ಗುರುವಾರ, ಆಗಸ್ಟ್ 18, 2016

ಮೂರನೆಯ ಅಂಗವದು ವಿಕಲಾಂಗ :




ಸ್ವರಾಜ್ಯವನ್ನು ಸುರಾಜ್ಯವಾಗಿ ಪರಿವರ್ತಿಸುವ ಬಹುದೊಡ್ಡ ಹೊಣೆಗಾರಿಕೆ ದೇಶದ 125 ಕೋಟಿ ಜನರ ಮೇಲಿದೆ. ಸಂಸತ್ತಿನಿಂದ ಪಂಚಾಯಿತಿಯವರೆಗೆ, ಗ್ರಾಮ ಪ್ರಧಾನನಿಂದ ಪ್ರಧಾನ ಮಂತ್ರಿಯವರೆಗೆ ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ಆಗ ಮಾತ್ರ ಸುರಾಜ್ಯದ ಕನಸು ನಿಜವಾಗಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ದಿನ ಕೆಂಪುಕೋಟೆಯ ಮೇಲೆ ನಿಂತು ಭಾಷಣ ಮಾಡಿದರು. ಹೀಗೆ ಹೇಳುವುದಕ್ಕೂ ಹಾಗೂ ಆಚರಣೆಯಲ್ಲಿ ತರುವುದಕ್ಕೂ ತುಂಬಾನೇ ವ್ಯತ್ಯಾಸವಿದೆ. ಸ್ವರಾಜ್ಯವನ್ನು ಸುರಾಜ್ಯವನ್ನಾಗಿ ಮಾಡಲು ಮೂರು ಸಾಂವಿಧಾನಕ ಅಂಗಗಳ ನಿಷ್ಟೆ ಬದ್ದತೆ ಹಾಗೂ ಕಾರ್ಯತತ್ಪರತೆ ಅಗತ್ಯವಾಗುತ್ತದೆ.

ಈಗಾಗಲೇ ಶಾಸಕಾಂಗದ ಮೇಲೆ ಬಹುತೇಕವಾಗಿ ಜನಸಾಮಾನ್ಯರಲ್ಲಿ ನಂಬಿಕೆಯೆ ಹೊರಟು ಹೋಗಿದೆ. ಬ್ರಿಟೀಷರಿಂದ ಅಧಿಕಾರ ಹಸ್ತಾಂತರವಾಗಿ ಏಳು ದಶಕಗಳು ಕಳೆದರೂ ಭಾರತವಾಸಿಗಳ ಬವಣೆಗಳಿಗೆ ಕೊನೆಯಿಲ್ಲ. ಬಡತನ, ಅಸಮಾನತೆ, ಜಾತೀಯತೆಗಳು ತೊಲಗಿಲ್ಲ. ಕಾರ್ಪೋರೇಟ್ ಕಂಪನಿಗಳ ನಿರಂತರ ಲೂಟಿಯಂತೂ ತಪ್ಪಿಲ್ಲ. ಆಳುವ ವರ್ಗಗಳ ಸ್ವಾರ್ಥ, ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತಗಳಿಗಂತೂ ಮಿತಿಯೇ ಇಲ್ಲ. ಸಂವಿಧಾನದ ಇನ್ನೊಂದು ಅಂಗವಾದ ಕಾರ್ಯಾಂಗವಂತೂ ಅಮೂಲಾಗ್ರವಾಗಿ ಕರಪ್ಟ್ ಆಗಿ ಹೋಗಿದೆ. ಲಂಚದ ಹಣವೆಂಬುದು ಈ ಅಂಗದ ರಕ್ತನಾಳಗಳಲ್ಲಿ ಹರಿದಾಡುತ್ತಿದೆ. ಕಾಸುಕೊಟ್ಟರೆ ಕೆಲಸ ಇಲ್ಲದಿದ್ದರೆ ಬರೀ ಎಳೆತ ಎನ್ನುವಂತಾಗಿದೆ. ಕಾರ್ಯಾಂಗದ ಕರಪ್ಶನ್ನಿಗೆ ಶಾಸಕಾಂಗದ ಕೊಡುಗೆಯೂ ಅಪಾರವಾಗಿದೆ. ಪಕ್ಷಗಳ ಚುನಾವಣೆಯಿಂದ ಹಿಡಿದು ಪ್ರಜಾಪ್ರತಿನಿಧಿಗಳ ಖಾಸಗಿ ನಿಧಿಗೆ ಹಣ ಹರಿದು ಬರುವುದು ಕಾರ್ಯಾಂಗದ ಕೆಲಸಗಳ ಪರ್ಸಂಟೇಜ್‌ಗಳ ಮೂಲಕವೇ ಎನ್ನುವುದು ಬಹಿರಂಗ ಸತ್ಯ. ಸರಕಾರಗಳ ಯಾವುದೇ ಮಹತ್ವಾಂಕಾಂಕ್ಷೀ ಯೋಜನೆಗಳಲ್ಲಿ ಆರಂಭದಿಂದ ಅಂತ್ಯದವರೆಗೂ ಸಕ್ರೀಯವಾಗಿರೋದು ಈ ಪರ್ಸೆಂಟೇಜ್ ಎನ್ನುವ ಅನಧೀಕೃತ ತಂತ್ರಗಾರಿಕೆ. ಸಾರ್ವಜನಿಕ ಹಣವನ್ನು ಲೀಗಲ್ ಆಗಿ ಯೋಜನೆಗಳಿಗೆ ಕೊಟ್ಟು ಇಲ್ಲಿಗಲ್ಲಾಗಿ ಮತ್ತೆ ತೆಗೆದುಕೊಳ್ಳುವ ಗುಪ್ತ ಕಾರ್ಯಸೂಚಿಯು ಶಾಸಕಾಂಗ ಹಾಗೂ ಕಾರ್ಯಾಂಗಗಳ ಕೊಡುಕೊಳ್ಳುವಿಕೆಯ ಭಾಗವೇ ಆಗಿದೆ. ಎಲ್ಲೋ ಬೆರಳೆಣಿಕೆಯಷ್ಟು ಪ್ರಾಮಾಣಿಕರು ಇರಬಹುದಾದರೂ ಅವರನ್ನು ಹೇಗಾದರೂ ಕರಪ್ಟ್ ಮಾಡುವ ಇಲ್ಲವೇ ಮೂಲೆಗುಂಪು ಮಾಡುವ ಕೆಲಸವನ್ನು ಈ ಎರಡೂ ಅಂಗಗಳು ಶೃದ್ದೆಯಿಂದ ಮಾಡುತ್ತಾ ಬಂದಿವೆ.


ಇನ್ನು ಉಳಿದಿರೋದು ಮೂರನೇ ಅಂಗ ನ್ಯಾಯಾಂಗ. ಈ ದೇಶದ ಬಹುಜನರು ಈ ನ್ಯಾಯಾಂಗ ವ್ಯವಸ್ಥೆಯ ಮೇಲೆ ಇನ್ನೂ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ನ್ಯಾಯ ಅದೆಷ್ಟೇ ವಿಳಂಬವಾದರೂ ಸತ್ಯಕ್ಕೆ ನ್ಯಾಯ ಸಿಗುತ್ತದೆ ಎಂದು ನಂಬಿದ್ದಾರೆ. ನ್ಯಾಯಾಂಗದಲ್ಲೂ ಭ್ರಷ್ಟತೆ ಲಂಚಕೋರತನ ಸ್ವಜನಪಕ್ಷಪಾತಗಳಿವೆಯಾದರೂ ಅವುಗಳು ಕಡಿಮೆ ಇವೆ ಎಂಬುದು ಜನರ ಭಾವನೆ. ಜೊತೆಗೆ ಕೆಲವೊಮ್ಮೆ ಆಳುವ ದಿಗ್ಗಜರ ಹಿತಾಸಕ್ತಿಯ ವಿರುದ್ದವೇ ನ್ಯಾಯನಿರ್ಣಯವಾದಾಗಲೆಲ್ಲಾ ಜನರ ನಂಬಿಕೆ ನವೀಕರಿಸಲ್ಪಡುತ್ತದೆ. ಕರ್ನಾಟಕ ಲೋಕಾಯುಕ್ತವು ಸಂತೋಷ ಹೆಗಡೆಯವರ ನೇತೃತ್ವದಲ್ಲಿ ಸಶಕ್ತವಾಗಿ  ಕೆಲಸ ಮಾಡುತ್ತ ಭ್ರಷ್ಟರಿಗೆ ಸಿಂಹಸ್ವಪ್ನವಾದಾಗ ಜನತೆ ಲೋಕಾಯುಕ್ತದ ಮೇಲೆ ವಿಶ್ವಾಸವಿಡತೊಡಗಿದರು. ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಲಾಲೂ ಪ್ರಸಾದ್ ಯಾದವ್, ಜನಲಲಿತಾರಂತವರನ್ನೇ ಜೈಲು ಪಾಲು ಮಾಡಿದಾಗ ಜನರ ನಂಬಿಕೆ ನ್ಯಾಯಾಂಗದ ಮೇಲೆ ಗಟ್ಟಿಯಾಗತೊಡಗಿತು. ಆದರೆ ಅದೆಷ್ಟೆ ಆದರೂ ನ್ಯಾಯಾಂಗವೂ ಸಹ ಶಾಸಕಾಂಗದ ಆಧೀನದಲ್ಲೇ ಇರುವಂತಹುದು. ಶಾಸಕಾಂಗ ರೂಪಿಸುವ ಮಾರ್ಗದರ್ಶನದಂತೆಯೇ ನಡೆದುಕೊಳ್ಳುವಂತಹುದು. ನ್ಯಾಯಾಧೀಶರ ನೇಮಕದಿಂದ ಹಿಡಿದು ಅವರಿಗೆ ಕೊಡುವ ಸವಲತ್ತುಗಳವರೆಗೂ ಶಾಸಕಾಂಗದ ಮರ್ಜಿಯಲ್ಲೇ ನ್ಯಾಯಾಂಗವೂ ಇರುವಂತಹುದು.  ಹೀಗಾಗಿ ನ್ಯಾಯ ನಿರ್ಣಯದಲ್ಲಿ ಅದೆಷ್ಟೇ ಸ್ವಾಯತ್ತತೆ ಸ್ವಾತಂತ್ರ್ಯ ನ್ಯಾಯಾಧೀಶರಿಗೆ ಇದೆ ಎಂದರೂ, ಅವರೂ ಸಹ ಕೆಲವೊಮ್ಮೆ ಶಾಸಕಾಂಗದ ನಿರ್ಧಾರಗಳ ಮುಂದೆ ಅಸಹಾಯಕರೇ.  ಶಾಸಕಾಂಗಕ್ಕೆ ಸಡ್ಡು ಹೊಡೆದು ಕಾನೂನಿನ ಪ್ರಕಾರವೇ ನ್ಯಾಯನಿರ್ಣಯ ಮಾಡುತ್ತೇವೆಂದು ಹೊರಟ ನ್ಯಾಯಾಧೀಶರ ಅಧಿಕಾರ ವ್ಯಾಪ್ತಿಯನ್ನೇ ನಿರ್ಬಂಧಿಸಿದ ಉದಾಹರಣೆಗಳು ಬೇಕಾದಷ್ಟಿವೆ. ಶಾಸಕಾಂಗ ಮತ್ತು ನ್ಯಾಯಾಂಗದ ನಡುವಿನ ಸಂಘರ್ಷ ನಿರಂತರವಾಗಿದೆ. 

ಈ ಆಳುವ ವರ್ಗದ ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಕರ್ನಾಟಕ ಲೋಕಾಯುಕ್ತದ ಅಂಗಾಂಗಗಳನ್ನೇ ಕಳಚಿ ಅದನ್ನು ವಿಕಲಾಂಗವಾಗಿಸಿ ಹಲ್ಲಿಲ್ಲದ ಹಾವಾಗಿಸಲಾಯ್ತು ಎನ್ನುವುದು ನಮಗೆಲ್ಲಾ ಗೊತ್ತಿರುವ ಸಂಗತಿಯೇ ಆಗಿದೆ. ಆಳುವ ವರ್ಗಗಳ ಶೋಷಕ ನೀತಿಗಳಿಗೆ ಹಾಗೂ ಬ್ರಹ್ಮಾಂಡ ಬ್ರಷ್ಟಾಚಾರಕ್ಕೆ ಪ್ರಸ್ತುತವಾಗಿ ಅಡೆತಡೆ ಆಗಿದ್ದೇ ಈ ನಮ್ಮ ನ್ಯಾಯಾಂಗ ವ್ಯವಸ್ಥೆ. ಈ ವ್ಯವಸ್ಥೆಯನ್ನೇ ದುರ್ಬಲಗೊಳಿಸಿ ನ್ಯಾಯ ನಿರ್ಣಯವನ್ನು ಸಾಧ್ಯವಾದಷ್ಟೂ ವಿಳಂಬಗೊಳಿಸಿದರೆ ತಮ್ಮ ಲೂಟಿ ಸಾಮ್ರಾಜ್ಯವನ್ನು ವಿಸ್ತರಿಸಿ ನಿರಂತರವಾಗಿಸಬಹುದು ಎನ್ನುವುದು ಶಾಸಕಾಂಗ ಹಾಗೂ ಕಾರ್ಯಾಂಗಗಳ ಒಳ ಹುನ್ನಾರು. ಅದಕ್ಕಾಗಿಯೇ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರುಗಳೇ ಇಲ್ಲದಂತೆ ನೋಡಿಕೊಂಡರೆ ರಾಜಕಾರಣಿಗಳು ಹಾಗೂ ಅಧಿಕಾರಗಳ ಮೇಲಿರುವ ಮೊಕದ್ದಮೆಗಳು ವಿಳಂಬವಾಗುತ್ತಾ ಸಾಗುತ್ತವೆಂಬ ದುರಾಲೋಚನೆ ಆಳುವವರದ್ದು. ಅದಕ್ಕಾಗಿಯೇ ಕೇಂದ್ರ ಸರಕಾರ ನ್ಯಾಯಾಧೀಶರ ನೇಮಕಾತಿಯನ್ನೇ ನಿಲ್ಲಿಸಿಬಿಟ್ಟಿದೆ. ಹಲವಾರು ನ್ಯಾಯಾಧೀಶರುಗಳು ನಿವೃತ್ತರಾಗಿ ಮನೆಗೆ ಹೋದರೂ ಅವರ ಜಾಗಕ್ಕೆ ಹೊಸ ನ್ಯಾಯಾಧೀಶರು ನೇಮಕವಾಗದಂತೆ ಆಳುವ ಸರಕಾರ ನೋಡಿಕೊಳ್ಳುತ್ತಿದೆ. ಶ್ರೇಣೀಕೃತ ಸಮಾಜದಲ್ಲಿ ಯಾರು ಬೇಕಾದರೂ ಅನ್ಯಾಯದ ವಿರುದ್ಧ ನ್ಯಾಯಾಲಯದ  ಬಗಿಲು ಬಡಿಯಬಹುದಾಗಿದೆ. ದಲಿತರ ಹಾಗೂ ಮಹಿಳೆಯರ ಹಕ್ಕುಗಳ ಕುರಿತು ಸಾಂವಿಧಾನಿಕ ಕಾನೂನುಗಳು ಸಶಕ್ತವಾಗಿವೆ. ಬಹುತೇಕ ಸಂದರ್ಭದಲ್ಲಿ ಮೇಲ್ವರ್ಗದವರು ಇಲ್ಲವೇ ಆರ್ಥಿಕವಾಗಿ ಬಲಾಢ್ಯರಾದವರೇ ಶಾಸಕಾಂಗದಲ್ಲಿ ಜನಪ್ರತಿನಿಧಿಗಳಾಗಿರುವುದರಿಂದ ದಮನಿತರ ಪರವಾದ ನ್ಯಾಯವನ್ನು ವಿಳಂಬ ಮಾಡಿ ಸತಾಯಿಸಿ, ದೌರ್ಜನ್ಯಕ್ಕೆ ಒಳಗಾದವರನ್ನು ನ್ಯಾಯವ್ಯವಸ್ಥೆಯಿಂದ ವಿಮುಖರನ್ನಾಗಿಸುವುದು ಶಾಸಕಾಂಗದ ಹಿಡನ್ ಅಜೆಂಡಾ ಆಗಿದೆ.


ಈಗಾಗಲೇ ಕೋರ್ಟಲ್ಲಿ ಗೆದ್ದವ ಸೋತ, ಸೋತವ ಸತ್ತ ಎನ್ನುವ ಗಾದೆ ಮಾತು ಬಹುಜನಜನಿತವಾಗಿದೆ. ಹಾಗೂ ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಅದು ನಿಜವೂ ಆಗಿದೆ. ಬಲಾಢ್ಯರಿಗೆ ಇದು ಅನ್ವಯಿಸದೇ ಹೋದರೂ ಬಹುಸಂಖ್ಯಾತ ದುಡಿಯುವ ವರ್ಗಕ್ಕಂತೂ ಇದು ನಿಜವಾಗಿದೆ. ಹೀಗಾಗಿ ಯಾರೋ ಒಬ್ಬ ಹಲ್ಲೆ ಮಾಡಿದನೆಂದು ಇನ್ನೊಬ್ಬ ಕಂಪ್ಲೆಂಟ್ ಕೊಟ್ಟು ಮನೆಯಲ್ಲಿ ಕೂತರೆ ಸಾಕು ಆರೋಪಿ ನಾಲ್ಕಾರು ವರ್ಷ ಕೋರ್ಟಿಗೆ ನಿಯಮಿತವಾಗಿ ಅಲೆದಾಡಬೇಕಾಗುತ್ತದೆ ಹಾಗೂ ಲಾಯರ್ ಪೀಸ್ ಕೊಟ್ಟು ಜೇಬು ಬರಿದಾಗಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಕೇಸು ಚಿಕ್ಕದಿರಲಿ ದೊಡ್ಡದಿರಲಿ ನ್ಯಾಯನಿರ್ಣಯವಂತೂ ಸಕಾಲದಲ್ಲಿ ಆಗಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಬಂಡವಾಳಶಾಹಿ ಪ್ರಜಾಪ್ರಭುತ್ವದ ಭಾರತದಲ್ಲಿ ನಿರ್ಮಾಣಗೊಂಡಿದೆ.

ನನ್ನ ಗೆಳೆಯನೊಬ್ಬ ತುಂಬಾ ಕಷ್ಟ ಪಟ್ಟು ಸೈಟೊಂದನ್ನು ತೆಗೆದುಕೊಂಡು ಮನೆ ಕಟ್ಟಲು ದುಡ್ಡಿಲ್ಲದೇ ನಿವೇಶನವನ್ನು ಖಾಲಿ ಬಿಟ್ಟಿದ್ದ. ಬಲಾಢ್ಯನೊಬ್ಬ ನಕಲಿ ದಾಖಲೆ ಸೃಷ್ಟಿಸಿ ನಿವೇಶನಕ್ಕೆ ಬೇಲಿ ಹಾಕಿ ಆಕ್ರಮಿಸಿಕೊಂಡ. ಕೇಸು ಕೋರ್ಟಿಗೆ ಹೋಗಿ ಹನ್ನೊಂದು ವರ್ಷವಾಯ್ತು ಇನ್ನೂವರೆಗೂ ಕೋರ್ಟಿಗೆ ಅಲೆದಾಡುತ್ತಿದ್ದಾನೆ. ನ್ಯಾಯ ದೊರೆಯುತ್ತದೆಂಬ  ಆಸೆಯನ್ನೇ ಕೈಬಿಟ್ಟಿದ್ದಾನೆ. ಮಹಿಳೆಯೊಬ್ಬಳು ತನ್ನ ಮನೆಯವರ ಕುಮ್ಮಕ್ಕಿನಿಂದ ಗಂಡನ ಮೇಲೆ ಮುನಿಸಿಕೊಂಡು ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಕೇಸ್ ಹಾಕಿ ತವರಲ್ಲಿ ಕೂತಳು. ಪಾಪ ಗಂಡನಿಗೆ ಬೇಲ್ ಸಿಗುವುದಕ್ಕೇ ಮೂರು ತಿಂಗಳುಗಳಾಗಿ ಜೈಲಲ್ಲಿ ಮುದ್ದೆ ಮುರಿದು ಬಂದ. ಒಂಬತ್ತು ವರ್ಷಗಳಾದರೂ ಇನ್ನೂ ಆ ಕೇಸು ಚಾಲ್ತಿಯಲ್ಲಿದೆ. ಆತ ಇನ್ನೊಂದು ಮದುವೆ ಆಗಿ ಬದುಕು ಕಟ್ಟಿಕೊಳ್ಳುವ ಹಾಗೂ ಇಲ್ಲ.. ಇರುವವಳ ಮನವಲಿಸಿ ಮತ್ತೆ ಮನೆತುಂಬಿಸಿಕೊಳ್ಳುವ ಹಾಗೂ ಇಲ್ಲ. ಹೀಗೆ.. ಒಂದಲ್ಲಾ ಎರಡಲ್ಲಾ ಲಕ್ಷಾಂತರ ಕೇಸುಗಳು ಎಲ್ಲಾ ಶ್ರೇಣಿಯ ಕೋರ್ಟುಗಳಲ್ಲಿ ಬಸವನಹುಳುವಿನ ವೇಗದಲ್ಲಿ ನಡೆಯುತ್ತಿವೆ.  ನ್ಯಾಯನಿರ್ಣಯದಲ್ಲಾಗುವ ವಿಳಂಬದಿಂದ ಬೇಸತ್ತ ಕೆಲವು ಆರೋಪಿಗಳು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದು ತಮ್ಮ ಪ್ರತಿಭಟನೆ ಸಲ್ಲಿಸಿದ ಉದಾಹರಣೆಗಳೂ ಇವೆ.
ಇದು ನ್ಯಾಯಾಧೀಶರುಗಳ ತಪ್ಪಲ್ಲ. ಒಬ್ಬೊಬ್ಬ ನ್ಯಾಯಾಧೀಶರ ನ್ಯಾಯನಿರ್ಣಯ ಸಾಮರ್ಥ್ಯವನ್ನು ಮೀರಿ ಮೊಕದ್ದಮೆಗಳು ವಿಚಾರಣೆಗೆ ಬಂದರೆ ಅವರಾದರೂ ಏನು ಮಾಡಿಯಾರು. ದಿನಾಂಕಗಳನ್ನು ಬದಲಾಯಿಸುತ್ತಾ.. ಕೇಸನ್ನು ಮುಂದೂಡುತ್ತಾ ತಮ್ಮ ಇತಿಮಿತಿಯಲ್ಲಿ ಆದಷ್ಟು ಕೆಲಸ ಮಾಡುವ ಅನಿವಾರ್ಯತೆಗೊಳಗಾಗುತ್ತಾರೆ. ನ್ಯಾಯಾಲಯಗಳಲ್ಲಿರುವ ಪೆಂಡಿಂಗ್ ಕೇಸ್‌ಗಳನ್ನು ಕಾಲಮಿತಿಯಲ್ಲಿ ಅಟೆಂಡ್ ಮಾಡಲಾಗದಂತಹ ದುಸ್ಥಿತಿ ನ್ಯಾಯಾಂಗಕ್ಕೆ ಒದಗಿದೆ. ಇಡೀ ನ್ಯಾಯಾಂಗವೇ ವಿಕಲಾಂಗಗೊಂಡಿದೆ. ಇದಕ್ಕೆ ಶಾಸಕಾಂಗದ ಉದ್ದೇಶಪೂರ್ವಕ ಕೊಡುಗೆ ಬೇಕಾದಷ್ಟಿದೆ.
 
ಮೋದಿ ಸರಕಾರ ಆಳ್ವಿಕೆಗೆ ಬಂದ ನಂತರ ಅವರನ್ನು ಬೇಟಿಯಾದ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಟಿ.ಎಸ್.ಠಾಕೂರವರು ನ್ಯಾಯಾಲಯಗಳಲ್ಲಿರುವ ನ್ಯಾಯಾಧೀಶರ ಕೊರತೆ ಹಾಗೂ ನ್ಯಾಯನಿರ್ಣಯ ವಿಳಂಬಕ್ಕೆ ಕಾರಣಗಳನ್ನು ಹೇಳಿ ಕಣ್ಣೀರಿಟ್ಟರು.. ಆದಷ್ಟು ಬೇಗ ನ್ಯಾಯಾಧೀಶರ ನೇಮಕ ಮಾಡಲಾಗುವುದೆಂಬ ಭರವಸೆಯನ್ನು ಪಡೆದರಾದರೂ ಇಲ್ಲಿವರೆಗೂ ಅದು ಅನುಷ್ಟಾನಕ್ಕೆ ಬರಲಿಲ್ಲ. ನೇಮಕ ಮಾಡುವ ಉದ್ದೇಶವೂ ಸರಕಾರಕ್ಕೆ ಇಲ್ಲ. ಆಗಸ್ಟ್ 15 ರಂದು ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಹಲವಾರು ವಿಷಯ ಪ್ರಸ್ತಾಪಿಸಿ ಸುದೀರ್ಘ 94 ನಿಮಿಷಗಳ ಕಾಲ ಮಾತಾಡಿದ ಪ್ರಧಾನಿಯವರು ನ್ಯಾಯಾಧೀಶರ ನೇಮಕದ ಬಗ್ಗೆ ಚಕಾರ ಎತ್ತದಿರುವುದನ್ನು ನೋಡಿದ ಠಾಕೂರರವರು ಬಹಿರಂಗವಾಗಿಯೇ ತಮ್ಮ ತೀವ್ರವಾದ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ದೇಶದ ಹಲವಾರು ಕೋರ್ಟುಗಳಲ್ಲಿ ನ್ಯಾಯಾಧೀಶರ ಕೊರತೆಯಿಂದ ನ್ಯಾಯದಾನ ವಿಳಂಬವಾಗುತ್ತಿದೆ.  ಇದನ್ನು ಸುಪ್ರಿಂ ಕೋರ್ಟ ಗಂಭೀರವಾಗಿ ಪರಿಗಣಿಸಿ ಜಡ್ಜ್‌ಗಳ ನೇಮಕಕ್ಕೆ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಸೂಚಿಸಿತ್ತು. ಆದರೆ ಪ್ರಧಾನಿಯವರು ಈ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳದೇ ಇರುವುದು ನಿರಾಸೆಗೆ ಕಾರಣವಾಗಿದೆ.. ನಾನೀಗ ನನ್ನ ವೃತ್ತಿ  ಬದುಕಿನ ಕೊನೆಯ ಹಂತವನ್ನು ತಲುಪಿದ್ದೇನೆ. ನನಗೆ ಅನಿಸಿದ್ದನ್ನು ಹೇಳಲು ಹಿಂಜರಿಯುವ ಅಗತ್ಯವಿಲ್ಲ ಎಂದು ಮುಖ್ಯ ನ್ಯಾಯಾಧೀಶ ಠಾಕೂರರು ತಮ್ಮ ಅಸಹಾಯಕತೆಯನ್ನು ಪ್ರಸ್ತಾಪಿಸಿ ಅವಲತ್ತುಕೊಂಡರು.


ಈ ದೇಶಕ್ಕೆ ಇದಕ್ಕಿಂತಾ ಅವಮಾನ ಏನಿದೆ. ಅತ್ಯುನ್ನತ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಕಣ್ಣೀರಿಟ್ಟು ನನಗೆ ನ್ಯಾಯದಾನ ಮಾಡಲು ನ್ಯಾಯಾಧೀಶರನ್ನು ನೇಮಕ ಮಾಡಿಕೊಡಿ ಎಂದು ಪ್ರಧಾನಿಯನ್ನು ಬೇಡಿಕೊಳ್ಳುವುದಕ್ಕಿಂತಾ ಅವಮಾನಕಾರಿ ಕೆಲಸ ಮತ್ತೇನಿದೆ. ದೇಶಕ್ಕೆ ನ್ಯಾಯದಾನ ಮಾಡುವ ನ್ಯಾಯಾಂಗ ವ್ಯವಸ್ಥೆ ಶಾಸಕಾಂಗದ ಮುಂದೆ ಮಂಡಿಯೂರಿ ಬೇಡಿಕೊಳ್ಳುತ್ತಿದೆ. ಅಶಕ್ತನಾಗಿದ್ದೇನೆ ನನ್ನ ಬಲವನ್ನು ಹೆಚ್ಚಿಸಿ  ಸಶಕ್ತಗೊಳಿಸಿ ಎಂದು ಕೇಳಿಕೊಳ್ಳುತ್ತಿದೆ. ಆದರೆ.. ನೀನು ಸಶಕ್ತನಾದರೆ ಆಳುವ ವರ್ಗಕ್ಕೆ ಕಂಟಕನಾಗುತ್ತಿಯಾದ್ದರಿಂದ ನೀನು ಹೀಗೆ ಅಶಕ್ತ ವಿಕಲಾಂಗನಾಗಿದ್ದಷ್ಟೇ ನಮಗೆ ಒಳಿತು ಎನ್ನುವ ತೀರ್ಮಾಣಕ್ಕೆ ಶಾಸಕಾಂಗ ಬಂದಂತಿದೆ. ನ್ಯಾಯನಿರ್ಣಯ ವಿಳಂಬವಾದಷ್ಟೂ ನ್ಯಾಯವನ್ನು ನಿರಾಕರಿಸಿದಂತೆ ಎನ್ನುವ ಮಾತು ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಸಿದ್ದಿಯಾಗಿದೆ. ಇದೇ ತಂತ್ರವನ್ನು ಶಾಸಕಾಂಗ ನಿರ್ವಹಿಸುತ್ತಾ ನ್ಯಾಯಾಂಗವನ್ನು ಸಶಕ್ತವಾಗದಂತೆ ನೋಡಿಕೊಳ್ಳುತ್ತಿದೆ. ಇದರಿಂದಾಗಿ ದೇಶಾದ್ಯಂತ ಕೋಟ್ಯಾಂತರ ಜನ ದಲಿತರು, ದಮನಿತರು, ಮಹಿಳೆಯರು, ರೈತರು, ಕಾರ್ಮಿಕರುಗಳು ನ್ಯಾಯಕ್ಕಾಗಿ ದಶಕಗಳ ಕಾಲ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿ ಇಳಿಯುತ್ತಲೇ ಇದ್ದಾರೆ. ನ್ಯಾಯವೆಂಬುದು ಮಧ್ಯಾಹ್ನದ ಮರೀಚಿಕೆಯಂತೆ ಹಿಡಿಯಲು ಹೋದಷ್ಟೂ ದೂರ ಹೋಗುತ್ತಿದೆ. ಅದೆಷ್ಟೋ ಅಮಾಯಕರು ನ್ಯಾಯವಿಳಂಬದಿಂದಾಗಿ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಅವರನ್ನು ನಂಬಿಕೊಂಡ ಕುಟುಂಬದವರು ಕಣ್ಣೀರು ಹಾಕುತ್ತಿದ್ದಾರೆ..

ಬಂಡವಾಳಶಾಹಿ ಪ್ರಜಾಪ್ರಭುತ್ವದಲ್ಲಿ ಬಂಡವಾಳಿಗರ ಹಿತವನ್ನು ಕಾಯುವ ಕೆಲಸವನ್ನು ಸಂವಿಧಾನದ ಈ ಮೂರೂ ಅಂಗಗಳೂ ನಿಷ್ಟೆಯಿಂದ ಮಾಡುತ್ತಲೇ ಬಂದಿವೆ. ನ್ಯಾಯಾಂಗದ ಮೇಲಿದ್ದ ಅಲ್ಪ ಸ್ವಲ್ಪ ಭರವಸೆಯೂ ಹುಸಿಯಾಗುತ್ತಾ ಬರುತ್ತಿದೆ.  ಪ್ರಧಾನಿ ಮೋದಿಯವರ ಸ್ವರಾಜ್ಯವು ಸುರಾಜ್ಯವಾಗಬೇಕು ಎನ್ನುವ ಮಾತು ಸಾಕರಗೊಳ್ಳಬೇಕೆಂದರೆ ಮೊದಲು ಶಾಸಕಾಂಗ ಹಾಗೂ ಕಾರ್ಯಾಂಗಗಳನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಬೇಕಿದೆ. ಭ್ರಷ್ಟರನ್ನು ಮಟ್ಟಹಾಕಬೇಕಾದರೆ ನ್ಯಾಯಾಂಗವನ್ನು ಸಶಕ್ತಗೊಳಿಸಬೇಕಾಗಿದೆ. ಮೋದಿಯವರು ತಮ್ಮ ಭಾಷಣದಲ್ಲಿ ಸುಧಾರಣೆ, ನಿರ್ವಹಣೆ ಮತ್ತು ಪರಿವರ್ತನೆ ಎನ್ನುವ ಕಾರ್ಯತಂತ್ರಗಳ ಬಗ್ಗೆ ಹೇಳಿಕೊಂಡಿದ್ದಾರೆ. ಇವು ಮೂರೂ ತಂತ್ರಗಳು ಬರೀ ಮಾತಿನಲ್ಲಿ ಆಗುವಂತಹುಗಳಲ್ಲ. ಮೊದಲು ನ್ಯಾಯಾಂಗದಲ್ಲಿ ಸುಧಾರಣೆ ತಂದು ಅದಕ್ಕೆ ಬೇಕಾದ ನೇಮಕಾತಿಗಳನ್ನು ಮಾಡುವ ಮೂಲಕ ನಿರ್ವಹಣೆ ಮಾಡಿ ತದನಂತರ ಪರಿವರ್ತನೆಯ ಬಗ್ಗೆ ಯೋಚಿಸಬೇಕು. ಯಾವ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಸದಾ ಎಚ್ಚರದ ಸ್ಥಿತಿಯಲ್ಲಿರುತ್ತದೋ.. ಯಾವ ದೇಶದಲ್ಲಿ ಅತೀ ಶೀಘ್ರವಾಗಿ ನ್ಯಾಯ ನಿರ್ಣಯವಾಗಿ ಅಪರಾಧಿಗಳಿಗೆ ಶಿಕ್ಷೆಯಾಗುತ್ತದೋ ಆ ದೇಶದಲ್ಲಿ ಅಪರಾಧಗಳು ಕಡಿಮೆಯಾಗಿರುತ್ತವೆ ಹಾಗೂ ಅಂತಹ ದೇಶಗಳು ಅಭಿವೃದ್ದಿಯತ್ತ ದಾಪುಗಾಲಿಡಲು ಸಾಧ್ಯವಾಗುತ್ತದೆ. ಅಪರಾಧವೊಂದು ಘಟಿಸಿದ ಮೂರು ತಿಂಗಳಲ್ಲಿ ಶೀಘ್ರವಾಗಿ ವಿಚಾರಣೆ ನಡೆಸಿ ಅಪರಾಧಿಗೆ ಶಿಕ್ಷೆಯಾದಲ್ಲಿ ಅಪರಾಧ ಮಾಡುವವರಲ್ಲಿ ಜಾಗೃತಿ ಮೂಡುತ್ತದೆ. ಶಿಕ್ಷೆಯ ಹೆದರಿಕೆಯಿಂದ ಸಮಾಜವಿರೋಧಿ ಚಟುವಟಿಕೆಗಳು ಕಡಿಮೆಯಾಗುತ್ತಾ ಸಾಗುತ್ತವೆ.


ಭಾರತದಲ್ಲಿರುವ ಒಟ್ಟು 24 ಹೈಕೋರ್ಟಗಳಲ್ಲಿ ಇರಬೇಕಾದ ಒಟ್ಟು ನ್ಯಾಯಾಧೀಶರ ಸಂಖ್ಯೆ 1079. ಆದರೆ ಈಗ ಇರುವ ನ್ಯಾಯಾಧೀಶರುಗಳು 609..  ಇನ್ನೂ 470 ನ್ಯಾಯಾಧೀಶರುಗಳ ಖುರ್ಚಿ ಖಾಲಿಯಿದೆ. ಅಂದರೆ ಶೇಕಡಾ 45. ನ್ಯಾಯಾಧೀಶರುಗಳ ಕೊರತೆ ನ್ಯಾಯಾಂಗಕ್ಕೆ ಇದೆ. ಕೊರತೆ ಇರುವ ನ್ಯಾಯಾಧೀಶರನ್ನು ಆಯ್ಕೆ ಮಾಡುವ ಪ್ರಸ್ತಾಪವನ್ನು ಸುಪ್ರಿಂ ಕೋರ್ಟ ಕೊಲಿಜಿಯಂ ಸಿಸ್ಟಂ ಕೇಂದ್ರ ಸರಕಾರದ ಮುಂದೆ ಇಡುತ್ತಲೇ ಬಂದಿದೆ. ಆದರೆ ಸರಕಾರ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಇಬ್ಬರು ನ್ಯಾಯಾಧೀಶರು ಮಾಡಬಹುದಾದ ಕೆಲಸವನ್ನು ಈಗ ಒಬ್ಬರೇ ನ್ಯಾಯಾಧೀಶರು ನಿಭಾಯಿಸುವ ಒತ್ತಡಕ್ಕೆ ಒಳಗಾಗಿದ್ದಾರೆ. ಈ ವರ್ಷಾಂತ್ಯದಲ್ಲಿ ಈಗಿರುವ ಜಡ್ಜ್‌ಗಳಲ್ಲಿ ಇನ್ನೂ ಕೆಲವರು ನಿವೃತ್ತಿ ಹೊಂದುತ್ತಿದ್ದು ಸಮಸ್ಯೆ ಇನ್ನೂ ಬಿಗಡಾಯಿಸುವುದರಲ್ಲಿ ಸಂದೇಹವಿಲ್ಲ. ಇದು ಕೇವಲ ಹೈಕೋರ್ಟ ಕಥೆಯಾಯಿತು. ಇನ್ನು ಆಧೀನ ಕೋರ್ಟಗಳಲ್ಲಿರುವ ನ್ಯಾಯಾಧೀಶರ ಕೊರತೆ ಕೇಳಿದರೆ ನ್ಯಾಯವಿಳಂಬಕ್ಕೆ ಸಕಾರಣ ತಿಳಿಯದೆ ಇರಲಾರದು. ಮೋದಿಯವರ ತವರು ರಾಜ್ಯ ಗುಜರಾತಿನ ಹೈಕೋರ್ಟಗಳಲ್ಲಿ ಒಟ್ಟು 160, ನ್ಯಾಯಾಧೀಶರುಗಳ ಹುದ್ದೆಗಳಿದ್ದು ಅದರಲ್ಲಿ 82 ಹುದ್ದೆಗಳು ಖಾಲಿ ಇವೆ. ಪಂಜಾಬ್ ಹರಿಯಾಣ ಕೋರ್ಟಗಳಲ್ಲಿ 85 ರಲ್ಲಿ 39 ಖುರ್ಚಿಗಳು ಖಾಲಿ ಇವೆ. ಮದ್ರಾಸ್ ಹೈಕೋರ್ಟಲ್ಲಿರಬಹುದಾದ 75 ನ್ಯಾಯಾಧೀಶರುಗಳಲ್ಲಿ 37 ಹುದ್ದೆಗಳು ಖಾಲಿಯಿವೆ. ಆಂದ್ರ, ಕೇರಳ, ಮಧ್ಯಪ್ರದೇಶ್, ಮಣಿಪುರ, ಪಾಟ್ನಾ, ರಾಜಸ್ಥಾನ, ಪಂಜಾಬ್-ಹರಿಯಾಣ, ಅಲಹಾಬಾದ್ ಈ ಎಂಟು  ಹೈಕೋರ್ಟಗಳಲ್ಲಿ ಹೆಚ್ಚುವರಿ ಮುಖ್ಯ ನ್ಯಾಯಾಧೀಶರುಗಳೇ ಕೆಲಸ ನಿಭಾಯಿಸುತ್ತಿದ್ದಾರೆ.
 
ಶಾಸಕಾಂಗವು ಕಾರ್ಯಾಂಗಕ್ಕೆ ಕಾಲಮಿತಿಯಲ್ಲಿ ಕೆಲಸಗಳಾಗಬೇಕು ಎಂದು ಆದೇಶಿಸುತ್ತದೆ. ಆದರೆ ನ್ಯಾಯಾಂಗಕ್ಕೆ ಇಂತಿಂತಾ ಅಪರಾಧಿಗಳಿಗೆ ಇಂತಿಷ್ಟು ಕಾಲಮಿತಿಯಲ್ಲಿ ನ್ಯಾಯನಿರ್ಣಯವಾಗಬೇಕು ಎನ್ನುವ ಮಿತಿಯನ್ನು ಹೇರುವಲ್ಲಿ ವಿಫಲವಾಗಿದೆ.  ಹಾಗೇನಾದರೂ ಆದಲ್ಲಿ ಆಳುವ ವರ್ಗದ ಬಹುತೇಕರು ಜೈಲಲ್ಲಿರುತ್ತಾರೆ. ಅದು ಯಾವ ಜನಪ್ರತಿನಿಧಿಗಳಿಗೂ ಬೇಕಾಗಿಲ್ಲ.. ಶಾಸಕಾಂಗ ಕಾರ್ಯಾಂಗದೊಳಗಿನ ಭ್ರಷ್ಟರಿಗೆ ಅಗತ್ಯವಾಗಿಲ್ಲ. ನ್ಯಾಯ ವಿಳಂಬವಾದಷ್ಟೂ ಇವರಿಗೆ ನುಣುಚಿಕೊಳ್ಳಲು ಸಮಯಾವಕಾಶ ಸಿಕ್ಕುತ್ತದೆ. ಸಾಕ್ಷಿಗಳನ್ನು ಮ್ಯಾನುಪಲೇಟ್ ಮಾಡಿ ನ್ಯಾಯದ ದಿಕ್ಕನ್ನು ತಪ್ಪಿಸಲು ಅನುಕೂಲವಾಗುತ್ತದೆ. ಹೀಗಾಗಿ ನ್ಯಾಯಾಂಗವನ್ನು ಸಶಕ್ತಗೊಳಿಸಲು ಹಾಗೂ ಅಗತ್ಯವಿದ್ದಷ್ಟು ನ್ಯಾಯಾಧೀಶರುಗಳನ್ನು ನೇಮಕ ಮಾಡಿ ಕಾಲಮಿತಿಯಲ್ಲಿ ನ್ಯಾಯದಾನವನ್ನು ನೀಡುವ ವ್ಯವಸ್ಥೆಯನ್ನು ರೂಪಿಸಲು ಶಾಸಕಾಂಗ ಸಿದ್ದವಾಗಿಲ್ಲ.. ಕಾರ್ಯಾಂಗಕ್ಕೆ ಬೇಕಾಗಿಲ್ಲ. ಇಡೀ  ದೇಶದ ಜನತೆ ನ್ಯಾಯ ಇಂದು ಸಿಕ್ಕೀತು,, ನಾಳೆ ಸಿಕ್ಕೀತು ಎಂಬ ಭರವಸೆಯೊಂದಿಗೆ ಕೋರ್ಟಗಳಿಗೆ ಅಲೆದಾಡುವುದು ತಪ್ಪೋದಿಲ್ಲ.

ಇನ್ನು ಈ ನಾಲ್ಕನೇ ಅಂಗವೆಂದು ಸ್ವಘೋಷಿಸಿಕೊಂಡ ಮಾಧ್ಯಮರಂಗ (ಮೀಡಿಯಾಂಗ)ವು ಬಂಡವಾಳಶಾಹಿಗಳ ಹಿಡಿತದಲ್ಲೇ ಇರುವುದರಿಂದ ಆಳುವ ವರ್ಗಗಳ ಪರವಾಗಿಯೇ ಇರುವುದು ಬಹುತೇಕ ಸಾಬೀತಾಗಿದೆ. ನ್ಯಾಯಾಂಗ ವಿಕಲಾಂಗವಾದರೆ ಈ ಮೀಡಿಯಾಂಗವು ಅತಿಯಾಂಗವಾಗಿದೆ. ಸುದ್ದಿ ವಾಹಿನಿಗಳಂತೂ ಅಪರಾಧ ಕುರಿತು ಆರೋಪ, ವಿಚಾರಣೆ, ನ್ಯಾಯನಿರ್ಣಯಗಳನ್ನು ಮಾಡಿ ಶಿಕ್ಷೆಯನ್ನೂ ಪ್ರಕಟಿಸುವ ಮಟ್ಟಿಗೆ ನ್ಯಾಯಾಂಗದ ಕೆಲಸವನ್ನು ಬೇನಾಮಿಯಾಗಿ ಮಾಡತೊಡಗಿವೆ. ಈ ವಾಹಿನಿಗಳ ಭ್ರಮಾಲೋಕವನ್ನು ನೋಡಿ ಜನ ಎಂಜಾಯ್ ಮಾಡುತ್ತಿದ್ದಾರೆಯೇ ಹೊರತು ನಂಬುತ್ತಿಲ್ಲ. ಈ ಮೀಡಿಯಾಂಗವು ತಮ್ಮ ಮಾಲೀಕರುಗಳ ಒಲವು ನಿಲುವುಗಳಿಗೆ ಪೂರಕವಾಗಿ ಸುದ್ದಿಗಳನ್ನು ಪ್ರಚಾರಮಾಡುತ್ತಾ, ಜಾಹೀರಾತುದಾರರ ಹಿತಾಸಕ್ತಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ನಿರ್ಮಿಸುತ್ತಾ ಜನರಲ್ಲಿ ಭ್ರಮೆಯನ್ನು ಹುಟ್ಟಿಸಲು ಪ್ರಯತ್ನಿಸುತ್ತಿವೆ. ಹೀಗಾಗಿ ಶಾಸಕಾಂಗ ಹಾಗೂ ಕಾರ್ಯಾಂಗಗಳ ಭ್ರಷ್ಟತೆ ಹಾಗೂ ನ್ಯಾಯಾಂಗದ ವಿಳಂಬ ನೀತಿಯ ನಿಷ್ಕ್ರೀಯತೆಯಿಂದಾಗಿ ಬಹುತೇಕ ಜನರಿಗೆ ಭ್ರಮನಿರಸನವಾಗಿದೆ. ಮೀಡಿಯಾಂಗದ ಅತಿರೇಕವು ಸಹಿಸದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಸಹಾಯಕರಾದ ದೇಶದ ಬಹುಸಂಖ್ಯಾತ ಜನತೆ ಇಡೀ ವ್ಯವಸ್ಥೆಯ ಬದಲಾವಣೆಗಾಗಿ ಕಾಯುತ್ತಿದೆ.

ಇಂತಹ ಸಂದರ್ಭದಲ್ಲಿ ಚಂಪಾರವರ ಒಂದು ಚುಟುಕು ನೆನಪಾಗುತ್ತಿದೆ.

ಹೆದ್ದಾರಿಯಲ್ಲಿ
ಕೆಟ್ಟು ನಿಂತ ಟ್ರಕ್ಕೂ ಸಾರುತ್ತಿದೆ
ದೇಶ ಮುಂದೆ ಹೋಗುತ್ತಿದೆ 
 *        *        *        *        
                                          -     ಶಶಿಕಾಂತ ಯಡಹಳ್ಳಿ
   




ಬುಧವಾರ, ಆಗಸ್ಟ್ 17, 2016

ದೇಶಭಕ್ತಿಯ ಉನ್ಮಾದದ ಹಿಂದೆ ಸಂಘ ಪರಿವಾರದ ಹುನ್ನಾರ :


    
ದೇಶಭಕ್ತಿ ದೈವಭಕ್ತಿ ಎನ್ನುವುದು ತೋರಿಕೆಯ ಆಡಂಬರವಲ್ಲ, ಆಗಲೂಬಾರದು. ಅದು ಅವರವರ ಅಂತರಂಗದಲ್ಲಿ ಅರಳುವಂತಹ ಅನುಭಾವ. ಆದರೆ... ಈಗ ಯಾರು ಅದನ್ನು ಬಹಿರಂಗವಾಗಿ ವಿಜ್ರಂಭಿಸಿಕೊಳ್ಳುತ್ತಾರೋ ಅವರೇ ನಿಜವಾದ ದೇಶಭಕ್ತರು ಹಾಗೂ ದೈವಭಕ್ತರು ಎನ್ನುವುದನ್ನು ಜನರ ಮೇಲೆ ಪರೋಕ್ಷವಾಗಿ ಹೇರುವ ಪ್ರಯತ್ನ ದೇಶದಾದ್ಯಂತ ಉದ್ದೇಶಪೂರ್ವಕವಾಗಿ ನಡೆಯುತ್ತಿದೆ. ದೇಶದ ಗದ್ದುಗೆ ಮೇಲೆ ಬಿಜೆಪಿ ಪಕ್ಷ ಯಾವಾಗ ಪೂರ್ಣಪ್ರಮಾಣದಲ್ಲಿ ಪ್ರಭುತ್ವದ ಅಧಿಕಾರವನ್ನು ಪಡೆಯಿತೋ ಆಗಿನಿಂದಲೂ ಸಂಘಪರಿವಾರಕ್ಕೆ ದೈತ್ಯ ಶಕ್ತಿ ಬಂದಂತಾಯಿತು. ಇಡೀ ದೇಶಕ್ಕೆ ದೇಶವೇ ಸನಾತನ ಹಿಂದೂ ಸಂಸ್ಕೃತಿಯ ಅನುಷ್ಟಾನದ ಪ್ರಯೋಗಶಾಲೆಯಾಗತೊಡಗಿದೆ. ತತ್ವ ಸಿದ್ದಾಂತ ವಿಚಾರಗಳಿಂದ ಈ  ದೇಶದ ಜನತೆಯನ್ನು ವಶೀಕರಿಸಿಕೊಳ್ಳಲು ಸಾಧ್ಯವೇ ಇಲ್ಲಾ ಎಂಬುದು ಮನುವಾದಿ ಶಕ್ತಿಗಳಿಗೆ ಯಾವತ್ತೋ ಮನವರಿಕೆಯಾಗಿ ಹೋಗಿತ್ತು. ಹೀಗಾಗಿ ವಿಚಾರಗಳ ಬದಲು ಭಾವನೆಗಳನ್ನ ಕೆರಳಿಸಿ ಜನರನ್ನು ತಮ್ಮ ಪರವಾಗಿ ವಲಿಸಿಕೊಳ್ಳುವ ಸೈಕಾಲಾಜಿಕಲ್ ಆದ ಪ್ರಯೋಗಕ್ಕೆ ಸಂಘ ಪರಿವಾರದ ಮೆದುಳಾದ ಆರ್ಎಸ್ಎಸ್ ಮೊದಲಿಂದಲೂ ಪ್ರಯತ್ನಿಸುತ್ತಲೇ ಬಂದಿತ್ತು. ರಾಜ್ಯಾಧಿಕಾರ ಸಿಕ್ಕಮೇಲೆ ಅದು ಇನ್ನೂ ಹೆಚ್ಚಾಗತೊಡಗಿತು.

ಯಾವಾಗ ಭಾವನಾತ್ಮಕವಾಗಿ ಜನತೆಯನ್ನು ಮರುಳುಗೊಳಿಸುವುದು ಸುಲಭವೆಂದು ಬಾಬರಿ ಮಸೀದಿ ಪ್ರಕರಣದ ರಾಮಮಂದಿರ ರಾಜಕಾರಣ ಹಾಗೂ ರಥಯಾತ್ರೆ ರಾಜಕಾರಣದಿಂದ ಪರಿವಾರಿಗಳಿಗೆ ಕನ್ಪರಂ ಆಯಿತೋ ಅಂದಿನಿಂದ ಅದನ್ನೇ ಹಿಂದೂ ಸಾಮ್ರಾಜ್ಯ ಸ್ಥಾಪನೆಗೆ ಪ್ರಮುಖ ಸಾಧನವನ್ನಾಗಿಸಿಕೊಳ್ಳಲಾಯಿತು. ಅದರಲ್ಲಿ ಭಾಗಷಃ ಯಶಸ್ವಿಯೂ ಆಯಿತು. ಜನರ ಭಾವನೆಗಳನ್ನು ಮ್ಯಾನುಪಲೇಟ್ ಮಾಡುತ್ತಲೇ ಬಂದು ಕೊನೆಗೆ ಮೋದಿ ಅಲೆಯಲ್ಲಿ ದೇಶವನ್ನಾಳುವ ಅಧಿಕಾರವನ್ನೂ ಅಧೀಕೃತವಾಗಿ ಪಡೆಯಿತು. ರಾಜ್ಯಾಧಿಕಾರ ಪಡೆಯುವುದೊಂದೇ ಪರಿವಾರಿಗಳ ಅಂತಿಮ ಗುರಿಯಾಗಿರಲಿಲ್ಲ. ಅದು ಅವರ ವರ್ಣಾಶ್ರಮ ಧರ್ಮಾಧಾರಿತ ಹಿಂದೂ ದೇಶ ಕಟ್ಟುವ ನಿಟ್ಟಿನಲ್ಲಿ ಮೊದಲ ಮೆಟ್ಟಿಲಾಗಿತ್ತು. ಮೊದಲ ಮೆಟ್ಟಿಲೇರಿದ ನಂತರ ಒಂದೊಂದೇ ಮೆಟ್ಟಿಲುಗಳನ್ನು ಏರುವ ಪ್ರಯತ್ನವನ್ನು ಜಾರಿಗೊಳಿಸಲು ಆರೆಸ್ಸೆಸ್ ತನ್ನೆಲ್ಲಾ ಕುಯುಕ್ತಿ ಹಾಗೂ ಸಂಘಪರಿವಾರದ ಶಕ್ತಿಯನ್ನು ಬಳಸಿಕೊಂಡು ಕಾರ್ಯತಂತ್ರಗಳನ್ನು ರೂಪಿಸತೊಡಗಿತು.


ಭಾರತೀಯರ ಮನಸ್ಸು ಗೆಲ್ಲಬೇಕಾದರೆ ಅವರನ್ನು ಭಾವನಾತ್ಮಕವಾಗಿ ಬಡಿದೆಬ್ಬಿಸಬೇಕು ಎನ್ನುವುದನ್ನು ಅರಿತ ಪರಿವಾರಿಗಳು ಗೋರಾಜಕೀಯ ಶುರುಮಾಡಿದರು. ‘’ಹಿಂದೂ ಧರ್ಮದವರೆಂದುಕೊಳ್ಳುವವರೆಲ್ಲಾ ಗೋವನ್ನು ಮಾತೆಯಾಗಿ ಪೂಜಿಸುತ್ತಾ ಬಂದಿದ್ದಾರೆ. ಹೀಗಾಗಿ ಯಾರೇ ಆಗಲಿ ಗೋಮಾತೆಯನ್ನು ಕೊಂದು ತಿನ್ನುವುದು ಅಪಚಾರ, ಹಾಗೇನಾದರೂ ಗೋಹತ್ಯೆ ಮಾಡಿದರೆ ಹಿಂದೂಗಳ ಭಾವನೆಗಳಿಗೆ ಧಕ್ಕೆ ಆಗುತ್ತದೆ ಎನ್ನುವ ರೀತಿಯಲ್ಲಿ ಪ್ರಚಾರವನ್ನು ಮಾಡತೊಡಗಿದರು. ಗೋಮಾಂಸ ತಿನ್ನುವವರೆಲ್ಲಾ ಧರ್ಮದ್ರೋಹಿಗಳು ಎನ್ನುವಂತೆ ಬಿಂಬಿಸತೊಡಗಿದರು. ಇದರ ಹಿಂದೆ ಮುಸ್ಲಿಂ ಧರ್ಮಿಯರ ವಿರುದ್ಧ ಹಿಂದೂ ಧರ್ಮಿಯರನ್ನು ಎತ್ತಿ ಕಟ್ಟುವ ಹುನ್ನಾರವೂ ಅಡಗಿತ್ತು.  ಯಾಕೆಂದರೆ ಮುಸ್ಲಿಂನವರು ಮೊದಲಿನಿಂದಲೂ ಗೋಮಾಂಸವನ್ನು ತಮ್ಮ ಆಹಾರದ ಭಾಗವನ್ನಾಗಿಸಿಕೊಂಡಿದ್ದರು. ಜೊತೆಗೆ ದಲಿತರೂ ಸಹ ಗೋಮಾಂಸವನ್ನು ಆಹಾರವಾಗಿ ಹಾಗೂ ಅದರ ಚರ್ಮವನ್ನು ವ್ಯಾಪಾರವಾಗಿ ಬಳಸಿಕೊಳ್ಳುತ್ತಿದ್ದರು. ಗೋಮಾಂಸ ತಿನ್ನುವುದರಲ್ಲಿ ಆರ್ಥಿಕ ಅನಿವಾರ್ಯತೆಗಳೂ ಈ ದಲಿತರು ಹಾಗೂ ಮುಸ್ಲಿಂ ಸಮುದಾಯದವರದ್ದಾಗಿತ್ತು. ಮಾಂಸಾಹಾರದಲ್ಲಿ ಗೋಮಾಂಸವೇ ಅತೀ  ಕಡಿಮೆ ಬೆಲೆಯದ್ದಾಗಿದ್ದರಿಂದ ಅದು ಬಡಜನತೆಯ ಆಹಾರವೂ ಆಗಿತ್ತು. ಓಟು ರಾಜಕೀಯದ ಭಾಗವಾಗಿ ದಲಿತರು ಶೂದ್ರರೆಲ್ಲ ಹಿಂದೂಗಳು ಎನ್ನುವ ಸಂಘಪರಿವಾರಿಗಳು ಸಾಮಾಜಿಕವಾಗಿ ಅವರನ್ನು ಅಸ್ಪೃಷ್ಯರನ್ನಾಗಿ ದೂರವಿಟ್ಟು ಅವಮಾನಕಾರಿಯಾಗಿ ನಡೆಸಿಕೊಳ್ಳುತ್ತಲೇ ಬಂದಿದ್ದಾರೆ. ಯಾವಾಗ ಗೋಮಾತೆಯ ಮೇಲಿನ ಭಾವನಾತ್ಮಕತೆಯನ್ನು ಬಡಿದೆಬ್ಬಿಸಿ, ದಲಿತೇತರ ಅಬ್ರಾಹ್ಮಣರನ್ನು ರೊಚ್ಚಿಗೆಬ್ಬಿಸಿ, ಅದನ್ನು ಮುಸ್ಲಿಂ ವಿರುದ್ಧ ತಿರುಗಿಸಿದರೆ ದೇಶಾದ್ಯಂತ ಸಂಘಿಗಳ ಬೆಂಬಲಿಗರ ಸಂಖ್ಯೆ ಹೆಚ್ಚಿಸಿಕೊಳ್ಳಬಹುದು ಹಾಗೂ ಜನಸಾಮಾನ್ಯರಲ್ಲೂ ಹಿಂದೂ ಭಾವನೆ ಕೆರಳಿಸಬಹುದು ಎನ್ನುವ ಆರೆಸ್ಸೆಸ್ ಹಿಡನ್ ಅಜೆಂಡಾ ಜಾರಿಯಾಗತೊಡಗಿತೋ ಆಗ ಹಲವಾರು ಕಡೆ ದಲಿತರು ಹಾಗೂ ಮುಸ್ಲಿಂ ಸಮುದಾಯದವರ ಮೇಲೆ ಹಾಡುಹಗಲೇ ಹಲ್ಲೆಗಳು ನಡೆಯತೊಡಗಿದವರು. ಹಿಂದೂವಾದಿಗಳು ಪಟ್ಟಕ್ಕೆ ಬಂದು ಈಗ ದೈತ್ಯ ಶಕ್ತಿ ಪಡೆದಿದ್ದರಿಂದ ಮುಸ್ಲಿಂ ಸಮಾಜ ಕಾದು ನೋಡುವ ತಂತ್ರಕ್ಕೆ ಬದ್ದವಾದರೆ ದಲಿತರು ಎಚ್ಚೆತ್ತುಕೊಂಡರು. ಹಿಂದುತ್ವವಾದವನ್ನು ಶತಾಯಗತಾಯ ವಿರೋಧಿಸಿದ ಅಂಬೇಡ್ಕರವರ ಸಿದ್ದಾಂತವನ್ನು ಒಪ್ಪಿ ಅಪ್ಪಿಕೊಂಡಿರುವ ದಲಿತರು ಈ ಗೋರಾಜಕೀಯಕ್ಕೆ ವಿರುದ್ದವಾಗಿ ಪ್ರತಿಭಟನೆಗಿಳಿದರು.


ಮೋದಿ ರಾಜ್ಯವಾದ ಗುಜರಾತಿನ ಊನಾ ಪ್ರಾಂತ್ಯದಲ್ಲಿ ಅಸಂಖ್ಯಾತ ದಲಿತರು 2016 ಆಗಸ್ಟ್ 15 ರಂದು ಬ್ರಹತ್ ಪ್ರತಿಭಟನಾ ಸಮ್ಮೇಳನವನ್ನು ಮಾಡಿ ಇನ್ನು ಮೇಲೆ ದಲಿತರು ದನಗಳ ಶವವನ್ನು ಎತ್ತುವುದಿಲ್ಲ, ಹಸುವಿನ ಚರ್ಮ ಸುಲಿಯುವುದಿಲ್ಲ ಅದನ್ನೆಲ್ಲಾ ಮೇಲ್ವರ್ಗದವರೇ ಮಾಡಿಕೊಳ್ಳಲಿ ಎಂದು ಶಪಥ ಮಾಡಿದರು. ಮುಸ್ಲಿಂ ಸಮುದಾಯದಿಂದ ಈ ರೀತಿ ಪ್ರತಿಭಟನೆಯಾಗಬಹುದು, ಆಗ ಅದಕ್ಕೆ ಕೋಮುವಾದಿ ಬಣ್ಣ ಬಳಿದು, ದೇಶಾದ್ಯಂತ ಗಲಭೆ ಎಬ್ಬಿಸಿ, ಹಿಂದೂಗಳನ್ನು ಮುಸ್ಲಿಂರ ಮೇಲೆ ಎತ್ತಿಕಟ್ಟಿ ತಮ್ಮ ಕಲ್ಪನೆಯ ಹಿಂದೂ ರಾಷ್ಟ್ರದ ಬುಡವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದ ಸಂಘಪರಿವಾರಿಗಳಿಗೆ ಆಘಾತವಾಗಿದ್ದು ದಲಿತರು ದಂಗೆ ಎದ್ದದ್ದನ್ನು ನೋಡಿ. ಅದೂ ಸ್ವಾತಂತ್ರ್ಯೋತ್ಸವ ದಿನದಂದು ದೇಶಪ್ರೇಮದ ಬಹಿರಂಗ ವೈಭವೀಕರಣದ ಪ್ರದರ್ಶನ ದೇಶಭಕ್ತರಿಂದ ನಡೆಯುತ್ತಿರುವ ಸಂದರ್ಭದಲ್ಲಿ. ದಲಿತ ಸಮುದಾಯದ ಮೇಲೆ ಗೋಮಾತೆಯ ಹೆಸರಲ್ಲಿ ಪರಿವಾರ ಪ್ರೇರಿತ ಗೋರಕ್ಷಕ ಪಡೆ ಅಲ್ಲಲ್ಲಿ ಹಲ್ಲೆ ನಡೆಸುವುದು ಕಳೆದ ಎರಡು ವರ್ಷಗಳಿಂದ ನಡೆಯುತ್ತಲೇ ಬಂದಿತ್ತು. ದೇಶದ ಮೂಲ ಶ್ರಮಜೀವಿಗಳಾದ ದಲಿತರನ್ನು ಎದುರು ಹಾಕಿಕೊಂಡು ತಮ್ಮ ಸ್ವಪ್ನ ಸಾಮ್ರಾಜ್ಯವನ್ನು ಕಟ್ಟುವುದು ಮನುವಾದಿ ಸಂತಾನಕ್ಕೆ ಸಾದ್ಯವೇ ಇಲ್ಲ. ಯಾಕೆಂದರೆ ದೇಶದ ಜನಸಂಖ್ಯೆಯಲ್ಲಿ ಅತೀ ಹೆಚ್ಚು ಇರುವವರೇ ದಲಿತರು ತದನಂತರ ಮುಸ್ಲಿಂರು. ಇತ್ತೀಚೆಗೆ ನಡೆದ ಕರ್ನಾಟಕದ ಜಾತಿಗಣತಿಯಲ್ಲಿ ಇದು ದೃಢಪಟ್ಟಿದೆ. ಮುಸ್ಲಿಂ ಸಮುದಾಯದ ವಿರುದ್ದ ಹಿಂದೂಗಳನ್ನು ಎತ್ತಿಕಟ್ಟುವ ಹಿಂದೂವಾದಿಗಳ ಹುನ್ನಾರಕ್ಕೆ ಪ್ರತಿಯಾಗಿ ಯಾವಾಗ ದಲಿತ ಸಮುದಾಯ ಎದ್ದು ನಿಂತಿತೋ ಆಗ ಡ್ಯಾಮೇಜ್ ಕಂಟ್ರೋಲ್ ಮಾಡಲು ಸ್ವತಃ ಪ್ರಧಾನಿಯೇ ಟೌನ್‌ಹಾಲ್ ಕಾರ್ಯಕ್ರಮದಲ್ಲಿ ನಕಲಿ ಗೋರಕ್ಷಕರನ್ನು ಶಿಕ್ಷಿಸಬೇಕು ಹಾಗೂ ದಲಿತರನ್ನು ಕೊಲ್ಲುವ ಮೊದಲು ನನ್ನನ್ನು  ಕೊಲ್ಲಿ ಎಂದು ಹೇಳಬೇಕಾಯಿತು. ಪ್ರಧಾನಿಯ ಬಾಯಲ್ಲಿ ಇಂತಹ ಹೇಳಿಕೆ ಹೇಳಿಸಿ ದಲಿತರ ಕೋಪವನ್ನು ತಣ್ಣಗಾಗಿಸುವ ಪ್ರಯತ್ನವನ್ನು ಬಿಜೆಪಿ ಬ್ರೇನ್ ಆರೆಸ್ಸೆಸ್ ಮಾಡಿತು. ಆದರೂ ಅದೇನೂ ಅಷ್ಟೊಂದು ಪರಿಣಾಮಕಾರಿಯಾಗಿ ವರ್ಕಔಟ್ ಆಗಲಿಲ್ಲ. ದಲಿತರು ದನಗಳ ಶವ ಎತ್ತುವುದಿಲ್ಲ ಎಂದು ಪ್ರತಿಭಟನೆಗಿಳಿದರು. ಜೊತೆಗೆ ತಮಗೆ ಐದು ಎಕರೆ ಭೂಮಿ ಬೇಕೆಂದು ಡಿಮಾಂಡ್ ಮಾಡತೊಡಗಿದರು.



ತಾವು ಬಿಟ್ಟ ಗೋವಿನಾಸ್ತ್ರ ಹೀಗೆ ಬೂಮರಾಂಗ್ ರೀತಿಯಲ್ಲಿ ತಮಗೇ ವಾಪಸ್ ಬಂದು ತಮ್ಮ ಬುಡವನ್ನೇ ಅಲ್ಲಾಡಿಸತೊಡಗಿದ್ದನ್ನು ಕಂಡು ಕಂಗಾಲಾದ ಪರಿವಾರ ಪಡೆ ಅದಕ್ಕೆ ಪ್ರತಿಯಾಗಿ ತನ್ನ ಇನ್ನೊಂದು ಪ್ರಸಿದ್ದ ದೇಶಭಕ್ತಿ ಎನ್ನುವ ಮೇನಿಯಾಸ್ತ್ರವನ್ನು ಪ್ರಯೋಗಿಸತೊಡಗಿತು. ಜನರಲ್ಲಿ ದೇಶಭಕ್ತಿಯ ಉನ್ಮಾದವನ್ನು ಹುಟ್ಟಿಸಿ ದಲಿತರ ಆಕ್ರೋಶವನ್ನು ಡೈವರ್ಟ ಮಾಡುವುದು ಹಾಗೂ ಮುಸ್ಲಿಂ ವಿರೋಧಿ ಭಾವನೆ ಕೆರಳಿಸುವುದು ಸಂಘಿಗಳ ತಂತ್ರವಾಯಿತು. ಇದರ ಭಾಗವಾಗಿಯೇ ವರ್ಷಕ್ಕೊಂದು ದಿನಕ್ಕೆ ಸೀಮಿತವಾಗಿದ್ದ ಸ್ವಾತಂತ್ರೋತ್ಸವವನ್ನು ಹದಿನೈದು ದಿನಕ್ಕೆ ವಿಸ್ತರಿಸಿ ಬಿಜೆಪಿ ತಿರಂಗಾ ಯಾತ್ರೆಯನ್ನು ಆರಂಭಿಸಲಾಯಿತು. ದೇಶಪ್ರೇಮದ ಹೆಸರಲ್ಲಿ ದೇಶವಿರೋಧಿ ಸನ್ನಿವೇಶಗಳನ್ನು ಸೃಷ್ಟಿಸಿ ಆ ಮೂಲಕ ಜನರಲ್ಲಿ ಸಂಘಪರಿವಾರಿಗಳ ದೇಶಭಕ್ತಿಯನ್ನು ಮನದಟ್ಟುಮಾಡಿಕೊಡಬೇಕು ಎನ್ನುವ ಆಟವನ್ನು ಸಂಘಿಗಳು ಶುರುಮಾಡಿದರು. ಅದಕ್ಕೆ ಒಂದು ಲೇಟೆಸ್ಟ್ ಉದಾಹರಣೆ ಯುನೈಟೆಡ್ ಥಿಯೋಲಾಜಿಕಲ್ ಕಾಲೇಜಿನ ಪ್ರಕರಣ.

ಬೆಂಗಳೂರಿನ ಕಂಟೋನ್ವೆಂಟಿನಲ್ಲಿರುವ ಯುನೈಟೆಡ್ ಥಿಯೋಲಾಜಿಕಲ್ ಕಾಲೇಜಿನಲ್ಲಿ 'ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ' ಎನ್ನುವ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಯು 2916 ಆಗಸ್ಟ್ 13ರಂದು ಕಾಶ್ಮೀರಿ ಸಂತ್ರಸ್ತರ ಪರವಾಗಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು. ಅದರಲ್ಲಿ ಭಾರತೀಯ ಸೈನ್ಯವು ತಮ್ಮ ಮೇಲೆಸೆಗಿದ ದೌರ್ಜನ್ಯದ ಬಗ್ಗೆ ಸಂತ್ರಸ್ತರು ತಮ್ಮ ನೋವನ್ನು ವ್ಯಕ್ತಪಡಿಸಿ ಸೈನ್ಯದ ದಬ್ಬಾಳಿಕೆ ವಿರೋಧಿಸಿ, ಪ್ರತ್ಯೇಕ ಕಾಶ್ಮೀರವನ್ನು ಸಮರ್ಥಿಸಿ ಘೋಷಣೆ ಕೂಗಿದರು. ಇಂತಹುದೇ ಒಂದು ಸಣ್ಣ ಸುಳಿವಿಗಾಗಿ ಹಪಹಪಿಸುತ್ತಿದ್ದ ಸಂಘಪರಿವಾರದ ವಿದ್ಯಾರ್ಥಿ ಸಂಘಟನೆ ಎಬಿವಿಪಿಯ ಸದಸ್ಯರು ಆಹ್ವಾನವಿಲ್ಲದೇ ಆ ಸಭೆಗೆ ಪ್ರವೇಶಿಸಿ, ದೇಶದ್ರೋಹವೆಂದು ಗುಲ್ಲೆಬ್ಬಿಸಿ, ಅದನ್ನೊಂದು ದೊಡ್ಡ ಇಸ್ಯೂ ಮಾಡಿ ಬೀದಿಗಿಳಿಯಿತು. ಹಿಂದೂ ಮುಂದೂ ಯೋಚಿಸದ ಕರ್ನಾಟಕದ ಪೊಲೀಸರು ಅಕ್ರಮ ಸಭೆ, ರಾಷ್ಟ್ರದ್ರೋಹ ಹಾಗೂ ಗಲಭೆಗೆ ಪ್ರಚೋದನೆ ಆರೋಪದಲ್ಲಿ ಸಂಸ್ಥೆಯ ಮೇಲೆ ಮೊಕದ್ದಮೆ ದಾಖಲಿಸಿದರು. ಅಸಲಿಗೆ ಅಲ್ಲಿ ನಡೆದದ್ದೇನು? ಯಾಕೆ ನಡೆಯಿತು? ಎನ್ನುವುದನ್ನು ತಿಳಿದುಕೊಳ್ಳುವ ತಾಳ್ಮೆಯೂ ಇಲ್ಲದ ಟಿವಿ ವಾಹಿನಿಗಳು ದೇಶಭಕ್ತರ ಉನ್ಮಾದದ ಕಿಚ್ಚಿಗೆ ಸೀಮೆಎಣ್ಣೆ ಸುರಿಯತೊಡಗಿದವು. ವಿಷಯವೇ ಅಲ್ಲದ ವಿಷಯ ಅಂತರಾಷ್ಟ್ರೀಯ ಸುದ್ದಿಯಾಗಿ ನಕಲಿ ದೇಶಭಕ್ತರಿಗೆ ಹಬ್ಬವಾಯಿತು. ಕಾಶ್ಮೀರಿ ಸಂತ್ರಸ್ತರೆಲ್ಲಾ ಮುಸ್ಲಿಂ ಸಮುದಾಯದವರಾಗಿದ್ದರಿಂದ ಈ ದೇಶಭಕ್ತರಿಗೆ ತಮ್ಮ ಅದಮ್ಯ ದೇಶಭಕ್ತಿಯನ್ನು ತೋರಿಸಲು ಅವಕಾಶವಾಯಿತು.


ಅಸಲಿಗೆ ಈ ನಕಲಿ ದೇಶಭಕ್ತರ ಕುಟುಂಬ ಸದಸ್ಯರೇನಾದರೂ ಸೈನಿಕರ ದೌರ್ಜನ್ಯಕ್ಕೆ ಒಳಗಾಗಿದ್ದರೆ ಇವರೂ ಸೈನೈದ ದಾದಾಗಿರಿಯ ವಿರುದ್ದ ದಿಕ್ಕಾರ ಕೂಗುತ್ತಿದ್ದರು. ಯಾಕೆಂದರೆ ಯಾವುದೇ ದೇಶದ ಸೈನ್ಯವಿರಲಿ ಅದು ದೇಶ ರಕ್ಷಿಸುವ ಜೊತೆಗೆ ಅವಕಾಶ ಸಿಕ್ಕಾಗಲ್ಲೆಲ್ಲಾ ಪ್ರತಿಭಟಿಸಿದ ಜನಸಾಮಾನ್ಯರ ಮೇಲೆ ದಬ್ಬಾಳಿಕೆ ಮಾಡುತ್ತಲೇ ಇರುತ್ತದೆ. ಕಾಶ್ಮೀರದಲ್ಲೂ ಸಹ ಭಯೋತ್ಪಾದಕರ ಹುಟ್ಟಡಗಿಸುತ್ತಲೇ ಅಲ್ಲಿಯ ನಿವಾಸಿಗಳ ಮೇಲೆ ಅಪಾರವಾದ ದೌರ್ಜನ್ಯವೆಸಗಿದೆ. ಸ್ವಾತಂತ್ರ್ಯಾ ನಂತರವೂ ಸಹ ಭಾರತೀಯ ಮಿಲಿಟರಿಯು ದೇಶದ ಅನೇಕ ಕಡೆ ಹೋರಾಟಗಳನ್ನು ಹತ್ತಿಕ್ಕುವಾಗ ಅಲ್ಲಿಯ ಜನರನ್ನು ಹಿಂಸಿಸಿದೆ, ಎನ್‌ಕೌಂಟರ್ ಹೆಸರಲ್ಲಿ ಹತ್ಯೆಗಳನ್ನೂ ಮಾಡಿದೆ. ಮಹಿಳೆಯರ ಮೇಲೆ ಅತ್ಯಾಚಾರವೆಸಗಿದೆ. ದೇಶರಕ್ಷಣೆಗಿರುವ ಸೈನ್ಯ ಎಂದ ಕೂಡಲೇ ಅದು ಯಾರ ಮೇಲೆ ಅದೆಷ್ಟೇ ದೌರ್ಜನ್ಯ ಮಾಡಿದರೂ ಸಹಿಸಿಕೊಳ್ಳುವುದು ದೇಶಭಕ್ತಿ ಎನ್ನುವುದಾದರೆ ಅಂತಹ ದೇಶಭಕ್ತಿಗೆ ದಿಕ್ಕಾರವಿರಲಿ. ದೌರ್ಜನ್ಯಕ್ಕೊಳಗಾಗಿ ಎಲ್ಲವನ್ನೂ ಕಳೆದುಕೊಂಡು ಸಂತ್ರಸ್ತರಾದವರು ಮಿಲಿಟರಿ ವಿರುದ್ದ ಆಕ್ರೋಶಗೊಳ್ಳಬಾರದು, ಸೈನ್ಯದ ದೌರ್ಜನ್ಯದ ವಿರುದ್ದ ಧಿಕ್ಕಾರ ಕೂಗಬಾರದು ಎಂದುಕೊಳ್ಳುವುದೇ ಅಮಾನವೀಯವಾದದ್ದು. ತನ್ನದೇ ದೇಶದ ಜನತೆಯ ಮೇಲೆ ಅಮಾನವೀಯ ಕೃತ್ಯ ನಡೆಸಲು ಸೈನ್ಯವನ್ನು ಬಳಸುವ ದೇಶ ಯಾವುದೇ ಆದರೂ ಅದು ಖಂಡನೀಯವಾದದ್ದು. ಅಂತಹ ದೇಶದ ವಿರುದ್ದ ಘೋಷಣೆ ಕೂಗಿದರೆ ಅದು ದೇಶದ್ರೋಹವಾಗುತ್ತದೆ. ಅದೇ ದೇಶದ ಸೈನ್ಯ ಅವೇಳೆಯಲ್ಲಿ ಮನೆಮನೆ ಹೊಕ್ಕು ಸಿಕ್ಕವರ ಮೇಲೆ ದೌರ್ಜನ್ಯವೆಸಗಿದರೆ ಅದು ದೇಶಭಕ್ತಿಯಾಗುತ್ತದೆಯಾ?. ಸೈನ್ಯದ ಹಿಂಸೆಯಿಂದ ಸಂತ್ರಸ್ತರಾದ ಕಾಶ್ಮೀರದ ಜನತೆಯ ಪರವಾಗಿ ಮಾನವ ಹಕ್ಕು ಸಂಘಟನೆಗಳು ಸಭೆ ನಡೆಸುವುದು ದೇಶದ್ರೋಹವೆನ್ನುವುದಾದರೆ ಈ ದೇಶದಲ್ಲಿ ಅನ್ಯಾಯವನ್ನು ವಿರೋಧಿಸುವ ಎಲ್ಲಾ ಹೋರಾಟಗಳೂ ದೇಶದ್ರೋಹವಾಗಬೇಕಾಗುತ್ತದೆ. ಶೋಷಣೆ ಮಾಡುವ ಸರಕಾರದ ವಿರುದ್ಧ, ಅಸಮಾನತೆಯನ್ನು ಪೋಷಿಸುವ ದೇಶದ ವಿರುದ್ದ ಘೋಷಣೆ ಕೂಗಿದರೆ ಅದು ದೇಶಭಕ್ತ ಸಂಘಿಗಳಿಗೆ ಅಪರಾಧವೆನಿಸುತ್ತದೆ.

ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದರದು ದೇಶದ್ರೋಹ ಎನ್ನುವುದು ಎಬಿವಿಪಿ ಆರೋಪ. ಜೆಎನ್‌ಯು ಕಾಲೇಜಿನಲ್ಲೂ ಸಹ ಇದೇ ಆರೋಪ ಮಾಡಿ ಕನ್ಹಯ್ಯಕುಮಾರ್ ಹಾಗೂ ಇತರ ಎಡಪಂಥೀಯ ವಿದ್ಯಾರ್ಥಿಗಳನ್ನು ದೇಶದ್ರೋಹಿಗಳೆಂದು ಸಾಬೀತುಮಾಡಲು ಹೋಗಿ ಸಂಘಪರಿವಾರ ಮುಖಭಂಗ ಮಾಡಿಕೊಂಡಿತ್ತು. ಆದರೂ ಬುದ್ದಿ ಕಲಿಯದೇ ಮತ್ತೆ ಕಾಲೇಜಿನಲ್ಲಿ ದೇಶದ್ರೋಹದ ಹೆಸರಲ್ಲಿ ಗಲಭೆ ಸೃಷ್ಟಿಸಿ ಕೋಮುಪ್ರಚೋದನೆ ಮಾಡುವ ಹುನ್ನಾರ ಮಾಡಿತು. ಏನೂ ಗೊತ್ತಿಲ್ಲದ ಜನರೂ ಸಹ ದೇಶದ್ರೋಹ ಎಂದ ಕೂಡಲೇ ಉನ್ಮಾದಕ್ಕೆ ಒಳಗಾಗುತ್ತಾರೆ ಹಾಗೂ ಆ ರೀತಿಯ ಉನ್ಮಾದವನ್ನು ಸೃಷ್ಟಿಸಲು ಮನುವಾದಿ ಮನಸ್ಥಿತಿಯವರು ಮಾಧ್ಯಮಗಳಲ್ಲಿ ತುಂಬಿದ್ದಾರೆ. ಇಷ್ಟಕ್ಕೂ ಯಾವುದೇ ದೇಶಕ್ಕೆ ಗೆಲುವಾಗಲಿ ಎನ್ನುವುದು ದೇಶದ್ರೋಹ ಹೇಗಾದೀತು? ಇದೇ ಸಂಘಪರಿವಾರದ ಭಾಗವೇ ಆದ ಶ್ರೀಶ್ರೀ ರವಿಶಂಕರ ಗುರೂಜಿ ಯೋಗ ಸಮ್ಮೇಳನದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಬಹಿರಂಗವಾಗಿ ಘೋಷಿಸಿದಾಗ ಈ ಸಂಘಿಗಳು ಯಾಕೆ ಮೂರು ಮುಚ್ಚಿಕೊಂಡು ಸುಮ್ಮನಿದ್ದರು. ಆಗ ಇವರ ದೇಶಭಕ್ತಿ ರಜೆಮೇಲೆ ಹೋಗಿತ್ತಾ?  ಅಮೇರಿಕ ಜಿಂದಾಬಾದ್ ಎಂದಿದ್ದರೆ ಇವರಿಗೆ ಏನೂ ಅನ್ನಿಸುತ್ತಿರಲಿಲ್ಲವೇನೋ.. ಆದರೆ ಪಾಕಿಸ್ತಾನ್ ಜಿಂದಾಬಾದ ಎಂದ ತಕ್ಷಣ ಇವರ ಪಂಚೇಂದ್ರಿಯಗಳು ಕುದಿಯಲು ತೊಡಗುತ್ತವೆ. ಇಂತಹ ಮನೋಭಾವನೆಯೇ ದ್ವೇಷವನ್ನು ಬೆಳೆಸುವುದು. ಸಂಘಿಗಳಿಗೆ ಅದೇ ಬೇಕಿದೆ. ಹಿಂದುಸ್ತಾನ್ ಮುರ್ದಾಬಾದ ಅಂದರೆ ದೇಶದ್ರೋಹ ಎನ್ನಬಹುದು. ಆದರೆ.. ಬೇರೆ ದೇಶಗಳಿಗೆ ಜಯವಾಗಲಿ ಎಂದು ಬಯಸುವುದರಲ್ಲಿ ತಪ್ಪೇನಿದೆ.

ಪಾಕಿಸ್ತಾನದ ಬಲೂಚಿಸ್ತಾನ್, ಗಿಲ್ಗಿಟ್, ಬಲ್ವಿಸ್ತಾನ್ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಜನತೆ ಪಾಕಿಸ್ತಾನದ ಮಿಲಿಟರಿಯ ದೌರ್ಜನ್ಯದಿಂದ ತತ್ತರಿಸಿದ್ದಾರೆ. ಪಾಕಿಸ್ತಾನದಿಂದಲೇ ಪ್ರತೇಕಗೊಳ್ಳುವ ಹೋರಾಟ ಮಾಡುತ್ತಿದ್ದಾರೆ. ಅದಕ್ಕೆ ನಮ್ಮ ಪ್ರಧಾನಿ ಮೋದಿಯವರು ಆಗಸ್ಟ್ 15ರ ಭಾಷಣದಲ್ಲಿ ಬೆಂಬಲ ವ್ಯಕ್ತಪಡಿಸಿದ ಕೂಡಲೇ ಸಂಘಪರಿವಾರದ ದೇಶಭಕ್ತರು ಕುಣಿಕುಣಿದಾಡಿದರು. ಮಾಧ್ಯಮಗಳು ಪ್ರಧಾನಿಯನ್ನು ಹಾಡಿಹೊಗಳಿದವು. ಬಲೂಚಿಸ್ತಾನದ ಸಂತ್ರಸ್ತ ಜನ ಮೋದಿಗೆ ಧನ್ಯವಾದ ಹೇಳಿದರು. ಹಾಗಾದರೆ ಆ ಪ್ರದೇಶದ ಜನರೆಲ್ಲಾ ದೇಶದ್ರೋಹಿಗಳು ಅಂದ ಹಾಗಾಯ್ತು. ಬೇರೆ ದೇಶದ ದೇಶದ್ರೋಹಿಗಳು ಈ ದೇಶದ ನಕಲಿ ದೇಶಭಕ್ತರ ಪಾಲಿಗೆ ದೇಶಪ್ರೇಮಿಗಳಾಗಿ ಹೋದರಾ? ಎರಡೂ ದೇಶಗಳಲ್ಲಿ ಹಂಚಿಹೋದ ಕಾಶ್ಮೀರಗಳಲ್ಲಿ ಸೈನ್ಯದ ದೌರ್ಜನ್ಯದಿಂದ ನೊಂದವರು ತಮ್ಮ ಮೇಲೆ ದಬ್ಬಾಳಿಕೆ ಮಾಡಿದ ದೇಶದ ಮೇಲೆ ಆಕ್ರೋಶ ಹೊಂದಿದ್ದು ಸಹಜವಾಗಿದೆ. ನಾವೆಷ್ಟೇ ದೌರ್ಜನ್ಯ ಮಾಡಿದರೂ ನೀವು ಸೈನ್ಯದ ಬಗ್ಗೆ, ದೇಶದ ಬಗ್ಗೆ ಮಾತಾಡಬಾರದು ಎಂದು ಆಜ್ಞೆ ಹೊರಡಿಸಿ ದೇಶಭಕ್ತಿಯನ್ನು ಹುಟ್ಟುಹಾಕಲು ಸಾಧ್ಯವಿದೆಯಾ? ಸಂತ್ರಸ್ತರಿಗೆ ಬೇಕಾಗಿರುವುದು ಯಾವ ದೇಶವೆಂಬುದಲ್ಲ. ಅವರಿಗೆ ನೆಮ್ಮದಿಯಾಗಿ ಬದುಕುವ ಸ್ವಾತಂತ್ರ್ಯ ಬೇಕಿದೆ. ಅದನ್ನು ಕೊಡಲು ಈ ದೇಶ ವಿಫಲವಾದರೆ ಅವರು ದೇಶದ ವಿರುದ್ಧ ತಿರುಗಿ ಬೀಳುತ್ತಾರೆ ಎನ್ನುವ ಸಾಮಾನ್ಯ ಅರಿವೂ ಈ ದೇಶಭಕ್ತರಿಗಿಲ್ಲ. ಅದು ಅವರಿಗೆ ಬೇಕಾಗೂ ಇಲ್ಲ.

ಆಗಸ್ಟ್ 14 ರ ರಾತ್ರಿ  ತುಮಕೂರಿನಲ್ಲಿ ನಡೆದ ಇನ್ನೊಂದು ಪುಟ್ಟ ಘಟನೆ ಹೀಗಿದೆ. ಗೃಹಸಚಿವರಾದ ಪರಮೇಶ್ವರ್ ಒಡೆತನದ ಎಸ್‌ಎಸ್‌ಐಟಿ ಎನ್ನುವ ಕಾಲೇಜು ತುಮುಕೂರಿನಲ್ಲಿದೆ. ಅಂದು ಮಧ್ಯರಾತ್ರಿ ಮದ್ಯಸೇವನೆ ಮಾಡಿದ ಇಂಜನೀಯರಿಂಗ್ ವಿದ್ಯಾರ್ಥಿ ಪ್ರವೀಣ್ ಸಿಂಗ್ ಹಾಗೂ ಗೆಳೆಯರು ತಮಾಷೆಗಾಗಿಯೋ ಕುಡಿತದ ಅಮಲು ಹೆಚ್ಚಾಗಿದ್ದಕ್ಕೋ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆಂದು ಸೆಕ್ಯೂರಿಟಿ ಗಾರ್ಡ ಹೇಳುತ್ತಿದ್ದಾನೆಂಬ ವದಂತಿಯನ್ನು ಸಂಘಿಗಳು ಹಬ್ಬಿಸಿದರು. ಹೀಗೆ ಘೋಷಣೆ ಕೂಗಿದರೆಂದು ಪೊಲೀಸರ ವಶಕ್ಕೆ ಪಡೆಯಲಾದ ಈ ವಿದ್ಯಾರ್ಥಿಗಳು ಬಿಹಾರ ಹಾಗೂ ಕಾಶ್ಮೀರ ಮೂಲದವರು. ಅವರು ಯಾರಾದರೂ ಆಗಿರಲಿ ಪಾಕಿಸ್ತಾನ್ ಜಿಂದಾಬಾದ್ ಎಂದರೆ ಅದು ಹಿಂದುಸ್ತಾನ್ ಮುರ್ದಾಬಾಧ್ ಎಂದ ಹಾಗೆ ಅನ್ನಿಸುತ್ತದೆಯೇ?. ಒಂದು ಮನೆಯವರು ಇನ್ನೊಂದು ಮನೆಯವರಿಗೆ ಒಳ್ಳೆಯದಾಗಲಿ ಎಂದು ಬಯಸಲೇ ಬಾರದೇ? ಎಂತಹ ಸಂಕುಚಿತ ಮನಸ್ಸುಗಳಿವು. ವಿಚಿತ್ರವೆಂದರೆ ನಮ್ಮ ಪೊಲೀಸರು ಈ ಹುಡುಗರ ಮೇಲೆ ದೇಶವಿರೋಧಿ ಘೋಷಣೆ ಕೂಗಿರುವ ಆರೋಪ ಹೊರೆಸಿ ಆರೆಸ್ಟ್ ಮಾಡಿ ಪ್ರವೀಣ್ ಸಿಂಗ್ ವಿರುದ್ದ ಪ್ರಕರಣವನ್ನೂ ದಾಖಲಿಸಿದ್ದಾರೆ. ಸಂಘಪರಿವಾರಿಗಳು ಬೀದಿಗೆ ಬಂದು ದೇಶದ್ರೋಹವೆಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಬೇರೆ ಯಾವುದೇ ದೇಶದ ಪರವಾಗಿ ಜಿಂದಾಬಾದ್ ಎನ್ನುವುದು ದೇಶದ್ರೋಹವಲ್ಲವೆನ್ನುವುದನ್ನು ಈ ಪೊಲೀಸರಿಗೆ ಯಾರು ತಿಳಿಸಿ ಹೇಳಬೇಕು. ಎಂದೂ ಒಂದು ದೇಶಕ್ಕೆ ಇನ್ನೊಂದು ದೇಶ ಶತ್ರುವಲ್ಲ. ಆಯಾ ದೇಶದ ಆಳುವ ವರ್ಗಗಳು ತಮ್ಮ ಸ್ವಾರ್ಥಕ್ಕೆ ದ್ವೇಷವನ್ನು ಬೆಳೆಸುತ್ತಾ ಬರುತ್ತವೆ. ಒಂದು ದೇಶವೆಂದರೆ ಕೇವಲ ಆಳುವ ವರ್ಗವಲ್ಲಾ, ಆ ದೇಶದಲ್ಲಿರುವ ಜನವಿರೋಧಿಗಳಲ್ಲ. ಆ ದೇಶದ ಸಮಸ್ತ ಜನತೆಯಾಗಿದ್ದಾರೆ. ಎಲ್ಲಾ ದೇಶದ ಬಹುಸಂಖ್ಯಾತ ದುಡಿಯುವ ಜನತೆ ಯಾವಾಗಲೂ ಶಾಂತಿ ಹಾಗೂ ಸೌಹಾರ್ಧತೆಯನ್ನೇ ಬಯುಸುತ್ತದೆ. ಆದರೆ.. ಆಳುವ ವರ್ಗಗಳು ಒಂದು ದೇಶವನ್ನು ಇನ್ನೊಂದು ದೇಶದ ಮೇಲೆ ಎತ್ತಿಕಟ್ಟಿ ತಮ್ಮ ನ್ಯೂನ್ಯತೆಗಳನ್ನು ಮುಚ್ಚಿಕೊಳ್ಳುತ್ತಾ ಬಂದಿವೆ. ಇದಕ್ಕೆ ಪಾಕಿಸ್ತಾನವಾಗಲಿ ಇಲ್ಲವೇ ಭಾರತವಾಗಲೀ ಹೊರತಲ್ಲ. ದೇಶಗಳ ದ್ವೇಷಕ್ಕೆ ಧರ್ಮದ ಹವಿಸ್ಸನ್ನು ಹಾಕುವ ಮತಾಂಧ ಶಕ್ತಿಗಳು ದೇಶಕ್ಕೆ ದೇಶವನ್ನೇ ಅಗ್ನಿಕುಂಡ ಮಾಡಿಬಿಡುತ್ತವೆ. ಭಾರತದಲ್ಲಿ ಈ ಕೆಲಸವನ್ನು ಸಂಘಪರಿವಾರ ಸಂಘಟಿತವಾಗಿ ಮಾಡುತ್ತಾ ನಕಲಿ ದೇಶಭಕ್ತರನ್ನು ಹುಟ್ಟುಹಾಕಿ, ದೇಶದ ನೆಮ್ಮದಿಯನ್ನು ಹಾಳುಮಾಡಿ. ತನ್ನ ಮನುವಾದಿ ಹಿಂದೂರಾಷ್ಟ್ರ ಸ್ಥಾಪನೆಯ ಕನಸನ್ನು ಕಾಣುತ್ತಿದೆ. ಇದೆಲ್ಲಾ ಗೊತ್ತಿಲ್ಲದ ಸಾಮಾನ್ಯ ಜನತೆ ದೇಶಭಕ್ತಿ ಇಲ್ಲವೇ ಗೋಭಕ್ತಿಯ ಭಾವಾತಿರೇಕಕ್ಕೆ ಒಳಗಾಗಿ ಈ ಸಂಘಪರಿವಾರಿಗಳ ತಂತ್ರದ ಭಾಗವಾಗುತ್ತಿದ್ದಾರೆ. ದೇಶಕ್ಕೆ ದೇಶವೇ ಒಳಗೊಳಗೆ ಅಸಹನೆಯಿಂದ ಕುದಿಯುತ್ತಿದೆ.

ದೇಶಭಕ್ತಿಯ ಉನ್ಮಾದವನ್ನು ಬಿತ್ತುತ್ತಿರುವ ಆರೆಸ್ಸೆಸ್ ಸಂಘಟನೆಯ ಗುಪ್ತಕಾರ್ಯಾಚರಣೆಗಳ ಸಮಗ್ರ ವಿವರ ಬೇಕಾದರೆ ಮಲಯಾಳಿ ಪುಸ್ತಕ ನರಕ ಸಾಕೇದತ್ತಿಲೆ ಉಳ್ಳರಗಳ್ ಓದಲೇಬೇಕು. 25 ವರ್ಷಗಳಷ್ಟು ಸುದೀರ್ಘ ಕಾಲ ಆರೆಸ್ಸೆಸ್ ಪ್ರಚಾರಕನಾಗಿದ್ದ ಕೇರಳದ ಕಣ್ಣೂರಿನ ಸುದೀಶ್ ಮಿನ್ನಿ ಎನ್ನುವವರು ತನ್ನ ಕರಾಳ ಅನುಭವವನ್ನು ತೆರೆದಿಟ್ಟು ಬರೆದ ಪುಸ್ತಕವಿದು. ಈ ಪುಸ್ತಕ ಪ್ರಕಟಗೊಂಡ ಎರಡೇ ವಾರದಲ್ಲಿ ಮೂರನೆಯ ಮುದ್ರಣ ಕಂಡು ಮಲಯಾಳಿ ಸಾಹಿತ್ಯದಲ್ಲಿ ಹೊಸ ದಾಖಲೆ ಬರೆದಿದೆ. ಈ ಪುಸ್ತಕದಲ್ಲಿ ಆರೆಸ್ಸೆಸ್‌ನ ಭಯೋತ್ಪಾದನೆ, ಕೋಮುವಾದಿತನ, ಕ್ರೌರ್ಯಗಳಾದಿ ಅಂತಪುರದ ರಹಸ್ಯಗಳನ್ನೆಲ್ಲಾ ಸ್ಪಷ್ಟ ಪುರಾವೆಗಳೊಂದಿಗೆ ಬಹಿರಂಗ ಪಡಿಸಲಾಗಿದೆ. ಆ ಪುಸ್ತಕದಲ್ಲಿ ಅದು ಹೇಗೆ ಯುವಕರ ಮೆದುಳಲ್ಲಿ ಕೋಮುಬೀಜ ಬಿತ್ತಿ ಜೀವವಿರೋಧಿ ಕೃತ್ಯಗಳಿಗೆ ಪ್ರೇರೇಪಿಸಲಾಗುತ್ತದೆಂಬುದು ದಾಖಲಾಗಿದೆ. ಕ್ಯಾಂಪಿನಲ್ಲಿ ಮುಸ್ಲಿಂರು, ಕ್ರೈಸ್ತರು ಹಾಗೂ ಕಮ್ಯೂನಿಸ್ಟರ ವಿರುದ್ದ ವಿಷವನ್ನು ಹೇಗೆಲ್ಲಾ ತುಂಬಲಾಗುತ್ತದೆ ಎಂಬುದನ್ನು ವಿವರಿಸಲಾಗಿದೆ. ಯುವಕರಿಗಾಗಿ ನಡೆಯುವ ತರಬೇತಿ ಕ್ಯಾಂಪ್‌ಗಳಲ್ಲಿ ಭಾಗವಹಿಸುವ ಸ್ವಯಂಸೇವಕರು ಅಲ್ಲಿಂದ ಹೋಗುವ ಮುನ್ನ ಪತ್ರವೊಂದನ್ನು ಬರೆದು ತಾನು ಊರಿಗೆ ಮರಳಿದ ನಂತರ ಮಾಡಿಸಬಹುದಾದ ಗಲಭೆಯಾದಿ ಸಂಘದ ಕಾರ್ಯಚಟುವಟಿಕೆಗಳನ್ನು ಬರೆದುಕೊಡುತ್ತಾರೆ. ಹಾಗೂ ಅದಕ್ಕೆ ತಗಲುವ ಖರ್ಚುವೆಚ್ಚದ ವಿವರಗಳನ್ನೂ ತಿಳಿಸಿ ಕಾರ್ಯಯೋಜನೆ ಹಾಗೂ ಹಣದೊಂದಿಗೆ ತಮ್ಮ ಊರುಗಳಿಗೆ ಮರಳುತಾರಂತೆ. ಊರಿಗೆ ಹೋದ ನಂತರ ದೇವಸ್ಥಾನದ ಮುಂದೆ ವ್ಯಾಪಾರ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿಯ ಮೇಲೆ ದಾಳಿ ಮಾಡಿ ಲೂಟಿ ಮಾಡುವುದು, ಹಸುವಿನ ತಲೆಯನ್ನು ಕಡಿದು ಯಾವುದಾದರೂ ದೇವಸ್ಥಾನದ ಮುಂದೆ ಹಾಕುವುದು.. ಹೇಗಾದರೂ ಮಾಡಿ ಕೋಮುದ್ವೇಷವನ್ನು ವ್ಯಾಪಕವಾಗಿ ಹುಟ್ಟುಹಾಕುವುದು.. ಹೀಗೆ ಮುಂತಾದ ಕೆಲಸಗಳಿಗೆ ಸ್ವಯಂಸೇವಕರುಗಳನ್ನು ಪ್ರೇರೇಪಿಸಿ ಬೇಕಾದ ಫಂಡ್‌ನ್ನು ವದಗಿಸಿ ಸಮಾಜವನ್ನು ಒಡೆಯುವ ಕೆಲಸವನ್ನು ನಿರಂತರವಾಗಿ ಮಾಡಲು ಪ್ರಚೋದಿಸಲಾಗುತ್ತದಂತೆ.  ಅಸಹಾಯಕ ಅನಾಥ ಮಕ್ಕಳ ಕುರಿತು ನಕಲಿ ವಿಡಿಯೋ ಮಾಡಿಸಿ ಅದನ್ನು ದೇಶ ವಿದೇಶದಲ್ಲಿರುವ ಸಂಘದ ಸಿಂಪಥೈಸರುಗಳಿಗೆ ತೋರಿಸಿ ಅಪಾರ ಪ್ರಮಾಣದ ಫಂಡ್ ಎತ್ತಲಾಗುತ್ತಿದೆಯಂತೆ. ಗುರುದಕ್ಷಿಣೆ ಹೆಸರಲ್ಲೂ ಕೊಟ್ಯಾಂತರ ಫಂಡ್ ಎತ್ತುತ್ತಿದ್ದಾರಂತೆ. ಜೊತೆಗೆ ಗಲಭೆಗಳನ್ನು ಸೃಷ್ಟಿಸಿ ಬ್ರಹತ್ ಪ್ರಮಾಣದ ಲೂಟಿ ನಡೆಸಿ ಹಣ ಸಂಪಾದಿಸುವುದನ್ನೂ ಸಹ ಆರೆಸ್ಸೆಸ್ ತನ್ನ ವರಮಾನದ ಮಾರ್ಗವಾಗಿ ಮಾಡಿಕೊಂಡಿದೆಯಂತೆ. ವಂಚನೆ ಸುಳ್ಳುವದಂತಿಗಳನ್ನೇ ಆರೆಸ್ಸೆಸ್‌ನವರು ತಮ್ಮ ಕಾರ್ಯಶೈಲಿಯನ್ನಾಗಿಸಿಕೊಂಡು ದೇಶವನ್ನು ಧರ್ಮದ ಆಧಾರದಲ್ಲಿ ಒಡೆದು ತಮ್ಮ ಮೂಲ ಉದ್ದೇಶದತ್ತ ಸಾಗುತ್ತಿದ್ದಾರೆ.. ಎನ್ನುವ ಹಲವಾರು ಸತ್ಯಗಳನ್ನು ಸುಧೀಶ್ ಮಿನ್ನಿ ತನ್ನ ಪುಸ್ತಕದಲ್ಲಿ ಬರೆದು ಆರೆಸ್ಸೆಸ್ ಮುಖವಾಡವನ್ನು ಬೆತ್ತಲಾಗಿಸಿದ್ದಾರೆ. ಇಂತಹ ಆರೆಸ್ಸೆಸ್ ಕ್ಯಾಂಪಗಳಲ್ಲಿ ತರಬೇತಾಗಿ ಬಂದವರಲ್ಲಿ ಕಾಲೇಜಿನ ಯುವಕರೂ ಬೇಕಾದಷ್ಟಿದ್ದಾರೆ. ಅವರು ತಮ್ಮ ಕಾಲೇಜು ಯುನಿವರ್ಸಿಟಿಗಳ ವಲಯದಲ್ಲಿ ಗಲಭೆ ಹಾಗೂ ಸುಳ್ಳು ವದಂತಿಗಳನ್ನು ಸೃಷ್ಟಿಸಿ ದೇಶಭಕ್ತಿಯ ಮೇನಿಯಾವನ್ನು ಹರಡುತ್ತಿದ್ದಾರೆ. ಇದಕ್ಕೆ ಜೆಎನ್‌ಯು ಕಾಲೇಜಿನಲ್ಲಾದ ಘಟನೆಗಳೇ ಉದಾಹರಣೆ. ಈಗ ಅದೇ ರೀತಿ ಆಮ್ನೆಸ್ಟಿ ಕಾಲೇಜಿನಲ್ಲೂ ಆಗಿದೆ. ಎಲ್ಲೇ ಆಗಲಿ ದೇಶಭಕ್ತಿಯನ್ನು ಸಾರುವಂತಹ ಇಲ್ಲವೇ ದೇಶದ್ರೋಹಿ ಎಂದು ಪಟ್ಟಕಟ್ಟಬಹುದಾದಂತಹ ಸುದ್ದಿಗಳಿಗಾಗಿ ಇಡೀ ಸ್ವಯಂಸೇವಕ ಪಡೆ ಜಾಲಾಡುತ್ತಿದೆ. ಚಿಕ್ಕ ಘಟನೆಗಳನ್ನು ದೊಡ್ಡದನ್ನಾಗಿಸಿ, ಅದಕ್ಕೆ ದೇಶದ್ರೋಹದ ಬಣ್ಣ ಬಳಿದು ದೇಶಭಕ್ತಿಯ ಗುತ್ತಿಗೆದಾರರಾಗಿ ಮೆರೆಯಲು ಸಂಘಪರಿವಾರ ಇನ್ನಿಲ್ಲದಂತೆ ಪ್ರಯತ್ನಿಸುತ್ತಲೇ ಇದೆ. ಇಂತಹ ಅವಿವೇಕಿತನಗಳಿಗೆ ವ್ಯಾಪಕ ಪ್ರಚಾರ ಕೊಡುವ ಕೆಲಸಗಳನ್ನು ಬಹುತೇಕ ಮಾಧ್ಯಮಗಳು ಮಾಡುತ್ತಿವೆ. ದೇಶದ ಜನತೆ ಎಲ್ಲವನ್ನೂ ಅಸಹನೆಯಿಂದಲೇ ನೋಡುತ್ತಿದೆ. ಶ್ರಮಜೀವಿ ವರ್ಗ ತಳಮಳಿಸುತ್ತಿದ್ದು ಅಲ್ಪಸಂಖ್ಯಾತರು ತಲ್ಲಣಗೊಂಡಿದ್ದಾರೆ.

ನಿಜವಾದ ದೇಶದ್ರೋಹಿಗಳು ಯಾರಾದರೂ ಇದ್ದರೆ ಅದು ಬೇರೆ ಯಾರಲ್ಲ ಇದೇ ಸಂಘಪರಿವಾರದವರೇ ಆಗಿದ್ದಾರೆ. ಯಾಕೆಂದರೆ ಅವರಿಗೆ ಈ ದೇಶದ ಸಂವಿಧಾನದ ಮೇಲೆ ವಿಶ್ವಾಸವಿಲ್ಲ. ಸ್ವಾತಂತ್ರ್ಯದ ಮೇಲೆ ಭಕ್ತಿಯಿಲ್ಲ. ಬಾವುಟದ ಮೇಲೆ ಗೌರವವಿಲ್ಲ. ಹಾಗೇನಾದರೂ ಗೌರವಾದರ ಇದ್ದಿದ್ದರೆ ಆರೆಸ್ಸೆಸ್ ಕೇಂದ್ರ ಕಛೇರಿಯ ಮೇಲೆ ಸ್ವಾತಂತ್ರ್ಯದ ದಿನವಾದರೂ ಭಾರತದ ಬಾವುಟ ಹಾರಾಡಬಹುದಾಗಿತ್ತು. ಆದರೆ ಇಲ್ಲಿವರೆಗೂ ಒಂದೇ ಒಂದು ಸಲವು ಭಾವುಟ ಹಾರಿಸಿಲ್ಲ. ಭಾರತದ ಭಾವುಟವನ್ನು ನಾವು ಒಪ್ಪುವುದಿಲ್ಲ ಎಂದು ಸಂಘದ ಅಧಿನಾಯಕರೇ ಹೇಳಿದ್ದಾರೆ. ಮೊನ್ನೆ ಆಗಸ್ಟ್ 15ರ ಸ್ವಾತಂತ್ರ್ಯ ದಿನವನ್ನು ಇಡೀ ದೇಶ ಸಂಭ್ರಮದಿಂದ ಆಚರಿಸುತ್ತಿದ್ದಾಗ ಸಂಘಪರಿವಾರದ ಇನ್ನೊಂದು ಅಂಗ ಹಿಂದೂ ಮಹಾಸಭಾ ಸ್ವಾತಂತ್ರ್ಯದ ದಿನವನ್ನು ಕರಾಳ ದಿನವನ್ನಾಗಿ ಆಚರಿಸಲು ಕರೆಕೊಟ್ಟಿತ್ತು. ಈಗ ಹೇಳಿ ನಿಜವಾದ ದೇಶದ್ರೋಹಿಗಳು ಯಾರು?   

ಈಗ ದೇಶಾದ್ಯಂತ ದಲಿತ ಸಂಘಟನೆಗಳು ಜಾಗೃತಗೊಂಡು ತಮ್ಮ ಮೇಲಿನ ದಮನವನ್ನು ವಿರೋಧಿಸಿ ತಮ್ಮ ಹಕ್ಕುಗಳನ್ನು ಸಮರ್ಥಿಸಿ ಪ್ರತಿಭಟನಾ ಸಮ್ಮೇಳನಗಳನ್ನು ಮಾಡಲು ನಿರ್ಧರಿಸಿವೆ. ಸಂಸತ್ತಿನ ಚಳಿಗಾಲದ ಅಧಿವೇಶನದ ಸಮಯದಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬ್ರಹತ್ ಸಮ್ಮೇಳನ ನಡೆಸಿ ಮೋದಿ ಸರಕಾರದ ನೀತಿಗಳನ್ನು  ಹಾಗೂ ಸಂಘಪರಿವಾರದ ದಮನವನ್ನು ಧಿಕ್ಕರಿಸಿ ಪ್ರತಿಭಟಿಸಲು ನಿರ್ಧರಿಸಿದ್ದಾರೆ.ಇತರ ರಾಜ್ಯಗಳಲ್ಲೂ ದಲಿತರ ವಿರುದ್ಧದ ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಿಸಲು ದಲಿತ ಸಂಘಟನೆಗಳು ಮುಂದಾಗಿವೆ. ಆಗಸ್ಟ್ ತಿಂಗಳಿಂದ ಡಿಸೆಂಬರ್ ಒಳಗಾಗಿ ಗುಜರಾತ್, ಉತ್ತರ ಪ್ರದೇಶ, ದಿಲ್ಲಿ, ಹರಿಯಾಣ, ಪಂಜಾಬ್, ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ ಹಾಗೂ ಓಡಿಶಾಗಳಲ್ಲಿ ಬ್ರಹತ್ ದಲಿತ ಸಮ್ಮೇಳನಗಳನ್ನು ನಡೆಸಲು ದಲಿತ ಸಂಘಟನೆಗಳು ನಿರ್ಧರಿಸಿವೆ. ದಲಿತರ ವಿರುದ್ಧದ ಹಿಂಸಾಚಾರ ಹಾಗೂ ತಾರತಮ್ಯ ನಿಲ್ಲ ಬೇಕು ಹಾಗೂ ರಾಷ್ಟ್ರೀಯ ಸಂಪನ್ಮೂಲಗಳ ಸಮಾನ ಹಂಚಿಕೆ ಆಗಬೇಕು ಎನ್ನುವ ಬೇಡಿಕೆಯನ್ನು ಇಟ್ಟುಕೊಂಡು ಕೇಂದ್ರ ಸರಕಾರಕ್ಕೆ, ಸಂಘಪರಿವಾರಕ್ಕೆ ಬಿಸಿ ಮುಟ್ಟಿಸಲು ಪೂರ್ವ ತಯಾರಿಗಳು ಆರಂಭಗೊಂಡಿವೆ. ದಲಿತ ಸಮ್ಮೇಳನದಲ್ಲಿ ಹತ್ತು ಲಕ್ಷ ಜನ ದಲಿತರನ್ನು ಸಂಘಟಿಸಿ ದೇಶಾದ್ಯಂತ ದಲಿತರಲ್ಲಿ ಜಾಗೃತಿ ಮೂಡಿಸಬೇಕೆಂಬುದು ದಲಿತ ಸಂಘಟನೆಗಳ ಉದ್ದೇಶವಾಗಿದೆ. ಶೋಷಣೆಯನ್ನು ಸಹಿಸಿಕೊಂಡು ಮಲಗಿದ್ದ ದಲಿತ ಸಮುದಾಯವನ್ನು ಎಚ್ಚೆತ್ತುಕೊಂಡು ನಿಲ್ಲುವಂತೆ ಮಾಡಿದ ಸಂಘಪರಿವಾರಕ್ಕೆ, ನಕಲಿ ಗೋರಕ್ಷಕರಿಗೆ ಧನ್ಯವಾದಗಳನ್ನು ಹೇಳಬೇಕಿದೆ. ದಲಿತರು, ದಮನಿತರು, ಶೋಷಿತರೆಲ್ಲಾ ತಮ್ಮ ಹಕ್ಕುಗಳನ್ನು ಪಡೆಯುವವರೆಗೂ ಅಹಿಂಸಾತ್ಮಕವಾದ  ಅಸಹಕಾರ ಹೋರಾಟ ಮುಂದುವರೆಸಿಕೊಂಡು ಹೋದಲ್ಲಿ ಆಳುವ ವರ್ಗಗಳನ್ನು ಮಣಿಸಬಹುದಾಗಿದೆ. ಸಮಾನತೆಯ ಗುರಿ ಮುಟ್ಟುವಲ್ಲಿ ಈ ದಲಿತ ಹೋರಾಟ ಮೆಟ್ಟಲಾಗಲಿ ಎನ್ನುವುದೇ ಪ್ರಗತಿಪರರ ಆಶಯವಾಗಿದೆ.     

                           -    ಶಶಿಕಾಂತ ಯಡಹಳ್ಳಿ



ಮಂಗಳವಾರ, ಆಗಸ್ಟ್ 16, 2016

ಸಾಗಿದೆ ಶ್ರಮಿಕರ ಸಂಗ್ರಾಮ...




1947, ಆಗಸ್ಟ್ 15 ಬ್ರಿಟಿಷ್ ವಸಾಹತುಶಾಹಿಗಳಿಂದ ಭಾರತಕ್ಕೆ ಅಧಿಕಾರ ಹಸ್ತಾಂತರವಾದ ದಿನ. ಅದರ ನೆನಪಿಗಾಗಿ ಮೊನ್ನೆ ಅತ್ತ ದೇಶಾದ್ಯಂತ ದೇಶಭಕ್ತರಿಂದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ನಡೆಯುತ್ತಿದ್ದರೆ, ಇತ್ತ ಗುಜರಾತಿನ ಅಹಮದಾಬಾದಿನ ಊನಾದಲ್ಲಿ ದಲಿತರು ಒಂದಾಗಿ ಭ್ರಹತ್ ಪ್ರತಿಭಟನಾ ರಾಲಿ ಏರ್ಪಡಿಸಿ ಸನಾತನವಾದಿಗಳು ಹಾಗೂ ಮೇಲ್ಚಾತಿವಾದಿಗಳ ಎದೆಯಲ್ಲಿ ಸಂಕಟದ
ಸಂಚಲನವನ್ನುಂಟು ಮಾಡಿದರು.


ದಲಿತವರ್ಗದ ಜನ ಎಷ್ಟೂಂತಾ ಸಹಿಸಿಯಾರು ಪ್ಯಾಸಿಸ್ಟ್ ಗಳ ದೌರ್ಜನ್ಯವನ್ನು. ಸನಾತನವಾದಿಗಳ ಗೋವಿನ ರಾಜಕೀಯಕ್ಕೆ ಅಲ್ಪಸಂಖ್ಯಾತರು ಹಾಗೂ ದಲಿತರು ಟಾರ್ಗೆಟ್ ಆಗಿದ್ದರು. ನಕಲಿ ಗೋರಕ್ಷಕರಿಂದ ದೇಶದ್ಯಂತ ದಲಿತರು ಹಾಡುಹಗಲೇ ಹಲ್ಲೆಗೊಳಗಾದರು, ಸಾರ್ವಜನಿಕವಾಗಿ ಕೊಲೆಯಾದರು. ತಮ್ಮ ಅಹಾರವನ್ನು ಕಿತ್ತುಕೊಂಡು ತಮ್ಮ ಮೇಲೆ ಧರ್ಮದ್ರೋಹದ ಆರೋಪ ಹೊರೆಸಿ ಅವಮಾನಿಸುತ್ತಿರುವ ಮೇಲ್ವರ್ಗದವರ ಮೇಲೆ ದಲಿತರ ಆಕ್ರೋಶ ಒಳಒಳಗೆ ಕುದಿಯುತ್ತಿತ್ತು. ಮೋದಿ ರಾಜ್ಯದ ದಲಿತ ಸಮುದಾಯ ಸಂಘಟಿತರಾದರು. ಗೋರಕ್ಷಕರ ಅತಿರೇಕದ ಪುಂಡಾಟದಿಂದ ಈಗ ಅವರ ಬುರುಡೆಗೆ ಬಿಸಿನೀರು ಕಾಯಿಸುವಂತಾಗಿದೆ.

ಆಗಸ್ಟ್ 15 ರಂದು ಊನಾದ ಸರಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಸಮಾವೇಶ ಸೇರಿದ ದಲಿತ ಶಕ್ತಿ "ಗೋವಿನ ಸಹವಾಸವೂ ಬೇಡಾ ಗೋರಕ್ಷಕರ ಉಸಾಬರಿಯೂ ಬೇಡಾ... ನಿಮ್ಮ ಗೋವು ನೀವೆ ಇಟ್ಟುಕೊಳ್ಳಿ.. ಗೋವಿನ ಚಾಕರಿ ಮಾಡೋದಿಲ್ಲ, ಸೆಗಣಿ ಬಳಿಯೋದಿಲ್ಲ, ಹಸುಗಳು ಸತ್ತರೂ ಚರ್ಮ ಸುಲಿಯೋದಿಲ್ಲ, ಹೆಣ ಎತ್ತೋದಿಲ್ಲ" ಎಂದು ಒಕ್ಕೋರಲಿನಿಂದ ಪ್ರತಿಜ್ಞೆ ಮಾಡಿದರು. ಶ್ರಮಜೀವಿಗಳಾದ ದಲಿತರು ಹತ್ತೇ ಹತ್ತು ದಿನ ಕೆಲಸ ಮಾಡೋದಿಲ್ಲ ಎಂದು ಸುಮ್ಮನೇ ಕುಳಿತರೆ ಸಾಕು ಇಡೀ ದೇಶಕ್ಕೆ ದೇಶವೇ ಅಲ್ಲಾಡಿಹೋಗುತ್ತದೆ. ಮೇಲ್ವರ್ಗದ ಜನ ಮಾಡಲು ಮುಜುಗರಪಟ್ಟುಕೊಳ್ಳುವ ಕೆಲಸಗಳನ್ನೆಲ್ಲಾ ಮಾಡಲು ದಲಿತರೇ ಬೇಕು. ಯಾವಾಗ ದಲಿತರು ಒಂದಾಗಿ ಕೆಲಸಾ ಮಾಡೋದಿಲ್ಲವೆಂದು ಶಪಥ ಮಾಡಿದರೋ ಆಗ ಮೇಲ್ವರ್ಗದವರ ಬೆನ್ನ ಹುರಿಯಲ್ಲಿ ಕಂಪನ ಆರಂಭವಾಗಿದೆ. ಸತ್ತ ದನಗಳನ್ನು ದಫನ್ ಮಾಡಲಾಗದೇ ಅವುಗಳ ಶವ ಬೀದಿಬೀದಿಯಲ್ಲಿ ಕೊಳೆತು ನಾರುವಾಗ ಮೇಲ್ವರ್ಗದವರು ಮೂಗು ಮತ್ತೊಂದು ಮುಚ್ಚಿಕೊಂಡು ಓಡಾಡುವಾಗ ಶ್ರಮಜೀವಿಗಳ ಅನಿವಾರ್ಯತೆಯ ಅರಿವು ಚೆನ್ನಾಗಿಯೇ ಆಗುತ್ತದೆ. ಗುಜರಾತಿನ ದಲಿತರ ಸಂಘಟನಾತ್ಮಕ ಹೋರಾಟವು ಈಗಾಗಲೇ ಗುಜರಾತಿನ ಮುಖ್ಯಮಂತ್ರಿಯನ್ನೇ ಬದಲಾಯಿಸಿದೆ. ಮೌನಿಬಾಬಾ ಮೋದಿ ಸಾಹೇಬರು ಮೌನ ಮುರಿದು ದಲಿತರ ಪರವಾಗಿ ಮಾತಾಡುವಂತೆ ಮಾಡಿದೆ.

ಅಸಮಾನತೆ ತುಂಬಿದ ಜಾತಿವ್ಯವಸ್ಥೆಯ ದೇಶದಲ್ಲಿ ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ. ಬಹುಸಂಖ್ಯಾತ ಶ್ರಮಿಕರು ಒಂದಾದಲ್ಲಿ ಅಲ್ಪಸಂಖ್ಯಾತ ಮೇಲ್ಜಾತಿಯವರು ಅಸಹಾಯಕರಾಗುವುದರಲ್ಲಿ ಸಂದೇಹವೇ ಇಲ್ಲ. ದಲಿತರ ಐತಿಹಾಸಿಕ ಐಕ್ಯತೆಗೆ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್, ವೇಮುಲರ ತಾಯಿ ರಾಧಿಕಾ, ಹಾಗೂ ಅಲ್ಪಸಂಖ್ಯಾತ ಮುಸ್ಲಿಂ ಬಳಗದವರು ಸಮಾವೇಶದಲ್ಲಿ ಪಾಲ್ಗೊಂಡು ದಲಿತ ಸಮುದಾಯದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ದಲಿತರಿಗೆ ಭೂಮಿಯ ಹಕ್ಕು ಪತ್ರ ಬೇಕೆ ಬೇಕೆಂದು ಸರಕಾರವನ್ನು ಒತ್ತಾಯಿಸಿದ್ದಾರೆ. ಶತಮಾನಗಳಿಂದ ಬ್ರಾಹ್ಮಣ ಬನಿಯಾ ಸಮೇತ ಮೇಲ್ಜಾತಿ ಜನರ ದೌರ್ಜನ್ಯಕ್ಕೆ ನಲುಗಿ ಹೋದ ದಲಿತ ಸಮುದಾಯ ತಮ್ಮ ಹಕ್ಕನ್ನು ಕೇಳುವುದರಲ್ಲಿ ತಪ್ಪೇನೂ ಇಲ್ಲ. ಅವರಿಗೆ ಭೂಮಿಯ ಹಕ್ಕು ಬೇಕು, ಆಹಾರದ ಹಕ್ಕು ಬೇಕು, ಎಲ್ಲರಂತೆ ಸ್ವತಂತ್ರವಾಗಿ ಸ್ವಾಭಿಮಾನದಿಂದ ಬದುಕುವ ಹಕ್ಕೂ ಬೇಕು. ಸಂವಿಧಾನ ಕೊಡಮಾಡಿದ ಎಲ್ಲಾ ಮೂಲಭೂತ ಹಕ್ಕುಗಳೂ ಶ್ರಮಿಕ ವರ್ಗಕ್ಕೆ ಬೇಕೆ ಬೇಕು. ಆದರೆ ಅವರಿಗೆ ಸಲ್ಲಬೇಕಾದ ಹಕ್ಕುಗಳನ್ನು ಧರ್ಮ ಹಾಗೂ ಜಾತಿಯ ಹೆಸರಲ್ಲಿ ಅತಿಕ್ರಮಣ ಮಾಡಿಕೊಂಡ ಮೇಲ್ವರ್ಗದವರ ಶೋಷಣೆ ಅಮಾನವೀಯವಾಗಿದೆ ಹಾಗೂ ಸಂವಿಧಾನ ವಿರೋಧಿಯಾಗಿದೆ. ಹೀಗಾಗ ತಮ್ಮ ಹಕ್ಕುಗಳಿಗಾಗಿ ದಲಿತರು, ಅಲ್ಪಸಂಖ್ಯಾತರು ಹೋರಾಟದ ಮಾರ್ಗ ಹಿಡಿದಿದ್ದರಲ್ಲಿ 'ಬದುಕಿಗಾಗಿ ಹೋರಾಟ' ಎನ್ನುವಂತಿದೆ.
ಗುಜರಾತಿನ ದಲಿತರ ಅಹಿಂಸಾತ್ಮಕವಾದ ಅಸಹಕಾರ ಹೋರಾಟ ದೇಶದ್ಯಂತ ಹಬ್ಬಿದರೆ ಜಾತಿ ವ್ಯವಸ್ಥೆ ಪಲ್ಲಟಗೊಳ್ಳುತ್ತದೆ. ಮೇಲ್ವರ್ಗದ ಜನತೆ ಶ್ರಮಜೀವಿಗಳ ಮುಂದೆ ಮಂಡಿ ಊರಬೇಕಾಗುತ್ತದೆ. ಶೋಷಿತರ ಹಕ್ಕುಗಳನ್ನು ಕೊಡಬೇಕಾಗುತ್ತದೆ. ಊನಾ ಹೋರಾಟದ ಫಲಶ್ರತಿ ನಮ್ಮ ರೈತಾಪಿ ಜನರಲ್ಲೂ ಜಾಗೃತಿಯನ್ನು ಮೂಡಿಸಬೇಕಿದೆ. ರೈತರಿಗೆ ಅಗತ್ಯವಾದ ಎಲ್ಲಾ ಸವಲತ್ತುಗಳು ಹಾಗೂ ಬೆಳೆಗೆ ನ್ಯಾಯವಾದ ಬೆಲೆ ಕೊಡದಿದ್ದರೆ ಬೆಳೆಯನ್ನೇ ಬೆಳೆಯೋದಿಲ್ಲ. ಬೆಳೆದರೂ ತಮ್ಮ ಮನೆಗೆ ಬೇಕಾದಷ್ಟು ಮಾತ್ರ ಎಂದು ಘೋಷಿಸಿ ದೇಶದ ರೈತರೆಲ್ಲಾ ಒಂದಾದರೆ ಸಾಕು ಇಡೀ ದೇಶಕ್ಕೆ ದೇಶವೇ ಆಹಾರವಿಲ್ಲದೇ ತಲ್ಲಣಿಸಿ ಆಳುವ ವರ್ಗಗಳು ರೈತರ ಕಾಲಮೇಲೆ ಬೀಳುತ್ತವೆ. ಅಂತಹುದೊಂದು ಬ್ರಹತ್ ಪ್ರತಿಭಟನೆ ದೇಶದ್ಯಂತ ದಲಿತರು, ರೈತರು, ಕಾರ್ಮಿಕರಿಂದ ನಡೆಯಬೇಕಿದೆ. ಇದಕ್ಕೆ ನಾಯಕತ್ವದ ಕೊರತೆಯೊಂದೆ ಶ್ರಮಿಕ ಜೀವಿಗಳ ಸಮಸ್ಯೆಯಾಗಿದೆ. ಆದರೆ.. ಬಿಜೆಪಿ ಪಕ್ಷಕ್ಕೆ, ಮೋದಿ ಸರಕಾರಕ್ಕೆ, ಸಂಘಪರಿವಾರಕ್ಕೆ ಧನ್ಯವಾದಗಳನ್ನು ಹೇಳಲೇಬೇಕಿದೆ. ಯಾಕೆಂದರೆ ಇವುಗಳು ತಮ್ಮ ದಮನಕಾರಿ ನೀತಿಗಳಿಂದಾಗಿ ಅಲ್ಲಲ್ಲಿ ನಾಯಕತ್ವವನ್ನು ಹುಟ್ಟುಹಾಕುತ್ತಿವೆ. ಜೆಎನ್ ಯು ದಲ್ಲಿ ವಿದ್ಯಾರ್ಥಿಗಳ ಹಕ್ಕನ್ನು ದಮನಿಸಲು ಹೋಗಿ ಕನ್ಹಯ್ಯ ಕುಮಾರನೆಂಬ ಯುವನಾಯಕ ಬೆಳಕಿಗೆ ಬಂದರೆ ಆಂದ್ರದ ಹೈದರಾಬಾದ್ ಯುನಿವರ್ಸಿಟಿಯ ಮೇಲ್ವರ್ಗದ ರಾಜಕೀಯಕ್ಕೆ ಆತ್ಮಹತ್ಯೆ ಮಾಡಿಕೊಂಡ ವೇಮುಲ ದಲಿತ ವರ್ಗದ ವಿದ್ಯಾರ್ಥಿ ಯುವಕ ಸಮೂಹವನ್ನು ಎಚ್ಚರಿಸಿದ. ಅದೇ ರೀತಿ ಈಗ ಗುಜರಾತ್ ದಲಿತರು ಒಂದಾಗಿ ಆಂದೋಲನಕ್ಕಿಳಿದರು. ಹೀಗೆ ಮನುವಾದಿಗಳ ಹಿಡನ್ ಅಜೆಂಡಾ ಯಾವಾಗ ದೇಶಭಕ್ತಿ, ಗೋಭಕ್ತಿ ಎನ್ನುವ ಹೆಸರಲ್ಲಿ ದಲಿತರನ್ನು ಅಲ್ಪಸಂಖ್ಯಾತರನ್ನು ತುಳಿದಾಳಲು ಆರಂಭಿಸಿತೋ ದೇಶಾದ್ಯಂತ ಅಸಹನೆಯ ಬೆಂಕಿ ಬೂದಿಯಿಂದೆದ್ದು ಹೊಗೆಯಾಡತೊಡಗಿದೆ. ಧರ್ಮಾಂಧರ ಹುನ್ನಾರ, ಜಾತಿವಾದಿಗಳ ದೌರ್ಜನ್ಯಕ್ಕೆ ಪ್ರತಿಯಾಗಿ ಶ್ರಮಜೀವಿಗಳ ಪ್ರತಿಭಟನೆಯ ತೀವ್ರತೆ ಹೆಚ್ಚಾಗತೊಡಗಿದೆ. ಇಡೀ ದೇಶ ಒಳಗೊಳಗೆ ಉರಿಯುತ್ತಿರುವ ಕುಲುಮೆಯಾಗಿದೆ. ಯಾವಾಗ ಎಲ್ಲಿ ಯಾವ ರೀತಿಯಲ್ಲಿ ಸ್ಪೋಟಿಸುತ್ತೋ ಗೊತ್ತಿಲ್ಲ. ಇಂದಿಲ್ಲ ನಾಳೆ ಲಾವಾರಸ ಉಕ್ಕಿ ಜ್ವಾಲಾಮುಖಿ ಬೆಂಕಿ ಉಗುಳುವುದಂತೂ ಖಂಡಿತ. ದಮನ ಹೆಚ್ಚಾದಷ್ಟೂ ದಂಗೆ ತೀವ್ರವಾಗಲೇಬೇಕಿದೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ರೈತಾಪಿ ವರ್ಗದವರು ಸಿಡಿದೆದ್ದು ನಿಂತರೆ ಆಳುವ ವರ್ಗಗಳು ತರಗಲೆಗಳಾಗುತ್ತವೆ. ವರ್ಗ ಸಂಘರ್ಷಕ್ಕೆ ರ್ಪೂರ್ವಭಾವಿ ಸಿದ್ದತೆಗಳು ಸಮಾಜದಲ್ಲಿ ನಡೆಯುತ್ತಿವೆ. ಅದಕ್ಕೆ ಸಂಘ ಪರಿವಾರವೇ ಎಲ್ಲಾ ಅನುಕೂಲತೆಗಳನ್ನು ಮಾಡಿಕೊಡುತ್ತಿದೆ.
                                                        
- ಶಶಿಕಾಂತ ಯಡಹಳ್ಳಿ