ಶುಕ್ರವಾರ, ಡಿಸೆಂಬರ್ 2, 2016

ತಹ ತಹ.....64 ಕ್ಯಾಶಲೆಸ್ ವಹಿವಾಟಿಗೆ ಖಾತ್ರಿಯಿಲ್ಲ, ಕಪ್ಪುಹಣಕೆ ಕೊನೆಯಿಲ್ಲ; ಜನಸಾಮಾನ್ಯರ ಬವಣೆ ತಪ್ಪೊಲ್ಲ :


ಕ್ಯಾಶ್‌ಲೆಸ್ ವ್ಯವಹಾರ ದೇಶಾದ್ಯಂತ ಇರಬೇಕೆಂದು ಪ್ರಧಾನಿ ಮೋದಿಯವರ ಮಹತ್ವಾಂಕಾಂಕ್ಷೆಯಾಗಿದೆ. ಮೋದಿ ಏನೇ ಹೇಳಿದರೂ ಅದಕ್ಕೆ ದೇಶಭಕ್ತಿಯನ್ನು ಆರೋಪಿಸಿ ಮೋದಿ ಬ್ರಿಗೇಡ್ ಭಕ್ತರು ಭಾವಾತೀರೇಕಕ್ಕೊಳಗಾಗುತ್ತಾರೆ. ನಗದು ವ್ಯವಹಾರ ಕಡಿತಗೊಳಿಸಿ ಕಾರ್ಡು ಮೊಬೈಲ್ಗಳ ಮೂಲಕ ದೇಶ ವ್ಯವಹರಿಸಲಿ ಎನ್ನುವ ಉದ್ದೇಶದ ಹಿಂದೆ ಕಾರ್ಪೋರೇಟ್ ಸೆಕ್ಟರಿನ ಹಿತಾಸಕ್ತಿ ಇರುವುದು ಭಕ್ತರ ಗಮನಕ್ಕೆ ಬರಲು ಸಾಧ್ಯವೇ ಇಲ್ಲ. ಅಕಸ್ಮಾತ್ ತಿಳಿಸಿ ಹೇಳಿದರೂ ಬ್ರೇನ್‌ವಾಷ್‌ಗೊಳಗಾದ ಭಕ್ತಗಣ ಕೇಳುವುದೂ ಇಲ್ಲ. ಈ ಭಕ್ತರ ಭಜನೆಯನ್ನೇ ನಿಜವೆಂದು ಜನರು ನಂಬುವ ಅಪಾಯವೂ ಇರುವುದರಿಂದ ಒಂದಿಷ್ಟು ಸ್ಪಷ್ಟನೆಗಳನ್ನು ಕೊಡುವ ಅಗತ್ಯವಿದೆ.


ಜನರು ತಮ್ಮ ಶ್ರಮದ ದುಡಿಮೆಯಿಂದ ಬರುವ ಆದಾಯವನ್ನು ತಮ್ಮಲ್ಲೇ ಇಟ್ಟುಕೊಂಡು ತಮಗೆ ಬೇಕಾದಾಗ ಬೇಕಾದಂತೆ ಖರ್ಚುಮಾಡುತ್ತಾರೆ. ಅದು ಅವರ ಹಕ್ಕೂ ಕೂಡಾ. ಆದರೆ ನೀವು ಗಳಿಸಿದ್ದನ್ನೆಲ್ಲಾ ಬ್ಯಾಂಕಿಗೆ ಹಾಕಿ, ಆ ನಂತರ ಕಾರ್ಡಗಳ ಮೂಲಕ ವ್ಯವಹರಿಸಿ ಎಂದು ಕೇಂದ್ರ ಸರಕಾರ ಒತ್ತಾಯಿಸುತ್ತಿದೆ. ಆದರೆ ದಿನಕ್ಕೊಂದು ಆರ್ಥಿಕ ನೀತಿಯನ್ನು ಘೋಷಿಸುತ್ತಿರುವ ಈ ತುಘಲಕ್ ಸರಕಾರವನ್ನು ನಂಬುವುದಾದರೂ ಹೇಗೆ? ಎನ್ನುವುದು ಜನಸಾಮಾನ್ಯರ ಆತಂಕವಾಗಿದೆ. ಈಗಂತೂ ಬ್ಯಾಂಕಲ್ಲಿರುವ ನಮ್ಮದೇ ಹಣವನ್ನು ನಾವೇ ಬೇಕೆಂದಾಗ ಬೇಕಾದಷ್ಟು ತೆಗೆದುಕೊಳ್ಳಲು ಸ್ವಾತಂತ್ರ್ಯವಿಲ್ಲ. ಒಮ್ಮೆ ಇಪ್ಪತ್ನಾಲ್ಕು ಸಾವಿರ ವಾರಕ್ಕೆ ತೆಗೆದುಕೊಳ್ಳಿ ಎನ್ನುತ್ತಿದೆ ಸರಕಾರ ಹಾಗೂ ಆರ‍್ಬಿಐ. ಆದರೆ ಹಣವೇ ಇಲ್ಲಾ ನಾಳೆ  ಬನ್ನಿ ಎನ್ನುತ್ತಿದೆ ಬ್ಯಾಂಕ್. ಹಣ ಇದ್ದರೂ ದೊಡ್ಡ ಕ್ಯೂವಲ್ಲಿ ನಿಂತವರಿಗೆ  ಒಬ್ಬರಿಗೆ ಐದೋ ಆರೋ ಸಾವಿರ ರೂಪಾಯಿ ಕೊಟ್ಟು ಕಳುಹಿಸಲಾಗುತ್ತಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರಿಗೆ ಔಷಧಕ್ಕೂ ಕಾಸಿಲ್ಲದಂತಾಗಿದೆ ಜನರ ಪರಿಸ್ಥಿತಿ. ಹೇಗೋ ಕೊಟ್ಟಷ್ಟು ಹಣವನ್ನಾದರೂ ತೆಗೆದುಕೊಂಡು ಮನೆಗೆ ಅಗತ್ಯವಾಗಿ ಬೇಕಾದ ದಿನಸಿ ಸಾಮಾನುಗಳನ್ನಾದರೂ ಕೊಂಡುಕೊಳ್ಳಲು  ಹೋದರೆ ಎರಡು ಸಾವಿರದ ನೋಟಿಗೆ ಚಿಲ್ಲರೆ ಇಲ್ಲ ಎನ್ನುತ್ತಾರೆ ಅಂಗಡಿಯವರು. ಇಂತಹ ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿ ಇಡೀ ದೇಶದ ಜನತೆ ತತ್ತರಿಸುತ್ತಿದೆ. ದೇಶಕ್ಕೆ ಒಳಿತಾಗಬೇಕಾದರೆ ಸಂಕಷ್ಟ ಅನುಭವಿಸಲೇಬೇಕೆನ್ನುತ್ತದೆ ಸಂಘಪರಿವಾರದ ಅಂಗಗಳು ಹಾಗೂ ಅದರ ಬಾಲ ಚೇಲಾಗಳು. ಇನ್ನೊಂದು ತಿಂಗಳು ಕಳೆದರೆ ಇಡೀ  ದೇಶಕ್ಕೆ ಅಚ್ಚೇ ದಿನ್ ಬಂದೇ ಬಿಡುತ್ತದೆ ಎಂದು ಪುಂಗುವವರಿಗೇನೂ ಕಡಿಮೆಯಿಲ್ಲ. ಆದರೆ ಅಚ್ಚೆ ದಿನ್ ಜನಸಾಮಾನ್ಯರಿಗೆ ಬರಲು ಸಾಧ್ಯವೇ ಇಲ್ಲಾ. ಅದು ಏನಿದ್ದರೂ ದೇಶಿ ಹಾಗೂ ವಿದೇಶಿ ಬಂಡವಾಳಿಗರಿಗೆ, ಅಧಿಕಾರಶಾಹಿಗಳಿಗೆ ಹಾಗೂ ರಾಜಕಾರಣಿಗಳು ಹಾಗೂ ಅವರ ಪಟಾಲಂಗಳಿಗೆ ಬರುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ.


ದೇಶದ ಜನಸಾಮಾನ್ಯರು ಪರಿಶ್ರಮ ಪಟ್ಟು ಗಳಿಸಿದ ಎಲ್ಲಾ ಹಣವನ್ನೂ ಬ್ಯಾಂಕುಗಳಿಗೆ ಜಮಾ ಮಾಡುತ್ತಾರೆ ಎಂದುಕೊಳ್ಳೋಣ. ಆದರೆ ಬ್ಯಾಂಕುಗಳು ಹಾಗೆ ಜಮಾ ಆದ ಹಣವನ್ನು ಬ್ರಹತ್ ಸಾಲರೂಪದಲ್ಲಿ ಕೊಡುವುದು ಮತ್ತೆ ಬಂಡವಾಳಶಾಹಿಗಳಿಗೆ. ಭಾರತದ ನೂರಾರು ಕೋಟಿ ಜನರ ಹಣ ಬ್ಯಾಂಕುಗಳಲ್ಲಿ ಸಂಗ್ರಹಗೊಂಡು ಹೋಗಿ ಸೇರುವುದು ನೂರಾರು ದೊಡ್ಡ ಕಂಪನಿಗಳಿಗೆ. ಪ್ರತಿಯೊಬ್ಬರೂ ಹಾಕಿದ ಹನಿ ಹನಿ ಹಣದ ನೀರು ಹಳ್ಳವಾಗಿ ಹೊಳೆಯಾಗಿ ಹರಿಯುವುದು ಕಾಪೋರೇಟ್ ಕಂಪನಿಗಳ ಬೊಕ್ಕಸಕ್ಕೆ. ಉದಾಹರಣೆಗೆ.. ವಿಜಯ್ ಮಲ್ಯ ಎನ್ನುವವನಿಗೆ ಎಲ್ಲಾ ಬ್ಯಾಂಕುಗಳು ಹತ್ತು ಸಾವಿರ ಕೋಟಿಗೂ ಹೆಚ್ಚು ಹಣವನ್ನು ಸಾಲರೂಪದಲ್ಲಿ ತಕರಾರು ಎತ್ತದೇ ಕೊಡುತ್ತವೆ. ಹಾಗೆ ಸಾಲರೂಪದಲ್ಲಿ ಕೊಟ್ಟ ಜನರ ಹಣವನ್ನು ಮಲ್ಯನಂತವರು ನುಂಗಿ ನೀರುಕುಡಿದು ಸಂಪತ್ತು ಸಂಪನ್ಮೂಲಗಳ ಜೊತೆಗೆ ದೇಶವನ್ನೇ ಬಿಟ್ಟು ತೊಲಗುತ್ತಾರೆ. ಆ ನಂತರ ಬ್ಯಾಂಕುಗಳು ಅದು ವಸೂಲಿಯಾಗಲಾರದ ಸಾಲವೆಂದು ಘೋಷಿಸುತ್ತವೆ. ಅಂಬಾನಿ ಆದಾನಿ, ಟಾಟಾ, ಮಹೇಂದ್ರಗಳಂತಹ ಮೋದಿ ಹಾಗೂ ಬಿಜೆಪಿಯ ಅಂತರಂಗದ ಹತ್ತು ಮಿತ್ರರು ಹತ್ತು ಲಕ್ಷಕೋಟಿ ಹಣವನ್ನು ಬ್ಯಾಂಕುಗಳಿಂದ ಸಾಲ ಪಡೆದಿದ್ದಾರೆ. ದೇಶದ ಒಟ್ಟಾರೆ ರೈತಾಪಿ ಜನರ ಸಾಲ ಸೇರಿದರೂ ಹದಿನೈದು ಸಾವಿರ ಕೋಟಿ ಮೀರುವುದಿಲ್ಲ. ಹೀಗಾದರೆ ಈ ಬ್ಯಾಂಕುಗಳನ್ನು ನಂಬುವುದಾದರೂ ಹೇಗೆ? ಯಾವ ನಂಬಿಕೆಯ ಮೇಲೆ ನಮ್ಮ ಬೆವರಿನ ಪ್ರತಿಫಲವನ್ನು ಬ್ಯಾಂಕುಗಳಲ್ಲಿ ಇಡುವುದು. ಯಾವಾಗ ಯಾವ ಕಾಯಿದೆ ಬರುತ್ತದೆ, ಯಾವಾಗ ನಮ್ಮ ಹಣ ಬೇಕಾದಾಗ ನಮಗೆ ಸಿಗುವುದು ಅಸಾಧ್ಯವಾಗುತ್ತದೆ? ಎನ್ನುವ ಆತಂಕ ಇರುವಾಗ ಅದು ಹೇಗೆ ದುಡಿದ ಎಲ್ಲಾ ಹಣವನ್ನು ಬ್ಯಾಂಕುಗಳಲ್ಲಿ ಜಮಾ ಮಾಡಿ ಮೊಬೈಲ್ ಬ್ಯಾಂಕಿಂಗ್‌ನಲ್ಲಿ ವ್ಯವಹರಿಸುವುದು?. ನಾವು ದುಡಿದ ಹಣ ನಮ್ಮಲ್ಲೇ ಇರಲಿ. ಬೇಕಾದಾಗ ನಾವೇ ಖರ್ಚು ಮಾಡುತೇವೆ ಎಂದು ಜನರ ಒತ್ತಾಸೆಯಾಗಿದ್ದರೆ ಈ ಕ್ಯಾಶಲೆಸ್ ಒತ್ತಡಗಳೇಕೆ?

ಇಷ್ಟಕ್ಕೂ ಕ್ಯಾಶ್ಲೆಸ್ ವ್ಯವಹಾರ ಮಾಡುತ್ತಾ ಕಾರ್ಡಗಳನ್ನೋ  ಮೊಬೈಲ್ಗಳನ್ನೋ ಬಳಸೋಣವೆಂದರೆ ಅದೂ ಸಹ ಸಂಪೂರ್ಣವಾಗಿ ಸೇಫ್ ಅನ್ನುವುದರಲ್ಲಿ ಖಾತ್ರಿಯಿಲ್ಲ. ಪಾಕಿಸ್ತಾನದಲ್ಲೋ ಚೀನಾದಲ್ಲೋ ಇಲ್ಲವೇ ಜಗತ್ತಿನ ಯಾವುದೇ ಮೂಲೆಯಲ್ಲಿ  ಕುಳಿತ ಹ್ಯಾಕರ್‌ಗಳು ಯಾವುದೇ ಬ್ಯಾಂಕ್ ಅಕೌಂಟಗಳನ್ನು ಹ್ಯಾಕ್ ಮಾಡಿ ಹಣ ಲಪಟಾಯಿಸಬಹುದಾಗಿದೆ. ಅಪಾರ ಭದ್ರತೆಯ ಮಿಲಿಟರಿ ರಹಸ್ಯಗಳನ್ನೇ ಹ್ಯಾಕ್ ಮಾಡಿ ಕದಿಯುತ್ತಿರುವ ವಿದ್ಯುನ್ಮಾನದ ದಿನಗಳಲ್ಲಿ ಬ್ಯಾಂಕ್ ಅಕೌಂಟಗಳು ಸುಭದ್ರವೆಂದು ಹೇಳಲು ಬರುವುದಿಲ್ಲ. ಒಬ್ಬ ಶ್ರಮಿಕ ತನ್ನ ಜೀವಮಾನವೆಲ್ಲಾ ದುಡಿದು ಕೂಡಿಟ್ಟ ನಾಲ್ಕೈದು ಲಕ್ಷ ರೂಪಾಯಿಗಳನ್ನು ಬ್ಯಾಂಕಲ್ಲಿಟ್ಟಿದ್ದ ಎಂದುಕೊಳ್ಳೋಣ.  ಆತನ ಅಕೌಂಟಿಗೆ ಕನ್ನ ಹಾಕಿ ಇರುವ ಹಣವನ್ನು ಹ್ಯಾಕರ‍್ಗಳು ಕದ್ದಾಗ ಆತ್ಮಹತ್ಯೆಯೊಂದನ್ನು ಹೊರತು ಆತನಿಗೆ ಪಡಿಸಿ ಬೇರೆ ದಾರಿಗಳೇನಿರುತ್ತವೆ. ಹಾಗೇನಾದರೂ ಆದರೆ.. ತನ್ನದಲ್ಲದ ತಪ್ಪಿಗೆ ಕಳೆದುಕೊಂಡ ಹಣವನ್ನು ಸರಕಾರವಾಗಲಿ, ಬ್ಯಾಂಕಾಗಲಿ  ಇಲ್ಲವೇ ಆರ್‌ಬಿಐ ಆಗಲಿ ಭರಿಸುತ್ತದೆಯಾ? ವಂಚನೆಕೋರರು ನಕಲಿ ಕಾರ್ಡಗಳನ್ನು ಬಳಸಿಯೋ ಇಲ್ಲವೇ ಜನಸಾಮಾನ್ಯರ ಪಿನ್ ನಂಬರ್ ಕದ್ದು ಹಣವನ್ನು ಲಪಟಾಯಿಸಿದಾಗ ಆದ ನಷ್ಟವನ್ನು ಕಟ್ಟಿಕೊಡುವವರು ಯಾರು? ಎಲ್ಲಿವರೆಗೂ ಬ್ಯಾಂಕಲ್ಲಿ ಇಡುವ ಹಣಕ್ಕೆ ಸಂಪೂರ್ಣ ಭದ್ರತೆ ಹಾಗೂ ನಷ್ಟ ಪರಿಹಾರವನ್ನು ಬ್ಯಾಂಕು ಇಲ್ಲವೇ ಸರಕಾರ ವದಗಿಸುವುದಿಲ್ಲವೋ ಅಲ್ಲಿವರೆಗೂ ಸಂಪೂರ್ಣ ನಂಬಿಕೆಯೊಂದಿಗೆ ಇರುವ ಎಲ್ಲಾ ಹಣವನ್ನು ಬ್ಯಾಂಕಲ್ಲಿ ಇಡಲು ದುಡಿಯುವ ವರ್ಗದವರಿಗೆ ಸಾಧ್ಯವಿಲ್ಲ. ಯಾವಾಗ ಬ್ಯಾಂಕುಗಳು ಹಾಗೂ ಸರಕಾರಗಳ ಮೇಲೆ ಜನರಿಗೆ ನಂಬಿಕೆ ಇಲ್ಲವೋ  ಅಲ್ಲಿವರೆಗೂ ದುಡಿದ ಹಣವನ್ನು ತಮ್ಮಲ್ಲೇ ಇಟ್ಟುಕೊಳ್ಳುತ್ತಾರೆ, ಇಲ್ಲವೇ ಆಪತ್ಕಾಲಕ್ಕೆ ಇರಲಿ ಎಂದು ಸಾಧ್ಯವಾದಷ್ಟು ಚಿನ್ನವನ್ನು ಕೊಂಡುಕೊಳ್ಳುತ್ತಾರೆ.

ಹೌದು.... ಡೆಬಿಟ್ ಕಾರ್ಡು, ಕ್ರೆಡಿಟ್ ಕಾರ್ಡು, ಎಟಿಎಂ, ಪೇಟಿಎಂ, ಇ ವ್ಯಾಲೆಟ್ ಅಂತೆಲ್ಲಾ ತರಾವರಿ ಬ್ಯಾಂಕಿಂಗ್ ಬಳಸಿ ಕ್ಯಾಶಲೆಸ್ ವಹಿಮಾಟನ್ನು ಆರಂಭಿಸಿ ಎಂದು ಮೋದಿ ಸಾಹೇಬರು ಹೇಳ್ತಿದ್ದಾರಲ್ಲಾ.. ಆದರೆ ಇವನ್ನೆಲ್ಲಾ ಬಳಿಸಿದಾಗ ಸಂಬಂಧಪಟ್ಟ ಸರ್ವಿಸ್ ಪ್ರೊವೈಡ್ ಕಂಪನಿಗಳು ಹಾಕುವ ಜಾರ್ಜನ್ನು ಸರಕಾರ ಕಟ್ಟುತ್ತಾ? ಅದನ್ನು ನಾವೇ ಕಟ್ಟಬೇಕಲ್ಲಾ. ಹೀಗೆ ದಿನವಹಿ ನಡೆಯುವ ಅದೆಷ್ಟೋ ಕೋಟಿ ಟ್ರಾನ್ಜಾಂಕ್ಷನ್ ಗಳಿಂದ ಹರಿದು ಬರುವ ಸರ್ವಿಸ್ ಚಾರ್ಜಸ್ ಸರಕಾರಕ್ಕಂತೂ ಹೋಗೋದಿಲ್ಲ. ಬದಲಾಗಿ ಖಾಸಗಿ ಬ್ಯಾಂಕುಗಳು, ಕಾರ್ಪೋರೇಟ್ ಕಂಪನಿಗಳ ಬೊಕ್ಕಸಕ್ಕೆ ಹರಿದು ಹೋಗುತ್ತದಲ್ಲಾ.. ಈ ಕ್ಯಾಶಲೆಸ್ ವ್ಯವಹಾರದಿಂದ ಯಾರಿಗೆ ಹೆಚ್ಚು ಲಾಭ ಹಾಗೂ ಯಾರಿಗೆ ನಷ್ಟ ಎನ್ನುವುದನ್ನು ತಿಳಿದುಕೊಳ್ಳಲು ಅತೀ ಹೆಚ್ಚು ಬುದ್ದಿಯನ್ನು ಖರ್ಚುಮಾಡುವ ಅಗತ್ಯವೇ ಇಲ್ಲ.



ನೋಟು ನಿಷೇಧವೆನ್ನುವುದು ದಬ್ಬಾಳಿಕೆಯ ಕ್ರಮ. ಇದು ಜನಸಾಮಾನ್ಯರ ನಂಬಿಕೆಯನ್ನೇ ಬುಡಮೇಲುಗೊಳಿಸಿದೆ ಎಂದು ನೊಬೆಲ್ ಪುರಸ್ಕೃತ ಆರ್ಥಿಕ ತಜ್ಞ ಅಮರ್ತ್ಯ ಸೇನ್ ಹೇಳಿದ್ದಾರೆ. ನೋಟು ರದ್ದತಿಯಿಂದ ಬ್ರಷ್ಟಾಚಾರ ನಿಯಂತ್ರಿಸಲಾಗದು, ದೇಶದಲ್ಲಿರುವ ಒಟ್ಟಾರೆ ಕಪ್ಪು ಹಣದಲ್ಲಿ ಕೇವಲ 6 ಪ್ರತಿಶತ ಮಾತ್ರ ನಗದು ರೂಪದಲ್ಲಿದೆ. ಇಂತಹ ಕ್ರಮದಿಂದಾಗಿ ಕೇವಲ ನೋಟು ಹಾಗೂ ಬ್ಯಾಂಕ್ ಅಕೌಂಟ್ ಮಾತ್ರವಲ್ಲ ಇಡೀ ನಂಬಿಕೆ ಆಧಾರಿತ ಅರ್ಥವ್ಯವಸ್ಥೆಯನ್ನೇ ಕಡೆಗಣಿಸಲಾಗುತ್ತದೆ. ಇದು ನಂಬಿಕೆ ಆಧಾರಿತ ವಹಿವಾಟಿಗೆ ನೀಡಿದ ದೊಡ್ಡ ಪೆಟ್ಟು. ಕಳೆದ 20 ವರ್ಷಗಳಿಂದ ದೇಶ ವೇಗವಾಗಿ ಅಭಿವೃದ್ದಿ ಸಾಧಿಸುತ್ತಿದೆ. ಇದು ಪರಸ್ಪರ ನಂಬಿಕೆ ಹಾಗೂ ವಿಶ್ವಾಸದಿಂದ ನಡೆಯುತ್ತಿರುವ ವಹಿವಾಟಿನಿಂದ ಸಾಧ್ಯವಾಗಿದೆ. ಆದರೆ ಈಗ ನೋಟಿನ ಮೇಲೆ ಜನಸಾಮಾನ್ಯರ ನಂಬಿಕೆಯೇ ಹೊರಟುಹೋಗುವಂತೆ ಮಾಡಿದೆ. ಸರಕಾರ ತಾನು ಬಿಡುಗಡೆ ಮಾಡಿದ ನೋಟಿನಲ್ಲಿ ನಾವಿಷ್ಟು ಮೊತ್ತದ ಹಣವನ್ನು ನೀಡುತ್ತಿದ್ದೇವೆ ಎಂದು ವಾಗ್ದಾನ ನೀಡಿ, ಏಕಾಏಕಿ ಆ ನೋಟಿಗೆ ಬೆಲೆ ಇಲ್ಲ ಎಂದು ಘೋಷಿಸುವುದು ದಬ್ಬಾಳಿಕೆಯಾಗಿದೆ. ಇದು ಸಾಮಾನ್ಯರು ನೋಟಿನ ಮೇಲೆ ಭರವಸೆ ಕಳೆದುಕೊಳ್ಳುವಂತೆ ಮಾಡಿದೆ ಎಂದು ಖಾಸಗಿ  ಸುದ್ದಿವಾಹಿನಿಗೆ ಕೊಟ್ಟ ಸಂದರ್ಶನದಲ್ಲಿ ಅಮರ್ತ್ಯ ಸೇನ್ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆರ್ಥಿಕ ತಜ್ಞರು ಹೇಳಿದ ಮಾತುಗಳಲ್ಲಿ ವಿಶ್ವಾಸವಿಡದ ಭಕ್ತಗಣ ಆರ್ಥಿಕ ಸಿದ್ದಾಂತದ ತಲೆಬಾಲ ಗೊತ್ತಿಲ್ಲದಿದ್ದರೂ ಪಂಚೇಂದ್ರಿಯಗಳನ್ನು ಕಳೆದುಕೊಂಡು ತಮ್ಮ ಅಧಿನಾಯಕ ಮೋದಿಯ ಅತಾರ್ಕಿಕ ಆರ್ಥಿಕ ನೀತಿಯ ಕುರಿತು ಭಜನೆ ಮಾಡುತ್ತಿದ್ದಾರೆ.

ಸುಖಾ ಸುಮ್ಮನೆ ನೂರಿಪ್ಪತೈದು ಕೋಟಿ ಭಾರತೀಯರ ಮೇಲೆ ಹೀಗೆ ಆರ್ಥಿಕ ದಬ್ಬಾಳಿಕೆ ಮಾಡಿ ಇಡೀ ದೇಶಕ್ಕೆ ದೇಶವನ್ನೇ ಆರ್ಥಿಕ ತುರ್ತು ಪರಿಸ್ಥಿತಿಗೆ ದೂಡುವ ಬದಲಾಗಿ ಎಲ್ಲಾ ಪಕ್ಷಗಳನ್ನು ಸಾಕಿ ಸಲಹುತ್ತಿರುವ ಒಂದು ಸಾವಿರ ಶ್ರೀಮಂತರು ಹಾಗೂ ಮೋದಿ ಅಂತರಂಗದ ಹತ್ತು ಕಂಪನಿಗಳ ಮೇಲೆ ದಾಳಿ ಮಾಡಿಸಿದ್ದರೆ ಸಾಕಿತ್ತು ಇಡೀ ದೇಶದ ಜನತೆ ಮೋದಿಗೆ ಜೈಕಾರ ಹೇಳುತ್ತಿತ್ತು. ದೇಶದ ಕಪ್ಪುಹಣ ಹೆಚ್ಚಾಗಿರುವುದು ಅಧಿಕಾರಶಾಹಿಗಳಲ್ಲಿ. ಸಂದೇಹ ಬಂದ ಕರಪ್ಟ್ ಅಧಿಕಾರಿಗಳ ಮನೆಗೆ ತೆರಿಗೆ ಇಲಾಖೆ ದಾಳಿಮಾಡಿದ್ದರೆ ಸಾಕಿತ್ತು ನಮೋ ಬ್ರಿಗೇಡ್‌ಗೆ ಉಘೇ ಎನ್ನಬಹುದಿತ್ತು. ಆದರೆ ಹಾಗೆ ಮಾಡದೇ ಹದ್ದುಗಳನ್ನು ಸಂರಕ್ಷಿಸಿ ಗುಬ್ಬಿಗಳ ಮೇಲೆ ಬ್ರಹ್ಮಾಸ್ತ್ರ ಬಿಡುವ ಕೆಲಸವನ್ನು ಮೋದಿ ಮಾಡಿದರು. ಇದು ಯಾವಾಗ ಜನರ ಆಕ್ರೋಶಕ್ಕೆ ಕಾರಣವಾಯಿತೋ ಆಗ.. ಬೇರೆ ತಂತ್ರಗಾರಿಕೆ ರೂಪಿಸಲಾಯಿತು. ನವೆಂಬರ್ ೮ರ ನಂತರದ ಬ್ಯಾಂಕಿನ ವಹಿವಾಟಿನ ಲೆಕ್ಕ ಕೊಡಲು ಮೋದಿ ಸಾಹೇಬರು ತಮ್ಮ ಪಕ್ಷದ ಶಾಸಕ ಸಂಸದರಿಗೆ ಆದೇಶಿಸಿ ದೇಶದ ಜನರ ಕಣ್ಣಿಗೆ ಮಣ್ಣೆರಚುವ ಬದಲಾಗಿ ಮೋದಿ  ಸರಕಾರ ಆಡಳಿತಕ್ಕೆ ಬಂದ ದಿನದಿಂದ ಮಾಡಿದ ವಹಿವಾಟಿನ ಲೆಕ್ಕವನ್ನು ಕೇಳಿದ್ದರೆ ಇಡೀ ದೇಶಕ್ಕೆ ದೇಶವೇ ಮೋದಿ ಜಿಂದಾಬಾದ್ ಎನ್ನಬಹುದಾಗಿತ್ತು. ಸಂಘಪರಿವಾರವನ್ನು ಹಾಗೂ ಅದರ ಮಿತ್ರರನ್ನೆಲ್ಲ ಮೊದಲೇ ಆರ್ಥಿಕವಾಗಿ ಸೇಫಾಗಿರಲು ಬೇಕಾದಷ್ಟು ಅವಕಾಶಮಾಡಿಕೊಟ್ಟು ತದನಂತರ ಇಡೀ ದೇಶದ ಮೇಲೆ ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಹೇರಿದ ಆಧುನಿಕ ಹಿಟ್ಲರ್ ಮೋದಿಯ ನಡೆಯನ್ನು ಸಮರ್ಥಿಸಿಕೊಳ್ಳಲು ನಿಜವಾದ ದೇಶಭಕ್ತರಿಗೆ ಸಾಧ್ಯವೇ ಇಲ್ಲ. ನಕಲಿ ದೇಶಭಕ್ತರಿಗೆ ಮುಂಬರುವ ಅಪಾಯದ ಅರಿವಿಲ್ಲ.


ಇಷ್ಟಕ್ಕೂ ದೇಶಾದ್ಯಂತ ಇರುವ ಕಪ್ಪು ಹಣದ ಅರ್ಧದಷ್ಟನ್ನಾದರೂ ಮೋದಿ ಸರಕಾರ ರಿಕವರಿ ಮಾಡಿಕೊಳ್ಳದೇ ಹೋದರೆ ದೇಶದ ಜನರ ಕ್ಷಮೆಕೋರಿ ರಾಜೀನಾಮೆ ಕೊಟ್ಟು ಹೋಗುತ್ತೇನೆಂದು ಘೊಷಿಸುವುದುತ್ತಮ. ಕಪ್ಪು ಹಣ ರಿಕವರಿ ಆಗದೇ ಇದ್ದಲ್ಲಿ ಇಡೀ ಮೋದಿಯ ಹಿಂಬಾಲಕ ಭಕ್ತರು ಸಾರಾಸಗಟಾಗಿ ತಮ್ಮ ಅತಿರೇಕದ ಭಜನೆಯನ್ನು ಬಿಟ್ಟು ಆಳುವ ವರ್ಗಗಳ ವಿರುದ್ಧ ನಿಂತು ಜನಸಾಮಾನ್ಯರ ಪರವಾಗಿ ಮಾತಾಡುತ್ತೇವೆ ಎಂದಾದರೂ ನಿರ್ಧರಿಸಬೇಕು. ಆದರೆ ಇದೆಲ್ಲಾ ಸಾಧ್ಯವೂ ಇಲ್ಲಾ. ಅವರಿಗೆ ಬೇಕಾಗೂ ಇಲ್ಲ. ದೇಶದ ಜನರನ್ನು ಸದಾ ಒಂದಿಲ್ಲೊಂದು ಭ್ರಮೆಯಲ್ಲಿಟ್ಟು, ದೇಶಭಕ್ತಿಯ ಉನ್ಮಾದವನ್ನು ಹುಟ್ಟಿಸಿ ಅಂತಿಮವಾಗಿ ಪ್ಯಾಸಿಸ್ಟ್ ಆಡಳಿತವನ್ನು ಹೇರುವ ಮೂಲಕ ಸನಾತನ ಮನುಸ್ಮೃತಿ ಆಡಳಿತವನ್ನು ದೇಶಾದ್ಯಂತ ತರಬೇಕು ಎನ್ನುವುದೇ ಸಂಘಪರಿವಾರದ ಹಿಡನ್ ಅಜೆಂಡಾ ಆಗಿದೆ. ಅದಕ್ಕಾಗಿ  ಈ ಎಲ್ಲಾ ಸರ್ಕಸ್ ಮಾಡಲಾಗುತ್ತಿದೆ. ಆದರೆ.. ಅದೆಷ್ಟೇ ದೌರ್ಜನ್ಯ ಎಸಗಿದರೂ ಮತಾಂಧ ಹಿಟ್ಲರನಿಗಾದ ಗತಿಯೇ ಈ ಪ್ಯಾಸಿಸ್ಟ್ ಸಂತತಿಗೂ ಆಗುವುದು ಖಂಡಿತ. ದೌರ್ಜನ್ಯ ಹೆಚ್ಚಿದಷ್ಟೂ ದಂಗೆ ತೀವ್ರಗೊಳ್ಳುತ್ತದೆ ಎನ್ನುವ ಜಾಗತಿಕ ಸತ್ಯದ ಅರಿವು ಆಗುವವರೆಗೂ ಈ ಮಾತಾಂಧರ ಅಟ್ಟಹಾಸ ನಿಲ್ಲುವುದಿಲ್ಲ. ಜನರನ್ನು ಸುದೀರ್ಘ ಕಾಲ ಭ್ರಮೆಯಲ್ಲಿಟ್ಟು ಮೋಸಗೊಳಿಸಲು ಸಾಧ್ಯವಿಲ್ಲ ಎನ್ನುವ ತಿಳುವಳಿಕೆ ಬರುವಷ್ಟರಲ್ಲಿ ಬಹುಸಂಖ್ಯಾತ ಜನರೇ ಸನಾತನಿಗಳಿಗೆ ಪಾಠ ಕಲಿಸುತ್ತಾರೆ ಎನ್ನುವುದರಲ್ಲಿ ಸಂದೇಹವೇ ಇಲ್ಲಾ. ಆದರೆ.. ಅಲ್ಲಿವರೆಗೂ ಆಗುವ ಜೀವ ಹಾನಿ ಹಾಗೂ ಸಮಾಜದ ಮೇಲಾಗುವ ದುಷ್ಪರಿಣಾಮಗಳು ಮಾತ್ರ ಘೋರ.

-ಶಶಿಕಾಂತ ಯಡಹಳ್ಳಿ  
     



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ