ಶನಿವಾರ, ಏಪ್ರಿಲ್ 8, 2023

ತಹ ತಹ… ಹೆಣ್ಮಕ್ಕಳು ಶೂರ್ಪನಖಿಯರಾ?

 

ಕೈಲಾಶ್ ವಿಜಯವರ್ಗೀಯ


ಹೆಣ್ಮಕ್ಕಳು ಶೂರ್ಪನಖಿಯರಾ?

ಹೌದು ಹೀಗೊಂದು ಅದ್ಭುತ ಸಂಶೋಧನಾ ಸಂದೇಶವನ್ನು ಕೈಲಾಶ್ ವಿಜಯವರ್ಗೀಯರವರು ಇಂದೋರಿನಲ್ಲಿ ಹನುಮ ಜಯಂತಿಯ ದಿನದಂದು ರಾಮಭಕ್ತಾಧಿಗಳಿಗೆ ಕೊಟ್ಟಿದ್ದಾರೆ. ಮಹಿಳೆಯರನ್ನು ಎರಡನೇ ದರ್ಜೆ ಪ್ರಜೆಗಳು ಎಂಬಂತೆ ಪರಿಗಣಿಸುವ ಮನುವಾದಿ ಪಕ್ಷವಾದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಬಾಯಲ್ಲಿ ಇದಕ್ಕಿಂತಾ ಇನ್ನೇನು ತಾನೆ ನಿರೀಕ್ಷಿಸಲು ಸಾಧ್ಯ?

ಕೆಟ್ಟ ಉಡುಪು ಅಂದರೆ ಯಾವುದು? ಶೂರ್ಪನಖಿ ಯಾವ ರೀತಿಯ ಉಡುಗೆ ತೊಡುತ್ತಿದ್ದಳು? ಈ ಮನುವಾದಿಗಳ ಮಾನದಂಡಕ್ಕೆ ಮಹಿಳೆಯರು ತೊಡುವ ಉಡುಪುಗಳು ವ್ಯತಿರಿಕ್ತವಾದರೆ ಅದು ಖಂಡನೀಯವೇ? ಮಹಿಳೆಯರು ಬೂರ್ಕಾ ಹಿಜಾಬ್ ಮಾತ್ರ ಧರಿಸಿ ಹೊರಗೆ ಬರಬೇಕು ಎನ್ನುವ ತಾಲಿಬಾನಿ ಮಾದರಿಯಲ್ಲಿ ಮನುವಾದಿ ಆದೇಶವೇ?

ಮುಂದೊಂದು ದಿನ ಸಂವಿಧಾನವನ್ನೇ ಬದಲಾಯಿಸಿ ಮನುಧರ್ಮಶಾಸ್ತ್ರದ ಆಧಾರದ ಮೇಲೆ ದೇಶವನ್ನು ಈ ಸಂಘ ಪರಿವಾರದವರು ಆಳಿದ್ದೇ ಆದರೆ ಈ ದೇಶದ ಮಹಿಳೆಯರ ಕನಿಷ್ಟ ಸ್ವಾತಂತ್ರ್ಯಕ್ಕೂ ಎಳ್ಳುನೀರು ಬಿಟ್ಟಂತಲ್ಲವೆ? “ಕೆಟ್ಟ ಉಡುಪು ಧರಿಸಿ ಹೆಣ್ಣುಮಕ್ಕಳು ಓಡಾಡುವುದನ್ನು ನೋಡಿದರೆ ಅವರು ದೇವತೆಗಳಂತೆ ಕಾಣುವುದಿಲ್ಲ ಶೂರ್ಪನಖಿಯಂತೆ ಕಾಣುತ್ತಾರೆ” ಎನ್ನುವ ಕೈಲಾಶ್ ರವರಂತವರು ನೋಡುವ ದೃಷ್ಟಿಕೋನದಲ್ಲೇ ದೋಷವಿದೆ ಹಾಗೂ ಅವರು ಪ್ರತಿಪಾಧಿಸುವ ಮನುವಾದಿ ಸಿದ್ದಾಂತವೇ ಮಹಿಳಾ ವಿರೋಧಿಯಾಗಿದೆ.

ಸಂಘಪರಿವಾರದ ನಾಯಕರೊಬ್ಬರು ಹೇಳುತ್ತಾರೆ ‘ಹಿಂದೂ ಹೆಂಗಸರು ಹೆಚ್ಚು ಮಕ್ಕಳನ್ನು ಹೆರಬೇಕೆಂದು”, ಇನ್ನೊಬ್ಬರು ಪುಂಗುತ್ತಾರೆ ಹೆಣ್ಮಕ್ಕಳು ಮನೆಯ ಚೌಕಟ್ಟಿನಲ್ಲಿ ಇರಬೇಕೆಂದು. ಅದೇ ಮುಸ್ಲಿಮ್ ಮಹಿಳೆಯರ ವಿಚಾರ ಬಂದಾಗ ಅವರು ಹಿಜಾಬ್ ಧರಿಸಬಾರದು ಎನ್ನುತ್ತಾರೆ. ಸಮಾನ ವಸ್ತ್ರ ಸಂಹಿತೆ ಇರಬೇಕೆಂದು ಪ್ರತಿಪಾದಿಸುತ್ತಾರೆ.

ಹೀಗೆ.. ಮಹಿಳೆಯರು ಯಾವ ರೀತಿಯ ಉಡುಪು ಧರಿಸಬೇಕು, ಏನನ್ನು ಧರಿಸಬಾರದು ಎನ್ನುವುದನ್ನು ಇವರು ಅಂದರೆ ಈ ಸಂಘಿ ಗಂಡಸರು ನಿರ್ಧರಿಸುತ್ತಾರೆ. ಇದು ಯಾವುದೋ ಮತಿಹೀನನೊಬ್ಬನ ಮಾತು ಎಂದು ನಿರ್ಲಕ್ಷಿಸುವಂತಿಲ್ಲ ಯಾಕೆಂದರೆ ಮನುವಾದಿಗಳ ಹಿಡನ್ ಅಜೆಂಡಾ ಇದೇ ಆಗಿದೆ. ಮಹಿಳೆಯರನ್ನು ಪಿತೃಪ್ರಧಾನ ವ್ಯವಸ್ಥೆಯಲ್ಲೇ ಬಂಧಿಸಿ ಇಡಬೇಕು ಎಂಬುದೇ ಮನುಧರ್ಮಶಾಸ್ತ್ರದ ಓಪನ್ ಅಜೆಂಡಾ ಆಗಿದೆ. ಅದಕ್ಕೆ ಅಲ್ಲವೇ “ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ” ಎನ್ನುವುದು. ಸಂಘಪರಿವಾರದ ರಾಜಕೀಯ ಪಕ್ಷವಾದ ಬಿಜೆಪಿಯನ್ನು ಬೆಂಬಲಿಸುವ ಪ್ರತಿಯೊಬ್ಬ ಮಹಿಳೆಯರೂ ಯೋಚಿಸಬೇಕಾಗಿದೆ.

ಇರಾನ್ ಅಪಘಾನಿಸ್ತಾನದಲ್ಲಿರುವ ಮಹಿಳೆಯರಿಗೆ ಬಂದ ಅತಂತ್ರ ಸ್ಥಿತಿ ಭಾರತದ ಮಹಿಳೆಯರಿಗೂ ಬರಬಾರದು ಎಂಬುದಾದರೆ ಮೊದಲು ಮನುವಾದಿ ಮನಸ್ಥಿತಿಯ ಈ ಕೇಸರಿ ಪಕ್ಷವನ್ನು ವಿರೋಧಿಸದೇ ಬೇರೆ ದಾರಿಯಿಲ್ಲ. ಬೆಂಬಲಿಸಿದರೆ ಪಿತೃಪ್ರಧಾನತೆ ಹುಟ್ಟು ಹಾಕುವ ಲಿಂಗತಾರತಮ್ಯದ ಗುಲಾಮಗಿರಿಗೆ ಮಹಿಳೆಯರು ಈಡಾಗುವುದರಲ್ಲಿ ಸಂದೇಹವಿಲ್ಲ.

ಕೆಟ್ಟ ಉಡುಪಿನ ನಗ್ನ ದೃಶ್ಯಗಳನ್ನು ಜನಪ್ರತಿನಿಧಿ ಸಭೆಗಳಲ್ಲೇ ಗುಟ್ಟಾಗಿ ನೋಡುವ ಬಿಜೆಪಿ ನಾಯಕರು, ಮಹಿಳೆಯರನ್ನು ನಂಬಿಸಿ ಲೈಂಗಿಕವಾಗಿ ಬಳಸಿಕೊಳ್ಳುವ, ಅತ್ಯಾಚಾರ ಮಾಡಿ ಸಿಕ್ಕಿಹಾಕಿಕೊಳ್ಳುವ ಬಿಜೆಪಿ ನಾಯಕರು ಕೀಚಕ ರಾವಣರಲ್ಲವೇ? ನೈತಿಕತೆ ಸಭ್ಯತೆ ಎನ್ನುವುದು ಧರಿಸುವ ಉಡುಪಿನಲ್ಲಿರುವುದಿಲ್ಲ ನೋಡುವ ದೃಷ್ಟಿಕೋನದಲ್ಲಿ ಮತ್ತು ಸಕಾರಾತ್ಮಕ ಆಲೋಚನೆಗಳಲ್ಲಿ ಇರುತ್ತವೆ ಎಂದು ಈ ಸಂಘಿ ನಾಯಕರುಗಳಿಗೆ ಹೇಳುವವರಾದರೂ ಯಾರು? ಇಂತವರ ವಿರುದ್ದ ಪ್ರತಿಭಟಿಸಬೇಕಾದ ಮಹಿಳೆಯರು ಮೌನವಾಗಿದ್ದಷ್ಟೂ ಕಾಲ ಇಂತಹ ಕೀಚಕರು ಕಿರುಚುತ್ತಲೇ ಇರುತ್ತಾರೆ. ಇಂತವರನ್ನು ನಾಯಕರೆಂದು ನಂಬಿದ ಭಕ್ತಾದಿಗಳು ಅನುಸರಿಸುತ್ತಲೇ ಇರುತ್ತಾರೆ. ಮಹಿಳೆಯರ ಮೇಲೆ ನಡೆಯುವ ಶೋಷಣೆ, ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ.

-ಶಶಿಕಾಂತ ಯಡಹಳ್ಳಿ

08-04-2023

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ