ಬುಧವಾರ, ಜನವರಿ 11, 2017

ತಹ ತಹ..... 71 ಯೋಧರಿಗಿಲ್ಲಾ ಸವಲತ್ತು ; ಎಲ್ಲಾ ಸೇನಾಧಿಕಾರಿಗಳ ಮಸಲತ್ತು :



ದೇಶ ರಕ್ಷಕರ ಬವಣೆ; ಸಿಕ್ಕಿದ್ದೆಲ್ಲಾ ಅಧಿಕಾರಿಗಳಿಂದಲೇ ಭಕ್ಷಣೆ..
  



ಬಾರ್ಡರ್ ಸೆಕ್ಯೂರಿಟಿ ಪೋರ್ಸ (ಬಿಎಸ್‌ಎಪ್) ನಲ್ಲಿ  ನಡೆದ ವಿಡಿಯೋ ಸ್ಪೋಟವೊಂದು ರಕ್ಷಣಾ ಇಲಾಖೆಯನ್ನು ತಲ್ಲಣಗೊಳಿಸಿದರೆ,  ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದೆ.  ಗಡಿ ಕಾಯುವ ಯೋಧ ತೇಜ್ ಬಹದ್ದೂರ್ ಯಾದವ್ ಯೋಧರ ದುಸ್ತಿತಿಯನ್ನು ಹಾಗೂ ಸೇನಾಧಿಕಾರಿಗಳ ಭ್ರಷ್ಟತೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹರಿಬಿಡುವ ಮೂಲಕ ಮಿಲಿಟರಿಯೊಳಗಿನ ಹೆಗ್ಗಣಗಳ ಹುನ್ನಾರಗಳನ್ನು ಬಯಲುಗೊಳಿಸಿದ್ದಾನೆ. ಸೈನಿಕರ ಬಗ್ಗೆ ಅಪಾರ ಕಾಳಜಿ ಕಳಕಳಿಗಳನ್ನು ಅಭಿವ್ಯಕ್ತಿಸಿ.. ಸೈನಿಕರೇ ಈ ದೇಶದ ಸಂಪತ್ತು ಎನ್ನುವ ಹಾಗೆ ಭಾವನಾತ್ಮಕ ಭ್ರಮೆಯನ್ನು ಹುಟ್ಟು ಹಾಕಿದ ಮೋದಿ ಮಹಾತ್ಮರ ಮಾತುಗಳಿಗೆ ವಿರುದ್ಧವಾಗಿ ಮಿಲಿಟರಿ ಅಧಿಕಾರಿಗಳೇ ಸಾಮಾನ್ಯ ಸೈನಿಕರನ್ನು ಶೋಷಿಸುವುದು ಈಗ ಜಗಜ್ಜಾಹೀರಾಗಿದೆ. ಸೈನ್ಯದ ಬಗ್ಗೆ ಒಂದೇ ಒಂದು ಮಾತು ಕಾಮೆಂಟ್ ಮಾಡಿದರೂ ದೇಶದ್ರೋಹದ ಕೆಲಸವೆಂದು ಹುಯಿಲೆಬ್ಬಿಸುವ ನಕಲಿ ದೇಶಭಕ್ತರಿಗೆ ತೇಜ್ ಬಹದ್ದೂರ್ ವೀಡಿಯೋ ಕ್ಲಿಪ್ ಈಗ ನುಂಗಲಾರದ ತುತ್ತಾಗಿದೆ.

ಅಸಲಿಗೆ ಆಗಿದ್ದೇನು ಅಂದ್ರೆ. ಬಿಎಸ್‌ಎಪ್ ಯೋಧ ತೇಜ್ ಬಹದ್ದೂರ್ ಯಾದವ್ 2017ರ ಜನವರಿ ಮೊದಲ ವಾರದಲ್ಲಿ ಮೂರು ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಗಡಿ ಕಾಯುವ ಸೈನಿಕರ ದುಸ್ಥಿತಿಯನ್ನು ಬಯಲುಗೊಳಿಸಿದೆ.  ಆ ಯೋಧ ಹೇಳಿದ ಮಾತುಗಳು ಹೀಗಿವೆ. ದೇಶವಾಸಿಗಳಿಗೆ ನನ್ನ ನಮನ. ಈ ಮುಖಾಂತರ ನಿಮ್ಮಲ್ಲೊಂದು ನನ್ನ ಮನವಿ. ನಾನು ಬಿಎಸ್‌ಎಪ್-29ನೇ ಬಟಾಲಿಯನ್ನಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಇಲ್ಲಿ ನಾವು ಬೆಳಿಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಿರಂತರವಾಗಿ 11 ಗಂಟೆಗಳ ಕಾಲ ಹಿಮದ ಮಧ್ಯೆ ನಿಂತು ಗಡಿ ರಕ್ಷಿಸುತ್ತೇವೆ. ಮಳೆ, ಹಿಮ ಹಾಗೂ ಬಿರುಗಾಳಿಯ ನಡುವೆಯೂ ನಾವು ದೇಶ ಕಾಯುವ ಕಾಯಕವನ್ನು ಮಾಡುತ್ತಿದ್ದೇವೆ. ಆದರೆ.. ನಮ್ಮ ಕಷ್ಟವನ್ನು ಯಾವುದೇ ಮಾಧ್ಯಮವಾಗಲಿ ಇಲ್ಲವೇ ರಾಜಕಾರಣಿಗಳಾಗಲಿ ಕೇಳುವುದಿಲ್ಲ... ನಾನು ಕೆಲವು ವಿಡಿಯೋಗಳನ್ನು ಕಳುಹಿಸುತ್ತಿದ್ದೇನೆ. ಇದನ್ನು ದೇಶದ ಪ್ರತಿಯೊಂದು ಮಾಧ್ಯಮಗಳು ಹಾಗೂ ರಾಜಕಾರಣಿಗಳಿಗೆ ತೋರಿಸಬೇಕೆಂದು ನನ್ನ ಬಯಕೆಯಾಗಿದೆ. ಇಲ್ಲಿ ನಮ್ಮ ಅಧಿಕಾರಿಗಳು ನಮ್ಮ ಮೇಲೆ ಯಾವ ರೀತಿ ಅನ್ಯಾಯ ಮಾಡುತ್ತಿದ್ದಾರೆ ಎಂಬುದು ವೀಡಿಯೋಗಳಲ್ಲಿ ಸ್ಪಷ್ಟವಾಗಿದೆ. ನಾನು ಸರಕಾರವನ್ನು ದೂಷಿಸುತ್ತಿಲ್ಲಾ. ಯಾಕೆಂದರೆ ಸರಕಾರ ಪ್ರತಿಯೊಂದನ್ನೂ ನೀಡುತ್ತಿದೆ.. ಆದರೆ ಹಿರಿಯ ಅಧಿಕಾರಿಗಳು ಅವುಗಳನ್ನು ನಮಗೆ ತಲುಪಿಸಲು ಬಿಡದೇ ಎಲ್ಲವನ್ನೂ ತಮಗೇ ಇಟ್ಟುಕೊಳ್ಳುತ್ತಾರೆ. ಹೀಗಾಗಿ ನಾವು ಇಲ್ಲಿ ಇಷ್ಟು ಕಷ್ಟ ಅನುಭವಿಸುತ್ತಿದ್ದರೂ ನಮಗೆ ಯಾವುದೇ ಸೌಲಭ್ಯ ಸಿಕ್ಕುತ್ತಿಲ್ಲಾ. ಬಹಳಷ್ಟು ಬಾರಿ ಇಲ್ಲಿರುವ ಯೋಧರು ಊಟವಿಲ್ಲದೆ, ಹಸಿವಿನಿಂದ ಮಲಗಿಕೊಳ್ಳಬೇಕಾಗುತ್ತದೆ. ಬೆಳಗಿನ  ಉಪಹಾರದಲ್ಲಿ ನಮಗೆ ಸಿಗುವುದು ಒಂದು ಒಣ ಪರೋಟ ಹಾಗೂ ಅದರೊಂದಿಗೆ ತಿನ್ನಲು ಉಪ್ಪಿನಕಾಯಿ ಮಾತ್ರ. ಪಲ್ಯ ಸಹ ಇಲ್ಲಾ. ಮಧ್ಯಾಹ್ನ ಊಟಕ್ಕೆ ಸಿಗುವ ಸಾರಿನಲ್ಲಿ ಕೇವಲ ಉಪ್ಪು ಹಾಗೂ ಬೇಳೆ ಮಾತ್ರ ಕಂಡುಬರುತ್ತದೆ. ಭಾರತ ಸರಕಾರ ಎಲ್ಲವನ್ನೂ ನೀಡುತ್ತಿದೆ.. ಇಲ್ಲಿನ ಸ್ಟೋರ್ ತುಂಬಿ ತುಳುಕುತ್ತಿದೆ. ಆದರೆ ಬಂದ ಸಾಮಾನುಗಳು ಮಾರುಕಟ್ಟೆಗೆ ಹೋಗುತ್ತಿವೆ. ಯಾರಿದನ್ನು ಮಾರುತ್ತಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಮಾನ್ಯ ಪ್ರಧಾನ ಮಂತ್ರಿಗಳಲ್ಲಿ ನನ್ನದೊಂದು ವಿನಂತಿ. ದಯವಿಟ್ಟು ಈ ಕುರಿತಾಗಿ ತನಿಖೆ ನಡೆಸಿ. ಈ ವಿಡಿಯೋ ಹಾಕಿದ ನಂತರ ನಾನು ಇರುತ್ತೇನೋ ಇಲ್ಲವೋ ಗೊತ್ತಿಲ್ಲಾ. ಯಾಕೆಂದರೆ ಇದರಲ್ಲಿ ಅಧಿಕಾರಿಗಳ ಬಹುದೊಡ್ಡ ಕೈವಾಡವಿದೆ. ಅವರು ನನಗೆ ಏನು ಬೇಕಾದರೂ ಮಾಡಬಹುದಾಗಿದೆ. ಹೀಗಾಗಿ ಈ ವಿಡಿಯೋವನ್ನು ಸಾಧ್ಯವಾದಷ್ಟೂ ಹೆಚ್ಚು ಶೇರ್ ಮಾಡಿಕೊಳ್ಳಿ. ಈ ಮೂಲಕ ಮಾಧ್ಯಮಗಳೂ ಯೋಧರ ಕಷ್ಟವನ್ನು ಜನರಿಗೆ ತೋರಿಸಲಿ. ಧನ್ಯವಾದಗಳು. ಜೈ ಹಿಂದ್


ಈ ಮೇಲಿನ ಹೇಳಿಕೆಯನ್ನು ವಿಡಿಯೋ ಮೂಲಕ ನೀಡಿ ಯೋಧರ ದಮನೀಯ ಪರಿಸ್ಥಿತಿಯನ್ನು ತೆರೆದಿಟ್ಟ ತೇಜ್ ಬಹದ್ದೂರ್ ಯಾದವ್ ಎಲ್‌ಓಸಿ ಅಂದ್ರೆ ಲೈನ್ ಆಪ್ ಕಂಟ್ರೋಲ್‌ನಲ್ಲಿ ಕಾಯಕನಿರತನಾಗಿರುವ ಬಿಎಸ್‌ಎಪ್  ಬಟಾಲಿಯನ್ನಲ್ಲಿ ಸಾಮಾನ್ಯ ಸೈನಿಕ. ಮೈನಸ್ ಡಿಗ್ರಿ ಚಳಿಯಲ್ಲಿ, ಮೈಕೊರೆಯುವ ಹಿಮದಲ್ಲಿ.. ಪ್ರಾಣವನ್ನೇ ಒತ್ತೇ ಇಟ್ಟು ದೇಶದ ಗಡಿ ಕಾಯುತ್ತಿರುವಾತ. ದೇಶವಾಸಿಗಳು ಸುಖವಾಗಿ ನಿದ್ದೆ ಮಾಡಬೇಕಾದರೆ ಈ ಸೈನಿಕರ ತ್ಯಾಗವೇ ಕಾರಣ ಎಂದು ಪುಂಗುವ ದೇಶಭಕ್ತರಿಗೆ ಸೈನಿಕರ ಮೇಲೆ ಸೇನಾಧಿಕಾರಿಗಳೇ ಶೋಷಣೆ ಮಾಡುತ್ತಿರುವುದು ನಂಬಲಾಗದ ಸತ್ಯವಾಗಿದೆ. ಆದರೆ.. ಅದು ಇಂದು ನಿನ್ನೆಯದಲ್ಲ. ಮೊದಲಿನಿಂದಲೂ ಮಿಲಿಟರಿಯಲ್ಲಿ ಈ ತಾರತಮ್ಯ ನಿರಂತರವಾಗಿದೆ. ಭ್ರಷ್ಟಾಚಾರವೆನ್ನುವುದು ಕೇವಲ ಸಿವಿಲಿಯನ್‌ಗಳಲ್ಲಿ ಮಾತ್ರವಲ್ಲಾ.. ಮಿಲಿಟರಿಯಲ್ಲೂ ಹಾಸು ಹೊಕ್ಕಾಗಿದೆ. ಸೈನಿಕರು ತಿನ್ನುವ ಆಹಾರಗಳನ್ನೂ ಸಹ ಕದ್ದು ಹೊರಗೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳುವ ನೀಚ ಅಧಿಕಾರಿಗಳಿಗೆ ದೇಶ ಕಾಯುವ ಯೋಧರು ಎಂದು ಹೇಳಿಕೊಳ್ಳುವ ಯಾವುದೇ ನೈತಿಕತೆ ಇಲ್ಲಾ.. ಭ್ರಷ್ಟಾಚಾರದ ಬೇರುಗಳು ಶಾಸಕಾಂಗದಲ್ಲಿ ಹುಟ್ಟಿ.. ಕಾರ್ಯಾಂಗದಲ್ಲಿ ಬೆಳೆದು ನ್ಯಾಯಾಂಗದಲ್ಲಿ ಅಡಗಿ, ಪತ್ರಿಕಾಂಗದಲ್ಲಿ ವಿಜ್ರಂಭಿಸಿ ಕೊನೆಗೆ ಮಿಲಿಟರಿ ಅಂಗದಲ್ಲೂ ಸಹ ವಿಸ್ತರಿಸಿಕೊಂಡಿದ್ದು ಈ ದೇಶದ ಬಹುದೊಡ್ಡ ದುರಂತವಾಗಿದೆ. ಮೋದಿಯಂತವರು ಬ್ರಹತ್ ಬಂಡವಾಳಶಾಹಿಗಳ ಹಿತರಕ್ಷಣೆಗಾಗಿ ನೋಟ್ ರದ್ದತಿ.. ಕ್ಯಾಶಲೆಸ್ ವ್ಯವಹಾರ.. ಕಪ್ಪು ಹಣ ಬ್ಯಾನ್.. ಮುಂತಾದ ವಿಕ್ಷಿಪ್ತ ಯೋಜನೆಗಳನ್ನು ಜಾರಿಗೆ ತಂದರೂ ಸಹ ಬ್ರಷ್ಟಾಚಾರ ಎನ್ನುವ ಬ್ರಹತ್ ವೃಕ್ಷದ ಕೆಲವು ತಪ್ಪಲುಗಳು ಉದುರಬಹುದೇ ಹೊರತು ಆಳವಾಗಿ ಹರಡಿಕೊಂಡ ಬೇರುಗಳನ್ನು ಅಲ್ಲಾಡಿಸಲೂ ಸಾಧ್ಯವಾಗಿಲ್ಲಾ.. ಈ ಸಧ್ಯದ ಬಂಡವಾಳಶಾಹಿ ಪ್ರಜಾಪ್ರಭುತ್ವದಲ್ಲಿ ಅದು ಸಾಧ್ಯವೂ ಇಲ್ಲಾ.. ಇದಕ್ಕೆ ಮಿಲಿಟರಿ ಕೂಡಾ ಹೊರತಲ್ಲಾ.

ಜವಾನ್ ತೇಜ್ ಬಹದ್ದೂರ್ ವಿಡಿಯೋ ಆರೋಪದಿಂದ ದಿಗಿಲಿಗೆ ಬಿದ್ದ ಬಿಎಸ್‌ಎಪ್ ಅಧಿಕಾರಿಗಳು ಹಾಗೂ ರಕ್ಷಣಾ ಇಲಾಖೆಯ ನಾಯಕರುಗಳು ಈಗ ತಮ್ಮ ಕೂಳ ಪಡೆಯ ಹುಳುಕನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಆರೋಪ ಮಾಡಿದವನ ಮೇಲೆಯೇ ಆರೋಪ ಹೊರೆಸಿ ತಮ್ಮ ತಪ್ಪಿಲ್ಲವೆಂದು ಸಾಬೀತುಪಡಿಸುವ ದಾವಂತದಲ್ಲಿದ್ದಾರೆ. ಸೇನೆಯಲ್ಲಿರುವ ಯೋಧನ ಕೈಯಲ್ಲಿ ಮೊಬೈಲ್ ಸಿಕ್ಕಿದ್ದು ಹೇಗೆ? ಎಂದು ಸೇನೆ ತಲೆಕೆಡಿಸಿಕೊಂಡಿದೆ. ಈ ಹಿಂದೆಯೇ ಅಶಿಸ್ತಿನ ಕಾರಣಕ್ಕೆ ತೇಜ್ ಬಹದ್ದೂರ್ ಕೋರ್ಟ ಮಾರ್ಷಲ್ ಶಿಕ್ಷೆಗೆ ಒಳಗಾಗಿದ್ದಾ ಭಡ್ತಿ ತಡೆಹಿಡಿಯಲಾಗಿತ್ತು.. ಇದರಿಂದ ಭ್ರಮನಿರಸನಗೊಂಡು ಇಂತಹ ಆರೋಪ ಮಾಡಿದ್ದಾನೆ ಎಂದು ಸೇನಾಧಿಕಾರಿಗಳು ಹೇಳತೊಡಗಿದ್ದಾರೆ. ಇರುವುದನ್ನು ಇದ್ದಂತೆ ಹೊರಜಗತ್ತಿಗೆ ತೋರಿಸಿದ ತೇಜ್ ಬಹದ್ದೂರ್ ಮೇಲೆ ಕುಡುಕ, ಅಸಮರ್ಥ, ದುರ್ವರ್ತನೆಗಾರ... ಎನ್ನುವ ಆರೋಪಗಳನ್ನು ಸೈನ್ಯಾಧಿಕಾರಿಗಳು ಹೊರೆಸಿದ್ದಾರೆ. ತಮ್ಮ ಸೈನ್ಯದೊಳಗಿನ ಕೊಳಕನ್ನು ಮುಚ್ಚಿಕೊಳ್ಳಲು ಸೈನಿಕನನ್ನು ಹಿಂಸಿಸುವ ಕೆಲಸವನ್ನು ನಿಯತ್ತಾಗಿ ಮಾಡುತ್ತಿದ್ದಾರೆ. ಈಗಾಗಲೇ ಹುಸಿ ವಿಚಾರಣೆ ಆರಂಭಿಸಿದ್ದು ನ್ಯೂನ್ಯತೆ ತೋರಿದ ಯೋಧನನ್ನು ಸೇನಾ ಶಿಸ್ತು ಉಲ್ಲಂಘನೆಯ ಆಪಾದನೆಯ ಮೇಲೆ ಸೇನೆಯಿಂದ ವಚಾಗೊಳಿಸುವುದಂತೂ ಖಾತ್ರಿಯಾಗಿದೆ. ಕಳಪೆ ಊಟದ ಬಗ್ಗೆ ವಿಡಿಯೋ ಮಾಡಿದ್ದನ್ನೂ ಸಹ ಸೈನ್ಯ ದೇಶದ್ರೋಹವೆಂದು ಪರಿಗಣಿಸಲಾಗಿದೆ. ಬಹದ್ದೂರ್ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಈಗಾಗಲೇ ರಕ್ಷಣಾ ಇಲಾಖೆಯ ಮಂತ್ರಾಲಯದಿಂದ ಡೈರೆಕ್ಟರ್ ಜನರಲ್ ರವರಿಗೆ ಆದೇಶ ರವಾನೆಯಾಗಿದೆ. ಸೈನ್ಯಾಧಿಕಾರಿಗಳು ತಪ್ಪು ಮಾಡಿಲ್ಲ ಎನ್ನುವುದಾದರೆ ಆಗಿರುವ ಅವಘಡವನ್ನು ಸರಿಪಡಿಸಬೇಕಾಗಿತ್ತು. ಆದರೆ ತಮ್ಮ ಲೋಪಗಳನ್ನು ಮುಚ್ಚಿಟ್ಟುಕೊಳ್ಳಲು ಮಿಲಿಟರಿ ಕ್ಯಾಂಪಗಳ ಪಾಕಶಾಲೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಮೊಬೈಲ್ ಬಳಕೆಯನ್ನೇ ನಿರ್ಬಂಧಿಸಿ ಯೋಧರ ಮೇಲೆ ಕಮಾಂಡೋಗಳು ಹದ್ದಿನ ಕಣ್ಣಿಟ್ಟಿದ್ದು ಅಕ್ಷಮ್ಯ. ಒಳಗಿನ ಹುಳುಕನ್ನು ಸರಿಪಡಿಸುವ ಬದಲು ಹುಳುಕು ಹೊರಗೆ ಗೊತ್ತಾಗದಂತೆ ಮಾಡುವತ್ತಲೇ ಸೈನ್ಯಾಧಿಕಾರಿಗಳ ಚಿತ್ತ ಇರುವುದು ಅವರ ಸರ್ವಾಧಿಕಾರಯುತವಾದ ಆದೇಶದಿಂದ ಸಾಬೀತಾಗುತ್ತದೆ. 



ಸತ್ಯವನ್ನು ಹೇಳಲು ಸತ್ಯವಂತನೇ ಆಗಬೇಕೆಂದೇನಿಲ್ಲಾ. ಆ ಸೈನಿಕ ತಪ್ಪು ಮಾಡಿದ್ದಕ್ಕೂ ಈಗ ಸತ್ಯವನ್ನು ಬಹಿರಂಗ ಪಡಿಸಿದ್ದಕ್ಕೂ ತಾಳೆ ಹಾಕುವ ಅಗತ್ಯವೂ ಇಲ್ಲಾ. ಯಾಕೆಂದರೆ ಸೈನಿಕರಿಗಾಗಿ ಸರಕಾರ ನೀಡುವ ಸವಲತ್ತುಗಳನ್ನು ಸೈನ್ಯಾಧಿಕಾರಿಗಳು ಅಕ್ರಮವಾಗಿ ಮಾರಿಕೊಳ್ಳುತ್ತಿರುವುದರಲ್ಲಿ ಸುಳ್ಳಂತೂ ಇಲ್ಲಾ. ಗಡಿ ಪ್ರದೇಶ ಹೋಗಲಿ.. ಬೆಂಗಳೂರಿನಂತಾ ನಗರದಲ್ಲೂ ಸಹ ಈಗಲೂ ಮಿಲಿಟರಿ ಕ್ಯಾಂಟೀನಿನಲ್ಲಿ ಕಡಿಮೆ ಬೆಲೆಗೆ ಸಿಗುವ ಸಾಮಗ್ರಿಗಳನ್ನು ಪಡೆದು ಮಾರಿಕೊಳ್ಳುವವರೂ ಇದ್ದಾರೆ ಎನ್ನುವುದು ನಿರ್ವಿವಾದ. ಮಿಲಿಟರಿ ವೆಹಿಕಲ್‌ಗಳಿಂದಾ ಪೆಟ್ರೋಲ್ ಡೀಸಲ್ ಕದ್ದು ಮಾರುವವರೂ.. ತಮ್ಮ ಬಂಧು ಬಾಂಧವರಿಗೆ ಹಂಚುವವರೂ ಬೇಕಾದಷ್ಟು ಜನರು ಮಿಲಿಟರಿಯಲ್ಲಿದ್ದಾರೆ. ಇನ್ನು ಹೆಳೋರು ಕೇಳೋರು ಯಾರೂ ಇಲ್ಲದಂತಹ.. ಹಿಮಚ್ಚಾದಿತ ದುರ್ಗಮವಾದ ಗುಡ್ಡುಗಾಡು ಪರ್ವತ ಪ್ರದೇಶದಲ್ಲಿರುವ ಸೈನ್ಯಾಧಿಕಾರಿಗಳನ್ನು ಕೇಳುವವರಾದರೂ ಯಾರು? ಮಿಲಿಟರಿಯಲ್ಲಿರುವವರೆಲ್ಲಾ ಹೀಗೆ ಎಂದು ಹೇಳಲಾಗುವುದಿಲ್ಲವಾದರೂ ಸಿಕ್ಕ ಅವಕಾಶಗಳನ್ನು ಅಕ್ರಮವಾಗಿ ಬಳಿಸಿಕೊಳ್ಳುವವರಿಗೇನೂ ಕಡಿಮೆ ಇಲ್ಲಾ.. 


ಪ್ರಧಾನ ಮಂತ್ರಿಯವರು ದೇಶ ರಕ್ಷಕ ಸೈನಿಕರಿಗಾಗಿ ಪ್ರತಿಯೊಬ್ಬ ದೇಶವಾಸಿಗಳೂ ದಿನಕ್ಕೊಂದು ರೂಪಾಯಿ ದೇಣಿಗೆ ಕೊಡಬೇಕು ಎಂದು ಕರೆಕೊಟ್ಟಿದ್ದಾರೆ. ಪ್ರಧಾನಿಯ ದೇಶಭಕ್ತಿಯ ಭಾವತೀವ್ರತೆಯ ಕರೆಗೆ ಓಗೊಟ್ಟು ಹಲವಾರು ಜನರು ಒಂದು ವರ್ಷಕ್ಕಾಗುವ ಮುನ್ನೂರಾ ಐವತ್ತು ರೂಪಾಯಿಗಳನ್ನು ಸೈನಿಕ ಕಲ್ಯಾಣ ನಿಧಿಗೆ ಕಳುಹಿಸಿಕೊಟ್ಟಿದ್ದಾರೆ. ಹೀಗೆ ಕಳುಹಿಸಿದ ಹಣ ಸೈನಿಕರಿಗೆ ನಿಜಕ್ಕೂ ಉಪಯೋಗವಾಗುತ್ತದೆಯಾ? ದೇಶ ಕಾಯುವ ಯೋಧನಿಗೆ ಕನಿಷ್ಟ ಹೊಟ್ಟೆ ತುಂಬಾ ಪುಷ್ಟಿದಾಯಕ ಆಹಾರವನ್ನಾದರೂ ಒದಗಿಸುತ್ತದಾ? ಎಂದುಕೊಂಡರೆ ಅದೂ ಕೂಡಾ ಸಾಧ್ಯವಿಲ್ಲ ಎನ್ನುವುದು ತೇಜ್ ಬಹದ್ದೂರ್ ಪ್ರಕರಣ ಸಾಕ್ಷ ಹೇಳುತ್ತದೆ. ಇನ್ನು ಸರಕಾರ ಮಿಲಿಟರಿಗೆ ಒದಗಿಸುವ ಬಿಲಿಯಾಂತರ ಹಣ ಎಲ್ಲಿ ಹೋಯಿತು? ಜನರು ಕೊಟ್ಟು ಕೊಟ್ಯಾಂತರ ದೇಣಿಗೆ ಯಾರ ಜೇಬು ಸೇರಿತು? ಎಂಬ ಪ್ರಶ್ನೆಗೆ ಉತ್ತರವನ್ನು ಪ್ರಧಾನಿಗಳು ಹಾಗೂ ಪ್ರಧಾನಿಯ ಸಮರ್ಥಕರು ಕೊಡಬೇಕಾಗಿದೆ. 
 
ತಮಗೆ ಮಿಲಿಟರಿ ಅಧಿಕಾರಿಗಳೇ ಇಂದನಗಳನ್ನು ಹಾಗೂ ಆಹಾರಾದಿ ವಸ್ತುಗಳನ್ನು ಅರ್ಧ ಬೆಲೆಗೆ ಮಾರುತ್ತಾರೆ ಎಂಬ ಆಘಾತಕಾರಿ ವಿಷಯವನ್ನು  ಶ್ರೀನಿಗರದ ಮಿಲಿಟರಿ ಕ್ಯಾಂಪ್ ಅಕ್ಕಪಕ್ಕದ ನಾಗರಿಕ ನಿವಾಸಿಗಳೇ  ಹೇಳುತ್ತಾರೆ. ಬಿಎಸ್‌ಎಪ್ ಹೆಡ್ ಕ್ವಾರ್ಟರ್ ಅಕ್ಕಪಕ್ಕದ ಅಂಗಡಿಯವರು ಹೆಚ್ಚಾಗಿ ಅಕ್ರಮ ವ್ಯವಹಾರದ ಫಲಾನುಭವಿಗಳಾಗಿದ್ದಾರೆ. ಮಿಲಿಟರಿ  ಸ್ಟೋರ್ ಗಳಿಂದಲೂ ಪದಾರ್ಥಗಳು ಕ್ಯಾಂಪಿನ ಹೊರಗಡೆಗೆ ಮಾರಾಟವಾಗುತ್ತಿದ್ದು ಈ ವ್ಯವಹಾರಕ್ಕಾಗಿಯೇ ಕೆಲವು ಸಿವೀಲಿಯನ್ ಎಜಂಟರುಗಳೂ ಸಹ ಕಾರ್ಯಪ್ರವೃತ್ತರಾಗಿದ್ದಾರೆ. ಬಿಎಸ್ಎಪ್ ಅಧಿಕಾರಿಗಳು ಸೇನಾ ವಾಹನದ ಬಳಕೆಗೆ ಇರುವ ಪೆಟ್ರೋಲ್ ಹಾಗೂ ಡೀಸಲ್ ಗಳನ್ನು ಅರ್ಧ ಬೆಲೆಗೆ ಸಿವಿಲಿಯನ್ ಗಳಿಗೆ ಮಾರಾಟ ಮಾಡುತ್ತಿರುವುದು ಸರಕಾರಕ್ಕೆ ಗೊತ್ತಿಲ್ಲದಿದ್ದರೂ ಬಿಎಸ್ ಎಪ್ ಕ್ಯಾಂಪಿನ ಏರಿಯಾದಲ್ಲಿ ಇರುವವರಿಗೆಲ್ಲಾ ಗೊತ್ತಿರುವಂತಹ ಸಂಗತಿಯೇ ಆಗಿದೆ. ಬಿಎಸ್ ಎಪ್ ನಲ್ಲಿ ಪೀಟೋಪಕರಣಗಳನ್ನು ಕೊಂಡುಕೊಳ್ಳಲು ಟೆಂಡರ್ ಪದ್ದತಿ ಜಾರಿಯಲ್ಲಿಲ್ಲಾ. ಹೀಗಾಗಿ ಅವುಗಳನ್ನು ಸಪ್ಲೈ ಮಾಡುವ ಗುತ್ತಿಗೆದಾರರಿಂದ ಕಮಿಷನ್ ಪಡೆದು ಆರ್ಡರ್ ಕೊಡುವ ಪರ್ಚೆಜಿಂಗ್ ಆಫಿಸರ್‌ಗಳಿಗೆ ಕೊರತೆ ಇಲ್ಲಾ. ಮಿಲಿಟರಿಯಲ್ಲಿ ಪುಕ್ಕಟೆ ಇಲ್ಲವೇ ಅತೀ ಕಡಿಮೆ ಬೆಲೆಗೆ ಸಿಗುವ ಎಲ್ಲಾ ನಮೂನಿಯ ಮಧ್ಯಗಳ ಬಾಟಲಿಗಳು ಕ್ಯಾಂಪುಗಳ ಹೊರಗೆ ಬಿಕರಿಯಾಗುವುದಕ್ಕೆ ಸೇನೆಯ ಸಾಮಾನ್ಯ ಯೋಧರಿಂದ ಹಿಡಿದು ಸೇನಾಧಿಕಾರಿಗಳ ವರೆಗೆ ಬಹುತೇಕರು ಕಾರಣೀಕರ್ತರಾಗಿದ್ದಾರೆ. ಆಹಾರ, ಹೆಂಡದ  ಖರೀದಿ ಹಾಗೂ ಮಾರಾಟದಿಂದ ಹಿಡಿದು ವಿಮಾನ, ಹೆಲಿಕ್ಯಾಪ್ಟರ್ ಖರೀದಿಯವರೆಗೂ ಸೇನೆಯೊಳಗಿನವರು ಅಕ್ರಮದಲ್ಲಿ ಪಾಲುದಾರರಾಗಿದ್ದನ್ನು ನಂಬಲಾಗದಿದ್ದರೂ ಅದು ಸತ್ಯವಾಗಿದೆ.
  

ಮಿಲಿಟರಿ ಎನ್ನುವುದು ದೇಶವನ್ನು ಕಾಯಲು ಇರುವ ವ್ಯವಸ್ಥೆ ಎಂಬುದು ಎಲ್ಲರ ನಂಬಿಕೆಯಾಗಿದೆ. ಆದರೆ.. ದೇಶ ಕಾಯುವವರೇ ನಿರಂತರ ದಿನನಿತ್ಯದ ಭ್ರಷ್ಟಾಚಾರದಲ್ಲಿ ನಿರತರಾಗಿ ದೇಶದ ಆಂತರಿಕ ವ್ಯವಸ್ಥೆಗೆ ಮಾರಕವಾಗಿರುವುದು ಸೈನ್ಯದ ಮೇಲೆ ಜನರು ಇಟ್ಟಿರುವ ವಿಶ್ವಾಸಕ್ಕೆ ದಕ್ಕೆ ತರುವಂತಹುದಾಗಿದೆ. ಅದು ಬಿಎಸ್‌ಎಪ್, ಸಿಆರ್‌ಪಿಎಪ್ ಆಗಿರಲಿ, ಮಿಲಿಟರಿ ಇಂಜನೀಯರಿಂಗ್ ಸರ್ವಿಸ್ ಆಗಿರಲಿ ಇಲ್ಲವೇ ದೇಶ ರಕ್ಷಣೆಗೆ ಇರುವ ಯಾವುದೇ ವಿಭಾಗವಾಗಿರಲಿ ಭ್ರಷ್ಟಾಚಾರ ರಹಿತವಾಗಿಲ್ಲದಿರುವುದು ಈ ದೇಶದ ದುರಂತವಾಗಿದೆ. ಇರುವುದರಲ್ಲೇ ಮಿಲಿಟರಿ ಪರವಾಗಿಲ್ಲಾ.. ದೇಶವನ್ನು ನಿಯತ್ತಾಗಿ ಕಾಯುತ್ತಿರುವುದರಿಂದಲೇ ಈ ದೇಶ ಸುರಕ್ಷಿತವಾಗಿದೆ ಎಂದು ಬಹುತೇಕ ದೇಶವಾಸಿಗಳು ನಂಬಿದ್ದಾರೆ ಹಾಗೂ ನಂಬಿಸಲಾಗಿದೆ. ಆದರೆ..  ಬೇರೆ ಎಲ್ಲಾ ವಿಭಾಗಗಳಲ್ಲಿ ಆಗುವ ಬ್ರಷ್ಟಾಚಾರಗಳು ಕಣ್ಣಿಗೆ ಕಾಣುತ್ತವೆ.. ಮಾಧ್ಯಮಗಳ ಮೂಲಕ ಜನರಿಗೆ ಗೊತ್ತಾಗುತ್ತದೆ. ಆದರೆ .. ಸೇನೆಯಲ್ಲಿ ಬೇರೆಯವರಿಗೆ ಪ್ರವೇಶವೇ ಇಲ್ಲಾ.. ಅದರಲ್ಲೂ ಮಾಧ್ಯಮಗಳನ್ನು ಸೇನೆ ಒಳಗೇ ಬಿಟ್ಟುಕೊಳ್ಳುವುದಿಲ್ಲಾ. ಹೀಗಾಗಿ ಅಲ್ಲಿ ನಡೆಯುವ ಅಕ್ರಮ ಅನಾಚಾರಗಳು ಎಂದೂ ಹೊರಗೆ ಬರುವುದೂ ಇಲ್ಲಾ. ಬಂದರೂ ಅದು ಒಳಗಿನವರಿಂದಲೇ ಸುದ್ದಿಯಾಗಬೇಕು. ಹಾಗೇನಾದರೂ ಆದರೆ ಅಕ್ರಮವನ್ನು ಬೆಳಕಿಗೆ ತಂದವರನ್ನು ಶಿಸ್ತಿನ ಹೆಸರಲ್ಲಿ ಕೋರ್ಟ ಮಾರ್ಷಲ್ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಹೀಗಾಗಿ ದೇಶವನ್ನು ಕಾಯುವ ಮಿಲಿಟರಿಯೊಳಗಿನ ಹೆಗ್ಗಣಗಳು ಯಾವ ಬೋನಿಗೂ ಬೀಳದೇ ತಿಂದುಂಡು ಕೊಬ್ಬಿವೆ. ದೇಶದ ಉನ್ನತ ಸೇನಾಧಿಕಾರಿ ತ್ಯಾಗಿ ಕಾಪ್ಟರ್ ಹಗರಣದಲ್ಲಿ ಕಮಿಷನ್ ಪಡೆದ ಆರೋಪದ ಮೇಲೆ ಇತ್ತೀಚೆಗೆ ಆರೆಸ್ಟ್ ಆಗಿದ್ದೂ ಸಹ ಕೆಳಗಿನ ಹಂತದಿಂದ ಉನ್ನತ ಹಂತದವರೆಗೂ ಪಸರಿಸಿದ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ.


ಈ ಮಿಲಿಟರಿ ಎನ್ನುವುದಕ್ಕೆ ಸ್ವಂತ ಆದಾಯ ಎನ್ನುವುದಿಲ್ಲಾ. ಈ ದೇಶದ ಕೊಟ್ಯಾಂತರ ಜನರು ತೆತ್ತ ತೆರಿಗೆಯ ಹಣದ ಬಹುಪಾಲನ್ನು ಬಳಸಿಯೇ ಸೇನೆ ಅಸ್ತಿತ್ವದಲ್ಲಿದೆ. ಕೇವಲ ಗಡಿ ರಕ್ಷಣಾ ಪಡೆಯ ನಿರ್ವಹಣೆಗೆ ವಾರ್ಷಿಕ 14 ಸಾವಿರ ಕೋಟಿ ಹಣವನ್ನು ವಿನಿಯೋಗಿಸಲಾಗುತ್ತಿದೆ.  ದೇಶವನ್ನು ವೈರಿಗಳಿಂದ ಕಾಪಾಡಲೆಂದೇ ಬ್ರಹತ್ ಮಿಲಿಟರಿಯನ್ನು ಸರಕಾರ ಪೋಷಿಸುತ್ತಿದೆ. ಹಾಗೂ ಸೇನೆಯಲ್ಲಿ ಸಾಮಾನ್ಯ ಸೈನಿಕರಾಗಿ ಸೇವೆಸಲ್ಲಿಸುವವರೆಲ್ಲಾ ರೈತಾಪಿ ಕೂಲಿ ಕಾರ್ಮಿಕರುಗಳ ಮಕ್ಕಳೇ ಆಗಿದ್ದಾರೆ. ದೇಶ ಸೇವೆಯ ಕನಸನ್ನು ಹೊತ್ತು ತಮ್ಮ ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನೂ ನಿಭಾಯಿಸಲು ಬಹುತೇಕ ಬಡ ಮಕ್ಕಳು ಮಿಲಿಟರಿ ಸೇರುತ್ತಾರೆ. ಅಸಮಾನ ವ್ಯವಸ್ಥೆಯ ಅನುಕೂಲತೆಗಳನ್ನು ಬಳಿಸಿಕೊಂಡು ಹೆಚ್ಚಿನ ವಿದ್ಯಾಬ್ಯಾಸ ಮಾಡಿ ಸೇನಾಧಿಕಾರಿಗಳಾದವರಲ್ಲಿ ಹೆಚ್ಚಿನವರು ಮೇಲ್ವರ್ಗದವರಾಗಿರುತ್ತಾರೆ. ಸಮಾಜದಲ್ಲಿ ಅದು ಹೇಗೆ ಮೇಲ್ವರ್ಗದವರು ದುಡಿಯುವ ವರ್ಗದವರನ್ನು ದುಡಿಸಿಕೊಂಡು ಶೋಷಿಸುತ್ತಾರೋ ಅದೇ ರೀತಿ ಈ ವರ್ಗ ಹಿತಾಸಕ್ತಿ ಮಿಲಿಟರಿಯಲ್ಲೂ ಮುಂದುವರೆಯುತ್ತದೆ. ಅಲ್ಲಿ ಸೇನಾಧಿಕಾರಿಗಳು ಹಾಗೂ ಸೈನಿಕರು ಎನ್ನುವ ಎರಡು ವರ್ಗಗಳು ಹುಟ್ಟಿಕೊಳ್ಳುತ್ತವೆ. ಆಳುವವರು ಮತ್ತು ಆಳಿಸಿಕೊಳ್ಳುವವರು ಎಂದು ಬೇಕಾದರೂ ಇವರನ್ನು ಕರೆಯಬಹುದು. ಈ ಆಳುವ ಅಧಿಕಾರಿಗಳು ಎಲ್ಲಾ ಸವಲತ್ತುಗಳನ್ನು ತಾವೇ ಪಡೆದು ಕೆಳ ವರ್ಗದಿಂದ ಬಂದ ಸೈನಿಕರ ಸವಲತ್ತುಗಳನ್ನೂ ಕಬಳಿಸಿ ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಂಡು ಬರುತ್ತಾರೆ. ಸೇನೆಯಲ್ಲಿಯೂ ಕೂಡಾ ದೇಶಭಕ್ತಿಯ ಭ್ರಮೆಯನ್ನು ಸೈನಿಕರಲ್ಲಿ ತುಂಬಿ.. ವಿರೋಧಿ ದೇಶಗಳ ಮೇಲೆ ಅಪಾರವಾದ ದ್ವೇಷವನ್ನು ಬಿತ್ತಿ ಸೈನಿಕರನ್ನು ಭಾವನಾತ್ಮಕವಾಗಿ ಹಿಡಿದಿಡಲಾಗುತ್ತದೆ. ಯಾವ ಸವಲತ್ತುಗಳು ಸಿಗಲಿ ಬಿಡಲಿ ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವುದೇ ಸೌಭಾಗ್ಯ ಎನ್ನುವ ಭಾವತೀವ್ರತೆಯನ್ನು ಸಾಮಾನ್ಯ ಸೈನಿಕರಲ್ಲಿ ಬಿತ್ತಲಾಗುತ್ತದೆ. ಹೀಗೆ ಸೈನಿಕರನ್ನು ಬ್ರಮೆಯಲ್ಲಿಡುತ್ತಾ.. ಅವರನ್ನು ಸದಾ ಅವಾಚ್ಯ ಶಬ್ದಗಳಿಂದಾ ನಿಂದಿಸುತ್ತಾ.. ತಮ್ಮ ಸ್ವಂತ ಕೆಲಸಗಳಿಗೂ ದುಡಿಸಿಕೊಳ್ಳುತ್ತಾ.. ಶಿಸ್ತಿನ ಹೆಸರಲ್ಲಿ ವಿಪರೀತ ಶೋಷಣೆಯನ್ನು ಸೇನಾಧಿಕಾರಿಗಳು ಮಾಡುತ್ತಲೇ ಇರುತ್ತಾರೆ. ಮಿಲಿಟರಿಯಲ್ಲಿ ಸಮಾನತೆ, ಸಹೋದರತೆ, ಸಹಬಾಳ್ವೆ ಎನ್ನುವ ತತ್ವಗಳಿಗೆ ನೆಲೆಯೂ ಇಲ್ಲಾ ಬೆಲೆಯೂ ಇಲ್ಲಾ. ಏನಿದ್ದರೂ ಮೇಲಿನಂದ ಆದೇಶಗಳು ಬರುತ್ತವೆ. ಅದನ್ನು ಕೆಳಹಂತದವರು ಪ್ರಶ್ನೆ ಕೇಳದೇ ಪಾಲಿಸಬೇಕೆಂಬುದು ಮಿಲಿಟರಿಯ ಅಘೋಷಿತ ನಿಯಮವೇ ಆಗಿದೆ. ಅಕಸ್ಮಾತ್ ಯಾರಾದರೂ ಪ್ರಶ್ನಿಸಿದರೆ ಅವರಿಗೆ ಕಿರುಕುಳ, ಕೋರ್ಟ ಮಾರ್ಷಲ್ ಗ್ಯಾರಂಟಿ. 

ಇದು ಕೇವಲ ಒಬ್ಬ ತೇಜ್ ಬಹದ್ದೂರ್ ಮಾಡುವ ಆಪಾದನೆ ಮಾತ್ರ ಅಲ್ಲಾ. ಗಡಿ ರಕ್ಷಕ ದಳದ ಸೇನಾಧಿಕಾರಿಗಳು ಕೇವಲ ಸೈನಿಕರ ಆಹಾರ ಪದಾರ್ಥಗಳನ್ನು ದುರ್ಬಳಕೆ ಮಾಡಿಕೊಳ್ಳಲು ಮಾತ್ರ ಸೀಮಿತವಾಗಿಲ್ಲಾ. ಕಮಿಶನ್ ಆಸೆಗೆ ಬಿದ್ದು ಕಳಪೆ ಗುಣಮಟ್ಟದ ಶಸ್ತ್ರಸ್ತ್ರಗಳನ್ನು ಖರೀದಿಸಿ ದೇಶದ ಭದ್ರತೆಗೆ ಅಪಾಯಕಾರಿಯಾಗಿದ್ದಾರೆ. ಇಂಡೋ ಪಾಕಿ ಗಡಿಯಲ್ಲಿ ಸರಕು ಸಾಗಣೆ ಲಾರಿಗಳಿಂದ ನಿಮಿತವಾಗಿ ಹಪ್ತಾ ವಸೂಲಿ ಮಾಡುವ ಕೆಲಸ ನಡೆಯುತ್ತಲೇ ಇದೆ. ಪಾಕಿಸ್ತಾನದಿಂದ ಬರುವ ಡ್ರಗ್ಸ್ ಮಾಫಿಯಾ ಜೊತೆಗೆ ಕೈಜೋಡಿಸಿ ದೇಶದ್ರೋಹವನ್ನು  ಮಾಡುತ್ತಿರುವ ಗಂಭೀರ ಆರೋಪ  ಸೈನ್ಯಾಧಿಕಾರಿಗಳ ಮೇಲಿದೆ. ಪಂಜಾಬಿನ ಬಿಜೆಪಿ ಬೆಂಬಲಿತ ಶಿರೋಮಣಿ ಅಕಾಲಿದಳ ಸರಕಾರವೇ ಮಾದಕ ವಸ್ತು ಕಳ್ಳ ಸಾಗಾಣಿಕೆದಾರರ ಜೊತೆಗೆ ಬಿಎಸ್ ಎಫ್ ಕೈ ಜೋಡಿಸಿದೆ ಎಂದು ಆರೋಪ ಮಾಡುತ್ತಿದೆ. ಎಲ್ಲ ಕಡೆ ಚೆಕ್ ಪೋಸ್ಟಗಳಿದ್ದರೂ.. ಸಿಸಿ ಕ್ಯಾಮರಾಗಳನ್ನು ಹಾಕಿಸಿದ್ದರೂ ಡ್ರಗ್ಸ್ ಎಗ್ಗಿಲ್ಲದೇ ಭಾರತಕ್ಕೆ ಗಡಿಗಳ ಮೂಲಕ ಬರುತ್ತಿರುವುದಕ್ಕೆ ಅಧಿಕಾರಿಗಳ ಭ್ರಷ್ಟಾಚಾರವೇ ಕಾರಣವಾಗಿದೆ. ಬಾಂಗ್ಲಾ ಭಾರತ ಗಡಿಯಲ್ಲೂ ಸಹ ದನ ಸಾಗಣೆಯ ದಂದೆಯಲ್ಲಿ ಗಡಿ ರಕ್ಷಣಾ ದಳದ ಅಧಿಕಾರಿಗಳ ಪಾತ್ರ ದೊಡ್ಡದಾಗಿದೆ. ಒಂದು ಹಸು ಗಡಿ ದಾಟಿ ಬಾಂಗ್ಲಾಗೆ ಹೋದರೆ ಐದು ಸಾವಿರ ರೂಪಾಯಿ ಅಲ್ಲಿಯ ಅಧಿಕಾರಿ ಜೇಬಿಗಿಳಿಸುತ್ತಾನೆ. ಹೀಗಾಗಿ ಬಿಎಸ್ ಎಫ್ ಎನ್ನುವುದಕ್ಕೆ ಬಾರ್ಡರ್ ಸ್ಮಗ್ಲಿಂಗ್ ಪೋರ್ಸ ಎನ್ನುವ ನ್ವರ್ಥನಾಮ ಗಡಿಭಾಗದಲ್ಲಿ ರೂಢಿಯಲ್ಲಿದೆ ಅಂದರೆ ಈ ಅಧಿಕಾರಿಗಳು ಅದೆಷ್ಟು ಹಣದ ಹಪಾಹಪಿಯಿಂದಾ ಹಸಿದು ಕುಳಿತಿರಬೇಕು. 


ತಮ್ಮ ಮಾತು ಕೇಳದ, ವಿರೋಧಿಸಿದ ಸೈನಿಕರ ಮೇಲೆ ಮೇಲಾಧಿಕಾರಿಗಳು ಅಸಾಧ್ಯ ಕಿರುಕುಳ ನೀಡುವುದು ಮಿಲಿಟರಿಯಲ್ಲಿ ಮಾಮೂಲಾಗಿದೆ. ಕೆಲವೊಮ್ಮೆ ಸಹನೆ ಮೀರಿದ ಸೈನಿಕರು ಮೇಲಾಧಿಕಾರಿಗಳನ್ನು ಕೊಂದು ಹಾಕಿದ ಘಟನೆಗಳೂ ಇವೆ. ದೌರ್ಜನ್ಯ ಸಹಿಸಲಾರದೇ ಮಿಲಿಟರಿ ಬಿಟ್ಟು ಓಡಿ ಹೋದವರೂ ಇದ್ದಾರೆ. ಉನ್ನತಾಧಿಕಾರಿಗಳಿಗೆ ದೂರು  ಕೊಟ್ಟ ಘಟನೆಗಳು ಬೇಕಾದಷ್ಟಿವೆ. ಆದರೆ.. ಇವುಗಳನ್ನೆಲ್ಲಾ ಬಗಾವತ್ ಎಂದು ಸೇನೆಯಲ್ಲಿ ತೀರ್ಮಾನಿಸಿ ಶಿಕ್ಷಿಸಲಾಗುತ್ತದೆ. ದೂರು ಆರೋಪಗಳನ್ನು ವ್ಯವಸ್ಥಿತವಾಗಿ ಮುಚ್ಚಲಾಗುತ್ತದೆ. ಹೀಗಾಗಿ ಮಿಲಿಟರಿ  ಎಂದರೆ ಒಂದು ರೀತಿಯಲ್ಲಿ ಸೈನಿಕರಿಗೆ ಗುಲಾಮರ ಕ್ಯಾಂಪ್ ಆಗಿ ಕಂಡರೆ ಅಚ್ಚರಿ ಏನಿಲ್ಲಾ. ಹೀಗಾಗಿಯೇ ತೇಜ್ ಬಹದ್ದೂರ್ ನಂತವರು ಹತಾಷೆಗೆ ಒಳಗಾಗಿ.. ಸಾವಿಗೂ ಸಿದ್ದವಾಗಿ ತಮ್ಮ ಕಷ್ಟಗಳನ್ನು ಹಾಗೂ ಸೈನ್ಯಾಧಿಕಾರಿಗಳ ಅಕ್ರಮಗಳನ್ನು ಬಯಲಿಗೆಳೆಯಲು ಪ್ರಯತ್ನಿಸಿದ್ದು. ಮುಂದಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ಅರಿವಿದ್ದೂ,  ಪ್ರಾಣಕ್ಕೆ ಸಂಚಕಾರ ಬರಬಹುದೆಂಬುದು ಗೊತ್ತಿದ್ದು ಬಹದ್ದೂರ್ ಸೇನೆಯ ನ್ಯೂನ್ಯತೆಯನ್ನು ಪಬ್ಲಿಕ್ ಮಾಡಿದ್ದು ಸಾಮಾನ್ಯ ಸೈನಿಕರ ಆಂತರಿಕ ಒತ್ತಡದ ಬದುಕಿನ ಪ್ರತೀಕವಾಗಿದೆ. ತೇಜ್ ಬಹದ್ದೂರ್ ಮಾಡಿದ ಬಹದ್ದೂರ್ ಕೆಲಸಕ್ಕೆ ಆತನಿಗೆ ನ್ಯಾಯ ಸಿಗುವುದಂತೂ ಕನಸಿನ ಮಾತು. ಆದರೆ.. ಸೈನಿಕರು ಎಂದರೆ ದೇಶ ರಕ್ಷಕರು.. ಹಾಗೆ.. ಹೀಗೆ.. ಎಂದು ಭಾವನಾತ್ಮಕವಾಗಿ ಮಾತಾಡಿ ದೇಶಭಕ್ತಿಯ ಮೇನಿಯಾವನ್ನು ಸೃಷ್ಟಿಸುವ ಮೋದಿಯಂತವರು ಹಾಗೂ ಅವರ ಸಮರ್ಥಕರುಗಳ  ಮುಖವಾಡವಂತೂ ತೇಜ್ ಬಹದ್ದೂರ್ ಪ್ರಕರಣದಿಂದಾಗಿ ಕಳಚಿಬಿದ್ದಿದೆ. ದೇಶಕ್ಕಾಗಿ ತ್ಯಾಗ ಮಾಡಿ ರಕ್ಷಿಸುವ ಸೈನಿಕರನ್ನು ನಮ್ಮ ಸೇನೆ ಎಷ್ಟು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ ಎಂಬುದು ಜಗಜ್ಜಾಹೀರಾತಾಗಿ ನಕಲಿ ದೇಶಭಕ್ತರ ಬಾಯಿ ಕಟ್ಟಿದೆ. ದೇಶವನ್ನು ರಕ್ಷಿಸುವ ರಕ್ಷಕರನ್ನು ಮೊದಲು ಸೇನಾಧಿಕಾರಿಗಳ ಕಪಿಮುಷ್ಟಿಯಿಂದಾ ಕಾಪಾಡಬೇಕಿದೆ. ಈಗ ಹೇಳಿ ದೇಶದ್ರೋಹಿಗಳು ಯಾರು? ಸೇನೆಯ ಹುಳುಕನ್ನು ದೃಶ್ಯಗಳ ಸಮೇತ ತೋರಿದ ತೇಜ್ ಬಹದ್ದೂರಾ? ದೇಶ ಕಾಪಾಡುವ ಹೆಸರಲ್ಲಿ ತಮ್ಮದೇ ಸೈನಿಕರನ್ನು ಶೋಷಿಸುತ್ತಿರುವ ಕರಪ್ಟ್ ಸೇನಾಧಿಕಾರಿಗಳಾ? ಇಂತಹ ಸೇನಾಧಿಕಾರಿಗಳಿಗೆ ಸಕಲ ಸವಲತ್ತು  ಹಾಗೂ ಪಾವರನ್ನು ಕೊಟ್ಟ ಈ ದೇಶವನ್ನು ಆಳುವವರಾ? ಅಥವಾ ದೇಶಭಕ್ತಿಯನ್ನೇ ವಿಜ್ರಂಭಿಸಿ ಸೇನೆ ಹಾಗೂ ಸರಕಾರವನ್ನು ಪ್ರಶ್ನಿಸುವ ಎಲ್ಲರನ್ನೂ ನಿಂದಿಸುವ ನಕಲಿ ದೇಶಭಕ್ತರಾ? ಇಲ್ಲವೇ ಎಲ್ಲವನ್ನೂ ನೋಡಿ ಅನುಭವಿಸಿ ತಮ್ಮ ಪಾಡಿಗೆ ತಾವು ಸುಮ್ಮನಿರುವ ಈ ದೇಶದ ಸಾಮಾನ್ಯ ಪ್ರಜೆಗಳಾ? 

            -ಶಶಿಕಾಂತ ಯಡಹಳ್ಳಿ  
  
ತೇಜ್ ಬಹದ್ದೂರ್ ಯಾದವ್ ರಿಲೀಜ್ ಮಾಡಿದ ವಿಡಿಯೋಗಳ ಯುಟ್ಯೂಬ್ ಲಿಂಕ್ ಇಲ್ಲಿದೆ ನೋಡಿ..

https://www.youtube.com/watch?v=AmobJGD40Jc

https://www.youtube.com/watch?v=wpcGF0p_whc

https://www.youtube.com/watch?v=jJEoGa-UaY4

https://www.youtube.com/watch?v=MehcG7OA5WU




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ