ಶನಿವಾರ, ಡಿಸೆಂಬರ್ 17, 2016

ತಹ ತಹ..... 69 ರಾಷ್ಟ್ರಗೀತೆ ದೇಶಭಕ್ತಿಗೆ ಮಾಪಕವಲ್ಲ; ಜನಗಣಮನ ಕಡ್ಡಾಯ ಬೇಕಿಲ್ಲಾ..



ಯಾರಿಗೂ ಏನನ್ನೂ ಬಾಹ್ಯವಾಗಿ ಹೇರಿಕೆ ಮಾಡಲು ಸಾಧ್ಯವಿಲ್ಲ. ಬರೀ ಕಾನೂನುಗಳನ್ನು ಮಾಡುವ ಮೂಲಕ ಜನರಲ್ಲಿ ದೇಶಭಕ್ತಿಯನ್ನು ಹೇರಲು ಆಗುವುದೂ ಇಲ್ಲ. ಆದರೆ.. ಸುಪ್ರಿಂ ಕೋರ್ಟ ಅಂತಹುದೊಂದು ಠರಾವನ್ನು 2016 ನವೆಂಬರ್ 30ರಂದು ಹೊರಡಿಸಿ ಅದರ ಜಾರಿಗೆ ಹತ್ತು ದಿನಗಳ ಕಾಲಾವಕಾಶ ನೀಡಿತು. ಈ ದೇಶದ ಎಲ್ಲ ಸಿನೆಮಾ ಮಂದಿರಗಳಲ್ಲಿ ಚಲನಚಿತ್ರದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆಯನ್ನು ನುಡಿಸಬೇಕು ಹಾಗೂ ಪ್ರೇಕ್ಷಕರು ಎದ್ದು ನಿಂತು ಗೌರವ ಸಲ್ಲಿಸುವುದರ ಮೂಲಕ ಅದಕ್ಕೆ ದ್ವನಿಗೂಡಿಸಬೇಕು ಎಂಬುದು ಸುಪ್ರೀಂ ಆದೇಶವಾಗಿದೆ. ಸಿನೆಮಾ ಹಾಲ್‌ಗಳಲ್ಲಿ ಜನಗಣಮನ ಹೊಸದೇನೂ ಅಲ್ಲಾ. ಮೂವತ್ತು ವರ್ಷಗಳ ಹಿಂದೆ ಇದನ್ನು ಖಾಯಂ ವೃತದಂತೆ ಪಾಲಿಸಲಾಗುತ್ತಿತ್ತು. ಆಮೇಲಾಮೇಲೆ ಅದು ತಾನೇ ತಾನಾಗಿ ನಿಂತೇ ಹೋಯಿತು. ಸಿನೆಮಾಹಾಲ್‌ಗಳಲ್ಲಿ ರಾಷ್ಟ್ರಗೀತೆ ಮೊಳಗುವುದು ನಿಂತು ಹೋಯಿತು ಎಂದರೆ ದೇಶವಾಸಿಗಳಲ್ಲಿ  ದೇಶಭಕ್ತಿ ಕಡಿಮೆ ಆಯಿತು ಎಂದರ್ಥವೇ? ಅಥವಾ ಹೀಗೆ ಕಾನೂನಾತ್ಮಕವಾಗಿ ಕಡ್ಡಾಯ ಮಾಡಿದರೆ ಜನರಲ್ಲಿ ದೇಶಭಕ್ತಿ ಜಾಸ್ತಿ ಆಗುತ್ತದೆ ಎನ್ನುವ ಬಯಕೆಯೇ? ಇವೆರಡೂ ಅಲ್ಲಾ. ಕೇವಲ ಜನಗಣಮನ ಕೇಳಿದ ಕೂಡಲೇ ರಾಷ್ಟ್ರಭಕ್ತಿ ಹೆಚ್ಚುವಂತಿದ್ದರೆ ಅದನ್ನು ಕೇವಲ ಸಿನೆಮಾ ಮಂದಿರಗಳಿಗೆ ಮಾತ್ರ ಯಾಕೆ ಎಲ್ಲೆಲ್ಲಿ ಜನರು ಗುಂಪಾಗಿ ಸೇರುತ್ತಾರೋ ಅಲ್ಲೆಲ್ಲಾ ಜನಗಣ ಮೊಳಗಿಸಬಹುದಾಗಿತ್ತು. ಆದರೆ ವಾಸ್ತವ ಅದಲ್ಲಾ

 ಜನನಿ ಜನ್ಮಭೂಮಿ ಸ್ವರ್ಗಾದಪಿ ಗರೀಯಸೆ ಎಂದು ಜಪಿಸುತ್ತಿದ್ದರೆ ಮಾತ್ರ ಮಾತೃಭಕ್ತಿ ಹಾಗೂ ದೇಶಭಕ್ತಿ ಉಕ್ಕುವುದಿಲ್ಲ. ಸಿನೆಮಾ ಮಂದಿರಗಳಲ್ಲಿ ಜನಗಣಮನ ಹೇಳಿಸಿ ಎದ್ದು ನಿಂತು ಗೌರವ ಸೂಚಿಸಿದರೆ ಮಾತ್ರ ಪ್ರತಿಯೊಬ್ಬರ ದೇಶಭಕ್ತಿ ಸಾಬೀತಾಗುವುದಿಲ್ಲ. ಜೊತೆಗೆ ದೇಶದ ಆಳುವ ವರ್ಗಗಳೂ ಸಹ ತನ್ನ ದೇಶವಾಸಿಗಳನ್ನು ಗೌರವಯುತವಾಗಿ ಬದುಕುವಂತಹ ವ್ಯವಸ್ಥೆಯೊಂದನ್ನು ಕಲ್ಪಿಸಿಕೊಡಬೇಕಾಗುತ್ತದೆ. ಒಂದು ಕಡೆ ಕಿತ್ತು ತಿನ್ನುವ ಬಡತನ ಹಾಗೂ ಇನ್ನೊಂದು ಕಡೆಗೆ ಸಿರಿತನದ ವೈಭವೀಕರಣ. ಒಂದು ಕಡೆ ಕಾಸಿಲ್ಲದೇ ಮುರಿದು ಬೀಳುವ ಮದುವೆಗಳು, ಇನ್ನೊಂದು ಕಡೆ ಐನೂರು ಕೋಟಿ ವೆಚ್ಚದ ದುಬಾರಿ ಮದುವೆಗಳು ನಡೆಯುವ ಈ ದೇಶದಲ್ಲಿ ಕನಿಷ್ಟ ಸಮಾನತೆ ಎನ್ನುವುದೂ ಇಲ್ಲವೆಂದರೆ ಈ ದೇಶವನ್ನು ಹೇಗೆ ಪ್ರೀತಿಸುವುದು. ಕೇವಲ ಸಂವಿಧಾನದ ಕಲಮುಗಳಲಿ ಹೊರತು ಪಡಿಸಿ ಯಾವುದೂ ಬಡವರ, ದೀನ ದಲಿತರ ಪರವಾದ ಕಾನೂನುಗಳು ಅನುಷ್ಟಾನಗೊಳ್ಳದೇ ಇರುವ ದೇಶದ ಬಗ್ಗೆ ಅದು ಹೇಗೆ ಹೆಮ್ಮೆಯಿಂದ ಹೇಳಿಕೊಳ್ಳುವುದು? ಶೇಕಡ ೫ರಷ್ಟು ಜನರ ಕೈಯಲ್ಲಿ ಇಡೀ ದೇಶದ ಸಂಪನ್ಮೂಲಗಳು ಸಂಗ್ರಹವಾಗಿ ಬಹುತೇಕ ಜನರು ಬದುಕುವುದಕ್ಕೇ ಪರದಾಡುತ್ತಿರುವ ದಿನಮಾನಗಳಲ್ಲಿ ಅದು ಹೇಗೆ ದೇಶಭಕ್ತಿ ಎನ್ನುವುದು ಬಡವರ ಬದುಕಲ್ಲಿ ಉಕ್ಕಿ ಹರಿಯುವುದು? ಒಂದು ದೇಶದಲ್ಲಿ ಹುಟ್ಟಿ ಆ ದೇಶವನ್ನು ಪ್ರೀತಿಸುವ ಎಲ್ಲರಿಗೂ ಆ ದೇಶದ ಬಗ್ಗೆ ಪ್ರೀತಿ ಗೌರವ ಇದ್ದೇ ಇರುತ್ತದೆ. ಅದನ್ನು ಉಳಿಸಿಕೊಳ್ಳುವ ಇಲ್ಲವೇ ಕಳೆದುಕೊಳ್ಳುವ ತಾಕತ್ತು ದೇಶವಾಳುವವರ ಕೈಯಲ್ಲಿರುತ್ತದೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವ ದೇಶದಲ್ಲಿ ದೇಶಭಕ್ತಿ ಉಕ್ಕಿಹರಿಯಬೇಕೆಂಬುದೇ ಆದರ್ಶವಾದದ ಪರಿಕಲ್ಪನೆಯಾಗಿದೆ. ಎಲ್ಲರೂ ತಮ್ಮ ತಾಯಿಯನ್ನು ಪ್ರೀತಿಸುತ್ತಾರೆ.. ಹಾಗಂತ ತಾಯಿಯ ಕುರಿತು ಹಾಡು ಹೇಳಬೇಕೆಂದೇನಿಲ್ಲ. ಎಲ್ಲರಲ್ಲೂ ದೇಶಭಕ್ತಿ ಇದ್ದೇ ಇರುತ್ತದೆ.. ಹಾಗಂತ ಅದನ್ನು ರಾಷ್ಟ್ರಗೀತೆ ಹಾಡಿ ಸಾಬೀತುಪಡಿಸಬೇಕೆಂದೇನಿಲ್ಲಾ.. ದೇಶವೆಂದರೆ ಕೇವಲ ಕಲ್ಲು ಮಣ್ಣು ಕಟ್ಟಡ ರಸ್ತೆ ಇಮಾರತುಗಳಲ್ಲಾ.. ದೇಶವೆಂದರೆ ಅಲ್ಲಿ ವಾಸಿಸುವ ದುಡಿಯುವ ಜನ ಮತ್ತು ಅವರ ಘನತೆವೆತ್ತ ಬದುಕು ಎನ್ನುವುದನ್ನು ಆಳುವ ಪ್ರಭುಗಳು ಹಾಗೂ ಅವರನ್ನು ಪ್ರತಿನಿಧಿಸುವ ನ್ಯಾಯಾಲಯ ಮೊದಲು ಅರ್ಥಮಾಡಿಕೊಳ್ಳಬೇಕಾಗಿದೆ.

ಏನೇ ಆದರೂ.. ದೇಶವಾಸಿಗಳು ತಮ್ಮೆಲ್ಲಾ ಸಂಕಷ್ಟಗಳನ್ನು ಮರೆತು ದೇಶದ ಒಳತನ್ನೇ ಬಯಸುತ್ತಾರೆ. ಇಂದಿಲ್ಲ ನಾಳೆ ಈ ದುಷ್ಟರ ಭ್ರಷ್ಟ ಆಳುವ ವರ್ಗ ಹೋಗಿ ಜನರಿಗೆ ಒಳಿತನ್ನು ಬಯಸುವ ಆಡಳಿತ ಬರಬಹುದೆಂಬ ಭರವಸೆಯಿಂದ ಕಾಯುತ್ತಲೇ ಇದ್ದಾರೆ. ಆದರೆ.. ಆಳುವ ವರ್ಗಗಳು ತಮ್ಮ ನ್ಯೂನ್ಯತೆಗಳನ್ನು ಮರೆಮಾಚಿ ಜನರ ದಿಕ್ಕನ್ನು ಬೇರೆ ಕಡೆಗೆ ತಿರುಗಿಸಲು ಆಗಾಗ ದೇಶಭಕ್ತಿಯ ಭಾವನೆಗಳನ್ನು ಕೆರಳಿಸುವ ವರಸೆಗಳನ್ನು ಹುಡುಕುತ್ತಿರುತ್ತಾರೆ. ದೇಶಭಕ್ತಿಯ ಹೆಸರಲ್ಲಿ ಜನರ ದಿಕ್ಕು ತಪ್ಪಿಸುವ ಮಹತ್ಕಾರ್ಯವನ್ನು ಅಂದಿನ ಹಿಟ್ಲರನಿಂದಿ ಹಿಡಿದು ಇಂದಿನ ಮೋದಿವರೆಗೂ ನಿರಂತರವಾಗಿ ನಡೆದುಕೊಂಡೇ ಬಂದಿದೆ. ಅಲ್ಪಸಂಖ್ಯಾತರನ್ನು ದೇಶವಿರೋಧಿಗಳು ಎಂದು ಬಿಂಬಿಸುತ್ತಾ ಅವರ ಮೇಲೆ ಬಹುಸಂಖ್ಯಾತರನ್ನು ಎತ್ತಿಕಟ್ಟುವ ಮೂಲಕ ದೇಶಭಕ್ತಿಯ ರಾಜಕಾರಣವನ್ನು ಆಳುವ ವರ್ಗಗಳು ಮಾಡುತ್ತಲೇ ಬಂದಿವೆ. ಇತ್ತೀಚೆಗಂತೂ ನಮ್ಮ ದೇಶದಲ್ಲಿ ಈ ದೇಶಭಕ್ತಿ ಅನ್ನುವುದೇ ತೋರುಂಬ ಲಾಭವಾಗಿದೆ. ನಿಜ ಹೇಳಬೇಕೆಂದರೆ ಬಹುಸಂಖ್ಯಾತ ಜನರಲ್ಲಿ ಈ ದೇಶದ ಮೇಲೆ ಅಪಾರವಾದ ಪ್ರೀತಿ ಭಕ್ತಿ ಹಾಗೂ ಗೌರವ ಇದೆ. ಆದರೆ.. ತಮ್ಮ ಪ್ರೀತಿಯ ಮಾತೃಭೂಮಿಯನ್ನು ಕೆಲವೇ ಜನ ಖದೀಮರ ಸ್ವತ್ತಾಗಿಸಿದ್ದಕ್ಕೆ ಜನರಲ್ಲಿ ಅಸಮಾಧಾನವಿದೆ. ವಿದೇಶಿ ಲೂಟಿಕೋರ ಕಾರ್ಪೋರೇಟ್ ಕಂಪನಿಗಳಿಗೆ ಈ ದೇಶವನ್ನು ಲೂಟಿ ಮಾಡಲು ಮುಕ್ತ ಅವಕಾಶ ಕೊಟ್ಟಿದ್ದಕ್ಕೆ ಜನರೆದೆಯಲ್ಲಿ ಆಕ್ರೋಶ ಮಡುಗಟ್ಟಿದೆ. ಆದರೆ ಆ ಆಕ್ರೋಶದ ಲಾವಾರಸ ಒತ್ತಡಮೀರಿ ಸ್ಪೋಟಗೊಂಡು ಜ್ವಾಲಾಮುಖಿಯಾಗಿ ಈ ಆಳುವ ವರ್ಗವನ್ನು ಆಪೋಷಣ ತೆಗೆದುಕೊಳ್ಳುವುದನ್ನು ತಡೆದು ನಿಲ್ಲಿಸಲು ಆಳುವ ಜನರು  ಈ ದೇಶಭಕ್ತಿ ಎನ್ನುವ ತಡಗೊಡೆಯನ್ನು ನಿರಂತರವಾಗಿ ಬಳಸಲಾಗುತ್ತಾರೆ. ಅದರ ಭಾಗವಾಗಿಯೇ ಈಗಿನ ಕೋರ್ಟ ಆದೇಶ ಹೊರಗೆ ಬಂದಿದೆ.

ಯಾವುದನ್ನೇ ಆಗಲಿ ಮನಸಾರೆ ಮಾಡಬೇಕೆ ಹೊರತು ಅದು ಖಡ್ಡಾಯವಾಗಬಾರದು. ದೇಶಭಕ್ತಿಯೂ ಸಹ ಇದಕ್ಕೆ ಹೊರತಲ್ಲ. ಜನಗಣಮನವನ್ನು ಖಡ್ಡಾಯವಾಗಿ ಸಿನೆಮಾ ಮಂದಿರದಲ್ಲಿ ನುಡಿಸಲೇಬೇಕು.. ಪ್ರೇಕ್ಷಕರು ಅದಕ್ಕೆ ಸ್ಪಂದಿಸಲೇಬೇಕು ಎನ್ನುವುದು ಜನರಲ್ಲಿರುವ ದೇಶಭಕ್ತಿಯ ಮೇಲೆ ಆಳುವ ವರ್ಗಗಳಿಗಿರುವ ಅನುಮಾನದ ದ್ಯೋತಕವಾಗಿದೆ. ತನ್ನ ದೇಶದ ಜನರನ್ನೇ ನಂಬದ ಈ ಆಳುವ ದೊರೆಗಳನ್ನು ಜನರು ಹೇಗೆ ನಂಬುವುದು? ಈಗಾಗಲೇ ಬಹುಜನರ ತಿರಸ್ಕಾರಕ್ಕೆ ಒಳಗಾದ ಈ ದೇಶದ ಆಳುವ ಪಕ್ಷಗಳು ಹಾಗೂ ಸರಕಾರಗಳು ಕೇವಲ ಅಂಕಿ ಸಂಖ್ಯೆಗಳ ತಂತ್ರಗಾರಿಕೆಯಲ್ಲಿ ಅಧಿಕಾರ ಹಿಡಿದಿವೆಯೇ ಹೊರತು ಬಹುಜನರ ಒಕ್ಕೂರಲಿನ ಆಯ್ಕೆಯಿಂದಲ್ಲಾ. ಎಲ್ಲಾ ನಮೂನಿ ಪಕ್ಷ ಹಾಗೂ ಸರಕಾರಗಳ ಮೇಲೆ ಬಹುತೇಕ ಜನರು ವಿಶ್ವಾಸವನ್ನು ಕಳೆದುಕೊಂಡಿದ್ದು ಅದು ಆಳುವ ಜನರಿಗೂ ಗೊತ್ತಿದೆ. ಹಾಗೆಯೇ ಜನರನ್ನು ಸದಾ ಯಾವುದಾದರೊಂದು ಭ್ರಮೆಯಲ್ಲಿಟ್ಟು ತಮ್ಮ ಅಧಿಕಾರ ಹಂಚಿಕೆಯ ಲಾಭವನ್ನು ಪಡೆಯಲು ಆಳುವ ವರ್ಗಗಳೂ ನಿರಂತರವಾಗಿ ಪ್ರಯತ್ನಿಸುತ್ತಲೇ ಇರುತ್ತವೆ. ಈ ದೇಶಭಕ್ತಿ ಎನ್ನುವುದು ಸಹ ಜನರನ್ನು ಭ್ರಮೆಯಲ್ಲಿಟ್ಟು ತಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಆಳುವ ಸರಕಾರಗಳು ಹೂಡುವ ತಂತ್ರಗಾರಿಕೆಯ ಭಾಗವೇ ಆಗಿದೆ. ದೇಶವಾಸಿಗಳಲ್ಲಿ ದೇಶಭಕ್ತಿಯ ಉನ್ಮಾದವನ್ನು ಬಡಿದೆಬ್ಬಿಸಲು ಬಾಹ್ಯಶತ್ರುಗಳ ಹೆಸರಲ್ಲಿ ಯುದ್ದೋನ್ಮಾದವನ್ನು ಬಡಿದೆಬ್ಬಿಸಲಾಗುತ್ತದೆ ಇಲ್ಲವೇ ಆಂತರಿಕ ಶತ್ರುಗಳ ಭಯವನ್ನು ಸೃಷ್ಟಿಸಿ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸಲಾಗುತ್ತದೆ ಅಥವಾ ಕೋಮುಸಂಘರ್ಷವನ್ನು ಹುಟ್ಟುಹಾಕುವ ಹುನ್ನಾರಗಳನ್ನು ಮಾಡಲಾಗುತ್ತದೆ.


ಈಗ ಜನರೆಲ್ಲಾ ಮನರಂಜನಾ ಮಂದಿರಗಳಲ್ಲಿ ಜನಗಣಮನವನ್ನು ಹಾಡುವ ಮೂಲಕ ದೇಶಭಕ್ತಿಯನ್ನು ಸಾಬೀತುಪಡಿಸಲೇಬೇಕೆನ್ನುವ ಆದೇಶವನ್ನು ಸುಪ್ರಿಂ ಕೋರ್ಟ ಕೊಟ್ಟಿದೆ. ಮೊದಲೇ ಈ ಜನಗಣಮನ ಹಾಡಿನ ಬಗ್ಗೆಯೇ ಅಪಸ್ವರ ಕಳೆದ ನೂರು ವರ್ಷದಿಂದಲೂ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ರವೀಂದ್ರನಾಥ ಠಾಕೂರರು ಬರೆದ ಭಾರತ ಅಧಿನಾಯಕ ಎನ್ನುವ ಹಾಡನ್ನು 1911 ಡಿಸೆಂಬರ್ 27ರಂದು ಬ್ರಿಟನ್ ದೊರೆ 5ನೇ ಕಿಂಗ್‌ಜಾರ್ಜ ಹಾಗೂ ರಾಣಿಯ ಸ್ವಾಗತಕ್ಕಾಗಿ ಮೊದಲ ಬಾರಿಗೆ ಹಾಡಲಾಯಿತು. ಸ್ವಾತಂತ್ರ್ಯದ ನಂತರ ಈ ಗೀತೆ ರಚಿಸಿದ್ದರೆ ಅದನ್ನು ದೇಶಭಕ್ತಿಯ ನೆಲೆಯಲ್ಲಿ ಸ್ವೀಕರಿಸಬಹುದಾಗಿತ್ತು. ಆದರೆ.. ಸ್ವಾತಂತ್ರ್ಯ ಪೂರ್ವದಲ್ಲಿ ಈ ದೇಶದ ಜನಗಣಮನದ ಅಧಿನಾಯಕರು ಬ್ರಿಟೀಷ್ ದೊರೆ-ರಾಣಿ ಎಂಬುದಂತೂ ಸುಳ್ಳಲ್ಲ. ಇನ್ನೂ ಸ್ವತಂತ್ರ ದೇಶವೇ ಆಗಿರದಿದ್ದ ಕಾಲದಲ್ಲಿ, ಭಾರತ ಇನ್ನೂ ಈಗಿರುವಂತೆ ಇಲ್ಲದಿರುವ ಸಂದರ್ಭದಲ್ಲಿ, ಇನ್ನೂ ಪಾಳೆ ಪಟ್ಟು ರಾಜರುಗಳು ಆಳುತ್ತಿದ್ದ ಪ್ರದೇಶಗಳು ಬೇಕಾದಷ್ಟು ಇರುವಂತಹ ವ್ಯವಸ್ಥೆಯಲ್ಲಿ ಜನಗಣಮನದ ಅಧಿನಾಯಕರು ಬ್ರಿಟೀಷ್ ಪ್ರಭುತ್ವ ಅಲ್ಲದೇ ಬೇರೆ ಯಾರಿರಲು ಸಾಧ್ಯ? ಅಧಿನಾಯಕ ಎನ್ನುವ ಶಬ್ದವೇ ಸರ್ವಾಧಿಕಾರವನ್ನು ಬೆಂಬಲಿಸುವಂತಿದೆ ಹಾಗೂ ಮೂಲದಲ್ಲಿ ಬೆಂಗಾಳಿ ಭಾಷೆಯಲ್ಲಿ ರಚಿತವಾದ ಈ ಹಾಡಿನಲ್ಲಿ ಸಂಸ್ಕೃತ ಶಬ್ದಗಳೇ ತುಂಬಿವೆ. ಜನಗಣಮನ ಕುರಿತು ವಾದವಿವಾದಗಳೇನೇ ಇದ್ದರೂ ಅದನ್ನು ಭಾರತೀಯರು ಒಪ್ಪಿಯಾಗಿದೆ. 1950 ಜನವರಿ 24ರಿಂದ ಜನಗಣಮನ ಗೀತೆ ಈ ದೇಶದ ಅಧೀಕೃತ ರಾಷ್ಟ್ರಗೀತೆಯೂ ಆಗಿದೆ. ಆದರೆ.. ನೀವು ನಿಜಕ್ಕೂ ದೇಶಪ್ರೇಮಿಯಾಗಿದ್ದರೆ ಸಿನೆಮಾ ಮಂದಿರಗಳಲ್ಲೂ ಈ ಗೀತೆಯನ್ನು ನುಡಿಸಿ ಗೌರವಿಸಲೇಬೇಕು ಎನ್ನುವಂತೆ ನ್ಯಾಯಾಲಯ ಹುಕುಂ ಹೊರಡಿಸುವುದರಲ್ಲಿ  ಯಾವ ಅರ್ಥವಿದೆ? ತನ್ನದೇ ದೇಶವಾಸಿಗಳ ದೇಶಪ್ರೇಮದಲ್ಲಿ ಸುಪ್ರಿಂ ಕೋರ್ಟಿಗೆ ನಂಬಿಕೆ ಇಲ್ಲದೇ ಹೋಯಿತೆ? ಹಾಗೇನಾದರೂ ಜನರಲ್ಲಿ ದೇಶಪ್ರೇಮ ಕಡಿಮೆಯಾಗಿದ್ದರೆ ಸಿನೆಮಾ ಹಾಲ್‌ಗಳಲ್ಲಿ ಜನಗಣಮನ ಹಾಡನ್ನು ಹಾಡುವುದರಿಂದ ದೇಶಪ್ರೇಮ ಹೆಚ್ಚಾದೀತೆ? ದೇಶಭಕ್ತಿಯನ್ನು ಕಾನೂನಿನ ಮೂಲಕ ಜನರಲ್ಲಿ ಮೂಡಿಸಬಹುದೇ? ರಾಜಾಜ್ಞೆ ಮಾಡುವ ಮೂಲಕ ಜನರನ್ನು ಹದ್ದುಬಸ್ತಿನಲ್ಲಿಡಬಹುದು ಆದರೆ.. ಜನರ ವಿಶ್ವಾಸವನ್ನು ಗಳಿಸಲು ಸಾಧ್ಯವೇ? ಎಂದು ತುಘಲಕ್ ನಾಟಕದಲ್ಲಿ ಬರುವ ಸಂಬಾಷಣೆ ಸುಪ್ರಿಂ ಕೋರ್ಟಿಗೆ ಅರಿವಾಗಿದ್ದರೆ ಚೆನ್ನಾಗಿತ್ತು.

ರಾಷ್ಟ್ರಗೀತೆಯನ್ನು ಹಾಡುವಾಗ ಎದ್ದು ನಿಲ್ಲಲೇಬೇಕೆಂಬ ಕಡ್ಡಾಯ ಕಾನೂನಾಗಲೀ ಆದೇಶವಾಗಿಲಿ ಇರಲಿಲ್ಲ. ಆದರೂ ಜನರು ತಮ್ಮ ದೇಶಕ್ಕೆ ಸಲ್ಲಿಸುವ ಗೌರವದ ಭಾಗವಾಗಿ ಸ್ವ ಇಚ್ಚೆಯಿಂದ ಕಳೆದ ಏಳು ದಶಕಗಳಿಂದ ಎದ್ದು ನಿಂತು ರಾಷ್ಟ್ರಗೀತೆಗೆ ಮರ್ಯಾದೆ ಕೊಡುತ್ತಲೇ ಬಂದಿದ್ದಾರೆ. ಸುಪ್ರೀಂ ಕೋರ್ಟ ಸಹ ರಾಷ್ಟ್ರಗೀತೆಯನ್ನು ಹಾಡುವಂತೆ ಯಾರನ್ನೂ ಒತ್ತಾಯಿಸುವ ಹಾಗಿಲ್ಲ ಎಂದೇ ತನ್ನ ತೀರ್ಪಿನಲ್ಲಿ ಸ್ಪಷ್ಟನೆ ಕೊಟ್ಟಿತ್ತು. ಒಮ್ಮೆ ಬಿಹಾರದ ಮುಖ್ಯಮಂತ್ರಿಯಾಗಿದ್ದ ಲಾಲೂ ಪ್ರಸಾದ್ ಯಾದವ್ ರಾಷ್ಟ್ರಗೀತೆ ನುಡಿಸುವ ಸಮಯದಲ್ಲಿ ಕುಳಿತಿದ್ದು ಭಾರೀ ವಾದವಿವಾದವನ್ನು ಹುಟ್ಟುಹಾಕಿತ್ತು.  ಕೂಗುಮಾರಿ ಮಾಧ್ಯಮಗಳು ಅದನ್ನೊಂದು ದೇಶದ ದುರಂತ ಎನ್ನುವ ಹಾಗೆ ಹುಯಿಲೆಬ್ಬಿಸಿದವು. ಅವರ ಮೇಲೆ ರಾಷ್ಟ್ರದ್ರೋಹದ ಕೇಸ್ ಕೂಡಾ ದಾಖಲಿಸಲಾಗಿತ್ತು.  ಆಗ ಲಾಲೂ ಎಲ್ಲಾ ಮಾಧ್ಯಮಗಳಿಗೂ ಸುಪ್ರೀಂ ಕೋರ್ಟಿನ ಆದೇಶದ ಪ್ರತಿಯನ್ನು ಕಳುಹಿಸಿಕೊಟ್ಟು ಮಂಗಳಾರತಿ ಮಾಡಿದ್ದರು. ತದನಂತರ ರಾಷ್ಟ್ರಗೀತೆಯನ್ನು ನುಡಿಸುವಾಗ ಅದನ್ನು ಕಡ್ಡಾಯವಾಗಿ ನಿಂತು ಹಾಡಲೇಬೇಕಿಲ್ಲ ಎಂದು ಹೇಳಿದ ಸುಪ್ರಿಂ ಕೋರ್ಟ  ದಾಖಲಾಗಿದ್ದ ಕೇಸನ್ನು ವಜಾಗೊಳಿಸಿತು. ಆದರೆ.. ಸರಕಾರಗಳು ಬದಲಾದ ಹಾಗೆ ಅದಕ್ಕೆ ಪೂರಕವಾಗಿ ತನ್ನ ರಾಗವನ್ನೂ ಬದಲಾಯಿಸುವ ಸುಪ್ರಿಂ ಕೋರ್ಟ ಈಗ ತನ್ನದೇ ಆದೇಶವನ್ನು ಒಂಚೂರು ಬದಲಾಯಿಸಿ ಸಿನೆಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ನುಡಿಸಲೇಬೇಕು ಹಾಗೂ ಪ್ರೇಕ್ಷಕರು ಎದ್ದು ಗೌರವ ಸೂಚಿಸಲೇಬೇಕೆಂದು ಆದೇಶಿಸಿದೆ. ಇದು ನಿಜಕ್ಕೂ ದೇಶಪ್ರೇಮದ ಹೆಸರಲ್ಲಿ ಜನರ ಮೇಲೆ ಕಾನೂನು ನಡೆಸುವ ದಬ್ಬಾಳಿಕೆಯಾಗಿದೆ.ಇಷ್ಟಕ್ಕೂ ಸಿನೆಮಾ ಮಂದಿರಗಳಲ್ಲಿ ಜನಗಣಮನ ನುಡಿಸಿದಾಕ್ಷಣ ದೇಶಪ್ರೇಮ ಹುಟ್ಟುತ್ತದೆ ಎನ್ನುವುದು ಸತ್ಯವಲ್ಲ. ದೂಮಪಾನ ಮಧ್ಯಪಾನಗಳಿಂದಾಗುವ ಅಪಾಯಗಳ ಬಗ್ಗೆ ಎಂತೆಂಥಾ ಭಯಾನಕ ಕ್ಲಿಪ್ಪಿಂಗಗಳನ್ನು ಸಿನೆಮಾ ಮಂದಿರಗಳ ಪ್ರತಿಯೊಂದು ಪ್ರದರ್ಶನಗಳಿಗಿಂತ ಮುಂಚೆ ತೋರಿಸಲಾಗುತ್ತಿದೆ. ಅದನ್ನು ನೋಡಿ ಧೂಮಪಾನ ಮದ್ಯಪಾನ ತ್ಯಜಿಸಿದವರು ಎಲ್ಲಿದ್ದಾರೆ? ಇದರರ್ಥ ಇಷ್ಟೇ.. ಜನರು ಏನನ್ನಾದರೂ ಬಿಡಬೇಕಾದರೆ ಇಲ್ಲವೇ ರೂಢಿಸಿಕೊಳ್ಳಬೇಕಾದರೆ ಆ ಬದಲಾವಣೆ ಅವರ ಒಳಗಿನಿಂದ ಬರಬೇಕೆ ಹೊರತು ಕಡ್ಡಾಯ ಕಾನೂನುಗಳಿಂದಲ್ಲಾ.

1960 ರಲ್ಲಿಯೇ ಸುಪ್ರಿಂ ಕೋರ್ಟ ಸಿನೆಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ನುಡಿಸಲು ಸೂಚಿಸಿತ್ತೇ ಹೊರತು ಕಡ್ಡಾಯಗೊಳಿಸಿರಲಿಲ್ಲ. ಆ ನಂತರ ಅತ್ತ ಯಾರೂ ಗಮನ ಕೊಡಲಿಲ್ಲ. 1990ರಲ್ಲಿ ಮತ್ತೆ ಜಾರಿಗೆ ಬಂತಾದರೂ ಬಹಳ ದಿನ ಅದು ನುಡಿಯಲಿಲ್ಲ. 2003 ರಲ್ಲಿ ಮಹಾರಾಷ್ಟ್ರ ಸರಕಾರ ಸಿನೆಮಾ ಪ್ರದರ್ಶನ ಪೂರ್ವ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿತು. ಆದರೆ... ಸಿನೆಮಾ ಮಂದಿರ ಅಷ್ಟೇ ಅಲ್ಲಾ.. ಎಲ್ಲಿಯೇ ಆಗಲಿ ರಾಷ್ಟ್ರೀಗೀತೆ ನುಡಿದರೆ ಅಲ್ಲಿ ಜನರು  ಎದ್ದು ಗೌರವವನ್ನು ಸೂಚಿಸುತ್ತಲೇ ಬಂದಿದ್ದಾರೆ.  ಅಕಸ್ಮಾತ್ ಸೂಚಿಸದೇ ಇದ್ದರೂ ಅಂತವರಲ್ಲಿ ದೇಶಪ್ರೇಮ ಇಲ್ಲ ಎಂದು ಆರೋಪಿಸುವುದು ಅವಿವೇಕತನದ ಪರಮಾವಧಿಯಾಗಿದೆ. ರಾಷ್ಟ್ರಗೀತೆಗೆ ಗೌರವಿಸುವುದು ಸ್ವಯಂ ಪ್ರೇರಣೆಯಿಂದಾ ನಡೆಯುವ ವಿದ್ಯಮಾನ. ಅದಕ್ಕೆ ಯಾರ ಅಪ್ಪಣೆ ಆದೇಶಗಳೂ ಅಗತ್ಯವಿಲ್ಲ. ಆದರೆ ಅದನ್ನು ಕಡ್ಡಾಯಗೊಳಿಸುವ ಅಗತ್ಯವೇ ಇರಲಿಲ್ಲ. ಜನರಲ್ಲಿ ದೇಶಭಕ್ತಿಯ ಉನ್ಮಾದ ಹೆಚ್ಚಿಸುವ ಭಾಗವಾಗಿ ಈ ಆದೇಶ ಹೊರಬಿದ್ದಂತಿದೆ. ಈ ದೇಶದ ಜನರಲ್ಲಿರುವ ದೇಶಭಕ್ತಿಯನ್ನು ಸಂದೇಹದಿಂದ ನೋಡುವ ಕೆಲಸ ಇದಾಗಿದೆ. ರಾಷ್ಟ್ರಗೀತೆ ನುಡಿಯುವುದಾಗಲಿ, ಹಾಡುವುದಾಗಲಿ, ಎದ್ದು ನಿಂತು ಗೌರವಿಸುವುದಾಗಲಿ ಒಬ್ಬ ವ್ಯಕ್ತಿಯ ದೇಶಭಕ್ತಿಯನ್ನು ಅಳೆಯುವ ಸಾಧನವೂ ಅಲ್ಲಾ.. ದೇಶದ್ರೋಹಿ ಎಂದು ವಿರೋಧಿಸುವ ಮಾನದಂಡವೂ ಅಲ್ಲಾ..

ಎಲ್ಲರೂ ಒಪ್ಪಿಕೊಂಡ ರಾಷ್ಟ್ರಗೀತೆ ಜನಗಣಮನವನ್ನು ತೀವ್ರವಾಗಿ ವಿರೋಧಿಸುವವರು ಯಾರಾದರೂ ಈ ದೇಶದಲ್ಲಿ ಇದ್ದರೆ ಅದು ಸಂಘಪರಿವಾರದವರು. ರಾಷ್ಟ್ರಗೀತೆಯನ್ನು ಗೌರವಿಸದವರು ದೇಶದ್ರೋಹಿಗಳು ಎನ್ನುವುದಾದರೆ ಮೊಟ್ಟಮೊದಲ ದೇಶದ್ರೋಹಿಗಳ ಪಟ್ಟಿಯಲ್ಲಿ ಸಂಘಪರಿವಾರದ ಅಧಿನಾಯಕರ ಹೆಸರುಗಳಿರುತ್ತವೆ. ಮೊದಲಿನಂದಲೂ ಜನಗಣಮನವನ್ನು ರಾಷ್ಟ್ರಗೀತೆಯಾಗಿ ಒಪ್ಪದಿರುವ ಸಂಘಿಗಳ ಅಧಿನಾಯಕ ಮೋಹನ್ ಭಾಗವತ್ ಎಂಟು ತಿಂಗಳ ಹಿಂದೆ ನಿಜವಾದ ರಾಷ್ಟ್ರಗೀತೆ ವಂದೇಮಾತರಂ.. ಜನಗಣಮನ ಅಲ್ಲಾ ಎಂದು ಬಹಿರಂಗವಾಗಿಯೇ ಘೋಷಿಸಿದ್ದರು. ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಭಯ್ನಾಜಿ ಜ್ಯೋಷಿ ಸಹ ಭಾಗವತ್ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಬಂಕಿಮ್ ಚಂದ್ರ ಚಟ್ಟೋಪಾದ್ಯಾಯರು ರಚಿಸಿದ ವಂದೇಮಾತರಂ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ಮಾಡಬೇಕು ಎನ್ನುವುದು ಸಂಘಪರಿವಾರದ ಓಪನ್ ಅಜೆಂಡಾ ಆಗಿದೆ. ಅದಕ್ಕಾಗಿಯೇ ಈವರೆಗೂ ಆರೆಸ್ಸೆಸ್ ಮುಖ್ಯ ಕಛೇರಿಯಲ್ಲಿ ರಾಷ್ಟ್ರದ್ವಜಾರೋಹನ ಮಾಡುವುದಿಲ್ಲ ಹಾಗೂ ರಾಷ್ಟ್ರಗೀತೆಯನ್ನು ಹಾಡಲಾಗುವುದಿಲ್ಲ. ಹಾಗಾದರೆ ಈಗ ಹೇಳಿ ರಾಷ್ಟ್ರದ್ರೋಹಿಗಳು ಯಾರು ಎಂದು? ಜನಗಣಮನವನ್ನು ಶತಾಯಗತಾಯ ವಿರೋಧಿಸುವ ಹಿಂದುತ್ವವಾದಿಗಳೇ ದೇಶದ ಚುಕ್ಕಣಿ ಹಿಡಿದಿರುವ ಪ್ರಸ್ತುತ ಸಂದರ್ಭದಲ್ಲಿ ಜನರಲ್ಲಿ ದೇಶಭಕ್ತಿಯ ಉನ್ಮಾದವನ್ನು ಹಬ್ಬಿಸಲು ರಾಷ್ಟ್ರಗೀತೆಯನ್ನು ಒಂದು ಭಾವನಾತ್ಮಕ ಪರಿಕರವಾಗಿ ಬಳಸುತ್ತಿರುವುದೂ ಸಹ ಸಂಘಪರಿವಾರದ ಹಿಡನ್ ಅಜೆಂಡಾದ ಭಾಗವಾಗಿದೆ. ಹೀಗಾಗಿ ಜನಗಣಮನ ಜನರ ಮನದ ಭಾವನೆಯಾಗಿ ಉಳಿಯಲಿ. ಕಡ್ಡಾಯವೆನ್ನುವ ಅನಗತ್ಯ ಹೇರಿಕೆ ದೂರಾಗಲಿ. ಅಸಮಾನತೆ ಅಳಿದು ದೇಶವಾಸಿಗಳೆಲ್ಲಾ ತಮ್ಮ ದೇಶವನ್ನು ಪ್ರೀತಿಸಿ ಗೌರವಿಸುವಂತಹ ವಾತಾವರಣ ದೇಶಾದ್ಯಂತ ನಿರ್ಮಾಣವಾಗಲಿ ಎಂಬುದೇ ನಿಜವಾದ ದೇಶಭಕ್ತರ ಆಶಯವಾಗಿದೆ.

-ಶಶಿಕಾಂತ ಯಡಹಳ್ಳಿ    


ಶನಿವಾರ, ಡಿಸೆಂಬರ್ 10, 2016

ತಹ ತಹ..... 68 ಕುಡುಕನ ಬಾಯಲ್ಲಿ ಸತ್ಯ; ಕ್ಯಾಶಲೆಸ್ ಎಂಬೋ ಮಿತ್ಯ: (ಏಕವ್ಯಕ್ತಿ ಪ್ರಹಸನ)



ಓ ಹೋ ಹೋ.. ಭಕ್ತರು.. ಮೋದಿ ಭಕ್ತರು.. ದೇಶಭಕ್ತರು.. ನಿಮ್ಮೆಲ್ಲಾರ ಕಾಲಿಗೂ ಅಡ್ಡಬಿದ್ದೆ... ನಿಮ್ಮಂತಾ ದೇಶಪ್ರೇಮಿಗಳನ್ನ ಪಡೀಲಿಕ್ಕೆ ಭಾರತ ಮಾತಾ ಬಾಳಾ ಪುಣ್ಯಾ ಮಾಡಿರಬೇಕು ಗೊತ್ತಾ.. ಸಾರಿ.. ಕ್ಷಮಿಸಿ.. ಮನ್ನಿಸಿ.. ಒಂದೇ ಒಂದೈದು ನಿಮಿಷಾ ನಿಮ್ಮ ಭಜನೆ ನಿಲ್ಲಿಸಿ ನನ್ನ ಮಾತು ಕೇಳೋ ಔದಾರ್ಯ ತೋರಿ ಸ್ವಾಮಿ ಏನು ಕುಡುಕನನ್ಮಗನೇ ತೊಲಗಿ ಹೋಗು ಅಂತೀರಾ.. ಊಹೂಂ ಇವತ್ತು ನಿಮ್ಮ ಮೋದಿ ಆಣೆಗೂ ನಾನು ಕುಡಿದಿಲ್ಲಾ. ಕುಡಿಬಾರದು ಅಂತೇನಿಲ್ಲಾ ಸ್ವಾಮಿ.. ಆದರೆ ಆ ಸರಾಯಿ ಅಂಗಡಿಯವನು ಹೆಂಡಾ ಕೊಡೋದಿಲ್ಲಾ ಅಂದ್ಬಿಟ್ಟಾ ಮಿಂಡ್ರಿನನ್ಮಗಾ. ನಾನೇನ್ ಮಾಡ್ಲಿ ಹೇಳಿ.. ನಿಮ್ಮ ಮೋದಿ ಮಹಾತ್ಮರು ಅದೆಂತದೋ ಮಾಡಿದ್ದಾರಲ್ಲಾ ಹಾಂ.. ಸರ್ಜಿಕಲ್ ಸ್ಟ್ರೈಕು.. ಅದು ಬಂದು ನೇರವಾಗಿ ಹೊಡೆದದ್ದು ನಮ್ಮಂತಾ ಕುಡಕರಿಗೆ ಅನ್ನೋದು ನಿಮಗೆ ಗೊತ್ತಾ.. ಗೊತ್ತಾ ಮೊದಲ್ ಹೇಳಿ. ಗೊತ್ತಿಲ್ವಾ ಹಂಗಾದ್ರೆ ಇಲ್ಲಿ.. ಸಾರಿ.. ಕ್ಷಮಿಸಿ.. ಇಲ್ಲಿ  ಕೇಳ್ರಿ..

ನಿಮ್ಮ ಮೋದಿಗೆ ಸಾರಿ.. ಹಂಗಂದ್ರೆ ನಿಮಗೆ ಕೋಪಾ ಬರುತ್ತೆ.. ಜೀಗೆ.. ಮೋದಿಜಿಗೆ ಹೇಳಿ ನಮ್ಮಂತಾ ಕುಡಕರಿಗೆ ದಿನಕ್ಕೆ ಎರಡೆರಡು ಸಲಾ ಕ್ಯೂ ಹಚ್ಚೋಕೆ ಆಗಾಕಿಲ್ಲಾ ಅಂತಾ. ಒಂದು ಸರಾಯಿ ಅಂಗಡೀಲಿ ಬ್ಯಾಂಕ್ ವ್ಯವಹಾರ ಶುರು ಮಾಡಿಸಿ, ಇಲ್ಲಾಂದ್ರೆ ಬ್ಯಾಂಕಲ್ಲಿ ಸರಾಯಿ ಮಾರೋ ಏರ್ಪಾಟು ಮಾಡಲಿ. ಸುಮ್ಕೆ ಅಲ್ಲೂ ಕ್ಯೂ ನಿಲ್ಲಬೇಕು.. ಇಲ್ಲೂ ಕ್ಯೂ ನಿಲ್ಲಬೇಕು. ನಮಗೇನು ಬೇರೆ ಕೆಲಸಾ ಇಲ್ಲಾ ಅಂತಾ ತಿಳ್ಕೋಡಿದ್ದೀರೇನ್ರೀ.. ರೀ ಮಿಸ್ಟರ್.. ನೀವೆ.. ಭಕ್ತ ಮಹಾಶಯರು ಕ್ಷಮಿಸಬೇಕು. ಹಳೇ ನೋಟು ಹಾಳಾಗೋಗ್ಲಿ.. ಎರಡು ತಾಸು ಸಾಲಲ್ಲಿ ಒಚಿಟಿ ಕಾಲಲ್ಲಿ ನಿಂತರೂ ಎರಡು ಸಾವಿರ್ರೂಪಾಯಿ ಹೊಸಾ ನೋಟು ತಗೊಳ್ಳೋಕೆ ನಮ್ಮ ಜೀವಾ ಹೈರಾಣಾಗಿ ಬಿಡ್ತದೆ ಸ್ವಾಮಿ. ನಮ್ಮದೇ ಕಾಸು ನಮಗೆ ಕೊಡಾಕಿಲ್ಲಾ ಅಂತಾವ್ರೆ ಆ ಬ್ಯಾಂಕಿನವ್ರು. ನಾವೇನು ತಿನ್ನೋನ.. ಹೆಂಡತಿ ಮಕ್ಕಳ್ನ ಹೆಂಗ್ ನೋಡ್ಕೋಳ್ಳೋಣ ನೀವೆ ಹೇಳಿ ಸ್ವಾಮಿ.. ಎಲ್ಲಾ ತಿಳಿದೋರು ನೀವು ಮೋದಿ ಭಕ್ತರು..


ಹಂಗೂ ಹಿಂಗೂ ಮಾಡಿ ಹೊಸಾ ನೋಟು ತಗೊಂಡು ಬ್ಯಾಂಕಿಂದಾ ಬಂದ್ರೆ ಎಲ್ಲೆಂದ್ರೆ ಎಲ್ಲೂ ಚಿಲ್ಲರೇನೆ ಸಿಗ್ತಿಲ್ಲಾ ನಾನೇನು ಮಾಡ್ಲಿ ಹೇಳ್ರಿ. ಆ ಗುಲಾಬಿ ನೋಟು ನೋಡಿದ ಕೂಡಲೇ ಮುಂದೆ ಹೋಗು ಅನ್ನೋತರಾ ಅಂಗಡಿಯವರು ನೋಡತಾರೆ.. ನಾನಾದ್ರೂ ಚಿಲ್ಲರೆಗೆ ಎಲ್ಲಿ ಅಂತಾ ಹೋಗ್ಲಿ. ಇವತ್ತು ಮಾಮೂಲಿ ಬಾರಿಗೆ ಹೋದ್ರೆ ಆ ನನ್ಮಕ್ಕಳೂ ಚಿಲ್ಲರೆ ಇದ್ರೆ ಕುಡಿ ಇಲ್ಲಾ ಅಂದ್ರೆ ಮುಂದಕ್ಕೆ ನಡಿ ಅಂತಾ ಅಂದು ಬಿಡೋದಾ.. ನೀವೇ ಹೇಳಿ ಸ್ವಾಮಿ ಇದು ನ್ಯಾಯಾನಾ.. ಇದು ಧರ್ಮಾನಾ... ಒಂದೆರಡಲ್ಲಾ ಹತ್ತಾರು ವರ್ಷ ಅದೇ ಬಾರಿಗೆ ಹೋಗಿ ಕುಡಿದಿರ್ತೀವಿ. ಆದರೆ ನಿಯತ್ತಿಲ್ಲದ ನನ್ಮಕ್ಕಳು.. ಸಾಲಾ ಕೊಡಾಕಿಲ್ಲಾ ಅಂತಾರೆ.. ಹಾಳಬಿದ್ದೋಗಲಿ.. ಹೊಚ್ಚ ಹೊಸಾ ನೋಟ ಕೊಡ್ತೀನಂದ್ರೂ ಚಿಲ್ರೆ ಇಲ್ಲಾ ಹಚಾ ಅಂತಾ ನಾಯಿ ಓಡಿಸಿದಂಗೆ ಓಡ್ಸಿದ್ರು.. ಮನಸಿಗೆ ಎಷ್ಟು ನೋವಾಯ್ತು ಅಂತಾ ನಿಮಗ್ಯಾರಿಗಾದ್ರೂ ಗೊತ್ತಾ.. ಗೊತ್ತಾ ಅದು ಮೊದ್ಲ ಹೇಳಿ..

ಅದೇನೋ ಬ್ಲಾಕ್ ಮನಿ ಐಮೀನ್ ಕಪ್ಪು ಹಣಾ ಅಂತಾರಲ್ಲಾ ಅದನ್ನ ಹೊರಗ್ ತಗೀತೀನಿ.. ಇಚೆಗೆ ಹಾಕ್ಬಿಡ್ತೀನಿ.. ಟೇಂ ಕೊಡಿ.. ಶ್ರೀಮಂತರನ್ನ ಬೀದೀಲಿ ನಿಲ್ಲಿಸ್ತೀನಿ ಅಂತೆಲ್ಲಾ ನಿಮ್ಮ ಮೋದಿ ಮಹಾತ್ಮರು ದಿನಾಲೂ ಟಿವಿನಾಗೆ ಕೂಗಾಡ್ತಿದ್ರಲ್ಲಾ.. ಏನಾಯ್ತು ಸ್ವಾಮಿ.. ಯಾವೊಬ್ಬ ಸಾವುಕಾರ್ರೂ ಬ್ಯಾಂಕ್ ಮುಂದೆ ಒಂದಿನಾನೂ ಕ್ಯೂ ನಿಂತಿದ್ದು ನಾನಂತೂ ನೋಡಲಿಲ್ಲಾ. ಆದರೂ ಅವರ ಮನೇಲಿ ಕೋಟ್ಯಾಂತರ ಗರಿ ಗರಿ ಗುಲಾಬಿ ಬಣ್ಣದ ಹೊಸ ನೋಟು ಓಡಿ ಹೋಗಿ ಕೂತ್ಕೊಂಡೈತೆ. ಕಪ್ಪುಹಣ ಎಲೈತೆ ಸೋಮಿ.. ಹಳೇ ನೋಟೆಲ್ಲಾ ಬ್ಯಾಂಕಿಗೆ ಬಂದು ಹೊಸನೋಟಾಗಿ ಮತ್ತೆ ಸಾವುಕಾರರ ತಿಜೋರಿಯೊಳಗೆ ಹೋಗಿ ಕುಂತೈತೆ.. ಅದೇನೋ ಕಿತ್ತಾಕಿ ಬಿಡ್ತೀನಿ.. ಅದೇನೇನೋ ಎತ್ತಾಕಿ ಬಿಡ್ತೀನಿ ಅಂತಾ ಆ ನಿಮ್ಮ ದೇವ್ರು ಹೇಳಿದ್ದೆಲ್ಲಾ ಬರೀ ಡೌವಾ.. ಅಂದ್ರೆ ಬ್ಲಾಕ್ಮನಿ ಅನ್ನೂದು ಎಲ್ಲಾ ಹೊರಗ್ ತರೋಕಾಗಲಿಲ್ವಾ? ಬೆಟ್ಟಾ ಅಗದು ಭಾರಿ ಕಸರತ್ತು ಮಾಡಿದ್ರೂ ಹುಲಿ ಇರಲಿ ಒಂದೀಲೀನೂ ಹಿಡಿಯೋಕಾಗಲಿಲ್ವಾ? ಛೇ.. ಹಿಂಗಾದ್ರೆ ಹೆಂಗೆ ಸ್ವಾಮಿ.. ನಮ್ಮಂತೋರೆಲ್ಲಾ ಕಾಸಿಲ್ಲದೇ, ಕೆಲಸಾ ಇಲ್ಲದೇ ಪರದಾಡ್ತಿದ್ದೀವಿ. ಬೆಕ್ಕಿಗೆ ಚೆಲ್ಲಾಟ ಇಲಿಗಳಿಗೆ ಪ್ರಾಣಸಂಕಟಾ ಅನ್ನೋಹಂಗಾಗೇತಿ ಬಡವರ ಗೋಳು.. ನಿಮಗೇನಾದ್ರೂ ಗೊತ್ತಾ ಸ್ವಾಮಿ. ಅದೇನೋ ದೇಶಕ್ಕಾಗಿ ಎಲ್ಲಾ ಸಹಿಸ್ಕೊಳ್ರಿ.. ಎಲ್ಲಾ ಸರಿಹೋಗ್ತದೆ ತಡಕೊಳ್ರಿ, ಇಲ್ಲಾ ಅಂದ್ರೆ ನೀವೆಲ್ಲಾ ದೇಶದ್ರೋಹಿಗಳಾಗ್ತೀರಿ ಅಂತಾ ನೀವೆ ಅಲ್ವಾ ಸ್ವಾಮಿ ಭಕ್ತರುಗಳು ಬಾಯಿ ಬಡ್ಕೊಂತಿರೋದು. ಈಗೇನಾಯ್ತು.. ನಾವು ನಿಮ್ಮ ಮಾತು ಕೇಳಿ  ದೇಶಕ್ಕೊಳ್ಳೇದಾಗ್ಲಿ ಅಂತಾ ತಡ್ಕೊಂಡ್ವಿ. ದೊಡ್ಡ ದೊಡ್ಡ ಸಾವುಕಾರರು ಬೀದಿಗೆ ಬಿದ್ದಾಗ ಒಂದೊಂದು ಕಲ್ಲಾದ್ರೂ ಒಗೆದು ಸೇಡು ತೀರಿಸ್ಕೊಳ್ಳಾವಾ ಅಂತಾ ಕಾಯ್ತಿದ್ವಿ. ಆದರೆ.. ಯಾರೊಬ್ಬರೂ ಬೀದಿಗೆ ಬರಲೇ ಇಲ್ವಲ್ಲಾ ಸ್ವಾಮಿ.. ಇಷ್ಟು ದಿನಾ ನೀವೆಲ್ಲಾ ಊದಿದ್ದು ಬರೀ ಪುಂಗಿನಾ...?



ಅದ್ಯಾವುದೋ ದೇಶದಾಗಿಂದಾ ಕಪ್ಪು  ಹಣ ತಂದು ನಮ್ಮಂತವರ ಖಾತೆಗೆ ಹದಿನೈದು ಲಕ್ಷರೂಪಾಯಿ ಹಾಕ್ತೀನಿ ಅಂತಾ ಹೇಳಿ ಓಟು ತಗೊಂಡು ಪ್ರಧಾನಿ ಆದ್ರಲ್ಲಾ ನಿಮ್ಮ ಮೋದಿ ಸಾಹೇಬರು.. ಅದೆಷ್ಟು ಕಾಸು ಕೆರಕೊಂಡು ಬಂದ್ರು.. ಇನ್ನೂವರೆಗೂ ಒಂದುರೂಪಾಯಿ ಕೂಡಾ ನಮ್ಮ ಖಾತೆಗೆ ಬರಲೇ ಇಲ್ವಲ್ಲಾ.. ಅದು ಹೋಗಲಿ.. ಅದೇನೋ  ದೇಶದಲ್ಲಿರೋ ಕಪ್ಪುಹಣಾನೆಲ್ಲಾ ಗೂಡಿಸಿ ರಾಶಿ ಹಾಕಿ ದೇಶಾ ಉದ್ದಾರಾ ಮಾಡ್ತೀನಿ ಅಂತಾ ಹೇಳಿದ್ರಲ್ಲಾ ನಿಮ್ಮ ಕಿಂದರಜೋಗಿ.. ಏನಾಯ್ತು.. ಏನೂ ಹೊರಗೆ ಬರಲೇ ಇಲ್ಲಾ. ಈಗ ನೋಡಿದ್ರೆ ಕ್ಯಾಶಲೆಸ್ ವ್ಯವಹಾರ ಮಾಡಿ ಅಂತಾನಲ್ಲಾ.. ಹೆಂಗರೀ ಮಾಡೋದು.  ನನ್ನತ್ರಾನೂ ಒಂದು ಕಾರ್ಡ ಐತೆ. ಯಾವ ಎಟಿಎಂ ಮಷೀನಿನ ಬಾಯಿಗೆ ತುರುಕಿದ್ರೂ ಕಾಸಿಲ್ಲಾ ಅಂತಾ ವಾಪಸ್ ಬರತೈತೆ. ನನ್ನತ್ರಾನೂ ಒಂದು ಮೊಬೈಲ್ ಐತೆ. ಅದೇನೋ ಪೇಟಿಯಂ ಮೂಲಕ ಬಾರಿನ ಬಿಲ್ ಕೊಡ್ತೀನಿ  ಅಂದ್ರು ಬಾರಿನವರು ಒಪ್ತಿಲ್ಲಾ. ಯಾಕೆಂದ್ರೆ ಕುಡದ್ ಚಿತ್ ಆದ್ ಮೇಲೆ ಎಲ್ಲಿ ಪಿನ್ ನಂಬರ್ ಮರ‍್ತ್ ಬಿಡ್ತಿನೋ ಅನ್ನೋ ಭಯಾ ಆ ಹಂದಿನನ್ಮಕ್ಕಳಿಗೆ. ಅಲ್ಲಾ ಸ್ವಾಮಿ ಕ್ಯಾಶಲೆಸ್ ಅಂತೇಳಿ ಮೊಬೈಲು, ಕಾರ್ಡು ಬಳಸಿ ಎಲ್ಲಾ ಕೊಂಡಕೊಳ್ಳಬೇಕು ಅಂತೀರಲ್ಲಾ.. ಅದೇನು ಪುಗಸಟ್ಟೆ ಬರ‍್ತದಾ. ನೀವೇನಾದ್ರೂ ಹೇಳಿ ಸ್ವಾಮಿ.. ನನ್ನ ದೇಶದ್ರೋಹಿ ಅಂದ್ರೂ ಚಿಂತೆ ಇಲ್ಲಾ. ಆದರೆ ಇಷ್ಟು  ದಿನಾ ನೀವು ಪುಂಗಿದ್ದನ್ನ ನಾನು ಕೇಳದ್ದೀನಿ. ಈಗ ನೀವು ನನ್ನ ಸಂಕಟಾನ ಕೇಳಾಕೆ ಬೇಕು.

ನಿಮ್ಮ ಕ್ಯಾಶಲೆಸ್ ಮಹಾತ್ಮೆ ಹೇಳ್ತೀನಿ ಕೇಳಿ. ಬ್ಯಾಂಕಿನ ಡೆಬಿಟ್ ಕಾರ್ಡ ಬಳಸಿ ವಹಿವಾಟು ಮಾಡಿದೆ ಅಂತಾ ಇಟ್ಕೊಳ್ಳಿ. ಅದಕ್ಕೆ ಬ್ಯಾಂಕಿನವ್ರು ಅರ್ಧ ಪರ್ಸೆಂಟಿಂದಾ ಒಂದು ಪರ್ಸೆಂಟ್ ಚಾರ್ಜ ಮಾಡ್ತಾರೆ. ಅದನ್ಯಾರು ನಿಮ್ಮ ಮೋದಿ ಸಾಹೇಬರು ತುಂಬಿ ಕೊಡ್ತಾರಾ? ಹೋಗಲಿ ಕ್ರೆಡಿಟ್ ಕಾರ್ಡ ಕೊಟ್ಟು ಸಾಮಾನು ಸರಂಜಾಮು  ಕೊಂಡಕೊಂಡ್ರೆ ಒಂದೂವರೆಯಿಂದಾ ಎರಡೂವರೆ ಪರ್ಸೆಂಟ್ ಹೆಚ್ಚಿಗೆ ಸರ್ವಿಸ್ ಚಾರ್ಜ ಅಂತಾ ಕಿತ್ಕೊಂತಾರಲ್ಲಾ ಸ್ವಾಮಿ ಇದು ನ್ಯಾಯಾನಾ? ಅದೇನೋ ಪೇಟಿಯಂ, ಈ-ವ್ಯಾಲೆಟ್ ಅದೂ ಇದು ಮಣ್ಣು ಮಸಿ ಅಂತಾರಲ್ಲಾ ಅದನ್ನ ಉಪಯೋಗಿಸಿ ಏನಾದ್ರೂ ಖರ್ಚು ಮಾಡಿದ್ರೆ ನನ್ನ ಮನಿ ಮುಳಗೋಯ್ತು. ಒಂದಲ್ಲಾ ಎರಡಲ್ಲಾ ಎರಡೂವರೆ ಇಂದಾ ಮೂರುವರೆ ಪರ್ಸೆಂಟ್ ಕಾಸು ಪೀಕಬೇಕಲ್ಲಾ ಸ್ವಾಮಿ.. ಇದನ್ನೆಲ್ಲಾ ಭಕ್ತ ಮಹಾಶಯರು ನೀವು ಕೊಡ್ತೀರಾ? ಇದು ನಂದೊಬ್ಬಂದೇ ಅಲ್ಲಾ.. ಈ ದೇಶದಲ್ಲಿರೋ ಕೊಟ್ಯಾಂತರ ಜನರ ಹಣಾ ಸರಕಾರಕ್ಕಾದ್ರು ಹೋಗಿ ಸೇರಿದ್ರೆ ದೇಶಭಕ್ತಿ ಅನ್ಬೋದಿತ್ತು. ಆದರೆ.. ಕಾರ್ಡು ವ್ಯಾಲೆಟ್ ಎಲ್ಲಾ ವಹಿವಾಟು ಮಾಡೋ ಕಾರ್ಪೋರೇಟ್ ಕಂಪನಿಗಳಿಗೆ ಜನರ ಕಾಸು ಹೋಗಿ ಸೇರ‍್ತಿದೆಯಲ್ಲಾ, ಇದೇನಾ ಕ್ಯಾಶಲೆಸ್ ವ್ಯವಹಾರದ ಹಿಂದಿನ ಗುಟ್ಟು. ಬಡಜನರನ್ನು ಬಡದು ಕಂಪನಿಗಳ ಬಾಯಿಗೆ ಹಾಕೋದು ಅಂದ್ರೆ ಇದೇನಾ ಸ್ವಾಮಿ? ಇಲ್ಲದ ಕಪ್ಪು ಹಣಾ ಹೊರಗೆ ತಗೀತೀನಿ ಅನ್ನೋ ನೆಪದಲ್ಲಿ ಕಾರ್ಪೋರೇಟ್ ಕಂಪನಿಗಳ ಖಜಾನೆ ತುಂಬಿಸೋ ಹುನ್ನಾರಾನಾ ಇದು ಮಹಾಸ್ವಾಮಿ? ಇಲ್ಲಾ.. ನಾನು ಸುಮ್ಕಿರಾಕಿಲ್ಲಾ.. ನೀವು ಭಕ್ತಾದಿಗಳು ಇವತ್ತು ನಂಗೆ ಉತ್ತರಾ ಕೊಡಲೇ ಬೇಕು. ಇಷ್ಟು ದಿನಾ ನಮ್ಮಂತವ್ರ ಕಿವಿಗೆ ಚಂಡು ಹೂ ಇಟ್ಟಿದ್ದು ಸಾಕು. ದೇಶಪ್ರೇಮದ ಹೆಸರಲ್ಲಿ ದೇಶವಾಸಿಗಳನ್ನ ಯಾಮಾರಿಸಿದ್ದು ಸಾಕು. ನಮ್ಮ ದುಡಿಮೆಯ ಹಣವನ್ನ ನಮ್ಮಿಷ್ಟದಂತೆ ಖರ್ಚು ಮಾಡೋ ಸ್ವಾತಂತ್ರ್ಯ ಬೇಕು. ಬ್ಯಾಂಕಲ್ಲಿ ಕಾಸಿಟ್ರೆ ಅಲ್ಲೇ ಇರುತ್ತೆ ಅನ್ನೋ  ನಂಬಿಕೆ ನಮಗಂತೂ ಇಲ್ಲಾ. ಅದ್ಯಾವನೋ ಅಕೌಂಟ್ ಹ್ಯಾಕ್ ಮಾಡಿ ಇರೋ ಕಾಸನ್ನೂ ಕದಿಯೋದಿಲ್ಲಾ ಅನ್ನೋದಕ್ಕೂ ಗ್ಯಾರಂಟಿ ಇಲ್ಲಾ. ನಮ್ಮ ಕಾಸು ನಮ್ಮತ್ರಾ ಇರ‍್ಲಿ. ನಿಮ್ಮ ಕಾರ್ಡು ನಿಮ್ಮತ್ರಾ ಇರ‍್ಲಿ.


ಕುಡುಕನ ಮಾತು ಅಂತಾ ನಿರ್ಲಕ್ಷ ಮಾಡ್ತಿದ್ದೀರಾ? ಓಹೋ ಕಿಸಿ ಕಿಸಿ ನಗ್ತಿದ್ದೀರಾ? ದೇಶದ್ರೋಹಿ ಅಂತಾ ಬೈತಿದ್ದೀರಾ? ಬೈರಿ ಸ್ವಾಮಿ. ನಾವು ಕುಡಕರೇ ಇರ‍್ಬೋದು ಆದ್ರೆ ಬೆವರ ಹರಿಸಿ ದುಡಿದು ಕುಡೀತೀವಿ. ಯಾರೋ ದುಡಿದ್ ದುಡ್ಡಲ್ಲಿ ಹತ್ತು ಲಕ್ಷ ರೂಪಾಯಿ ಸೂಟು ಬೂಟು ಹಾಕ್ಕೊಂಡು ದಿನಕ್ಕೊಂದು ದೇಶಾ ಸುತ್ತಕೊಂಡು ಮೆರೆಯೋದಿಲ್ಲಾ ಅನ್ನೋದು ನೆಪ್ಪಿಡಿ. ಇಷ್ಟು ದಿನಾ ಇಡೀ ದೇಶಾನೆಲ್ಲಾ ಯಾಮಾರಿಸಿದ್ದು ಸಾಕು. ಈ ಸಂಘಿಗಳು, ಕಮಂಗಿಗಳು, ಭಕ್ತಾಸ್‌ಗಳು, ಬ್ರಿಗೇಡ್‌ಗಳು ಎಲ್ಲಾರೂ ಸೇರಿದ್ರೂ ಜನರನ್ನ ಬಾಳಾ ದಿನಾ ಮೋಸಾ ಮಾಡಿ ಭ್ರಮೆಯಲ್ಲಿಡೋಕೆ ಸಾಧ್ಯಾನೇ ಇಲ್ಲಾ. ಒಂದಿಲ್ಲೊಂದು ದಿನಾ ತಿರಿಗಿ ಬೀಳ್ತೀವಿ ನೋಡಿ ಆಗ ಗೊತ್ತಾಗುತ್ತೆ ನಿಮ್ಮ ಯೋಗ್ಯತೆ ಏನು ಅಂತಾ? ಜನಾ ಅಂದ್ರೆ ಹಾರಾಡೋ ನೊಣಾ ಅಂತಾ ತಿಳ್ಕೊಂಡಿದ್ದೀರಾ.. ನೀವು ಆಡಿಸಿದಂಗೆ ಆಡೋಕೆ.. ನೀವು ಎಸೆದಿರೋದನ್ನ ತಿನ್ನೋಕೆ? ನಿಮ್ಮ ಉನ್ಮಾದದ ಭಂಗಿಯ ಭ್ರಮೆ ಇಳಿದ ಮೇಲೆ ಜನರೇ ಲುಂಗಿ ಮೇಲೆ ಕಟ್ಟಿ ನಿಮ್ಮ ಪುಂಗಿ ಕಿತ್ತಾಕಿ ತದುಕ್ತಾರೆ ಅನ್ನೋದನ್ನ ಮರೀಬ್ಯಾಡ್ರಪ್ಪೋ.. ಅಲ್ಲಿವರೆಗೂ ಅದೇಟು ಆಟಾ ಆಡ್ತೀರೋ ಆಡಿ.. ಅದೆಷ್ಟು ಸರ್ಕಸ್ ಮಾಡ್ತಿರೋ ಮಾಡಿ.. ಎಲ್ಲಾದಕ್ಕೂ ಕೊನೆ ಅನ್ನೋದು ಇದ್ದೇ ಇದೆ. ಆ ಹಿಟ್ಲರ‍್ನಂತಾ ಹಿಟ್ಲರೇ ಮಣ್ಣು ಮುಕ್ಕಿದಾ ಇನ್ನು ನಿಮ್ಮದೇನು ಮಹಾ? ಚರಿತ್ರೆ ತಗ್ದು ನೋಡ್ರೋ ನೋಡಿ.. ಎಂತೆಂಥಾ ಸರ್ವಾಧಿಕಾರಿಗಳನ್ನ ದಂಗೆ ಎದ್ದ ಜನರು ಏಳು ಕೆರೆ ನೀರು  ಕುಡಿಸಿ ಮಡಿಚಿ ಇತಿಹಾಸದ ತೊಟ್ಟಿಗೆ ಬಿಸಾಕಿದ್ದಾರೆ ಅನ್ನೋದನ್ನ ನೋಡಿ. ಇನ್ನು ನೀವ್ಯಾವ ಲೆಕ್ಕಾ.. ಈ ಹಾಡಾದ್ರೂ ಕೇಳ್ರಪೋ ಕೇಳಿ..

ಎಷ್ಟೇ ಉರಿ ಬುಡದಲಿದ್ದರು
ಕಾಯುವವರೆಗೂ ಕಾಯ್ದು ಉಕ್ಕುವುದೋ ಹಾಲು
ಅದೆಷ್ಟೇ ಒಡಲುರಿ ಹೊಟ್ಟೆಯಲಿದ್ದರೂ
ತಾಳ್ಮೆಮೀರಲು ದಂಗೆ ಏಳ್ವುದು ಜನರ ಸಾಲು...

ಎಚ್ಚೆತ್ತುಕೊಂಡರೆ ಜನಗಣಮನ
ದುರುಳರ ಪಾಲಿಗಂದೇ ಸೋಲು…
ಇಂದಿಲ್ಲಾ ನಾಳೆ ಸಿಗಲೇ ಬೇಕು
ದುಡಿಯುವ ಜನರಿಗೆ ಬೆವರಿನ ಪಾಲು...

-ಶಶಿಕಾಂತ ಯಡಹಳ್ಳಿ
  



ತಹ ತಹ..... 67 ತಲಾಕ್ ತಲಾಕ್ ತಲಾಕ್ : (ಏಕವ್ಯಕ್ತಿ ಪ್ರಹಸನ)



ಯಾ ಅಲ್ಲಾ... ಕೊನೆಗೂ ಅಂಧಕಾರದಲ್ಲಿ ಭರವಸೆಯ ಬೆಳ್ಳಿ ಕಿರಣವನ್ನಾದರೂ ತೋರಿದೆಯಲ್ಲಾ. ನಿನಗೆ ಲಾಕ್ ಲಾಕ್ ಶುಕ್ರಿಯಾ. ಅಲಹಾಬಾದ್ ಹೈಕೋರ್ಟಾದರೂ ನನ್ನಂತಾ ನತದೃಷ್ಟ ಮಹಿಳೆಯರ ಮೇಲೆ ಕರುಣೆ ಇಟ್ಟು ತ್ರಿವಳಿ ತಲಾಕನ್ನು ಅಸಾಂವಿಧಾನಿಕ ಅಂತಾ ತೀರ್ಪು ಕೊಟ್ಟಿತಲ್ಲಾ.. ಉಸಿರುಗಟ್ಟಿದ ವಾತಾವರಣದಲ್ಲಿ ಬೆಳಕಿಂಡಿಯೊಂದು ತೆರೆದಂತಾಯಿತು.

ನಾನೆಷ್ಟು ಪುಣ್ಯ ಮಾಡಿದ್ದೇನೋ ಇಲ್ಲಾ ಪಾಪ ಮಾಡಿದ್ದೇನೋ ಗೊತ್ತಿಲ್ಲಾ.. ಮುಸ್ಲಿಂ ಧರ್ಮದಲ್ಲಿ ಹುಟ್ಟಿಬಿಟ್ಟೆ. ಪ್ರವಾದಿ ಪೈಗಂಬರರು ಹೇಳಿದ ಪ್ರತಿಯೊಂದು ಮಾತುಗಳನ್ನು ಓದುತ್ತಿದ್ದರೆ ಮುಸ್ಲಿಂ ಆಗಿ ಹುಟ್ಟಿರುವುದಕ್ಕೆ ಅತೀವ ಹೆಮ್ಮೆ ಅನ್ನಿಸುತ್ತದೆ. ಆದರೆ.. ಆದರೆ... ಈ ಧರ್ಮಾಂಧರು ಪುರುಷ ಹಿತಾಸಕ್ತಿಯ ಪರವಾಗಿ ಮಾರ್ಪಡಿಸಿಕೊಂಡ ಧರ್ಮದ ಹೆಸರಿನ ಕಾನೂನು ಕಟ್ಟಳೆಗಳನ್ನು ಕಂಡುಂಡು ಅನುಭವಿಸಿದವರಿಗೆ ಗೊತ್ತು ಇಸ್ಲಾಂ ಮತದಲ್ಲಿ ಹುಟ್ಟಿದ್ದೇ ಯಾವುದೋ ಪಾಪ ಮಾಡಿದ ಪ್ರಾಯಶ್ಚಿತ್ತಕ್ಕೆ ಶಿಕ್ಷೆ ಅನುಭವಿಸಲೆಂದು. ಅದರಲ್ಲೂ ಹೆಣ್ಣಾಗಿ ಹುಟ್ಟಿದ್ದಂತೂ ಪರಮಶಿಕ್ಷೆಯಲ್ಲದೇ ಮತ್ತೇನು.


ನನ್ನಜ್ಜಿ ನನ್ನ ಅಜ್ಜನ ನಾಲ್ಕನೆ ಹೆಂಡತಿಯಾಗಿ ಅನುಭವಿಸಬಾರದ ಪಡಿಪಾಟಲು ಅನುಭವಿಸಿ ದುರುಳ ಗಂಡಸರಿಗೆ ಶಾಪಹಾಕುತ್ತಲೇ  ನರನರಳಿ ಸತ್ತಳು. ನನ್ನ ಅಮ್ಮಿ ಕೂಡಾ ನಮ್ಮಪ್ಪನ ಎರಡನೇ ಬೀಬಿಯಾಗಿದ್ದವಳು. ಮದುವೆಯಾಗಿ ಮೂರೇ ವರ್ಷಕ್ಕೆ ಅಬ್ಬಾಜಾನ್ ಮೂರು ಸಲ ತಲಾಖ್ ಹೇಳಿ ದೂರ ಮಾಡಿಬಿಟ್ಟ. ಆಗ ನಾನಿನ್ನೂ ಚಿಕ್ಕವಳು. ನನಗಿನ್ನೊಬ್ಬಳು ತಂಗಿ ಬೇರೆ. ಇಬ್ಬರು ಮಕ್ಕಳನ್ನು ಕಟ್ಟಿಕೊಂಡು ಪಡಬಾರದ ಕಷ್ಟಪಟ್ಟು ಸವೆದು ಸವಕಲಾದ ಅಮ್ಮಿಜಾನ್ ತೀರಿಕೊಂಡು ಇಂದಿಗೆ ಸರಿಯಾಗಿ ಒಂದುವರ್ಷ ಆಯ್ತು. ಎರಡು ವರ್ಷಗಳ ಹಿಂದೆ ಅಲ್ತಾಪ್ ನನ್ನನ್ನ ನಿಖಾ ಆಗುತ್ತೇನೆ ಅಂತಾ ಮನೆಗೆ ಬಂದಾಗ ನಾನು ನಿರಾಕರಿಸಿದ್ದಂತೂ ಸತ್ಯ. ಎಲ್ಲಿ ನನ್ನ ಅಜ್ಜಿ ಅಮ್ಮನ ಹಾಗೆಯೇ ನನ್ನ ಬದುಕೂ ಅತಂತ್ರ ಆಗುತ್ತದೋ ಎನ್ನುವುದು ನನ್ನ ಮನದೊಳಗಿದ್ದ ಆತಂಕ. ಆದರೆ.. ನನ್ನ ಅನಿಸಿಕೆ ಕೇಳುವ ವ್ಯವಧಾನ ಯಾರಿಗಿತ್ತು. ನನಗೆ ಗೊತ್ತಿಲ್ಲದೇ ಎಲ್ಲಾ ನಿರ್ಧಾರವಾಗಿ ಹೋಗಿತ್ತು. ನಿಖಾ ವಿರೋಧಿಸೋಣವೆಂದರೆ ಅನಾರೋಗ್ಯದಿಂದ ಬಸವಳಿದ ಅಮ್ಮಿಜಾನ್ ಇದ್ದ ದುಸ್ಥಿತಿಯನ್ನು ನೆನೆದು ನನ್ನ ಮನಸ್ಸಿಗೆ ವಿರುದ್ಧವಾಗಿ ನಿಖಾ ಆಗಲು ಒಪ್ಪಿಕೊಳ್ಳಬೇಕಾಯ್ತು.

ಅಲ್ತಾಪ್ ನೋಡಲು ಸುಂದರವಾಗಿದ್ದ. ಸ್ಕೂಟರ್ ಗ್ಯಾರೆಜ್ ಇಟ್ಟುಕೊಂಡಿದ್ದ. ಆದಾಯಕ್ಕೂ ಸಮಸ್ಯೆ ಇರಲಿಲ್ಲ. ನಿಖಾ ಆಗಿ ಒಂದು ವರ್ಷದವರೆಗೂ ಎಲ್ಲಾ ಚೆನ್ನಾಗೆ ಇತ್ತು. ಆದರೆ.. ಬರ‍್ತಾ ಬರ‍್ತಾ ನನ್ನ ಮೇಲೆ ಆತನ ಆಸಕ್ತಿ ಕಡಿಮೆಯಾಗತೊಡಗಿತು. ಮನೆಗೆ ಬರೋದೆ ಅಪರೂಪವಾಯ್ತು. ಬಂದರೂ ಮಾತು ನಾಮಕಾವಸ್ತೇ ಆಗಿತ್ತು. ಆತ ಬೇರೆ ಹುಡುಗಿ ಜೊತೆ ಪ್ಯಾರಲ್ಲಿ ಬಿದ್ದಿದ್ದಾನೆಂದು ಬೇರೆಯವರಿಂದಾ ಗೊತ್ತಾಯ್ತು. ಒಂದಿನಾ ಹಿಡಿದು ಕೇಳಿದೆ.. ನನ್ನಲ್ಲಿ ಏನು ಕಡಿಮೆ ಆಗಿದೆ ಎಂದು ಬೇರೆಯವಳಲ್ಲಿ ಹೋದೆ ಎಂದು. ಮಾತಿಗೆ ಮಾತು ಬೆಳೀತು. ಹಿಡಿದು ಹೊಡೆದಾ. ಅವಳನ್ನೆ ಮದುವೆ ಆಗ್ತೀನಿ ಏನು ಮಾಡ್ಕೊಂತಿಯೋ ಮಾಡ್ಕೋ ಅಂದಾ. ಕೊನೆಗೂ ಮೂರು ಸಲ ತಲಾಕ್ ತಲಾಕ್ ತಲಾಕ್ ಅಂತಾ ಹೇಳಿ ಹೋಗೇ ಬಿಟ್ಟಾ. ನನಗೆ ಭೂಮಿನೇ ಬಾಯ್ಬಿಟ್ಟಂತಾಯ್ತು. ಇಷ್ಟು ದಿನಾ ಮನಸ್ಸು ದೇಹಾ ಹಂಚಿಕೊಂಡ ವ್ಯಕ್ತಿ ಇವತ್ತು ಎಲ್ಲಾ ಸಂಬಂಧ ಕಡಿದುಕೊಂಡು ದೂರಾಗಿಬಿಟ್ಟಿದ್ದಾ. ನಾನೊಬ್ಬಳೇ ಇದ್ದರೆ ಹೇಗೋ ಬದುಕಬಹುದಾಗಿತ್ತೇನೋ? ಆದರೆ ಆರು ತಿಂಗಳ ಹಸುಗೂಸು ಅಂಗೈಯಲ್ಲಿಟ್ಟುಕೊಂಡು ಹೋಗೋದಾದರೂ ಎಲ್ಲಿಗೆ.? ನನ್ನ ಬದುಕೂ ನನ್ನಜ್ಜಿ ನನ್ನಮ್ಮನ ಹಾದಿಯಲ್ಲೇ ಸಾಗತೊಡಗಿದಂತಾಯ್ತು. ಅವರಿವರನ್ನು ಕೇಳಿದೆ, ಮಸೀದಿಯ ಮುಲ್ಲಾಗಳನ್ನು ಬೇಡಿಕೊಂಡೆ, ಅಲ್ತಾಪ್ ಇನ್ನೊಂದು ಮದುವೆಯಾದರೂ ಪರವಾಗಿಲ್ಲಾ ನನಗೆ ಗಂಡನಾಗಿ ಇರಲಿ ಎಂದು ಅವಲತ್ತುಕೊಂಡೆ. ಗಂಡನಾಗದಿದ್ದರೂ ಚಿಂತೆಯಿಲ್ಲಾ ಮಗುವಿಗೆ ತಂದೆಯಾದರೂ ಆಗಿರಲಿ ಎಂದು ವಿನಂತಿಸಿಕೊಂಡೆ. ಆದರೆ.. ಯಾರೆಂದರೆ ಯಾರೂ ಸಹಾಯಕ್ಕೆ ಬರಲೇ ಇಲ್ಲಾ. ತಲಾಕ್ ಹೇಳಿಯಾಗಿದೆ ಮತ್ತೆ ಒಂದಾಗಲು ಚಾನ್ಸೇ ಇಲಾ ಎಂದು ತಲೆ ಅಡ್ಡಡ್ಡ ಅಲ್ಲಾಡಿಸಿದರು. ಅಮ್ಮಿಜಾನ್ ತೀರಿಕೊಂಡಾಗಿದೆ. ಇರುವ ತಂಗಿಯ ಗಂಡ ಈಗಷ್ಟೇ ಮೂರನೆ ಮದುವೆ ಮಾಡಿಕೊಂಡು ಬಂದಿದ್ದಾನೆ. ಎಲ್ಲಿಗೆ ಹೋಗಲಿ.. ಹೇಗೆ ಬದುಕಲಿ.. ಹಸಿಗೂಸನ್ನು ಹೇಗೆ ಸಾಕಲಿ.. ಇಡೀ ಬದುಕೇ ಅಂಧಕಾರದಲ್ಲಿ ಮುಳುಗಿದಂತೆನಿಸಿತು.

ಮಿಯಾ ಬೀಬಿ ಸಂಬಂಧ ಅಂದ್ರೆ ಇಷ್ಟೇನಾ? ಹೆಣ್ಮಕ್ಕಳು ಅಂದ್ರೆ ಬೇಕಾದಾಗ ಬಳಸಿ ಬೇಡವಾದಾಗ ಬಿಸಾಕೋ ವಸ್ತುನಾ? ಹೆಣ್ಮಕ್ಕಳಾದ ತಪ್ಪಿಗೆ ನಾವು ದರ್ಗಾಕ್ಕೆ ಹೋಗೋವಂತಿಲ್ಲಾ... ಮಸೀದಿ ಪ್ರವೇಶಿಸೋ ಹಾಗಿಲ್ಲಾ, ನಮಗಿಷ್ಟವಾದ ಉಡುಗೆ ತೊಟ್ಟು ಮನೆಯ ಹೊರಗೆ ಕಾಲಿಡೋ ಹಾಗಿಲ್ಲಾ. ಇಲ್ಲಾ.. ಇದಲ್ಲಾ.. ಪ್ರವಾದಿಗಳು ಹೇಳಿದ್ದು.. ಕುರಾನ್ ಎಂದೂ ಮಹಿಳಾವಿರೋಧಿ ಆಗಿದ್ದಿಲ್ಲ. ಎಂದೋ ಯಾವುದೋ ಕಾಲದ ಅಗತ್ಯಕ್ಕೆ ತಕ್ಕಂತೆ ಮಾಡಿದ ಧರ್ಮದ ರೀತಿ ರಿವಾಜುಗಳು ಎಲ್ಲಾ ಕಾಲಕ್ಕೂ ಅನುಕರಣೀಯವೂ ಅಲ್ಲಾ. ತಮ್ಮ ಸ್ಥಿತಿಯನ್ನು ಜನರು ತಾವೇ ಬದಲಿಸಿಕೊಳ್ಳುವವರೆಗೂ ದೇವರು ಖಂಡಿತವಾಗಿ ಅದನ್ನು ಬದಲಿಸುವುದಿಲ್ಲ (೧೩:೧೧) ಎಂದು  ಕುರಾನಿನಲ್ಲೇ ಸ್ಪಷ್ಟವಾಗಿ ಬರೆದಿದೆಯಲ್ಲಾ. ಹಾಗಾದರೆ ಯಾಕೆ ಈಗಿನ ಕಾಲಕ್ಕೆ ತಕ್ಕಂತೆ ಜನರು ಧರ್ಮದ ಆಚರಣೆಗಳನ್ನು ಬದಲಿಸಿಕೊಳ್ಳಬಾರದು. ಧರ್ಮದ ಹೆಸರಿನಲ್ಲಿ ಪುರುಷರಿಗೆ ಬೇಕಿರುವುದು ಜನ್ನತ್ ಅಲ್ಲಾ, ಅಬಲೆಯರಾದ ಮಹಿಳೆಯರ ಮೇಲೆ ಅಧಿಕಾರ.

ಎಷ್ಟು ದಿನ ಹೀಗೆ ಮುಸ್ಲಿಂ ವ್ಯಯಕ್ತಿಕ ಕಾನೂನಿನಡಿಯಲ್ಲಿ ಮಹಿಳಾ ವಿರೋಧಿಯಾದ ತಲ್ಲಾಕ್ ಮತ್ತು ಬಹುಪತ್ನಿತ್ವಗಳಂತಾ ಅನಿಷ್ಟ ಆಚರಣೆಗಳನ್ನು ಹೆಣ್ಣು ಮಕ್ಕಳ ಮೇಲೆ ಹೇರಿ ದಮನಿಸುವುದು. ಇನ್ನೆಷ್ಟು ದಿನ ಧರ್ಮದ ಹೆಸರಲ್ಲಿ ಮಹಿಳೆಯರನ್ನು ಅಡಿಯಾಳಾಗಿಸಿಕೊಂಡು ಈ ಪುರುಷರು ತಮ್ಮಿಚ್ಚೆಯಂತೆ ಆಳುವುದು. ಎಲ್ಲದಕ್ಕೂ ಒಂದು ಮಿತಿ ಇದೆ. ಕಾಲಕ್ಕೆ ತನ್ನದೇ ಆದ ಗತಿ ಇದೆ. ಎಲ್ಲವೂ ಬದಲಾಗಲೇಬೇಕು. ಬದಲಾಗಲಾರನೆಂದರೂ ಕಾಲಕ್ಕೆ ಮಣಿಯಲೇಬೇಕು. ಹೆಣ್ಣು ಗಂಡಿನ ನಡುವಿನ ತಾರತಮ್ಯದ ರೀತಿ ಬದಲಾಗಿ ಸಮಾನ ನೀತಿ ಸಂಹಿತೆ ಜಾರಿಯಾಗಲೇಬೇಕು. ನಾನು ಇಸ್ಲಾಂ ಧರ್ಮೀಯಳಾಗಿದ್ದಕ್ಕೆ ಹೆಮ್ಮೆ ಪಡುತ್ತೇನೆ. ಆದರೆ ಧರ್ಮಾಂಧರು ಸೃಷ್ಟಿಸಿರುವ ಅಸಮಾನತೆ ಹಾಗೂ ಜೀವವಿರೋದಿತನವನ್ನು ಶತಾಯ ಗತಾಯ ವಿರೋಧಿಸುತ್ತೇನೆ. ನನಗೆ ನ್ಯಾಯಾ ಬೇಕು. ಅನಾಥವಾದ ನನ್ನ ಮಗುವಿಗೆ ನೆಲೆಬೇಕು. ತಾಯಿ ಮಗು ನಾವಿಬ್ಬರೂ ನೆಮ್ಮದಿಯಾಗಿ ಬದುಕಬೇಕು. ಆದರೆ.. ಅದು ಸಾಧ್ಯವಾಗುತ್ತಿಲ್ಲಾ.. ಎಲ್ಲಾ ದಾರಿಗಳು ಮುಚ್ಚಿರುವಾಗ ಬೇರೆ ಮಾರ್ಗ ಹುಡುಕಿಕೊಳ್ಳಬೇಕು. ನಂಬಿಸಿ ಮದುವೆಯಾಗಿ ಅಕಾರಣವಾಗಿ ನಡುನೀರಲ್ಲಿ ಬಿಟ್ಟು ಹೋದವನ ವಿರುದ್ಧ ಹೋರಾಡಬೇಕು. ಹೆಣ್ಣು ಎಂದರೆ ಬಾಳೆ ಹಣ್ಣು ತಿಂದು ಸಿಪ್ಪೆ ಬೀದಿಗೆಸೆದಂತಲ್ಲಾ ಎಂಬುದನ್ನು ಈ ಮತಾಂಧ ಗಂಡಸರಿಗೆ ಪಾಠ ಕಲಿಸಲೇಬೇಕು.

ಹೋ.. ಅಲ್ಲಾ.. ನಿನಗೆ ಕೋಟಿ ಸಲಾಂ. ಈಗ ನ್ಯಾಯಾಲಯದ ಮೂಲಕವಾದರೂ ಈ ತ್ರಿವಳಿ ತಲಾಕ್ ಎನ್ನುವ ಪುರುಷರ ಏಕಪಕ್ಷೀಯ ದುಷ್ಟ ನಿರ್ಧಾರವನ್ನು ಅಸಂವಿಧಾನಿಕ ಎಂದು ಹೇಳಿಸಿದೆಯಲ್ಲಾ. ಮಹಿಳೆಯರ ಹಕ್ಕುಗಳಿಗೆ ಒಂದಿಷ್ಟಾದರೂ ಬಲ ತುಂಬಿದೆಯಲ್ಲಾ. ತಮ್ಮದಲ್ಲದ ತಪ್ಪಿಗೆ ಜೀವಮಾನವಿಡೀ ಕೊರಗಬೇಕಾದ ಅಸಂಖ್ಯಾತ ಮುಸ್ಲಿಂ ಮಹಿಳೆಯರ ಕತ್ತಲ ಬದುಕಿಗೆ ಒಂದು ಆಶಾಕಿರಣವನ್ನಾದರೂ ಒದಗಿಸಿದೆಯಲ್ಲಾ.

ಪುರುಷರ ಪರವಾಗಿರುವ ನಿಖಾನಾಮಾ ಬದಲಾಗಬೇಕು. ಅಮಾನುಷ ಏಕಪಕ್ಷೀಯ ತ್ರಿವಳಿ ತಲಾಕ್ ಕೊನೆಯಾಗಬೇಕು. ಹೆಂಡತಿಯ ಜೊತೆ ಬಾಳಲಾಗದವ ಹೆಂಡತಿ ಮಕ್ಕಳ ಮುಂದಿನ ಜೀವನೋಪಾಯಕ್ಕೆ ದಾರಿಯನ್ನಾದರೂ ಮಾಡಿಕೊಡುವಂತಾಗಬೇಕು. ಅಜನ್ಮ ಪೂರ್ತಿ ಜೀವನಾಂಶ ತೆರುವಂತಾಗಬೇಕು. ಯಾರು ಏನೇ ಹೇಳಲಿ, ನನಗಾದ ಅನ್ಯಾಯಕ್ಕೆ ನ್ಯಾಯ ಕೇಳಿ ನ್ಯಾಯಾಲಯದ ಮೊರೆ ಹೋಗುತ್ತೇನೆ. ಪುರುಷಪ್ರಧಾನ ವ್ಯವಸ್ಥೆಯ ದೌರ್ಜನ್ಯದ ವಿರುದ್ದ ಹೋರಾಡುತ್ತೇನೆ. ನನ್ನಂತೆ ನೊಂದು ಬೆಂದ ಅಗಣಿತ ಮಹಿಳೆಯರ ಪರವಾಗಿ ನಿಲ್ಲುತ್ತೇನೆ. ನನಗೆ ನನ್ನಂತವರಿಗೆ ನ್ಯಾಯ ಸಿಗುವವರೆಗೂ ವಿರಮಿಸುವುದಿಲ್ಲಾ. ನೆಲೆ ಬೆಲೆ ಇಲ್ಲದೇ ಈಗಾಗಲೇ ಇದ್ದೂ ಸತ್ತಂತಾಗಿರುವೆ. ಇನ್ನು ಈ ಧರ್ಮಾಂಧರ ಗೊಡ್ಡು ಬೆದರಿಕೆಗೆ ಹೆದರಲಾರೆ. ಸಾವಿಗೆ ಸನ್ನದ್ದವಾಗಿಯೇ ಬದುಕಿನ ಹೋರಾಟಕ್ಕಿಳಿಯುವೆ. ನನ್ನಜ್ಜಿ.. ಮುತ್ತಜ್ಜಿ.. ನನ್ನವ್ವಂದಿರು ಹರಿಸಿದ ಕಣ್ಣೀರನ್ನು ನನ್ನ ಮಗಳು.. ಅವಳ ಮಗಳು ಹರಿಸದಿರಲೆಂದು ಈ ದಿಟ್ಟ ಹೆಜ್ಜೆ.

ಮಹಿಳೆಯರ ಬಂಧನದ ಸಂಕೇತವಾದ ಈ ಕರಿ ಪೋಷಾಕನ್ನು ಈಗಲೇ ತೆಗೆದು ಬಿಸಾಕುವೆ. ಸಹಿಸಿದ್ದು ಸಾಕಿನ್ನು. ಸಮಾನತೆ ಬೇಕಿನ್ನು. ಧರ್ಮ ಬದುಕಿಗಿರಲಿ. ಬದುಕಿನ ಬೆಳಕನ್ನೇ ಕೊಲ್ಲುವ ಧರ್ಮಾಂಧತೆ ತೊಲಗಲಿ. ಯಾ.. ಅಲ್ಲಾ.. ನನಗೆ ಶಕ್ತಿ ನೀಡು. ನನ್ನಂತವರ ಮೇಲೆ ಕರುಣೆ ಇಡು. ನಿನ್ನ ಹೆಸರಲ್ಲಿ ದಮನ ನಡೆಸುವ ಮತಾಂಧರಿಗೆ ಮಾನವೀಯತೆ ರೂಢಿಸಿಕೊಳ್ಳುವ ಬುದ್ದಿಕೊಡು. ಬಾ.. ಮಗು.. ನೀನಿನ್ನು ಅನಾಥೆಯಲ್ಲಾ. ನಿನಗೆ ನಾನಿದ್ದೇನಲ್ಲಾ. ನಮ್ಮ ಜೊತೆ ಆ ಕರುಣಾಳು ಅಲ್ಲಾ ಇದ್ದಾನಲ್ಲಾ. ಬಾ ಕಂದಾ.. ಹೋಗೋಣ.. ಅನ್ಯಾಯವನ್ನು ಮಟ್ಟಹಾಕಲು ನ್ಯಾಯದೇಗುಲದ ಕದ ತಟ್ಟೋಣ. ಕತ್ತಲ ಬದುಕಿಗೆ ಬೆಳಕಾಗುವ ದಾರಿ ಹುಡುಕೋಣ. ಅಗೋ ಅಲ್ಲಿ ನೋಡು ಬೆಳಕಾಗುತ್ತಿದೆ. ಸೂರ್ಯನ ಕಿರಣ ಕಿಟಕಿಯ ಸರಳುಗಳ ದಾಟಿ ನಿನ್ನ ಕಣ್ಣೊಳಗೆ ಬೆಳಕು ತುಂಬುತ್ತಿದೆ. ಸೋತು ಬಸವಳಿದ ನನ್ನ ಮನದೊಳಗೆ ಜೀವನೋತ್ಸಾಹದ ಚಿಲುಮೆ ಹೊಮ್ಮಿಸುತ್ತಿದೆ. ಬಾ ಹೋಗೋಣ ಹೊಸ ಬದುಕಿನ ಹುಡುಕಾಟಕೆ..

ಬಾ ಹೋಗೋಣ ಹೊಸ ಬದುಕಿನ ಹುಡುಕಾಟಕೆ
ಕತ್ತಲ ಕಳೆಯಲು ಹಿಡಿದು ಸ್ವಾಭಿಮಾನದ ದೀವಟಿಗೆ..
ಸಾಕು ಸಾಕಿನ್ನು ಶತಮಾನಗಳ ದಮನ
ಸಮಾನತೆ ಸಹಜೀವನದತ್ತಿರಲಿ ಎಲ್ಲರ ಗಮನ..

-ಶಶಿಕಾಂತ ಯಡಹಳ್ಳಿ


ಶುಕ್ರವಾರ, ಡಿಸೆಂಬರ್ 9, 2016

ತಹ ತಹ.... 66 ಮುನಿಯನ ಸ್ವಗತ ಸಂಕಟ (ಏಕವ್ಯಕ್ತಿ ಪ್ರಹಸನ):




ಸಾರ್... ನಮಸ್ಕಾರ ಸಾರ್.. ನಾನು ನಿಮಗೊತ್ತಿಲ್ವರಾ..? ಹೋಗಲಿ ಬಿಡಿ. ನನಗಂತೂ ನೀವಷ್ಟೇ ಅಲ್ಲಾ ನಿಮ್ಮ ತಲೆಲಿರೋ ಕೂದಲೂ ಬಾಳಾ ಅಂದ್ರೆ ಬಾಳಾ ಪರಿಚಯ. ನಾನ್ ಸಾಮಿ ಮುನಿಯಾ.... ಗೊತ್ತಾಗಲಿಲ್ವರಾ.. ಹಡಪದ ಮುನಿಯಾ... ಒಂದು ವರ್ಷದ ಹಿಂದೆ ಕಟ್ಟಿಂಗ್ ಮಾಡಿಸೋಕೆ ನಮ್ಮ ಕ್ಷೌರದಂಗಡಿಗೆ ಬರ್ತಿದ್ದೀರಲ್ಲಾ ದೇವ್ರು... ಸೊಲೂಪ ನೆಪ್ಪ ನಾಡ್ಕೊಳ್ಳಿ.. ಹಾಂ... ನಾನು ಮುನಿಯಾನೇ ಸಾರ್ರು... ನಾನೀಗ ಬಲೇ ಕಷ್ಟದಲ್ಲಿ ಸಿಕ್ಕಾಕೊಂಡಿವ್ನಿ ಅದ್ಕೆ ನಿಮ್ಮ ಹತ್ರ ಏನಾದ್ರೂ ಉಪಾಯ ಇದೆಯಾ ಅಂತಾ ಕೇಳೋಕೆ ಬಂದೆ ಸ್ವಾಮೇರಾ...


ನಂಗೆ ಮದುವೆ ಆಗಿ ನಾಳೆ ಬರೋ ಅಮಾಸೆಗೆ ಹತ್ತು ವರ್ಸ ಆಯ್ತುರಾ... ಆದರೆ ನನ್ನೆಂಡ್ರು ಮುನಿಸ್ಕೊಂಡು ತವ್ರಿಗೆ ಹೋಗಿ ಮೂರು ವರ್ಸಾ ಆತು ಅನ್ನಿ. ಯಾಕಂದ್ರೆ ಮದುವೆ ಟೇಮಿನಾಗೆ ತಾರಸಿ ಮನೆ ಕಟ್ಟಿಸಿ ರಾಣಿ ಹಂಗೆ ನೋಡ್ಕೋತೇನಿ ಅಂತಾ ನನ್ನೆಂಡ್ರಿಗೆ ಮಾತು ಕೊಟ್ಟಿದ್ದೆ. ಮನೆ ಕಟ್ಟೋದು ಅಸ್ಟೊಂದು ಸುಲಭಾನಾ ನೀವೇ ಹೇಳಿ ಸಾಮಿ. ಒಂದತ್ತು ಲಕ್ಷಾನಾದ್ರೂ ಬೇಕಲ್ವರಾ? ನಾನು ಬಾಳಾ ಪ್ರಯತ್ನಾ ಮಾಡಿ ವರ್ಷಕ್ಕೆ ಒಂದೊಂದು ಲಕ್ಷಾ ಉಳಿಸಿ ಕೂಡಿಟ್ಟೀವ್ನಿ. ಈಗ ಹತ್ತು ಲಕ್ಷ ರೂಪಾಯಿ ಒಟ್ಟು ಗೂಡಿಸಿ ಮನೇಲಿ ಬಚ್ಚಿಟ್ಟೀವ್ನಿ. ಇನ್ನೇನು ಗುಡಿಸಿಲಿದ್ದ ಜಾಗದಾಗೆ ತಾರಸಿ ಮನೆ ಕಟ್ಟಿಸ್ಬೇಕು ಅಂತಾ ಇದ್ದೆ ಸ್ವಾಮಿ ಅಷ್ಟರಲ್ಲಿ ಬೆವರು ಹರಿಸಿ ದುಡಿದಿಟ್ಟ ಐನೂರು ಸಾವಿರ ರೂಪಾಯಿ ನೋಟಗಳೆಲ್ಲಾ ರದ್ದು ಮಾಡಿ ಬಿಟ್ಟಿದ್ದಾರಂತೆ ಸ್ವಾಮಿ ಮೋದಿಯವ್ರು. ನಂಗಂತೂ ಆಕಾಸವೇ ತಲೆ ಮೇಲೆ ಬಿದ್ದಂಗಾಗ್ತಿದೆ. ಒಂದಲ್ಲಾ ಎರಡಲ್ಲಾ ಹತ್ತು ವರ್ಸಾ ದುಡಿದಿಟ್ಟಿರೋ ಹಣ ಅದು. ಅದೆಲ್ಲಾ ಕಪ್ಪುಹಣ ಆಗೋಗಿದೆಯಂತೆ. ನಾನು ತೆಗೆದು ಮೂರ್ನಾಲ್ಕು ಸಲಾ ನೋಡಿದೆ ಸ್ವಾಮಿ ಎಲ್ಲೂ ಸೊಲ್ಪಾನೂ ಮಸಿ ಅಂಟಿಲ್ಲಾ... ಆದರೂ ಅದ್ಯಾಕೆ ಕಪ್ಪು ಹಣ ಆಯ್ತು ಅಂತಾ ಗೊತ್ತಾಗ್ತಾನೇ ಇಲ್ಲಾ. ನೀವೇ ದಾರಿ ತೋರ್ಸಿ ಸ್ವಾಮಿ ನಿಮ್ಮ ಪಾದ ನನ್ನ ತಲೆ ಮೇಲಿರ್ಲಿ. ನಾನು ಮನೆ ಕಟ್ಟದಿದ್ರೆ ನನ್ನೆಂಡ್ರು ವಾಪಸ್ ಬರೋದಿಲ್ಲವಂತೆ. ಮನೆ ಕಟ್ಟೊಕಂತಾ ರೊಕ್ಕಾ ಕೂಡಿಟ್ರೆ ಅದೆಲ್ಲಾ ರದ್ದಾಗಿದೆಯಂತೆ ಈಗೇನು ಮಾಡೋದು ಅಂತಾ ಹೇಳಿ ಪುಣ್ಯ ಕಟ್ಕೊಳ್ಳಿ ತಂದೆ...

ಹೂಂ ಬ್ಯಾಂಕಿಗೂ ಹೋಗಿದ್ದೆ. ಯಾರದೋ ಕೈಕಾಲು ಹಿಡಿದು ಖಾತೆನೂ ತಗೆದೆ. ಆದ್ರೆ ಎರಡೂವರೆ ಲಕ್ಷ ಮಾತ್ರ ಖಾತೆಗೆ ಹಾಕ್ಬೇಕಂತೆ.. ಹೆಚ್ಚಿಗೆ ಹಾಕಿದ್ರೆ ತೊಂದರೆ ಆಗುತ್ತಂತೆ. ಎರಡೂವರೆ ಲಕ್ಷಾ ಬ್ಯಾಂಕಲ್ಲಿ ಜಮಾ ಮಾಡಿ ಬಂದೆ. ಈಗ ಬಾಕಿ ಹಣ ಏನು ಮಾಡೋದು... ಹೆಂಗೆ ಹೊಸ ನೋಟಿಗೆ ಬದಲಾಯಿಸೋದು ಅಂತಾ ಗೊತ್ತಾಗ್ತಿಲ್ಲಾ ಸಾಮಿ... ನೀವು ಪೇಪರಿನೋರು.. ನಿಮಗೆಲ್ಲಾ ಗೊತ್ತಿರುತ್ತೆ... ಏನಾದರೂ ದಾರಿ ತೋರ್ಸಿ ಪುಣ್ಯ ಕಟ್ಕೊಳ್ಳಿ ಸಾರು.
.
ಹೂಂ ಲಾಯರ್ರತ್ರಾನೂ ಹೋಗಿದ್ದೆ ಸ್ವಾಮಿ. ನನ್ನತ್ರಾ ಕಟಿಂಗ್ ಮಾಡ್ಸೊಕೆ ಅವ್ರು ಪ್ರತಿ ತಿಂಗಳೂ ಬರ್ತಾರೆ. ಅವರು ಹೇಳಿದ್ರು ಎಲ್ಲಾ ಹಣಾನೂ ಬ್ಯಾಂಕಿಗೆ ಕಟ್ಟಬೋದಂತೆ. ಆದ್ರೆ ಎರಡೂವರೆ ಲಕ್ಷ ಮಿಕ್ಕದ್ದೆಲ್ಲಾ ಕಪ್ಪು ಹಣವಂತೆ. ಅದಕ್ಕೆ ಅದೇನೋ ಮಾಡ್ಬೇಕು ಅಂದ್ರಲ್ಲಾ.... ಹಾಂ ಡಿಕ್ಲರೇಸನ್ನು ಮಾಡ್ಬೇಕಂತೆ. ಹಿಂಗಿಂಗೆ ನನ್ನತ್ರ ಇಷ್ಟಿಷ್ಟು ಹೆಚ್ಚಿಗೆ ರೊಕ್ಕಾ ಇದೆ.. ಇದನ್ನ ಬಿಳಿ ಮಾಡ್ಕೋಬೇಕಿದೆ...ಅಂತಾ ಟ್ಯಾಕ್ಸ ಆಪೀಸಿನಾಗೆ ಬರ್ಕೊಡಬೇಕಂತೆ. ಅದ್ಯಾಂಗೆ ಸ್ವಾಮಿ ನಾನು ದುಡಿದ ಕಾಸು ಕಾಳ ಧನ ಆಗುತ್ತೆ. ಯಾರದಾದರೂ ತಲೆ ಒಡದೋ ಇಲ್ಲಾ ಮೋಸಾ ಮಾಡಿಯೋ ಸಂಪಾದಿಸಿದ್ದೀನಾ? ಒಂದಿನಾನೂ ಸುಮ್ಮನೆ ಖಾಲಿ ಕೂಡದೇ ದುಡಿದು ಸಂಪಾದನೆ ಮಾಡಿದ ದುಡ್ಡು ಸ್ವಾಮೇರ... ಈಗದು ಕಾಳಧನ ಆಗೊಗಿದೆಯಂತೆ... ಏನು ಮಾಡೊದು ನೀವೇ ಒಸಿ ಹೇಳ್ರಲಾ?


ಹೂಂ ಅದನ್ನೂ ಮಾಡಿದೆ. ನನ್ನತ್ರಾ ಕಟಿಂಗ್ ಮಾಡಿಸ್ಕೊಳ್ಳೋಕೆ ಅಂತಾ ಬರ್ತಿದ್ರಲ್ಲಾ ಟ್ಯಾಕ್ಸಾಫಿಸರು.. ಅವರನ್ನೂ ಕೇಳಿದೆ ಸ್ವಾಮಿ.. ಬಾಕಿ ಉಳಿದ ಏಳು ಲಕ್ಷ ರೂಪಾಯಿಯೊಳಗೆ ಅರ್ಧದಷ್ಟು ಹಣ ಅಂದ್ರೆ ಮೂರುವರೆ ಲಕ್ಷ ಹಣವನ್ನ ಸರಕಾರಕ್ಕೆ ದಂಡ ಕಟ್ಟಬೇಕಂತೆ. ಮಿಕ್ಕ ಮೂರುವರೆ ಲಕ್ಷ ರೂಪಾಯಿಯೊಳಗೂ ಮತ್ತರ್ಧದಷ್ಟು ಅಂದರೆ ಒಂದೂ ಮುಕ್ಕಾಲು ಲಕ್ಷದಷ್ಟು ಕಾಸನ್ನ ಬ್ಯಾಂಕಲ್ಲಿ ಠೇವಣಿ ಮಡಗ್ಬೇಕಂತೆ. ಅದನ್ನ ನಾಲ್ಕು ವರ್ಸ ಮುಟ್ಟೋಹಂಗಿಲ್ವಂತೆ. ಕೊನೆಗೂ ನಂಗೆ ಉಳಿಯೋದು ಒಂದೂ ಮುಕ್ಕಾಲು ಲಕ್ಷ ಹಾಗೂ ಬ್ಯಾಂಕಲ್ಲಿರೋ ಎರಡೂವರೆ ಲಕ್ಷ ಅಂದ್ರೆ ನಾಲ್ಕೂ ಕಾಲು ಲಕ್ಷ ಮಾತ್ರವಂತೆ ಸಾಮಿ. ಇಷ್ಟು ಹಣದಾಗೆ ನಾನು ತಾರಸಿ ಮನೆ ಹೆಂಗೆ ಕಟ್ಟಲಿ... ತವರಿಗೆ ಹೋದ ಹೆಂಡತೀನ ಹೆಂಗೆ ಕರೆತರಲಿ.. ನಾನೂ ಕಾಳಧನದ ಕಳ್ಳ ಎನ್ನುವ ಅವಮಾನ ಹೆಂಗೆ ಸಹಿಸಿಕೊಳ್ಲಿ... ಏನು ಮಾಡ್ಬೇಕು ಅಂತಾ ಗೊತ್ತಾಗ್ತಿಲ್ಲಾ.... ನೀವೇ ಹೇಳಿ ನಾನು ಕಳ್ಳನಾ...? ನಾನು ದುಡಿದ ಹಣ ನಂದಲ್ಲವಾ? ಹತ್ತು ವರ್ಸಾ ನಾ ಬೆವರು ಸುರ್ಸಿ ಸಂಪಾದಿಸಿದ್ದೆಲ್ಲಾ ಸುಳ್ಳಾ? ನೀವೇ ಮೂಸಿ ನೋಡಿ ನಾನು ದುಡಿದ ಪ್ರತಿಯೊಂದು ನೋಟಿನಲ್ಲೂ ನನ್ನ ಬೆವರಿನ ವಾಸನೆ ಇದೆ... ಆದರೆ... ವಾಸನೆ ಭಾವನೆಗಳನ್ನ ಕಳಕೊಂಡ ಕುರುಡು ಕಾನೂನಿಗೆ ನನ್ನ ಸಂಕಟ ಹೆಂಗೆ ಅರ್ಥ ಆಗುತ್ತೆ ಸ್ವಾಮಿ... ಹಿಂದೆ ಮುಂದೆ ನೋಡದೇ ಕಾಯ್ದೆ ಮಾಡೊರಿಗೆ ನಮ್ಮಂತಾ ಶ್ರಮಿಕರ ನೋವು ಎಲ್ಲಿ ತಿಳಿಯುತ್ತೆ ನೀವೇ ಹೇಳಿ. ಇದೆಲ್ಲಾ ಮೋಸಾ ಮಾಡಿ ಸಂಪಾದಿಸಿದ್ದಲ್ಲಾ.... ದುಡಿದ ಕಾಸು. ಆದರೆ ಈಗ ಇದೆಲ್ಲಾ ರದ್ದೀ ಕಾಗದ ಅಂತೆ. ನಾನು ಕಳ್ಳನಂತೆ... ಹೌದು ನಾನು ಕಳ್ಳನೇ... ಎಲೆಕ್ಷನ್ನಿನಾಗೆ ನೋಟು ತಗೊಂಡು ಓಟು ಹಾಕಿ ಕಳ್ಳರಿಗೆ ದೇಶ ಆಳೋ ಹಾಗೆ ಸಪೋರ್ಟ್ ಮಾಡಿದ ನಾನು ನನ್ನಂತವರು ನಿಜವಾದ ಕಳ್ಳರೇ... ಸರಿಯಾಗಿ ಶಿಕ್ಷೆಯಾಗಿದೆ ನಮ್ಗೆ. ನನ್ನ ನೋಟು ನನ್ನದಲ್ಲಾ.... ನನ್ನ ಶ್ರಮದ ಫಲ ನನ್ನದಲ್ಲಾ.... ನನ್ನದೆನ್ನುವುದಿಲ್ಲಿ ಏನೂ ಇಲ್ಲಾ... ಎಲ್ಲಾ ಮಾಯೆ.... ಜಗವೆಲ್ಲಾ ಮಾಯೆ...ಹಾಂ ನಾನೊಬ್ಬ ಕಳ್ಳ.... ಕಪ್ಪು ಹಣದ ಕಳ್ಳ... ತಗೊಳ್ಲಿ ರದ್ದೀ ರೊಕ್ಕಾ ನೀವೇ ಇಟ್ಕೊಳ್ಳಿ... ಅಯ್ಯೋ ನನ್ನ ಕನಸಿನ ಮನೆ ಮುರಿದು ಬಿತ್ತು... ನನ್ನ ಸಂಸಾರ ಹಾಳಾಗಿ ಹೋಯ್ತು... ಇನ್ನು ಯಾರಿಗಂತಾ ದುಡೀಲಿ... ಯಾತಕ್ಕಂತಾ ಬದಕ್ಲಿ... ಇಡೀ ಬದುಕೇ ಬರಬಾದಾಗೋಯ್ತು... ಕಳ್ಳ ನಾನೊಬ್ಬ ಕಳ್ಳ.....

(ಹುಚ್ಚನಂತೆ ಅಂಗಿ ಹರಿದುಕೊಂಡು... ಹಳೆಯ ನೋಟುಗಳನ್ನು ಎಸೆಯುತ್ತಾ ಮುನಿಯ ಹೊರಡುತ್ತಾನೆ..)

- ಶಶಿಕಾಂತ ಯಡಹಳ್ಳಿ