"ಪುಂಗ್ ಲೀಗೆ ಜೈ,
ಪರಮ ಭಕ್ತ ಶಿರೋಮಣಿ ಹೆಂಗ್ ಪುಂಗ್ ಲೀಗೆ.. ಜೈ.."
ಹೀಗೆ ಅಂಧಭಕ್ತಾದಿಗಳು ಜೈಕಾರ ಕೂಗುತ್ತಿದ್ದರು. ಅದೇ ಸಮಯಕ್ಕೆ ಮೋದಿಜಿಯ ಪರಮ ಭಕ್ತ ಪುಂಗ್ ಲೀ ಸಂದರ್ಶನ ತೆಗೆದುಕೊಳ್ಳಲು ನಮ್ಮ ಸುದ್ದಿ ಸುಬ್ಬಣ್ಣ ಎಂಟ್ರಿ ಕೊಟ್ಟು ತಾನು ಬಂದ ಉದ್ದೇಶವನ್ನು ತಿಳಿಸಿದ.
"ಆಯ್ತು ಸಂದರ್ಶನ ಶುರು ಮಾಡಿ. ಅದಕ್ಕೆ ಮುಂಚೆ ವಿಶ್ವಗುರುಗಳ ಸ್ಮರಣೆ ಮಾಡೋಣ. ವಿಶ್ವಗುರು ಮೋದಿ ಮಹರಾಜಕೀ.. (ಸುತ್ತ ನೆರೆದ ಭಕ್ತಾಶಿಖಾಮಣಿಗಳು ಜೋರಾಗಿ ಜೈ ಅಂದರು..) ಸರಿ ಈಗ ಕೇಳಿ" ಎನ್ನುತ್ತಾ ಹಸನ್ಮುಖಿಯಾಗಿ ಸುಬ್ಬಣ್ಣನ ಮುಖ ನೋಡಿದರು. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಸುಬ್ಬಣ್ಣ
" ಸರ್.. ಮಹಾ ಮೇಧಾವಿಗಳಾದ ನಿಮ್ಮ ಸಂದರ್ಶನ ಮಾಡೋ ಭಾಗ್ಯ ಸಿಕ್ಕಿದ್ದು ನನ್ನ ಸೌಭಾಗ್ಯ. ತುಂಬಾ ದಿನದಿಂದ ನನ್ನ ತಲೆತಿನ್ನುತ್ತಿರುವ ನಾಲ್ಕೇ ನಾಲ್ಕು ಪ್ರಶ್ನೆಗಳಿಗೆ ತಮ್ಮಿಂದ ಉತ್ತರ ಬಯಸುವೆ ಕೃಪೆಮಾಡಬೇಕು" ಎಂದು ದೈನ್ಯದಿಂದ ಕೇಳಿದಾಗ ಉಬ್ಬಿಹೋದ ಪುಂಗಲೀ ಒಮ್ಮೆ ಭಕ್ತಾದಿಗಳ ಮುಖವನ್ನು ನೋಡಿ ಅಲ್ಲಿ ತನ್ನ ಬಗ್ಗೆ ಅಭಿಮಾನ ತುಂಬಿ ತುಳುಕುತ್ತಿರುವುದನ್ನು ಮನಗಂಡು
" ಅಯ್ಯೋ ನಾಲ್ಕೇನು ಹತ್ತು ಪ್ರಶ್ನೆ ಕೇಳ್ರಿ. ನನ್ನ ಹೆಸರು ಏನು ಹೇಳಿ ಪುಂಗಲೀ ಅಂತಾ. ನನ್ನ ಕಸಬೇ ಪುಂಗೋದು, ಸಂಕೋಚ ಬಿಟ್ಟು ಕೇಳಿಯಪ್ಪಾ ಇಲ್ಲಿರೋರು ಸಹ ಕೇಳಿ ಪಾವನ ಆಗಲಿ" ಎಂದು ಎದೆಯುಬ್ಬಿಸಿದರು.
" ಇದು ಲೋಕಲ್ ಅಲ್ಲಾ ಇಂಟರ್ನ್ಯಾಶನಲ್ ಪ್ರಶ್ನೆ ಸರ್. ನಿಮ್ಮ ಮಾನಸ ಗುರು ಮೋದೀಜಿಯವರ ಕೃಪಾಕಟಾಕ್ಷ ಇದ್ದರೂ ಸಹ ಡೊನಾಲ್ಡ್ ಟ್ರಂಪ್ ಇಲೆಕ್ಷನ್ ಸೋತಿದ್ಯಾಕೆ?" ಎಂದು ಪ್ರಶ್ನೆ ಕೇಳಿ ಪುಂಗಲೀ ಮುಖವನ್ನು ಪಿಳಿಪಿಳಿ ಕಣ್ಣು ಬಿಟ್ಟು ನೋಡತೊಡಗಿದ ಸುಬ್ಬಣ್ಣ. ಆಗ ಸ್ಟೈಲಾಗಿ ಎದ್ದು ನಿಂತು ಭಾಷಣದ ಶೈಲಿಯಲ್ಲಿ ಮಾತು ಆರಂಭಿಸಿದ ಪುಂಗಲಿ
" ಸ್ನೇಹಿತರೆ, ಸಹೋದರರೆ, ಮೋದಿಜಿಯವರು ವಿಶ್ವವೇ ಗೌರವಿಸುವ ಅದ್ಬುತ ಮಹಾನಾಯಕರು ಅನ್ನೋದು ನಿಮಗೇನಾದರೂ ಗೊತ್ತಾ? ಮೋದಿಯವರ ವ್ಯಕ್ತಿತ್ವಕ್ಕೆ ಬೇರೆ ದೇಶಗಳ ನಾಯಕರಂತೆ ಟ್ರಂಪ್ ಕೂಡಾ ಬೆರಗಾಗಿ ಹೋಗಿದ್ದರು. ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆ ಸೋಲುತ್ತೇನೆ ಎಂದು ಅನುಮಾನ ಬಂತೋ ಆಗ ಅಮೇರಿಕದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಚುನಾವಣಾ ಪ್ರಚಾರ ಮಾಡಲು ಭಾರತ ದೇಶದಿಂದ ಮೋದಿಜಿಯವರನ್ನ ಕರೆಸಿಕೊಂಡಿದ್ದರು ಎನ್ನುವುದು ನಿಮಗೆ ಗೊತ್ತಾ. ಇದರಿಂದಲೇ ಗೊತ್ತಾಗುತ್ತದೆ ಮೋದೀಜಿಯವರ ವರ್ಚಸ್ಸು ಎಂತಾದ್ದು, ಅವರ ಪ್ರಸಿದ್ದಿ ಹೇಗಿತ್ತು ಅನ್ನೋದು. ಟ್ರಂಪ್ ಪರಿಪರಿಯಾಗಿ ಬೇಡಿಕೊಂಡಿದ್ದರಿಂದ ಮಾನ್ಯ ಮೋದಿಯವರು ಏನು ಮಾಡಿದರು ಗೊತ್ತಾ?. ಹತ್ತು ಲಕ್ಷ ರೂಪಾಯಿಗಳ ಸೂಟು ಹಾಕಿಕೊಂಡು ಇನ್ನೂರು ಕೋಟಿ ಬೆಲೆಯ ವಿಮಾನ ಏರಿ ಅಮೇರಿಕಕ್ಕೆ ಟ್ರಂಪ್ ಪರವಾಗಿ ಚುನಾವಣಾ ಪ್ರಚಾರಕ್ಕೆ ಹೊರಟೇಬಿಟ್ಟರು. ಯಾಕೆ ಅಷ್ಟೊಂದು ಬೆಲೆಬಾಳುವ ಸೂಟ್ ತೊಟ್ಟಿದ್ದರು ಅನ್ನೋದಾದರೂ ಗೊತ್ತಾ? ಅಮೇರಿಕದವರಿಗೆ ಭಾರತದ ಘನತೆ ಶ್ರೀಮಂತಿಕೆ ಗೊತ್ತಾಗಲೀ ಅಂತಾ. ಮೋದಿಯವರು ಬಂದಿದ್ದು ಗೊತ್ತಾದ ತಕ್ಷಣ ಟ್ರಂಪ್ ಏನು ಮಾಡಿದ್ರು ಗೊತ್ತಾ? ಎದ್ನೋ ಬಿದ್ನೋ ಅಂತಾ ಓಡಿ ಸಮಾವೇಶಕ್ಕೆ ಬಂದರು. ಆಗ ಅಲ್ಲಿ ವಿಶ್ವಗುರು ಮೋದೀಯವರು 'ಅಬ್ ಕೀ ಬಾರ್ ಟ್ರಂಪ್ ಸರಕಾರ್' ಅಂತಾ ಘೋಷಣೆ ಕೊಟ್ಟರು ನೋಡಿ, ಅಬ್ಬಾ ಆಗ ಅಮೇರಿಕದ ಜನ ಏನು ಮಾಡಿದರು ಗೊತ್ತಾ? ಹುಚ್ಚೆದ್ದು ಕುಣಿದಾಡಿದರು. ಎಲ್ಲಿ ಇಲೆಕ್ಷನ್ ಸೋಲ್ತೇನೆಯೋ ಅಂತಾ ಆತಂಕದಲ್ಲಿದ್ದ ಟ್ರಂಪಿಗೆ ಆಗ ದೈರ್ಯ ಬಂತು. ಗೆಲ್ಲೋದು ಗ್ಯಾರಂಟಿ ಆಯ್ತು. ಅದು ಮೋದೀಜಿಯವರ ಖದರ್ರು, ಅದು ವಿಶ್ವಗುರುವಿನ ತಾಕತ್ತು ಬ್ರದರ್ರು" ಎಂದು ಹೇಳಿ ಅಲ್ಲಿದ್ದವರ ಮುಖದ ಮೇಲಿನ ಆನಂದವನ್ನು ಅನುಭವಿಸಿ ಸುಬ್ಬಣ್ಣನ ಕಡೆ ನೋಡಿದರು.
" ಧನ್ಯೋಸ್ಮಿ ಸರ್. ನಿಮ್ಮ ಪುಂಗಿ ನಾದ ಕೇಳ್ತಾ ಇದ್ರೆ ಎಂತೆಂಥಾ ಹಾವುಗಳಿದ್ರೂ ಮೈಮರೆತು ತಲೆದೂಗಲೇ ಬೇಕು. ನನಗೆ ಮತ್ತದೇ ಪ್ರಶ್ನೆ ಕಾಡ್ತಾ ಇದೆ, ಅದೇನಪಾಂತಂದ್ರೆ. ಮೋದೀಜಿಯವರು ಅಷ್ಟೆಲ್ಲಾ ಪ್ರಚಾರ ಮಾಡಿ ಅಮೇರಿಕನ್ಸ್ ಗಳಿಗೆ ಹುಚ್ಚೆಬ್ಬಿಸಿ ಬಂದ್ರೂ ಟ್ರಂಪ್ ಯಾಕೆ ಎಲೆಕ್ಷನ್ ಸೋತರು? ಮೋದೀಜಿ ಜಾದೂ ಯಾಕೆ ವರ್ಕೌಟ್ ಆಗಲಿಲ್ಲ..?" ಎಂದು ಸುಬ್ಬಣ್ಣ ಹೇಳುವಷ್ಟರಲ್ಲಿ ಮಧ್ಯೆ ಬಾಯಿಹಾಕಿದ ಪುಂಗ್ಲಿ..
" ಮಿತ್ರೋ, ಟ್ರಂಪ್ ಯಾಕೆ ಸೋತರು ಅನ್ನೋದು ಗೊತ್ತಾ.? ಆ ಟ್ರಂಪ್ ಸುಮ್ಮನೇ ಇದ್ದಿದ್ದರೆ ಸಾಕಿತ್ತು ಮೋದೀಜಿ ಕೊಟ್ಟ ಅಬಕೀ ಬಾರ್ ಟ್ರಂಪ್ ಸರಕಾರ ಘೋಷಣೆಯೊಂದರಿಂದಲೇ ಗೆದ್ದು ಮತ್ತೆ ಅಮೇರಿಕದ ಅಧ್ಯಕ್ಷರಾಗ್ತಿದ್ದರು ಅನ್ನೋದರಲ್ಲಿ ಅನುಮಾನವೇ ಇಲ್ಲ. ಅದು ಆ ಟ್ರಂಪಗೂ ಗೊತ್ತಾಗಿತ್ತು ಗೊತ್ತಾ?. ಹೇಗೂ ಗೆಲ್ತೀನಿ ಅನ್ನೋ ದುರಹಂಕಾರದಲ್ಲಿ ಟ್ರಂಪ್ ಭಾರತವನ್ನು ಕೊಳಕು ಎಂದು ಹಿಯಾಳಿಸಿಬಿಟ್ಟರು ನೋಡಿ ಅಮೇರಿಕದ ಜನ ಸಿಟ್ಟಿಗೆದ್ದರು. ನಮ್ಮ ಭವ್ಯಭಾರತವನ್ನು ಹೀಯಾಳಿಸಿದ ಟ್ರಂಪ್ ನ ಅಹಂಕಾರ ಅಡಗಿಸಲು ನಮ್ಮ ಮಹಾನ್ ದೇಶಭಕ್ತ ಮೋದಿಯವರು ಕೆರಳಿ ಏನು ಮಾಡಿದರು ಗೊತ್ತಾ? ಅಮೇರಿಕದಲ್ಲಿರುವ ಗುಜರಾತಿಗಳಿಗೆ ಪೋನ್ ಮಾಡಿ ಯಾವುದೇ ಕಾರಣಕ್ಕೂ ಟ್ರಂಪ್ ಗೆಲ್ಲಬಾರದು ಅಂತಾ ಆದೇಶ ಮಾಡಿದರು. ಆಕ್ರೋಶಗೊಂಡ ಅಲ್ಲಿರುವ ಗುಜರಾತಿ ಚಾಯ್ ವಾಲಾಗಳು ಏನು ಮಾಡಿದರು ಗೊತ್ತಾ? ತಮ್ಮ ಚಾದಂಗಡಿಗೆ ಬರುವ ಎಲ್ಲರಿಗೂ ಟ್ರಂಪ್ ಗೆ ಓಟ್ ಹಾಕಬೇಡಿ ಅಂತಾ ಅಪಪ್ರಚಾರ ಶುರುಮಾಡಿದರು. ಇದರಿಂದಾಗಿ ಟ್ರಂಪ್ ಚುನಾವಣೆಯಲ್ಲಿ ಸೋತು ಸುಣ್ಣವಾಗಿ ಅಧಿಕಾರ ಕಳೆದುಕೊಂಡು ಮನೆಗೆ ಹೋದರು. ಇದು ನಮ್ಮ ಮೋದೀಜಿಯವರ ಅಸಲಿ ತಾಕತ್ತು. ಸೋಲ್ತೇನೆ ಅಂತಾ ಗೊತ್ತಾಗಿ ಮೊದೀಜಿಯವರ ಕಾಲಿಗೆ ಬಿದ್ದು ಟ್ರಂಪ್ ಬೇಡಿಕೊಂಡಿದ್ದರೆ ಮಹಾ ಕರುಣಾಳು ವಿಶ್ವಗುರುಗಳು ಕರುಣೆತೋರಿ ಅಮೇರಿಕನ್ನರ ಭಾವನೆಗಳನ್ನ ಹೇಗೆ ಬಡಿದೆಬ್ಬಿಸಿ ಎಲೆಕ್ಷನ್ ಗೆಲ್ಲುವುದು ಎಂಬ ತಂತ್ರಗಳನ್ನು ಕಲಿಸಿಕೊಟ್ಟು ಗೆಲ್ಲಿಸುತ್ತಿದ್ದರು. ಆದರೆ ಹಾಗೇ ಮಾಡದೇ ದುರಹಂಕಾರದಿಂದ ಟ್ರಂಪ್ ಸೋತರು. ಮೋದೀಜಿಯವರ ವರ್ಚಸ್ಸು ಅಂದರೆ ಇದು, ಮೋದಿ ಎಂತಹ ಜಾಗತಿಕ ನಾಯಕರು ಎನ್ನುವುದು ಇದರಿಂದಲೇ ಗೊತ್ತಾಗುತ್ತೆ ಗೊತ್ತಾ,? ಮೋದಿಯಂತಾ ನಾಯಕರು ಇನ್ನೆಂದೂ ಎಲ್ಲಿಯೂ ಹುಟ್ಟೋದಿಲ್ಲ, ಟ್ರಂಪನಂತಾ ಟ್ರಂಪನ ದುರಹಂಕಾರವನ್ನು ಅಡಗಿಸಿದ ಮೋದಿಯವರು ಈ ನಮ್ಮ ದೇಶದ ಪ್ರಧಾನಿಯಾಗಿದ್ದು ನಮ್ಮ ಇಂಡಿಯಾ ದೇಶದ ಪುಣ್ಯ ಅನ್ನೋದು ನಿಮಗೆ ಗೊತ್ತಾ?. ಭಾರತಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ ಇಂತಹ ಒಬ್ಬ ಜಾಗತಿಕ ನಾಯಕ ಬಂದ್ರಾ? ನಮ್ಮ ದೇಶ ಬಿಡಿ ಅಮೇರಿಕದಂತಹ ನಂಬರ್ ಒನ್ ಶಕ್ತಿಶಾಲಿ ದೇಶದ ಪ್ರಸಿದ್ದ ಅಧ್ಯಕ್ಷರನ್ನೇ ಸೋಲಿಸುವಷ್ಟು ಪ್ರಭಾವ ಇರುವ ಮಹಾನಾಯಕರು ಯಾರಾದರೂ ಇಲ್ಲಿವರೆಗೂ ಈ ದೇಶದಲ್ಲಿ ಹುಟ್ಟಿ ಬಂದ್ರಾ? ಇದೆಲ್ಲಾ ಮೋದಿಯವರ ಮಹಿಮೆ ಕಣ್ರಿ, ಮೋದಿಯವರ ನಾಯಕತ್ವ ಕಣ್ರಿ, ಮೋದಿಯವರ ಶ್ರಮ ಕಣ್ರಿ.. ಅದಕ್ಕೆ ನಾನು ಹೋದಲ್ಲೆಲ್ಲಾ ಕೂಗು ಕೂಗಿ, ಸಾರಿ ಸಾರಿ ಹೇಳ್ತೇನೆ ಮೋದಿ ಅಂದ್ರೆ ಭಾರತ, ಭಾರತ ಅಂದ್ರೆ ಮೋದಿ.." ಎಂದು ಹೇಳುತ್ತಾ ತನ್ನ ನಾನ್ ಸ್ಟಾಪ್ ಹರಿಕತೆಯನ್ನು ನಿಲ್ಲಿಸಿದ ಪುಂಗಣ್ಣಾ ಎರಡು ನಿಮಿಷ ಮೌನ ತಾಳಿ ತನ್ನ ಪುಂಗಿಯ ಪ್ರಭಾವ ಯಾರ ಮೇಲೆ ಎಷ್ಟಾಗಿದೆ ಎಂದು ಗಮನಿಸತೊಡಗಿದ. ಅವರ ಭಾಷಣ ಮುಗಿಯುವುದನ್ನೇ ಕಾಯುತ್ತಿದ್ದ ಭಕ್ತನೊಬ್ಬ
" ವಿಶ್ವಗುರು ಮೋದೀಜೀಕೀ" ಎಲ್ಲರೂ "ಜೈ",
ಮೋದಿ ಭಕ್ತ ಹೆಂಗ್ ಪುಂಗ್ ಲೀಕಿ" ಎಲ್ಲರೂ " ಜೈ" , ಎನ್ನುತ್ತಾ ಪುಂಗಲೀಯನ್ನು ತಮ್ಮ ಹೆಗಲಮೇಲೆ ಹೊತ್ತುಕೊಂಡು ಜೈಕಾರ ಕೂಗುತ್ತಾ ಭಕ್ತಗಣ ಹೊರಟಿತು.
ಸುಬ್ಬಣ್ಣನಿಗೆ ಜೋರಾಗಿ ಮಳೆ ಬಂದು ನಿಂತಂತಾ ಅನುಭವವಾಯಿತು.ಇನ್ನೂ ಒಂದೆರಡು ಪ್ರಶ್ನೆ ಕೇಳಬೇಕೆಂದಿದ್ದವನಿಗೆ ಹೊಟ್ಟೆ ಚುರುಗುಟ್ಟತೊಡಗಿತು. ಡಬಲ್ ಡಿಗ್ರಿ ಮಾಡಿದ ವ್ಯಕ್ತಿಯೊಬ್ಬ ಮೋದೀಜಿಯವರ ಆತ್ಮನಿರ್ಭರ ಮಾತಿನಿಂದ ಪ್ರಭಾವಿತನಾಗಿ ಮೂಲೆಯಲಿ ಪಕೋಡಾ ಅಂಗಡಿ ಇಟ್ಟುಕೊಂಡು ಮಾರಿ ಬದುಕುತ್ತಿದ್ದ. ಅಲ್ಲಿಗೆ ಹೋದ ಸುಬ್ಬಣ್ಣ ಎರಡು ಪ್ಲೇಟ್ ಪಕೋಡಾ ತಿಂದು ಹೊಟ್ಟೆ ತುಂಬಾ ನೀರು ಕುಡಿದು ಅಲ್ಲಿಯೇ ಹಾಕಿದ್ದ ಚೌಕೀದಾರನ ಪೊಟೋಗೆ ನಮಸ್ಕರಿಸಿ ಡಬಲ್ ಡಿಗ್ರೀ ಹೋಲ್ಡರ್ ಹುಡುಗನನ್ನು ಪಕೋಡಾ ಮಾರುವಂತೆ ಮಾಡಿದ ಪವಾಡಕ್ಕೆ ಮಾರುಹೋದ.
- ಶಶಿಕಾಂತ ಯಡಹಳ್ಳಿ