ಮಂಗಳವಾರ, ಆಗಸ್ಟ್ 16, 2016

ಸಾಗಿದೆ ಶ್ರಮಿಕರ ಸಂಗ್ರಾಮ...




1947, ಆಗಸ್ಟ್ 15 ಬ್ರಿಟಿಷ್ ವಸಾಹತುಶಾಹಿಗಳಿಂದ ಭಾರತಕ್ಕೆ ಅಧಿಕಾರ ಹಸ್ತಾಂತರವಾದ ದಿನ. ಅದರ ನೆನಪಿಗಾಗಿ ಮೊನ್ನೆ ಅತ್ತ ದೇಶಾದ್ಯಂತ ದೇಶಭಕ್ತರಿಂದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ನಡೆಯುತ್ತಿದ್ದರೆ, ಇತ್ತ ಗುಜರಾತಿನ ಅಹಮದಾಬಾದಿನ ಊನಾದಲ್ಲಿ ದಲಿತರು ಒಂದಾಗಿ ಭ್ರಹತ್ ಪ್ರತಿಭಟನಾ ರಾಲಿ ಏರ್ಪಡಿಸಿ ಸನಾತನವಾದಿಗಳು ಹಾಗೂ ಮೇಲ್ಚಾತಿವಾದಿಗಳ ಎದೆಯಲ್ಲಿ ಸಂಕಟದ
ಸಂಚಲನವನ್ನುಂಟು ಮಾಡಿದರು.


ದಲಿತವರ್ಗದ ಜನ ಎಷ್ಟೂಂತಾ ಸಹಿಸಿಯಾರು ಪ್ಯಾಸಿಸ್ಟ್ ಗಳ ದೌರ್ಜನ್ಯವನ್ನು. ಸನಾತನವಾದಿಗಳ ಗೋವಿನ ರಾಜಕೀಯಕ್ಕೆ ಅಲ್ಪಸಂಖ್ಯಾತರು ಹಾಗೂ ದಲಿತರು ಟಾರ್ಗೆಟ್ ಆಗಿದ್ದರು. ನಕಲಿ ಗೋರಕ್ಷಕರಿಂದ ದೇಶದ್ಯಂತ ದಲಿತರು ಹಾಡುಹಗಲೇ ಹಲ್ಲೆಗೊಳಗಾದರು, ಸಾರ್ವಜನಿಕವಾಗಿ ಕೊಲೆಯಾದರು. ತಮ್ಮ ಅಹಾರವನ್ನು ಕಿತ್ತುಕೊಂಡು ತಮ್ಮ ಮೇಲೆ ಧರ್ಮದ್ರೋಹದ ಆರೋಪ ಹೊರೆಸಿ ಅವಮಾನಿಸುತ್ತಿರುವ ಮೇಲ್ವರ್ಗದವರ ಮೇಲೆ ದಲಿತರ ಆಕ್ರೋಶ ಒಳಒಳಗೆ ಕುದಿಯುತ್ತಿತ್ತು. ಮೋದಿ ರಾಜ್ಯದ ದಲಿತ ಸಮುದಾಯ ಸಂಘಟಿತರಾದರು. ಗೋರಕ್ಷಕರ ಅತಿರೇಕದ ಪುಂಡಾಟದಿಂದ ಈಗ ಅವರ ಬುರುಡೆಗೆ ಬಿಸಿನೀರು ಕಾಯಿಸುವಂತಾಗಿದೆ.

ಆಗಸ್ಟ್ 15 ರಂದು ಊನಾದ ಸರಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಸಮಾವೇಶ ಸೇರಿದ ದಲಿತ ಶಕ್ತಿ "ಗೋವಿನ ಸಹವಾಸವೂ ಬೇಡಾ ಗೋರಕ್ಷಕರ ಉಸಾಬರಿಯೂ ಬೇಡಾ... ನಿಮ್ಮ ಗೋವು ನೀವೆ ಇಟ್ಟುಕೊಳ್ಳಿ.. ಗೋವಿನ ಚಾಕರಿ ಮಾಡೋದಿಲ್ಲ, ಸೆಗಣಿ ಬಳಿಯೋದಿಲ್ಲ, ಹಸುಗಳು ಸತ್ತರೂ ಚರ್ಮ ಸುಲಿಯೋದಿಲ್ಲ, ಹೆಣ ಎತ್ತೋದಿಲ್ಲ" ಎಂದು ಒಕ್ಕೋರಲಿನಿಂದ ಪ್ರತಿಜ್ಞೆ ಮಾಡಿದರು. ಶ್ರಮಜೀವಿಗಳಾದ ದಲಿತರು ಹತ್ತೇ ಹತ್ತು ದಿನ ಕೆಲಸ ಮಾಡೋದಿಲ್ಲ ಎಂದು ಸುಮ್ಮನೇ ಕುಳಿತರೆ ಸಾಕು ಇಡೀ ದೇಶಕ್ಕೆ ದೇಶವೇ ಅಲ್ಲಾಡಿಹೋಗುತ್ತದೆ. ಮೇಲ್ವರ್ಗದ ಜನ ಮಾಡಲು ಮುಜುಗರಪಟ್ಟುಕೊಳ್ಳುವ ಕೆಲಸಗಳನ್ನೆಲ್ಲಾ ಮಾಡಲು ದಲಿತರೇ ಬೇಕು. ಯಾವಾಗ ದಲಿತರು ಒಂದಾಗಿ ಕೆಲಸಾ ಮಾಡೋದಿಲ್ಲವೆಂದು ಶಪಥ ಮಾಡಿದರೋ ಆಗ ಮೇಲ್ವರ್ಗದವರ ಬೆನ್ನ ಹುರಿಯಲ್ಲಿ ಕಂಪನ ಆರಂಭವಾಗಿದೆ. ಸತ್ತ ದನಗಳನ್ನು ದಫನ್ ಮಾಡಲಾಗದೇ ಅವುಗಳ ಶವ ಬೀದಿಬೀದಿಯಲ್ಲಿ ಕೊಳೆತು ನಾರುವಾಗ ಮೇಲ್ವರ್ಗದವರು ಮೂಗು ಮತ್ತೊಂದು ಮುಚ್ಚಿಕೊಂಡು ಓಡಾಡುವಾಗ ಶ್ರಮಜೀವಿಗಳ ಅನಿವಾರ್ಯತೆಯ ಅರಿವು ಚೆನ್ನಾಗಿಯೇ ಆಗುತ್ತದೆ. ಗುಜರಾತಿನ ದಲಿತರ ಸಂಘಟನಾತ್ಮಕ ಹೋರಾಟವು ಈಗಾಗಲೇ ಗುಜರಾತಿನ ಮುಖ್ಯಮಂತ್ರಿಯನ್ನೇ ಬದಲಾಯಿಸಿದೆ. ಮೌನಿಬಾಬಾ ಮೋದಿ ಸಾಹೇಬರು ಮೌನ ಮುರಿದು ದಲಿತರ ಪರವಾಗಿ ಮಾತಾಡುವಂತೆ ಮಾಡಿದೆ.

ಅಸಮಾನತೆ ತುಂಬಿದ ಜಾತಿವ್ಯವಸ್ಥೆಯ ದೇಶದಲ್ಲಿ ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ. ಬಹುಸಂಖ್ಯಾತ ಶ್ರಮಿಕರು ಒಂದಾದಲ್ಲಿ ಅಲ್ಪಸಂಖ್ಯಾತ ಮೇಲ್ಜಾತಿಯವರು ಅಸಹಾಯಕರಾಗುವುದರಲ್ಲಿ ಸಂದೇಹವೇ ಇಲ್ಲ. ದಲಿತರ ಐತಿಹಾಸಿಕ ಐಕ್ಯತೆಗೆ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್, ವೇಮುಲರ ತಾಯಿ ರಾಧಿಕಾ, ಹಾಗೂ ಅಲ್ಪಸಂಖ್ಯಾತ ಮುಸ್ಲಿಂ ಬಳಗದವರು ಸಮಾವೇಶದಲ್ಲಿ ಪಾಲ್ಗೊಂಡು ದಲಿತ ಸಮುದಾಯದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ದಲಿತರಿಗೆ ಭೂಮಿಯ ಹಕ್ಕು ಪತ್ರ ಬೇಕೆ ಬೇಕೆಂದು ಸರಕಾರವನ್ನು ಒತ್ತಾಯಿಸಿದ್ದಾರೆ. ಶತಮಾನಗಳಿಂದ ಬ್ರಾಹ್ಮಣ ಬನಿಯಾ ಸಮೇತ ಮೇಲ್ಜಾತಿ ಜನರ ದೌರ್ಜನ್ಯಕ್ಕೆ ನಲುಗಿ ಹೋದ ದಲಿತ ಸಮುದಾಯ ತಮ್ಮ ಹಕ್ಕನ್ನು ಕೇಳುವುದರಲ್ಲಿ ತಪ್ಪೇನೂ ಇಲ್ಲ. ಅವರಿಗೆ ಭೂಮಿಯ ಹಕ್ಕು ಬೇಕು, ಆಹಾರದ ಹಕ್ಕು ಬೇಕು, ಎಲ್ಲರಂತೆ ಸ್ವತಂತ್ರವಾಗಿ ಸ್ವಾಭಿಮಾನದಿಂದ ಬದುಕುವ ಹಕ್ಕೂ ಬೇಕು. ಸಂವಿಧಾನ ಕೊಡಮಾಡಿದ ಎಲ್ಲಾ ಮೂಲಭೂತ ಹಕ್ಕುಗಳೂ ಶ್ರಮಿಕ ವರ್ಗಕ್ಕೆ ಬೇಕೆ ಬೇಕು. ಆದರೆ ಅವರಿಗೆ ಸಲ್ಲಬೇಕಾದ ಹಕ್ಕುಗಳನ್ನು ಧರ್ಮ ಹಾಗೂ ಜಾತಿಯ ಹೆಸರಲ್ಲಿ ಅತಿಕ್ರಮಣ ಮಾಡಿಕೊಂಡ ಮೇಲ್ವರ್ಗದವರ ಶೋಷಣೆ ಅಮಾನವೀಯವಾಗಿದೆ ಹಾಗೂ ಸಂವಿಧಾನ ವಿರೋಧಿಯಾಗಿದೆ. ಹೀಗಾಗ ತಮ್ಮ ಹಕ್ಕುಗಳಿಗಾಗಿ ದಲಿತರು, ಅಲ್ಪಸಂಖ್ಯಾತರು ಹೋರಾಟದ ಮಾರ್ಗ ಹಿಡಿದಿದ್ದರಲ್ಲಿ 'ಬದುಕಿಗಾಗಿ ಹೋರಾಟ' ಎನ್ನುವಂತಿದೆ.
ಗುಜರಾತಿನ ದಲಿತರ ಅಹಿಂಸಾತ್ಮಕವಾದ ಅಸಹಕಾರ ಹೋರಾಟ ದೇಶದ್ಯಂತ ಹಬ್ಬಿದರೆ ಜಾತಿ ವ್ಯವಸ್ಥೆ ಪಲ್ಲಟಗೊಳ್ಳುತ್ತದೆ. ಮೇಲ್ವರ್ಗದ ಜನತೆ ಶ್ರಮಜೀವಿಗಳ ಮುಂದೆ ಮಂಡಿ ಊರಬೇಕಾಗುತ್ತದೆ. ಶೋಷಿತರ ಹಕ್ಕುಗಳನ್ನು ಕೊಡಬೇಕಾಗುತ್ತದೆ. ಊನಾ ಹೋರಾಟದ ಫಲಶ್ರತಿ ನಮ್ಮ ರೈತಾಪಿ ಜನರಲ್ಲೂ ಜಾಗೃತಿಯನ್ನು ಮೂಡಿಸಬೇಕಿದೆ. ರೈತರಿಗೆ ಅಗತ್ಯವಾದ ಎಲ್ಲಾ ಸವಲತ್ತುಗಳು ಹಾಗೂ ಬೆಳೆಗೆ ನ್ಯಾಯವಾದ ಬೆಲೆ ಕೊಡದಿದ್ದರೆ ಬೆಳೆಯನ್ನೇ ಬೆಳೆಯೋದಿಲ್ಲ. ಬೆಳೆದರೂ ತಮ್ಮ ಮನೆಗೆ ಬೇಕಾದಷ್ಟು ಮಾತ್ರ ಎಂದು ಘೋಷಿಸಿ ದೇಶದ ರೈತರೆಲ್ಲಾ ಒಂದಾದರೆ ಸಾಕು ಇಡೀ ದೇಶಕ್ಕೆ ದೇಶವೇ ಆಹಾರವಿಲ್ಲದೇ ತಲ್ಲಣಿಸಿ ಆಳುವ ವರ್ಗಗಳು ರೈತರ ಕಾಲಮೇಲೆ ಬೀಳುತ್ತವೆ. ಅಂತಹುದೊಂದು ಬ್ರಹತ್ ಪ್ರತಿಭಟನೆ ದೇಶದ್ಯಂತ ದಲಿತರು, ರೈತರು, ಕಾರ್ಮಿಕರಿಂದ ನಡೆಯಬೇಕಿದೆ. ಇದಕ್ಕೆ ನಾಯಕತ್ವದ ಕೊರತೆಯೊಂದೆ ಶ್ರಮಿಕ ಜೀವಿಗಳ ಸಮಸ್ಯೆಯಾಗಿದೆ. ಆದರೆ.. ಬಿಜೆಪಿ ಪಕ್ಷಕ್ಕೆ, ಮೋದಿ ಸರಕಾರಕ್ಕೆ, ಸಂಘಪರಿವಾರಕ್ಕೆ ಧನ್ಯವಾದಗಳನ್ನು ಹೇಳಲೇಬೇಕಿದೆ. ಯಾಕೆಂದರೆ ಇವುಗಳು ತಮ್ಮ ದಮನಕಾರಿ ನೀತಿಗಳಿಂದಾಗಿ ಅಲ್ಲಲ್ಲಿ ನಾಯಕತ್ವವನ್ನು ಹುಟ್ಟುಹಾಕುತ್ತಿವೆ. ಜೆಎನ್ ಯು ದಲ್ಲಿ ವಿದ್ಯಾರ್ಥಿಗಳ ಹಕ್ಕನ್ನು ದಮನಿಸಲು ಹೋಗಿ ಕನ್ಹಯ್ಯ ಕುಮಾರನೆಂಬ ಯುವನಾಯಕ ಬೆಳಕಿಗೆ ಬಂದರೆ ಆಂದ್ರದ ಹೈದರಾಬಾದ್ ಯುನಿವರ್ಸಿಟಿಯ ಮೇಲ್ವರ್ಗದ ರಾಜಕೀಯಕ್ಕೆ ಆತ್ಮಹತ್ಯೆ ಮಾಡಿಕೊಂಡ ವೇಮುಲ ದಲಿತ ವರ್ಗದ ವಿದ್ಯಾರ್ಥಿ ಯುವಕ ಸಮೂಹವನ್ನು ಎಚ್ಚರಿಸಿದ. ಅದೇ ರೀತಿ ಈಗ ಗುಜರಾತ್ ದಲಿತರು ಒಂದಾಗಿ ಆಂದೋಲನಕ್ಕಿಳಿದರು. ಹೀಗೆ ಮನುವಾದಿಗಳ ಹಿಡನ್ ಅಜೆಂಡಾ ಯಾವಾಗ ದೇಶಭಕ್ತಿ, ಗೋಭಕ್ತಿ ಎನ್ನುವ ಹೆಸರಲ್ಲಿ ದಲಿತರನ್ನು ಅಲ್ಪಸಂಖ್ಯಾತರನ್ನು ತುಳಿದಾಳಲು ಆರಂಭಿಸಿತೋ ದೇಶಾದ್ಯಂತ ಅಸಹನೆಯ ಬೆಂಕಿ ಬೂದಿಯಿಂದೆದ್ದು ಹೊಗೆಯಾಡತೊಡಗಿದೆ. ಧರ್ಮಾಂಧರ ಹುನ್ನಾರ, ಜಾತಿವಾದಿಗಳ ದೌರ್ಜನ್ಯಕ್ಕೆ ಪ್ರತಿಯಾಗಿ ಶ್ರಮಜೀವಿಗಳ ಪ್ರತಿಭಟನೆಯ ತೀವ್ರತೆ ಹೆಚ್ಚಾಗತೊಡಗಿದೆ. ಇಡೀ ದೇಶ ಒಳಗೊಳಗೆ ಉರಿಯುತ್ತಿರುವ ಕುಲುಮೆಯಾಗಿದೆ. ಯಾವಾಗ ಎಲ್ಲಿ ಯಾವ ರೀತಿಯಲ್ಲಿ ಸ್ಪೋಟಿಸುತ್ತೋ ಗೊತ್ತಿಲ್ಲ. ಇಂದಿಲ್ಲ ನಾಳೆ ಲಾವಾರಸ ಉಕ್ಕಿ ಜ್ವಾಲಾಮುಖಿ ಬೆಂಕಿ ಉಗುಳುವುದಂತೂ ಖಂಡಿತ. ದಮನ ಹೆಚ್ಚಾದಷ್ಟೂ ದಂಗೆ ತೀವ್ರವಾಗಲೇಬೇಕಿದೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ರೈತಾಪಿ ವರ್ಗದವರು ಸಿಡಿದೆದ್ದು ನಿಂತರೆ ಆಳುವ ವರ್ಗಗಳು ತರಗಲೆಗಳಾಗುತ್ತವೆ. ವರ್ಗ ಸಂಘರ್ಷಕ್ಕೆ ರ್ಪೂರ್ವಭಾವಿ ಸಿದ್ದತೆಗಳು ಸಮಾಜದಲ್ಲಿ ನಡೆಯುತ್ತಿವೆ. ಅದಕ್ಕೆ ಸಂಘ ಪರಿವಾರವೇ ಎಲ್ಲಾ ಅನುಕೂಲತೆಗಳನ್ನು ಮಾಡಿಕೊಡುತ್ತಿದೆ.
                                                        
- ಶಶಿಕಾಂತ ಯಡಹಳ್ಳಿ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ