ಶನಿವಾರ, ಜನವರಿ 28, 2017

ತಹ ತಹ....74 ಆಳಕ್ಕಿಳಿಯದ ಎತ್ತರಕ್ಕೇರದ “ಅಲ್ಲಮ” :





ಅಲ್ಲಮನೆಂಬ ಮಹಾ ಬೆರಗಿನ ಬೆಳಗನ್ನು ಅಖಂಡವಾಗಿ ಹಿಡಿದಿಡಲು ಅಸಾಧ್ಯವಾದರೂ ಅದರ ಬಿಂಬವನ್ನಾದರೂ ನೋಡುವ ಭಾಗ್ಯವನ್ನು ಅಲ್ಲಮ ಚಲನಚಿತ್ರ ದೊರಕಿಸಿಕೊಟ್ಟಿದೆ. ಮೂರು ವರ್ಷಗಳ ಕಾಲ ಅಲ್ಲಮನ ಕುರಿತು ಅಧ್ಯಯನ ಮಾಡಿ ಚಿತ್ರಕಥೆ ಮಾಡಿದ ಟಿ.ಎಸ್.ನಾಗಾಭರಣರವರು ಐವತ್ತು ಸಲ ಸ್ಕ್ರಿಪ್ಟನ್ನು ತಿದ್ದಿತೀಡಿ ಬರೆದು ಅಲ್ಲಮನನ್ನು ತಮಗೆ ಸಿಕ್ಕಷ್ಟು ದಕ್ಕಿಸಿಕೊಂಡು ಬೆಳ್ಳಿ ಪರದೆಯ ಮೇಲೆ ಚಿತ್ತಾರಗೊಳಿಸಿದ್ದಾರೆ. ಸಂತ ಶಿಶುನಾಳ ಷರೀಫ್, ಮೈಸೂರು ಮಲ್ಲಿಗೆ, ಕಲ್ಲರಳಿ  ಹೂವಾಗಿಯಂತಹ ಕೆಲವಾರು ಕ್ಲಾಸಿಕ್ ಚಿತ್ರಗಳನ್ನು ನಿರ್ದೇಶಿಸಿದ ನಾಗಾಭರಣರವರು ಅಲ್ಲಮ ಚಿತ್ರದ ಮೂಲಕ ಮತ್ತೊಂದು ಕ್ಲಾಸಿಕ್ ಎನ್ನಬಹುದಾದ ಸಿನೆಮಾವನ್ನು ಕನ್ನಡಿಗರಿಗೆ ಕೊಟ್ಟಿದ್ದಾರೆ. ಶ್ರೀಹರಿ ಖೋಡೆಯವರ ಯಜಮಾನ ಬ್ಯಾನರಿನಲ್ಲಿ ತಯಾರಾದ ಅಲ್ಲಮ ಜನವರಿ 26 ರಂದು ರಾಜ್ಯಾದ್ಯಂತ ಬಿಡುಗಡೆಗೊಂಡಿದೆ.

ಯಾರ ಹಿಡಿತಕ್ಕೂ ಸಂಪೂರ್ಣವಾಗಿ ದಕ್ಕದ ಸಂಕೀರ್ಣ ವ್ಯಕ್ತಿತ್ವದ, ವಿಶಿಷ್ಟ ತರ್ಕದ ಅಲ್ಲಮನ ಕುರಿತು ಸಿನೆಮಾ ಮಾಡುವುದು ಸಾಹಸದ ಕೆಲಸ. ಯಾರೂ ಮಾಡಲಾಗದ ಪ್ರಯತ್ನವನ್ನು ಅಪಾರ ಬದ್ಧತೆಯಿಂದ ಮಾಡಿದ ನಾಗಾಭರಣ ಹಾಗೂ ಅವರ ತಂಡ ನಿಜಕ್ಕೂ ಅಭಿನಂದನೀಯ. ಅಲ್ಲಮ ದೊಡ್ಡ ಪರದೆಯ ಮೇಲೆ ಹೇಗೆ ಮೂಡಿಬರಬಹುದು ಎನ್ನುವ ಕಾತುರ ಜನರಲ್ಲಿತ್ತು. ಆದರೆ.. ನಿರೀಕ್ಷೆ ಅತಿಯಾಗಿದ್ದಕ್ಕೋ ಏನೋ ಒಂದಿಷ್ಟು ನಿರಾಸೆಯಾಗಿದ್ದಂತೂ ಸುಳ್ಳಲ್ಲ. ಸೂರ್ಯಪ್ರಭೆಯನ್ನು ಬೆಳಕಿಂಡಿಯಲ್ಲಿ ಹಿಡಿದು ತೋರಿಸಿರುವ ಈ ಪ್ರಯತ್ನ ಅದ್ಯಾಕೋ ನೋಡುಗರಿಗೆ ದಕ್ಕಲಿಲ್ಲ. ಯಾಕೆಂದರೆ.. ಇಡೀ ಸಿನೆಮಾದಲ್ಲಿ ಅಲ್ಲಮನ ಬದುಕಿನ ಕೆಲವಾರು ಪ್ರಮುಖ ಸನ್ನಿವೇಶಗಳನ್ನು ತೋರಿಸಲಾಗಿದೆ. ಬಹಷಃ ಅಲ್ಲಮನ ಬಗ್ಗೆ ಓದಿಕೊಂಡವರಿಗೆ ಹಾಗೂ ಅಲ್ಲಮನ ಕುರಿತು ಬಂದ ನಾಟಕಗಳನ್ನು ನೋಡಿದವರಿಗೆ ಇವೆಲ್ಲಾ ಗೊತ್ತಿರುವ ಸನ್ನಿವೇಶಗಳೇ ಆಗಿವೆ. ಹೊಸದೇನನ್ನೂ ಕಟ್ಟಿಕೊಡಲಾಗದ್ದಕ್ಕೋ, ಕೇವಲ ಕೆಲವು ಘಟನೆಗಳನ್ನು ಕಾಲಾಂತರದಲ್ಲಿ ತೋರಿಸಿದ್ದಕ್ಕೋ ಅಲ್ಲಮ ನೋಡುಗರ ಬುದ್ದಿಗೂ ಮುಟ್ಟಲಿಲ್ಲಾ.. ಮನಸಿಗೂ ತಾಕಲಿಲ್ಲ. ಕೇವಲ ಸೆಟ್ ಹಾಗೂ ಕ್ಯಾಮರಾದ ವೈಭವೀಕರಣಗಳು ಮಾತ್ರ ನೋಡುಗರನ್ನು ಗಮನ ಸೆಳೆದು ಅಲ್ಲಮನ ಕಥೆ ಹಾಗೂ ಕಥಾನಕವನ್ನು ನೀರಸಗೊಳಿಸಿತು. ಸೆಟ್ ಲೊಕೇಶನ್ ಹಾಗೂ ಕ್ಯಾಮರಾ ತಂತ್ರಗಳಿಗೆ ಕೊಟ್ಟಷ್ಟೇ ಮಹತ್ವವನ್ನು ಚಿತ್ರಕತೆ ಹಾಗೂ ನಿರೂಪನೆಗಳತ್ತಲೂ ಕೊಟ್ಟಿದ್ದರೆ ಸಾರ್ವಕಾಲಿಕ ಸಿನೆಮಾವೊಂದು ಕನ್ನಡಿಗರಿಗೆ ದಕ್ಕುತ್ತಿತ್ತು.
  
ಅಲ್ಲಮನ ಬಾಲ್ಯ, ಆತನ ಮದ್ದಲೆ ಕೌಶಲ, ಗುರುಕುಲ ಅಭ್ಯಾಸ, ಯೌವನ, ಮಾಯೆ ಪ್ರಕರಣ, ಲೋಕಸಂಚಾರ, ಕಲ್ಯಾಣ ಪ್ರವೇಶ ಹಾಗೂ ಶ್ರೀಶೈಲದತ್ತ ಅಂತಿಮ ಚಿತ್ತ.. ಹೀಗೆ ಅಲ್ಲಮನ ಬದುಕಿನ ಚದುರಿದ ಚಿತ್ರಗಳನ್ನು ಸಿನೆಮಾದಲ್ಲಿ ಕಟ್ಟಿಕೊಡಲಾಗಿದೆ. ಆದರೆ.. ಯಾವುದಕ್ಕೂ ನ್ಯಾಯಸಲ್ಲಿಸಲು ಸಾಧ್ಯವಾಗಿಲ್ಲದಿರುವುದೇ ಈ ಸಿನೆಮಾದ ಪ್ರಮುಖ ದೌರ್ಬಲ್ಯ. ಅಲ್ಲಮನನ್ನು ವೈಭವೀಕರಿಸಲು ಹೋಗಿ  ಬಸವಣ್ಣನ ಪಾತ್ರ ಹಾಗೂ ಪಾತ್ರಧಾರಿಯನ್ನು ದುರ್ಬಲಗೊಳಿಸಲಾಗಿದೆ. ಬಸವಣ್ಣನನ್ನು ಪೋಷಕ ಪಾತ್ರಕ್ಕೆ ಸೀಮಿತಗೊಳಿಸಿ ಅಸಹಾಯಕನನ್ನಾಗಿ ಚಿತ್ರಿಸಿದ್ದು ಬಸವಣ್ಣನವರಿಗೆ ಮಾಡಿದ ಅವಮಾನವೇ ಆಗಿದೆ. ಒಂದು ಪಾತ್ರದ ಎತ್ತರವನ್ನು ಹೆಚ್ಚಿಸಲು ಇನ್ನೊಂದು ಪಾತ್ರವನ್ನು ಕುಬ್ಜಗೊಳಿಸಬೇಕಾದ ಅಗತ್ಯವಿರಲಿಲ್ಲ. ಅದೆಷ್ಟೇ ಅಲ್ಲಮನ ಬಗ್ಗೆ ಹೊಗಳಿದರೂ ಬಸವಣ್ಣನವರ ಮುಂದೆ ಅಲ್ಲಮ ಏನೂ ಅಲ್ಲವೆನ್ನುವುದು ಬಸವಣ್ಣನವರ ಸಾಮಾಜಿಕ ಪರಿವರ್ತನಾ ಸಿದ್ದಾಂತಗಳನ್ನು ಅವಲೋಕಿಸಿದಾಗ ತಿಳಿಯದೇ ಇರದು. ಬಸವಣ್ಣನವರ ವಾಸ್ತವವಾದಿ ಲೌಕಿಕ ಸಿದ್ದಾಂತಕ್ಕೂ ಅಲ್ಲಮನ ಅವಾಸ್ತವವಾದ ಅಲೌಕಿಕ ಸಿದ್ದಾಂತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಬಸವಣ್ಣನವರ ಕಾಯಕ ಹಾಗೂ ದಾಸೋಹ ತತ್ವಗಳೆಲ್ಲಿ ಅಲ್ಲಮನ ಕಾಯಕರಹಿತ ತರ್ಕಸಿದ್ದಾಂತಗಳೆಲ್ಲಿ. ಅಲ್ಲಮನನ್ನು ಅತೀಕರಣ ಮಾಡಿದ್ದಲ್ಲಿ ಅದು ನಿರ್ದೇಶಕರ ಅಲ್ಲಮ ಪ್ರೀತಿಯನ್ನು ತೋರಬಹುದು.  ಆದರೆ ಅದಕ್ಕಾಗಿ ಬಸವಣ್ಣರವರಂತಹ ಮಹಾವ್ಯಕ್ತಿಗಳನ್ನು ನಿರ್ಲಕ್ಷಿಸುವ ಅಗತ್ಯವಿರಲಿಲ್ಲ. ಇದು ಬಸವಣ್ಣನವರ ಅನುಯಾಯಿಗಳಲ್ಲಿ ಅಸಮಾಧಾನವನ್ನು ಹುಟ್ಟಿಸಿದ್ದಂತೂ ಸುಳ್ಳಲ್ಲ. ಜನರಿಂದ ದೂರವಿದ್ದು, ಕೌಟುಂಬಿಕ ವ್ಯವಸ್ಥೆಯಿಂದ ವೈರಾಗ್ಯಹೊಂದಿ ಆತ್ಮದರ್ಶನದ ಸಿದ್ದಾಂತವನ್ನು ಹೇಳಿದವರಿಗಿಂತಲೂ ಜನರ ಜೊತೆಗಿದ್ದು ಅವರ ಕಷ್ಟಸುಖಗಳಲ್ಲಿ ಭಾಗಿಯಾಗಿ ಸನಾತನವಾದಿ ಶೋಷಣೆಯಿಂದ ಜನರನ್ನು ಮುಕ್ತಗೊಳಿಸಲು ಪ್ರಯತ್ನಿಸಿದ ಬಸವಣ್ಣನಂತವರು ಬಹಳ ಪ್ರಮುಖರಾಗುತ್ತಾರೆ.  
   
 ಇಡಿಯಾಗಿ ಅಲ್ಲಮನನ್ನು  ಹಿಡಿದಿಡಲು ಸಾಧ್ಯವಾಗದ್ದರಿಂದ ಬಿಡಿಬಿಡಿಯಾಗಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಹಾಗೆ ಮಾಡುವಾಗಲೂ ಹಲವಾರು ತರ್ಕಾತೀತ ಅಂಶಗಳು ಸಿನೆಮಾದಲ್ಲಿ ಹಾಸುಹೊಕ್ಕಾಗಿವೆ. ಕೇವಲ ರಂಜನೆಗಾಗಿ ಅಲ್ಲಮನನ್ನು ಬಳಸಲಾಯಿತೋ ಅಥವಾ ಅಲ್ಲಮನನ್ನು ಪ್ಯಾಂಟಸೈಸ್ ಗೊಳಿಸಿ ಜನರನ್ನು ಥ್ರಿಲ್‌ಗೊಳಿಸಲು ಪ್ರಯತ್ನಿಸಲಾಯಿತೋ ಗೊತ್ತಿಲ್ಲಾ.. ಆದರೆ ಯಾವ ತರ್ಕಕ್ಕೂ ದಕ್ಕದ ಅಲ್ಲಮನಂತೆಯೇ ಅಲ್ಲಮನ ಕುರಿತ ಸಿನೆಮಾ ಕೂಡಾ ತರ್ಕಾತೀತವಾಗಿದೆ. ಈ ವಾದಕ್ಕೆ ಪೂರಕವಾಗಿ ಬಹುರೂಪಿ ಶಿವಯ್ಯನ ಪಾತ್ರವನ್ನು ನೋಡಬಹುದಾಗಿದೆ. ಬಹುರೂಪಿ ಶಿವಯ್ಯ ಒಬ್ಬ ವೇಷಗಾರನಾಗಿದ್ದು ಬೇರೆ ಬೇರೆಯವರ ವೇಷ ಹಾಕಿ ನಟಿಸುವುದರಲ್ಲಿ ನಿಸ್ಸೀಮ ಕಲಾವಿದ ಎನ್ನುವುದು ಶರಣ ಸಾಹಿತ್ಯವನ್ನು ಓದಿಕೊಂಡವರಿಗೆ ಗೊತ್ತಿರುವ ವಿಷಯವೇ. ಆದರೆ.. ಈ ಪಾತ್ರವನ್ನು ಈ ಸಿನೆಮಾದಲ್ಲಿ ಬರೀ ವೇಷಧಾರಿಯನ್ನಾಗಿ ತೋರಿಸದೇ ಶಿವಯ್ಯನನ್ನು ಇಚ್ಚಾದಾರಿಯಾಗಿ ರೂಪಾಂತರಗೊಳಿಸುವ ಅತಿಮಾನುಷನನ್ನಾಗಿ ಚಿತ್ರಿಸಲಾಗಿದೆ. ಹಾಗೂ ಅಲ್ಲಮನ ರೂಪ ತಾಳಿ ಮಾಯೆಯ ಜೊತೆಗೆ ಸರಸಕ್ಕೆ ತೊಡಗುವ ಶಿವಯ್ಯನ ಕಲ್ಪನೆ ಬಹುಷಃ ಯಾವ ಹರಹರಣ ರಗಳೆಯಲ್ಲೂ ಇಲ್ಲಾ.. ಇದು ಸಂಪೂರ್ಣವಾಗಿ ನಾಗಾಭರಣರವರ ಊಹೆಯಾಗಿದ್ದು ಅಲ್ಲಮನ ಇತಿಹಾಸಕ್ಕೆ ಹೊಸದಾಗಿ ಸೇರ್ಪಡೆಯಾಗಿದೆ. ಇಚ್ಚಾಧಾರಿ ನಾಗಿನ್ ಕುರಿತು ಸಿನೆಮಾ ಹಾಗೂ ಸೀರಿಯಲ್‌ಗಳನ್ನು ಬೇಕಾದಷ್ಟು ಸೃಷ್ಟಿಸಲಾಗಿದೆ. ಆದರೆ ಇಚ್ಚಾಧಾರಿ ವೇಷಧಾರಿಯನ್ನು ಸೃಷ್ಟಿಸಿ ಈ ಸಿನೆಮಾದಲ್ಲಿ ಪ್ಯಾಂಟಸೈಸ್ ಮಾಡಿ ಕ್ಲಾಸಿಕ್ ಸಿನೆಮಾದಲ್ಲಿ ಕಮರ್ಸಿಯಲ್ ಎಫೆಕ್ಟ್ ಕೊಡುವ ಪ್ರಯತ್ನಮಾಡಲಾಗಿದೆ.

ಅಲ್ಲಮನಿಗೂ ಪವಾಡಗಳಿಗೂ ಅವಿನಾಭಾವ ಸಂಬಂಧ. ಅವಾಸ್ತವವೆನ್ನಿಸುವ ಪವಾಡಗಳನ್ನು ಈ ಸಿನೆಮಾದಲ್ಲೂ ತೋರಿಸಲಾಗಿದೆ. ಅಲ್ಲಮನನ್ನು ಅವನ ವಚನಗಳ ದಿವ್ಯಬೆಳಕಿನಲ್ಲಿ ತೋರಿಸುವ ಬದಲಾಗಿ ಪವಾಡಗಳೆಂಬೋ ಭ್ರಮೆಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದು ಅತಿರೇಕವೆನಿಸುತ್ತದೆ. ಕತ್ತಿಯಿಂದಲೂ ಚಿದ್ರವಾಗದ ದೇಹ, ದೇಹವನ್ನೇ ಸಲೀಸಾಗಿ ತೂರಿಹೋಗುವ ಕತ್ತಿ, ಮರದ ಬೇರೆಳೆದರೆ ನೆಲಕುಸಿದು ಪಾತಾಳ ಸೇರಿದ ಅಲ್ಲಮನಿಗೆ ಗುಹೆಯಲ್ಲಿ ಸಿಗುವ ಲಿಂಗಭಾಗ್ಯ, ಕೂತಂತೆಯೇ ಗಾಳಿಯಲ್ಲಿ ತೇಲುವ ಅಲ್ಲಮನ ದೇಹದೊಳಗೆ ಚಕ್ರಗಳ ಸಾಕ್ಷಾತ್ಕಾರ.. ಹೀಗೆ ಹಲವಾರು ತರ್ಕಾತೀತ ಪವಾಡ ಸದೃಶ ಸನ್ನಿವೇಶಗಳನ್ನು ಗ್ರಾಫಿಕ್ ತಂತ್ರಜ್ಞಾನದ ಮೂಲಕ ಸೃಷ್ಟಿಸಿ ಅಲ್ಲಮನನ್ನು ಅತೀಂದ್ರೀಯ ವ್ಯಕ್ತಿಯನ್ನಾಗಿಸಲಾಗಿದೆ. ಆದರೆ.. ವೈಚಾರಿಕವಾಗಿ ನೋಡಿದರೆ ಪ್ರಕೃತಿಯ ನಿಯಮಗಳು ಎಲ್ಲರಿಗೂ ಒಂದೇ ಎನ್ನುವುದು ಸತ್ಯವಾದರೂ ಅಲ್ಲಮನಂತವರು ಪ್ರಕೃತಿಯ ನಿಯಮಕ್ಕೂ ಮಿಗಿಲಾದವರು ಎನ್ನುವ ಅವಾಸ್ತವವನ್ನು ಈ ಸಿನೆಮಾ ಹೇಳುತ್ತದೆ. ಒಂದು ರೀತಿಯಲ್ಲಿ ಪ್ಯಾಂಟಸಿಯನ್ನು ಸೃಷ್ಟಿಸಿ ನೋಡುಗರಲ್ಲಿ ಚಿತ್ತಭ್ರಮೆ ಹುಟ್ಟಿಸುವ ಪ್ರಯತ್ನ ನೋಡಲು ಸೊಗಸಾಗಿದ್ದರೂ ಚಾರಿತ್ರಿಕವಾಗಿ ಅವಾಸ್ತವವಾಗಿದೆ. ತರ್ಕಗಳಿಗೆ ಹೊರತಾಗಿದೆ. ಯಾವುದು ಸಂಪೂರ್ಣ ಅರ್ಥವಾಗುವುದಿಲ್ಲವೋ ಅದಕ್ಕೆ ಅತೀಂದ್ರೀಯತೆಯನ್ನು ಆರೋಪಿಸುವುದು ನಮ್ಮ ಸನಾತನ ಸಂಪ್ರದಾಯವಾಗಿದೆ.


ಪವಾಡಗಳನ್ನು ಹೊರತುಪಡಿಸಿ ಅಲ್ಲಮನನ್ನು ಮನುಷ್ಯಸಹಜ ಅಲ್ಲಮನನ್ನಾಗಿಯೇ ಚಿತ್ರೀಕರಿಸಿದ್ದರೆ ಅಲ್ಲಮ ಒಂದಿಷ್ಟು ದಕ್ಕುತ್ತಿದ್ದ. ಆದರೆ ಹೀಗೆ ಅತೀಂದ್ರೀಯ ಶಕ್ತಿಯುಳ್ಳ ಅತಿಮಾನುಷನನ್ನು ಸೃಷ್ಟಿಸಿದ್ದರಿಂದಾಗಿ ಅಲ್ಲಮ ಪವಾಡಪುರುಷನಾಗಿಯೇ ಉಳಿದುಬಿಟ್ಟ. ನಾಗಾಭರಣರಂತಹ ಸೂಕ್ಷ್ಮ ಪ್ರಜ್ಞೆಯ ನಿರ್ದೇಶಕರುಗಳು ವಾಸ್ತವಕ್ಕೆ ಹೆಚ್ಚು ಮಹತ್ವಕೊಟ್ಟು ಅವಾಸ್ತವ ಪವಾಡಗಳ ಮೌಡ್ಯಗಳಿಂದ ಹೊರಬಂದಿದ್ದರೆ ಕನಿಷ್ಟ ಅಲ್ಲಮನ ಬಗ್ಗೆ ಜನಸಾಮಾನ್ಯರಿಗೆ ಇರುವ ವಿಕ್ಷಿಪ್ತ ನಂಬಿಕೆಯನ್ನಾದರೂ ದೂರಮಾಡಬಹುದಾಗಿತ್ತು.  ಸಿನೆಮಾ ಎನ್ನುವುದು ಎಂತಹ ಪ್ರಭಾವಶಾಲಿ ಮಾಧ್ಯಮವೆಂದರೆ ಅದರಲ್ಲಿ ತೋರಿಸಿದ್ದೇ ಪರಮಸತ್ಯ ಎಂದು ನಂಬುವ ಬಹುಸಂಖ್ಯಾತ ಜನರಿದ್ದಾರೆ. ಹೀಗಾಗಿ ಐತಿಹಾಸಿಕ ವ್ಯಕ್ತಿಯನ್ನು ಸಿನೆಮಾದಲ್ಲಿ ತೋರಿಸುವಾಗ ಪೌರಾಣಿಕ ಪರಿಕಲ್ಪನೆಗಳನ್ನು ಆರೋಪಿಸುವುದು ಸಮಂಜಸವಲ್ಲ. ವಾಸ್ತವ ಪ್ರಜ್ಞೆಯನ್ನು ಜನರಲ್ಲಿ ಮೂಡಿಸಬೇಕಾದ ಹೊಣೆಗಾರಿಕೆ ಸೃಜನಶೀಲ ನಿರ್ದೇಶಕರ ಮೇಲೆ ಇದ್ದೇ ಇರುತ್ತದೆ ಎನ್ನುವುದನ್ನು ನಾಗಾಭರಣರಂತಹ ಕ್ರಿಯಾಶೀಲ ನಿರ್ದೇಶಕರಿಗೆ ಬೇರೆ ಯಾರೂ ಹೇಳುವ ಅಗತ್ಯವಿಲ್ಲ.

ಈ ಪವಾಡ ಹಾಗೂ ಪ್ಯಾಂಟಸಿಸಂ ತಂತ್ರಗಳನ್ನು ಪಕ್ಕಕ್ಕಿಟ್ಟು ನೋಡಿದರೂ ಮೂರು ವರ್ಷಗಳ ನಿರ್ದೇಶಕರ ಅಧ್ಯಯನ ಸಿನೆಮಾಗಳಲ್ಲಿ ತೋರುತ್ತಿಲ್ಲಾ. ಈ ಹಿಂದೆ ಲಕ್ಷ್ಮೀಪತಿ ಕೋಲಾರರವರು ರಂಗನಿರಂತರಕ್ಕೆ ಅಲ್ಲಮನ ಬಯಲಾಟ ಎನ್ನುವ ನಾಟಕವೊಂದನ್ನು ಬರೆದಿದ್ದರು. ಹೆಚ್ಚು ಕಡಿಮೆ ಈ ಸಿನೆಮಾದಲ್ಲಿ ಆ ನಾಟಕದ ಅಂಶಗಳೇ ತುಂಬಿವೆ. ಇದನ್ನು ಹೇಳಲು ಇಷ್ಟೊಂದು ಅಧ್ಯಯನ ಹಾಗೂ ಅಷ್ಟೊಂದು ಸಲ ತಿದ್ದುಪಡಿಗಳು ಬೇಕಾಗಿತ್ತಾ? ಐದು ಪಿಹೆಚ್‌ಡಿ ಮಾಡಿದಷ್ಟು ಅನುಭವವನ್ನು ಗಳಿಸಿದೆ ಎಂದು ನಾಗಾಭರಣರವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದರಲ್ಲಿ ನಿಜಕ್ಕೂ ಸತ್ಯಾಂಶವಿತ್ತೆ? ನಾಟಕದ ಅಂಶಗಳನ್ನೇ ಆಧರಿಸಿ ಸಿನೆಮಾ ಮಾಡುವುದೇ ಆಗಿದ್ದರೆ ಅಲ್ಲಮನ ಕುರಿತು ಸಾಣೇಹಳ್ಳಿ ಶಿವಸಂಚಾರ ರೆಪರ್ಟರಿ ಮಾಡಿದ ನಾಟಕವನ್ನಾದರೂ ರೆಫರ್ ಮಾಡಬಹುದಾಗಿತ್ತು. ಯಾಕೆಂದರೆ ಈ ನಾಟಕದಲ್ಲಿ ಎಲ್ಲೂ ಪವಾಡಗಳನ್ನು ತೋರಿಸದೇ ತರ್ಕಕ್ಕೆ ಹತ್ತಿರವಾಗಿ ನಾಟಕ ಪ್ರಸ್ತುತಗೊಂಡಿತ್ತು. ಹೋಗಲಿ ಇಷ್ಟೆಲ್ಲಾ ಮಾಡಿದರೂ ಅಲ್ಲಮದ ಕಥಾನಕ ಆ ಕಾಲಘಟ್ಟವನ್ನಾದರೂ ವಸ್ತುನಿಷ್ಟವಾಗಿ ಹಿಡಿದಿಟ್ಟಿದೆಯಾ ಅಂದರೆ ಅದೂ ಸಾಧ್ಯವಾಗಿಲ್ಲ. ಅಲ್ಲಮ ಅರ್ಥವಾಗದಿದ್ದರೂ ಅಲ್ಲಮನ ಕಾಲಘಟ್ಟವಾದರೂ ಅರ್ಥವಾಗಬೇಕಿತ್ತು.. ಅದೂ ಆಗಿಲ್ಲ. ಕೆಲವಾರು ನ್ಯೂನ್ಯತೆಗಳು ಸಿನೆಮಾದಲ್ಲಿವೆ.


ಆ ಕಾಲಘಟ್ಟದಲ್ಲಿ ವೈದಿಕ ಪರಂಪರೆ ಪ್ರಖರವಾಗಿತ್ತು. ವೈದಿಕಪಾಠಶಾಲೆಯಲ್ಲಿ ಬ್ರಾಹ್ಮಣರಿಗೆ ಮಾತ್ರ ಸಂಸ್ಕೃತ ವಿದ್ಯಾಬ್ಯಾಸ ಕಲಿಸಲಾಗುತ್ತಿತ್ತು. ಶೂದ್ರರಿಗೆ ಅಕ್ಷರಭ್ಯಾಸವನ್ನೇ ಬಹಿಷ್ಕರಿಸಲಾಗಿತ್ತು. ಆದರೆ ಈ ಸಿನೆಮಾದಲ್ಲಿ ಅಬ್ರಾಹ್ಮಣನಾದ ನಟವರ ಕುಲದ ನೃತ್ಯಗಾತಿಯ ಮಗನಾದ ಅಲ್ಲಮನನ್ನು ಬ್ರಾಹ್ಮಣ ವಟುಗಳ ಜೊತೆಗೆ ವಿದ್ಯಾಬ್ಯಾಸ ಮಾಡಿಸಿದ್ದನ್ನು ಅದು ಹೇಗೋ ಸಹಿಸಿಕೊಳ್ಳಬಹುದು ಆದರೆ ವೇದಾದ್ಯಯನ ಕೇಂದ್ರದಲ್ಲಿ ಬ್ರಾಹ್ಮಣ್ಯದ ಕುರುಹುಗಳೇ ಇಲ್ಲದಂತೆ ಮಾಡಿದ್ದರ ಹಿಂದಿನ ಔಚಿತ್ಯವೇನೋ ಗೊತ್ತಿಲ್ಲಾ. ಯಾವ ವೇದಗುರುಗಳಾಗಲಿ ವಟುಗಳಾಗಲಿ ಕನಿಷ್ಟ ಜನಿವಾರವನ್ನೂ ಸಹ ತೊಡಿಸದೇ ಹೊಲ್ ಸೇಲ್ ಆಗಿ ಎಲ್ಲಾ ಪಾತ್ರಗಳ ಹಣೆಗೂ ವಿಭೂತಿಯನ್ನು ಬಳಿದಿದ್ದು ವೈದಿಕ ಶಾಲೆ ವೀರಶೈವ ಲಿಂಗಾಯತ ಮಠದ ಪಾಠಶಾಲೆಯಾಗಿ ಕಾಣುತ್ತಿತ್ತು. ಅಕಸ್ಮಾತ್ ಅದು ಲಿಂಗಾಯತ ಪಾಠಶಾಲೆ ಎಂದುಕೊಂಡರೂ ಅಲ್ಲಿ ಸಂಸ್ಕೃತ ಶ್ಲೋಕಗಳ ವೇದಾದ್ಯಯನ ಕಲಿಸಲಾಗುತ್ತಿತ್ತು ಎನ್ನುವುದು ತರ್ಕಾತೀತವಾಗದ ಸಂಗತಿ. ಇಷ್ಟೇ ಅಲ್ಲದೆ ಅಲ್ಲಮನ ಕಾಲಕ್ಕೆ ವೇದಾದ್ಯಯನ ಮಾಡಲು ಮದುವೆಯಾದ ಮಹಿಳೆಯರಿಗೆ ಅವಕಾಶವಿದೆ ಎಂಬುದಕ್ಕೆ ಪುರಾವೆಗಳೇನೂ ಇಲ್ಲದಿದ್ದರೂ ಈ ಸಿನೆಮಾದಲ್ಲಿ ಅದರ ಪ್ರಸ್ತಾಪವಂತೂ ಇದೆ. ಆದರೆ ೧೨ನೇ ಶತಮಾನದಲ್ಲಿ ಅನುಭವಮಂಟಪ ಹೊರತುಪಡಿಸಿ ವಿವಾಹಿತ ಮಹಿಳೆಯರಿಗೆ ಯಾವುದೇ ಗುರುಪೀಠ ಅವಕಾಶ ಮಾಡಿಕೊಟ್ಟಿದ್ದು ಅಸಾಧ್ಯದ ಮಾತೇ ಆಗಿದೆ. ಹೀಗೆ ಹಲವಾರು ನಂಬಲಸಾಧ್ಯವಾದ ಅಂಶಗಳು ಸಿನೆಮಾದಲ್ಲಿವೆ. ಚರಿತ್ರೆಯ ವಾಸ್ತವಿಕ ಅಧ್ಯಯನದಲ್ಲಿ ಹಾಗೂ ಅದನ್ನು ಕೂಲಂಕುಶವಾಗಿ ಪರಿಶೀಲಿಸಿ ತರ್ಕಬದ್ದವಾಗಿ ನಿರೂಪಿಸುವಲ್ಲಿ ಸಿನೆಮಾ ಸೋತಿದೆ.

ಅಲ್ಲಮದಲ್ಲಿ ಕೆಲವು ನಾಟಕೀಯ ಬೆಳವಣಿಗೆಗಳು ತರ್ಕಕ್ಕೆ ಮೀರಿ ಮೂಡಿಬಂದಿವೆ. ಪ್ರೀತಿಸುವ ಅಬ್ಬೆಯನ್ನು ಮದ್ಯರಾತ್ರಿ ಬಿಟ್ಟು ಅನಾಮಧೇಯನ ಜೊತೆಗೆ ಅಲ್ಲಮ ಹೊರಡುವುದು, ಗುರುಕುಲದಲ್ಲಿ ಅವಿವಾಹಿತ ಮಹಿಳೆಗೆ ಶಿಕ್ಷಣವಿಲ್ಲವೆಂದು ತಿಳಿದ ತಕ್ಷಣ ಅದನ್ನು ಪ್ರತಿಭಟಿಸಿ ಪಾಠಶಾಲೆಯಿಂದ ಹೊರನಡೆಯುವುದು, ಮಾಯೆಯ ಮಾಯೆಯಿಂದ ಬಿಡಿಸಿಕೊಂಡು ಬನವಾಸಿಯ ದಾರಿ ಹಿಡಿಯುವುದು ಕೊನೆಗೆ ಕಲ್ಯಾಣಕ್ಕೆ ಬಂದಷ್ಟೇ ಶೀಘ್ರವಾಗಿ ಕಲ್ಯಾಣದ ಅವಣತಿ ಅರಿತು ಶ್ರೀಶೈಲಕ್ಕೆ ಹೋಗಿ ಬಯಲಲ್ಲಿ ಬಯಲಾಗುವುದು ಈ ಸಿನೆಮಾದ ಪ್ರಮುಖ ಘಟನೆಗಳು. ಆದರೆ.. ಇಲ್ಲಿ ಯಾವುದಕ್ಕೂ ಸಶಕ್ತ ಕಾರಣಗಳಿಲ್ಲ. ಅಲ್ಲಮನ ನಡೆಯನ್ನು ನಿರ್ದೇಶಕರು ಮೊದಲೇ ತೀರ್ಮಾನಿಸಿ ಅದಕ್ಕೆ ದುರ್ಬಲ ಕಾರಣಗಳನ್ನು ಮುಂದೆ ಮಾಡಿ ಸನ್ನಿವೇಶದಿಂದ ಸನ್ನಿವೇಶಕ್ಕೆ ಹಾರುವ ದಾವಂತಕ್ಕೆ ಒತ್ತುಕೊಟ್ಟಿದ್ದಾರೆ. ಇದರಿಂದಾಗಿ ಗಂಭೀರವಾಗಿ ಸಿನೆಮಾ ನೋಡುವವರಿಗೆ ಯಾವುದೂ ಕನ್ವೀಯನ್ಸ್ ಆಗದೇ ಬಿಡಿ ಘಟನೆಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾದ ಅನಿವಾರ್ಯತೆ ಇದೆ.


ಅಲ್ಲಮನಿಗೆ ನಿಜವೈರಾಗ್ಯ ಪ್ರಾಪ್ತಿಯಾಗಿದ್ದಕ್ಕೆ ಹರಿಹರನ ಕಾಮಲತೆ ಪ್ರಕರಣ ಹೆಚ್ಚು ಸಮರ್ಥನೀಯವಾಗಿದೆ. ಜೀವಕ್ಕೆ ಜೀವವಾಗಿ ಪ್ರೀತಿಸಿದ್ದ ಕಾಮಲತೆ ಮಹಾಜ್ವರದಿಂದ ಬಳಲಿ ತೀರಿಕೊಂಡಾಗ ಆ ಅಗಲಿಕೆಯಿಂದ ಜಗತ್ತೇ ಶೂನ್ಯವಾಗಿ ಗೋಚರಿಸಿದಾಗ ಅಲ್ಲಮ ವಿರಾಗಿಯಾದ ಎನ್ನುವ ಹರಿಹರನ ಪ್ರಭುಲಿಂಗ ಕಥಾನಕ ಅಲ್ಲಮನ ವ್ಯರಾಗ್ಯಕ್ಕೆ ನಂಬಬಹುದಾದ ಪುರಾವೆಗಳನ್ನು ಒದಗಿಸುತ್ತದೆ ಆದರೆ.. ಈ ಅಲ್ಲಮ ಸಿನೆಮಾದಲ್ಲಿ ಮಾಯೆಯನ್ನು ಅಲ್ಲಮ ತನ್ನ ಮನೋನಿಗ್ರಹದಿಂದ ಸೋಲಿಸಿ ವಿರಾಗಿಯಾದನೆಂದು ತೋರಿಸಲಾಗಿದೆ. ಹಾಗೂ ಇಲ್ಲೂ ಕೂಡಾ ಪುರುಷಪ್ರಧಾನ್ಯತೆ ಎದ್ದು ಕಾಣುವಂತಿದೆ. ಹೆಣ್ಣು ಅಂದರೆ ಮಾಯೆ. ಪುರುಷನನ್ನು ತನ್ನ ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡು ಸೋಲಿಸಲು ಹೆಣ್ಣು ಪ್ರಯತ್ನಿಸುತ್ತಾಳೆ. ಅಲ್ಲಮನಂತವರು ಮಾಯೆಯನ್ನೇ ಗೆಲ್ಲುತ್ತಾರೆ ಎಂದು ಪರೋಕ್ಷವಾಗಿ ಹೇಳಲಾಗಿದೆ. ಈ ಸಿನೆಮಾದಲ್ಲಿ ಸೃಷ್ಟಿಗೊಂಡ ಮಾಯೆ ಪಾತ್ರವು ಒಲವಿನ ತೀವ್ರತೆಗೊಳಗಾಗಿ ಅಲ್ಲಮನನ್ನು ಬಯಸಿದ್ದಕ್ಕಿಂತಲೂ ಆತನನ್ನು ಸೋಲಿಸುವ ಛಲಕ್ಕಾಗಿಯೇ ಪ್ರೀತಿಸಿದಂತಿದೆ. ಅಲ್ಲಮನ ವೇಶದಲ್ಲಿ ಬಂದ ಬಹುರೂಪಿ ಶಿವಯ್ಯನ ಎದೆಯ ಮೇಲೆ ಕಾಲಿಟ್ಟು ತಾನೇ ಗೆದ್ದೆ ಎಂದು ಮಾಯೆ ಬೀಗುತ್ತಾಳೆ. ಆದರೆ ಮಾಯೆಯ ತಂತ್ರಕ್ಕೆ ಪ್ರತಿತಂತ್ರ ಹೂಡಿದ ಅಲ್ಲಮ ತನ್ನ ಬದಲಾಗಿ ಶಿವಯ್ಯನನ್ನು ಕಳುಹಿಸಿ ಗೆಲ್ಲುತ್ತಾನೆ. ಇಲ್ಲಿ ಪ್ರೀತಿಯೆಂಬುದು ಸಹ ಸೋಲು ಗೆಲುವಿನಾಟವಾದಂತಿದೆ. ಹೆಣ್ಣನ್ನು ಮಾಯೆಯೆಂದೇ ತೋರಿಸುವ ಹಾಗೂ ಮಾಯೆಯನ್ನು ಸೋಲಿಸಿ ತನ್ನ ಮನೋನಿಗ್ರಹವನ್ನು ಸಾಬೀತುಪಡಿಸುವುದೇ ಅಲ್ಲಮನ ಉದ್ದೇಶವಾಗಿದೆ ಎಂಬಂತೆ ಚಿತ್ರಿಸಲಾಗಿದೆ. ಯಾವ ಆಯಾಮದಲ್ಲಿ ನೋಡಿದರೂ ಅಲ್ಲಮನ ವೈರಾಗ್ಯಕ್ಕೆ ಈ ಸಿನೆಮಾದಲ್ಲಿ ಸೂಕ್ತ ಕಾರಣಗಳು ಇಲ್ಲವಾಗಿದೆ. ಹೀಗಾಗಿ ಆಳವೇ ಎತ್ತರ ಎನ್ನುವುದಿಲ್ಲಿ ಸಾಬೀತಾಗದೇ ಅಲ್ಲಮ ಸಿನೆಮಾ ಆಳಕ್ಕೂ ಇಳಿಯದೇ ಎತ್ತರಕ್ಕೂ ಏರದೇ ಬರೀ ಬಿಡಿ ಘಟನೆಗಳನ್ನು ನಿರ್ದೇಶಕರ ಇಷ್ಟದಂತೆ ಜೋಡಿಸಿ ಬೆರಗನ್ನು ತೋರಿಸದೇ ಬಯಲನ್ನು ಮಾತ್ರ ತೋರಿಸಿ ಇದೇ ಅಲ್ಲಮ ಎಂದು ನಂಬಿಸುವ ಪ್ರಯತ್ನವನ್ನು ಬದ್ದತೆಯಿಂದ ಮಾಡಲಾಗಿದೆ.
  

ಅಲ್ಲಮನ ವಚನಗಳನ್ನು ಸರಳ ವಚನಗಳು ಹಾಗೂ ಬೆಡಗಿನ ವಚನಗಳು ಎಂದು ವಿಭಾಗೀಕರಿಸಲಾಗುತ್ತದೆ. ಈ ಸಿನೆಮಾದಲ್ಲೂ ಸಹ ಸರಳ ವಚನಗಳನ್ನೇ ಹೆಚ್ಚಾಗಿ ಬಳಸಿದ್ದು ಅವುಗಳು ಸಂಭಾಷಣೆಯ ಭಾಗವಾಗಿದ್ದು ಕೆಲವೆಡೆ ಗಮನಸೆಳೆಯುತ್ತವೆ. ಸಿನೆಮಾದ ಮೂಲ ವಸ್ತು-ವಿಷಯ-ನಿರೂಪನೆಯನ್ನು ಹೊರತು ಪಡಿಸಿ ಶಶಿಧರ್ ಅಡಪರವರ ಸೆಟ್ ವೈಭವ ಹಾಗೂ ನಾಗಿನಿ ಭರಣರವರ ವಸ್ತ್ರವಿನ್ಯಾಸ ಮತ್ತು ಜಿ.ಎಸ್.ಭಾಸ್ಕರ್‌ರವರ ಛಾಯಾಗ್ರಹಣ ಇಡೀ ಸಿನೆಮಾವನ್ನು ಶ್ರೀಮಂತಗೊಳಿಸಿವೆ. ಅಲ್ಲಮ ಹಾಗೂ ಮಾಯೆಯ ಶೃಂಗಾರ ಸನ್ನಿವೇಶದಲ್ಲಂತೂ ದೃಶ್ಯಸಂಯೋಜನೆ ಹಾಗೂ ಕ್ಯಾಮರಾ ಕೈಚಳಕ ಅನನ್ಯವಾಗಿ ಮೂಡಿಬಂದಿದೆ. ಅಲ್ಲಮನಾಗಿ ಧನಂಜಯ್ ಅಭಿನಯ ಗಮನಸೆಳೆಯುವಂತಿದೆ ಆದರೂ ವಯೋವೃದ್ದ ಅಲ್ಲಮನ ದ್ವನಿಯಲ್ಲಿ ಸ್ಪಷ್ಟತೆಯಿಲ್ಲದಂತಾಗಿದೆ. ಒಂದೊಂದು ಆಂಗಲ್ಲಲ್ಲಿ  ಒಂದೊಂದು ರೀತಿ ಕಾಣಿಸುವ ಮೇಘನಾ ರಾಜ್ ಮಾಯೆಯ ಪಾತ್ರಕ್ಕೆ ಜೀವತುಂಬಿದೆಯಾದರೂ ನಾಟ್ಯದ ಸಂದರ್ಭದಲ್ಲಿ ಅಲ್ಲಮನ ತಾಯಿ ಲಕ್ಷ್ಮೀ ಗೋಪಾಲಸ್ವಾಮಿಯವರು ಮೇಘನಾರವರನ್ನು ಮೀರಿಸುವಂತೆ ಅದ್ಭುತವಾಗಿ ನೃತ್ಯ ಮಾಡಿದ್ದಾರೆ. ಬಾಲಕ ಅಲ್ಲಮನ ಪಾತ್ರ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದ್ದಂತೂ ಸತ್ಯ. ಚಿತ್ರಕಥೆಯಲ್ಲಿ ಒಂದಿಷ್ಟು ತಕರಾರಿದ್ದರೂ ತುಂಬಾ ಸಿದ್ದತೆ ಹಾಗೂ ಬದ್ದತೆಯಿಂದ ಮಾಡಿದ ಅಲ್ಲಮ ಜನರನ್ನು ತಲುಪಬೇಕಿದೆ. ಇಂತಹ ಕ್ಲಾಸಿಕ್ ಮಾದರಿಯ ಸಿನೆಮಾಗಳನ್ನು ಗೆಲ್ಲಿಸುವ ಮೂಲಕ ಮತ್ತೆ ಮತ್ತೆ ಇಂತಹ ಚಲನಚಿತ್ರಗಳು ತಯಾರಾಗಲು ಕನ್ನಡಿಗರು ಪ್ರೋತ್ಸಾಹಿಸಬೇಕಿದೆ. ಅವರವರಿಗೆ ಸಿಕ್ಕಷ್ಟು ಅಲ್ಲಮನನ್ನು ಪ್ರೇಕ್ಷಕರು ದಕ್ಕಿಸಿಕೊಳ್ಳಬೇಕಿದೆ.    

            -ಶಶಿಕಾಂತ ಯಡಹಳ್ಳಿ 
  




ಗುರುವಾರ, ಜನವರಿ 26, 2017

ತಹ ತಹ..... 73 ಸಂವಿಧಾನದ ಆಶಯಗಳ ಸಮಾಧಿಯ ಮೇಲೆ ಸಂಭ್ರಮಿಸುತ್ತಿದೆ ಗಣರಾಜ್ಯೋತ್ಸವ :







ಭಾರತ ದೇಶ ಇವತ್ತು ಜನವರಿ 26ರಂದು ಗಣರಾಜ್ಯೋತ್ಸವ ದಿನವನ್ನು ಸಂಬ್ರಮದಿಂದ ಆಚರಿಸುತ್ತಿದೆ. ಯಾವುದೇ ಸಂಭ್ರಮ ಎನ್ನುವುದು ಬಹುಜನರ ಬದುಕಿನ ಭಾಗವಾದಾಗ ವಿಜ್ರಂಭಿಸುವ ರೀತಿಯೇ ಬೇರೆ.. ಅದು ಕೇವಲ ಸರಕಾರಿ ಪ್ರೊಟೋಕಾಲ್ ಕಾರ್ಯಕ್ರಮವಾದಾಗ ಬರೀ ಭ್ರಮೆಂiiನ್ನುಂಟುಮಾಡುವ ಸಾಧನವಾಗುತ್ತದೆ. ಈಗ ಆಗಿದ್ದೂ ಸಹ ಅದೇ. ದೇಶಭಕ್ತಿ ಎನ್ನುವುದನ್ನು ಜನರ ಮೇಲೆ ಹೇರಿಕೆ ಮಾಡಲಾಗದು. ದೇಶಕ್ಕಾಗಿ ಏನು ಮಾಡಿದೆ ಎನ್ನುವುದನ್ನು ಹೇಳು... ದೇಶ ನಿನಗಾಗಿ ಏನು ಮಾಡಿದೆ ಎಂದು ಕೇಳಬೇಡಾ ಎನ್ನುವ ಸೂಡೋ ದೇಶಪ್ರೇಮಿಗಳ ಮಾತುಗಳು ದೇಶವಾಸಿಗಳಲ್ಲಿ ದೇಶಭಕ್ತಿಯನ್ನು ತುಂಬಲಾರವು. ಯಾವಾಗ ಬಹುಸಂಖ್ಯಾತ ಕೂಲಿ ಕಾರ್ಮಿಕ ಜನರು ತಮಗರಿವಿಲ್ಲದೇ ದೇಶದ ಕೋಶ ತುಂಬಲು ಬೆವರು ಸುರಿಸುತ್ತಿದ್ದಾರೋ.. ಯಾವಾಗ ಕೋಟ್ಯಾಂತರ ರೈತರು ದೇಶವಾಸಿಗಳ ಹಸಿವನ್ನು ನೀಗಿಸಲು ಬದುಕನ್ನೇ ಬಸಿಯುತ್ತಿದ್ದಾರೋ ಅಂತವರಿಗೆ ಈ ದೇಶ ಕೊಟ್ಟಿದ್ದೇನು? ಇಂದಿಲ್ಲಾ ನಾಳೆ ನಮ್ಮ ಬದುಕು ಹಸನಾದೀತು ಎಂದು ಕಳೆದ ಏಳು ದಶಕಗಳಿಂದ ಭಾರತದ ದುಡಿಯುವ ಜನತೆ ಅಪಾರ ನಿರೀಕ್ಷೆಗಳೊಂದಿಗೆ ಕಾಯುತ್ತಲೇ ಇದೆ. ಆದರೆ.. ದೇಶವಾಳುವವರು ಕಾಲಕಾಲಕ್ಕೆ ಜನತೆಯನ್ನು ಭ್ರಮೆಯಲ್ಲಿಟ್ಟು.. ಇಲ್ಲಸಲ್ಲದ ಭರವಸೆಗಳನ್ನು ಕೊಟ್ಟು ತಮ್ಮ ಅಧಿಕಾರ ರಾಜಕಾರಣದಾಟವನ್ನು ಮುಂದುವರೆಸಿದರೇ ವಿನಹಾ ಮತದಾರರ ಬದುಕನ್ನಂತೂ ಬದಲಾಯಿಸಲಾಗಲಿಲ್ಲ. ದೇಶ ಅಂದರೆ ದೇಶವಾಳುವವರು ಈ ದೇಶದ ಶ್ರಮಿಕರ ಬದುಕನ್ನು ಸಹ್ಯವಾಗಿಸಲು.. ಅವರಿಗೆ ಸಿಗಬೇಕಾದ ಸವಲತ್ತುಗಳನ್ನು ದೊರಕಿಸಲು ಏನನೂ ಮಾಡದೇ ಇರುವಾಗ ಆ ಜನತೆ ಯಾಕೆ ಈ ದೇಶವನ್ನು ತಮ್ಮದು ಎನ್ನಬೇಕು.. ಬಂಡವಾಳಿಗರ ಪರವಾಗಿರುವ ಆಳುವವರ್ಗವನ್ನು ತಮ್ಮ ಉದ್ದಾರಕರು ಎಂದು ಒಪ್ಪಿಕೊಳ್ಳಬೇಕು? ವ್ಯಯಕ್ತಿಕ ಬದುಕಲ್ಲಿ ಸ್ವಾತಂತ್ರವೇ ಬರದಿರುವಾಗ ಸ್ವಾತಂತ್ರ್ಯ ದಿನಾಚರಣೆಯನ್ನು ಯಾಕೆ ಆಚರಿಸಬೇಕು? ಗಣರಾಜ್ಯದ ಸಂವಿಧಾನದ ಆಶಯಗಳೇ ಜಾರಿಯಾಗದಿರುವಾಗ ಯಾಕೆ ಗಣರಾಜ್ಯೋತ್ಸವವನ್ನು ಸಂಭ್ರಮಿಸಬೇಕು? 


ಅರವತ್ತು ಏಳು ವರ್ಷಗಳ ಹಿಂದೆ ಜನವರಿ 26 ರಂದು ನಮ್ಮ ದೇಶ ಭಾರತ ತನ್ನದೇ ಆದ ಸಂವಿಧಾನವನ್ನು ರಚಿಸಿಕೊಂಡು ಜಾರಿಗೊಳಿಸಿದ ಐತಿಹಾಸಿಕ ದಿನ.  ಇಡೀ ದೇಶದ ಭವಿಷ್ಯವನ್ನು ರೂಪಿಸಲು.. ಬದಲಾಯಿಸಲು ಡಾ.ಅಂಬೇಡ್ಕರರ ಅಧ್ಯಕ್ಷತೆಯಲ್ಲಿ ರೂಪಗೊಂಡ ಸಂವಿಧಾನ ಅಧೀಕೃತವಾಗಿ ಜಾರಿಗೊಂಡ ದಿನ. ಅಂಬೇಡ್ಕರ್‌ರವರು ಸಂವಿಧಾನದಲ್ಲಿ ಅದರ ಉದ್ದೇಶ ಹಾಗೂ ಆಶಯಗಳನ್ನು ಬಹಳ ಸ್ಪಷ್ಟವಾಗಿಯೇ ನಮೂದಿಸಿದ್ದಾರೆ. ಅದು ಹೀಗಿದೆ ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಲೋಕತಾಂತ್ರಿಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ, ಈ ದೇಶದ ಎಲ್ಲಾ ಪ್ರಜೆಗಳಿಗೂ ಸಮಾನವಾಗಿ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಹಕ್ಕುಗಳನ್ನು ಕೊಡಮಾಡುತ್ತದೆ. ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಹಾಗೂ ಆರಾಧನೆಗಳಲ್ಲಿ ಸ್ವಾತಂತ್ರ್ಯ ವದಗಿಸುತ್ತಿದ್ದು, ಎಲ್ಲರಿಗೂ ಸಮಾನ ಅವಕಾಶಗಳನ್ನು ದೊರಕಿಸಿಕೊಡಲಾಗುತ್ತದೆ. ವ್ಯಯಕ್ತಿಕ ಘನತೆ ಹಾಗೂ ದೇಶದ ಒಗ್ಗಟ್ಟು ಮತ್ತು ಐಕ್ಯತೆ ಕಾಪಾಡಿಕೊಳ್ಳುವುದು ಹಾಗೂ ಭ್ರಾತೃತ್ವವನ್ನು ಪ್ರೋತ್ಸಾಹಿಸುವುದು ಸಂವಿಧಾನದ ಆಶಯವಾಗಿದೆ. ಎಂದು ಸಂವಿಧಾನದಲ್ಲಿ ಬರೆದು ಶಾಸನವನ್ನಾಗಿ ಒಪ್ಪಿಕೊಂಡು ಜಾರಿಗೊಳಿಸಲಾಯಿತು. ಹಾಗೂ ಜನವರಿ 26ರ ದಿನವನ್ನು ಗಣರಾಜ್ಯೋತ್ಸವದ ಹೆಸರಲ್ಲಿ ಆಚರಿಸಲಾಗುತ್ತದೆ.


ರೀಪಬ್ಲಿಕ್ ಡೇ ಆಚರಣೆಯಲ್ಲಿ ತಪ್ಪೇನಿಲ್ಲಾ.. ಇಂತಹ ಆಚರಣೆಗಳು ದೇಶಭಕ್ತಿಗೆ ಕಾರಣವಾಗುವುದಾದರೆ ಯಾರದೂ ಅಭ್ಯಂತರವಿಲ್ಲಾ. ಆದರೆ.. ಉದ್ದೇಶವೇ ಈಡೇರದೇ ಉತ್ಸವ ಮಾಡುವುದು ಪ್ರಶ್ನಾರ್ಹವಾಗಿದೆ. ಯಾಕೆಂದರೆ ಸಂವಿಧಾನ ಜಾರಿಯಾಗಿ 67ವರ್ಷಗಳು ಕಳೆದರೂ ಅದರ ಆಶಯಗಳು ಈಡೇರಿದವಾ? ಡಾ.ಅಂಬೇಡ್ಕರ್‌ರವರು ಕಂಡ ಕನಸಿನ ಭಾರತ ನಿರ್ಮಾಣವಾಗಿದೆಯಾ? ಇಲ್ಲಾ.. ಇಲ್ಲಿವರೆಗೂ ಸಾಧ್ಯವಾಗಿಲ್ಲಾ. ಆಗುವ ಲಕ್ಷಣಗಳೂ ಕಾಣುತ್ತಿಲ್ಲಾ. ಕೇವಲ ವಿದೇಶಿಯ ಆಳುವ ವರ್ಗ ಬದಲಾವಣೆಗೊಂಡು ಸ್ವದೇಶಿ ಆಳುವ ವರ್ಗಕ್ಕೆ ಅಧಿಕಾರ ಹಸ್ತಾಂತರವಾಗಿದೆಯೇ ಹೊರತು ಸಂವಿಧಾನದ ಉದ್ದೇಶಗಳು ಅಮೂಲಾಗ್ರವಾಗಿ ಇನ್ನೂ ಜಾರಿಗೆ ಬಂದಿಲ್ಲಾ. ಭಾರತವನ್ನು ಸಮಜವಾದಿ ಜಾತ್ಯಾತೀತ ಲೋಕತಾಂತ್ರಿಕ ಗಣತಂತ್ರವನ್ನಾಗಿ ಸ್ಥಾಪಿಸುವುದು ಸಂವಿಧಾನದ ಮೊಟ್ಟಮೊದಲ ಆಶಯವಾಗಿತ್ತು. ಅದರೆ.. ಜಾತಿಯ ಬೇರುಗಳು ಸಡಿಲಗೊಳ್ಳವ ಬದಲು ದಿನದಿಂದ ದಿನಕ್ಕೆ ಗಟ್ಟಿಯಾಗತೊಡಗಿವೆ. ಜಾತಿ ಸಂಘಟನೆಗಳು, ಜಾತಿ ಸಮ್ಮೇಳನಗಳು, ಜಾತಿಗೊಂದಿಷ್ಟು ಮಠಪೀಠಗಳು ಹೆಚ್ಚಿ ಜಾತಿ ಬಿಟ್ಟು ಬದುಕಲಾರದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಓಟಿನ ರಾಜಕೀಯ ಎನ್ನುವುದು ಜಾತಿಯೆಂಬುದನ್ನು ಜೀವಂತವಾಗಿಟ್ಟುಕೊಂಡೇ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡು ಬರುತ್ತಿದೆ. ಇಂತಹ ವಿಕ್ಷಿಪ್ತ ಪರಿಸ್ಥಿತಿಯಲ್ಲಿ ಜ್ಯಾತ್ಯಾತೀತ ರಾಷ್ಟ್ರ ನಿರ್ಮಾಣ ಎನ್ನುವುದು ಕನಸಿನ ಗಂಟಾಗಿಯೇ ಉಳಿದಿದೆ. ಇಂತಹುದರಲ್ಲಿ ಸಂವಿಧಾನದ ಜ್ಯಾತ್ಯಾತೀತ ಆಶಯ ಮೂಲೆಗುಂಪಾಗಿದೆ. ಇನ್ನು ಸರ್ವರ ಸಮಾನ ಬೆಳವಣಿಗೆಯನ್ನು ಬಯಸುವ ಸಮಾಜವಾದಿ ಗಣತಂತ್ರವಂತೂ ಆದರ್ಶ ಕಲ್ಪನೆಯಾಗಿಯೇ ಮುಂದುವರೆದಿದ್ದು ಅಸಮಾನ ವ್ಯವಸ್ಥೆ ನಮ್ಮ ದೇಶದ ಆಳುವ ವರ್ಗಗಳು ಉದ್ದೇಶಪೂರ್ವಕವಾಗಿಯೇ ಕಾಪಾಡಿಕೊಂಡು ಬರುತ್ತಿರುವ ವಾಸ್ತವವಾಗಿದೆ. 


ಈ ದೇಶದ ಪ್ರತಿಯೊಬ್ಬ ನಾಗರೀಕನಿಗೂ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಹಕ್ಕುಗಳನ್ನು ಸಂವಿಧಾನದಲ್ಲಿ ಕೊಡಲಾಗಿದೆ. ಆದರೆ ಈ ಹಕ್ಕುಗಳು ಈಗಲೂ ಉಳ್ಳವರ ಪಾಲಾಗಿವೆಯೇ ಹೊರತು ದುಡಿಯುವ ಜನರಿಗೆ ಇಲ್ಲವಾಗಿವೆ. ಬಲಾಢ್ಯರು ಮಾತ್ರ ಎಲ್ಲ ಸವಲತ್ತುಗಳೊಂದಿಗೆ ಬದುಕುವಂತಹ, ಅಧಿಕಾರಸ್ತರು ಮಾತ್ರ ವ್ಯವಸ್ಥೆಯ ಅನುಕೂಲತೆಗಳ ಫಲಾನುಭವಿಗಳಾಗುವಂತಹ ಪರಿಸ್ಥಿತಿಯನ್ನು ಈ ದೇಶದ ಆಳುವ ವರ್ಗಗಳು ಸೃಷ್ಟಿಸಿವೆ. ಸಂವಿಧಾನದಲ್ಲಿ.. ಕಾನೂನು ಕಾಯಿದೆಗಳಲ್ಲಿ ಮಾತ್ರ ಈ ಸಾಮಾನಿಕ ಆರ್ಥಿಕ ರಾಜಕೀಯ ಸ್ವಾತಂತ್ರ್ಯ ಎನ್ನುವುದು ಲಿಖಿತವಾಗಿದೆಯೇ ಹೊರತು ಜನಸಮಾನ್ಯರಿಗೆ.. ಕೊಟ್ಯಾಂತರ ಶ್ರಮಜೀವಿಗಳ ಪಾಲಿಗೆ ದಕ್ಕಿಯೇ ಇಲ್ಲಾ. ಇರುವ ಕಾನೂನುಗಳು ಉಳ್ಳವರ ಹಿತಾಸಕ್ತಿಯನ್ನು ಕಾಪಾಡಲು ನೆರವಾಗುತ್ತವೆಯೇ ಹೊರತು ಬಡವರ ಗೋಳಿಗೆ ನ್ಯಾಯದೊರಕಿಸಲು ಅಲ್ಲವೇ ಅಲ್ಲಾ. ಈ  ದೇಶದ ಜೈಲಿನಲ್ಲಿ ಶೇ.90 ರಷ್ಟು ಜನರು ದುಡಿಯುವ ಕೆಳವರ್ಗದವರೇ ಆಗಿದ್ದು ಅವರಿಗೆ ನ್ಯಾಯನಿರ್ಣಯವೆಂಬುದು ದುಬಾರಿಯ ಸರಕಾಗಿದೆ. ಕಾನೂನನ್ನು ಕೊಂಡುಕೊಳ್ಳುವ ಇಲ್ಲವೇ ಸಾಕ್ಷಿಗಳನ್ನು ಖರೀದಿಮಾಡಿ ಅನ್ಯಾಯವನ್ನು ನ್ಯಾಯಸಮ್ಮತ ಎನ್ನುವಂತೆ ಸಾಬೀತುಗೊಳಿಸುವ ತಾಕತ್ತಿರುವವರು ಕಾನೂನಿನ ಬಲೆಯಿಂದ ತಪ್ಪಿಸಿಕೊಳ್ಳುತ್ತಾರೆ.. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರು ಮತ್ತು ರಾಜಕೀಯ ಶಕ್ತಿ ಇಲ್ಲದವರು ಕಾನೂನಿನ ಉರುಳಿಗೆ ಸಿಕ್ಕಿಹಾಕಿಕೊಂಡು ನರಳುತ್ತಾರೆ. ಇದು ಖಂಡಿತಾ ಸಂವಿಧಾನದ ಆಶಯ ಅಲ್ಲವೇ ಅಲ್ಲಾ.. ಈ ದೇಶದಲ್ಲಿ ಹಣಬಲ, ಜನಬಲ ಹಾಗೂ  ಅಧಿಕಾರದ ಬಲ ಇದ್ದವರು ಮಾತ್ರ ಬದಕುತ್ತಾರೆ ಮತ್ತು ಅದು ಇಲ್ಲದವರು ಶೋಷಣೆಗೆ ಒಳಗಾಗುತ್ತಲೇ ಬಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ.. ಸಂವಿಧಾನದ ಸಮಾಧಿಯ ಮೇಲೆ ಅದು ಹೇಗೆ ಗಣರಾಜ್ಯೋತ್ಸವದ ಸಂಭ್ರಮವನ್ನು ದಮನಿತ ವರ್ಗ ಆಚರಿಸಲು ಸಾಧ್ಯ?

ಇನ್ನು ವಿಚಾರ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದಂತೂ ಹರಣವಾಗುತ್ತಲೇ ಬಂದಿದೆ. ಬಲಪಂಥೀಯ ಸರಕಾರ ಬಂದ ನಂತರವಂತೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹತ್ಯೆಯೇ ನಡೆಯುತ್ತಿದೆ. ಸತ್ಯವನ್ನು ಅನಾವರಣ ಮಾಡಿದ ತಪ್ಪಿಗೆ ದಾಬೋಲ್ಕರ್, ಡಾ.ಎಂ.ಎಂ.ಕಲಬುರ್ಗಿಯಂತವರ ಹತ್ಯೆ ಮಾಡಲಾಗುತ್ತದೆ. ಸತ್ಯ ಹೇಳುವ ಬಾಯಿಗಳನ್ನು ಮುಚ್ಚಲಾಗುತ್ತಿದೆ. ಮುಕ್ತವಾಗಿ ಇದ್ದದ್ದನ್ನು ಇದ್ದಹಾಗೆ ಹೇಳಿದರೆ ದೇಶದ್ರೋಹಿ ಎನ್ನುವ ಪಟ್ಟ ಕಟ್ಟಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ. ನಿಜ ಹೇಳಿದವರನ್ನು ಕಾನೂನಿನ ಕುಣಿಕೆಯಲ್ಲಿ ಸಿಕ್ಕಿಸಿ ನರಳುವಂತೆ ಮಾಡಲಾಗುತ್ತದೆ. ಸುಳ್ಳುಗಳನ್ನೇ ಸಾವಿರಾರು ಸಲ ಹೇಳಿ ಸತ್ಯ ಎನ್ನುವ ಭ್ರಮೆಯನ್ನು ಹುಟ್ಟಿಸುವ ಹುನ್ನಾರಗಳು ಸನಾತನವಾದಿಗಳಿಂದ ಅವ್ಯಾಹತವಾಗಿಯೇ ನಡೆಯುತ್ತಿದ್ದು ವಿರೋಧಿಸಿದವರನ್ನು ಶತಾಯ ಗತಾಯ ಮಟ್ಟಹಾಕುವ ಪ್ಯಾಸಿಸ್ಟ್ ತಂತ್ರಗಳು ಸಕ್ರೀಯವಾಗಿವೆ.


ನಂಬಿಕೆ ಭಕ್ತಿ ಆರಾಧನೆಯ ಸ್ವಾತಂತ್ರ್ಯವನ್ನು ಸಂವಿಧಾನ ಎಲ್ಲರಿಗೂ ಒದಗಿಸಿಕೊಟ್ಟಿದ್ದರೂ ಧರ್ಮದ ನಂಬಿಕೆ ಭಕ್ತಿ ಆರಾಧನೆಯನ್ನು ಅವಮಾನಿಸುವ ಮೂಲಕ ಕೋಮುದಳ್ಳುರಿಯನ್ನು ಹಚ್ಚುವ ಕೆಲಸಗಳು ಧರ್ಮಾಂಧರಿಂದ ನಡೆಯುತ್ತಿವೆ. ಈ ಭಕ್ತಿ ಆರಾಧನೆಗಳೇ ದೇಶಾದ್ಯಂತ ಹಲವಾರು ಹಿಂಸೆಗಳಿಗೆ ಕಾರಣವಾಗಿವೆ. ಸಂವಿಧಾನದ ಉದ್ದೇಶ ಅವರವರ ನಂಬಿಕೆಗಳನ್ನು ಇನ್ನೊಬ್ಬರಿಗೆ ತೊಂದರೆಯಾಗದಂತೆ ಆಚರಿಸಿಕೊಂಡು ಹೋಗಬಹುದು ಎನ್ನುವುದಾಗಿತ್ತು. ಆದರೆ ಅದು ಈಗ ಸಮಾಜದಲ್ಲಿ ಅಸಹಿಷ್ಣುತತೆಯನ್ನು ಹೆಚ್ಚಿಸಲು ಬಳಕೆಯಾಗುತ್ತಿರುವುದೊಂದು ದುರಂತ. ಯಾವಾಗ ಬಹುಸಂಖ್ಯಾತ ದುಡಿಯುವ ಜನತೆಯನ್ನೇ ಕಡೆಗಣಿಸಲಾಗಿದೆಯೋ ಆಗ ವ್ಯಯಕ್ತಿಕ ಘನತೆ ಎಲ್ಲಿರುತ್ತದೆ. ಈಗಲೂ ಲಿಂಗತಾರತಮ್ಯ ಅತಿಯಾಗಿದೆ, ಜೀತ ಪದ್ದತಿ ಜೀವಂತವಾಗಿದೆ, ದಲಿತ ಶೂದ್ರರ ಮೇಲೆ ಹಲ್ಲೆ ಹತ್ಯೆಗಳು ಅವ್ಯಾಹತವಾಗಿವೆ, ರೈತರ ಗೋಳು ತೀರದಾಗಿದೆ, ಇಂತಹ ಸಂದರ್ಭದಲ್ಲಿ ಅದೆಲ್ಲಿದೆ ವ್ಯಕ್ತಿಯ ಘನತೆ.. ಆ ಘನತೆಯನ್ನು ಕಾಪಾಡಿಕೊಂಡು ಹೋಗಬೇಕಾದ ಆಳುವ ಸರಕಾರಗಳು ಚುನಾವಣೆಯ ಸಂದರ್ಭವೊಂದನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಸಮಯದಲ್ಲೂ ದುಡಿಯುವ ವರ್ಗದ ಘನತೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲಾ.

ಇನ್ನು ದೇಶದ ಒಗ್ಗಟ್ಟು ಹಾಗೂ ಐಕ್ಯತೆಯನ್ನು ಕಾಪಾಡಿಕೊಳ್ಳಬೇಕೆಂಬುದು ಸಂವಿಧಾನದ ಮಹತ್ತರವಾದ ಆಶಯ. ಆದರೆ ದೇಶವಾಸಿಗಳಿಗೆ ದೇಶದ ಆಳುವ ವರ್ಗ ಏನನ್ನೂ ಮಾಡದೇ ಇರುವಾಗ.. ಬಡಜನರ ಹೆಸರಲ್ಲಿ ನೂರಾರು ಯೋಜನೆಗಳನ್ನು ಹಾಕಿ ಹಣ ಲೂಟಿ ಮಾಡುತ್ತಿರುವಾಗ ದೇಶದ ಬಗ್ಗೆ ಜನರಲ್ಲಿ ಪ್ರೀತಿ ಹುಟ್ಟೀತು ಹೇಗೆ? ಆದರೂ ಎಲ್ಲವನ್ನೂ ಸಹಿಸಿಕೊಂಡು ದೇಶದ ಮೇಲೆ ಇನ್ನೂ ಪ್ರೀತಿಯನ್ನು ಜನತೆ ಇಟ್ಟುಕೊಂಡಿದ್ದರೆ ಅದಕ್ಕೆ ಇಂದಿಲ್ಲಾ ನಾಳೆ ಸಂವಿಧಾನದ ಆಶಯಗಳು ಈಡೇರಬಹುದು ಎನ್ನುವ ಆಸೆಯೇ ಕಾರಣವಾಗಿದೆ. ಜನರು ಈ ದೇಶದ ಮೇಲೆ ಇಟ್ಟಿರುವ ದೇಶಪ್ರೇಮವನ್ನೂ ಸಹ ದುರುಪಯೋಗಪಡಿಸಿಕೊಂಡು ದೇಶಭಕ್ತಿಯ ಉನ್ಮಾದವನ್ನು ಹುಟ್ಟಿಸಿ ದೇಶವಾಳುವ ಅಧಿಕಾರವನ್ನು ಖಾಯಂಗೊಳಿಸಿಕೊಳ್ಳಲು ಆಳುವ ವರ್ಗಗಳು ಪ್ರಯತ್ನಿಸುತ್ತಲೇ ಬಂದಿವೆ. ಒಂದಿಷ್ಟು ಯಶಸ್ಸನ್ನೂ ಪಡೆದಿವೆ. ಆದರೆ.. ದೇಶಭಕ್ತಿಯ ಹೆಸರಲ್ಲಿ ಹೆಚ್ಚು ಕಾಲ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ದೇಶದ ಒಗ್ಗಟ್ಟು ಹಾಗೂ ಐಕ್ಯತೆಯನ್ನು ಕಾಪಾಡಿಕೊಳ್ಳಬೇಕೆಂದರೆ ದೇಶದ ಪ್ರಜೆಗಳು ಸುಭೀಕ್ಷೆಯಾಗಿರಬೇಕು ಹಾಗೂ ಸಂವಿಧಾನದ ಆಶಯಗಳು ಈಡೇರಬೇಕಿದೆ. ಎಲ್ಲಿವರೆಗೂ ಇದು ಸಾಧ್ಯವಾಗುವುದಿಲ್ಲವೋ,.. ಎಲ್ಲಿವರೆಗೂ ಇಡೀ ದೇಶದ ಸಂಪತ್ತು ಕೇವಲ ಶೇಕಡಾ 1 ರಷ್ಟು ಜನ ಶ್ರೀಮಂತರ ಹಿಡಿತದಲ್ಲಿರುವುದೋ, ಎಲ್ಲಿವರೆಗೂ ಆಳುವ ವರ್ಗಗಳು ಬಹುಸಂಖ್ಯಾತ ದುಡಿಯುವ ವರ್ಗಗಳನ್ನು ಒಡೆದಾಳುತ್ತಾ ಶೋಷಿಸುತ್ತಲೇ ಇರುತ್ತದೆಯೋ ಅಲ್ಲಿವರೆಗೂ ಈ ದೇಶದ ಸಂವಿಧಾನದ ಉದ್ದೇಶ ಈಡೇರಲು ಸಾಧ್ಯವೇ ಇಲ್ಲಾ.


ಸಂವಿಧಾನವನ್ನೇ ತಮ್ಮ ಹಿತಾಸಕ್ತಿಗೆ ಪೂರಕವಾಗಿ ಬಳಸಿ ಬೆಳೆಯುವ ಆಳುವ ವರ್ಗಗಳು ಈ ದೇಶವನ್ನು ಆಳುವ ವರೆಗೂ ಡಾ.ಅಂಬೇಡ್ಕರರ ಆಶಯ ನೆರವೇರುವುದಿಲ್ಲಾ.  ಯಾವಾಗ ಸಂವಿಧಾನದ ಮೂಲ ಆಶಯಗಳೇ ಮೂಲೆಗುಂಪಾಗಿವೆಯೋ... ಯಾವಾಗ ಸಂವಿಧಾನದ ಫಲ ಎಲ್ಲರಿಗೂ ದೊರೆಯದೇ ಕೆಲವರ ಪಾಲಾಗಿವೆಯೋ.. ಆಗ ಸಂವಿಧಾನ ಜಾರಿಯಾದ ದಿನವನ್ನು ಸಂಭ್ರಮದಿಂದ ಆಚರಿಸುವುದಾದರೂ ಹೇಗೆ? ಯಾರು ಸಂವಿಧಾನದ ಫಲಾನುಭವಿಗಳಾಗಿದ್ದಾರೋ ಅವರು ಸಂಭ್ರಮಿಸುತ್ತಿದ್ದಾರೆ. ಆಳುವ ಸರಕಾರಗಳು, ಸರಕಾರವನ್ನು ಕಾಪಾಡುತ್ತಲೇ ತಮ್ಮ ಹಿತಾಸಕ್ತಿಯನ್ನು ಬೆಳೆಸಿಕೊಳ್ಳುತ್ತಿರುವ ಅಧಿಕಾರಶಾಹಿಗಳು ಸಂವಿಧಾನದ ದಿನವನ್ನು ಗಣರಾಜ್ಯೋತ್ಸವದ ಹೆಸರಲ್ಲಿ ಸಂಭ್ರಮದಿಂದ ಆಚರಿಸಿ ತಮ್ಮ ದೇಶಭಕ್ತಿಯನ್ನು ತೋರಿಸಲು ಉತ್ಸುಕರಾಗಿರುತ್ತಾರೆ ಹಾಗೂ ಸಂವಿದಾನದ ಗರಿಷ್ಟ ಅನುಕೂಲತೆಯನ್ನು ಪಡೆದವರು ರೀಪಬ್ಲಿಕ್ ಡೇ ಆಚರಿಸುತ್ತಾರೆ ಅಚರಿಸಲಿ. ಆದರೆ.. ಸಂವಿಧಾನದ ಸಂಪೂರ್ಣ ಉದ್ದೇಶದ ಕೇಂದ್ರದಿಂದ ದೂರವೇ ಉಳಿದ ಬಹುತೇಕ ದುಡಿಯುವ ಶ್ರಮಜೀವಿ ವರ್ಗಗಳು ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಹೇಗೆ ತಾನೇ ಆಚರಿಸಿಯಾರು? ಯಾರನ್ನು ಶೋಷಿಸಲು ಸಂವಿಧಾನ ದುರುಪಯೋಗವಾಗುತ್ತಿದೆಯೋ, ಸಂವಿಧಾನ ಕೊಟ್ಟ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸ್ವಾತಂತ್ರ್ಯದಿಂದ ಯಾವ ಶ್ರಮಜೀವಿ ವರ್ಗಗಳನ್ನು ದೂರವಾಗಿಡಲಾಗಿದಿಯೋ.. ಅಂತಹ ಜನರು ಅದು ಹೇಗೆ ರೀಪಬ್ಲಿಕ್ ಡೇ ಯನ್ನು ಸಂತಸ ಸಂಭ್ರಮದಿಂದ ಆಚರಿಸಲು ಸಾಧ್ಯ?

ಆದ್ದರಿಂದಲೇ ಈ ಸ್ವಾತಂತ್ರ್ಯ ದಿನ ಹಾಗೂ ಗಣರಾಜ್ಯೋತ್ಸವ ದಿನಗಳು ಈಗ ಕೇವಲ ಸರಕಾರಿ ಕಾರ್ಯಕ್ರಮಗಳಾಗಿ ಮಾತ್ರ ಆಚರಣೆಯಲ್ಲಿವೆ. ಹೇಗೆ ಜನರು ಹಬ್ಬ ಹರಿದಿನಗಳನ್ನು ಸಂಭ್ರಮದಿಂದ ಆಚರಿಸುತ್ತಾರೋ ಹಾಗೆ ಈ  ಸರಕಾರಿ ಸಂಭ್ರಮಗಳನ್ನು ಸಂತಸದಿಂದ ಆಚರಿಸುವುದಿಲ್ಲಾ. ಯಾಕೆಂದರೆ.. ಜನರಿಗೆ ನಿಜವಾದ ಸ್ವಾತಂತ್ರ್ಯ ಇನ್ನೂ ಬಂದೇ ಇಲ್ಲಾ. ಸಂವಿಧಾನ ಜನರಿಗೆ ಕೊಟ್ಟ ಆಶಯಗಳು ಇನ್ನೂ ಈಡೇರಲೇ ಇಲ್ಲಾ. ಇಂತಹ ಸಂದರ್ಭದಲ್ಲಿ ದೇಶಭಕ್ತಿಯ ಹೆಸರಲ್ಲಿ ಈ ಸರಕಾರಿ ಉತ್ಸವಗಳನ್ನು ಜನರ ಮೇಲೆ ಒತ್ತಾಯ ಪೂರ್ವಕವಾಗಿ ಹೇರಲು ಸಾಧ್ಯವೂ ಇಲ್ಲಾ. ದೇಶವಾಳುವ ಎಲ್ಲಾ ಬಣ್ಣದ ಪಕ್ಷಗಳಿಗೆ ಹಾಗೂ ಅದರ ನಾಯಕರುಗಳಿಗೆ, ಬಂಡವಾಳಶಾಹಿಗಳಿಗೆ, ಅಧಿಕಾರಶಾಹಿಗಳಿಗೆ ಸ್ವಾತಂತ್ರ್ಯ ಸಿಕ್ಕಿದೆ ಮತ್ತು ಸಿಕ್ಕ ಸ್ವಾತಂತ್ರ್ಯವನ್ನು ದಕ್ಕಿಸಿಕೊಂಡು ಫಲಾನುಭವಿಗಳಾಗಿದ್ದಾರೆ ಆದ್ದರಿಂದ ಅವರೆಲ್ಲಾ ಈ ದಿನಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ.


ಇನ್ನೂ ವಿಶೇಷ ಏನೆಂದರೆ ಕಾರ್ಪೋರೇಟ್ ಕಂಪನಿಗಳು ಹಾಗೂ ಸರಕು ಮಾರಾಟದ ಬಂಡವಾಳಶಾಹಿಗಳ ಹುಸಿ  ದೇಶಪ್ರೇಮ ಈ ದಿನಗಳಲ್ಲಿ ಇಮ್ಮಡಿಯಾಗುತ್ತದೆ. ಸ್ವಾತಂತ್ರ್ಯ ಹಾಗೂ ಸಂವಿಧಾನದ ಗರಿಷ್ಟ ಲಾಭವನ್ನು ಪಡೆದವರು ಈ ವ್ಯಾಪಾರಿ ಕಂಪನಿಗಳು. ದೇಶಭಕ್ತಿಯನ್ನೂ ಸಹ ಸರಕು ಸಂಸ್ಕೃತಿಯ ಭಾಗವಾಗಿಯೇ ಪರಿಗಣಿಸುವ ಈ ದಲ್ಲಾಳಿ ವ್ಯಾಪಾರಿ ವರ್ಗ ಜನರಲ್ಲಿ ದೇಶಭಕ್ತಿಯ ಉನ್ಮಾದವನ್ನು ಹೆಚ್ಚಿಸಿ ಅದರಿಂದಲೂ ತಮ್ಮ ಸರಕುಗಳನ್ನು ರಿಯಾಯತಿ ಹೆಸರಲ್ಲಿ  ಮಾರುವ ತಂತ್ರಗಳನ್ನು ರೂಪಿಸಿರುತ್ತಾರೆ. ಹೀಗಾಗಿ.. ಎಲ್ಲಿವರೆಗೂ ಸಂಪತ್ತನ್ನು ಸೃಷ್ಟಿಸುವ ಕೂಲಿ ಕಾರ್ಮಿಕರಿಗೆ, ಆಹಾರವನ್ನು ಬೆಳೆಯುವ ಅನ್ನದಾತರಿಗೆ ನಿಜವಾದ ಸ್ವಾತಂತ್ರ್ಯ ಬರುವುದಿಲ್ಲವೋ.. ಎಲ್ಲಿವರೆಗೂ ಸಂವಿಧಾನ ಕೊಟ್ಟ ಹಕ್ಕುಗಳು ದುಡಿಯುವ ವರ್ಗದವರ ಪರವಾಗಿ ಪ್ರಯೋಜನಕ್ಕೆ ಬರುವುದಿಲ್ಲವೋ ಅಲ್ಲಿವರೆಗೂ ಈ ದೇಶದ ಜನತೆ ಸಂಭ್ರಮಿಸಲು ಸಾಧ್ಯವೇ ಇಲ್ಲಾ. ದೇಶಕ್ಕಾಗಿ ಏನು ಮಾಡಿದ್ದೀರಿ ಎನ್ನುವ ಹಳಸಲು ಪ್ರಶ್ನೆಯನ್ನೇ ಕೇಳುವ ಬದಲು.. ದೇಶಕ್ಕೆ ರಕ್ತ ಬೆವರು ಹರಿಸಿ ಸಂಪತ್ತು ಸಂಪನ್ಮೂಲ ಬೆಳೆಸಿದವರಿಗೆ ಈ ದೇಶವು ಏನು ಮಾಡಿದೆ ಎಂದು ಕೇಳಬೇಕಿದೆ. ಇಂದಿಲ್ಲಾ ನಾಳೆ ಈ ನಿಟ್ಟಿನಲ್ಲಿ ಜನಲೋಂದನಗಳು ನಡೆಯುತ್ತವೆ. ಸ್ವಾತಂತ್ರ್ಯ ಹಾಗೂ ಸಂವಿಧಾನವನ್ನು ತಮ್ಮ ಹಿತಾಸಕ್ತಿಗೆ ತಕ್ಕಂತೆ ಬಳಸುತ್ತಿರುವ ಈ ಬಂಡವಾಳಶಾಹಿ ವರ್ಗವನ್ನು ಈ ದೇಶದ ಜನತೆಯೇ ಒಂದಿಲ್ಲಾ ಒಂದು ದಿನ ಮಟ್ಟ ಹಾಕುತ್ತದೆ. ಅಲ್ಲಿವರೆಗೂ ಸರಕಾರಿ ಆಚರಣೆಗಳಿಗೆ ಭಂಗವಿಲ್ಲಾ.. ಈ ದೇಶದ ದುಡಿಯುವ ಜನತೆ ಎಚ್ಚರಾಗಿ ಎದ್ದು ನಿಂತು ತಮ್ಮ ಹಕ್ಕುಗಳನ್ನು ಪಡೆಯುವವರೆಗೆ ಸ್ವಾತಂತ್ರ್ಯ ಹಾಗೂ ಸಂವಿಧಾನದ ಪ್ರಯೋಜನ ಸಿಕ್ಕುವುದಿಲ್ಲಾ.   

    -ಶಶಿಕಾಂತ ಯಡಹಳ್ಳಿ








ಗುರುವಾರ, ಜನವರಿ 19, 2017

ತಹ ತಹ.... 72 ಬ್ಯೂಟಿಫುಲ್ ಮನಸುಗಳಲಿ ಕಳಚಿದ ಮಾಧ್ಯಮಗಳ ಮುಖವಾಡ :





ಜನರನ್ನು ರಕ್ಷಿಸ ಬೇಕಾದ ಆರಕ್ಷಕರು ಅದು ಹೇಗೆ ಭಕ್ಷಕರಾಗುತ್ತಾರೆ ಹಾಗೂ ಜನತೆಯ ಪರವಾಗಿದ್ದು ಭ್ರಷ್ಟ ವ್ಯವಸ್ಥೆಯ ವಿರುದ್ದ ಯುದ್ದ ಸಾರಬೇಕಾದ ಮಾಧ್ಯಮಗಳು ತಮ್ಮ ಟಿಆರ್‌ಪಿ ಹಸಿವೆಗಾಗಿ ಅಮಾಯಕ ಜನರ ಬದುಕು ಹಾಗೂ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಾರೆ ಎನ್ನುವ ವಾಸ್ತವತೆಯನ್ನು ಬಿಚ್ಚಿಡುವ ಕನ್ನಡ ಚಲನಚಿತ್ರ ಬ್ಯೂಟಿಫುಲ್ ಮನಸುಗಳು. ದಿಕ್ಕು ದೆಸೆಯಿಲ್ಲದೇ ಚಿತ್ತ ಬಂದತ್ತ ಸಾಗುವ ಕನ್ನಡ ಕಮರ್ಸಿಯಲ್ ಸಿನೆಮಾಗಳ ಹಾವಳಿಗಳ ನಡುವೆ ಸಾಮಾಜಿಕ ಎಚ್ಚರವನ್ನು ಮೂಡಿಸುವ ಸಿನೆಮಾಗಳು ಇಂದಿನ ಅಗತ್ಯವಾಗಿದೆ.

ನಿರ್ದೇಶಕ ಜಯತೀರ್ಥ ಬ್ಯೂಟಿಫುಲ್ ಮನಸುಗಳು ಸಿನೆಮಾ ಮೂಲಕ ಒಬ್ಬ ನಿರ್ದೇಶಕನಿಗಿರಬೇಕಾದ ಸಾಮಾಜಿಕ ಹೊಣೆಗಾರಿಕೆ ಎಂತಹುದು ಎನ್ನುವುದನ್ನು ಸಾಬೀತುಪಡಿಸಿದ್ದಾರೆ. 2013 ರಲ್ಲಿ ನಡೆದ ಪೇಕ್ ಪಾರ್ಲರ್ ರೇಡ್ ಕುರಿತ ಘಟನೆಯೊಂದನ್ನು ಇಟ್ಟುಕೊಂಡು ಪೊಲೀಸ್ ವ್ಯವಸ್ಥೆ ಹಾಗೂ ಟಿವಿ ಮಾಧ್ಯಮಗಳನ್ನು ಸಿನೆಮಾದಲ್ಲಿ ಬೆತ್ತಲುಗೊಳಿಸಿದ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಒಬ್ಬ ಕ್ರಿಯಾಶೀಲ ವ್ಯಕ್ತಿ ಒಂದು ಪುಟ್ಟ ಘಟನೆಯನ್ನಾಧರಿಸಿ ಅದು ಹೇಗೆ ಸಮಾಜವನ್ನು ಎಚ್ಚರಿಸುವಂತಹ ಸಿನೆಮಾ ಮಾಡಲು ಸಾಧ್ಯ ಎನ್ನುವುದಕ್ಕೆ ಈ ಚಲನಚಿತ್ರ ಮಾದರಿಯಾಗಿದೆ.

ಇಲ್ಲಿ ಪೊಲೀಸ್ ವ್ಯವಸ್ಥೆ ಬಹುತೇಕ ಭ್ರಷ್ಟವಾಗಿದ್ದು ಎಲ್ಲರಿಗೂ ಗೊತ್ತಿದೆ. ಇನ್ನು ಬಂಡವಾಳಶಾಹಿಗಳ ಮಾಲೀಕತ್ವದಲ್ಲಿರುವ ಟಿವಿ ಮಾಧ್ಯಮಗಳು ನೈತಿಕವಾಗಿ ಅದಃಪತನಕ್ಕಿಳಿದಿರುವುದು ತಿಳಿದಿದೆ. ಹಾಗೆಯೇ ಟಿವಿಯಲ್ಲಿ ಬಂದಿದ್ದು ಹಾಗೂ ಪೊಲೀಸರು ಹೇಳಿದ್ದೆಲ್ಲವೂ ಸತ್ಯವೆಂದು ನಂಬುವ ಜನರ ಮನಸ್ಥಿತಿಯನ್ನು ಹೊಂದಿರುವ ಸಮಾಜದ ವಿಕ್ಷಿಪ್ತತೆಯನ್ನು ಕೂಡಾ ಈ  ಸಿನೆಮಾ ಅನಾವರಣಗೊಳಿಸಿದೆ.


ಪೊಲೀಸ್ ಅಧಿಕಾರಿಯೊಬ್ಬನ ಸೇಡಿನ ಕ್ರಮಕ್ಕೆ ಬ್ಯೂಟಿ ಪಾರ್ಲರ್ ರೇಡಾದಾಗ ಅಲ್ಲಿ ಹೊಟ್ಟೆಪಾಡಿಗಾಗಿ ಕೆಲಸ ಮಾಡುವ ಹೆಣ್ಣುಮಕ್ಕಳನ್ನು ಸೂಳೆಯರು ಎಂದು ಆರೋಪಿಸುವುದು ಹಾಗೂ ಅದನ್ನೇ ಟಿವಿ ಮಾಧ್ಯಮಗಳು ದಿನಗಂಟಲೇ ಪುನರಾವರ್ತಿಸಿ ತೋರಿಸಿ ನೋಡುಗರನ್ನು ನಂಬಿಸುವುದರಿಂದಾ ಆ ಮಹಿಳೆಯರ ಮೇಲೆ ಹಾಗೂ ಅವರ ಕುಟುಂಬದವರ ಮೇಲೆ ಆಗುವ ವ್ಯತಿರಿಕ್ತ ಪರಿಣಾಮ ಹಾಗೂ ಮಾನಸಿಕ ತಲ್ಲಣಗಳನ್ನು ಬ್ಯೂಟಿಪುಲ್ ಮನಸುಗಳು ತೆರೆದಿಡುತ್ತದೆ. ಈ ಒಂದು ಸತ್ಯ ಘಟನೆಯನ್ನಿಟ್ಟುಕೊಂಡು ಸೊಗಸಾಗಿ ಸಿನೆಮಾ ಕಥೆ ಕಟ್ಟಿರುವ ಜಯತೀರ್ಥ ನಿಜಕ್ಕೂ ಅಭಿನಂದನೀಯ.

ಈ ಚಿತ್ರದ ಯಶಸ್ಸು ಇರುವುದು ಚಿತ್ರಕಥೆ ಕಟ್ಟಿದ ರೀತಿಯಲ್ಲಿ. ಸಾಮಾನ್ಯ ಎನ್ನಿಸುವ ಘಟನೆಯೊಂದನ್ನು ಅಸಾಮಾನ್ಯ ರೀತಿಯಲ್ಲಿ ದೃಶ್ಯಗಳಾಗಿ ಕಟ್ಟಿಕೊಟ್ಟ ಬಗೆಯಲ್ಲಿ. ಪ್ರೀತಿ ಪ್ರೇಮದ ಕಥಾನಕವೊಂದರಲ್ಲಿ ಆರಂಭದಿಂದಲೂ ಸಸ್ಪೆನ್ಸ್ ಕಾಯ್ದಿಟ್ಟುಕೊಂಡು ನೋಡುಗರಲ್ಲಿ  ಕುತೂಹಲವನ್ನು ಹೆಚ್ಚಿಸುವಂತೆ ಮಾಡಿರುವ ವೈಶಿಷ್ಟ್ಯತೆಯಲ್ಲಿ. ಸಿನೆಮಾದ ಮೊದಲ ಭಾಗ ಮಾಮೂಲಿ ಸಿನೆಮಾಗಳ ಕಥೆಯಂತೆಯೇ ಸಿನೆಮಾ ಸಾಗುತ್ತದೆ. ಅದೇ ಸುಂದರ ಹುಡುಗಿ.. ಅವಳ ಅಂದಕ್ಕೆ ಮೋಹಗೊಂಡ ಉಡಾಳ ಹುಡುಗ. ಅವಳ ಹಿಂದೆ ಬಿದ್ದು ಪ್ರೀತಿಸೆಂದು ಗೋಗರೆಯುವುದು. ಮೊದಮೊದಲು ನಿರಾಕರಿಸಿ ಉಪದೇಶ ಹೇಳುವ ಆ ಯುವತಿ ಕೊನೆಗೆ ಒಪ್ಪಿಕೊಳ್ಳುವುದು.. ಈ ರೀತಿಯ ಕಥೆಗಳು ಅದೆಷ್ಟೋ ಸಿನೆಮಾಗಳಲ್ಲಿ ಈಗಾಗಲೇ ಬಂದು ಸವಕಲಾಗಿವೆ. ಆದರೆ.. ಇಡೀ ಸಿನೆಮಾ ನೋಡುಗರನ್ನು ಹಿಡಿದಿಡುವುದು ಇಂಟರವೆಲ್ ಬ್ಲಾಕ್‌ನಲ್ಲಿ ಹಾಗೂ ಮಧ್ಯಂತರದ ನಂತರದಲ್ಲಿ. ತದನಂತರದ ಘಟನೆಗಳು ಯಾರೂ ಊಹಿಸದ ರೀತಿಯಲ್ಲಿ ನಡೆಯುತ್ತಾ ಕ್ಷಣಕ್ಷಣಕ್ಕೂ ವಿಭಿನ್ನ ತಿರುವನ್ನು ಪಡೆಯುತ್ತಾ ಪ್ರೇಕ್ಷಕರನ್ನು ಕುತೂಹಲದ ನಿರೀಕ್ಷೆಯಲ್ಲಿ ಕಾಯಿಸುತ್ತಾ ಸಾಗುತ್ತವೆ. ನಿರ್ದೇಶಕ ಗೆದ್ದಿದ್ದೆ ಇಲ್ಲಿ. ಕುತೂಹಲಕಾರಿ ತಿರುವುಗಳೊಂದಿಗೆ ಕಥೆಯನ್ನು ಕಟ್ಟಿಕೊಡುವಲ್ಲಿ.


ಜಯತೀರ್ಥ ಈ ಹಿಂದೆ ನಿರ್ದೇಶಿಸಿದ ಚಿತ್ರಗಳು ಹೀರೋ ಓರಿಯೆಂಟೆಂಡ್ ಆಗಿದ್ದವು. ನಾಯಕನನ್ನು ವೈಭವೀಕರಿಸುವ ಸೂತ್ರಕ್ಕೆ ಬದ್ದವಾಗಿದ್ದವು. ಆದರೆ.. ಬ್ಯೂಟಿಪುಲ್ ಮನಸುಗಳು ಸಿನೆಮಾದಲ್ಲಿ ಪಾತ್ರಗಳು ಎಲ್ಲೂ ವೈಭವೀಕರಣಗೊಳ್ಳದೇ ಚಿತ್ರಕಥೆಯೇ ಸಿನೆಮಾದ ಅಂತರಾಳವಾಗಿರುವುದು ಈ ಸಿನೆಮಾದ ಸಫಲತೆಗೆ ಪ್ರಮುಖ ಕಾರಣವಾಗಿದೆ. ಪಾತ್ರಗಳನ್ನು ಡಿಗ್ಲಾಮರೈಸ್ ಮಾಡಿ ಚಿತ್ರಕಥೆಗೆ ಅಗತ್ಯವಾದಷ್ಟು ಮಾತ್ರ ಬಳಸಿಕೊಂಡು ಕಥಾಕೇಂದ್ರಿತವಾಗಿ ಸಾಗುವ ಸಿನೆಮಾ ನೋಡಿದವರಿಗೆ ಇಷ್ಟಾವಾಗುವುದಿಲ್ಲ ಎಂದು ಹೇಳಲು ಸಕಾರಣಗಳೇ ಇಲ್ಲಾ. ಬಹುಷಃ ನಾಯಕಿಯನ್ನು ಬಿಟ್ಟು ಮಿಕ್ಕೆಲ್ಲಾ ಪಾತ್ರಗಳನ್ನು ಅಭಿನಯಿಸಿದವರು ರಂಗಭೂಮಿಯ ಹಿನ್ನಲೆಯಿಂದ ಬಂದವರೇ ಆಗಿದ್ದಾರೆ. ನೀನಾಸಮ್ ಶಿಕ್ಷಣ ಕೇಂದ್ರದಲ್ಲಿ ತರಬೇತಾದ ನೀನಾಸಂ ಸತೀಶ್, ಪ್ರಶಾಂತ್ ಸಿದ್ದಿ ಈ ಇಬ್ಬರೂ ನಾಟಕದಾದ್ಯಂತ ಅತ್ಯಂತ ಸಹಜವಾಗಿ ಅಭಿನಯಿಸಿದ್ದಾರೆ. ನಾಯಕಿ ಪಾತ್ರದ ಶೃತಿ ಹರಿಹರನ್ ಅಭಿನಯ ನೋಡುಗರ ಮನಮುಟ್ಟಿದ್ದಂತೂ ಸತ್ಯ. ತಬಲಾನಾಣಿ ಪುಟ್ಟಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಅಚ್ಚುತ್‌ಕುಮಾರ್‌ರವರ ಅಭಿನಯದ ಬಗ್ಗೆ ಹೇಳುವುದೇ ಬೇಕಿಲ್ಲಾ. ಪಾತ್ರವೇ ತಾವಾಗಿ ಅಭಿನಯಿಸುವ ಕಲೆ ಅವರಿಗೆ ಕರತಲಾಮಕ. ಈ ಎಲ್ಲಾ ನಟರುಗಳ ಪ್ರತಿಭೆಯನ್ನು ಪಾತ್ರದ ಅಗತ್ಯಕ್ಕೆ ತಕ್ಕಷ್ಟು ರೂಪಿಸಿದ ಜಯತೀರ್ಥ ತಮ್ಮ ರಂಗಭೂಮಿಯ ಅನುಭವಗಳನ್ನೆಲ್ಲಾ ಬಳಸಿಕೊಂಡು ಸುಂದರವಾದ ಸಿನೆಮಾವನ್ನು ಚಲನಚಿತ್ರರಂಗಕ್ಕೆ ಕೊಟ್ಟಿದ್ದಾರೆ. 

ಇಡೀ ಸಿನೆಮಾ ನೋಡಿದಾಗ ನಿರ್ದೇಶಕ ಮಾಡಿಕೊಂಡ ಚಿತ್ರಕಥೆಯ ಸಿದ್ದತೆ ಹಾಗೂ ಸಾಮಾಜಿಕ ಬದ್ದತೆಗಳು ಗೋಚರಿಸುತ್ತವೆ. ಸಂಭಾಷಣೆಯಲ್ಲಿರುವ ಮಾರ್ಮಿಕತೆ ಹಾಗೂ ಪ್ರಸ್ತುತತೆಗಳು ಪ್ರೇಕ್ಷಕರಲ್ಲಿ ಅರಿವಿನ ಹೊಳಹುಗಳನ್ನು ಹೆಚ್ಚಿಸುವಂತಿದೆ. ವಿಶಿಷ್ಟ ಚಿತ್ರಕಥೆ, ವಿಶೇಷ ಸಂಭಾಷಣೆ ಹಾಗೂ ಬೆರಗುಗೊಳಿಸುವ ನಿರೂಪಣೆಗಳು ಬ್ಯೂಟಿಪುಲ್ ಮನಸುಗಳು ಸಿನೆಮಾದ ಯಶಸ್ಸಿಗೆ ಪ್ರಮುಖ ಕಾರಣಗಳಾಗಿವೆ. ಹಾಗೂ ಯಾವುದೇ ಅನಿರೀಕ್ಷಿತ ಅಡತಡೆಗಳು ಬಾರದೇ ಹೋದರೆ ಈ ಸಿನೆಮಾ ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸುವುದರಲ್ಲಿ ಹಾಗೂ ನೂರು ದಿನಗಳ ಗಡಿ ದಾಟಿ ಪ್ರದರ್ಶನಗಳನ್ನು ಕಾಣುವುದರಲ್ಲಿ ಸಂದೇಹವಿಲ್ಲ.  

  - ಶಶಿಕಾಂತ ಯಡಹಳ್ಳಿ