ಸರಿ ಸುಮಾರು 150 ವರ್ಷಗಳ ಹಿಂದೆ ವಿಕಾಸವಾದದ ಮೂಲಕ ಜೀವ ಉಗಮದ ಕುರಿತು ವೈಜ್ಞಾನಿಕವಾಗಿ ವಿಶ್ಲೇಷಿಸಿ ಜಗದ ಕಣ್ಣು ತೆರೆಸಿದ ಜೀವವಿಜ್ಙಾನಿ ಚಾರ್ಲ್ಸ್ ಡಾರ್ವಿನ್ . 1809 ಫೆಬ್ರವರಿ 12 ರಂದು ಇಂಗ್ಲೆಂಡಿನಲ್ಲಿ ಜನಿಸಿದ ಡಾರ್ವಿನ್ ಹೆತ್ತವರ ಇಚ್ಚೆಯಂತೆ ಕಲಿಯುತ್ತಿದ್ದ ವೈದ್ಯಕೀಯ ಶಿಕ್ಷಣವನ್ನು ಅರ್ಧಕ್ಕೆ ಕೈಬಿಟ್ಟು ತನ್ನಿಚ್ಚೆಯಂತೆ ತನ್ನ ಆಸಕ್ತಿಯನ್ನು ಕೆರಳಿಸಿದ ಜೀವ ಸಂಕುಲದ ಮೂಲದ ಶೋಧಕ್ಕೆ ತನ್ನ ಬದುಕನ್ನೇ ಮೀಸಲಿಟ್ಟ ನಿಸರ್ಗತಜ್ಞ. ಡಾರ್ವಿನ್ ಸ್ಮರಣೆಗಾಗಿ 1990 ರಿಂದ ಪ್ರತಿವರ್ಷ ಫೆಬ್ರವರಿ 12 ರಂದು ಡಾರ್ವಿನ್ ದಿನವನ್ನು (ಡಾರ್ವಿನ್ ಡೇ) ಎಂದು ಆಚರಿಸಲಾಗುತ್ತದೆ.
ಡಾರ್ವಿನ್ 1831 ರಿಂದ 5 ವರ್ಷಗಳ ಕಾಲ ಬೀಗಲ್ ಎಂಬ ಹಡಗಿನಲ್ಲಿ ವಿಶ್ವ ಪರ್ಯಟನೆ ಮಾಡಿ ಜೀವವಿಕಾಸದ ಕುರಿತು ಸಂಶೋಧನೆ ಮಾಡಿದರು. ನೈಸರ್ಗಿಕ ಆಯ್ಕೆ, ಬಲವಿದ್ದವು ಬದಕುತ್ತಾವೆ, ಬದುಕಿಗಾಗಿ ಹೋರಾಟ ಮುಂತಾದ ವಿಕಾಸವಾದದ ಸಿದ್ಧಾಂತಗಳನ್ನು ಸಂಶೋಧಿಸಿ ನಿಖರವಾದ ಆಧಾರಗಳಿಂದ ಸಾಬೀತುಗೊಳಿಸಿದರು. ಭೂಮಿಯ ಮೇಲಿನ ಪ್ರತಿಯೊಂದು ಜೀವಿಯೂ ಅನೇಕ ರೂಪಾಂತರಗಳಿಗೆ ಒಳಗಾಗಿದೆ ಎಂಬುದರ ಬಗ್ಗೆ ‘ಆನ್ ದಿ ಆರಿಜಿನ್ ಆಫ್ ಸ್ಪೀಶೀಸ್’ ಪುಸ್ತಕದಲ್ಲಿ ಡಾರ್ವಿನ್ ದಾಖಲಿಸಿದರು.
ಆದರೆ.. ಡಾರ್ವಿನ್ ರವರ ಜೀವವಿಕಾಸವಾದವು ಧಾರ್ಮಿಕ ನಂಬಿಕೆಯ ಅಡಿಪಾಯವನ್ನೇ ಅಲ್ಲಾಡಿಸಿತು. ಈ ಜಗದ ಎಲ್ಲವೂ ದೈವಸೃಷ್ಟಿ ಎಂದು ನಂಬಿಸಿಕೊಂಡೇ ಬಂದಿದ್ದ ಧಾರ್ಮಿಕ ಪಂಥಗಳ ನಂಬಿಕೆಯನ್ನು ಬುಡಮೇಲು ಮಾಡಿದ್ದು ಡಾರ್ವಿನ್ ಸಿದ್ದಾಂತ. ಭೂಮಿಯ ಮೇಲಿರುವ ಜೀವಪ್ರಭೇಧಗಳು ಯಥಾಪ್ರಕಾರ ಈಗಿರುವಂತೆಯೇ ಸೃಷ್ಟಿಗೊಂಡಿದ್ದಲ್ಲ, ಅವುಗಳೆಲ್ಲವೂ ಕಾಲಾಂತರದಲ್ಲಿ ರೂಪಾಂತರ ಹೊಂದುತ್ತಾ ಬಂದಿವೆ ಎಂಬುದನ್ನು ಡಾರ್ವಿನ್ ವೈಜ್ಙಾನಿಕವಾಗಿ ಸಾಬೀತುಪಡಿಸಿದಾಗ ಪುರೋಹಿತಶಾಹಿ ಕುಲ ಬೆಚ್ಚಿಬಿದ್ದಿತು. ಪ್ರಭಾವಶಾಲಿ ಧಾರ್ಮಿಕ ಕೇಂದ್ರಗಳಾಗಿದ್ದ ಚರ್ಚ್ ಗಳು ತಿರುಗಿಬಿದ್ದವು. ಆದರೆ.. ಡಾರ್ವಿನ್ ವಿಕಾಸವಾದ ವೈಜ್ಞಾನಿಕವಾದ ಸತ್ಯಪ್ರತಿಪಾದನೆಯನ್ನು ಮಾಡಿದ್ದರಿಂದ ಚರ್ಚ್ ಗಳ ಪ್ರತಿಭಟನೆಗೆ ಅರ್ಥವಿರಲಿಲ್ಲ. ಆದರೆ ಡಾರ್ವಿನ್ ವಾದವನ್ನು ವಿರೋಧಿಸುವ ಪ್ರಯತ್ನವನ್ನು ಅಂದಿನಿಂದ ಇಂದಿನವರೆಗೂ ಪುರೋಹಿತಶಾಹಿ ಸಂಕುಲ ಕೈಬಿಟ್ಟಿಲ್ಲ.
ಅದರ ಮುಂದುವರಿಕೆಯ ಭಾಗವಾಗಿಯೇ ಭಾರತದ ಬಲಪಂಥೀಯ ಸರಕಾರವು ಡಾರ್ವಿನ್ ಜೀವವಿಕಾಸದ ಕುರಿತ ಪಠ್ಯವನ್ನೇ ಕೈಬಿಟ್ಟಿದೆ. NCERT ಯು ಕೇಂದ್ರೀಯ ಪಠ್ಯಪುಸ್ತಕದಲ್ಲಿದ್ದ ಜೀವವಿಕಾಸದ ಕುರಿತಾದ ಪಾಠವನ್ನು ತೆಗೆದುಹಾಕಿದೆ. ಯಾವಾಗ ಇದು ವಿವಾದವಾಯಿತೋ ಆಗ ಪಠ್ಯ ಸರಳೀಕರಣದ ಭಾಗವಾಗಿ ಈ ಕ್ರಮ ಎಂದು ಸಬೂಬು ಹೇಳಲಾಗಿದೆ. ತೆಗೆದು ಹಾಕಲೇಬೇಕೆಂದಿದ್ದರೆ ಬೇರೆ ಪಾಠಗಳಿರಲಿಲ್ಲವೇ? ವಿದ್ಯಾರ್ಥಿಗಳಿಗೆ ಸತ್ಯದರ್ಶನವನ್ನು ಮಾಡಿ ವೈಜ್ಞಾನಿಕ ಚಿಂತನೆಗೆ ಪ್ರೇರೇಪಿಸುವ ಜೀವವಿಕಾಸ ಪಠ್ಯವೇ ಆಗಬೇಕಾಗಿತ್ತಾ.
ಹೌದು.. ಬೇಕಾಗಿತ್ತು. ಯಾಕೆಂದರೆ ಜೀವವಿಕಾಸದ ಪಾಠವು ಸನಾತನ ಮನುಧರ್ಮಶಾಸ್ತ್ರವನ್ನು ಪ್ರಶ್ನಿಸುವಂತಿತ್ತು. ದೈವಸೃಷ್ಟಿ ನಿಯಮದ ಭ್ರಮೆಯನ್ನು ಕಳಚುವಂತಿತ್ತು. ಇಂದಲ್ಲಾ ನಾಳೆ ಈಗಿರುವ ಸಂವಿಧಾನವನ್ನು ಬದಲಿಸಿ ಮನುವಾದಿ ಸಂವಿಧಾನವನ್ನು ಜಾರಿಗೆ ತರುವ ದೂರದೃಷ್ಟಿಯನ್ನು ಹೊಂದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಅದಕ್ಕೆ ಪೂರ್ವಭಾವಿಯಾಗಿ ಮುಂದಿನ ತಲೆಮಾರಿನ ತಲೆಯಲ್ಲಿ ಅವೈಜ್ಞಾನಿಕ ಧರ್ಮಾಧಾರಿತ ಸಂಗತಿಗಳನ್ನು ತುಂಬಬೇಕಾಗಿತ್ತು. ಮಕ್ಕಳು ಜೀವವಿಕಾಸದಂತಹ ಪಾಠಗಳನ್ನು ಕಲಿತು ವೈಜ್ಞಾನಿಕ ಚಿಂತನೆಯನ್ನು ಬೆಳೆಸಿಕೊಂಡರೆ ಪ್ರಶ್ನಿಸುವುದನ್ನು ಕಲಿಯುತ್ತಾರೆ. ಮುಂದೆ ಮನುವಾದಿ ಸಿದ್ದಾಂತವನ್ನೂ ವಿರೋಧಿಸುತ್ತಾರೆ. ಆದ್ದರಿಂದ ಈಗಿನಿಂದಲೇ ಶಾಲೆಯಲ್ಲಿ ಕಲಿಯುವ ಮಕ್ಕಳ ಮನದಲ್ಲಿ ದೈವಸೃಷ್ಟಿಗೆ ಸವಾಲೆಸೆಯುವ ಜೀವವಿಕಾಸದಂತಹ ಪಾಠಗಳ ನೆರಳೂ ಬೀಳದಂತೆ ಮಾಡುವುದು ಆಧುನಿಕ ಪುರೋಹಿತಶಾಹಿಗಳ ತಂತ್ರವಾಗಿದೆ.
ಇದಕ್ಕೆ ಪೂರಕವಾಗಿ ಕೆಲವು ವರ್ಷಗಳ ಹಿಂದೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ “ಡಾರ್ವಿನ್ ವಿಕಾಸವಾದ ವೈಜ್ಞಾನಿಕವಾಗಿ ಸಾಬೀತಾಗಿಲ್ಲ, ಮಂಗನಿಂದ ಮಾನವ ಎನ್ನುವುದನ್ನು ನಮ್ಮ ಪೂರ್ವಜರು ದಾಖಲಿಸಿಲ್ಲ, ಹೀಗಾಗಿ ಶಾಲಾ ಕಾಲೇಜಿನ ಪಠ್ಯದಲ್ಲಿ ಅದು ಬೇಕಾಗಿಲ್ಲ” ಎಂದು ಹೇಳಿ ವಿವಾದವನ್ನು ಹುಟ್ಟುಹಾಕಿದ್ದರು. ಇದು ನಾಗಾಪುರದ ಸಂಘದವರ ಮನದೊಳಿಗಿನ ಮಾತೇ ಆಗಿತ್ತು. ಮಂಗನಿಂದ ಮಾನವ ಎಂದು ಡಾರ್ವಿನ್ ಎಲ್ಲಿ ಹೇಳಿದ್ದಾನೆ? ಅಂತಹುದೊಂದು ಮಾತು ರೂಢಿಗತವಾಗಿ ಬಂದಿದೆ ಅಷ್ಟೇ. ಮಾನವ ಮತ್ತು ಮಂಗಗಳ ಮೂಲ ಒಂದೇ ಅಗಿದ್ದು ಜೀವವಿಕಾಸದ ಹಾದಿಯಲ್ಲಿ ಕವಲೊಡೆದಿದೆ ಎಂಬುದನ್ನು ಜೀವವಿಕಾಸ ಹೇಳುತ್ತದೆ. ಆದರೆ ಈ ಮನುವಾದಿಗಳು ಮಂಗನಿಂದ ಮಾನವ ಎಂಬ ನಂಬಿಕೆಯಲ್ಲೇ ಇದ್ದಾರೆ. ಡಾರ್ವಿನ್ ರ ವಿಕಾಸವಾದವನ್ನು ಇವರು ಎಂದೂ ವೈಜ್ಞಾನಿಕವಾಗಿ ಅಧ್ಯಯನ ಮಾಡಿಯೇ ಇಲ್ಲ. ಮಾಡಿದ್ದರೆ ಇಂತಹ ಅವೈಜ್ಞಾನಿಕ ವಾದವನ್ನು ಮುಂದಿಡುತ್ತಿರಲಿಲ್ಲ.
ದೇವರು ಎಲ್ಲಾ ಜೀವಕುಲವನ್ನು ಈಗಿರುವಂತೆಯೇ ಪ್ರತ್ಯೇಕವಾಗಿ ಸೃಷ್ಟಿಸಿದ್ದಾನೆ ಹಾಗೂ ಮಾನವ ಸೃಷ್ಟಿ ಶ್ರೇಷ್ಠ ಮತ್ತು ವಿಶೇಷವಾಗಿದೆ ಎನ್ನುವುದು ಬಹುತೇಕ ಧರ್ಮಗಳ ಸಾರ. ಹಿಂದೂ ಪುರಾಣಗಳ ಪರಿಕಲ್ಪನೆಯಲ್ಲಿ ದಶಾವತಾರಗಳ ಸೃಷ್ಟಿ ಸಹ ಜೀವವಿಕಾಸವನ್ನೇ ಹೇಳುವಂತಿದೆ. ವಿಷ್ಣುವಿನ ಹತ್ತು ಅವತಾರಗಳ ಸೃಷ್ಟಿಯ ಹಿಂದಿನ ಉದ್ದೇಶಗಳನ್ನು ಪಕ್ಕಕ್ಕಿಟ್ಟು ಅವತಾರಗಳ ವಿಕಾಸವನ್ನು ನೋಡೋಣ. ಮೊದಲನೆಯದು ಮತ್ಸ್ಯಾವತಾರ. ಅಂದರೆ ಮೀನಿನ ಉಗಮ. ಮೊದಲು ಜೀವಕುಲದ ಉಗಮವಾಗಿದ್ದೇ ನೀರಿನಲ್ಲಿ. (ಅಮೀಬಾ ಎನ್ನುವ ಏಕಕೋಶಜೀವಿಯಿಂದಾ ಕವಲೊಡೆದು ಬಹುಕೋಶ ಜೀವಿಗಳು ಹುಟ್ಟಿದವು ಎನ್ನುತ್ತದೆ ಜೀವವಿಜ್ಙಾನ.) ಎರಡನೆಯದು ನೀರು ಮತ್ತು ಭೂಮಿ ಎರಡರಲ್ಲೂ ಬದುಕುವ ಕೂರ್ಮಾವತಾರ. ಅಂದರೆ ಆಮೆ ಉಭಯವಾಸಿ. ನೀರಿನಲ್ಲಿ ಹುಟ್ಟಿದ ಜೀವಿಗಳು ರೂಪಾಂತರಗೊಂಡು ನೀರು ಮತ್ತು ನೆಲದಲ್ಲಿ ವಾಸಿಸತೊಡಗಿದವು. ಮೂರನೆಯದು ವರಾಹ. ಅಂದರೆ ಹಂದಿ. ಜಲವಾಸ ಬಿಟ್ಟು ನೆಲದಲ್ಲೇ ವಾಸಿಸುವ ಪ್ರಾಣಿ ಇದು. ನಾಲ್ಕನೆಯದು ನರಸಿಂಹ ಅವತಾರ. ಅಂದರೆ ಅರ್ಧ ಪ್ರಾಣಿ ಇನ್ನರ್ಧ ಮನುಷ್ಯ ರೂಪದ ಈ ಅವತಾರವು ಮಾನವ ವಿಕಾಸದ ಮೊದಲ ಹಂತ. ಇದರ ಮುಂದುವರೆದ ಭಾಗವೇ ವಾಮನ ಅವತಾರ. ಪರಿಪೂರ್ಣ ಮನುಷ್ಯನಾಗಿರದೇ ಕುಬ್ಜ ದೇಹದ ವ್ಯಕ್ತಿ ವಾಮನ. ಇಲ್ಲಿಂದ ಮನುಷ್ಯನ ಉಗಮ ಆರಂಭವಾಗಿ ಮುಂದೆ ದುಡುಕು ಸ್ವಭಾವದ ಪರುಷರಾಮ, ಆದರ್ಶಪುರುಷ ರಾಮ, ಚಾಣಾಕ್ಷ ಕೃಷ್ಣ, ಶಾಂತಿಧೂತ ಬೌದ್ಧ ಹಾಗೂ ಕರಾಳ ಪುರುಷ ಕಲ್ಕಿ.. ಹೀಗೆ ಸ್ವಭಾವಕ್ಕನುಗುಣವಾಗಿ ಕೊನೆಯ ಐದು ಅವತಾರಗಳನ್ನು ಸೃಷ್ಟಿಸಲಾಗಿದೆ.
ಈ ಅವತಾರಗಳನ್ನು ಯಾರು ಯಾತಕ್ಕಾಗಿ ಸೃಷ್ಟಿಸಿದರು ಎನ್ನುವುದು ಇಲ್ಲಿ ಮುಖ್ಯವಲ್ಲ. ಜೀವವಿಕಾಸದ ಹಾದಿಯಲ್ಲಿ ಜಲಚರಗಳು ಅದು ಹೇಗೆ ಮನುಷ್ಯನಾಗಿ ರೂಪಾಂತರಗೊಳ್ಳುತ್ತಾ ಬಂದವು ಎನ್ನುವುದರ ಸಂಕೇತರೂಪವಾಗಿ ಈ ಅವತಾರಗಳ ಬದಲಾವಣೆಗಳನ್ನು ಗಮನಿಸಬಹುದು. ಅಂದರೆ ದೇವರು ನೇರವಾಗಿ ಮನುಷ್ಯನನ್ನು ಸೃಷ್ಟಿಸಲಿಲ್ಲ, ಕೋಟ್ಯಾಂತರ ವರ್ಷಗಳ ಕಾಲಚಕ್ರದಲ್ಲಿ ನಿಸರ್ಗವು ಅನೇಕ ಬದಲಾವಣೆಗಳಿಗೆ ಒಳಗಾಗುತ್ತಾ ಜೀವವಿಕಾಸವನ್ನು ಮಾಡಿಕೊಂಡಿದೆ ಎಂಬುದಂತೂ ಸತ್ಯ. ಪ್ರಕೃತಿಯಲ್ಲಿ ಬಲವಿದ್ದವುಗಳು ಬೆಳೆದು ಬದುಕಿ ಬಾಳಿದ್ದಾವೆ, ಬಲವಿಲ್ಲದವು ಸರ್ವನಾಶವಾಗಿದ್ದಾವೆ. ಅನೇಕಾನೇಕ ಜೀವಿಗಳು ಬದುಕಿಗಾಗಿ ಹೋರಾಡುತ್ತಾ ತಮ್ಮ ಕುಲವನ್ನು ಮುಂದುವರೆಸಿಕೊಂಡು ಬಂದಿವೆ. ನಿಸರ್ಗದ ವಿರುದ್ಧ ಹೋರಾಡಲಾಗದವು ನಾಶವಾಗಿಹೋಗಿವೆ.
ಇದನ್ನೇ ಡಾರ್ವಿನ್ ರವರ ವಿಕಾಸವಾದ ಹೇಳಿದ್ದು. ಇಂತಹ ವಿಕಾಸವಾದದ ಮೂಲ ತತ್ವವನ್ನೇ ಪುರೋಹಿತಶಾಹಿಗಳು ಅವತಾರದ ಕಲ್ಪನೆಗಳ ಸೃಷ್ಟಿಯ ಮೂಲಕ ನಂಬಿಕೆಗಳನ್ನು ಬಿತ್ತಿ ಭಕ್ತಿ ಭಯವನ್ನು ಬೆಳೆದಿದ್ದು. ಡಾರ್ವಿನ್ ವಿಕಾಸವಾದವು ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣ ಎನ್ನುವ ದೇವರ ಲೀಲೆಯನ್ನು ನಿರಾಕರಿಸಿದರೆ, ಈ ಧಾರ್ಮಿಕತೆಯು ವಿಕಾಸವಾದದಲ್ಲೂ ಕಾಲ್ಪನಿಕ ಸೃಷ್ಟಿಯನ್ನು ಕಟ್ಟಿ ದೇವರ ಮಹಿಮೆಯನ್ನೇ ಗಟ್ಟಿಗೊಳಿಸುತ್ತಾ ಬಂದಿದೆ. ಈಗ ಬಲಪಂಥೀಯ ಸಂಘಪರಿವಾರದ ಮೆದುಳುಗಳು ಧಾರ್ಮಿಕ ವಿಕಾಸವನ್ನು ಉಳಿಸಿಕೊಳ್ಳಲು ವೈಜ್ಞಾನಿಕ ವಿಕಾಸವಾದವನ್ನು ನಿರ್ನಾಮ ಮಾಡಲು ಪ್ರಯತ್ನಿಸುತ್ತಿದೆ. ಅದರ ಭಾಗವಾಗಿಯೇ ಡಾರ್ವಿನ್ ಜೀವವಿಕಾಸ ಪಠ್ಯವನ್ನು ಶಿಕ್ಷಣದಿಂದ ಹೊರಗಿಟ್ಟಿದೆ.
ಸತ್ಯ ಎನ್ನುವುದನ್ನು ಅದೆಷ್ಟೇ ಸುಳ್ಳಿನಿಂದ ಮುಚ್ಚಿಟ್ಟರೂ ಅದು ಹೊರಗೆ ಬರಲೇಬೇಕು. ಜೀವವಿಕಾಸವನ್ನು ಮುಂದಿನ ತಲೆಮಾರಿಗೆ ಕಲಿಸದೇ ಹೋದರೂ ವಿಕಾಸವಾದ ಸುಳ್ಳಾಗದು. ವೈಜ್ಞಾನಿಕ ವಿವೇಚನೆಯನ್ನು ಧಾರ್ಮಿಕ ದಮನದಿಂದ ಹೆಚ್ಚು ಕಾಲದವರೆಗೂ ಕತ್ತಲಲ್ಲಿಡಲು ಸಾಧ್ಯವಾಗದು. ಆದರೂ ಎಲ್ಲಾ ಧರ್ಮಗಳಲ್ಲಿ ಬೇರುಬಿಟ್ಟಿರುವ ಈ ಪುರೋಹಿತಶಾಹಿಗಳು ತಮ್ಮ ಸನಾತನ ನಂಬಿಕೆಗಳನ್ನು ಉಳಿಸಿಕೊಂಡು ಭಯ ಭಕ್ತಿಯ ಹೆಸರಲ್ಲಿ ಜನರನ್ನು ಸದಾ ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತಾರೆ. ಅವರ ನಂಬಿಕೆಗಳನ್ನು ವಿರೋಧಿಸುವ ಯಾವುದೇ ಅವಿಷ್ಕಾರವನ್ನು ಅವರು ವಿರೋಧಿಸುತ್ತಲೇ ಬಂದಿದ್ದಾರೆ. ಭೂಮಿ ಸ್ಥಿರವಾಗಿಲ್ಲ ಸದಾ ಚಲಿಸುತ್ತಿಲೇ ಇರುತ್ತದೆ ಎಂದು ಹೇಳಿ ಚರ್ಚಿನ ನಂಬಿಕೆಯನ್ನೇ ಅಡಿಮೇಲು ಮಾಡಿದ ಇಟಲಿಯ ಖಗೋಳಶಾಸ್ತ್ರಜ್ಞ ಗೆಲಿಲಿಯೋನನ್ನು ಹಿಂಸಿಸಿ ಶಿಕ್ಷಿಸಿದವರು ಚರ್ಚಿನ ಪುರೋಹಿತಶಾಹಿಗಳು.
ಈಗ ಈ ಹಿಂದುತ್ವವಾದಿಗಳ ಕಣ್ಣು ಮಕ್ಕಳ ಶಿಕ್ಷಣದ ಮೇಲೆ ಬಿದ್ದಿದೆ. ಇತಿಹಾಸವನ್ನು ತಿರುಚಿ ತಮ್ಮ ಸಿದ್ದಾಂತಕ್ಕೆ ಪೂರಕವಾಗಿ ಮರುಸೃಷ್ಟಿಸುವ ಪ್ರಯತ್ನವನ್ನು ಮನುವಾದಿಗಳು ಮಾಡುತ್ತಿದ್ದಾರೆ. ಇದನ್ನು ಜನರು ಪ್ರತಿರೋಧಿಸದೇ ಹೋದರೆ ಮುಂದಿನ ತಲೆಮಾರು ಮತ್ತೆ ಪುರೋಹಿತಶಾಹಿಗಳ ಗುಲಾಮಗಿರಿಗೆ ಒಳಗಾಗುವುದರಲ್ಲಿ ಸಂದೇಹವೇ ಇಲ್ಲ. ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವ ಪುರೋಹಿತಶಾಹಿ ವರ್ಗ ಮತ್ತು ಆಳುವ ಪ್ರಭುತ್ವಗಳ ಜಂಟಿ ಕಾರ್ಯಾಚರಣೆಗಳನ್ನೂ ಮೀರಿ ಡಾರ್ವಿನ್ ವಿಕಾಸವಾದ ಉಳಿದುಕೊಂಡು ಬಂದಿದೆ. ಇನ್ನು ಮುಂದೆಯೂ ಸಹ ಉಳಿಯಲೇಬೇಕಿದೆ.
-ಶಶಿಕಾಂತ ಯಡಹಳ್ಳಿ.