ಯಾರಿಗೂ
ಏನನ್ನೂ ಬಾಹ್ಯವಾಗಿ ಹೇರಿಕೆ ಮಾಡಲು ಸಾಧ್ಯವಿಲ್ಲ. ಬರೀ ಕಾನೂನುಗಳನ್ನು ಮಾಡುವ ಮೂಲಕ ಜನರಲ್ಲಿ ದೇಶಭಕ್ತಿಯನ್ನು
ಹೇರಲು ಆಗುವುದೂ ಇಲ್ಲ. ಆದರೆ.. ಸುಪ್ರಿಂ ಕೋರ್ಟ ಅಂತಹುದೊಂದು ಠರಾವನ್ನು 2016 ನವೆಂಬರ್ 30ರಂದು
ಹೊರಡಿಸಿ ಅದರ ಜಾರಿಗೆ ಹತ್ತು ದಿನಗಳ ಕಾಲಾವಕಾಶ ನೀಡಿತು. “ಈ ದೇಶದ
ಎಲ್ಲ ಸಿನೆಮಾ ಮಂದಿರಗಳಲ್ಲಿ ಚಲನಚಿತ್ರದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆಯನ್ನು ನುಡಿಸಬೇಕು ಹಾಗೂ
ಪ್ರೇಕ್ಷಕರು ಎದ್ದು ನಿಂತು ಗೌರವ ಸಲ್ಲಿಸುವುದರ ಮೂಲಕ ಅದಕ್ಕೆ ದ್ವನಿಗೂಡಿಸಬೇಕು” ಎಂಬುದು ಸುಪ್ರೀಂ ಆದೇಶವಾಗಿದೆ. ಸಿನೆಮಾ ಹಾಲ್ಗಳಲ್ಲಿ ಜನಗಣಮನ ಹೊಸದೇನೂ
ಅಲ್ಲಾ. ಮೂವತ್ತು ವರ್ಷಗಳ ಹಿಂದೆ ಇದನ್ನು ಖಾಯಂ ವೃತದಂತೆ ಪಾಲಿಸಲಾಗುತ್ತಿತ್ತು. ಆಮೇಲಾಮೇಲೆ ಅದು
ತಾನೇ ತಾನಾಗಿ ನಿಂತೇ ಹೋಯಿತು. ಸಿನೆಮಾಹಾಲ್ಗಳಲ್ಲಿ ರಾಷ್ಟ್ರಗೀತೆ ಮೊಳಗುವುದು ನಿಂತು ಹೋಯಿತು ಎಂದರೆ
ದೇಶವಾಸಿಗಳಲ್ಲಿ ದೇಶಭಕ್ತಿ ಕಡಿಮೆ ಆಯಿತು ಎಂದರ್ಥವೇ?
ಅಥವಾ ಹೀಗೆ ಕಾನೂನಾತ್ಮಕವಾಗಿ ಕಡ್ಡಾಯ ಮಾಡಿದರೆ ಜನರಲ್ಲಿ ದೇಶಭಕ್ತಿ ಜಾಸ್ತಿ ಆಗುತ್ತದೆ ಎನ್ನುವ
ಬಯಕೆಯೇ? ಇವೆರಡೂ ಅಲ್ಲಾ. ಕೇವಲ ಜನಗಣಮನ ಕೇಳಿದ ಕೂಡಲೇ ರಾಷ್ಟ್ರಭಕ್ತಿ ಹೆಚ್ಚುವಂತಿದ್ದರೆ ಅದನ್ನು
ಕೇವಲ ಸಿನೆಮಾ ಮಂದಿರಗಳಿಗೆ ಮಾತ್ರ ಯಾಕೆ ಎಲ್ಲೆಲ್ಲಿ ಜನರು ಗುಂಪಾಗಿ ಸೇರುತ್ತಾರೋ ಅಲ್ಲೆಲ್ಲಾ ಜನಗಣ
ಮೊಳಗಿಸಬಹುದಾಗಿತ್ತು. ಆದರೆ ವಾಸ್ತವ ಅದಲ್ಲಾ…
‘ಜನನಿ
ಜನ್ಮಭೂಮಿ ಸ್ವರ್ಗಾದಪಿ ಗರೀಯಸೆ’ ಎಂದು ಜಪಿಸುತ್ತಿದ್ದರೆ ಮಾತ್ರ ಮಾತೃಭಕ್ತಿ ಹಾಗೂ ದೇಶಭಕ್ತಿ ಉಕ್ಕುವುದಿಲ್ಲ. ಸಿನೆಮಾ ಮಂದಿರಗಳಲ್ಲಿ
ಜನಗಣಮನ ಹೇಳಿಸಿ ಎದ್ದು ನಿಂತು ಗೌರವ ಸೂಚಿಸಿದರೆ ಮಾತ್ರ ಪ್ರತಿಯೊಬ್ಬರ ದೇಶಭಕ್ತಿ ಸಾಬೀತಾಗುವುದಿಲ್ಲ. ಜೊತೆಗೆ ದೇಶದ ಆಳುವ ವರ್ಗಗಳೂ
ಸಹ ತನ್ನ ದೇಶವಾಸಿಗಳನ್ನು ಗೌರವಯುತವಾಗಿ ಬದುಕುವಂತಹ ವ್ಯವಸ್ಥೆಯೊಂದನ್ನು ಕಲ್ಪಿಸಿಕೊಡಬೇಕಾಗುತ್ತದೆ.
ಒಂದು ಕಡೆ ಕಿತ್ತು ತಿನ್ನುವ ಬಡತನ ಹಾಗೂ ಇನ್ನೊಂದು ಕಡೆಗೆ ಸಿರಿತನದ ವೈಭವೀಕರಣ. ಒಂದು ಕಡೆ ಕಾಸಿಲ್ಲದೇ
ಮುರಿದು ಬೀಳುವ ಮದುವೆಗಳು, ಇನ್ನೊಂದು ಕಡೆ ಐನೂರು ಕೋಟಿ ವೆಚ್ಚದ ದುಬಾರಿ ಮದುವೆಗಳು ನಡೆಯುವ ಈ ದೇಶದಲ್ಲಿ
ಕನಿಷ್ಟ ಸಮಾನತೆ ಎನ್ನುವುದೂ ಇಲ್ಲವೆಂದರೆ ಈ ದೇಶವನ್ನು ಹೇಗೆ ಪ್ರೀತಿಸುವುದು. ಕೇವಲ ಸಂವಿಧಾನದ ಕಲಮುಗಳಲಿ
ಹೊರತು ಪಡಿಸಿ ಯಾವುದೂ ಬಡವರ, ದೀನ ದಲಿತರ ಪರವಾದ ಕಾನೂನುಗಳು ಅನುಷ್ಟಾನಗೊಳ್ಳದೇ ಇರುವ ದೇಶದ ಬಗ್ಗೆ
ಅದು ಹೇಗೆ ಹೆಮ್ಮೆಯಿಂದ ಹೇಳಿಕೊಳ್ಳುವುದು? ಶೇಕಡ ೫ರಷ್ಟು ಜನರ ಕೈಯಲ್ಲಿ ಇಡೀ ದೇಶದ ಸಂಪನ್ಮೂಲಗಳು
ಸಂಗ್ರಹವಾಗಿ ಬಹುತೇಕ ಜನರು ಬದುಕುವುದಕ್ಕೇ ಪರದಾಡುತ್ತಿರುವ ದಿನಮಾನಗಳಲ್ಲಿ ಅದು ಹೇಗೆ ದೇಶಭಕ್ತಿ
ಎನ್ನುವುದು ಬಡವರ ಬದುಕಲ್ಲಿ ಉಕ್ಕಿ ಹರಿಯುವುದು? ಒಂದು ದೇಶದಲ್ಲಿ ಹುಟ್ಟಿ ಆ ದೇಶವನ್ನು ಪ್ರೀತಿಸುವ
ಎಲ್ಲರಿಗೂ ಆ ದೇಶದ ಬಗ್ಗೆ ಪ್ರೀತಿ ಗೌರವ ಇದ್ದೇ ಇರುತ್ತದೆ. ಅದನ್ನು ಉಳಿಸಿಕೊಳ್ಳುವ ಇಲ್ಲವೇ ಕಳೆದುಕೊಳ್ಳುವ
ತಾಕತ್ತು ದೇಶವಾಳುವವರ ಕೈಯಲ್ಲಿರುತ್ತದೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವ
ದೇಶದಲ್ಲಿ ದೇಶಭಕ್ತಿ ಉಕ್ಕಿಹರಿಯಬೇಕೆಂಬುದೇ ಆದರ್ಶವಾದದ ಪರಿಕಲ್ಪನೆಯಾಗಿದೆ. ಎಲ್ಲರೂ ತಮ್ಮ ತಾಯಿಯನ್ನು
ಪ್ರೀತಿಸುತ್ತಾರೆ.. ಹಾಗಂತ ತಾಯಿಯ ಕುರಿತು ಹಾಡು ಹೇಳಬೇಕೆಂದೇನಿಲ್ಲ. ಎಲ್ಲರಲ್ಲೂ ದೇಶಭಕ್ತಿ ಇದ್ದೇ
ಇರುತ್ತದೆ.. ಹಾಗಂತ ಅದನ್ನು ರಾಷ್ಟ್ರಗೀತೆ ಹಾಡಿ ಸಾಬೀತುಪಡಿಸಬೇಕೆಂದೇನಿಲ್ಲಾ.. ದೇಶವೆಂದರೆ ಕೇವಲ
ಕಲ್ಲು ಮಣ್ಣು ಕಟ್ಟಡ ರಸ್ತೆ ಇಮಾರತುಗಳಲ್ಲಾ.. ದೇಶವೆಂದರೆ ಅಲ್ಲಿ ವಾಸಿಸುವ ದುಡಿಯುವ ಜನ ಮತ್ತು
ಅವರ ಘನತೆವೆತ್ತ ಬದುಕು ಎನ್ನುವುದನ್ನು ಆಳುವ ಪ್ರಭುಗಳು ಹಾಗೂ ಅವರನ್ನು ಪ್ರತಿನಿಧಿಸುವ ನ್ಯಾಯಾಲಯ
ಮೊದಲು ಅರ್ಥಮಾಡಿಕೊಳ್ಳಬೇಕಾಗಿದೆ.
ಏನೇ ಆದರೂ..
ದೇಶವಾಸಿಗಳು ತಮ್ಮೆಲ್ಲಾ ಸಂಕಷ್ಟಗಳನ್ನು ಮರೆತು ದೇಶದ ಒಳತನ್ನೇ ಬಯಸುತ್ತಾರೆ. ಇಂದಿಲ್ಲ ನಾಳೆ ಈ
ದುಷ್ಟರ ಭ್ರಷ್ಟ ಆಳುವ ವರ್ಗ ಹೋಗಿ ಜನರಿಗೆ ಒಳಿತನ್ನು ಬಯಸುವ ಆಡಳಿತ ಬರಬಹುದೆಂಬ ಭರವಸೆಯಿಂದ ಕಾಯುತ್ತಲೇ
ಇದ್ದಾರೆ. ಆದರೆ.. ಆಳುವ ವರ್ಗಗಳು ತಮ್ಮ ನ್ಯೂನ್ಯತೆಗಳನ್ನು ಮರೆಮಾಚಿ ಜನರ ದಿಕ್ಕನ್ನು ಬೇರೆ ಕಡೆಗೆ
ತಿರುಗಿಸಲು ಆಗಾಗ ದೇಶಭಕ್ತಿಯ ಭಾವನೆಗಳನ್ನು ಕೆರಳಿಸುವ ವರಸೆಗಳನ್ನು ಹುಡುಕುತ್ತಿರುತ್ತಾರೆ. ದೇಶಭಕ್ತಿಯ
ಹೆಸರಲ್ಲಿ ಜನರ ದಿಕ್ಕು ತಪ್ಪಿಸುವ ಮಹತ್ಕಾರ್ಯವನ್ನು ಅಂದಿನ ಹಿಟ್ಲರನಿಂದಿ ಹಿಡಿದು ಇಂದಿನ ಮೋದಿವರೆಗೂ
ನಿರಂತರವಾಗಿ ನಡೆದುಕೊಂಡೇ ಬಂದಿದೆ. ಅಲ್ಪಸಂಖ್ಯಾತರನ್ನು ದೇಶವಿರೋಧಿಗಳು ಎಂದು ಬಿಂಬಿಸುತ್ತಾ ಅವರ
ಮೇಲೆ ಬಹುಸಂಖ್ಯಾತರನ್ನು ಎತ್ತಿಕಟ್ಟುವ ಮೂಲಕ ದೇಶಭಕ್ತಿಯ ರಾಜಕಾರಣವನ್ನು ಆಳುವ ವರ್ಗಗಳು ಮಾಡುತ್ತಲೇ
ಬಂದಿವೆ. ಇತ್ತೀಚೆಗಂತೂ ನಮ್ಮ ದೇಶದಲ್ಲಿ ಈ ದೇಶಭಕ್ತಿ ಅನ್ನುವುದೇ ತೋರುಂಬ ಲಾಭವಾಗಿದೆ. ನಿಜ ಹೇಳಬೇಕೆಂದರೆ
ಬಹುಸಂಖ್ಯಾತ ಜನರಲ್ಲಿ ಈ ದೇಶದ ಮೇಲೆ ಅಪಾರವಾದ ಪ್ರೀತಿ ಭಕ್ತಿ ಹಾಗೂ ಗೌರವ ಇದೆ. ಆದರೆ.. ತಮ್ಮ ಪ್ರೀತಿಯ
ಮಾತೃಭೂಮಿಯನ್ನು ಕೆಲವೇ ಜನ ಖದೀಮರ ಸ್ವತ್ತಾಗಿಸಿದ್ದಕ್ಕೆ ಜನರಲ್ಲಿ ಅಸಮಾಧಾನವಿದೆ. ವಿದೇಶಿ ಲೂಟಿಕೋರ
ಕಾರ್ಪೋರೇಟ್ ಕಂಪನಿಗಳಿಗೆ ಈ ದೇಶವನ್ನು ಲೂಟಿ ಮಾಡಲು ಮುಕ್ತ ಅವಕಾಶ ಕೊಟ್ಟಿದ್ದಕ್ಕೆ ಜನರೆದೆಯಲ್ಲಿ
ಆಕ್ರೋಶ ಮಡುಗಟ್ಟಿದೆ. ಆದರೆ ಆ ಆಕ್ರೋಶದ ಲಾವಾರಸ ಒತ್ತಡಮೀರಿ ಸ್ಪೋಟಗೊಂಡು ಜ್ವಾಲಾಮುಖಿಯಾಗಿ ಈ ಆಳುವ
ವರ್ಗವನ್ನು ಆಪೋಷಣ ತೆಗೆದುಕೊಳ್ಳುವುದನ್ನು ತಡೆದು ನಿಲ್ಲಿಸಲು ಆಳುವ ಜನರು ಈ ದೇಶಭಕ್ತಿ ಎನ್ನುವ ತಡಗೊಡೆಯನ್ನು ನಿರಂತರವಾಗಿ ಬಳಸಲಾಗುತ್ತಾರೆ.
ಅದರ ಭಾಗವಾಗಿಯೇ ಈಗಿನ ಕೋರ್ಟ ಆದೇಶ ಹೊರಗೆ ಬಂದಿದೆ.
ಯಾವುದನ್ನೇ
ಆಗಲಿ ಮನಸಾರೆ ಮಾಡಬೇಕೆ ಹೊರತು ಅದು ಖಡ್ಡಾಯವಾಗಬಾರದು. ದೇಶಭಕ್ತಿಯೂ ಸಹ ಇದಕ್ಕೆ ಹೊರತಲ್ಲ. ಜನಗಣಮನವನ್ನು
ಖಡ್ಡಾಯವಾಗಿ ಸಿನೆಮಾ ಮಂದಿರದಲ್ಲಿ ನುಡಿಸಲೇಬೇಕು.. ಪ್ರೇಕ್ಷಕರು ಅದಕ್ಕೆ ಸ್ಪಂದಿಸಲೇಬೇಕು ಎನ್ನುವುದು
ಜನರಲ್ಲಿರುವ ದೇಶಭಕ್ತಿಯ ಮೇಲೆ ಆಳುವ ವರ್ಗಗಳಿಗಿರುವ ಅನುಮಾನದ ದ್ಯೋತಕವಾಗಿದೆ. ತನ್ನ ದೇಶದ ಜನರನ್ನೇ
ನಂಬದ ಈ ಆಳುವ ದೊರೆಗಳನ್ನು ಜನರು ಹೇಗೆ ನಂಬುವುದು? ಈಗಾಗಲೇ ಬಹುಜನರ ತಿರಸ್ಕಾರಕ್ಕೆ ಒಳಗಾದ ಈ ದೇಶದ
ಆಳುವ ಪಕ್ಷಗಳು ಹಾಗೂ ಸರಕಾರಗಳು ಕೇವಲ ಅಂಕಿ ಸಂಖ್ಯೆಗಳ ತಂತ್ರಗಾರಿಕೆಯಲ್ಲಿ ಅಧಿಕಾರ ಹಿಡಿದಿವೆಯೇ
ಹೊರತು ಬಹುಜನರ ಒಕ್ಕೂರಲಿನ ಆಯ್ಕೆಯಿಂದಲ್ಲಾ. ಎಲ್ಲಾ ನಮೂನಿ ಪಕ್ಷ ಹಾಗೂ ಸರಕಾರಗಳ ಮೇಲೆ ಬಹುತೇಕ
ಜನರು ವಿಶ್ವಾಸವನ್ನು ಕಳೆದುಕೊಂಡಿದ್ದು ಅದು ಆಳುವ ಜನರಿಗೂ ಗೊತ್ತಿದೆ. ಹಾಗೆಯೇ ಜನರನ್ನು ಸದಾ ಯಾವುದಾದರೊಂದು
ಭ್ರಮೆಯಲ್ಲಿಟ್ಟು ತಮ್ಮ ಅಧಿಕಾರ ಹಂಚಿಕೆಯ ಲಾಭವನ್ನು ಪಡೆಯಲು ಆಳುವ ವರ್ಗಗಳೂ ನಿರಂತರವಾಗಿ ಪ್ರಯತ್ನಿಸುತ್ತಲೇ
ಇರುತ್ತವೆ. ಈ ದೇಶಭಕ್ತಿ ಎನ್ನುವುದು ಸಹ ಜನರನ್ನು ಭ್ರಮೆಯಲ್ಲಿಟ್ಟು ತಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸುವ
ನಿಟ್ಟಿನಲ್ಲಿ ಆಳುವ ಸರಕಾರಗಳು ಹೂಡುವ ತಂತ್ರಗಾರಿಕೆಯ ಭಾಗವೇ ಆಗಿದೆ. ದೇಶವಾಸಿಗಳಲ್ಲಿ ದೇಶಭಕ್ತಿಯ
ಉನ್ಮಾದವನ್ನು ಬಡಿದೆಬ್ಬಿಸಲು ಬಾಹ್ಯಶತ್ರುಗಳ ಹೆಸರಲ್ಲಿ ಯುದ್ದೋನ್ಮಾದವನ್ನು ಬಡಿದೆಬ್ಬಿಸಲಾಗುತ್ತದೆ
ಇಲ್ಲವೇ ಆಂತರಿಕ ಶತ್ರುಗಳ ಭಯವನ್ನು ಸೃಷ್ಟಿಸಿ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸಲಾಗುತ್ತದೆ ಅಥವಾ
ಕೋಮುಸಂಘರ್ಷವನ್ನು ಹುಟ್ಟುಹಾಕುವ ಹುನ್ನಾರಗಳನ್ನು ಮಾಡಲಾಗುತ್ತದೆ.
ಈಗ ಜನರೆಲ್ಲಾ
ಮನರಂಜನಾ ಮಂದಿರಗಳಲ್ಲಿ ಜನಗಣಮನವನ್ನು ಹಾಡುವ ಮೂಲಕ ದೇಶಭಕ್ತಿಯನ್ನು ಸಾಬೀತುಪಡಿಸಲೇಬೇಕೆನ್ನುವ ಆದೇಶವನ್ನು
ಸುಪ್ರಿಂ ಕೋರ್ಟ ಕೊಟ್ಟಿದೆ. ಮೊದಲೇ ಈ ಜನಗಣಮನ ಹಾಡಿನ ಬಗ್ಗೆಯೇ ಅಪಸ್ವರ ಕಳೆದ ನೂರು ವರ್ಷದಿಂದಲೂ
ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ರವೀಂದ್ರನಾಥ ಠಾಕೂರರು ಬರೆದ “ಭಾರತ ಅಧಿನಾಯಕ” ಎನ್ನುವ
ಹಾಡನ್ನು 1911 ಡಿಸೆಂಬರ್ 27ರಂದು ಬ್ರಿಟನ್ ದೊರೆ 5ನೇ ಕಿಂಗ್ಜಾರ್ಜ ಹಾಗೂ ರಾಣಿಯ ಸ್ವಾಗತಕ್ಕಾಗಿ
ಮೊದಲ ಬಾರಿಗೆ ಹಾಡಲಾಯಿತು. ಸ್ವಾತಂತ್ರ್ಯದ ನಂತರ ಈ ಗೀತೆ ರಚಿಸಿದ್ದರೆ ಅದನ್ನು ದೇಶಭಕ್ತಿಯ ನೆಲೆಯಲ್ಲಿ
ಸ್ವೀಕರಿಸಬಹುದಾಗಿತ್ತು. ಆದರೆ.. ಸ್ವಾತಂತ್ರ್ಯ ಪೂರ್ವದಲ್ಲಿ ಈ ದೇಶದ ಜನಗಣಮನದ ಅಧಿನಾಯಕರು ಬ್ರಿಟೀಷ್
ದೊರೆ-ರಾಣಿ ಎಂಬುದಂತೂ ಸುಳ್ಳಲ್ಲ. ಇನ್ನೂ ಸ್ವತಂತ್ರ ದೇಶವೇ ಆಗಿರದಿದ್ದ ಕಾಲದಲ್ಲಿ, ಭಾರತ ಇನ್ನೂ
ಈಗಿರುವಂತೆ ಇಲ್ಲದಿರುವ ಸಂದರ್ಭದಲ್ಲಿ, ಇನ್ನೂ ಪಾಳೆ ಪಟ್ಟು ರಾಜರುಗಳು ಆಳುತ್ತಿದ್ದ ಪ್ರದೇಶಗಳು
ಬೇಕಾದಷ್ಟು ಇರುವಂತಹ ವ್ಯವಸ್ಥೆಯಲ್ಲಿ ಜನಗಣಮನದ ಅಧಿನಾಯಕರು ಬ್ರಿಟೀಷ್ ಪ್ರಭುತ್ವ ಅಲ್ಲದೇ ಬೇರೆ
ಯಾರಿರಲು ಸಾಧ್ಯ? ಅಧಿನಾಯಕ ಎನ್ನುವ ಶಬ್ದವೇ ಸರ್ವಾಧಿಕಾರವನ್ನು ಬೆಂಬಲಿಸುವಂತಿದೆ ಹಾಗೂ ಮೂಲದಲ್ಲಿ
ಬೆಂಗಾಳಿ ಭಾಷೆಯಲ್ಲಿ ರಚಿತವಾದ ಈ ಹಾಡಿನಲ್ಲಿ ಸಂಸ್ಕೃತ ಶಬ್ದಗಳೇ ತುಂಬಿವೆ. ಜನಗಣಮನ ಕುರಿತು ವಾದವಿವಾದಗಳೇನೇ
ಇದ್ದರೂ ಅದನ್ನು ಭಾರತೀಯರು ಒಪ್ಪಿಯಾಗಿದೆ. 1950 ಜನವರಿ 24ರಿಂದ ಜನಗಣಮನ ಗೀತೆ ಈ ದೇಶದ ಅಧೀಕೃತ
ರಾಷ್ಟ್ರಗೀತೆಯೂ ಆಗಿದೆ. ಆದರೆ.. “ನೀವು
ನಿಜಕ್ಕೂ ದೇಶಪ್ರೇಮಿಯಾಗಿದ್ದರೆ ಸಿನೆಮಾ ಮಂದಿರಗಳಲ್ಲೂ ಈ ಗೀತೆಯನ್ನು ನುಡಿಸಿ ಗೌರವಿಸಲೇಬೇಕು” ಎನ್ನುವಂತೆ ನ್ಯಾಯಾಲಯ ಹುಕುಂ ಹೊರಡಿಸುವುದರಲ್ಲಿ ಯಾವ ಅರ್ಥವಿದೆ? ತನ್ನದೇ ದೇಶವಾಸಿಗಳ ದೇಶಪ್ರೇಮದಲ್ಲಿ ಸುಪ್ರಿಂ
ಕೋರ್ಟಿಗೆ ನಂಬಿಕೆ ಇಲ್ಲದೇ ಹೋಯಿತೆ? ಹಾಗೇನಾದರೂ ಜನರಲ್ಲಿ ದೇಶಪ್ರೇಮ ಕಡಿಮೆಯಾಗಿದ್ದರೆ ಸಿನೆಮಾ
ಹಾಲ್ಗಳಲ್ಲಿ ಜನಗಣಮನ ಹಾಡನ್ನು ಹಾಡುವುದರಿಂದ ದೇಶಪ್ರೇಮ ಹೆಚ್ಚಾದೀತೆ? ದೇಶಭಕ್ತಿಯನ್ನು ಕಾನೂನಿನ
ಮೂಲಕ ಜನರಲ್ಲಿ ಮೂಡಿಸಬಹುದೇ? “ರಾಜಾಜ್ಞೆ
ಮಾಡುವ ಮೂಲಕ ಜನರನ್ನು ಹದ್ದುಬಸ್ತಿನಲ್ಲಿಡಬಹುದು ಆದರೆ.. ಜನರ ವಿಶ್ವಾಸವನ್ನು ಗಳಿಸಲು ಸಾಧ್ಯವೇ?” ಎಂದು ತುಘಲಕ್ ನಾಟಕದಲ್ಲಿ ಬರುವ ಸಂಬಾಷಣೆ ಸುಪ್ರಿಂ ಕೋರ್ಟಿಗೆ ಅರಿವಾಗಿದ್ದರೆ
ಚೆನ್ನಾಗಿತ್ತು.
ರಾಷ್ಟ್ರಗೀತೆಯನ್ನು
ಹಾಡುವಾಗ ಎದ್ದು ನಿಲ್ಲಲೇಬೇಕೆಂಬ ಕಡ್ಡಾಯ ಕಾನೂನಾಗಲೀ ಆದೇಶವಾಗಿಲಿ ಇರಲಿಲ್ಲ. ಆದರೂ ಜನರು ತಮ್ಮ
ದೇಶಕ್ಕೆ ಸಲ್ಲಿಸುವ ಗೌರವದ ಭಾಗವಾಗಿ ಸ್ವ ಇಚ್ಚೆಯಿಂದ ಕಳೆದ ಏಳು ದಶಕಗಳಿಂದ ಎದ್ದು ನಿಂತು ರಾಷ್ಟ್ರಗೀತೆಗೆ
ಮರ್ಯಾದೆ ಕೊಡುತ್ತಲೇ ಬಂದಿದ್ದಾರೆ. ಸುಪ್ರೀಂ ಕೋರ್ಟ ಸಹ “ರಾಷ್ಟ್ರಗೀತೆಯನ್ನು
ಹಾಡುವಂತೆ ಯಾರನ್ನೂ ಒತ್ತಾಯಿಸುವ ಹಾಗಿಲ್ಲ” ಎಂದೇ
ತನ್ನ ತೀರ್ಪಿನಲ್ಲಿ ಸ್ಪಷ್ಟನೆ ಕೊಟ್ಟಿತ್ತು. ಒಮ್ಮೆ ಬಿಹಾರದ ಮುಖ್ಯಮಂತ್ರಿಯಾಗಿದ್ದ ಲಾಲೂ ಪ್ರಸಾದ್
ಯಾದವ್ ರಾಷ್ಟ್ರಗೀತೆ ನುಡಿಸುವ ಸಮಯದಲ್ಲಿ ಕುಳಿತಿದ್ದು ಭಾರೀ ವಾದವಿವಾದವನ್ನು ಹುಟ್ಟುಹಾಕಿತ್ತು. ಕೂಗುಮಾರಿ ಮಾಧ್ಯಮಗಳು ಅದನ್ನೊಂದು ದೇಶದ ದುರಂತ ಎನ್ನುವ
ಹಾಗೆ ಹುಯಿಲೆಬ್ಬಿಸಿದವು. ಅವರ ಮೇಲೆ ರಾಷ್ಟ್ರದ್ರೋಹದ ಕೇಸ್ ಕೂಡಾ ದಾಖಲಿಸಲಾಗಿತ್ತು. ಆಗ ಲಾಲೂ ಎಲ್ಲಾ ಮಾಧ್ಯಮಗಳಿಗೂ ಸುಪ್ರೀಂ ಕೋರ್ಟಿನ ಆದೇಶದ
ಪ್ರತಿಯನ್ನು ಕಳುಹಿಸಿಕೊಟ್ಟು ಮಂಗಳಾರತಿ ಮಾಡಿದ್ದರು. ತದನಂತರ “ರಾಷ್ಟ್ರಗೀತೆಯನ್ನು ನುಡಿಸುವಾಗ ಅದನ್ನು ಕಡ್ಡಾಯವಾಗಿ ನಿಂತು ಹಾಡಲೇಬೇಕಿಲ್ಲ” ಎಂದು ಹೇಳಿದ ಸುಪ್ರಿಂ ಕೋರ್ಟ
ದಾಖಲಾಗಿದ್ದ ಕೇಸನ್ನು ವಜಾಗೊಳಿಸಿತು. ಆದರೆ.. ಸರಕಾರಗಳು ಬದಲಾದ ಹಾಗೆ ಅದಕ್ಕೆ ಪೂರಕವಾಗಿ
ತನ್ನ ರಾಗವನ್ನೂ ಬದಲಾಯಿಸುವ ಸುಪ್ರಿಂ ಕೋರ್ಟ ಈಗ ತನ್ನದೇ ಆದೇಶವನ್ನು ಒಂಚೂರು ಬದಲಾಯಿಸಿ ಸಿನೆಮಾ
ಮಂದಿರಗಳಲ್ಲಿ ರಾಷ್ಟ್ರಗೀತೆ ನುಡಿಸಲೇಬೇಕು ಹಾಗೂ ಪ್ರೇಕ್ಷಕರು ಎದ್ದು ಗೌರವ ಸೂಚಿಸಲೇಬೇಕೆಂದು ಆದೇಶಿಸಿದೆ.
ಇದು ನಿಜಕ್ಕೂ ದೇಶಪ್ರೇಮದ ಹೆಸರಲ್ಲಿ ಜನರ ಮೇಲೆ ಕಾನೂನು ನಡೆಸುವ ದಬ್ಬಾಳಿಕೆಯಾಗಿದೆ.ಇಷ್ಟಕ್ಕೂ ಸಿನೆಮಾ ಮಂದಿರಗಳಲ್ಲಿ ಜನಗಣಮನ ನುಡಿಸಿದಾಕ್ಷಣ ದೇಶಪ್ರೇಮ ಹುಟ್ಟುತ್ತದೆ ಎನ್ನುವುದು ಸತ್ಯವಲ್ಲ. ದೂಮಪಾನ ಮಧ್ಯಪಾನಗಳಿಂದಾಗುವ ಅಪಾಯಗಳ ಬಗ್ಗೆ ಎಂತೆಂಥಾ ಭಯಾನಕ ಕ್ಲಿಪ್ಪಿಂಗಗಳನ್ನು ಸಿನೆಮಾ ಮಂದಿರಗಳ ಪ್ರತಿಯೊಂದು ಪ್ರದರ್ಶನಗಳಿಗಿಂತ ಮುಂಚೆ ತೋರಿಸಲಾಗುತ್ತಿದೆ. ಅದನ್ನು ನೋಡಿ ಧೂಮಪಾನ ಮದ್ಯಪಾನ ತ್ಯಜಿಸಿದವರು ಎಲ್ಲಿದ್ದಾರೆ? ಇದರರ್ಥ ಇಷ್ಟೇ.. ಜನರು ಏನನ್ನಾದರೂ ಬಿಡಬೇಕಾದರೆ ಇಲ್ಲವೇ ರೂಢಿಸಿಕೊಳ್ಳಬೇಕಾದರೆ ಆ ಬದಲಾವಣೆ ಅವರ ಒಳಗಿನಿಂದ ಬರಬೇಕೆ ಹೊರತು ಕಡ್ಡಾಯ ಕಾನೂನುಗಳಿಂದಲ್ಲಾ.
1960
ರಲ್ಲಿಯೇ ಸುಪ್ರಿಂ ಕೋರ್ಟ ಸಿನೆಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ನುಡಿಸಲು ಸೂಚಿಸಿತ್ತೇ ಹೊರತು ಕಡ್ಡಾಯಗೊಳಿಸಿರಲಿಲ್ಲ.
ಆ ನಂತರ ಅತ್ತ ಯಾರೂ ಗಮನ ಕೊಡಲಿಲ್ಲ. 1990ರಲ್ಲಿ ಮತ್ತೆ ಜಾರಿಗೆ ಬಂತಾದರೂ ಬಹಳ ದಿನ ಅದು ನುಡಿಯಲಿಲ್ಲ.
2003 ರಲ್ಲಿ ಮಹಾರಾಷ್ಟ್ರ ಸರಕಾರ ಸಿನೆಮಾ ಪ್ರದರ್ಶನ ಪೂರ್ವ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿತು.
ಆದರೆ... ಸಿನೆಮಾ ಮಂದಿರ ಅಷ್ಟೇ ಅಲ್ಲಾ.. ಎಲ್ಲಿಯೇ ಆಗಲಿ ರಾಷ್ಟ್ರೀಗೀತೆ ನುಡಿದರೆ ಅಲ್ಲಿ ಜನರು ಎದ್ದು ಗೌರವವನ್ನು ಸೂಚಿಸುತ್ತಲೇ ಬಂದಿದ್ದಾರೆ. ಅಕಸ್ಮಾತ್ ಸೂಚಿಸದೇ ಇದ್ದರೂ ಅಂತವರಲ್ಲಿ ದೇಶಪ್ರೇಮ ಇಲ್ಲ
ಎಂದು ಆರೋಪಿಸುವುದು ಅವಿವೇಕತನದ ಪರಮಾವಧಿಯಾಗಿದೆ. ರಾಷ್ಟ್ರಗೀತೆಗೆ ಗೌರವಿಸುವುದು ಸ್ವಯಂ ಪ್ರೇರಣೆಯಿಂದಾ
ನಡೆಯುವ ವಿದ್ಯಮಾನ. ಅದಕ್ಕೆ ಯಾರ ಅಪ್ಪಣೆ ಆದೇಶಗಳೂ ಅಗತ್ಯವಿಲ್ಲ. ಆದರೆ ಅದನ್ನು ಕಡ್ಡಾಯಗೊಳಿಸುವ
ಅಗತ್ಯವೇ ಇರಲಿಲ್ಲ. ಜನರಲ್ಲಿ ದೇಶಭಕ್ತಿಯ ಉನ್ಮಾದ ಹೆಚ್ಚಿಸುವ ಭಾಗವಾಗಿ ಈ ಆದೇಶ ಹೊರಬಿದ್ದಂತಿದೆ.
ಈ ದೇಶದ ಜನರಲ್ಲಿರುವ ದೇಶಭಕ್ತಿಯನ್ನು ಸಂದೇಹದಿಂದ ನೋಡುವ ಕೆಲಸ ಇದಾಗಿದೆ. ರಾಷ್ಟ್ರಗೀತೆ ನುಡಿಯುವುದಾಗಲಿ,
ಹಾಡುವುದಾಗಲಿ, ಎದ್ದು ನಿಂತು ಗೌರವಿಸುವುದಾಗಲಿ ಒಬ್ಬ ವ್ಯಕ್ತಿಯ ದೇಶಭಕ್ತಿಯನ್ನು ಅಳೆಯುವ ಸಾಧನವೂ
ಅಲ್ಲಾ.. ದೇಶದ್ರೋಹಿ ಎಂದು ವಿರೋಧಿಸುವ ಮಾನದಂಡವೂ ಅಲ್ಲಾ..
ಎಲ್ಲರೂ
ಒಪ್ಪಿಕೊಂಡ ರಾಷ್ಟ್ರಗೀತೆ ಜನಗಣಮನವನ್ನು ತೀವ್ರವಾಗಿ ವಿರೋಧಿಸುವವರು ಯಾರಾದರೂ ಈ ದೇಶದಲ್ಲಿ ಇದ್ದರೆ
ಅದು ಸಂಘಪರಿವಾರದವರು. ರಾಷ್ಟ್ರಗೀತೆಯನ್ನು ಗೌರವಿಸದವರು ದೇಶದ್ರೋಹಿಗಳು ಎನ್ನುವುದಾದರೆ ಮೊಟ್ಟಮೊದಲ
ದೇಶದ್ರೋಹಿಗಳ ಪಟ್ಟಿಯಲ್ಲಿ ಸಂಘಪರಿವಾರದ ಅಧಿನಾಯಕರ ಹೆಸರುಗಳಿರುತ್ತವೆ. ಮೊದಲಿನಂದಲೂ ಜನಗಣಮನವನ್ನು
ರಾಷ್ಟ್ರಗೀತೆಯಾಗಿ ಒಪ್ಪದಿರುವ ಸಂಘಿಗಳ ಅಧಿನಾಯಕ ಮೋಹನ್ ಭಾಗವತ್ ಎಂಟು ತಿಂಗಳ ಹಿಂದೆ ನಿಜವಾದ ರಾಷ್ಟ್ರಗೀತೆ
ವಂದೇಮಾತರಂ.. ಜನಗಣಮನ ಅಲ್ಲಾ” ಎಂದು
ಬಹಿರಂಗವಾಗಿಯೇ ಘೋಷಿಸಿದ್ದರು. ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಭಯ್ನಾಜಿ ಜ್ಯೋಷಿ ಸಹ ಭಾಗವತ್ ಹೇಳಿಕೆಯನ್ನು
ಸಮರ್ಥಿಸಿಕೊಂಡರು. ಬಂಕಿಮ್ ಚಂದ್ರ ಚಟ್ಟೋಪಾದ್ಯಾಯರು ರಚಿಸಿದ ವಂದೇಮಾತರಂ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ
ಮಾಡಬೇಕು ಎನ್ನುವುದು ಸಂಘಪರಿವಾರದ ಓಪನ್ ಅಜೆಂಡಾ ಆಗಿದೆ. ಅದಕ್ಕಾಗಿಯೇ ಈವರೆಗೂ ಆರೆಸ್ಸೆಸ್ ಮುಖ್ಯ
ಕಛೇರಿಯಲ್ಲಿ ರಾಷ್ಟ್ರದ್ವಜಾರೋಹನ ಮಾಡುವುದಿಲ್ಲ ಹಾಗೂ ರಾಷ್ಟ್ರಗೀತೆಯನ್ನು ಹಾಡಲಾಗುವುದಿಲ್ಲ. ಹಾಗಾದರೆ
ಈಗ ಹೇಳಿ ರಾಷ್ಟ್ರದ್ರೋಹಿಗಳು ಯಾರು ಎಂದು? ಜನಗಣಮನವನ್ನು ಶತಾಯಗತಾಯ ವಿರೋಧಿಸುವ ಹಿಂದುತ್ವವಾದಿಗಳೇ
ದೇಶದ ಚುಕ್ಕಣಿ ಹಿಡಿದಿರುವ ಪ್ರಸ್ತುತ ಸಂದರ್ಭದಲ್ಲಿ ಜನರಲ್ಲಿ ದೇಶಭಕ್ತಿಯ ಉನ್ಮಾದವನ್ನು ಹಬ್ಬಿಸಲು
ರಾಷ್ಟ್ರಗೀತೆಯನ್ನು ಒಂದು ಭಾವನಾತ್ಮಕ ಪರಿಕರವಾಗಿ ಬಳಸುತ್ತಿರುವುದೂ ಸಹ ಸಂಘಪರಿವಾರದ ಹಿಡನ್ ಅಜೆಂಡಾದ
ಭಾಗವಾಗಿದೆ. ಹೀಗಾಗಿ ಜನಗಣಮನ ಜನರ ಮನದ ಭಾವನೆಯಾಗಿ ಉಳಿಯಲಿ. ಕಡ್ಡಾಯವೆನ್ನುವ ಅನಗತ್ಯ ಹೇರಿಕೆ ದೂರಾಗಲಿ.
ಅಸಮಾನತೆ ಅಳಿದು ದೇಶವಾಸಿಗಳೆಲ್ಲಾ ತಮ್ಮ ದೇಶವನ್ನು ಪ್ರೀತಿಸಿ ಗೌರವಿಸುವಂತಹ ವಾತಾವರಣ ದೇಶಾದ್ಯಂತ
ನಿರ್ಮಾಣವಾಗಲಿ ಎಂಬುದೇ ನಿಜವಾದ ದೇಶಭಕ್ತರ ಆಶಯವಾಗಿದೆ.
-ಶಶಿಕಾಂತ ಯಡಹಳ್ಳಿ