ಮಂಗಳವಾರ, ಜನವರಿ 10, 2017

ತಹ ತಹ ... 70 ಬಿಡಿಎ ಫಲಾನುಭವಿಗಳ ಸಂಕಟ :



ಸೈಟು ಯಾರಿಗೆ ಬೇಕು..? ಠೇವಣಿ ವಾಪಸ್ ಕೊಡಿ ಸಾಕು...

 
ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಇತಿಹಾಸದಲ್ಲಿ ಈಗ ಹೊಸ ಇತಿಹಾಸ ಸೃಷ್ಟಿಯಾಗಿದೆ. ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತಗಳಿಗೆ ವಿಶ್ವವಿಖ್ಯಾತವಾಗಿರುವ ಬಿಡಿಎ ದಿಗಿಲು ಬಿದ್ದಿದೆ. ಬಂಗಾರದ ಬೆಲೆಯಿರುವ ಬಿಡಿಎ ನಿವೇಶನಗಳನ್ನು ವಾಪಸ್ ತೆಗೆದುಕೊಂಡು ನಮ್ಮ ಠೇವಣಿ ಹಣ ವಾಪಸ್ ಕೊಡಿ ಎಂದು ಫಲಾನುಭವಿಗಳು ಪತ್ರ ಬರೆದು ಆಗ್ರಹಿಸಿದ್ದಾರೆ. ಅದೂ ಒಬ್ಬಿಬ್ಬರಲ್ಲಾ ಸಾವಿರಾರು ಜನರು ಅಸಂಘಟಿತವಾಗಿಯೇ ಈ ನಿರ್ಧಾರಕ್ಕೆ ಬಂದಿದ್ದಾರೆ. ಇಂತಹುದೊಂದು ನಿರ್ಧಾರಕ್ಕೆ ಮೋದಿ ನೋಟ್ ಬ್ಯಾನ್ ಇಫೆಕ್ಟ್ ಕಾರಣ.. ಬಿಳಿ ಹಣವನ್ನು ಕೊಟ್ಟು ಸರಕಾರಿ ನಿವೇಶನ ಖರೀದಿ ಮಾಡಲಾಗದ ಜನ ಸೈಟಿನ ಸಹವಾಸವೇ ಬೇಡವೆಂದು ಹಿಂದೆ ಸರಿದಿದ್ದಾರೆ ಎಂದು ಭಕ್ತಾದಿಗಳು ವಿಶ್ಲೇಷಿಸುತ್ತಾ ಮೋದಿ ಮಹಾತ್ಮರಿಗೆ ಉಘೇ ಎನ್ನುತ್ತಿದ್ದಾರೆ. ಆದರೆ.. ಅಸಲಿಗೆ ಆಗಿದ್ದು ಬೇರೇನೇ ವಿಷಯ..

ನಾಡಪ್ರಭು ಕೆಂಪೇಗೌಡ ಬಡಾವಣೆಯನ್ನು ಅಭಿವೃದ್ದಿ ಪಡಿಸಿದ ಬಿಡಿಎ ಅಲ್ಲಿ ನಿವೇಶನಗಳನ್ನು ನಿರ್ಮಿಸಿ 2015 ರ ನವೆಂಬರ್ 1 ರಂದು ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಿತ್ತು. ಮಾರುಕಟ್ಟೆ ಬೆಲೆಗಿಂತಾ ಸ್ವಲ್ಪ ಕಡಿಮೆ ಬೆಲೆಗೆ ಹಾಗೂ ತಗಾದೆಗಳಿಲ್ಲದ ಸೆಕ್ಯೂರ‍್ಡ್ ಸೈಟ್ ಸಿಗುತ್ತದೆ ಹಾಗೂ ತದನಂತರ ಮಾರಿದರೂ ಬೇಕಾದಷ್ಟು ಲಾಭ ಬರುತ್ತದೆ ಎನ್ನುವ ಮುಂದಾಲೋಚನೆಯಿಂದ ಮೂವತ್ತು ಸಾವಿರಕ್ಕೂ ಹೆಚ್ಚು ಜನ ನಿಗಧಿಪಡಿಸಿದ ಠೇವಣಿ ಕಟ್ಟಿ ಸೈಟ್ ಹಂಚಿಕೆಗಾಗಿ ಜಾತಕ ಪಕ್ಷಿಗಳಂತೆ ಕಾಯ್ದು ಕುಳಿತರು. ಅರ್ಜಿ ಜೊತೆಗೆ ಸಂಗ್ರಹವಾದ ಒಟ್ಟು ಮೊತ್ತವೇ ಏಳುನೂರಾ ಹದಿನೈದು ಕೋಟಿ ರೂಪಾಯಿಗಳು. ಫಲಾನುಭವಿಗಳ ಪಟ್ಟಿ ತಯಾರಿಸಿ ಆಯ್ಕೆದಾರರ ಹೆಸರು ಘೋಷಿಸಲು ಬೇಕಾದಷ್ಟು ಸಮಯ ತೆಗೆದುಕೊಂಡ ಬಿಡಿಎ ಕೊನೆಗೂ 5೦೦೦ ಜನರಿಗೆ ಲಾಟರಿ ಮೂಲಕ ನಿವೇಶನಗಳನ್ನು ಹಂಚಿಕೆ ಮಾಡಿ ಎರಡು ತಿಂಗಳಲ್ಲಿ ಬಾಕಿ ಹಣ ಪಾವತಿಸಬೇಕೆಂದು ಪತ್ರವನ್ನೂ ಫಲಾನುಭವಿಗಳಿಗೆ ಕಳುಹಿಸಿತು. ಆ ಪತ್ರವನ್ನು ಓದಿದ ಬಹುತೇಕ ಜನರು ನಿಮ್ಮ ಸೈಟೂ ಬೇಡಾ.. ಈ ಬಿಡಿಎ ಸಹವಾಸವೂ ಬೇಡಾ.. ನಮ್ಮ ಠೇವಣಿ ವಾಪಸ್ ಕೊಟ್ಟರೆ ಸಾಕು ಎನ್ನುವ ನಿರ್ಧಾರಕ್ಕೆ ಬಂದರು.  ಐದು ಸಾವಿರದಲ್ಲಿ ಸಾವಿರಕ್ಕೂ ಹೆಚ್ಚು ಜನ ಬಿಡಿಎಗೆ ಪತ್ರ ಬರೆದು ಸೈಟ್ ವಾಪಸಿಗೆ ಒತ್ತಾಯಿಸಿದರು.

ನಿಜವಾಗಿಯೂ ಮೋದಿಯವರ ನೋಟ್ ಬ್ಯಾನ್ ಇಫೆಕ್ಟ್‌ನಿಂದಾಗಿ ಜನ ಕಂಗಾಲಾಗಿ ಹೋಗಿದ್ದಾರಾ? ಕಪ್ಪು ಹಣವೆಲ್ಲಾ ಸರ್ವನಾಶವಾಗಿ ರೊಕ್ಕಿಷ್ಟರು ದಿವಾಳಿಯಾಗಿ ಹೋದರಾ? ಥರ್ಟಿಪಾರ್ಟಿ ವಿಸ್ತೀರ್ಣದ ಸೈಟಿಗೆ ಇಪ್ಪತ್ತುಮೂರು ಲಕ್ಷ ಹಣವನ್ನು ಹೊಂದಾಣಿಕೆ ಮಾಡದಷ್ಟು ಬಡತನ ಬಂದಿದೆಯಾ? ಅರ್ಜಿ ಹಾಕುವಾಗ ಹಣ ಹೊಂದಾಯಿಸಲು ಇದ್ದ ಧೈರ್ಯವು ನಿವೇಶನ ಹಂಚಿಕೆಯಾದಾಗ ಹೊರಟು ಹೋಯಿತಾ? ಅಲ್ಲಾ.. ಇದ್ಯಾವುದೂ ನಿಖರ ಕಾರಣಗಳು ಅಲ್ಲವೇ ಅಲ್ಲಾ. ನೋಟು ಬದಲಾವಣೆ ಆಗುವ ಪ್ರಕ್ರಿಯೆಯಲ್ಲಿ ಎಲ್ಲಾ ಕಪ್ಪು ಹಣವೂ ಯಾವುಯಾವುದೋ ಮಾರ್ಗಗಳಲ್ಲಿ ಬ್ಯಾಂಕಿಗೆ ಹೋಗಿ ಬಿಳಿಯಾಗಿಬಿಟ್ಟಿದೆ. ನೋಟ್ ಬ್ಯಾನಿನಿಂದ ಬಿಡಿಎ ಸೈಟ್ ಫಲಾನುಭವಿಗಳಲ್ಲಿ ಯಾರೂ ದಿವಾಳಿಯೂ ಆದ ವರದಿ ಇಲ್ಲಾ. ಆದರೂ ಚಿನ್ನದ ಮೊಟ್ಟೆ ಇಡುವ ಕೋಳಿಯಂತಿರುವ ಸರಕಾರದ ಅಧೀಕೃತ ನಿವೇಶನವನ್ನು ಜನರು ತಿರಸ್ಕರಿಸಿದ್ದಾದರೂ ಯಾಕೆ?

ಯಾಕೆಂದರೆ.. ನಿವೇಶನಕ್ಕೆ ಅರ್ಜಿ ಹಾಕಿದವರಲ್ಲಿ ಬಹತೇಕರು ಅರ್ಜಿಯಲ್ಲಿ ನಮೂದಿಸಿದ ನಿಯಮವನ್ನು ಉಲ್ಲಂಘಿಸಿದವರೇ ಆಗಿದ್ದಾರೆ. ಯಾವಾಗ ಬಿಡಿಎ ಯಿಂದ ಬಂದ ಹಂಚಿಕೆ ಪತ್ರದಲ್ಲಿ ಬಾಕಿ  ಹಣವನ್ನು ಬೇಗ ಕಟ್ಟಬೇಕು ಎನ್ನುವುದರ ಜೊತೆಗೆ ಕುಟುಂಬದ ಆದಾಯದ ಮೂಲವನ್ನು ವಿವರಿಸಬೇಕು ಎಂದು ನಮೂದಿಸಲಾಗಿತ್ತೋ ಆಗ ಕೆಲವರು ದಿಗಿಲು ಬಿದ್ದರು. ಚಾರ್ಟರ್ಡ ಅಕೌಂಟೆಂಟ್ ಸಹಾಯದಿಂದ ಸುಳ್ಳು ಆದಾಯವನ್ನು ತೋರಿಸಿಯೋ ಇಲ್ಲವೇ ಬ್ಯಾಂಕ್ ಸಾಲ ಮಾಡಿಯಾದರೋ ಹಣ ಕಟ್ಟಿ ಸಿಕ್ಕ ನಿವೇಶನವನ್ನು ದಕ್ಕಿಸಿಕೊಳ್ಳಬಹುದಾಗಿತ್ತು. ಆದರೆ.. ಕುಟುಂಬದ ಸದಸ್ಯರ ಉದ್ಯೋಗ, ಅವರ ಹೆಸರಲ್ಲಿ ಹೊಂದಿರುವ ಆಸ್ತಿ ಹಾಗೂ ಈಗ ವಾಸವಿರುವ ಮನೆಯ ಮಾಹಿತಿ ಕೊಡಬೇಕು ಮತ್ತು ಕೊಟ್ಟ ಮಾಹಿತಿ ಸುಳ್ಳಾಗಿದ್ದರೆ ನಿವೇಶನ ಹಂಚಿಕೆ ರದ್ದಾಗುತ್ತದೆ ಎನ್ನುವ ನಿಬಂಧನೆ ಹಂಚಿಕೆಪತ್ರದಲ್ಲಿ ಇರುವುದನು ಕಂಡ ಫಲಾನುಭವಿಗಳು ಬೆಚ್ಚಿಬಿದ್ದರು. ಸುಳ್ಳು ಮಾಹಿತಿಯನ್ನು ಕೊಟ್ಟು ಸಿಕ್ಕಾಕಿಕೊಂಡರೆ ಕಟ್ಟಿದ ಹಣವೂ ಮುಳುಗುತ್ತದೆ ಹಾಗೂ ಆದಾಯ ತೆರಿಗೆ ಇಲಾಖೆಯ ರೇಡ್ ಕೂಡಾ ಆಗಬಹುದು ಎನ್ನುವ ಭಯ ಫಲಾನುಭವಿಗಳಿಗೆ ಕಾಡಿದ್ದಂತೂ ಸುಳ್ಳಲ್ಲ. ಇದಕ್ಕೆ ಕಾರಣವೂ ಇಲ್ಲದಿಲ್ಲ.


ಯಾಕೆಂದರೆ.. ಸರಕಾರವು ವಸತಿ ಹೀನರಿಗೆ ವಸತಿಯನ್ನು ವದಗಿಸಬೇಕು ಎನ್ನುವ ಸದಾಶಯದಿಂದ ಕರ್ನಾಟಕ ಹೌಸಿಂಗ್ ಬೋರ್ಡ, ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ.. ಮುಂತಾದ ಸರಕಾರಿ ಸಂಸ್ಥೆಗಳಿಂದ ಕಾಲಕಾಲಕ್ಕೆ ರೈತರಿಂದ ಜಮೀನನ್ನು ಕಡಿಮೆ ಬೆಲೆಗೆ ವಶಪಡಿಸಿಕೊಂಡು ನಿವೇಶನ, ಅಪಾರ್ಟಮೆಂಟ್‌ಗಳನ್ನು ಅಭಿವೃದ್ದಿ ಪಡಿಸಿ ವಸತಿಹೀನರಿಗೆ ಹಂಚಿಕೆ ಮಾಡುತ್ತಾ ಬಂದಿದೆ. ಆದರೆ ಮೂಲ ಉದ್ದೇಶವನ್ನು ಮರೆತ ಈ ಸರಕಾರಿ ಸಂಸ್ಥೆಗಳು ತಾರಾತಿಗಡಿ ಮಾಡಿ ಕಾನೂನುಗಳನ್ನು ಕಡೆಗಣಿಸಿ ಲಂಚ ಕೊಟ್ಟವರಿಗೆ ಹಂಚಿಕೆ ಮಾಡುವುದನ್ನು ವೃತದಂತೆ ರೂಢಿಸಿಕೊಂಡ ಬಂದಿವೆ. ದೊಡ್ಡ ದೊಡ್ಡ ಬಿಲ್ಡರ್‌ಗಳು, ಬಂಡವಾಳಶಾಹಿಗಳು.. ಬೇನಾಮಿಯಾಗಿ ಅರ್ಜಿ ಹಾಕಿಸಿ, ಅಧಿಕಾರಿಗಳನ್ನು ಬುಕ್ ಮಾಡಿಕೊಂಡು ಸೈಟ್ ಅಲಾಟ್ ಮಾಡಿಸಿ ಬಳಿಕ ಲಾಭ ಮಾಡಿಕೊಳ್ಳುವ ದಂದೆ ಮಾಡುತ್ತಿವೆ. ಅಧಿಕಾರಿಗಳು ಹಾಗೂ ರಾಜಕಾರಣಿಗಳು ತಮ್ಮ ಬಂಧು ಬಾಂಧವರು ಹಾಗೂ ಬೇಕಾದವರಿಗೆ ಸೈಟ್ ಅಲಾಟ್ ಮಾಡಿಸಿಕೊಳ್ಳುವುದು ಬಹಿರಂಗ ಸತ್ಯ. ಇದನ್ನು ಹೊರತು ಪಡಿಸಿಯೂ ಅದೆಷ್ಟೋ ಜನ ಅರ್ಜಿದಾರರು ಈಗಾಗಲೇ ಬೆಂಗಳೂರಿನಲ್ಲಿ ಸ್ವಂತ ಸೈಟನ್ನೋ ಇಲ್ಲವೇ ಮನೆಯನ್ನೋ ಹೊಂದಿರುತ್ತಾರೆ. ಆದರೂ ಹೆಚ್ಚುವರಿಯಾಗಿ ಸರಕಾರಿ ಸೈಟೂ ಇರಲಿ ಎಂದು ಬಯಸುತ್ತಾರೆ. ಈಗ ಬಿಡಿಎ ಸೈಟ್ ಸಿಕ್ಕರೆ ಮುಂದೆ ಅದನ್ನು ಎರಡು ಮೂರು ಪಟ್ಟಿಗೆ ಮಾರಿ ಲಾಭ ಮಾಡಿಕೊಳ್ಳಬಹುದು ಎನ್ನುವ ಲೆಕ್ಕಾಚಾರ ಬಹುತೇಕರದ್ದು. ಅದಕ್ಕಾಗಿ ಎರಡು ಮೂರು ಅಷ್ಟೇ ಯಾಕೆ ನಾಲ್ಕಾರು ಬಾರಿ ಪ್ರಯತ್ನವನ್ನು ಮಾಡಿ ಅರ್ಜಿ ಹಾಕುವಲ್ಲಿ ತಮ್ಮ ಸೀನಿಯಾರಿಟಿಯನ್ನು ಕಾಪಾಡಿಕೊಂಡು ಬಂದಿರುತ್ತಾರೆ. ತಮಗಲ್ಲದಿದ್ದರೆ ತಮ್ಮ ಮಕ್ಕಳ ಕಾಲಕ್ಕಾದರೂ ಒಂದು ಸರಕಾರಿ ಸೈಟ್ ಅಲಾಟ್ ಆಗಲಿ ಎನ್ನುವ ದೂರಗಾಮಿ ಯೋಜನೆಯೂ ಇಂತವರದ್ದಾಗಿರುತ್ತದೆ.

ಆದರೆ.. ಈ ಹೆಚ್ಚುವರಿ ಆಸ್ತಿಯ ಕನವರಿಕೆಗೆ ಸರಕಾರಿ ಸೈಟು ಅಥವಾ ಅಪಾರ್ಟಮೆಂಟಗಳಲ್ಲಿ ಕಾನೂನಾತ್ಮಕವಾಗಿ ಅವಕಾಶವಿಲ್ಲ. ಯಾವ ಕುಟುಂಬಕ್ಕೆ ಸ್ವಂತ ನಿವೇಶನ ಅಥವಾ ವಾಸಕ್ಕೆ ಮನೆ ಇಲ್ಲವೋ ಅಂತವರಿಗೆ ಮಾತ್ರ ಸರಕಾರಿ ಸೈಟುಗಳು ಹಂಚಿಕೆಯಾಗಬೇಕು ಎನ್ನುವುದು ಸರಕಾರಿ ನಿಯಮ. ಆದರೆ.. ಇಲ್ಲಿವರೆಗೂ ಇದು ಎಂದೂ ಪಾಲನೆ ಆಗಿಯೇ ಇಲ್ಲಾ. ನೂರಕ್ಕೆ ಎಂಬತ್ತಕ್ಕೂ ಹೆಚ್ಚು ಹಂಚಿಕೆಗಳು ಹೆಚ್ಚುವರಿ ಆಸ್ತಿಯಾಗಿರುತ್ತವೆ. ಇಲ್ಲಿವರೆಗೂ ಬಿಡಿಎ ಇಲ್ಲವೇ ಕೆಹೆಚ್‌ಬಿ ಯಿಂದ ಅಲಾಟ್ ಆದ ಅಷ್ಟೂ ನಿವೇಶನ ಹಾಗೂ ಮನೆಗಳ ಲಿಸ್ಟನ್ನು ಪರಿಶೀಲಿಸಿದರೆ ಬಹುತೇಕ ಹಂಚಿಕೆಗಳು ಕಾನೂನು ಬಾಹಿರವಾಗಿರುವಂತಹುವೇ ಆಗಿವೆ. ಈಗ ಕೆಂಪೇಗೌಡ ಬಡಾವಣೆಯ ಹಂಚಿಕೆಯಲ್ಲೂ ಅದೇ ಆಗಿದೆ. ಸುಳ್ಳು ಮಾಹಿತಿಯನ್ನು ಕೊಟ್ಟು, ನಮಗಾಗಲೀ ಇಲ್ಲವೇ ನನ್ನ ಕುಟುಂಬಕ್ಕಾಗಲೀ ಯಾವುದೇ ನಿವೇಶನ ಇಲ್ಲವೇ ಮನೆ ಇರುವುದಿಲ್ಲ ಎಂದು ಘೋಷಿಸಿಕೊಂಡೇ ಅರ್ಜಿ  ಸಲ್ಲಿಸಲಾಗಿರುತ್ತದೆ. ಅದನ್ನು ಪರಿಶೀಲನೆ ಮಾಡುವ ರಗಳೆಗೆ ಇಲ್ಲಿವರೆಗೂ ಯಾವ ಸರಕಾರಿ ಸಂಸ್ಥೆಯೂ ಹೋಗಿಲ್ಲ. ಹೀಗಾಗಿ.. ಸ್ವಂತ ಆಸ್ತಿ ಇರುವವರೇ ಹೆಚ್ಚಾಗಿ ಬಿಡಿಎ ಸೈಟಿಗೆ ಅರ್ಜಿ ಹಾಕಿರುತ್ತಾರೆ. ಹಂಚಿಕೆಯಾದ ನಂತರ ಆದಷ್ಟು ಬೇಗ ಬಂದ ಲಾಭಕ್ಕೆ ಮಾರಿಕೊಂಡು ಕಾಸು ಮಾಡಿಕೊಳ್ಳುವವರೂ ಇದ್ದಾರೆ.. ಇನ್ನೂ ಒಂದಿಷ್ಟು ವರ್ಷ ಇಟ್ಟುಕೊಂಡು ಅಧಿಕ ಲಾಭ ಬಂದಾಗ ಮಾರಿಕೊಂಡರಾಯ್ತು ಎನ್ನುವ ಆಶಾವಾದಿಗಳೂ ಬೇಕಾದಷ್ಟಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಸ್ವಂತ ಮನೆ ಇದ್ದವರು ಹಂಚಿಕೆಯಾದ ನಿವೇಶನದಲ್ಲಿ ಮನೆ ಕಟ್ಟಿಕೊಂಡು ಹೋಗುವ ಸಾಧ್ಯತೆ ಕಡಿಮೆ ಇದೆ. ಹಾಗೇನಾದರೂ ಹೋದವರೂ  ಸಹ ಇಲ್ಲಿರುವ ಮನೆ ಬಾಡಿಗೆ ಕೊಟ್ಟು ಅಲ್ಲಿ ಮನೆ ಕಟ್ಟಿ ವಾಸ ಮಾಡಿದವರೂ ಇದ್ದಾರಾದರೂ ಅವರ ಸಂಖ್ಯೆ ಕಡಿಮೆ. ಹೀಗಾಗಿ ಸರಕಾರಿ ಸಹ ಸಂಸ್ಥೆಗಳು ಯಾವ ಉದ್ದೇಶಕ್ಕೆ ರೈತರ ಹೊಟ್ಟೆಯ ಮೇಲೆ ಹೊಡೆದು ಬಲವಂತವಾಗಿ ಭೂಮಿಯನ್ನು ಪಡೆದು ಸೈಟನ್ನಾಗಿಸಿ ಹಂಚಿಕೆ ಮಾಡಿ ಬೆಂಗಳೂರನ್ನು ಅಭಿವೃದ್ದಿ ಮಾಡಬೇಕೆಂದು ಬಗೆದಿತ್ತೋ ಆ ಆಶಯ ನೆರವೇರಲೇ ಇಲ್ಲಾ.. ಈ ಭ್ರಷ್ಟ ವ್ಯವಸ್ಥೆಯಲ್ಲಿ ನಿಜವಾಗಿಯೂ ಅಗತ್ಯವಿರುವವರಿಗೆ ವಸತಿ ಒದಗಿಸುವ ಉದ್ದೇಶ ಈಡೇರುವುದೂ ಇಲ್ಲಾ. ಹೀಗಾಗಿ ಇದ್ದವರೇ ಮತ್ತೆ ಮತ್ತೆ ಹೆಚ್ಚಿನ ಅನುಕೂಲತೆ ಪಡೆಯುತ್ತಾರೆ.. ಇಲ್ಲದವರು ಇದ್ದಲ್ಲೇ ಇದ್ದಂಗೆ ವಸತಿ ರಹಿತರಾಗಿ ಇರುತ್ತಾರೆ. 

ಜನ ಈಗ ಅದೆಷ್ಟು ಹೆದರಿದ್ದಾರೆಂದರೆ ಹೆಚ್ಚುವರಿ ಆಸ್ತಿ ಬರುವುದನ್ನು ಬಿಡಿ.. ಇರುವುದನ್ನು ಉಳಿಸಿಕೊಂಡರೆ ಸಾಕು ಎನ್ನುವಷ್ಟು ದಿಗಿಲುಬಿದ್ದಿದ್ದಾರೆ. ಬಿಡಿಎ ತನ್ನ ನಿಬಂಧನೆಗಳನ್ನು ಸರಿಯಾಗಿ ಜಾರಿಗೆ ತಂದಲ್ಲಿ ಹಂಚಿಕೆಯಾದ ನಿವೇಶನಗಳಲ್ಲಿ ಬಹುತೇಕ ಅಮಾನ್ಯಗೊಳ್ಳುತ್ತವೆ. ಈಗಲೂ ಏನೂ ಆಗೋದಿಲ್ಲ. ಸಂಬಂಧಿಸಿದ ಅಧಿಕಾರಿಗಳಿಗೆ ಬೇಕಾದ ಪ್ರಸಾದ ಕೊಟ್ಟು ವರ ಪಡೆಯುವ ಮಾರ್ಗಗಳು ಈ ಭ್ರಷ್ಟ ವ್ಯವಸ್ಥೆಯಲ್ಲಿ ಮುಕ್ತವಾಗಿವೆ. ಕಾನೂನು ಬಾಹಿರವಾಗಿ ಅರ್ಜಿ ಸಲ್ಲಿಸಿದವರಲ್ಲಿ ಒಂದು ರೀತಿಯ ಹಿಂಜರಿಕೆ ಕಾಡುವುದಂತೂ ಸತ್ಯ. ಪ್ರಭಾವಿಗಳ ಸಖ್ಯ ಇರುವವರಿಗೆ ಹಾಗೂ ಕಾಸು ಕೊಟ್ಟು ಕಾನೂನನ್ನು ಕೊಂಡುಕೊಳ್ಳುವ ತಾಕತ್ತು ಇರುವವರಿಗೆ ಹಂಚಿಕೆಯಾದ ನಿವೇಶನವನ್ನು ದಕ್ಕಿಸಿಕೊಳ್ಳುವುದು ಆಗದ ಕೆಲಸವೇನಲ್ಲ. ಆದರೆ.. ಸುಳ್ಳು ಮಾಹಿತಿ ಕೊಟ್ಟು ಅರ್ಜಿ ಸಲ್ಲಿಸಿದವರು ಇದ್ದಾರಲ್ಲಾ.. ಅಂತವರಿಗೆ ಒಳಗುದಿ ಆರಂಭವಾಗಿದೆ. ಹೇಗಾದರೂ ಮಾಡಿ ಹಣ ಕಟ್ಟುವ ಸಾಮರ್ಥ್ಯ ಇದ್ದವರೂ ಸಹ ನಿವೇಶನ ವಾಪಸ್ ಕೊಡುವುದರ ಹಿಂದಿನ ಮರ್ಮ ಇರುವುದೇ ಸುಳ್ಳು ಮಾಹಿತಿ ಘೋಷಣೆ ಮಾಡಿರುವುದರಲ್ಲಿದೆ. ಕೆಲವು ಬೆರಳೆಣಿಕೆಯಷ್ಟು ಜನರಿಗೆ ನಿಜವಾಗಿಯೂ ಹಣ ಕಟ್ಟಲು ಸಮಸ್ಯೆ ಇರಬಹುದಾಗಿದೆ. ಆದರೆ.. ಬಹುತೇಕರಿಗೆ ಸಮಸ್ಯೆಯಾಗಿರುವುದು ಬಿಡಿಎ ಅರ್ಜಿಯಲ್ಲಿ ಇರುವ ಸುಳ್ಳು ಮಾಹಿತಿ ಕೊಟ್ಟಿದ್ದರೆ ಸೈಟು ಹಂಚಿಕೆ ರದ್ದಾಗುವುದು ಎನ್ನುವ ನಿಬಂಧನೆಯಾಗಿದೆ. ಆದಿದ್ದೆಲ್ಲಾ ಒಳಿತೇ ಆಯಿತು. ಈಗಿರುವ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಸಾಕು ಸರಕಾರ ಬಿಡಿಎ ಎಂಬ ಸಂಸ್ಥೆ ಹುಟ್ಟು ಹಾಕಿದ ಉದ್ದೇಶ ಸಾರ್ಥಕವಾಗುತ್ತದೆ. ನಿಜವಾಗಿ ವಸತಿರಹಿತರಿಗೆ ನಿವೇಶನ ದೊರೆಯುತ್ತದೆ. ಆದರೆ.. ಎಲ್ಲಿವರೆಗೂ ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತ ಕೊನೆಗೊಳ್ಳುವುದಿಲ್ಲವೋ ಅಲ್ಲಿವರೆಗೂ ಸರಕಾರಿ ಉದ್ದೇಶ ಇಡೇರುವುದು ಸಾಧ್ಯವಿಲ್ಲ. ಎಲ್ಲಿವರೆಗೂ ಭ್ರಷ್ಟ ವ್ಯವಸ್ಥೆ ಜಾರಿಯಲ್ಲಿರುವುದೋ ಅಲ್ಲಿವರೆಗೆ ಜನರೂ ಸಹ ಅಡ್ಡದಾರಿ ಹಿಡಿದು ಅಕ್ರಮವಾಗಿ ಸರಕಾರಿ ಸವಲತ್ತು ಪಡೆಯುವುದನ್ನು ತಡೆಯಲು ಸಾಧ್ಯವಿಲ್ಲ.       

-ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ