ಗುರುವಾರ, ನವೆಂಬರ್ 7, 2013

ನಿರುದ್ಯೋಗಿಯ ಹಾಡು-ಪಾಡು :




ಕವಿತೆ








ತಂಗಾಳಿ ತಬ್ಕೊಂಡು, ತಣ್ಣೀರು ಕುಡ್ಕೊಂಡು
ಮಲ್ಕೊಂಡ್ರೆ ಹೊಟ್ಟೇಲಿ ಹಾಡುತ್ತೆ ಚಿಟ್ಟೆ.
ಕೆಲಸಾ ಇಲ್ದೆ ಬಿದ್ದಿದ್ದೇನೆ ಕುಡ್ಕೊಂಡು
ಹೊಟ್ಟೆ ಮೇಲೆ ತಣ್ಣೀರ ಬಟ್ಟೆ.





ಇಂಗ್ಲೀಸು  ಓದಿದ್ರೆ  ಸಿಗತಿತ್ತೇನೋ ಕಾಲಸೆಂಟರಲ್ಲೊಂದು ನೌಕರಿ
ಬಿಎ ಎಂಎ ಓದಿದ್ರೂ ಸಿಗಲಿಲ್ಲ ನೌಕರಿ, ಇದು ಯಾಕೆ  ಹಿಂಗ್ಯಾಕ್ರಿ.
ಕನ್ನಡ ಕನ್ನಡ ಅನ್ನೋರು ಪ್ಲೀಜ್ ಕೊಡ್ಸಿ ಒಂದು ನೌಕರಿ
ಜೀವನ ಪೂರಾ ಮಾಡ್ತೀನಿ ಎಂತಾದಿದ್ರೂ ಚಾಕರಿ....

ಎಚ್ಚರಾ ಇದ್ರೆ ಸಿನೆಮಾ-ಟೀವಿಲಿ ಸೆಕ್ಸಿಗಳ ದಾಳಿ
ನಿದ್ದೆಗೆ ಬಿದ್ರೆ ಕನಸಲ್ಲೆಲ್ಲಾ ಹುಡಿಗೀರ ಹಾವಳಿ
ಜಾರತಿದೆ ವಯಸ್ಸು ಕಲಬೆರಕೆ ಮನಸ್ಸು
ಬದುಕೋಕೆ ಆಗ್ತಿಲ್ಲಾ ಸಾಯೋಕೆ ಮನಸಿಲ್ಲ.






ಕನ್ನಡಮ್ಮ ಹೆತ್ತು ಹೊತ್ತು ಓದ್ಸಿ ಜೀವಾ ಕೊಟ್ಲು
ಇಂಗ್ಲೀಸ್ ಆಂಟಿ ಎಷ್ಟೋ ಜನಕ್ಕೆ ಕರೆದು ಕೆಲ್ಸಾ ಕೊಟ್ಲು
ಹೆತ್ತಮ್ಮನಿಗೆ ಕೇಳ್ದೆ 'ಯಾಕಮ್ಮಾ ಸೇರಿಸ್ಲಿಲ್ಲಾ ನನ್ನ ಕಾನ್ಮೆಂಟಗೆ'
'ಮಗಾ ಮಶಿನ್ನಾಗದೇ ಮನುಷಾ ಆಗ್ಲಿ ಅಂತ' ಅಮ್ಮ ಉತ್ತರಾಕೊಟ್ಲು..




ಬುಧವಾರ, ನವೆಂಬರ್ 6, 2013

ಹತ್ತು ಹನಿಕವಿತೆಗಳು :





ನಾನು  ಕವಿಯಲ್ಲ, ವಿಮರ್ಶಕನಲ್ಲ, ದಾರ್ಶನಿಕನೂ ಅಲ್ಲ
ಆದ್ದರಿಂದ ಜಗಕೆ ಬೆಳಕಾಗಲು ಸಾಧ್ಯವೇ ಇಲ್ಲ.

ಆದರೂ ಕತ್ತಲೆಯನ್ನು ಕತ್ತಲೆಂದು ಹೇಳಬಲ್ಲೆ
ಅಂಧಕಾರ ನೀಗಲು ಒಂಟಿ ಹಣತೆಯಾಗಿ ಬೆಳಗಬಲ್ಲೆ.

*       *     *

ರೊಕ್ಕದ ಹಿಂದೆ ಬಿದ್ದ ಗೆಳೆಯರಿಗಿಂತಾ
ಬಿಕ್ಕುವಾಗ ನೀರು ಕುಡಿಸೋರು ಬೇಕು.

ಆತುರದಲ್ಲಿ ತಿಂದಿದ್ದು ನೆತ್ತಿಗೇರಿ ಕೆಮ್ಮುವಾಗ
ನೆತ್ತಿಗೆ ಮೆತ್ತಗೆ ತಟ್ಟುವವರು ಬೇಕು.

ಮುಂಗಾರು ಮಳೆಯಲ್ಲಿ ಕಣ್ಣೀರು ಒರತೆಯಾದಾಗ
ನೀರು-ಕಣ್ಣೀರು ಗುರುತಿಸಿ ಸಾಂತ್ವನ ಹೇಳೋರು ಬೇಕು.

ಆಂತೋರಾರಾದ್ರೂ ಇನ್ನೂ ಇದ್ದರೆ ನಿಮ್ಮ ಪಾದದ ಪೋಟೊ ಕಳಿಸಿ
ದಿನಾಲೂ ದೂಪಾ ದೀಪಾ ಹಚ್ಚಿ ಪೂಜೆ ಮಾಡ್ಬೇಕು.

*       *     *

ಟಿವಿ ನೋಡ್ತಾನೇ ಇದ್ರೆ ಮನದ ಕ್ಲೇಷ ಹಿಂಗೀತಾ?
ಹಸಿದ ಹೊಟ್ಟೆಗೆರಡು ರೊಟ್ಟಿ ಸಿಕ್ಕೀತಾ?

ಟಿವಿ ಸಿನೆಮಾ ರಮ್ಮು ದಮ್ಮು ಎಲ್ಲಾ ಲೂಸಿಯಾ ಮಾತ್ರೆ
ದಿನಾ ಬೆಳಗಾದ್ರೆ ಚಿಂತೆ ಯಾತನೆಯ ಯಾತ್ರೆ.

*       *     *

ಸಿರಿವಂತರಿಗೆ ತಿಂದು ತಿಂದು ಹೊಟ್ಟೆ ಭಾರ
ತಿಂದದ್ದು ಕರಗಿಸಲು ಡಯಟ್ಟು ಜಿಮ್ಮು.

ಬಡವರಿಗೆ ತೀರದ ಹಸಿವು ಬದುಕೆ ಭಾರ
ತಿಂದಿದ್ದೆಲ್ಲಾ ಅರಗುತ್ತೆ ದೇಹ ಯಾವಾಗ್ಲೂ ಸ್ಲಿಮ್ಮು.

           *       *     *

ಹೊಟ್ಟೆ ಹಗುರಾದಷ್ಟೂ ಮನಸ್ಸು ಭಾರವಂತೆ
ಎಷ್ಟೇ ತಿಂದ್ರೂ ತುತ್ತಿನ ಚೀಲ ತಂಬ್ತಾನೇ ಇಲ್ಲ.

ಬೇಕಾದಷ್ಟಿದೆ ಸರಕಾರ ಕೊಟ್ಟ ಪುಕ್ಕಟೆ ಅಕ್ಕಿ
ಏನೇ ಆದರೂ ಸರ್ಕಾರಿ ಧಾನ್ಯದಲ್ಲಿ ತಾಕತ್ತೇ ಇಲ್ಲ.
 
              *       *     *

ಹಣ ಮುಖ್ಯ ಅಲ್ಲಾ, ಹಣವೊಂದೇ ಬದುಕಲ್ಲಾ
ಅನ್ನೋರೆಲ್ಲಾ ಬೆಂಗಳೂರಲ್ಲಿ ನಾಕೇ ನಾಕು ದಿನ

ಕಾಸಿಲ್ಲದೇ ಬದುಕಿ ತೋರಿಸ್ಲಿ ನೊಡೋಣ?
ಕಾಲ ಬದಲಾಗಿದೆ ಎಲ್ಲಾ ಕಡೆ ಈಗ ಜಾಗತೀಕರಣ.

*       *     *
ನಾಯಿಗಿರೋ ನಿಯತ್ತು ನಾರಿಗಿಲ್ಲ ಅಂತಾರಲ್ಲಾ
ನಿಜವಾಗ್ಲೂ ನಾಯಿಗಿರೋ ಸ್ವಾತಂತ್ರ್ಯ ನಾರಿಗಿಲ್ಲ.


ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ ಅಂತಾ
ನಮ್ಮ ವೇದ ಶಾಸ್ತ್ರ ಪುರಾಣಗಳೇ ಪುಂಗತಿದ್ದಾವಲ್ಲಾ.

*       *     *

ದೀಪಾವಳಿಗೆ ಹೇಗೋ ಹಣತೆ ಕೊಂಡುಕೊಂಡ
ಬತ್ತಿ ಹೊಂದಿಸಿಕೊಂಡ, ಆದರೆ ಎಣ್ಣೆಗೆ ಕಾಸಿಲ್ಲ.

ಬಡವನ ಬದುಕೇ ದಗದಗ ಉರಿವ ದೀವಿಗೆ
ಹಣತೆ-ಪಟಾಕಿ ಹಚ್ಚೋದೆ ಬೇಕಿಲ್ಲ.


*       *     *

ನನಗೂ ಪ್ರೀತ್ಸೋ ಆಸೆ ಆದ್ರೂ ಪ್ರೀತ್ಸೋದಿಲ್ಲಾ
ಯಾಕೆಂದ್ರೆ ನನಗೆಂದೂ ಪ್ರೀತಿ ದಕ್ಕೋದಿಲ್ಲಾ.

ನನ್ನ ಪ್ರೀತ್ಸೋರಿಗೆ ಕೊಡೋಕೆ ಪ್ರೀತಿ ಬಿಟ್ಟು ಬೇರೇನಿಲ್ಲಾ
ಹಣಕಾಸಲ್ಲಿ ಬಡವಾ ನಾನು  ಖರ್ಚು ಮಾಡಲು ಕಾಸಿಲ್ಲಾ.

*       *     *

ಹಳ್ಳಿ ಹುಡುಗ ಪ್ಯಾಟೆಗೆ ಬಂದ, ಕಾಡಲ್ಲಿ-
ಮೃಗಗಳ ಗೆದ್ದಿದ್ದ, ನದಿಯ ಸುಳಿಯಲ್ಲಿ ಮಿಂದೆದ್ದಿದ್ದ, ನಾಡಲ್ಲಿ-
ಮಾಧ್ಯಮಗಳ ಮಧ್ಯೆ ಮಾರಾಟಗೊಂಡಿದ್ದ.

ಭ್ರಮೆಯ ಸುಳಿಯಲ್ಲಿ, ಮಾನವ ಮೃಗಗಳ ಬಲೆಯಲ್ಲಿ
ಬದುಕು ಕಳೆದುಕೊಂಡ ಕೊನೆಗೆ ಪ್ರಾಣವನ್ನೇ ಹರಣಮಾಡಿಕೊಂಡ.

ಮಂಗಳವಾರ, ನವೆಂಬರ್ 5, 2013

ಹನಿ ಕವಿತೆಗಳು



ನನ್ನ ನೋಡಿ ನಾ ನಗದಿದ್ದರೆ
ನನ್ನೊಳಗಿನ ವಿದೂಷಕ ಮಲಗಿದ್ದರೆ,
ನಾನೇ ಲೋಕದ ಕಣ್ಣಿಗೆ ವಿದೂಷಕನಾಗುತ್ತೇನೆ
ಜನ ನನ್ನ ನೋಡಿ  ನಗುತ್ತಾರೆ.
             *       *      *
ತನುವು ಬಯಲಾಗಿ, ಮನವು ಬೆತ್ತಲಾಗಿ
ನನ್ನೊಳಗಿನ ಕತ್ತಲೆ ದೂರವಾಗದಿದ್ದಲ್ಲಿ,
ಬೆಳಕಿನ ಸೊಗಸು, ಕಾಮನಬಿಲ್ಲಿನ ಹೊಂಗನಸು
ಕಾಣುತ್ತೇನೆನ್ನುವುದು ಬರೀ ಕನಸು.
             *       *      *
ನಾಗರೀಕತೆ ಎಲ್ಲವನ್ನೂ ಕೊಟ್ಟಿದೆ
ನೆಮ್ಮದಿಯಾಗಿ ಬದುಕುವುದನ್ನು ಹೊರತುಪಡಿಸಿ,
ತಂತ್ರಜ್ಞತೆ ಅನುಕೂಲತೆಗಳನ್ನೆಲ್ಲಾ ತೆರೆದಿಟ್ಟಿದೆ
ಮಾನವೀಯ ಸಂಬಂಧಗಳನ್ನು ಹೊರತುಪಡಿಸಿ.
             *       *      *
ಆಗೆಲ್ಲಾ ಚೆನ್ನಾಗಿತ್ತು ಈಗೇನೂ ಇಲ್ಲಾ ಅಂತಾರಲ್ಲಾ
ಆಗೂ ಹೀಗೆ ಇತ್ತು, ಅದೇ ದ್ವೇಷ- ಅಸೂಯೆ,
ಧರ್ಮ -ಕರ್ಮ -ಅಸಮಾನತೆ -ಅಮಾನವೀಯತೆ
ದೇಶಕಾಲ ಯಾವುದಾದರೇನು ಇದು ಬಗೆಹರಿಯದ ಸಮಸ್ಯೆ.
             *       *      *
ಆ ದ್ವೇಷ ನನ್ನನ್ನು ಕೊಲ್ಲಬೇಕೆಂದಿತ್ತು

ಹೇಗಾದರೂ ಮಾಡಿ  ನಾನು ಬದುಕಲೇಬೇಕಿತ್ತು.
ಕೊನೆಗೂ ನಾನೇ ಕೊಲೆಗಾರನಾದೆ
ದ್ವೇಷಿಸುವವನನ್ನು ಬಿಟ್ಟು ದ್ವೇಷವನ್ನು ಕೊಂದೆ.
*          *      *
ಆ ಜ್ಞಾನ ಅನ್ನೋದು ಶ್ರೇಷ್ಟತೆಯ ವ್ಯಸನ ಸೃಷ್ಟಿಸುವುದಾದರೆ
ನಾನಂತೂ ಅಜ್ಞಾನಿಯಾಗಿರಲು ಬಯಸುತ್ತೇನೆ.
ಈ ವಿದ್ಯೆ ಅನ್ನೋದು ಅಸಮಾನತೆ ಪಸರಿಸುವಂತಿದ್ದರೆ
ನಾನು ಅನಕ್ಷರಸ್ತನಾಗಿರಲು ಇಚ್ಚಿಸುತ್ತೇನೆ.



ಕೆಲವು ಹನಿಕವಿತೆಗಳು



ಅವಮಾನವನ್ನು ಸಹಿಸದವ
ಸಾಧನೆಯ ಸಿದ್ಧಿ ಪಡೆಯಲಾರ.
ಅನುಮಾನದ  ಅಗ್ನಿಕುಂಡ ದಾಟದವ
ಎಂದೂ ಇಟ್ಟ ಗುರಿ ಮುಟ್ಟಲಾರ.
*   *   *   *
ಸಾಧನೆಗೆ ಸಾವಿರಾರು ದಾರಿ
ಅವಮಾನವನ್ನು ಸಹಿಸುವುದೂ ಸಹ.
ವೇದನೆಗೆ ನೂರಾರು ರಹದಾರಿ
ಅತಿಯಾಸೆ ಎಂಬುದು ಹಿಂಗದ ದಾಹ.
*   *   *   *
ಕಣ್ಣು ತೆರೆದರೆ ಕತ್ತಲಾಗಬೇಕು
ಮುಚ್ಚಿದರೆ ಬೆಳಕಾಗಬೇಕು.
ಬುದ್ಧನ ಅರಿವಿನ ಬೆಳಕು ಬೇಕೆಂದರೆ
ಎಲ್ಲ ಕಳಚಿ  ಬೆತ್ತಲಾಗಬೇಕು.
*   *   *   *
ಒಂದೇ ಒಂದು ಮುಖ ಕಂಡರೆ ಸಾಕು
ಎಂದು ಎಷ್ಟೋ ಸಲ  ಅನ್ನಿಸಿದ್ದುಂಟು.
ಬೆಂಗಳೂರಿನ ತುಂಬಾ ಬರೀ ಮುಖವಾಡಗಳೇ
ಆತ್ಮೀಯತೆ ಎಂಬುದು ಕನ್ನಡಿಯ ಗಂಟು.
*   *   *   *
ನನಗೆಲ್ಲವೂ ಗೊತ್ತು ಎನ್ನುವವರೇ ಹೆಚ್ಚು
ಎಲ್ಲವೂ ಗೊತ್ತಾದ ಮೇಲೆ ಬದುಕಿದ್ಯಾಕೆ?
ನಮ್ಮನ್ನೆ ನಾವರಿಯದ ಮೇಲೆ
ಎಲ್ಲ ಅರಿತಿರುವೆನೆಂಬ  ಅಹಂ ಬೇಕೆ?
*   *   *   *
ಈ ಸರಕು  ಮಾರುವವರು
ನನ್ನ ಕನಸಿಗೂ ಕನ್ನ ಹಾಕುತ್ತಿದ್ದಾರೆ.
ಟಿವಿ ಜಾಹಿರಾತು ತೋರುವವರು
ನನ್ನ ನಿದ್ದೆಯಲ್ಲೂ ಸರಕು ಮಾರುತ್ತಿದ್ದಾರೆ.
*   *   *   *
ನನ್ನ ಪಾಪಗಳ ಲೆಕ್ಕವಿಡಲು
ನನಗೆ ಪುರುಸೊತ್ತಿಲ್ಲಾ.
ಇನ್ನೊಬ್ಬರ ತಪ್ಪುಗಳ ಲೆಕ್ಕದ ಪುಸ್ತಕ
ದಿನವೂ ಬರೆಯಬೇಕಲ್ಲಾ.


               *    *   *
ದಿನದಿಂದ ದಿನಕ್ಕೆ ಬದುಕುತ್ತಿದ್ದೇವೆ
ಎಂಬ ನಂಬಿಕೆ ಎಲ್ಲರದೂ.
ಆದರೆ.. ಕ್ಷಣದಿಂದ ಕ್ಷಣಕ್ಕೆ ಸಾವಿಗೆ ಹತ್ತಿರವಾಗುತ್ತಿದ್ದೇವೆ
ಎಂಬ ಪರಮಸತ್ಯ ಮರೆಯಲಾಗದು.
  *    *   *
ಕಣ್ಣ ಹನಿಗಳನ್ನ್ಯಾರೂ ಲೆಕ್ಕವಿಡಲಿಲ್ಲ
ನೋವಿನ ದಿನಗಳೆಲ್ಲೂ ಧಾಖಲಾಗಲಿಲ್ಲ.
ಸಣ್ಣ ಸಾಧನೆಗೆ ಹೊಗಳುವವರಿಗೇನು ಗೊತ್ತು
ಫಸಲಿನ ಹಿಂದಿನ ಪರಿಶ್ರಮದ ಗಮ್ಮತ್ತು.
  *    *   *
ನೂರು ಸಂಕಟಗಳ ಸರಮಾಲೆ ಧರಿಸಿ
ನೆಮ್ಮದಿಯನ್ನೆಲ್ಲೆಡೆ ಹುಡುಕುತ್ತಿದ್ದೇವೆ.
ಕಂಕುಳಲ್ಲಿ ಮಗುವನ್ನಿಟ್ಟುಕೊಂಡು
ಊರು ಕೇರಿ ತಡಕಾಡುತ್ತಿದ್ದೇವೆ.