ಶನಿವಾರ, ಏಪ್ರಿಲ್ 8, 2023

ನಮ್ಮ ನಂದಿನಿ ವರ್ಸಸ್ ಗುಜರಾತಿ ಅಮೂಲ್




 ತಹ ತಹ..

ನಮ್ಮ ನಂದಿನಿ ವರ್ಸಸ್ ಗುಜರಾತಿ ಅಮೂಲ್


ಕೇಂದ್ರ ಸರಕಾರದ ಗ್ರಹಮಂತ್ರಿಗಳಾದ ಅಮಿತ್ ಶಾ ರವರು ಕರ್ನಾಟಕಕ್ಕೆ ಬಂದು ನಂದಿನಿ ಮತ್ತು ಗುಜರಾತಿನ ಅಮೂಲ್ ವಿಲೀನದ ಕುರಿತು ಸೂಕ್ಷ್ಮವಾಗಿ ಹಿಂಟ್ ಕೊಟ್ಟು ಹೋದ ನಂತರವೇ ಕನ್ನಡಿಗರಿಗೆ ಆತಂಕ ಶುರುವಾಗಿತ್ತು. ನಂತರದ ಬೆಳವಣಿಗೆಗಳು ಶಾ ರವರ ಆಸೆಗೆ ಪೂರಕವಾಗಿ ಶುರುವಾಗಿದ್ದು ಕಾಕತಾಳೀಯವೇನಲ್ಲ.

ನಂದಿನಿ ಮೊಸರಿನ ಪಾಕೆಟ್ ಮೇಲೆ ದಹಿ ಎಂದು ನಮೂದಿಸುವುದು ಖಡ್ಡಾಯ ಮಾಡುವ ಪ್ರಯತ್ನ ಕರ್ನಾಟಕ ಮತ್ತು ತಮಿಳುನಾಡಿನವರ ಪ್ರತಿರೋಧದಿಂದಾಗಿ ತಡೆಹಿಡಿಯಲಾಯಿತು. ನಂತರ ನಂದಿನಿ ಉತ್ಪನ್ನಗಳ ಕೃತಕ ಅಭಾವ ಸೃಷ್ಟಿಸಿ ಅಮೂಲ್ ಉತ್ಪನ್ನಗಳ ಮಾರಾಟಕ್ಕೆ ಪೂರ್ವಭಾವಿ ವೇದಿಕೆ ಸಿದ್ದಗೊಳಿಸಲಾಯ್ತು. ತದನಂತರ ಅಮೂಲ್ ಬ್ರ್ಯಾಂಡ್ ಮಾರಾಟವನ್ನು ಬೆಂಗಳೂರಿನಲ್ಲಿ ಆನ್ ಲೈನ್ ಮೂಲಕ ಮಾರಾಟ ಮಾಡುವ ಯೋಜನೆ ಆರಂಭಿಸಲಾಯ್ತು.

ಎಪ್ಪತ್ತು ಸಾವಿರ ಕೋಟಿ ವ್ಯವಹಾರದ ದೊಡ್ಡದಾದ ಗುಜರಾತಿನ ಅಮೂಲ್ ಕಂಪನಿಯೊಂದು ಇಪ್ಪತ್ತು ಸಾವಿರ ಕೋಟಿ ಟರ್ನೊವರ್ ಇರುವ ಕೆಎಂಎಪ್ ಜೊತೆ ಸ್ಪರ್ಧೆಗಿಳಿದು ನಂದಿನಿ ಬ್ರ್ಯಾಂಡನ್ನು ಮುಳುಗಿಸುವ ದುರಾಲೋಚನೆ ಮಾಡಿದ್ದು ಗೊತ್ತಾಗಿದ್ದೇ ತಡ ಕನ್ನಡಿಗರು ಎಚ್ಚೆತ್ತುಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ತೀವ್ರ ಪ್ರತಿರೋಧ ವ್ಯಕ್ತಪಡಿಸತೊಡಗಿದರು.

ಆದರೆ ಕೇಂದ್ರ ಸರಕಾರದ ಗುಲಾಮರಂತೆ ವರ್ತಿಸುವ ರಾಜ್ಯ ಸರಕಾರದ ಬಿಜೆಪಿಗರು ನಂದಿನಿ ವಿರುದ್ದ ಅಮೂಲ್ ಸ್ಪರ್ಧೆಯನ್ನು ಸಮರ್ಥಿಸಿಕೊಳ್ಳತೊಡಗಿದರು.
"ಕೆಎಂಎಪ್ ಮತ್ತು ಅಮೂಲ್ ನಡುವೆ ಒಪ್ಪಂದವಾದರೆ ತಪ್ಪೇನು?" ಎಂದು ಹಾಲಿ ಮುಖ್ಯಮಂತ್ರಿ ಬೊಮ್ಮಾಯಿಯವರು ಹೇಳಿ ತಮ್ಮ ಗುಲಾಮತನವನ್ನು ಸಾಬೀತುಗೊಳಿಸಿದರು. "ಯಾವುದೇ ಉತ್ಪನ್ನ ಯಾವುದೇ ಭಾಗದಲ್ಲಿ ಮಾರಾಟವಾಗಬಹುದು" ಎಂದು ಸಚಿವ ಸುಧಾಕರ್ ಸಮರ್ಥಿಸಿಕೊಂಡರು. ಬಿಜೆಪಿ ಸರಕಾರದ ತಲೆ ಬಾಲಗಳೂ ಸಹ ಅಮೂಲ್ ಪರ ಹೇಳಿಕೆ ಕೊಟ್ಟವು. ಕರ್ನಾಟಕದ ಬಹುತೇಕ ಎಂಪಿ ಗಳು ಅಮಿತ್ ಶಾ ರವರ ಮುಂದೆ ಉಸಿರು ಬಿಡಲೂ ಧೈರ್ಯ ಸಾಲದೇ ಯಥಾಪ್ರಕಾರ ಜಾಣ ಮೌನಕ್ಕೆ ಜಾರಿದರು.

ವಿರೋಧ ಪಕ್ಷಗಳ ವಿರೋಧ, ಕನ್ನಡಿಗರ ಪ್ರತಿರೋಧಗಳೆಲ್ಲಾ ಬಿಜೆಪಿ ಸರಕಾರಕ್ಕೆ ಲೆಕ್ಕಕ್ಕೇ ಇಲ್ಲ. ಇದ್ದಿದ್ದರೆ ಚುನಾವಣಾ ಸಂದರ್ಭದಲ್ಲಿ ಅಮೂಲ್ ವಿಚಾರ ಪ್ರಸ್ತಾಪಿಸುತ್ತಲೇ ಇರಲಿಲ್ಲ. ಮೋದಿ ಮೇನಿಯಾ ಹುಟ್ಟಿಸಿ, ಮುಸ್ಲಿಂ ವಿರೋಧ ಹೆಚ್ಚಿಸಿ, ಹಿಂದೂ ಭಾವನೆ ಕೆರಳಿಸಿ ಮತ್ತೆ ಸಲೀಸಾಗಿ ಕರ್ನಾಟಕದ ಗದ್ದುಗೆ ಹಿಡಿಯಬಹುದೆಂಬ ಕಾನ್ಪಿಡೆನ್ಸ್ ಬಿಜೆಪಿಗರದ್ದು. ಓಟಿಂಗ್ ಮಶಿನ್ ಎಡ್ಜಸ್ಟ್ ಮಾಡಿಕೊಂಡೋ ಇಲ್ಲವೇ ಕಡಿಮೆ ಸೀಟ್ ಬಂದರೆ ಎದುರಾಳಿ ಪಕ್ಷದ ಶಾಸಕರನ್ನು ಕೊಂಡುಕೊಂಡೋ ವಾಮಮಾರ್ಗದಿಂದಾದರೂ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆಂಬ ಪಕ್ಕಾ ಲೆಕ್ಕಾಚಾರ  ಇದ್ದಿದ್ದರಿಂದಲೇ ವಿರೋಧ ಪಕ್ಷದ ವಿರೋಧಗಳಿಗೆ ಹಾಗೂ ಕನ್ನಡಿಗರ ಪ್ರತಿರೋಧಗಳಿಗೆ ಕ್ಯಾರೇ ಅಂತಾನೂ ಸಂಘ ಪರಿವಾರಿಗಳು ಅನ್ನುತ್ತಿಲ್ಲ.

ಮತ್ತೆ ಕರುನಾಡಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದ್ದೆ ಆದಲ್ಲಿ ಕೆಎಂಎಪ್ ಮುಳುಗುವುದಂತೂ ಗ್ಯಾರಂಟಿ, ಗುಜರಾತಿ ಅಮೂಲ್ ಇಡೀ ಹಾಲಿನ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುವುದೂ ಗ್ಯಾರಂಟಿ, ನಮ್ಮ ಹಾಲೋದ್ಯಮ ಕುಂಟಿತಗೊಂಡು ಅದನ್ನೇ ನಂಬಿ ಬದುಕುವ ಕೋಟ್ಯಾಂತರ ಕೃಷಿ ಕೂಲಿ ಜನರ ಬದುಕು ಬರ್ಬಾದಾಗೋದಂತೂ ಗ್ಯಾರಂಟಿ.

ಕರ್ನಾಟಕದಲ್ಲಿ ಈಗ ಚುನಾವಣಾ ಕಾಲ. ಜನರು ಯೋಚಿಸಿ ಮತದಾನ ಮಾಡಬೇಕಿದೆ. ಆಮಿಷಕ್ಕೆ ಇಲ್ಲವೇ ಹುಸಿ ಭಾವತೀವ್ರತೆಗೆ ಬಲಿಯಾದರೆ ಕೇಂದ್ರದ ಗುಲಾಮಗಿರಿಗೆ ಕರ್ನಾಟಕವನ್ನು ಈಡುಮಾಡಬೇಕಾಗುತ್ತದೆ. ಬೇರೆ ದಾರಿಯಿಲ್ಲ.

- ಶಶಿಕಾಂತ ಯಡಹಳ್ಳಿ

09-04-2023 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ