ಮಂಗಳವಾರ, ಫೆಬ್ರವರಿ 1, 2022

ಬ್ರಹ್ಮಾಂಡ ಬೇಸಾಯ ಪ್ರಹಸನ

 ಬ್ರಹ್ಮಾಂಡ ಬೇಸಾಯ ಪ್ರಹಸನ

***************************


ಎರಡು ತಿಂಗಳ ಹಿಂದಷ್ಟೇ ಸಾಲ ಮಾಡಿ ಬೆಳೆದ ಬತ್ತದ ಬೆಳೆ  ಕೈಗೆ ದಕ್ಕದೇ ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದಿದ್ದ ಸಂಕ್ರ ಇವತ್ತು ಖುಷಿಯಿಂದ ಕುಣಿಯುತ್ತ ಬಂದ.

"ಯಾಕ್ಲೆ ಸಂಕ್ರ ಹೀಗಾಡ್ತಿದ್ದೀ.. ಸಾಲ ಮಾಡಿ ಸಾಯೋರಿಗೆ ಸರಕಾರ ಭಾರೀ ಪರಿಹಾರ ಏನಾದ್ರೂ ಘೋಷಣೆ ಮಾಡಿದೆಯಾ?" ಎಂದು ಯಂಕ ಕಾಲೆಳೆದ.

"ಇಲ್ಲಾ ಕಣಣ್ಣೋ.. ಬತ್ತದ ಇಳುವರಿ ಹೆಚ್ಚಾಗಿಸೋ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ.. ಅದಕ್ಕೆ ಖುಸಿ ಅಷ್ಟೇಯಾ?" ಎಂದು ಕಣ್ಣರಳಿಸಿದ ಸಂಕ್ರ. 

"ಅದೇನಪ್ಪಾ ಅಂತಾ ಅಸ್ತ್ರ ನಂಗೂ ಹೇಳಲೇ ಮೊದಲು ಆಮ್ಯಾಗೆ ಕುಣಿಯೋವಂತೆ" ಎಂದು ಕುತೂಹಲಿಯಾದ ಯಂಕ.

" ಅದೇ ಯಂಕಣ್ಣಾ.. ಬತ್ತದ ಗದ್ದೇಲಿ ವೇದ ಮಂತ್ರ ಪಠಣ ಮಾಡಿದ್ರೆ ಇಳುವರಿ ಜಾಸ್ತಿ ಆಗ್ತದಂತಣ್ಣೋ" ಏನನ್ನೋ ಹೊಸದು ಕಂಡು ಹಿಡಿದಂತೆ ಕಣ್ಣರಳಿಸಿ ಕೂಗಿದ ಸಂಕ್ರ.

"ಯಾವನಲೇ ಹಂಗಂತ ಹೇಳಿದ್ದು ಅಡ್ಡಕಸಬಿ ನನಮಗನೇ ಮಂತ್ರಕ್ಕೆ ಮಾವಿನ ಹಣ್ಣು ಉದರಿದಂತೆ ಮಾತಾಡ್ತಿಯಲ್ಲಲೇ ನಾನ್ಸೆನ್ಸ್" ಎಂದು ಗದರುವಷ್ಟರಲ್ಲೇ ಸಂಕ್ರ

" ಇಲ್ನೋಡಣ್ಣಾ ಪೇಪರಿನಾಗೆ ಬಂದೈತೆ. ಅವರಿವರು ಹೇಳಿದ್ರೆ ನಂಬೋ ಮಗಾನೇ ಅಲ್ಲಾ ನಾನು. ಗೋವಾದ ಕೃಷಿ ಮಂತ್ರಿ ಅದೆಂತದೋ ಅವರ ಹೆಸರು ಹಾಂ ವಿಜಯ್ ಸರ್ದೇಸಾಯಿ ಹೇಳಿದ್ದಾರಪ್ಪೋ. ಮಂತ್ರ ಹೇಳೋ ತಂತ್ರದಿಂದ ಬತ್ತ ಬೆಳೆಯೋದಕ್ಕೆ ಬ್ರಹ್ಮಾಂಡ ಬೇಸಾಯ ಅಂತಾ ಹೆಸರು ಬೇರೆ ಇಟ್ಟು ಈ ಬ್ರಹ್ಮಾಂಡ ಯೋಜನೆ ಉದ್ಘಾಟನೆಯನ್ನೂ ಮಾಡಿದ್ದಾರಂತೆ.. ನಾನೇನಾದ್ರೂ ಸುಳ್ಳ ಹೇಳಿದ್ರೆ ಓದು ಪೇಪರ್ನ.." ಎಂದ ಸಂಕ್ರನ ಮಾತು ಕೇಳಿ ನ್ಯೂಜ್ ಪೇಪರ್ನಲ್ಲಿ ಬಂದದನ್ನ ಓದಿದ ಯಂಕ

" ಬ್ರಹ್ಮಾಂಡ ಅಂತೆ ಬ್ರಹ್ಮಾಂಡ ನಿಮ್ಮಜ್ಜಿ ಪಿಂಡ. ಮಂತ್ರಕ್ಕೆ ಇಳುವರಿ ಬರ್ತದಾ. ಹಂಗಾರೆ ಮಡಿ ಮಾಡಿ ನೀರು ಗೊಬ್ಬರ ಕೊಡೋದು ಬೇಡ್ವಾ. ಆ ಮಂತ್ರಿ ಏನು ಕೃಷಿ ವಿಜ್ಞಾನಿಯಾ ಅಧ್ಯಯನ ಮಾಡಿ ಹೇಳೋಕೆ?" ಎಂದು ಗದರಿದ ಯಂಕನ ಮಾತು ಕೇಳಿ ಸಂಕ್ರನ ಸಂತಸ ಸರ್ರಂತ ಇಳಿದು ಮುಖ ಬಾಡಿ ಅಯ್ಯೋ ಪಾಪ ಅನಿಸಿತು. ಬೇಸಾಯದಲ್ಲಿ ಸೋತು ಸುಣ್ಣವಾಗಿದ್ದ ಸಂಕ್ರನಿಗೆ ಈ ಬೊಗಳೇ ಬ್ರಹ್ಮಾಂಡ ಯೋಜನೆ ಮುಳುಗುತ್ತಿದ್ದವನಿಗೆ ಹುಲ್ಲುಕಡ್ಡಿ ಸಿಕ್ಕಂತಾಗಿತ್ತು. 

ನಿರಾಸೆಯಿಂದ ಮತ್ತೆಲ್ಲಿ ಸಂಕ್ರ ಆತ್ಮಹತ್ಯೆ ಮಾಡಿಕೊಳ್ತಾನೋ ಎನ್ನುವ ಆತಂಕದಲ್ಲಿ ಯಂಕ ಸಮಾಧಾನದ ದ್ವನಿಯಲ್ಲಿ

"ಆಯ್ತಪಾ ಸಂಕ್ರಾ ಬ್ರಹ್ಮಾಂಡ ಬೇಸಾಯ ದಿಟ ಅಂತಾನೇ ಇಟ್ಕೋ ಆದರೆ ನಿನ್ನ ಬತ್ತದ ಜಮೀನಿಗೆ ಬಂದು ವೇದ ಮಂತ್ರ ಹೇಳೋರ್ಯಾರು. ನಿನಗೆ ಮಂತ್ರ ಹೇಳೋಕೆ ನಾಲಿಗೆ ತಿರುಗುತ್ತಾ ಇಲ್ವಲ್ಲಾ.. ಪುರೋಹಿತರಿಗೋ ಇಲ್ಲಾ ಅರ್ಚಕರಿಗೋ ಕೇಳಿದಷ್ಟು  ಕಾಣಿಕೆ ಕೊಟ್ಟು ಮಂತ್ರ ಹೇಳಿಸಬೇಕು. ಉರಿಬಿಸಲಲ್ಲಿ ಬಂದು ತಾರಕ ಸ್ವರದಲ್ಲಿ ಹತ್ತೆಕರೆ ಗದ್ದೆ ಸುತ್ತಿ ವೇದ ಮಂತ್ರ ಹೇಳೋ ಪುರೋಹಿತರು ಎಲ್ಲಪ್ಪಾ ಸಿಗ್ತಾರೆ ನಿನಗೆ. ತುಪ್ಪಾ ತಿಂದು ನೆರಳಲ್ಲಿ ತೆಪ್ಪಗೆ ಇರೋ ಬ್ರಾಹ್ಮಣರಿಗೆ ಬಿಸಲಾಗಿಬರ್ತದಾ" ಎಂದು ಪ್ರಶ್ನಿಸಿದ ಯಂಕ.

"ಹೌದಲ್ವಾ.. ನನಗೆ ಈ ಯೊಚನೇನೇ ಬರಲಿಲ್ಲ ನೋಡು. ಮತ್ತೇನು ಮಾಡೋದು ಯಂಕಣ್ಣಾ" ಎಂದು ಆತಂಕದಿಂದ ಮರು ಪ್ರಶ್ನಿಸಿದ ಸಂಕ್ರ.

" ಇದೆಲ್ಲಾ ಆಗಾಕಿಲ್ಲಾ ಹೋಗಾಕಿಲ್ಲ. ಸಗಣಿ ತಿಂದ್ರೆ ಕ್ಯಾನ್ಸರ್ ಗುಣವಾಗುತ್ತೆ, ಗೋಮೂತ್ರ ಕುಡಿದ್ರೆ ಕರೋನಾ ಓಡುತ್ತೆ, ಮಂತ್ರ ಹೇಳಿದ್ರೆ ಬತ್ತದ ಇಳುವರಿ ಹೆಚ್ಚಾಗುತ್ತೆ  ಅಂತೆಲ್ಲಾ ಆಗಾಗ ಈ ಸಂಘಪರಿವಾರದ ಮಂದಿ ಪುಂಗತಾನೇ ಇರ್ತಾರೆ ಸಂಕ್ರಾ.. ಇಂತದ್ದಕ್ಕೆಲ್ಲಾ ವೈಜ್ಞಾನಿಕ ಕಾರಣ ಇರೋದಿಲ್ಲ" ಎಂದ ಯಂಕನ ಮಾತು ಕೇಳಿ ಸಂಕ್ರ ಕುಗ್ಗಿಯೇ ಹೋದ. ಮೊದಲೇ ನೊಂದ ಜೀವ ಮತ್ತೆಲ್ಲಿ ಖಿನ್ನತೆ ಹೆಚ್ಚಾಗಿ ಸಾಯಲು ಪ್ರಯತ್ನಿಸುತ್ತೋ ಎಂದು ಆತಂಕಗೊಂಡ ಯಂಕ 

" ಒಂದು ಕೆಲಸ ಮಾಡು ಸಂಕ್ರ. ಆ ವೇದ ಮಂತ್ರಗಳನ್ನ ಇಂಟರ್ನೆಟನಿಂದ ಡೌನ್‌ಲೋಡ್ ಮಾಡ್ಕೊಂಡು ಮೊಬೈಲ್ ಮೂಲಕ ಸ್ಪೀಕರಿಗೆ ಕನೆಕ್ಷನ್ ಕೊಟ್ಟು ಗದ್ದೆತುಂಬಾ ಬತ್ತದ ಬೆಳೆಗೆ ಕೇಳೋಹಂಗೆ ಜೋರಾಗಿ ರಿಕಾರ್ಡ್ ಹಾಕಿ ನೋಡು, ಇಳುವರಿ ಬರುತ್ತಾ ಇಲ್ವಾ ಅಂತಾ ಗೊತ್ತಾಗುತ್ತೆ. ಮಂತ್ರ ಹಾಕೀನೆಂದು ನೀರು ಗೊಬ್ಬರ ಕೊಡೋದು ಮರೀಬೇಡ. ಏನೇ ಆಗಲಿ ಸಾಯೋ ಬಗ್ಗೆ ಯೋಚನೆ ಮಾತ್ರ ಮಾಡಬೇಡಾ, ಎಲ್ಲಕ್ಕಿಂತಾ ಬದುಕು ದೊಡ್ಡದು ಕಣಾ" ಅಂತಾ ಯಂಕ ಲಕ್ಚರ್ ಕೊಟ್ಟ. 

ಸಂಕ್ರಣ ಮುಖದಲ್ಲಿ ಸಣ್ಣ ಭರವಸೆ ಮೂಡಿದಂತಾಯ್ತು. 

" ಹಂಗೇ ಮಾಡ್ತೀನಿ ಯಂಕಣ್ಣಾ, ಗದ್ದೆಗೆ ವೇದ ಮಂತ್ರದ ಟೇಪ್ ಹಾಕ್ತೀನಿ" ಎನ್ನುತ್ತಾ ಒಂಚೂರು ಮುಖದಲ್ಲಿ ನಗು ಮೂಡಿಸಿಕೊಂಡು ಖುಷಿಯಿಂದಾ ಹೊರಟು ಹೋದ. 

" ಸಧ್ಯ ಅವನ ನಂಬಿಕೆ ಯಾವುದೋ ರೀತಿಯಲ್ಲಿ ನಿಜವಾಗಲಿ. ಮಂತ್ರಕ್ಕೆ ಮಾವಿನಕಾಯಿ ಉದುರುವಂತಾಗಲಿ. ಆತನ ಸಾವಿನ ಸುದ್ದಿ ಎಂದೂ ಬರದಿರಲಿ" ಎಂದುಕೊಂಡ ಯಂಕಣ್ಣಾ ಬ್ರಹ್ಮಾಂಡ ಬೇಸಾಯದ ರಹಸ್ಯ ಅರಿಯಲು ಇಂಟರ್ನೆಟ್ ಓಪನ್ ಮಾಡಿದ.


- ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ