ಬುಧವಾರ, ನವೆಂಬರ್ 6, 2013

ಹತ್ತು ಹನಿಕವಿತೆಗಳು :





ನಾನು  ಕವಿಯಲ್ಲ, ವಿಮರ್ಶಕನಲ್ಲ, ದಾರ್ಶನಿಕನೂ ಅಲ್ಲ
ಆದ್ದರಿಂದ ಜಗಕೆ ಬೆಳಕಾಗಲು ಸಾಧ್ಯವೇ ಇಲ್ಲ.

ಆದರೂ ಕತ್ತಲೆಯನ್ನು ಕತ್ತಲೆಂದು ಹೇಳಬಲ್ಲೆ
ಅಂಧಕಾರ ನೀಗಲು ಒಂಟಿ ಹಣತೆಯಾಗಿ ಬೆಳಗಬಲ್ಲೆ.

*       *     *

ರೊಕ್ಕದ ಹಿಂದೆ ಬಿದ್ದ ಗೆಳೆಯರಿಗಿಂತಾ
ಬಿಕ್ಕುವಾಗ ನೀರು ಕುಡಿಸೋರು ಬೇಕು.

ಆತುರದಲ್ಲಿ ತಿಂದಿದ್ದು ನೆತ್ತಿಗೇರಿ ಕೆಮ್ಮುವಾಗ
ನೆತ್ತಿಗೆ ಮೆತ್ತಗೆ ತಟ್ಟುವವರು ಬೇಕು.

ಮುಂಗಾರು ಮಳೆಯಲ್ಲಿ ಕಣ್ಣೀರು ಒರತೆಯಾದಾಗ
ನೀರು-ಕಣ್ಣೀರು ಗುರುತಿಸಿ ಸಾಂತ್ವನ ಹೇಳೋರು ಬೇಕು.

ಆಂತೋರಾರಾದ್ರೂ ಇನ್ನೂ ಇದ್ದರೆ ನಿಮ್ಮ ಪಾದದ ಪೋಟೊ ಕಳಿಸಿ
ದಿನಾಲೂ ದೂಪಾ ದೀಪಾ ಹಚ್ಚಿ ಪೂಜೆ ಮಾಡ್ಬೇಕು.

*       *     *

ಟಿವಿ ನೋಡ್ತಾನೇ ಇದ್ರೆ ಮನದ ಕ್ಲೇಷ ಹಿಂಗೀತಾ?
ಹಸಿದ ಹೊಟ್ಟೆಗೆರಡು ರೊಟ್ಟಿ ಸಿಕ್ಕೀತಾ?

ಟಿವಿ ಸಿನೆಮಾ ರಮ್ಮು ದಮ್ಮು ಎಲ್ಲಾ ಲೂಸಿಯಾ ಮಾತ್ರೆ
ದಿನಾ ಬೆಳಗಾದ್ರೆ ಚಿಂತೆ ಯಾತನೆಯ ಯಾತ್ರೆ.

*       *     *

ಸಿರಿವಂತರಿಗೆ ತಿಂದು ತಿಂದು ಹೊಟ್ಟೆ ಭಾರ
ತಿಂದದ್ದು ಕರಗಿಸಲು ಡಯಟ್ಟು ಜಿಮ್ಮು.

ಬಡವರಿಗೆ ತೀರದ ಹಸಿವು ಬದುಕೆ ಭಾರ
ತಿಂದಿದ್ದೆಲ್ಲಾ ಅರಗುತ್ತೆ ದೇಹ ಯಾವಾಗ್ಲೂ ಸ್ಲಿಮ್ಮು.

           *       *     *

ಹೊಟ್ಟೆ ಹಗುರಾದಷ್ಟೂ ಮನಸ್ಸು ಭಾರವಂತೆ
ಎಷ್ಟೇ ತಿಂದ್ರೂ ತುತ್ತಿನ ಚೀಲ ತಂಬ್ತಾನೇ ಇಲ್ಲ.

ಬೇಕಾದಷ್ಟಿದೆ ಸರಕಾರ ಕೊಟ್ಟ ಪುಕ್ಕಟೆ ಅಕ್ಕಿ
ಏನೇ ಆದರೂ ಸರ್ಕಾರಿ ಧಾನ್ಯದಲ್ಲಿ ತಾಕತ್ತೇ ಇಲ್ಲ.
 
              *       *     *

ಹಣ ಮುಖ್ಯ ಅಲ್ಲಾ, ಹಣವೊಂದೇ ಬದುಕಲ್ಲಾ
ಅನ್ನೋರೆಲ್ಲಾ ಬೆಂಗಳೂರಲ್ಲಿ ನಾಕೇ ನಾಕು ದಿನ

ಕಾಸಿಲ್ಲದೇ ಬದುಕಿ ತೋರಿಸ್ಲಿ ನೊಡೋಣ?
ಕಾಲ ಬದಲಾಗಿದೆ ಎಲ್ಲಾ ಕಡೆ ಈಗ ಜಾಗತೀಕರಣ.

*       *     *
ನಾಯಿಗಿರೋ ನಿಯತ್ತು ನಾರಿಗಿಲ್ಲ ಅಂತಾರಲ್ಲಾ
ನಿಜವಾಗ್ಲೂ ನಾಯಿಗಿರೋ ಸ್ವಾತಂತ್ರ್ಯ ನಾರಿಗಿಲ್ಲ.


ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ ಅಂತಾ
ನಮ್ಮ ವೇದ ಶಾಸ್ತ್ರ ಪುರಾಣಗಳೇ ಪುಂಗತಿದ್ದಾವಲ್ಲಾ.

*       *     *

ದೀಪಾವಳಿಗೆ ಹೇಗೋ ಹಣತೆ ಕೊಂಡುಕೊಂಡ
ಬತ್ತಿ ಹೊಂದಿಸಿಕೊಂಡ, ಆದರೆ ಎಣ್ಣೆಗೆ ಕಾಸಿಲ್ಲ.

ಬಡವನ ಬದುಕೇ ದಗದಗ ಉರಿವ ದೀವಿಗೆ
ಹಣತೆ-ಪಟಾಕಿ ಹಚ್ಚೋದೆ ಬೇಕಿಲ್ಲ.


*       *     *

ನನಗೂ ಪ್ರೀತ್ಸೋ ಆಸೆ ಆದ್ರೂ ಪ್ರೀತ್ಸೋದಿಲ್ಲಾ
ಯಾಕೆಂದ್ರೆ ನನಗೆಂದೂ ಪ್ರೀತಿ ದಕ್ಕೋದಿಲ್ಲಾ.

ನನ್ನ ಪ್ರೀತ್ಸೋರಿಗೆ ಕೊಡೋಕೆ ಪ್ರೀತಿ ಬಿಟ್ಟು ಬೇರೇನಿಲ್ಲಾ
ಹಣಕಾಸಲ್ಲಿ ಬಡವಾ ನಾನು  ಖರ್ಚು ಮಾಡಲು ಕಾಸಿಲ್ಲಾ.

*       *     *

ಹಳ್ಳಿ ಹುಡುಗ ಪ್ಯಾಟೆಗೆ ಬಂದ, ಕಾಡಲ್ಲಿ-
ಮೃಗಗಳ ಗೆದ್ದಿದ್ದ, ನದಿಯ ಸುಳಿಯಲ್ಲಿ ಮಿಂದೆದ್ದಿದ್ದ, ನಾಡಲ್ಲಿ-
ಮಾಧ್ಯಮಗಳ ಮಧ್ಯೆ ಮಾರಾಟಗೊಂಡಿದ್ದ.

ಭ್ರಮೆಯ ಸುಳಿಯಲ್ಲಿ, ಮಾನವ ಮೃಗಗಳ ಬಲೆಯಲ್ಲಿ
ಬದುಕು ಕಳೆದುಕೊಂಡ ಕೊನೆಗೆ ಪ್ರಾಣವನ್ನೇ ಹರಣಮಾಡಿಕೊಂಡ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ