ಜನರನ್ನು ರಕ್ಷಿಸ ಬೇಕಾದ ಆರಕ್ಷಕರು
ಅದು ಹೇಗೆ ಭಕ್ಷಕರಾಗುತ್ತಾರೆ ಹಾಗೂ ಜನತೆಯ ಪರವಾಗಿದ್ದು ಭ್ರಷ್ಟ ವ್ಯವಸ್ಥೆಯ ವಿರುದ್ದ ಯುದ್ದ ಸಾರಬೇಕಾದ
ಮಾಧ್ಯಮಗಳು ತಮ್ಮ ಟಿಆರ್ಪಿ ಹಸಿವೆಗಾಗಿ ಅಮಾಯಕ ಜನರ ಬದುಕು ಹಾಗೂ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಾರೆ
ಎನ್ನುವ ವಾಸ್ತವತೆಯನ್ನು ಬಿಚ್ಚಿಡುವ ಕನ್ನಡ ಚಲನಚಿತ್ರ “ಬ್ಯೂಟಿಫುಲ್ ಮನಸುಗಳು”. ದಿಕ್ಕು ದೆಸೆಯಿಲ್ಲದೇ ಚಿತ್ತ
ಬಂದತ್ತ ಸಾಗುವ ಕನ್ನಡ ಕಮರ್ಸಿಯಲ್ ಸಿನೆಮಾಗಳ ಹಾವಳಿಗಳ ನಡುವೆ ಸಾಮಾಜಿಕ ಎಚ್ಚರವನ್ನು ಮೂಡಿಸುವ ಸಿನೆಮಾಗಳು
ಇಂದಿನ ಅಗತ್ಯವಾಗಿದೆ.
ನಿರ್ದೇಶಕ ಜಯತೀರ್ಥ ‘ಬ್ಯೂಟಿಫುಲ್ ಮನಸುಗಳು’ ಸಿನೆಮಾ ಮೂಲಕ ಒಬ್ಬ ನಿರ್ದೇಶಕನಿಗಿರಬೇಕಾದ
ಸಾಮಾಜಿಕ ಹೊಣೆಗಾರಿಕೆ ಎಂತಹುದು ಎನ್ನುವುದನ್ನು ಸಾಬೀತುಪಡಿಸಿದ್ದಾರೆ. 2013 ರಲ್ಲಿ ನಡೆದ ಪೇಕ್
ಪಾರ್ಲರ್ ರೇಡ್ ಕುರಿತ ಘಟನೆಯೊಂದನ್ನು ಇಟ್ಟುಕೊಂಡು ಪೊಲೀಸ್ ವ್ಯವಸ್ಥೆ ಹಾಗೂ ಟಿವಿ ಮಾಧ್ಯಮಗಳನ್ನು
ಸಿನೆಮಾದಲ್ಲಿ ಬೆತ್ತಲುಗೊಳಿಸಿದ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಒಬ್ಬ ಕ್ರಿಯಾಶೀಲ ವ್ಯಕ್ತಿ ಒಂದು
ಪುಟ್ಟ ಘಟನೆಯನ್ನಾಧರಿಸಿ ಅದು ಹೇಗೆ ಸಮಾಜವನ್ನು ಎಚ್ಚರಿಸುವಂತಹ ಸಿನೆಮಾ ಮಾಡಲು ಸಾಧ್ಯ ಎನ್ನುವುದಕ್ಕೆ
ಈ ಚಲನಚಿತ್ರ ಮಾದರಿಯಾಗಿದೆ.
ಇಲ್ಲಿ ಪೊಲೀಸ್ ವ್ಯವಸ್ಥೆ
ಬಹುತೇಕ ಭ್ರಷ್ಟವಾಗಿದ್ದು ಎಲ್ಲರಿಗೂ ಗೊತ್ತಿದೆ. ಇನ್ನು ಬಂಡವಾಳಶಾಹಿಗಳ ಮಾಲೀಕತ್ವದಲ್ಲಿರುವ ಟಿವಿ
ಮಾಧ್ಯಮಗಳು ನೈತಿಕವಾಗಿ ಅದಃಪತನಕ್ಕಿಳಿದಿರುವುದು ತಿಳಿದಿದೆ. ಹಾಗೆಯೇ ಟಿವಿಯಲ್ಲಿ ಬಂದಿದ್ದು ಹಾಗೂ
ಪೊಲೀಸರು ಹೇಳಿದ್ದೆಲ್ಲವೂ ಸತ್ಯವೆಂದು ನಂಬುವ ಜನರ ಮನಸ್ಥಿತಿಯನ್ನು ಹೊಂದಿರುವ ಸಮಾಜದ ವಿಕ್ಷಿಪ್ತತೆಯನ್ನು
ಕೂಡಾ ಈ ಸಿನೆಮಾ ಅನಾವರಣಗೊಳಿಸಿದೆ.
ಪೊಲೀಸ್ ಅಧಿಕಾರಿಯೊಬ್ಬನ ಸೇಡಿನ
ಕ್ರಮಕ್ಕೆ ಬ್ಯೂಟಿ ಪಾರ್ಲರ್ ರೇಡಾದಾಗ ಅಲ್ಲಿ ಹೊಟ್ಟೆಪಾಡಿಗಾಗಿ ಕೆಲಸ ಮಾಡುವ ಹೆಣ್ಣುಮಕ್ಕಳನ್ನು
ಸೂಳೆಯರು ಎಂದು ಆರೋಪಿಸುವುದು ಹಾಗೂ ಅದನ್ನೇ ಟಿವಿ ಮಾಧ್ಯಮಗಳು ದಿನಗಂಟಲೇ ಪುನರಾವರ್ತಿಸಿ ತೋರಿಸಿ
ನೋಡುಗರನ್ನು ನಂಬಿಸುವುದರಿಂದಾ ಆ ಮಹಿಳೆಯರ ಮೇಲೆ ಹಾಗೂ ಅವರ ಕುಟುಂಬದವರ ಮೇಲೆ ಆಗುವ ವ್ಯತಿರಿಕ್ತ
ಪರಿಣಾಮ ಹಾಗೂ ಮಾನಸಿಕ ತಲ್ಲಣಗಳನ್ನು ‘ಬ್ಯೂಟಿಪುಲ್ ಮನಸುಗಳು’ ತೆರೆದಿಡುತ್ತದೆ. ಈ ಒಂದು
ಸತ್ಯ ಘಟನೆಯನ್ನಿಟ್ಟುಕೊಂಡು ಸೊಗಸಾಗಿ ಸಿನೆಮಾ ಕಥೆ ಕಟ್ಟಿರುವ ಜಯತೀರ್ಥ ನಿಜಕ್ಕೂ ಅಭಿನಂದನೀಯ.
ಈ ಚಿತ್ರದ ಯಶಸ್ಸು ಇರುವುದು
ಚಿತ್ರಕಥೆ ಕಟ್ಟಿದ ರೀತಿಯಲ್ಲಿ. ಸಾಮಾನ್ಯ ಎನ್ನಿಸುವ ಘಟನೆಯೊಂದನ್ನು ಅಸಾಮಾನ್ಯ ರೀತಿಯಲ್ಲಿ ದೃಶ್ಯಗಳಾಗಿ
ಕಟ್ಟಿಕೊಟ್ಟ ಬಗೆಯಲ್ಲಿ. ಪ್ರೀತಿ ಪ್ರೇಮದ ಕಥಾನಕವೊಂದರಲ್ಲಿ ಆರಂಭದಿಂದಲೂ ಸಸ್ಪೆನ್ಸ್ ಕಾಯ್ದಿಟ್ಟುಕೊಂಡು
ನೋಡುಗರಲ್ಲಿ ಕುತೂಹಲವನ್ನು ಹೆಚ್ಚಿಸುವಂತೆ ಮಾಡಿರುವ
ವೈಶಿಷ್ಟ್ಯತೆಯಲ್ಲಿ. ಸಿನೆಮಾದ ಮೊದಲ ಭಾಗ ಮಾಮೂಲಿ ಸಿನೆಮಾಗಳ ಕಥೆಯಂತೆಯೇ ಸಿನೆಮಾ ಸಾಗುತ್ತದೆ. ಅದೇ
ಸುಂದರ ಹುಡುಗಿ.. ಅವಳ ಅಂದಕ್ಕೆ ಮೋಹಗೊಂಡ ಉಡಾಳ ಹುಡುಗ. ಅವಳ ಹಿಂದೆ ಬಿದ್ದು ಪ್ರೀತಿಸೆಂದು ಗೋಗರೆಯುವುದು.
ಮೊದಮೊದಲು ನಿರಾಕರಿಸಿ ಉಪದೇಶ ಹೇಳುವ ಆ ಯುವತಿ ಕೊನೆಗೆ ಒಪ್ಪಿಕೊಳ್ಳುವುದು.. ಈ ರೀತಿಯ ಕಥೆಗಳು ಅದೆಷ್ಟೋ
ಸಿನೆಮಾಗಳಲ್ಲಿ ಈಗಾಗಲೇ ಬಂದು ಸವಕಲಾಗಿವೆ. ಆದರೆ.. ಇಡೀ ಸಿನೆಮಾ ನೋಡುಗರನ್ನು ಹಿಡಿದಿಡುವುದು ಇಂಟರವೆಲ್
ಬ್ಲಾಕ್ನಲ್ಲಿ ಹಾಗೂ ಮಧ್ಯಂತರದ ನಂತರದಲ್ಲಿ. ತದನಂತರದ ಘಟನೆಗಳು ಯಾರೂ ಊಹಿಸದ ರೀತಿಯಲ್ಲಿ ನಡೆಯುತ್ತಾ
ಕ್ಷಣಕ್ಷಣಕ್ಕೂ ವಿಭಿನ್ನ ತಿರುವನ್ನು ಪಡೆಯುತ್ತಾ ಪ್ರೇಕ್ಷಕರನ್ನು ಕುತೂಹಲದ ನಿರೀಕ್ಷೆಯಲ್ಲಿ ಕಾಯಿಸುತ್ತಾ
ಸಾಗುತ್ತವೆ. ನಿರ್ದೇಶಕ ಗೆದ್ದಿದ್ದೆ ಇಲ್ಲಿ. ಕುತೂಹಲಕಾರಿ ತಿರುವುಗಳೊಂದಿಗೆ ಕಥೆಯನ್ನು ಕಟ್ಟಿಕೊಡುವಲ್ಲಿ.
ಜಯತೀರ್ಥ ಈ ಹಿಂದೆ ನಿರ್ದೇಶಿಸಿದ
ಚಿತ್ರಗಳು ಹೀರೋ ಓರಿಯೆಂಟೆಂಡ್ ಆಗಿದ್ದವು. ನಾಯಕನನ್ನು ವೈಭವೀಕರಿಸುವ ಸೂತ್ರಕ್ಕೆ ಬದ್ದವಾಗಿದ್ದವು.
ಆದರೆ.. “ಬ್ಯೂಟಿಪುಲ್
ಮನಸುಗಳು”
ಸಿನೆಮಾದಲ್ಲಿ ಪಾತ್ರಗಳು ಎಲ್ಲೂ ವೈಭವೀಕರಣಗೊಳ್ಳದೇ ಚಿತ್ರಕಥೆಯೇ ಸಿನೆಮಾದ ಅಂತರಾಳವಾಗಿರುವುದು ಈ
ಸಿನೆಮಾದ ಸಫಲತೆಗೆ ಪ್ರಮುಖ ಕಾರಣವಾಗಿದೆ. ಪಾತ್ರಗಳನ್ನು ಡಿಗ್ಲಾಮರೈಸ್ ಮಾಡಿ ಚಿತ್ರಕಥೆಗೆ ಅಗತ್ಯವಾದಷ್ಟು
ಮಾತ್ರ ಬಳಸಿಕೊಂಡು ಕಥಾಕೇಂದ್ರಿತವಾಗಿ ಸಾಗುವ ಸಿನೆಮಾ ನೋಡಿದವರಿಗೆ ಇಷ್ಟಾವಾಗುವುದಿಲ್ಲ ಎಂದು ಹೇಳಲು
ಸಕಾರಣಗಳೇ ಇಲ್ಲಾ. ಬಹುಷಃ ನಾಯಕಿಯನ್ನು ಬಿಟ್ಟು ಮಿಕ್ಕೆಲ್ಲಾ ಪಾತ್ರಗಳನ್ನು ಅಭಿನಯಿಸಿದವರು ರಂಗಭೂಮಿಯ
ಹಿನ್ನಲೆಯಿಂದ ಬಂದವರೇ ಆಗಿದ್ದಾರೆ. ನೀನಾಸಮ್ ಶಿಕ್ಷಣ ಕೇಂದ್ರದಲ್ಲಿ ತರಬೇತಾದ ನೀನಾಸಂ ಸತೀಶ್, ಪ್ರಶಾಂತ್
ಸಿದ್ದಿ ಈ ಇಬ್ಬರೂ ನಾಟಕದಾದ್ಯಂತ ಅತ್ಯಂತ ಸಹಜವಾಗಿ ಅಭಿನಯಿಸಿದ್ದಾರೆ. ನಾಯಕಿ ಪಾತ್ರದ ಶೃತಿ ಹರಿಹರನ್
ಅಭಿನಯ ನೋಡುಗರ ಮನಮುಟ್ಟಿದ್ದಂತೂ ಸತ್ಯ. ತಬಲಾನಾಣಿ ಪುಟ್ಟಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಅಚ್ಚುತ್ಕುಮಾರ್ರವರ
ಅಭಿನಯದ ಬಗ್ಗೆ ಹೇಳುವುದೇ ಬೇಕಿಲ್ಲಾ. ಪಾತ್ರವೇ ತಾವಾಗಿ ಅಭಿನಯಿಸುವ ಕಲೆ ಅವರಿಗೆ ಕರತಲಾಮಕ. ಈ ಎಲ್ಲಾ
ನಟರುಗಳ ಪ್ರತಿಭೆಯನ್ನು ಪಾತ್ರದ ಅಗತ್ಯಕ್ಕೆ ತಕ್ಕಷ್ಟು ರೂಪಿಸಿದ ಜಯತೀರ್ಥ ತಮ್ಮ ರಂಗಭೂಮಿಯ ಅನುಭವಗಳನ್ನೆಲ್ಲಾ
ಬಳಸಿಕೊಂಡು ಸುಂದರವಾದ ಸಿನೆಮಾವನ್ನು ಚಲನಚಿತ್ರರಂಗಕ್ಕೆ ಕೊಟ್ಟಿದ್ದಾರೆ.
ಇಡೀ ಸಿನೆಮಾ ನೋಡಿದಾಗ ನಿರ್ದೇಶಕ
ಮಾಡಿಕೊಂಡ ಚಿತ್ರಕಥೆಯ ಸಿದ್ದತೆ ಹಾಗೂ ಸಾಮಾಜಿಕ ಬದ್ದತೆಗಳು ಗೋಚರಿಸುತ್ತವೆ. ಸಂಭಾಷಣೆಯಲ್ಲಿರುವ
ಮಾರ್ಮಿಕತೆ ಹಾಗೂ ಪ್ರಸ್ತುತತೆಗಳು ಪ್ರೇಕ್ಷಕರಲ್ಲಿ ಅರಿವಿನ ಹೊಳಹುಗಳನ್ನು ಹೆಚ್ಚಿಸುವಂತಿದೆ. ವಿಶಿಷ್ಟ
ಚಿತ್ರಕಥೆ, ವಿಶೇಷ ಸಂಭಾಷಣೆ ಹಾಗೂ ಬೆರಗುಗೊಳಿಸುವ ನಿರೂಪಣೆಗಳು ಬ್ಯೂಟಿಪುಲ್ ಮನಸುಗಳು ಸಿನೆಮಾದ
ಯಶಸ್ಸಿಗೆ ಪ್ರಮುಖ ಕಾರಣಗಳಾಗಿವೆ. ಹಾಗೂ ಯಾವುದೇ ಅನಿರೀಕ್ಷಿತ ಅಡತಡೆಗಳು ಬಾರದೇ ಹೋದರೆ ಈ ಸಿನೆಮಾ
ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸುವುದರಲ್ಲಿ ಹಾಗೂ ನೂರು ದಿನಗಳ ಗಡಿ ದಾಟಿ ಪ್ರದರ್ಶನಗಳನ್ನು ಕಾಣುವುದರಲ್ಲಿ
ಸಂದೇಹವಿಲ್ಲ.
- ಶಶಿಕಾಂತ ಯಡಹಳ್ಳಿ
ಬಹಳ ಚೆನ್ನಾಗಿ ವಿಮರ್ಶೆಯನ್ನು ಮಾಡುತ್ತಿರುವ ನಿಮಗೆ ನಮ್ಮ ಸಂಸ್ಥೆಯ ಪರವಾಗಿ ಶ್ಲಾಘಿಸುತ್ತಿದ್ದೇವೆ.
ಪ್ರತ್ಯುತ್ತರಅಳಿಸಿಇಂತಿ,
ಅಶೋಕ
ಸಿನಿಟಾಲೆಂಟ್ರ್ಸ್.ಕಾಂ
ಅತ್ಯುತ್ತಮ ಲೇಖನ
ಪ್ರತ್ಯುತ್ತರಅಳಿಸಿ