ಶನಿವಾರ, ಏಪ್ರಿಲ್ 15, 2023

ಪುಲ್ವಾಮಾ ದಾಳಿಯ ಹಿಂದಿರುವ ಸತ್ಯವೂ ಹಾಗೂ ಸತ್ಯಪಾಲರ ಸತ್ಯ ನಿವೇದನೆಯೂ..

 


ತಹ ತಹ..

ಪುಲ್ವಾಮಾ ದಾಳಿಯ ಹಿಂದಿರುವ ಸತ್ಯವೂ ಹಾಗೂ ಸತ್ಯಪಾಲರ ಸತ್ಯ ನಿವೇದನೆಯೂ..

ಸತ್ಯ ಎನ್ನುವುದು ನಿಗಿನಿಗಿ ಉರಿವ ಕೆಂಡದ ಹಾಗೆ. ಅದರ ಮೇಲೆ ಅದೆಷ್ಟೇ ಸುಳ್ಳಿನ ಬೂದಿ ಮುಚ್ಚಿದರೇನು ಯಾರಾದರೂ ಬಲವಾದ  ಗಾಳಿ ಬೀಸಿದರೆ ಬೂದಿ ಹಾರಿ ಬೆಂಕಿ ಬೆಳಗುವುದು ನಿಶ್ಚಿತ. ಈಗ ಆಗಿದ್ದೂ ಸಹ ಹಾಗೇನೇ..

2019 ಲೋಕಸಭೆಯ ಚುನಾವಣಾ ವರ್ಷ. ಚುನಾವಣೆ ಇನ್ನೇನು ಕೇವಲ ಮೂರು ತಿಂಗಳು ಬಾಕಿ ಇದೆ (ಮೇ 2019) ಎನ್ನುವಾಗ ಒಂದು ಮಹತ್ವದ ದುರಂತ ಘಟನೆ ನಡೆದು ಇಡೀ ದೇಶವನ್ನೇ ತಲ್ಲಣಗೊಳಿಸಿತು. ಅದು ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ಭಯೋತ್ಪಾದಕ ದಾಳಿ. ಫೆಬ್ರವರಿ 14, 2019 ರಂದು, ಜಮ್ಮುವಿನ  ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಭದ್ರತಾ ಸಿಬ್ಬಂದಿಯನ್ನು ಸಾಗಿಸುವ ವಾಹನಕ್ಕೆ ಪುಲ್ವಾಮಾ ಜಿಲ್ಲೆಯ ಲೆಥ್ಪೊರದಲ್ಲಿ (ಅವಾಂತಿಪೋರಾ ಬಳಿ) ಆತ್ಮಹತ್ಯಾ ಬಾಂಬರ್ ವಾಹನದಿಂದ ದಾಳಿ ಮಾಡಲಾಯಿತು. ದಾಳಿಯಿಂದಾಗಿ ಕೇಂದ್ರ ಮೀಸಲು ಪಡೆಯ  40 ಮಂದಿ ಯೋಧರು ಹತರಾದರು. ಇದಕ್ಕೆ ಪ್ರತಿಯಾಗಿ ಭಾರತದ ವಾಯುಪಡೆಯ ಯೋಧರು ಪಾಕಿಸ್ಥಾನದ ಬಾರಾಕೋಟ್ ನಲ್ಲಿ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ 250 ಉಗ್ರಗಾಮಿಗಳನ್ನು ಕೊಂದು ಹಾಕಿದರು. ಅದಕ್ಕೆ ಸರ್ಜಿಕಲ್ ಸ್ಟ್ರೈಕ್ ಎಂದು ಹೆಸರಿಸಿದ ಬಿಜೆಪಿಗರು ಇಡೀ ದೇಶಾದ್ಯಂತ ದೇಶಭಕ್ತಿಯ ಅಲೆಯನ್ನೇ ಸೃಷ್ಟಿಸಿ ಸಂಚಲನವನ್ನುಂಟು ಮಾಡಿದರು.

ಈ ಸೋ ಕಾಲ್ಡ್ ಸರ್ಜಿಕಲ್ ಸ್ಟ್ರೈಕ್ ಅನ್ನು ಪಾಕಿಸ್ತಾನ ಅಲ್ಲಗಳೆಯಿತು. ವಿರೋಧ ಪಕ್ಷದವರು ತಕರಾರೆತ್ತಿ ಸಾಕ್ಷಿ ಕೇಳಿದರು. ಪುಲ್ವಾಮಾ ಘಟನೆಯ ಹಿಂದಿರುವ ಹಿಕ್ಮತ್ತನ್ನು ಪ್ರಶ್ನಿಸಿದರು. ಆದರೆ ಕೇಂದ್ರ ಸರಕಾರವು ಸಾಕ್ಷಿ ಕೇಳಿದವರ ವಿರುದ್ಧವೇ ದೇಶದ್ರೋಹಿಗಳು ಎನ್ನುವ ಆರೋಪ ಹೊರೆಸಿತು. ನಮ್ಮ ಯೋಧರ ಸಾವನ್ನು ಅಪಮಾನಿಸಾಗುತ್ತದೆ, ಶೌರ್ಯವನ್ನು ಕಡೆಗಣಿಸಲಾಗುತ್ತದೆ ಎಂದು ವ್ಯಾಪಕವಾಗಿ ಹೇಳುವ ಮೂಲಕ ದೇಶಭಕ್ತಿಯ ಸಮೂಹ ಸನ್ನಿ ಹುಟ್ಟಿಸಲಾಯಿತು. ಹಿಂದೆ ಹಲವಾರು ಸಲ ಸರ್ಜಿಕಲ್ ಸ್ಟ್ರೈಕ್ ಗಳು ನಡೆದರೂ ಅದು ಮಿಲಿಟರಿ ಕಾರ್ಯಾಚರಣೆಗಳಾಗಿದ್ದವೇ ಹೊರತು ಪ್ರಚಾರದ ಸರಕಾಗಿರಲಿಲ್ಲ. ಆದರೆ ಪುಲ್ವಾಮಾ ದಾಳಿ ಹಾಗೂ ಬಾರಾಕೋಟ್ ಸರ್ಜಿಕಲ್ ಸ್ಟ್ರೈಕ್ ನ್ನು ಚುನಾವಣಾ ಪ್ರಚಾರದ ಸರಕನ್ನಾಗಿ ಬಳಸಿಕೊಂಡ ಬಿಜೆಪಿ  ಮೂರು ತಿಂಗಳ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಭಾರೀ ಬಹುಮತವನ್ನು ಗೆದ್ದುಕೊಂಡಿತು.

ಆದರೆ… ಗೋದಿ ಮೀಡಿಯಾಗಳು ಅದೆಷ್ಟೇ ಉತ್ಪ್ರೇಕ್ಷೆ ಮಾಡಿ ಹೇಳಿದರೂ ಪುಲ್ವಾಮಾ ದಾಳಿ ಹಾಗೂ ಸರ್ಜಿಕಲ್ ಸ್ಟ್ರೈಕ್ ಕುರಿತ ಅನುಮಾನಗಳು ಹಾಗೆಯೇ ಉಳಿದುಕೊಂಡವು. ಸಂದೇಹ ವ್ಯಕ್ತಪಡಿಸಿದವರ ಬಾಯಿ ಮುಚ್ಚಿಸಲು ಮೋದಿ ಹಾಗೂ ಅವರ ಸಮರ್ಥಕರು ಅದೆಷ್ಟೇ ಪ್ರಯತ್ನಿಸಿದರೂ ಯಾಕೋ ಸ್ಪಷ್ಟ ಚಿತ್ರಣ ಸಿಕ್ಕಿರಲಿಲ್ಲ. ಆದರೆ ನಿನ್ನೆ ಎಪ್ರಿಲ್ 14 ರಂದು ಯಾವಾಗ ಜಮ್ಮು ಕಾಶ್ಮೀರದ ಕೊನೆಯ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲಿಕ್ ರವರು ದಿ ವೈರ್ ಸುದ್ದಿ ಜಾಲತಾಣದಲ್ಲಿ ನಡೆದ ಸಂದರ್ಶನದಲ್ಲಿ ಕೆಲವೊಂದು ಸತ್ಯಗಳನ್ನು ಬಾಯಿಬಿಟ್ಟರೋ ಆಗ ಗೋದಿ ಮೀಡಿಯಾ ಮತ್ತು ಮೋದಿ ಮೇನಿಯಾಪೀಡಿತರ ಬಾಯಿ ಕಟ್ಟಿತು. ಮಲಿಕ್ ರವರು ಹೇಳಿದ್ದೇನೆಂದರೆ..

“ಪ್ರಧಾನಿಗೆ ಕಾಶ್ಮೀರದ ಬಗ್ಗೆ ಸರಿಯಾದ ತಿಳುವಳಿಕೆಯಿಲ್ಲ ಮತ್ತು ಅವರು ಅಜ್ಞಾನಿಯಾಗಿದ್ದಾರೆ. ಪುಲ್ವಾಮಾದಲ್ಲಿ ಯೋಧರ ಮೇಲೆ ವಿನಾಶಕಾರಿ ಭಯೋತ್ಪಾದಕ ದಾಳಿಗೆ ಕಾರಣವಾಗಿದ್ದ ಕೇಂದ್ರ ಗೃಹ ಸಚಿವಾಲಯದ ಲೋಪಗಳ ಬಗ್ಗೆ ಮಾತನಾಡದಂತೆ ಅವರು ನನಗೆ ಸೂಚಿಸಿದ್ದರು. ಕೇಂದ್ರ ಮೀಸಲು ಪಡೆಯ ವಾಹನಗಳ ಮೇಲಿನ ದಾಳಿಯು ಭಾರತೀಯ ವ್ಯವಸ್ಥೆಯ, ವಿಶೇಷವಾಗಿ ಗೃಹ ಸಚಿವಾಲಯದ  ಅದಕ್ಷತೆ ಮತ್ತು ಬೇಜವಾಬ್ದಾರಿಯ ಫಲಶೃತಿಯಾಗಿತ್ತು. ಸಿಆರ್ಪಿಎಫ್ ತನ್ನ ಪಡೆಗಳನ್ನು ಸಾಗಿಸಲು ವಿಮಾನವನ್ನು ಕೋರಿತ್ತು ಆದರೆ ಗೃಹಸಚಿವಾಲಯವು ಅದನ್ನು ನಿರಾಕರಿಸಿತ್ತು. ವಾಹನಗಳು ಸಾಗಬೇಕಿದ್ದ ಮಾರ್ಗದ ಭದ್ರತಾ ಪರಿಶೀಲನೆಯನ್ನೂ ಸರಿಯಾಗಿ ಮಾಡಲಾಗಿರಲಿಲ್ಲ. ಪುಲ್ವಾಮಾ ದಾಳಿಯ ಬೆನ್ನಲ್ಲೇ ಮೋದಿಯವರು ನನಗೆ ಕರೆ ಮಾಡಿದಾಗ ಈ ಎಲ್ಲಾ ಲೋಪಗಳನ್ನು ತಾನು ನೇರವಾಗಿ ಎತ್ತಿದ್ದೆ. ಆದರೆ ಈ ಕುರಿತು ಸುಮ್ಮನಿರುವಂತೆ ಹಾಗೂ ಯಾರಿಗೂ ತಿಳಿಸದಂತೆ ಪ್ರಧಾನಿಯವರು ನನಗೆ ಸೂಚಿಸಿದ್ದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸಹ ನನಗೆ ಇದೇ ಸೂಚನೆ ನೀಡಿದ್ದರು. ದಾಳಿಯ ಆರೋಪವನ್ನು ಪಾಕಿಸ್ತಾನದ ಮೇಲೆ ಹೊರಿಸುವುದು ಹಾಗೂ ಸರಕಾರ ಮತ್ತು ಬಿಜೆಪಿಗೆ ಚುನಾವಣಾ ಲಾಭಗಳನ್ನು ಪಡೆಯುವುದು ಅವರ ಉದ್ದೇಶವಾಗಿದೆ ಎನ್ನುವುದು ನನಗೆ ತಕ್ಷಣಕ್ಕೆ ಅರ್ಥವಾಗಿತ್ತು.”

ಇದು ಸತ್ಯಪಾಲ್ ಮಲ್ಲಿಕ್ ರವರ ಸಂದರ್ಶನದ ಸಾರ..   ಹಾಗಾದರೆ ಪುಲ್ವಾಮಾ ದುರಂತ ಕೇಂದ್ರ ಸರಕಾರದ ಗೃಹ ಇಲಾಖೆಯ ಪೂರ್ವಯೋಜಿತ ಕೃತ್ಯವಾ? ಅಥವಾ ತಮ್ಮದೇ ಬೇಜವಾಬ್ದಾರಿಯಿಂದಾದ ಪರಿಸ್ಥಿತಿಯ ಲಾಭವನ್ನು ಪಡೆದು ದೇಶದ ಜನರನ್ನು ಭಾವಪ್ರಚೋದನೆಗೆ ಒಳಪಡಿಸಲು ನರೇಂದ್ರ ಮೋದಿ ಮತ್ತು ಅಜಿತ್ ದೋವಲ್  ಹಾಗೂ ಗೃಹಮಂತ್ರಿ ರಾಜನಾಥಸಿಂಗ್ ರವರು ಹೀಗೊಂದು ವ್ಯವಸ್ಥಿತ ಯೋಜನೆ ರೂಪಿಸಿದ್ರಾ? ಗುಪ್ತಚರ ಇಲಾಖೆಯ ಬಹುದೊಡ್ಡ ವೈಫಲ್ಯವಾ? ಭಯೋತ್ಪಾದಕ ಪೀಡಿತ ಪ್ರದೇಶವೆಂದು ಗೊತ್ತಿದ್ದೂ ಸಿಆರ್ಪಿಎಪ್ ವಾಹನಗಳು ಚಲಿಸುವ ಮಾರ್ಗವನ್ನು ಪರಿಶೀಲಿಸದೇ, ಸೂಕ್ತ ರಕ್ಷಣೆಯನ್ನೂ ಕಲ್ಪಿಸದೇ ಕೇಂದ್ರ ಗೃಹ ಸಚಿವಾಲಯವು 40 ಯೋಧರ ಸಾವಿಗೆ ಕಾರಣವಾಯ್ತಾ? ಅವಕಾಶವಾದಿ ರಾಜನೀತಿಯ ಬೇಜವಾಬ್ದಾರಿತನದಿಂದ ಹತರಾದ ಯೋಧರ ಕುಟುಂಬಗಳ ಗತಿ ಏನು? ಗೃಹಸಚಿವಾಲಯ ಮತ್ತು ಬೇಹುಗಾರಿಕಾ ವಿಭಾಗದ ವೈಫಲ್ಯಗಳನ್ನು ಮರೆಮಾಚಲು ದಾಳಿಯ ಆರೋಪವನ್ನು ಪಾಕಿಸ್ತಾನದ ಮೇಲೆ ಹೇರಿ ತನ್ನ ಬೇಜವಾಬ್ದಾರಿತನದಿಂದ ಪಾರಾಗಲು ಮೋದಿಯವರು ಸರ್ಜಿಕಲ್ ಸ್ಟ್ರೈಕ್ ಎನ್ನುವ ಬ್ರಹನ್ನಾಟಕವನ್ನು ರಚಿಸಿದ್ದರಾ? ಈ ಯೋಧರ ಸಾವುಗಳನ್ನೇ ಚುನಾವಣಾ ಪ್ರಚಾರದ ಪ್ರಮುಖ ಸರಕನ್ನಾಗಿ ಮಾಡಿಕೊಂಡ ಮೋದಿ ಸರಕಾರ ದೇಶವಾಸಿಗಳಲ್ಲಿ ದೇಶಭಕ್ತಿಯ ಭಾವನೆಯನ್ನು ಪ್ರೇರೇಪಿಸಿ ದಿಗ್ವಿಜಯವನ್ನು ಸಾಧಿಸಿತಾ? ಹೀಗೆ ಹಲವಾರು ಪ್ರಶ್ನೆಗಳು ಮಲ್ಲಿಕ್ ರವರ ಸಂದರ್ಶನದ ನಂತರ ದೇಶವಾಸಿಗಳನ್ನು ಕಾಡತೊಡಗಿವೆ. ಉತ್ತರಿಸಬೇಕಾದವರು ಜಾಣ ಮೌನಕ್ಕೆ ಜಾರಿ ಮುಂದಿನ ವರ್ಷದ ಚುನಾವಣಾ ಸಮಯಕ್ಕೆ ಮತ್ತೆ ಯಾವ ಕಾಂಡವನ್ನು ಸೃಷ್ಟಿಸಬೇಕು ಎನ್ನುವ ಯೋಚನೆಯಲ್ಲಿ ನಿರತರಾಗಿದ್ದಾರೆ.

“ಸತ್ಯ ಅನ್ನೋದು ಬೆತ್ತಲೆಯಾಗಿರುವಾಗ ಸುಳ್ಳು ಬಣ್ಣದ ವೇಷ ತೊಟ್ಟು ಊರೆಲ್ಲಾ ಸುತ್ತಿ ಬರುತ್ತದೆ” ಎನ್ನುವುದು ಸುಳ್ಳಲ್ಲ.

-ಶಶಿಕಾಂತ ಯಡಹಳ್ಳಿ

15-04-2023     

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ