ಅಲ್ಲಮನೆಂಬ ಮಹಾ ಬೆರಗಿನ ಬೆಳಗನ್ನು
ಅಖಂಡವಾಗಿ ಹಿಡಿದಿಡಲು ಅಸಾಧ್ಯವಾದರೂ ಅದರ ಬಿಂಬವನ್ನಾದರೂ ನೋಡುವ ಭಾಗ್ಯವನ್ನು ‘ಅಲ್ಲಮ’ ಚಲನಚಿತ್ರ ದೊರಕಿಸಿಕೊಟ್ಟಿದೆ.
ಮೂರು ವರ್ಷಗಳ ಕಾಲ ಅಲ್ಲಮನ ಕುರಿತು ಅಧ್ಯಯನ ಮಾಡಿ ಚಿತ್ರಕಥೆ ಮಾಡಿದ ಟಿ.ಎಸ್.ನಾಗಾಭರಣರವರು ಐವತ್ತು
ಸಲ ಸ್ಕ್ರಿಪ್ಟನ್ನು ತಿದ್ದಿತೀಡಿ ಬರೆದು ಅಲ್ಲಮನನ್ನು ತಮಗೆ ಸಿಕ್ಕಷ್ಟು ದಕ್ಕಿಸಿಕೊಂಡು ಬೆಳ್ಳಿ
ಪರದೆಯ ಮೇಲೆ ಚಿತ್ತಾರಗೊಳಿಸಿದ್ದಾರೆ. ಸಂತ ಶಿಶುನಾಳ ಷರೀಫ್, ಮೈಸೂರು ಮಲ್ಲಿಗೆ, ಕಲ್ಲರಳಿ ಹೂವಾಗಿಯಂತಹ ಕೆಲವಾರು ಕ್ಲಾಸಿಕ್ ಚಿತ್ರಗಳನ್ನು ನಿರ್ದೇಶಿಸಿದ
ನಾಗಾಭರಣರವರು ಅಲ್ಲಮ ಚಿತ್ರದ ಮೂಲಕ ಮತ್ತೊಂದು ಕ್ಲಾಸಿಕ್ ಎನ್ನಬಹುದಾದ ಸಿನೆಮಾವನ್ನು ಕನ್ನಡಿಗರಿಗೆ
ಕೊಟ್ಟಿದ್ದಾರೆ. ಶ್ರೀಹರಿ ಖೋಡೆಯವರ ಯಜಮಾನ ಬ್ಯಾನರಿನಲ್ಲಿ ತಯಾರಾದ “ಅಲ್ಲಮ” ಜನವರಿ 26 ರಂದು ರಾಜ್ಯಾದ್ಯಂತ
ಬಿಡುಗಡೆಗೊಂಡಿದೆ.
ಯಾರ ಹಿಡಿತಕ್ಕೂ ಸಂಪೂರ್ಣವಾಗಿ
ದಕ್ಕದ ಸಂಕೀರ್ಣ ವ್ಯಕ್ತಿತ್ವದ, ವಿಶಿಷ್ಟ ತರ್ಕದ ಅಲ್ಲಮನ ಕುರಿತು ಸಿನೆಮಾ ಮಾಡುವುದು ಸಾಹಸದ ಕೆಲಸ.
ಯಾರೂ ಮಾಡಲಾಗದ ಪ್ರಯತ್ನವನ್ನು ಅಪಾರ ಬದ್ಧತೆಯಿಂದ ಮಾಡಿದ ನಾಗಾಭರಣ ಹಾಗೂ ಅವರ ತಂಡ ನಿಜಕ್ಕೂ ಅಭಿನಂದನೀಯ.
ಅಲ್ಲಮ ದೊಡ್ಡ ಪರದೆಯ ಮೇಲೆ ಹೇಗೆ ಮೂಡಿಬರಬಹುದು ಎನ್ನುವ ಕಾತುರ ಜನರಲ್ಲಿತ್ತು. ಆದರೆ.. ನಿರೀಕ್ಷೆ
ಅತಿಯಾಗಿದ್ದಕ್ಕೋ ಏನೋ ಒಂದಿಷ್ಟು ನಿರಾಸೆಯಾಗಿದ್ದಂತೂ ಸುಳ್ಳಲ್ಲ. ಸೂರ್ಯಪ್ರಭೆಯನ್ನು ಬೆಳಕಿಂಡಿಯಲ್ಲಿ
ಹಿಡಿದು ತೋರಿಸಿರುವ ಈ ಪ್ರಯತ್ನ ಅದ್ಯಾಕೋ ನೋಡುಗರಿಗೆ ದಕ್ಕಲಿಲ್ಲ. ಯಾಕೆಂದರೆ.. ಇಡೀ ಸಿನೆಮಾದಲ್ಲಿ
ಅಲ್ಲಮನ ಬದುಕಿನ ಕೆಲವಾರು ಪ್ರಮುಖ ಸನ್ನಿವೇಶಗಳನ್ನು ತೋರಿಸಲಾಗಿದೆ. ಬಹಷಃ ಅಲ್ಲಮನ ಬಗ್ಗೆ ಓದಿಕೊಂಡವರಿಗೆ
ಹಾಗೂ ಅಲ್ಲಮನ ಕುರಿತು ಬಂದ ನಾಟಕಗಳನ್ನು ನೋಡಿದವರಿಗೆ ಇವೆಲ್ಲಾ ಗೊತ್ತಿರುವ ಸನ್ನಿವೇಶಗಳೇ ಆಗಿವೆ.
ಹೊಸದೇನನ್ನೂ ಕಟ್ಟಿಕೊಡಲಾಗದ್ದಕ್ಕೋ, ಕೇವಲ ಕೆಲವು ಘಟನೆಗಳನ್ನು ಕಾಲಾಂತರದಲ್ಲಿ ತೋರಿಸಿದ್ದಕ್ಕೋ
ಅಲ್ಲಮ ನೋಡುಗರ ಬುದ್ದಿಗೂ ಮುಟ್ಟಲಿಲ್ಲಾ.. ಮನಸಿಗೂ ತಾಕಲಿಲ್ಲ. ಕೇವಲ ಸೆಟ್ ಹಾಗೂ ಕ್ಯಾಮರಾದ ವೈಭವೀಕರಣಗಳು
ಮಾತ್ರ ನೋಡುಗರನ್ನು ಗಮನ ಸೆಳೆದು ಅಲ್ಲಮನ ಕಥೆ ಹಾಗೂ ಕಥಾನಕವನ್ನು ನೀರಸಗೊಳಿಸಿತು. ಸೆಟ್ ಲೊಕೇಶನ್
ಹಾಗೂ ಕ್ಯಾಮರಾ ತಂತ್ರಗಳಿಗೆ ಕೊಟ್ಟಷ್ಟೇ ಮಹತ್ವವನ್ನು ಚಿತ್ರಕತೆ ಹಾಗೂ ನಿರೂಪನೆಗಳತ್ತಲೂ ಕೊಟ್ಟಿದ್ದರೆ
ಸಾರ್ವಕಾಲಿಕ ಸಿನೆಮಾವೊಂದು ಕನ್ನಡಿಗರಿಗೆ ದಕ್ಕುತ್ತಿತ್ತು.
ಅಲ್ಲಮನ ಬಾಲ್ಯ, ಆತನ ಮದ್ದಲೆ
ಕೌಶಲ, ಗುರುಕುಲ ಅಭ್ಯಾಸ, ಯೌವನ, ಮಾಯೆ ಪ್ರಕರಣ, ಲೋಕಸಂಚಾರ, ಕಲ್ಯಾಣ ಪ್ರವೇಶ ಹಾಗೂ ಶ್ರೀಶೈಲದತ್ತ
ಅಂತಿಮ ಚಿತ್ತ.. ಹೀಗೆ ಅಲ್ಲಮನ ಬದುಕಿನ ಚದುರಿದ ಚಿತ್ರಗಳನ್ನು ಸಿನೆಮಾದಲ್ಲಿ ಕಟ್ಟಿಕೊಡಲಾಗಿದೆ.
ಆದರೆ.. ಯಾವುದಕ್ಕೂ ನ್ಯಾಯಸಲ್ಲಿಸಲು ಸಾಧ್ಯವಾಗಿಲ್ಲದಿರುವುದೇ ಈ ಸಿನೆಮಾದ ಪ್ರಮುಖ ದೌರ್ಬಲ್ಯ. ಅಲ್ಲಮನನ್ನು
ವೈಭವೀಕರಿಸಲು ಹೋಗಿ ಬಸವಣ್ಣನ ಪಾತ್ರ ಹಾಗೂ ಪಾತ್ರಧಾರಿಯನ್ನು
ದುರ್ಬಲಗೊಳಿಸಲಾಗಿದೆ. ಬಸವಣ್ಣನನ್ನು ಪೋಷಕ ಪಾತ್ರಕ್ಕೆ ಸೀಮಿತಗೊಳಿಸಿ ಅಸಹಾಯಕನನ್ನಾಗಿ ಚಿತ್ರಿಸಿದ್ದು
ಬಸವಣ್ಣನವರಿಗೆ ಮಾಡಿದ ಅವಮಾನವೇ ಆಗಿದೆ. ಒಂದು ಪಾತ್ರದ ಎತ್ತರವನ್ನು ಹೆಚ್ಚಿಸಲು ಇನ್ನೊಂದು ಪಾತ್ರವನ್ನು
ಕುಬ್ಜಗೊಳಿಸಬೇಕಾದ ಅಗತ್ಯವಿರಲಿಲ್ಲ. ಅದೆಷ್ಟೇ ಅಲ್ಲಮನ ಬಗ್ಗೆ ಹೊಗಳಿದರೂ ಬಸವಣ್ಣನವರ ಮುಂದೆ ಅಲ್ಲಮ
ಏನೂ ಅಲ್ಲವೆನ್ನುವುದು ಬಸವಣ್ಣನವರ ಸಾಮಾಜಿಕ ಪರಿವರ್ತನಾ ಸಿದ್ದಾಂತಗಳನ್ನು ಅವಲೋಕಿಸಿದಾಗ ತಿಳಿಯದೇ
ಇರದು. ಬಸವಣ್ಣನವರ ವಾಸ್ತವವಾದಿ ಲೌಕಿಕ ಸಿದ್ದಾಂತಕ್ಕೂ ಅಲ್ಲಮನ ಅವಾಸ್ತವವಾದ ಅಲೌಕಿಕ ಸಿದ್ದಾಂತಕ್ಕೂ
ಅಜಗಜಾಂತರ ವ್ಯತ್ಯಾಸವಿದೆ. ಬಸವಣ್ಣನವರ ಕಾಯಕ ಹಾಗೂ ದಾಸೋಹ ತತ್ವಗಳೆಲ್ಲಿ ಅಲ್ಲಮನ ಕಾಯಕರಹಿತ ತರ್ಕಸಿದ್ದಾಂತಗಳೆಲ್ಲಿ.
ಅಲ್ಲಮನನ್ನು ಅತೀಕರಣ ಮಾಡಿದ್ದಲ್ಲಿ ಅದು ನಿರ್ದೇಶಕರ ಅಲ್ಲಮ ಪ್ರೀತಿಯನ್ನು ತೋರಬಹುದು. ಆದರೆ ಅದಕ್ಕಾಗಿ ಬಸವಣ್ಣರವರಂತಹ ಮಹಾವ್ಯಕ್ತಿಗಳನ್ನು ನಿರ್ಲಕ್ಷಿಸುವ
ಅಗತ್ಯವಿರಲಿಲ್ಲ. ಇದು ಬಸವಣ್ಣನವರ ಅನುಯಾಯಿಗಳಲ್ಲಿ ಅಸಮಾಧಾನವನ್ನು ಹುಟ್ಟಿಸಿದ್ದಂತೂ ಸುಳ್ಳಲ್ಲ.
ಜನರಿಂದ ದೂರವಿದ್ದು, ಕೌಟುಂಬಿಕ ವ್ಯವಸ್ಥೆಯಿಂದ ವೈರಾಗ್ಯಹೊಂದಿ ಆತ್ಮದರ್ಶನದ ಸಿದ್ದಾಂತವನ್ನು ಹೇಳಿದವರಿಗಿಂತಲೂ
ಜನರ ಜೊತೆಗಿದ್ದು ಅವರ ಕಷ್ಟಸುಖಗಳಲ್ಲಿ ಭಾಗಿಯಾಗಿ ಸನಾತನವಾದಿ ಶೋಷಣೆಯಿಂದ ಜನರನ್ನು ಮುಕ್ತಗೊಳಿಸಲು
ಪ್ರಯತ್ನಿಸಿದ ಬಸವಣ್ಣನಂತವರು ಬಹಳ ಪ್ರಮುಖರಾಗುತ್ತಾರೆ.
ಇಡಿಯಾಗಿ ಅಲ್ಲಮನನ್ನು ಹಿಡಿದಿಡಲು ಸಾಧ್ಯವಾಗದ್ದರಿಂದ ಬಿಡಿಬಿಡಿಯಾಗಿ ಕಟ್ಟಿಕೊಡುವ
ಪ್ರಯತ್ನ ಮಾಡಲಾಗಿದೆ. ಹಾಗೆ ಮಾಡುವಾಗಲೂ ಹಲವಾರು ತರ್ಕಾತೀತ ಅಂಶಗಳು ಸಿನೆಮಾದಲ್ಲಿ ಹಾಸುಹೊಕ್ಕಾಗಿವೆ.
ಕೇವಲ ರಂಜನೆಗಾಗಿ ಅಲ್ಲಮನನ್ನು ಬಳಸಲಾಯಿತೋ ಅಥವಾ ಅಲ್ಲಮನನ್ನು ಪ್ಯಾಂಟಸೈಸ್ ಗೊಳಿಸಿ ಜನರನ್ನು ಥ್ರಿಲ್ಗೊಳಿಸಲು
ಪ್ರಯತ್ನಿಸಲಾಯಿತೋ ಗೊತ್ತಿಲ್ಲಾ.. ಆದರೆ ಯಾವ ತರ್ಕಕ್ಕೂ ದಕ್ಕದ ಅಲ್ಲಮನಂತೆಯೇ ಅಲ್ಲಮನ ಕುರಿತ ಸಿನೆಮಾ
ಕೂಡಾ ತರ್ಕಾತೀತವಾಗಿದೆ. ಈ ವಾದಕ್ಕೆ ಪೂರಕವಾಗಿ ಬಹುರೂಪಿ ಶಿವಯ್ಯನ ಪಾತ್ರವನ್ನು ನೋಡಬಹುದಾಗಿದೆ.
ಬಹುರೂಪಿ ಶಿವಯ್ಯ ಒಬ್ಬ ವೇಷಗಾರನಾಗಿದ್ದು ಬೇರೆ ಬೇರೆಯವರ ವೇಷ ಹಾಕಿ ನಟಿಸುವುದರಲ್ಲಿ ನಿಸ್ಸೀಮ ಕಲಾವಿದ
ಎನ್ನುವುದು ಶರಣ ಸಾಹಿತ್ಯವನ್ನು ಓದಿಕೊಂಡವರಿಗೆ ಗೊತ್ತಿರುವ ವಿಷಯವೇ. ಆದರೆ.. ಈ ಪಾತ್ರವನ್ನು ಈ
ಸಿನೆಮಾದಲ್ಲಿ ಬರೀ ವೇಷಧಾರಿಯನ್ನಾಗಿ ತೋರಿಸದೇ ಶಿವಯ್ಯನನ್ನು ಇಚ್ಚಾದಾರಿಯಾಗಿ ರೂಪಾಂತರಗೊಳಿಸುವ
ಅತಿಮಾನುಷನನ್ನಾಗಿ ಚಿತ್ರಿಸಲಾಗಿದೆ. ಹಾಗೂ ಅಲ್ಲಮನ ರೂಪ ತಾಳಿ ಮಾಯೆಯ ಜೊತೆಗೆ ಸರಸಕ್ಕೆ ತೊಡಗುವ
ಶಿವಯ್ಯನ ಕಲ್ಪನೆ ಬಹುಷಃ ಯಾವ ಹರಹರಣ ರಗಳೆಯಲ್ಲೂ ಇಲ್ಲಾ.. ಇದು ಸಂಪೂರ್ಣವಾಗಿ ನಾಗಾಭರಣರವರ ಊಹೆಯಾಗಿದ್ದು
ಅಲ್ಲಮನ ಇತಿಹಾಸಕ್ಕೆ ಹೊಸದಾಗಿ ಸೇರ್ಪಡೆಯಾಗಿದೆ. ಇಚ್ಚಾಧಾರಿ ನಾಗಿನ್ ಕುರಿತು ಸಿನೆಮಾ ಹಾಗೂ ಸೀರಿಯಲ್ಗಳನ್ನು
ಬೇಕಾದಷ್ಟು ಸೃಷ್ಟಿಸಲಾಗಿದೆ. ಆದರೆ ಇಚ್ಚಾಧಾರಿ ವೇಷಧಾರಿಯನ್ನು ಸೃಷ್ಟಿಸಿ ಈ ಸಿನೆಮಾದಲ್ಲಿ ಪ್ಯಾಂಟಸೈಸ್
ಮಾಡಿ ಕ್ಲಾಸಿಕ್ ಸಿನೆಮಾದಲ್ಲಿ ಕಮರ್ಸಿಯಲ್ ಎಫೆಕ್ಟ್ ಕೊಡುವ ಪ್ರಯತ್ನಮಾಡಲಾಗಿದೆ.
ಅಲ್ಲಮನಿಗೂ ಪವಾಡಗಳಿಗೂ ಅವಿನಾಭಾವ
ಸಂಬಂಧ. ಅವಾಸ್ತವವೆನ್ನಿಸುವ ಪವಾಡಗಳನ್ನು ಈ ಸಿನೆಮಾದಲ್ಲೂ ತೋರಿಸಲಾಗಿದೆ. ಅಲ್ಲಮನನ್ನು ಅವನ ವಚನಗಳ
ದಿವ್ಯಬೆಳಕಿನಲ್ಲಿ ತೋರಿಸುವ ಬದಲಾಗಿ ಪವಾಡಗಳೆಂಬೋ ಭ್ರಮೆಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದು
ಅತಿರೇಕವೆನಿಸುತ್ತದೆ. ಕತ್ತಿಯಿಂದಲೂ ಚಿದ್ರವಾಗದ ದೇಹ, ದೇಹವನ್ನೇ ಸಲೀಸಾಗಿ ತೂರಿಹೋಗುವ ಕತ್ತಿ,
ಮರದ ಬೇರೆಳೆದರೆ ನೆಲಕುಸಿದು ಪಾತಾಳ ಸೇರಿದ ಅಲ್ಲಮನಿಗೆ ಗುಹೆಯಲ್ಲಿ ಸಿಗುವ ಲಿಂಗಭಾಗ್ಯ, ಕೂತಂತೆಯೇ
ಗಾಳಿಯಲ್ಲಿ ತೇಲುವ ಅಲ್ಲಮನ ದೇಹದೊಳಗೆ ಚಕ್ರಗಳ ಸಾಕ್ಷಾತ್ಕಾರ.. ಹೀಗೆ ಹಲವಾರು ತರ್ಕಾತೀತ ಪವಾಡ ಸದೃಶ
ಸನ್ನಿವೇಶಗಳನ್ನು ಗ್ರಾಫಿಕ್ ತಂತ್ರಜ್ಞಾನದ ಮೂಲಕ ಸೃಷ್ಟಿಸಿ ಅಲ್ಲಮನನ್ನು ಅತೀಂದ್ರೀಯ ವ್ಯಕ್ತಿಯನ್ನಾಗಿಸಲಾಗಿದೆ.
ಆದರೆ.. ವೈಚಾರಿಕವಾಗಿ ನೋಡಿದರೆ ಪ್ರಕೃತಿಯ ನಿಯಮಗಳು ಎಲ್ಲರಿಗೂ ಒಂದೇ ಎನ್ನುವುದು ಸತ್ಯವಾದರೂ ಅಲ್ಲಮನಂತವರು
ಪ್ರಕೃತಿಯ ನಿಯಮಕ್ಕೂ ಮಿಗಿಲಾದವರು ಎನ್ನುವ ಅವಾಸ್ತವವನ್ನು ಈ ಸಿನೆಮಾ ಹೇಳುತ್ತದೆ. ಒಂದು ರೀತಿಯಲ್ಲಿ
ಪ್ಯಾಂಟಸಿಯನ್ನು ಸೃಷ್ಟಿಸಿ ನೋಡುಗರಲ್ಲಿ ಚಿತ್ತಭ್ರಮೆ ಹುಟ್ಟಿಸುವ ಪ್ರಯತ್ನ ನೋಡಲು ಸೊಗಸಾಗಿದ್ದರೂ
ಚಾರಿತ್ರಿಕವಾಗಿ ಅವಾಸ್ತವವಾಗಿದೆ. ತರ್ಕಗಳಿಗೆ ಹೊರತಾಗಿದೆ. ಯಾವುದು ಸಂಪೂರ್ಣ ಅರ್ಥವಾಗುವುದಿಲ್ಲವೋ
ಅದಕ್ಕೆ ಅತೀಂದ್ರೀಯತೆಯನ್ನು ಆರೋಪಿಸುವುದು ನಮ್ಮ ಸನಾತನ ಸಂಪ್ರದಾಯವಾಗಿದೆ.
ಪವಾಡಗಳನ್ನು ಹೊರತುಪಡಿಸಿ
ಅಲ್ಲಮನನ್ನು ಮನುಷ್ಯಸಹಜ ಅಲ್ಲಮನನ್ನಾಗಿಯೇ ಚಿತ್ರೀಕರಿಸಿದ್ದರೆ ಅಲ್ಲಮ ಒಂದಿಷ್ಟು ದಕ್ಕುತ್ತಿದ್ದ.
ಆದರೆ ಹೀಗೆ ಅತೀಂದ್ರೀಯ ಶಕ್ತಿಯುಳ್ಳ ಅತಿಮಾನುಷನನ್ನು ಸೃಷ್ಟಿಸಿದ್ದರಿಂದಾಗಿ ಅಲ್ಲಮ ಪವಾಡಪುರುಷನಾಗಿಯೇ
ಉಳಿದುಬಿಟ್ಟ. ನಾಗಾಭರಣರಂತಹ ಸೂಕ್ಷ್ಮ ಪ್ರಜ್ಞೆಯ ನಿರ್ದೇಶಕರುಗಳು ವಾಸ್ತವಕ್ಕೆ ಹೆಚ್ಚು ಮಹತ್ವಕೊಟ್ಟು
ಅವಾಸ್ತವ ಪವಾಡಗಳ ಮೌಡ್ಯಗಳಿಂದ ಹೊರಬಂದಿದ್ದರೆ ಕನಿಷ್ಟ ಅಲ್ಲಮನ ಬಗ್ಗೆ ಜನಸಾಮಾನ್ಯರಿಗೆ ಇರುವ ವಿಕ್ಷಿಪ್ತ
ನಂಬಿಕೆಯನ್ನಾದರೂ ದೂರಮಾಡಬಹುದಾಗಿತ್ತು. ಸಿನೆಮಾ
ಎನ್ನುವುದು ಎಂತಹ ಪ್ರಭಾವಶಾಲಿ ಮಾಧ್ಯಮವೆಂದರೆ ಅದರಲ್ಲಿ ತೋರಿಸಿದ್ದೇ ಪರಮಸತ್ಯ ಎಂದು ನಂಬುವ ಬಹುಸಂಖ್ಯಾತ
ಜನರಿದ್ದಾರೆ. ಹೀಗಾಗಿ ಐತಿಹಾಸಿಕ ವ್ಯಕ್ತಿಯನ್ನು ಸಿನೆಮಾದಲ್ಲಿ ತೋರಿಸುವಾಗ ಪೌರಾಣಿಕ ಪರಿಕಲ್ಪನೆಗಳನ್ನು
ಆರೋಪಿಸುವುದು ಸಮಂಜಸವಲ್ಲ. ವಾಸ್ತವ ಪ್ರಜ್ಞೆಯನ್ನು ಜನರಲ್ಲಿ ಮೂಡಿಸಬೇಕಾದ ಹೊಣೆಗಾರಿಕೆ ಸೃಜನಶೀಲ
ನಿರ್ದೇಶಕರ ಮೇಲೆ ಇದ್ದೇ ಇರುತ್ತದೆ ಎನ್ನುವುದನ್ನು ನಾಗಾಭರಣರಂತಹ ಕ್ರಿಯಾಶೀಲ ನಿರ್ದೇಶಕರಿಗೆ ಬೇರೆ
ಯಾರೂ ಹೇಳುವ ಅಗತ್ಯವಿಲ್ಲ.
ಈ ಪವಾಡ ಹಾಗೂ ಪ್ಯಾಂಟಸಿಸಂ
ತಂತ್ರಗಳನ್ನು ಪಕ್ಕಕ್ಕಿಟ್ಟು ನೋಡಿದರೂ ಮೂರು ವರ್ಷಗಳ ನಿರ್ದೇಶಕರ ಅಧ್ಯಯನ ಸಿನೆಮಾಗಳಲ್ಲಿ ತೋರುತ್ತಿಲ್ಲಾ.
ಈ ಹಿಂದೆ ಲಕ್ಷ್ಮೀಪತಿ ಕೋಲಾರರವರು ರಂಗನಿರಂತರಕ್ಕೆ “ಅಲ್ಲಮನ ಬಯಲಾಟ” ಎನ್ನುವ ನಾಟಕವೊಂದನ್ನು ಬರೆದಿದ್ದರು.
ಹೆಚ್ಚು ಕಡಿಮೆ ಈ ಸಿನೆಮಾದಲ್ಲಿ ಆ ನಾಟಕದ ಅಂಶಗಳೇ ತುಂಬಿವೆ. ಇದನ್ನು ಹೇಳಲು ಇಷ್ಟೊಂದು ಅಧ್ಯಯನ
ಹಾಗೂ ಅಷ್ಟೊಂದು ಸಲ ತಿದ್ದುಪಡಿಗಳು ಬೇಕಾಗಿತ್ತಾ? ಐದು ಪಿಹೆಚ್ಡಿ ಮಾಡಿದಷ್ಟು ಅನುಭವವನ್ನು ಗಳಿಸಿದೆ
ಎಂದು ನಾಗಾಭರಣರವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದರಲ್ಲಿ ನಿಜಕ್ಕೂ ಸತ್ಯಾಂಶವಿತ್ತೆ? ನಾಟಕದ ಅಂಶಗಳನ್ನೇ
ಆಧರಿಸಿ ಸಿನೆಮಾ ಮಾಡುವುದೇ ಆಗಿದ್ದರೆ ಅಲ್ಲಮನ ಕುರಿತು ಸಾಣೇಹಳ್ಳಿ ಶಿವಸಂಚಾರ ರೆಪರ್ಟರಿ ಮಾಡಿದ
ನಾಟಕವನ್ನಾದರೂ ರೆಫರ್ ಮಾಡಬಹುದಾಗಿತ್ತು. ಯಾಕೆಂದರೆ ಈ ನಾಟಕದಲ್ಲಿ ಎಲ್ಲೂ ಪವಾಡಗಳನ್ನು ತೋರಿಸದೇ
ತರ್ಕಕ್ಕೆ ಹತ್ತಿರವಾಗಿ ನಾಟಕ ಪ್ರಸ್ತುತಗೊಂಡಿತ್ತು. ಹೋಗಲಿ ಇಷ್ಟೆಲ್ಲಾ ಮಾಡಿದರೂ ಅಲ್ಲಮದ ಕಥಾನಕ
ಆ ಕಾಲಘಟ್ಟವನ್ನಾದರೂ ವಸ್ತುನಿಷ್ಟವಾಗಿ ಹಿಡಿದಿಟ್ಟಿದೆಯಾ ಅಂದರೆ ಅದೂ ಸಾಧ್ಯವಾಗಿಲ್ಲ. ಅಲ್ಲಮ ಅರ್ಥವಾಗದಿದ್ದರೂ
ಅಲ್ಲಮನ ಕಾಲಘಟ್ಟವಾದರೂ ಅರ್ಥವಾಗಬೇಕಿತ್ತು.. ಅದೂ ಆಗಿಲ್ಲ. ಕೆಲವಾರು ನ್ಯೂನ್ಯತೆಗಳು ಸಿನೆಮಾದಲ್ಲಿವೆ.
ಆ ಕಾಲಘಟ್ಟದಲ್ಲಿ ವೈದಿಕ ಪರಂಪರೆ
ಪ್ರಖರವಾಗಿತ್ತು. ವೈದಿಕಪಾಠಶಾಲೆಯಲ್ಲಿ ಬ್ರಾಹ್ಮಣರಿಗೆ ಮಾತ್ರ ಸಂಸ್ಕೃತ ವಿದ್ಯಾಬ್ಯಾಸ ಕಲಿಸಲಾಗುತ್ತಿತ್ತು.
ಶೂದ್ರರಿಗೆ ಅಕ್ಷರಭ್ಯಾಸವನ್ನೇ ಬಹಿಷ್ಕರಿಸಲಾಗಿತ್ತು. ಆದರೆ ಈ ಸಿನೆಮಾದಲ್ಲಿ ಅಬ್ರಾಹ್ಮಣನಾದ ನಟವರ
ಕುಲದ ನೃತ್ಯಗಾತಿಯ ಮಗನಾದ ಅಲ್ಲಮನನ್ನು ಬ್ರಾಹ್ಮಣ ವಟುಗಳ ಜೊತೆಗೆ ವಿದ್ಯಾಬ್ಯಾಸ ಮಾಡಿಸಿದ್ದನ್ನು
ಅದು ಹೇಗೋ ಸಹಿಸಿಕೊಳ್ಳಬಹುದು ಆದರೆ ವೇದಾದ್ಯಯನ ಕೇಂದ್ರದಲ್ಲಿ ಬ್ರಾಹ್ಮಣ್ಯದ ಕುರುಹುಗಳೇ ಇಲ್ಲದಂತೆ
ಮಾಡಿದ್ದರ ಹಿಂದಿನ ಔಚಿತ್ಯವೇನೋ ಗೊತ್ತಿಲ್ಲಾ. ಯಾವ ವೇದಗುರುಗಳಾಗಲಿ ವಟುಗಳಾಗಲಿ ಕನಿಷ್ಟ ಜನಿವಾರವನ್ನೂ
ಸಹ ತೊಡಿಸದೇ ಹೊಲ್ ಸೇಲ್ ಆಗಿ ಎಲ್ಲಾ ಪಾತ್ರಗಳ ಹಣೆಗೂ ವಿಭೂತಿಯನ್ನು ಬಳಿದಿದ್ದು ವೈದಿಕ ಶಾಲೆ ವೀರಶೈವ
ಲಿಂಗಾಯತ ಮಠದ ಪಾಠಶಾಲೆಯಾಗಿ ಕಾಣುತ್ತಿತ್ತು. ಅಕಸ್ಮಾತ್ ಅದು ಲಿಂಗಾಯತ ಪಾಠಶಾಲೆ ಎಂದುಕೊಂಡರೂ ಅಲ್ಲಿ
ಸಂಸ್ಕೃತ ಶ್ಲೋಕಗಳ ವೇದಾದ್ಯಯನ ಕಲಿಸಲಾಗುತ್ತಿತ್ತು ಎನ್ನುವುದು ತರ್ಕಾತೀತವಾಗದ ಸಂಗತಿ. ಇಷ್ಟೇ ಅಲ್ಲದೆ
ಅಲ್ಲಮನ ಕಾಲಕ್ಕೆ ವೇದಾದ್ಯಯನ ಮಾಡಲು ಮದುವೆಯಾದ ಮಹಿಳೆಯರಿಗೆ ಅವಕಾಶವಿದೆ ಎಂಬುದಕ್ಕೆ ಪುರಾವೆಗಳೇನೂ
ಇಲ್ಲದಿದ್ದರೂ ಈ ಸಿನೆಮಾದಲ್ಲಿ ಅದರ ಪ್ರಸ್ತಾಪವಂತೂ ಇದೆ. ಆದರೆ ೧೨ನೇ ಶತಮಾನದಲ್ಲಿ ಅನುಭವಮಂಟಪ ಹೊರತುಪಡಿಸಿ
ವಿವಾಹಿತ ಮಹಿಳೆಯರಿಗೆ ಯಾವುದೇ ಗುರುಪೀಠ ಅವಕಾಶ ಮಾಡಿಕೊಟ್ಟಿದ್ದು ಅಸಾಧ್ಯದ ಮಾತೇ ಆಗಿದೆ. ಹೀಗೆ
ಹಲವಾರು ನಂಬಲಸಾಧ್ಯವಾದ ಅಂಶಗಳು ಸಿನೆಮಾದಲ್ಲಿವೆ. ಚರಿತ್ರೆಯ ವಾಸ್ತವಿಕ ಅಧ್ಯಯನದಲ್ಲಿ ಹಾಗೂ ಅದನ್ನು
ಕೂಲಂಕುಶವಾಗಿ ಪರಿಶೀಲಿಸಿ ತರ್ಕಬದ್ದವಾಗಿ ನಿರೂಪಿಸುವಲ್ಲಿ ಸಿನೆಮಾ ಸೋತಿದೆ.
‘ಅಲ್ಲಮ’ದಲ್ಲಿ ಕೆಲವು ನಾಟಕೀಯ ಬೆಳವಣಿಗೆಗಳು
ತರ್ಕಕ್ಕೆ ಮೀರಿ ಮೂಡಿಬಂದಿವೆ. ಪ್ರೀತಿಸುವ ಅಬ್ಬೆಯನ್ನು ಮದ್ಯರಾತ್ರಿ ಬಿಟ್ಟು ಅನಾಮಧೇಯನ ಜೊತೆಗೆ
ಅಲ್ಲಮ ಹೊರಡುವುದು, ಗುರುಕುಲದಲ್ಲಿ ಅವಿವಾಹಿತ ಮಹಿಳೆಗೆ ಶಿಕ್ಷಣವಿಲ್ಲವೆಂದು ತಿಳಿದ ತಕ್ಷಣ ಅದನ್ನು
ಪ್ರತಿಭಟಿಸಿ ಪಾಠಶಾಲೆಯಿಂದ ಹೊರನಡೆಯುವುದು, ಮಾಯೆಯ ಮಾಯೆಯಿಂದ ಬಿಡಿಸಿಕೊಂಡು ಬನವಾಸಿಯ ದಾರಿ ಹಿಡಿಯುವುದು
ಕೊನೆಗೆ ಕಲ್ಯಾಣಕ್ಕೆ ಬಂದಷ್ಟೇ ಶೀಘ್ರವಾಗಿ ಕಲ್ಯಾಣದ ಅವಣತಿ ಅರಿತು ಶ್ರೀಶೈಲಕ್ಕೆ ಹೋಗಿ ಬಯಲಲ್ಲಿ
ಬಯಲಾಗುವುದು ಈ ಸಿನೆಮಾದ ಪ್ರಮುಖ ಘಟನೆಗಳು. ಆದರೆ.. ಇಲ್ಲಿ ಯಾವುದಕ್ಕೂ ಸಶಕ್ತ ಕಾರಣಗಳಿಲ್ಲ. ಅಲ್ಲಮನ
ನಡೆಯನ್ನು ನಿರ್ದೇಶಕರು ಮೊದಲೇ ತೀರ್ಮಾನಿಸಿ ಅದಕ್ಕೆ ದುರ್ಬಲ ಕಾರಣಗಳನ್ನು ಮುಂದೆ ಮಾಡಿ ಸನ್ನಿವೇಶದಿಂದ
ಸನ್ನಿವೇಶಕ್ಕೆ ಹಾರುವ ದಾವಂತಕ್ಕೆ ಒತ್ತುಕೊಟ್ಟಿದ್ದಾರೆ. ಇದರಿಂದಾಗಿ ಗಂಭೀರವಾಗಿ ಸಿನೆಮಾ ನೋಡುವವರಿಗೆ
ಯಾವುದೂ ಕನ್ವೀಯನ್ಸ್ ಆಗದೇ ಬಿಡಿ ಘಟನೆಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾದ ಅನಿವಾರ್ಯತೆ ಇದೆ.
ಅಲ್ಲಮನಿಗೆ ನಿಜವೈರಾಗ್ಯ ಪ್ರಾಪ್ತಿಯಾಗಿದ್ದಕ್ಕೆ
ಹರಿಹರನ ಕಾಮಲತೆ ಪ್ರಕರಣ ಹೆಚ್ಚು ಸಮರ್ಥನೀಯವಾಗಿದೆ. ಜೀವಕ್ಕೆ ಜೀವವಾಗಿ ಪ್ರೀತಿಸಿದ್ದ ಕಾಮಲತೆ ಮಹಾಜ್ವರದಿಂದ
ಬಳಲಿ ತೀರಿಕೊಂಡಾಗ ಆ ಅಗಲಿಕೆಯಿಂದ ಜಗತ್ತೇ ಶೂನ್ಯವಾಗಿ ಗೋಚರಿಸಿದಾಗ ಅಲ್ಲಮ ವಿರಾಗಿಯಾದ ಎನ್ನುವ
ಹರಿಹರನ ಪ್ರಭುಲಿಂಗ ಕಥಾನಕ ಅಲ್ಲಮನ ವ್ಯರಾಗ್ಯಕ್ಕೆ ನಂಬಬಹುದಾದ ಪುರಾವೆಗಳನ್ನು ಒದಗಿಸುತ್ತದೆ ಆದರೆ..
ಈ ಅಲ್ಲಮ ಸಿನೆಮಾದಲ್ಲಿ ಮಾಯೆಯನ್ನು ಅಲ್ಲಮ ತನ್ನ ಮನೋನಿಗ್ರಹದಿಂದ ಸೋಲಿಸಿ ವಿರಾಗಿಯಾದನೆಂದು ತೋರಿಸಲಾಗಿದೆ.
ಹಾಗೂ ಇಲ್ಲೂ ಕೂಡಾ ಪುರುಷಪ್ರಧಾನ್ಯತೆ ಎದ್ದು ಕಾಣುವಂತಿದೆ. ಹೆಣ್ಣು ಅಂದರೆ ಮಾಯೆ. ಪುರುಷನನ್ನು
ತನ್ನ ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡು ಸೋಲಿಸಲು ಹೆಣ್ಣು ಪ್ರಯತ್ನಿಸುತ್ತಾಳೆ. ಅಲ್ಲಮನಂತವರು ಮಾಯೆಯನ್ನೇ
ಗೆಲ್ಲುತ್ತಾರೆ ಎಂದು ಪರೋಕ್ಷವಾಗಿ ಹೇಳಲಾಗಿದೆ. ಈ ಸಿನೆಮಾದಲ್ಲಿ ಸೃಷ್ಟಿಗೊಂಡ ಮಾಯೆ ಪಾತ್ರವು ಒಲವಿನ
ತೀವ್ರತೆಗೊಳಗಾಗಿ ಅಲ್ಲಮನನ್ನು ಬಯಸಿದ್ದಕ್ಕಿಂತಲೂ ಆತನನ್ನು ಸೋಲಿಸುವ ಛಲಕ್ಕಾಗಿಯೇ ಪ್ರೀತಿಸಿದಂತಿದೆ.
ಅಲ್ಲಮನ ವೇಶದಲ್ಲಿ ಬಂದ ಬಹುರೂಪಿ ಶಿವಯ್ಯನ ಎದೆಯ ಮೇಲೆ ಕಾಲಿಟ್ಟು ತಾನೇ ಗೆದ್ದೆ ಎಂದು ಮಾಯೆ ಬೀಗುತ್ತಾಳೆ.
ಆದರೆ ಮಾಯೆಯ ತಂತ್ರಕ್ಕೆ ಪ್ರತಿತಂತ್ರ ಹೂಡಿದ ಅಲ್ಲಮ ತನ್ನ ಬದಲಾಗಿ ಶಿವಯ್ಯನನ್ನು ಕಳುಹಿಸಿ ಗೆಲ್ಲುತ್ತಾನೆ.
ಇಲ್ಲಿ ಪ್ರೀತಿಯೆಂಬುದು ಸಹ ಸೋಲು ಗೆಲುವಿನಾಟವಾದಂತಿದೆ. ಹೆಣ್ಣನ್ನು ಮಾಯೆಯೆಂದೇ ತೋರಿಸುವ ಹಾಗೂ
ಮಾಯೆಯನ್ನು ಸೋಲಿಸಿ ತನ್ನ ಮನೋನಿಗ್ರಹವನ್ನು ಸಾಬೀತುಪಡಿಸುವುದೇ ಅಲ್ಲಮನ ಉದ್ದೇಶವಾಗಿದೆ ಎಂಬಂತೆ
ಚಿತ್ರಿಸಲಾಗಿದೆ. ಯಾವ ಆಯಾಮದಲ್ಲಿ ನೋಡಿದರೂ ಅಲ್ಲಮನ ವೈರಾಗ್ಯಕ್ಕೆ ಈ ಸಿನೆಮಾದಲ್ಲಿ ಸೂಕ್ತ ಕಾರಣಗಳು
ಇಲ್ಲವಾಗಿದೆ. ಹೀಗಾಗಿ ಆಳವೇ ಎತ್ತರ ಎನ್ನುವುದಿಲ್ಲಿ ಸಾಬೀತಾಗದೇ ಅಲ್ಲಮ ಸಿನೆಮಾ ಆಳಕ್ಕೂ ಇಳಿಯದೇ
ಎತ್ತರಕ್ಕೂ ಏರದೇ ಬರೀ ಬಿಡಿ ಘಟನೆಗಳನ್ನು ನಿರ್ದೇಶಕರ ಇಷ್ಟದಂತೆ ಜೋಡಿಸಿ ಬೆರಗನ್ನು ತೋರಿಸದೇ ಬಯಲನ್ನು
ಮಾತ್ರ ತೋರಿಸಿ ಇದೇ ಅಲ್ಲಮ ಎಂದು ನಂಬಿಸುವ ಪ್ರಯತ್ನವನ್ನು ಬದ್ದತೆಯಿಂದ ಮಾಡಲಾಗಿದೆ.
ಅಲ್ಲಮನ ವಚನಗಳನ್ನು ಸರಳ ವಚನಗಳು
ಹಾಗೂ ಬೆಡಗಿನ ವಚನಗಳು ಎಂದು ವಿಭಾಗೀಕರಿಸಲಾಗುತ್ತದೆ. ಈ ಸಿನೆಮಾದಲ್ಲೂ ಸಹ ಸರಳ ವಚನಗಳನ್ನೇ ಹೆಚ್ಚಾಗಿ
ಬಳಸಿದ್ದು ಅವುಗಳು ಸಂಭಾಷಣೆಯ ಭಾಗವಾಗಿದ್ದು ಕೆಲವೆಡೆ ಗಮನಸೆಳೆಯುತ್ತವೆ. ಸಿನೆಮಾದ ಮೂಲ ವಸ್ತು-ವಿಷಯ-ನಿರೂಪನೆಯನ್ನು
ಹೊರತು ಪಡಿಸಿ ಶಶಿಧರ್ ಅಡಪರವರ ಸೆಟ್ ವೈಭವ ಹಾಗೂ ನಾಗಿನಿ ಭರಣರವರ ವಸ್ತ್ರವಿನ್ಯಾಸ ಮತ್ತು ಜಿ.ಎಸ್.ಭಾಸ್ಕರ್ರವರ
ಛಾಯಾಗ್ರಹಣ ಇಡೀ ಸಿನೆಮಾವನ್ನು ಶ್ರೀಮಂತಗೊಳಿಸಿವೆ. ಅಲ್ಲಮ ಹಾಗೂ ಮಾಯೆಯ ಶೃಂಗಾರ ಸನ್ನಿವೇಶದಲ್ಲಂತೂ
ದೃಶ್ಯಸಂಯೋಜನೆ ಹಾಗೂ ಕ್ಯಾಮರಾ ಕೈಚಳಕ ಅನನ್ಯವಾಗಿ ಮೂಡಿಬಂದಿದೆ. ಅಲ್ಲಮನಾಗಿ ಧನಂಜಯ್ ಅಭಿನಯ ಗಮನಸೆಳೆಯುವಂತಿದೆ
ಆದರೂ ವಯೋವೃದ್ದ ಅಲ್ಲಮನ ದ್ವನಿಯಲ್ಲಿ ಸ್ಪಷ್ಟತೆಯಿಲ್ಲದಂತಾಗಿದೆ. ಒಂದೊಂದು ಆಂಗಲ್ಲಲ್ಲಿ ಒಂದೊಂದು ರೀತಿ ಕಾಣಿಸುವ ಮೇಘನಾ ರಾಜ್ ಮಾಯೆಯ ಪಾತ್ರಕ್ಕೆ
ಜೀವತುಂಬಿದೆಯಾದರೂ ನಾಟ್ಯದ ಸಂದರ್ಭದಲ್ಲಿ ಅಲ್ಲಮನ ತಾಯಿ ಲಕ್ಷ್ಮೀ ಗೋಪಾಲಸ್ವಾಮಿಯವರು ಮೇಘನಾರವರನ್ನು
ಮೀರಿಸುವಂತೆ ಅದ್ಭುತವಾಗಿ ನೃತ್ಯ ಮಾಡಿದ್ದಾರೆ. ಬಾಲಕ ಅಲ್ಲಮನ ಪಾತ್ರ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದ್ದಂತೂ
ಸತ್ಯ. ಚಿತ್ರಕಥೆಯಲ್ಲಿ ಒಂದಿಷ್ಟು ತಕರಾರಿದ್ದರೂ ತುಂಬಾ ಸಿದ್ದತೆ ಹಾಗೂ ಬದ್ದತೆಯಿಂದ ಮಾಡಿದ “ಅಲ್ಲಮ” ಜನರನ್ನು ತಲುಪಬೇಕಿದೆ. ಇಂತಹ
ಕ್ಲಾಸಿಕ್ ಮಾದರಿಯ ಸಿನೆಮಾಗಳನ್ನು ಗೆಲ್ಲಿಸುವ ಮೂಲಕ ಮತ್ತೆ ಮತ್ತೆ ಇಂತಹ ಚಲನಚಿತ್ರಗಳು ತಯಾರಾಗಲು
ಕನ್ನಡಿಗರು ಪ್ರೋತ್ಸಾಹಿಸಬೇಕಿದೆ. ಅವರವರಿಗೆ ಸಿಕ್ಕಷ್ಟು ಅಲ್ಲಮನನ್ನು ಪ್ರೇಕ್ಷಕರು ದಕ್ಕಿಸಿಕೊಳ್ಳಬೇಕಿದೆ.
-ಶಶಿಕಾಂತ ಯಡಹಳ್ಳಿ