ಬುಧವಾರ, ಏಪ್ರಿಲ್ 19, 2023

ಗೋರಕ್ಷಣೆಯೆಂಬ ಪ್ರಹಸನ ಮತ್ತು ಗೋತ್ಯಾಜ್ಯ ಸೇವನೆಯ ಅಪಾಯ

ತಹ ತಹ..


ಗೋರಕ್ಷಣೆಯೆಂಬ ಪ್ರಹಸನ ಮತ್ತು  ಗೋತ್ಯಾಜ್ಯ ಸೇವನೆಯ ಅಪಾಯ

‘ಗೋಮಾತೆಯಲ್ಲಿ ಮುಕ್ಕೋಟಿ ದೇವತೆಗಳು ವಾಸಿಸುತ್ತವೆ ಎಂದರು. ಎಲ್ಲಾ ದೇವರೂ ಗೋಮಾತೆಯಲ್ಲೇ ಇದ್ದಿದ್ದೆ ನಿಜವಾದರೆ ದೇವಸ್ಥಾನಗಳಿಗೆ ಯಾಕೆ ಹೋಗಬೇಕು? ಎಂದು ಯಾರೂ ಪ್ರಶ್ನಿಸಲಿಲ್ಲ. ಬರುಡಾದರೂ ಮುದಿಯಾದರೂ ಗೋವು ಪವಿತ್ರ ಯಾರೂ ಮಾರಬಾರದು ಕೊಲ್ಲಬಾರದು ತಿನ್ನಬಾರದು ಎಂದು ಕಾನೂನು ಹೇರಿದರು, ಮುದಿ ಹಸುಗಳನ್ನು ನೀವೇ ಕೊಂಡುಕೊಂಡು ಪರಿಹಾರ ಕೊಡಿ ಎಂದು ಯಾವ ಗೋಪಾಲಕರೂ ಕೇಳಲಿಲ್ಲ. ಗೋಮೂತ್ರದಲ್ಲಿ  ಔಷಧೀಯ ಗುಣಗಳಿವೆ ದಿನವೂ ಸೇವಿಸಿ ಎಂದರು ಜನ ಮರುಪ್ರಶ್ನೆ ಕೇಳದೇ ಕುಡಿದರಾದರೂ ಯಾವುದೇ ರೋಗ ಗುಣವಾಗಲಿಲ್ಲ. ಗೋತ್ಯಾಜ್ಯದಲ್ಲಿ ರೋಗನಿರೋಧಕ ಗುಣವಿದೆ, ಕ್ಯಾನ್ಸರ್ ನಂತಹ ರೋಗಗಳೂ ವಾಸಿಯಾಗುತ್ತವೆ ಎಂದು ನಂಬಿಸಿದರು, ಸಕಲ ಖಾಯಿಲೆಗಳು ವಾಸಿಯಾಗುವುದೇ ನಿಜವಾದಲ್ಲಿ ಆಸ್ಪತ್ರೆಗಳನ್ನೆಲ್ಲಾ ಮುಚ್ಚಿ ಅಲ್ಲಿ ಗೋತ್ಯಾಜ್ಯಗಳ ಅಂಗಡಿಗಳನ್ನು ತೆಗೆಯಿರಿ ಎಂದು ಯಾರೂ ಕೇಳಲೇ ಇಲ್ಲ.

ಯಾಕೆಂದರೆ ಹಾಗೆ ಕೇಳಿದವರನ್ನು ಧರ್ಮದ ಹೆಸರಲ್ಲಿ ಹೆದರಿಸುವವರ ಗುಂಪು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿತ್ತು. ಗೋರಕ್ಷಣೆಯ ಹೆಸರಲ್ಲಿ ನಕಲಿ ನೈತಿಕ ಪೊಲೀಸರ ಗೂಂಡಾ ಪಡೆಯೇ ಹುಟ್ಟಿಕೊಂಡು ಹಾವಳಿಯನ್ನೆಬ್ಬಿಸಿತು. ಒಟ್ಟಾರೆಯಾಗಿ ನಾಲ್ಕು ಕಾಲಿನ ದನವನ್ನು ದೇವರನ್ನಾಗಿಸಿ ಇಲ್ಲದ ಗುಣಗಳನ್ನು ಆರೋಪಿಸಿದ ಬ್ರಾಹ್ಮಣ್ಯ ತನ್ನ ಆಟ ಶುರುಮಾಡಿಕೊಂಡಿತ್ತು. ಅದಕ್ಕೆ ತಕ್ಕಂತೆ ಹಿಂದುತ್ವವಾದಿ ಪ್ರಭುತ್ವವು ಗೋವಿನ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ಮತಾಂಧತೆಯನ್ನು ಬಿತ್ತುತ್ತಾ ಹಸುವನ್ನು ಧರ್ಮದ್ವೇಷದ ಸಾಧನವನ್ನಾಗಿಸಿಕೊಂಡಿತು. ಗೋಹತ್ಯಾ ನಿಷೇಧ ಕಾನೂನನ್ನು ಜಾರಿಗೆ ತರುವ ಮೂಲಕ ಮುಸ್ಲಿಂ ಸಮುದಾಯದ ಆದಾಯದ ಮೂಲವನ್ನು ಮೊಟಕುಗೊಳಿಸುವ ಹಾಗೂ ಗೋಮಾಂಸ ರಪ್ತು ಮಾಡುವ ಕಾರ್ಪೋರೇಟ್ ಹಿಂದೂ ಮಾಂಸೋದ್ಯಮಕ್ಕೆ ಲಾಭ ಮಾಡಿಕೊಡಲಾಯ್ತು. ಗೋಸಾಕಣೆ ಮಾಡಿ ಬದುಕುತ್ತಿದ್ದ ಕೊಟ್ಯಾಂತರ ರೈತರಿಗೂ ಸಂಕಷ್ಟವನ್ನುಂಟು ಮಾಡಲಾಯ್ತು. ಗೋರಕ್ಷಕರ ಹಿಂಸೆಗೆ ಹೆದರಿದ ರೈತಾಪಿಜನರು ಗೋಪಾಲನೆ ಮಾಡುವುದನ್ನೇ ಕೈಬಿಟ್ಟಿದ್ದರಿಂದ ಗೋವುಗಳ ಸಂಖ್ಯೆಯೂ ಕ್ಷೀಣಿಸಿ ಕ್ಷೀರ ಕೊರತೆ ಉಂಟಾಗತೊಡಗಿತು.  ರೈತರು ಗೋಸಾಕಣೆಗೆಂದು ಗೋಸಾಗಣೆ ಮಾಡಿದರೂ ಗೋರಕ್ಷಕರ ಗೂಂಡಾಗಿರಿಗೆ ಹೆದರುವಂತಾಯ್ತು. ಅಂತೂ ಇಂತೂ ಗೋವು ಎನ್ನುವ ಪ್ರಾಣಿ ಹಿಂದುತ್ವವಾದಿಗಳ ಅಧಿಕಾರದ ಅಟ್ಟಕ್ಕೆ ಮೆಟ್ಟಲಾಯ್ತು.

ಇದೆಲ್ಲಾ ಗೊತ್ತಿರುವಂತಹುದೇ, ಆದರೆ ಇತ್ತೀಚೆಗೆ ಬಂದ ವರದಿಯೊಂದು ಈ ಗೋಮುಖ ವ್ಯಾಘ್ರಗಳಿಗೆ ಆಘಾತಕಾರಿಯಾಗಿದೆ. ಗೋವಿನ ತ್ಯಾಜ್ಯಗಳನ್ನು ಮೆಡಿಸಿನ್ ಎಂದು ಮಾರ್ಕೆಟ್ ಮಾಡಿ ಜನರನ್ನು ವಂಚಿಸುತ್ತಿದ್ದವರ ಮುಖವಾಡ ಕಳಚಿಬಿದ್ದಂತಾಗಿದೆ. ‘ತಾಜಾ ಗೋಮೂತ್ರದಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾಗಳಿವೆ ಹಾಗೂ ಮಾನವ ಸೇವನೆಗೆ ಅಪಾಯಕಾರಿ’ ಎಂದು ಭಾರತೀಯ ಪಶು ಸಂಶೋಧನಾ ಸಂಸ್ಥೆಯ ಅಧ್ಯಯನ ಹೇಳಿದೆ.

ಹಸು ಮತ್ತು ಹೋರಿಗಳ ಮೂತ್ರದಲ್ಲಿ ಒಂದಲ್ಲಾ ಎರಡಲ್ಲಾ 14ಕ್ಕೂ ಹೆಚ್ಚು ವಿಧದ ಹಾನಿಕಾರಕ ಬ್ಯಾಕ್ಟೀರಿಯಾಗಳಿವೆ ಎಂದು ಮೂತ್ರದ ಮಾದರಿಗಳ ಅಧ್ಯಯನದಿಂದ ಕಂಡುಕೊಳ್ಳಲಾಗಿದೆ. ಮಾನವನ ಉದರದಲ್ಲಿ ಸೋಂಕನ್ನು ಸೃಷ್ಟಿಸಬಹುದಾದ ಎಸ್ಚೇರಿಚಿಯಾ ಕೋಲಿ ಎನ್ನುವ ಅಪಾಯಕಾರಿ ಬ್ಯಾಕ್ಟೀರಿಯಾ ಸಹ ಗೋಮೂತ್ರದಲ್ಲಿರುವುದು ಕಂಡುಬಂದಿದೆಯಂತೆ. ಇಷ್ಟೇ ಅಲ್ಲ ಹಸುಗಳು ಹಾಗೂ ಎಮ್ಮೆಗಳ ಮೂತ್ರದ ಮಾದರಿಯನ್ನು ಅಧ್ಯಯನ ಮಾಡಲಾಗಿದ್ದು ಹಸುಗಳಿಗಿಂತಲೂ ಎಮ್ಮೆಗಳ ಮೂತ್ರದಲ್ಲಿ ಬ್ಯಾಕ್ಟೀರಿಯಾ ನಿರೋಧಕ ಹೆಚ್ಚಿವೆಯಂತೆ.

ಇದು ತಾಜಾ ಮೂತ್ರದ ಮಾತಾಯಿತು. ಶುದ್ಧೀಕರಿಸಿ ಕುಡಿದರೆ ಕಾಯಿಲೆ ವಾಸಿಯಾಗುತ್ತದೆ ಎಂದು ಈ ಗೋವಿನಾರಾಧಕರು ಸಮರ್ಥಿಸಿಕೊಳ್ಳದೇ ಇರಲಾರರು. ಆದರೆ ಶುದ್ದೀಕರಿಸಿದ ಮೂತ್ರದಲ್ಲಿ ಬ್ಯಾಕ್ಟೀರಿಯಾಗಳಿಲ್ಲವೆಂಬುದು ಬಹುತೇಕರ ನಂಬಿಕೆಯಾದರೂ ಅದರ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ ಎಂದು ಪಶು ಸಂಶೋಧನಾ ಸಂಸ್ಥೆಯ ಡಾ.ಭೋಜರಾಜ ಸಿಂಗ್ ಹೇಳಿದ್ದಾರೆ. ಐವಿಆರ್ ಐ ಸಂಸ್ಥೆಯ ಮಾಜಿ ನಿರ್ದೇಶಕ ಆರ್.ಎಸ್.ಚೌಹಾಣ್ ರವರು ಈ ಸಂಶೋಧನೆಯನ್ನು ಪ್ರಶ್ನಿಸಿ ಮತ್ತೆ ಗೊಂದಲವನ್ನು ಸೃಷ್ಟಿಸಿದ್ದಾರೆ. ಕ್ಯಾನ್ಸರ್ ಹಾಗೂ ಕೋವಿಡ್ ವಿರುದ್ಧ ಶುದ್ಧೀಕರಿಸಿದ ಗೋಮೂತ್ರ ಸೇವನೆ ಪರಿಣಾಮಕಾರಿ ಎಂದು ಸಮರ್ಥಿಸಿಕೊಂಡಿದ್ದಾರೆ.

ನಮ್ಮದು ತುಂಬಾ ಸರಳವಾದ ಪ್ರಶ್ನೆ. ಕ್ಯಾನ್ಸರ್ ಮತ್ತು ಕೋವಿಡ್ ವೈರಸ್ ಗಳಿಂದಾಗುವ ಜೀವಹಾನಿಯನ್ನು ತಪ್ಪಿಸಲು ಹೆಚ್ಚು ವೆಚ್ಚದಾಯಕ  ಔಷಧೋಪಚಾರಗಳನ್ನು ಮಾಡುವುದಾದರೂ ಯಾಕೆ? ಹಲವಾರು ಡೋಜ್ ಲಸಿಕೆಗಳನ್ನು ಕೊಡುವುದಾದರೂ ಯಾಕೆ? ಗೋಮೂತ್ರ ಸೇವನೆಯಿಂದಲೇ ಮಾರಕ ಕಾಯಿಲೆಗಳು ವಾಸಿಯಾಗುವುದಾದರೆ ಯಾಕೆ ಸರಕಾರ ಗೋಮೂತ್ರವನ್ನೇ ಸಕಲ ಖಾಯಲೆಗಳಿಗೆ ರಾಮಬಾಣವೆಂದು ಘೋಷಿಸಿ ಎಲ್ಲಾ ಊರುಗಳಲ್ಲಿ ಈಗಿರುವ ಶುದ್ಧನೀರಿನ ಘಟಕಗಳ ಹಾಗೆ ಶುದ್ಧ ಗೋಮೂತ್ರ ಘಟಕಗಳನ್ನು ಸ್ಥಾಪಿಸಬಾರದು.

ಸತ್ಯ ಏನೆಂದರೆ ಹಸು ಮಾತ್ರವಲ್ಲ ಯಾವುದೇ ಪ್ರಾಣಿಯ ಮೂತ್ರ ಅಮೇದ್ಯಗಳು ಆಯಾ ಪ್ರಾಣಿಯ ತ್ಯಾಜ್ಯಗಳಷ್ಟೇ. ಅವುಗಳನ್ನು ರೀಸೈಕಲ್ ಮಾಡಿ ಬಳಸುವುದು ಪರಿಣಾಮಕಾರಿಯೇನಲ್ಲ. ಸ್ವಮೂತ್ರಪಾನದಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎನ್ನುವುದಕ್ಕೂ ಯಾವುದೇ ಸಮರ್ಥನೀಯ ಪುರಾವೆಗಳಿಲ್ಲ.  ಭಾರತದ ಪ್ರಧಾನಿಯಾಗಿದ್ದ ಮುರಾರ್ಜಿ ದೇಸಾಯಿಯವರು ಸ್ವಮೂತ್ರ ಸೇವಿಸುತ್ತಿದ್ದರು ಎನ್ನುವ ಕಥೆ ಜಗಜ್ಜನಿತ. ಆದರೆ ತ್ಯಾಜ್ಯವನ್ನು ಸೇವಿಸಿದ್ದರಿಂದಲೇ ಗುಣಮುಖರಾದರು ಎನ್ನುವುದು ಅವರವರ ನಂಬಿಕೆಯ ಸಂಗತಿ. ಯಾಕೆಂದರೆ ಅನಕ್ಷರಸ್ತ ಮುದುಕಿಯೊಬ್ಬಳು ತನಗಾದ ಗಾಯಕ್ಕೆ ಮುಲಾಮೆಂದು ತಿಳಿದು ಟೂತ್ ಪೇಸ್ಟ್ ಹಚ್ಚಿದರೂ ಗಾಯ ವಾಸಿಯಾದಂತೆ ಈ ಮೂತ್ರಪಾನದ ಕಥೆಯೂ ಸಹ.

ಯಾರು ಏನೇ ಹೇಳಲಿ. ಅದೆಷ್ಟೇ ಸಂಶೋಧನೆಗಳಾಗಲಿ. ದೇವರು ಧರ್ಮದ ಹೆಸರಲ್ಲಿ ಮೌಡ್ಯವನ್ನು ಸೃಷ್ಟಿಸುವವರು ಮತ್ತು ಆಚರಿಸುವವರು ಇರುವವರೆಗೂ ಗೋತ್ಯಾಜ್ಯವೂ ರೋಗಬಾಧೆಗೆ ಔಷಧಿಯಾಗಬಲ್ಲುದು. ಸ್ವಮೂತ್ರಪಾನವೂ ರೋಗನಿರೋಧಕತೆ ಹೆಚ್ಚಿಸಬಹುದು. ಆದರೆ ಈ ವಿಕ್ಷಿಪ್ತ ನಂಬಿಕೆಗಳನ್ನು, ವಿಚಿತ್ರ ಪ್ರಚಾರಗಳನ್ನು ನಂಬಿಕೊಂಡು ಗೋತ್ಯಾಜ್ಯವನ್ನು ಸೇವಿಸಿದರೆ ಅಡ್ಡಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಹಾಗೂ ಹಸುವನ್ನು ದೇವರೆಂದು ಹುಯಿಲೆಬ್ಬಿಸುವ ಪುರೋಹಿತಶಾಹಿ ಮನಸ್ಥಿತಿಯವರ ಮಾತನ್ನು ನಂಬಿ ಗೋಮೂತ್ರಪಾನ ನಿರತರಾದರೆ ಅಪಾಯ ಕಟ್ಟಿಟ್ಟ ಬುತ್ತಿ.

ಸತ್ಯ ಏನೆಂದರೆ ಯಾವುದೇ ಗೋವು ಮಾತೆಯೂ ಅಲ್ಲಾ, ದೇವತೆಯೂ ಅಲ್ಲಾ. ಅದೊಂದು ಪ್ರಾಣಿ ಅಷ್ಟೇ. ಸ್ವತಃ ಯಾವುದೇ ಹಸುವಿಗೂ ಸಹ ತಾನೊಂದು  ಸಕಲ ದೇವರುಗಳಿರುವ ಕಾಂಪ್ಲೆಂಕ್ಸ್ ಎಂದು ಗೊತ್ತಿರುವುದಿಲ್ಲ. ಯಾಕೆ ತನ್ನನ್ನು ಪೂಜಿಸುತ್ತಾರೆ ಎಂಬುದರ ಕುರಿತ ಅರಿವೂ ಆ ಪ್ರಾಣಿಗೆ ಇರಲು ಸಾಧ್ಯವಿಲ್ಲ.

ಈ ಹಿನ್ನೆಲೆಯಲ್ಲಿ ಕೆಲವು ಪ್ರಶ್ನೆಗಳು ಕಾಡುತ್ತಲೇ ಇವೆ.

·         ಭಾರತದ ಗೋವುಗಳು ಮಾತ್ರ ಗೋಮಾತೆಯಾದರೆ ಅನ್ಯ ದೇಶಗಳ ಗೋವುಗಳು ಯಾಕಲ್ಲ.

·         ಪ್ರಪಂಚದ ಯಾವುದೇ ದೇಶಗಳಲ್ಲಿ ಇರದ ಗೋಹತ್ಯಾ ನಿಷೇಧ ಕಾನೂನು ಭಾರತದಲ್ಲಿ ಮಾತ್ರ ಯಾಕೆ?

·         ಗೋಮೂತ್ರದಿಂದ ಕಾಯಿಲೆಗಳು ವಾಸಿಯಾಗುವುದೇ ದಿಟವಾಗಿದ್ದಲ್ಲಿ ದವಾಖಾನೆಗಳು ಹಾಗೂ ವೈದ್ಯರೇಕೆ?

·         ಗೋಮಾತೆಯಲ್ಲಿ ಮೂಕ್ಕೋಟಿ ದೇವತೆಗಳಿರುವುದೇ ನಿಜವಾಗಿದ್ದಲ್ಲಿ ಅಗಣಿತ ದೇವಸ್ಥಾನಗಳೇಕೆ?

·         ಬರಡು ಹಾಗೂ ಮುದಿ ದನಗಳ ಹತ್ಯೆ ನಿಷೇಧವಾದರೆ ಅವುಗಳನ್ನು ಸರಕಾರ ಹಣಕೊಟ್ಟು ಯಾಕೆ ಕೊಳ್ಳುತ್ತಿಲ್ಲ.

·         ಗೋಹತ್ಯೆ ನಿಷೇಧ ಕಾನೂನು ಮಾಡಿದರೂ ಗೋಮಾಂಸ ರಪ್ತು ಉದ್ಯಮದಲ್ಲಿ ಭಾರತ ಮುಂಚೂಣಿಯಲ್ಲಿರುವುದೇಕೆ.

·         ಗೋಸಾಗಣೆಗೆ ಅಡೆತಡೆಮಾಡುವುದರಿಂದ ಗೋಸಾಕಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದಕ್ಕೆ ಪರಿಹಾರ ಏನು?

·         ಮುಸ್ಲಿದ್ವೇಷ ಸಾಧನೆಗೆ ಬಹುಸಂಖ್ಯಾತ ಹಿಂದೂ ಗೋಸಾಕಣೆದಾರರಿಗೆ ಸಂಕಷ್ಟ ತಂದಿದ್ದು ಯಾಕೆ?

·         ಗೋಮಾಂಸ ಸೇವನೆಯ ಕುರಿತು ವೇದಗಳಲ್ಲೇ ಉಲ್ಲೇಖಗಳಿರುವಾಗ ಬ್ರಾಹ್ಮಣವ್ಯಾಧಿಗಳ ವಿರೋಧಯಾಕೆ?

·         ಗೋರಕ್ಷಣೆಯ ಹೆಸರಲ್ಲಿ ಹಲವಾರು ಹಲ್ಲೆ ಹತ್ಯೆ ಪ್ರಾಣಹಾನಿಗಳಾಗಿದ್ದಕ್ಕೆ ಹೊಣೆಗಾರರು ಯಾರು?

ಹೀಗೆ ಪ್ರಶ್ನೆಗಳೇನೋ ಬೇಕಾದಷ್ಟಿವೆ. ಆದರೆ ಉತ್ತರಿಬೇಕಾದವರು ಗೋರಕ್ಷಣೆ ಹೆಸರಲ್ಲಿ ಭಾವಪ್ರಚೋದನೆಯಲ್ಲಿ ನಿರತರಾಗಿದ್ದಾರೆ.

ಶಶಿಕಾಂತ ಯಡಹಳ್ಳಿ

16-4-2023

 


 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ