ಬುಧವಾರ, ಫೆಬ್ರವರಿ 2, 2022

ಹೆಂಗ್ ಪುಂಗ್ ಲೀ ಪ್ರಹಸನ

"ಪುಂಗ್ ಲೀಗೆ ಜೈ, 

ಪರಮ ಭಕ್ತ ಶಿರೋಮಣಿ ಹೆಂಗ್ ಪುಂಗ್ ಲೀಗೆ.. ಜೈ.."

ಹೀಗೆ ಅಂಧಭಕ್ತಾದಿಗಳು ಜೈಕಾರ ಕೂಗುತ್ತಿದ್ದರು. ಅದೇ ಸಮಯಕ್ಕೆ ಮೋದಿಜಿಯ ಪರಮ ಭಕ್ತ ಪುಂಗ್ ಲೀ ಸಂದರ್ಶನ ತೆಗೆದುಕೊಳ್ಳಲು ನಮ್ಮ ಸುದ್ದಿ ಸುಬ್ಬಣ್ಣ ಎಂಟ್ರಿ ಕೊಟ್ಟು ತಾನು ಬಂದ ಉದ್ದೇಶವನ್ನು ತಿಳಿಸಿದ.

"ಆಯ್ತು ಸಂದರ್ಶನ ಶುರು ಮಾಡಿ. ಅದಕ್ಕೆ ಮುಂಚೆ ವಿಶ್ವಗುರುಗಳ ಸ್ಮರಣೆ ಮಾಡೋಣ. ವಿಶ್ವಗುರು ಮೋದಿ ಮಹರಾಜಕೀ.. (ಸುತ್ತ ನೆರೆದ ಭಕ್ತಾಶಿಖಾಮಣಿಗಳು ಜೋರಾಗಿ ಜೈ ಅಂದರು..) ಸರಿ ಈಗ ಕೇಳಿ" ಎನ್ನುತ್ತಾ ಹಸನ್ಮುಖಿಯಾಗಿ ಸುಬ್ಬಣ್ಣನ ಮುಖ ನೋಡಿದರು. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಸುಬ್ಬಣ್ಣ

" ಸರ್.. ಮಹಾ ಮೇಧಾವಿಗಳಾದ ನಿಮ್ಮ ಸಂದರ್ಶನ ಮಾಡೋ ಭಾಗ್ಯ ಸಿಕ್ಕಿದ್ದು ನನ್ನ ಸೌಭಾಗ್ಯ. ತುಂಬಾ ದಿನದಿಂದ ನನ್ನ ತಲೆತಿನ್ನುತ್ತಿರುವ ನಾಲ್ಕೇ ನಾಲ್ಕು ಪ್ರಶ್ನೆಗಳಿಗೆ ತಮ್ಮಿಂದ ಉತ್ತರ ಬಯಸುವೆ ಕೃಪೆಮಾಡಬೇಕು" ಎಂದು ದೈನ್ಯದಿಂದ ಕೇಳಿದಾಗ ಉಬ್ಬಿಹೋದ ಪುಂಗಲೀ ಒಮ್ಮೆ ಭಕ್ತಾದಿಗಳ ಮುಖವನ್ನು ನೋಡಿ ಅಲ್ಲಿ ತನ್ನ ಬಗ್ಗೆ ಅಭಿಮಾನ ತುಂಬಿ ತುಳುಕುತ್ತಿರುವುದನ್ನು ಮನಗಂಡು

" ಅಯ್ಯೋ ನಾಲ್ಕೇನು ಹತ್ತು ಪ್ರಶ್ನೆ ಕೇಳ್ರಿ. ನನ್ನ ಹೆಸರು ಏನು ಹೇಳಿ ಪುಂಗಲೀ ಅಂತಾ. ನನ್ನ ಕಸಬೇ ಪುಂಗೋದು, ಸಂಕೋಚ ಬಿಟ್ಟು ಕೇಳಿಯಪ್ಪಾ ಇಲ್ಲಿರೋರು ಸಹ ಕೇಳಿ ಪಾವನ ಆಗಲಿ" ಎಂದು ಎದೆಯುಬ್ಬಿಸಿದರು.

" ಇದು ಲೋಕಲ್ ಅಲ್ಲಾ ಇಂಟರ್ನ್ಯಾಶನಲ್ ಪ್ರಶ್ನೆ ಸರ್. ನಿಮ್ಮ ಮಾನಸ ಗುರು ಮೋದೀಜಿಯವರ ಕೃಪಾಕಟಾಕ್ಷ ಇದ್ದರೂ ಸಹ ಡೊನಾಲ್ಡ್ ಟ್ರಂಪ್ ಇಲೆಕ್ಷನ್ ಸೋತಿದ್ಯಾಕೆ?" ಎಂದು ಪ್ರಶ್ನೆ ಕೇಳಿ ಪುಂಗಲೀ ಮುಖವನ್ನು ಪಿಳಿಪಿಳಿ ಕಣ್ಣು ಬಿಟ್ಟು ನೋಡತೊಡಗಿದ ಸುಬ್ಬಣ್ಣ. ಆಗ ಸ್ಟೈಲಾಗಿ ಎದ್ದು ನಿಂತು ಭಾಷಣದ ಶೈಲಿಯಲ್ಲಿ ಮಾತು ಆರಂಭಿಸಿದ ಪುಂಗಲಿ

" ಸ್ನೇಹಿತರೆ, ಸಹೋದರರೆ,  ಮೋದಿಜಿಯವರು ವಿಶ್ವವೇ ಗೌರವಿಸುವ ಅದ್ಬುತ ಮಹಾನಾಯಕರು ಅನ್ನೋದು ನಿಮಗೇನಾದರೂ ಗೊತ್ತಾ? ಮೋದಿಯವರ ವ್ಯಕ್ತಿತ್ವಕ್ಕೆ ಬೇರೆ ದೇಶಗಳ ನಾಯಕರಂತೆ ಟ್ರಂಪ್ ಕೂಡಾ ಬೆರಗಾಗಿ ಹೋಗಿದ್ದರು. ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆ ಸೋಲುತ್ತೇನೆ ಎಂದು ಅನುಮಾನ ಬಂತೋ ಆಗ ಅಮೇರಿಕದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಚುನಾವಣಾ ಪ್ರಚಾರ ಮಾಡಲು ಭಾರತ ದೇಶದಿಂದ ಮೋದಿಜಿಯವರನ್ನ ಕರೆಸಿಕೊಂಡಿದ್ದರು ಎನ್ನುವುದು ನಿಮಗೆ ಗೊತ್ತಾ. ಇದರಿಂದಲೇ ಗೊತ್ತಾಗುತ್ತದೆ ಮೋದೀಜಿಯವರ ವರ್ಚಸ್ಸು ಎಂತಾದ್ದು, ಅವರ ಪ್ರಸಿದ್ದಿ ಹೇಗಿತ್ತು ಅನ್ನೋದು. ಟ್ರಂಪ್ ಪರಿಪರಿಯಾಗಿ ಬೇಡಿಕೊಂಡಿದ್ದರಿಂದ ಮಾನ್ಯ ಮೋದಿಯವರು ಏನು ಮಾಡಿದರು ಗೊತ್ತಾ?. ಹತ್ತು ಲಕ್ಷ ರೂಪಾಯಿಗಳ ಸೂಟು ಹಾಕಿಕೊಂಡು ಇನ್ನೂರು ಕೋಟಿ ಬೆಲೆಯ ವಿಮಾನ ಏರಿ ಅಮೇರಿಕಕ್ಕೆ ಟ್ರಂಪ್ ಪರವಾಗಿ ಚುನಾವಣಾ ಪ್ರಚಾರಕ್ಕೆ ಹೊರಟೇಬಿಟ್ಟರು. ಯಾಕೆ ಅಷ್ಟೊಂದು ಬೆಲೆಬಾಳುವ ಸೂಟ್ ತೊಟ್ಟಿದ್ದರು ಅನ್ನೋದಾದರೂ ಗೊತ್ತಾ? ಅಮೇರಿಕದವರಿಗೆ ಭಾರತದ ಘನತೆ ಶ್ರೀಮಂತಿಕೆ ಗೊತ್ತಾಗಲೀ ಅಂತಾ.  ಮೋದಿಯವರು ಬಂದಿದ್ದು ಗೊತ್ತಾದ ತಕ್ಷಣ ಟ್ರಂಪ್ ಏನು ಮಾಡಿದ್ರು ಗೊತ್ತಾ? ಎದ್ನೋ ಬಿದ್ನೋ ಅಂತಾ ಓಡಿ ಸಮಾವೇಶಕ್ಕೆ ಬಂದರು. ಆಗ ಅಲ್ಲಿ ವಿಶ್ವಗುರು ಮೋದೀಯವರು  'ಅಬ್ ಕೀ ಬಾರ್ ಟ್ರಂಪ್ ಸರಕಾರ್' ಅಂತಾ ಘೋಷಣೆ ಕೊಟ್ಟರು ನೋಡಿ, ಅಬ್ಬಾ ಆಗ ಅಮೇರಿಕದ ಜನ ಏನು ಮಾಡಿದರು ಗೊತ್ತಾ? ಹುಚ್ಚೆದ್ದು ಕುಣಿದಾಡಿದರು. ಎಲ್ಲಿ ಇಲೆಕ್ಷನ್ ಸೋಲ್ತೇನೆಯೋ ಅಂತಾ ಆತಂಕದಲ್ಲಿದ್ದ ಟ್ರಂಪಿಗೆ ಆಗ ದೈರ್ಯ ಬಂತು. ಗೆಲ್ಲೋದು ಗ್ಯಾರಂಟಿ ಆಯ್ತು. ಅದು ಮೋದೀಜಿಯವರ ಖದರ್ರು, ಅದು ವಿಶ್ವಗುರುವಿನ ತಾಕತ್ತು ಬ್ರದರ್ರು" ಎಂದು ಹೇಳಿ ಅಲ್ಲಿದ್ದವರ ಮುಖದ ಮೇಲಿನ ಆನಂದವನ್ನು ಅನುಭವಿಸಿ ಸುಬ್ಬಣ್ಣನ ಕಡೆ ನೋಡಿದರು. 

" ಧನ್ಯೋಸ್ಮಿ ಸರ್. ನಿಮ್ಮ ಪುಂಗಿ ನಾದ ಕೇಳ್ತಾ ಇದ್ರೆ ಎಂತೆಂಥಾ ಹಾವುಗಳಿದ್ರೂ ಮೈಮರೆತು ತಲೆದೂಗಲೇ ಬೇಕು. ನನಗೆ ಮತ್ತದೇ ಪ್ರಶ್ನೆ ಕಾಡ್ತಾ ಇದೆ, ಅದೇನಪಾಂತಂದ್ರೆ. ಮೋದೀಜಿಯವರು ಅಷ್ಟೆಲ್ಲಾ ಪ್ರಚಾರ ಮಾಡಿ ಅಮೇರಿಕನ್ಸ್ ಗಳಿಗೆ ಹುಚ್ಚೆಬ್ಬಿಸಿ ಬಂದ್ರೂ ಟ್ರಂಪ್ ಯಾಕೆ ಎಲೆಕ್ಷನ್ ಸೋತರು? ಮೋದೀಜಿ ಜಾದೂ ಯಾಕೆ ವರ್ಕೌಟ್ ಆಗಲಿಲ್ಲ..?" ಎಂದು ಸುಬ್ಬಣ್ಣ ಹೇಳುವಷ್ಟರಲ್ಲಿ ಮಧ್ಯೆ ಬಾಯಿಹಾಕಿದ ಪುಂಗ್ಲಿ..

" ಮಿತ್ರೋ, ಟ್ರಂಪ್ ಯಾಕೆ ಸೋತರು ಅನ್ನೋದು ಗೊತ್ತಾ.? ಆ ಟ್ರಂಪ್ ಸುಮ್ಮನೇ ಇದ್ದಿದ್ದರೆ ಸಾಕಿತ್ತು ಮೋದೀಜಿ ಕೊಟ್ಟ ಅಬಕೀ ಬಾರ್ ಟ್ರಂಪ್ ಸರಕಾರ ಘೋಷಣೆಯೊಂದರಿಂದಲೇ ಗೆದ್ದು ಮತ್ತೆ ಅಮೇರಿಕದ ಅಧ್ಯಕ್ಷರಾಗ್ತಿದ್ದರು ಅನ್ನೋದರಲ್ಲಿ ಅನುಮಾನವೇ ಇಲ್ಲ. ಅದು ಆ ಟ್ರಂಪಗೂ ಗೊತ್ತಾಗಿತ್ತು ಗೊತ್ತಾ?.  ಹೇಗೂ ಗೆಲ್ತೀನಿ ಅನ್ನೋ ದುರಹಂಕಾರದಲ್ಲಿ ಟ್ರಂಪ್ ಭಾರತವನ್ನು ಕೊಳಕು ಎಂದು ಹಿಯಾಳಿಸಿಬಿಟ್ಟರು ನೋಡಿ ಅಮೇರಿಕದ ಜನ ಸಿಟ್ಟಿಗೆದ್ದರು. ನಮ್ಮ ಭವ್ಯಭಾರತವನ್ನು ಹೀಯಾಳಿಸಿದ ಟ್ರಂಪ್ ನ ಅಹಂಕಾರ ಅಡಗಿಸಲು ನಮ್ಮ ಮಹಾನ್ ದೇಶಭಕ್ತ ಮೋದಿಯವರು ಕೆರಳಿ ಏನು ಮಾಡಿದರು ಗೊತ್ತಾ? ಅಮೇರಿಕದಲ್ಲಿರುವ ಗುಜರಾತಿಗಳಿಗೆ ಪೋನ್ ಮಾಡಿ ಯಾವುದೇ ಕಾರಣಕ್ಕೂ ಟ್ರಂಪ್ ಗೆಲ್ಲಬಾರದು ಅಂತಾ ಆದೇಶ ಮಾಡಿದರು. ಆಕ್ರೋಶಗೊಂಡ ಅಲ್ಲಿರುವ ಗುಜರಾತಿ ಚಾಯ್ ವಾಲಾಗಳು ಏನು ಮಾಡಿದರು ಗೊತ್ತಾ?  ತಮ್ಮ ಚಾದಂಗಡಿಗೆ ಬರುವ ಎಲ್ಲರಿಗೂ ಟ್ರಂಪ್ ಗೆ ಓಟ್ ಹಾಕಬೇಡಿ ಅಂತಾ ಅಪಪ್ರಚಾರ ಶುರುಮಾಡಿದರು. ಇದರಿಂದಾಗಿ ಟ್ರಂಪ್ ಚುನಾವಣೆಯಲ್ಲಿ ಸೋತು ಸುಣ್ಣವಾಗಿ ಅಧಿಕಾರ ಕಳೆದುಕೊಂಡು ಮನೆಗೆ ಹೋದರು. ಇದು ನಮ್ಮ ಮೋದೀಜಿಯವರ ಅಸಲಿ ತಾಕತ್ತು. ಸೋಲ್ತೇನೆ ಅಂತಾ ಗೊತ್ತಾಗಿ ಮೊದೀಜಿಯವರ ಕಾಲಿಗೆ ಬಿದ್ದು ಟ್ರಂಪ್ ಬೇಡಿಕೊಂಡಿದ್ದರೆ ಮಹಾ ಕರುಣಾಳು ವಿಶ್ವಗುರುಗಳು ಕರುಣೆತೋರಿ ಅಮೇರಿಕನ್ನರ ಭಾವನೆಗಳನ್ನ ಹೇಗೆ ಬಡಿದೆಬ್ಬಿಸಿ ಎಲೆಕ್ಷನ್ ಗೆಲ್ಲುವುದು ಎಂಬ ತಂತ್ರಗಳನ್ನು ಕಲಿಸಿಕೊಟ್ಟು ಗೆಲ್ಲಿಸುತ್ತಿದ್ದರು. ಆದರೆ ಹಾಗೇ ಮಾಡದೇ ದುರಹಂಕಾರದಿಂದ ಟ್ರಂಪ್ ಸೋತರು. ಮೋದೀಜಿಯವರ ವರ್ಚಸ್ಸು ಅಂದರೆ ಇದು, ಮೋದಿ ಎಂತಹ ಜಾಗತಿಕ ನಾಯಕರು ಎನ್ನುವುದು ಇದರಿಂದಲೇ ಗೊತ್ತಾಗುತ್ತೆ ಗೊತ್ತಾ,? ಮೋದಿಯಂತಾ ನಾಯಕರು ಇನ್ನೆಂದೂ ಎಲ್ಲಿಯೂ ಹುಟ್ಟೋದಿಲ್ಲ, ಟ್ರಂಪನಂತಾ ಟ್ರಂಪನ ದುರಹಂಕಾರವನ್ನು ಅಡಗಿಸಿದ ಮೋದಿಯವರು ಈ ನಮ್ಮ ದೇಶದ ಪ್ರಧಾನಿಯಾಗಿದ್ದು ನಮ್ಮ ಇಂಡಿಯಾ ದೇಶದ ಪುಣ್ಯ ಅನ್ನೋದು ನಿಮಗೆ ಗೊತ್ತಾ?. ಭಾರತಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ ಇಂತಹ ಒಬ್ಬ ಜಾಗತಿಕ ನಾಯಕ ಬಂದ್ರಾ? ನಮ್ಮ ದೇಶ ಬಿಡಿ ಅಮೇರಿಕದಂತಹ ನಂಬರ್ ಒನ್ ಶಕ್ತಿಶಾಲಿ ದೇಶದ ಪ್ರಸಿದ್ದ ಅಧ್ಯಕ್ಷರನ್ನೇ ಸೋಲಿಸುವಷ್ಟು ಪ್ರಭಾವ ಇರುವ ಮಹಾನಾಯಕರು ಯಾರಾದರೂ ಇಲ್ಲಿವರೆಗೂ ಈ ದೇಶದಲ್ಲಿ ಹುಟ್ಟಿ ಬಂದ್ರಾ?  ಇದೆಲ್ಲಾ ಮೋದಿಯವರ ಮಹಿಮೆ ಕಣ್ರಿ, ಮೋದಿಯವರ ನಾಯಕತ್ವ ಕಣ್ರಿ, ಮೋದಿಯವರ ಶ್ರಮ ಕಣ್ರಿ.. ಅದಕ್ಕೆ ನಾನು ಹೋದಲ್ಲೆಲ್ಲಾ ಕೂಗು ಕೂಗಿ, ಸಾರಿ ಸಾರಿ ಹೇಳ್ತೇನೆ ಮೋದಿ ಅಂದ್ರೆ ಭಾರತ, ಭಾರತ ಅಂದ್ರೆ ಮೋದಿ.." ಎಂದು ಹೇಳುತ್ತಾ ತನ್ನ ನಾನ್ ಸ್ಟಾಪ್ ಹರಿಕತೆಯನ್ನು ನಿಲ್ಲಿಸಿದ ಪುಂಗಣ್ಣಾ ಎರಡು ನಿಮಿಷ ಮೌನ ತಾಳಿ ತನ್ನ ಪುಂಗಿಯ ಪ್ರಭಾವ ಯಾರ ಮೇಲೆ ಎಷ್ಟಾಗಿದೆ ಎಂದು ಗಮನಿಸತೊಡಗಿದ. ಅವರ ಭಾಷಣ ಮುಗಿಯುವುದನ್ನೇ ಕಾಯುತ್ತಿದ್ದ ಭಕ್ತನೊಬ್ಬ

" ವಿಶ್ವಗುರು ಮೋದೀಜೀಕೀ" ಎಲ್ಲರೂ "ಜೈ", 

ಮೋದಿ ಭಕ್ತ ಹೆಂಗ್ ಪುಂಗ್ ಲೀಕಿ" ಎಲ್ಲರೂ " ಜೈ" , ಎನ್ನುತ್ತಾ ಪುಂಗಲೀಯನ್ನು ತಮ್ಮ ಹೆಗಲಮೇಲೆ ಹೊತ್ತುಕೊಂಡು ಜೈಕಾರ ಕೂಗುತ್ತಾ ಭಕ್ತಗಣ ಹೊರಟಿತು.

ಸುಬ್ಬಣ್ಣನಿಗೆ ಜೋರಾಗಿ ಮಳೆ ಬಂದು ನಿಂತಂತಾ ಅನುಭವವಾಯಿತು.ಇನ್ನೂ ಒಂದೆರಡು ಪ್ರಶ್ನೆ ಕೇಳಬೇಕೆಂದಿದ್ದವನಿಗೆ ಹೊಟ್ಟೆ ಚುರುಗುಟ್ಟತೊಡಗಿತು. ಡಬಲ್ ಡಿಗ್ರಿ ಮಾಡಿದ ವ್ಯಕ್ತಿಯೊಬ್ಬ ಮೋದೀಜಿಯವರ ಆತ್ಮನಿರ್ಭರ ಮಾತಿನಿಂದ ಪ್ರಭಾವಿತನಾಗಿ ಮೂಲೆಯಲಿ ಪಕೋಡಾ ಅಂಗಡಿ ಇಟ್ಟುಕೊಂಡು ಮಾರಿ ಬದುಕುತ್ತಿದ್ದ. ಅಲ್ಲಿಗೆ ಹೋದ ಸುಬ್ಬಣ್ಣ ಎರಡು ಪ್ಲೇಟ್ ಪಕೋಡಾ ತಿಂದು ಹೊಟ್ಟೆ ತುಂಬಾ ನೀರು ಕುಡಿದು ಅಲ್ಲಿಯೇ ಹಾಕಿದ್ದ ಚೌಕೀದಾರನ ಪೊಟೋಗೆ ನಮಸ್ಕರಿಸಿ ಡಬಲ್ ಡಿಗ್ರೀ ಹೋಲ್ಡರ್ ಹುಡುಗನನ್ನು ಪಕೋಡಾ ಮಾರುವಂತೆ ಮಾಡಿದ ಪವಾಡಕ್ಕೆ ಮಾರುಹೋದ.

- ಶಶಿಕಾಂತ ಯಡಹಳ್ಳಿ

ಮಂಗಳವಾರ, ಫೆಬ್ರವರಿ 1, 2022

ಸೀನನ ನಿರುದ್ಯೋಗ ಪ್ರಹಸನ

 ಸೀನನ ನಿರುದ್ಯೋಗ ಪ್ರಹಸನ

***************************


ಬಜೆಟ್ ಮಂಡನೆ ಶುರುವಾದಾಗಿಂದ ಸೀನ ಟಿವಿ ಮುಂದೇ ಕುಳಿತು ಕಾಯ್ತಾ ಇದ್ದ. ಸರಿಸುಮಾರು 40 ಲಕ್ಷ ಕೋಟಿ ಬಜೆಟ್ನಲ್ಲಿ ತನಗೇನಾದರೂ ಅಲ್ಪಸ್ವಲ್ಪ ದಕ್ಕಬಹುದೆನೋ ಎಂಬ ದೂರಗಾಮಿ ಆಸೆ ಅವನದು. ನ್ಯೂಜ್ ಚಾನೆಲ್ ಬದಬದಲಿಸಿ ನೋಡಿದರೂ ಎಲ್ಲಿಯೂ ನಿರುದ್ಯೋಗಿಗಳ ಕುರಿತ ಪ್ರಸ್ತಾಪವೇ ಇರಲಿಲ್ಲ. ಏಳೆಂಟು ವರ್ಷಗಳ ಹಿಂದೆ ವರ್ಷಕ್ಕೆರಡು ಕೋಟಿ ಉದ್ಯೋಗ ಸೃಷ್ಟಿ ಎನ್ನುವ ಪ್ರಧಾನಿಗಳ ಭರವಸೆ ಆದಷ್ಟು ಬೇಗ ನಿರಾಸೆ ತಂದಿತ್ತು. ಕರೋನಾ ನೆಪದಲ್ಲಿ ಇರುವ ಉದ್ಯೋಗವೂ ಹೊರಟುಹೋಗಿತ್ತು. ನಿರುದ್ಯೋಗಿಯಾಗಿ ಮನೆಗೆ ಹೊರೆಯಾಗಿ ಅಂಡಲೆಯುತ್ತಿದ್ದ ಸೀನನಿಗೆ ಈ ವರ್ಷದ ಬಜೆಟ್ ಮೇಲೆ ಒಂಚೂರು ಭರವಸೆ ಇದ್ದಿದ್ದೂ ನಿರಾಸೆಯಾಯಿತು. ಮುಂದೇನು ಶಿವನೇ ಅಂತಾ ತಲೆ ಮೇಲೆ ಹೊತ್ತು ಆಲದ ಮರದ ಕಟ್ಟೆ ಮೇಲೆ ಕುಳಿತು ಆಕಾಶ ನೋಡುತ್ತಿದ್ದ. ಇದನ್ನು ನೋಡಿದ ನಾಣಿ

" ಏನ್ಲಾ ಸೀನಾ.. ಹಿಂಗ್ಯಾಕಲಾ ಹೆಂಡತಿ ಸತ್ತೋರಂಗ, ಆಕಾಶ ತಲೆ ಮೇಲೆ ಬಿದ್ದಂಗೆ ಕೂತಿದ್ದೀಯಾ, ಹೋಗ್ಲಾ ಬಜೆಟ್ ಸುದ್ದಿ ನೋಡ್ಲಾ.. ಆಹಾ ಎಷ್ಟೊಂದು ದೂರದೃಷ್ಟಿ, ಎಂತಹ ದೇಶಪ್ರೇಮಾ.." ಹೀಗೆ ಇನ್ನೂ ಏನೇನೋ ಹೇಳುವುದರಲ್ಲಿದ್ದ ನಾಣಿಯನ್ನು ದುರುಗುಟ್ಟಿ ನೋಡಿದ ಸೀನಾ

" ಏನ್ಲಾ ದೂರದೃಷ್ಟಿ ನಿನ್ನಜ್ಜಿ ಪಿಂಡಾ. ಕೈಗೆ ಕೆಲಸಾ ಇಲ್ದೆ ನಮ್ಮಂತೋರು ದಿನಾಲೂ ಸಾಯ್ತಿದ್ದೀವಿ. ನಮ್ಮಂತೋರಿಗೆ ಏನೈತೆ ಬಜೆಟ್ನಾಗೆ ಬದ್ನೇಕಾಯಿ" ಸಿಟ್ಟಿನಿಂದ ಕಿರುಚಿದ ಸೀನ.

" ಸ್ವಾರ್ಥಿ ಕಣ್ಲಾ ನೀನು. ದೇಶಕ್ಕೆ ಏನು ಲಾಭ ಅಂತಾ ನೋಡೋದು ಬಿಟ್ಟು ನಿನಗೆಂತಹ ಲಾಭ ಅಂತಾ ಕೇಳ್ತಿಯಾ. ನೋಡಲೇ ರಕ್ಷಣೆಗೆ ಐದೂ ಕಾಲು ಲಕ್ಷ ಕೋಟಿ ಕೊಟ್ಟಿದ್ದಾರೆ ಗೊತ್ತೇನ್ಲಾ" ಎನ್ನುವಷ್ಟರಲ್ಲಿ ಸೀನ ಅಡ್ಡಬಾಯಿ ಹಾಕಿದ

" ರಕ್ಷಣೆ ಯಾರಿಗ್ಲಾ, ಜನರಿದ್ದರೆ ರಕ್ಷಣೆ.. ಹೀಗೇ ನಿರುದ್ಯೊಗಿಗಳು ಅನ್ನದಾತರು ಆತ್ಮಹತ್ಯೆ ಮಾಡಿಕೊಂಡು ಸತ್ತರೆ ಯಾರಿಗಲಾ ರಕ್ಷಣೆ, ರಕ್ಷಣೆ ಹೆಸರಿನ ಹುಲ್ಲುಗಾವಲಲ್ಲಿ ಮೇಯುವವರು ಇದೇ ಆಳುವವರು ಅಲ್ವೇನ್ಲಾ. ಮೊದಲು ಓದಿದವರಿಗೆ ತಕ್ಕ ಉದ್ಯೋಗ ಕೊಡಲಿ ಆಮೇಲೆ ರಕ್ಷಣೆ ಮಾಡ್ಕೊಳ್ಳಲಿ ನಮ್ಮ ಕಷ್ಟ ನಮಗೆ.." ಗೊಣಗತೊಡಗಿದ ಸೀನ.

" ಅಲ್ಲಲೇ ಸೀನಿ ದೇಶ ದೊಡ್ಡದಾ ಇಲ್ಲಾ ನಿನ್ನ ಉದ್ಯೊಗ ದೊಡ್ಡದಾ, ದೇಶ ಇದ್ದರೆ ನೀನು ನಿನ್ನ ಉದ್ಯೋಗ ಅಲ್ವೇನ್ಲಾ." ಎಂದೆನ್ನುವಷ್ಟರಲ್ಲಿ ಸಿಟ್ಟಿಗೆದ್ದ ಸೀನ

" ನಿಲ್ಲಸ್ಲಾ ನಿನ್ನ ಭಾಷಣವಾ.. ಇಂತಾ ಮಾತಗಳನ್ನಾ ಹೇಳಿ ಹೇಳಿ ಯಾಮಾರಸ್ತಾನೇ ಬಂದವ್ರೆ. ದೇಶದ ಜನ ಸುಖವಾಗಿದ್ರೆ ದೇಶ ಸಮೃದ್ದವಾಗಿರೋದು ತಿಳ್ಕೋ. ಇಡೀ ದೇಶಕ್ಕೆ ದೇಶವನ್ನೇ ಕಾರ್ಪೋರೇಟ್ ಕಂಪನಿಗಳಿಗೆ ದೇಶ ಆಳುವವರು ಮಾರ್ತಿರುವಾಗ ಅವರಿಗೆ ಜನರ ಚಿಂತೆ ಹೆಂಗ್ಲಾ ಇದ್ದೀತು. ಕೈಗೊಂದು ಕೆಲ್ಸಾ ಕೊಡಿ ಅಂತಾ ಕೇಳಿದ್ರೆ ಪಕೋಡಾ ಮಾರಿ ಅಂತಾರೆ. ಎಲ್ಲರೂ ಪಕೋಡಾ ಮಾರಿದ್ರೆ ಕೊಂಡು ತಿನ್ನೋರ್ಯಾರಲಾ? 

ಪ್ರತಿ ಬಜೆಟಲ್ಲೂ ಲಕ್ಷಾಂತರ ಕೋಟಿ ಕೃಷಿ ಬಜೆಟ್ಟು, ಅದಷ್ಟೂ ಅನ್ನದಾತರಿಗೆ ದಕ್ಕಿದ್ರೆ ಯಾಕ್ಲಾ ರೈತರು ಆತ್ಮಹತ್ಯೆ ಮಾಡ್ಕೋತಿದ್ರು, ಖಾಲಿಪುಕ್ಸಟ್ಟೆ ಮಾತು ಬಿಟ್ಟು ಸುಮ್ಕೆ ಮುಂದಕ್ಕೆ ಹೋಗಲಾ" ಎಂದು ಹೊಟ್ಟಲಿರೋ ಸಿಟ್ಟನ್ನೆಲ್ಲಾ ಬಾಯಿಗೆ ತಂದು ರೇಗಿದ ಸೀನ.

"ಯಾಕ್ಲಾ ರೇಗ್ತಿಯಾ ಸೀನಾ, ಪುಕ್ಸಟ್ಟೆ ಅಕ್ಕಿ ಕೊಡ್ತಾ ಇಲ್ವಾ ಸರಕಾರ, ಆಗಾಗ ಗೋದಿ ಸಕ್ಕರೇನೂ ಕೊಡ್ತಾರಲ್ವೆನೋ. ಸರಕಾರ ಕೂಲಿ ಕೆಲ್ಸಾನೂ ಕೊಡ್ತದಲ್ವಾ, ಆದರೂ ಯಾಕಪ್ಪ ಸಿಟ್ಟು ಸ್ವಲ್ಪ ಶಾಂತವಾಗು ಮಾರಾಯಾ" ಎಂದು ರಮಿಸತೊಡಗಿದ ನಾಣಿ. ಇದರಿಂದ ಇನ್ನಷ್ಟು ಕೆರಳಿದ ಸೀನ

"ಯಾವತ್ತಾದ್ರೂ ರೇಶನ್ ಅಕ್ಕಿ ತಿಂದೀಯೇನ್ಲಾ. ಮನುಷ್ಯರು ತಿನ್ನೋಕಾಯ್ತದಾ ಅವನ್ನ. ಭಿಕ್ಷೆ  ಹಾಕದಂಗೆ ಹಾಕ್ತಾರೆ. ಕೆಲಸ ಅಂತೆ ಕೆಲಸ.. ಲೇ ಡಿಗ್ರಿ ಓದಿರೋ ನಮಗೆ ಗುಡ್ಡದಲ್ಲಿ ತಗ್ಗು ತೆಗೆಯೋ ಕೆಲಸ ಕೊಡ್ತಾರಂತೆ. ಓದಿಗೂ ಒಂದಿಷ್ಟಾದರೂ ಬೆಲೆ ಇಲ್ವಾ. ತೆರಿಗೆ ಕಟ್ಟಿಸ್ಕೊಂಡು ಹಿಂಗೆ ಶೋಷಣೆ ಮಾಡ್ತಾರಲ್ಲಾ ಏನ್ ತಗೊಂಡು ಹೊಡೀಬೇಕು ಹೇಳು ಆಳೋವವರಿಗೆ" ಎಂದರಚಿದ ಸೀನನ ಮಾತು ಕೇಳಿ ಅಚ್ಚರಿಗೊಂಡ ನಾಣಿ

" ತಿನ್ನೋಕು ಗತಿಯಿಲ್ಲದ ನಿರುದ್ಯೋಗಿ ನನಮಗಾ ನೀನು ಯಾವಾಗ್ಲಾ ತೆರಿಗೆ ಕಟ್ತಿಯಾ? ತೆರಿಗೆ ಕೊಡೋರು ಶ್ರೀಮಂತರು ನಾವಲ್ಲವಲ್ಲಾ, ಅದ್ಕೆ ಸರಕಾರ ಕೊಟ್ಟಷ್ಟು ತಗೊಂಡು ಮುಚ್ಕೊಂಡಿರಬೇಕು ಮಗಾ, ಜಾಸ್ತಿ ಮಾತಾಡಿದ್ರೆ ಕೊಡೋ ರೇಶನ್ನೂ ನಿಲ್ಲಿಸಿ ಬಿಡ್ತಾರೆ ಹುಷಾರು" ಎಂದು ದಮಕಿ ಹಾಕಿದ ನಾಣಿ.

" ಈ ದೇಶದಲ್ಲಿರೋ ಶ್ರೀಮಂತರಿಗಿಂತಾ ಹೆಚ್ಚು ತೆರಿಗೆ ಕಟ್ಟೋರು ನಾವು ಬಹುಸಂಖ್ಯಾತ ದುಡಿಯೊ ಜನಗಳು ಕಣ್ಲಾ. ಈ ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಬಡಮಧ್ಯಮ ವರ್ಗದ ಜನತೆ ಕಟ್ಟುವ ಪರೋಕ್ಷ ತೆರಿಗೆ ಎಷ್ಟು ಗೊತ್ತಾ? ಶೇಕಡಾ 63. ಎಲ್ಲಾ ಶ್ರೀಮಂತರೂ ಸೇರಿ ಕಟ್ಟುವ ತೆರಿಗೆ ಕೇವಲ ಶೇಕಡ 37. ಹಂಗ್ಯಾಕೆ ಕಣ್ಣು ಬಾಯಿ ಬಿಟ್ಕೊಂಡು ನೋಡೀಯಾ? ನಾವು ಕೊಳ್ಳುವ ಪೇಸ್ಟು, ಸಾಬೂನು, ಚಪ್ಪಲಿ, ಬಟ್ಟೆ ಅಷ್ಟೇ ಯಾಕೆ ಪರ್ಚೇಜ್ ಮಾಡುವ ಎಲ್ಲಾ ಸಾಮಾನುಗಳೂ ತೆರಿಗೆ ಸೇರಿಸಿಯೇ ಮಾರಲ್ಪಡುತ್ತವೆ ಅಲ್ವೆನಲೇ. ಅವುಗಳನ್ನು ಕೊಳ್ಳುವ ನಾವು ಕೊಟ್ಯಾಂತರ ಜನ ಪರೋಕ್ಷವಾಗಿ ಪ್ರತಿದಿನ ತೆರಿಗೆ ಕಟ್ತಾನೇ ಇರ್ತೀವಿ ಅನ್ನೋದು ತಿಳ್ಕೋ ಮೊದಲು" ಎಂದು ಜಾಡಿಸಿದ ಸೀನ.

" ಹೌದಲ್ಲಲೇ ನನಗಿದು ಗೊತ್ತೇ ಆಗಲಿಲ್ಲ ನೋಡು. ಹಂಗಾದ್ರೆ ನಾವೂ ತೆರಿಗೆ ಪಾವತಿದಾರರೇ ಅಂದಂಗಾತು. ಎಲ್ಲದರ ಮೇಲೂ ನಮಗೂ ಪಾಲು ಹಕ್ಕು ಇದೆ ಅಂದಂಗಾತು. ಬಾರಲೇ ಸೀನಾ ಸಿಎಂ, ಪಿಎಂ ಅಷ್ಟೇ ಯಾಕೆ ರಾಷ್ಟ್ರಪತಿಗೂ ಪತ್ರ ಬರಿಯೋಣ, ಈಮೇಲ್ ಕಳಿಸೋಣ. ಪ್ರತಿಯೊಬ್ಬ ಜನಪ್ರತಿನಿಧಿಗಳ ಮನೆ ಮುಂದೆ ಧರಣಿ ಕೂಡೋಣ. 'ಉದ್ಯೋಗ ಕೊಡಿ ಇಲ್ಲಾ ಉದ್ಯೋಗ ಬತ್ಯೆ ನೀಡಿ' ಚಳುವಳಿ ಮಾಡೋಣ" ಎಂದು ಸೀನನ ಕೈಹಿಡಿದು ಮೇಲಕ್ಕೆದ್ದ ನಾಣಿ.

" ಮಾತು ಅಂದ್ರೆ ಇದು, ನಮ್ಮ ಹಕ್ಕಿಗಾಗಿ ನಮ್ಮ ಹೋರಾಟ, ಉದ್ಯೋಗ ಕೊಡಿ" ಎಂದು ಸುಮ್ಮನಾದ ಸೀನನ ಘೋಷಣೆಯನ್ನು " ಉದ್ಯೋಗ ಭತ್ಯೆ ನೀಡಿ" ಎಂದು ಪೂರ್ಣ ಗೊಳಿಸಿದ ನಾಣಿ.


- ಶಶಿಕಾಂತ ಯಡಹಳ್ಳಿ..

ಬ್ರಹ್ಮಾಂಡ ಬೇಸಾಯ ಪ್ರಹಸನ

 ಬ್ರಹ್ಮಾಂಡ ಬೇಸಾಯ ಪ್ರಹಸನ

***************************


ಎರಡು ತಿಂಗಳ ಹಿಂದಷ್ಟೇ ಸಾಲ ಮಾಡಿ ಬೆಳೆದ ಬತ್ತದ ಬೆಳೆ  ಕೈಗೆ ದಕ್ಕದೇ ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದಿದ್ದ ಸಂಕ್ರ ಇವತ್ತು ಖುಷಿಯಿಂದ ಕುಣಿಯುತ್ತ ಬಂದ.

"ಯಾಕ್ಲೆ ಸಂಕ್ರ ಹೀಗಾಡ್ತಿದ್ದೀ.. ಸಾಲ ಮಾಡಿ ಸಾಯೋರಿಗೆ ಸರಕಾರ ಭಾರೀ ಪರಿಹಾರ ಏನಾದ್ರೂ ಘೋಷಣೆ ಮಾಡಿದೆಯಾ?" ಎಂದು ಯಂಕ ಕಾಲೆಳೆದ.

"ಇಲ್ಲಾ ಕಣಣ್ಣೋ.. ಬತ್ತದ ಇಳುವರಿ ಹೆಚ್ಚಾಗಿಸೋ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ.. ಅದಕ್ಕೆ ಖುಸಿ ಅಷ್ಟೇಯಾ?" ಎಂದು ಕಣ್ಣರಳಿಸಿದ ಸಂಕ್ರ. 

"ಅದೇನಪ್ಪಾ ಅಂತಾ ಅಸ್ತ್ರ ನಂಗೂ ಹೇಳಲೇ ಮೊದಲು ಆಮ್ಯಾಗೆ ಕುಣಿಯೋವಂತೆ" ಎಂದು ಕುತೂಹಲಿಯಾದ ಯಂಕ.

" ಅದೇ ಯಂಕಣ್ಣಾ.. ಬತ್ತದ ಗದ್ದೇಲಿ ವೇದ ಮಂತ್ರ ಪಠಣ ಮಾಡಿದ್ರೆ ಇಳುವರಿ ಜಾಸ್ತಿ ಆಗ್ತದಂತಣ್ಣೋ" ಏನನ್ನೋ ಹೊಸದು ಕಂಡು ಹಿಡಿದಂತೆ ಕಣ್ಣರಳಿಸಿ ಕೂಗಿದ ಸಂಕ್ರ.

"ಯಾವನಲೇ ಹಂಗಂತ ಹೇಳಿದ್ದು ಅಡ್ಡಕಸಬಿ ನನಮಗನೇ ಮಂತ್ರಕ್ಕೆ ಮಾವಿನ ಹಣ್ಣು ಉದರಿದಂತೆ ಮಾತಾಡ್ತಿಯಲ್ಲಲೇ ನಾನ್ಸೆನ್ಸ್" ಎಂದು ಗದರುವಷ್ಟರಲ್ಲೇ ಸಂಕ್ರ

" ಇಲ್ನೋಡಣ್ಣಾ ಪೇಪರಿನಾಗೆ ಬಂದೈತೆ. ಅವರಿವರು ಹೇಳಿದ್ರೆ ನಂಬೋ ಮಗಾನೇ ಅಲ್ಲಾ ನಾನು. ಗೋವಾದ ಕೃಷಿ ಮಂತ್ರಿ ಅದೆಂತದೋ ಅವರ ಹೆಸರು ಹಾಂ ವಿಜಯ್ ಸರ್ದೇಸಾಯಿ ಹೇಳಿದ್ದಾರಪ್ಪೋ. ಮಂತ್ರ ಹೇಳೋ ತಂತ್ರದಿಂದ ಬತ್ತ ಬೆಳೆಯೋದಕ್ಕೆ ಬ್ರಹ್ಮಾಂಡ ಬೇಸಾಯ ಅಂತಾ ಹೆಸರು ಬೇರೆ ಇಟ್ಟು ಈ ಬ್ರಹ್ಮಾಂಡ ಯೋಜನೆ ಉದ್ಘಾಟನೆಯನ್ನೂ ಮಾಡಿದ್ದಾರಂತೆ.. ನಾನೇನಾದ್ರೂ ಸುಳ್ಳ ಹೇಳಿದ್ರೆ ಓದು ಪೇಪರ್ನ.." ಎಂದ ಸಂಕ್ರನ ಮಾತು ಕೇಳಿ ನ್ಯೂಜ್ ಪೇಪರ್ನಲ್ಲಿ ಬಂದದನ್ನ ಓದಿದ ಯಂಕ

" ಬ್ರಹ್ಮಾಂಡ ಅಂತೆ ಬ್ರಹ್ಮಾಂಡ ನಿಮ್ಮಜ್ಜಿ ಪಿಂಡ. ಮಂತ್ರಕ್ಕೆ ಇಳುವರಿ ಬರ್ತದಾ. ಹಂಗಾರೆ ಮಡಿ ಮಾಡಿ ನೀರು ಗೊಬ್ಬರ ಕೊಡೋದು ಬೇಡ್ವಾ. ಆ ಮಂತ್ರಿ ಏನು ಕೃಷಿ ವಿಜ್ಞಾನಿಯಾ ಅಧ್ಯಯನ ಮಾಡಿ ಹೇಳೋಕೆ?" ಎಂದು ಗದರಿದ ಯಂಕನ ಮಾತು ಕೇಳಿ ಸಂಕ್ರನ ಸಂತಸ ಸರ್ರಂತ ಇಳಿದು ಮುಖ ಬಾಡಿ ಅಯ್ಯೋ ಪಾಪ ಅನಿಸಿತು. ಬೇಸಾಯದಲ್ಲಿ ಸೋತು ಸುಣ್ಣವಾಗಿದ್ದ ಸಂಕ್ರನಿಗೆ ಈ ಬೊಗಳೇ ಬ್ರಹ್ಮಾಂಡ ಯೋಜನೆ ಮುಳುಗುತ್ತಿದ್ದವನಿಗೆ ಹುಲ್ಲುಕಡ್ಡಿ ಸಿಕ್ಕಂತಾಗಿತ್ತು. 

ನಿರಾಸೆಯಿಂದ ಮತ್ತೆಲ್ಲಿ ಸಂಕ್ರ ಆತ್ಮಹತ್ಯೆ ಮಾಡಿಕೊಳ್ತಾನೋ ಎನ್ನುವ ಆತಂಕದಲ್ಲಿ ಯಂಕ ಸಮಾಧಾನದ ದ್ವನಿಯಲ್ಲಿ

"ಆಯ್ತಪಾ ಸಂಕ್ರಾ ಬ್ರಹ್ಮಾಂಡ ಬೇಸಾಯ ದಿಟ ಅಂತಾನೇ ಇಟ್ಕೋ ಆದರೆ ನಿನ್ನ ಬತ್ತದ ಜಮೀನಿಗೆ ಬಂದು ವೇದ ಮಂತ್ರ ಹೇಳೋರ್ಯಾರು. ನಿನಗೆ ಮಂತ್ರ ಹೇಳೋಕೆ ನಾಲಿಗೆ ತಿರುಗುತ್ತಾ ಇಲ್ವಲ್ಲಾ.. ಪುರೋಹಿತರಿಗೋ ಇಲ್ಲಾ ಅರ್ಚಕರಿಗೋ ಕೇಳಿದಷ್ಟು  ಕಾಣಿಕೆ ಕೊಟ್ಟು ಮಂತ್ರ ಹೇಳಿಸಬೇಕು. ಉರಿಬಿಸಲಲ್ಲಿ ಬಂದು ತಾರಕ ಸ್ವರದಲ್ಲಿ ಹತ್ತೆಕರೆ ಗದ್ದೆ ಸುತ್ತಿ ವೇದ ಮಂತ್ರ ಹೇಳೋ ಪುರೋಹಿತರು ಎಲ್ಲಪ್ಪಾ ಸಿಗ್ತಾರೆ ನಿನಗೆ. ತುಪ್ಪಾ ತಿಂದು ನೆರಳಲ್ಲಿ ತೆಪ್ಪಗೆ ಇರೋ ಬ್ರಾಹ್ಮಣರಿಗೆ ಬಿಸಲಾಗಿಬರ್ತದಾ" ಎಂದು ಪ್ರಶ್ನಿಸಿದ ಯಂಕ.

"ಹೌದಲ್ವಾ.. ನನಗೆ ಈ ಯೊಚನೇನೇ ಬರಲಿಲ್ಲ ನೋಡು. ಮತ್ತೇನು ಮಾಡೋದು ಯಂಕಣ್ಣಾ" ಎಂದು ಆತಂಕದಿಂದ ಮರು ಪ್ರಶ್ನಿಸಿದ ಸಂಕ್ರ.

" ಇದೆಲ್ಲಾ ಆಗಾಕಿಲ್ಲಾ ಹೋಗಾಕಿಲ್ಲ. ಸಗಣಿ ತಿಂದ್ರೆ ಕ್ಯಾನ್ಸರ್ ಗುಣವಾಗುತ್ತೆ, ಗೋಮೂತ್ರ ಕುಡಿದ್ರೆ ಕರೋನಾ ಓಡುತ್ತೆ, ಮಂತ್ರ ಹೇಳಿದ್ರೆ ಬತ್ತದ ಇಳುವರಿ ಹೆಚ್ಚಾಗುತ್ತೆ  ಅಂತೆಲ್ಲಾ ಆಗಾಗ ಈ ಸಂಘಪರಿವಾರದ ಮಂದಿ ಪುಂಗತಾನೇ ಇರ್ತಾರೆ ಸಂಕ್ರಾ.. ಇಂತದ್ದಕ್ಕೆಲ್ಲಾ ವೈಜ್ಞಾನಿಕ ಕಾರಣ ಇರೋದಿಲ್ಲ" ಎಂದ ಯಂಕನ ಮಾತು ಕೇಳಿ ಸಂಕ್ರ ಕುಗ್ಗಿಯೇ ಹೋದ. ಮೊದಲೇ ನೊಂದ ಜೀವ ಮತ್ತೆಲ್ಲಿ ಖಿನ್ನತೆ ಹೆಚ್ಚಾಗಿ ಸಾಯಲು ಪ್ರಯತ್ನಿಸುತ್ತೋ ಎಂದು ಆತಂಕಗೊಂಡ ಯಂಕ 

" ಒಂದು ಕೆಲಸ ಮಾಡು ಸಂಕ್ರ. ಆ ವೇದ ಮಂತ್ರಗಳನ್ನ ಇಂಟರ್ನೆಟನಿಂದ ಡೌನ್‌ಲೋಡ್ ಮಾಡ್ಕೊಂಡು ಮೊಬೈಲ್ ಮೂಲಕ ಸ್ಪೀಕರಿಗೆ ಕನೆಕ್ಷನ್ ಕೊಟ್ಟು ಗದ್ದೆತುಂಬಾ ಬತ್ತದ ಬೆಳೆಗೆ ಕೇಳೋಹಂಗೆ ಜೋರಾಗಿ ರಿಕಾರ್ಡ್ ಹಾಕಿ ನೋಡು, ಇಳುವರಿ ಬರುತ್ತಾ ಇಲ್ವಾ ಅಂತಾ ಗೊತ್ತಾಗುತ್ತೆ. ಮಂತ್ರ ಹಾಕೀನೆಂದು ನೀರು ಗೊಬ್ಬರ ಕೊಡೋದು ಮರೀಬೇಡ. ಏನೇ ಆಗಲಿ ಸಾಯೋ ಬಗ್ಗೆ ಯೋಚನೆ ಮಾತ್ರ ಮಾಡಬೇಡಾ, ಎಲ್ಲಕ್ಕಿಂತಾ ಬದುಕು ದೊಡ್ಡದು ಕಣಾ" ಅಂತಾ ಯಂಕ ಲಕ್ಚರ್ ಕೊಟ್ಟ. 

ಸಂಕ್ರಣ ಮುಖದಲ್ಲಿ ಸಣ್ಣ ಭರವಸೆ ಮೂಡಿದಂತಾಯ್ತು. 

" ಹಂಗೇ ಮಾಡ್ತೀನಿ ಯಂಕಣ್ಣಾ, ಗದ್ದೆಗೆ ವೇದ ಮಂತ್ರದ ಟೇಪ್ ಹಾಕ್ತೀನಿ" ಎನ್ನುತ್ತಾ ಒಂಚೂರು ಮುಖದಲ್ಲಿ ನಗು ಮೂಡಿಸಿಕೊಂಡು ಖುಷಿಯಿಂದಾ ಹೊರಟು ಹೋದ. 

" ಸಧ್ಯ ಅವನ ನಂಬಿಕೆ ಯಾವುದೋ ರೀತಿಯಲ್ಲಿ ನಿಜವಾಗಲಿ. ಮಂತ್ರಕ್ಕೆ ಮಾವಿನಕಾಯಿ ಉದುರುವಂತಾಗಲಿ. ಆತನ ಸಾವಿನ ಸುದ್ದಿ ಎಂದೂ ಬರದಿರಲಿ" ಎಂದುಕೊಂಡ ಯಂಕಣ್ಣಾ ಬ್ರಹ್ಮಾಂಡ ಬೇಸಾಯದ ರಹಸ್ಯ ಅರಿಯಲು ಇಂಟರ್ನೆಟ್ ಓಪನ್ ಮಾಡಿದ.


- ಶಶಿಕಾಂತ ಯಡಹಳ್ಳಿ

ಪ್ರೀತಿ ಎಂದರೆ..

 ಪ್ರೀತಿ ಎಂದರೆ..          (ಕವಿತೆ)

---------------------


ಇಷ್ಟವಾದಾಗ ಜೊತೆಯಾಗಿ 

ಕಷ್ಟವಾದಾಗ ದೂರಾಗುವ ದುರಂತಕ್ಕೆ

ಪ್ರೀತಿ ಎಂದು ಆರೋಪಿಸದಿರು

ಕಡುಕಷ್ಟದಲೂ ಬಿಡದೆ ಕೈ ಹಿಡಿದು 

ಜೊತೆನಡೆದರೆ ಇಂದಿಲ್ಲ ನಾಳೆ

ಹಗುರಾದೀತು ಮನಸಿನ ಭಾರ


ಎಲ್ಲರಿಗೂ ಗೊತ್ತಿದೆ ಪ್ರಯತ್ನಿಸಿದರೆ 

ಪ್ರೀತಿ ಮಾಡುವುದು ಸುಲಭ

ಕೊನೆಯವರೆಗೂ ನಿಭಾಯಿಸುವುದೇ 

ಬದುಕಿನ ಬಲು ದೊಡ್ಡ  ಸವಾಲು

ಹೊರಗಿನ ಶತ್ರುಗಳ ಮಾತಿರಲಿ

ಪರಸ್ಪರ ಅಹಮಿಕೆಯೊಂದೇ ಸಾಕು 

ಪ್ರೇಮದ ಸಾವಿಗೆ ಒಲವಿನ ಸಮಾಧಿಗೆ


ಸೋಲುವುದು ಬೇಕಿಲ್ಲದವರು

ಸೋತಷ್ಟೂ ದ್ವೇಷಿಸುವವರು

ಪ್ರೇಮದ ವಿಷಯ ಬಿಟ್ಟು ಬೇರೆ

ಬದುಕುವ ದಾರಿ ಹುಡುಕುವುದು ಒಳಿತು

ಸದಾ ಗೆಲ್ಲುವ ತವಕ ಎಲ್ಲಿಯ ತನಕ

ಇಲ್ಲಿ ಪ್ರೇಮದಲ್ಲಿ ಸೋಲೇ ಗೆಲುವಿಗೆ

ಮೊದಲ ಹಾಗೂ ಕೊನೆಯ ಮೆಟ್ಟಿಲು

ಸಹನೆಯೊಂದೇ ಒಲವೆಂಬ 

ಮಗುವ ಪೊರೆವ ತೊಟ್ಟಿಲು


ಅಷ್ಟಕ್ಕೂ ಪ್ರೀತಿ ಎಂದರೆ ಮತ್ತೇನಿಲ್ಲ

ಅಪಸ್ವರಗಳನ್ನೆಲ್ಲಾ ಮೀರಿದ

ಪರಸ್ಪರ ಗೌರವ ನಂಬಿಕೆ ಮತ್ತು

ರಾಜಿರಹಿತ ಹೊಂದಾಣಿಕೆ

ಇಲ್ಲವಾದರೆ ಅಸಹನೀಯ ಸಹಜೀವನ

ಅಂಗಾಲಿನಲಿ ಮುರಿದ ಮುಳ್ಳೊಂದಿಗೆ 

ನಡೆದಂತೆ ಬದುಕಿನ ಬಾಕಿ ಪಯಣ


- ಶಶಿಕಾಂತ ಯಡಹಳ್ಳಿ

ಮುನಿಸಿಗೂ ಇರಲಿ ಘನತೆ

ಮುನಿಸಿಗೂ ಇರಲಿ ಘನತೆ      (ಕವಿತೆ)

--------------------------------------

ಏನಿದು ಚಿಕ್ಕಪುಟ್ಟದ್ದಕ್ಕೆಲ್ಲಾ ಹೀಗೆ ಆಗಾಗ

ಮುಖ ಗಂಟಿಕ್ಕಿ ಬೆನ್ನು ತಿರುಗಿಸದಿರು

ಬದುಕನ್ನೇ ಹಿಂಡಿ ಸಾಗಿಸಬೇಕಿದೆ ಸಂಸಾರದ ಬಂಡಿ 

ಮುನಿಸಿಗೂ ಒಂದು ಘನತೆ ಇರಲಿ..


ದಿನಸಿ ಧಾನ್ಯಗಳ ಮೌಲ್ಯ ಇಳಿಸಿ 

ರೈತರ ಕೊಂದರು

ಇದ್ದಕ್ಕಿದ್ದಂತೆ ಬೆಲೆ ಏರಿಸಿ ಗ್ರಾಹಕರ

ಬೆನ್ನಿಗೆ ಭಾರ ತಂದರು

ದಲ್ಲಾಳಿ ದಗಲ್ಬಾಜಿಗಳ ಬಿಟ್ಟು ತುಸುವೇ 

ದಿನಸಿ ತಂದೆನೆಂದೇಕೆ ಸಿಟ್ಟು ಬಿಟ್ಟು ಬಿಡು

ಮುನಿಸಿಗೂ ಒಂದು ಘನತೆ ಇರಲಿ..


ಶ್ರಮದ ಬೆಲೆ ಇಳಿಸಿ ತೈಲಗಳ ಬೆಲೆ ಏರಿಸಿದವರ 

ಮೇಲಿರಲಿ ಸುಡುಬೆಂಕಿಯಂತಹ ಕೋಪ

ಇದ್ದುದರಲ್ಲಿ ಸಂಸಾರ ಸಾಗಿಸೋಣವೆಂದರೆ ಯಾಕಿಂತಾ ಉಗ್ರ ಪ್ರತಾಪ

ನೆನಪಿರಲಿ ನಾನಿಲ್ಲಿ ಬರೀ ಪಾತ್ರ

ಆಳುವ ಅಪಾತ್ರರ ಕೈಲಿದೆ ಸೂತ್ರ

ಸೂತ್ರವ ಬಿಟ್ಟು ಪಾತ್ರದ ಮೇಲೇಕೆ ಆಕ್ರೋಶ

ಮುನಿಸಿಗೂ ಒಂದಿಷ್ಟು ಘನತೆ ಇರಲಿ..


ಮಾನವೀಯ ಮೌಲ್ಯಗಳು ಇಳಿದು 

ಸಂಬಂಧಗಳಲಿ ಸ್ವಾರ್ಥ ಬೆಳೆದು

ನಿರಾಸೆ ಹೆಚ್ಚಾದಲ್ಲಿ ನನ್ನ ಪಾತ್ರ ಇಲ್ಲವಾದರೂ 

ಹೀಗೆಲ್ಲಾ ಮಾತು ಬಿಟ್ಟು ದುರುಗುಟ್ಟದಿರು 

ಮುನಿಸಿಗೂ ಒಂಚೂರು ಘನತೆ ಇರಲಿ..


ಸತ್ಯವೇ ದೈವ ಅರಿತುಕೋ ವಾಸ್ತವ 

ಉದ್ಯೋಗ ಕೊಡುವ ಭರವಸೆ ಇತ್ತವರು 

ಇದ್ದದ್ದನ್ನೂ ಕಿತ್ತುಕೊಂಡರು

ಕಪ್ಪುಹಣ ತಂದು ಖಾತೆಗೆ ಹಾಕುತ್ತೇನೆಂದವರು

ತೆರಿಗೆಯ ಹೆರಿಗೆಯ ನೆಪದಲಿ

ಕೂಡಿಟ್ಟಿದ್ದನ್ನೂ ಎತ್ತಿಕೊಂಡರು


ಬ್ರಹ್ಮ ರಾಕ್ಷಸರ ಬಿಟ್ಟು ಗುಬ್ಬಿಯ ಮೇಲೇಕೆ ಬ್ರಹ್ಮಾಸ್ತ್ರ

ವ್ಯರ್ಥ ಮುನಿಸು ಮೂಟೆ ಕಟ್ಟಿಡು ಮೂಲೆಯಲಿ

ಮನುಜರಾದವರ ಮುನಿಸಿಗೂ ಅರ್ಥ ಇರಲಿ.


- ಶಶಿಕಾಂತ ಯಡಹಳ್ಳಿ