ಶುಕ್ರವಾರ, ಮೇ 5, 2023

ಮನುಮಾದಿಗಳ ಹುನ್ನಾರ.. ಡಾರ್ವಿನ್ ಜೀವವಿಕಾಸ ಪಾಠಕ್ಕೆ ಸಂಚಕಾರ


ಸರಿ ಸುಮಾರು 150 ವರ್ಷಗಳ ಹಿಂದೆ ವಿಕಾಸವಾದದ ಮೂಲಕ ಜೀವ ಉಗಮದ ಕುರಿತು ವೈಜ್ಞಾನಿಕವಾಗಿ ವಿಶ್ಲೇಷಿಸಿ ಜಗದ ಕಣ್ಣು ತೆರೆಸಿದ ಜೀವವಿಜ್ಙಾನಿ ಚಾರ್ಲ್ಸ್ ಡಾರ್ವಿನ್ . 1809 ಫೆಬ್ರವರಿ 12 ರಂದು ಇಂಗ್ಲೆಂಡಿನಲ್ಲಿ ಜನಿಸಿದ ಡಾರ್ವಿನ್ ಹೆತ್ತವರ ಇಚ್ಚೆಯಂತೆ ಕಲಿಯುತ್ತಿದ್ದ ವೈದ್ಯಕೀಯ ಶಿಕ್ಷಣವನ್ನು ಅರ್ಧಕ್ಕೆ ಕೈಬಿಟ್ಟು ತನ್ನಿಚ್ಚೆಯಂತೆ ತನ್ನ ಆಸಕ್ತಿಯನ್ನು ಕೆರಳಿಸಿದ ಜೀವ ಸಂಕುಲದ ಮೂಲದ ಶೋಧಕ್ಕೆ ತನ್ನ ಬದುಕನ್ನೇ ಮೀಸಲಿಟ್ಟ ನಿಸರ್ಗತಜ್ಞ. ಡಾರ್ವಿನ್ ಸ್ಮರಣೆಗಾಗಿ 1990 ರಿಂದ ಪ್ರತಿವರ್ಷ ಫೆಬ್ರವರಿ 12 ರಂದು ಡಾರ್ವಿನ್ ದಿನವನ್ನು (ಡಾರ್ವಿನ್ ಡೇ) ಎಂದು ಆಚರಿಸಲಾಗುತ್ತದೆ.

ಡಾರ್ವಿನ್ 1831 ರಿಂದ 5 ವರ್ಷಗಳ ಕಾಲ ಬೀಗಲ್ ಎಂಬ ಹಡಗಿನಲ್ಲಿ ವಿಶ್ವ ಪರ್ಯಟನೆ ಮಾಡಿ ಜೀವವಿಕಾಸದ ಕುರಿತು ಸಂಶೋಧನೆ ಮಾಡಿದರು. ನೈಸರ್ಗಿಕ ಆಯ್ಕೆ, ಬಲವಿದ್ದವು ಬದಕುತ್ತಾವೆ, ಬದುಕಿಗಾಗಿ ಹೋರಾಟ ಮುಂತಾದ ವಿಕಾಸವಾದದ ಸಿದ್ಧಾಂತಗಳನ್ನು ಸಂಶೋಧಿಸಿ ನಿಖರವಾದ ಆಧಾರಗಳಿಂದ ಸಾಬೀತುಗೊಳಿಸಿದರು.  ಭೂಮಿಯ ಮೇಲಿನ ಪ್ರತಿಯೊಂದು ಜೀವಿಯೂ ಅನೇಕ ರೂಪಾಂತರಗಳಿಗೆ ಒಳಗಾಗಿದೆ ಎಂಬುದರ ಬಗ್ಗೆ ‘ಆನ್ ದಿ ಆರಿಜಿನ್ ಆಫ್ ಸ್ಪೀಶೀಸ್’ ಪುಸ್ತಕದಲ್ಲಿ ಡಾರ್ವಿನ್ ದಾಖಲಿಸಿದರು.

ಆದರೆ.. ಡಾರ್ವಿನ್ ರವರ ಜೀವವಿಕಾಸವಾದವು ಧಾರ್ಮಿಕ ನಂಬಿಕೆಯ ಅಡಿಪಾಯವನ್ನೇ ಅಲ್ಲಾಡಿಸಿತು. ಈ ಜಗದ ಎಲ್ಲವೂ ದೈವಸೃಷ್ಟಿ ಎಂದು ನಂಬಿಸಿಕೊಂಡೇ ಬಂದಿದ್ದ ಧಾರ್ಮಿಕ ಪಂಥಗಳ ನಂಬಿಕೆಯನ್ನು ಬುಡಮೇಲು ಮಾಡಿದ್ದು ಡಾರ್ವಿನ್ ಸಿದ್ದಾಂತ. ಭೂಮಿಯ ಮೇಲಿರುವ ಜೀವಪ್ರಭೇಧಗಳು ಯಥಾಪ್ರಕಾರ ಈಗಿರುವಂತೆಯೇ ಸೃಷ್ಟಿಗೊಂಡಿದ್ದಲ್ಲ, ಅವುಗಳೆಲ್ಲವೂ ಕಾಲಾಂತರದಲ್ಲಿ ರೂಪಾಂತರ ಹೊಂದುತ್ತಾ ಬಂದಿವೆ ಎಂಬುದನ್ನು ಡಾರ್ವಿನ್ ವೈಜ್ಙಾನಿಕವಾಗಿ ಸಾಬೀತುಪಡಿಸಿದಾಗ ಪುರೋಹಿತಶಾಹಿ ಕುಲ ಬೆಚ್ಚಿಬಿದ್ದಿತು. ಪ್ರಭಾವಶಾಲಿ ಧಾರ್ಮಿಕ ಕೇಂದ್ರಗಳಾಗಿದ್ದ ಚರ್ಚ್ ಗಳು ತಿರುಗಿಬಿದ್ದವು. ಆದರೆ.. ಡಾರ್ವಿನ್ ವಿಕಾಸವಾದ ವೈಜ್ಞಾನಿಕವಾದ ಸತ್ಯಪ್ರತಿಪಾದನೆಯನ್ನು ಮಾಡಿದ್ದರಿಂದ ಚರ್ಚ್ ಗಳ ಪ್ರತಿಭಟನೆಗೆ ಅರ್ಥವಿರಲಿಲ್ಲ. ಆದರೆ ಡಾರ್ವಿನ್ ವಾದವನ್ನು ವಿರೋಧಿಸುವ ಪ್ರಯತ್ನವನ್ನು ಅಂದಿನಿಂದ ಇಂದಿನವರೆಗೂ ಪುರೋಹಿತಶಾಹಿ ಸಂಕುಲ ಕೈಬಿಟ್ಟಿಲ್ಲ.

ಅದರ ಮುಂದುವರಿಕೆಯ ಭಾಗವಾಗಿಯೇ  ಭಾರತದ ಬಲಪಂಥೀಯ ಸರಕಾರವು ಡಾರ್ವಿನ್ ಜೀವವಿಕಾಸದ ಕುರಿತ ಪಠ್ಯವನ್ನೇ ಕೈಬಿಟ್ಟಿದೆ. NCERT ಯು ಕೇಂದ್ರೀಯ ಪಠ್ಯಪುಸ್ತಕದಲ್ಲಿದ್ದ ಜೀವವಿಕಾಸದ ಕುರಿತಾದ ಪಾಠವನ್ನು ತೆಗೆದುಹಾಕಿದೆ. ಯಾವಾಗ ಇದು ವಿವಾದವಾಯಿತೋ ಆಗ ಪಠ್ಯ ಸರಳೀಕರಣದ ಭಾಗವಾಗಿ ಈ ಕ್ರಮ ಎಂದು ಸಬೂಬು ಹೇಳಲಾಗಿದೆ. ತೆಗೆದು ಹಾಕಲೇಬೇಕೆಂದಿದ್ದರೆ ಬೇರೆ ಪಾಠಗಳಿರಲಿಲ್ಲವೇ? ವಿದ್ಯಾರ್ಥಿಗಳಿಗೆ ಸತ್ಯದರ್ಶನವನ್ನು ಮಾಡಿ ವೈಜ್ಞಾನಿಕ ಚಿಂತನೆಗೆ ಪ್ರೇರೇಪಿಸುವ ಜೀವವಿಕಾಸ ಪಠ್ಯವೇ ಆಗಬೇಕಾಗಿತ್ತಾ.

ಹೌದು.. ಬೇಕಾಗಿತ್ತು. ಯಾಕೆಂದರೆ ಜೀವವಿಕಾಸದ ಪಾಠವು ಸನಾತನ ಮನುಧರ್ಮಶಾಸ್ತ್ರವನ್ನು ಪ್ರಶ್ನಿಸುವಂತಿತ್ತು. ದೈವಸೃಷ್ಟಿ ನಿಯಮದ ಭ್ರಮೆಯನ್ನು ಕಳಚುವಂತಿತ್ತು. ಇಂದಲ್ಲಾ ನಾಳೆ ಈಗಿರುವ ಸಂವಿಧಾನವನ್ನು ಬದಲಿಸಿ ಮನುವಾದಿ ಸಂವಿಧಾನವನ್ನು ಜಾರಿಗೆ ತರುವ ದೂರದೃಷ್ಟಿಯನ್ನು ಹೊಂದಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಅದಕ್ಕೆ ಪೂರ್ವಭಾವಿಯಾಗಿ ಮುಂದಿನ ತಲೆಮಾರಿನ ತಲೆಯಲ್ಲಿ ಅವೈಜ್ಞಾನಿಕ ಧರ್ಮಾಧಾರಿತ ಸಂಗತಿಗಳನ್ನು ತುಂಬಬೇಕಾಗಿತ್ತು. ಮಕ್ಕಳು ಜೀವವಿಕಾಸದಂತಹ ಪಾಠಗಳನ್ನು ಕಲಿತು ವೈಜ್ಞಾನಿಕ ಚಿಂತನೆಯನ್ನು ಬೆಳೆಸಿಕೊಂಡರೆ ಪ್ರಶ್ನಿಸುವುದನ್ನು ಕಲಿಯುತ್ತಾರೆ. ಮುಂದೆ ಮನುವಾದಿ ಸಿದ್ದಾಂತವನ್ನೂ ವಿರೋಧಿಸುತ್ತಾರೆ. ಆದ್ದರಿಂದ ಈಗಿನಿಂದಲೇ ಶಾಲೆಯಲ್ಲಿ ಕಲಿಯುವ ಮಕ್ಕಳ ಮನದಲ್ಲಿ ದೈವಸೃಷ್ಟಿಗೆ ಸವಾಲೆಸೆಯುವ ಜೀವವಿಕಾಸದಂತಹ ಪಾಠಗಳ ನೆರಳೂ ಬೀಳದಂತೆ ಮಾಡುವುದು ಆಧುನಿಕ ಪುರೋಹಿತಶಾಹಿಗಳ ತಂತ್ರವಾಗಿದೆ.

ಇದಕ್ಕೆ ಪೂರಕವಾಗಿ ಕೆಲವು ವರ್ಷಗಳ ಹಿಂದೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ “ಡಾರ್ವಿನ್ ವಿಕಾಸವಾದ ವೈಜ್ಞಾನಿಕವಾಗಿ ಸಾಬೀತಾಗಿಲ್ಲ, ಮಂಗನಿಂದ ಮಾನವ ಎನ್ನುವುದನ್ನು ನಮ್ಮ ಪೂರ್ವಜರು ದಾಖಲಿಸಿಲ್ಲ, ಹೀಗಾಗಿ ಶಾಲಾ ಕಾಲೇಜಿನ ಪಠ್ಯದಲ್ಲಿ ಅದು ಬೇಕಾಗಿಲ್ಲ” ಎಂದು ಹೇಳಿ ವಿವಾದವನ್ನು ಹುಟ್ಟುಹಾಕಿದ್ದರು. ಇದು ನಾಗಾಪುರದ ಸಂಘದವರ ಮನದೊಳಿಗಿನ ಮಾತೇ ಆಗಿತ್ತು. ಮಂಗನಿಂದ ಮಾನವ ಎಂದು ಡಾರ್ವಿನ್ ಎಲ್ಲಿ ಹೇಳಿದ್ದಾನೆ? ಅಂತಹುದೊಂದು ಮಾತು ರೂಢಿಗತವಾಗಿ ಬಂದಿದೆ ಅಷ್ಟೇ. ಮಾನವ ಮತ್ತು ಮಂಗಗಳ ಮೂಲ ಒಂದೇ ಅಗಿದ್ದು ಜೀವವಿಕಾಸದ ಹಾದಿಯಲ್ಲಿ ಕವಲೊಡೆದಿದೆ ಎಂಬುದನ್ನು ಜೀವವಿಕಾಸ ಹೇಳುತ್ತದೆ. ಆದರೆ ಈ ಮನುವಾದಿಗಳು ಮಂಗನಿಂದ ಮಾನವ ಎಂಬ ನಂಬಿಕೆಯಲ್ಲೇ ಇದ್ದಾರೆ. ಡಾರ್ವಿನ್ ರ ವಿಕಾಸವಾದವನ್ನು ಇವರು ಎಂದೂ ವೈಜ್ಞಾನಿಕವಾಗಿ ಅಧ್ಯಯನ ಮಾಡಿಯೇ ಇಲ್ಲ. ಮಾಡಿದ್ದರೆ ಇಂತಹ ಅವೈಜ್ಞಾನಿಕ ವಾದವನ್ನು ಮುಂದಿಡುತ್ತಿರಲಿಲ್ಲ.

ದೇವರು ಎಲ್ಲಾ ಜೀವಕುಲವನ್ನು ಈಗಿರುವಂತೆಯೇ ಪ್ರತ್ಯೇಕವಾಗಿ ಸೃಷ್ಟಿಸಿದ್ದಾನೆ ಹಾಗೂ ಮಾನವ ಸೃಷ್ಟಿ ಶ್ರೇಷ್ಠ ಮತ್ತು ವಿಶೇಷವಾಗಿದೆ ಎನ್ನುವುದು ಬಹುತೇಕ ಧರ್ಮಗಳ ಸಾರ. ಹಿಂದೂ ಪುರಾಣಗಳ ಪರಿಕಲ್ಪನೆಯಲ್ಲಿ ದಶಾವತಾರಗಳ ಸೃಷ್ಟಿ ಸಹ ಜೀವವಿಕಾಸವನ್ನೇ ಹೇಳುವಂತಿದೆ.  ವಿಷ್ಣುವಿನ ಹತ್ತು ಅವತಾರಗಳ ಸೃಷ್ಟಿಯ ಹಿಂದಿನ ಉದ್ದೇಶಗಳನ್ನು ಪಕ್ಕಕ್ಕಿಟ್ಟು ಅವತಾರಗಳ ವಿಕಾಸವನ್ನು ನೋಡೋಣ. ಮೊದಲನೆಯದು ಮತ್ಸ್ಯಾವತಾರ. ಅಂದರೆ ಮೀನಿನ ಉಗಮ. ಮೊದಲು ಜೀವಕುಲದ ಉಗಮವಾಗಿದ್ದೇ ನೀರಿನಲ್ಲಿ. (ಅಮೀಬಾ ಎನ್ನುವ ಏಕಕೋಶಜೀವಿಯಿಂದಾ ಕವಲೊಡೆದು ಬಹುಕೋಶ ಜೀವಿಗಳು ಹುಟ್ಟಿದವು ಎನ್ನುತ್ತದೆ ಜೀವವಿಜ್ಙಾನ.) ಎರಡನೆಯದು ನೀರು ಮತ್ತು ಭೂಮಿ ಎರಡರಲ್ಲೂ ಬದುಕುವ ಕೂರ್ಮಾವತಾರ. ಅಂದರೆ ಆಮೆ ಉಭಯವಾಸಿ. ನೀರಿನಲ್ಲಿ ಹುಟ್ಟಿದ ಜೀವಿಗಳು ರೂಪಾಂತರಗೊಂಡು ನೀರು ಮತ್ತು ನೆಲದಲ್ಲಿ ವಾಸಿಸತೊಡಗಿದವು. ಮೂರನೆಯದು ವರಾಹ. ಅಂದರೆ ಹಂದಿ. ಜಲವಾಸ ಬಿಟ್ಟು ನೆಲದಲ್ಲೇ ವಾಸಿಸುವ ಪ್ರಾಣಿ ಇದು. ನಾಲ್ಕನೆಯದು ನರಸಿಂಹ ಅವತಾರ. ಅಂದರೆ  ಅರ್ಧ ಪ್ರಾಣಿ ಇನ್ನರ್ಧ ಮನುಷ್ಯ ರೂಪದ ಈ ಅವತಾರವು ಮಾನವ ವಿಕಾಸದ ಮೊದಲ ಹಂತ. ಇದರ ಮುಂದುವರೆದ ಭಾಗವೇ ವಾಮನ ಅವತಾರ. ಪರಿಪೂರ್ಣ ಮನುಷ್ಯನಾಗಿರದೇ ಕುಬ್ಜ ದೇಹದ ವ್ಯಕ್ತಿ ವಾಮನ. ಇಲ್ಲಿಂದ ಮನುಷ್ಯನ ಉಗಮ ಆರಂಭವಾಗಿ ಮುಂದೆ ದುಡುಕು ಸ್ವಭಾವದ ಪರುಷರಾಮ, ಆದರ್ಶಪುರುಷ ರಾಮ, ಚಾಣಾಕ್ಷ ಕೃಷ್ಣ, ಶಾಂತಿಧೂತ ಬೌದ್ಧ ಹಾಗೂ ಕರಾಳ ಪುರುಷ ಕಲ್ಕಿ.. ಹೀಗೆ ಸ್ವಭಾವಕ್ಕನುಗುಣವಾಗಿ ಕೊನೆಯ ಐದು ಅವತಾರಗಳನ್ನು ಸೃಷ್ಟಿಸಲಾಗಿದೆ.

ಈ ಅವತಾರಗಳನ್ನು ಯಾರು ಯಾತಕ್ಕಾಗಿ ಸೃಷ್ಟಿಸಿದರು ಎನ್ನುವುದು ಇಲ್ಲಿ ಮುಖ್ಯವಲ್ಲ. ಜೀವವಿಕಾಸದ ಹಾದಿಯಲ್ಲಿ ಜಲಚರಗಳು ಅದು ಹೇಗೆ ಮನುಷ್ಯನಾಗಿ ರೂಪಾಂತರಗೊಳ್ಳುತ್ತಾ ಬಂದವು ಎನ್ನುವುದರ ಸಂಕೇತರೂಪವಾಗಿ ಈ ಅವತಾರಗಳ ಬದಲಾವಣೆಗಳನ್ನು ಗಮನಿಸಬಹುದು. ಅಂದರೆ ದೇವರು ನೇರವಾಗಿ ಮನುಷ್ಯನನ್ನು ಸೃಷ್ಟಿಸಲಿಲ್ಲ, ಕೋಟ್ಯಾಂತರ ವರ್ಷಗಳ ಕಾಲಚಕ್ರದಲ್ಲಿ ನಿಸರ್ಗವು ಅನೇಕ ಬದಲಾವಣೆಗಳಿಗೆ ಒಳಗಾಗುತ್ತಾ  ಜೀವವಿಕಾಸವನ್ನು ಮಾಡಿಕೊಂಡಿದೆ ಎಂಬುದಂತೂ ಸತ್ಯ. ಪ್ರಕೃತಿಯಲ್ಲಿ ಬಲವಿದ್ದವುಗಳು ಬೆಳೆದು ಬದುಕಿ ಬಾಳಿದ್ದಾವೆ, ಬಲವಿಲ್ಲದವು ಸರ್ವನಾಶವಾಗಿದ್ದಾವೆ. ಅನೇಕಾನೇಕ ಜೀವಿಗಳು ಬದುಕಿಗಾಗಿ ಹೋರಾಡುತ್ತಾ ತಮ್ಮ ಕುಲವನ್ನು ಮುಂದುವರೆಸಿಕೊಂಡು ಬಂದಿವೆ. ನಿಸರ್ಗದ ವಿರುದ್ಧ ಹೋರಾಡಲಾಗದವು ನಾಶವಾಗಿಹೋಗಿವೆ.

ಇದನ್ನೇ  ಡಾರ್ವಿನ್ ರವರ ವಿಕಾಸವಾದ ಹೇಳಿದ್ದು. ಇಂತಹ ವಿಕಾಸವಾದದ ಮೂಲ ತತ್ವವನ್ನೇ ಪುರೋಹಿತಶಾಹಿಗಳು ಅವತಾರದ ಕಲ್ಪನೆಗಳ ಸೃಷ್ಟಿಯ ಮೂಲಕ ನಂಬಿಕೆಗಳನ್ನು ಬಿತ್ತಿ ಭಕ್ತಿ ಭಯವನ್ನು ಬೆಳೆದಿದ್ದು. ಡಾರ್ವಿನ್ ವಿಕಾಸವಾದವು ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣ ಎನ್ನುವ ದೇವರ ಲೀಲೆಯನ್ನು ನಿರಾಕರಿಸಿದರೆ, ಈ ಧಾರ್ಮಿಕತೆಯು ವಿಕಾಸವಾದದಲ್ಲೂ ಕಾಲ್ಪನಿಕ ಸೃಷ್ಟಿಯನ್ನು ಕಟ್ಟಿ ದೇವರ ಮಹಿಮೆಯನ್ನೇ ಗಟ್ಟಿಗೊಳಿಸುತ್ತಾ ಬಂದಿದೆ. ಈಗ ಬಲಪಂಥೀಯ ಸಂಘಪರಿವಾರದ ಮೆದುಳುಗಳು ಧಾರ್ಮಿಕ ವಿಕಾಸವನ್ನು ಉಳಿಸಿಕೊಳ್ಳಲು ವೈಜ್ಞಾನಿಕ ವಿಕಾಸವಾದವನ್ನು ನಿರ್ನಾಮ ಮಾಡಲು ಪ್ರಯತ್ನಿಸುತ್ತಿದೆ. ಅದರ ಭಾಗವಾಗಿಯೇ ಡಾರ್ವಿನ್ ಜೀವವಿಕಾಸ ಪಠ್ಯವನ್ನು ಶಿಕ್ಷಣದಿಂದ ಹೊರಗಿಟ್ಟಿದೆ.  

ಸತ್ಯ ಎನ್ನುವುದನ್ನು ಅದೆಷ್ಟೇ ಸುಳ್ಳಿನಿಂದ ಮುಚ್ಚಿಟ್ಟರೂ ಅದು ಹೊರಗೆ ಬರಲೇಬೇಕು. ಜೀವವಿಕಾಸವನ್ನು ಮುಂದಿನ ತಲೆಮಾರಿಗೆ ಕಲಿಸದೇ ಹೋದರೂ ವಿಕಾಸವಾದ ಸುಳ್ಳಾಗದು. ವೈಜ್ಞಾನಿಕ ವಿವೇಚನೆಯನ್ನು ಧಾರ್ಮಿಕ ದಮನದಿಂದ ಹೆಚ್ಚು ಕಾಲದವರೆಗೂ ಕತ್ತಲಲ್ಲಿಡಲು ಸಾಧ್ಯವಾಗದು. ಆದರೂ ಎಲ್ಲಾ ಧರ್ಮಗಳಲ್ಲಿ ಬೇರುಬಿಟ್ಟಿರುವ ಈ ಪುರೋಹಿತಶಾಹಿಗಳು ತಮ್ಮ ಸನಾತನ ನಂಬಿಕೆಗಳನ್ನು ಉಳಿಸಿಕೊಂಡು ಭಯ ಭಕ್ತಿಯ ಹೆಸರಲ್ಲಿ ಜನರನ್ನು ಸದಾ ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತಾರೆ. ಅವರ ನಂಬಿಕೆಗಳನ್ನು ವಿರೋಧಿಸುವ ಯಾವುದೇ ಅವಿಷ್ಕಾರವನ್ನು ಅವರು ವಿರೋಧಿಸುತ್ತಲೇ ಬಂದಿದ್ದಾರೆ. ಭೂಮಿ ಸ್ಥಿರವಾಗಿಲ್ಲ ಸದಾ ಚಲಿಸುತ್ತಿಲೇ ಇರುತ್ತದೆ  ಎಂದು ಹೇಳಿ ಚರ್ಚಿನ ನಂಬಿಕೆಯನ್ನೇ ಅಡಿಮೇಲು ಮಾಡಿದ ಇಟಲಿಯ ಖಗೋಳಶಾಸ್ತ್ರಜ್ಞ ಗೆಲಿಲಿಯೋನನ್ನು ಹಿಂಸಿಸಿ ಶಿಕ್ಷಿಸಿದವರು ಚರ್ಚಿನ ಪುರೋಹಿತಶಾಹಿಗಳು.

ಈಗ ಈ ಹಿಂದುತ್ವವಾದಿಗಳ ಕಣ್ಣು ಮಕ್ಕಳ ಶಿಕ್ಷಣದ ಮೇಲೆ ಬಿದ್ದಿದೆ. ಇತಿಹಾಸವನ್ನು ತಿರುಚಿ ತಮ್ಮ ಸಿದ್ದಾಂತಕ್ಕೆ ಪೂರಕವಾಗಿ ಮರುಸೃಷ್ಟಿಸುವ ಪ್ರಯತ್ನವನ್ನು ಮನುವಾದಿಗಳು ಮಾಡುತ್ತಿದ್ದಾರೆ. ಇದನ್ನು ಜನರು ಪ್ರತಿರೋಧಿಸದೇ ಹೋದರೆ ಮುಂದಿನ ತಲೆಮಾರು ಮತ್ತೆ ಪುರೋಹಿತಶಾಹಿಗಳ ಗುಲಾಮಗಿರಿಗೆ ಒಳಗಾಗುವುದರಲ್ಲಿ ಸಂದೇಹವೇ ಇಲ್ಲ. ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವ ಪುರೋಹಿತಶಾಹಿ ವರ್ಗ ಮತ್ತು ಆಳುವ ಪ್ರಭುತ್ವಗಳ ಜಂಟಿ ಕಾರ್ಯಾಚರಣೆಗಳನ್ನೂ ಮೀರಿ ಡಾರ್ವಿನ್ ವಿಕಾಸವಾದ ಉಳಿದುಕೊಂಡು ಬಂದಿದೆ. ಇನ್ನು ಮುಂದೆಯೂ ಸಹ ಉಳಿಯಲೇಬೇಕಿದೆ.

-ಶಶಿಕಾಂತ ಯಡಹಳ್ಳಿ.

 

 

ಮಂಗಳವಾರ, ಏಪ್ರಿಲ್ 25, 2023

ಪರಿಶ್ರಮ ಬೇಕು ಗುರಿ ಮುಟ್ಟಲು, ಸಕಾರಾತ್ಮಕತೆಯೇ ಸಾಧನೆಗೆ ಮೆಟ್ಟಿಲು.

 


ಅದೊಂದು ಮಳೆ ಬಂದು ನಿಂತ ದಿನ. ಕೆರೆಯಲ್ಲಿನ ಕಪ್ಪೆಗಳೆಲ್ಲಾ ದಡಕ್ಕೆ ಬಂದು ಸಿಕ್ಕಾಪಟ್ಟೆ ಸಂತಸದಿಂದ ವಟಗುಟ್ಟುತ್ತಿದ್ದವು. ಯಾಕೆಂದರೆ ಗುಂಪಿನ ಹಿರಿಯ ಕಪ್ಪೆಗೆ ವಯಸ್ಸಾಗಿತ್ತು. ಹೊಸ ನಾಯಕನ ಆಯ್ಕೆ ನಡೆಯಬೇಕಿತ್ತು. ಹೇಗೆ ಆಯ್ಕೆ ಮಾಡಬೇಕು ಎಂಬುದೇ ಸವಾಲಿನ ಕೆಲಸವಾಗಿತ್ತು.

ಆಗ ಹಿರಿಯ ಕಪ್ಪೆಗೊಂದು ಐಡಿಯಾ ಹೊಳೆದಿದ್ದೇ ತಡ ಎತ್ತರದ ಕರಿ ಕಲ್ಲನ್ನು ಏರಿ ನಿಂತು  “ನೋಡಿ ಕಪ್ಪೆ ಬಾಂಧವರೇ.. ಹೀಗೆ ವಟಗುಟುವ ಬದಲಾಗಿ ಸ್ಪರ್ಧೆಯೊಂದನ್ನು ಶುರುಮಾಡೋಣ. ಯಾರು ಮೊದಲು ಗುರಿ ಮುಟ್ಟುತ್ತಾರೋ ಆವರನ್ನು ನಮ್ಮ ಗುಂಪಿನ ನಾಯಕ ಎಂದು ಒಪ್ಪಿಕೊಳ್ಳೋಣ,  ಬಹುಮಾನವನ್ನೂ ಕೊಟ್ಟು ಸನ್ಮಾನಿಸೋಣ ” ಎಂದು ಗಟ್ಟಿ ದ್ವನಿಯಲ್ಲಿ ಘೋಷಿಸಿತು.

ಕಿರಿ ಮರಿ ಯುವ ಮುದಿ ಕಪ್ಪೆಗಳೆಲ್ಲಾ ಸಂತಸದಿಂದ ಹತ್ತು ನಿಮಿಷಗಳ ಕಾಲ ಜೋರಾಗಿ ಒಟಗುಟ್ಟಿ ನಂತರ ಮೌನವಹಿಸಿ ಹಿರಿ ಕಪ್ಪೆಯತ್ತ ಕುತೂಹಲದಿಂದ ನೋಡಿದವು. “ನೋಡಿ.. ಲಕ್ಷವಿಟ್ಟು ಕೇಳಿ.. ಈ ದಪ್ಪನೆಯ ಎತ್ತರದ ಮರ ಇದೆಯಲ್ಲಾ ಇದನ್ನು ಯಾರು ಮೊದಲು ಏರಿ ತುದಿ ಮುಟ್ಟುತ್ತಾರೋ ಅವರೇ ಗೆದ್ದಂತೆ. ಗೆದ್ದವರು ನಮ್ಮ ಗುಂಪಿನ ನಾಯಕರಾಗುತ್ತಾರೆ ಹಾಗೂ ಬಹುಮಾನವನ್ನೂ ಗೆದ್ದು ಸನ್ಮಾನಕ್ಕೂ ಪಾತ್ರರಾಗುತ್ತಾರೆ “ ಎಂದಿತು ಹಿರಿಕಪ್ಪೆ.

ಆ ಬ್ರಹತ್ ಗಾತ್ರದ ಮರವನ್ನು ಕಣ್ಣಳತೆ ಮಾಡಿ ನೋಡಿ ಹೆದರಿದ ಮುದಿ ಕಪ್ಪೆಗಳು ಮೂಗು ಮುರಿದವು. ಮರಿ ಕಪ್ಪೆಗಳು ಹಿಂದೆ ಸರಿದವು. ಕೆಲವು ಯುವ ಕಪ್ಪೆಗಳು ಸಾಹಸಕ್ಕೆ ಸಿದ್ದವಾಗಿ ಹಿರಿ ಕಪ್ಪೆಯ ಅನುಮತಿಗಾಗಿ ಕಾಯ್ದವು. ಹಿರಿ ಕಪ್ಪೆ ಕೆಂಪು ಬಾವುಟವೊಂದನ್ನು ಬೀಸುವುದರ ಮೂಲಕ ಸ್ಪರ್ಧೆ ಆರಂಭಿಸಲು ಸೂಚಿಸಿತು.

ಯುವ ಕಪ್ಪೆಗಳು ಮರ ಹತ್ತಲು ಆರಂಭಿಸಿದವು. ಕೆಲವು ಕಪ್ಪೆಗಳು ಒಬ್ಬರ ಕಾಲನ್ನು ಇನ್ನೊಬ್ಬರು ಎಳೆದು ಬೀಳಿಸಿ ತಾವು ಮೇಲೆ ಹತ್ತಲು ನೋಡಿದವು. ಏರಲಾರದೇ ಏದುಸಿರು ಬಿಟ್ಟು ಕೆಲವು ಕಪ್ಪೆಗಳು ಕೆಳಕ್ಕೆ ಬಿದ್ದವು. ಬಿದ್ದ ಕಪ್ಪೆಗಳು ಮತ್ತೆ ಮೇಲೆದ್ದು ತಮ್ಮ ಪ್ರಯತ್ನ ಮುಂದುವರೆಸಿದವು. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಒಂದಡಿಗಿಂತ ಮೇಲೆ ಹತ್ತಲು ಯಾವ ಕಪ್ಪೆಗೂ ಸಾಧ್ಯವಾಗಲೇ ಇಲ್ಲ. ಅದು ಅಷ್ಟು ಸುಲಭಕ್ಕೆ ಸಾದ್ಯವೂ ಇರಲಿಲ್ಲ.

ಆದರೆ.. ಅದೊಂದು ಕಪ್ಪೆ ಸಾವಕಾಶವಾಗಿ ಸಾವದಾನದಿಂದ ಒಂದೊಂದೇ ಹೆಜ್ಜೆ ಇಡುತ್ತಾ ಮುಂಗಾಲಿನಿಂದ ಮರವನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾ ಮರ ಹತ್ತಲು ಆರಂಭಿಸಿತು. ಅದನ್ನು ನೋಡಿ ಬೇರೆ ಕಪ್ಪೆಗಳು ಅಚ್ಚರಿಯಿಂದ ಅರಚತೊಡಗಿದವು. “ಬೇಡ ಮುಂದೆ ಹೋಗಬೇಡ. ಕೆಳಗೆ ಬಿದ್ದು ಕೈಕಾಲು ಮುರಿದುಕೊಳ್ಳುತ್ತೀಯಾ. ಇನ್ನೂ ಮೇಲೆ ಹೋದರೆ ಜಾರಿ ಬಿದ್ದು ಸತ್ತೇ ಹೋಗುತ್ತೀ.. ಇಳಿದು ಬಿಡು. ಮರ ಹತ್ತುವುದಕ್ಕೆ ನಾವು ಮಂಗಗಳಲ್ಲಿ ಕಪ್ಪೆಗಳು. ಇಳಿ.. ಕೆಳಗೆ ಇಳಿ.. ಬೇಡಾ ಮುಂದೆ ಹೋಗಬೇಡ” ಎಂದು ಅಲ್ಲಿ ಸೇರಿದ್ದ  ಕಪ್ಪೆಗಳ ಸಂಕುಲ ಜೋರಾಗಿ ವಟಗುಟ್ಟತೊಡಗಿದವು. ಮುಂಗಾಲಿನಿಂದ ಸನ್ನೆ ಮಾಡಿ ಹೆದರಿಸಲು ಪ್ರಯತ್ನಿಸಿದವು. ಇಳಿಯಲು ಪ್ರಚೋದಿಸತೊಡಗಿದವು.

ಆದರೆ ಆ ಕಪ್ಪೆ ಕೆಳಗೆ ನೋಡುತ್ತಿತ್ತು ನಾಲ್ಕು ಹೆಜ್ಜೆ ಮುಂದಕ್ಕೆ ಏರುತ್ತಿತ್ತು. ಅಂತೂ ಇಂತೂ ಹಾಗೂ ಹೀಗೂ ಪ್ರಯತ್ನ ಮಾಡಿ ಮರವನ್ನು ಏರಿಯೇ ಬಿಟ್ಟಿತು. ಇಷ್ಟೊತ್ತು ಬೇಡವೆಂದು ಅರಚುತ್ತಿದ್ದ ಕಪ್ಪೆಗಳೆಲ್ಲಾ ವಿಸ್ಮಯಗೊಂಡು ಕಪ್ಪೆಯ ಸಾಹಸಕ್ಕೆ ಮರದ ಸುತ್ತ ಸೇರಿದವರು ಚಪ್ಪಾಳೆ ತಟ್ಟಿದವರು. ಇಳಿದು ಬಂದ ಕಪ್ಪೆಯ ಮರೆವಣಿಗೆ ಮಾಡಿದರು. ಅದಕ್ಕೆ ಸನ್ಮಾನ ಮಾಡಿ ನಾಯಕನ ಪಟ್ಟ ಕಟ್ಟಿದರು.  

ಕೊನೆಗೆ ಹಿರಿಯ ಕಪ್ಪೆ ಅಚ್ಚರಿಗೊಂಡು ಗೆದ್ದ ಕಪ್ಪೆಯನ್ನು ಜೋರಾಗಿ ಕೇಳಿತು “ ಕಪ್ಪೆಗಳೆಲ್ಲಾ ಬೇಡವೆಂದರೂ, ಇಳಿದು ಬರಲು ಎಷ್ಟೇ ಒತ್ತಾಯಿಸಿದರು,  ಅದೆಷ್ಟು ಹೆದರಿಸಿದರೂ ನೀನು ಅದು ಹೇಗೆ ಅಷ್ಟು ಎತ್ತರಕ್ಕೆ ಏರಿದೆ? ಭಯವಾಗಲಿಲ್ಲವೇ?

ಗೆದ್ದ ಕಪ್ಪೆಯೂ ಆತಂಕಗೊಂಡು ಹೇಳಿತು “ ಏನು ಇವರೆಲ್ಲಾ ಇಳಿದು ಬರಲು ಹೇಳಿದರಾ? ಹೆದರಿಸಲು ನೋಡಿದರಾ? ಅದೆಲ್ಲಾ ನನಗೆ ಗೊತ್ತಾಗಲೇ ಇಲ್ಲವಲ್ಲಾ. ನನಗೆ ತಲುಪುವ ಗುರಿ ಮಾತ್ರ ಕಾಣುತ್ತಿತ್ತು ಹಾಗೂ ಕೆಳಗಿನ ಕಪ್ಪೆ ಬಾಂಧವರೆಲ್ಲಾ ನನ್ನನ್ನು ಮೇಲಕ್ಕೆ ಏರಲು ಹುರಿದುಂಬಿಸುತ್ತಿದ್ದಾರೆ ಎಂದೇ ಅನ್ನಿಸಿತು. ಆಗುವುದಿಲ್ಲವೆಂದು ಹೆದರಿದ ಹನುಮಂತನೇ ಕಪಿಸೈನ್ಯದ ಪ್ರೋತ್ಸಾಹದಿಂದ ಸಮುದ್ರ ಲಂಘಿಸಿದ ಕಥೆ ನನಗೆ ಗೊತ್ತಿತ್ತು. ಆದ್ದರಿಂದ ಇವರೆಲ್ಲಾ ನನಗೆ ಪ್ರೋತ್ಸಾಹ ಕೊಡುತ್ತಿದ್ದಾರೆಂದುಕೊಂಡು ನನ್ನ ಶಕ್ತಿಯನ್ನೆಲ್ಲಾ ಒಂದುಗೂಡಿಸಿಕೊಂಡು ಮೇಲೆ ಮೇಲಕ್ಕೆ ಏರತೊಡಗಿದೆ.”

ಮುದಿ ಕಪ್ಪೆಯೊಂದು ನಡುವೆ ಬಾಯಿ ಹಾಕಿ “ಅಂದರೆ ನಾವು ಇಷ್ಟೊಂದು ಜನ ಕೆಳಗೆ ಇಳಿ, ಅಪಾಯ ತಂದುಕೊಳ್ಳಬೇಡ, ನಮ್ಮ ಕುಲದಲ್ಲೆ ಯಾರೂ ಮರ ಏರಿಲ್ಲ, ಸಾಹಸ ಮಾಡಿ ಸಾಯಬೇಡ” ಎಂದು ಕೂಗಿ ಹೇಳಿದ್ದು ನಿನಗೆ ಕೇಳಿಸಲಿಲ್ಲವೇ?”

“ಅದು ಹೇಗೆ ತಾತಾ ಕೇಳಿಸುತ್ತೇ. ನನಗೆ ಕಿವಿ ಮಂದ ಎನ್ನುವುದು ನಿಮಗೆ ಗೊತ್ತಿಲ್ಲವೇ. ಮೇಲೆ ಮೇಲಕ್ಕೆ ಏರಿದಂತೆ ನನಗೆ ಯಾವ ಶಬ್ಗವೂ ಕೇಳಲಿಲ್ಲ. ಆದರೆ ನೀವು ಕೈ ಎತ್ತಿ ಹೇಳುತ್ತಿದ್ದಿದ್ದನ್ನೇ ನನಗೆ ಪ್ರೋತ್ಸಾಹ ಕೊಡುತ್ತಿದ್ದೀರಿ ಎಂದುಕೊಂಡು ಏರುವ ಸಾಹಸ ಮಾಡಿ ಗುರಿ ಮುಟ್ಟಿದೆ, ನಾಯಕನ ಪಟ್ಟ ಗಿಟ್ಟಿಸಿದೆ?” ಎಂದು ಹೇಳಿದಾಗ ಅಲ್ಲಿ ನೆರೆದಿರುವ ಎಲ್ಲರಿಗೂ ಅಚ್ಚರಿಯ ಮೇಲೆ ಅಚ್ಚರಿ.

ಇಲ್ಲಿ ಈ ಕಪ್ಪೆಗಳ ಕಥೆ ಕೇವಲ ನೆಪ ಮಾತ್ರ. ಸಾಧನೆಯ ಹಾದಿಯಲ್ಲಿ  ಕಾಲೆಳೆಯುವವರೇ ಹೆಚ್ಚಿರುತ್ತಾರೆ. ಮುಂದೆ ಹೋಗ ಬಯಸುವವರ ನಿಂದಿಸಿ ಹಿಂದಕ್ಕೆಳೆಯುವವರು ನಮ್ಮದೇ ಕುಟುಂಬದವರಿಂದ ಹಿಡಿದು ಊರ ತುಂಬಾ ಇದ್ದೇ ಇರುತ್ತಾರೆ. ಈ ನಕಾರಾತ್ಮಕ ಮಾತುಗಳಿಗೆ ಮನ್ನಣೆ ನೀಡದೇ ಜಾಣ ಕಿವುಡುತನ ತೋರಿ ಇಟ್ಟ ಗುರಿ ಮುಟ್ಟಲು ಮುಂದೆ ಮುಂದೆ ಸಾಗಿದಾಗ ಮಾತ್ರ ಸಾಧನೆ ಸಾಧ್ಯ. ಕಾಲೆಳೆದವರು, ನಿಂದಿಸಿದವರು, ಹೀಯಾಳಿಸಿದವರು, ನಿರುತ್ಸಾಹಿಯನ್ನಾಗಿಸುವವರೇ ಸಾಧನೆ ಮಾಡಿದಾಗ  ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಾರೆ ಹೊಗಳುತ್ತಾರೆ ಸನ್ಮಾನಿಸುತ್ತಾರೆ. ಎತ್ತರಕ್ಕೆ ಹತ್ತಿ ನಿಂತವನನ್ನು ಕೆಳಗೆ ನಿಂತಲ್ಲೆ ನಿಂತು ನೋಡುವವರು ಮೆಚ್ಚಿ ಮಾತಾಡುತ್ತಾರೆ. ಸಾಧಕನಿಗೆ ಬೇಕಿರುವುದು ಗುರಿಯತ್ತ ಲಕ್ಷ್ಯ, ಸತತ ಪರಿಶ್ರಮಗಳು ಮಾತ್ರ. ಸೂಕ್ತ ದಾರಿಯನ್ನು ಆರಿಸಿಕೊಂಡು, ಆಡಿಕೊಳ್ಳುವವರ ಮಾತುಗಳನ್ನು ನಿರ್ಲಕ್ಷಿಸಿ, ನಕಾರಾತ್ಮಕ ಸಲಹೆ ಉಪದೇಶಗಳನ್ನು ಉಪೇಕ್ಷಿಸಿ  ಮುಂದೆ ಮುಂದಕ್ಕೆ ಸಾಗಿದರೆ ಗುರಿ ಮುಟ್ಟಬಹುದು. ಸಕಾರಾತ್ಮಕ ಮನೋಭಾವನೆ ಸಾಧನೆಗೆ ಮೆಟ್ಟಲಾಗಬಹುದು.

-ಶಶಿಕಾಂತ ಯಡಹಳ್ಳಿ. 

25-4-2023

ಯಾವುದು ಸಿರಿತನ ಅದೆಲ್ಲಿದೆ ಬಡತನದ ನೆಮ್ಮದಿಯ ಬದುಕಿಗೆ

 


ಎಲ್ಲೋ ಕೇಳಿದ ಇಲ್ಲವೇ ಓದಿದ ಕಥೆ ಇದು.

ಶ್ರೀಮಂತ ರಾಯರಿಗೆ ಬಡತನ ಅಂದರೇನು ಎಂದು ಮೊಮ್ಮಗನಿಗೆ ತೋರಿಸಿ ಸಿರಿತನದ ಮಹತ್ವವನ್ನು ಮನದಟ್ಟು ಮಾಡಬೇಕೆಂಬಾಸೆ. ಒಂದಿನ ಬಿಡುವು ಮಾಡಿಕೊಂಡು ಮೊಮ್ಮಗನನ್ನು ಹಳ್ಳಿಗೆ ಕರೆದುಕೊಂಡು ಹೋಗಿ ಅಲ್ಲಿಯ ಬಡವರ ಬದುಕಿನ ಬಗೆಯನ್ನು ಮೊಮ್ಮಗನ ಅನುಭವಕ್ಕೆ ದಕ್ಕುವ ಹಾಗೆ ತೋರಿಸಿಕೊಂಡು ಮರುದಿನ ಮರಳಿ ಅರಮನೆಯಂತಹ ತನ್ನ ಮನೆಗೆ ಕರೆದುಕೊಂಡು ಬಂದು “ಏನೇನು ಗಮನಿಸಿದೆ ವಿವರಿಸು” ಎಂದು ಕೇಳಿದ.

“ತಾತಾ ವಿಲ್ಲೇಜ್ ಟ್ರಿಪ್ ಚೆನ್ನಾಗಿತ್ತು. ನಿನಗೆ ಗೊತ್ತಾ ತಾತಾ ನಮ್ಮನೇಲಿ ಒಂದೇ ನಾಯಿ ಇದ್ದರೆ ಅಲ್ಲಿ ಮನೆ ಬೀದಿಗಳಲ್ಲಿ ನಾಯಿಗಳ ಗುಂಪೇ ಇತ್ತು. ಎಲ್ಲಾ ಕೂಡಿ ಆಟ ಆಡ್ತಾ ಇದ್ದವು. ಎಷ್ಟೊಂದು ಚೆಂದ ಅಲ್ವಾ ಪಾಪ ನಮ್ಮ ಪಪ್ಪಿ ಇಲ್ಲಿ ಒಂಟಿಯಾಗಿದೆ.” ಎಂದು ಮನೆಯ ನಾಯಿಯ ಬಗ್ಗೆ ಸಿಂಪಥಿ ತೋರಿಸಿದ ಮೊಮ್ಮಗ.

“ತಾತಾ ಇಲ್ಲಿ ಕೇಳು ತಾತಾ... ಅಲ್ಲಿ ಆ ಊರಲ್ಲಿ ದೊಡ್ಡದಾದ ಕೆರೆ, ಊರ ಮುಂದೆ ಪ್ರೆಶ್ ಆಗಿ ಹರಿಯುವ ನದಿ. ಆ ಊರ ಮಕ್ಕಳು ಕೇಕೆ ಹಾಕುತ್ತಾ ಸಂತೋಷದಿಂದ ಈಸುವುದನ್ನು ನೋಡುವುದೇ ಚೆಂದ. ಇಲ್ಲಿ ನಮ್ಮನೇಲಿ ಒಂದೇ ಒಂದು ಚಿಕ್ಕ ಸ್ವಿಮಿಂಗ್ ಪೂಲ್ ಇದೆ ಅಷ್ಟೇ.. ನಾನೊಬ್ಬನೇ ಸ್ವಿಮ್ ಮಾಡಬೇಕು  ಬೇಜಾರು. ಆ ಮಕ್ಕಳಿಗಾಗುವ ಆನಂದ ಇಲ್ಲಿ ಈ ಕ್ಲೋರಿನ್ ಮಿಶ್ರಿತ ನಿಂತ ನೀರಲ್ಲಿ ಇಲ್ಲ ಬಿಡು ತಾತಾ”

“ತಾತಾ ಆ ಊರಲ್ಲಿ ಆಟವಾಡಲು ದೊಡ್ಡ ಆಟದ ಮೈದಾನವೇ ಇತ್ತು. ಅಲ್ಲಿಯ ಮಕ್ಕಳು ಬುಗುರಿ, ಲಗೋರಿ, ಕೊಕೋ ಕುಂಟಾವಿಲ್ಲೆ, ಚಿನ್ನಿದಾಂಡು ಅಂತಾ ಅದೆಷ್ಟೋ ಬಗೆಯ ಆಟಗಳನ್ನು ಗುಂಪುಗುಂಪಲ್ಲಿ ಆಡಿ ಕೇಕೇ ಹಾಕುತ್ತಾ ಸಂತಸ ಪಡುತ್ತಿದ್ದರು. ಆದರೆ ಇಲ್ಲಿ ಮನೆಯ ಕಂಪೌಂಡ್ ದಾಟಿ ಹೋಗಲೂ ನನಗೆ ಪರ್ಮಿಶನ್ ಇಲ್ಲ. ಅಂತಹ ಆಟಗಳನ್ನ ಶಾಲೆಯಲ್ಲಿಯೂ ಆಡಿಸೋದಿಲ್ಲ. ನನಗಂತೂ ಅಲ್ಲಿಯೇ ಆ ಮಕ್ಕಳ ಜೊತೆಗೆ ಆಟವಾಡುತ್ತಾ ನಲಿಯುವ ಆಸೆ.. ಆದರೆ ನೀನು ಬಿಡದೇ ಎಳೆದುಕೊಂಡು ಬಂದೆ.. ಬ್ಯಾಡ್ ತಾತಾ ನೀನು..”

“ತಾತಾ ನೀನು ಗಮನಿಸಿದೆಯಾ, ರಾತ್ರಿಯಾದರೆ ಆ ಊರ ಆಗಸದಲ್ಲಿ ಅದೆಷ್ಟು ನಕ್ಷತ್ರಗಳು ಸ್ಪಷ್ಟವಾಗಿ ಮಿನುಗುತ್ತಿದ್ದವು ಎಂದು. ನೋಡೋಕೆ ನೂರು ಕಣ್ಣು ಸಾಲದು ತಾತಾ. ಆದರೆ ಇಲ್ಲಿ ನಮ್ಮನೆಯ ಟೆರೇಸ್ ಮೇಲೆ ಬರೀ ಲೈಟ್ಸ್ ಗಳೇ  ತುಂಬಿವೆ. ನಕ್ಷತ್ರಗಳು ಹೊಳಪನ್ನೇ ಕಳೆದುಕೊಂಡಿವೆ. ಪ್ರತಿರಾತ್ರಿ ನಕ್ಷತ್ರಗಳ ನೋಡುತ್ತಾ ಆನಂದಿಸುವ ಆ ಊರಿನ ಜನರು ಅದೆಷ್ಟು ಅದೃಷ್ಟವಂತು ಅಲ್ಲವೇ ತಾತಾ”

“ತಾತಾ ಅಲ್ಲಿಯ ಮಕ್ಕಳು ಅಪ್ಪ ಅಮ್ಮ ಅಣ್ಣ ತಮ್ಮ ಅಕ್ಕ ತಂಗಿ ಚಿಕ್ಕಪ್ಪ ಚಿಕ್ಕಮ್ಮ ಹೀಗೆ ಇಡೀ ಕುಟುಂಬ ಸಮೇತ ಖುಷಿಯಾಗಿದ್ದರು. ಆದರೆ ಇಲ್ಲಿ ನಮ್ಮಪ್ಪ ನಾನು ಮಲಗಿದ ನಂತರ ಮನೆಗೆ ಬರುತ್ತಾರೆ. ಅಮ್ಮ ಕ್ಲಬ್ ನಿಂದ ವಾಪಸ್ ಬರುವುದರೊಳಗೆ ನನ್ನ ಊಟ ಮುಗಿದಿರುತ್ತದೆ. ನೀನೋ ನಿನ್ನ ಗೆಳೆಯರ ಜೊತೆಗೆ ಟೆರೆಸ್ನಲ್ಲಿ ಇಸ್ಪೆಟ್ ಆಡ್ತಿರ್ತೀಯಾ. ಅಜ್ಜಿ ಯಾವಾಗಲೂ ಟಿವಿ ನೋಡ್ತಾ ಇರ್ತದೆ. ನಾನು ಒಬ್ಬಂಟಿ ಎನ್ನುವ ಪೀಲ್ ಬರ್ತಿದೆ ತಾತಾ. ನಾನು ಆ ಹಳ್ಳಿಯಲ್ಲೇ ಹುಟ್ಟಿದ್ದರೆ ಚೆನ್ನಾಗಿತ್ತು ಎಂದೆನ್ನಿಸುತ್ತಿದೆ.

“ನಿನಗೆ ಗೊತ್ತಾ ತಾತಾ.. ನಾವು ಕಾಳು ಬೇಳೆ ಹಾಲು ತರಕಾರಿ ಹೀಗೆ ಎಲ್ಲವನ್ನೂ ಕೊಂಡುಕೊಳ್ಳುತ್ತೇವೆ. ಆದರೆ ಆ ಊರಿನ ಜನ ಅವುಗಳನ್ನು ತಾವೇ ಬೆಳೆಯುತ್ತಾರೆ. ತಾವೂ ತಿಂದು ನಮಗಾಗಿಯೂ ಮಾರ್ಕೆಟ್ ಗೆ ಕಳಿಸುತ್ತಾರೆ. ಅವರು ಎಷ್ಟು ಗ್ರೇಟ್ ಅಲ್ವಾ ತಾತಾ. ನಿಜವಾದ ಶ್ರೀಮಂತರು ನಾವಲ್ಲ ತಾತಾ. ಅವರು.. ಆ ಹಳ್ಳಿಯ ಜನ. ಅವರಲ್ಲಿ ಹಣ ಸಂಪತ್ತುಗಳು ಇರದೇ ಇರಬಹುದು ಆದರೆ ಆನಂದ ನೆಮ್ಮದಿಗಳಿವೆ. ನಮಗೆ ಅವುಗಳ ಕೊರತೆ ಇದೆ ಅಲ್ವಾ”

ಮೊಮ್ಮಗ ತನ್ನ ಹಳ್ಳಿಯ ಪ್ರವಾಸದ ಕಥನವನ್ನು ವಿವರಿಸಿ ಹೇಳುತ್ತಿದ್ದ. ಮೊಮ್ಮಗನಿಗೆ ಬಡತನದ ನೋವನ್ನೂ ಹಾಗೂ ಸಿರಿತನದ ಅನುಕೂಲತೆಗಳ ಕುರಿತು ಅರಿವು ಮೂಡಿಸಲು ಹೊರಟಿದ್ದ ತಾತನಿಗೆ ಮೊಮ್ಮಗನ ಮಾತುಗಳನ್ನು ಕೇಳಿ ಜ್ಞಾನೋದಯವಾದಂತಾಯಿತು. ಮೊಮ್ಮಗನನ್ನು ಬರಸೆಳೆದು ಅಪ್ಪಿಕೊಂಡು

“ಹೌದು ಕಂದಾ, ನೀನು ಇಂದು ನನ್ನ ಕಣ್ಣು ತೆರೆಸಿದೆ. ಹಣ ಸಂಪತ್ತು ಸವಲತ್ತುಗಳೇ ಬದುಕಿಗೆ ಮುಖ್ಯ ಎಂದು ತಿಳಿದು ಇಷ್ಟು ವರ್ಷಗಳ ಕಾಲ ನೆಮ್ಮದಿಯ ಬದುಕಿನಿಂದ ದೂರವಾಗಿದ್ದೆ. ಇನ್ಮೇಲಾದರೂ ಬದಲಾಗಬೇಕಿದೆ. ನನ್ನ ಹಳ್ಳಿಗೆ ಹೋಗಿ ಬಾಕಿ ಬದುಕನ್ನು ಸಂತಸದಿಂದ ಕಳೆಯುವೆ. ರಜೆ ಇದ್ದಾಗ ನೀನು ನನ್ನ ಜೊತೆ ಬಂದು ಇರ್ತೀಯಲ್ವಾ..” ಎಂದಾಗ ತಾತನ ಕಣ್ಣಾಲಿಗೆಯಲ್ಲಿ ಪಶ್ಚಾತ್ತಾಪದ ಕಣ್ಣಹನಿಗಳು ಮೊಮ್ಮಗನ ಕೇಕೆಯಲ್ಲಿ ಕರಗಿಹೋದವು.


ಕಥೆ ಇಷ್ಟೇ.. ಆದರೆ ಇದರ ವ್ಯಾಪ್ತಿ ತುಂಬಾನೇ ದೊಡ್ಡದು. ಹಳ್ಳಿಯಲ್ಲಿ ಏನಿದೆ ಎಂದು ಪಟ್ಟಣಕ್ಕೆ ಹೋಗಿ ಸಾಗರ ಸೇರಿದ ನದಿ ತನ್ನ ಅಸ್ತಿತ್ವನ್ನೇ ಕಳೆದುಕೊಂಡಂತೆ ಬದುಕುವ ಎಲ್ಲರಿಗೂ ಈ ಕಥೆಯೊಂದು ಪಾಠ. ಸಂಪಾದನೆಯ ಹಿಂದೆ ಹೋಗಿ ಸಂತಸವನ್ನು ಕಳೆದುಕೊಂಡ ಪ್ರತಿಯೊಬ್ಬರು ಯೋಚನೆ ಮಾಡಬೇಕಿದೆ. ಹುಟ್ಟಿದ ಹಳ್ಳಿಯನ್ನು ತೊರೆದು ಪಟ್ಟಣಕ್ಕೆ ಹೋಗಿ ನಿಜ ನೆಮ್ಮದಿಯನ್ನು ಕಳೆದುಕೊಂಡು ಕೃತಕ ಪರಿಸರದಲ್ಲಿ ಜೀವಿಸುತ್ತಾ ಅದೇ ಬದುಕು ಎಂಬ ಭ್ರಮೆಯಲ್ಲಿರುವ ಎಲ್ಲರೂ ಆಲೋಚಿಸಬೇಕಿದೆ. ಅದೆಷ್ಟೇ ಶ್ರೀಮಂತಿಕೆ ಇದ್ದರೂ ನೆಮ್ಮದಿ ಎನ್ನುವುದು ಐಷಾರಾಮಿ ವಸ್ತುಗಳಲ್ಲಿ ಇಲ್ಲ, ಕಾರು ಬಂಗಲೆಗಳಲ್ಲಿ ಇಲ್ಲ. ಸೂಟು ಕೋಟುಗಳಲ್ಲಿ ಇಲ್ಲ. ಇದೆಲ್ಲಾ ಇಲ್ಲದವರು ಬಡವರೂ ಅಲ್ಲ. ಕೂಡಿ ಬಾಳುವಲ್ಲಿ, ಹಂಚಿ ತಿನ್ನುವುದರಲ್ಲಿ, ಗುಂಪಾಗಿ ಅಟೋಟಗಳಲ್ಲಿ ತೊಡಗಿಕೊಳ್ಳುವುದರಲ್ಲಿ, ಹಬ್ಬ ಹರಿದಿನಗಳನ್ನು ಊರವರ ಜೊತೆ ಸೇರಿ ಸಂಭ್ರಮಿಸುವುದರಲ್ಲಿ, ಒಬ್ಬರ ಕಷ್ಟ ಸುಖಕ್ಕೆ ಇನ್ನೊಬ್ಬರು ಆಗುವುದರಲ್ಲಿ ಸಂತಸವಿದೆ, ಸಿರಿತನವಿದೆ, ನೆಮ್ಮದಿ ಇದೆ. ದುಡ್ಡೇ ದೊಡ್ಡಪ್ಪ ಎನ್ನುವ ದೊಡ್ಡವರ ಆಸೆ ದುರಾಸೆಗಳನ್ನು ಬದಿಗಿಟ್ಟು, ನೆಮ್ಮದಿ ಆನಂದವೇ ಸಿರಿತನಕ್ಕೂ ಅಪ್ಪ ಎನ್ನುವ ಮಕ್ಕಳ ದೃಷ್ಟಿಕೋನವನ್ನು ಅರ್ಥಮಾಡಿಕೊಂಡಾಗ ಮಾತ್ರ ಮನುಷ್ಯರಾಗಲು ಸಾಧ್ಯ. ಜೀವನವನ್ನು ಸಾರ್ಥಕವಾಗಿ ಬದುಕಲು ಸಾಧ್ಯ. ಸಂಪಾದನೆಯೊಂದೇ ಬದುಕಾದರೆ ನಿಜವಾದ ಸುಖ ಶಾಂತಿ ನೆಮ್ಮದಿ ನೈವೇದ್ಯ.

-ಶಶಿಕಾಂತ ಯಡಹಳ್ಳಿ  

 

 
 

 

ಸೋಮವಾರ, ಏಪ್ರಿಲ್ 24, 2023

ನಾಯಿ ಕಥೆ ರಾಯರ ಜೊತೆ..

 


ನಾಯಿ ಕಥೆ ರಾಯರ ಜೊತೆ..

ಇದೊಂದು ನಾಯಿ ಕಥೆ..

ಅವತ್ತು ಬೆಳಿಗ್ಗೆ ರಾಯರು ಪ್ರತಿದಿನದಂತೆ ವಾಯುಸೇವನೆಗೆ ಹೊರಟಿದ್ದರು. ಯಾರೋ ಹಿಂಬಾಲಿಸುತ್ತಿದ್ದಾರೆಂಬ ಅನುಮಾನ ಬಂದು ಹಿಂತಿರುಗಿ ನೋಡಿದರೆ ಯಕಶ್ಚಿತ್  ಕಂತ್ರಿ ನಾಯಿ.

 “ಏ ಥೂ ನಾಯಿ.. ತೊಲಗಾಚೆ “ ಎಂದು ಕ್ಯಾಕರಿಸಿ ಉಗಿದು ಮುಂದೆ ನಡೆದರು.

“ಇರಿ.. ಸ್ವಲ್ಪ ನಿಲ್ಲಿ ರಾಯರೇ” ಎಂದು ಯಾರೋ ಹಿಂದಿನಿಂದ ಕರೆದಂತಾಯ್ತು. ಯಾರು ಎಂದು ಹಿಂತಿರುಗಿ ನೋಡಿದರೆ ಯಾರೂ ಇಲ್ಲ. ಅದೇ ನಾಯಿ ಬಾಲ ಅಲ್ಲಾಡಿಸುತ್ತಾ ಕರುಣೆಯಿಂದ ನೋಡುತ್ತಿತ್ತು.

“ರಾಯರೇ ನಮಸ್ಕಾರ. ನಿಮಗೆ ಬೆಳಗಿನ ವಂದನೆಗಳು” ಎಂದಿತು.

ರಾಯರಿಗೆ ಅಚ್ಚರಿ. ಅರೆ ನಾಯಿ ಮಾತಾಡ್ತಿದೆಯಲ್ಲಾ. ಹತ್ತಿರ ಹೋಗಲು ಹೆದರಿಕೆ. ಕಚ್ಚಿ ಬಿಟ್ಟರೆ ಏನು ಗತಿ ಎಂಬ ಆತಂಕ.

“ಎನೂ ಹೆದರಬೇಡಿ ರಾಯರೇ ನಾನೇನು ನಿಮ್ಮನ್ನು ಕಚ್ಚುವುದಿಲ್ಲ. ಅಷ್ಟಕ್ಕೂ ಸುಮ್ಮಸುಮ್ಮನೇ ಕಚ್ಚುವುದು ನಾಯಿಕುಲದ ಸ್ವಭಾವವೂ ಅಲ್ಲ, ಸ್ವಲ್ಪ ನಿಲ್ಲಿ ನನ್ನ ಮಾತು ಕೇಳಿ” ಎಂದಿತು ಶ್ವಾನ.

ವಿಸ್ಮಯಗೊಂಡು ನಿಂತಲ್ಲೇ ನಿಂತ ರಾಯರು “ ಏನು ಬೇಕು ನಿನಗೆ.. ಥೂ ಹೋಗಾಚೆ.., ಉಳ್ಳವರು ಶ್ರೀಮಂತರು ಸೂಟುಬೂಟುದಾರಿಗಳು ಬಂದರೆ ಬಾಲ ಅಲ್ಲಾಡಿಸುವ ನೀನು ನನ್ನಂತಹ ಬಡವರು ಬಂದರೆ ಬೊಗಳಿ ಬೆದರಿಸಿ ಓಡಿಸುವೆ. ಈಗ ನೋಡಿದರೆ ಮನುಷ್ಯರಂತೆಯೇ ಮಾತಾಡ್ತಿದ್ದೀ, ಏನು ಕಾಲ ಕೆಟ್ಟಿದೆಯಪ್ಪಾ ” ಎಂದು ಗದರಿದರು.

“ರಾಯರೆ ನಾವು ನಾಯಿಗಳು ನೀವು ಅಂದುಕೊಂಡಷ್ಟು ಕೆಟ್ಟವರಂತೂ ಖಂಡಿತಾ ಅಲ್ಲಾ. ನಿಮ್ಮ ಹಾಗೆ ಮೇಲು ಕೀಳು ತಾರತಮ್ಯಗಳು ಶ್ವಾನ ಜಾತಿಯಲ್ಲಿ ಇಲ್ಲ. ನಿಮ್ಮಂತೆ ದುರಾಸೆಗಳೂ ನಮಗಿಲ್ಲ” ಎಂದ ಶ್ವಾನದ ಮಾತು ಕೇಳಿ ಕೆರಳಿದ ರಾಯರು

“ಏನು ಏನೆಂದೆ.. ನನಗೆ ಬುದ್ದಿ ಹೇಳ್ತಿದ್ದೀಯಾ.. ನೀಚ ನಾಯಿ.. “ ಎಂದು ಕೈಎತ್ತಿ ಹೊಡದಂತೆ ಮಾಡಿದರು.

“ಯಾಕೆ ರಾಯರೇ ನಿಜ ಹೇಳಿದರೆ ಕೋಪ ನಿಗುನಿಗುರಿ ಬುಗುರಿಯಂತೆ ತಿರುಗುತ್ತದೆ. ನಿಮ್ಮ ಹಾಗೆ ಮನೆಕಟ್ಟಿಕೊಳ್ಳುವ ಬಯಕೆ ನಮಗಿಲ್ಲ. ಆಸ್ತಿ ಅಂತಸ್ತು ಮಾಡಿಕೊಳ್ಳುವ ಆಸೆಗಳೂ ಇಲ್ಲ. ಹಣ ಬಂಗಾರದ ಗೊಡವೆಗಳು ನಮಗೆ ಬೇಕಿಲ್ಲ. ಬದುಕುವುದಕ್ಕಾಗಿ ತಿನ್ನುತ್ತೇವೇಯೇ ಹೊರತು ನಾಳೆಗೆ ನಮಗೆ ನಮ್ಮ ಸಂತಾನಕ್ಕೆ ಇರಲಿ ಎಂದು ಏನನ್ನೂ ಕೂಡಿಡುವುದಿಲ್ಲ” ಎಂದು ಲೇವಡಿ ಮಾಡಿ ಬಾಲ ಅಲ್ಲಾಡಿಸಿತು ಶ್ವಾನ.

ಅವಮಾನಕ್ಕೊಳಗಾದಂತೆ ಕನಲಿ ಕೆಂಡವಾದ ರಾಯರು “ ಥೂ.. ಶ್ರೇಷ್ಟರಾದ ಮನುಷ್ಯರ ಕುರಿತು ಯಕಶ್ಚಿತ್ ನಾಯಿಯಾದ ನೀನು ಬಾಯಿಗೆ ಬಂದಂತೆ  ಬೊಗಳುತ್ತೀಯಾ..?

“ ಇದೇ ಬೇಡಾ ಎನ್ನುವುದು. ಈ ಶ್ರೇಷ್ಟತೆಯ ವ್ಯಸನವೇ ನಿಮ್ಮನ್ಮು ದುರಹಂಕಾರಿಯಾಗಿ ಮಾಡಿದ್ದು. ನೀವು ಮಾತಾಡುತ್ತೀರಿ, ನಾವೂ ಮಾತಾಡುತ್ತೇವೆ. ನಿಮ್ಮದು ಮಾತೇ ಭಾಷೆಯಾದರೆ ನಮ್ಮದು ಬೊಗಳುವುದೇ ಭಾಷೆ. ನಮ್ಮದು ಆಸೆ, ದುರಾಸೆ, ಮಡಿಹುಡಿ ಮೌಢ್ಯಗಳಿಲ್ಲದ ಸರಳ ಬದುಕು. ನಿಮ್ಮದು ನಂಬಿಕೆ ಅಪನಂಬಿಕೆ ದುರಾಲೋಚನೆ ಅಹಮಿಕೆ ಇರುವ ಬದುಕು. ನಾಯಿಯಾದರೂ ನೆಮ್ಮದಿಯ ಬದುಕು ನಮ್ಮದು. ಬುದ್ದಿ ಭಾಷೆ ಇರುವ ನೀವುಗಳೋ ನೆಮ್ಮದಿಯೇ ಇಲ್ಲದೇ ಅಲೆದಾಡುವ ಅತೃಪ್ತ ಆತ್ಮಗಳಂತಹ ಬದುಕು. ಹೌದೋ ಅಲ್ಲವೋ ಯೋಚನೆ ಮಾಡಿ ರಾಯರೇ” ಎಂದು ಹೇಳಿದ ನಾಯಿ ಕಿವಿ ನಿಮಿರಿಸಿ ಉತ್ತರಕ್ಕಾಗಿ ಕಾಯತೊಡಗಿತು.

ಈಗ ರಾಯರು ಚಿಂತೆಗೆ ಬಿದ್ದರು. ಮುಂದಕ್ಕೆ ತಿರುಗಿ ಹೆಜ್ಜೆ ಹಾಕುತ್ತಾ ಯೋಚಿಸಲು ಶುರುಮಾಡಿದರು. “ಹೌದಲ್ಲಾ.. ಎಷ್ಟೇ ತಿಂದರೂ, ಅದೆಷ್ಟೇ ಸಂಪಾದಿಸಿದರೂ ತೃಪ್ತಿ ಅನ್ನುವುದೇ ಇಲ್ಲವಲ್ಲಾ ನಮಗೆ. ಬೇಕು ಇನ್ನೂ ಬೇಕು ಎನ್ನುವ ಬೇಡಿಕೆಗಳಲ್ಲಿಯೇ ಬದುಕು ಸವೆಯುತ್ತಿದೆಯಲ್ಲಾ. ಒಂದೇ ಒಂದು ದಿನವೂ ನಾಳೆಯ ಚಿಂತೆ ಇಲ್ಲದೇ ನಿದ್ದೆ ಮಾಡಿದ್ದೇ ಇಲ್ಲವಲ್ಲಾ.. ಈ ನಾಯಿ ಹೇಳುವ ಹಾಗೆ ನಮಗಿಂತಲೂ ನಾಳೆಯ ಚಿಂತೆ ಇಲ್ಲದ ಈ ಶ್ವಾನಗಳೇ ತೃಪ್ತ ಜೀವಿಗಳಾ, ಇವುಗಳಿಗೆ ದೇವರು ಧರ್ಮ ಕರ್ಮಗಳ ಭಯವಿಲ್ಲ, ಕೂಡಿ ಹಾಕಬೇಕೆಂಬ ದುರಾಸೆಗಳಿಲ್ಲ, ವರ್ತಮಾನದಲ್ಲಿ ಸ್ವಾರ್ಥರಹಿತವಾಗಿ ಬದುಕಿ ಒಂದು ದಿನ ಸಾಯುತ್ತವೆ. ನಮಗೂ ಸಾವು ತಪ್ಪಿದ್ದಲ್ಲ. ಆದರೆ ಬದುಕಿದ್ದಾಗ ಸ್ವಾರ್ಥಕ್ಕಾಗಿ, ಸಂಪತ್ತಿಗಾಗಿ, ಸಂಪಾದನೆಗಾಗಿ ಏನೆಲ್ಲಾ ಮಾಡುತ್ತೇವೆ. ಅದಕ್ಕಾಗಿ ಎಷ್ಟೊಂದು ಸುಳ್ಳು, ವಂಚನೆ, ನಂಬಿಕೆದ್ರೋಹಗಳನ್ನು ಮಾಡುತ್ತೇವೆ. ಛೇ.. ಮನುಷ್ಯರಿಗಿಂತ ಪ್ರಾಣಿ ಪಕ್ಷಿಗಳ ಜೀವನವೇ ತೃಪ್ತಿದಾಯಕವಾ..” ಎಂದು ಯೋಚಿಸುತ್ತಾ ಹಿಂತಿರುಗಿ ನೋಡಿದರೆ ಅಲ್ಲೇನಿದೆ.. ಹಿಂಬಾಲಿಸುತ್ತಿದ್ದ ನಾಯಿಯೂ ಮಾಯವಾಗಿದೆ. ರಾಯರ ಮನದೊಳಗಿನ ಅರಿವು ಜಾಗೃತವಾಗಿದೆ.

-ಶಶಿಕಾಂತ ಯಡಹಳ್ಳಿ.

ಸುಳ್ಳು ಸತ್ಯಗಳ ನಡುವೆ ಸಾಧನೆ ಮತ್ತು ಸಾವು :

 


ಸುಳ್ಳು ಸತ್ಯಗಳ ನಡುವೆ ಸಾಧನೆ ಮತ್ತು ಸಾವು :

ಅದೊಂದು ಶ್ರೀಮಂತ ಕುಟುಂಬ. ಬಹುದಿನಗಳ ನಂತರ ಮಗುವೊಂದು ಹುಟ್ಟಿದ್ದರಿಂದ ಮನೆಯಲ್ಲಿ ಸಂಭ್ರಮ. ಮಗುವಿನ ಭವಿಷ್ಯ ಹೇಳಲು ಹಲವಾರು ಜ್ಯೋತಿಷಿಗಳನ್ನು ಕರೆಸಲಾಯಿತು.  ಒಬ್ಬ ಹೇಳಿದ “ಈ ಮಗುವಿನ ಮುಖದ ಕಾಂತಿ ಅದ್ಬುತ. ಬಲು ದೊಡ್ಡ ನಾಯಕನಾಗುವುದು ಖಂಡಿತ”. ಇದನ್ನು ಕೇಳಿ ಖುಷಿಗೊಂಡ ಹೆತ್ತವರು ಹೆಮ್ಮೆಯಿಂದ ಬೀಗಿ ಕಾಣಿಕೆಯನ್ನು ಕೊಟ್ಟು ಸನ್ಮಾನಿಸಿದರು.

ಇನ್ನೊಬ್ಬ ಮಗುವನ್ನು ನೋಡಿ ನುಡಿದ.. “ಅದೆಂತಾ ದಿವ್ಯ ಕಳೆ ಮಗುವಿನ ಮುಖದಲ್ಲಿ ಹೊಳೆಯುತ್ತಿದೆ. ಇಡೀ ಜಗತ್ತಿಗೆ ಬೆಳಕಾಗುವ ದಾರ್ಶನಿಕನಾಗುವುದರಲ್ಲಿ ಸಂದೇಹವೇ ಇಲ್ಲ”. ಅವನಿಗೂ ಸನ್ಮಾನ ಮಾಡಿ ಕಾಣಿಕೆ ಕೊಡಲಾಯ್ತು. ಹೀಗೆ ಬಹುತೇಕ ಜ್ಯೋತಿಷಿಗಳು ಸನ್ಮಾನ ಕಾಣಿಕೆಗಳಿಗೆ ಮರುಳಾಗಿ ಮಗುವಿನ ಬಗ್ಗೆ ಹೊಗಳಿಕೆಯ ಮಾತುಗಳನ್ನೇ ಆಡಿ ಕೊಡುಗೆಗಳನ್ನು ಪಡೆದು ಕೃತಾರ್ಥರಾದರು.

ಆದರೆ ಕೊಟ್ಟ ಕೊನೆಗೆ ಪಕೀರನಂತೆ ಕಾಣುವವನೊಬ್ಬ ಮಗುವನ್ನು ಹಾಗೂ ಅದರ ಹೆತ್ತವರನ್ನು ಕೂಲಂಕುಷವಾಗಿ ಪರಿಶೀಲಿಸಿ “ಈ ಮಗು ಮುಂದೆ ಏನಾಗುತ್ತದೆ ಎಂಬುದನ್ನು ಸಮಯ ಸಂದರ್ಭಗಳು ಮಾತ್ರ ನಿರ್ಧರಿಸಲು ಸಾಧ್ಯ.. ಒಂದಂತೂ ಸತ್ಯ ಈ ಮುಗುವಿನ ಕುರಿತು ಹೇಳಬಹುದಾದ ಅಂತಿಮ ಸತ್ಯವೇನೆಂದರೆ ಸಾವು ಮಾತ್ರ ಖಚಿತ..”

ಶುಭ ಸಂದರ್ಭದಲ್ಲಿ ಅಶುಭ ಮಾತಾಡ್ತೀಯಾ ಪಾಪಿ ಪಕೀರಾ ಎಂದವರೇ ಅಲ್ಲಿ ನೆರೆದವರೆಲ್ಲ ಸೇರಿ ಆಳಿಗೊಂದು ಏಟು ಹಾಕಿದರು. ಗಾಯಗೊಂಡ ಪಕೀರ ಎಲ್ಲರಿಂದ ಬಿಡಿಸಿಕೊಂಡು ಅಲ್ಲಿಂದ ಹೋಗುವ ಮುನ್ನ ಹೇಳಿದ್ದೇನೆಂದರೆ. “ ಕೇಳು ಶ್ರೀಮಂತ.. ಸುಳ್ಳು ಮತ್ತು ಸತ್ಯದ ನಡುವಿನ ವ್ಯತ್ಯಾಸ ಇಷ್ಟೇ.. ಸುಂದರವಾದ ಸಿಹಿ ಸುಳ್ಳು ಸನ್ಮಾನಿಸಲ್ಪುಡುತ್ತದೆ. ಆದರೆ ಸತ್ಯ ಯಾವಾಗಲೂ ಕಹಿಯಾಗಿದ್ದು ಶಿಕ್ಷಿಸಲ್ಪಡುತ್ತದೆ. ಇಲ್ಲಿರುವ ಎಲ್ಲರೂ ಸುಳ್ಳಿನಿಂದ ಆಗಬಹುದಾದ ಲಾಭಕ್ಕಾಗಿ ಮಾತ್ರ.  ಏಕ ಕಾಲಕ್ಕೆ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ  ನಾಯಕ, ದಾರ್ಶನಿಕ, ಐಶ್ವರ್ಯವಂತ, ಮಹಾದಾನಿ, ಕಲಾಕಾರ, ಸಾಹಸಿ, ದಯಾಳು, ರಾಜ, ಚಕ್ರವರ್ತಿ ಯಾಗಲು ಅದು ಹೇಗೆ ಸಾಧ್ಯ?. ಆದರೆ ಎಲ್ಲರ ಬದುಕಿನ ಅಂತಿಮ ಸತ್ಯ ಒಂದೇ ಅದು ಸಾವು.. ಸಾವು.. ಇಂದಿಲ್ಲ ನಾಳೆ ಸಾಯಲೇ ಬೇಕು ನಾವು ನೀವು..” 

ಬದುಕು ಅನ್ನೋದು ಇಷ್ಟೇ.. ಯಾರು ಮುಂದೆ ಏನಾಗುತ್ತಾರೆ ಎಂಬುದನ್ನು ಯಾವುದೇ ಭವಿಷ್ಯವಾಣಿಯಾಗಲೀ, ಜ್ಯೋತಿಷ್ಯ ಶಾಸ್ತ್ರವಾಗಲೀ ನಿರ್ಧರಿಸಲು ಸಾಧ್ಯವೇ ಇಲ್ಲ. ಸಾಧ್ಯವಾಗುವುದೇ ದಿಟವಾಗುವುದಿದ್ದರೆ ಜ್ಯೋತಿಷಿಗಳೇ ದೇವರುಗಳಾಗುತ್ತಿದ್ದರು. ಮುಂದಾಗಬಹುದಾಗುವುದು ನಿಖರವಾಗಿ ಮೊದಲೇ ಗೊತ್ತಾಗುವಂತಿದ್ದರೆ ಪ್ರತಿಯೊಬ್ಬ ಮನುಷ್ಯರು ಭಾವೀ ಭವಿಷ್ಯವನ್ನು ವರ್ತಮಾದಲ್ಲಿಯೇ ಬದಲಾಯಿಸಿಕೊಂಡು ನೆಮ್ಮದಿಯಾಗಿರಬಹುದಾಗಿತ್ತು. ಗೌತಮ ಬುದ್ದರು ಹೇಳಿದ ಹಾಗೆ “ಜ್ಯಾತಸ್ಯ ಮರಣಂ ದೃವಂ” ಎಂಬುದೊಂದೇ ಅಂತಿಮ ಸತ್ಯ. ತಾನು ಮುಂದೆ ಏನಾಗಬೇಕು ಎಂಬುದನ್ನು ಜ್ಯೋತಿಷ್ಯ ಭವಿಷ್ಯಗಳನ್ನು ಕೇಳಿ ಯಾರಿಗೂ ನಿರ್ಧರಿಸಿ ಮುನ್ನಡೆಯಲು ಸಾಧ್ಯವೂ ಇಲ್ಲಾ, ಸಾಧುವೂ ಅಲ್ಲ.

ಹುಟ್ಟಿದ ಪ್ರತಿ ವ್ಯಕ್ತಿ ವರ್ತಮಾನದಲ್ಲಿ ತನ್ನ ಸ್ವಸಾಮರ್ಥ್ಯ, ಬದಲಾಯಿಸಿಕೊಳ್ಳಬಹುದಾದ ವ್ಯಕ್ತಿತ್ವ, ಸತತ ಪ್ರಯತ್ನಗಳಿಂದ ಮಾತ್ರ ತನ್ನ ಭವಿಷ್ಯವನ್ನು ತಾನೇ ನಿರ್ಧರಿಸಿಕೊಂಡು ಸಾಧನೆಯತ್ತ ಸಾಗಿ ಇಟ್ಟ ಗುರಿಯನ್ನು ಮುಟ್ಟಬಹುದಾಗಿದೆ. ಅದಕ್ಕಾಗಿ ಸೂಕ್ತ ದಾರಿಗಳನ್ನು ಕಂಡುಕೊಳ್ಳಬೇಕಾಗಿದೆ. ಪ್ರತಿ ವ್ಯಕ್ತಿಯ ಸಾಧನಗೆ ಪೂರಕವಾಗಿ ಆತನ ಹೆತ್ತವರು, ಗೆಳೆಯರು, ಬಂಧು ಬಾಂಧವರು ಒಂದಿಷ್ಟು ಸಹಾಯ ಮಾಡಬಹುದಾಗಿದೆ. ಯಾರು ಕುದುರೆಗೆ ಅದೆಷ್ಟೇ ಪರಿಶುದ್ಧ ನೀರನ್ನು ಕುಡಿಯಲು ಸಲಹೆ ಕೊಟ್ಟು ನೀರನ್ನು ಮುಂದಿಟ್ಟರೂ ಕೊನೆಗೂ ಕುಡಿಯ ಬೇಕಾದದ್ದು ಕುದುರೆಯೇ ಆಗಿದೆ. ಬಲವಂತದ ಉಪದೇಶ, ಬಲವಂತದಿ ಗುರಿ ಸಾಧನೆಯ ಆದೇಶಗಳು ಉದ್ದೇಶಿತ ಪರಿಣಾಮಗಳನ್ನು ಸಾಧಿಸಲಾರವು.

ಹೊಳಪುಳ್ಳ ಹೊಗಳಿಕೆಗಳು ದಾರಿತಪ್ಪಿಸುವ ಸಾಧನಗಳಾಗಿವೆ ಹಾಗೂ ಕಹಿಯಾದರೂ ಸತ್ಯವೆನ್ನುವುದು ಸಾಧನೆಯ ಹಾದಿಯಲ್ಲಿ ದಾರಿದೀಪವಾಗುತ್ತವೆ ಎನ್ನುವುದನ್ನು ಯಾವ ವ್ಯಕ್ತಿ ಅರಿತುಕೊಳ್ಳುತ್ತಾನೋ ಆತ ಸಾಧಕನಾಗುತ್ತಾನೆ. ಇಲ್ಲಿ ಈ ಜಗದಲ್ಲಿ ಯಾರು ಚಿರಂಜೀವಿಗಳಲ್ಲ, ಸಾವು ಎನ್ನುವ ಅನಿವಾರ್ಯ ಅಂತಿಮ ಸತ್ಯವನ್ನು ಅರ್ಥಮಾಡಿಕೊಂಡು ಇರುವಷ್ಟು ದಿನಗಳ ಕಾಲ ಹೇಗೆ ಸ್ವಾರ್ಥರಹಿತವಾಗಿ ಪರೋಪಕಾರಿಯಾಗಿ ಬಾಳಬೇಕು ಎನ್ನುವುದರಲ್ಲಿಯೇ ಜೀವನದ ಸಾರ್ಥಕತೆ ಇದೆ. ಸತ್ತನಂತರವೂ ಇದ್ದವರ ಮನದಲ್ಲಿ ಸಿಹಿ ನೆನಪಾಗಿ ಕಾಡುವುದರ ಮೂಲಕ ಸಾವಿಗೂ ಗೌರವವನ್ನು ತರಬಹುದಾದ ಸಾಧ್ಯತೆ ಮುಖ್ಯವಾಗುತ್ತದೆ. ಸಾವು ಎನ್ನುವ ಸತ್ಯದ ಕುರಿತು ಅಂತರಂಗದಲ್ಲಿರುವ ಪಕೀರ ಸದಾ ಎಚ್ಚರಿಸುತ್ತಲೇ ಬದುಕಿನ ಸಾರ್ಥಕತೆಗಳ ಬಗ್ಗೆ  ಮಾರ್ಗದರ್ಶನ ಮಾಡುತ್ತಲೇ ಇರಬೇಕಾಗುತ್ತದೆ. ಇದೇ ಜೀವನ.. ಇದುವೇ ಬದುಕಿನ ಪಯಣ.. ಅಂತಿಮವಾಗಿ ಬರುವುದಿದ್ದರೆ ಬರಲಿ ಬಿಡಿ ಮರಣ.

-ಶಶಿಕಾಂತ ಯಡಹಳ್ಳಿ.