೇಶದ ಕಾನೂನು ಸಂವಿಧಾನ ಪ್ರಜಾಪ್ರಭುತ್ವ ಅದ್ಯಾವ ಲೆಕ್ಕ.

ಸಾರ್ವಜನಿಕ ಸರಕಾರಿ ಸ್ಥಳದಲ್ಲಿ ಅನುಮತಿ ಇಲ್ಲದೇ ಕಾನೂನು ಉಲ್ಲಂಘಿಸಿ ಸಂಘಿಗಳು ಏನುಮಾಡಿದರೂ ಸುಮ್ಮನಿರಬೇಕು. ರಾಷ್ಟದ್ವಜಕ್ಕೆ ಅಪಮಾನ ಮಾಡಿ ಹನುಮದ್ವಜ ಹಾರಿಸಿದರೂ ಮೌನವಹಿಸಬೇಕು. ಯಾವುದಕ್ಕೋ ಅನುಮತಿ ಪಡೆದು ಇನ್ಯಾವುದನ್ನೋ ಮಾಡಿದರೆ ಯಾರೂ ಪ್ರಶ್ನಿಸದಂತಿರಬೇಕು. ಇದೆಲ್ಲಾ ಗೊತ್ತಿದ್ದೂ ಪಂಚಾಯತಿ, ಪೊಲೀಸ್ , ಜಿಲ್ಲಾಡಳಿತ ಹಾಗೂ ಸರಕಾರ ನಿಷ್ಕ್ರೀಯವಾಗಿ ಜಾಣಕುರುಡು ತೋರಿಸಿ ಸತ್ತಂತಿರಬೇಕು ಎಂಬುದು ಮತಾಂಧರ ಮನದಿಚ್ಚೆ. 

 ಆಡಳಿತ ವ್ಯವಸ್ಥೆಯು ಧರ್ಮದ ಹೆಸರಲ್ಲಿ ನಡೆಯುವ ಕಾನೂನು ಉಲ್ಲಂಘನೆಯನ್ನು ಪ್ರಶ್ನಿಸಿದರೆ ಅದು ಹಿಂದೂ ವಿರೋಧಿತನವಾಗುತ್ತದಂತೆ. ಸರಕಾರಿ ಜಾಗದ ದುರುಪಯೋಗವನ್ನು ವಿರೋಧಿಸಿದ  ಸರಕಾರ ಧರ್ಮದ್ರೋಹಿಯಾಗುತ್ತದಂತೆ. ಆದರೆ ಕೋಮುಪ್ರಚೋದನೆಯನ್ನು ನಿಯಂತ್ರಿಸಿದರೆ  ಅದು ಹೇಗೆ ಧರ್ಮದ್ರೋಹವಾಗುತ್ತದೆ? ಎಂದು ಕೇಳಿದರೆ ಅದೂ ಸಹ ಧರ್ಮನಿಂದನೆಯ ಭಾಗವಾಗುತ್ತದಂತೆ.

ಆಯಿತು ಭಕ್ತರ ಭಾವನೆಗೆ ಬೆಲೆ ಕೊಡಬೇಕು ಅಂದುಕೊಳ್ಳೋಣ. ಈಗ ಹನುಮಧ್ವಜ ಹಾರಿಸಲು ರಾಮನವಮಿಯೂ ಇಲ್ಲಾ, ಹನುಮ ಜಯಂತಿಯೂ ಅಲ್ಲಾ. ಅಕಾಲದಲ್ಲಿ ಕೇಸರಿ ಬಾವುಟ ಹಾರಿಸುವ ಅಗತ್ಯವೇನಿತ್ತು? ಹಾರಿಸಲೇ ಬೇಕೆಂದಿದ್ದರೆ ಹನುಮ ದೇವಸ್ಥಾನದ ಮೇಲೆ ಎಷ್ಟು ದೊಡ್ಡ ಬಾವುಟವನ್ನಾದರೂ ಹಾರಿಸಲಿ. ಇಲ್ಲವೇ ಹನುಮ ಭಕ್ತರ ಪ್ರತಿ ಮನೆಯ ಮೇಲೆ ಸನಾತನ ಬಾವುಟ ರಾರಾಜಿಸಲಿ. ಆದರೆ ಪಂಚಾಯತಿಯ ಸಾರ್ವಜನಿಕ ಜಾಗದಲ್ಲೇ ಅನಧೀಕೃತವಾಗಿ ಹನುಮಧ್ವಜ ಹಾರಿಸಿಯೇ ತೀರುತ್ತೇವೆ ಎಂದು ಗಲಾಟೆ ಮಾಡುವುದು ತಪ್ಪಲ್ಲವೇ? ಹೀಗೆ ತಪ್ಪು ಅಂತಾ ಹೇಳುವುದೇ ಕೇಸರಿಗರ ಪ್ರಕಾರ ಧರ್ಮದ್ರೋಹವಾಗುತ್ತದಂತೆ. ಹಿಂದೂ ಭಾವನೆಗಳಿಗೆ ಘಾಸಿಯಾಗುತ್ತದೆಯಂತೆ. ಹಾಗಾದಾಗ ಈ ದೇಶವನ್ನು ಸಂವಿಧಾನದ ಕಾನೂನುಗಳು ನಿಯಂತ್ರಿಸಬೇಕೋ ಇಲ್ಲವೇ ಹಿಂದೂ ಧಾರ್ಮಿಕ ಭಾವನೆಗಳು ನಿರ್ಣಯಿಸಬೇಕೋ? ಎಲ್ಲರಿಗೂ ಒಂದು ಕಾನೂನಾದರೆ ಈ ಸಂಘಿ ಭಕ್ತರು ಆಡಿದ್ದು ಹಾಗೂ ಮಾಡಿದ್ದು ಕಾನೂನಾಗಬೇಕೋ?  ಭಕ್ತಿ ಆಚರಣೆಗಳೆಂಬುದು ಅವರವರ ವ್ಯಯಕ್ತಿಕ ನಂಬಿಕೆಗಳು. ಅವು ಯಾವತ್ತೂ ಹೀಗೆ ಕಾನೂನು ಉಲ್ಲಂಘನೆಗೆ ಕಾರಣವಾಗಬಾರದು. ಸಾರ್ವಜನಿಕ ಅಸಹನೆಗೆ ಆಕರವಾಗಬಾರದು. ಆದರೆ ಹಾಗಾಗಲೇಬೇಕು ಎನ್ನುವುದೇ ಸಂಘ ಪರಿವಾರದ ಕೇಸರಿ ಪಡೆಗಳ ತಂತ್ರಗಾರಿಕೆ. ಕೋಮುಬಾವನೆ ಕೆರಳಿಸುವ ಮೂಲಕವೇ ಆಳುವ ಅಧಿಕಾರ ಗಿಟ್ಟಿಸಲು ಸಾಧ್ಯವೆಂಬುದು ಅವರ ನಾಯಕರುಗಳ ನಂಬಿಕೆ. ಹೀಗಾಗಿ ಆಗಾಗ ಅಂದರೆ ಚುನಾವಣೆಗಳು ಮುಂದಿದ್ದಾಗ ಈ ರೀತಿಯ ಕೋಮಸೌಹಾರ್ಧತೆ ಹಾಳು ಮಾಡಿ ಭಾವಪ್ರಚೋದಿಸುವ ಸನ್ನಿವೇಶಗಳನ್ನು ಸೃಷ್ಟಿಸಲಾಗುತ್ತದೆ. ಅದರ ಭಾಗವಾಗಿಯೇ ಈ ಕೆರಗೋಡು ಗ್ರಾಮದ ಹನುಮಧ್ಜಜ ಪ್ರಕರಣ ಮತ್ತು ನಂತರ ನಡೆದ ಕೇಸರಿ ಕಲಿಗಳ ಬ್ರಹನ್ನಾಟಕ. 

ಇದು ಇಲ್ಲಿಗೆ ಮುಗಿಯುವುದಿಲ್ಲ. ಲೋಕಸಭಾ ಚುನಾವಣೆ ಮುಗಿಯುವವರೆಗೂ ರಾಜ್ಯಾದ್ಯಂತ ಸಾಧ್ಯವಾದಲ್ಲೆಲ್ಲಾ ಕೋಮುಕಿಡಿ ಹಚ್ಚುವ, ಸೌಹಾರ್ಧತೆ ಕದಡುವ, ಮತಾಂಧ ಕಾರ್ಯಾಚರಣೆಗಳನ್ನು ಸೃಷ್ಟಿಸಲಾಗುತ್ತದೆ. ಅದಕ್ಕೆ ಧರ್ಮ ದೇವರುಗಳ ಬಣ್ಣ ಬಳಿಯಲಾಗುತ್ತದೆ. ಅಭಿವೃದ್ದಿ ರಾಜಕಾರಣದ ಬದಲಾಗಿ ಧರ್ಮರಾಜಕಾರಣವನ್ನು ಕಾರ್ಯಗತಗೊಳಿಸಿ ಪಟ್ಟ ಗಿಟ್ಟಿಸುವ  ಪ್ರಯತ್ನವನ್ನು ಕರ್ನಾಟಕ ರಾಜ್ಯದ ಪ್ರಜ್ಞಾವಂತ ಜನರು ಹಿಮ್ಮೆಟ್ಟಿಸಬೇಕಿದೆ. ಮೊದಲು  ಪ್ರಜಾಪ್ರಭುತ್ವವೇ ಧರ್ಮ, ಸಂವಿಧಾನವೇ ಧರ್ಮಗ್ರಂಥವಾಗಬೇಕಿದೆ. ಆ ನಂತರ ಅವರವರ ಇಚ್ಚಾನುಸಾರ ಧರ್ಮ ದೇವರ ಆಚರಣೆಗಳು ವ್ಯೆಯಕ್ತಿಕ ನೆಲೆಗಟ್ಟಿನಲ್ಲಿ ನಡೆಸಬಹುದಾಗಿದೆ ಹಾಗೂ ಅದಕ್ಕೆ ಸಂವಿಧಾನದ ಮಾನ್ಯತೆಯೂ ಇದೆ. 

ರಾಷ್ಟ್ರದ್ವಜಕ್ಕೆ ಅಪಮಾನ ಮಾಡಿದ ಬಿಜೆಪಿಯವರು ರಾಷ್ಟ್ರಭಕ್ತರಾ ಇಲ್ಲಾ ನಕಲಿ ರಾಷ್ಟ್ರಪ್ರೇಮಿಗಳಾ?  ಕಾನೂನು ಮತ್ತು ಸಂವಿಧಾನವನ್ನು ಉಲ್ಲಂಘಿಸುವ ಈ ಮತಾಂಧರು ದೇಶಭಕ್ತರಾ ಇಲ್ಲಾ ದೇಶದ್ರೋಹಿಗಳಾ? ಎಂಬುದನ್ನು ಈ ಕೆರಗೋಡು ಹೈಡ್ರಾಮಾಗೆ ಸಾಕ್ಷಿಯಾಗಿರುವ ಕರ್ನಾಟಕದ ಜನರು ಆಲೋಚಿಸಬೇಕಿದೆ. ಸತ್ಯವನ್ನು ಮರೆಮಾಚಿ ಬಿಜೆಪಿ ಪಕ್ಷದ ವಕ್ತಾರರಂತೆ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಸುದ್ದಿ ವಾಹಿನಿಗಳಿಗೆ ಆತ್ಮಸಾಕ್ಷಿ ಇದ್ದಲ್ಲಿ ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕಿದೆ. ಕಾನೂನು ಭಂಜಕರಿಗೆ, ಸಂವಿಧಾನದ ವಿರೋಧಿಗಳಿಗೆ ಪ್ರಚಾರ ಕೊಡುವುದೂ ಸಹ ದೇಶದ್ರೋಹದ ಕೆಲಸವಾಗಿದೆ ಎಂಬುದನ್ನು ಈ ಮಾರಿಕೊಂಡ ಮಾಧ್ಯಮಗಳು ತಿಳಿದುಕೊಳ್ಳಬೇಕಿದೆ. ಇಲ್ಲದೇ ಹೋದರೆ ಧರ್ಮ ದೇವರ ಹೆಸರಲ್ಲಿ ಸಮಾಜದ ಶಾಂತಿ ನೆಮ್ಮದಿ ಸೌಹಾರ್ದತೆ ಕದಡುವ ಪ್ರಯತ್ನಗಳು ಅವ್ಯಾಹತವಾಗಿ ನಡೆಯುತ್ತಲೇ ಇರುತ್ತವೆ. ಕರಾವಳಿಯ ಹಾಗೆ ಮಂಡ್ಯ ಜಿಲ್ಲೆ ಸಹ ಸಂಘ ಪರಿವಾರದ ಕೋಮುವಾದಿ ಪ್ರಯೋಗಶಾಲೆಯಾಗುತ್ತದೆ. ಸೌಹಾರ್ಧತೆಗೆ ಆಧ್ಯತೆ ನೀಡುವ ಮಂಡ್ಯದ ಜನತೆ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ಇಡೀ ಜಿಲ್ಲೆಯಲ್ಲಿ ಕೋಮುಸೌಹಾರ್ಧತೆಯನ್ನು ಕಾಪಾಡಿಕೊಳ್ಳಲೇಬೇಕಿದೆ. 

- ಶಶಿಕಾಂತ ಯಡಹಳ್ಳಿ
29-01-2024

ಆಧುನೀಕರಣದ ಹಿಂದಿರುವ ಹಕೀಕತ್ತು; ರಂಗಚಟುವಟಿಕೆಗೆ ಭಾರೀ ಕುತ್ತು

ತಹ ತಹ - 499

ಆಧುನೀಕರಣದ ಹಿಂದಿರುವ ಹಕೀಕತ್ತು; ರಂಗಚಟುವಟಿಕೆಗೆ ಭಾರೀ ಕುತ್ತು


'ರವೀಂದ್ರ ಕಲಾಕ್ಷೇತ್ರವನ್ನು ನವೀಕರಣ ಮಾಡಲಾಗುತ್ತದಂತೆ' ಎನ್ನುವ ಸುದ್ದಿ ಕೇಳಿದರೆ ಬೆಂಗಳೂರಿನ ರಂಗಭೂಮಿ ವಲಯ ಬೆಚ್ಚಿ ಬೀಳುತ್ತದೆ. ರಿಪೇರಿ ನೆಪದಲ್ಲಿ ವರ್ಷಾನುಗಂಟಲೇ ಕಲಾಕ್ಷೇತ್ರವನ್ನು ಮುಚ್ಚಿದ ಹಿಂದಿನ ಕಹಿ ನೆನಪು ಮರುಕಳಿಸುತ್ತವೆ. ಈಗ ಮತ್ತೆ ರವೀಂದ್ರ ಕಲಾಕ್ಷೇತ್ರದ ವಜ್ರ ಮಹೋತ್ಸವದ ನೆಪದಲ್ಲಿ ಕಲಾಕ್ಷೇತ್ರದ ನವೀಕರಣ ಕಾರ್ಯವನ್ನು ಮಾಡಲು ಸಂಸ್ಕೃತಿ ಇಲಾಖೆಯು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆಯಂತೆ ಹಾಗೂ ಅದಕ್ಕೆ ಆಗುವ ಅಂದಾಜು ವೆಚ್ಚ 24 ಕೋಟಿಯಂತೆ. ಖುದ್ದಾಗಿ ಸಂಸ್ಕೃತಿ ಇಲಾಖೆಯ ಸಚಿವರೇ ನವೀಕರಣದ ಬಗ್ಗೆ ಅತೀವ ಆಸಕ್ತಿ ವಹಿಸಿದ್ದಾರಂತೆ. ಅವರ ಸಹೋದರನಿಗೆ ಗುತ್ತಿಗೆ ಕೊಡಲು ಈ ಯೋಜನೆಯಂತೆ ಎನ್ನುವ ಸುದ್ದಿಗಳು ರಂಗಕರ್ಮಿಗಳಲ್ಲಿ ಆತಂಕ ಸೃಷ್ಟಿಸುತ್ತಿವೆ. 

ಕಲಾಕ್ಷೇತ್ರದ ಕಾಮಗಾರಿ ನಿರ್ವಹಣೆ ಮಾಡುತ್ತಿರುವುದು ಸಂಸ್ಕೃತಿ ಇಲಾಖೆಯಲ್ಲಾ ಲೋಕೋಪಯೋಗಿ ಇಲಾಖೆ. ಐದು ವರ್ಷಗಳ ಹಿಂದೆ ಕಲಾಕ್ಷೇತ್ರದ ನವೀಕರಣ ಕಾರ್ಯವನ್ನು ಕೈಗೆತ್ತಿಕೊಂಡಾಗ ಈ ಎರಡೂ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ವರ್ಷಾನುಗಂಟಲೇ ಕಾಮಗಾರಿ ಕುಂಟುತ್ತಾ ಸಾಗಿತ್ತು. ರಂಗಮಂದಿರದ ವಿನ್ಯಾಸ ಹಾಗೂ ತಂತ್ರಜ್ಞತೆ ಇತರೇ ಕಟ್ಟಡಗಳಂತಲ್ಲಾ. ಪಿಡ್ಬ್ಲುಡಿ ಇಂಜನೀಯರುಗಳಿಗೆ ಎಲ್ಲಾ ಕಟ್ಟಡಗಳೂ ಒಂದೇ. ಅವರಿಗೆ  ತಾಂತ್ರಿಕ ಸಲಹೆ ಕೊಡಲೆಂದೇ ರಂಗತಜ್ಞರ ಸಲಹಾ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿತ್ತು. ಆದರೆ ಲೋಕೋಪಯೋಗಿ ಅಧಿಕಾರಿಗಳ ಅಸಹಕಾರ ಹಾಗೂ ಅಜ್ಞಾನಕ್ಕೆ ಬೇಸತ್ತು ಸಮಿತಿಯಲ್ಲಿದ್ದ ಶಶಿಧರ್ ಅಡಪ, ಅಪ್ಪಯ್ಯ ಮುಂತಾದವರು ರಾಜೀನಾಮೆ ಕೊಡಬೇಕಾಯ್ತು. ಹಲವಾರು ತಿಂಗಳುಗಳ ಕಾಲ ಕಾಮಗಾರಿಯೇ ಸ್ಥಗಿತಗೊಂಡಿತ್ತು.
ಕಾಯ್ದು ಕಾಯ್ದು ಬೇಸತ್ತ ರಂಗಕರ್ಮಿ ಕಲಾವಿದರುಗಳು ಕಲಾಕ್ಷೇತ್ರ ರೀಓಪನ್ ಮಾಡಿ ಎಂದು ಪ್ರತಿಭಟನೆ ಮಾಡಬೇಕಾಯ್ತು. ಒತ್ತಾಯಕ್ಕೊಳಗಾಗಿ ತರಾತುರಿಯಲ್ಲಿ ಬಾಕಿ ಕೆಲಸ ಮುಗಿಸಿದಂತೆ ಮಾಡಿ ಹಾಗೂ ಹೀಗೂ ಹೇಗೋ ಕಲಾಕ್ಷೇತ್ರ ತೆರೆಯಲಾಯ್ತು. ಆದರೆ ದ್ವನಿ ಮತ್ತು ಬೆಳಕಿನ ಕಳಪೆ ಪರಿಕರಗಳಿಂದಾಗಿ ಅತೀ ಶೀಘ್ರದಲ್ಲಿ ನವೀಕರಣದ ಉದ್ದೇಶ ವಿಫಲವಾಯಿತು. ಕಾರ್ಯಕ್ರಮ ಮಾಡುವವರು ಹೆಚ್ಚುವರಿ ಲೈಟಿಂಗ್ಸ್ ಗಳನ್ನು ಹೊರಗಡೆಯಿಂದಾ ಬಾಡಿಗೆಗೆ ತರಬೇಕಾದ ಅನಿವಾರ್ಯತೆ ಉಂಟಾಯಿತು. ಅದೇ ರೀತಿ ಕಲಾಗ್ರಾಮದಲ್ಲಿರುವ ರಂಗಮಂದಿರದ ಲೈಟಿಂಗ್ ರೂಂ ಬೆಂಕಿಗೆ ಆಹುತಿಯಾಯಿತು. ಒಂದು ತಿಂಗಳಲ್ಲಿ ರಿಪೇರಿ ಮಾಡಬಹುದಾಗಿತ್ತು ಮಾಡಲಿಲ್ಲ. ಒಂದೂವರೆ ವರ್ಷವಾದರೂ ಸರಿಪಡಿಸಲಿಲ್ಲ. ಕೊನೆಗೆ ರಂಗಕರ್ಮಿಗಳು ಧರಣಿ ಸತ್ಯಾಗ್ರಹ ಪ್ರತಿಭಟನೆ ಮಾಡಿಯೇ ರಂಗಮಂದಿರ ಪಡೆಯಬೇಕಾಯ್ತು.

ಹಿಂದಿನ ಇಂತಹ ಆತಂಕಕಾರಿ ಅನುಭವಗಳಿಂದಾಗಿ ಕಲಾಕ್ಷೇತ್ರದ ನವೀಕರಣ ಎಂದರೆ ಸಾಂಸ್ಕೃತಿಕ ಕ್ಷೇತ್ರದವರು ಬೆಚ್ಚಿ ಬೀಳುತ್ತಾರೆ. ಆದರೆ ಈಗ ಮತ್ತೆ ಅದೇ ಕಲಾಕ್ಷೇತ್ರ ನವೀಕರಣಗೊಂಡು ಅತ್ಯಾಧುನೀಕರಣಗೊಳ್ಳುತ್ತಿದೆ. 

24 ಕೋಟಿ ಯೋಜನೆ ಅಂದ್ರೆ ಸುಮ್ಮನೇನಾ? ಕನಿಷ್ಟ ಎರಡು ವರ್ಷಗಳ ಕಾಲ ಕಲಾಕ್ಷೇತ್ರ ಮುಚ್ಚುಗಡೆಯಾಗುವುದು ಖಂಡಿತ. ಯಾರೂ ಕೇಳದಿದ್ದರೂ ಸ್ವಯಂ ಆಸಕ್ತಿಯಿಂದ ಸಂಸ್ಕೃತಿ ಇಲಾಖೆಯ ಸಚಿವರ ಒತ್ತಾಸೆಯ ಮೇರೆಗೆ ಮಾಡಬಯಸುವ ಈ ನವೀಕರಣದಿಂದಾಗುವ ಸಮಸ್ಯೆಗಳು ಹೀಗಿವೆ.

1. ಸುದೀರ್ಘ ಕಾಲ ನವೀಕರಣಕ್ಕಾಗಿ ಕಲಾಕ್ಷೇತ್ರ ಮುಚ್ಚುವುದರಿಂದ ಸಾಂಸ್ಕೃತಿಕ ಚಟುವಟಿಕೆಗಳು ಕುಂಟಿತಗೊಳ್ಳುತ್ತವೆ.

2. 24 ಕೋಟಿ ವೆಚ್ಚದಲ್ಲಿ ಉನ್ನತೀಕರಣ ಮಾಡಿ ಹೈಟೆಕ್ ರಂಗಮಂದಿರವಾಗಿ ರೂಪಾಂತರಿಸುವುದರಿಂದ ಕಲಾಕ್ಷೇತ್ರದ ಬಾಡಿಗೆ ಗಗನಕ್ಕೇರಿ ರಂಗಭೂಮಿಯವರ ಕೈಗೆಟುಕದಂತಾಗುತ್ತದೆ. 

3. ಕಲೆಗಾಗಿಯೇ ಮೀಸಲಿರಬೇಕಾದ ಕಲಾಕ್ಷೇತ್ರವು ಕಾರ್ಪೋರೇಟ್ ಕಾರ್ಯಕ್ರಮಗಳಿಗೆ, ರಿಯಾಲಿಟಿ ಶೋಗಳಿಗೆ ಮಾತ್ರ ಬಳಕೆಯಾಗುತ್ತದೆ. ಅತೀ ಹೆಚ್ಚು ಬಾಡಿಗೆ ಕಟ್ಟಲಾಗದ ರಂಗಭೂಮಿಯವರಿಗೆ ರಂಗಮಂದಿರ ಗಗನಕುಸುಮವಾಗುತ್ತದೆ.

4. ನವೀಕರಣದ ನಂತರ ದುಬಾರಿ ಬಾಡಿಗೆ ವಸೂಲಾತಿಯಿಂದಾಗಿ ಟೌನ್ ಹಾಲ್ ನಲ್ಲಿ ರಂಗಚಟುವಟಿಕೆಗಳು ಸಂಪೂರ್ಣ ನಿಂತಿದ್ದು ಅದೇ ಪರಿಸ್ಥಿತಿ ರವೀಂದ್ರ ಕಲಾಕ್ಷೇತ್ರಕ್ಕೂ ಬರುತ್ತದೆ.

5. ಈ ನವೀಕರಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಮಾಡುವುದರಿಂದ ಹಾಗೂ ಆ ಇಲಾಖೆಯ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಯಾವುದೇ ನಿಯಂತ್ರಣ ಇಲ್ಲದೇ ಇರುವುದರಿಂದ ಕಳಪೆ ಕಾಮಗಾರಿ ಮಾಡಲಾಗುತ್ತದೆ ಹಾಗೂ ಕಡಿಮೆ ಆಯಸ್ಸು ಹೊಂದಿರುವ, ಕಡಿಮೆ ಬೆಲೆಯ ಚೀನೀ ಮೇಡ್ ದ್ವನಿ ಹಾಗೂ ಬೆಳಕಿನ ಪರಿಕರಗಳನ್ನು ಬಳಸುವ ಸಾಧ್ಯತೆಯೇ ಹೆಚ್ಚಾಗಿ ಕೆಲವೇ ಸಮಯದಲ್ಲಿ ಅವು ನಿರುಪಯುಕ್ತವಾಗುತ್ತವೆ. ಮಾಡಿದ ಅಪಾರ ಪ್ರಮಾಣದ ಖರ್ಚು ವ್ಯರ್ಥವಾಗುತ್ತದೆ.

6. ಪಿಡ್ಬ್ಲುಡಿ ಅಧಿಕಾರಿಗಳು ಹಾಗೂ ಇಂಜನೀಯರುಗಳಿಗೆ ರಂಗಮಂದಿರ ಕುರಿತ ತಾಂತ್ರಿಕ ಅಗತ್ಯ ಮತ್ತು ವಿನ್ಯಾಸದ ಕುರಿತು ಯಾವುದೇ ಜ್ಞಾನ ಹಾಗೂ ಅನುಭವ ಇಲ್ಲದೇ ಇರುವುದರಿಂದ ರಂಗಮಂದಿರಗಳಿಗೆ ಬೇಕಾದ ತಾಂತ್ರಿಕ ಅಗತ್ಯಗಳನ್ನು ಅಳವಡಿಸಲು ಸಾಧ್ಯವಾಗದೇ ಹೋಗುತ್ತದೆ.

*ಇಷ್ಟೆಲ್ಲಾ ತಾಪತ್ರಯ ಇರುವಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡಬೇಕಾದದ್ದಾದರೂ ಏನು?*

1. ರವೀಂದ್ರ ಕಲಾಕ್ಷೇತ್ರಕ್ಕೆ 75 ವರ್ಷ ತುಂಬಿರುವ ಸ್ಮರಣೆಯಲ್ಲಿ ಬೆಂಗಳೂರಿನ ಬೇರೆ ಸ್ಥಳದಲ್ಲಿ ಅದೇ 24 ಕೋಟಿ ಹಣವನ್ನು ಬಳಸಿ ಕಲಾಕ್ಷೇತ್ರದಂತಹ ಇನ್ನೊಂದು ರಂಗಮಂದಿರ ಕಟ್ಟಬಹುದಾಗಿದೆ.

2. ತಲಾ ಎರಡು ಕೋಟಿಯ ವೆಚ್ಚದಲ್ಲಿ ರಾಜ್ಯದ 12 ಜಿಲ್ಲಾ ಕೇಂದ್ರಗಳಲ್ಲಿ ಕಿರುರಂಗಮಂದಿರಗಳನ್ನು ಅಂದರೆ ಮಿನಿ ಕಲಾಕ್ಷೇತ್ರಗಳನ್ನು ನಿರ್ಮಿಸಿ ಸಾಂಸ್ಕೃತಿಕ ಕ್ಷೇತ್ರಕ್ಕೆ ಶಾಶ್ವತ ಕೊಡುಗೆಯಾಗಿ ಕೊಡಬಹುದಾಗಿದೆ.

3 . ಕಲಾಕ್ಷೇತ್ರದ ಆವರಣದಲ್ಲಿ ತಾಲಿಂ ಕೊಠಡಿಗಳಿರುವ ಜಾಗದಲ್ಲಿ ಬಹು ಅಂತಸ್ತಿನ ಥೇಯಟರ್ ಕಾಂಪ್ಲೆಕ್ಸ್ ಕಟ್ಟಿಸಿ ಅದರಲ್ಲಿ ಹಲವಾರು ತಾಲಿಂ ಕೊಠಡಿ, ಕಿರುರಂಗಮಂದಿರ ಹಾಗೂ ರಂಗಶಿಕ್ಷಣ ಕೇಂದ್ರದ ಕಟ್ಟಡ ಕಟ್ಟಿ ರಂಗಭೂಮಿಯ ಚಟುವಟಿಕೆಗಳಿಗೆ ಪೂರಕವಾಗಿ ಸ್ಪಂದಿಸಬಹುದಾಗಿದೆ.

*ಈಗ ಸಾಂಸ್ಕೃತಿಕ ಲೋಕದವರು ಏನು ಮಾಡಬೇಕು?*

1.  ರವೀಂದ್ರ ಕಲಾಕ್ಷೇತ್ರದ ಅತ್ಯಾಧುನೀಕರಣವನ್ನು ಸಂಘಟಿತರಾಗಿ ಪ್ರತಿಭಟನೆಗಳ ಮೂಲಕ ವಿರೋಧಿಸಬೇಕಿದೆ.

2. ಬಹುಕೋಟಿ ವೆಚ್ಚದಲ್ಲಿ ಅನಗತ್ಯವಾಗಿ ಕಲಾಕ್ಷೇತ್ರದ ಆಧುನೀಕರಣದ ಯೋಜನೆಯನ್ನು ಕೈಬಿಟ್ಟು ಅದೇ ಹಣದಲ್ಲಿ ಬೇರೆ ರಂಗಮಂದಿರಗಳನ್ನು ಕಟ್ಟಿಸಿ ಕೊಡಲು ಆಗ್ರಹಿಸಬೇಕಿದೆ. 

3. ಬೆಂಗಳೂರಲ್ಲಿ ಹಲವಾರು ಬಡಾವಣೆಗಳಲ್ಲಿ ವಿಶಾಲವಾದ ಪಾರ್ಕ್ ಗಳಿವೆ. ಅದರಲ್ಲಿ ಸುಸಜ್ಜಿತ ಕಿರುರಂಗ ಮಂದಿರಗಳನ್ನು ನಿರ್ಮಿಸಿ  ರಂಗಕರ್ಮಿಗಳಿಗೆ ನಿರ್ವಹಣೆ ಹೊಣೆಗಾರಿಕೆ ವಹಿಸಿಕೊಟ್ಟರೆ ಬಡಾವಣಾ ರಂಗಭೂಮಿ ಬೆಳೆದು ಸಾಂಸ್ಕೃತಿಕ ಚಟುವಟಿಕೆಗಳು ವಿಕೇಂದ್ರಿಕರಣಗೊಳ್ಳಲು ಸಹಕಾರಿಯಾಗುತ್ತದೆ ಎಂದು ಸಚಿವರನ್ನು ಒತ್ತಾಯಿಸಬೇಕಿದೆ.

4 . ಪಿವಿಆರ್ ಸಿನೆಮಾ ಮಂದಿರದ ಮಾದರಿಯಲ್ಲಿ ಉದ್ದೇಶಿತ ಕೇಂದ್ರಿಕೃತ ಹವಾನಿಯಂತ್ರಣ ವ್ಯವಸ್ಥೆಯ ಬದಲಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಈಗಾಗಲೇ ಅಳವಡಿಸಿರುವ ಎಸಿ ಗಳನ್ನು  ರಿಪೇರಿ ಸರ್ವಿಸ್ ಮಾಡಿಸಿ ಬಳಸಬಹುದಾಗಿದೆ. 

5. ಈಗಿರುವ ದ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಸರಿಪಡಿಸಿ, ಅಗತ್ಯವಿರುವ ಹೆಚ್ಚುವರಿ ಲೈಟಿಂಗ್ ಮತ್ತು ದ್ವನಿಪರಿಕರಗಳನ್ನು ಖರೀದಿಸಿ ಅಳವಡಿಸಿದರೆ ಸಾಕು ಅದಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ ಅಗತ್ಯವೇ ಬೇಕಿಲ್ಲ ಎಂದು ಅಧಿಕಾರಿಗಳಿಗೆ ಮನದಟ್ಟುಮಾಡಬೇಕಿದೆ.

6. ಸಂಸ ಬಯಲು ರಂಗಮಂದಿರದಲ್ಲಾಗುವ ಕಾರ್ಯಕ್ರಮಗಳ ಸೌಂಡ್ ಕಲಾಕ್ಷೇತ್ರದ ಒಳಗೆ ಕೇಳಿಬರುತ್ತಿದ್ದು ಎರಡರ ನಡುವೆ ಶೆಟರ್ ಇರುವುದನ್ನು ತೆಗೆದು ಶಾಶ್ವತ ಗೋಡೆ ಕಟ್ಟಿಸಿದರೆ ಈ ಸಮಸ್ಯೆಯೂ ಪರಿಹಾರವಾಗುತ್ತದೆ. 

*ಇಷ್ಟೆಲ್ಲಾ ಸಕಾರಾತ್ಮಕ ಸಲಹೆಗಳನ್ನು ಕೊಟ್ಟರೂ ಸಂಸ್ಕೃತಿ ಇಲಾಖೆ ಹಠಕ್ಕೆ ಬಿದ್ದು ಕಲಾಕ್ಷೇತ್ರದ ಅತ್ಯಾಧುನೀಕರಣಕ್ಕೆ ಉತ್ಸಾಹ ತೋರಿದರೆ ರಂಗಕರ್ಮಿ ಕಲಾವಿದರು, ಸಾಂಸ್ಕೃತಿಕ ಸಂಘ ಸಂಸ್ಥೆಗಳು ಏನು ಮಾಡಬೇಕು?*

1. ಹಿರಿಯ ರಂಗಕರ್ಮಿಗಳ ನೇತೃತ್ವದಲ್ಲಿ 'ಅನಗತ್ಯ ಆಧುನೀಕರಣದ ಅಗತ್ಯವಿಲ್ಲ'ಎಂಬ ಮನವಿ ಪತ್ರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೆ ಹಾಗೂ ಸಚಿವರಿಗೆ ತಲುಪಿಸಬೇಕು.

2. ಸಾಹಿತಿ ಕಲಾವಿದರ ಒಂದು ನಿಯೋಗ ಹೋಗಿ ಮುಖ್ಯಮಂತ್ರಿಗಳ ಸಮಯ ಪಡೆದು ಬೇಟಿಯಾಗಿ ಅನಗತ್ಯ ಆಧುನಿಕರಣದ ನಿರರ್ಥಕತೆಯನ್ನು ಮನದಟ್ಟುಮಾಡಿ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಬೇಕು.

3. ಅದೂ ವರ್ಕೌಟ್ ಆಗದೇ ಇದ್ದರೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಎಲ್ಲಾ ಸರಕಾರಿ ಕಾರ್ಯಕ್ರಮಗಳನ್ನು ಬೈಕಾಟ್ ಮಾಡುತ್ತೇವೆಂದು ಸರಕಾರಕ್ಕೆ ತಿಳಿಸಬೇಕು. ಸರಕಾರಿ ಕಾರ್ಯಕ್ರಮಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸಬೇಕು.

4. ನವೀಕರಣ ಮಾಡಲೇಬೇಕೆಂದರೆ ಕಾಮಗಾರಿ ಆರಂಭ ಹಾಗೂ ಅಂತ್ಯದ ಕಾಲಮಿತಿಯ ಬಗ್ಗೆ ಸಂಸ್ಕೃತಿ ಇಲಾಖೆ ಲಿಖಿತವಾಗಿ ಬರೆದುಕೊಡಬೇಕು ಹಾಗೂ ನವೀಕರಣದ ನಂತರ ಯಾವುದೇ ಕಾರಣಕ್ಕೂ ಬಾಡಿಗೆ ಹೆಚ್ಚಿಸುವುದಿಲ್ಲ ಹಾಗೂ ರಂಗಭೂಮಿಯ ಚಟುವಟಿಕೆಗಳಿಗೆ ತಿಂಗಳಲ್ಲಿ 15 ದಿನ ಮೀಸಲಿರಿಸಲಾಗುತ್ತದೆ ಎಂದು ಸರಕಾರ ಅಧಿಕೃತವಾಗಿ ಮುಚ್ಚಳಿಕೆ ಬರೆದು ಕೊಡಬೇಕೆಂದು ಆಗ್ರಹಿಸಬೇಕು. 

ಇಷ್ಟನ್ನಾದರೂ ಮಾಡದೇ ಹೋದರೆ ಉಳ್ಳವರ ಪಾಲಾಗುವ ರವೀಂದ್ರ ಕಲಾಕ್ಷೇತ್ರ ಸಾಂಸ್ಕೃತಿಕ ಚಟುವಟಿಕೆಗಳಿಗೆ ದಕ್ಕುವುದಿಲ್ಲ. ವಿಶ್ವದರ್ಜೆಯ ರಂಗಮಂದಿರದ ದುಬಾರಿ ಬಾಡಿಗೆ ಕಟ್ಟಿ ನಾಟಕ ಪ್ರದರ್ಶಿಸಲೂ ಸಾಧ್ಯವಿಲ್ಲ. ರವೀಂದ್ರ ಕಲಾಕ್ಷೇತ್ರ ಎನ್ನುವುದು ನಾಟಕದವರ ಕೈಗೆಟುಕ ಮತ್ತೊಂದು ಟೌನ್ ಹಾಲ್ ಇಲ್ಲವೇ ಚೌಡಯ್ಯ ಮೇಮೋರಿಯಲ್ ಹಾಲ್ ಅಥವಾ ಅಂಬೇಡ್ಕರ್ ಭವನ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. 

- ಶಶಿಕಾಂತ ಯಡಹಳ್ಳಿ
29-01-2024

ಕಲಾಕ್ಷೇತ್ರಕ್ಕೆ ಅನಗತ್ಯ ನವೀಕರಣ; ಸಾಂಸ್ಕೃತಿಕ ಕ್ಷೇತ್ರದ ಆತಂಕಕ್ಕೆ ಕಾರಣ

ತಹ ತಹ - 498

ಕಲಾಕ್ಷೇತ್ರಕ್ಕೆ ಅನಗತ್ಯ ನವೀಕರಣ;  ಸಾಂಸ್ಕೃತಿಕ ಕ್ಷೇತ್ರದ ಆತಂಕಕ್ಕೆ ಕಾರಣ


ಬ್ರ್ಯಾಂಡ್ ಬೆಂಗಳೂರಿನ ಅಬ್ಬರ ಈಗ ರವೀಂದ್ರ ಕಲಾಕ್ಷೇತ್ರಕ್ಕೆ ಆವರಿಸುವಂತಿದೆ. ಕಲಾಕ್ಷೇತ್ರಕ್ಕೆ 75 ವರ್ಷಗಳು ತುಂಬಿದ ಸಂಭ್ರಮವನ್ನು ರಂಗಮಂದಿರದ  ನವೀಕರಣದ ಮೂಲಕ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 

ವಜ್ರ ಮಹೋತ್ಸವದ ಅಂಗವಾಗಿ  ರಂಗಮಂದಿರದಲ್ಲಿ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಮಾಡಿಸಿ, ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ದ್ವನಿ ಬೆಳಕಿನ ಪರಿಕರಗಳನ್ನು ಅಳವಡಿಸಿ, ವಾಟರ್ ಪ್ರೂಪ್ ಆಸನಗಳನ್ನು ಹಾಕಿಸಿ ಇಡೀ ಕಲಾಕ್ಷೇತ್ರವನ್ನು ಅಂತರಾಷ್ಟ್ರೀಯ ಮಟ್ಟದ ರಂಗಮಂದಿರವನ್ನಾಗಿ ಮಾಡುವ ಯೋಜನೆ ರೂಪಿಸಿ ಸರಕಾರದ ಅನುಮೋದನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಳುಹಿಸಿದೆ.

ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ. ಧರಣಿದೇವಿ ಮಾಲಗತ್ತಿಯವರು "ಸಾಂಸ್ಕೃತಿಕ ಕ್ಷೇತ್ರದ ಸಮಸ್ಯೆಗಳು ಹಾಗೂ ಪರಿಹಾರದ ಸಾಧ್ಯತೆಗಳು" ಕುರಿತು ಚರ್ಚಿಸಲು ಡಿಸೆಂಬರ್ 15 ರಂದು ಆಯ್ದ ರಂಗಕರ್ಮಿಗಳ ಸಭೆಯನ್ನು ಕರೆದಿದ್ದರು. ಆಗ ಕಲಾಕ್ಷೇತ್ರ ಮತ್ತು ಸಂಸ ಬಯಲು ರಂಗಮಂದಿರದ ನವೀಕರಣದ ಬಗ್ಗೆಯೂ ಮಾಹಿತಿಯನ್ನು ಪಡೆದುಕೊಂಡರು. ಇಲಾಖೆಯ ಸಚಿವರಾದ ಮಾನ್ಯ ಶಿವರಾಜ ತಂಗಡಿಗಿಯವರು ಕಲಾಕ್ಷೇತ್ರದ ನವೀಕರಣ ಮಾಡಿಸಲು ಉತ್ಸುಕರಾಗಿದ್ದಾರೆ ಎಂದೂ ತಿಳಿಸಿದರು. ಈಗ ಸಚಿವರ ಒತ್ತಾಸೆಯಂತೆ ನವೀಕರಣ ಯೋಜನೆಯ ರೂಪರೇಷೆಗಳು ಸಿದ್ದವಾಗಿ ಸರಕಾರದ ಅನುಮೋದನೆಗೆ ರವಾನೆಯಾಗಿದೆ.

ಇದೆಲ್ಲಾ ಸಂತಸದ ಸಂಗತಿಯೇ ಆಗಿದೆ. ಕಲಾಕ್ಷೇತ್ರ ಬ್ರ್ಯಾಂಡ್ ಬೆಂಗಳೂರಿನ ಐಕಾನ್ ಆಗುವುದಾದರೆ ಬೇಡ ಎನ್ನುವವರಾದರೂ ಯಾರು? ವಿಶ್ವದರ್ಜೆಯ ಥೇಯಟರ್ ನಮ್ಮದೆಂದು ಹೇಳಿಕೊಳ್ಳುವುದರಲ್ಲೇನಿದೆ ತಕರಾರು?  ಆದರೆ ದಿಗಿಲು ಹುಟ್ಟಿಸುವ ಸಂಗತಿ ಏನೆಂದರೆ ಈ ನವೀಕರಣಕ್ಕೆ ಮಾಡಲಾದ ಅಂದಾಜು ವೆಚ್ಚ 24 ಕೋಟಿಯಂತೆ. ಇದನ್ನು ಕೇಳಿಯೇ ಸಾಂಸ್ಕೃತಿಕ ಲೋಕದವರು ಬೆಚ್ಚಿಬಿದ್ದಿದ್ದಾರೆ. ಇಷ್ಟೊಂದು ಹಣದಲ್ಲಿ ಇನ್ನೊಂದು ಭವ್ಯವಾದ ಕಲಾಕ್ಷೇತ್ರವನ್ನೇ ಕಟ್ಟಬಹುದಾಗಿತ್ತಲ್ಲಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ರೀತಿಯ ಆತ್ಯಾಧುನಿಕ ರಂಗಮಂದಿರದಲ್ಲಿ ಕಲೆ ಸಾಹಿತ್ಯ ನಾಟಕಾದಿ ಕಾರ್ಯಕ್ರಮಗಳನ್ನು ಮಾಡಲು ಕನ್ನಡ ಸಾಂಸ್ಕೃತಿಕ ಕ್ಷೇತ್ರದವರಿಗೆ ಸಾಧ್ಯವಿದೆಯಾ? ಎಂದು ಆತಂಕವನ್ನೂ ಹೊರಹಾಕುತ್ತಿದ್ದಾರೆ.

ಹೌದು, ಈ ಆತಂಕ ನಿಜಕ್ಕೂ ಕಳವಳಕಾರಿಯಾಗಿರುವಂತಹುದು. ಈಗಾಗಲೇ ಬಿಜೆಪಿ ಸರಕಾರ ಇದ್ದಾಗ ರವೀಂದ್ರ ಕಲಾಕ್ಷೇತ್ರದ ಬಾಡಿಗೆಯನ್ನು ದುಪ್ಪಟ್ಟು ಮಾಡಲಾಗಿತ್ತು. ಜೊತೆಗೆ ಪ್ರತಿ ವರ್ಷ ಶೇಕಡಾ ಐದರಷ್ಟು ಬಾಡಿಗೆಯನ್ನು ಹೆಚ್ಚು ಮಾಡುವ ನಿರ್ಣಯವನ್ನೂ ಸರಕಾರ ಕೈಗೊಂಡಿತ್ತು. ಮೊದಲು  ರವೀಂದ್ರ ಕಲಾಕ್ಷೇತ್ರದ ಬಾಡಿಗೆ ದಿನವೊಂದಕ್ಕೆ ಕೇವಲ ನಾಲ್ಕು ಸಾವಿರವಿತ್ತು. ಕೇವಲ ಕಲಾಕ್ಷೇತ್ರ ಮಾತ್ರವಲ್ಲ ಕರ್ನಾಟಕದಾದ್ಯಂತ ಸಂಸ್ಕೃತಿ ಇಲಾಖೆಯ ನಿಯಂತ್ರಣದಲ್ಲಿರುವ ಎಲ್ಲಾ ರಂಗಮಂದಿರಗಳ ಬಾಡಿಗೆ ಇದೇ ರೀತಿ ಏಕರೂಪದಲ್ಲಿ ಇರಬೇಕೆಂದು ಆಗ ಸಚಿವೆಯಾಗಿದ್ದ ಮಾನ್ಯ ಉಮಾಶ್ರೀಯವರು ಆದೇಶ ಹೊರಡಿಸಿ ರಂಗಭೂಮಿಗೆ ದೊಡ್ಡ ಉಪಕಾರ ಮಾಡಿದ್ದರು. ಆದರೆ ನಂತರ ಬಂದ ಸರಕಾರ ಒಂದೊಂದು ರಂಗಮಂದಿರಕ್ಕೂ ಒಂದೊಂದು ರೀತಿ ಬಾಡಿಗೆ ನಿಗದಿಪಡಿಸಿ ಬೆಲೆ ಹೆಚ್ಚು ಮಾಡಿತು. ಇದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮಾಡುವವರಿಗೆ ಆರ್ಥಿಕ ಭಾರ ಹೆಚ್ಚಾಗಿ ನಾಟಕ ಪ್ರದರ್ಶನಗಳ ಸಂಖ್ಯೆ ಇಳಿಮುಖವಾಗಿತ್ತು.

ಈಗ ಒಂದು ದಿನಕ್ಕೆ ರವೀಂದ್ರ ಕಲಾಕ್ಷೇತ್ರದ ಬಾಡಿಗೆ ಒಟ್ಟು 25000 ರೂಪಾಯಿಯಾಗಿದೆ. ಇದರಲ್ಲಿ ಹತ್ತು ಸಾವಿರ ಠೇವಣಿ ಹಣ ಸೇರಿದ್ದರೂ ಮೇಂಟೇನನ್ಸ್, ಕರೆಂಟ್ ಅಂತಾ ಕಟ್ಟಿಂಗ್ ಮಾಡಿಕೊಳ್ಳಲಾಗುತ್ತದೆ. ಒಂದು ನಾಟಕ ಪ್ರದರ್ಶನ ಆಗಬೇಕೆಂದರೆ ಬೆಳಿಗ್ಗೆ ಟೆಕ್ನಿಕಲ್ ರಿಹರ್ಸಲ್ಸ ಮಾಡಿ ಸಂಜೆ ಪ್ರದರ್ಶನ ಕೊಡಬೇಕಾಗುತ್ತದೆ. ಮೊದಲೇ ಪ್ರೇಕ್ಷಕರ ಕೊರತೆಯಿಂದ ಬಡವಾಗಿರುವ ಕನ್ನಡ ರಂಗಭೂಮಿ ಆದಾಯ ತರುವ ಉದ್ಯಮವಂತೂ ಅಲ್ಲ. ಎಷ್ಟೋ ನಾಟಕ ಪ್ರದರ್ಶನಗಳು ಆರ್ಥಿಕ ನಷ್ಟದಲ್ಲಿ ಅಂತ್ಯವಾಗುತ್ತವೆ.

ಪರಿಸ್ಥಿತಿ ಹೀಗಿರುವಾಗ, ಕಲಾಕ್ಷೇತ್ರವನ್ನು ಅತ್ಯಾಧುನಿಕೀಕರಣ ಮಾಡಿದರೆ ಅದಕ್ಕೆ ತಕ್ಕಂತೆ ವಿಪರೀತ ಬಾಡಿಗೆಯನ್ನು ನಿಗಧಿಪಡಿಸಲಾಗುತ್ತದೆ. ಅಷ್ಟೊಂದು ಹಣ ಕೊಟ್ಟು ನಾಟಕ ಪ್ರದರ್ಶನಗಳನ್ನು ಮಾಡುವ ಶ್ರೀಮಂತಿಕೆ ಕನ್ನಡ ರಂಗಭೂಮಿಗೆ ಇಲ್ಲವಾಗಿದೆ. ಈಗ ರಂಗಭೂಮಿಯವರನ್ನು ಕಾಡುವ ಆತಂಕ ಇದೇ ಆಗಿದೆ. ಮತ್ತು ಸರಕಾರಕ್ಕೂ ಇದೇ ಬೇಕಾಗಿದೆ. ರಂಗಮಂದಿರವನ್ನು ಉನ್ನತೀಕರಿಸಿ ಸ್ಥಳೀಯ ನಾಟಕ ತಂಡದವರ ಕೈಗೆಟುಕದಂತೆ ಮಾಡುವುದು ಹಾಗೂ ಕಾರ್ಪೋರೇಟ್ ಕಾರ್ಯಕ್ರಮಗಳಿಗೆ, ರಿಯಾಲಿಟಿ ಶೋಗಳಿಗೆ ಕಲಾಕ್ಷೇತ್ರವನ್ನು ಬಾಡಿಗೆಗೆ ಕೊಡುವುದು ಸರಕಾರದ ಉದ್ದೇಶವಾಗಿದೆ. ಈಗಾಗಲೇ ರವೀಂದ್ರ ಕಲಾಕ್ಷೇತ್ರವನ್ನು ವಿಸ್ತಾರ ಟಿವಿ ವಾಹಿನಿಯವರಿಗೆ ಬಾಡಿಗೆಗೆ ಕೊಡಲಾಗುತ್ತಿದೆ. ಮುಂದೆ ಆಧುನಿಕೀಕರಣಗೊಂಡ ಕಲಾಕ್ಷೇತ್ರ ಅಂತವರ ಪಾಲಾಗುತ್ತದೆ.

ಕಲಾಕ್ಷೇತ್ರದ ಪಕ್ಕದಲ್ಲಿ ಟೌನ್  ಹಾಲ್ ಇದೆ. ಆರೇಳು ವರ್ಷಗಳ ಹಿಂದೆ ಅಲ್ಲಿ ಅನೇಕ ನಾಟಕ ಪ್ರದರ್ಶನಗಳು, ನಾಟಕೋತ್ಸವಗಳು, ರಂಗಸ್ಪರ್ಧೆಗಳು ನಿರಂತರವಾಗಿ ನಡೆಯುತ್ತಿದ್ದವು. ಮತ್ತು ಕಡಿಮೆ ಬಾಡಿಗೆಗೆ ಅದು ದೊರಕುತ್ತಿತ್ತು. ಆದರೆ ಯಾವಾಗ ಬಿಬಿಎಂಪಿ ಯವರು ಪುರಭವನದ ನವೀಕರಣ ಮಾಡಿದರೋ ಆಗ ಅದರ ಬಾಡಿಗೆ ದಿನವೊಂದಕ್ಕೆ ಐವತ್ತು ಸಾವಿರ ನಿಗದಿಪಡಿಸಿದರು. ಅಷ್ಟೊಂದು ಹಣ ಕೊಟ್ಟು ಕನ್ನಡ ರಂಗತಂಡಗಳಿಗೆ ನಾಟಕ ಮಾಡಲು ಸಾಧ್ಯವೇ? ಆ ನಂತರ ಟೌನ್ ಹಾಲ್ ನಲ್ಲಿ ರಂಗಚಟುವಟಿಕೆಗಳೇ ನಿಂತು ಹೋದವು. ಕಲಾಕ್ಷೇತ್ರ ಅತ್ಯಾಧುನಿಕರಣಗೊಂಡರೆ ಟೌನ್ ಹಾಲ್ ನಂತೆಯೇ ವಿಪರೀತ ಬಾಡಿಗೆ ತೆತ್ತಬೇಕಾಗುತ್ತದೆ ಎನ್ನುವುದು ರಂಗಕರ್ಮಿಗಳ ಭಯ. ಇದೇ ರೀತಿ ಹನುಮಂತನಗರದಲ್ಲಿರುವ ಕೆ.ಹೆಚ್.ಕಲಾಸೌಧವನ್ನು ನವೀಕರಣ ಮಾಡಿ ಬಿಬಿಎಂಪಿ ಅದರ ಟೆಂಡರ್ ಹಣ ಹೆಚ್ಚಿಸಿದ್ದರಿಂದಾಗಿ ಬಾಡಿಗೆ ದುಪ್ಪಟ್ಟಾಯಿತು. ಬನಶಂಕರಿನಗರದಲ್ಲಿರುವ ಸುಚಿತ್ರಾ ರಂಗಮಂದಿರವನ್ನು ಪೂರ್ವಂಕರ ಎನ್ನುವ ಖಾಸಗಿ ಕಂಪನಿಯವರು ನವೀಕರಣ ಮಾಡಿ ಬಾಡಿಗೆ ದರವನ್ನು ಮೂರು ಪಟ್ಟು ಹೆಚ್ಚಿಸಿದರು. ನವೀಕರಣದಿಂದಾಗುವ ಆರ್ಥಿಕ ಹಣದುಬ್ಬರದ ಬಗ್ಗೆ, ಸಾಂಸ್ಕೃತಿಕ ಕ್ಷೇತ್ರದ ಮೇಲಾಗುವ ಹೆಚ್ಚುವರಿ ಹೊರೆಯ ಬಗ್ಗೆ ಇಂತಹ ಹಲವಾರು ಉದಾಹರಣೆ ಕೊಡಬಹುದಾಗಿದೆ.

ಇಷ್ಟಕ್ಕೂ ಸಂಪೂರ್ಣ ಆಧುನೀಕರಣ ಮಾಡುವಂತಹ ಅನಿವಾರ್ಯತೆ ಕಲಾಕ್ಷೇತ್ರಕ್ಕೆ ಏನಿದೆ?  ಕೇವಲ ಐದು ವರ್ಷಗಳ ಹಿಂದೆ ಇದೇ ಕಾಂಗ್ರೆಸ್ ಸರಕಾರ ಇದ್ದಾಗ ವರ್ಷಗಳ ಕಾಲ ಕಲಾಕ್ಷೇತ್ರವನ್ನು ಮುಚ್ಚಿ ಎರಡೂಕಾಲು ಕೋಟಿ ರೂಪಾಯಿಗಳಷ್ಟು ಖರ್ಚು ಮಾಡಿ ನವೀಕರಣ ಮಾಡಿಯಾಗಿದೆ. ದ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಅಪಗ್ರೇಡ್ ಮಾಡಲಾಗಿದೆ. ಈಗಲೂ  ಹೆಚ್ಚುವರಿ ಲೈಟಿಂಗ್ ಅಳವಡಿಸಿ, ಹಾಳಾದ ಲೈಟ್ಸಗಳನ್ನು ಬದಲಾಯಿಸಿ, ಹೆಚ್ಚುವರಿ ಸ್ಪೀಕರ್ ಗಳನ್ನು ಹಾಕಿಸಿ, ಈಗಾಗಲೇ ಇದ್ದು ಕೆಲಸ ಮಾಡದೇ ಇರುವ ಹವಾನಿಯಂತ್ರಣದ ವ್ಯವಸ್ಥೆಯನ್ನು ಸರಿಪಡಿಸಿದರೆ ಸಾಕು ನೆಮ್ಮದಿಯಾಗಿ ಎಂತಹುದೇ ಕಾರ್ಯಕ್ರಮಗಳನ್ನು ಕಲಾಕ್ಷೇತ್ರದಲ್ಲಿ ಮಾಡಬಹುದಾಗಿವೆ. ಕಡಿಮೆ ವೆಚ್ಚದಲ್ಲಿ, ಕಡಿಮೆ ಸಮಯದಲ್ಲಿ ಆಗಬಹುದಾದ ರಿಪೇರಿ ಕೆಲಸಗಳನ್ನು ಮಾಡಿಸುವುದು ಬಿಟ್ಟು ಇಡೀ ಕಲಾಕ್ಷೇತ್ರವನ್ನೇ ಅತ್ಯಾಧಿಕರಣ ಮಾಡುತ್ತೇವೆ ಎನ್ನುವುದರ ಹಿಂದೆ ಇರುವಂತಿದೆ ಅಗೋಚರ ಆರ್ಥಿಕ ಅವ್ಯವಹಾರದ ಗುಟ್ಟು. 

ಹೌದು, ಸಂಸ್ಕೃತಿ ಇಲಾಖೆಯ ಕೃಪಾ  ಕಟಾಕ್ಷದಲ್ಲಿರುವ ಅಕಾಡೆಮಿ ಪ್ರಾಧಿಕಾರಗಳಿಗೆ ಹಾಗೂ ರಂಗಾಯಣಗಳಿಗೆ ಬಿಡುಗಡೆ ಮಾಡಲು ಅನುದಾನವಿಲ್ಲ. ಎಲ್ಲಿ ಈ ಸರಕಾರಿ ಸಂಸ್ಥೆಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಿದರೆ ಕೊಟ್ಯಾಂತರ ಹಣ ಬಿಡುಗಡೆ ಮಾಡಬೇಕಾಗುತ್ತದೆಯೋ ಎಂದು ಸರಕಾರ ಎಂಟು ತಿಂಗಳಾದರೂ ಇನ್ನೂ ನೇಮಕಾತಿ ಮಾಡುತ್ತಿಲ್ಲ. ಸಂಸ್ಕೃತಿ ಇಲಾಖೆಯ ಕಾರ್ಯಕ್ರಮದಲ್ಲಿ ಪ್ರದರ್ಶನ ಕೊಟ್ಟ ಜಾನಪದ ಕಲಾವಿದರಿಗೆ ಎರಡು ವರ್ಷಗಳಾದರೂ ಇನ್ನೂ ಗೌರವಧನ ಬಿಡುಗಡೆಯಾಗಿಲ್ಲ. ಸಾಂಸ್ಕೃತಿಕ ತಂಡಗಳಿಗೆ ಪ್ರಾಯೋಜನೆ ಕೊಡಲು ಹಣವಿಲ್ಲದಾಗಿದೆ, ಕಲಾ ತಂಡಗಳಿಗೆ ಕೊಡಲಾಗುವ ಅನುದಾನವನ್ನು ಕಡಿತಗೊಳಿಸಲಾಗಿದೆ, ಕಲಾವಿದರಿಗೆ ಮಾಸಿಕ ಪಿಂಚಣಿ ಎಂದೂ ಪ್ರತಿ ತಿಂಗಳು ಪಾವತಿಯಾಗುತ್ತಿಲ್ಲ. ಇಲಾಖೆಯ ರಂಗಮಂದಿರಗಳಲ್ಲಿರುವ ಸಿಬ್ಬಂದಿಗಳಿಗೆ ಆರೇಳು ತಿಂಗಳಿಗೊಮ್ಮೆ ಸತಾಯಿಸಿ ಸಂಬಳ ಕೊಡಲಾಗುತ್ತಿದೆ.  ಇಂತಹ ಆರ್ಥಿಕ ದುಸ್ಥಿತಿಯಲ್ಲಿ 24 ಕೋಟಿ ಖರ್ಚು ಮಾಡಿ ಕಲಾಕ್ಷೇತ್ರ ನವೀಕರಣ ಮಾಡುವ ಅಗತ್ಯವಾದರೂ ಏನಿದೆ? ಕಟ್ಟಿಸಲೇ ಬೇಕೆಂದಿದ್ದರೆ ಇದೇ ಹಣದಲ್ಲಿ ಬೆಂಗಳೂರಿನ ಬೇರೆ ಕಡೆ ಇನ್ನೊಂದು ಕಲಾಕ್ಷೇತ್ರವನ್ನೇ ಕಟ್ಟಲಿ. ಇಲ್ಲವೇ ಇಷ್ಟೇ ಹಣದಲ್ಲಿ ತಲಾ ಎರಡು ಕೋಟಿಗೊಂದರಂತೆ ಒಟ್ಟು 12 ಆಪ್ತ ರಂಗಮಂದಿರಗಳನ್ನು 12 ಜಿಲ್ಲಾ ಕೇಂದ್ರಗಳಲ್ಲಿ ಕಟ್ಟಿಸಬಹುದಾಗಿತ್ತು. ಹಾಗೆ ಮಾಡಿದರೆ ಆ ಜಿಲ್ಲಾಕೇಂದ್ರಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಗರಿಗೆದರಬಹುದಾಗಿತ್ತು. ಕನ್ನಡ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಅಗತ್ಯವಾದ ಇಂತಹ ಕಾರ್ಯಯೋಜನೆಗಳನ್ನು ಅನುಷ್ಟಾನಕ್ಕೆ ತರುವ ಬದಲಾಗಿ ದುಂದುವೆಚ್ಚದ ಅನಗತ್ಯ ಯೋಜನೆ ರೂಪಿಸುವ ಅಗತ್ಯವಾದರೂ ಏನಿದೆ? ಇಂತಹ ಅತೀ ವೆಚ್ಚದ ಆಧುನೀಕರಣಕ್ಕೆ ಈಗ ಒತ್ತಾಯ ಮಾಡಿದ್ದಾದರೂ ಯಾರು? ಇಂತಹುದನ್ನು ಯಾವೊಬ್ಬ ರಂಗಕರ್ಮಿಯೂ ಕೇಳಿಲ್ಲ, ಯಾವ ಸಾಹಿತಿ ಕಲಾವಿದರೂ ಒತ್ತಾಯಿಸಿಲ್ಲ. ಯಾವುದೇ ಸಂಘ ಸಂಸ್ಥೆಯೂ ಬೇಕೆ ಬೇಕೆಂದು ಪ್ರತಿಭಟನೆ ಮಾಡಿಲ್ಲ. ಆದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ವಯಂಪ್ರೇರಿತವಾಗಿ ಇಂತಹ ಅನಗತ್ಯ ವೆಚ್ಚದಾಯಕ ಯೋಜನೆ ರೂಪಿಸಿ ಸರಕಾರದ ಅನುಮೋದನೆಗೆ ಒತ್ತಾಯಿಸುತ್ತಿದೆಯೆಂದರೆ ಇದರ ಹಿಂದೆ ಇರುವ ಗುತ್ತಿಗೆ ಲಾಭಗಳ ಲೆಕ್ಕಾಚಾರಗಳ ಬಗ್ಗೆ ಗುಮಾನಿ ಪಡಲೇಬೇಕಿದೆ. ಈ ರೀತಿಯ ದುಂದು ವೆಚ್ಚಕ್ಕೆ ಮಾನ್ಯ ಮುಖ್ಯಮಂತ್ರಿಗಳು ಅನುಮತಿ ಕೊಡದೇ ನಿರಾಕರಿಸಬೇಕಿದೆ. ಇಂತಹ ಅನಗತ್ಯ ಅದ್ದೂರಿ ಯೋಜನೆಗಳ ವಿರುದ್ದ ಸಾಂಸ್ಕೃತಿಕ ಕ್ಷೇತ್ರದ ಕಲಾವಿದರು ಸಾಹಿತಿಗಳು ಹಾಗೂ ಸಂಘ ಸಂಸ್ಥೆಗಳು ದ್ವನಿ ಎತ್ತಲೇಬೇಕಿದೆ. ಕಲಾಕ್ಷೇತ್ರವನ್ನು ಕಲೆಗಾಗಿಯೇ ಮೀಸಲಿಡಬೇಕಾಗಿದೆ. 

- ಶಶಿಕಾಂತ ಯಡಹಳ್ಳಿ
28-01-2024

ಬಾಕಿ ಪ್ರಶಸ್ತಿಗಳ ಘೋಷಣೆ; ಸರಕಾರಕ್ಕೆ ಅಭಿನಂದನೆ

ತಹ ತಹ - 497

ಬಾಕಿ ಪ್ರಶಸ್ತಿಗಳ ಘೋಷಣೆ; ಸರಕಾರಕ್ಕೆ ಅಭಿನಂದನೆ


ಕರ್ನಾಟಕ ಸರಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಕ್ಷೇತ್ರದ ಸಾಧಕರಿಗೆ ಕೊಡಮಾಡುವ ಪ್ರಶಸ್ತಿಗಳು ನಾಲ್ಕು ವರ್ಷದಿಂದ ಬಾಕಿಯಾಗಿದ್ದವು. 2020-21 ಹಾಗೂ 2021-22 ನೇ ಸಾಲಿನ ಪ್ರಶಸ್ತಿಗಳು ಘೋಷಣೆಯಾಗಿ ಮೂರ್ನಾಲ್ಕು ವರ್ಷಗಳು ಕಳೆದರೂ ಬಾಕಿಯಾದ 31 ಪ್ರಶಸ್ತಿಗಳನ್ನು ಪ್ರದಾನ ಮಾಡದೇ ನಿರ್ಲಕ್ಷಿಸಲಾಗಿತ್ತು. ಹಾಗೂ 2022- 23 ನೇ ಸಾಲಿನ ಪ್ರಶಸ್ತಿಗಳ ಆಯ್ಕೆ ಪ್ರಯತ್ನವನ್ನೇ ಮಾಡಲೇ ಇಲ್ಲ. ಈಗ 2022-23 ಹಾಗೂ 2023-24 ನೇ ಸಾಲಿನ ಪ್ರಶಸ್ತಿಗಳಿಗಾಗಿ ಸಾಧಕರನ್ನು ಆಯ್ಕೆ ಮಾಡಲು ಸಮಿತಿ ರಚಿಸಿ ಸಂಭವನೀಯರ ಪಟ್ಟಿಯನ್ನೂ ಸಿದ್ದಪಡಿಸಲಾಗಿತ್ತಾದರೂ ಘೋಷಣೆ ಮಾಡಿರಲಿಲ್ಲ.

ಪ್ರಶಸ್ತಿ ಪ್ರದಾನ ಮಾಡುವಲ್ಲಾದ ವಿಪರೀತ ವಿಳಂಬವನ್ನು ಪ್ರಶ್ನಿಸಿ ಇತ್ತೀಚೆಗೆ ನಾನು ಲೇಖನವನ್ನೂ ಬರೆದಿದ್ದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಪ್ರಕಟಿತ ಲೇಖನವನ್ನು ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಚಿವರುಗಳಿಗೂ ಕಳುಹಿಸಲಾಗಿತ್ತು. ಬೇರೆ ಬೇರೆ ಕಡೆಗಳಿಂದಲೂ ಸರಕಾರದ ಮೇಲೆ ಒತ್ತಡ ಬರತೊಡಗಿತು. ಈಗಾಗಲೇ ಸಿದ್ದವಾಗಿರುವ, ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಬಿಡುಗಡೆ ಮಾಡಲು ಸರಕಾರವು ಮೀನಾಮೇಷ ಎನಿಸುತ್ತಿತ್ತು. 

ಅಂತಹ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನದಲ್ಲಾಗಿರುವ ವಿಳಂಬದ ಕುರಿತು ಲೇಖನ ಪ್ರಕಟವಾಯಿತು. ಈ ಲೇಖನದ ಪರೋಕ್ಷ ಪ್ರಭಾವವೋ, ಕಾಕತಾಳೀಯವೋ, ಪೂರ್ವನಿರ್ಧಾರಿತವೋ, ಸಾಂಸ್ಕೃತಿಕ ಲೋಕದ ಒತ್ತಡವೋ ಗೊತ್ತಿಲ್ಲ. ಅಂತೂ ಇಂತೂ ಎರಡು ವರ್ಷಗಳ ಪ್ರಶಸ್ತಿಗಳ ಪಟ್ಟಿ ಬಿಡುಗಡೆ ಮಾಡಲಾಯಿತು. ಜೊತೆಗೆ ಘೋಷಿಸಿ ಪ್ರದಾನ ಮಾಡದೇ ಇರುವ ಪ್ರಶಸ್ತಿಗಳಿಗೂ ಮುಕ್ತಿ ದೊರಕಿಸುವ ದಿನವೂ ನಿಗಧಿಯಾಯ್ತು. 

ಜನವರಿ 31 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಂದ ಎಲ್ಲಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜ.25 ರಂದು ಅಧೀಕೃತ ಆದೇಶ ಹೊರಡಿಸಿತು.

ಕಾಲಮಿತಿಯಲ್ಲಿ ಸಾಧಕರಿಗೆ ಪ್ರಶಸ್ತಿ ಕೊಡಬೇಕು ಎನ್ನುವುದನ್ನು ಕಾಡಿ ಬೇಡಿ ಒತ್ತಾಯಿಸಿ ಹೇಳಬೇಕಾದ ಅನಿವಾರ್ಯತೆಯನ್ನು ಸರಕಾರಗಳು ಸೃಷ್ಟಿ ಮಾಡಿವೆ. ಸರಕಾರ ಯಾವುದೇ ಪಕ್ಷದ್ದಾಗಿರಲಿ ಸಾಂಸ್ಕೃತಿಕ ಕ್ಷೇತ್ರದ ವಾರ್ಷಿಕ ಪ್ರಶಸ್ತಿಗಳು ಆಯಾ ವರ್ಷದಲ್ಲೇ ಘೋಷಣೆಯಾಗಿ ಪ್ರದಾನ ಮಾಡುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕರ್ತವ್ಯವಾಗಿದೆ. ಅದಕ್ಕಾಗಿಯೇ ಬಜೆಟ್ನಲ್ಲಿ ಇಲಾಖೆಗೆ ಅನುದಾನ ಮಂಜೂರಾಗಿರುತ್ತದೆ. ಇಲಾಖೆ ಮತ್ತು ಸರಕಾರ ಕಾಲಮಿತಿಯಲ್ಲಿ ಪ್ರಶಸ್ತಿ ಕೊಡಬೇಕಾದ ತನ್ನ  ಕರ್ತವ್ಯವನ್ನು ನಿರ್ಲಕ್ಷಿಸಿದಾಗ ಅದಕ್ಕಾಗಿ ಒತ್ತಾಯಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ.

ಪ್ರಶಸ್ತಿಗಳನ್ನು  ಘೋಷಿಸಿ ಕೊಡದೇ ಸತಾಯಿಸಿದಾಗ ಸಾಧಕರ ಮಾನಸಿಕ ವೇದನೆ ಅಸಹನೀಯ. ಪ್ರಶಸ್ತಿಯ ನಿರೀಕ್ಷೆಯಲ್ಲಿಯೇ ನೊಂದು ಮರಣ ಹೊಂದಿದ ಸಾಧಕರೂ ಇದ್ದಾರೆ. ಸರಕಾರಗಳ ಈ ವಿಳಂಬ ನೀತಿ ಅಕ್ಷಮ್ಯ. ಸರಕಾರ ಯಾವುದೇ ಬಂದರೂ ಪ್ರಶಸ್ತಿಗಳು ಆಯಾ ವರ್ಷವೇ ಘೋಷಣೆ ಮಾಡಿ ಪ್ರದಾನ ಮಾಡಬೇಕು ಎನ್ನುವ ನಿಯಮ ಜಾರಿಮಾಡಬೇಕಿದೆ. 

ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಆದೇಶವೂ ಆದ ಸಾಂಸ್ಕೃತಿಕ ನೀತಿಯಲ್ಲಿ ಈ ನಿಯಮ ಖಡ್ಡಾಯವಾಗಿದೆ. ಆದರೆ ಸಾಂಸ್ಕೃತಿಕ ನೀತಿ ಆದೇಶವಾಗಿ ಆರು ವರ್ಷಗಳೇ ಕಳೆದರೂ ಇನ್ನೂ ಅನುಷ್ಠಾನಕ್ಕೆ ಬರದೇ ಇರುವುದೇ ಈ ರೀತಿಯ ವಿಳಂಬಗಳಿಗೆ ಕಾರಣವಾಗಿದೆ. ಈಗಲಾದರೂ ಈ ಸರಕಾರ ಮುತುವರ್ಜಿ ವಹಿಸಿ ತಾನೇ ಆರು ವರ್ಷಗಳ ಹಿಂದೆ ಆದೇಶ ಮಾಡಿದ ಸಾಂಸ್ಕೃತಿಕ ನೀತಿಯನ್ನು ಜಾರಿಗೆ ತರುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಬೇಕಿದೆ. 

ಕಳೆದ ಒಂದು ವರ್ಷದಿಂದ ಸಂಸ್ಕೃತಿ ಇಲಾಖೆಯ ಕೃಪಾಪೋಷಣೆಯಲ್ಲಿ ಬರುವ ಎಲ್ಲಾ ಅಕಾಡೆಮಿ ಪ್ರಾಧಿಕಾರಗಳಿಗೆ ಅಧ್ಯಕ್ಷರು ಸದಸ್ಯರ ಆಯ್ಕೆಯನ್ನೇ ಮಾಡಿಲ್ಲ. ರಂಗಸಮಾಜಕ್ಕೆ ಸದಸ್ಯರನ್ನು ನೇಮಿಸಿಲ್ಲ. ಆರೂ ರಂಗಾಯಣಗಳಿಗೆ ನಿರ್ದೇಶಕರ ಆಯ್ಕೆಯಾಗಿಲ್ಲ. ಈ ಎಲ್ಲಾ ಸರಕಾರಿ ಸಂಸ್ಥೆಗಳು ಇದ್ದೂ ಇಲ್ಲದಂತಾಗಿದ್ದು ನಿಷ್ಕ್ರೀಯವಾಗಿವೆ. ಅವುಗಳಿಗೆ ಸೂಕ್ತವಾದವರನ್ನು ಬೇಗನೇ ನೇಮಕ ಮಾಡಿ ಸಾಂಸ್ಕೃತಿಕ ಕ್ಷೇತ್ರದ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುವ ಕೆಲಸವನ್ನು ಈ ಸರಕಾರ ಶೀಘ್ರವಾಗಿ ಮಾಡಬೇಕಾಗಿದೆ. ಈ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸರಕಾರಿ ಸಂಸ್ಥೆಗೆ ನೇತಾರರನ್ನು ಆಯ್ಕೆ ಮಾಡಲಾಗುತ್ತದೆ ಎನ್ನುವ ನಿರೀಕ್ಷೆ ಮುಂದೂಡುತ್ತಲೇ ಬಂದಿದೆ. ಇನ್ನೂ ವಿಳಂಬವಾದರೆ ಈ ಸರಕಾರವೂ ಸಾಂಸ್ಕೃತಿಕ ಲೋಕದ ವಿರೋಧಿ ಎಂಬುದು ಖಾತ್ರಿಯಾಗುತ್ತದೆ. 

ಕಲೆ ಸಾಹಿತ್ಯ ಭಾಷೆಗಳನ್ನು ಉಳಿಸಿ ಬೆಳೆಸುವುದು ಆಳುವ ಸರಕಾರದ ಜವಾಬ್ಧಾರಿಯಾಗಿದೆ.  ತನ್ನ ವಿಳಂಬ ಧೋರಣೆಯನ್ನು ಬದಿಗಿಟ್ಟು ಈ ಕೂಡಲೇ ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳಿಗೆ ಅರ್ಹರನ್ನು ನೇಮಕಾತಿಗಳನ್ನು ಮಾಡಿ ತನ್ನ ಹೊಣೆಗಾರಿಕೆಯನ್ನು ಹಾಲಿ ಸರಕಾರ  ನಿಭಾಯಿಸಬೇಕೆಂಬುದು ಕನ್ನಡ ನಾಡಿನ ಸಾಂಸ್ಕೃತಿಕ ಲೋಕದವರ ಒತ್ತಾಯವಾಗಿದೆ.

ಈಗಾಗಲೇ ಸಂಭಾವ್ಯರ ಆಯ್ಕೆ ಪಟ್ಟಿ ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯ ತಲುಪಿದೆ. ಅಂತಿಮ ಪಟ್ಟಿಯೂ ಸಿದ್ದವಾಗಿ ಮುಖ್ಯಮಂತ್ರಿಗಳ ಅನುಮತಿಗಾಗಿ ಕಾಯುತ್ತಿದೆ. ಆದರೆ ಘೋಷಣೆ ಮಾಡುವಲ್ಲಿ ಅನಗತ್ಯ ವಿಳಂಬ ಮಾಡಲಾಗುತ್ತಿದೆ. ರಾಜಕೀಯ ಕಾರಣಗಳು ಏನೇ ಇರಲಿ, ಸಾಂಸ್ಕೃತಿಕ ಸಂಸ್ಥೆಗಳನ್ನು ಹೀಗೆ ನಿರ್ಲಕ್ಷಿಸದೇ ಇರಲಿ. ತಕ್ಷಣವೇ ಎಲ್ಲಾ ಸರಕಾರಿ ಸಾಂಸ್ಕೃತಿಕ ಸಂಸ್ಥೆಗಳಿಗೆ ಪದಾಧಿಕಾರಿಗಳ ನೇಮಕಾತಿ ಘೋಷಣೆಯಾಗಲಿ. ಅಕಾಡೆಮಿ ಪ್ರಾಧಿಕಾರಗಳು ಕೊಡಮಾಡುವ ವಾರ್ಷಿಕ ಪ್ರಶಸ್ತಿಗಳೂ ಸಹ ಎರಡು ಮೂರು ವರ್ಷಗಳಿಂದ ಬಾಕಿಯಾಗಿವೆ. ನೇಮಕಾತಿ ಆದ ತಕ್ಷಣ ಅರ್ಹ ಸಾಧಕರನ್ನು ಪ್ರಶಸ್ತಿಗಳಿಗೆ ಅಕಾಡೆಮಿ ಪ್ರಾಧಿಕಾರಗಳು ಆಯ್ಕೆ ಮಾಡಿ ಪ್ರಧಾನ ಮಾಡಲಿ. ಸಾಧಕರನ್ನು ಗುರುತಿಸಿ ಪ್ರಶಸ್ತಿಗಳ ಮೂಲಕ ಗೌರವಿಸುವುದು ನಾಗರೀಕ ಸಮಾಜ ಹಾಗೂ ಸರಕಾರದ ಜವಾಬ್ದಾರಿ. ಸಂಸ್ಕೃತಿ ಉಳಿದರೆ ನಾಡು ಉಳಿಯುತ್ತದೆ. ಸಂಸ್ಕೃತಿ ಶ್ರೀಮಂತವಾದಷ್ಟೂ ನಾಗರೀಕತೆಗೆ ಅರ್ಥಬರುತ್ತದೆ. ಇದನ್ನೆಲ್ಲಾ  ಆಳುವ ಸರಕಾರಗಳು ಹೇಳಿಸಿಕೊಳ್ಳದೇ ಅರ್ಥಮಾಡಿಕೊಂಡು ಈ ನಾಡಿನ ಜನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಅಗತ್ಯವಾಗಿದೆ. 

- ಶಶಿಕಾಂತ ಯಡಹಳ್ಳಿ
27-01-2024

ಮನುವಾದಿಗಳ ರಾಮರಾಜ್ಯ Vs ಸಮಾನತೆಯ ಪ್ರಜಾರಾಜ್ಯ

ತಹ ತಹ.. 496

ಮನುವಾದಿಗಳ ರಾಮರಾಜ್ಯ Vs  ಸಮಾನತೆಯ ಪ್ರಜಾರಾಜ್ಯ


ಈಗ ದೇಶಾದ್ಯಂತ ರಾಮಮಂದಿರದ ಕುರಿತೇ ಮಾತುಕತೆ. ಬಹುತೇಕ ಮಾಧ್ಯಮಗಳಂತೂ ಶ್ರೀರಾಮನ ಕುರಿತು ಚರ್ಚೆಗೆ ಪ್ರಚಾರಕ್ಕೆ ತಮ್ಮ ಬಹುತೇಕ ಸಮಯ ಮೀಸಲಾಗಿಟ್ಟಿವೆ. ಸಂಘ ಪರಿವಾರದವರು ರಾಮರಾಜ್ಯ ಸ್ಥಾಪನೆಯೇ ತಮ್ಮ ಲಕ್ಷವೆಂದು ಘೋಷಿಸಿದ್ದಾರೆ. ರಾಮರಾಜ್ಯ ಬರಬೇಕು ಎಂದು ಮಾಧ್ಯಮಾಂಗಗಳು ಹೇಳುತ್ತಲೇ ಇವೆ. ಜನರೂ ಅದನ್ನು ನಂಬಿಕೊಂಡು ರಾಮರಾಜ್ಯ ಬಂದರೆ ತಮ್ಮೆಲ್ಲಾ ಗೋಳಿಗೆ ಮುಕ್ತಿ ಸಿಕ್ಕಿ ಸುಖ ಸಮೃದ್ಧಿ ವೃದ್ದಿಯಾಗುತ್ತದೆ ಎಂದುಕೊಂಡಿದ್ದಾರೆ. 

ಹಾಗಾದರೆ ರಾಮರಾಜ್ಯ ಅಂದರೆ ಏನು? ತೇತ್ರಾಯುಗದಲ್ಲಿ ರಾಮ ತನ್ನ ಪ್ರಜೆಗಳನ್ನೆಲ್ಲಾ ಸುಖವಾಗಿಟ್ಟಿದ್ದು ಕಳ್ಳತನ ಮೋಸ ವಂಚನೆ ಸುಲಿಗೆ ಇಲ್ಲದಂತೆ ನೋಡಿಕೊಂಡಿದ್ದ. ಹೀಗಾಗಿ ಅಂತಹ ವ್ಯವಸ್ಥೆ ಇರುವ ರಾಮರಾಜ್ಯ ಮತ್ತೆ ಸ್ಥಾಪನೆ ಆಗಬೇಕು ಎನ್ನುವುದು ಬಹುತೇಕರ ಆಶಯವಾಗಿದೆ.‌ ಹಾಗೂ ಹಾಗೆ ಜನತೆಯನ್ನು ನಂಬಿಸಲಾಗಿದೆ.

ಆದರೆ.. ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಪ್ರಜೆಗಳಿಗಾಗಿ ಪ್ರಜೆಗಳಿಂದ ಪ್ರಜೆಗಳಿಗೋಸ್ಕರ  ಆಡಳಿತ ವ್ಯವಸ್ಥೆ ಇರಬೇಕೆಂಬುದು ಸಂವಿಧಾನದ ಉದ್ದೇಶ. ಪ್ರಜಾತಂತ್ರದಲ್ಲಿ ಪ್ರಜೆಗಳ ಬಹುಮತದ ಮೇರೆಗೆ ಪ್ರಜಾಪ್ರತಿನಿಧಿಗಳ ಆಯ್ಕೆ ನಡೆಯುವ ಮೂಲಕ ದೇಶ ಮುನ್ನಡೆಯುತ್ತದೆ. ಆದರೆ ಶ್ರೀರಾಮನದು ರಾಜಪ್ರಭುತ್ವ. ಅಂದರೆ ಜನರು ಇಚ್ಚಿಸಲಿ ಬಿಡಲಿ ತಲೆತಲೆಮಾರುಗಳಿಂದ ರಾಜರುಗಳ ಸಂತಾನವೇ ರಾಜ್ಯಾಡಳಿತಕ್ಕೆ ಉತ್ತರಾಧಿಕಾರಿಯಾಗಿ ಆಳ್ವಿಕೆ ಮಾಡಬೇಕು ಎಂಬುದು ರಾಜಪ್ರಭುತ್ವದ ನಿಯಮ. ಈಗ ಅಂತಹ ರಾಜಪ್ರಭುತ್ವದ ವ್ಯವಸ್ಥೆಯನ್ನು ಮರು ಸ್ಥಾಪಿಸಲಂತೂ ಸಾಧ್ಯವಿಲ್ಲ. ಅದೆಷ್ಟೋ ಶತಮಾನಗಳಷ್ಟು ಮುಂದೆ ಬಂದಿರುವ ಆಧುನಿಕ ಕಾಲವನ್ನು ಮತ್ತೆ ತೇತ್ರಾಯುಗಕ್ಕೆ ಹಿಮ್ಮುಖವಾಗಿ ಚಲಿಸುವಂತೆ ಮಾಡಲು ಅವಕಾಶವೇ ಇಲ್ಲ.

ರಾಜಪ್ರಭುತ್ವ ಅಂದರೆ ಸರ್ವಾಧಿಕಾರಿ ವ್ಯವಸ್ಥೆ. ಅಲ್ಲಿ ರಾಜ ಹೇಳಿದ್ದೇ ಶಾಸನ. ಮಾಡಿದ್ದೇ ಕಟ್ಟಲೆ  ಕಾನೂನು. ನ್ಯಾಯ ನಿರ್ಣಯ ಮಾಡುವಲ್ಲಿಯೂ  ರಾಜನಾದವನ ತೀರ್ಪೇ ಅಂತಿಮ. ಆದರೆ ಈಗ ಅಂತಹ ರಾಜ್ಯಾಡಳಿತ ಅಸಾಧ್ಯವಾದರೂ ಸರ್ವಾಧಿಕಾರಿ ಪ್ರಭುತ್ವ ಸ್ಥಾಪನೆ ಸಾಧ್ಯವಿದೆ. ಅದೇ ಸಂಘ ಪರಿವಾರದ ಉದ್ದೇಶವೂ ಆಗಿದೆ. ಈ ದೇಶವನ್ನು ಹಿಂದೂರಾಷ್ಟ್ರ ಮಾಡಿ, ಪ್ರಜಾಪ್ರಭುತ್ವದ ಬದಲಾಗಿ ಸರ್ವಾಧಿಕಾರಿ ಪ್ಯಾಸಿಸ್ಟ್ ಪ್ರಭುತ್ವವನ್ನು ಸ್ಥಾಪಿಸಿ ಮತ್ತೆ ಮನುಸ್ಮೃತಿ ಆಧಾರಿತ ವರ್ಣಾಶ್ರಮ ಪ್ರಣೀತ ವ್ಯವಸ್ಥೆಯನ್ನು ರೂಪಿಸುವುದು ಹಿಂದುತ್ವವಾದಿಗಳ ಅಂತಿಮ ಗುರಿಯಾಗಿದೆ. ಆ ಗುರಿಯನ್ನು ಮುಟ್ಟಲು ರಾಮರಾಜ್ಯದ ಪರಿಕಲ್ಪನೆಯನ್ನು ಜನರ ಮನಸಲ್ಲಿ ಅಚ್ಚೊತ್ತುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಅದರ ಭಾಗವಾಗಿಯೇ ರಾಮನ ಸಂಕೀರ್ಥನೆ ದೇಶಾದ್ಯಂತ ಪ್ರತಿದ್ವನಿಸುತ್ತಿದೆ.

ಹೋಗಲಿ ರಾಮರಾಜ್ಯ ಅಂದರೆ ರಾಮನ ಆದರ್ಶಗಳ ಪಾಲನೆಯಾಗಬೇಕಲ್ಲವೇ. ವಚನ ಪಾಲನೆ ಎಂಬುದು ಶ್ರೀರಾಮನ ಆದರ್ಶಗಳಲ್ಲಿ ಪ್ರಮುಖವಾದದ್ದು ತಾನೆ. ಹಾಗಾದರೆ ರಾಮರಾಜ್ಯ ಸ್ಥಾಪನೆ ಬಯಸಿರುವ ಬಿಜೆಪಿ ಪಕ್ಷ ಹಾಗೂ ಅದರ ವಿಶ್ವಗುರುಗಳಾಗಿರುವ ಮೋದಿಯವರು ಕಳೆದ ಹತ್ತು ವರ್ಷಗಳಿಂದ ಜನರಿಗೆ ಕೊಟ್ಟ ಭರವಸೆಗಳನ್ನು ಸಮರೋಪಾದಿಯಲ್ಲಿ ಈಡೇರಿಸಿದ್ದೇ ಆದರೆ ಅವರು ನಿಜವಾದ ರಾಮನ ಆದರ್ಶದ ಪರಿಪಾಲಕರು ಎನ್ನಬಹುದಾಗಿದೆ. ಆದರೆ ಧಾರ್ಮಿಕ ಭಾವನಾತ್ಮಕ ಸಂಗತಿಗಳನ್ನು ಹೊರತು ಪಡಿಸಿ ಇಲ್ಲಿಯವರೆಗೂ ಜನರಿಗೆ ಕೊಟ್ಟ ಬಹುತೇಕ ವಚನಗಳನ್ನು ಈಡೇರಿಸದೇ ಇರುವುದರಿಂದ ಈ ವಿಶ್ವಗುರುವನ್ನು ವಚನಭ್ರಷ್ಟ ಎಂದು ಕರೆಯಬಹುದಲ್ಲವೇ. ವಚನ ಭ್ರಷ್ಟರಾದವರು ರಾಮನ ಅನುಯಾಯಿಯಾಗಲೂ ಸಾಧ್ಯವಿಲ್ಲ ಹಾಗೂ ಅಂತವರಿಂದ ರಾಮರಾಜ್ಯ ಸ್ಥಾಪನೆಯೂ ಆಗುವುದಿಲ್ಲ. 

ವಿದೇಶದ ಕಪ್ಪು ಹಣ ಭಾರತಕ್ಕೆ ತರಲಿಲ್ಲಾ, ಜನರಿಗೆಲ್ಲಾ ಹಂಚಿಕೆಯಾಗಲಿಲ್ಲ. ವರ್ಷಕ್ಕೆರಡು ಕೋಟಿಯಂತೆ ಕಳೆದ ಹತ್ತು ವರ್ಷಗಳಿಂದ ಇಪ್ಪತ್ತು ಕೋಟಿ ಉದ್ಯೋಗ ಸೃಷ್ಟಿಯಾಗಿ ನಿರುದ್ಯೋಗ ತೊಲಗಬಹುದಾಗಿತ್ತು ಆದರೆ ಈಗ ನಿರುದ್ಯೋಗ ಸಮಸ್ಯೆಯೇ ದೊಡ್ಡದಾಗಿದೆ. ರೈತರ ಆದಾಯ ದ್ವಿಗುಣವಾಗಬಹುದಾಗಿತ್ತು ಆಗಲಿಲ್ಲ. ರಸಗೊಬ್ಬರ ರೇಟು, ಗ್ಯಾಸ್ ದರ, ಇಂದನ ಬೆಲೆ ಕಡಿಮೆಯಾಗಬೇಕಿತ್ತು ಆದರೆ ಇರುವ ಸಬ್ಸಿಡಿಯನ್ನೂ ತೆಗೆದು ಹಾಕಲಾಯಿತು. ಅಭಿವೃದ್ದಿ ಅಂದರೆ ವಿಸ್ತಾರವಾದ ರಸ್ತೆ ಸೇತುವೆ ನಿರ್ಮಿಸಿ ಟೋಲ್ ಸಂಗ್ರಹಿಸಿ ಜನರ ಜೇಬಿಗೆ ಕತ್ತರಿ ಹಾಕುವುದೇ ಆಗಿರುವಾಗ, ಸರಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರುವುದೇ ಆರ್ಥಿಕ ನೀತಿಯಾಗಿರುವಾಗ ರಾಮರಾಜ್ಯ ಸ್ಥಾಪನೆ ಎನ್ನುವುದು ಕನಸಿನ ಮಾತೇ ಹೊರತು ಜಾರಿಮಾಡಲು ವಚನಭ್ರಷ್ಟತೆಯನ್ನೇ ರೂಢಿಸಿಕೊಂಡಿರುವ ಮಹಾನಾಯಕರಿಂದ ಸಾಧ್ಯವೇ ಇಲ್ಲ. ಆದರೂ ರಾಮರಾಜ್ಯ ಸ್ಥಾಪಿಸುತ್ತೇವೆಂದು ಹೇಳುವ ಸಂಘ ಪರಿವಾರ ಜನರಲ್ಲಿ ಭ್ರಮೆಯನ್ನು ಬಿತ್ತುತ್ತಲೇ ಇದೆ. ಹಾಗೂ ರಾಮರಾಜ್ಯದ ಪರಿಕಲ್ಪನೆ ಹಿಂದುತ್ವವಾದಿ ಸಂಘದ ಕನಸೂ ಆಗಿದೆ.

ಅದು ಹೇಗೆಂದರೆ. ರಾಮರಾಜ್ಯ ಎನ್ನುವುದು ಚಾತುರ್ವರ್ಣ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾಗಿತ್ತು. ಕ್ಷತ್ರೀಯರು ಆಳುತ್ತಿದ್ದರು, ಬ್ರಾಹ್ಮಣರು ಮಾರ್ಗದರ್ಶನ ಮಾಡುತ್ತಿದ್ದರು, ವೈಶ್ಯರು ವ್ಯಾಪಾರ ವ್ಯವಹಾರ ನೋಡಿಕೊಳ್ಳುತ್ತಿದ್ದರು, ಅಕ್ಷರ ವಂಚಿತ ಶೂದ್ರರು ಇವರಿಗೆಲ್ಲಾ ದುಡಿದು ಪರಿಶ್ರಮ ಪಡುತ್ತಿದ್ದರು. ಈ ನಾಲ್ಕೂ ವರ್ಣಗಳನ್ನು ಹೊರತುಪಡಿಸಿ ಇದ್ದ ಬಹುಸಂಖ್ಯಾತ ದಲಿತರು ಸಮಾಜದಿಂದಲೇ ಬಹಿಷ್ಕೃತರಾಗಿ ಅಸ್ಪೃಶ್ಯರಾಗಿ ಪ್ರಾಣಿಗಳಿಗಿಂತಲೂ ಕೀಳಾಗಿ ಬದುಕುತ್ತಿದ್ದರು. ಇದೇ ವರ್ಣಾಶ್ರಮ ಸಿದ್ದಾಂತದ ಮೂಲ ವ್ಯವಸ್ಥೆ. ಈ ವ್ಯವಸ್ಥೆಯನ್ನು ವಿರೋಧಿಸಿ ಶೂದ್ರ ಶಂಭೂಕನಂತವರು ತಪಸ್ಸು ಮಾಡಿದರೆ ಅವರ ಶಿರಸ್ಸನ್ನೇ ಸಂಹಾರ ಮಾಡಲು ಬ್ರಾಹ್ಮಣರು ರಾಮನನ್ನು ಬಳಸಿಕೊಂಡರು. ಶೂದ್ರ ಸಮೂಹಕ್ಕೆ ಅಕ್ಷರ ವಿದ್ಯೆ ನಿಷಿದ್ಧವಾಗಿತ್ತು. ಊರುಗಳಲ್ಲಿ ದಲಿತರ ಪ್ರವೇಶ ನಿಸೇಧಿಸಲಾಗಿತ್ತು. ಆದಿವಾಸಿ ಕಾಡು ಜನಾಂಗವನ್ನು ರಾಕ್ಷಸರು ಎಂದು ಹೇಳಿ ಹತ್ಯೆ ಮಾಡಲಾಗುತ್ತಿತ್ತು. ಮಹಿಳೆಯರನ್ನೂ ವಿದ್ಯೆ ಹಾಗೂ ಸಂಪತ್ತಿನಿಂದ ವಂಚಿತರನ್ನಾಗಿಸಿ ನಿಕೃಷ್ಟವಾಗಿ ಪರಿಗಣಿಸಲಾಗುತ್ತಿತ್ತು. ಇದು ರಾಮರಾಜ್ಯದಲ್ಲಿದ್ದ ವರ್ಣಾಶ್ರಮ ಪದ್ದತಿಯ ಆಚರಣೆ. ಇದಕ್ಕೆ ರಾಜನೂ ಬದ್ದನಾಗಿರಬೇಕಿತ್ತು. ಇಂತಹ ವ್ಯವಸ್ಥೆಯನ್ನು ರಕ್ಷಿಸುವುದೇ ರಾಜನಾದವನ ಕರ್ತವ್ಯವಾಗಿತ್ತು. 

ಈಗ ಇಂತಹ ರಾಮರಾಜ್ಯದ ಸ್ಥಾಪನೆ ಸಂಘ ಪರಿವಾರದ ಪ್ರಮುಖರ ಅಂತಿಮ ಗುರಿಯಾಗಿದೆ. ಇಂತಹ ಅಸಮಾನ ವ್ಯವಸ್ಥೆಯನ್ನು ಒಪ್ಪಿಕೊಳ್ಳ ಬಯಸುವವರು, ವೈದಿಕಶಾಹಿ ಶೋಷಣೆಯನ್ನು ಅಪ್ಪಿಕೊಳ್ಳಲು ಇಚ್ಚಿಸುವವರು ರಾಮರಾಜ್ಯದ ಕನಸನ್ನು ಕಾಣಬಹುದಾಗಿದೆ. 

ಇನ್ನು ರಾಮನನ್ನು ಆದರ್ಶ ಪುರುಷ ಎಂದು ಜನರಲ್ಲಿ ಬಿತ್ತಲು ಶತಮಾನಗಳಿಂದ ಪ್ರಯತ್ನಗಳು ನಡೆಯುತ್ತಲೇ ಇವೆ. ಅದಕ್ಕೆ ರಾಮನ ಆದರ್ಶಗಳನ್ನು ವೈಭವೀಕರಿಸಲಾಗುತ್ತಿದೆ. ಮಂದಿರಗಳನ್ನು ನಿರ್ಮಿಸುವ ಮೂಲಕ ರಾಮದೇವರ ಕುರಿತು ಶ್ರದ್ಧೆ, ಭಕ್ತಿ ಹಾಗೂ ನಂಬಿಕೆಯನ್ನು ಮಾರ್ಕೆಟಿಂಗ್ ಮಾಡಲಾಗುತ್ತಿದೆ. ಸಂಘದ ಉದ್ದೇಶ ಬಹಳ ಸ್ಪಷ್ಟವಾಗಿದೆ. ದೇವರು ಧರ್ಮದ ಭ್ರಮೆಯನ್ನು ಜನರಲ್ಲಿ ಬಿತ್ತುವ ಮೂಲಕ ಮನುಸ್ಮೃತಿ ಆಧಾರಿತ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದೇ ಅವರ ಉದ್ದೇಶವಾಗಿದೆ. ಅಂತಹ ವ್ಯವಸ್ಥೆಗೆ ರಾಮರಾಜ್ಯ ಅಂತಾ ಕರೆಯಲಾಗುತ್ತಿದೆ. 

ಹೋಗಲಿ, ರಾಮನ ಆದರ್ಶಗಳನ್ನು ಅಂಧಶ್ರದ್ದೆಯಿಂದ ನಂಬುವ ಬದಲು ವಿಮರ್ಶಾತ್ಮಕವಾಗಿ ನೋಡಬಹುದಾಗಿದೆ. ವಚನ ಪಾಲನೆ ಹೆಸರಲ್ಲಿ ವಯೋವೃದ್ದ ತಂದೆಯನ್ನು ಬಿಟ್ಟು ಹೋಗಿ ದಶರಥ ರಾಜನ ನೋವು ಸಾವಿಗೆ ಕಾರಣವಾಗಿದ್ದು ರಾಮನ ಆದರ್ಶ ಹೇಗೆ ಎಂದು ಪ್ರಶ್ನಿಸಬಹುದಾಗಿದೆ. ತಂದೆಯ ಭಾವ ಜೀವಕ್ಕಿಂತಲೂ ವಚನಪಾಲನೆ ಮುಖ್ಯವಾಗಿತ್ತಾ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ. 

ಏಕಪತ್ನೀವೃತಸ್ಥ ಎಂಬುದು ಶ್ರೀರಾಮನ ಆದರ್ಶ ಗುಣದಲ್ಲಿ ಪ್ರಧಾನವಾದದ್ದು. ಅಂದರೆ ಮಹಿಳೆಗೆ ಅತೀ ಹೆಚ್ಚು ಗೌರವವನ್ನು ರಾಮ ಕೊಡುತ್ತಿದ್ದ ಹಾಗೂ ಆಗಿನ ಕಾಲದಲ್ಲಿ ಸಹಜವಾಗಿದ್ದ ಬಹುಪತ್ನಿತ್ವ ವ್ಯವಸ್ಥೆಯನ್ನು ಮುರಿದು ಮರ್ಯಾದಾ ಪುರುಷೋತ್ತಮನಾದ ಎಂಬುದೆಲ್ಲಾ ಸರಿ. ಆದರೆ ಪ್ರಶ್ನೆ ಇರುವುದು ಬರೀ ಏಕಪತ್ನಿವೃತಸ್ಥನಾಗಿದ್ದರೆ ಮಾತ್ರ ಮರ್ಯಾದಾ ಪುರುಷೋತ್ತಮನಾಗಲು ಸಾಧ್ಯವಿಲ್ಲ. ತನ್ನನ್ನೇ ನಂಬಿಕೊಂಡು ಬಂದ ಪತ್ನಿಯನ್ನು ಕೊನೆಯವರೆಗೂ ರಕ್ಷಿಸುವುದೂ ಪತಿಯಾಗಿ ಮಾತ್ರವಲ್ಲ ರಾಜನಾಗಿಯೂ ಶ್ರೀರಾಮನ ಕರ್ತವ್ಯವಾಗಿರಬೇಕಿತ್ತಲ್ಲವೇ? ಆದರೆ ಆಗಿದ್ದೇನು? ಅಗಸನೊಬ್ಬನ ಮಾತಿನ  ಹಿನ್ನಲೆಯನ್ನು ಪರಿಶೀಲಿಸದೇ, ಯಾವುದೇ ವಿಚಾರಣೆಯೂ ಇಲ್ಲದೇ ಗರ್ಭಿಣಿಯಾದ ಹೆಂಡತಿಯನ್ನು ದಟ್ಟವಾದ ಅರಣ್ಯದಲ್ಲಿ ಒಂಟಿಯಾಗಿ ಬಿಟ್ಟಿದ್ದು ಮರ್ಯಾದಾ ಪುರುಷೋತ್ತಮನಿಗೆ ಶೋಭೆ ತರುವಂತಹುದಲ್ಲವಲ್ಲವೇ. ಪ್ರಜೆಗಳ ಮಾತಿಗೆ ಅಷ್ಟು ಗೌರವವನ್ನು ರಾಮ ಕೊಡುತ್ತಿದ್ದ ಎಂದು ನಂಬಿಸಲಾಗಿದೆ. ಆದರೆ ಸೀತೆಯೂ ರಾಮರಾಜ್ಯದ ಪ್ರಜೆಯಲ್ಲವೇ. ಒಬ್ಬ ಪ್ರಜೆಗಾಗಿ ಇನ್ನೊಬ್ಬ ಪ್ರಜೆಯನ್ನು ವಿನಾಕಾರಣ ಘೋಷ ಘೋರ ಶಿಕ್ಷೆಗೆ ಅಳವಡಿಸಿದ್ದು ಅಮಾನವೀಯತೆ ಅಲ್ಲವೇ? ಪ್ರೀತಿಯನ್ನು ಬಯಸಿ ಬಂದ ಆದಿವಾಸಿ ಮಹಿಳೆಯ ಮೊಲೆ ಮೂಗು ಕತ್ತರಿಸಿ ಅವಮಾನಿಸಿದ್ದಕ್ಕೆ ಸಾಕ್ಷಿಯಾದ ರಾಮ ಅದು ಹೇಗೆ ಮಹಿಳಾಪರ ಆಗಿರಲು ಸಾಧ್ಯ? 

ಇನ್ನು ಸಹೋದರನ ಪತ್ನಿಯನ್ನು ಅಕ್ರಮವಾಗಿ ಇಟ್ಟುಕೊಂಡಿದ್ದ ಅರಣ್ಯವಾದಿ ಸುಗ್ರೀವನಿಗೆ ಬುದ್ದಿ ಹೇಳುವ ಬದಲಾಗಿ ಆತನ ಅಣ್ಣ ವಾಲಿಯನ್ನು ಮೋಸದಿಂದ ಕೊಂದಿದ್ದು ಯಾವ ಆದರ್ಶ? ವಾನರನನ್ನು ಹೇಗಾದರೂ ಕೊಲ್ಲಬಹುದು ಎನ್ನುವುದು ಶಾಸ್ತ್ರಸಮ್ಮತವಂತೆ. ಆದರೆ ವಾನರರೋ ಆದಿವಾಸಿಗಳೋ ಎಲ್ಲರನ್ನೂ ಸಲುಹುವುದು ದೇವರ ಅವತಾರದ ಕಾಯಕವಲ್ಲವೇ? 

ಹೌದು, ರಾಮ ಧರ್ಮ ರಕ್ಷಣೆಗಾಗಿಯೇ ಅವತರಿಸಿದ್ದು. ಆದರೆ ಯಾವ ಧರ್ಮ? ಯಾರ ಧರ್ಮ ರಕ್ಷಣೆ ಎನ್ನುವುದೇ ಪ್ರಶ್ನೆ. ಅರಣ್ಯದಲಿ ಆತಂಕ ಸೃಷ್ಟಿಸಿದ್ದ ಋಷಿಮುನಿಗಳ ಯಜ್ಞಯಾಗಾದಿಗಳಿಗೆ ಭಂಗ ತಂದ ಅರಣ್ಯವಾಸಿಗಳನ್ನು ರಾಕ್ಷಸರೆಂದು ಆಪಾದಿಸಿ ಹತ್ಯೆ ಮಾಡಿದ್ದು ಬ್ರಾಹ್ಮಣ ಕುಲಸಂಜಾತ ಮುನಿಗಳಿಗಾಗಿ. ತಪೋನಿರತ ಶೂದ್ರ ಶಂಭೂಕನನ್ನು ಸಂವರಿಸಿದ್ದು ಅಸಹಿಷ್ಣುತತೆಯ ವೈದಿಕರಿಗಾಗಿ. ನಂಬಿ ಬಂದ ಪತ್ನಿಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಿದರೂ ಸಮಾಧಾನವಾಗದೇ ಕುಂಟು ನೆಪ ಹೇಳಿ ಕಾಡಿಗೆ ಕಳುಹಿಸಿದ್ದು ಪುರುಷ ಪ್ರಧಾನ ವ್ಯವಸ್ಥೆಯ ರಕ್ಷಣೆಗಾಗಿ. ಕೊನೆಗೆ ಘನಘೋರ ಯುದ್ದಮಾಡಿದ್ದು ಕ್ಷತ್ರೀಯ ಧರ್ಮ ರಕ್ಷಣೆಗಾಗಿ. ಅಂದರೆ ಪುರೋಹಿತಶಾಹಿ ವೈದಿಕ ಧರ್ಮವನ್ನು ಹಾಗೂ ತನ್ನ ಕ್ಷತ್ರೀಯ ಧರ್ಮವನ್ನು ಪಾಲಿಸಿ, ಪಿತೃಪ್ರಧಾನ ವ್ಯವಸ್ಥೆಯನ್ನು ಪಾಲಿಸಿದ ರಾಮನ ರಾಜ್ಯದಲ್ಲಿ ಶೂದ್ರರು ಶೂದ್ರರಾಗಿಯೇ ಇರಬೇಕಿತ್ತು, ಮಹಿಳೆಯರು ಪುರುಷರ ಆಜ್ಞಾವರ್ತಿಯಾಗಿರಬೇಕಿತ್ತು, ದಲಿತರ ಅಸ್ತಿತ್ವವಂತೂ ನಗಣ್ಯವಾಗಿತ್ತು. ಒಟ್ಟಾರೆಯಾಗಿ ವೈದಿಕಶಾಹಿಯ ಅನತಿಯಂತೆ ವರ್ಣಾಶ್ರಮ ಧರ್ಮವನ್ನು ರಕ್ಷಿಸುವುದಕ್ಕೆ ಕ್ಷತ್ರೀಯ ರಾಮನ ಅವತಾರ ಸೃಷ್ಟಿಸಲಾಯಿತು ಎಂಬುದು ನಿರ್ವಿವಾದ. ಈಗ ಹಿಂದೂ ಧರ್ಮದ ಸ್ಥಾಪನೆಯಾಗಬೇಕು ಎನ್ನುವ ಹಿಂದುತ್ವವಾದಿಗಳ ಉದ್ದೇಶವೂ ವೈದಿಕಶಾಹಿ ಮನುಧರ್ಮದ ರಕ್ಷಣೆಯೇ ಆಗಿದೆ. ಅದಕ್ಕಾಗಿ ರಾಮನಂತಹ ಸನಾತನ ಧರ್ಮರಕ್ಷಕ ಹಾಗೂ ರಾಮರಾಜ್ಯದಂತಹ ಸರ್ವಾಧಿಕಾರಿ ವ್ಯವಸ್ಥೆ ಬೇಕಾಗಿದೆ. ಅದಕ್ಕಾಗಿ ಈಗ ರಾಮನಿಲ್ಲದಿದ್ದರೂ ರಾಮನ ನಾಮಬಲದಿಂದ ಹಿಂದುತ್ವ ರಾಷ್ಟ್ರ ಸ್ಥಾಪನೆಗೆ ಪ್ರಯತ್ನ ಮಾಡಲಾಗುತ್ತಿದೆ. ರಾಮನ ಬದಲಾಗಿ ಮೋದಿಯಂತಹ ವರ್ಣಾಶ್ರಮ ಧರ್ಮರಕ್ಷಕನನ್ನು ಅವತಾರಪುರುಷನನ್ನಾಗಿ ಚಿತ್ರಿಸಲಾಗುತ್ತಿದೆ.

ದುಷ್ಟರ ಸಂಹಾರ ರಾಮಾವತಾರದ ಉದ್ದೇಶವಾಗಿದೆ ಎಂಬುದು ರಾಮಾಯಣದ ಸಮರ್ಥನೆ. ಆದರೆ ರಾಮರಾವಣರ ಕದನದಲ್ಲಿ ನೊಂದವರು ಹಾಗೂ ಸತ್ತವರ ಜೀವಕ್ಕೆ ಬೆಲೆ ಇಲ್ಲವೇ. ಧರ್ಮಸಂಸ್ಥಾಪನೆಗೆ ಹಿಂಸೆಯೂ ಆದರ್ಶ ಅನ್ನುವುದೇ ಆದಲ್ಲಿ ದಯೆ ಇಲ್ಲದ ಧರ್ಮ ಯಾವುದಿದ್ದರೇನು? ಯುದ್ದವೆಂದರೆ ಮತ್ತದೇ ಹಿಂಸೆ ಪ್ರತಿಹಿಂಸೆ, ತಂತ್ರ ಪ್ರತಿತಂತ್ರ, ಮೋಸ ವಂಚನೆ ಶಡ್ಯಂತ್ರಗಳು ತಾನೆ. ಇವೆಲ್ಲವನ್ನೂ ಮೀರಿ ಅಹಿಂಸೆ ಮೂಲಕ ಶಾಂತಿ ಸ್ಥಾಪನೆ ಮಾಡಿದ್ದೇ ಆಗಿದ್ದರೆ ರಾಮ ನಿಜಕ್ಕೂ ಆದರ್ಶವಾದಿಯಾಗುತ್ತಿದ್ದ. ಅಹಿಂಸೆ ಮೂಲಕ ದುಷ್ಟರ ಮನಪರಿವರ್ತನೆ ಹಾಗೂ ಸಮಾಜ ಪರಿವರ್ತನೆ ಮಾಡುವ ಮಹತ್ಕಾರ್ಯವನ್ನು ಮಾಡಿದ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ರಂತವರು ನಿಜವಾದ ಆದರ್ಶ ವ್ಯಕ್ತಿಗಳಾಗಬೇಕಿದೆ. ನಿಜವಾಗಿ ಬೇಕಿರುವುದು ಹಿಂಸಾತ್ಮಕ ದುಷ್ಟಸಂವಾರವಲ್ಲಾ, ದುಷ್ಟರು ಎನ್ನುವವರ ಪರಿವರ್ತನೆ. ಯಾಕೆಂದರೆ ಪ್ರತಿಯೊಬ್ಬರಲ್ಲೂ ಒಳಿತು ಹಾಗೂ ಕೆಡುಕಿನ ಗುಣಗಳು ಇದ್ದೇ ಇರುತ್ತವೆ. ಕೆಡುಕುತನಕ್ಕೆ ಕೊಲೆಯೇ ಅಂತಿಮವಲ್ಲ.

ಆದರೆ ಹಿಂದುತ್ವವಾದಿಗಳಿಗೆ ಬೇಕಿರುವುದು ಧರ್ಮಸಂಸ್ಥಾಪನೆ. ಅದೂ ಹಿಂದುತ್ವದ ರಕ್ಷಣೆ. ಅಂದರೆ ವರ್ಣಾಶ್ರಮ ಧರ್ಮದ ಸಂರಕ್ಷಣೆ ಮತ್ತು ಪುನರ್ ಪ್ರತಿಷ್ಠಾಪನೆ. ಅದಕ್ಕಾಗಿಯೇ ಅವರಿಗೆ ರಾಮ ಬೇಕು, ರಾಮರಾಜ್ಯ ಬರಬೇಕು. ಚಾತುರ್ವರ್ಣ್ಯದ ಧರ್ಮ ರಕ್ಷಣೆಗಾಗಿ ಅದೆಷ್ಟೇ ಸೌಹಾರ್ಧತೆ ಕದಡಲಿ, ಮನಸುಗಳು ಒಡೆಯಲಿ, ಹೆಣಗಳು ಉರುಳಲಿ, ರಕ್ತಪಾತವಾಗಲಿ ಅದೆಲ್ಲವೂ ಸಮರ್ಥನೀಯವೇ ಧರ್ಮದ ಗುತ್ತಿಗೆದಾರರಿಗೆ. ಈಗ ಬೇಕಿರುವುದು ಪುರೋಹಿತಶಾಹಿ ಪ್ರಣೀತ ರಾಮರಾಜ್ಯವಲ್ಲಾ, ಅಂಬೇಡ್ಕರ್ ಸಂವಿಧಾನ ಪ್ರೇರಿತ ಪ್ರಜಾರಾಜ್ಯ. ಧರ್ಮದ ಹೆಸರಲ್ಲಿ ಹಿಂಸೆಯನ್ನು ಪ್ರಚೋದಿಸುವ ಬಿಜೆಪಿಯ ರಾಮನಿಗಿಂತಲೂ ಅಹಿಂಸೆ ಸಮಾನತೆ ಸಾಮರಸ್ಯ ಸಾರುವ ಬುದ್ದ ಬಸವ ಅಂಬೇಡ್ಕರ್ ಈಗ ಹೆಚ್ಚು ಪ್ರಸ್ತುತ. ಈಗ ಆಯ್ಕೆ ಈ ದೇಶದ ಜನರ ಮುಂದಿದೆ. ಭಾವಪ್ರಚೋದನೆಗೆ ಒಳಗಾಗಿ ಹಿಂದುತ್ವವಾದಿಗಳ ಹಿಂದೆ ಹೋಗಿ ಸಂವಿಧಾನ ಕೊಟ್ಟ ಸಮಾನತೆಯ ಅವಕಾಶಗಳನ್ನು ಬಿಟ್ಟುಕೊಡುವುದೋ ಇಲ್ಲಾ ಪ್ರಜಾಪ್ರಭುತ್ವವನ್ನು ಉಳಿಸಲು ಹಾಗೂ ಸಂವಿಧಾನವನ್ನು ರಕ್ಷಿಸಲು ಮತಾಂಧ ಶಕ್ತಿಗಳ ಶಡ್ಯಂತ್ರವನ್ನು ವಿಫಲಗೊಳಿಸುವುದೋ ಎಂಬುದನ್ನು ಈ ದೇಶದ ಜನತೆ ತೀರ್ಮಾನಿಸಬೇಕಿದೆ. ಸರ್ವಾಧಿಕಾರದ ರಾಮರಾಜ್ಯವೋ ಇಲ್ಲಾ ಸಮಾನತೆಯ ಪ್ರಜಾರಾಜ್ಯವೋ ಎನ್ನುವ ಆಯ್ಕೆಯ ಮೇಲೆ ಈ ದೇಶದ ಮುಂದಿನ ಭವಿಷ್ಯ ನಿರ್ಧಾರವಾಗುತ್ತದೆ. ಸಮಾನತೆ ಸೌಹಾರ್ಧತೆ ಸಾಮರಸ್ಯ ಹಾಗೂ ಸ್ವಾತಂತ್ರ್ಯಗಳಿಗಾಗಿ ಪ್ರಜಾತಂತ್ರವನ್ನು ಉಳಿಸಿಕೊಳ್ಳಲೇ ಬೇಕಿದೆ. ಜನರು ಭಾವನಾತ್ಮಕ ಭ್ರಮೆಯನ್ನು ಬದಿಗಿರಿಸಿ ವಾಸ್ತವವನ್ನು ಅರಿತುಕೊಳ್ಳಬೇಕಿದೆ. ನಿಜವಾದ ಅರ್ಥದಲ್ಲಿ ಪ್ರಜಾರಾಜ್ಯ ಸ್ಥಾಪನೆಯಾಗಬೇಕಿದೆ.

- ಶಶಿಕಾಂತ ಯಡಹಳ್ಳಿ

   25-01-2024

ಭಕ್ತಿ ಭಾವಾವೇಶದ ಅಡ್ಡಪರಿಣಾಮಗಳು

ತಹ ತಹ - 495

ಭಕ್ತಿ ಭಾವಾವೇಶದ  ಅಡ್ಡಪರಿಣಾಮಗಳು


ಬೇವು ಬಿತ್ತಿ ಮಾವು ಪಡೆಯಲು ಸಾಧ್ಯವೇ?. ಮತಾಂಧತೆಯ ವಿಷ ಬೀಜವನ್ನು ಭಕ್ತರ ಮನದೊಳಗೆ ನಾಟಿಮಾಡಿ ಸೌಹಾರ್ಧತೆಯ ಫಲವನ್ನು ಅಪೇಕ್ಷಿಸಲು ಆಗುತ್ತದೆಯಾ.? ರಕ್ತಸಿಕ್ತ ಸಂಘರ್ಷದ ಮೂಲಕ, ಪ್ರಾರ್ಥನಾ ಮಂದಿರದ ನಾಶದ ಮೂಲಕ ರಾಮಮಂದಿರ ನಿರ್ಮಿಸಿದ್ದು ರಾಮಭಕ್ತರಿಂದ ಸಹನೆ ಸಾಮರಸ್ಯವನ್ನು ಆಶಿಸಬಹುದಾ?

ಊಹೂಂ. ಸಾಧ್ಯವೇ ಇಲ್ಲ ಎಂಬುದಕ್ಕೆ ಅಯೋಧ್ಯೆಯಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆಯ ಕಾಲಕ್ಕೆ ದೇಶಾದ್ಯಂತ ಕೆಲವು ಅಂಧಭಕ್ತರು ನಡೆಸಿದ ದಾಂದಲೆ ದೌರ್ಜನ್ಯ ಹಿಂಸಾಚಾರ ಹಾಗೂ ಧರ್ಮದ್ವೇಷದ ಬಿಡಿ ಘಟನೆಗಳೇ ಸಾಕ್ಷಿಯಾಗಿವೆ. 

ಪುಣೆಯಲ್ಲಿ  ಭಾರತೀಯ ಚಲನಚಿತ್ರ ಮತ್ತು ಟೆಲಿವಿಷನ್ ಸಂಸ್ಥೆ ( FTII) ಅಂತಾ ಕೇಂದ್ರ ಸರಕಾರದ ಪ್ರತಿಷ್ಠಿತ ಸಂಸ್ಥೆಯೊಂದಿದೆ. ಸಿನೆಮಾ ಹಾಗೂ ಟಿವಿ ಕುರಿತಂತೆ ತಾಂತ್ರಿಕ ತರಬೇತಿಯನ್ನು ಅಲ್ಲಿ ಕೊಡಲಾಗುತ್ತದೆ. ಬಾಲರಾಮ ಪ್ರತಿಷ್ಠಾನದ ಸಂಭ್ರಮದ ಮತ್ತಿನಲ್ಲಿದ್ದ
ಸಂಘ ಪರಿವಾರದ ಕೆಲವು ಅವಿವೇಕಿ ಧರ್ಮಾಂಧರು ಇದ್ದಕ್ಕಿದ್ದಂತೆ ಈ ತರಬೇತಿ ಸಂಸ್ಥೆಗೆ ಅತಿಕ್ರಮಣ ಮಾಡಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದೆ. "ರಿಮೆಂಬರ್ ಬಾಬರಿ; ಡೆತ್ ಆಪ್ ಕಾನಸ್ಟಿಟ್ಯೂಷನ್" ಎನ್ನುವ ಬ್ಯಾನರನ್ನು ವಿದ್ಯಾರ್ಥಿ ಸಂಘವು ಕ್ಯಾಂಪಸ್ಸಿನಲ್ಲಿ ಹಾಕಿದ್ದರಿಂದಾ ರೊಚ್ಚಿಗೆದ್ದ ಅಸಹಿಷ್ಣು ಮತಾಂಧ ಯುವಕರು ಬ್ಯಾನರನ್ನು ಹರಿದು ಸುಟ್ಟು ಹಾಕಿ ಇಡೀ ಕ್ಯಾಂಪಸ್ನಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿ ಅಟ್ಟಹಾಸ ಮೆರೆದಿದ್ದಾರೆ . ರಾಮಮಂದಿರದ ಉದ್ಘಾಟನೆ ಭಾವೈಕ್ಯತೆ ಹುಟ್ಟಿಸುವ ಬದಲು ಭಾವಪ್ರಚೋದನೆ ಮಾಡಿದ್ದರ ದುಷ್ಪರಿಣಾಮವೇ ಈ ದುರ್ಘಟನೆ. ಕಲಾವಿದ ತಂತ್ರಜ್ಞ ವಿದ್ಯಾರ್ಥಿಗಳ ಮೇಲೆ ನಡೆದ ಈ  ದುರ್ಘಟನೆ, ವಿದ್ಯಾದಾನ ಮಾಡುವ ಸಂಸ್ಥೆಯ ಮೇಲೆ ನಡೆಸಿದ ದಾಳಿ ಖಂಡನಾರ್ಹ.

ಹಾಗೆಯೇ ಮಹಾರಾಷ್ಟ್ರದ ಠಾಣೆ ವ್ಯಾಪ್ತಿಯ ಮೀರಾ ರಸ್ತೆಯಲ್ಲಿ ರಾಮಮಂದಿರ ಉದ್ಘಾಟನಾ ಪ್ರಯುಕ್ತ ಸಂಘ ಪರಿವಾರದವರು ಶೋಭಾಯಾತ್ರೆ ಆರಂಭಿಸಿದ್ದರು. ರಾಮಮಂದಿರದ  ಸಂಭ್ರಮದ ಸಮೂಹಸನ್ನಿಯಲ್ಲಿದ್ದ ಅತಿರೇಕಿಗಳ ಗುಂಪೊಂದು ಮಾರಕಾಸ್ತ್ರಗಳನ್ನು ಪ್ರದರ್ಶಿಸುತ್ತಾ, ಅಲ್ಪಸಂಖ್ಯಾತ ಸಮುದಾಯದವರ ವಿರುದ್ಧ ಉದ್ವೇಗಕಾರಿ ಘೋಷಣೆಗಳನ್ನು ಕೂಗುತ್ತಾ  ಹಿಂಸೆಗೆ ಇಳಿದು ಸಾಕಷ್ಟು ಮುಸ್ಲಿಂ ಅಂಗಡಿಗಳಿಗೆ ನುಗ್ಗಿ ದ್ವಂಸ ಮಾಡಿ ಕೋಮು ಸಂಘರ್ಷ ಹುಟ್ಟುಹಾಕಿತು. ಆದರೆ ಕೋಮುವಾದಿ ಸರಕಾರ ಹಿಂಸೆ ಆರಂಭಿಸಿದವರನ್ನು ಬಿಟ್ಟು ಕೆಲವಾರು ಅಲ್ಪಸಂಖ್ಯಾತ ಯುವಕರನ್ನು ಬಂಧಿಸಿ ಅವರ ಅಂಗಡಿ ಮನೆಗಳ ಮೇಲೆ ಬುಲ್ಡೋಜರ್ ಹರಿಸಿ ದ್ವಂಸ ಮಾಡಿ ಉತ್ತರ ಪ್ರದೇಶದ ಮಾದರಿ ಅನುಸರಿಸಿತು. ರಾಮರಾಜ್ಯ ಸ್ಥಾಪನೆ ಅಂದ್ರೆ ಇದೇನಾ? 

ಉತ್ತರ ಪ್ರದೇಶದಲ್ಲಿ ಉನ್ಮಾದಪೀಡಿತ ಮತಾಂಧರ ಗುಂಪು ಮಸೀದಿಯೊಂದರ ಮೇಲೆ ಕೇಸರಿ ಬಾವುಟ ಹಾರಿಸಿ ತಮ್ಮ ರಾಮಾಂಧಭಕ್ತಿ ಪ್ರದರ್ಶಿಸಿದ್ದರೆ, ಮಧ್ಯಪ್ರದೇಶದಲ್ಲಿ ಚರ್ಚ್ ಮೇಲೆ ದಾಳಿ ನಡೆಸಿದ ಧರ್ಮಾಂಧರು ತಮ್ಮ ಕೋಮುದ್ವೇಷವನ್ನು ಸಾಬೀತುಪಡಿಸಿದ್ದಾರೆ. 

ಕರ್ನಾಟಕದ ಕಲಬುರ್ಗಿಯ ಕೋಟನೂರು ಪ್ರದೇಶದಲ್ಲಿ  ಮತಾಂಧರು ಅಂಬೇಡ್ಕರರವರ ಮೂರ್ತಿಗೆ ಚಪ್ಪಲಿ ಹಾರ ಹಾಕಿ ತಮ್ಮ ವಿಕೃತಿ ಮೆರೆದರು. ಈಗ ಇಡೀ ಕಲಬುರ್ಗಿ ನಗರ ಪ್ರಕ್ಷುಬ್ದವಾಗಿದೆ. ದಲಿತ ಸಂಘಟನೆಗಳಿಂದ ಸರಣಿ ಪ್ರತಿಭಟನೆಗಳು ನಡೆದಿವೆ. ಬಾಬಾಸಾಹೇಬರಿಗೆ ಈ ಸಂಘಿ ಕಮಂಗಿಗಳು ಮಾಡಿದ ಅಪಮಾನಕ್ಕೆ ಇಡೀ ನಗರವೇ ಹೊತ್ತಿ ಉರಿಯುವ ಸಾಧ್ಯತೆಯನ್ನು ಪೊಲೀಸರು ತಡೆದಿದ್ದಾರೆ. ದುಷ್ಕರ್ಮಿಗಳು ತಲೆಮರೆಸಿಕೊಂಡಿದ್ದಾರೆ. 

ರಾಮನ ಹೆಸರಲ್ಲಿ ತಮ್ಮ ರಕ್ಕಸ ಶಕ್ತಿಯನ್ನು ಹೆಚ್ಚಿಸಿಕೊಂಡ ಮತಾಂಧ ನೇತಾರರು ದೇಶಾದ್ಯಂತ ವೈದಿಕಶಾಹಿ ಹಿಂದುತ್ವ ಸಿದ್ದಾಂತವನ್ನು ಜಾರಿಗೆ ತಂದು ಈ ದೇಶವನ್ನು ಹಿಂದೂರಾಷ್ಟ್ರ ಮಾಡಲು ಸರ್ವಸನ್ನದ್ದರಾಗಿದ್ದಾರೆ. ರಾಮಮಂದಿರ ಎಂಬುದು ಹಿಂದೂಗಳನ್ನು  ಒಂದಾಗಿಸಲು ನೆಪವಷ್ಟೇ. ಆದರೆ ಮನುವಾದಿಗಳ ಉದ್ದೇಶವೇ ಅಂಬೇಡ್ಕರ್ ರವರ ಸಮಾನತೆ ಸಾರುವ ಸಂವಿಧಾನ ಬದಲಾಯಿಸುವುದು. ಸಂಘಿಗಳ ಮೊದಲ ಶತ್ರು ಮುಸ್ಲಿಂ ಧರ್ಮೀಯರಾದರೆ, ಎರಡನೇ ಶತ್ರು ಅಂಬೇಡ್ಕರ್ ರವರು ಹಾಗೂ ದಲಿತರು. ಚಾತುರ್ವರ್ಣ ವ್ಯವಸ್ಥೆಯಲ್ಲಿ ಅವಕಾಶ ಕೊಡದೇ ಬಹಿಷ್ಕೃತರನ್ನಾಗಿಸಿದ ದಲಿತರಿಗೆ ಮತ್ತು ಆದಿವಾಸಿಗಳಿಗೆ ಸಂವಿಧಾನದ ಮೂಲಕ ಸಮಾನತೆ ಕೊಟ್ಟಿದ್ದನ್ನು ಈ ಮನುವಾದಿಗಳಿಗೆ ಸಹಿಸಲು ಸಾಧ್ಯವಾಗುತ್ತಲೇ ಇಲ್ಲ. ಅದಕ್ಕಾಗಿ ಅಂಬೇಡ್ಕರ್ ರವರನ್ನು ಈಗಲೂ ಅವಮಾನಿಸುತ್ತಲೇ ಇರುತ್ತಾರೆ. ದಲಿತರ ಮೇಲೆ ದೌರ್ಜನ್ಯವನ್ನು ಮಾಡಿಸುತ್ತಲೇ ಇರುತ್ತಾರೆ. ರಾಷ್ಟ್ರಪತಿಯವರನ್ನೇ ಆದಿವಾಸಿ ವಿಧವೆ ಮಹಿಳೆ ಎನ್ನುವ ಕಾರಣಕ್ಕೆ ಆಗ ಹೊಸ ಸಂಸತ್ ಭವನ ಹಾಗೂ ಈಗ ರಾಮಮಂದಿರದ ಉದ್ಘಾಟನೆಯಿಂದ ದೂರ ಇಟ್ಟಿದ್ದೇ ಮನುವಾದಿ ಮತಾಂಧರ ದಲಿತ ವಿರೋಧಿತನಕ್ಕೆ ಲೇಟೆಸ್ಟ್ ಸಾಕ್ಷಿಯಾಗಿದೆ. 

ಅಲ್ಲಿ ಅಯೋಧ್ಯೆಯಲ್ಲಿ ನಡೆದ ಬಾಲರಾಮ ವಿಗ್ರಹ ಸ್ಥಾಪನೆಗೂ ಹಾಗೂ ಆ ಸಂಭ್ರಮದ ನೆಪದಲ್ಲಿ ದೇಶದ ಅಲ್ಲಲ್ಲಿ ನಡೆದ ಕೆಲವು ದುಷ್ಕೃತ್ಯಗಳಿಗೂ ಸಂಬಂಧವಿದೆ. ರಾಮಮಂದಿರ ಉದ್ಘಾಟನೆ ಎನ್ನುವುದು ರಾಮಭಕ್ತರಲ್ಲಿ ಭಾವತೀವ್ರತೆಯನ್ನು ಅತಿಯಾಗಿ ಪ್ರಚೋದಿಸಿದ್ದಂತೂ ಸುಳ್ಳಲ್ಲ. ಭಾವಪ್ರಚೋದನೆಗೊಳಗಾದ ಕೆಲವಾರು ಮತಾಂಧರು ಅಲ್ಪಸಂಖ್ಯಾತರನ್ನು ಅಪಮಾನಿಸಲು ಈ ಸಂದರ್ಭವನ್ನು ಬಳಸಿಕೊಂಡಿದ್ದಾರೆ. ದಲಿತ ಸಮುದಾಯದ ಮಹೋನ್ನತ ನಾಯಕರಾದ ಅಂಬೇಡ್ಕರ್ ರವರನ್ನೂ ಅವಮಾನಿಸುವ ದುಷ್ಕೃತ್ಯಕ್ಕೆ ಇಳಿದಿದ್ದಾರೆ.  ಈ ಮೂಲಕ ತಮ್ಮ ಮತಾಂಧ ಹಿಂದುತ್ವವನ್ನು ಸಾಬೀತು ಮಾಡುತ್ತಿದ್ದಾರೆ. 

ರಾಮಭಕ್ತಿ ಎನ್ನುವುದು ಪರಧರ್ಮ ಸಹಿಷ್ಣುತತೆಯನ್ನು ತಂದು ಕೊಡಬೇಕೆ ಹೊರತು ಮತ್ಸರವನ್ನಲ್ಲ. ಭಕ್ತಿ ಎಂಬುದು ಅವರವರ ಭಾವನೆಯೇ ಹೊರತು ದುರ್ಬಲರ ಮೇಲೆ ಸಂಘಟಿತರಾಗಿ ಶಕ್ತಿ ತೋರುವುದಲ್ಲ. ಇದನ್ನು ತಮ್ಮ ವಾನರ ಸೇನೆಗೆ ಕಲಿಸಿ ಕೊಡಬೇಕಾಗಿದ್ದ ಸಂಘ ಪರಿವಾರದ ನಾಯಕರು ರಾಮನ ಹೆಸರಲ್ಲಿ ಹಿಂದೂ ಮತ ಕ್ರೂಢಿಕರಣದಲ್ಲಿ ನಿರತರಾಗಿದ್ದಾರೆ. ಹೇಳಿದರೂ ಕೇಳಲಾಗದ ಉನ್ಮಾದ ಪರಿಸ್ಥಿತಿಯಲ್ಲಿ ಮತಾಂಧ ಭಕ್ತರಿದ್ದಾರೆ. ಇದೆಲ್ಲವನ್ನೂ ನೋಡಿ ಅಯೋಧ್ಯೆಯ ಬಾಲರಾಮ ಕೆತ್ತಿದ ಕಲ್ಲಿನಲಿ ಅರಳಿ ನಿಂತು ಮಂದಸ್ಮಿತನಾಗಿದ್ದಾನೆ. 

- ಶಶಿಕಾಂತ ಯಡಹಳ್ಳಿ
24-01-2024

ರಾಮನೆಂಬ ದಾರಿ ಹಿಂದೆ ಬೇರೆಯದೇ ಗುರಿ

ತಹ ತಹ - 494

ರಾಮನೆಂಬ ದಾರಿ ಹಿಂದೆ ಬೇರೆಯದೇ ಗುರಿ

ಅಂತೂ ಇಂತೂ ಅಪೂರ್ಣ ಮಂದಿರದಲಿ ಅಕಾಲಿಕ ಪ್ರಾಣ ಪ್ರತಿಷ್ಠಾನೋತ್ಸವ ಸಂಪನ್ನವಾಯಿತು. ಹಿಂದುತ್ವವಾದಿ ಶಂಕರಾಚಾರ್ಯರ ವಿರೋಧದ ನಡುವೆಯೂ, ಕೆಲವಾರು ವೈದಿಕ ಸ್ವಾಮೀಜಿಗಳ ಪ್ರತಿರೋಧದ ನಡುವೆಯೂ ಸಂಘ ಪರಿವಾರಿಗರ ಮಹತ್ವಾಂಕಾಂಕ್ಷಿ ಧಾರ್ಮಿಕ ಆಚರಣೆ ಸಾಂಗವಾಯಿತು.‌ ದೇಶಾದ್ಯಂತ ಹಿಂದೂ ಎನ್ನುವವರಲ್ಲಿ ರಾಮದೇವರ ಸಮೂಹಸನ್ನಿ ಬಿತ್ತಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮತಗಳ ಫಲ ಪಡೆಯಲು ಬಿಜೆಪಿ ಪೂರ್ವಭಾವಿ ಸಿದ್ದತೆ ಮಾಡಿಕೊಂಡಾಯಿತು. ಇಷ್ಟೆಲ್ಲದರ ನಡುವೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲು ಜನವರಿ 22 ನೇ ದಿನಾಂಕವನ್ನೇ ಯಾಕೆ ಆಯ್ದು ಕೊಳ್ಳಲಾಯಿತು ಎಂಬ ಪ್ರಶ್ನೆ ಯಾರನ್ನೂ ಕಾಡದೇ ಹೋಯಿತು. ಅದನ್ನು ತಿಳಿಯಬೇಕೆಂದರೆ ಆರೆಸ್ಸೆಸ್ಸಿನವರು ಮೂಹರ್ತ ನಿಗಧಿ ಮಾಡುವ ಹಿಂದಿರುವ ಪ್ರೀಪ್ಲಾನಿಂಗ್ ಹೇಗಿರುತ್ತದೆ ಎಂದರೆ ದಾರಿ ಒಂದು ಗುರಿ ಹಲವು ಎನ್ನುವಂತೆ. ಒಂದು ದಿನಾಂಕದ ಮಹತ್ವವನ್ನು ಕಡಿಮೆ ಮಾಡಲು ಅದೇ ದಿನಾಂಕದಂದು ಇನ್ನೊಂದು ಮಹತ್ತರ ಘಟನೆಯನ್ನು ಸೃಷ್ಟಿಸುವುದೇ ಅವರ ತಂತ್ರ. ಅರಿಯಲೇ ಬೇಕಿದೆ ಆ ಶಡ್ಯಂತ್ರ.

ಅದೇನೆಂಬುದನ್ನು ಉದಾಹರಣೆ ಮೂಲಕ ಅವಲೋಕಿಸೋಣ. ಈಗ  ಡಿಸೆಂಬರ್ 6 ಎಂದ ಕೂಡಲೇ ಭಾರತೀಯರಿಗೆ ತಕ್ಷಣ ನೆನಪಾಗುವುದು ಬಾಬರಿ ಮಸೀದಿ ದ್ವಂಸವಾದ ದಿನವೆಂದು.  ಈ ದಿನಾಂಕ  ದೇಶವಾಸಿಗಳಿಗೆ ಮರೆತು ಹೋಗಬಾರದೆಂದು ಅವತ್ತು ಸಂಘ ಪರಿವಾರಿಗರು ವಿಜಯ್ ದಿವಸ್ ಅಂತಾ ಆಚರಿಸಿ ಹಿಂದೂಗಳಿಗೆ ನೆನಪಿಸುವ ಕೆಲಸ ಮಾಡುತ್ತಲೇ ಇರುತ್ತಾರೆ.  ಹಾಗೂ ಮುಸ್ಲಿಂ ಸಮುದಾಯದವರು ತಮ್ಮ ಮಸೀದಿ ದ್ವಂಸದ ದುರಂತ್ ದಿನದ ಗಾಯವನ್ನು ಮರೆಯಲು ಸಾಧ್ಯವೇ ಇಲ್ಲದಂತೆ ಮಾಡುತ್ತಾರೆ. ಹೀಗೆ ಡಿಸೆಂಬರ್ 6  ನ್ನು ಭಾರತೀಯರ ಮನಸ್ಸಲ್ಲಿ ಅಚ್ಚಳಿಯದಂತೆ ಮೂಡಿಸುವ ತಂತ್ರವನ್ನು ಆರೆಸ್ಸೆಸ್ ಡಿಸೆಂಬರ್ 6. ರಂದೆ ಯಾಕೆ ಹೆಣೆದಿತ್ತು? ಆ ದಿನವನ್ನೇ ಬಾಬರಿ ಮಸೀದಿ ದ್ವಂಸಕ್ಕೆ ಆಯ್ಕೆ ಮಾಡಿಕೊಂಡಿದ್ದಕ್ಕೆ ಬಲವಾದ ಕಾರಣವೂ ಇತ್ತು.

ಅದು ಏನೆಂದರೆ, 1956 ಡಿಸೆಂಬರ್ 6, ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ರವರು ನಿಧನರಾದ ದಿನ. ಈ ಮಹಾನ್ ನಾಯಕನ ಪುಣ್ಯ ತಿಥಿಯನ್ನು ಮಹಾಪರಿನಿರ್ವಾಣದ ದಿನವಾಗಿ ಪ್ರತಿವರ್ಷ ಈ ದೇಶದ ಬಹುಸಂಖ್ಯಾತ ದಲಿತರಾದಿಯಾಗಿ ಶೋಷಿತ ಸಮುದಾಯ ಸ್ಮರಿಸುತ್ತದೆ. ದೇಶಾದ್ಯಂತ ಡಿಸೆಂಬರ್ 6 ರಂದು ಅಂಬೇಡ್ಕರ್ ರವರ ನೆನಪಿನಲ್ಲಿ ಅಗಣಿತ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತವೆ. ಈ ದೇಶದ ಆತ್ಮವಾಗಿ ಅಂಬೇಡ್ಕರರವರನ್ನು ಪರಿಗಣಿಸಲಾಗುತ್ತದೆ. ಆದರೆ ದಲಿತನೊಬ್ಬ ಭಾರತದ ಭಾಗ್ಯವಿಧಾತ ಆಗಿದ್ದನ್ನು ಈ ಮೇಲ್ಜಾತಿ ಬ್ರಾಹ್ಮಣಶಾಹಿ ಸಂಘದವರಿಗೆ ಸಹಿಸಲು ಸಾಧ್ಯವಾಗಲೇ ಇಲ್ಲ. ಜಾತಿ ಸಮಾನತೆ ಹಾಗೂ ಅಸ್ಪೃಶ್ಯತೆ ನಿವಾರಣೆ ಹಾಗೂ ಮೀಸಲಾತಿ ಕುರಿತ ಬಾಬಾಸಾಹೇಬರ ವಿಚಾರ ಮೇಲ್ವರ್ಗದ ವೈದಿಕಶಾಹಿಗಳಿಗೆ ಸಹಿಸಲು ಸಾಧ್ಯವಾಗಲೇ ಇಲ್ಲ. ಜನಮಾನಸದಲ್ಲಿ ಬದುಕಿದ ಅಂಬೇಡ್ಕರ್ ರವರ ಜನಪ್ರೀಯತೆ ಮತಾಂಧ ಶಕ್ತಿಗಳಿಗೆ ಜೀರ್ಣಿಸಿಕೊಳ್ಳಲಾಗಲಿಲ್ಲ.  ಹೇಗಾದರೂ ಮಾಡಿ ಅಂಬೇಡ್ಕರ್ ರವರ ಪರಿನಿರ್ವಾಣದ ನೆನಪನ್ನು ಬಹುಜನರ ಸ್ಮೃತಿಪಟಲದಿಂದ ಅಳಿಸಿ ಹಾಕಬೇಕೆಂದರೆ ಅದೇ ದಿನ ಇನ್ನೇನಾದರೂ ಮಹತ್ತರ ಕೆಲಸ ಮಾಡಬೇಕು ಎನ್ನುವುದೇ ಸಂಘದ ಸರಸಂಘಿಗಳ ಮಾಸ್ಟರ್ ಪ್ಲಾನ್ ಆಗಿತ್ತು. ಧರ್ಮದ್ವೇಷ ಬಿಟ್ಟು ಅವರಿಗೆ ಇನ್ನೇನು ತಾನೇ ಗೊತ್ತಿತ್ತು. ಅದಕ್ಕಾಗಿಯೇ ಉದ್ದೇಶಪೂರ್ವಕವಾಗಿ ಅಂಬೇಡ್ಕರರವರ ಪುಣ್ಯತಿಥಿಯ ದಿನವನ್ನೇ ಬಾಬರಿ ಮಸೀದಿ ದ್ವಂಸಕ್ಕೆ ಆಯ್ಕೆ ಮಾಡಲಾಗಿತ್ತು. ಅದಕ್ಕಾಗಿ ಪೂರ್ವಯೋಜಿತ ಕಾರ್ಯಯೋಜನೆ ರೂಪಿಸಲಾಗಿತ್ತು. ಹಿಂದೂ ಮುಸ್ಲಿಂ ಬಾಂಧವ್ಯವನ್ನು ನಾಶಗೊಳಿಸುವುದಕ್ಕೆಂದೇ ಬಾಬರಿ ಮಸೀದಿ ನಾಶ ಮಾಡಿ ಹಿಂದೂ ಮತಗಳನ್ನು ಕ್ರೂಢಿಕರಿಸುವ ಜೊತೆಗೆ ಅಂಬೇಡ್ಕರರವರ ಪುಣ್ಯದಿನಾವರಣೆಯ ದಿನದ ಪ್ರಭಾವವನ್ನು ಕಡಿಮೆ ಮಾಡುವ ಹಿಡನ್ ಅಜೆಂಡಾ ಕೇಸರಿ ಕಲಿಗಳಿಂದ ರೂಪಿಸಲಾಗಿತ್ತು. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಸಂಘ ತಯಾರಿ ನಡೆಸಿತ್ತು. 

ಅದರಲ್ಲಿ ಸಂಘ ಪರಿವಾರ ಒಂದಿಷ್ಟು ಯಶಸ್ವಿಯೂ ಆಯಿತು. ದೇಶಾದ್ಯಂತ ಮುಸ್ಲಿಂ ದ್ವೇಷವನ್ನು ಬಿತ್ತಿ ಅಧಿಕಾರದ ಫಲವನ್ನು ಬಿಜೆಪಿ ಪಡೆಯಿತು. ಆದರೆ ಬಹುಜನರ ಮನದಲ್ಲಿ ಬೇರು ಬಿಟ್ಟು ಆಲವಾಗಿ ಬೆಳೆದಿರುವ ಬಾಬಾಸಾಹೇಬರ ಸ್ಮೃತಿಯನ್ನು ಜನಮನದಿಂದ ಅಳಿಸುವಲ್ಲಿ ಸೋತಿತು. ಹೇಗಾದರೂ ಮಾಡಿ ಅಂಬೇಡ್ಕರರ ಪರಿನಿರ್ವಾಣದ ದಿನದ ಮಹತ್ವವನ್ನು ಡೈಲ್ಯೂಟ್ ಮಾಡಿ ಜನರ ಗಮನವನ್ನು ಬೇರೆ ಕಡೆಗೆ ತಿರುಗಿಸಲು ಪ್ರತಿ ವರ್ಷ ಡಿಸೆಂಬರ್ 6 ರಂದೇ ಸಂಘ ಪರಿವಾರದವರು ಬಾಬರಿ ಮಸೀದಿ ದ್ವಂಸದ ದಿನವನ್ನು ವಿಜಯೋತ್ಸವದ ದಿನವಾಗಿ ಆಚರಿಸುತ್ತಾ ಬಂದಿದ್ದಾರೆ. ಆದರೆ ಜನರು ಅಷ್ಟು ಮೂರ್ಖರಲ್ಲವಾದ್ದರಿಂದ ಬಾಬಾಸಾಹೇಬರ ನೆನಪನ್ನು ಅಳಿಸಲು ಇನ್ನೂ ಸಂಘ ಪರಿವಾರಕ್ಕೆ ಸಾಧ್ಯವಾಗಿಲ್ಲ. ಆದರೂ ತಮ್ಮ ಪ್ರಯತ್ನ ಬಿಡುತ್ತಿಲ್ಲ.

ಮಸೀದಿ ಒಡೆದು ರಾಮಮಂದಿರ ಕಟ್ಟಿರುವ ಸಂಘ ಪರಿವಾರ ಈಗ ರಾಮಮಂದಿರದ ಪ್ರಾಣ ಪ್ರತಿಷ್ಠಾಪನಾ ದಿನದ ನೆಪದಲ್ಲಿ ಮತ್ತದೇ ಹುನ್ನಾರವನ್ನು ಹೂಡಿದೆ. ಅರ್ಧ ಕಟ್ಟಿದ ಅಪೂರ್ಣ ಮಂದಿರದಲ್ಲಿ ಅಕಾಲಿಕವಾಗಿ ರಾಮನ ವಿಗ್ರಹ ಪ್ರತಿಷ್ಠಾಪನೆ ಮಾಡುತ್ತಿದೆ. ಲೋಕಸಭಾ ಚುನಾವಣೆ ಗೆಲ್ಲವುದಕ್ಕಾಗಿಯೇ ಈ ಅಕಾಲಿಕ ಪ್ರತಿಷ್ಠಾಪನಾ ಉನ್ಮಾದವೆಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಒಂದೇ ಕಲ್ಲಲ್ಲಿ ಹಲವು ಗುರಿಗಳನ್ನು ಹೊಡೆಯುವ ತಂತ್ರ ಸಂಘಿಗಳ ಮಂತ್ರವಾಗಿದೆ. ರಾಮಮಂದಿರ ಉದ್ಘಾಟನೆಗಾಗಿ ಆಯ್ಕೆ ಮಾಡಿದ ಜನವರಿ 22 ಎನ್ನುವ ದಿನಾಂಕವೂ ಸಹ ಮತ್ತೆ ಪರೋಕ್ಷವಾಗಿ ಅಂಬೇಡ್ಕರ್ ರವರನ್ನು ಗುರಿಯಾಗಿಸಿದೆ ಎಂದರೆ ಯಾರೂ ನಂಬಲಾರರು. ಉದ್ಘಾಟನೆಗೂ ಅಂಬೇಡ್ಕರ್ ರವರಿಗೂ ಎತ್ತನಿಂದೆತ್ತ ಸಂಬಂಧ ಎಂಬ ಪ್ರಶ್ನೆ ಕಾಡುತ್ತದೆ.

ಆದರೆ ಸಂಬಂಧ ಇದೆ. ಅಂಬೇಡ್ಕರ್ ರವರು ಭಾರತದ ಸಂವಿಧಾನ ಪ್ರಮುಖ ಶಿಲ್ಪಿ ಎನ್ನುವುದು ನಿರಾಕರಿಸಲಾಗದ ಸತ್ಯ. ಭಾರತದ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದವರು ಹಾಗೂ ಸಂವಿಧಾನದ ಪ್ರತಿಗಳನ್ನು ಬೀದಿಯಲ್ಲಿ ಸುಟ್ಟವರು ಈ ಸಂಘಿ ಸಂತಾನಗಳೇ ಎಂಬುದು ನಿರ್ವಿವಾದ. ಸಮಾನತೆ ಸಾರುವ ಸಂವಿಧಾನಕ್ಕೂ, ವರ್ಣಾಶ್ರಮದ ಜಾತಿ ಅಸಮಾನತೆ ಸಮರ್ಥಿಸುವ ಮನುವಾದಿ ಆರೆಸ್ಸೆಸ್ಸಿಗೂ ಸಾಮ್ಯತೆ ಎಂಬುದೇ ಇಲ್ಲ. ಮೊದಲಿನಿಂದಲೂ ಸಂಘದ ನಾಯಕರು ಭಾರತದ ಸಂವಿಧಾನವನ್ನು ಒಪ್ಪಿಕೊಳ್ಳಲಿಲ್ಲ, ರಾಷ್ಟ್ರದ್ವಜವನ್ನೂ ಅಪ್ಪಿಕೊಳ್ಳಲಿಲ್ಲ. 

ಸಂವಿಧಾನವನ್ನೇ ಒಪ್ಪಿಕೊಳ್ಳದವರು ಸಂವಿಧಾನದ ಪೀಠಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಾ? ಮನುವಾದಿ ಆಶಯಗಳಿಗೆ ವಿರುದ್ಧವಾದ ಉದ್ದೇಶವನ್ನು ಪೀಠಿಕೆಯಲ್ಲಿ ಉಲ್ಲೇಖಿಸಲಾಗಿದೆ. ಸಂವಿಧಾನವನ್ನು ಇದ್ದಕ್ಕಿದ್ದಂತೆ ಬದಲಾಯಿಸಲಂತೂ ಸಾಧ್ಯವಿಲ್ಲ. ಆದರೆ ಅದರ ಮಹತ್ವವನ್ನು ಕಂತು ಕಂತುಗಳಲ್ಲಿ ಕಡಿಮೆ ಮಾಡುವುದೇ ಸಂಘದ ಹಿಡನ್ ಅಜೆಂಡಾ. ಸಂವಿಧಾನ ಬದಲಾಯಿಸುವ ಮುನ್ನ ಮನುವಾದಿಗಳಿಗೆ ಆತ್ಮಘಾತಕವಾಗಿರುವ ಅದರ  ಪೀಠಿಕೆಯನ್ನು ಬದಲಾಯಿಸುವ ಕಾರ್ಯವನ್ನು ಮಾಡಬೇಕಿದೆ. ಅದಕ್ಕಾಗಿಯೇ ಸಮಾಜವಾದಿ ಪದವನ್ನೇ ತೆರವುಗೊಳಿಸಲು ಪ್ರಯತ್ನಿಸಲಾಗಿದೆ. ಈ ಯತ್ನಕ್ಕೆ ಪೂರಕವಾಗಿ ರಾಮಮಂದಿರ ಉದ್ಘಾಟನೆಗೆ ಬೇರೆ ಅನೇಕ ಮುಹೂರ್ತಗಳಿದ್ದರೂ ಜನವರಿ 22 ನ್ನೇ ಆಯ್ಕೆ ಮಾಡಿ ಅಂತಿಮಗೊಳಿಸಲಾಯಿತು.

ಯಾಕೆಂದರೆ, ಭಾರತದ ಸಂವಿಧಾನದ ಪೀಠಿಕೆಯು ಇಡೀ ಸಂವಿಧಾನದ ಆಶಯವನ್ನು ಸಂಕ್ಷಿಪ್ತವಾಗಿ ಹೇಳುವಂತಹುದು. ಭಾರತವನ್ನು ಸ್ವತಂತ್ರ ಸಾರ್ವಭೌಮ ಗಣರಾಜ್ಯವೆಂದು ಘೋಷಿಸುವ ನಿರ್ಣಯವನ್ನು  ಸಂವಿಧಾನ ಸಭೆ ತೆಗೆದುಕೊಂಡ ದಿನ *22 ಜನವರಿ 1947.* 

*ಭಾರತೀಯರಿಗೆ ಸಾಮಾಜಿಕ, ಆರ್ಥಿಕ, ಮತ್ತು ರಾಜಕೀಯ ಅವಕಾಶಗಳಲ್ಲಿ  ಸಮಾನತೆ ಇರಬೇಕು. ಕಾನೂನಿನ ಮುಂದೆ ಸರ್ವರೂ ಸಮಾನರಾಗಿರಬೇಕು. ಅಭಿವ್ಯಕ್ತಿ, ನಂಬಿಕೆ, ಪೂಜೆ, ವೃತ್ತಿ ಮತ್ತು ಕ್ರಿಯೆಗಳು ಕಾನೂನು ಮತ್ತು ಸಾರ್ವಜನಿಕ ನೈತಿಕತೆಗೆ ಒಳಪಟ್ಟಿರಬೇಕು. ಅಲ್ಪಸಂಖ್ಯಾತರು, ಬಡವರು, ಹಿಂದುಳಿದ ಮತ್ತು ಬುಡುಕಟ್ಟು ಸಮುದಾಯಗಳನ್ನು ರಕ್ಷಿಸಬೇಕು. ಗಣರಾಜ್ಯದ ಪ್ರಾದೇಶಿಕ ಸಮಗ್ರತೆ ಸಾರ್ವಭೌಮ ಹಕ್ಕುಗಳನ್ನು ಕಾನೂನಿಗೆ ಅನುಗುಣವಾಗಿ ಸಂರಕ್ಷಿಸಬೇಕು. ಬಹುತ್ವವು ಭಾರತೀಯ ಸಂಸ್ಕೃತಿಯ ಮೂಲಾಧಾರವಾಗಿದೆ ಹಾಗೂ ಧಾರ್ಮಿಕ ಸಹಿಷ್ಣುತತೆಯು ಅಡಿಪಾಯವಾಗಿದೆ"*  ಎಂಬ ಉದ್ದೇಶಿತ ನಿರ್ಣಯಗಳನ್ನು 1946, ಡಿಸೆಂಬರ್ 13 ರಂದು ನಡೆದ ಸಂವಿಧಾನ ಸಭೆಯಲ್ಲಿ ಜವಾಹರಲಾಲ್ ನೆಹರುರವರು ಪರಿಚಯಿಸಿದ್ದರು. ಈ ನಿರ್ಣಯಗಳು ಸಂವಿಧಾನ ನಿರ್ಮಿತಿಯ ಪರಿಕಲ್ಪನೆಗೆ ಬುನಾದಿಯಾಗಿ ಮಾರ್ಗದರ್ಶಿ ಸೂತ್ರವಾಯಿತು. ಹಾಗೂ ಅಂತಿಮವಾಗಿ ಸಂವಿಧಾನದ ಪೀಠಿಕೆಯಾಗಿ ರೂಪಗೊಂಡು *1947 ಜನವರಿ 22* ರಂದು ನಡೆದ ಸಂವಿಧಾನ ಸಭೆಯಲ್ಲಿ ಅಂಗೀಕಾರಗೊಂಡಿತು. ಭಾರತವು ಸಾರ್ವಭೌಮ, ಸಮಾಜವಾದಿ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಪೀಠಿಕೆಯಲ್ಲಿ ಘೋಷಿಸಲಾಯಿತು. ಭಾರತೀಯರಿಗೆ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತೆಯನ್ನು ಸಂವಿಧಾನದ ಪೀಠಿಕೆ ಖಾತರಿ ಪಡಿಸಿತು.

ಆದರೆ ಸಂವಿಧಾನದ ಪೀಠಿಕೆಯಲ್ಲಿರುವ ಯಾವ ಅಂಶವೂ ಸಂಘಿಗಳಿಗೆ ಮೊದಲಿನಿಂದಲೂ ಪಥ್ಯವಲ್ಲ. ಸರ್ವಾಧಿಕಾರಿ ಮನಸ್ಥಿತಿಯವರಿಗೆ ಸಮಾಜವಾದಿ ಶಬ್ದ ಹಿಡಿಸುವುದಿಲ್ಲ. ಚಾತುರ್ವರ್ಣದ ಜಾತಿಬೇಧವಾದಿಗಳಿಗೆ  ಜಾತ್ಯಾತೀತತೆ  ಆಗಿಬರುವುದಿಲ್ಲ. ಒಂದೇ ದೇಶ ಒಂದೇ ಚುನಾವಣೆ ಎನ್ನುವ ಕೇಂದ್ರಿಕೃತ ಆಡಳಿತ ವ್ಯವಸ್ಥೆ ನಿರ್ಮಿಸಲು ಹೊರಟವರಿಗೆ ಗಣರಾಜ್ಯವೆಂಬ ಒಕ್ಕೂಟ ವ್ಯವಸ್ಥೆಯನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಅಸಮಾನತೆಯನ್ನೇ ಉಸಿರಾಡುವ ಮನುವಾದಿಗಳಿಗೆ  ಸಮಾನತೆ ಸಹೋದರತ್ವ ಸ್ವಾತಂತ್ರ್ಯ ಎನ್ನುವ ಶಬ್ದಗಳನ್ನು ಕಂಡರಾಗುವುದಿಲ್ಲ. ಹೀಗಾಗಿ 1949 ನವೆಂಬರ್ 26 ರಂದು ಜಾರಿಯಾದ ಸಂವಿಧಾನದ ಪೀಠಿಕೆ ಅಂತಿಮಗೊಂಡ ಜನವರಿ 22 ಸಂಘದ ನಾಯಕತ್ವಕ್ಕೆ ದುಸ್ವಪ್ನವಾಗಿ ಕಾಡುತ್ತಲೇ ಇದೆ. ಹಾಗಾಗಿ ಸಂವಿಧಾನ ಪೀಠಿಕೆಯ ಮಹತ್ವವನ್ನು ಕಡಿಮೆ ಮಾಡಬೇಕೆಂದರೆ ಪೀಠಿಕೆ ಅಂತಿಮಗೊಂಡ ದಿನದಂದೇ ಎಲ್ಲರೂ ನೆನಪಲ್ಲಿ ಅಚ್ಚೊತ್ತುವಂತಹ ಮಹತ್ಕಾರ್ಯವನ್ನು ಹಮ್ಮಿಕೊಳ್ಳಬೇಕಿತ್ತು. ಅದಕ್ಕಾಗಿಯೇ ಅತೀ ಅವಸರದಲ್ಲಿ ಅಪೂರ್ಣ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗಾಗಿ ಜನವರಿ  22 ರಂದೇ ಮುಹೂರ್ತವನ್ನು ನಿಗದಿಪಡಿಸಲಾಯ್ತು. ದೇಶಾದ್ಯಂತ ರಾಮದೇವರ ಹೆಸರಲ್ಲಿ ಉನ್ಮಾದವನ್ನು ಸೃಷ್ಟಿಸಿ ಮತ್ತೆ ಬಿಜೆಪಿ ಪಕ್ಷ ಅಧಿಕಾರ ಹಿಡಿಯಲು ಸ್ವಯಂ ಸೇವಕ ಸಂಘವು ನೀಲಿನಕ್ಷೆಯನ್ನು ಸಿದ್ದವಾಗಿಟ್ಟುಕೊಂಡಿದೆ. ಸಂವಿಧಾನ ಅಧಿಕೃತವಾಗಿ ಜಾರಿಯಾದ ನವೆಂಬರ್ 26 ರಂದೇ ರಾಮಮಂದಿರ ಉದ್ಘಾಟನೆ ನಿಕ್ಕಿ ಮಾಡುವ ಸಂಭವವಿತ್ತು. ಆದರೆ ನವೆಂಬರ್ 26 ರಷ್ಟರಲ್ಲಿ ರಾಮಮಂದಿರ ಸಿದ್ದವಾಗಿರಲಿಲ್ಲ ಹಾಗೂ ಮುಂದಿನ ವರ್ಷದ ನವೆಂಬೃ 26 ರಷ್ಟರಲ್ಲಿ ಮಂದಿರ ಪೂರ್ಣಗೊಳಿಸಿ ಉದ್ಘಾಟಿಸಬಹುದಾಗಿತ್ತಾದರೂ ಅಷ್ಟರಲ್ಲಿ ಲೋಕಸಭಾ ಚುನಾವಣೆ ಮುಗಿದಿರುತ್ತಿತ್ತು. ಹಾಗಾಗಿ ಪೀಠಿಕೆ ಪ್ರಸ್ತಾವನೆ ನಿರ್ಣಯ ತೆಗೆದುಕೊಂಡ ಜನವರಿ 22 ನ್ನೇ ಪ್ರಾಣ ಪ್ರತಿಷ್ಠಾಪನೆಗೆ ನಿಗಧಿಪಡಿಸುವುದು ಸಂಘಕ್ಕೆ ಅನಿವಾರ್ಯವಾಯಿತು.

ಹೀಗಾಗಿ.. ಸಂವಿಧಾನದ ಪೀಠಿಕೆ ನಿರ್ಣಯದ ದಿನವಾದ ಜನವರಿ 22 ನ್ನೇ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಗಾಗಿ ಆಯ್ಕೆ ಮಾಡಿಕೊಂಡಿರುವುದು ಕಾಕತಾಳೀಯವಂತೂ ಅಲ್ಲಾ. ಪ್ರಜಾಪ್ರಭುತ್ವ ತೆಗೆದು ಪ್ಯಾಸಿಸ್ಟ್ ಪ್ರಭುತ್ವ ಸ್ಥಾಪಿಸಲು ಹಾಗೂ ಅಂಬೇಡ್ಕರ್ ರವರ ಸಮಾನತಾವಾದಿ ಸಂವಿಧಾನವನ್ನು ನಿವಾರಿಸಿ ಮನುಸ್ಮೃತಿ ಆಧಾರಿತ ಸಂವಿಧಾನವನ್ನು ಜಾರಿಗೆ ತರುವ ಪ್ರಯತ್ನದ ಆರಂಭಿಕ ಲಕ್ಷಣವೇ ಧಾರ್ಮಿಕ ಉನ್ಮಾದ ತೀವ್ರಗೊಳಿಸುವುದು ಮತ್ತು ಸಂವಿಧಾನದ ಪೀಠಿಕೆಯ ತೀವ್ರತೆ ಕಡಿಮೆ ಗೊಳಿಸುವುದು. ಅದಕ್ಕಾಗಿ ಜನವರಿ 22 ನೇ ದಿನಾಂಕವೇ ರಾಮಮಂದಿರದ ಉದ್ಘಾಟನೆಗೂ ಹಾಗೂ ಸಂವಿಧಾನದ ಅವನತಿಗೂ ಮೂಹೂರ್ತ ಫಿಕ್ಸ್ ಮಾಡಿದ್ದು. 

ಈ ದೇಶದ ಬಹುಜನರು ಈ ಶಡ್ಯಂತ್ರವನ್ನು ಅರಿಯದೇ ದೇವರ ಉನ್ಮಾದ ಹಾಗೂ ಧರ್ಮದ ಭ್ರಮೆಯಲ್ಲಿ ಮೈಮರೆತದ್ದೇ ಆದರೆ ಈಗಿರುವ ಕನಿಷ್ಟ ಸ್ವಾತಂತ್ರ್ಯ ಸಮಾನತೆ ಹಾಗೂ ಕಾನೂನಿನ ರಕ್ಷಣೆಯನ್ನೂ ಕಳೆದುಕೊಂಡು ವೈದಿಕಶಾಹಿಯ ಅಕ್ಟೋಪಸ್ ಹಿಡಿತದಲ್ಲಿ ನರಳುವುದಂತೂ ಖಂಡಿತ. 

- ಶಶಿಕಾಂತ ಯಡಹಳ್ಳಿ
22-01-2024

ಲಿಂಗಾಯತ ಧರ್ಮದ ಸುತ್ತ ಪುರೋಹಿತಶಾಹಿಗಳ ಹುತ್ತ

ತಹ ತಹ -493

ಲಿಂಗಾಯತ ಧರ್ಮದ ಸುತ್ತ ಪುರೋಹಿತಶಾಹಿಗಳ ಹುತ್ತ


"ಬಸವಣ್ಣನವರು ಸಾರ್ವತ್ರಿಕವಾದ ಸಾರ್ವಕಾಲಿಕವಾದ ಸರ್ವಜನ ಸಮಭಾವದ ತಾತ್ವಿಕತೆಗಳ ಮೂಲಕ ಕಲ್ಯಾಣ ಸಮಾಜವನ್ನು ಕಟ್ಟುವುದಕ್ಕೆ ಬೇಕಾದ ನೀತಿಯನ್ನು ಬೋಧಿಸಿರುವುದರಿಂದ ನಮ್ಮ ದೇಶದ ಸಂವಿಧಾನದ ಆಶಯಗಳಿಗೆ ಅನುರೂಪವಾದ ಅವರ ಚಿಂತನೆಗಳು, ಬಸವಣ್ಣನವರ ಸಾಂಸ್ಕೃತಿಕ ನಾಯಕತ್ವಕ್ಕೆ ಸಮರ್ಥನೀಯವಾದ ನೆಲೆ ಒದಗಿಸಿದೆ. ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) ನಿಯಮಗಳು 1977 ರ ಮೊದಲ ಅನುಸೂಚಿಯ ಪ್ರಕರಣ 1C ಪ್ರಕಾರ ಜಗಜ್ಯೋತಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಲು ಸಚಿವ ಸಂಪುಟ ನಿರ್ಧರಿಸಿದೆ"

ಎಂಬುದು ಜ. 18 ರಂದು ವಿಧಾನಸಭೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಿರ್ಣಯ.

ಕೊನೆಗೂ ಶಾಮನೂರು ಶಿವಶಂಕರಪ್ಪನವರು ಘೋಷಿಸಿದಂತೆ,  ವೀರಶೈವ ಲಿಂಗಾಯತ ಮಹಾಸಭೆ ಅನುಮೋದಿಸಿದಂತೆ ಹಾಗೂ ಇತ್ತೀಚೆಗೆ  ಸಿಎಂ ಸಿದ್ದರಾಮಯ್ಯನವರನ್ನು ಬೇಟಿಯಾದ 48 ಮಠಾಧೀಶರ ನಿಯೋಗದ ಮನವಿಯಂತೆ ಸರಕಾರವು "ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ" ಎಂದು ಒಪ್ಪಿ ಸರಕಾರಿ ಆದೇಶ ಹೊರಡಿಸಿದೆ.

ಬಸವಣ್ಣನವರಿಗೆ ಸಾಂಸ್ಕೃತಿಕ ನಾಯಕನ ಪಟ್ಟ ಸಿಕ್ಕಿದ್ದಕ್ಕೆ ಲಿಂಗಾಯತ ಸಮುದಾಯ ಸಂತಸಗೊಂಡಿದೆ. ಅದಕ್ಕಿಂತಲೂ ಹೆಚ್ಚಾಗಿ ವೀರಶೈವ ಸ್ಥಾವರಗಳು ತಮ್ಮ ಉದ್ದೇಶ ಈಡೇರಿತು ಎಂದು ಸಂಭ್ರಮಿಸುತ್ತಿವೆ. ಆದರೆ ಇದೆಲ್ಲಾ ಲಿಂಗಾಯತರ ಮೇಲೆ ವೀರಶೈವರು ಮಾಡುತ್ತಿರುವ ಸವಾರಿ ಎಂಬುದು  ಲಿಂಗಾಯತ ಮಠಮಾನ್ಯರಿಗೆ ಅರ್ಥವಾಗುತ್ತಿಲ್ಲ. ಬಸವಣ್ಣನವರನ್ನು ಒಂದು ರಾಜ್ಯಕ್ಕೆ ಮಿತಿಗೊಳಿಸುವ ಮೂಲಕ ಜಗತ್ತಿಗೆ ಜ್ಯೋತಿಯಾದ ಜಗಜ್ಯೋತಿ ಬಸವೇಶ್ವರರನ್ನು ಒಂದು ಚೌಕಟ್ಟಿಗೆ ಸೀಮಿತಗೊಳಿಸಿರುವುದು ಬಯಲನ್ನು ಆಲಯದಲ್ಲಿ ಬಂಧಿಸಿದಂತೆ ಎಂಬುದು ಲಿಂಗಾಯತ ಸಮುದಾಯದವರಿಗೂ ಅರಿವಾಗುತ್ತಿಲ್ಲ.

ಕೆಲವು ಪ್ರಜ್ಞಾವಂತ ಲಿಂಗಾಯತರು ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ ಪ್ರತಿಯಾಗಿ ಜಾಗತಿಕ ಲಿಂಗಾಯತ ಮಹಾಸಭಾ ರಚಿಸಿಕೊಂಡು ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಗಾಗಿ ದಶಕಗಳಿಂದ ಆಗ್ರಹಿಸುತ್ತಿದ್ದಾರೆ. ಲಿಂಗಾಯತ ಧರ್ಮಕ್ಕಾಗಿ ಹಲವಾರು ಸಮ್ಮೇಳನಗಳನ್ನು ಆಯೋಜಿಸಿದ್ದಾರೆ. ಲಿಂಗಾಯತ ಧರ್ಮ ಸಮಾನತೆಯನ್ನು ಸಾರುವಂತಹುದು, ಏಕದೇವೋಪಾಸನೆ ತತ್ವವನ್ನು ಹೊಂದಿರುವಂತಹುದು, ಕಾಯಕ ಮತ್ತು ದಾಸೋಹ ಸಿದ್ದಾಂತಕ್ಕೆ ಬದ್ದವಾಗಿರುವಂತಹುದು, ಬಸವಣ್ಣನವರಿಂದ ಸ್ಥಾಪನೆಯಾಗಿರುವಂತಹುದು ಹಾಗೂ ವಚನಗಳನ್ನೊಳಗೊಂಡ ಧರ್ಮಗ್ರಂಥದ ಪ್ರಕಾರ ನಡೆಯುವಂತಹುದು, ಆದ್ದರಿಂದ ಬೌದ್ಧ ಜೈನ ಸಿಕ್ ಧರ್ಮದ ಹಾಗೆ ಪ್ರತ್ಯೇಕ ಧರ್ಮವಾಗಬೇಕು ಎಂಬುದು ನಿಜವಾದ ಲಿಂಗಾಯತರ ನ್ಯಾಯಯುತವಾದ ಬೇಡಿಕೆ. ಬಸವಧರ್ಮದ ಈ ಎಲ್ಲಾ ತತ್ವ ಸಿದ್ದಾಂತಗಳಿಗೂ ಪಂಚಾಚಾರ್ಯರ ವೀರಶೈವ ಆಚರಣೆಗಳಿಗೂ ಯಾವುದೇ ಸಾಮ್ಯತೆ ಇಲ್ಲ. ಆದರೂ ವೀರಶೈವರು ಲಿಂಗಾಯತರನ್ನು ಬಿಟ್ಟು ಕೊಡಲು ಸಿದ್ದರಿಲ್ಲ. ವೀರಶೈವರನ್ನು ಬಿಟ್ಟು ಅದು ಹೇಗೆ ಲಿಂಗಾಯತವು ಸ್ವತಂತ್ರ ಧರ್ಮ ಆಗಲು ಸಾಧ್ಯ? ಆಗುವುದಿದ್ದರೆ ವೀರಶೈವ ಲಿಂಗಾಯತ ಎರಡೂ ಸೇರಿಯೇ ಸ್ವತಂತ್ರ ಧರ್ಮ ಆಗಬೇಕು ಎನ್ನುವುದು ವೀರಶೈವ ಮಹಾಸಭಾದ ಉಕ್ಕಿನ ಹಿಡಿತ. 'ವೀರಶೈವರು ಲಿಂಗಾಯತರ ಗುರುಗಳಾಗಿದ್ದು, ಲಿಂಗಾಯತರ ಎಲ್ಲಾ ಶುಭ- ಅಶುಭ ಕಾರ್ಯಕ್ಕೂ ಅಯ್ನೋರ ಪೌರೋಹಿತ್ಯ ಇರಲೇಬೇಕು' ಎನ್ನುವುದು ವೀರಶೈವ ಗುರು ಮಠಗಳ ಒತ್ತಾಯ. ಹಾಗೆ ನೋಡಿದರೆ ಧಾರ್ಮಿಕವಾಗಿ ವೀರಶೈವರ ವಿಚಾರ  ಆಚಾರಗಳಿಗೂ ಹಾಗೂ ವೈದಿಕ ಪುರೋಹಿತಶಾಹಿಗಳಿಗೂ ಅಂತಹ ವ್ಯತ್ಯಾಸವೇನಿಲ್ಲ. ಅದು ಹೇಗೆ ನಾವೆಲ್ಲಾ ಹಿಂದೂ ಎನ್ನುತ್ತಾ ವೈದಿಕರು ಅಸಂಖ್ಯಾತ ಶೂದ್ರರು, ದಲಿತರು, ಆದಿವಾಸಿಗಳನ್ನು ಹಿಂದೂ ಧರ್ಮದಲ್ಲಿ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೋ ಹಾಗೆಯೇ ಈ ವೀರಶೈವ ಪುರೋಹಿತಶಾಹಿಗಳೂ ಸಹ ಲಿಂಗಾಯತರನ್ನು ತಮ್ಮ ಆಜ್ಞಾವರ್ತಿಗಳಾಗಿ ಇರುವಂತೆ ಒತ್ತಡ ಹೇರುತ್ತಲೇ ಬಂದಿದ್ದಾರೆ. ಈ ವೀರಶೈವ ಗುರುಪೀಠಗಳ ಒತ್ತಾಯಕ್ಕೆ ಹಲವಾರು ಲಿಂಗಾಯತ ವಿರಕ್ತಮಠಗಳೂ ಮಣಿದು ವೀರಶೈವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ. ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ಬೇಕು ಅಂದಾಗಲೆಲ್ಲಾ ವೀರಶೈವರು ಅಡ್ಡಗಾಲು ಹಾಕುತ್ತಲೇ ಬಂದಿದ್ದಾರೆ.

ಜ.16 ರಂದು ಹರಿಹರದ ಪಂಚಮಸಾಲಿ ಗುರುಪೀಠದ ಹರಜಾತ್ರೆಯಲ್ಲಿ ಆ ಮಠದ ಸ್ವಾಮಿಗಳಾದ ವಚನಾನಂದರು  "ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಸಂದರ್ಭ ವೀರಶೈವ ಲಿಂಗಾಯತ ಸಮುದಾಯದ ಎಲ್ಲರೂ ಪೂಜೆ ಸಲ್ಲಿಸಬೇಕು" ಎಂದು ಅಪ್ಪಣೆ ಕೊಟ್ಟಿದ್ದಾರೆ. ಈ ಸ್ವಾಮಿಗಳ ಹೆಸರೇ ವಚನಾನಂದ, ಇವರದ್ದು ಪಂಚಮಸಾಲಿ ಲಿಂಗಾಯತ ಮಠ. ಇವರ ನಡೆ ನುಡಿ ಮಾತ್ರ ಬಸವ ವಿರೋಧಿಯಾಗಿರುವಂತಹುದು. ಯಾಕೆಂದರೆ ಬಸವಾದಿ ಶರಣರು ಏಕದೇವೋಪಾಸಕರು. ಇಷ್ಟಲಿಂಗವನ್ನು ಹೊರತುಪಡಿಸಿ ಅನ್ಯದೇವರ ಆರಾಧನೆ ಪೂಜೆ ಪ್ರಾರ್ಥನೆ ಮಾಡದವರು. ಇಂತಹ ಲಿಂಗಾಯತ ಪರಂಪರೆಯ ಮಠದ ಸ್ವಾಮಿಗಳು ರಾಮನಿಗೆ ಪೂಜೆ ಸಲ್ಲಿಸಬೇಕು ಎಂದು ಕರೆಕೊಡುವುದೇ ಬಸವಧರ್ಮಕ್ಕೆ ಮಾಡುವ ಅಪಚಾರ. ಇಂತಹುದೇ ವಿರೋಧಾಭಾಸಕರ ನಡೆ ನುಡಿಯನ್ನು ಬಹುತೇಕ ಲಿಂಗಾಯತ ಮಠದ ಸ್ವಾಮಿಗಳು ಮುಂದುವರೆಸಿದ್ದಾರೆ. ಶರಣಧರ್ಮದ ಸಿದ್ಧಾಂತಗಳ ವಿರುದ್ದವಾಗಿದ್ದಾರೆ. ಇದೆಲ್ಲವನ್ನೂ ಆಲೋಚಿಸುವ ಬೌದ್ಧಿಕತೆ ಇಲ್ಲದ ಲಿಂಗಾಯತ ಮತದ ಅನುಯಾಯಿಗಳು ಈ ಸ್ವಾಮಿಗಳು ಹೇಳಿದಂತೆ ವೈದಿಕ- ವೀರಶೈವ ಆಚರಣೆಗಳನ್ನು ಮೈಗೂಡಿಸಿಕೊಂಡಿದ್ದಾರೆ.  "ಎನ್ನ ನಡೆಯೊಂದು ಪರಿ, ಎಮ್ನ ನುಡಿಯೊಂದು ಪರಿ. ಎನ್ನೊಳಗೇನೂ ಶುದ್ದವಿಲ್ಲ ನೋಡಯ್ಯಾ" ಎಂದು ಬಸವಣ್ಣನವರು ಇಂತವರನ್ನು ಊಹಿಸಿಯೇ ವಚನ ರಚಿಸಿದ್ದಾರೆ.

ಈಗ ಲಿಂಗಾಯತ ಸ್ವತಂತ್ರ ಧರ್ಮ ಆಗುವುದಕ್ಕೆ ಕೇಂದ್ರ ಬಿಂದುವೇ ಬಸವಣ್ಣ. ವೈದಿಕ ಹಾಗೂ ವೀರಶೈವ ಪುರೋಹಿತಶಾಹಿಗೆ ಬಹುದೊಡ್ಡ ಪ್ರತಿರೋಧವೇ ಬಸವಣ್ಣ. ಈ ಸನಾತನಿಗಳನ್ನು ವಿರೋಧಿಸಿದ್ದ ಬಸವಣ್ಣನವರನ್ನು ವಿರೋಧಿಸಿದರೆ ಎಲ್ಲಿ ಬಹುಸಂಖ್ಯಾತ ಲಿಂಗಾಯತರು ವೀರಶೈವರ ಹಿಡಿತದಿಂದ ಬೇರೆಯಾಗುತ್ತಾರೋ ಎನ್ನುವ ಆತಂಕ ವೀರಶೈವರದ್ದು. ಲಿಂಗಾಯತರಿಗೆ ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕರೆ ಬಹುಸಂಖ್ಯಾತ ಸಮುದಾಯವೊಂದು ಎಲ್ಲಿ ಹಿಂದೂ ಧರ್ಮದಿಂದ ದೂರಾಗುತ್ತದೋ ಎನ್ನುವ ಭಯ ವೈದಿಕಶಾಹಿಗಳದ್ದು. ಹೀಗಾಗಿ ಲಿಂಗಾಯತರು ಹಿಂದೂ ಧರ್ಮದ ಭಾಗವಾಗಿ, ವೀರಶೈವರ ಹಿಡಿತದಲ್ಲೇ ಇರಬೇಕೆಂದರೆ ಲಿಂಗಾಯತರ ಆರಾಧ್ಯ ದೈವ ಬಸವಣ್ಣನವರಿಗೆ ಒಂದಿಷ್ಟು ಪ್ರಾಮುಖ್ಯತೆಯನ್ನು ಕೊಡುವ ಮೂಲಕ ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆಯನ್ನು ಡೈಲ್ಯೂಟ್ ಮಾಡುವ ತಂತ್ರಗಾರಿಕೆಯ ಭಾಗವಾಗಿಯೇ ಈ ಸಾಂಸ್ಕೃತಿಕ ನಾಯಕತ್ವದ ದಾಳ. 

ಒಂದು ಧರ್ಮದ ಸ್ಥಾಪಕರಾದ ಬಸವಣ್ಣನವರನ್ನು ಒಂದು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಕರೆಯುವುದೇ ಆ ಸಮಾನತಾ ಧರ್ಮ ಸಂಸ್ಥಾಪಕನಿಗೆ ಮಾಡುವ ಅಪಮಾನ. ಬುದ್ದನನ್ನು, ಮಹಾವೀರರನ್ನು, ಮಹಮದ್ ಪೈಗಂಬರರನ್ನು, ಏಸು ಕ್ರಿಸ್ತರನ್ನು ಇಲ್ಲವೇ ಗುರುನಾನಕ್ ರವರನ್ನು ಧರ್ಮಸ್ಥಾಪಕರೆಂದು ಮಾನ್ಯ ಮಾಡಬಹುದೇ ಹೊರತು ಸಾಂಸ್ಕೃತಿಕ ನಾಯಕನೆಂದು ಕರೆಯಲಾಗದು. ಅದೇ ರೀತಿ ಮಹಾಶರಣ ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಕರೇ ಹೊರತು ವೀರಶೈವರು ಹೇಳುವಂತೆ ಸಾಂಸ್ಕೃತಿಕ ನಾಯಕನಲ್ಲ. 

ಪ್ರತಿಯೊಂದು ಜಾತಿಗೂ ಈಗ ಸಾಂಸ್ಕೃತಿಕ ನಾಯಕರಿದ್ದಾರೆ. ಉದಾಹರಣೆಗೆ ಕುರುಬರು ಕನಕದಾಸರನ್ನು, ಒಕ್ಕಲಿಗರು ಕೆಂಪೇಗೌಡರನ್ನು, ಬೇಡ ಜನಾಂಗದವರು ವಾಲ್ಮೀಕಿಯನ್ನು,  ದಲಿತ ಸಮುದಾಯದವರು ಬಾಬಾಸಾಹೇಬರನ್ನು ತಮ್ಮ ಜಾತಿ ಜನಾಂಗದ ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಂಡಿದ್ದಾರೆ. ಅದೇ ರೀತಿ ಲಿಂಗಾಯತರನ್ನೂ ಒಂದು ಜಾತಿಗೆ ಸೀಮಿತಗೊಳಿಸಿ ಅವರ ಆರಾಧ್ಯ ದೈವ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಕರೆದು ಧರ್ಮ ಸಂಸ್ಥಾಪಕರ ಸ್ಥಾನವನ್ನು ಮರೆಮಾಚುವುದು ವೀರಶೈವ ಪುರೋಹಿತಶಾಹಿಗಳ ಹುನ್ನಾರವಾಗಿದೆ. 

ಈ ಹುನ್ನಾರಕ್ಕೆ ಮರುಳಾದ ಲಿಂಗಾಯತ ಮಠಾಧೀಶರುಗಳೇ ಮುಂದಾಗಿ ಬಸವಣ್ಣನವರನ್ನು "ಸಾಂಸ್ಕೃತಿಕ ನಾಯಕ" ಎಂದು ಘೋಷಿಸುವಂತೆ ಮುಖ್ಯಮಂತ್ರಿಗಳನ್ನು  ಆಗ್ರಹಿಸಿ ಅದರಲ್ಲಿ ಯಶಸ್ವಿಯಾಗಿದ್ದು ವಿಪರ್ಯಾಸ. 

ಈ ವೀರಶೈವ ಪ್ರಚೋದಿತ, ವೈದಿಕಶಾಹಿ ಪ್ರೇರಿತ ಲಿಂಗಾಯತ ಮಠಾಧೀಶರುಗಳು ಲಿಂಗಾಯತ ಸಮುದಾಯ ಕೇಳುವ ಈ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ.

1. ಲಿಂಗಾಯತ ಎನ್ನುವುದು ಧರ್ಮವೋ ಇಲ್ಲಾ ಹಲವು ಜಾತಿಗಳ ಒಕ್ಕೂಟವೋ?

2. ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಕರೋ ಇಲ್ಲಾ ಕೇವಲ ಸಾಂಸ್ಕೃತಿಕ ನಾಯಕರೋ?

3. ಲಿಂಗಾಯತ ಸ್ವತಂತ್ರ ಧರ್ಮ ಆದರೆ ಲಿಂಗಾಯತ ಸಮುದಾಯಕ್ಕೆ ಪ್ರಯೋಜನವೋ ಅಥವಾ ಕೇವಲ ಸಾಂಸ್ಕೃತಿಕ ನಾಯಕವೆಂಬ ಪಟ್ಟದಿಂದ ದೊರೆಯುವುದು ಸಂತೃಪ್ತಿಯೋ?

4. ಬಸವಧರ್ಮಕ್ಕೆ ವಿರುದ್ದವಾಗಿರುವ ವೀರಶೈವ ಎನ್ನುವ ಪುರೋಹಿತಶಾಹಿಗಳ ಹಿಡಿತದಲ್ಲಿ ಲಿಂಗಾಯತರು ಇರಬೇಕೋ ಅಥವಾ ಅವರ ನಿಯಂತ್ರಣದಿಂದ ಬೇರೆಯಾಗಿ ಲಿಂಗಾಯತ ಸ್ವತಂತ್ರ ಧರ್ಮವಾಗಿ ವಿಶ್ವ ಧರ್ಮಗಳ ಪಟ್ಟಿಯಲ್ಲಿ ತನ್ನ ಐಡಂಟಿಟಿ ಉಳಿಸಿಕೊಳ್ಳಬೇಕೋ?

5. ಮನುಕುಲಕ್ಕೆ ಕಾಯಕ ಹಾಗೂ ದಾಸೋಹ ಸಿದ್ದಾಂತವನ್ನು ಕೊಟ್ಟು ಸಮಾನತೆ ಸಾರಿದ ಬಸವಣ್ಣ ಧರ್ಮ ಸಂಸ್ಥಾಪಕರಾಗಿ ವಿಶ್ವ ಮಾನ್ಯತೆ ಪಡೆಯಬೇಕೋ ಅಥವಾ ರಾಜ್ಯವೊಂದರ ನಾಮಕಾವಸ್ಥೆ ಸಾಂಸ್ಕೃತಿಕ ನಾಯಕನೆಂಬ ಬಿರುದಿಗೆ ಸೀಮಿತನಾಗಬೇಕೋ?

6. ದಯೆಯೇ ಧರ್ಮದ ಮೂಲವೆಂದ ಬಸವಣ್ಣನವರ ಲಿಂಗಾಯತ ಧರ್ಮವು ಲಿಂಗಾಯತರಿಗೆ ಆದ್ಯತೆಯಾಗಬೇಕೋ ಅಥವಾ ದಯೆ ಮರೆತು ಅಸಮಾನತೆಯನ್ನು ಮೈಗೂಡಿಸಿಕೊಂಡಿರುವ ಪುರೋಹಿತಶಾಹಿ ಧರ್ಮದ ಅಡಿಯಾಳಾಗಿ ಲಿಂಗಾಯತ ಧರ್ಮೀಯರು ತಮ್ಮ ಧರ್ಮ ಸಂಸ್ಥಾಪಕನ ಐಡಂಟಿಟಿಯನ್ನೇ ಬಿಟ್ಟುಕೊಡಬೇಕೋ? 

7 . ಹೋಗಲಿ ಬಸವಣ್ಣನವರನ್ನು ಧರ್ಮಸ್ಥಾಪಕ ಎಂದು ಎಂದೂ ಒಪ್ಪಿಕೊಳ್ಳದ ಈ ವೀರಶೈವರು ಈಗ ಸಾಂಸ್ಕೃತಿಕ ನಾಯಕ ಎಂಬುದನ್ನು ಒಪ್ಪಿಕೊಳ್ಳುತ್ತಿರುವುದರಿಂದ ಅವರು ಬಸವಣ್ಣನವರ ಆಶಯಗಳನ್ನು ಆಚರಿಸಲು ಸಾಧ್ಯವೇ? ಬಹುದೇವೋಪಾಸನೆಯನ್ನು ಬಿಟ್ಟು ಇಷ್ಟಲಿಂಗವನ್ನು ಮಾತ್ರ ಆರಾಧಿಸಲು ಸಾಧ್ಯವೇ? ಗುಡಿ ಗುಂಡಾರಗಳನ್ನು ತ್ಯಜಿಸಲು ಆಗುತ್ತದೆಯೇ?

8. ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಂಡ ಮೇಲೆ. ಅಂತಹ ನಾಯಕನ ಆಶಯಗಳನ್ನು ಅನುಸರಿಸುವುದು ನಾಯಕತ್ವ ಒಪ್ಪಿಕೊಂಡವರ ಕರ್ತವ್ಯವಲ್ಲವೇ? ಹಾಗಾದರೆ ಬಸವಣ್ಣನವರ ವಚನಗಳಲ್ಲಿ ಹೇಳಿದಂತೆ ತಮ್ಮ ನಡೆ ನುಡಿಗಳನ್ನು ಬದಲಾಯಿಸಿ ಬದುಕಲು ಈ ವೀರಶೈವ ಪುರೋಹಿತಶಾಹಿಗಳಿಗೆ ಆಗುತ್ತದೆಯೇ? 

9. "ಕಲ್ಲು, ಮಣ್ಣು, ಮರ ಪಂಚಲೋಹ, ಪುಣ್ಯತೀರ್ಥಕ್ಷೇತ್ರ ದೇವರು ದೇವರಲ್ಲ, ತನ್ನ ತಾನರಿದು ತಾನಾರೆಂದು ತಿಳಿದರೆ ತನಗೆ ತಾನೇ ದೇವ" ಎಂಬ ಬಸವಣ್ಣನವರ ವಚನವನ್ನು ಪರಿಪಾಲಿಸುತ್ತೇವೆಂದು ವೀರಶೈವ ಮಠಗಳು ಘೋಷಿಸುತ್ತವೆಯೇ.

10. ಬಸವಣ್ಣನವರನ್ನು ಸಾಂಸ್ಕೃತಿಕ  ನಾಯಕನೆಂದು ಮಾನ್ಯ ಮಾಡಿದ ಮೇಲೆ, ಲಿಂಗ ಅಸಮಾನತೆ, ಜಾತಿ ಧರ್ಮ ಶ್ರೇಷ್ಟತೆಯ ವ್ಯಸನ, ಅಸ್ಪೃಶ್ಯತೆ ಮುಂತಾದ ಅನಿಷ್ಟಗಳನ್ನು ತ್ಯಜಿಸಿ ಸಮಾನತೆಯ ಆಧಾರದ ಮೇಲೆ ವೀರಶೈವ ಗುರುಮಠಗಳು ಕಾರ್ಯನಿರ್ವಹಿಸುತ್ತವೆ ಎಂದು ನಿರ್ಧರಿಸಿ ಆಚರಿಸಲು ಆಗುತ್ತದೆಯೇ?

ಈ ಎಲ್ಲಾ ಪ್ರಶ್ನೆಗಳಿಗೂ ಆಗಬಹುದು, ಆಗುತ್ತದೆ, ಆಗಲೇಬೇಕು ಎಂದು ಕರ್ನಾಟಕದ ಮಠಮಾನ್ಯಗಳು, ಪುರೋಹಿತಶಾಹಿ ಪೀಠಗಳು, ವೀರಶೈವ ಸಮುದಾಯದವರು ಉತ್ತರಿಸಿದ್ದೇ ಆದರೆ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಳ್ಳಬಹುದು. ಆದರೆ ಈ ಸಾಂಸ್ಕೃತಿಕ ನಾಯಕತ್ವದ ಪಟ್ಟ ಕಟ್ಟಿರುವುದೇ ತೋರುಂಬ ಲಾಭಕ್ಕೆ ಎನ್ನುವುದಾದರೆ ಅದು ಬಸವಣ್ಣನವರಿಗೆ ಮಾಡುವ ಅಪಚಾರ. ನಿಜವಾದ ಲಿಂಗಾಯತರಿಗೆ ಮಾಡುವ ಮರಾಮೋಸ. ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಬಲಾಢ್ಯ ಸಮುದಾಯವಾದ ವೀರಶೈವದ ನಾಯಕರು ಹಾಗೂ ಅವರ ಕೈಗೊಂಬೆಯಾಗಿರುವ ಮಠಾಧೀಶರುಗಳು ಆಳುವ ಸರಕಾರದ ಮೇಲೆ ಒತ್ತಡ ತಂದು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಮಾನ್ಯತೆ ಪಡೆದಿದ್ದರ ಹಿಂದೆ ರಾಜಕೀಯ ಹಿತಾಸಕ್ತಿ ಇದೆಯೇ ಹೊರತು ಬಸವಣ್ಣನವರ ಮೇಲೆ ಹಾಗೂ ಅವರು ಪ್ರತಿಪಾದಿಸಿದ ಆಶಯಗಳ ಮೇಲಿರುವ ಆಸಕ್ತಿಯಿಂದಲ್ಲ. 

ಕರ್ಮಸಿದ್ದಾತಿಗಳ ಈ ಒಳಮರ್ಮ ನಿಜವಾದ ಬಸವಾನುಯಾಯಿ ಲಿಂಗಾಯತರಿಗೆ ಅರ್ಥವಾಗುವವರೆಗೂ ಬಸವಣ್ಣ ಸಾಂಸ್ಕೃತಿಕ ನಾಯಕನಾಗಿರುತ್ತಾನೆ. ಅರ್ಥವಾದಾಗ ವೀರಶೈವ ಹಾಗೂ ವೈದಿಕ ಹಿತಾಸಕ್ತಿಗಳ ಹಿಡಿತದಿಂದ ಹೊರಬಂದು ಸ್ವತಂತ್ರ ಲಿಂಗಾಯತ  ಧರ್ಮದ ಮಾನ್ಯತೆಗಾಗಿ ಲಿಂಗಾಯತರು ಹೋರಾಡುತ್ತಾರೆ. ಬಸವಣ್ಣನವರನ್ನು ಲಿಂಗಾಯತ ಧರ್ಮಸಂಸ್ಥಾಪಕ ಎಂಬ ಮಾನ್ಯತೆ ಪಡೆಯುತ್ತಾರೆ. 

- ಶಶಿಕಾಂತ ಯಡಹಳ್ಳಿ
    19-01-2024

ನಾಲ್ಕು ವರ್ಷಗಳ ಪ್ರಶಸ್ತಿಗಳಿಗಿಲ್ಲ ಮುಕ್ತಿ; ಮತ್ತೆ ಹೊಸ ಪ್ರಶಸ್ತಿಗಳತ್ತ ಸರಕಾರದ ಆಸಕ್ತಿ

ತಹ ತಹ - 492

ನಾಲ್ಕು ವರ್ಷಗಳ ಪ್ರಶಸ್ತಿಗಳಿಗಿಲ್ಲ ಮುಕ್ತಿ; ಮತ್ತೆ ಹೊಸ ಪ್ರಶಸ್ತಿಗಳತ್ತ ಸರಕಾರದ ಆಸಕ್ತಿ

ಕೆಲವೊಮ್ಮೆ ಸರಕಾರ ತೆಗೆದುಕೊಳ್ಳುವ ನಿರ್ಧಾರಗಳು ವಿಕ್ಷಿಪ್ತವಾಗಿರುತ್ತವೆ ಎನ್ನುವುದಕ್ಕೆ ಸಾಕ್ಷಿ ಹಿಂದಿನದನ್ನು ಹಿಂದಿಕ್ಕಿ ಮತ್ತೆ ಹೊಸ ಪ್ರಶಸ್ತಿಗಳ ಘೋಷಣೆ ಮಾಡುತ್ತಿರುವುದು.

ಸರಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೊಡಮಾಡುವ ಪ್ರಶಸ್ತಿಗಳೇ ನಾಲ್ಕು ವರ್ಷಗಳಿಂದ ಬಾಕಿ ಇದ್ದು ಈಗಾಗಲೇ ಮೂರು ವರ್ಷಗಳ ಫಲಾನುಭವಿಗಳನ್ನೂ ಆಯ್ಕೆ ಮಾಡಿ ಘೋಷಿಸಲಾಗಿದೆ.  ಹಾಗೂ ಪ್ರಸಕ್ತ ವರ್ಷದ ಪ್ರಶಸ್ತಿಗಳಿಗೂ ಸಾಧಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. 

ಕರ್ನಾಟಕ ಸರಕಾರವು ಪ್ರತಿ ವರ್ಷ ಒಟ್ಟು ಐದು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಕೊಡುತ್ತದೆ. *ರಾಷ್ಟ್ರೀಯ ಪ್ರಶಸ್ತಿ* ವಿಭಾಗದಲ್ಲಿ ಬಸವ ರಾಷ್ಟ್ರೀಯ ಪುರಸ್ಕಾರ, ಶ್ರೀ ಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ, ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ ಹಾಗೂ ಗಾನಯೋಗಿ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿಗಳು ತಲಾ ಹತ್ತು ಲಕ್ಷ ಮೊತ್ತದ ಪ್ರಶಸ್ತಿಗಳಾಗಿವೆ.

ಹಾಗೆಯೇ *ಸಾಮಾಜಿಕ ಹಾಗೂ ಸಾಂಸ್ಕೃತಿಕ ಪ್ರಶಸ್ತಿ* ವಿಭಾಗದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಅಕ್ಕಮಹಾದೇವಿ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿಗಳು ತಲಾ ಐದು ಲಕ್ಷ ಮೊತ್ತದ ಪ್ರಶಸ್ತಿಗಳಾಗಿವೆ.
*ಸಾಹಿತ್ಯ ಹಾಗೂ ನಾಟಕ ಪ್ರಶಸ್ತಿ* ವಿಭಾಗದಲ್ಲಿ ಪಂಪ ಪ್ರಶಸ್ತಿ ಹಾಗೂ ಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಬಿ.ವಿ.ಕಾರಂತ ಪ್ರಶಸ್ತಿ, ಡಾ.ಗುಬ್ಬಿ ವೀರಣ್ಣ ಪ್ರಶಸ್ತಿ, ನಾಡೋಜ ಡಾ.ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿಗಳ ಮೊತ್ತವೂ ತಲಾ ಐದು ಲಕ್ಷ ರೂಗಳಾಗಿವೆ. 

*ಕಲಾ ಪ್ರಶಸ್ತಿ* ವಿಭಾಗದಲ್ಲಿ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ, ಜಕಣಾಚಾರಿ ಪ್ರಶಸ್ತಿ, ಜಾನಪದ ಶ್ರೀ ಪ್ರಶಸ್ತಿ (ವಾದನ) ಹಾಗೂ ಜಾನಪದ ಶ್ರೀ ಪ್ರಶಸ್ತಿ ( ಗಾಯನ) ಈ ನಾಲ್ಕೂ ಪ್ರಶಸ್ತಿಗಳೂ ಸಹ ತಲಾ ಐದು ಲಕ್ಷ ಮೊತ್ತದವಾಗಿವೆ. *ಸಂಗೀತ ಮತ್ತು ನೃತ್ಯ ಪ್ರಶಸ್ತಿ* ವಿಭಾಗದಲ್ಲಿ ಶ್ರೀ ನಿಜಗುಣ ಪುರಂದರ ಪ್ರಶಸ್ತಿ, ಕುಮಾರವ್ಯಾಸ ಪ್ರಶಸ್ತಿ, ಶಾಂತಲಾ ನಾಟ್ಯ ಪ್ರಶಸ್ತಿ, ಸಂತ ಶಿಶುನಾಳ ಷರೀಫ ಪ್ರಶಸ್ತಿ ಹಾಗೂ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಗಳೂ ಸಹ ತಲಾ ಐದು ಲಕ್ಷದ್ದವಾಗಿವೆ.

ಒಟ್ಟಾರೆಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಾರ್ಷಿಕವಾಗಿ 22 ಪ್ರಶಸ್ತಿಗಳನ್ನು ಕೊಡುತ್ತಾ ಬಂದಿದೆ. ಎಲ್ಲಾ ಅಕಾಡೆಮಿಗಳು, ಪ್ರಾಧಿಕಾರಗಳು ಕೊಡುವ ಪ್ರಶಸ್ತಿಗಳು ಇದರಲ್ಲಿ ಸೇರಿಲ್ಲ. ನವೆಂಬರ್ 1 ರಂದು ಕೊಡುವ ರಾಜ್ಯೋತ್ಸವ ಪ್ರಶಸ್ತಿಗಳೂ ಪ್ರತ್ಯೇಕವಾದವು. ಅವುಗಳನ್ನು ಹೊರತು ಪಡಿಸಿ ಮೂರು ವರ್ಷದ ಘೋಷಿತ ಪ್ರಶಸ್ತಿಗಳು ಒಟ್ಟು 66 ಹಾಗೂ ಈ ವರ್ಷ ಘೋಷಿಸಬೇಕಾದ ಪ್ರಶಸ್ತಿಗಳು 22. ಒಟ್ಟು 88 ಪ್ರಶಸ್ತಿಗಳಾಗಿದ್ದು ಅದರಲ್ಲಿ ಜಯಂತಿಯ ದಿನಗಳಂದು 16 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದ್ದು ಇನ್ನೂ 72 ಪ್ರಶಸ್ತಿಗಳು ಬಾಕಿ ಇವೆ. 

ವಾಸ್ತವ ಸಂಗತಿ ಹೀಗಿರುವಾಗ, ಕೊಡಬೇಕಾದ ಪ್ರಶಸ್ತಿಗಳನ್ನೇ ಸರಕಾರ ಇನ್ನೂ ಪ್ರದಾನ ಮಾಡದೇ ಬಾಕಿ ಉಳಿಸಿಕೊಂಡಿರುವಾಗ,  ಈಗಾಗಲೇ ಘೋಷಿತ ಪ್ರಶಸ್ತಿಗಳನ್ನೇ  ನಿಗಧಿತವಾಗಿ ಕೊಡಮಾಡಲು ಆಗದೇ ಇರುವಾಗ ಈಗ ಮತ್ತೆ ಹೊಸದಾಗಿ ವಿಶೇಷ ಪ್ರಶಸ್ತಿಗಳನ್ನು ಸರಕಾರ ಕೊಡಲು ನಿರ್ಧರಿಸಿರುವುದು ಪ್ರಶ್ನಾರ್ಹವಾಗಿವೆ. ಹೊಸ ಸರಕಾರ ಬಂದು ಒಂಬತ್ತು ತಿಂಗಳು ತುಂಬಿದ್ದರೂ ಇನ್ನೂ ಪ್ರಶಸ್ತಿಗಳ ಹೆರಿಗೆ ಆಗದೇ ಇರುವುದು ಸರಕಾರದ ಸಾಂಸ್ಕೃತಿಕ ಅನಾಸಕ್ತಿಗೆ ಪುರಾವೆಯಾಗಿದೆ. ಅಕಾಡೆಮಿ ಪ್ರಾಧಿಕಾರ ರಂಗಾಯಣಗಳಿಗೂ ಇನ್ನೂ ನಿರ್ದೇಶಕರು  / ಅಧ್ಯಕ್ಷರು / ಸದಸ್ಯರುಗಳನ್ನು ನೇಮಿಸದಿರುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿಷ್ಕ್ರೀಯತೆಗೆ ಸಾಕ್ಷಿಯಾಗಿದೆ.

'ಹಿಂದಿನ ಸಾಲ ತೀರಿಸಿದವರಿಗೆ ಮಾತ್ರ ಹೊಸ ಸಾಲ ಕೊಡಲಾಗುವುದು' ಎಂಬ ನಿಯಮವನ್ನು ಸಾಲ ಪಡೆದ ರೈತಾಪಿ ಜನರಿಗೆ ವಿಧಿಸುವ ಸರಕಾರ, ಹಿಂದಿನ ಬಾಕಿ ಪ್ರಶಸ್ತಿಗಳನ್ನು ಪ್ರದಾನ ಮಾಡದೇ ಮತ್ತೆ ಹೊಸ ಪ್ರಶಸ್ತಿಗಳನ್ನು ಕೊಡಮಾಡುವ ನಿರ್ಧಾರವೇ ವಿಚಿತ್ರವಾಗಿದೆ. 

ಆದರೂ ಮೈಸೂರು ರಾಜ್ಯ ಕರ್ನಾಟಕವಾಗಿ ನಾಮಕರಣಗೊಂಡು ಐವತ್ತು ವರ್ಷಗಳಾಗಿರುವ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಐವತ್ತು ಸಾಧಕ ಗಣ್ಯರಿಗೆ ರಾಜ್ಯ ಮಟ್ಟದ "ಕರ್ನಾಟಕ ಸುವರ್ಣ ಸಂಭ್ರಮ" ಪ್ರಶಸ್ತಿಯನ್ನು ಮಾರ್ಚ್ ತಿಂಗಳಲ್ಲಿ ಪ್ರದಾನ ಮಾಡಲು ನಿರ್ಧರಿಸಿ ಸಾಧಕರ ಆಯ್ಕೆಗೆ ಆದೇಶಿಸಿದೆ. ಸಾಧಕರನ್ನು ಗುರುತಿಸಿ ಪ್ರತಿ ಜಿಲ್ಲೆಗೆ 5 ಜನರ ಹೆಸರನ್ನು ಕಳಿಸುವಂತೆ ಸಂಸ್ಕೃತಿ ಇಲಾಖೆಯ ಸಚಿವರು ತಮ್ಮ ಇಲಾಖಾ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿದೆ. 

ಈ ರೀತಿಯ ಸರಕಾರಿ ಪ್ರಾಯೋಜಿತ ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡಲು ಆಯಾ ಕ್ಷೇತ್ರದ ತಜ್ಞರ ಸಮಿತಿಯನ್ನು ರಚಿಸುವುದು ಸಂಪ್ರದಾಯ. ಆದರೆ ಈಗ ಅದನ್ನೂ ಪರಿಗಣಿಸದೇ ಆ ಕೆಲಸವನ್ನು ಇಲಾಖೆಯ ಅಧಿಕಾರಿಗಳೇ ಮಾಡುತ್ತಿರುವುದು ಇನ್ನೊಂದು ವಿಪರ್ಯಾಸ. ಆಡಳಿತದ ಹೊಣೆಗಾರಿಕೆ ಹೊತ್ತ ಅಧಿಕಾರಿಗಳು ಕಲೆ ಸಾಹಿತ್ಯ ಸಂಸ್ಕೃತಿಯ ಬಗ್ಗೆ ಆಳವಾದ ಅರಿವನ್ನೂ ಹಾಗೂ ಆಯಾ ಕ್ಷೇತ್ರದ ಸಾಧಕರ ಬಗ್ಗೆ ವಿವರವಾದ ಮಾಹಿತಿಯನ್ನೂ ಹೊಂದಿರುವುದಿಲ್ಲ. ಹಾಗೂ ರಾಜಕೀಯ ಶಕ್ತಿಗಳ ಒತ್ತಡಕ್ಕೆ ಅಧಿಕಾರಿಗಳು ಸುಲಭವಾಗಿ ಒಳಗಾಗುವ ಸಾಧ್ಯತೆಗಳೇ ಹೆಚ್ಚು. ಆದ್ದರಿಂದ ಪಾರದರ್ಶಕವಾಗಿ ಅರ್ಹರನ್ನು ಅಧಿಕಾರಿಗಳು ಆಯ್ಕೆ ಮಾಡುತ್ತಾರೆಂಬುದೇ ಅನುಮಾನ. ಪ್ರಶಸ್ತಿಗೆ ಅರ್ಹ ಸಾಧಕರ ಆಯ್ಕೆಗೆ ಕಮಿಟಿ ಅಥವಾ ಸಲಹಾ ಸಮಿತಿಯನ್ನು ಮಾಡಿದ್ದೇ ಆದರೆ ಆ ಸಮಿತಿ ಶಿಪಾರಸ್ಸು ಮಾಡಿದವರ ಲಿಸ್ಟಿನಲ್ಲೇ ಸಾಧಕರನ್ನು ಅಂತಿಮಗೊಳಿಸುವ ಅನಿವಾರ್ಯತೆ ಸರಕಾರಕ್ಕಿದೆ. ಅದನ್ನು ತಪ್ಪಿಸಿ ತಮಗೆ ಬೇಕಾದವರಿಗೆ ಪ್ರಶಸ್ತಿಗಳನ್ನು ಕೊಡಮಾಡಲು ಅಧಿಕಾರಿಗಳ ಮೂಲಕ ಆಳುವ ಸರಕಾರ ಪ್ರಯತ್ನಿಸುತ್ತಿದೆ. 

ಕಳೆದ ನವೆಂಬರ 1 ರಂದು ಪ್ರದಾನ ಮಾಡಲಾದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಸಲಹಾ ಸಮಿತಿಯ ಮೂಲಕ ಆಯ್ಕೆ ಮಾಡಿದ್ದರಿಂದಾಗಿ ಅನೇಕ ಆಕಾಂಕ್ಷಿಗಳಿಗೆ ನಿರಾಸೆಯಾಗಿತ್ತು. ಅಂತಹ ಆಕಾಂಕ್ಷಿಗಳಲ್ಲಿ ಆಳುವ ಪಕ್ಷದ ಹಿತೈಷಿಗಳು, ಕಾರ್ಯಕರ್ತರು ಹಾಗೂ ರಾಜಕೀಯ ವ್ಯಕ್ತಿಗಳ ಸಹವರ್ತಿಗಳೂ ಬೇಕಾದಷ್ಟಿದ್ದರು. ಅಂತವರಿಂದ ಸರಕಾರದ ಮೇಲೆ ಪ್ರಶಸ್ತಿಗಾಗಿ ತೀವ್ರವಾದ ಒತ್ತಡವೂ ಇತ್ತು. ಅಂತವರಲ್ಲಿ ಕೆಲವರನ್ನಾದಾರು ಸಮಾಧಾನ ಪಡಿಸಲು  ಸುವರ್ಣ ಕರ್ನಾಟಕ ಸಂಭ್ರಮದ ನೆಪದಲ್ಲಿ ಮತ್ತೆ ಹೊಸದಾಗಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆಯಾ ಎನ್ನುವ ಸಂದೇಹ ಕಾಡದೇ ಇರದು. ಯಾಕೆಂದರೆ ಈ ವಿಶೇಷ ಪ್ರಶಸ್ತಿಗಳಿಗಾಗಿ ನೇರವಾಗಿ ಅಧಿಕಾರಿಗಳ ಮೂಲಕ ಸಾಧಕರನ್ನು ಆಯ್ಕೆ ಮಾಡುವ ವಿಧಾನವು ಈ ಸಂದೇಹಕ್ಕೆ ಪುರಾವೆ ಒದಗಿಸುವಂತಿದೆ. ಯಾವುದೇ ಅಧಿಕಾರಿಗಳು ಸಚಿವರ ಹಾಗೂ ಸರಕಾರವನ್ನು ಪ್ರಶ್ನಿಸುವುದು ಅಸಾಧ್ಯವಾಗಿರುವುದರಿಂದ ಆಳುವವರು ತಮಗೆ ಬೇಕಾದವರಿಗೆ ಪ್ರಶಸ್ತಿ ಘೋಷಿಸುವ ಸಾಧ್ಯತೆಗಳೇ ಹೆಚ್ಚಾಗಿವೆ. 

ಒಂದು ತಿಂಗಳ ಹಿಂದೆ ಡಿಸೆಂಬರ್ 15 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿಯಾಗಿರುವ ಡಾ.ಧರಣಿದೇವಿಯವರು ಆಯ್ದ ರಂಗಕರ್ಮಿಗಳ ಸಮಾಲೋಚನಾ ಸಭೆಯನ್ನು ಕರೆದಿದ್ದರು. ಪ್ರಶಸ್ತಿ ಪ್ರದಾನ ವಿಳಂಬದ ಬಗ್ಗೆ ಉತ್ತರಿಸುತ್ತಾ  ಜನವರಿ ತಿಂಗಳಲ್ಲಿ ಎರಡು ಮೂರು ಕಂತುಗಳಲ್ಲಿ ಬಾಕಿ ಇರುವ ಎಲ್ಲಾ 72 ಪ್ರಶಸ್ತಿಗಳನ್ನೂ ಪ್ರದಾನ ಮಾಡಲಾಗುವುದು ಎಂದು  ಭರವಸೆ ಕೊಟ್ಟಿದ್ದರು. ಅಷ್ಟೇ ಯಾಕೆ ಕಳೆದ ತಿಂಗಳು ಬೆಳಗಾವಿಯಲ್ಲಿ ನಡೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಮಾನ್ಯ ಎಂಎಲ್ಸಿ ವಿಶ್ವನಾಥರವರು ಬಾಕಿ ಇರುವ ಪ್ರಶಸ್ತಿಗಳ ಕುರಿತು ಪ್ರಶ್ನೆ ಎತ್ತಿದ್ದರು. ಜನವರಿ ತಿಂಗಳಲ್ಲಿ ಬಾಕಿ ಇರುವ ಪ್ರಶಸ್ತಿಗಳನ್ನೆಲ್ಲಾ ಪ್ರದಾನ ಮಾಡುವುದಾಗಿ ಸಂಸ್ಕೃತಿ ಇಲಾಖೆಯ ಸಚಿವರು ಉತ್ತರ ಕೊಟ್ಟಿದ್ದರು. 

ಆದರೆ... ಇಲ್ಲಿವರೆಗೂ ಯಾವುದೇ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಯಾವುದೇ ತಯಾರಿ ಮಾಡಿಕೊಂಡಿಲ್ಲ. ಈ ವರ್ಷದ ಪ್ರಶಸ್ತಿಗಳನ್ನು ಇನ್ನೂ ಘೋಷಿಸಿಲ್ಲ. ಆದರೆ ಮತ್ತೆ ಹೊಸದಾಗಿ ಪ್ರಶಸ್ತಿಗಳನ್ನು ಕೊಡುವ ನಿರ್ಣಯ ತೆಗೆದುಕೊಳ್ಳುವುದಕ್ಕೆ ಇತಿಮಿತಿಯಿಲ್ಲ.

ಸರಕಾರದ ಆದೇಶವಾಗಿ ಆರೇಳು ವರ್ಷಗಳಾದರೂ ಇನ್ನೂ ಸಾಂಸ್ಕೃತಿಕ ನೀತಿ ಜಾರಿಯಾಗಿಲ್ಲ. ಅದೇನಾದರೂ ಅನುಷ್ಠಾನಕ್ಕೆ ಬಂದಿದ್ದೇ ಆದರೆ ಖಡ್ಡಾಯವಾಗಿ ಆಯಾ ವರ್ಷದ ಪ್ರಶಸ್ತಿಗಳನ್ನು ಕಾಲಮಿತಿಯಲ್ಲಿ ಕೊಡಲೇ ಬೇಕಾಗುತ್ತದೆ. ಹೀಗೆ ಮೂರ್ನಾಲ್ಕು ವರ್ಷಗಳ ಕಾಲ ಪ್ರಶಸ್ತಿಗಳಿಗೆ ಸಾಧಕರ ಹೆಸರನ್ನು ಘೋಷಿಸಿ ಪ್ರಧಾನ ಮಾಡದೇ ವಿಳಂಬ ಮಾಡುವುದರಿಂದ ಪ್ರಶಸ್ತಿಯ ಮೌಲ್ಯವೂ ಕಡಿಮೆಯಾಗುತ್ತದೆ. ಪ್ರಶಸ್ತಿ ಪಡೆದವರಲ್ಲಿ ಆಸಕ್ತಿಯೂ ಇಲ್ಲವಾಗುತ್ತದೆ. ಹಾಗೂ ಕೆಲವರು ಪ್ರಶಸ್ತಿ ಪಡೆಯದೇ ಮರಣ ಹೊಂದಿರುವ ಧಾರುಣತೆಯೂ ನಡೆದು ಹೋಗಿದೆ. 

'ಕರ್ನಾಟಕ ಸುವರ್ಣ ಸಂಭ್ರಮ' ಪ್ರಶಸ್ತಿಗೆ ಸಾಧಕರನ್ನು ಘೋಷಿಸುವ ಮೊದಲು ಬಾಕಿ ಇರುವ ಎಲ್ಲಾ ಪ್ರಶಸ್ತಿಗಳನ್ನೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರದಾನ ಮಾಡಬೇಕು. ಪ್ರಶಸ್ತಿ ಘೋಷಿತವಾಗಿ ಮರಣ ಹೊಂದಿದವರಿಗೆ ಮರಣೋತ್ತರವಾಗಿ ಪ್ರಶಸ್ತಿ ಕೊಡಬೇಕು. ಹೊಸ ಪ್ರಶಸ್ತಿಗಳಿಗಾಗಿ ಸಾಧಕರ ಆಯ್ಕೆಯ ಹೊಣೆಯನ್ನು ಅಧಿಕಾರಿಗಳಿಗೆ ವಹಿಸದೇ ಕ್ಷೇತ್ರತಜ್ಞರ ಸಲಹಾ ಸಮಿತಿಗೆ ಒಪ್ಪಿಸಬೇಕು. ಆಗ ಮಾತ್ರ ಸಾಂಸ್ಕೃತಿಕ ಕ್ಷೇತ್ರದವರಿಗೆ ಸರಕಾರದ ಮೇಲೆ, ಸಂಸ್ಕೃತಿ ಇಲಾಖೆಯ ಮೇಲೆ, ಪ್ರಶಸ್ತಿಗಳ ಮೇಲೆ ವಿಶ್ವಾಸಾರ್ಹತೆ ಮೂಡಲು ಸಾಧ್ಯ. 

- ಶಶಿಕಾಂತ ಯಡಹಳ್ಳಿ
     16-01-2024

ಭಾನುವಾರ, ಜನವರಿ 14, 2024

ಕೆಸೆಟ್ ಪರೀಕ್ಷಾ ಪ್ರಶ್ನೆಗಳಲ್ಲಿ ಕರ್ನಾಟಕದ ಪ್ರದರ್ಶನ ಕಲೆಗಳ ನಿರ್ಲಕ್ಷ

ತಹ ತಹ - 491

ಕೆಸೆಟ್ ಪರೀಕ್ಷಾ ಪ್ರಶ್ನೆಗಳಲ್ಲಿ ಕರ್ನಾಟಕದ ಪ್ರದರ್ಶನ ಕಲೆಗಳ  ನಿರ್ಲಕ್ಷ

ಕನ್ನಡ ಸಂಸ್ಕೃತಿ ಕುರಿತು ಈ ಪರೀಕ್ಷಾ ಪ್ರಾಧಿಕಾರಗಳಿಗೆ ಯಾಕಿಷ್ಟು ನಿರ್ಲಕ್ಷ? ಗೊತ್ತಿಲ್ಲ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನಾವಳಿಯಲ್ಲೂ ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರವನ್ನು ಪರಿಗಣಿಸದೇ ಇರುವುದು ಅಕ್ಷಮ್ಯ.

ಆಗಿದ್ದೇನು ಅಂದರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಂತಾ ಒಂದಿದೆ. ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (KSET) ಗಳನ್ನು ನಿರ್ವಹಿಸುತ್ತದೆ. ಕರ್ನಾಟಕದ ವಿಶ್ವವಿದ್ಯಾಲಯಗಳ ಆಧೀನದಲ್ಲಿರುವ ಕಾಲೇಜುಗಳಲ್ಲಿ ಹಾಗೂ ಖಾಸಗಿ ಕಾಲೇಜುಗಳಲ್ಲಿ,  ಉಪನ್ಯಾಸಕರಾಗಲು ಬಯಸುವವರು ಈ ಪರೀಕ್ಷೆಯನ್ನು ಖಡ್ಡಾಯವಾಗಿ ಪಾಸ್ ಮಾಡಲೇಬೇಕಿದೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗದವರಿಗೆ ಯಾವುದೇ ಕಾಲೇಜುಗಳಲ್ಲೂ ಉದ್ಯೋಗ ಅವಕಾಶ ಇಲ್ಲ. ಹೀಗಾಗಿ ಉಪನ್ಯಾಸಕರಾಗಬೇಕೆಂದರೆ ಕೆಸೆಟ್ ಎಕ್ಸಾಮ್ ಕಂಪಲ್ಸರಿ.

ಈಗ ತಕರಾರಿರೋದು ಈ ಪರೀಕ್ಷೆ  ಬಗ್ಗೆ ಅಲ್ಲಾ. ಪರೀಕ್ಷೆ ನಡೆಯುವ ರೀತಿಯ ಕುರಿತೂ ಅಲ್ಲಾ. ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ತಯಾರಿಸಿದ್ದರ ಕುರಿತು. ಪ್ರದರ್ಶಕ ಕಲೆಗಳ ವಿಭಾಗದಲ್ಲಿ 2023 ರ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಒಮ್ಮೆ ನೋಡಲೇಬೇಕು.

ಒಟ್ಟು ನೂರು ಪ್ರಶ್ನೆಗಳಿವೆ. ಪ್ರತಿಯೊಂದು ಪ್ರಶ್ನೆಗೂ ನಾಲ್ಕು ಆಪ್ಶನ್ ಉತ್ತರಗಳಿವೆ. ಸರಿಯಾದದ್ದನ್ನು ಟಿಕ್ ಮಾಡಿದವರಿಗೆ ಅಂಕ ಸಿಗುತ್ತದೆ. ಪೈನ್. ಆದರೆ ಈ ಪ್ರಶ್ನೆಪತ್ರಿಕೆ ನೋಡಿದ ಪರಿಕ್ಷಾರ್ಥಿಗಳಿಗೆ ಶಾಕ್ ಆಗೋದಂತೂ ಸತ್ಯ. ಯಾಕೆಂದರೆ ಬಹುತೇಕ ಎಲ್ಲಾ ಪ್ರಶ್ನೆಗಳೂ ವಿದೇಶಿ ರಂಗಭೂಮಿ ಇಲ್ಲವೇ ಸಂಸ್ಕೃತ ರಂಗಭೂಮಿಗೆ ಸಂಬಂಧಿಸಿದ್ದವೇ ಆಗಿವೆ. ರಂಗಭೂಮಿ ಅಂದ್ರೆ ಇಷ್ಟೇನಾ?

ಪರೀಕ್ಷೆ ನಡೆಸುತ್ತಿರುವುದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ. ಪಾಸಾದವರು ಉಪನ್ಯಾಸ ಕೊಡಬೇಕಾದದ್ದು ಕರ್ನಾಟಕದ ಕಾಲೇಜುಗಳಲ್ಲಿ. ಉಪನ್ಯಾಸಕರಿಗೆ ಇರಬೇಕಾದದ್ದು ಕರ್ನಾಟಕದ ರಂಗಭೂಮಿ ಹಾಗೂ ಸಂಸ್ಕೃತಿಯ ಕುರಿತ ಜ್ಞಾನ. ಆ ಕುರಿತ ಪ್ರಶ್ನೆಗಳಿಲ್ಲದ ಪತ್ರಿಕೆ ಕನ್ನಡ ರಂಗಭೂಮಿಗೆ ಮಾಡಿದ ದ್ರೋಹವಲ್ಲದೇ ಮತ್ತೇನು?

ಪ್ರದರ್ಶನ ಕಲೆಗಳು ಅಂದರೆ ಸಂಸ್ಕೃತ ಭೂವಿಷ್ಟ ಕಲೆಗಳು ಇಲ್ಲವೇ ವಿದೇಶಿ ಕಲೆಗಳು ಮಾತ್ರವಲ್ಲ. ಕರ್ನಾಟಕ ಎನ್ನುವುದು ಪ್ರದರ್ಶನ ಕಲೆಗಳ ಆಗರ. ಇಡೀ ದೇಶದಲ್ಲೇ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿರುವ ರಾಜ್ಯ ನಮ್ಮದು. ರಂಗಭೂಮಿ ಎನ್ನುವುದೇ ಎಲ್ಲಾ ಪ್ರದರ್ಶನ ಕಲೆಗಳ ಸಮ್ಮಿಲನ. ಕರ್ನಾಟಕದಲ್ಲಿ ವೈವಿದ್ಯಮಯ ರಂಗಭೂಮಿ ಪ್ರಕಾರಗಳಿವೆ. ಕಂಪನಿ ನಾಟಕಗಳ ವೃತ್ತಿ ರಂಗಭೂಮಿ, ನಗರ ಕೇಂದ್ರಿತ ಹಾಗೂ ಗ್ರಾಮೀಣ ಹವ್ಯಾಸಿ ರಂಗಭೂಮಿ, ರೆಪರ್ಟರಿ ರಂಗಭೂಮಿ, ಜಾನಪದ ರಂಗಭೂಮಿ, ಪೌರಾಣಿಕ ರಂಗಭೂಮಿ, ಮಕ್ಕಳ ರಂಗಭೂಮಿ.. ಹೀಗೆ ಹಲವಾರು ಪ್ರಕಾರಗಳು ಸೇರಿ ಕನ್ನಡ ರಂಗ ಸಂಸ್ಕೃತಿ ಎನ್ನುವುದು ಕಾಲಕಾಲಕ್ಕೆ ವಿಜ್ರಂಭಿಸುತ್ತಲೇ ಬಂದಿದೆ. 

ಆದರೆ ಈ ರಂಗ ಪ್ರಕಾರಗಳ ಕುರಿತು ಪ್ರಶ್ನೆಗಳೇ ಇಲ್ಲವೆಂದಮೇಲೆ ಪ್ರಶ್ನೆ ಪತ್ರಿಕೆ ತಯಾರಿಸುವವರು ಕನ್ನಡ ರಂಗಭೂಮಿಯನ್ನು ಪರಿಗಣಿಸಿಲ್ಲವೆಂದೇ ಅರ್ಥ. ಬಹುಷಃ ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದ ಮುಖ್ಯಸ್ತರೋ ಇಲ್ಲಾ ಅವರ ಶಿಷ್ಯರೋ ಈ ರೀತಿಯ ಕನ್ನಡ ರಂಗಭೂಮಿಗೆ ಹೊರತಾದ ಪ್ರಶ್ನೆಪತ್ರಿಕೆಯನ್ನು ಸಿದ್ದಮಾಡಿಸಿದ ಮಾಹಿತಿ ಇದೆ. ಈ ಅರೆ ಪಂಡಿತರು ಪ್ರದರ್ಶನ ಕಲೆ ಎಂದರೆ ಯಾಕೆ ವಿದೇಶಿ ಇಲ್ಲವೇ ಸಂಸ್ಕೃತ ರಂಗಭೂಮಿ ಎಂದು ತಿಳಿದುಕೊಂಡಿದ್ದಾರೋ ಗೊತ್ತಿಲ್ಲ. ಇನ್ನೂ ಆ ಮೋಹದಿಂದ ಹೊರಗೆ ಬಂದಂತಿಲ್ಲ. ಅಥವಾ ಕನ್ನಡ ರಂಗಭೂಮಿಯ ಕುರಿತು ಅವರಿಗೆ ಹೆಚ್ಚು ಅರಿವೂ ಇದ್ದಂತಿಲ್ಲ.

ಅಕಾಡೆಮಿಕ್ ಆಗಿ ಪ್ರದರ್ಶನ ಕಲೆ ಕುರಿತು ಅಭ್ಯಾಸ ಮಾಡುವವರಿಗೆ ಗ್ರೀಕ್ ರಂಗಭೂಮಿ, ಎಪಿಕ್ ರಂಗಭೂಮಿ, ಸಂಸ್ಕೃತ ರಂಗಭೂಮಿ ಹಾಗೂ ಅನ್ಯ ದೇಶಗಳ ರಂಗಭೂಮಿ ಕುರಿತು ಮಾಹಿತಿ ಇರಬೇಕಾಗುತ್ತದೆ. ಅದಕ್ಕೂ ಮಿಗಿಲಾಗಿ ಕನ್ನಡ ರಂಗಭೂಮಿಯ ಬಗ್ಗೆ ಅಪಾರವಾದ ಅರಿವು ಹಾಗೂ ಅನುಭವ ಇರಬೇಕಾಗುತ್ತದೆ. ಬರೀ ಮಾಹಿತಿಗಳೇ ವಿಜ್ರಂಭಿಸಿ, ನಮ್ಮ ರಂಗ ಸಂಸ್ಕೃತಿಯನ್ನೇ ಕಡೆಗಣಿಸಿದರೆ ಅದು ಕನ್ನಡ ದ್ರೋಹ ಎನ್ನಿಸುತ್ತದೆ.

ನೂರು ಪ್ರಶ್ನೆಗಳಲ್ಲಿ ಕನಿಷ್ಟ ಅರ್ಧದಷ್ಟಾದರೂ ಪ್ರಶ್ನೆಗಳು ಕನ್ನಡ ನಾಡಿನ ಪ್ರದರ್ಶನ ಕಲೆಗಳ ಕುರಿತು ಇರಬೇಕಾದದ್ದು ಅಪೇಕ್ಷಣೀಯ. ಆದರೆ ಹಾಗಿಲ್ಲದೇ ಇರುವುದು ಕನ್ನಡ ಸಂಸ್ಕೃತಿಗೆ ಮಾಡಿದ ಅಪಮಾನ.

ಈ ಹಿಂದಿನ ವರ್ಷಗಳ  ಪ್ರಶ್ನೆ ಪತ್ರಿಕೆಗಳನ್ನು ಗಮನಿಸಿದರೆ ಸರಿಸುಮಾರು ಶೇ. 20 ರಷ್ಟಾದರೂ ಪ್ರಶ್ನೆಗಳು ಕರ್ನಾಟಕ ಪ್ರದರ್ಶನ ಕಲೆಗಳ ಕುರಿತು ಇರುತ್ತಿದ್ದವು. ಆದರೆ 2023 ರಲ್ಲಿ ಅವೂ ಇಲ್ಲವಾಗಿವೆ. ಪ್ರಶ್ನೆ ಪತ್ರಿಕೆಗಳು ಹೀಗೆ ಕರ್ನಾಟಕ ಸಂಸ್ಕೃತಿ ರಹಿತವೆಂದು ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಗೊತ್ತಾದರೆ ಅವರೂ  ಕನ್ನಡ ಪ್ರದರ್ಶನ ಕಲೆಗಳ ಬಗ್ಗೆ ತಾತ್ಸಾರ ಹೊಂದಿ ಅಭ್ಯಾಸ ಅಧ್ಯಯನ ಮಾಡುವ ಗೋಜಿಗೇ ಹೋಗದೇ ಅನ್ಯ ರಾಜ್ಯ, ಅನ್ಯ ದೇಶದ ರಂಗಭೂಮಿ ಹಾಗೂ ಸಂಸ್ಕೃತ ರಂಗಭೂಮಿಯನ್ನೇ ಪೂರ್ವಭಾವಿ ತಯಾರಿಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗೇನಾದರೂ ಆದರೆ ಮುಂದೆ ಉಪನ್ಯಾಸಕರಾಗುವವರಿಗೆ ಕರ್ನಾಟಕದ ಪ್ರದರ್ಶನ ಕಲೆಗಳ ಕುರಿತು ಹೆಚ್ಚು ಮಾಹಿತಿ, ಅನುಭವ ಇಲ್ಲದೇ ಹೋಗಿ ವಿದ್ಯಾರ್ಥಿಗಳಿಗೆ ಮತ್ತದೇ ಅನ್ಯ ಭಾಷಾ ಪ್ರದರ್ಶನ ಕಲೆಗಳ ಬಗ್ಗೆ ಹೆಚ್ಚಾಗಿ ಪಾಠ ಮಾಡುತ್ತಾರೆ. ಇದರಿಂದಾಗಿ ಪ್ರದರ್ಶನ ಕಲೆಗಳ ಕುರಿತು ಕಲಿಯಲು ಕಾಲೇಜಿಗೆ ಬರುವವರಿಗೂ ಕರ್ನಾಟಕದ ಕಲೆಗಳ ಬಗ್ಗೆ ಅರಿವು ಅಷ್ಟಕ್ಕಷ್ಟೇ ದೊರೆಯುತ್ತದೆ.

ಇನ್ನೊಂದು ಪ್ರಮುಖ ಸಂಗತಿ ಏನೆಂದರೆ. ಕೆಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮತ್ತೆ ಯಾವುದೇ ಪ್ರವೇಶ ಪರೀಕ್ಷೆಗಳಿಲ್ಲದೇ ನೇರವಾಗಿ ಪಿ ಹೆಚ್ ಡಿ ಅಧ್ಯಯನಕ್ಕೆ ಆಯ್ಕೆಯಾಗಬಹುದಾಗಿದೆ. ಹೀಗೆ ಆಯ್ಕೆಯಾದವರಿಗೆ ಕರ್ನಾಟಕ ಪ್ರದರ್ಸನ ಕಲೆಗಳ ಕುರಿತು ಆಳವಾದ ಅರಿವೂ ಇರಬೇಕಾಗುತ್ತದೆ. ಅಂತವರಿಗೆ ಕೆಸೆಟ್ ಪರೀಕ್ಷಾ ಹಂತದಲ್ಲೇ ಕರ್ನಾಟಕ ಕಲೆ ಸಂಸ್ಕೃತಿ ಕುರಿತು ಆಸಕ್ತಿ ಅರಿವು ಮೂಡಿಸಲು ನೆಲಮೂಲ ಪ್ರದರ್ಶನ ಕಲೆಗಳ ಕುರಿತು ಹೆಚ್ಚು ಪ್ರಶ್ನಾವಳಿಗಳು ಇರಬೇಕಾದದ್ದು ಅತ್ಯಗತ್ಯವಾಗಿದೆ.

"ಕನ್ನಡಗರನ್ನು, ಕನ್ನಡ ರಂಗಭೂಮಿಯನ್ನು ಕಾಪಾಡು ಕನ್ನಡಿಗರಿಂದ ನಮ್ಮ ಕರ್ನಾಟಕ ಸರಕಾರದಿಂದ ಅಂತ ಯಾರನ್ನ ಕೇಳಬೇಕು... ಗೊತ್ತಾಗ್ತಿಲ್ಲ. ನಮ್ಮ‌ ದುರಾದೃಷ್ಟ" ಎಂದು ರಂಗಕರ್ಮಿ ಮಂಡ್ಯ ರಮೇಶರವರು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ನಮ್ಮ ಭಾಷೆ, ನಮ್ಮ ನಾಡಿನ ಸಂಸ್ಕೃತಿ ಕಲೆಗಳ ಬಗ್ಗೆ ಅಭಿಮಾನ ಇರುವ ಯಾರೇ ಆದರೂ ಹೀಗೆ ಕನ್ನಡತನವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಆದರೂ ಪ್ರಶ್ನೆ ಪತ್ರಿಕೆ ತಯಾರಿ ಮಾಡುವವರಲ್ಲಿ ಈ ರೀತಿಯ ಉಪೇಕ್ಷೆ ಅತಿಯಾಗಿದೆ. ಇನ್ನು ಮುಂದೆ ನಡೆಯುವ KSET ಪ್ರದರ್ಶನ ಕಲೆಗಳ ಪರೀಕ್ಷೆಯಲ್ಲಾದರೂ ಈ ರೀತಿ ಕನ್ನಡ ರಂಗಭೂಮಿಯನ್ನು ನಿರ್ಲಕ್ಷಿಸುವ ಪ್ರಯತ್ನ ನಡೆಯದೇ ಇರಲಿ. ವಿಶ್ವ ವಿದ್ಯಾಲಯಗಳ ಪ್ರದರ್ಶನ ಕಲಾ ವಿಭಾಗದ ಮುಖ್ಯಸ್ಥರು ಈ ರೀತಿ ಆಗದಂತೆ ಮುನ್ನೆಚ್ಚರಿಕೆ ವಹಿಸಲಿ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಶ್ನೆ ಪತ್ರಿಕೆ ತಯಾರಿಸುವವರಿಗೆ ಗೈಡ್ ಲೈನ್ ರೂಪಿಸಲಿ. ಕರ್ನಾಟಕದ ಪ್ರದರ್ಶನ ಕಲೆಗಳ ಕುರಿತು ಹೆಚ್ಚು ಪ್ರಶ್ನಾವಳಿಗಳು ಇರಲಿ ಎಂಬುದೇ ಈ ಲೇಖನದ ಉದ್ದೇಶವಾಗಿದೆ.

- ಶಶಿಕಾಂತ ಯಡಹಳ್ಳಿ
    14-01-2024

ಶನಿವಾರ, ಜನವರಿ 13, 2024

ಪಲಾಯಣವಾದಿ ಪಕ್ಷಗಳೂ ಹಾಗೂ ಪಾಂಡಿತ್ಯವಿಲ್ಲದ ವಕ್ತಾರರು

ತಹ ತಹ - 490

ಪಲಾಯಣವಾದಿ ಪಕ್ಷಗಳೂ ಹಾಗೂ ಪಾಂಡಿತ್ಯವಿಲ್ಲದ ವಕ್ತಾರರು

ರಾಷ್ಟ್ರೀಯ ಪಕ್ಷ ಎನ್ನುವ ಹೆಗ್ಗಳಿಕೆ ಇರುವ ಈ ಕಾಂಗ್ರೆಸ್ ಪಕ್ಷಕ್ಕೆ ಏನಾಗಿದೆ? ವಾಸ್ತವವನ್ನು ಎದುರಿಸಲಾಗದೇ ಪಲಾಯಣವಾದಿಯಾಗಿದೆಯಾ? ಸಮಸ್ಯೆ ಯಾವುದೇ ಇರಲಿ ಅದನ್ನು ಸಮರ್ಥವಾಗಿ ನಿಭಾಯಿಸುವ ಚಾಕಚಕ್ಯತೆ ಇಲ್ಲವಾಗಿದೆಯಾ?

ಹೀಗೊಂದು ಅನುಮಾನ ಕಾಡಲು ಕಾರಣವೂ ಇದೆ. ಈಗ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನಾ ಸುದ್ದಿ ಟ್ರೇಡಿಂಗ್ ನಲ್ಲಿದೆ. ಎಲ್ಲಾ ಸುದ್ದಿ ಮಾಧ್ಯಮಗಳೂ ಆ ಕುರಿತೇ ಚರ್ಚಿಸುತ್ತಿವೆ. ಕನ್ನಡದ ಅಷ್ಟೂ ನೀವ್ಸ್ ಮೀಡಿಯಾಗಳು ಪ್ಯಾನಲ್ ಚರ್ಚೆಗಳನ್ನು ಪೈಪೋಟಿಯಲ್ಲಿ ಆರಂಭಿಸಿವೆ. ಆದರೆ ರಾಮಮಂದಿರ ಕುರಿತ  ಚರ್ಚೆಗಳಲ್ಲಿ ಕಾಂಗ್ರೆಸ್ ವಕ್ತಾರರು ಯಾವುದೇ ಸುದ್ದಿ ವಾಹಿನಿಯಲ್ಲಿ ಭಾಗವಹಿಸುತ್ತಿಲ್ಲ. ಯಾಕೆಂದು ಕೇಳಿದರೆ ಕಾಂಗ್ರೆಸ್ ಪಕ್ಷವು ತನ್ನ ವಕ್ತಾರರನ್ನು ಯಾವುದೇ ಚಾನೆಲ್ ಗಳಿಗೂ ಕಳಿಸುತ್ತಿಲ್ಲವಂತೆ. ಈ ಸೂಕ್ಷ್ಮ ವಿಷಯದ ಬಗ್ಗೆ ಅಂತರವನ್ನು ಕಾಯ್ದುಕೊಂಡಿದೆಯಂತೆ. ಇದೆಂತಾ ಸಾವು ಮಾರ್ರೇ..

ಈ ಹಿಂದೆ ಬಿಜೆಪಿ ಪಕ್ಷವೂ ಸಹ ಹಲವಾರು ಸಲ ತಮ್ಮ ವಕ್ತಾರರನ್ನು ಚಾನೆಲ್ ಗಳ ಪ್ಯಾನಲ್ ಚರ್ಚೆಯಲ್ಲಿ ಭಾಗವಹಿಸದಂತೆ ತಡೆದದ್ದೂ ಇದೆ. ಜೆಡಿಎಸ್ ಪಕ್ಷ ಸಹ ಇದಕ್ಕೆ ಹೊರತಲ್ಲ. 

ರಾಜಕೀಯ ಪಕ್ಷಗಳು ಮಾಧ್ಯಮಗಳ ಮೂಲಕ ಜನರ ಮುಂದೆ ತಮ್ಮ ಉತ್ತರದಾಯಿತ್ವವನ್ನು ಸಾಬೀತುಪಡಿಸ ಬೇಕಾಗುತ್ತದೆ. ವಿಷಯ ಅದೆಷ್ಟೇ ವಿವಾದಾತ್ಮಕವಾಗಿರಲಿ, ವಿಚಾರ ಅದೆಷ್ಟೇ ಸೆನ್ಸಿಟಿವ್ ಆಗಿರಲಿ ಅದನ್ನು ಎದುರಿಸುವ ಸ್ಥೈರ್ಯ ಮತ್ತು ಚಾಕಚಕ್ಯತೆ ರಾಜಕೀಯ ಪಕ್ಷಗಳಿಗೆ ಇರಬೇಕಾಗುತ್ತದೆ. ವಕ್ತಾರರು ತಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಬೇಕಾಗುತ್ತದೆ. ಯಾವಾಗ ವಿವಾದಾತ್ಮಕ ವಿಚಾರಗಳು ತಮ್ಮ ಪಕ್ಷದ ವರ್ಚಸ್ಸಿಗೆ ಹಾನಿ ಮಾಡುತ್ತದೆ ಎನ್ನುವ ಅನುಮಾನ ಪಕ್ಷದ ನಾಯಕರಿಗೆ ಬರುತ್ತದೋ ಆಗ ಚರ್ಚೆಯಲ್ಲಿ ಭಾಗವಹಿಸದೇ ಹಿಂದೆ ಸರಿಯುವ ನಿರ್ಧಾರವನ್ನು ಪಕ್ಷಗಳು ತೆಗೆದುಕೊಳ್ಳುತ್ತವೆ. ಯಾಕೆ ಹೀಗೆ?

ಈ ಪಕ್ಷಗಳಿಗೆ ತಮ್ಮ ವಕ್ತಾರರ ಮೇಲೆ ನಂಬಿಕೆ ಇಲ್ಲವೇ?  ಚರ್ಚೆಗೆ ಆಯ್ದುಕೊಂಡ ವಿಷಯದ ಮೇಲೆ ಯಾವುದೇ ಅಧ್ಯಯನ ಮಾಡಿಕೊಂಡು ಬರದೇ, ವಿಷಯ ಜ್ಞಾನ ಇಲ್ಲದೇ ತೋಚಿದ್ದನ್ನು ಕ್ಯಾಮರಾ ಮುಂದೆ ಜೋರು ದ್ವನಿಯಲ್ಲಿ ಒದರಿ ಕೂಗಾಡುವುದನ್ನೇ ಸಂವಾದ ಎಂದುಕೊಂಡ ವಕ್ತಾರರೇ ಹೆಚ್ಚಾಗಿದ್ದಾರೆ. ಮಾತುಬಲ್ಲವರನ್ನು, ಜೋರಾಗಿ ಕೂಗಾಡುವವರನ್ನು, ವಿಷಯಾಂತರ ಮಾಡುವವರನ್ನು, ಗದ್ದಲ ಎಬ್ಬಿಸಿ ಸುದ್ದಿಯಾಗ ಬಯಸುವವರನ್ನು, ಯಾವುದೇ ಸಾಹಿತ್ಯಕ ಸಾಂಸ್ಕೃತಿಕ ಹಿನ್ನೆಲೆ ಇಲ್ಲದವರನ್ನು ಯಾವುಯಾವುದೊ ಕಾರಣಕ್ಕೆ ಪಕ್ಷದ ವಕ್ತಾರರಾಗಿ ನೇಮಿಸಲಾಗಿರುತ್ತದೆ. ಅಂತಹ ವಕ್ತಾರರು ಏರು ದ್ವನಿಯಲ್ಲಿ ಕೂಗಾಡಿ ರಾಡಿ ಎಬ್ಬಿಸುವುದನ್ನೇ ಚರ್ಚೆ ಅಂದುಕೊಂಡಿರುತ್ತಾರೆ. ಕೆಲವರಂತೂ ಜಗಳದ ಮೋಡ್ ನಲ್ಲೇ ಇರುತ್ತಾರೆ. ಇಂತಹ ವಕ್ತಾರರ ಜಗಳ ವಾಗ್ಯುದ್ಧಗಳಿಂದಾಗಿ ಪ್ಯಾನಲ್ ಚರ್ಚೆಗಳೇ ದಾರಿ ತಪ್ಪುತ್ತಿವೆ. ಅಲ್ಲಿ ಸಂವಾದದ ಬದಲಾಗಿ ಅನಗತ್ಯ ಸಂಘರ್ಷಗಳೆ ಹೆಚ್ಚಾದಾಗ ವೀಕ್ಷಕರೇ ಬೇಸರಗೊಂಡು ಚಾನೆಲ್ ಬದಲಾಯಿಸುವಂತಾಗುತ್ತದೆ.

ದೇವರು ಧರ್ಮಗಳಂತಹ ಸೂಕ್ಷ್ಮ ವಿಚಾರಗಳು ಹಾಗೂ ಭಾವನಾತ್ಮಕ ವಿವಾದಗಳನ್ನು ತಾಳ್ಮೆಯಿಂದ ತಾರ್ಕಿಕವಾಗಿ ಚರ್ಚಿಸುವಂತಹ ವಕ್ತಾರರು ಕಡಿಮೆ ಇರುವುದರಿಂದಾಗಿ, ರಾಜಕೀಯ ಪಕ್ಷಗಳಿಗೆ ತಮ್ಮ ವಕ್ತಾರರ ಬೌದ್ದಿಕ ಸಾಮರ್ಥ್ಯ ಹಾಗೂ ವಿಷಯ ಮಂಡನೆಯ ಕೌಶಲ್ಯದ ಮೇಲೆ ಅಪನಂಬಿಕೆ ಇರುವುದರಿಂದ ಭಾವನಾತ್ಮಕ ಸಂಗತಿಗಳ ಕುರಿತ ಚರ್ಚೆಗಳಿದ್ದಾಗ ತಮ್ಮ ವಕ್ತಾರರನ್ನು ಕಳುಹಿಸಲು ಹಿಂಜರಿಯುತ್ತಾರೆ. ಎಲ್ಲಿ ಈ ವಕ್ತಾರರು ಅನಗತ್ಯವಾಗಿ ಏನೋ ಹೇಳಿಕೆ ಕೊಟ್ಟು ಪ್ರತಿಪಕ್ಷಗಳ ಕೈಗೆ ಅಸ್ತ್ರ ಕೊಡುತ್ತಾರೋ ಎಂಬ ಆತಂಕವೂ ಎಲ್ಲಾ ಪಕ್ಷದ ಉನ್ನತ ನಾಯಕರಿಗೆ ಇದ್ದೇ ಇರುತ್ತದೆ. ಇಂತಿಂತಾ ವಿಷಯಕ್ಕೆ ಇಂತಿಂತಾ ವಾಹಿನಿಗಳಲ್ಲಿ ಪಕ್ಷದ ವಕ್ತಾರರು ಭಾಗವಹಿಸಿ ಚರ್ಚೆ ಮಾಡಬಾರದು ಎಂದು ಪಕ್ಷಗಳು ಆದೇಶಿಸುತ್ತಿವೆ.

ಮಾಧ್ಯಮದ ನಿರೂಪಕರೂ ಸಹ ಪಕ್ಷವನ್ನು ಮುಜುಗರಕ್ಕೀಡು ಮಾಡುವಂತಹ ಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕೆ ಸಮರ್ಥವಾಗಿ ಉತ್ತರ ಹೇಳುವಲ್ಲಿ ವಕ್ತಾರರು ಸೋಲುತ್ತಾರೆ, ಇಲ್ಲವೇ ಪಕ್ಷದ ನಿಲುವಿಗೆ ವ್ಯತಿರಿಕ್ತವಾಗಿ ಏನನ್ನೋ ಹೇಳಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ ಎನ್ನುವುದೇ ಈ ಅಘೋಷಿತ ಪ್ಯಾನಲ್ ಡಿಸ್ಕಶನ್ ಬೈಕಾಟ್ ಗೆ ಪ್ರಮುಖ ಕಾರಣವಾಗಿದೆ.

ಈಗ ರಾಮಮಂದಿರದಂತಹ ಮಹತ್ವದ ವಿಷಯದ ಮೇಲೆ ಮಾಧ್ಯಮದಲ್ಲಿ ಚರ್ಚಿಸಲು ಕಾಂಗ್ರೆಸ್ ಪಕ್ಷ ಯಾಕೆ ಯಾವುದೇ ವಕ್ತಾರರನ್ನು ಕಳುಸುತ್ತಿಲ್ಲ? ಯಾಕೆಂದರೆ ರಾಮಮಂದಿರದ ಉದ್ಘಾಟನೆಯ ಪರವಾಗಿ ನಿಲುವು ತೆಗೆದುಕೊಂಡರೆ ಅದು ಬಿಜೆಪಿಗೆ ವರದಾನವಾಗುತ್ತದೆ. ವಿರುದ್ಧವಾಗಿ ಅಭಿಪ್ರಾಯ ವ್ಯಕ್ತ ಪಡಿಸಿದರೆ ಕಾಂಗ್ರೆಸ್ ರಾಮನ ವಿರೋಧಿ, ಹಿಂದೂ ವಿರೋಧಿ ಎಂದು ಆರೋಪಿಸಲು ಬಿಜೆಪಿಗೆ ಅಸ್ತ್ರಕೊಟ್ಟಂತಾಗುತ್ತದೆ. ಪ್ರಾಣ ಪ್ರತಿಷ್ಠಾಪನೆಯ ಪರ ಅಥವಾ ವಿರೋಧದ ಕುರಿತು ಯಾವುದೇ ಸ್ಪಷ್ಟ ನಿಲುವನ್ನೂ ತೆಗೆದುಕೊಳ್ಳದ ಕಾಂಗ್ರೆಸ್ ಹೈಕಮಾಂಡ್ 'ಬಿಜೆಪಿ ಆರೆಸ್ಸೆಸ್ ಪ್ರಾಯೋಜಿತ ಕಾರ್ಯಕ್ರಮಕ್ಕೆ ನಾವು ಹೋಗುತ್ತಿಲ್ಲ' ಎಂದು ಹೇಳಿ ಸುಮ್ಮನಾಗಿದೆ. ಇದನ್ನೇ ತನ್ನ ವಕ್ತಾರರ ಮೂಲಕ ಮಾಧ್ಯಮಗಳ ಚರ್ಚೆಯಲ್ಲಿ ಮಂಡಿಸಬಹುದಾಗಿತ್ತು. ಆದರೆ ಚರ್ಚೆ ಅಂದರೆ ನಿರೂಪಕರ ಹಾಗೂ ಬೇರೆ ಪಕ್ಷಗಳ ವಕ್ತಾರರ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಆ ರಿಸ್ಕೇ ಬೇಡವೆಂದು ಚರ್ಚೆಯಿಂದಲೇ ಹಿಂದೆ ಸರಿಯುವ ನಿರ್ಧಾರವನ್ನು ಕಾಂಗ್ರೆಸ್ ಕೈಗೊಂಡಿದೆ. ಆದರೆ ಕಾಂಗ್ರೆಸ್ಸಿನ ವಕ್ತಾರರು ಮಾಧ್ಯಮಗಳ ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಬಹುದಾಗಿತ್ತು. ಹಾಗೂ ಹಿಂದುತ್ವವಾದಿ ಪಕ್ಷ ಹಾಗೂ ಸಂಘಟನೆಗಳ ವಕ್ತಾರರಿಗೆ ಕೌಂಟರ್ ಕೊಡಬಹುದಾಗಿತ್ತು, ಆದರೆ ಹಾಗಾಗಲಿಲ್ಲ.

ನಿನ್ನೆ ಟಿವಿ 5 ನಲ್ಲಿ ನಡೆದ ಚರ್ಚೆಯಲ್ಲಿ ನಾನೂ ಭಾಗವಹಿಸಿದ್ದೆ. ಈ ಸಂಘ ಪರಿವಾರದ ವಿತಂಡವಾದಿಗಳನ್ನು ಬರೀ ಮಾತಲ್ಲಿ ಕಟ್ಟಿ ಹಾಕುವುದು ಅಸಾಧ್ಯ. ಅವರನ್ನು ತಾರ್ಕಿಕ ನೆಲೆಯಲ್ಲೇ ಎದುರಿಸಬೇಕಾಗುತ್ತದೆ. 

ಈ ಟವಿ5 ನ ಚರ್ಚೆಯಲ್ಲಿ ಭಾಗವಹಿಸಿದ್ದ ಸನಾತನ ಹಿಂದೂ ಸಂಘಟನೆಯ
ಮೋಹನ ಗೌಡ ಎನ್ನುವ ಕಟ್ಟರ್ ಹಿಂದುತ್ವವಾದಿ ವಿಕ್ಷಿಪ್ತವಾದ ಸಮರ್ಥನೆ ಕೊಡತೊಡಗಿದ್ದರು. "ಶಂಕರಾಚಾರ್ಯ ಸ್ವಾಮಿಗಳು ಅಪೂರ್ಣ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆಯನ್ನು ವಿರೋಧಿಸಿರಬಹುದು ಆದರೆ ಕಂಚಿ ಸ್ವಾಮಿಗಳೇ ಪ್ರತಿಷ್ಠಾಪನೆಗೆ ಪೌರೋಹಿತ್ಯ ವಹಿಸಿಕೊಂಡಿದ್ದಾರೆ. ಅಲ್ಲಿ ನಡೆಯುತ್ತಿರುವುದು ಪ್ರಾಣ ಪ್ರತಿಷ್ಠಾಪನೆ ಅಲ್ಲಾ, ಶ್ರೀರಾಮನ ಪುನರ್ ಪ್ರಾಣ ಪ್ರತಿಷ್ಠಾಪನೆ. ಈಗಾಗಲೇ ಅಲ್ಲಿ ಚಿಕ್ಕ ರಾಮಮಂದಿರ ಇತ್ತು. ಅಲ್ಲಿದ್ದ ಮೂರ್ತಿಯನ್ನೇ ಮತ್ತೆ ಪ್ರತಿಷ್ಠಾಪನೆ ಮಾಡಲು ಮಂದಿರ ಪೂರ್ಣಗೊಳ್ಳಬೇಕಿಲ್ಲ" ಎಂಬುದು ಈ ಸನಾತನದ ವಕ್ತಾರನ ವಾದ. ಆದರೆ ಯಾವ ಶಾಸ್ತ್ರದಲ್ಲಿ ಹೀಗೆ ಹೇಳಿದೆ, ಈಗ ಪ್ರತಿಷ್ಠಾಪಿಸುತ್ತಿರುವುದು ಹೊಸದಾದ ಮೂರ್ತಿಯಲ್ಲವೇ. ಮಂದಿರ ಪೂರ್ಣವಾಗದೇ ಅವಸರದಲ್ಲಿ ಪ್ರತಿಷ್ಠಾಪನೆ ಹಿಂದೆ ಚುನಾವಣಾ ರಾಜಕೀಯ ಇಲ್ಲವೇ?" ಎಂದು ಪ್ರಶ್ನಿಸಲು ಕಾಂಗ್ರೆಸ್ ವಕ್ತಾರ ಇರಬೇಕಿತ್ತು.  

" ರಾಷ್ಟ್ರದಲ್ಲಿ ಯಾವುದೇ ಪ್ರಮುಖ ಪೂಜೆ ಯಾಗ ಹವನಗಳು ಆದಾಗ ಆ ದೇಶದ ರಾಜನ ಮುಂದಾಳತ್ವದಲ್ಲಿ ಪುರೋಹಿತರು ಯಜ್ಞಯಾಗ ನಡೆಸುತ್ತಾ ಬಂದಿರುವುದು ಸಂಪ್ರದಾಯ. ಅದೇ ರೀತಿ ರಾಜನ ಸ್ಥಾನದಲ್ಲಿ ಈಗ ಈ ದೇಶದ ಪ್ರಧಾನಿಯಾಗಿರುವ ಮೋದಿಯವರ ನೇತೃತ್ವದಲ್ಲಿ, ಕಂಚಿ ಸ್ವಾಮಿಗಳ ಪೌರೋಹಿತ್ಯದಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದೆ. ಇದರಲ್ಲಿ ತಪ್ಪೇನಿದೆ?" ಎಂಬುದು ಹಿಂದುತ್ವವಾದಿ ಮೋಹನ ಗೌಡರ ವಾದವಾಗಿತ್ತು. ಈ ವಿತಂಡ ವಾದಕ್ಕೆ ಉತ್ತರಿಸಲು ಕಾಂಗ್ರೆಸ್ಸಿನ ವಕ್ತಾರರು ಬೇಕಾಗಿತ್ತು. ಆದರೆ ನಾನೇ ಆ ಕೆಲಸ ಮಾಡಬೇಕಾಯ್ತು. 

" ಮೋಹನ ಗೌಡರೇ ಸಂವಿಧಾನಾತ್ಮಕವಾಗಿ ಈಗ ಈ ದೇಶದ ಮುಖ್ಯಸ್ತರು ಮೋದಿಯವರಾ ಅಥವಾ ರಾಷ್ಟ್ರಪತಿಗಳಾ? ಪ್ರಧಾನ ಮಂತ್ರಿ ರಾಜನ ಸ್ಥಾನ ಅಲಂಕರಿಸಲು ಸಾಧ್ಯವಾ? ನೀವು ಪ್ರಾಣ ಪ್ರತಿಷ್ಠಾಪನೆಯಲ್ಲಿ ನಿಮ್ಮ ಸನಾತನ ಸಂಸ್ಕೃತಿ ಮುಂದುವರೆಸಬೇಕೆಂದರೆ ರಾಜನ ಸ್ಥಾನದಲ್ಲಿರುವ ರಾಷ್ಟ್ರಪತಿಗಳ ನೇತೃತ್ವದಲ್ಲಿ ಮುಂದುವರೆಯಬೇಕಲ್ಲವೇ. ಯಾಕೆ ಹಾಗೆ ಮಾಡಲಿಲ್ಲ? " ಎಂದು ಪ್ರಶ್ನಿಸಿದೆ. ಉತ್ತರಿಸಲು ತತ್ತರಿಸಿದ ಈ ಸನಾತನವಾದಿ ತಮ್ಮ ಆನ್ ಲೈನ್ ಸ್ಕೈಪೈ ಕನೆಕ್ಷನ್ ಕಟ್ ಮಾಡಿಕೊಂಡು ಪಲಾಯಣ ಮಾಡಿದರು. 
ಹೊಸ ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿಗಳನ್ನು ಸೌಜನ್ಯಕ್ಕೂ ಆಹ್ವಾನಿಸದ ಈ ಹಿಂದುತ್ವವಾದಿ ಪಕ್ಷವು ಇನ್ನು ರಾಮಮಂದಿರದ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಿಕೊಡಲು ಆಹ್ವಾನಿಸುತ್ತಾರಾ? ಅಬ್ರಾಹ್ಮಣರಾದ ಮೋದಿ ರಾಮಮೂರ್ತಿ ಮುಟ್ಟಿ ಪ್ರತಿಷ್ಠಾಪನೆ ಮಾಡುವುದನ್ನೇ ಶಾಸ್ತ್ರ ನಿಷಿದ್ದ ಎಂದು ಪ್ರತಿಷ್ಠಾಪನೆಗೆ ಹೋಗುವುದನ್ನೇ ಶಂಕರಾಚಾರ್ಯರೆಲ್ಲಾ ಬಹಿಷ್ಕರಿಸಿರುವಾಗ ಇನ್ನು ಆದಿವಾಸಿ ವಿಧವಾ ಮಹಿಳೆಯಾಗಿರುವ ರಾಷ್ಟ್ರಪತಿಗಳು ಇವರ ಪವಿತ್ರ ಮೂರ್ತಿಯನ್ನು ಸ್ಪರ್ಶಿಸಿ ಪೂಜಾ ಕೈಂಕರ್ಯಗಳನ್ನು ಮಾಡಿದ್ದರೆ ಇಡೀ ಸನಾತನವಾದಿ ವೈದಿಕರು ರೌದ್ರ ತಾಂಡವವಾಡುತ್ತಿದ್ದರು. 

ವಿತಂಡವಾದಕ್ಕಿಳಿಯುವ ಈ ಸನಾತನಿ ಸಂತಾನಗಳನ್ನು ಸಮರ್ಥವಾಗಿ ಎದುರಿಸಲು ಹಾಗೂ ಕೂಗಾಡುವ ಮೂಲಕ ಎದುರಾಳಿಗಳನ್ನು  ಮಾತಾಡದಂತೆ ತಡೆಯುವ ಈ ಬಿಜೆಪಿ ವಕ್ತಾರರನ್ನು ನಿಯಂತ್ರಿಸಲು ತಾತ್ವಿಕವಾಗಿ ಹಾಗೂ ತಾರ್ಕಿಕವಾಗಿ ವಾದ ಮಂಡಿಸುವಂತಹ ವಕ್ತಾರರು ಬೇಕಾಗಿದ್ದಾರೆ. ಆ ಕೆಲಸವನ್ನು ಅನಿವಾರ್ಯವಾಗಿ ರಾಜಕೀಯ ವಿಶ್ಲೇಷಕ, ಪ್ರಗತಿಪರ ಚಿಂತಕ ಎಂದು ಮಾಧ್ಯಮಗಳೆ ಕೊಟ್ಟ ಬಿರುದುಗಳನ್ನು ಒಪ್ಪಿ ಚರ್ಚೆಯಲ್ಲಿ ಭಾಗವಹಿಸಿದ ನಾನು ಇಲ್ಲವೇ ನನ್ನಂತವರು ಮಾಡಬೇಕಾಗುತ್ತದೆ. ಬಿಜೆಪಿಯನ್ನು ವಿರೋಧಿಸಿ ಮಾತಾಡಿದರೆ, ಹಿಂದುತ್ವವಾದದ ಅಪಾಯಗಳನ್ನು ವಿಶ್ಲೇಷಿಸಿದರೆ, ಮೋದಿಯವರನ್ನು ಟೀಕಿಸಿದರೆ ನನ್ನ ಮೇಲೆ ಕಾಂಗ್ರೆಸ್ ಎಜೆಂಟ್, ನಗರ ನಕ್ಸಲ್, ಕಮ್ಯೂನಿಷ್ಟ ಎನ್ನುವ ಆರೋಪವನ್ನು ಬಿಜೆಪಿ ಹಾಗೂ ಹಿಂದುತ್ವ ಸಂಘಟನೆಗಳ ವಕ್ತಾರರು ಮಾಡಿದ್ದಿದೆ. ಬಿಜೆಪಿ ಹಾಗೂ ಸಂಘದ ವಿರುದ್ದವಾಗಿ ಪ್ರಶ್ನಿಸುವವರೆಲ್ಲರನ್ನೂ ಕಾಂಗ್ರೆಸ್ ಪಕ್ಷಕ್ಕೆ ಸೇರಿಸುವ ಅತಿರೇಕವನ್ನು ನಾನೂ ಅನುಭವಿಸಿದ್ದೇನೆ. ಮೋದಿ ಪರ ನಿರೂಪಕರು ಇದ್ದರಂತೂ ನನ್ನಂತವನಿಗೆ ಕಾಂಗ್ರೆಸ್ ಪರ ಪ್ರತಿಪಾದಕ ಎನ್ನುವ ಹಣೆಪಟ್ಟಿ ಗ್ಯಾರಂಟಿ. ಆದರೆ ನಾನು ಯಾವತ್ತೂ  ಯಾವುದೇ ಪಕ್ಷದ ಪರವೂ ಅಲ್ಲಾ ವಿರೋಧಿಯೂ ಅಲ್ಲಾ. ಆಳುವ ಪಕ್ಷ ಯಾವುದೇ ಇರಲಿ ಪ್ರಭುತ್ವದ ಜನವಿರೋಧಿತನವನ್ನು ಪ್ರಶ್ನಿಸುವವನು ಎಂದು ಅನೇಕ ಸಲ ಪ್ಯಾನಲ್ ಚರ್ಚೆಯಲ್ಲಿ ಹೇಳಿದರೂ ಅದನ್ನು ಸಂಘ ಪರಿವಾರದ ವಕ್ತಾರರು ನಂಬುವುದಿಲ್ಲ. ನಂಬಲಿ ಬಿಡಲಿ ನನ್ನ ತಾರ್ಕಿಕ ವಾದ ಮಂಡಿಸುವುದನ್ನು ನಾನು ಬಿಡುವುದೂ ಇಲ್ಲ.

ಎಲ್ಲಾ ಪಕ್ಷಗಳ ಎಲ್ಲಾ ವಕ್ತಾರರೂ ಹೀಗೆಯೇ ಅಂತಾ ಹೇಳಲಾಗುವುದಿಲ್ಲ. ಅದರಲ್ಲೇ ಕೆಲವರು ಒಳ್ಳೆಯ ವಾಗ್ಮಿಗಳೂ ಹಾಗೂ ವಿಷಯಗಳ ಆಳ ಅಗಲ ಅರಿತವರೂ ಇದ್ದಾರೆ. ಆದರೆ ಅವರಿಗೆ ಆಯಾ ಪಕ್ಷಗಳು ಸೈದ್ದಾಂತಿಕ ಚೌಕಟ್ಟು ಹಾಗೂ ಹಲವಾರು ಕಟ್ಟು ಪಾಡುಗಳನ್ನು ಹಾಕಿರುತ್ತವೆ. ಕ್ಯಾಮರಾ ಆನ್ ಆದಾಗ ಆ ವಕ್ತಾರರು ಮಾಡಿಕೊಳ್ಳುವ ಸಮರ್ಥನೆಗಳು ಆಪ್ ದಿ ಕ್ಯಾಮರಾ ಆದಾಗ ಬೇರೆಯಾಗಿರುತ್ತವೆ. "ಏನು ಮಾಡೋದು ಸರ್, ಒಂದು ಪಕ್ಷದ ಪರವಾಗಿ ಬಂದಾಗ ಆ ಪಕ್ಷದ ನಿಲುವುಗಳನ್ನು ಸಮರ್ಥಿಸಿಕೊಳ್ಳಲೇ ಬೇಕಾಗುತ್ತದೆ" ಎಂದು ತಮ್ಮ ಅಸಹಾಯಕತೆಯನ್ನೂ ವ್ಯಕ್ತಪಡಿಸಿದ್ದೂ ಇದೆ. ಕೆಲವೊಮ್ಮೆ ಅವರ ವ್ಯಯಕ್ತಿಕ ಅನಿಸಿಕೆಗಳ ವಿರುದ್ದವಾಗಿ ತಾವು ಪ್ರತಿನಿಧಿಸುವ ಪಕ್ಷಗಳ ಪರವಾಗಿ ವಾದಿಸಲೇ ಬೇಕಾದ ಅನಿವಾರ್ಯತೆ ಪಕ್ಷಗಳ ವಕ್ತಾರರದ್ದಾಗಿದೆ. ನಮಗೆ ಯಾವುದೇ ಪಕ್ಷದ ಚೌಕಟ್ಟು ಹಾಗೂ ಕಟ್ಟಳೆಗಳು ಇಲ್ಲದೇ ಇರುವುದರಿಂದ ಮುಕ್ತವಾಗಿ ನನ್ನ ವಾದವನ್ನು ತರ್ಕಬದ್ದವಾಗಿ ಮಂಡಿಸಲು ಪ್ರಯತ್ನಿಸುತ್ತಲೇ ಇರುತ್ತೇನೆ. ಎಲ್ಲಾ ಪಕ್ಷಗಳ ವಕ್ತಾರರ ವಿರೋಧವನ್ನೂ ಎದುರಿಸುತ್ತಲೇ ಇದ್ದೇನೆ.

ಎಷ್ಟೋ ಸಲ ರಂಪಾಟ ಕೂಗಾಟಗಳಿಗೆ ವೇದಿಕೆಯಾಗುವ ಮಾಧ್ಯಮಗಳ ಚರ್ಚೆಗಳಿಗೆ ಹೋಗಲೇಬಾರದೆಂದು ನಿರ್ಧರಿಸಿದ್ದೆ. ಆದರೆ ರಾಜಕೀಯ ಪಕ್ಷಗಳ ನಡುವೆ ಸಾಂಸ್ಕೃತಿಕ ಪ್ರತಿರೋಧ ತೋರಲು, ವೈಚಾರಿಕ ವಾದ ಮಂಡಿಸಲು ಈ ಸುದ್ದಿ ಮಾಧ್ಯಮಗಳ ಚರ್ಚಾ ವೇದಿಕೆ ಸೂಕ್ತವೆಂದುಕೊಂಡು ಮತ್ತೆ ಮತ್ತೆ ಆಹ್ವಾನಿಸಿದ ಸುದ್ದಿ ಮಾಧ್ಯಮಗಳ ಚರ್ಚೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಲೇ ಇರುತ್ತೇನೆ. 

ನನ್ನ ಐದಾರು ವರ್ಷಗಳ ಚರ್ಚಾ  ಅನುಭವದಲ್ಲಿ ಹೇಳಬೇಕೆಂದರೆ ರಾಜಕೀಯ ಪಕ್ಷಗಳ ವಕ್ತಾರರಿಗೆ ಆಯಾ ಪಕ್ಷಗಳು ತರಬೇತಿ ಕಾರ್ಯಾಗಾರಗಳನ್ನು ಕಾಲಕಾಲಕ್ಕೆ ಆಯೋಜಿಸಬೇಕಿದೆ. ಕೂಗಾಟ ಹಾರಾಟಗಳನ್ನು ಬಿಟ್ಟು ತಮ್ಮ ಪಕ್ಷದ ನಿಲುವಿನ ಪ್ರಕಾರವೇ ವಿಷಯವನ್ನು ಹೇಗೆ ಮಂಡಿಸಬೇಕು ಎನ್ನುವುದನ್ನು ಹೇಳಿಕೊಡಬೇಕಿದೆ. ಒಬ್ಬರು ಅವರಿಗೆ ಕೊಟ್ಟ ಸಮಯದಲ್ಲಿ ಮಾತಾಡುವಾಗ ಮಧ್ಯದಲ್ಲಿ ಬಾಯಿಹಾಕಿ ವಿಷಯಾಂತರ ಮಾಡಬಾರದು ಎಂದು ಕಲಿಸಿಕೊಡಬೇಕಿದೆ. ಮತ್ತೊಬ್ಬರ ಅನಿಸಿಕೆಗಳು ಅದೆಷ್ಟೇ ಅಸಹನೀಯವಾಗಿದ್ದರೂ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರಿವಿಸುತ್ತಲೇ ತಮಗೆ ಕೊಟ್ಟ ಸಮಯದಲ್ಲಿ ತಮ್ಮ ಅಭಿಪ್ರಾಯಬೇಧಗಳನ್ನು ವ್ಯಕ್ತಪಡಿಸುವ ರೀತಿಯನ್ನು ತಿಳಿಸಿಕೊಡಬೇಕಿದೆ. ಹಾಗಾದಾಗ ಯಾವುದೇ ಪ್ಯಾನಲ್ ಚರ್ಚೆ ಬರೀ ವಾದ ವಿತಂಡವಾದವಾಗದೇ ಸಂವಾದವಾಗಲು ಸಾಧ್ಯವಿದೆ. ವೀಕ್ಷಕರನ್ನು ಆಲೋಚನೆಗೆ ಹಚ್ಚಲು ಸಂವಾದದ ಅಗತ್ಯವಿದೆ. ಮಾಧ್ಯಮಗಳ ನಿರೂಪಕರೂ ಈ ನಿಟ್ಟಿನಲ್ಲಿ ಸಂವಾದದ ಮಾರ್ಗಸೂಚಿಯನ್ನು ಪ್ರತಿಯೊಬ್ಬ ಪ್ಯಾನಲಿಸ್ಟ್ ಗಳಿಗೆ ಮುಂಚಿತವಾಗಿ ತಿಳಿಸಿದರೆ ಇನ್ನಷ್ಟು ಸಮರ್ಥವಾಗಿ ಚರ್ಚೆಯನ್ನು ನಿಭಾಯಿಸಬಹುದಾಗಿದೆ. ಸೈದ್ದಾಂತಿಕವಾಗಿ ತರಬೇತಾದ ವಕ್ತಾರರು ಇದ್ದಿದ್ದೆ ಆದರೆ ಹೀಗೆ ಪ್ಯಾನಲ್ ಚರ್ಚೆಗಳಿಂದ ಯಾವುದೇ ಪಕ್ಷದವರು ಚರ್ಚೆಯ ಹೊಣೆಗಾರಿಕೆಯಿಂದ ಹಿಂದೆ ಸರಿಯುವ ಅಗತ್ಯವೇ ಬರುವುದಿಲ್ಲ. ವೀಕ್ಷಿಸುವ ಜನರೂ ಚಾನೆಲ್ ಬದಲಿಸುವ ಸಾಧ್ಯತೆಯೂ ಇಲ್ಲ.

- ಶಶಿಕಾಂತ ಯಡಹಳ್ಳಿ

    13-01-2024

ಶೃದ್ದಾ ಭಕ್ತಿಯ ಕ್ಷೇತ್ರಗಳೋ ಇಲ್ಲಾ ಪ್ರವಾಸೋದ್ಯಮ ಕೇಂದ್ರಗಳೋ

ತಹ ತಹ - 489

ಶೃದ್ದಾ ಭಕ್ತಿಯ ಕ್ಷೇತ್ರಗಳೋ ಇಲ್ಲಾ ಪ್ರವಾಸೋದ್ಯಮ ಕೇಂದ್ರಗಳೋ

"ತೀರ್ಥಕ್ಷೇತ್ರಗಳನ್ನು ಈಗ ಅಭಿವೃದ್ದಿಯ ಹೆಸರಿನಲ್ಲಿ ಪ್ರವಾಸೋದ್ಯಮ ಕೇಂದ್ರವನ್ನಾಗಿ ಪರಿವರ್ತಿಸಲಾಗುತ್ತಿದೆ. ಅಂದರೆ ತೀರ್ಥಕ್ಷೇತ್ರಗಳು ಭೋಗದ ಸ್ಥಳವಾಗುತ್ತಿವೆ. ಬಹಳ ಜನರೂ ಅಭಿವೃದ್ದಿಯ ಹೆಸರಲ್ಲಿ ಇದನ್ನೇ ಒಪ್ಪಿಕೊಳ್ಳುತ್ತಿದ್ದಾರೆ" ಎಂದು ಬೇರೆ ಯಾವ ವ್ಯಕ್ತಿಯೋ ಇಲ್ಲಾ ಪಕ್ಷವೋ ಹೇಳಿದ್ದರೆ ಸಂಘ ಪರಿವಾರದ ನಾಯಕರು ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿದ್ದರು. ಧರ್ಮದ್ರೋಹಿಗಳು ಮಾತ್ರ ಹೀಗೆ ಹೇಳಲು ಸಾಧ್ಯ ಎಂದು ಅವಲತ್ತುಕೊಳ್ಳುತ್ತಿದ್ದರು. ಆದರೆ ಈ ಮಾತುಗಳನ್ನು ಕೇಳಿಯೂ ಈಗ ಸರ್ವಾಂಗಗಳನ್ನೂ ಮುಚ್ಚಿಕೊಂಡು ಕೂತಿದ್ದಾರೆ. ಯಾಕೆಂದರೆ ಮೇಲಿನ ಹೇಳಿಕೆಯನ್ನು ಸುದ್ದಿಮಾಧ್ಯಮಗಳ ಮುಂದೆ ಹೇಳಿದ್ದು ಪುರಿ ಶಂಕರಾಚಾರ್ಯ ಮಠದ ನಿಶ್ವಲಾನಂದ ಸರಸ್ವತಿ ಸ್ವಾಮಿಗಳು. 

ವೈದಿಕ ಮಠದ ಸ್ವಾಮಿಗಳು ಹೇಳಿದ್ದರಲ್ಲಿ ಅತಿಶಯವೇನೂ ಇಲ್ಲ. ಇರುವುದನ್ನೇ ಹೇಳಿದ್ದಾರೆ. ಹಿಂದುತ್ವ ಧರ್ಮ ರಕ್ಷಣೆಗಾಗಿಯೇ ಇರುವ ಸ್ವಾಮಿಗಳನ್ನು ಧರ್ಮದ್ರೋಹಿ ಎಂದು ಕರೆದು ಜೀರ್ಣಿಸಿಕೊಳ್ಳಲು ಬಿಜೆಪಿಗರಿಗೆ ಸಾಧ್ಯವಿದೆಯೇ. ಅದಕ್ಕೆ ಜಾಣ ಮೌನಕ್ಕೆ ಜಾರಿದ್ದಾರೆ.

ಈಗಾಗಲೇ ಅನೇಕ ಪ್ರಮುಖ ಹಿಂದೂ ಧಾರ್ಮಿಕ ಕ್ಷೇತ್ರಗಳು ವ್ಯಾಪಾರಿ ಕೇಂದ್ರಗಳಾಗಿದ್ದನ್ನು ಯಾರೂ ಅಲ್ಲಗಳೆಯಲಾಗದು. ಆದರೆ.. ಈಗ ಸ್ವಾಮಿಗಳು ಹೇಳಿದಂತೆ ತೀರ್ಥಕ್ಷೇತ್ರಗಳು ಪ್ರವಾಸೋದ್ಯಮ ಕೇಂದ್ರಗಳಾಗಿ ಬದಲಾಗುತ್ತಿರುವುದರಲ್ಲೂ ಸುಳ್ಳಿಲ್ಲ.  ರಾಮಮಂದಿರ ನಿರ್ಮಾಣವು ಶ್ರದ್ಧಾ ಭಕ್ತಿಯ ಕ್ಷೇತ್ರವಾಗುವ ಬದಲು ದೇವರ ಹೆಸರಲ್ಲಿ ಆದಾಯ ಸಂಗ್ರಹಿಸುವ ಕೇಂದ್ರವಾಗುವುದರಲ್ಲಿ ಸಂದೇಹವೇ ಇಲ್ಲ. ದೇಶದ ಜನರಿಂದ, ಪಕ್ಷಗಳಿಂದ, ಉದ್ಯಮಿಗಳಿಂದ  ದೇಣಿಗೆ ಸಂಗ್ರಹಿಸಿ ಅಯೋಧ್ಯೆಯಲ್ಲಿ ಕಟ್ಟಲಾಗುತ್ತಿರುವ ಮಂದಿರವೂ ಸಹ ಭಕ್ತಾದಿಗಳಿಗೆ ಉಚಿತ ಸೇವೆಗೆ ಅವಕಾಶ ವದಗಿಸಿಕೊಡಲೂ ಸಾಧ್ಯವಿಲ್ಲ. ಅಯೋಧ್ಯೆಯು ತಿರುಪತಿಯನ್ನೂ ಮೀರಿಸುವ ವ್ಯಾಪಾರಿ ಕೇಂದ್ರವಾಗುವುದರಲ್ಲಿ ಸಂಶಯವಿಲ್ಲ. ಭಕ್ತಾದಿಗಳಿಂದ ಹರಿದು ಬರುವ ಆದಾಯಕ್ಕಂತೂ ತೆರಿಗೆ ಅನ್ನುವುದೇ ಇಲ್ಲಾ. ಎಲ್ಲಾ ರಾಮಜನ್ಮಭೂಮಿ ಟ್ರಸ್ಟ್ ಸ್ವಾಹಾ ಅಷ್ಟೇ.  ಬರೀ ಮಂದಿರವೊಂದೇ ಆದರೆ ಹೇಗೆ. ಅದರ ಆಜು ಬಾಜು ಪ್ರೇಕ್ಷಣೀಯ ಸ್ಥಳಗಳನ್ನು ನಿರ್ಮಿಸಿದರೆ ಈ ಧಾರ್ಮಿಕ ಕ್ಷೇತ್ರವನ್ನು ಪ್ರವಾಸೋಧ್ಯಮ ಕೇಂದ್ರವಾಗಿ ಬದಲಾಯಿಸಬಹುದು ಎಂಬುದೇ ಮಾಸ್ಟರ್ ಪ್ಲಾನ್.

ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣದ ರಸ್ತೆಯಲ್ಲಿ ಕಿಡ್ಸ್ ಕೆಂಪ್ ಎನ್ನುವ ಬಹು ದೊಡ್ಡ ಮಾಲ್ ಒಂದು ಆರಂಭವಾಗಬೇಕಿತ್ತು.  ಗ್ರಾಹಕರನ್ನು ಆಕರ್ಷಿಸಲು ಅದರ ಮಾರವಾಡಿ ಮಾಲೀಕ ಮೊದಲು ಮಾಡಿದ್ದೇನೆಂದರೆ ಮಾಲ್ ಹಿಂದೆ ದೊಡ್ಡದಾದ ಶಿವನ ಮೂರ್ತಿ ಕಟ್ಟಿಸಿದ್ದು. ಆ ಶಿವನ ದರ್ಶನಕ್ಕೆ ಹೋದವರು ಹೊರಗೆ ಬರಬೇಕೆಂದರೆ ಮಾಲ್ ಒಳಗಿನಿಂದಲೇ ಬರಬೇಕಿತ್ತು. ದೇವರಿಗಾಗಿ ಬಂದ ಭಕ್ತರು ಮಾಲ್ ಒಳಗೆ ಕಾಲಿಡುತ್ತಲೇ ಗ್ರಾಹಕರಾಗುತ್ತಿದ್ದರು. ಸರಕುಗಳು ಬಿಕರಿಯಾಗುತ್ತಿದ್ದವು. ವ್ಯಾಪಾರ ಹೆಚ್ಚಾಗತೊಡಗಿತು. ದೇವರ ನೆಪದಲ್ಲಿ ವ್ಯಾಪಾರಿಕರಣ ಮಾಡುವುದು ಅಂದರೆ ಇದು. ಬಂದವರಿಗೆ ಸ್ವಾಮಿಕಾರ್ಯ ಒದಗಿಸುವುದರ ಜೊತೆಗೆ ಸ್ವಕಾರ್ಯವನ್ನೂ ಸಾಧಿಸುವ ಬಂಡವಾಳಶಾಹಿಗಳ ತಂತ್ರಗಾರಿಕೆ ತುಂಬಾ ಹಳೆಯದು.

ಈಗ ಅಯೋಧ್ಯೆಯ ಅಭಿವೃದ್ದಿ ಪ್ರಾಜೆಕ್ಟ್ ಅಂತಾ ಮಾಡಲಾಗಿದೆ. ಅಯೋಧ್ಯೆಯತ್ತ  ಜನರನ್ನು  ಆಕರ್ಷಿಸುವಂತೆ ಅಭಿವೃದ್ದಿ ಮಾಡುವುದೇ ಈ ಪ್ರಾಜೆಕ್ಟಿನ ಕೆಲಸ. ಅದರ ಭಾಗವಾಗಿಯೇ ಸಿದ್ದಗೊಳ್ಳುತ್ತಿದೆ 'ರಾಮಾಯಣ ಆಧ್ಯಾತ್ಮಿಕ ವನ'.

ರಾಮಮಂದಿರಕ್ಕೆ ಹತ್ತಿರವಿರುವ ಸರಿಯೂ ನದಿ ದಂಡೆಯಲ್ಲಿ ರಾಮನ ವನವಾಸದ ಜೀವನದ ದರ್ಶನ ಮಾಡಿಸುವಂತಹ ಉದ್ಯಾನವನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಅಲ್ಲಿ ರಾಮನ ವ್ಯಕ್ತಿತ್ವ ಸಾರುವ ತೆರೆದ ವಸ್ತುಸಂಗ್ರಹಾಲಯವೂ ಇರುತ್ತದಂತೆ. ರಾಮಮಂದಿರಕ್ಕೆ ಬೇಟಿ ನೀಡುವ ಭಕ್ತಾದಿಗಳು ಈ ಆಧ್ಯಾತ್ಮ ವನವನ್ನೂ ಕಣ್ತುಂಬಿಕೊಳ್ಳಬಹುದಂತೆ. ಇದಕ್ಕೆಲ್ಲಾ ಪ್ರವೇಶವಂತೂ ಉಚಿತವಲ್ಲ. ಜೇಬಿಗೆ ಭಾರವೆನಿಸುವ ಎಂಟ್ರನ್ಸ್ ಫೀ ಪಡೆದಾಗಲೇ ಶ್ರೀರಾಮ ವನವಾಸ ದರ್ಶನ ಭಾಗ್ಯ ದೊರೆಯುವುದು. ಅಂದರೆ ಆದಾಯದ ಮೂಲಗಳನ್ನು ವಿಸ್ತರಿಸುವ ವ್ಯಾಪಾರಿ ವಿನ್ಯಾಸವಿದು. ಇಂತಹ ಹಲವಾರು ರಾಮನ ಹೆಸರಿನ ಪ್ರೇಕ್ಷಣೀಯ ಸ್ಥಳಗಳನ್ನು ಅಯೋಧ್ಯೆಯಲ್ಲಿ ಅಭಿವೃದ್ದಿಗೊಳಿಸಲಾಗುತ್ತಿದೆ. 

ಭಕ್ರಾದಿಗಳನ್ನು ರಾಮ ದರ್ಶನಕ್ಕೆ, ಅಯೋಧ್ಯೆ ವೀಕ್ಷಣೆಗೆ ಕರೆತರಲು ಉಚಿತ ರೈಲು ಯಾತ್ರೆ ಯೋಜನೆಯನ್ನೂ ಕೇಂದ್ರ ಸರಕಾರ ಹಮ್ಮಿಕೊಳ್ಳುತ್ತದೆ. ಈಗಾಗಲೇ ಬಿಜೆಪಿ ನೇತೃತ್ವದ ಛತ್ತೀಸಗಡ ರಾಜ್ಯವು ರಾಮಭಕ್ತರಿಗಾಗಿ ಉಚಿತ ರೈಲು ಯಾತ್ರೆ ಯೋಜನೆಗೆ ಅಧೀಕೃತವಾಗಿ ಅನುಮೋದನೆ ನೀಡಿದೆ. ಬಿಜೆಪಿ ಅಧಿಕಾರದಲ್ಲಿರುವ ಎಲ್ಲಾ ರಾಜ್ಯಗಳೂ ಈ ಯೋಜನೆಯನ್ನು ಜಾರಿ ಮಾಡುತ್ತವೆ. ಆಗ ದೇಶದ ಮೂಲೆ ಮೂಲೆಗಳಿಂದ ಅಯೋಧ್ಯೆಗೆ ಉಚಿತವಾಗಿ ಬರುವ ಪ್ರವಾಸಿಗರು ರಾಮಮಂದಿರದ ಆದಾಯವನ್ನು ಹೆಚ್ಚಿಸುತ್ತಾರೆ. ಉಚಿತ ಯಾತ್ರೆಗೆ ಸರಕಾರ ರೈಲು ಇಲಾಖೆಗೆ ಜನರ ತೆರಿಗೆ ಹಣವನ್ನು ಪಾವತಿಸುತ್ತದೆ. ಆದರೆ ಅಯೋಧ್ಯೆಗೆ ಬರುವ ಪ್ರವಾಸಿಗರು ಮಾಡುವ ಖರ್ಚು ಕೊಡುವ ದೇಣಿಗೆ ಸೇವಾದರಗಳೆಲ್ಲಾ ರಾಮಮಂದಿರ ಟ್ರಸ್ಟ್ ಪಾಲಾಗುತ್ತದೆ. ಅಯೋಧ್ಯೆಯಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ನಿರ್ಮಿಸುವುದು, ವಸತಿ ನಿಲಯಗಳನ್ನು ಕಟ್ಟುವುದು, ವ್ಯಾಪಾರಿ ಕೇಂದ್ರಗಳನ್ನು ಸ್ಥಾಪಿಸುವುದು ಸರಕಾರದ ಹಣದಲ್ಲಿ. ಆದರೆ ಅದರಿಂದ ಬರುವ ಸಂಪನ್ಮೂಲಗಳೆಲ್ಲಾ ಟ್ರಸ್ಟಿಗೆ. ರಾಮಮಂದಿರದ ಪ್ರಭಾವದಿಂದ ಬರುವ ಮತಗಳೆಲ್ಲಾ ಬಿಜೆಪಿಗೆ. ಇದು ರಾಮನನ್ನು ಗುತ್ತಿಗೆ ಪಡೆದ ಬಿಜೆಪಿಯ ಲೆಕ್ಕಾಚಾರ. ತಿರುಪತಿಯನ್ನೂ ಮೀರಿಸುವ ಆದಾಯ ಸಂಗ್ರಹ ಕೇಂದ್ರವನ್ನಾಗಿ, ಶಬರಿಮಲೆಯನ್ನೂ ಮೀರಿಸುವ ಭಕ್ತ ಸಮೂಹದ ಕ್ಷೇತ್ರವನ್ನಾಗಿ ಮಾಡುವುದೇ ರಾಮಮಂದಿರ ಸ್ಥಾಪನೆಯ ಹಿಂದಿರುವ ಹಿಂದುತ್ವವಾದಿಗಳ ಉದ್ದೇಶ. ದೇಶದ ಜನರ ತಲೆಯಲ್ಲಿ ರಾಮಭಕ್ತಿಯನ್ನು ತುಂಬಿ ಅದರ ಮೂಲಕ ಜನರಿಂದಲೇ ಓಟು ನೋಟುಗಳನ್ನು ನಿರಂತರವಾಗಿ ಪಡೆಯುವ ಅತೀ ದೊಡ್ಡ ಪ್ಲಾನ್ ಭಾಗವೇ ಈ ರಾಮಮಂದಿರ ನಿರ್ಮಾಣ. ಅಯೋಧ್ಯೆಯನ್ನು ದೇಶದ ಅತೀ ದೊಡ್ಡ ಧಾರ್ಮಿಕ ಪ್ರವಾಸಿ ಕ್ಷೇತ್ರವನ್ನಾಗಿ ಅಭಿವೃದ್ದಿ ಪಡಿಸುವುದೇ ಪುರೋಹಿತಶಾಹಿಗಳ ಗುರಿ. 

ಏನೇ ಹೇಳಿ ಈ ಗುಜರಾತಿಗಳ ವ್ಯಾಪಾರಿ ಕಲೆಯನ್ನು ಮೆಚ್ಚಲೇ ಬೇಕು. ಗುಜರಾತಿ ಮೋದಿ ಹಾಗೂ ಅವರ ವ್ಯಾಪಾರಿ ಬಳಗ ದೇವರನ್ನೂ ಆದಾಯದ ಮೂಲವಾಗಿ ಮಾಡಿಕೊಳ್ಳುತ್ತಿರುವ ಸರಕು ಸಂಸ್ಕೃತಿಯನ್ನು ಶ್ಲಾಘಿಸಲೇಬೇಕು. ದೇವರ ಹೆಸರಲ್ಲಿ ಹೇಗೆ ಭಕ್ತರನ್ನು ಗ್ರಾಹಕರಾಗಿಸಬೇಕು ಎನ್ನುವ ಕಲೆಯೂ ಅವರಿಗೆ ಸಿದ್ದಿಸಿದೆ. ಜನರಲ್ಲಿರುವ ಧಾರ್ಮಿಕ ಭಾವನೆಗಳೂ ಸಹ ವ್ಯಾಪಾರೋಧ್ಯಮದ ಸರಕಾಗಿರುವುದು ಬಂಡವಾಳವಾದದ ಯಶಸ್ಸಾಗಿದೆ. ಮೋದಿಯುಗದಲ್ಲಿ ಈಗ ಈ ಧರ್ಮೋದ್ಯಮ ಎನ್ನುವುದು ಕಾರ್ಪೋರೇಟಿಕರಣವಾಗುತ್ತಿದೆ. ಮಂದಿರದ ನೆಪದಲ್ಲಿ ಪ್ರವಾಸೋಧ್ಯಮ ತಲೆ ಎತ್ತುತ್ತಿದೆ. 

ಅದಕ್ಕಾಗಿಯೇ 'ತೀರ್ಥಕ್ಷೇತ್ರಗಳು ಪ್ರವಾಸೋಧ್ಯಮವಾಗುತ್ತಿವೆ' ಎಂದು ಪುರಿ ಶಂಕರಾಚಾರ್ಯರು ತಕರಾರು ಎತ್ತಿರುವುದು. ಇದೆಲ್ಲಾ ಗೊತ್ತಿದ್ದೂ ಬಹುತೇಕ ಧಾರ್ಮಿಕ ಕೇಂದ್ರದ ಸ್ವಾಮಿಗಳು ಸಂತರು ಸನ್ಯಾಸಿಗಳು ಮಠಾಧಿಪತಿಗಳು ಪೀಠಾಧ್ಯಕ್ಷರುಗಳು ಮೌನವಾಗಿದ್ದಾರೆ. ಈ ಧಾರ್ಮಿಕ ವ್ಯಾಪಾರೀಕರಣಕ್ಕೆ ಮೌನ ಸಮ್ಮತಿಯನ್ನು ಕೊಟ್ಟಿದ್ದಾರೆ. ಸಂಘದ ಸರಸಂಘಿಗಳೂ ಇದಕ್ಕೆ ಪ್ರೋತ್ಸಾಹ ಕೊಡುತ್ತಿದ್ದಾರೆ.

ಯಾಕೆಂದರೆ ಈ ಎಲ್ಲಾ ಹಿಂದುತ್ವವಾದಿಗಳ ಏಕೈಕ ಅಜೆಂಡಾ ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕು. ಈಗಿರುವ ಸಂವಿಧಾನವನ್ನು ಬದಲಿಸಿ ಮನುಸ್ಮೃತಿ ಆಧಾರಿತ ಚಾತುರ್ವರ್ಣ ವ್ಯವಸ್ಥೆಯನ್ನು ಮರಳಿ ಸ್ಥಾಪಿಸಬೇಕು ಎನ್ನುವುದು. ಅದಕ್ಕಾಗಿ ಒಂದು ದೇಶ, ಒಂದು ಧರ್ಮ, ಒಂದು ದೇವರು, ಒಂದು ಸಂಸ್ಕೃತಿ ಜಾರಿಯಾಗಬೇಕು ಎನ್ನುವುದು ಸಂಘದ ಗುರಿ. ಆದರೆ ಸರ್ವ ಧರ್ಮದ ಶಾಂತಿಯ ತೋಟದಲ್ಲಿ ಇದು ಸಾಧ್ಯವಿಲ್ಲ. ಅದಕ್ಕಾಗಿಯೇ ಶ್ರೀರಾಮನನ್ನು ಹಿಂದೂಗಳೆಲ್ಲರ ಮನದಲ್ಲಿ ಆಳವಾಗಿ ಬಿತ್ತುವ ಕೆಲಸವನ್ನು ರಾಮಮಂದಿರದ ಮೂಲಕ ಮಾಡಲಾಗುತ್ತಿದೆ. ದೇಶದ ಮೂಲೆ ಮೂಲೆಗಳಿಂದ ಭಕ್ತ ಸಮೂಹವನ್ನು ಅಯೋಧ್ಯೆಯತ್ತ ಆಕರ್ಷಿಸುವ ಯೋಜನೆ ಇದಾಗಿದೆ. ಒಮ್ಮೆ ರಾಮನನ್ನು ಎಲ್ಲರ ಚಿತ್ತ ಬಿತ್ತಿಯಲ್ಲಿ ಒತ್ತಿದರೆ ಸಾಕು ಬಾಕಿ ದೇವರುಗಳ ಪ್ರಭಾವ ಕಡಿಮೆಯಾಗುತ್ತದೆ.

ಬಂದುತ್ವದ ವಿರುದ್ದ ಹಿಂದುತ್ವವನ್ನು ಜಾರಿಗೆ ತರುವ ಗುರಿ ಹೊಂದಿರುವ ಸಂಘಿ ಪಕ್ಷಕ್ಕೆ ದಕ್ಷಿಣ ಭಾರತವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದೇ ಸವಾಲಾಗಿದೆ. ಆರ್ಯರ ದೇವರಾದ ರಾಮನನ್ನು ದ್ರಾವಿಡ ಜನಾಂಗದವರ ಮನಸ್ಸಿನಲ್ಲಿ ಬಿತ್ತುವ ಮೂಲಕ ಹಿಡಿತಕ್ಕೆ ತೆಗೆದುಕೊಂಡು ತಮ್ಮ ಹಿಂದೂರಾಷ್ಟ್ರ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಕಾರ್ಯತಂತ್ರದ ಬಹುದೊಡ್ಡ ಭಾಗವೇ ಅಯೋಧ್ಯೆಯ ರಾಮಮಂದಿರ. ಯಾರೋ ಒಬ್ಬಿಬ್ಬರು ಪೀಠಾದ್ಯಕ್ಷರು ವಿರೋಧಿಸಿದರೆಂದು ಧರ್ಮೋದ್ಯಮವನ್ನು ಬಿಜೆಪಿ ಕೈಬಿಡುವುದಿಲ್ಲ. ದೇಶದ ಶೃದ್ದಾಕ್ಷೇತ್ರಗಳೆಲ್ಲವನ್ನೂ ಅಂತರ್ರಾಷ್ಟ್ರೀಯ ಮಟ್ಟದ ಪ್ರವಾಸೋಧ್ಯಮ ಕೇಂದ್ರಗಳಾಗಿ ಅಭಿವೃದ್ಧಿ ಪಡಿಸುವುದರಲ್ಲೂ ಸಂದೇಹವಿಲ್ಲ. 

- ಶಶಿಕಾಂತ ಯಡಹಳ್ಳಿ
12-01-2024