ಅವಮಾನವನ್ನು ಸಹಿಸದವ
ಸಾಧನೆಯ ಸಿದ್ಧಿ ಪಡೆಯಲಾರ.
ಅನುಮಾನದ ಅಗ್ನಿಕುಂಡ ದಾಟದವ
ಎಂದೂ ಇಟ್ಟ ಗುರಿ ಮುಟ್ಟಲಾರ.
* *
* *
ಸಾಧನೆಗೆ ಸಾವಿರಾರು ದಾರಿ
ಅವಮಾನವನ್ನು ಸಹಿಸುವುದೂ ಸಹ.
ವೇದನೆಗೆ ನೂರಾರು ರಹದಾರಿ
ಅತಿಯಾಸೆ ಎಂಬುದು ಹಿಂಗದ ದಾಹ.
* *
* *
ಕಣ್ಣು ತೆರೆದರೆ ಕತ್ತಲಾಗಬೇಕು
ಬುದ್ಧನ ಅರಿವಿನ ಬೆಳಕು ಬೇಕೆಂದರೆ
ಎಲ್ಲ ಕಳಚಿ ಬೆತ್ತಲಾಗಬೇಕು.
* *
* *
ಒಂದೇ ಒಂದು ಮುಖ ಕಂಡರೆ ಸಾಕು
ಎಂದು ಎಷ್ಟೋ ಸಲ ಅನ್ನಿಸಿದ್ದುಂಟು.
ಬೆಂಗಳೂರಿನ ತುಂಬಾ ಬರೀ ಮುಖವಾಡಗಳೇ

* *
* *
ನನಗೆಲ್ಲವೂ ಗೊತ್ತು ಎನ್ನುವವರೇ ಹೆಚ್ಚು
ಎಲ್ಲವೂ ಗೊತ್ತಾದ ಮೇಲೆ ಬದುಕಿದ್ಯಾಕೆ?
ನಮ್ಮನ್ನೆ ನಾವರಿಯದ ಮೇಲೆ
ಎಲ್ಲ ಅರಿತಿರುವೆನೆಂಬ ಅಹಂ ಬೇಕೆ?
* *
* *
ಈ ಸರಕು ಮಾರುವವರು
ನನ್ನ ಕನಸಿಗೂ ಕನ್ನ ಹಾಕುತ್ತಿದ್ದಾರೆ.
ಟಿವಿ ಜಾಹಿರಾತು ತೋರುವವರು
ನನ್ನ ನಿದ್ದೆಯಲ್ಲೂ ಸರಕು ಮಾರುತ್ತಿದ್ದಾರೆ.
* *
* *
ನನ್ನ ಪಾಪಗಳ ಲೆಕ್ಕವಿಡಲು
ನನಗೆ ಪುರುಸೊತ್ತಿಲ್ಲಾ.
ಇನ್ನೊಬ್ಬರ ತಪ್ಪುಗಳ ಲೆಕ್ಕದ ಪುಸ್ತಕ
ದಿನವೂ ಬರೆಯಬೇಕಲ್ಲಾ.

* * *
ದಿನದಿಂದ ದಿನಕ್ಕೆ ಬದುಕುತ್ತಿದ್ದೇವೆ
ಎಂಬ ನಂಬಿಕೆ ಎಲ್ಲರದೂ.
ಆದರೆ.. ಕ್ಷಣದಿಂದ ಕ್ಷಣಕ್ಕೆ ಸಾವಿಗೆ
ಹತ್ತಿರವಾಗುತ್ತಿದ್ದೇವೆ
ಎಂಬ ಪರಮಸತ್ಯ ಮರೆಯಲಾಗದು.
* * *
ಕಣ್ಣ ಹನಿಗಳನ್ನ್ಯಾರೂ ಲೆಕ್ಕವಿಡಲಿಲ್ಲ
ನೋವಿನ ದಿನಗಳೆಲ್ಲೂ ಧಾಖಲಾಗಲಿಲ್ಲ.
ಸಣ್ಣ ಸಾಧನೆಗೆ ಹೊಗಳುವವರಿಗೇನು ಗೊತ್ತು
ಫಸಲಿನ ಹಿಂದಿನ ಪರಿಶ್ರಮದ ಗಮ್ಮತ್ತು.
* * *
ನೂರು ಸಂಕಟಗಳ ಸರಮಾಲೆ ಧರಿಸಿ
ನೆಮ್ಮದಿಯನ್ನೆಲ್ಲೆಡೆ ಹುಡುಕುತ್ತಿದ್ದೇವೆ.
ಕಂಕುಳಲ್ಲಿ ಮಗುವನ್ನಿಟ್ಟುಕೊಂಡು
ಊರು ಕೇರಿ ತಡಕಾಡುತ್ತಿದ್ದೇವೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ