ಮಂಗಳವಾರ, ಫೆಬ್ರವರಿ 1, 2022

ಸೀನನ ನಿರುದ್ಯೋಗ ಪ್ರಹಸನ

 ಸೀನನ ನಿರುದ್ಯೋಗ ಪ್ರಹಸನ

***************************


ಬಜೆಟ್ ಮಂಡನೆ ಶುರುವಾದಾಗಿಂದ ಸೀನ ಟಿವಿ ಮುಂದೇ ಕುಳಿತು ಕಾಯ್ತಾ ಇದ್ದ. ಸರಿಸುಮಾರು 40 ಲಕ್ಷ ಕೋಟಿ ಬಜೆಟ್ನಲ್ಲಿ ತನಗೇನಾದರೂ ಅಲ್ಪಸ್ವಲ್ಪ ದಕ್ಕಬಹುದೆನೋ ಎಂಬ ದೂರಗಾಮಿ ಆಸೆ ಅವನದು. ನ್ಯೂಜ್ ಚಾನೆಲ್ ಬದಬದಲಿಸಿ ನೋಡಿದರೂ ಎಲ್ಲಿಯೂ ನಿರುದ್ಯೋಗಿಗಳ ಕುರಿತ ಪ್ರಸ್ತಾಪವೇ ಇರಲಿಲ್ಲ. ಏಳೆಂಟು ವರ್ಷಗಳ ಹಿಂದೆ ವರ್ಷಕ್ಕೆರಡು ಕೋಟಿ ಉದ್ಯೋಗ ಸೃಷ್ಟಿ ಎನ್ನುವ ಪ್ರಧಾನಿಗಳ ಭರವಸೆ ಆದಷ್ಟು ಬೇಗ ನಿರಾಸೆ ತಂದಿತ್ತು. ಕರೋನಾ ನೆಪದಲ್ಲಿ ಇರುವ ಉದ್ಯೋಗವೂ ಹೊರಟುಹೋಗಿತ್ತು. ನಿರುದ್ಯೋಗಿಯಾಗಿ ಮನೆಗೆ ಹೊರೆಯಾಗಿ ಅಂಡಲೆಯುತ್ತಿದ್ದ ಸೀನನಿಗೆ ಈ ವರ್ಷದ ಬಜೆಟ್ ಮೇಲೆ ಒಂಚೂರು ಭರವಸೆ ಇದ್ದಿದ್ದೂ ನಿರಾಸೆಯಾಯಿತು. ಮುಂದೇನು ಶಿವನೇ ಅಂತಾ ತಲೆ ಮೇಲೆ ಹೊತ್ತು ಆಲದ ಮರದ ಕಟ್ಟೆ ಮೇಲೆ ಕುಳಿತು ಆಕಾಶ ನೋಡುತ್ತಿದ್ದ. ಇದನ್ನು ನೋಡಿದ ನಾಣಿ

" ಏನ್ಲಾ ಸೀನಾ.. ಹಿಂಗ್ಯಾಕಲಾ ಹೆಂಡತಿ ಸತ್ತೋರಂಗ, ಆಕಾಶ ತಲೆ ಮೇಲೆ ಬಿದ್ದಂಗೆ ಕೂತಿದ್ದೀಯಾ, ಹೋಗ್ಲಾ ಬಜೆಟ್ ಸುದ್ದಿ ನೋಡ್ಲಾ.. ಆಹಾ ಎಷ್ಟೊಂದು ದೂರದೃಷ್ಟಿ, ಎಂತಹ ದೇಶಪ್ರೇಮಾ.." ಹೀಗೆ ಇನ್ನೂ ಏನೇನೋ ಹೇಳುವುದರಲ್ಲಿದ್ದ ನಾಣಿಯನ್ನು ದುರುಗುಟ್ಟಿ ನೋಡಿದ ಸೀನಾ

" ಏನ್ಲಾ ದೂರದೃಷ್ಟಿ ನಿನ್ನಜ್ಜಿ ಪಿಂಡಾ. ಕೈಗೆ ಕೆಲಸಾ ಇಲ್ದೆ ನಮ್ಮಂತೋರು ದಿನಾಲೂ ಸಾಯ್ತಿದ್ದೀವಿ. ನಮ್ಮಂತೋರಿಗೆ ಏನೈತೆ ಬಜೆಟ್ನಾಗೆ ಬದ್ನೇಕಾಯಿ" ಸಿಟ್ಟಿನಿಂದ ಕಿರುಚಿದ ಸೀನ.

" ಸ್ವಾರ್ಥಿ ಕಣ್ಲಾ ನೀನು. ದೇಶಕ್ಕೆ ಏನು ಲಾಭ ಅಂತಾ ನೋಡೋದು ಬಿಟ್ಟು ನಿನಗೆಂತಹ ಲಾಭ ಅಂತಾ ಕೇಳ್ತಿಯಾ. ನೋಡಲೇ ರಕ್ಷಣೆಗೆ ಐದೂ ಕಾಲು ಲಕ್ಷ ಕೋಟಿ ಕೊಟ್ಟಿದ್ದಾರೆ ಗೊತ್ತೇನ್ಲಾ" ಎನ್ನುವಷ್ಟರಲ್ಲಿ ಸೀನ ಅಡ್ಡಬಾಯಿ ಹಾಕಿದ

" ರಕ್ಷಣೆ ಯಾರಿಗ್ಲಾ, ಜನರಿದ್ದರೆ ರಕ್ಷಣೆ.. ಹೀಗೇ ನಿರುದ್ಯೊಗಿಗಳು ಅನ್ನದಾತರು ಆತ್ಮಹತ್ಯೆ ಮಾಡಿಕೊಂಡು ಸತ್ತರೆ ಯಾರಿಗಲಾ ರಕ್ಷಣೆ, ರಕ್ಷಣೆ ಹೆಸರಿನ ಹುಲ್ಲುಗಾವಲಲ್ಲಿ ಮೇಯುವವರು ಇದೇ ಆಳುವವರು ಅಲ್ವೇನ್ಲಾ. ಮೊದಲು ಓದಿದವರಿಗೆ ತಕ್ಕ ಉದ್ಯೋಗ ಕೊಡಲಿ ಆಮೇಲೆ ರಕ್ಷಣೆ ಮಾಡ್ಕೊಳ್ಳಲಿ ನಮ್ಮ ಕಷ್ಟ ನಮಗೆ.." ಗೊಣಗತೊಡಗಿದ ಸೀನ.

" ಅಲ್ಲಲೇ ಸೀನಿ ದೇಶ ದೊಡ್ಡದಾ ಇಲ್ಲಾ ನಿನ್ನ ಉದ್ಯೊಗ ದೊಡ್ಡದಾ, ದೇಶ ಇದ್ದರೆ ನೀನು ನಿನ್ನ ಉದ್ಯೋಗ ಅಲ್ವೇನ್ಲಾ." ಎಂದೆನ್ನುವಷ್ಟರಲ್ಲಿ ಸಿಟ್ಟಿಗೆದ್ದ ಸೀನ

" ನಿಲ್ಲಸ್ಲಾ ನಿನ್ನ ಭಾಷಣವಾ.. ಇಂತಾ ಮಾತಗಳನ್ನಾ ಹೇಳಿ ಹೇಳಿ ಯಾಮಾರಸ್ತಾನೇ ಬಂದವ್ರೆ. ದೇಶದ ಜನ ಸುಖವಾಗಿದ್ರೆ ದೇಶ ಸಮೃದ್ದವಾಗಿರೋದು ತಿಳ್ಕೋ. ಇಡೀ ದೇಶಕ್ಕೆ ದೇಶವನ್ನೇ ಕಾರ್ಪೋರೇಟ್ ಕಂಪನಿಗಳಿಗೆ ದೇಶ ಆಳುವವರು ಮಾರ್ತಿರುವಾಗ ಅವರಿಗೆ ಜನರ ಚಿಂತೆ ಹೆಂಗ್ಲಾ ಇದ್ದೀತು. ಕೈಗೊಂದು ಕೆಲ್ಸಾ ಕೊಡಿ ಅಂತಾ ಕೇಳಿದ್ರೆ ಪಕೋಡಾ ಮಾರಿ ಅಂತಾರೆ. ಎಲ್ಲರೂ ಪಕೋಡಾ ಮಾರಿದ್ರೆ ಕೊಂಡು ತಿನ್ನೋರ್ಯಾರಲಾ? 

ಪ್ರತಿ ಬಜೆಟಲ್ಲೂ ಲಕ್ಷಾಂತರ ಕೋಟಿ ಕೃಷಿ ಬಜೆಟ್ಟು, ಅದಷ್ಟೂ ಅನ್ನದಾತರಿಗೆ ದಕ್ಕಿದ್ರೆ ಯಾಕ್ಲಾ ರೈತರು ಆತ್ಮಹತ್ಯೆ ಮಾಡ್ಕೋತಿದ್ರು, ಖಾಲಿಪುಕ್ಸಟ್ಟೆ ಮಾತು ಬಿಟ್ಟು ಸುಮ್ಕೆ ಮುಂದಕ್ಕೆ ಹೋಗಲಾ" ಎಂದು ಹೊಟ್ಟಲಿರೋ ಸಿಟ್ಟನ್ನೆಲ್ಲಾ ಬಾಯಿಗೆ ತಂದು ರೇಗಿದ ಸೀನ.

"ಯಾಕ್ಲಾ ರೇಗ್ತಿಯಾ ಸೀನಾ, ಪುಕ್ಸಟ್ಟೆ ಅಕ್ಕಿ ಕೊಡ್ತಾ ಇಲ್ವಾ ಸರಕಾರ, ಆಗಾಗ ಗೋದಿ ಸಕ್ಕರೇನೂ ಕೊಡ್ತಾರಲ್ವೆನೋ. ಸರಕಾರ ಕೂಲಿ ಕೆಲ್ಸಾನೂ ಕೊಡ್ತದಲ್ವಾ, ಆದರೂ ಯಾಕಪ್ಪ ಸಿಟ್ಟು ಸ್ವಲ್ಪ ಶಾಂತವಾಗು ಮಾರಾಯಾ" ಎಂದು ರಮಿಸತೊಡಗಿದ ನಾಣಿ. ಇದರಿಂದ ಇನ್ನಷ್ಟು ಕೆರಳಿದ ಸೀನ

"ಯಾವತ್ತಾದ್ರೂ ರೇಶನ್ ಅಕ್ಕಿ ತಿಂದೀಯೇನ್ಲಾ. ಮನುಷ್ಯರು ತಿನ್ನೋಕಾಯ್ತದಾ ಅವನ್ನ. ಭಿಕ್ಷೆ  ಹಾಕದಂಗೆ ಹಾಕ್ತಾರೆ. ಕೆಲಸ ಅಂತೆ ಕೆಲಸ.. ಲೇ ಡಿಗ್ರಿ ಓದಿರೋ ನಮಗೆ ಗುಡ್ಡದಲ್ಲಿ ತಗ್ಗು ತೆಗೆಯೋ ಕೆಲಸ ಕೊಡ್ತಾರಂತೆ. ಓದಿಗೂ ಒಂದಿಷ್ಟಾದರೂ ಬೆಲೆ ಇಲ್ವಾ. ತೆರಿಗೆ ಕಟ್ಟಿಸ್ಕೊಂಡು ಹಿಂಗೆ ಶೋಷಣೆ ಮಾಡ್ತಾರಲ್ಲಾ ಏನ್ ತಗೊಂಡು ಹೊಡೀಬೇಕು ಹೇಳು ಆಳೋವವರಿಗೆ" ಎಂದರಚಿದ ಸೀನನ ಮಾತು ಕೇಳಿ ಅಚ್ಚರಿಗೊಂಡ ನಾಣಿ

" ತಿನ್ನೋಕು ಗತಿಯಿಲ್ಲದ ನಿರುದ್ಯೋಗಿ ನನಮಗಾ ನೀನು ಯಾವಾಗ್ಲಾ ತೆರಿಗೆ ಕಟ್ತಿಯಾ? ತೆರಿಗೆ ಕೊಡೋರು ಶ್ರೀಮಂತರು ನಾವಲ್ಲವಲ್ಲಾ, ಅದ್ಕೆ ಸರಕಾರ ಕೊಟ್ಟಷ್ಟು ತಗೊಂಡು ಮುಚ್ಕೊಂಡಿರಬೇಕು ಮಗಾ, ಜಾಸ್ತಿ ಮಾತಾಡಿದ್ರೆ ಕೊಡೋ ರೇಶನ್ನೂ ನಿಲ್ಲಿಸಿ ಬಿಡ್ತಾರೆ ಹುಷಾರು" ಎಂದು ದಮಕಿ ಹಾಕಿದ ನಾಣಿ.

" ಈ ದೇಶದಲ್ಲಿರೋ ಶ್ರೀಮಂತರಿಗಿಂತಾ ಹೆಚ್ಚು ತೆರಿಗೆ ಕಟ್ಟೋರು ನಾವು ಬಹುಸಂಖ್ಯಾತ ದುಡಿಯೊ ಜನಗಳು ಕಣ್ಲಾ. ಈ ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಬಡಮಧ್ಯಮ ವರ್ಗದ ಜನತೆ ಕಟ್ಟುವ ಪರೋಕ್ಷ ತೆರಿಗೆ ಎಷ್ಟು ಗೊತ್ತಾ? ಶೇಕಡಾ 63. ಎಲ್ಲಾ ಶ್ರೀಮಂತರೂ ಸೇರಿ ಕಟ್ಟುವ ತೆರಿಗೆ ಕೇವಲ ಶೇಕಡ 37. ಹಂಗ್ಯಾಕೆ ಕಣ್ಣು ಬಾಯಿ ಬಿಟ್ಕೊಂಡು ನೋಡೀಯಾ? ನಾವು ಕೊಳ್ಳುವ ಪೇಸ್ಟು, ಸಾಬೂನು, ಚಪ್ಪಲಿ, ಬಟ್ಟೆ ಅಷ್ಟೇ ಯಾಕೆ ಪರ್ಚೇಜ್ ಮಾಡುವ ಎಲ್ಲಾ ಸಾಮಾನುಗಳೂ ತೆರಿಗೆ ಸೇರಿಸಿಯೇ ಮಾರಲ್ಪಡುತ್ತವೆ ಅಲ್ವೆನಲೇ. ಅವುಗಳನ್ನು ಕೊಳ್ಳುವ ನಾವು ಕೊಟ್ಯಾಂತರ ಜನ ಪರೋಕ್ಷವಾಗಿ ಪ್ರತಿದಿನ ತೆರಿಗೆ ಕಟ್ತಾನೇ ಇರ್ತೀವಿ ಅನ್ನೋದು ತಿಳ್ಕೋ ಮೊದಲು" ಎಂದು ಜಾಡಿಸಿದ ಸೀನ.

" ಹೌದಲ್ಲಲೇ ನನಗಿದು ಗೊತ್ತೇ ಆಗಲಿಲ್ಲ ನೋಡು. ಹಂಗಾದ್ರೆ ನಾವೂ ತೆರಿಗೆ ಪಾವತಿದಾರರೇ ಅಂದಂಗಾತು. ಎಲ್ಲದರ ಮೇಲೂ ನಮಗೂ ಪಾಲು ಹಕ್ಕು ಇದೆ ಅಂದಂಗಾತು. ಬಾರಲೇ ಸೀನಾ ಸಿಎಂ, ಪಿಎಂ ಅಷ್ಟೇ ಯಾಕೆ ರಾಷ್ಟ್ರಪತಿಗೂ ಪತ್ರ ಬರಿಯೋಣ, ಈಮೇಲ್ ಕಳಿಸೋಣ. ಪ್ರತಿಯೊಬ್ಬ ಜನಪ್ರತಿನಿಧಿಗಳ ಮನೆ ಮುಂದೆ ಧರಣಿ ಕೂಡೋಣ. 'ಉದ್ಯೋಗ ಕೊಡಿ ಇಲ್ಲಾ ಉದ್ಯೋಗ ಬತ್ಯೆ ನೀಡಿ' ಚಳುವಳಿ ಮಾಡೋಣ" ಎಂದು ಸೀನನ ಕೈಹಿಡಿದು ಮೇಲಕ್ಕೆದ್ದ ನಾಣಿ.

" ಮಾತು ಅಂದ್ರೆ ಇದು, ನಮ್ಮ ಹಕ್ಕಿಗಾಗಿ ನಮ್ಮ ಹೋರಾಟ, ಉದ್ಯೋಗ ಕೊಡಿ" ಎಂದು ಸುಮ್ಮನಾದ ಸೀನನ ಘೋಷಣೆಯನ್ನು " ಉದ್ಯೋಗ ಭತ್ಯೆ ನೀಡಿ" ಎಂದು ಪೂರ್ಣ ಗೊಳಿಸಿದ ನಾಣಿ.


- ಶಶಿಕಾಂತ ಯಡಹಳ್ಳಿ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ