ಶುಕ್ರವಾರ, ಡಿಸೆಂಬರ್ 9, 2016

ತಹ ತಹ.... 66 ಮುನಿಯನ ಸ್ವಗತ ಸಂಕಟ (ಏಕವ್ಯಕ್ತಿ ಪ್ರಹಸನ):




ಸಾರ್... ನಮಸ್ಕಾರ ಸಾರ್.. ನಾನು ನಿಮಗೊತ್ತಿಲ್ವರಾ..? ಹೋಗಲಿ ಬಿಡಿ. ನನಗಂತೂ ನೀವಷ್ಟೇ ಅಲ್ಲಾ ನಿಮ್ಮ ತಲೆಲಿರೋ ಕೂದಲೂ ಬಾಳಾ ಅಂದ್ರೆ ಬಾಳಾ ಪರಿಚಯ. ನಾನ್ ಸಾಮಿ ಮುನಿಯಾ.... ಗೊತ್ತಾಗಲಿಲ್ವರಾ.. ಹಡಪದ ಮುನಿಯಾ... ಒಂದು ವರ್ಷದ ಹಿಂದೆ ಕಟ್ಟಿಂಗ್ ಮಾಡಿಸೋಕೆ ನಮ್ಮ ಕ್ಷೌರದಂಗಡಿಗೆ ಬರ್ತಿದ್ದೀರಲ್ಲಾ ದೇವ್ರು... ಸೊಲೂಪ ನೆಪ್ಪ ನಾಡ್ಕೊಳ್ಳಿ.. ಹಾಂ... ನಾನು ಮುನಿಯಾನೇ ಸಾರ್ರು... ನಾನೀಗ ಬಲೇ ಕಷ್ಟದಲ್ಲಿ ಸಿಕ್ಕಾಕೊಂಡಿವ್ನಿ ಅದ್ಕೆ ನಿಮ್ಮ ಹತ್ರ ಏನಾದ್ರೂ ಉಪಾಯ ಇದೆಯಾ ಅಂತಾ ಕೇಳೋಕೆ ಬಂದೆ ಸ್ವಾಮೇರಾ...


ನಂಗೆ ಮದುವೆ ಆಗಿ ನಾಳೆ ಬರೋ ಅಮಾಸೆಗೆ ಹತ್ತು ವರ್ಸ ಆಯ್ತುರಾ... ಆದರೆ ನನ್ನೆಂಡ್ರು ಮುನಿಸ್ಕೊಂಡು ತವ್ರಿಗೆ ಹೋಗಿ ಮೂರು ವರ್ಸಾ ಆತು ಅನ್ನಿ. ಯಾಕಂದ್ರೆ ಮದುವೆ ಟೇಮಿನಾಗೆ ತಾರಸಿ ಮನೆ ಕಟ್ಟಿಸಿ ರಾಣಿ ಹಂಗೆ ನೋಡ್ಕೋತೇನಿ ಅಂತಾ ನನ್ನೆಂಡ್ರಿಗೆ ಮಾತು ಕೊಟ್ಟಿದ್ದೆ. ಮನೆ ಕಟ್ಟೋದು ಅಸ್ಟೊಂದು ಸುಲಭಾನಾ ನೀವೇ ಹೇಳಿ ಸಾಮಿ. ಒಂದತ್ತು ಲಕ್ಷಾನಾದ್ರೂ ಬೇಕಲ್ವರಾ? ನಾನು ಬಾಳಾ ಪ್ರಯತ್ನಾ ಮಾಡಿ ವರ್ಷಕ್ಕೆ ಒಂದೊಂದು ಲಕ್ಷಾ ಉಳಿಸಿ ಕೂಡಿಟ್ಟೀವ್ನಿ. ಈಗ ಹತ್ತು ಲಕ್ಷ ರೂಪಾಯಿ ಒಟ್ಟು ಗೂಡಿಸಿ ಮನೇಲಿ ಬಚ್ಚಿಟ್ಟೀವ್ನಿ. ಇನ್ನೇನು ಗುಡಿಸಿಲಿದ್ದ ಜಾಗದಾಗೆ ತಾರಸಿ ಮನೆ ಕಟ್ಟಿಸ್ಬೇಕು ಅಂತಾ ಇದ್ದೆ ಸ್ವಾಮಿ ಅಷ್ಟರಲ್ಲಿ ಬೆವರು ಹರಿಸಿ ದುಡಿದಿಟ್ಟ ಐನೂರು ಸಾವಿರ ರೂಪಾಯಿ ನೋಟಗಳೆಲ್ಲಾ ರದ್ದು ಮಾಡಿ ಬಿಟ್ಟಿದ್ದಾರಂತೆ ಸ್ವಾಮಿ ಮೋದಿಯವ್ರು. ನಂಗಂತೂ ಆಕಾಸವೇ ತಲೆ ಮೇಲೆ ಬಿದ್ದಂಗಾಗ್ತಿದೆ. ಒಂದಲ್ಲಾ ಎರಡಲ್ಲಾ ಹತ್ತು ವರ್ಸಾ ದುಡಿದಿಟ್ಟಿರೋ ಹಣ ಅದು. ಅದೆಲ್ಲಾ ಕಪ್ಪುಹಣ ಆಗೋಗಿದೆಯಂತೆ. ನಾನು ತೆಗೆದು ಮೂರ್ನಾಲ್ಕು ಸಲಾ ನೋಡಿದೆ ಸ್ವಾಮಿ ಎಲ್ಲೂ ಸೊಲ್ಪಾನೂ ಮಸಿ ಅಂಟಿಲ್ಲಾ... ಆದರೂ ಅದ್ಯಾಕೆ ಕಪ್ಪು ಹಣ ಆಯ್ತು ಅಂತಾ ಗೊತ್ತಾಗ್ತಾನೇ ಇಲ್ಲಾ. ನೀವೇ ದಾರಿ ತೋರ್ಸಿ ಸ್ವಾಮಿ ನಿಮ್ಮ ಪಾದ ನನ್ನ ತಲೆ ಮೇಲಿರ್ಲಿ. ನಾನು ಮನೆ ಕಟ್ಟದಿದ್ರೆ ನನ್ನೆಂಡ್ರು ವಾಪಸ್ ಬರೋದಿಲ್ಲವಂತೆ. ಮನೆ ಕಟ್ಟೊಕಂತಾ ರೊಕ್ಕಾ ಕೂಡಿಟ್ರೆ ಅದೆಲ್ಲಾ ರದ್ದಾಗಿದೆಯಂತೆ ಈಗೇನು ಮಾಡೋದು ಅಂತಾ ಹೇಳಿ ಪುಣ್ಯ ಕಟ್ಕೊಳ್ಳಿ ತಂದೆ...

ಹೂಂ ಬ್ಯಾಂಕಿಗೂ ಹೋಗಿದ್ದೆ. ಯಾರದೋ ಕೈಕಾಲು ಹಿಡಿದು ಖಾತೆನೂ ತಗೆದೆ. ಆದ್ರೆ ಎರಡೂವರೆ ಲಕ್ಷ ಮಾತ್ರ ಖಾತೆಗೆ ಹಾಕ್ಬೇಕಂತೆ.. ಹೆಚ್ಚಿಗೆ ಹಾಕಿದ್ರೆ ತೊಂದರೆ ಆಗುತ್ತಂತೆ. ಎರಡೂವರೆ ಲಕ್ಷಾ ಬ್ಯಾಂಕಲ್ಲಿ ಜಮಾ ಮಾಡಿ ಬಂದೆ. ಈಗ ಬಾಕಿ ಹಣ ಏನು ಮಾಡೋದು... ಹೆಂಗೆ ಹೊಸ ನೋಟಿಗೆ ಬದಲಾಯಿಸೋದು ಅಂತಾ ಗೊತ್ತಾಗ್ತಿಲ್ಲಾ ಸಾಮಿ... ನೀವು ಪೇಪರಿನೋರು.. ನಿಮಗೆಲ್ಲಾ ಗೊತ್ತಿರುತ್ತೆ... ಏನಾದರೂ ದಾರಿ ತೋರ್ಸಿ ಪುಣ್ಯ ಕಟ್ಕೊಳ್ಳಿ ಸಾರು.
.
ಹೂಂ ಲಾಯರ್ರತ್ರಾನೂ ಹೋಗಿದ್ದೆ ಸ್ವಾಮಿ. ನನ್ನತ್ರಾ ಕಟಿಂಗ್ ಮಾಡ್ಸೊಕೆ ಅವ್ರು ಪ್ರತಿ ತಿಂಗಳೂ ಬರ್ತಾರೆ. ಅವರು ಹೇಳಿದ್ರು ಎಲ್ಲಾ ಹಣಾನೂ ಬ್ಯಾಂಕಿಗೆ ಕಟ್ಟಬೋದಂತೆ. ಆದ್ರೆ ಎರಡೂವರೆ ಲಕ್ಷ ಮಿಕ್ಕದ್ದೆಲ್ಲಾ ಕಪ್ಪು ಹಣವಂತೆ. ಅದಕ್ಕೆ ಅದೇನೋ ಮಾಡ್ಬೇಕು ಅಂದ್ರಲ್ಲಾ.... ಹಾಂ ಡಿಕ್ಲರೇಸನ್ನು ಮಾಡ್ಬೇಕಂತೆ. ಹಿಂಗಿಂಗೆ ನನ್ನತ್ರ ಇಷ್ಟಿಷ್ಟು ಹೆಚ್ಚಿಗೆ ರೊಕ್ಕಾ ಇದೆ.. ಇದನ್ನ ಬಿಳಿ ಮಾಡ್ಕೋಬೇಕಿದೆ...ಅಂತಾ ಟ್ಯಾಕ್ಸ ಆಪೀಸಿನಾಗೆ ಬರ್ಕೊಡಬೇಕಂತೆ. ಅದ್ಯಾಂಗೆ ಸ್ವಾಮಿ ನಾನು ದುಡಿದ ಕಾಸು ಕಾಳ ಧನ ಆಗುತ್ತೆ. ಯಾರದಾದರೂ ತಲೆ ಒಡದೋ ಇಲ್ಲಾ ಮೋಸಾ ಮಾಡಿಯೋ ಸಂಪಾದಿಸಿದ್ದೀನಾ? ಒಂದಿನಾನೂ ಸುಮ್ಮನೆ ಖಾಲಿ ಕೂಡದೇ ದುಡಿದು ಸಂಪಾದನೆ ಮಾಡಿದ ದುಡ್ಡು ಸ್ವಾಮೇರ... ಈಗದು ಕಾಳಧನ ಆಗೊಗಿದೆಯಂತೆ... ಏನು ಮಾಡೊದು ನೀವೇ ಒಸಿ ಹೇಳ್ರಲಾ?


ಹೂಂ ಅದನ್ನೂ ಮಾಡಿದೆ. ನನ್ನತ್ರಾ ಕಟಿಂಗ್ ಮಾಡಿಸ್ಕೊಳ್ಳೋಕೆ ಅಂತಾ ಬರ್ತಿದ್ರಲ್ಲಾ ಟ್ಯಾಕ್ಸಾಫಿಸರು.. ಅವರನ್ನೂ ಕೇಳಿದೆ ಸ್ವಾಮಿ.. ಬಾಕಿ ಉಳಿದ ಏಳು ಲಕ್ಷ ರೂಪಾಯಿಯೊಳಗೆ ಅರ್ಧದಷ್ಟು ಹಣ ಅಂದ್ರೆ ಮೂರುವರೆ ಲಕ್ಷ ಹಣವನ್ನ ಸರಕಾರಕ್ಕೆ ದಂಡ ಕಟ್ಟಬೇಕಂತೆ. ಮಿಕ್ಕ ಮೂರುವರೆ ಲಕ್ಷ ರೂಪಾಯಿಯೊಳಗೂ ಮತ್ತರ್ಧದಷ್ಟು ಅಂದರೆ ಒಂದೂ ಮುಕ್ಕಾಲು ಲಕ್ಷದಷ್ಟು ಕಾಸನ್ನ ಬ್ಯಾಂಕಲ್ಲಿ ಠೇವಣಿ ಮಡಗ್ಬೇಕಂತೆ. ಅದನ್ನ ನಾಲ್ಕು ವರ್ಸ ಮುಟ್ಟೋಹಂಗಿಲ್ವಂತೆ. ಕೊನೆಗೂ ನಂಗೆ ಉಳಿಯೋದು ಒಂದೂ ಮುಕ್ಕಾಲು ಲಕ್ಷ ಹಾಗೂ ಬ್ಯಾಂಕಲ್ಲಿರೋ ಎರಡೂವರೆ ಲಕ್ಷ ಅಂದ್ರೆ ನಾಲ್ಕೂ ಕಾಲು ಲಕ್ಷ ಮಾತ್ರವಂತೆ ಸಾಮಿ. ಇಷ್ಟು ಹಣದಾಗೆ ನಾನು ತಾರಸಿ ಮನೆ ಹೆಂಗೆ ಕಟ್ಟಲಿ... ತವರಿಗೆ ಹೋದ ಹೆಂಡತೀನ ಹೆಂಗೆ ಕರೆತರಲಿ.. ನಾನೂ ಕಾಳಧನದ ಕಳ್ಳ ಎನ್ನುವ ಅವಮಾನ ಹೆಂಗೆ ಸಹಿಸಿಕೊಳ್ಲಿ... ಏನು ಮಾಡ್ಬೇಕು ಅಂತಾ ಗೊತ್ತಾಗ್ತಿಲ್ಲಾ.... ನೀವೇ ಹೇಳಿ ನಾನು ಕಳ್ಳನಾ...? ನಾನು ದುಡಿದ ಹಣ ನಂದಲ್ಲವಾ? ಹತ್ತು ವರ್ಸಾ ನಾ ಬೆವರು ಸುರ್ಸಿ ಸಂಪಾದಿಸಿದ್ದೆಲ್ಲಾ ಸುಳ್ಳಾ? ನೀವೇ ಮೂಸಿ ನೋಡಿ ನಾನು ದುಡಿದ ಪ್ರತಿಯೊಂದು ನೋಟಿನಲ್ಲೂ ನನ್ನ ಬೆವರಿನ ವಾಸನೆ ಇದೆ... ಆದರೆ... ವಾಸನೆ ಭಾವನೆಗಳನ್ನ ಕಳಕೊಂಡ ಕುರುಡು ಕಾನೂನಿಗೆ ನನ್ನ ಸಂಕಟ ಹೆಂಗೆ ಅರ್ಥ ಆಗುತ್ತೆ ಸ್ವಾಮಿ... ಹಿಂದೆ ಮುಂದೆ ನೋಡದೇ ಕಾಯ್ದೆ ಮಾಡೊರಿಗೆ ನಮ್ಮಂತಾ ಶ್ರಮಿಕರ ನೋವು ಎಲ್ಲಿ ತಿಳಿಯುತ್ತೆ ನೀವೇ ಹೇಳಿ. ಇದೆಲ್ಲಾ ಮೋಸಾ ಮಾಡಿ ಸಂಪಾದಿಸಿದ್ದಲ್ಲಾ.... ದುಡಿದ ಕಾಸು. ಆದರೆ ಈಗ ಇದೆಲ್ಲಾ ರದ್ದೀ ಕಾಗದ ಅಂತೆ. ನಾನು ಕಳ್ಳನಂತೆ... ಹೌದು ನಾನು ಕಳ್ಳನೇ... ಎಲೆಕ್ಷನ್ನಿನಾಗೆ ನೋಟು ತಗೊಂಡು ಓಟು ಹಾಕಿ ಕಳ್ಳರಿಗೆ ದೇಶ ಆಳೋ ಹಾಗೆ ಸಪೋರ್ಟ್ ಮಾಡಿದ ನಾನು ನನ್ನಂತವರು ನಿಜವಾದ ಕಳ್ಳರೇ... ಸರಿಯಾಗಿ ಶಿಕ್ಷೆಯಾಗಿದೆ ನಮ್ಗೆ. ನನ್ನ ನೋಟು ನನ್ನದಲ್ಲಾ.... ನನ್ನ ಶ್ರಮದ ಫಲ ನನ್ನದಲ್ಲಾ.... ನನ್ನದೆನ್ನುವುದಿಲ್ಲಿ ಏನೂ ಇಲ್ಲಾ... ಎಲ್ಲಾ ಮಾಯೆ.... ಜಗವೆಲ್ಲಾ ಮಾಯೆ...ಹಾಂ ನಾನೊಬ್ಬ ಕಳ್ಳ.... ಕಪ್ಪು ಹಣದ ಕಳ್ಳ... ತಗೊಳ್ಲಿ ರದ್ದೀ ರೊಕ್ಕಾ ನೀವೇ ಇಟ್ಕೊಳ್ಳಿ... ಅಯ್ಯೋ ನನ್ನ ಕನಸಿನ ಮನೆ ಮುರಿದು ಬಿತ್ತು... ನನ್ನ ಸಂಸಾರ ಹಾಳಾಗಿ ಹೋಯ್ತು... ಇನ್ನು ಯಾರಿಗಂತಾ ದುಡೀಲಿ... ಯಾತಕ್ಕಂತಾ ಬದಕ್ಲಿ... ಇಡೀ ಬದುಕೇ ಬರಬಾದಾಗೋಯ್ತು... ಕಳ್ಳ ನಾನೊಬ್ಬ ಕಳ್ಳ.....

(ಹುಚ್ಚನಂತೆ ಅಂಗಿ ಹರಿದುಕೊಂಡು... ಹಳೆಯ ನೋಟುಗಳನ್ನು ಎಸೆಯುತ್ತಾ ಮುನಿಯ ಹೊರಡುತ್ತಾನೆ..)

- ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ