ಸೋಮವಾರ, ಮೇ 1, 2017

ತಹ ತಹ..... 91 ಮೇ ಡೆ ಘೋಷಣೆ ಭಾಷಣಗಳನು ಮೀರಿ ತುರ್ತಾಗಿ ಆಗಬೇಕಿದೆ ಜನಾಲೋಂದನ ಜಾರಿ :



 
ಪ್ರತಿ ವರ್ಷದಂತೆ ಈ ಸಲವೂ ಸಹ ಮೇ 1 ಬಂದಿದೆ. ವಿಶ್ವ ಕಾರ್ಮಿಕ ದಿನಾಚರಣೆ ಎನ್ನುವುದು ಮೇ ಒಂದರಂದು ಖಡ್ಡಾಯವಾಗಿ ನಡೆಯುವ ಸಾಂಪ್ರದಾಯಿಕ ಶುಷ್ಕ ಆಚರಣೆಂiiಂತಾಗಿದೆ. ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಶಕ್ತಾನುಸಾರ ಭಾಷಣ ಘೋಷಣೆ ಹಾಗೂ ರ‍್ಯಾಲಿಗಳು ಈ ದಿನದಂದು ನಡೆದುಕೊಂಡು ಬರುತ್ತಲೇ ಇವೆ. ಇಷ್ಟೆಲ್ಲಾ ಕಾರ್ಮಿಕ ಸಂಘಟನೆಗಳು, ಇಂತಹ ಸಂಘಟನೆಗಳಲ್ಲಿ ನೋಂದಾಯಿತ ಕೋಟ್ಯಾಂತರ ಸಂಘಟಿತ ಕಾರ್ಮಿಕರು, ಸಾವಿರಾರು ಬುದ್ದಿವಂತ ಕಾರ್ಮಿಕ ನಾಯಕರುಗಳು ಇದ್ದರೂ ಕಾರ್ಮಿಕರ ಬದುಕಂತೂ ವರ್ಷದಿಂದ ವರ್ಷಕ್ಕೆ ಅತಂತ್ರಗೊಳ್ಳುತ್ತಿದೆ. ಜಾಗತೀಕರಣದ ಮಾಯಾಜಾಲ ಕಾರ್ಮಿಕ ವರ್ಗವನ್ನೇ ಹಿಡಿದು ಹಿಂಡಿ ಹಿಪ್ಪೆ ಮಾಡುತ್ತಿದೆ. ಕಾರ್ಮಿಕರನ್ನು ಮನುಷ್ಯರನ್ನಾಗಿ ಪರಿಗಣಿಸದೇ ಯಂತ್ರಗಳ ಹಾಗೆ ದುಡಿಸಿಕೊಳ್ಳುವ ಹುನ್ನಾರಗಳು ಬಹುತೇಕ ಖಾಸಗಿ ಕಾರ್ಖಾನೆಗಳಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ. ಇರುವ ಸರಕಾರಿ ಸಾಮ್ಯದ ಕಾರ್ಖಾನೆಗಳನ್ನೂ ಸಹ ಖಾಸಗೀಕರಣ ಮಾಡಲು ಕೇಂದ್ರ ಸರಕಾರ ಹಾತೊರೆಯುತ್ತಿದೆ. ಬಿಇಎಂಎಲ್ ಕಾರ್ಖಾನೆ ಖಾಸಗೀಕರಣಕ್ಕೆ ಮುಂದಿನ ಬಲಿಪಶುವಾಗುವುದರಲ್ಲಿದೆ.


ಲಕ್ಷಾಂತರ ಸಂಘಟಿತ ಕಾರ್ಮಿಕರಿದ್ದರೂ, ಹಲವಾರು ಪ್ರಮುಖ ಕಾರ್ಮಿಕ ಸಂಘಟನೆಗಳಿದ್ದರೂ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಅದರ ಅಸೋಸಿಯೇಟ್ ಬ್ಯಾಂಕ್‌ಗಳ ವಿಲೀನವನ್ನು ತಪ್ಪಿಸಲಾಗಲಿಲ್ಲಾ. ಸಾವಿರಾರು ಜನರು ಬಲವಂತದ ನಿವೃತ್ತಿ ಪಡೆಯುವುದನ್ನು ನಿಲ್ಲಿಸಲಾಗಲಿಲ್ಲಾ. ಕಾರ್ಮಿಕ ಸಂಘಟನೆಗಳು ಸಾಂಕೇತಿಕವಾಗಿ ಧರಣಿ ಪ್ರತಿಭಟನೆ ಬಂದ್‌ಗಳನ್ನು ಕಾಲಕಾಲಕ್ಕೆ ಮಾಡಿ ಯಾಂತ್ರಿಕವಾಗಿ ತಮ್ಮ ಕರ್ತವ್ಯವನ್ನು ನಿಭಾಯಿದರೂ ಎಸ್ ಬಿಐ ಬ್ಯಾಂಕ್ ಕಾರ್ಮಿಕ ನೌಕರ ವರ್ಗದವರ ವೃತ್ತಿ ಬದುಕು ಅತಂತ್ರವಾಗುವುದನ್ನು ಬದಲಾಯಿಸಲಾಗಲೇ ಇಲ್ಲಾ. ಯಾವಾಗ ಆಳುವ ಪ್ರಭುತ್ವ ಎನ್ನುವುದು ಬಂಡವಾಳಶಾಹಿ ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿಯನ್ನು ಕಾಪಾಡಲು ಪಣತೊಡುತ್ತದೋ ಆಗ ಬಂಡವಾಳಶಾಹಿಗಳ ಮಾಲೀಕತ್ವದಲ್ಲಿರುವ ಎಲ್ಲಾ ಕಾರ್ಖಾನೆ ಕಛೇರಿಗಳ ಉತ್ಪಾದನಾ ಕೇಂದ್ರಗಳಲ್ಲಿರುವ ಕಾರ್ಮಿಕರು, ನೌಕರರು ಹಾಗೂ ಅಧಿಕಾರಿಗಳ ವೃತಿಬದುಕು ಮಾಲೀಕರ ಮರ್ಜಿಗೆ ಒಳಗಾಗುವುದರಲ್ಲಿ ಸಂದೇಹವಿಲ್ಲಾ.


ಇದಕ್ಕೆ ಪತ್ರಿಕಾರಂಗವೂ ಹೊರತಲ್ಲಾ. ಮೊದಲು ಬಿಗಿಯಾದ ಕಾರ್ಮಿಕ ಕಾನೂನುಗಳಿಂದಾಗಿ ಯಾವುದೇ ದೊಡ್ಡ ಪತ್ರಿಕೆಯಿಂದಾ ಒಬ್ಬ ನೌಕರನನ್ನೂ ಇದ್ದಕ್ಕಿದ್ದಂತೆ ನೌಕರಿಯಿಂದಾ ತೆಗೆದುಹಾಕುವಂತಿರಲಿಲ್ಲಾ. ಅಮ್ಮಮ್ಮಾ ಅಂದರೆ ಟ್ರಾನ್ಸಪರ್ ಮಾಡಿ ತೊಂದರೆ ಕೊಡಬಹುದಾಗಿತ್ತು. ಆದರೆ.. ಯಾವಾಗ ಪತ್ರಿಕೋದ್ಯಮವು ದೊಡ್ಡ ದೊಡ್ಡ ಬಂಡವಾಳಶಾಹಿ ಮಾಲಿಕರ ಹಿಡಿತಕ್ಕೊಳಗಾಯಿತೋ, ಯಾವಾಗ ಕೋಟ್ಯಾಂತರ ಹಣವನ್ನು ಹಾಕಿದ ಬಂಡವಾಳಶಾಹಿಗಳು ಚಾನೆಲ್‌ಗಳನ್ನು ಆರಂಭಿಸಿದರೋ ಆಗ ಇಡೀ ಮೀಡಿಯಾಂಗ ಎನ್ನುವುದೇ ಆಯಾ ಮಾಲೀಕರ ಮರ್ಜಿಗೆ ಒಳಗಾಯಿತು. ಖಾಯಂ ನೌಕರರಿಂದ ಅಧೀಕೃತವಾಗಿ ರಾಜೀನಾಮೆ ಪತ್ರಗಳನ್ನು ಪಡೆದುಕೊಂಡು ಗುತ್ತಿಗೆ ಆಧಾರದ ಮೇಲೆ ನೌಕರಿ ಮಾಡುವ ಒಪ್ಪಂದಕ್ಕೆ ಬಲವಂತವಾಗಿ ಒಪ್ಪಿಸಲಾಯಿತು. ಸಮಾಜಕ್ಕೆ ಸ್ವಾತಂತ್ರ್ಯ, ಸ್ವಾಭಿಮಾನ, ಸ್ವಾವಲಂಬನೆಯ ಪಾಠ ಹೇಳುವ ಪತ್ರಕರ್ತರಿಗೆಲ್ಲಾ ವೃತ್ತಿ ಭದ್ರತೆ ಇಲ್ಲದೇ ಗುತ್ತಿಗೆ ನೌಕರರಾಗಿ ಯಾವಾಗಲೂ ಅತಂತ್ರ ಸ್ಥಿತಿಯಲ್ಲೇ ಕೆಲಸ ಮಾಡಬೇಕಾಗಿ ಬಂದಿರುವುದು ವಿಪರ್ಯಾಸ. ಪತ್ರಿಕೋದ್ಯಮದಲ್ಲಿ ನೌಕರರನ್ನು ಗುಲಾಮರನ್ನಾಸುವ ಈ ಹುನ್ನಾರವನ್ನು, ಪತ್ರಕರ್ತರನ್ನು ಅತಂತ್ರರನ್ನಾಗಿಸಿ ಆಟವಾಡುವ ಮಾಲೀಕರ ದಮನವನ್ನು ಯಾರೆಂದರೆ ಯಾರೂ ಪ್ರಶ್ನಿಸಲಿಲ್ಲಾ. ಕನಿಷ್ಟ ಪತ್ರಿಕೆಗಳಲ್ಲಿ ಬರೆದು ತಮ್ಮ ಆಕ್ರೋಶವನ್ನೂ ಹೊರಹಾಕಲಿಲ್ಲಾ. ಇರುವ ನೌಕರಿಯನ್ನು ಉಳಿಸಿಕೊಂಡರೆ ಸಾಕು ಎಂದುಕೊಂಡು ಗುತ್ತಿಗೆ ನೌಕರರಾಗಲು ಒಪ್ಪಿಕೊಂಡರು. ಪತ್ರಕರ್ತರ ಹಿತಕಾಯಲು ಇರುವ ಸಂಘಗಳು ಜಾಣಕುರಡನ್ನು ವ್ಯಕ್ತಪಡಿಸಿದವು.  ಕಾರ್ಮಿಕ ಸಂಘಗಳು ಪತ್ರಿಕಾ ಮಾಲೀಕರಿಂದಾದ ನೌಕರರ ಹಕ್ಕುಗಳ ದಮನವನ್ನು ಪ್ರತಿಭಟಿಸದೆ ಮೌನತಾಳಿದವು.  ಈಗ ಮೀಡಿಯಾಂಗದ ಎಲ್ಲಾ ನೌಕರ ವರ್ಗದವರು ಗುತ್ತಿಗೆಯ ನೌಕರರು ಹಾಗೂ ಯಾವಾಗ ಬೇಕಾದರೂ ಅವರನ್ನು ನೌಕರಿಯಿಂದ ತೆಗೆದು ಹಾಕಬಹುದು ಇಲ್ಲವೇ ಮೂರು ವರ್ಷಗಳ ಗುತ್ತಿಗೆ ಮುಗಿದ ತಕ್ಷಣ ನೌಕರಿಯಿಂದ ಹೊರಗೆ ಹಾಕಬಹುದು. 


ಇದೊಂದೆ ಕ್ಷೇತ್ರವಲ್ಲಾ. ಎಲ್ಲಾ ಖಾಸಗಿ ರಂಗದಲ್ಲೂ ನೌಕರರ ಶೋಷಣೆ ನಿರಂತರವಾಗಿದೆ. ವೃತ್ತಿಸ್ಥಿರತೆಯ ಗ್ಯಾರಂಟಿ ಇಲ್ಲದೇ ಇರುವುದರಿಂದ ನೌಕರರು ಸಂಘಟಿತರಾಗಿ ಪ್ರತಿಭಟನೆಗೆ ಇಳಿಯಲೂ ಹೆದರುವ ಪರಿಸ್ಥಿತಿ ಇದೆ. ಮ್ಯಾನೇಜಮೆಂಟ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗಲೇಬೇಕಾದ ಪರಿಸ್ಥಿತಿ ಕಾರ್ಮಿಕರದ್ದಾಗಿದೆ. ಇದನ್ನು ಅರಿತ ಕಾರ್ಮಿಕ ಸಂಘಟನೆಯ ನಾಯಕರೂ ಸಹ ಕಾರ್ಮಿಕರ ಮೂಲಭೂತ ಹಕ್ಕುಗಳ ಪ್ರಶ್ನೆಗಳಿಗಾಗಿ ಹೋರಾಟವನ್ನು ಸಂಘಟಿಸುವ ಬದಲು ತಮ್ಮ ಸಂಘಟನೆಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕಾರ್ಮಿಕರ ವೇತನ ಬತ್ತೆಗಳ ಹೆಚ್ಚಳಕ್ಕಾಗಿ ಮ್ಯಾನೇಜಮೆಂಟ್ ಜೊತೆಗೆ ಡೀಲ್‌ಗಿಳಿಯುವ ಸೇಫ್ ಮಾರ್ಗವನ್ನು ಹುಡುಕಿಕೊಂಡಿವೆ.  

ಇದರ ಜೊತೆಗೆ ಕಾರ್ಮಿಕರ ಪರವಾಗಿ ಇರುವ ಕಾನೂನುಗಳೆಲ್ಲವನ್ನೂ ಒಂದೊಂದಾಗಿ ಬಂಡವಾಳಿಗರ ಹಿತಾಸಕ್ತಿಗೆ ಪರವಾಗಿ ಬದಲಾಯಿಸುವ ಕೆಲಸವನ್ನು ಆಳುವ ಪ್ರಭುತ್ವ ಮಾಡುತ್ತಲೇ ಬಂದಿದೆ. ಇದೆಲ್ಲವೂ ಕಾರ್ಮಿಕ ಸಂಘಟನೆಗಳಿಗೆ, ಈ ಸಂಘಟನೆಗಳ ಮಾತೃಪಕ್ಷಗಳಿಗೆ ಗೊತ್ತಿಲ್ಲದ ಸಂಗತಿ ಏನಲ್ಲಾ. ಆದರೆ.. ಈ ಯಾವ ಸಂಘಟನೆಗಳು ಹಾಗೂ ಕಮ್ಯೂನಿಸ್ಟ್ ಪಕ್ಷಗಳಿಗೂ ಇಲ್ಲಿವರೆಗೂ ಜನಾಂದೋನಗಳನ್ನು ಹುಟ್ಟು ಹಾಕಲು ಸಾಧ್ಯವಾಗಿಲ್ಲಾ ಹಾಗೂ ಆ ನಿಟ್ಟಿನಲ್ಲಿ ಅವು ಕೆಲಸವನ್ನೂ ಮಾಡುತ್ತಿಲ್ಲಾ. ಇತ್ತೀಚೆಗೆ ಬೆಂಗಳೂರಿನ ಬಾಷ್ ಮೈಕೋ ಕಾಪೋರೇಟ್ ಕಂಪನಿಯಲ್ಲಿ ಕೆಲಸದ ಸಮಯ ಹಾಗೂ ಸವಲತ್ತುಗಳಿಗಾಗಿ ಕೆಲವಾರು ಕಾರ್ಮಿಕರು ವರ್ಷಾನುಗಂಟಲೇ ಹೋರಾಟ ಮಾಡಿದರು. ಆದರೂ ಮ್ಯಾನೇಜಮೆಂಟ್ ಮಣಿಯಲಿಲ್ಲ. ನೌಕರಿ ಕಳೆದುಕೊಳ್ಳುವ ಪರಿಸ್ಥಿತಿ ಬಂದಾಗ ಕೆಲವರು ಮ್ಯಾನೇಜಮೆಂಟ್ ಹೇಳಿದ್ದಕ್ಕೆ ಒಪ್ಪಿಕೊಂಡು ಹೆಚ್ಚು ಸಮಯ ದುಡಿಯಲು ಒಪ್ಪಿ ಮತ್ತೆ ಕೆಲಸಕ್ಕೆ ಸೇರಿದರು. ಹಠಕೆ ಬಿದ್ದು ಕೊನೆಯವರೆಗೂ ಹೋರಾಟದ ಹಾದಿಯನ್ನು ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಮುನ್ನಡೆಸಿದ ನೂರಾರು ಕಾರ್ಮಿಕರು ಕೆಲಸ ಕಳೆದುಕೊಂಡರು. ನೌಕರಿಯನ್ನು ನಂಬಿಕೊಂಡಿದ್ದ ಕುಟುಂಬ ಸಾಲಸೋಲಕ್ಕೆ ತುತ್ತಾಗಿ ಕಷ್ಟಕ್ಕೆ ಸಿಲುಕಿತು. ಮೇ ಡೇ ಕಾರ್ಮಿಕ ಸಂಘಟನೆಗಳು ನಿರುದ್ಯೋಗಿಗಳಾದ ಈ ನೌಕರರಿಗೆ ನ್ಯಾಯ ಕೊಡಿಸಲು ಆಗಲೇ ಇಲ್ಲಾ. ಕಾರ್ಮಿಕ ಸಂಘಟನೆಗಳ ಮಿತಿ ಇಷ್ಟೇ ಎಂದು ತಿಳಿದ ಉಳಿದ ಕಾರ್ಮಿಕರು ಮಾಲೀಕರ ವಿರುದ್ಧ ತಮ್ಮ ಹಕ್ಕುಗಳಿಗಾಗಿ ತಿರುಗಿ ಬೀಳುವ ಸಾಹಸ ಮಾಡದೇ ಈಗ ದಿನಕ್ಕೆ ಹನ್ನೆರಡು ತಾಸಿಗಿಂತಲೂ ಹೆಚ್ಚು ಕಾಲ ಡಬಲ್ ಶಿಪ್ಟಲ್ಲಿ ಯಂತ್ರಗಳ ಜೊತೆಗೆ ಯಂತ್ರವಾಗಿ ಬದುಕುತ್ತಿದ್ದಾರೆ. ಕಾರ್ಮಿಕರ ಹಕ್ಕು ಹಾಗೂ ಸವಲತ್ತುಗಳಿಂದ ವಂಚಿತರಾಗಿದ್ದಾರೆ. 


ಇದು ಕೇವಲ ಒಂದೆರಡು ಕಾರ್ಖಾನೆಗಳ ಉದಾಹರಣೆಗಳಲ್ಲಾ. ದೇಶಾದ್ಯಂತ ಬಹುತೇಕ ಕಾರ್ಮಿಕರ ಪರಿಸ್ಥಿತಿ ಇದಕ್ಕಿಂತ ಬಿನ್ನವಾಗೇನೂ ಇಲ್ಲ. ಸಂಘಟಿತ, ಸುಶಿಕ್ಷಿತ ನೌಕರರ ಪರಿಸ್ಥಿತಿಯೇ ಹೀಗೆ ಅತಂತ್ರವಾಗಿರುವಾಗ ಇನ್ನು ಅಸಂಘಟಿತ ವಲಯದ ಕಾರ್ಮಿಕ ವರ್ಗದ ಪರಿಸ್ಥಿತಿ ಇನ್ನೂ ಘೋರವಾಗಿದೆ. ಖಾಯಂ ಕೆಲಸಗಳಿಲ್ಲದೇ ಸರಕಾರದ ಭಾಗ್ಯಗಳ ಮೇಲೆ ಬದುಕುವಂತಹ ನಿಕೃಷ್ಟ ಪರಿಸ್ಥಿತಿಗೆ ಕೂಲಿ ಕಾರ್ಮಿಕ ವರ್ಗದವರು ನೂಕಲ್ಪಟ್ಟಿದ್ದಾರೆ. ವಿಶ್ವದ ಕಾರ್ಮಿಕರೇ ಒಂದಾಗಿ ಎಂದು ಕರೆಕೊಡುವ ಕಾರ್ಮಿಕ ಸಂಘಟನೆಗಳಲ್ಲೇ ಮೊದಲು ಐಕ್ಯತೆಗಳಿಲ್ಲಾ. ಶತಮಾನದ ಹಿಂದಿನ ಮಾರ್ಕ್ಸವಾದಿ ಕಾರ್ಮಿಕ ಸಿದ್ದಾಂತದ ಮಾನದಂಡಗಳನ್ನೇ ಇನ್ನೂ ಹಿಡಿದುಕೊಂಡು ಕಾರ್ಮಿಕ ಕ್ರಾಂತಿ ಮಾಡಿ ದೇಶದ ಆಡಳಿತದ ಚುಕ್ಕಾಣಿ ಹಿಡಿಯುವ ಭ್ರಮೆಯಲ್ಲಿ ಕಮ್ಯೂನಿಸ್ಟ್ ಪಕ್ಷಗಳ ನಾಯಕರುಗಳಿದ್ದಾರೆ. ಆದರೆ.. ಈಗ ಉತ್ಪಾದನೆ ಹಾಗೂ ಉತ್ಪಾದಕ ಸಂಬಂಧಗಳಲ್ಲಿ ತೀವ್ರವಾದ ಬದಲಾವಣೆಗಳಾಗಿವೆ. ಕಾರ್ಮಿಕ ವರ್ಗಗಳಲ್ಲೂ ಸಹ ಬೌದ್ದಿಕ ವಲಯ ಹಾಗೂ ದೈಹಿಕ ವಲಯ ಎಂದು ವಿಭಾಗೀಕರಣವಾಗಿದೆ. ಲಕ್ಷಾಂತರ ರೂಪಾಯಿಗಳ ಸಂಬಳ ಪಡೆಯುವ ಐಟಿ ಬಿಟಿ ವಲಯದ ನೌಕರರೂ ಸಹ ಹೈಟೆಕ್ ಕಾರ್ಮಿಕರೇ ಆಗಿದ್ದಾರೆ. ಈ ಹೈಟೆಕ್ ಕಾರ್ಮಿಕರಿಗೂ ಸಹ ಕೆಲಸದ ಭದ್ರತೆ ಎನ್ನುವುದಿಲ್ಲಾ. ಮಾಡುವ ಕೆಲಸಕ್ಕೆ ಸಮಯದ ಮಿತಿ ಎನ್ನುವುದಿಲ್ಲಾ. ಎಂಟು ಗಂಟೆಗಳ ಕೆಲಸ ಎನ್ನುವುದು ಮೇ ಡೇ ಘೋಷಣೆ. ಆದರೆ.. ಈ ಹೈಟೆಕ್ ಕಾರ್ಮಿಕರು ರಾತ್ರಿ ಹಗಲು ಎನ್ನುವ ಪ್ರಜ್ಞೆ ಕೂಡಾ ಇಲ್ಲದೇ, ಮನೆ ಕಛೇರಿ ಎನ್ನುವ ಭಿನ್ನತೆ ಇಲ್ಲದೇ ಕೂತಲ್ಲೇ ಕೂತು ಬೌದ್ದಿಕ ಕೆಲಸದಲ್ಲಿ ನಿರತರಾಗಿರುತ್ತಾರೆ. ನಿರಂತರ ಕೆಲಸ ಮಾಡಿ ಇರುವ ಎಲ್ಲಾ ಸಾಮರ್ಥ್ಯವನ್ನೂ ಹಾಕಿದರೆ ಮಾತ್ರ ನೌಕರಿ ಉಳಿಸಿಕೊಳ್ಳಲು ಸಾಧ್ಯ. ಇಲ್ಲವಾದರೆ ಹೈರ್ ಆಂಡ್ ಪೈರ್ ರೂಲ್ ಅಪ್ಲೈ ಆಗುತ್ತದೆ. ಮತ್ತೆ ನಿರುದ್ಯೋಗಿಯಾಗಿ ಕೆಲಸಕ್ಕೆ ಜಾಬ್ ಡಾಟ್ ಕಾಮ್ ಗಳಿಗೆ ಅಪ್ಲೈ ಮಾಡುತ್ತಾ ಕೂಡಬೇಕಾಗುತ್ತದೆ. ವ್ಯಕ್ತಿಗತವಾಗಿ ದೈಹಿಕ ಹಾಗೂ ಮಾನಸಿಕ ಆರೋಗ್ಯ  ಮತ್ತು ಕೌಟುಂಬಿಕ ನೆಮ್ಮದಿಯನ್ನು ಹಾಳು ಮಾಡಿಕೊಂಡು ಹಣದ ಹಿಂದೆ ಬಿದ್ದಿರುವ ಈ ಹೈಟೆಕ್ ಕಾರ್ಮಿಕ ವಲಯವನ್ನೂ ಸಹ ಈ ಮಾರ್ಕ್ಸವಾದಿ ಕಾರ್ಮಿಕ ಸಂಘಟನೆಗಳು ಮುಟ್ಟಬೇಕಾಗಿದೆ.

ಈಗ ಇಡೀ ವ್ಯವಸ್ಥೆಯೇ ಸಾವಕಾಶವಾಗಿ ಕಾರ್ಪೋರೇಟ್ ಕಂಪನಿಗಳ ಹಿಡಿತಕ್ಕೆ ಒಳಗಾಗುತ್ತಿದೆ. ಜನರ ಪ್ರತಿನಿಧಿಗಳು ಎನ್ನಿಸಿಕೊಂಡ ಈ ದೇಶವಾಳುವವರು ಬಂಡವಾಳಶಾಹಿಗಳ ಹಿತಾಸಕ್ತಿಗಾಗಿ ತಮ್ಮ ಅಧಿಕಾರವನ್ನು ಬಳಸುತ್ತಿದ್ದಾರೆ.  ಸ್ವತಃ ಪ್ರಧಾನಿಯೇ ಅಂಬಾನಿ ಆದಾನಿಗಳಂತಹ ದೇಸಿ ಬ್ರಹತ್ ಬಂಡವಾಳಿಗರು ಹಾಗೂ ವಿದೇಶಿ ಕಾರ್ಪೋರೇಟ್ ಕಂಪನಿಗಳ ಮ್ಯಾನೇಜರ್ ರೀತಿಯಲ್ಲಿ ವರ್ತಿಸುತ್ತಿದ್ದು ಅವರ ವ್ಯವಹಾರಗಳಿಗೆ ಪೂರಕವಾಗಿ ಕಾನೂನುಗಳು ರೂಪಿಸಲ್ಪಡುತ್ತಿವೆ. ನೋಟ್ ಬ್ಯಾನ್ ಹಾಗೂ ಕ್ಯಾಶಲೆಸ್‌ಗಳ ಹಿಂದೆ ಇದೇ ಬಂಡವಾಳಶಾಹಿ ಕಂಪನಿಗಳ ಹಿತಾಸಕ್ತಿ ಅಡಗಿದೆ. ಆದರೆ.. ಈ ಹುನ್ನಾರಗಳ ಬಗ್ಗೆ ಎಡಪಂಥೀಯ ಕಾರ್ಮಿಕ ಸಂಘಟನೆ ಹಾಗೂ ಪಕ್ಷಗಳು ಜನಾಲೋಂಧನಗಳನ್ನು ಹುಟ್ಟು ಹಾಕುವಲ್ಲಿ ವಿಫಲವಾಗಿವೆ. ಬಹುಸಂಖ್ಯಾತ ಕಾರ್ಮಿಕರು ಹಾಗೂ ಶ್ರಮಜೀವಿ ವರ್ಗಗಳು ಮತ್ತೆ ಆಧುನಿಕ ಗುಲಾಮಗಿರಿಗೆ ಒಳಗಾಗುತ್ತಿದ್ದಾರೆ. ಇಡೀ ದೇಶದ ಆಡಳಿತ ವ್ಯವಸ್ಥೆ ಪ್ಯಾಸಿಸಂ ಕಡೆಗೆ ವಾಲುತ್ತಿದೆ. ಪ್ಯಾಸಿಸಂ ಪೂರ್ಣಪ್ರಮಾಣದಲ್ಲಿ ಬಂದರೆ ದೇಶದ ಎಲ್ಲಾ ದುಡಿಯುವ ವರ್ಗ ಶತಮಾನಗಳ ಕಾಲ ದಮನವನ್ನು ಅನುಭವಿಸುವುದಂತೂ ಗ್ಯಾರಂಟಿ. ಹಾಗೇನಾದರೂ ಆದರೆ ಅದರ ಹೊಣೆಗಾರಿಕೆಯನ್ನು ಕಾರ್ಮಿಕ ಸಂಘಟನೆಗಳ ನಾಯಕರುಗಳು ಹಾಗೂ ಎಡಪಂಥೀಯ ಸಂಘಟನೆಗಳೇ ಹೊರಬೇಕಾಗುತ್ತದೆ. ಆಧುನಿಕ ಗುಲಾಮಗಿರಿ ಯುಗಕ್ಕೆ ದಾರಿಮಾಡಿಕೊಟ್ಟ ಮಹಾಪರಾದದ ಪಾಪಪ್ರಜ್ಞೆಯಲ್ಲಿ ಈ ಎಲ್ಲಾ ಸಂಘಟನೆಗಳು ಹಾಗೂ ಪಕ್ಷಗಳು ನರಳಬೇಕಾಗುತ್ತದೆ.


ಎಲ್ಲಿವರೆಗೂ ಎಲ್ಲಾ ರೀತಿಯ ಸಂಘಟಿತ ಹಾಗೂ ಅಸಂಘಟಿತ ವಲಯಗಳ ದುಡಿಯುವ ಜನರು ಸ್ವಾಭಿಮಾನದಿಂದ ಬದುಕುವಂತಹ ವ್ಯವಸ್ಥೆ ನಿರ್ಮಿಸಲು ಈ ಕಾರ್ಮಿಕ ಸಂಘಟನೆಗಳು ಶತಾಯ ಗತಾಯ ಕೆಲಸ ಮಾಡುವುದಿಲ್ಲವೋ. ಎಲ್ಲಿವರೆಗೂ ಈ ಎಡರಂಗದ ಪಕ್ಷಗಳು ಹಾಗೂ ಸಂಘಟನೆಗಳು ತಮ್ಮೆಲ್ಲಾ ಸೈದ್ದಾಂತಿಕ ಭಿನ್ನಾಭಿಪ್ರಾಯಗಳನ್ನು ಮರೆತು ದುಡಿಯುವ ವರ್ಗಗಳ ವಿಮೋಚನೆಯತ್ತ ತಮ್ಮ ಐಕ್ಯ ಹೋರಾಟವನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಮುನ್ನಡೆಸುವುದಿಲ್ಲವೋ ಅಲ್ಲಿವರೆಗೂ ಮೇ ಡೇ ಎನ್ನುವುದು ಕೇವಲ ವಾರ್ಷಿಕ ಶುಷ್ಕ ಆಚರಣೆಯಾಗುತ್ತದೆ. ಒಂದು ಕಡೆಯಿಂದಾ ದೇಶದ ಆಳುವ ವರ್ಗ ದುಡಿಯುವ ವರ್ಗಗಳನ್ನು ಸದಾ ಅತಂತ್ರದಲ್ಲಿಟ್ಟು ಶೋಷಿಸುತ್ತಲೇ ತಮ್ಮ ಬಂಡವಾಳಶಾಹಿ ಸಾಮ್ರಾಜ್ಯವನ್ನು ವಿಸ್ತರಿಸುತ್ತಿದ್ದರೆ.. ಇನ್ನೊಂದು ಕಡೆಗೆ ಜನವಿರೋಧಿಕ ವ್ಯವಸ್ಥೆಯ ವಿರುದ್ಧ ಜನಾಂದೋಲನಗಳನ್ನು ರೂಪಿಸಿ ದುಡಿಯುವ ವರ್ಗಗಳ ಹಕ್ಕುಗಳಿಗಾಗಿ ಹೋರಾಡಬೇಕಾದ ಸಂಘಟನೆಗಳು ಹಾಗೂ ಪಕ್ಷಗಳು ವಿಘಟನೆಗೊಳ್ಳುತ್ತಾ ಸಾಗುತ್ತಿವೆ. ಬಂಡವಾಳಶಾಹಿ ಶಕ್ತಿಗಳು ತಮ್ಮ ತಾಕತ್ತನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದ್ದರೆ.. ಕಾರ್ಮಿಕ ಸಂಘಟನೆಗಳು ಹಾಗೂ ಎಡಪಂಥೀಯ ಪಕ್ಷಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಿವೆ. ಇದರಿಂದಾಗಿ ಬಂಡವಾಳಿಗರ ಬಣ್ಣ ಬಣ್ಣದ ಮಾತುಗಳಿಗೆ, ಬಂಡವಾಳಿಗರ ಪೋಷಣೆಯಲ್ಲಿರುವ ರಾಜಕಾರಣಿಗಳ ಹುಸಿ ಬರವಸೆಗಳು ಹಾಗೂ ತಾತ್ಕಾಲಿಕ ಭಾಗ್ಯ ಯೋಜನೆಗಳಿಗೆ ಮರುಳಾದ ಮಹಾಜನತೆ ಮತ್ತೆ ಮತ್ತೆ ಈ ಭ್ರಷ್ಟರನ್ನು ಹಾಗೂ ಬಂಡವಾಳಿಗರ ಹಿತರಕ್ಷಕರನ್ನು ತಮ್ಮ ಪ್ರತಿನಿಧಿಗಳಾಗಿ ಆರಿಸಿ ಕಳಿಸುತ್ತಲೇ ಇರುತ್ತಾರೆ. ಜನರಲ್ಲಿ ಜಾಗೃತಿ ಮೂಡಿಸಿ ಹೋರಾಟ ರೂಪಿಸುವಲ್ಲಿ ಎಲ್ಲಾ ನಮೂನಿಯ ಎಡರಂಗದವರು ಅಸಫಲರಾಗುತ್ತಿದ್ದಾರೆ. ಇಂತಹ ಆತಂಕಕಾರಿ ಸನ್ನಿವೇಶದಲ್ಲಿ ಮೇ ಡೇ ದಿನ ಇನಕ್ಯೂಲಾಬ್ ಜಿಂದಾಬಾದ್ ಎಂದು ಘೋಷಣೆಗಳನ್ನು ಕೂಗಿದರೆ ಪ್ರಯೋಜನವಾದರೂ ಏನು. ಕಾರ್ಮಿಕ ಸಂಘಟನೆಗಳ ನಾಯಕರುಗಳಲ್ಲೇ ಒಮ್ಮತ ಇಲ್ಲದಿರುವಾಗ ವಿಶ್ವ ಕಾರ್ಮಿಕರೇ ಒಂದಾಗಿ ಹೋರಾಟಕ್ಕೆ ಮುಂದಾಗಿ ಎಂದು ಘೋಷಣೆಗಳ ಗರ್ಜಿಸುವುದರಿಂದ ಆಗುವುದಾದರೂ ಏನು.


ಎಲ್ಲಕ್ಕಿಂತಲೂ ಮೊದಲು ಕಾರ್ಮಿಕ ಸಂಘಟನೆಗಳು ಬದಲಾದ ಕಾಲಕ್ಕೆ ತಕ್ಕಂತೆ ತಮ್ಮ ಸಿದ್ದಾಂತಗಳನ್ನು ಬದಲಾಯಿಸಿಕೊಳ್ಳಬೇಕಿದೆ.  ಕಾರ್ಮಿಕರ ಹಿತರಕ್ಷಣೆ ಮಾಡುತ್ತೇವೆನ್ನುವ ಎಲ್ಲಾ ಎಡಪಂಥೀಯ ಕಾರ್ಮಿಕ ಸಂಘಟನೆಗಳು ತಮ್ಮೆಲ್ಲಾ ಭಿನ್ನಾಭಿಪ್ರಾಯವನ್ನು ಮರೆತು ಐಕ್ಯ ಹೋರಾಟಗಳನ್ನು ನಿರಂತರವಾಗಿ ಮುನ್ನಡೆಸಬೇಕಾಗಿದೆ. ಬೌದ್ದಿಕ ಆಗೂ ದೈಹಿಕ ಶ್ರಮಜೀವಿಗಳ ಅತಂತ್ರ ಬದುಕಿನ ಹಿಂದಿನ ಹುನ್ನಾರಗಳ ವಿರುದ್ದ ಜನರನ್ನು ಜಾಗೃತಗೊಳಿಸಬೇಕಾಗಿದೆ. ಕೆಲಸದ ಭದ್ರತೆ, ಕನಿಷ್ಟ ಸವಲತ್ತುಗಳು ಹಾಗೂ ಸ್ವಾಭಿಮಾನದ ಬದುಕನ್ನು ಎಲ್ಲಾ ರೀತಿಯ ದುಡಿಯುವ ವರ್ಗ ಪಡೆಯುವವರೆಗೂ ಜನಹೋರಾಟ ನಿರಂತರವಾಗಿ ಜಾರಿಯಲ್ಲಿಡಬೇಕಿದೆ. ಜನ ಶೋಷಕ ಬಂಡವಾಳಿಗರ  ವಿರುದ್ದ ದುಡಿಯುವ ಜನತೆಯನ್ನು ಒಟ್ಟುಗೂಡಿಸಿ ಯುದ್ದವನ್ನೇ ಸಾರಬೇಕಿದೆ. ಆಗ ಹೆಮ್ಮೆಯಿಂದಾ ಮೇ ಡೇ ದಿನ ಇನ್‌ಕ್ಯೂಲಾಬ್ ಜಿಂದಾಬಾದ್ ಎಂದು ಹೇಳಬಹುದಾಗಿದೆ. ಹಲವಾರು ಜನ ಕಾರ್ಮಿಕರು ಮೇ 1 ರಂದು ರಕ್ತವನ್ನು ಹರಿಸಿ ತ್ಯಾಗ ಬಲಿದಾನ ಮಾಡಿ ವಿಶ್ವ ಕಾರ್ಮಿಕರಿಗೆ ಕನಿಷ್ಟ ಹಕ್ಕುಗಳನ್ನು ಜಾರಿಗೆ ಬರುವಂತೆ ಮಾಡಿದರು. ಈಗ ಅವುಗಳನ್ನಾದರೂ ಕಾಪಾಡಿಕೊಳ್ಳುವ ಕೆಲಸವನ್ನು ಕೆಂಬಾವುಟದವರು ಮಾಡಬೇಕಿದೆ. ಕಾರ್ಮಿಕ ಸಂಘಟನೆ ಹಾಗೂ ಪಕ್ಷಗಳ ನಾಯಕರುಗಳು ತಮ್ಮ ಸಾಂಪ್ರದಾಯಿಕ ಸ್ಟ್ರ್ಯಾಟಜಿಯನ್ನು ಬದಲಾಯಿಸಿ ಆತ್ಮಶೋಧನೆ ಮಾಡಿಕೊಂಡು ದುಡಿಯುವ ಜನರ ಹಕ್ಕುಗಳನ್ನು ಕಾಪಾಡಲು ಹೊಸ ಮಾರ್ಗಗಳನ್ನು ಆನ್ವೇಷಿಸಬೇಕಿದೆ. ಮತ್ತೆ ದುಡಿಯುವ ಜನರ ನಡುವಿನಿಂದ ನಿಜವಾದ ಜನನಾಯಕರು ಹುಟ್ಟಿಬರಬೇಕಿದೆ. ಎಲ್ಲಾ ದುಡಿಯುವ ವರ್ಗದ ಜನತೆ ಒಕ್ಕೋರಲಿನಿಂದ ನಾವು ಬೆವರನು ಸುರಿಸಿ ದುಡಿಯುವ ಜನ ನಮ್ಮ ಬೆವರಿನ ಪಾಲನು ಕೇಳುವೆವು, ತುಂಡು ಭೂಮಿಯಲ್ಲಾ, ಒಂದು ದೇಶವಲ್ಲಾ ಇಡೀ ಭೂಗೋಳವನೇ ಕೇಳುವೆವು.. ಎಂದು ಹಾಡಬೇಕಿದೆ. ಮೇ ಡೇ ಉದ್ದೇಶ ಸಫಲವಾಗಬೇಕಿದೆ. 

   - ಶಶಿಕಾಂತ ಯಡಹಳ್ಳಿ




1 ಕಾಮೆಂಟ್‌: