ನಾನು ಕವಿಯಲ್ಲ, ವಿಮರ್ಶಕನಲ್ಲ, ದಾರ್ಶನಿಕನೂ ಅಲ್ಲ
ಆದ್ದರಿಂದ ಜಗಕೆ ಬೆಳಕಾಗಲು ಸಾಧ್ಯವೇ
ಇಲ್ಲ.
ಆದರೂ ಕತ್ತಲೆಯನ್ನು ಕತ್ತಲೆಂದು ಹೇಳಬಲ್ಲೆ
ಅಂಧಕಾರ ನೀಗಲು ಒಂಟಿ ಹಣತೆಯಾಗಿ ಬೆಳಗಬಲ್ಲೆ.
* * *
ರೊಕ್ಕದ ಹಿಂದೆ ಬಿದ್ದ ಗೆಳೆಯರಿಗಿಂತಾ
ಬಿಕ್ಕುವಾಗ ನೀರು ಕುಡಿಸೋರು ಬೇಕು.
ಆತುರದಲ್ಲಿ ತಿಂದಿದ್ದು ನೆತ್ತಿಗೇರಿ
ಕೆಮ್ಮುವಾಗ
ನೆತ್ತಿಗೆ ಮೆತ್ತಗೆ ತಟ್ಟುವವರು ಬೇಕು.
ಮುಂಗಾರು ಮಳೆಯಲ್ಲಿ ಕಣ್ಣೀರು ಒರತೆಯಾದಾಗ
ನೀರು-ಕಣ್ಣೀರು ಗುರುತಿಸಿ ಸಾಂತ್ವನ
ಹೇಳೋರು ಬೇಕು.
ಆಂತೋರಾರಾದ್ರೂ ಇನ್ನೂ ಇದ್ದರೆ ನಿಮ್ಮ
ಪಾದದ ಪೋಟೊ ಕಳಿಸಿ
ದಿನಾಲೂ ದೂಪಾ ದೀಪಾ ಹಚ್ಚಿ ಪೂಜೆ ಮಾಡ್ಬೇಕು.
* * *
ಟಿವಿ ನೋಡ್ತಾನೇ ಇದ್ರೆ ಮನದ ಕ್ಲೇಷ
ಹಿಂಗೀತಾ?
ಹಸಿದ ಹೊಟ್ಟೆಗೆರಡು ರೊಟ್ಟಿ ಸಿಕ್ಕೀತಾ?
ಟಿವಿ ಸಿನೆಮಾ ರಮ್ಮು ದಮ್ಮು ಎಲ್ಲಾ
ಲೂಸಿಯಾ ಮಾತ್ರೆ
ದಿನಾ ಬೆಳಗಾದ್ರೆ ಚಿಂತೆ ಯಾತನೆಯ ಯಾತ್ರೆ.
* * *
ಸಿರಿವಂತರಿಗೆ ತಿಂದು ತಿಂದು ಹೊಟ್ಟೆ
ಭಾರ
ತಿಂದದ್ದು ಕರಗಿಸಲು ಡಯಟ್ಟು ಜಿಮ್ಮು.
ಬಡವರಿಗೆ ತೀರದ ಹಸಿವು ಬದುಕೆ ಭಾರ
ತಿಂದಿದ್ದೆಲ್ಲಾ ಅರಗುತ್ತೆ ದೇಹ ಯಾವಾಗ್ಲೂ
ಸ್ಲಿಮ್ಮು.
* * *
ಹೊಟ್ಟೆ ಹಗುರಾದಷ್ಟೂ ಮನಸ್ಸು ಭಾರವಂತೆ
ಎಷ್ಟೇ ತಿಂದ್ರೂ ತುತ್ತಿನ ಚೀಲ ತಂಬ್ತಾನೇ
ಇಲ್ಲ.
ಬೇಕಾದಷ್ಟಿದೆ ಸರಕಾರ ಕೊಟ್ಟ ಪುಕ್ಕಟೆ
ಅಕ್ಕಿ
ಏನೇ ಆದರೂ ಸರ್ಕಾರಿ ಧಾನ್ಯದಲ್ಲಿ ತಾಕತ್ತೇ
ಇಲ್ಲ.
* * *
ಹಣ ಮುಖ್ಯ ಅಲ್ಲಾ, ಹಣವೊಂದೇ ಬದುಕಲ್ಲಾ
ಅನ್ನೋರೆಲ್ಲಾ ಬೆಂಗಳೂರಲ್ಲಿ ನಾಕೇ
ನಾಕು ದಿನ
ಕಾಸಿಲ್ಲದೇ ಬದುಕಿ ತೋರಿಸ್ಲಿ ನೊಡೋಣ?
ಕಾಲ ಬದಲಾಗಿದೆ ಎಲ್ಲಾ ಕಡೆ ಈಗ ಜಾಗತೀಕರಣ.
* * *
ನಾಯಿಗಿರೋ ನಿಯತ್ತು ನಾರಿಗಿಲ್ಲ ಅಂತಾರಲ್ಲಾ
ನಿಜವಾಗ್ಲೂ ನಾಯಿಗಿರೋ ಸ್ವಾತಂತ್ರ್ಯ
ನಾರಿಗಿಲ್ಲ.
ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ
ಅಂತಾ
ನಮ್ಮ ವೇದ ಶಾಸ್ತ್ರ ಪುರಾಣಗಳೇ ಪುಂಗತಿದ್ದಾವಲ್ಲಾ.
* * *
ದೀಪಾವಳಿಗೆ ಹೇಗೋ ಹಣತೆ ಕೊಂಡುಕೊಂಡ
ಬತ್ತಿ ಹೊಂದಿಸಿಕೊಂಡ, ಆದರೆ ಎಣ್ಣೆಗೆ
ಕಾಸಿಲ್ಲ.
ಬಡವನ ಬದುಕೇ ದಗದಗ ಉರಿವ ದೀವಿಗೆ
ಹಣತೆ-ಪಟಾಕಿ ಹಚ್ಚೋದೆ ಬೇಕಿಲ್ಲ.
* * *
ನನಗೂ ಪ್ರೀತ್ಸೋ ಆಸೆ ಆದ್ರೂ ಪ್ರೀತ್ಸೋದಿಲ್ಲಾ
ಯಾಕೆಂದ್ರೆ ನನಗೆಂದೂ ಪ್ರೀತಿ ದಕ್ಕೋದಿಲ್ಲಾ.
ನನ್ನ ಪ್ರೀತ್ಸೋರಿಗೆ ಕೊಡೋಕೆ ಪ್ರೀತಿ
ಬಿಟ್ಟು ಬೇರೇನಿಲ್ಲಾ
ಹಣಕಾಸಲ್ಲಿ ಬಡವಾ ನಾನು ಖರ್ಚು ಮಾಡಲು ಕಾಸಿಲ್ಲಾ.
* * *
ಹಳ್ಳಿ ಹುಡುಗ ಪ್ಯಾಟೆಗೆ ಬಂದ, ಕಾಡಲ್ಲಿ-
ಮೃಗಗಳ ಗೆದ್ದಿದ್ದ, ನದಿಯ ಸುಳಿಯಲ್ಲಿ
ಮಿಂದೆದ್ದಿದ್ದ, ನಾಡಲ್ಲಿ-
ಮಾಧ್ಯಮಗಳ ಮಧ್ಯೆ ಮಾರಾಟಗೊಂಡಿದ್ದ.
ಭ್ರಮೆಯ ಸುಳಿಯಲ್ಲಿ, ಮಾನವ ಮೃಗಗಳ
ಬಲೆಯಲ್ಲಿ
ಬದುಕು ಕಳೆದುಕೊಂಡ ಕೊನೆಗೆ ಪ್ರಾಣವನ್ನೇ
ಹರಣಮಾಡಿಕೊಂಡ.