“ಸ್ವರಾಜ್ಯವನ್ನು ಸುರಾಜ್ಯ’ವಾಗಿ ಪರಿವರ್ತಿಸುವ ಬಹುದೊಡ್ಡ
ಹೊಣೆಗಾರಿಕೆ ದೇಶದ 125 ಕೋಟಿ ಜನರ ಮೇಲಿದೆ. ಸಂಸತ್ತಿನಿಂದ ಪಂಚಾಯಿತಿಯವರೆಗೆ, ಗ್ರಾಮ ಪ್ರಧಾನನಿಂದ
ಪ್ರಧಾನ ಮಂತ್ರಿಯವರೆಗೆ ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ಆಗ ಮಾತ್ರ ಸುರಾಜ್ಯದ
ಕನಸು ನಿಜವಾಗಲು ಸಾಧ್ಯ” ಎಂದು ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 15ರ ಸ್ವಾತಂತ್ರ್ಯ
ದಿನಾಚರಣೆಯ ದಿನ ಕೆಂಪುಕೋಟೆಯ ಮೇಲೆ ನಿಂತು ಭಾಷಣ ಮಾಡಿದರು. ಹೀಗೆ ಹೇಳುವುದಕ್ಕೂ ಹಾಗೂ ಆಚರಣೆಯಲ್ಲಿ
ತರುವುದಕ್ಕೂ ತುಂಬಾನೇ ವ್ಯತ್ಯಾಸವಿದೆ. ಸ್ವರಾಜ್ಯವನ್ನು ಸುರಾಜ್ಯವನ್ನಾಗಿ ಮಾಡಲು ಮೂರು ಸಾಂವಿಧಾನಕ
ಅಂಗಗಳ ನಿಷ್ಟೆ ಬದ್ದತೆ ಹಾಗೂ ಕಾರ್ಯತತ್ಪರತೆ ಅಗತ್ಯವಾಗುತ್ತದೆ.
ಈಗಾಗಲೇ ಶಾಸಕಾಂಗದ ಮೇಲೆ ಬಹುತೇಕವಾಗಿ
ಜನಸಾಮಾನ್ಯರಲ್ಲಿ ನಂಬಿಕೆಯೆ ಹೊರಟು ಹೋಗಿದೆ. ಬ್ರಿಟೀಷರಿಂದ ಅಧಿಕಾರ ಹಸ್ತಾಂತರವಾಗಿ ಏಳು ದಶಕಗಳು
ಕಳೆದರೂ ಭಾರತವಾಸಿಗಳ ಬವಣೆಗಳಿಗೆ ಕೊನೆಯಿಲ್ಲ. ಬಡತನ, ಅಸಮಾನತೆ, ಜಾತೀಯತೆಗಳು ತೊಲಗಿಲ್ಲ. ಕಾರ್ಪೋರೇಟ್
ಕಂಪನಿಗಳ ನಿರಂತರ ಲೂಟಿಯಂತೂ ತಪ್ಪಿಲ್ಲ. ಆಳುವ ವರ್ಗಗಳ ಸ್ವಾರ್ಥ, ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತಗಳಿಗಂತೂ
ಮಿತಿಯೇ ಇಲ್ಲ. ಸಂವಿಧಾನದ ಇನ್ನೊಂದು ಅಂಗವಾದ ಕಾರ್ಯಾಂಗವಂತೂ ಅಮೂಲಾಗ್ರವಾಗಿ ಕರಪ್ಟ್ ಆಗಿ ಹೋಗಿದೆ.
ಲಂಚದ ಹಣವೆಂಬುದು ಈ ಅಂಗದ ರಕ್ತನಾಳಗಳಲ್ಲಿ ಹರಿದಾಡುತ್ತಿದೆ. ‘ಕಾಸುಕೊಟ್ಟರೆ ಕೆಲಸ ಇಲ್ಲದಿದ್ದರೆ
ಬರೀ ಎಳೆತ’ ಎನ್ನುವಂತಾಗಿದೆ. ಕಾರ್ಯಾಂಗದ ಕರಪ್ಶನ್ನಿಗೆ ಶಾಸಕಾಂಗದ
ಕೊಡುಗೆಯೂ ಅಪಾರವಾಗಿದೆ. ಪಕ್ಷಗಳ ಚುನಾವಣೆಯಿಂದ ಹಿಡಿದು ಪ್ರಜಾಪ್ರತಿನಿಧಿಗಳ ಖಾಸಗಿ ನಿಧಿಗೆ ಹಣ
ಹರಿದು ಬರುವುದು ಕಾರ್ಯಾಂಗದ ಕೆಲಸಗಳ ಪರ್ಸಂಟೇಜ್ಗಳ ಮೂಲಕವೇ ಎನ್ನುವುದು ಬಹಿರಂಗ ಸತ್ಯ. ಸರಕಾರಗಳ
ಯಾವುದೇ ಮಹತ್ವಾಂಕಾಂಕ್ಷೀ ಯೋಜನೆಗಳಲ್ಲಿ ಆರಂಭದಿಂದ ಅಂತ್ಯದವರೆಗೂ ಸಕ್ರೀಯವಾಗಿರೋದು ಈ ಪರ್ಸೆಂಟೇಜ್
ಎನ್ನುವ ಅನಧೀಕೃತ ತಂತ್ರಗಾರಿಕೆ. ಸಾರ್ವಜನಿಕ ಹಣವನ್ನು ಲೀಗಲ್ ಆಗಿ ಯೋಜನೆಗಳಿಗೆ ಕೊಟ್ಟು ಇಲ್ಲಿಗಲ್ಲಾಗಿ
ಮತ್ತೆ ತೆಗೆದುಕೊಳ್ಳುವ ಗುಪ್ತ ಕಾರ್ಯಸೂಚಿಯು ಶಾಸಕಾಂಗ ಹಾಗೂ ಕಾರ್ಯಾಂಗಗಳ ಕೊಡುಕೊಳ್ಳುವಿಕೆಯ ಭಾಗವೇ
ಆಗಿದೆ. ಎಲ್ಲೋ ಬೆರಳೆಣಿಕೆಯಷ್ಟು ಪ್ರಾಮಾಣಿಕರು ಇರಬಹುದಾದರೂ ಅವರನ್ನು ಹೇಗಾದರೂ ಕರಪ್ಟ್ ಮಾಡುವ
ಇಲ್ಲವೇ ಮೂಲೆಗುಂಪು ಮಾಡುವ ಕೆಲಸವನ್ನು ಈ ಎರಡೂ ಅಂಗಗಳು ಶೃದ್ದೆಯಿಂದ ಮಾಡುತ್ತಾ ಬಂದಿವೆ.
ಇನ್ನು ಉಳಿದಿರೋದು ಮೂರನೇ
ಅಂಗ ನ್ಯಾಯಾಂಗ. ಈ ದೇಶದ ಬಹುಜನರು ಈ ನ್ಯಾಯಾಂಗ ವ್ಯವಸ್ಥೆಯ ಮೇಲೆ ಇನ್ನೂ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ.
‘ನ್ಯಾಯ
ಅದೆಷ್ಟೇ ವಿಳಂಬವಾದರೂ ಸತ್ಯಕ್ಕೆ ನ್ಯಾಯ ಸಿಗುತ್ತದೆ’ ಎಂದು ನಂಬಿದ್ದಾರೆ. ನ್ಯಾಯಾಂಗದಲ್ಲೂ
ಭ್ರಷ್ಟತೆ ಲಂಚಕೋರತನ ಸ್ವಜನಪಕ್ಷಪಾತಗಳಿವೆಯಾದರೂ ಅವುಗಳು ಕಡಿಮೆ ಇವೆ ಎಂಬುದು ಜನರ ಭಾವನೆ. ಜೊತೆಗೆ
ಕೆಲವೊಮ್ಮೆ ಆಳುವ ದಿಗ್ಗಜರ ಹಿತಾಸಕ್ತಿಯ ವಿರುದ್ದವೇ ನ್ಯಾಯನಿರ್ಣಯವಾದಾಗಲೆಲ್ಲಾ ಜನರ ನಂಬಿಕೆ ನವೀಕರಿಸಲ್ಪಡುತ್ತದೆ.
ಕರ್ನಾಟಕ ಲೋಕಾಯುಕ್ತವು ಸಂತೋಷ ಹೆಗಡೆಯವರ ನೇತೃತ್ವದಲ್ಲಿ ಸಶಕ್ತವಾಗಿ ಕೆಲಸ ಮಾಡುತ್ತ ಭ್ರಷ್ಟರಿಗೆ ಸಿಂಹಸ್ವಪ್ನವಾದಾಗ ಜನತೆ ಲೋಕಾಯುಕ್ತದ
ಮೇಲೆ ವಿಶ್ವಾಸವಿಡತೊಡಗಿದರು. ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಲಾಲೂ ಪ್ರಸಾದ್ ಯಾದವ್, ಜನಲಲಿತಾರಂತವರನ್ನೇ
ಜೈಲು ಪಾಲು ಮಾಡಿದಾಗ ಜನರ ನಂಬಿಕೆ ನ್ಯಾಯಾಂಗದ ಮೇಲೆ ಗಟ್ಟಿಯಾಗತೊಡಗಿತು. ಆದರೆ ಅದೆಷ್ಟೆ ಆದರೂ ನ್ಯಾಯಾಂಗವೂ
ಸಹ ಶಾಸಕಾಂಗದ ಆಧೀನದಲ್ಲೇ ಇರುವಂತಹುದು. ಶಾಸಕಾಂಗ ರೂಪಿಸುವ ಮಾರ್ಗದರ್ಶನದಂತೆಯೇ ನಡೆದುಕೊಳ್ಳುವಂತಹುದು.
ನ್ಯಾಯಾಧೀಶರ ನೇಮಕದಿಂದ ಹಿಡಿದು ಅವರಿಗೆ ಕೊಡುವ ಸವಲತ್ತುಗಳವರೆಗೂ ಶಾಸಕಾಂಗದ ಮರ್ಜಿಯಲ್ಲೇ ನ್ಯಾಯಾಂಗವೂ
ಇರುವಂತಹುದು. ಹೀಗಾಗಿ ನ್ಯಾಯ ನಿರ್ಣಯದಲ್ಲಿ ಅದೆಷ್ಟೇ
ಸ್ವಾಯತ್ತತೆ ಸ್ವಾತಂತ್ರ್ಯ ನ್ಯಾಯಾಧೀಶರಿಗೆ ಇದೆ ಎಂದರೂ, ಅವರೂ ಸಹ ಕೆಲವೊಮ್ಮೆ ಶಾಸಕಾಂಗದ ನಿರ್ಧಾರಗಳ
ಮುಂದೆ ಅಸಹಾಯಕರೇ. ಶಾಸಕಾಂಗಕ್ಕೆ ಸಡ್ಡು ಹೊಡೆದು
ಕಾನೂನಿನ ಪ್ರಕಾರವೇ ನ್ಯಾಯನಿರ್ಣಯ ಮಾಡುತ್ತೇವೆಂದು ಹೊರಟ ನ್ಯಾಯಾಧೀಶರ ಅಧಿಕಾರ ವ್ಯಾಪ್ತಿಯನ್ನೇ
ನಿರ್ಬಂಧಿಸಿದ ಉದಾಹರಣೆಗಳು ಬೇಕಾದಷ್ಟಿವೆ. ಶಾಸಕಾಂಗ ಮತ್ತು ನ್ಯಾಯಾಂಗದ ನಡುವಿನ ಸಂಘರ್ಷ ನಿರಂತರವಾಗಿದೆ.
ಈ ಆಳುವ ವರ್ಗದ ಭ್ರಷ್ಟರಿಗೆ
ಸಿಂಹಸ್ವಪ್ನವಾಗಿದ್ದ ಕರ್ನಾಟಕ ಲೋಕಾಯುಕ್ತದ ಅಂಗಾಂಗಗಳನ್ನೇ ಕಳಚಿ ಅದನ್ನು ವಿಕಲಾಂಗವಾಗಿಸಿ ಹಲ್ಲಿಲ್ಲದ
ಹಾವಾಗಿಸಲಾಯ್ತು ಎನ್ನುವುದು ನಮಗೆಲ್ಲಾ ಗೊತ್ತಿರುವ ಸಂಗತಿಯೇ ಆಗಿದೆ. ಆಳುವ ವರ್ಗಗಳ ಶೋಷಕ ನೀತಿಗಳಿಗೆ
ಹಾಗೂ ಬ್ರಹ್ಮಾಂಡ ಬ್ರಷ್ಟಾಚಾರಕ್ಕೆ ಪ್ರಸ್ತುತವಾಗಿ ಅಡೆತಡೆ ಆಗಿದ್ದೇ ಈ ನಮ್ಮ ನ್ಯಾಯಾಂಗ ವ್ಯವಸ್ಥೆ.
ಈ ವ್ಯವಸ್ಥೆಯನ್ನೇ ದುರ್ಬಲಗೊಳಿಸಿ ನ್ಯಾಯ ನಿರ್ಣಯವನ್ನು ಸಾಧ್ಯವಾದಷ್ಟೂ ವಿಳಂಬಗೊಳಿಸಿದರೆ ತಮ್ಮ
ಲೂಟಿ ಸಾಮ್ರಾಜ್ಯವನ್ನು ವಿಸ್ತರಿಸಿ ನಿರಂತರವಾಗಿಸಬಹುದು ಎನ್ನುವುದು ಶಾಸಕಾಂಗ ಹಾಗೂ ಕಾರ್ಯಾಂಗಗಳ
ಒಳ ಹುನ್ನಾರು. ಅದಕ್ಕಾಗಿಯೇ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರುಗಳೇ ಇಲ್ಲದಂತೆ ನೋಡಿಕೊಂಡರೆ ರಾಜಕಾರಣಿಗಳು
ಹಾಗೂ ಅಧಿಕಾರಗಳ ಮೇಲಿರುವ ಮೊಕದ್ದಮೆಗಳು ವಿಳಂಬವಾಗುತ್ತಾ ಸಾಗುತ್ತವೆಂಬ ದುರಾಲೋಚನೆ ಆಳುವವರದ್ದು.
ಅದಕ್ಕಾಗಿಯೇ ಕೇಂದ್ರ ಸರಕಾರ ನ್ಯಾಯಾಧೀಶರ ನೇಮಕಾತಿಯನ್ನೇ ನಿಲ್ಲಿಸಿಬಿಟ್ಟಿದೆ. ಹಲವಾರು ನ್ಯಾಯಾಧೀಶರುಗಳು
ನಿವೃತ್ತರಾಗಿ ಮನೆಗೆ ಹೋದರೂ ಅವರ ಜಾಗಕ್ಕೆ ಹೊಸ ನ್ಯಾಯಾಧೀಶರು ನೇಮಕವಾಗದಂತೆ ಆಳುವ ಸರಕಾರ ನೋಡಿಕೊಳ್ಳುತ್ತಿದೆ.
ಶ್ರೇಣೀಕೃತ ಸಮಾಜದಲ್ಲಿ ಯಾರು ಬೇಕಾದರೂ ಅನ್ಯಾಯದ ವಿರುದ್ಧ ನ್ಯಾಯಾಲಯದ ಬಗಿಲು ಬಡಿಯಬಹುದಾಗಿದೆ. ದಲಿತರ ಹಾಗೂ ಮಹಿಳೆಯರ ಹಕ್ಕುಗಳ
ಕುರಿತು ಸಾಂವಿಧಾನಿಕ ಕಾನೂನುಗಳು ಸಶಕ್ತವಾಗಿವೆ. ಬಹುತೇಕ ಸಂದರ್ಭದಲ್ಲಿ ಮೇಲ್ವರ್ಗದವರು ಇಲ್ಲವೇ
ಆರ್ಥಿಕವಾಗಿ ಬಲಾಢ್ಯರಾದವರೇ ಶಾಸಕಾಂಗದಲ್ಲಿ ಜನಪ್ರತಿನಿಧಿಗಳಾಗಿರುವುದರಿಂದ ದಮನಿತರ ಪರವಾದ ನ್ಯಾಯವನ್ನು
ವಿಳಂಬ ಮಾಡಿ ಸತಾಯಿಸಿ, ದೌರ್ಜನ್ಯಕ್ಕೆ ಒಳಗಾದವರನ್ನು ನ್ಯಾಯವ್ಯವಸ್ಥೆಯಿಂದ ವಿಮುಖರನ್ನಾಗಿಸುವುದು
ಶಾಸಕಾಂಗದ ಹಿಡನ್ ಅಜೆಂಡಾ ಆಗಿದೆ.
ಈಗಾಗಲೇ “ಕೋರ್ಟಲ್ಲಿ ಗೆದ್ದವ ಸೋತ,
ಸೋತವ ಸತ್ತ” ಎನ್ನುವ ಗಾದೆ ಮಾತು ಬಹುಜನಜನಿತವಾಗಿದೆ. ಹಾಗೂ ಭಾರತೀಯ
ನ್ಯಾಯಾಂಗ ವ್ಯವಸ್ಥೆಯಲ್ಲಿ ಅದು ನಿಜವೂ ಆಗಿದೆ. ಬಲಾಢ್ಯರಿಗೆ ಇದು ಅನ್ವಯಿಸದೇ ಹೋದರೂ ಬಹುಸಂಖ್ಯಾತ
ದುಡಿಯುವ ವರ್ಗಕ್ಕಂತೂ ಇದು ನಿಜವಾಗಿದೆ. ಹೀಗಾಗಿ ಯಾರೋ ಒಬ್ಬ ಹಲ್ಲೆ ಮಾಡಿದನೆಂದು ಇನ್ನೊಬ್ಬ ಕಂಪ್ಲೆಂಟ್
ಕೊಟ್ಟು ಮನೆಯಲ್ಲಿ ಕೂತರೆ ಸಾಕು ಆರೋಪಿ ನಾಲ್ಕಾರು ವರ್ಷ ಕೋರ್ಟಿಗೆ ನಿಯಮಿತವಾಗಿ ಅಲೆದಾಡಬೇಕಾಗುತ್ತದೆ
ಹಾಗೂ ಲಾಯರ್ ಪೀಸ್ ಕೊಟ್ಟು ಜೇಬು ಬರಿದಾಗಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಕೇಸು ಚಿಕ್ಕದಿರಲಿ
ದೊಡ್ಡದಿರಲಿ ನ್ಯಾಯನಿರ್ಣಯವಂತೂ ಸಕಾಲದಲ್ಲಿ ಆಗಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಬಂಡವಾಳಶಾಹಿ
ಪ್ರಜಾಪ್ರಭುತ್ವದ ಭಾರತದಲ್ಲಿ ನಿರ್ಮಾಣಗೊಂಡಿದೆ.
ನನ್ನ ಗೆಳೆಯನೊಬ್ಬ ತುಂಬಾ
ಕಷ್ಟ ಪಟ್ಟು ಸೈಟೊಂದನ್ನು ತೆಗೆದುಕೊಂಡು ಮನೆ ಕಟ್ಟಲು ದುಡ್ಡಿಲ್ಲದೇ ನಿವೇಶನವನ್ನು ಖಾಲಿ ಬಿಟ್ಟಿದ್ದ.
ಬಲಾಢ್ಯನೊಬ್ಬ ನಕಲಿ ದಾಖಲೆ ಸೃಷ್ಟಿಸಿ ನಿವೇಶನಕ್ಕೆ ಬೇಲಿ ಹಾಕಿ ಆಕ್ರಮಿಸಿಕೊಂಡ. ಕೇಸು ಕೋರ್ಟಿಗೆ
ಹೋಗಿ ಹನ್ನೊಂದು ವರ್ಷವಾಯ್ತು ಇನ್ನೂವರೆಗೂ ಕೋರ್ಟಿಗೆ ಅಲೆದಾಡುತ್ತಿದ್ದಾನೆ. ನ್ಯಾಯ ದೊರೆಯುತ್ತದೆಂಬ ಆಸೆಯನ್ನೇ ಕೈಬಿಟ್ಟಿದ್ದಾನೆ. ಮಹಿಳೆಯೊಬ್ಬಳು ತನ್ನ ಮನೆಯವರ
ಕುಮ್ಮಕ್ಕಿನಿಂದ ಗಂಡನ ಮೇಲೆ ಮುನಿಸಿಕೊಂಡು ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಕೇಸ್ ಹಾಕಿ ತವರಲ್ಲಿ
ಕೂತಳು. ಪಾಪ ಗಂಡನಿಗೆ ಬೇಲ್ ಸಿಗುವುದಕ್ಕೇ ಮೂರು ತಿಂಗಳುಗಳಾಗಿ ಜೈಲಲ್ಲಿ ಮುದ್ದೆ ಮುರಿದು ಬಂದ.
ಒಂಬತ್ತು ವರ್ಷಗಳಾದರೂ ಇನ್ನೂ ಆ ಕೇಸು ಚಾಲ್ತಿಯಲ್ಲಿದೆ. ಆತ ಇನ್ನೊಂದು ಮದುವೆ ಆಗಿ ಬದುಕು ಕಟ್ಟಿಕೊಳ್ಳುವ
ಹಾಗೂ ಇಲ್ಲ.. ಇರುವವಳ ಮನವಲಿಸಿ ಮತ್ತೆ ಮನೆತುಂಬಿಸಿಕೊಳ್ಳುವ ಹಾಗೂ ಇಲ್ಲ. ಹೀಗೆ.. ಒಂದಲ್ಲಾ ಎರಡಲ್ಲಾ
ಲಕ್ಷಾಂತರ ಕೇಸುಗಳು ಎಲ್ಲಾ ಶ್ರೇಣಿಯ ಕೋರ್ಟುಗಳಲ್ಲಿ ಬಸವನಹುಳುವಿನ ವೇಗದಲ್ಲಿ ನಡೆಯುತ್ತಿವೆ. ನ್ಯಾಯನಿರ್ಣಯದಲ್ಲಾಗುವ ವಿಳಂಬದಿಂದ ಬೇಸತ್ತ ಕೆಲವು ಆರೋಪಿಗಳು
ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದು ತಮ್ಮ ಪ್ರತಿಭಟನೆ ಸಲ್ಲಿಸಿದ ಉದಾಹರಣೆಗಳೂ ಇವೆ.
ಇದು ನ್ಯಾಯಾಧೀಶರುಗಳ ತಪ್ಪಲ್ಲ.
ಒಬ್ಬೊಬ್ಬ ನ್ಯಾಯಾಧೀಶರ ನ್ಯಾಯನಿರ್ಣಯ ಸಾಮರ್ಥ್ಯವನ್ನು ಮೀರಿ ಮೊಕದ್ದಮೆಗಳು ವಿಚಾರಣೆಗೆ ಬಂದರೆ ಅವರಾದರೂ
ಏನು ಮಾಡಿಯಾರು. ದಿನಾಂಕಗಳನ್ನು ಬದಲಾಯಿಸುತ್ತಾ.. ಕೇಸನ್ನು ಮುಂದೂಡುತ್ತಾ ತಮ್ಮ ಇತಿಮಿತಿಯಲ್ಲಿ
ಆದಷ್ಟು ಕೆಲಸ ಮಾಡುವ ಅನಿವಾರ್ಯತೆಗೊಳಗಾಗುತ್ತಾರೆ. ನ್ಯಾಯಾಲಯಗಳಲ್ಲಿರುವ ಪೆಂಡಿಂಗ್ ಕೇಸ್ಗಳನ್ನು
ಕಾಲಮಿತಿಯಲ್ಲಿ ಅಟೆಂಡ್ ಮಾಡಲಾಗದಂತಹ ದುಸ್ಥಿತಿ ನ್ಯಾಯಾಂಗಕ್ಕೆ ಒದಗಿದೆ. ಇಡೀ ನ್ಯಾಯಾಂಗವೇ ವಿಕಲಾಂಗಗೊಂಡಿದೆ.
ಇದಕ್ಕೆ ಶಾಸಕಾಂಗದ ಉದ್ದೇಶಪೂರ್ವಕ ಕೊಡುಗೆ ಬೇಕಾದಷ್ಟಿದೆ.
ಮೋದಿ ಸರಕಾರ ಆಳ್ವಿಕೆಗೆ ಬಂದ
ನಂತರ ಅವರನ್ನು ಬೇಟಿಯಾದ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಟಿ.ಎಸ್.ಠಾಕೂರವರು ನ್ಯಾಯಾಲಯಗಳಲ್ಲಿರುವ
ನ್ಯಾಯಾಧೀಶರ ಕೊರತೆ ಹಾಗೂ ನ್ಯಾಯನಿರ್ಣಯ ವಿಳಂಬಕ್ಕೆ ಕಾರಣಗಳನ್ನು ಹೇಳಿ ಕಣ್ಣೀರಿಟ್ಟರು.. ಆದಷ್ಟು
ಬೇಗ ನ್ಯಾಯಾಧೀಶರ ನೇಮಕ ಮಾಡಲಾಗುವುದೆಂಬ ಭರವಸೆಯನ್ನು ಪಡೆದರಾದರೂ ಇಲ್ಲಿವರೆಗೂ ಅದು ಅನುಷ್ಟಾನಕ್ಕೆ
ಬರಲಿಲ್ಲ. ನೇಮಕ ಮಾಡುವ ಉದ್ದೇಶವೂ ಸರಕಾರಕ್ಕೆ ಇಲ್ಲ. ಆಗಸ್ಟ್ 15 ರಂದು ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ
ಹಲವಾರು ವಿಷಯ ಪ್ರಸ್ತಾಪಿಸಿ ಸುದೀರ್ಘ 94 ನಿಮಿಷಗಳ ಕಾಲ ಮಾತಾಡಿದ ಪ್ರಧಾನಿಯವರು ನ್ಯಾಯಾಧೀಶರ ನೇಮಕದ
ಬಗ್ಗೆ ಚಕಾರ ಎತ್ತದಿರುವುದನ್ನು ನೋಡಿದ ಠಾಕೂರರವರು ಬಹಿರಂಗವಾಗಿಯೇ ತಮ್ಮ ತೀವ್ರವಾದ ಅಸಮಾಧಾನವನ್ನು
ವ್ಯಕ್ತಪಡಿಸಿದ್ದಾರೆ. “ದೇಶದ ಹಲವಾರು ಕೋರ್ಟುಗಳಲ್ಲಿ ನ್ಯಾಯಾಧೀಶರ ಕೊರತೆಯಿಂದ
ನ್ಯಾಯದಾನ ವಿಳಂಬವಾಗುತ್ತಿದೆ. ಇದನ್ನು ಸುಪ್ರಿಂ
ಕೋರ್ಟ ಗಂಭೀರವಾಗಿ ಪರಿಗಣಿಸಿ ಜಡ್ಜ್ಗಳ ನೇಮಕಕ್ಕೆ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಸೂಚಿಸಿತ್ತು.
ಆದರೆ ಪ್ರಧಾನಿಯವರು ಈ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳದೇ ಇರುವುದು ನಿರಾಸೆಗೆ ಕಾರಣವಾಗಿದೆ.. ನಾನೀಗ
ನನ್ನ ವೃತ್ತಿ ಬದುಕಿನ ಕೊನೆಯ ಹಂತವನ್ನು ತಲುಪಿದ್ದೇನೆ.
ನನಗೆ ಅನಿಸಿದ್ದನ್ನು ಹೇಳಲು ಹಿಂಜರಿಯುವ ಅಗತ್ಯವಿಲ್ಲ” ಎಂದು ಮುಖ್ಯ ನ್ಯಾಯಾಧೀಶ
ಠಾಕೂರರು ತಮ್ಮ ಅಸಹಾಯಕತೆಯನ್ನು ಪ್ರಸ್ತಾಪಿಸಿ ಅವಲತ್ತುಕೊಂಡರು.
ಈ ದೇಶಕ್ಕೆ ಇದಕ್ಕಿಂತಾ ಅವಮಾನ
ಏನಿದೆ. ಅತ್ಯುನ್ನತ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಕಣ್ಣೀರಿಟ್ಟು ‘ನನಗೆ ನ್ಯಾಯದಾನ ಮಾಡಲು ನ್ಯಾಯಾಧೀಶರನ್ನು
ನೇಮಕ ಮಾಡಿಕೊಡಿ’ ಎಂದು ಪ್ರಧಾನಿಯನ್ನು ಬೇಡಿಕೊಳ್ಳುವುದಕ್ಕಿಂತಾ ಅವಮಾನಕಾರಿ
ಕೆಲಸ ಮತ್ತೇನಿದೆ. ದೇಶಕ್ಕೆ ನ್ಯಾಯದಾನ ಮಾಡುವ ನ್ಯಾಯಾಂಗ ವ್ಯವಸ್ಥೆ ಶಾಸಕಾಂಗದ ಮುಂದೆ ಮಂಡಿಯೂರಿ
ಬೇಡಿಕೊಳ್ಳುತ್ತಿದೆ. ‘ಅಶಕ್ತನಾಗಿದ್ದೇನೆ ನನ್ನ ಬಲವನ್ನು ಹೆಚ್ಚಿಸಿ ಸಶಕ್ತಗೊಳಿಸಿ’ ಎಂದು ಕೇಳಿಕೊಳ್ಳುತ್ತಿದೆ.
ಆದರೆ.. “ನೀನು
ಸಶಕ್ತನಾದರೆ ಆಳುವ ವರ್ಗಕ್ಕೆ ಕಂಟಕನಾಗುತ್ತಿಯಾದ್ದರಿಂದ ನೀನು ಹೀಗೆ ಅಶಕ್ತ ವಿಕಲಾಂಗನಾಗಿದ್ದಷ್ಟೇ
ನಮಗೆ ಒಳಿತು” ಎನ್ನುವ ತೀರ್ಮಾಣಕ್ಕೆ ಶಾಸಕಾಂಗ ಬಂದಂತಿದೆ. “ನ್ಯಾಯನಿರ್ಣಯ ವಿಳಂಬವಾದಷ್ಟೂ
ನ್ಯಾಯವನ್ನು ನಿರಾಕರಿಸಿದಂತೆ” ಎನ್ನುವ ಮಾತು ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಸಿದ್ದಿಯಾಗಿದೆ.
ಇದೇ ತಂತ್ರವನ್ನು ಶಾಸಕಾಂಗ ನಿರ್ವಹಿಸುತ್ತಾ ನ್ಯಾಯಾಂಗವನ್ನು ಸಶಕ್ತವಾಗದಂತೆ ನೋಡಿಕೊಳ್ಳುತ್ತಿದೆ.
ಇದರಿಂದಾಗಿ ದೇಶಾದ್ಯಂತ ಕೋಟ್ಯಾಂತರ ಜನ ದಲಿತರು, ದಮನಿತರು, ಮಹಿಳೆಯರು, ರೈತರು, ಕಾರ್ಮಿಕರುಗಳು
ನ್ಯಾಯಕ್ಕಾಗಿ ದಶಕಗಳ ಕಾಲ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿ ಇಳಿಯುತ್ತಲೇ ಇದ್ದಾರೆ. ನ್ಯಾಯವೆಂಬುದು
ಮಧ್ಯಾಹ್ನದ ಮರೀಚಿಕೆಯಂತೆ ಹಿಡಿಯಲು ಹೋದಷ್ಟೂ ದೂರ ಹೋಗುತ್ತಿದೆ. ಅದೆಷ್ಟೋ ಅಮಾಯಕರು ನ್ಯಾಯವಿಳಂಬದಿಂದಾಗಿ
ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಅವರನ್ನು ನಂಬಿಕೊಂಡ ಕುಟುಂಬದವರು ಕಣ್ಣೀರು ಹಾಕುತ್ತಿದ್ದಾರೆ..
ಬಂಡವಾಳಶಾಹಿ ಪ್ರಜಾಪ್ರಭುತ್ವದಲ್ಲಿ
ಬಂಡವಾಳಿಗರ ಹಿತವನ್ನು ಕಾಯುವ ಕೆಲಸವನ್ನು ಸಂವಿಧಾನದ ಈ ಮೂರೂ ಅಂಗಗಳೂ ನಿಷ್ಟೆಯಿಂದ ಮಾಡುತ್ತಲೇ ಬಂದಿವೆ.
ನ್ಯಾಯಾಂಗದ ಮೇಲಿದ್ದ ಅಲ್ಪ ಸ್ವಲ್ಪ ಭರವಸೆಯೂ ಹುಸಿಯಾಗುತ್ತಾ ಬರುತ್ತಿದೆ. ಪ್ರಧಾನಿ ಮೋದಿಯವರ ‘ಸ್ವರಾಜ್ಯವು ಸುರಾಜ್ಯವಾಗಬೇಕು’ ಎನ್ನುವ ಮಾತು ಸಾಕರಗೊಳ್ಳಬೇಕೆಂದರೆ
ಮೊದಲು ಶಾಸಕಾಂಗ ಹಾಗೂ ಕಾರ್ಯಾಂಗಗಳನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಬೇಕಿದೆ. ಭ್ರಷ್ಟರನ್ನು ಮಟ್ಟಹಾಕಬೇಕಾದರೆ
ನ್ಯಾಯಾಂಗವನ್ನು ಸಶಕ್ತಗೊಳಿಸಬೇಕಾಗಿದೆ. ಮೋದಿಯವರು ತಮ್ಮ ಭಾಷಣದಲ್ಲಿ ‘ಸುಧಾರಣೆ, ನಿರ್ವಹಣೆ ಮತ್ತು
ಪರಿವರ್ತನೆ’ ಎನ್ನುವ ಕಾರ್ಯತಂತ್ರಗಳ ಬಗ್ಗೆ ಹೇಳಿಕೊಂಡಿದ್ದಾರೆ. ಇವು
ಮೂರೂ ತಂತ್ರಗಳು ಬರೀ ಮಾತಿನಲ್ಲಿ ಆಗುವಂತಹುಗಳಲ್ಲ. ಮೊದಲು ನ್ಯಾಯಾಂಗದಲ್ಲಿ ಸುಧಾರಣೆ ತಂದು ಅದಕ್ಕೆ
ಬೇಕಾದ ನೇಮಕಾತಿಗಳನ್ನು ಮಾಡುವ ಮೂಲಕ ನಿರ್ವಹಣೆ ಮಾಡಿ ತದನಂತರ ಪರಿವರ್ತನೆಯ ಬಗ್ಗೆ ಯೋಚಿಸಬೇಕು.
ಯಾವ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಸದಾ ಎಚ್ಚರದ ಸ್ಥಿತಿಯಲ್ಲಿರುತ್ತದೋ.. ಯಾವ ದೇಶದಲ್ಲಿ ಅತೀ
ಶೀಘ್ರವಾಗಿ ನ್ಯಾಯ ನಿರ್ಣಯವಾಗಿ ಅಪರಾಧಿಗಳಿಗೆ ಶಿಕ್ಷೆಯಾಗುತ್ತದೋ ಆ ದೇಶದಲ್ಲಿ ಅಪರಾಧಗಳು ಕಡಿಮೆಯಾಗಿರುತ್ತವೆ
ಹಾಗೂ ಅಂತಹ ದೇಶಗಳು ಅಭಿವೃದ್ದಿಯತ್ತ ದಾಪುಗಾಲಿಡಲು ಸಾಧ್ಯವಾಗುತ್ತದೆ. ಅಪರಾಧವೊಂದು ಘಟಿಸಿದ ಮೂರು
ತಿಂಗಳಲ್ಲಿ ಶೀಘ್ರವಾಗಿ ವಿಚಾರಣೆ ನಡೆಸಿ ಅಪರಾಧಿಗೆ ಶಿಕ್ಷೆಯಾದಲ್ಲಿ ಅಪರಾಧ ಮಾಡುವವರಲ್ಲಿ ಜಾಗೃತಿ
ಮೂಡುತ್ತದೆ. ಶಿಕ್ಷೆಯ ಹೆದರಿಕೆಯಿಂದ ಸಮಾಜವಿರೋಧಿ ಚಟುವಟಿಕೆಗಳು ಕಡಿಮೆಯಾಗುತ್ತಾ ಸಾಗುತ್ತವೆ.
ಭಾರತದಲ್ಲಿರುವ ಒಟ್ಟು 24
ಹೈಕೋರ್ಟಗಳಲ್ಲಿ ಇರಬೇಕಾದ ಒಟ್ಟು ನ್ಯಾಯಾಧೀಶರ ಸಂಖ್ಯೆ 1079. ಆದರೆ ಈಗ ಇರುವ ನ್ಯಾಯಾಧೀಶರುಗಳು
609.. ಇನ್ನೂ 470 ನ್ಯಾಯಾಧೀಶರುಗಳ ಖುರ್ಚಿ ಖಾಲಿಯಿದೆ.
ಅಂದರೆ ಶೇಕಡಾ 45. ನ್ಯಾಯಾಧೀಶರುಗಳ ಕೊರತೆ ನ್ಯಾಯಾಂಗಕ್ಕೆ ಇದೆ. ಕೊರತೆ ಇರುವ ನ್ಯಾಯಾಧೀಶರನ್ನು
ಆಯ್ಕೆ ಮಾಡುವ ಪ್ರಸ್ತಾಪವನ್ನು ‘ಸುಪ್ರಿಂ ಕೋರ್ಟ ಕೊಲಿಜಿಯಂ ಸಿಸ್ಟಂ’ ಕೇಂದ್ರ ಸರಕಾರದ ಮುಂದೆ ಇಡುತ್ತಲೇ
ಬಂದಿದೆ. ಆದರೆ ಸರಕಾರ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಇಬ್ಬರು ನ್ಯಾಯಾಧೀಶರು ಮಾಡಬಹುದಾದ ಕೆಲಸವನ್ನು
ಈಗ ಒಬ್ಬರೇ ನ್ಯಾಯಾಧೀಶರು ನಿಭಾಯಿಸುವ ಒತ್ತಡಕ್ಕೆ ಒಳಗಾಗಿದ್ದಾರೆ. ಈ ವರ್ಷಾಂತ್ಯದಲ್ಲಿ ಈಗಿರುವ
ಜಡ್ಜ್ಗಳಲ್ಲಿ ಇನ್ನೂ ಕೆಲವರು ನಿವೃತ್ತಿ ಹೊಂದುತ್ತಿದ್ದು ಸಮಸ್ಯೆ ಇನ್ನೂ ಬಿಗಡಾಯಿಸುವುದರಲ್ಲಿ
ಸಂದೇಹವಿಲ್ಲ. ಇದು ಕೇವಲ ಹೈಕೋರ್ಟ ಕಥೆಯಾಯಿತು. ಇನ್ನು ಆಧೀನ ಕೋರ್ಟಗಳಲ್ಲಿರುವ ನ್ಯಾಯಾಧೀಶರ ಕೊರತೆ
ಕೇಳಿದರೆ ನ್ಯಾಯವಿಳಂಬಕ್ಕೆ ಸಕಾರಣ ತಿಳಿಯದೆ ಇರಲಾರದು. ಮೋದಿಯವರ ತವರು ರಾಜ್ಯ ಗುಜರಾತಿನ ಹೈಕೋರ್ಟಗಳಲ್ಲಿ
ಒಟ್ಟು 160, ನ್ಯಾಯಾಧೀಶರುಗಳ ಹುದ್ದೆಗಳಿದ್ದು ಅದರಲ್ಲಿ 82 ಹುದ್ದೆಗಳು ಖಾಲಿ ಇವೆ. ಪಂಜಾಬ್ ಹರಿಯಾಣ
ಕೋರ್ಟಗಳಲ್ಲಿ 85 ರಲ್ಲಿ 39 ಖುರ್ಚಿಗಳು ಖಾಲಿ ಇವೆ. ಮದ್ರಾಸ್ ಹೈಕೋರ್ಟಲ್ಲಿರಬಹುದಾದ 75 ನ್ಯಾಯಾಧೀಶರುಗಳಲ್ಲಿ
37 ಹುದ್ದೆಗಳು ಖಾಲಿಯಿವೆ. ಆಂದ್ರ, ಕೇರಳ, ಮಧ್ಯಪ್ರದೇಶ್, ಮಣಿಪುರ, ಪಾಟ್ನಾ, ರಾಜಸ್ಥಾನ, ಪಂಜಾಬ್-ಹರಿಯಾಣ,
ಅಲಹಾಬಾದ್ ಈ ಎಂಟು ಹೈಕೋರ್ಟಗಳಲ್ಲಿ ಹೆಚ್ಚುವರಿ ಮುಖ್ಯ
ನ್ಯಾಯಾಧೀಶರುಗಳೇ ಕೆಲಸ ನಿಭಾಯಿಸುತ್ತಿದ್ದಾರೆ.
ಶಾಸಕಾಂಗವು ಕಾರ್ಯಾಂಗಕ್ಕೆ
ಕಾಲಮಿತಿಯಲ್ಲಿ ಕೆಲಸಗಳಾಗಬೇಕು ಎಂದು ಆದೇಶಿಸುತ್ತದೆ. ಆದರೆ ನ್ಯಾಯಾಂಗಕ್ಕೆ ಇಂತಿಂತಾ ಅಪರಾಧಿಗಳಿಗೆ
ಇಂತಿಷ್ಟು ಕಾಲಮಿತಿಯಲ್ಲಿ ನ್ಯಾಯನಿರ್ಣಯವಾಗಬೇಕು ಎನ್ನುವ ಮಿತಿಯನ್ನು ಹೇರುವಲ್ಲಿ ವಿಫಲವಾಗಿದೆ. ಹಾಗೇನಾದರೂ ಆದಲ್ಲಿ ಆಳುವ ವರ್ಗದ ಬಹುತೇಕರು ಜೈಲಲ್ಲಿರುತ್ತಾರೆ.
ಅದು ಯಾವ ಜನಪ್ರತಿನಿಧಿಗಳಿಗೂ ಬೇಕಾಗಿಲ್ಲ.. ಶಾಸಕಾಂಗ ಕಾರ್ಯಾಂಗದೊಳಗಿನ ಭ್ರಷ್ಟರಿಗೆ ಅಗತ್ಯವಾಗಿಲ್ಲ.
ನ್ಯಾಯ ವಿಳಂಬವಾದಷ್ಟೂ ಇವರಿಗೆ ನುಣುಚಿಕೊಳ್ಳಲು ಸಮಯಾವಕಾಶ ಸಿಕ್ಕುತ್ತದೆ. ಸಾಕ್ಷಿಗಳನ್ನು ಮ್ಯಾನುಪಲೇಟ್
ಮಾಡಿ ನ್ಯಾಯದ ದಿಕ್ಕನ್ನು ತಪ್ಪಿಸಲು ಅನುಕೂಲವಾಗುತ್ತದೆ. ಹೀಗಾಗಿ ನ್ಯಾಯಾಂಗವನ್ನು ಸಶಕ್ತಗೊಳಿಸಲು
ಹಾಗೂ ಅಗತ್ಯವಿದ್ದಷ್ಟು ನ್ಯಾಯಾಧೀಶರುಗಳನ್ನು ನೇಮಕ ಮಾಡಿ ಕಾಲಮಿತಿಯಲ್ಲಿ ನ್ಯಾಯದಾನವನ್ನು ನೀಡುವ
ವ್ಯವಸ್ಥೆಯನ್ನು ರೂಪಿಸಲು ಶಾಸಕಾಂಗ ಸಿದ್ದವಾಗಿಲ್ಲ.. ಕಾರ್ಯಾಂಗಕ್ಕೆ ಬೇಕಾಗಿಲ್ಲ. ಇಡೀ ದೇಶದ ಜನತೆ ನ್ಯಾಯ ಇಂದು ಸಿಕ್ಕೀತು,, ನಾಳೆ ಸಿಕ್ಕೀತು
ಎಂಬ ಭರವಸೆಯೊಂದಿಗೆ ಕೋರ್ಟಗಳಿಗೆ ಅಲೆದಾಡುವುದು ತಪ್ಪೋದಿಲ್ಲ.
ಇನ್ನು ಈ ನಾಲ್ಕನೇ ಅಂಗವೆಂದು
ಸ್ವಘೋಷಿಸಿಕೊಂಡ ಮಾಧ್ಯಮರಂಗ (ಮೀಡಿಯಾಂಗ)ವು ಬಂಡವಾಳಶಾಹಿಗಳ ಹಿಡಿತದಲ್ಲೇ ಇರುವುದರಿಂದ ಆಳುವ ವರ್ಗಗಳ
ಪರವಾಗಿಯೇ ಇರುವುದು ಬಹುತೇಕ ಸಾಬೀತಾಗಿದೆ. ನ್ಯಾಯಾಂಗ ವಿಕಲಾಂಗವಾದರೆ ಈ ಮೀಡಿಯಾಂಗವು ಅತಿಯಾಂಗವಾಗಿದೆ.
ಸುದ್ದಿ ವಾಹಿನಿಗಳಂತೂ ಅಪರಾಧ ಕುರಿತು ಆರೋಪ, ವಿಚಾರಣೆ, ನ್ಯಾಯನಿರ್ಣಯಗಳನ್ನು ಮಾಡಿ ಶಿಕ್ಷೆಯನ್ನೂ
ಪ್ರಕಟಿಸುವ ಮಟ್ಟಿಗೆ ನ್ಯಾಯಾಂಗದ ಕೆಲಸವನ್ನು ಬೇನಾಮಿಯಾಗಿ ಮಾಡತೊಡಗಿವೆ. ಈ ವಾಹಿನಿಗಳ ಭ್ರಮಾಲೋಕವನ್ನು
ನೋಡಿ ಜನ ಎಂಜಾಯ್ ಮಾಡುತ್ತಿದ್ದಾರೆಯೇ ಹೊರತು ನಂಬುತ್ತಿಲ್ಲ. ಈ ಮೀಡಿಯಾಂಗವು ತಮ್ಮ ಮಾಲೀಕರುಗಳ ಒಲವು
ನಿಲುವುಗಳಿಗೆ ಪೂರಕವಾಗಿ ಸುದ್ದಿಗಳನ್ನು ಪ್ರಚಾರಮಾಡುತ್ತಾ, ಜಾಹೀರಾತುದಾರರ ಹಿತಾಸಕ್ತಿಗೆ ತಕ್ಕಂತೆ
ಕಾರ್ಯಕ್ರಮಗಳನ್ನು ನಿರ್ಮಿಸುತ್ತಾ ॒ಜನರಲ್ಲಿ
ಭ್ರಮೆಯನ್ನು ಹುಟ್ಟಿಸಲು ಪ್ರಯತ್ನಿಸುತ್ತಿವೆ. ಹೀಗಾಗಿ ಶಾಸಕಾಂಗ ಹಾಗೂ ಕಾರ್ಯಾಂಗಗಳ ಭ್ರಷ್ಟತೆ ಹಾಗೂ
ನ್ಯಾಯಾಂಗದ ವಿಳಂಬ ನೀತಿಯ ನಿಷ್ಕ್ರೀಯತೆಯಿಂದಾಗಿ ಬಹುತೇಕ ಜನರಿಗೆ ಭ್ರಮನಿರಸನವಾಗಿದೆ. ಮೀಡಿಯಾಂಗದ
ಅತಿರೇಕವು ಸಹಿಸದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಸಹಾಯಕರಾದ ದೇಶದ ಬಹುಸಂಖ್ಯಾತ ಜನತೆ ಇಡೀ ವ್ಯವಸ್ಥೆಯ
ಬದಲಾವಣೆಗಾಗಿ ಕಾಯುತ್ತಿದೆ.
ಇಂತಹ ಸಂದರ್ಭದಲ್ಲಿ ಚಂಪಾರವರ
ಒಂದು ಚುಟುಕು ನೆನಪಾಗುತ್ತಿದೆ.
“ಹೆದ್ದಾರಿಯಲ್ಲಿ
ಕೆಟ್ಟು ನಿಂತ ಟ್ರಕ್ಕೂ ಸಾರುತ್ತಿದೆ
ದೇಶ ಮುಂದೆ ಹೋಗುತ್ತಿದೆ”
*
* * *
- ಶಶಿಕಾಂತ ಯಡಹಳ್ಳಿ