ಶನಿವಾರ, ಏಪ್ರಿಲ್ 8, 2023

ಧರ್ಮಾಂಧರ ದರ್ಬಾರಿನಲ್ಲಿ ಗೋಮುಖ ವ್ಯಾಘ್ರಗಳು




ತಹ ತಹ.. 

ಧರ್ಮಾಂಧರ ದರ್ಬಾರಿನಲ್ಲಿ ಗೋಮುಖ ವ್ಯಾಘ್ರಗಳು 

ಕಳೆದ ದಶಕಗಳಿಂದೀಚೆಗೆ ಈ ದೇಶದಲ್ಲಿ ಗೋವಿನ ಹೆಸರಿನ ಧರ್ಮರಾಜಕಾರಣಕ್ಕೆ ಕೊನೆಮೊದಲಿಲ್ಲ. ಗೋವು ಎಂಬ ನಾಲ್ಕು ಕಾಲಿನ ಪ್ರಾಣಿಯು ಮನುಜರ ಪ್ರಾಣ ತೆಗೆಯಲು ನೆಪವಾಗುವುದು ದುರಿತ ಕಾಲದ ದುರಂತ. ಇತ್ತೀಚೆಗೆ ರಾಮನಗರದಲ್ಲಿ ಗೋರಕ್ಷಣೆ ಹೆಸರಲ್ಲಿ ಹಪ್ತಾ ವಸೂಲಿಗಿಳಿದು ಇದ್ರೀಸ್ ಪಾಷಾ ಎನ್ನುವ ಮುಸ್ಲಿಂ ವ್ಯಕ್ತಿಯನ್ನು ಕ್ರೂರವಾಗಿ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿ ಆಂಡ್ ಗ್ಯಾಂಗನ್ನು ರಾಜಸ್ಥಾನದ ಗಡಿಯಲ್ಲಿ ಬಂಧಿಸಿ ತಂದ ಕರ್ನಾಟಕದ ಪೊಲೀಸರು ಕಂಬಿ ಹಿಂದೆ ದಬ್ಬಿದ್ದರು. ಆತ ಮತ್ತು ಆತನ ಜೊತೆಗಿದ್ದ ಇನ್ನೂ ನಾಲ್ಕು ಮಾತಾಂಧರು ಹಿಂದೂ ರಾಷ್ಟ್ರ ರಕ್ಷಣಾ ಪಡೆಯ ಕಾರ್ಯಕರ್ತರು. ಈಗ ಅಖಿಲ ಭಾರತ ಮಹಾ ಸಭಾದ ರಾಷ್ಟ್ರೀಯ ವಕ್ತಾರ ಸಂಜಯ್ ಜಾಟ್ ಮತ್ತು ಆತನ ಮೂವರು ಸಹಚರರು ಗೋವನ್ನು ಕೊಂದು ಆ ಆರೋಪವನ್ನು ಮುಸ್ಲಿಂ ವ್ಯಕ್ತಿಗಳ ಮೇಲೆ ಆರೋಪಿಸಿ ತಾವೇ ಪೋಲೀಸರಿಂದ ಬಂಧಿಸಲ್ಪಟ್ಟಿರುವ ಘಟನೆ ಆಗ್ರಾದ ಗೌತಮ್ ಬುದ್ದ ನಗರದಲ್ಲಿ ನಡೆದಿದೆ. 

ಆಗಿದ್ದಿಷ್ಟೇ... ಈ ಸೋ ಕಾಲ್ಡ್ ಸಂಘ ಪರಿವಾರದ ಅಂಗವಾದ ಸಂಜಯ್ ಜಾಟ್ ಭಾರೀ ಪ್ಲಾನ್ ಮಾಡಿದ್ದ. ಅವತ್ತು ಮಾರ್ಚ್ 29 ರ ರಾಮನವಮಿ. ಒಂದಿನ ಮುಂಚೆ ತನ್ನ ಸಹಚರರ ಜೊತೆ ಸೇರಿ ಹಸುವೊಂದನ್ನು ಕೊಂದು ಪೊಲೀಸ್ ಠಾಣೆಗೆ ಹೋಗಿ ಮಹಮದ್ ರಿಜ್ವಾನ್, ನಕೀಂ ಮತ್ತು ಶಾನು ಎಂಬ ಮೂವರು ಮುಸ್ಲಿಂ ಯುವಕರ ಮೇಲೆ ಗೋಹತ್ಯೆ ದೂರು ದಾಖಲಿಸಿದ್ದಷ್ಟೇ ಅಲ್ಲದೇ ಹಿಂದೂ ಕಾರ್ಯಕರ್ತರನ್ನು ಸೇರಿಸಿ ಆರೋಪಿಗಳನ್ನು ಬಂಧಿಸಬೇಕೆಂದು ಪೊಲೀಸ್ ಸ್ಟೇಶನ್ನಿಗೆ ಮುತ್ತಿಗೆ ಹಾಕಿ ಗಲಾಟೆ ಮಾಡಿಸಲಾಯ್ತು. ಇದಕ್ಕೆ ಮುಸ್ಲಿಂ ಯುವಕರ ಮೇಲಿದ್ದ ವೈಯಕ್ತಿಕ ದ್ವೇಷವೂ ಕಾರಣವಾಗಿತ್ತಂತೆ. ಇದೇ ವಿಷಯ ಇಟ್ಟುಕೊಂಡು ರಾಮನವಮಿಯ ದಿನ ಕೋಮುಗಲಭೆ ಹುಟ್ಟು ಹಾಕುವ ಹುನ್ನಾರ ಇವರದ್ದಾಗಿತ್ತಂತೆ. ಇದರ ಸುಳಿವರಿತ ಪೋಲೀಸರು ಮೊಬೈಲ್ ಲೊಕೇಶನ್ ಚೆಕ್ ಮಾಡಿದಾಗ ಹತ್ಯೆಯಾದ ಜಾಗದಲ್ಲಿ ಸಿಕ್ಕಿದ್ದು ಇದೇ ಗಲಾಟೆ ಮಾಡಿದ ಆಗುಂತಕರ ಮೊಬೈಲ್ ಜಾಡು. ದೂರುದಾರರೇ ಅಪರಾಧಿಗಳಾಗಿ ಬಂಧಿಸಲ್ಪಟ್ಟಿದ್ದರಿಂದ ಕೋಮು ಗಲಭೆಯೊಂದರ ಸಂಚು ವಿಫಲವಾಯಿತು. ಜೊತೆಗೆ ಈ ಸಂಘ ಪರಿವಾರದ ಅಂಗಾಧಿಪತಿಗಳ ಮುಖವಾಡವೂ ಬಯಲಾಯಿತು. 

 ಹಿಂದೂ ಮುಸ್ಲಿಂ ಗಲಭೆ ಹುಟ್ಟಿಸಲು ಈ ಹಿಂದೆ ಮಸೀದಿಯಲ್ಲಿ ಹಂದಿ ಮಾಂಸ ಇಲ್ಲವೇ ದೇವಸ್ಥಾನದಲ್ಲಿ ಗೋಮಾಂಸ ಎಸೆಯುವ ಕುತಂತ್ರ ಮಾಡಲಾಗುತ್ತಿತ್ತು. ಅದರ ಮುಂದುವರೆದ ಭಾಗವಾಗಿ ಈ ಹಿಂದುತ್ವವಾದಿ ಹಂತಕರು ಪವಿತ್ರವೆಂದು ಹೇಳುವ ಗೋಮಾತೆಯನ್ನು ಹತ್ಯೆ ಮಾಡಿ ಮುಸ್ಲಿಂ ಹುಡುಗರ ತಲೆಗೆ ಕಟ್ಟಿ ಕೋಮು ಭಾವನೆ ಕೆರಳಿಸಿ ಗಲಭೆ ಸೃಷ್ಟಿಸಿ ಧರ್ಮ ದ್ವೇಷ ಹುಟ್ಟಿಸುವ ಹುನ್ನಾರ ಮಾಡಿ ತಾವೇ ತಗಲಾಕಿಕೊಂಡಿದ್ದಾರೆ. ಗೋವಿನ ಹೆಸರಲ್ಲಿ ಭಾವನೆಗಳನ್ನು ಕೆರಳಿಸುವ, ಧರ್ಮದ ಹೆಸರಲ್ಲಿ ಉಮ್ಮಾದವನ್ನು ಹುಟ್ಟಿಸುವ ಅನೇಕ ಘಟನೆಗಳು ನಡೆಯುತ್ತಲೇ ಇವೆ. ರಕ್ಷಕರೆಂಬ ಈ ಸ್ವಘೋಷಿತ ನೈತಿಕ ಪೋಲೀಸ್ ಪಡೆ ಇಂತಹ ಕುಕೃತ್ಯಗಳನ್ನು ಆಗಾಗ ಮಾಡುತ್ತಾ ಸಮಾಜದ ನೆಮ್ಮದಿ ಹಾಳು ಮಾಡುತ್ತಾ ಅಸಹನೆಯ ವಾತಾವರಣ ಸೃಷ್ಟಿಸುತ್ತಿವೆ. ಇವರು ಮಾಡುವ ಈ ರೀತಿಯ ಪ್ರಚೋದನೆಗೆ ಇನ್ನೊಂದು ಸಮುದಾಯದವರೂ ಉದ್ವಿಗ್ನಗೊಂಡು ಪ್ರತಿಕ್ರಿಯಿಸಿದಾಗ ಹಿಂಸೆ ಹೆಚ್ಚಾಗಿ ಅಶಾಂತಿ ವ್ಯಾಪಿಸುತ್ತದೆ. ಇದರಿಂದ ಬಹುಸಂಖ್ಯಾತ ಹಿಂದೂಗಳೆಂಬುವವರು ಕಲಿಯಬೇಕಾದ ಪಾಠ ಏನೆಂದರೆ.. 

ಮತಾಂಧ ಶಕ್ತಿಗಳ ಪ್ರಚೋದನೆಯಿಂದ ಭಾವತೀವ್ರತೆಗೆ ಒಳಗಾಗಿ ಅನ್ಯಧರ್ಮದ್ವೇಷಕ್ಕೆ ಅವಕಾಶ ಕೊಡಬಾರದು ಹಾಗೂ ಮುಸ್ಲಿಂ ಸಮುದಾಯದವರು ತಿಳಿಯಬೇಕಾದದ್ದು ಏನೆಂದರೆ ಕೋಮುಕ್ರಿಮಿಗಳ ಸಂಚಿನಿಂದ ಉದ್ರೇಕಕ್ಕೆ ಒಳಗಾಗಿ ವಿವೇಚನೆ ಕಳೆದುಕೊಂಡು ಕ್ರಿಯೆಗೆ ಹಿಂಸಾತ್ಮಕ ಪ್ರತಿಕ್ರಿಯೆ ತೋರುವುದನ್ನು ಬಿಟ್ಟು ಅಹಿಂಸಾತ್ಮಕ ಮಾರ್ಗಗಳನ್ನು ಅಳವಡಿಸಿಕೊಳ್ಳುವುದು ಈ ದುರಿತ ಕಾಲದ ಅನಿವಾರ್ಯತೆಯಾಗಿದೆ. ಹಿಂದೂ ಮುಸ್ಲಿಂ ಹಾಗೂ ಇತರೆಲ್ಲ ಧರ್ಮದ ಸಮುದಾಯಗಳು ಮತ್ತು ಅನುಯಾಯಿಗಳು ಈ ಹಿಂದಿತ್ವವಾದಿಗಳ ಹುನ್ನಾರವನ್ನು ಅರಿತು ಮತಾಂಧತೆಯನ್ನು ಸೋಲಿಸಬೇಕಿದೆ.. ಮಾನವೀಯತೆಯನ್ನು ಗೆಲ್ಲಿಸಬೇಕಿದೆ. 

- ಶಶಿಕಾಂತ ಯಡಹಳ್ಳಿ 

 08-04-2023

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ