ಮಂಗಳವಾರ, ಫೆಬ್ರವರಿ 1, 2022

ಮುನಿಸಿಗೂ ಇರಲಿ ಘನತೆ

ಮುನಿಸಿಗೂ ಇರಲಿ ಘನತೆ      (ಕವಿತೆ)

--------------------------------------

ಏನಿದು ಚಿಕ್ಕಪುಟ್ಟದ್ದಕ್ಕೆಲ್ಲಾ ಹೀಗೆ ಆಗಾಗ

ಮುಖ ಗಂಟಿಕ್ಕಿ ಬೆನ್ನು ತಿರುಗಿಸದಿರು

ಬದುಕನ್ನೇ ಹಿಂಡಿ ಸಾಗಿಸಬೇಕಿದೆ ಸಂಸಾರದ ಬಂಡಿ 

ಮುನಿಸಿಗೂ ಒಂದು ಘನತೆ ಇರಲಿ..


ದಿನಸಿ ಧಾನ್ಯಗಳ ಮೌಲ್ಯ ಇಳಿಸಿ 

ರೈತರ ಕೊಂದರು

ಇದ್ದಕ್ಕಿದ್ದಂತೆ ಬೆಲೆ ಏರಿಸಿ ಗ್ರಾಹಕರ

ಬೆನ್ನಿಗೆ ಭಾರ ತಂದರು

ದಲ್ಲಾಳಿ ದಗಲ್ಬಾಜಿಗಳ ಬಿಟ್ಟು ತುಸುವೇ 

ದಿನಸಿ ತಂದೆನೆಂದೇಕೆ ಸಿಟ್ಟು ಬಿಟ್ಟು ಬಿಡು

ಮುನಿಸಿಗೂ ಒಂದು ಘನತೆ ಇರಲಿ..


ಶ್ರಮದ ಬೆಲೆ ಇಳಿಸಿ ತೈಲಗಳ ಬೆಲೆ ಏರಿಸಿದವರ 

ಮೇಲಿರಲಿ ಸುಡುಬೆಂಕಿಯಂತಹ ಕೋಪ

ಇದ್ದುದರಲ್ಲಿ ಸಂಸಾರ ಸಾಗಿಸೋಣವೆಂದರೆ ಯಾಕಿಂತಾ ಉಗ್ರ ಪ್ರತಾಪ

ನೆನಪಿರಲಿ ನಾನಿಲ್ಲಿ ಬರೀ ಪಾತ್ರ

ಆಳುವ ಅಪಾತ್ರರ ಕೈಲಿದೆ ಸೂತ್ರ

ಸೂತ್ರವ ಬಿಟ್ಟು ಪಾತ್ರದ ಮೇಲೇಕೆ ಆಕ್ರೋಶ

ಮುನಿಸಿಗೂ ಒಂದಿಷ್ಟು ಘನತೆ ಇರಲಿ..


ಮಾನವೀಯ ಮೌಲ್ಯಗಳು ಇಳಿದು 

ಸಂಬಂಧಗಳಲಿ ಸ್ವಾರ್ಥ ಬೆಳೆದು

ನಿರಾಸೆ ಹೆಚ್ಚಾದಲ್ಲಿ ನನ್ನ ಪಾತ್ರ ಇಲ್ಲವಾದರೂ 

ಹೀಗೆಲ್ಲಾ ಮಾತು ಬಿಟ್ಟು ದುರುಗುಟ್ಟದಿರು 

ಮುನಿಸಿಗೂ ಒಂಚೂರು ಘನತೆ ಇರಲಿ..


ಸತ್ಯವೇ ದೈವ ಅರಿತುಕೋ ವಾಸ್ತವ 

ಉದ್ಯೋಗ ಕೊಡುವ ಭರವಸೆ ಇತ್ತವರು 

ಇದ್ದದ್ದನ್ನೂ ಕಿತ್ತುಕೊಂಡರು

ಕಪ್ಪುಹಣ ತಂದು ಖಾತೆಗೆ ಹಾಕುತ್ತೇನೆಂದವರು

ತೆರಿಗೆಯ ಹೆರಿಗೆಯ ನೆಪದಲಿ

ಕೂಡಿಟ್ಟಿದ್ದನ್ನೂ ಎತ್ತಿಕೊಂಡರು


ಬ್ರಹ್ಮ ರಾಕ್ಷಸರ ಬಿಟ್ಟು ಗುಬ್ಬಿಯ ಮೇಲೇಕೆ ಬ್ರಹ್ಮಾಸ್ತ್ರ

ವ್ಯರ್ಥ ಮುನಿಸು ಮೂಟೆ ಕಟ್ಟಿಡು ಮೂಲೆಯಲಿ

ಮನುಜರಾದವರ ಮುನಿಸಿಗೂ ಅರ್ಥ ಇರಲಿ.


- ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ