ಸುಳ್ಳು ಸತ್ಯಗಳ ನಡುವೆ ಸಾಧನೆ ಮತ್ತು ಸಾವು :
ಅದೊಂದು ಶ್ರೀಮಂತ ಕುಟುಂಬ. ಬಹುದಿನಗಳ ನಂತರ ಮಗುವೊಂದು ಹುಟ್ಟಿದ್ದರಿಂದ ಮನೆಯಲ್ಲಿ ಸಂಭ್ರಮ. ಮಗುವಿನ ಭವಿಷ್ಯ ಹೇಳಲು ಹಲವಾರು ಜ್ಯೋತಿಷಿಗಳನ್ನು ಕರೆಸಲಾಯಿತು. ಒಬ್ಬ ಹೇಳಿದ “ಈ ಮಗುವಿನ ಮುಖದ ಕಾಂತಿ ಅದ್ಬುತ. ಬಲು ದೊಡ್ಡ ನಾಯಕನಾಗುವುದು ಖಂಡಿತ”. ಇದನ್ನು ಕೇಳಿ ಖುಷಿಗೊಂಡ ಹೆತ್ತವರು ಹೆಮ್ಮೆಯಿಂದ ಬೀಗಿ ಕಾಣಿಕೆಯನ್ನು ಕೊಟ್ಟು ಸನ್ಮಾನಿಸಿದರು.
ಇನ್ನೊಬ್ಬ ಮಗುವನ್ನು ನೋಡಿ ನುಡಿದ.. “ಅದೆಂತಾ ದಿವ್ಯ ಕಳೆ ಮಗುವಿನ ಮುಖದಲ್ಲಿ ಹೊಳೆಯುತ್ತಿದೆ. ಇಡೀ ಜಗತ್ತಿಗೆ ಬೆಳಕಾಗುವ ದಾರ್ಶನಿಕನಾಗುವುದರಲ್ಲಿ ಸಂದೇಹವೇ ಇಲ್ಲ”. ಅವನಿಗೂ ಸನ್ಮಾನ ಮಾಡಿ ಕಾಣಿಕೆ ಕೊಡಲಾಯ್ತು. ಹೀಗೆ ಬಹುತೇಕ ಜ್ಯೋತಿಷಿಗಳು ಸನ್ಮಾನ ಕಾಣಿಕೆಗಳಿಗೆ ಮರುಳಾಗಿ ಮಗುವಿನ ಬಗ್ಗೆ ಹೊಗಳಿಕೆಯ ಮಾತುಗಳನ್ನೇ ಆಡಿ ಕೊಡುಗೆಗಳನ್ನು ಪಡೆದು ಕೃತಾರ್ಥರಾದರು.
ಆದರೆ ಕೊಟ್ಟ ಕೊನೆಗೆ ಪಕೀರನಂತೆ ಕಾಣುವವನೊಬ್ಬ ಮಗುವನ್ನು ಹಾಗೂ ಅದರ ಹೆತ್ತವರನ್ನು ಕೂಲಂಕುಷವಾಗಿ ಪರಿಶೀಲಿಸಿ “ಈ ಮಗು ಮುಂದೆ ಏನಾಗುತ್ತದೆ ಎಂಬುದನ್ನು ಸಮಯ ಸಂದರ್ಭಗಳು ಮಾತ್ರ ನಿರ್ಧರಿಸಲು ಸಾಧ್ಯ.. ಒಂದಂತೂ ಸತ್ಯ ಈ ಮುಗುವಿನ ಕುರಿತು ಹೇಳಬಹುದಾದ ಅಂತಿಮ ಸತ್ಯವೇನೆಂದರೆ ಸಾವು ಮಾತ್ರ ಖಚಿತ..”
ಶುಭ ಸಂದರ್ಭದಲ್ಲಿ ಅಶುಭ ಮಾತಾಡ್ತೀಯಾ ಪಾಪಿ ಪಕೀರಾ ಎಂದವರೇ ಅಲ್ಲಿ ನೆರೆದವರೆಲ್ಲ ಸೇರಿ ಆಳಿಗೊಂದು ಏಟು ಹಾಕಿದರು. ಗಾಯಗೊಂಡ ಪಕೀರ ಎಲ್ಲರಿಂದ ಬಿಡಿಸಿಕೊಂಡು ಅಲ್ಲಿಂದ ಹೋಗುವ ಮುನ್ನ ಹೇಳಿದ್ದೇನೆಂದರೆ. “ ಕೇಳು ಶ್ರೀಮಂತ.. ಸುಳ್ಳು ಮತ್ತು ಸತ್ಯದ ನಡುವಿನ ವ್ಯತ್ಯಾಸ ಇಷ್ಟೇ.. ಸುಂದರವಾದ ಸಿಹಿ ಸುಳ್ಳು ಸನ್ಮಾನಿಸಲ್ಪುಡುತ್ತದೆ. ಆದರೆ ಸತ್ಯ ಯಾವಾಗಲೂ ಕಹಿಯಾಗಿದ್ದು ಶಿಕ್ಷಿಸಲ್ಪಡುತ್ತದೆ. ಇಲ್ಲಿರುವ ಎಲ್ಲರೂ ಸುಳ್ಳಿನಿಂದ ಆಗಬಹುದಾದ ಲಾಭಕ್ಕಾಗಿ ಮಾತ್ರ. ಏಕ ಕಾಲಕ್ಕೆ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ನಾಯಕ, ದಾರ್ಶನಿಕ, ಐಶ್ವರ್ಯವಂತ, ಮಹಾದಾನಿ, ಕಲಾಕಾರ, ಸಾಹಸಿ, ದಯಾಳು, ರಾಜ, ಚಕ್ರವರ್ತಿ ಯಾಗಲು ಅದು ಹೇಗೆ ಸಾಧ್ಯ?. ಆದರೆ ಎಲ್ಲರ ಬದುಕಿನ ಅಂತಿಮ ಸತ್ಯ ಒಂದೇ ಅದು ಸಾವು.. ಸಾವು.. ಇಂದಿಲ್ಲ ನಾಳೆ ಸಾಯಲೇ ಬೇಕು ನಾವು ನೀವು..”
ಬದುಕು ಅನ್ನೋದು ಇಷ್ಟೇ.. ಯಾರು ಮುಂದೆ ಏನಾಗುತ್ತಾರೆ ಎಂಬುದನ್ನು ಯಾವುದೇ ಭವಿಷ್ಯವಾಣಿಯಾಗಲೀ, ಜ್ಯೋತಿಷ್ಯ ಶಾಸ್ತ್ರವಾಗಲೀ ನಿರ್ಧರಿಸಲು ಸಾಧ್ಯವೇ ಇಲ್ಲ. ಸಾಧ್ಯವಾಗುವುದೇ ದಿಟವಾಗುವುದಿದ್ದರೆ ಜ್ಯೋತಿಷಿಗಳೇ ದೇವರುಗಳಾಗುತ್ತಿದ್ದರು. ಮುಂದಾಗಬಹುದಾಗುವುದು ನಿಖರವಾಗಿ ಮೊದಲೇ ಗೊತ್ತಾಗುವಂತಿದ್ದರೆ ಪ್ರತಿಯೊಬ್ಬ ಮನುಷ್ಯರು ಭಾವೀ ಭವಿಷ್ಯವನ್ನು ವರ್ತಮಾದಲ್ಲಿಯೇ ಬದಲಾಯಿಸಿಕೊಂಡು ನೆಮ್ಮದಿಯಾಗಿರಬಹುದಾಗಿತ್ತು. ಗೌತಮ ಬುದ್ದರು ಹೇಳಿದ ಹಾಗೆ “ಜ್ಯಾತಸ್ಯ ಮರಣಂ ದೃವಂ” ಎಂಬುದೊಂದೇ ಅಂತಿಮ ಸತ್ಯ. ತಾನು ಮುಂದೆ ಏನಾಗಬೇಕು ಎಂಬುದನ್ನು ಜ್ಯೋತಿಷ್ಯ ಭವಿಷ್ಯಗಳನ್ನು ಕೇಳಿ ಯಾರಿಗೂ ನಿರ್ಧರಿಸಿ ಮುನ್ನಡೆಯಲು ಸಾಧ್ಯವೂ ಇಲ್ಲಾ, ಸಾಧುವೂ ಅಲ್ಲ.
ಹುಟ್ಟಿದ ಪ್ರತಿ ವ್ಯಕ್ತಿ ವರ್ತಮಾನದಲ್ಲಿ ತನ್ನ ಸ್ವಸಾಮರ್ಥ್ಯ, ಬದಲಾಯಿಸಿಕೊಳ್ಳಬಹುದಾದ ವ್ಯಕ್ತಿತ್ವ, ಸತತ ಪ್ರಯತ್ನಗಳಿಂದ ಮಾತ್ರ ತನ್ನ ಭವಿಷ್ಯವನ್ನು ತಾನೇ ನಿರ್ಧರಿಸಿಕೊಂಡು ಸಾಧನೆಯತ್ತ ಸಾಗಿ ಇಟ್ಟ ಗುರಿಯನ್ನು ಮುಟ್ಟಬಹುದಾಗಿದೆ. ಅದಕ್ಕಾಗಿ ಸೂಕ್ತ ದಾರಿಗಳನ್ನು ಕಂಡುಕೊಳ್ಳಬೇಕಾಗಿದೆ. ಪ್ರತಿ ವ್ಯಕ್ತಿಯ ಸಾಧನಗೆ ಪೂರಕವಾಗಿ ಆತನ ಹೆತ್ತವರು, ಗೆಳೆಯರು, ಬಂಧು ಬಾಂಧವರು ಒಂದಿಷ್ಟು ಸಹಾಯ ಮಾಡಬಹುದಾಗಿದೆ. ಯಾರು ಕುದುರೆಗೆ ಅದೆಷ್ಟೇ ಪರಿಶುದ್ಧ ನೀರನ್ನು ಕುಡಿಯಲು ಸಲಹೆ ಕೊಟ್ಟು ನೀರನ್ನು ಮುಂದಿಟ್ಟರೂ ಕೊನೆಗೂ ಕುಡಿಯ ಬೇಕಾದದ್ದು ಕುದುರೆಯೇ ಆಗಿದೆ. ಬಲವಂತದ ಉಪದೇಶ, ಬಲವಂತದಿ ಗುರಿ ಸಾಧನೆಯ ಆದೇಶಗಳು ಉದ್ದೇಶಿತ ಪರಿಣಾಮಗಳನ್ನು ಸಾಧಿಸಲಾರವು.
ಹೊಳಪುಳ್ಳ ಹೊಗಳಿಕೆಗಳು ದಾರಿತಪ್ಪಿಸುವ ಸಾಧನಗಳಾಗಿವೆ ಹಾಗೂ ಕಹಿಯಾದರೂ ಸತ್ಯವೆನ್ನುವುದು ಸಾಧನೆಯ ಹಾದಿಯಲ್ಲಿ ದಾರಿದೀಪವಾಗುತ್ತವೆ ಎನ್ನುವುದನ್ನು ಯಾವ ವ್ಯಕ್ತಿ ಅರಿತುಕೊಳ್ಳುತ್ತಾನೋ ಆತ ಸಾಧಕನಾಗುತ್ತಾನೆ. ಇಲ್ಲಿ ಈ ಜಗದಲ್ಲಿ ಯಾರು ಚಿರಂಜೀವಿಗಳಲ್ಲ, ಸಾವು ಎನ್ನುವ ಅನಿವಾರ್ಯ ಅಂತಿಮ ಸತ್ಯವನ್ನು ಅರ್ಥಮಾಡಿಕೊಂಡು ಇರುವಷ್ಟು ದಿನಗಳ ಕಾಲ ಹೇಗೆ ಸ್ವಾರ್ಥರಹಿತವಾಗಿ ಪರೋಪಕಾರಿಯಾಗಿ ಬಾಳಬೇಕು ಎನ್ನುವುದರಲ್ಲಿಯೇ ಜೀವನದ ಸಾರ್ಥಕತೆ ಇದೆ. ಸತ್ತನಂತರವೂ ಇದ್ದವರ ಮನದಲ್ಲಿ ಸಿಹಿ ನೆನಪಾಗಿ ಕಾಡುವುದರ ಮೂಲಕ ಸಾವಿಗೂ ಗೌರವವನ್ನು ತರಬಹುದಾದ ಸಾಧ್ಯತೆ ಮುಖ್ಯವಾಗುತ್ತದೆ. ಸಾವು ಎನ್ನುವ ಸತ್ಯದ ಕುರಿತು ಅಂತರಂಗದಲ್ಲಿರುವ ಪಕೀರ ಸದಾ ಎಚ್ಚರಿಸುತ್ತಲೇ ಬದುಕಿನ ಸಾರ್ಥಕತೆಗಳ ಬಗ್ಗೆ ಮಾರ್ಗದರ್ಶನ ಮಾಡುತ್ತಲೇ ಇರಬೇಕಾಗುತ್ತದೆ. ಇದೇ ಜೀವನ.. ಇದುವೇ ಬದುಕಿನ ಪಯಣ.. ಅಂತಿಮವಾಗಿ ಬರುವುದಿದ್ದರೆ ಬರಲಿ ಬಿಡಿ ಮರಣ.
-ಶಶಿಕಾಂತ ಯಡಹಳ್ಳಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ