ಬುಧವಾರ, ಆಗಸ್ಟ್ 17, 2016

ದೇಶಭಕ್ತಿಯ ಉನ್ಮಾದದ ಹಿಂದೆ ಸಂಘ ಪರಿವಾರದ ಹುನ್ನಾರ :


    
ದೇಶಭಕ್ತಿ ದೈವಭಕ್ತಿ ಎನ್ನುವುದು ತೋರಿಕೆಯ ಆಡಂಬರವಲ್ಲ, ಆಗಲೂಬಾರದು. ಅದು ಅವರವರ ಅಂತರಂಗದಲ್ಲಿ ಅರಳುವಂತಹ ಅನುಭಾವ. ಆದರೆ... ಈಗ ಯಾರು ಅದನ್ನು ಬಹಿರಂಗವಾಗಿ ವಿಜ್ರಂಭಿಸಿಕೊಳ್ಳುತ್ತಾರೋ ಅವರೇ ನಿಜವಾದ ದೇಶಭಕ್ತರು ಹಾಗೂ ದೈವಭಕ್ತರು ಎನ್ನುವುದನ್ನು ಜನರ ಮೇಲೆ ಪರೋಕ್ಷವಾಗಿ ಹೇರುವ ಪ್ರಯತ್ನ ದೇಶದಾದ್ಯಂತ ಉದ್ದೇಶಪೂರ್ವಕವಾಗಿ ನಡೆಯುತ್ತಿದೆ. ದೇಶದ ಗದ್ದುಗೆ ಮೇಲೆ ಬಿಜೆಪಿ ಪಕ್ಷ ಯಾವಾಗ ಪೂರ್ಣಪ್ರಮಾಣದಲ್ಲಿ ಪ್ರಭುತ್ವದ ಅಧಿಕಾರವನ್ನು ಪಡೆಯಿತೋ ಆಗಿನಿಂದಲೂ ಸಂಘಪರಿವಾರಕ್ಕೆ ದೈತ್ಯ ಶಕ್ತಿ ಬಂದಂತಾಯಿತು. ಇಡೀ ದೇಶಕ್ಕೆ ದೇಶವೇ ಸನಾತನ ಹಿಂದೂ ಸಂಸ್ಕೃತಿಯ ಅನುಷ್ಟಾನದ ಪ್ರಯೋಗಶಾಲೆಯಾಗತೊಡಗಿದೆ. ತತ್ವ ಸಿದ್ದಾಂತ ವಿಚಾರಗಳಿಂದ ಈ  ದೇಶದ ಜನತೆಯನ್ನು ವಶೀಕರಿಸಿಕೊಳ್ಳಲು ಸಾಧ್ಯವೇ ಇಲ್ಲಾ ಎಂಬುದು ಮನುವಾದಿ ಶಕ್ತಿಗಳಿಗೆ ಯಾವತ್ತೋ ಮನವರಿಕೆಯಾಗಿ ಹೋಗಿತ್ತು. ಹೀಗಾಗಿ ವಿಚಾರಗಳ ಬದಲು ಭಾವನೆಗಳನ್ನ ಕೆರಳಿಸಿ ಜನರನ್ನು ತಮ್ಮ ಪರವಾಗಿ ವಲಿಸಿಕೊಳ್ಳುವ ಸೈಕಾಲಾಜಿಕಲ್ ಆದ ಪ್ರಯೋಗಕ್ಕೆ ಸಂಘ ಪರಿವಾರದ ಮೆದುಳಾದ ಆರ್ಎಸ್ಎಸ್ ಮೊದಲಿಂದಲೂ ಪ್ರಯತ್ನಿಸುತ್ತಲೇ ಬಂದಿತ್ತು. ರಾಜ್ಯಾಧಿಕಾರ ಸಿಕ್ಕಮೇಲೆ ಅದು ಇನ್ನೂ ಹೆಚ್ಚಾಗತೊಡಗಿತು.

ಯಾವಾಗ ಭಾವನಾತ್ಮಕವಾಗಿ ಜನತೆಯನ್ನು ಮರುಳುಗೊಳಿಸುವುದು ಸುಲಭವೆಂದು ಬಾಬರಿ ಮಸೀದಿ ಪ್ರಕರಣದ ರಾಮಮಂದಿರ ರಾಜಕಾರಣ ಹಾಗೂ ರಥಯಾತ್ರೆ ರಾಜಕಾರಣದಿಂದ ಪರಿವಾರಿಗಳಿಗೆ ಕನ್ಪರಂ ಆಯಿತೋ ಅಂದಿನಿಂದ ಅದನ್ನೇ ಹಿಂದೂ ಸಾಮ್ರಾಜ್ಯ ಸ್ಥಾಪನೆಗೆ ಪ್ರಮುಖ ಸಾಧನವನ್ನಾಗಿಸಿಕೊಳ್ಳಲಾಯಿತು. ಅದರಲ್ಲಿ ಭಾಗಷಃ ಯಶಸ್ವಿಯೂ ಆಯಿತು. ಜನರ ಭಾವನೆಗಳನ್ನು ಮ್ಯಾನುಪಲೇಟ್ ಮಾಡುತ್ತಲೇ ಬಂದು ಕೊನೆಗೆ ಮೋದಿ ಅಲೆಯಲ್ಲಿ ದೇಶವನ್ನಾಳುವ ಅಧಿಕಾರವನ್ನೂ ಅಧೀಕೃತವಾಗಿ ಪಡೆಯಿತು. ರಾಜ್ಯಾಧಿಕಾರ ಪಡೆಯುವುದೊಂದೇ ಪರಿವಾರಿಗಳ ಅಂತಿಮ ಗುರಿಯಾಗಿರಲಿಲ್ಲ. ಅದು ಅವರ ವರ್ಣಾಶ್ರಮ ಧರ್ಮಾಧಾರಿತ ಹಿಂದೂ ದೇಶ ಕಟ್ಟುವ ನಿಟ್ಟಿನಲ್ಲಿ ಮೊದಲ ಮೆಟ್ಟಿಲಾಗಿತ್ತು. ಮೊದಲ ಮೆಟ್ಟಿಲೇರಿದ ನಂತರ ಒಂದೊಂದೇ ಮೆಟ್ಟಿಲುಗಳನ್ನು ಏರುವ ಪ್ರಯತ್ನವನ್ನು ಜಾರಿಗೊಳಿಸಲು ಆರೆಸ್ಸೆಸ್ ತನ್ನೆಲ್ಲಾ ಕುಯುಕ್ತಿ ಹಾಗೂ ಸಂಘಪರಿವಾರದ ಶಕ್ತಿಯನ್ನು ಬಳಸಿಕೊಂಡು ಕಾರ್ಯತಂತ್ರಗಳನ್ನು ರೂಪಿಸತೊಡಗಿತು.


ಭಾರತೀಯರ ಮನಸ್ಸು ಗೆಲ್ಲಬೇಕಾದರೆ ಅವರನ್ನು ಭಾವನಾತ್ಮಕವಾಗಿ ಬಡಿದೆಬ್ಬಿಸಬೇಕು ಎನ್ನುವುದನ್ನು ಅರಿತ ಪರಿವಾರಿಗಳು ಗೋರಾಜಕೀಯ ಶುರುಮಾಡಿದರು. ‘’ಹಿಂದೂ ಧರ್ಮದವರೆಂದುಕೊಳ್ಳುವವರೆಲ್ಲಾ ಗೋವನ್ನು ಮಾತೆಯಾಗಿ ಪೂಜಿಸುತ್ತಾ ಬಂದಿದ್ದಾರೆ. ಹೀಗಾಗಿ ಯಾರೇ ಆಗಲಿ ಗೋಮಾತೆಯನ್ನು ಕೊಂದು ತಿನ್ನುವುದು ಅಪಚಾರ, ಹಾಗೇನಾದರೂ ಗೋಹತ್ಯೆ ಮಾಡಿದರೆ ಹಿಂದೂಗಳ ಭಾವನೆಗಳಿಗೆ ಧಕ್ಕೆ ಆಗುತ್ತದೆ ಎನ್ನುವ ರೀತಿಯಲ್ಲಿ ಪ್ರಚಾರವನ್ನು ಮಾಡತೊಡಗಿದರು. ಗೋಮಾಂಸ ತಿನ್ನುವವರೆಲ್ಲಾ ಧರ್ಮದ್ರೋಹಿಗಳು ಎನ್ನುವಂತೆ ಬಿಂಬಿಸತೊಡಗಿದರು. ಇದರ ಹಿಂದೆ ಮುಸ್ಲಿಂ ಧರ್ಮಿಯರ ವಿರುದ್ಧ ಹಿಂದೂ ಧರ್ಮಿಯರನ್ನು ಎತ್ತಿ ಕಟ್ಟುವ ಹುನ್ನಾರವೂ ಅಡಗಿತ್ತು.  ಯಾಕೆಂದರೆ ಮುಸ್ಲಿಂನವರು ಮೊದಲಿನಿಂದಲೂ ಗೋಮಾಂಸವನ್ನು ತಮ್ಮ ಆಹಾರದ ಭಾಗವನ್ನಾಗಿಸಿಕೊಂಡಿದ್ದರು. ಜೊತೆಗೆ ದಲಿತರೂ ಸಹ ಗೋಮಾಂಸವನ್ನು ಆಹಾರವಾಗಿ ಹಾಗೂ ಅದರ ಚರ್ಮವನ್ನು ವ್ಯಾಪಾರವಾಗಿ ಬಳಸಿಕೊಳ್ಳುತ್ತಿದ್ದರು. ಗೋಮಾಂಸ ತಿನ್ನುವುದರಲ್ಲಿ ಆರ್ಥಿಕ ಅನಿವಾರ್ಯತೆಗಳೂ ಈ ದಲಿತರು ಹಾಗೂ ಮುಸ್ಲಿಂ ಸಮುದಾಯದವರದ್ದಾಗಿತ್ತು. ಮಾಂಸಾಹಾರದಲ್ಲಿ ಗೋಮಾಂಸವೇ ಅತೀ  ಕಡಿಮೆ ಬೆಲೆಯದ್ದಾಗಿದ್ದರಿಂದ ಅದು ಬಡಜನತೆಯ ಆಹಾರವೂ ಆಗಿತ್ತು. ಓಟು ರಾಜಕೀಯದ ಭಾಗವಾಗಿ ದಲಿತರು ಶೂದ್ರರೆಲ್ಲ ಹಿಂದೂಗಳು ಎನ್ನುವ ಸಂಘಪರಿವಾರಿಗಳು ಸಾಮಾಜಿಕವಾಗಿ ಅವರನ್ನು ಅಸ್ಪೃಷ್ಯರನ್ನಾಗಿ ದೂರವಿಟ್ಟು ಅವಮಾನಕಾರಿಯಾಗಿ ನಡೆಸಿಕೊಳ್ಳುತ್ತಲೇ ಬಂದಿದ್ದಾರೆ. ಯಾವಾಗ ಗೋಮಾತೆಯ ಮೇಲಿನ ಭಾವನಾತ್ಮಕತೆಯನ್ನು ಬಡಿದೆಬ್ಬಿಸಿ, ದಲಿತೇತರ ಅಬ್ರಾಹ್ಮಣರನ್ನು ರೊಚ್ಚಿಗೆಬ್ಬಿಸಿ, ಅದನ್ನು ಮುಸ್ಲಿಂ ವಿರುದ್ಧ ತಿರುಗಿಸಿದರೆ ದೇಶಾದ್ಯಂತ ಸಂಘಿಗಳ ಬೆಂಬಲಿಗರ ಸಂಖ್ಯೆ ಹೆಚ್ಚಿಸಿಕೊಳ್ಳಬಹುದು ಹಾಗೂ ಜನಸಾಮಾನ್ಯರಲ್ಲೂ ಹಿಂದೂ ಭಾವನೆ ಕೆರಳಿಸಬಹುದು ಎನ್ನುವ ಆರೆಸ್ಸೆಸ್ ಹಿಡನ್ ಅಜೆಂಡಾ ಜಾರಿಯಾಗತೊಡಗಿತೋ ಆಗ ಹಲವಾರು ಕಡೆ ದಲಿತರು ಹಾಗೂ ಮುಸ್ಲಿಂ ಸಮುದಾಯದವರ ಮೇಲೆ ಹಾಡುಹಗಲೇ ಹಲ್ಲೆಗಳು ನಡೆಯತೊಡಗಿದವರು. ಹಿಂದೂವಾದಿಗಳು ಪಟ್ಟಕ್ಕೆ ಬಂದು ಈಗ ದೈತ್ಯ ಶಕ್ತಿ ಪಡೆದಿದ್ದರಿಂದ ಮುಸ್ಲಿಂ ಸಮಾಜ ಕಾದು ನೋಡುವ ತಂತ್ರಕ್ಕೆ ಬದ್ದವಾದರೆ ದಲಿತರು ಎಚ್ಚೆತ್ತುಕೊಂಡರು. ಹಿಂದುತ್ವವಾದವನ್ನು ಶತಾಯಗತಾಯ ವಿರೋಧಿಸಿದ ಅಂಬೇಡ್ಕರವರ ಸಿದ್ದಾಂತವನ್ನು ಒಪ್ಪಿ ಅಪ್ಪಿಕೊಂಡಿರುವ ದಲಿತರು ಈ ಗೋರಾಜಕೀಯಕ್ಕೆ ವಿರುದ್ದವಾಗಿ ಪ್ರತಿಭಟನೆಗಿಳಿದರು.


ಮೋದಿ ರಾಜ್ಯವಾದ ಗುಜರಾತಿನ ಊನಾ ಪ್ರಾಂತ್ಯದಲ್ಲಿ ಅಸಂಖ್ಯಾತ ದಲಿತರು 2016 ಆಗಸ್ಟ್ 15 ರಂದು ಬ್ರಹತ್ ಪ್ರತಿಭಟನಾ ಸಮ್ಮೇಳನವನ್ನು ಮಾಡಿ ಇನ್ನು ಮೇಲೆ ದಲಿತರು ದನಗಳ ಶವವನ್ನು ಎತ್ತುವುದಿಲ್ಲ, ಹಸುವಿನ ಚರ್ಮ ಸುಲಿಯುವುದಿಲ್ಲ ಅದನ್ನೆಲ್ಲಾ ಮೇಲ್ವರ್ಗದವರೇ ಮಾಡಿಕೊಳ್ಳಲಿ ಎಂದು ಶಪಥ ಮಾಡಿದರು. ಮುಸ್ಲಿಂ ಸಮುದಾಯದಿಂದ ಈ ರೀತಿ ಪ್ರತಿಭಟನೆಯಾಗಬಹುದು, ಆಗ ಅದಕ್ಕೆ ಕೋಮುವಾದಿ ಬಣ್ಣ ಬಳಿದು, ದೇಶಾದ್ಯಂತ ಗಲಭೆ ಎಬ್ಬಿಸಿ, ಹಿಂದೂಗಳನ್ನು ಮುಸ್ಲಿಂರ ಮೇಲೆ ಎತ್ತಿಕಟ್ಟಿ ತಮ್ಮ ಕಲ್ಪನೆಯ ಹಿಂದೂ ರಾಷ್ಟ್ರದ ಬುಡವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದ ಸಂಘಪರಿವಾರಿಗಳಿಗೆ ಆಘಾತವಾಗಿದ್ದು ದಲಿತರು ದಂಗೆ ಎದ್ದದ್ದನ್ನು ನೋಡಿ. ಅದೂ ಸ್ವಾತಂತ್ರ್ಯೋತ್ಸವ ದಿನದಂದು ದೇಶಪ್ರೇಮದ ಬಹಿರಂಗ ವೈಭವೀಕರಣದ ಪ್ರದರ್ಶನ ದೇಶಭಕ್ತರಿಂದ ನಡೆಯುತ್ತಿರುವ ಸಂದರ್ಭದಲ್ಲಿ. ದಲಿತ ಸಮುದಾಯದ ಮೇಲೆ ಗೋಮಾತೆಯ ಹೆಸರಲ್ಲಿ ಪರಿವಾರ ಪ್ರೇರಿತ ಗೋರಕ್ಷಕ ಪಡೆ ಅಲ್ಲಲ್ಲಿ ಹಲ್ಲೆ ನಡೆಸುವುದು ಕಳೆದ ಎರಡು ವರ್ಷಗಳಿಂದ ನಡೆಯುತ್ತಲೇ ಬಂದಿತ್ತು. ದೇಶದ ಮೂಲ ಶ್ರಮಜೀವಿಗಳಾದ ದಲಿತರನ್ನು ಎದುರು ಹಾಕಿಕೊಂಡು ತಮ್ಮ ಸ್ವಪ್ನ ಸಾಮ್ರಾಜ್ಯವನ್ನು ಕಟ್ಟುವುದು ಮನುವಾದಿ ಸಂತಾನಕ್ಕೆ ಸಾದ್ಯವೇ ಇಲ್ಲ. ಯಾಕೆಂದರೆ ದೇಶದ ಜನಸಂಖ್ಯೆಯಲ್ಲಿ ಅತೀ ಹೆಚ್ಚು ಇರುವವರೇ ದಲಿತರು ತದನಂತರ ಮುಸ್ಲಿಂರು. ಇತ್ತೀಚೆಗೆ ನಡೆದ ಕರ್ನಾಟಕದ ಜಾತಿಗಣತಿಯಲ್ಲಿ ಇದು ದೃಢಪಟ್ಟಿದೆ. ಮುಸ್ಲಿಂ ಸಮುದಾಯದ ವಿರುದ್ದ ಹಿಂದೂಗಳನ್ನು ಎತ್ತಿಕಟ್ಟುವ ಹಿಂದೂವಾದಿಗಳ ಹುನ್ನಾರಕ್ಕೆ ಪ್ರತಿಯಾಗಿ ಯಾವಾಗ ದಲಿತ ಸಮುದಾಯ ಎದ್ದು ನಿಂತಿತೋ ಆಗ ಡ್ಯಾಮೇಜ್ ಕಂಟ್ರೋಲ್ ಮಾಡಲು ಸ್ವತಃ ಪ್ರಧಾನಿಯೇ ಟೌನ್‌ಹಾಲ್ ಕಾರ್ಯಕ್ರಮದಲ್ಲಿ ನಕಲಿ ಗೋರಕ್ಷಕರನ್ನು ಶಿಕ್ಷಿಸಬೇಕು ಹಾಗೂ ದಲಿತರನ್ನು ಕೊಲ್ಲುವ ಮೊದಲು ನನ್ನನ್ನು  ಕೊಲ್ಲಿ ಎಂದು ಹೇಳಬೇಕಾಯಿತು. ಪ್ರಧಾನಿಯ ಬಾಯಲ್ಲಿ ಇಂತಹ ಹೇಳಿಕೆ ಹೇಳಿಸಿ ದಲಿತರ ಕೋಪವನ್ನು ತಣ್ಣಗಾಗಿಸುವ ಪ್ರಯತ್ನವನ್ನು ಬಿಜೆಪಿ ಬ್ರೇನ್ ಆರೆಸ್ಸೆಸ್ ಮಾಡಿತು. ಆದರೂ ಅದೇನೂ ಅಷ್ಟೊಂದು ಪರಿಣಾಮಕಾರಿಯಾಗಿ ವರ್ಕಔಟ್ ಆಗಲಿಲ್ಲ. ದಲಿತರು ದನಗಳ ಶವ ಎತ್ತುವುದಿಲ್ಲ ಎಂದು ಪ್ರತಿಭಟನೆಗಿಳಿದರು. ಜೊತೆಗೆ ತಮಗೆ ಐದು ಎಕರೆ ಭೂಮಿ ಬೇಕೆಂದು ಡಿಮಾಂಡ್ ಮಾಡತೊಡಗಿದರು.



ತಾವು ಬಿಟ್ಟ ಗೋವಿನಾಸ್ತ್ರ ಹೀಗೆ ಬೂಮರಾಂಗ್ ರೀತಿಯಲ್ಲಿ ತಮಗೇ ವಾಪಸ್ ಬಂದು ತಮ್ಮ ಬುಡವನ್ನೇ ಅಲ್ಲಾಡಿಸತೊಡಗಿದ್ದನ್ನು ಕಂಡು ಕಂಗಾಲಾದ ಪರಿವಾರ ಪಡೆ ಅದಕ್ಕೆ ಪ್ರತಿಯಾಗಿ ತನ್ನ ಇನ್ನೊಂದು ಪ್ರಸಿದ್ದ ದೇಶಭಕ್ತಿ ಎನ್ನುವ ಮೇನಿಯಾಸ್ತ್ರವನ್ನು ಪ್ರಯೋಗಿಸತೊಡಗಿತು. ಜನರಲ್ಲಿ ದೇಶಭಕ್ತಿಯ ಉನ್ಮಾದವನ್ನು ಹುಟ್ಟಿಸಿ ದಲಿತರ ಆಕ್ರೋಶವನ್ನು ಡೈವರ್ಟ ಮಾಡುವುದು ಹಾಗೂ ಮುಸ್ಲಿಂ ವಿರೋಧಿ ಭಾವನೆ ಕೆರಳಿಸುವುದು ಸಂಘಿಗಳ ತಂತ್ರವಾಯಿತು. ಇದರ ಭಾಗವಾಗಿಯೇ ವರ್ಷಕ್ಕೊಂದು ದಿನಕ್ಕೆ ಸೀಮಿತವಾಗಿದ್ದ ಸ್ವಾತಂತ್ರೋತ್ಸವವನ್ನು ಹದಿನೈದು ದಿನಕ್ಕೆ ವಿಸ್ತರಿಸಿ ಬಿಜೆಪಿ ತಿರಂಗಾ ಯಾತ್ರೆಯನ್ನು ಆರಂಭಿಸಲಾಯಿತು. ದೇಶಪ್ರೇಮದ ಹೆಸರಲ್ಲಿ ದೇಶವಿರೋಧಿ ಸನ್ನಿವೇಶಗಳನ್ನು ಸೃಷ್ಟಿಸಿ ಆ ಮೂಲಕ ಜನರಲ್ಲಿ ಸಂಘಪರಿವಾರಿಗಳ ದೇಶಭಕ್ತಿಯನ್ನು ಮನದಟ್ಟುಮಾಡಿಕೊಡಬೇಕು ಎನ್ನುವ ಆಟವನ್ನು ಸಂಘಿಗಳು ಶುರುಮಾಡಿದರು. ಅದಕ್ಕೆ ಒಂದು ಲೇಟೆಸ್ಟ್ ಉದಾಹರಣೆ ಯುನೈಟೆಡ್ ಥಿಯೋಲಾಜಿಕಲ್ ಕಾಲೇಜಿನ ಪ್ರಕರಣ.

ಬೆಂಗಳೂರಿನ ಕಂಟೋನ್ವೆಂಟಿನಲ್ಲಿರುವ ಯುನೈಟೆಡ್ ಥಿಯೋಲಾಜಿಕಲ್ ಕಾಲೇಜಿನಲ್ಲಿ 'ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ' ಎನ್ನುವ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಯು 2916 ಆಗಸ್ಟ್ 13ರಂದು ಕಾಶ್ಮೀರಿ ಸಂತ್ರಸ್ತರ ಪರವಾಗಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು. ಅದರಲ್ಲಿ ಭಾರತೀಯ ಸೈನ್ಯವು ತಮ್ಮ ಮೇಲೆಸೆಗಿದ ದೌರ್ಜನ್ಯದ ಬಗ್ಗೆ ಸಂತ್ರಸ್ತರು ತಮ್ಮ ನೋವನ್ನು ವ್ಯಕ್ತಪಡಿಸಿ ಸೈನ್ಯದ ದಬ್ಬಾಳಿಕೆ ವಿರೋಧಿಸಿ, ಪ್ರತ್ಯೇಕ ಕಾಶ್ಮೀರವನ್ನು ಸಮರ್ಥಿಸಿ ಘೋಷಣೆ ಕೂಗಿದರು. ಇಂತಹುದೇ ಒಂದು ಸಣ್ಣ ಸುಳಿವಿಗಾಗಿ ಹಪಹಪಿಸುತ್ತಿದ್ದ ಸಂಘಪರಿವಾರದ ವಿದ್ಯಾರ್ಥಿ ಸಂಘಟನೆ ಎಬಿವಿಪಿಯ ಸದಸ್ಯರು ಆಹ್ವಾನವಿಲ್ಲದೇ ಆ ಸಭೆಗೆ ಪ್ರವೇಶಿಸಿ, ದೇಶದ್ರೋಹವೆಂದು ಗುಲ್ಲೆಬ್ಬಿಸಿ, ಅದನ್ನೊಂದು ದೊಡ್ಡ ಇಸ್ಯೂ ಮಾಡಿ ಬೀದಿಗಿಳಿಯಿತು. ಹಿಂದೂ ಮುಂದೂ ಯೋಚಿಸದ ಕರ್ನಾಟಕದ ಪೊಲೀಸರು ಅಕ್ರಮ ಸಭೆ, ರಾಷ್ಟ್ರದ್ರೋಹ ಹಾಗೂ ಗಲಭೆಗೆ ಪ್ರಚೋದನೆ ಆರೋಪದಲ್ಲಿ ಸಂಸ್ಥೆಯ ಮೇಲೆ ಮೊಕದ್ದಮೆ ದಾಖಲಿಸಿದರು. ಅಸಲಿಗೆ ಅಲ್ಲಿ ನಡೆದದ್ದೇನು? ಯಾಕೆ ನಡೆಯಿತು? ಎನ್ನುವುದನ್ನು ತಿಳಿದುಕೊಳ್ಳುವ ತಾಳ್ಮೆಯೂ ಇಲ್ಲದ ಟಿವಿ ವಾಹಿನಿಗಳು ದೇಶಭಕ್ತರ ಉನ್ಮಾದದ ಕಿಚ್ಚಿಗೆ ಸೀಮೆಎಣ್ಣೆ ಸುರಿಯತೊಡಗಿದವು. ವಿಷಯವೇ ಅಲ್ಲದ ವಿಷಯ ಅಂತರಾಷ್ಟ್ರೀಯ ಸುದ್ದಿಯಾಗಿ ನಕಲಿ ದೇಶಭಕ್ತರಿಗೆ ಹಬ್ಬವಾಯಿತು. ಕಾಶ್ಮೀರಿ ಸಂತ್ರಸ್ತರೆಲ್ಲಾ ಮುಸ್ಲಿಂ ಸಮುದಾಯದವರಾಗಿದ್ದರಿಂದ ಈ ದೇಶಭಕ್ತರಿಗೆ ತಮ್ಮ ಅದಮ್ಯ ದೇಶಭಕ್ತಿಯನ್ನು ತೋರಿಸಲು ಅವಕಾಶವಾಯಿತು.


ಅಸಲಿಗೆ ಈ ನಕಲಿ ದೇಶಭಕ್ತರ ಕುಟುಂಬ ಸದಸ್ಯರೇನಾದರೂ ಸೈನಿಕರ ದೌರ್ಜನ್ಯಕ್ಕೆ ಒಳಗಾಗಿದ್ದರೆ ಇವರೂ ಸೈನೈದ ದಾದಾಗಿರಿಯ ವಿರುದ್ದ ದಿಕ್ಕಾರ ಕೂಗುತ್ತಿದ್ದರು. ಯಾಕೆಂದರೆ ಯಾವುದೇ ದೇಶದ ಸೈನ್ಯವಿರಲಿ ಅದು ದೇಶ ರಕ್ಷಿಸುವ ಜೊತೆಗೆ ಅವಕಾಶ ಸಿಕ್ಕಾಗಲ್ಲೆಲ್ಲಾ ಪ್ರತಿಭಟಿಸಿದ ಜನಸಾಮಾನ್ಯರ ಮೇಲೆ ದಬ್ಬಾಳಿಕೆ ಮಾಡುತ್ತಲೇ ಇರುತ್ತದೆ. ಕಾಶ್ಮೀರದಲ್ಲೂ ಸಹ ಭಯೋತ್ಪಾದಕರ ಹುಟ್ಟಡಗಿಸುತ್ತಲೇ ಅಲ್ಲಿಯ ನಿವಾಸಿಗಳ ಮೇಲೆ ಅಪಾರವಾದ ದೌರ್ಜನ್ಯವೆಸಗಿದೆ. ಸ್ವಾತಂತ್ರ್ಯಾ ನಂತರವೂ ಸಹ ಭಾರತೀಯ ಮಿಲಿಟರಿಯು ದೇಶದ ಅನೇಕ ಕಡೆ ಹೋರಾಟಗಳನ್ನು ಹತ್ತಿಕ್ಕುವಾಗ ಅಲ್ಲಿಯ ಜನರನ್ನು ಹಿಂಸಿಸಿದೆ, ಎನ್‌ಕೌಂಟರ್ ಹೆಸರಲ್ಲಿ ಹತ್ಯೆಗಳನ್ನೂ ಮಾಡಿದೆ. ಮಹಿಳೆಯರ ಮೇಲೆ ಅತ್ಯಾಚಾರವೆಸಗಿದೆ. ದೇಶರಕ್ಷಣೆಗಿರುವ ಸೈನ್ಯ ಎಂದ ಕೂಡಲೇ ಅದು ಯಾರ ಮೇಲೆ ಅದೆಷ್ಟೇ ದೌರ್ಜನ್ಯ ಮಾಡಿದರೂ ಸಹಿಸಿಕೊಳ್ಳುವುದು ದೇಶಭಕ್ತಿ ಎನ್ನುವುದಾದರೆ ಅಂತಹ ದೇಶಭಕ್ತಿಗೆ ದಿಕ್ಕಾರವಿರಲಿ. ದೌರ್ಜನ್ಯಕ್ಕೊಳಗಾಗಿ ಎಲ್ಲವನ್ನೂ ಕಳೆದುಕೊಂಡು ಸಂತ್ರಸ್ತರಾದವರು ಮಿಲಿಟರಿ ವಿರುದ್ದ ಆಕ್ರೋಶಗೊಳ್ಳಬಾರದು, ಸೈನ್ಯದ ದೌರ್ಜನ್ಯದ ವಿರುದ್ದ ಧಿಕ್ಕಾರ ಕೂಗಬಾರದು ಎಂದುಕೊಳ್ಳುವುದೇ ಅಮಾನವೀಯವಾದದ್ದು. ತನ್ನದೇ ದೇಶದ ಜನತೆಯ ಮೇಲೆ ಅಮಾನವೀಯ ಕೃತ್ಯ ನಡೆಸಲು ಸೈನ್ಯವನ್ನು ಬಳಸುವ ದೇಶ ಯಾವುದೇ ಆದರೂ ಅದು ಖಂಡನೀಯವಾದದ್ದು. ಅಂತಹ ದೇಶದ ವಿರುದ್ದ ಘೋಷಣೆ ಕೂಗಿದರೆ ಅದು ದೇಶದ್ರೋಹವಾಗುತ್ತದೆ. ಅದೇ ದೇಶದ ಸೈನ್ಯ ಅವೇಳೆಯಲ್ಲಿ ಮನೆಮನೆ ಹೊಕ್ಕು ಸಿಕ್ಕವರ ಮೇಲೆ ದೌರ್ಜನ್ಯವೆಸಗಿದರೆ ಅದು ದೇಶಭಕ್ತಿಯಾಗುತ್ತದೆಯಾ?. ಸೈನ್ಯದ ಹಿಂಸೆಯಿಂದ ಸಂತ್ರಸ್ತರಾದ ಕಾಶ್ಮೀರದ ಜನತೆಯ ಪರವಾಗಿ ಮಾನವ ಹಕ್ಕು ಸಂಘಟನೆಗಳು ಸಭೆ ನಡೆಸುವುದು ದೇಶದ್ರೋಹವೆನ್ನುವುದಾದರೆ ಈ ದೇಶದಲ್ಲಿ ಅನ್ಯಾಯವನ್ನು ವಿರೋಧಿಸುವ ಎಲ್ಲಾ ಹೋರಾಟಗಳೂ ದೇಶದ್ರೋಹವಾಗಬೇಕಾಗುತ್ತದೆ. ಶೋಷಣೆ ಮಾಡುವ ಸರಕಾರದ ವಿರುದ್ಧ, ಅಸಮಾನತೆಯನ್ನು ಪೋಷಿಸುವ ದೇಶದ ವಿರುದ್ದ ಘೋಷಣೆ ಕೂಗಿದರೆ ಅದು ದೇಶಭಕ್ತ ಸಂಘಿಗಳಿಗೆ ಅಪರಾಧವೆನಿಸುತ್ತದೆ.

ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದರದು ದೇಶದ್ರೋಹ ಎನ್ನುವುದು ಎಬಿವಿಪಿ ಆರೋಪ. ಜೆಎನ್‌ಯು ಕಾಲೇಜಿನಲ್ಲೂ ಸಹ ಇದೇ ಆರೋಪ ಮಾಡಿ ಕನ್ಹಯ್ಯಕುಮಾರ್ ಹಾಗೂ ಇತರ ಎಡಪಂಥೀಯ ವಿದ್ಯಾರ್ಥಿಗಳನ್ನು ದೇಶದ್ರೋಹಿಗಳೆಂದು ಸಾಬೀತುಮಾಡಲು ಹೋಗಿ ಸಂಘಪರಿವಾರ ಮುಖಭಂಗ ಮಾಡಿಕೊಂಡಿತ್ತು. ಆದರೂ ಬುದ್ದಿ ಕಲಿಯದೇ ಮತ್ತೆ ಕಾಲೇಜಿನಲ್ಲಿ ದೇಶದ್ರೋಹದ ಹೆಸರಲ್ಲಿ ಗಲಭೆ ಸೃಷ್ಟಿಸಿ ಕೋಮುಪ್ರಚೋದನೆ ಮಾಡುವ ಹುನ್ನಾರ ಮಾಡಿತು. ಏನೂ ಗೊತ್ತಿಲ್ಲದ ಜನರೂ ಸಹ ದೇಶದ್ರೋಹ ಎಂದ ಕೂಡಲೇ ಉನ್ಮಾದಕ್ಕೆ ಒಳಗಾಗುತ್ತಾರೆ ಹಾಗೂ ಆ ರೀತಿಯ ಉನ್ಮಾದವನ್ನು ಸೃಷ್ಟಿಸಲು ಮನುವಾದಿ ಮನಸ್ಥಿತಿಯವರು ಮಾಧ್ಯಮಗಳಲ್ಲಿ ತುಂಬಿದ್ದಾರೆ. ಇಷ್ಟಕ್ಕೂ ಯಾವುದೇ ದೇಶಕ್ಕೆ ಗೆಲುವಾಗಲಿ ಎನ್ನುವುದು ದೇಶದ್ರೋಹ ಹೇಗಾದೀತು? ಇದೇ ಸಂಘಪರಿವಾರದ ಭಾಗವೇ ಆದ ಶ್ರೀಶ್ರೀ ರವಿಶಂಕರ ಗುರೂಜಿ ಯೋಗ ಸಮ್ಮೇಳನದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಬಹಿರಂಗವಾಗಿ ಘೋಷಿಸಿದಾಗ ಈ ಸಂಘಿಗಳು ಯಾಕೆ ಮೂರು ಮುಚ್ಚಿಕೊಂಡು ಸುಮ್ಮನಿದ್ದರು. ಆಗ ಇವರ ದೇಶಭಕ್ತಿ ರಜೆಮೇಲೆ ಹೋಗಿತ್ತಾ?  ಅಮೇರಿಕ ಜಿಂದಾಬಾದ್ ಎಂದಿದ್ದರೆ ಇವರಿಗೆ ಏನೂ ಅನ್ನಿಸುತ್ತಿರಲಿಲ್ಲವೇನೋ.. ಆದರೆ ಪಾಕಿಸ್ತಾನ್ ಜಿಂದಾಬಾದ ಎಂದ ತಕ್ಷಣ ಇವರ ಪಂಚೇಂದ್ರಿಯಗಳು ಕುದಿಯಲು ತೊಡಗುತ್ತವೆ. ಇಂತಹ ಮನೋಭಾವನೆಯೇ ದ್ವೇಷವನ್ನು ಬೆಳೆಸುವುದು. ಸಂಘಿಗಳಿಗೆ ಅದೇ ಬೇಕಿದೆ. ಹಿಂದುಸ್ತಾನ್ ಮುರ್ದಾಬಾದ ಅಂದರೆ ದೇಶದ್ರೋಹ ಎನ್ನಬಹುದು. ಆದರೆ.. ಬೇರೆ ದೇಶಗಳಿಗೆ ಜಯವಾಗಲಿ ಎಂದು ಬಯಸುವುದರಲ್ಲಿ ತಪ್ಪೇನಿದೆ.

ಪಾಕಿಸ್ತಾನದ ಬಲೂಚಿಸ್ತಾನ್, ಗಿಲ್ಗಿಟ್, ಬಲ್ವಿಸ್ತಾನ್ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಜನತೆ ಪಾಕಿಸ್ತಾನದ ಮಿಲಿಟರಿಯ ದೌರ್ಜನ್ಯದಿಂದ ತತ್ತರಿಸಿದ್ದಾರೆ. ಪಾಕಿಸ್ತಾನದಿಂದಲೇ ಪ್ರತೇಕಗೊಳ್ಳುವ ಹೋರಾಟ ಮಾಡುತ್ತಿದ್ದಾರೆ. ಅದಕ್ಕೆ ನಮ್ಮ ಪ್ರಧಾನಿ ಮೋದಿಯವರು ಆಗಸ್ಟ್ 15ರ ಭಾಷಣದಲ್ಲಿ ಬೆಂಬಲ ವ್ಯಕ್ತಪಡಿಸಿದ ಕೂಡಲೇ ಸಂಘಪರಿವಾರದ ದೇಶಭಕ್ತರು ಕುಣಿಕುಣಿದಾಡಿದರು. ಮಾಧ್ಯಮಗಳು ಪ್ರಧಾನಿಯನ್ನು ಹಾಡಿಹೊಗಳಿದವು. ಬಲೂಚಿಸ್ತಾನದ ಸಂತ್ರಸ್ತ ಜನ ಮೋದಿಗೆ ಧನ್ಯವಾದ ಹೇಳಿದರು. ಹಾಗಾದರೆ ಆ ಪ್ರದೇಶದ ಜನರೆಲ್ಲಾ ದೇಶದ್ರೋಹಿಗಳು ಅಂದ ಹಾಗಾಯ್ತು. ಬೇರೆ ದೇಶದ ದೇಶದ್ರೋಹಿಗಳು ಈ ದೇಶದ ನಕಲಿ ದೇಶಭಕ್ತರ ಪಾಲಿಗೆ ದೇಶಪ್ರೇಮಿಗಳಾಗಿ ಹೋದರಾ? ಎರಡೂ ದೇಶಗಳಲ್ಲಿ ಹಂಚಿಹೋದ ಕಾಶ್ಮೀರಗಳಲ್ಲಿ ಸೈನ್ಯದ ದೌರ್ಜನ್ಯದಿಂದ ನೊಂದವರು ತಮ್ಮ ಮೇಲೆ ದಬ್ಬಾಳಿಕೆ ಮಾಡಿದ ದೇಶದ ಮೇಲೆ ಆಕ್ರೋಶ ಹೊಂದಿದ್ದು ಸಹಜವಾಗಿದೆ. ನಾವೆಷ್ಟೇ ದೌರ್ಜನ್ಯ ಮಾಡಿದರೂ ನೀವು ಸೈನ್ಯದ ಬಗ್ಗೆ, ದೇಶದ ಬಗ್ಗೆ ಮಾತಾಡಬಾರದು ಎಂದು ಆಜ್ಞೆ ಹೊರಡಿಸಿ ದೇಶಭಕ್ತಿಯನ್ನು ಹುಟ್ಟುಹಾಕಲು ಸಾಧ್ಯವಿದೆಯಾ? ಸಂತ್ರಸ್ತರಿಗೆ ಬೇಕಾಗಿರುವುದು ಯಾವ ದೇಶವೆಂಬುದಲ್ಲ. ಅವರಿಗೆ ನೆಮ್ಮದಿಯಾಗಿ ಬದುಕುವ ಸ್ವಾತಂತ್ರ್ಯ ಬೇಕಿದೆ. ಅದನ್ನು ಕೊಡಲು ಈ ದೇಶ ವಿಫಲವಾದರೆ ಅವರು ದೇಶದ ವಿರುದ್ಧ ತಿರುಗಿ ಬೀಳುತ್ತಾರೆ ಎನ್ನುವ ಸಾಮಾನ್ಯ ಅರಿವೂ ಈ ದೇಶಭಕ್ತರಿಗಿಲ್ಲ. ಅದು ಅವರಿಗೆ ಬೇಕಾಗೂ ಇಲ್ಲ.

ಆಗಸ್ಟ್ 14 ರ ರಾತ್ರಿ  ತುಮಕೂರಿನಲ್ಲಿ ನಡೆದ ಇನ್ನೊಂದು ಪುಟ್ಟ ಘಟನೆ ಹೀಗಿದೆ. ಗೃಹಸಚಿವರಾದ ಪರಮೇಶ್ವರ್ ಒಡೆತನದ ಎಸ್‌ಎಸ್‌ಐಟಿ ಎನ್ನುವ ಕಾಲೇಜು ತುಮುಕೂರಿನಲ್ಲಿದೆ. ಅಂದು ಮಧ್ಯರಾತ್ರಿ ಮದ್ಯಸೇವನೆ ಮಾಡಿದ ಇಂಜನೀಯರಿಂಗ್ ವಿದ್ಯಾರ್ಥಿ ಪ್ರವೀಣ್ ಸಿಂಗ್ ಹಾಗೂ ಗೆಳೆಯರು ತಮಾಷೆಗಾಗಿಯೋ ಕುಡಿತದ ಅಮಲು ಹೆಚ್ಚಾಗಿದ್ದಕ್ಕೋ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆಂದು ಸೆಕ್ಯೂರಿಟಿ ಗಾರ್ಡ ಹೇಳುತ್ತಿದ್ದಾನೆಂಬ ವದಂತಿಯನ್ನು ಸಂಘಿಗಳು ಹಬ್ಬಿಸಿದರು. ಹೀಗೆ ಘೋಷಣೆ ಕೂಗಿದರೆಂದು ಪೊಲೀಸರ ವಶಕ್ಕೆ ಪಡೆಯಲಾದ ಈ ವಿದ್ಯಾರ್ಥಿಗಳು ಬಿಹಾರ ಹಾಗೂ ಕಾಶ್ಮೀರ ಮೂಲದವರು. ಅವರು ಯಾರಾದರೂ ಆಗಿರಲಿ ಪಾಕಿಸ್ತಾನ್ ಜಿಂದಾಬಾದ್ ಎಂದರೆ ಅದು ಹಿಂದುಸ್ತಾನ್ ಮುರ್ದಾಬಾಧ್ ಎಂದ ಹಾಗೆ ಅನ್ನಿಸುತ್ತದೆಯೇ?. ಒಂದು ಮನೆಯವರು ಇನ್ನೊಂದು ಮನೆಯವರಿಗೆ ಒಳ್ಳೆಯದಾಗಲಿ ಎಂದು ಬಯಸಲೇ ಬಾರದೇ? ಎಂತಹ ಸಂಕುಚಿತ ಮನಸ್ಸುಗಳಿವು. ವಿಚಿತ್ರವೆಂದರೆ ನಮ್ಮ ಪೊಲೀಸರು ಈ ಹುಡುಗರ ಮೇಲೆ ದೇಶವಿರೋಧಿ ಘೋಷಣೆ ಕೂಗಿರುವ ಆರೋಪ ಹೊರೆಸಿ ಆರೆಸ್ಟ್ ಮಾಡಿ ಪ್ರವೀಣ್ ಸಿಂಗ್ ವಿರುದ್ದ ಪ್ರಕರಣವನ್ನೂ ದಾಖಲಿಸಿದ್ದಾರೆ. ಸಂಘಪರಿವಾರಿಗಳು ಬೀದಿಗೆ ಬಂದು ದೇಶದ್ರೋಹವೆಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಬೇರೆ ಯಾವುದೇ ದೇಶದ ಪರವಾಗಿ ಜಿಂದಾಬಾದ್ ಎನ್ನುವುದು ದೇಶದ್ರೋಹವಲ್ಲವೆನ್ನುವುದನ್ನು ಈ ಪೊಲೀಸರಿಗೆ ಯಾರು ತಿಳಿಸಿ ಹೇಳಬೇಕು. ಎಂದೂ ಒಂದು ದೇಶಕ್ಕೆ ಇನ್ನೊಂದು ದೇಶ ಶತ್ರುವಲ್ಲ. ಆಯಾ ದೇಶದ ಆಳುವ ವರ್ಗಗಳು ತಮ್ಮ ಸ್ವಾರ್ಥಕ್ಕೆ ದ್ವೇಷವನ್ನು ಬೆಳೆಸುತ್ತಾ ಬರುತ್ತವೆ. ಒಂದು ದೇಶವೆಂದರೆ ಕೇವಲ ಆಳುವ ವರ್ಗವಲ್ಲಾ, ಆ ದೇಶದಲ್ಲಿರುವ ಜನವಿರೋಧಿಗಳಲ್ಲ. ಆ ದೇಶದ ಸಮಸ್ತ ಜನತೆಯಾಗಿದ್ದಾರೆ. ಎಲ್ಲಾ ದೇಶದ ಬಹುಸಂಖ್ಯಾತ ದುಡಿಯುವ ಜನತೆ ಯಾವಾಗಲೂ ಶಾಂತಿ ಹಾಗೂ ಸೌಹಾರ್ಧತೆಯನ್ನೇ ಬಯುಸುತ್ತದೆ. ಆದರೆ.. ಆಳುವ ವರ್ಗಗಳು ಒಂದು ದೇಶವನ್ನು ಇನ್ನೊಂದು ದೇಶದ ಮೇಲೆ ಎತ್ತಿಕಟ್ಟಿ ತಮ್ಮ ನ್ಯೂನ್ಯತೆಗಳನ್ನು ಮುಚ್ಚಿಕೊಳ್ಳುತ್ತಾ ಬಂದಿವೆ. ಇದಕ್ಕೆ ಪಾಕಿಸ್ತಾನವಾಗಲಿ ಇಲ್ಲವೇ ಭಾರತವಾಗಲೀ ಹೊರತಲ್ಲ. ದೇಶಗಳ ದ್ವೇಷಕ್ಕೆ ಧರ್ಮದ ಹವಿಸ್ಸನ್ನು ಹಾಕುವ ಮತಾಂಧ ಶಕ್ತಿಗಳು ದೇಶಕ್ಕೆ ದೇಶವನ್ನೇ ಅಗ್ನಿಕುಂಡ ಮಾಡಿಬಿಡುತ್ತವೆ. ಭಾರತದಲ್ಲಿ ಈ ಕೆಲಸವನ್ನು ಸಂಘಪರಿವಾರ ಸಂಘಟಿತವಾಗಿ ಮಾಡುತ್ತಾ ನಕಲಿ ದೇಶಭಕ್ತರನ್ನು ಹುಟ್ಟುಹಾಕಿ, ದೇಶದ ನೆಮ್ಮದಿಯನ್ನು ಹಾಳುಮಾಡಿ. ತನ್ನ ಮನುವಾದಿ ಹಿಂದೂರಾಷ್ಟ್ರ ಸ್ಥಾಪನೆಯ ಕನಸನ್ನು ಕಾಣುತ್ತಿದೆ. ಇದೆಲ್ಲಾ ಗೊತ್ತಿಲ್ಲದ ಸಾಮಾನ್ಯ ಜನತೆ ದೇಶಭಕ್ತಿ ಇಲ್ಲವೇ ಗೋಭಕ್ತಿಯ ಭಾವಾತಿರೇಕಕ್ಕೆ ಒಳಗಾಗಿ ಈ ಸಂಘಪರಿವಾರಿಗಳ ತಂತ್ರದ ಭಾಗವಾಗುತ್ತಿದ್ದಾರೆ. ದೇಶಕ್ಕೆ ದೇಶವೇ ಒಳಗೊಳಗೆ ಅಸಹನೆಯಿಂದ ಕುದಿಯುತ್ತಿದೆ.

ದೇಶಭಕ್ತಿಯ ಉನ್ಮಾದವನ್ನು ಬಿತ್ತುತ್ತಿರುವ ಆರೆಸ್ಸೆಸ್ ಸಂಘಟನೆಯ ಗುಪ್ತಕಾರ್ಯಾಚರಣೆಗಳ ಸಮಗ್ರ ವಿವರ ಬೇಕಾದರೆ ಮಲಯಾಳಿ ಪುಸ್ತಕ ನರಕ ಸಾಕೇದತ್ತಿಲೆ ಉಳ್ಳರಗಳ್ ಓದಲೇಬೇಕು. 25 ವರ್ಷಗಳಷ್ಟು ಸುದೀರ್ಘ ಕಾಲ ಆರೆಸ್ಸೆಸ್ ಪ್ರಚಾರಕನಾಗಿದ್ದ ಕೇರಳದ ಕಣ್ಣೂರಿನ ಸುದೀಶ್ ಮಿನ್ನಿ ಎನ್ನುವವರು ತನ್ನ ಕರಾಳ ಅನುಭವವನ್ನು ತೆರೆದಿಟ್ಟು ಬರೆದ ಪುಸ್ತಕವಿದು. ಈ ಪುಸ್ತಕ ಪ್ರಕಟಗೊಂಡ ಎರಡೇ ವಾರದಲ್ಲಿ ಮೂರನೆಯ ಮುದ್ರಣ ಕಂಡು ಮಲಯಾಳಿ ಸಾಹಿತ್ಯದಲ್ಲಿ ಹೊಸ ದಾಖಲೆ ಬರೆದಿದೆ. ಈ ಪುಸ್ತಕದಲ್ಲಿ ಆರೆಸ್ಸೆಸ್‌ನ ಭಯೋತ್ಪಾದನೆ, ಕೋಮುವಾದಿತನ, ಕ್ರೌರ್ಯಗಳಾದಿ ಅಂತಪುರದ ರಹಸ್ಯಗಳನ್ನೆಲ್ಲಾ ಸ್ಪಷ್ಟ ಪುರಾವೆಗಳೊಂದಿಗೆ ಬಹಿರಂಗ ಪಡಿಸಲಾಗಿದೆ. ಆ ಪುಸ್ತಕದಲ್ಲಿ ಅದು ಹೇಗೆ ಯುವಕರ ಮೆದುಳಲ್ಲಿ ಕೋಮುಬೀಜ ಬಿತ್ತಿ ಜೀವವಿರೋಧಿ ಕೃತ್ಯಗಳಿಗೆ ಪ್ರೇರೇಪಿಸಲಾಗುತ್ತದೆಂಬುದು ದಾಖಲಾಗಿದೆ. ಕ್ಯಾಂಪಿನಲ್ಲಿ ಮುಸ್ಲಿಂರು, ಕ್ರೈಸ್ತರು ಹಾಗೂ ಕಮ್ಯೂನಿಸ್ಟರ ವಿರುದ್ದ ವಿಷವನ್ನು ಹೇಗೆಲ್ಲಾ ತುಂಬಲಾಗುತ್ತದೆ ಎಂಬುದನ್ನು ವಿವರಿಸಲಾಗಿದೆ. ಯುವಕರಿಗಾಗಿ ನಡೆಯುವ ತರಬೇತಿ ಕ್ಯಾಂಪ್‌ಗಳಲ್ಲಿ ಭಾಗವಹಿಸುವ ಸ್ವಯಂಸೇವಕರು ಅಲ್ಲಿಂದ ಹೋಗುವ ಮುನ್ನ ಪತ್ರವೊಂದನ್ನು ಬರೆದು ತಾನು ಊರಿಗೆ ಮರಳಿದ ನಂತರ ಮಾಡಿಸಬಹುದಾದ ಗಲಭೆಯಾದಿ ಸಂಘದ ಕಾರ್ಯಚಟುವಟಿಕೆಗಳನ್ನು ಬರೆದುಕೊಡುತ್ತಾರೆ. ಹಾಗೂ ಅದಕ್ಕೆ ತಗಲುವ ಖರ್ಚುವೆಚ್ಚದ ವಿವರಗಳನ್ನೂ ತಿಳಿಸಿ ಕಾರ್ಯಯೋಜನೆ ಹಾಗೂ ಹಣದೊಂದಿಗೆ ತಮ್ಮ ಊರುಗಳಿಗೆ ಮರಳುತಾರಂತೆ. ಊರಿಗೆ ಹೋದ ನಂತರ ದೇವಸ್ಥಾನದ ಮುಂದೆ ವ್ಯಾಪಾರ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿಯ ಮೇಲೆ ದಾಳಿ ಮಾಡಿ ಲೂಟಿ ಮಾಡುವುದು, ಹಸುವಿನ ತಲೆಯನ್ನು ಕಡಿದು ಯಾವುದಾದರೂ ದೇವಸ್ಥಾನದ ಮುಂದೆ ಹಾಕುವುದು.. ಹೇಗಾದರೂ ಮಾಡಿ ಕೋಮುದ್ವೇಷವನ್ನು ವ್ಯಾಪಕವಾಗಿ ಹುಟ್ಟುಹಾಕುವುದು.. ಹೀಗೆ ಮುಂತಾದ ಕೆಲಸಗಳಿಗೆ ಸ್ವಯಂಸೇವಕರುಗಳನ್ನು ಪ್ರೇರೇಪಿಸಿ ಬೇಕಾದ ಫಂಡ್‌ನ್ನು ವದಗಿಸಿ ಸಮಾಜವನ್ನು ಒಡೆಯುವ ಕೆಲಸವನ್ನು ನಿರಂತರವಾಗಿ ಮಾಡಲು ಪ್ರಚೋದಿಸಲಾಗುತ್ತದಂತೆ.  ಅಸಹಾಯಕ ಅನಾಥ ಮಕ್ಕಳ ಕುರಿತು ನಕಲಿ ವಿಡಿಯೋ ಮಾಡಿಸಿ ಅದನ್ನು ದೇಶ ವಿದೇಶದಲ್ಲಿರುವ ಸಂಘದ ಸಿಂಪಥೈಸರುಗಳಿಗೆ ತೋರಿಸಿ ಅಪಾರ ಪ್ರಮಾಣದ ಫಂಡ್ ಎತ್ತಲಾಗುತ್ತಿದೆಯಂತೆ. ಗುರುದಕ್ಷಿಣೆ ಹೆಸರಲ್ಲೂ ಕೊಟ್ಯಾಂತರ ಫಂಡ್ ಎತ್ತುತ್ತಿದ್ದಾರಂತೆ. ಜೊತೆಗೆ ಗಲಭೆಗಳನ್ನು ಸೃಷ್ಟಿಸಿ ಬ್ರಹತ್ ಪ್ರಮಾಣದ ಲೂಟಿ ನಡೆಸಿ ಹಣ ಸಂಪಾದಿಸುವುದನ್ನೂ ಸಹ ಆರೆಸ್ಸೆಸ್ ತನ್ನ ವರಮಾನದ ಮಾರ್ಗವಾಗಿ ಮಾಡಿಕೊಂಡಿದೆಯಂತೆ. ವಂಚನೆ ಸುಳ್ಳುವದಂತಿಗಳನ್ನೇ ಆರೆಸ್ಸೆಸ್‌ನವರು ತಮ್ಮ ಕಾರ್ಯಶೈಲಿಯನ್ನಾಗಿಸಿಕೊಂಡು ದೇಶವನ್ನು ಧರ್ಮದ ಆಧಾರದಲ್ಲಿ ಒಡೆದು ತಮ್ಮ ಮೂಲ ಉದ್ದೇಶದತ್ತ ಸಾಗುತ್ತಿದ್ದಾರೆ.. ಎನ್ನುವ ಹಲವಾರು ಸತ್ಯಗಳನ್ನು ಸುಧೀಶ್ ಮಿನ್ನಿ ತನ್ನ ಪುಸ್ತಕದಲ್ಲಿ ಬರೆದು ಆರೆಸ್ಸೆಸ್ ಮುಖವಾಡವನ್ನು ಬೆತ್ತಲಾಗಿಸಿದ್ದಾರೆ. ಇಂತಹ ಆರೆಸ್ಸೆಸ್ ಕ್ಯಾಂಪಗಳಲ್ಲಿ ತರಬೇತಾಗಿ ಬಂದವರಲ್ಲಿ ಕಾಲೇಜಿನ ಯುವಕರೂ ಬೇಕಾದಷ್ಟಿದ್ದಾರೆ. ಅವರು ತಮ್ಮ ಕಾಲೇಜು ಯುನಿವರ್ಸಿಟಿಗಳ ವಲಯದಲ್ಲಿ ಗಲಭೆ ಹಾಗೂ ಸುಳ್ಳು ವದಂತಿಗಳನ್ನು ಸೃಷ್ಟಿಸಿ ದೇಶಭಕ್ತಿಯ ಮೇನಿಯಾವನ್ನು ಹರಡುತ್ತಿದ್ದಾರೆ. ಇದಕ್ಕೆ ಜೆಎನ್‌ಯು ಕಾಲೇಜಿನಲ್ಲಾದ ಘಟನೆಗಳೇ ಉದಾಹರಣೆ. ಈಗ ಅದೇ ರೀತಿ ಆಮ್ನೆಸ್ಟಿ ಕಾಲೇಜಿನಲ್ಲೂ ಆಗಿದೆ. ಎಲ್ಲೇ ಆಗಲಿ ದೇಶಭಕ್ತಿಯನ್ನು ಸಾರುವಂತಹ ಇಲ್ಲವೇ ದೇಶದ್ರೋಹಿ ಎಂದು ಪಟ್ಟಕಟ್ಟಬಹುದಾದಂತಹ ಸುದ್ದಿಗಳಿಗಾಗಿ ಇಡೀ ಸ್ವಯಂಸೇವಕ ಪಡೆ ಜಾಲಾಡುತ್ತಿದೆ. ಚಿಕ್ಕ ಘಟನೆಗಳನ್ನು ದೊಡ್ಡದನ್ನಾಗಿಸಿ, ಅದಕ್ಕೆ ದೇಶದ್ರೋಹದ ಬಣ್ಣ ಬಳಿದು ದೇಶಭಕ್ತಿಯ ಗುತ್ತಿಗೆದಾರರಾಗಿ ಮೆರೆಯಲು ಸಂಘಪರಿವಾರ ಇನ್ನಿಲ್ಲದಂತೆ ಪ್ರಯತ್ನಿಸುತ್ತಲೇ ಇದೆ. ಇಂತಹ ಅವಿವೇಕಿತನಗಳಿಗೆ ವ್ಯಾಪಕ ಪ್ರಚಾರ ಕೊಡುವ ಕೆಲಸಗಳನ್ನು ಬಹುತೇಕ ಮಾಧ್ಯಮಗಳು ಮಾಡುತ್ತಿವೆ. ದೇಶದ ಜನತೆ ಎಲ್ಲವನ್ನೂ ಅಸಹನೆಯಿಂದಲೇ ನೋಡುತ್ತಿದೆ. ಶ್ರಮಜೀವಿ ವರ್ಗ ತಳಮಳಿಸುತ್ತಿದ್ದು ಅಲ್ಪಸಂಖ್ಯಾತರು ತಲ್ಲಣಗೊಂಡಿದ್ದಾರೆ.

ನಿಜವಾದ ದೇಶದ್ರೋಹಿಗಳು ಯಾರಾದರೂ ಇದ್ದರೆ ಅದು ಬೇರೆ ಯಾರಲ್ಲ ಇದೇ ಸಂಘಪರಿವಾರದವರೇ ಆಗಿದ್ದಾರೆ. ಯಾಕೆಂದರೆ ಅವರಿಗೆ ಈ ದೇಶದ ಸಂವಿಧಾನದ ಮೇಲೆ ವಿಶ್ವಾಸವಿಲ್ಲ. ಸ್ವಾತಂತ್ರ್ಯದ ಮೇಲೆ ಭಕ್ತಿಯಿಲ್ಲ. ಬಾವುಟದ ಮೇಲೆ ಗೌರವವಿಲ್ಲ. ಹಾಗೇನಾದರೂ ಗೌರವಾದರ ಇದ್ದಿದ್ದರೆ ಆರೆಸ್ಸೆಸ್ ಕೇಂದ್ರ ಕಛೇರಿಯ ಮೇಲೆ ಸ್ವಾತಂತ್ರ್ಯದ ದಿನವಾದರೂ ಭಾರತದ ಬಾವುಟ ಹಾರಾಡಬಹುದಾಗಿತ್ತು. ಆದರೆ ಇಲ್ಲಿವರೆಗೂ ಒಂದೇ ಒಂದು ಸಲವು ಭಾವುಟ ಹಾರಿಸಿಲ್ಲ. ಭಾರತದ ಭಾವುಟವನ್ನು ನಾವು ಒಪ್ಪುವುದಿಲ್ಲ ಎಂದು ಸಂಘದ ಅಧಿನಾಯಕರೇ ಹೇಳಿದ್ದಾರೆ. ಮೊನ್ನೆ ಆಗಸ್ಟ್ 15ರ ಸ್ವಾತಂತ್ರ್ಯ ದಿನವನ್ನು ಇಡೀ ದೇಶ ಸಂಭ್ರಮದಿಂದ ಆಚರಿಸುತ್ತಿದ್ದಾಗ ಸಂಘಪರಿವಾರದ ಇನ್ನೊಂದು ಅಂಗ ಹಿಂದೂ ಮಹಾಸಭಾ ಸ್ವಾತಂತ್ರ್ಯದ ದಿನವನ್ನು ಕರಾಳ ದಿನವನ್ನಾಗಿ ಆಚರಿಸಲು ಕರೆಕೊಟ್ಟಿತ್ತು. ಈಗ ಹೇಳಿ ನಿಜವಾದ ದೇಶದ್ರೋಹಿಗಳು ಯಾರು?   

ಈಗ ದೇಶಾದ್ಯಂತ ದಲಿತ ಸಂಘಟನೆಗಳು ಜಾಗೃತಗೊಂಡು ತಮ್ಮ ಮೇಲಿನ ದಮನವನ್ನು ವಿರೋಧಿಸಿ ತಮ್ಮ ಹಕ್ಕುಗಳನ್ನು ಸಮರ್ಥಿಸಿ ಪ್ರತಿಭಟನಾ ಸಮ್ಮೇಳನಗಳನ್ನು ಮಾಡಲು ನಿರ್ಧರಿಸಿವೆ. ಸಂಸತ್ತಿನ ಚಳಿಗಾಲದ ಅಧಿವೇಶನದ ಸಮಯದಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬ್ರಹತ್ ಸಮ್ಮೇಳನ ನಡೆಸಿ ಮೋದಿ ಸರಕಾರದ ನೀತಿಗಳನ್ನು  ಹಾಗೂ ಸಂಘಪರಿವಾರದ ದಮನವನ್ನು ಧಿಕ್ಕರಿಸಿ ಪ್ರತಿಭಟಿಸಲು ನಿರ್ಧರಿಸಿದ್ದಾರೆ.ಇತರ ರಾಜ್ಯಗಳಲ್ಲೂ ದಲಿತರ ವಿರುದ್ಧದ ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಿಸಲು ದಲಿತ ಸಂಘಟನೆಗಳು ಮುಂದಾಗಿವೆ. ಆಗಸ್ಟ್ ತಿಂಗಳಿಂದ ಡಿಸೆಂಬರ್ ಒಳಗಾಗಿ ಗುಜರಾತ್, ಉತ್ತರ ಪ್ರದೇಶ, ದಿಲ್ಲಿ, ಹರಿಯಾಣ, ಪಂಜಾಬ್, ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ ಹಾಗೂ ಓಡಿಶಾಗಳಲ್ಲಿ ಬ್ರಹತ್ ದಲಿತ ಸಮ್ಮೇಳನಗಳನ್ನು ನಡೆಸಲು ದಲಿತ ಸಂಘಟನೆಗಳು ನಿರ್ಧರಿಸಿವೆ. ದಲಿತರ ವಿರುದ್ಧದ ಹಿಂಸಾಚಾರ ಹಾಗೂ ತಾರತಮ್ಯ ನಿಲ್ಲ ಬೇಕು ಹಾಗೂ ರಾಷ್ಟ್ರೀಯ ಸಂಪನ್ಮೂಲಗಳ ಸಮಾನ ಹಂಚಿಕೆ ಆಗಬೇಕು ಎನ್ನುವ ಬೇಡಿಕೆಯನ್ನು ಇಟ್ಟುಕೊಂಡು ಕೇಂದ್ರ ಸರಕಾರಕ್ಕೆ, ಸಂಘಪರಿವಾರಕ್ಕೆ ಬಿಸಿ ಮುಟ್ಟಿಸಲು ಪೂರ್ವ ತಯಾರಿಗಳು ಆರಂಭಗೊಂಡಿವೆ. ದಲಿತ ಸಮ್ಮೇಳನದಲ್ಲಿ ಹತ್ತು ಲಕ್ಷ ಜನ ದಲಿತರನ್ನು ಸಂಘಟಿಸಿ ದೇಶಾದ್ಯಂತ ದಲಿತರಲ್ಲಿ ಜಾಗೃತಿ ಮೂಡಿಸಬೇಕೆಂಬುದು ದಲಿತ ಸಂಘಟನೆಗಳ ಉದ್ದೇಶವಾಗಿದೆ. ಶೋಷಣೆಯನ್ನು ಸಹಿಸಿಕೊಂಡು ಮಲಗಿದ್ದ ದಲಿತ ಸಮುದಾಯವನ್ನು ಎಚ್ಚೆತ್ತುಕೊಂಡು ನಿಲ್ಲುವಂತೆ ಮಾಡಿದ ಸಂಘಪರಿವಾರಕ್ಕೆ, ನಕಲಿ ಗೋರಕ್ಷಕರಿಗೆ ಧನ್ಯವಾದಗಳನ್ನು ಹೇಳಬೇಕಿದೆ. ದಲಿತರು, ದಮನಿತರು, ಶೋಷಿತರೆಲ್ಲಾ ತಮ್ಮ ಹಕ್ಕುಗಳನ್ನು ಪಡೆಯುವವರೆಗೂ ಅಹಿಂಸಾತ್ಮಕವಾದ  ಅಸಹಕಾರ ಹೋರಾಟ ಮುಂದುವರೆಸಿಕೊಂಡು ಹೋದಲ್ಲಿ ಆಳುವ ವರ್ಗಗಳನ್ನು ಮಣಿಸಬಹುದಾಗಿದೆ. ಸಮಾನತೆಯ ಗುರಿ ಮುಟ್ಟುವಲ್ಲಿ ಈ ದಲಿತ ಹೋರಾಟ ಮೆಟ್ಟಲಾಗಲಿ ಎನ್ನುವುದೇ ಪ್ರಗತಿಪರರ ಆಶಯವಾಗಿದೆ.     

                           -    ಶಶಿಕಾಂತ ಯಡಹಳ್ಳಿ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ