ತಹ ತಹ...
ಮನುವಾದಿಗಳ ಗುರಿ ಮುಟ್ಟಲು ಮೆಟ್ಟಲಾಗಿ ಮರೆಯಾದ ದುರಂತ ನಾಯಕರು…
ಈ ಶೂದ್ರರು ಮತ್ತು ದಲಿತ ನಾಯಕರಿಗೆ ಇನ್ನೂ ಈ ಸಂಘ ಪರಿವಾರದ ಹಿಡನ್ ಅಜೆಂಡಾ ಅರ್ಥವಾಗಿಲ್ಲ. ಅರ್ಥವಾದವರೂ ತಮ್ಮ ಸ್ವಾರ್ಥಕ್ಕಾಗಿ ಸಂಘದ ನಿರ್ಣಯಗಳ ಸಮರ್ಥನೆಗಿಳಿದು ಸಿಕ್ಕ ಅಧಿಕಾರವನ್ನು ದಕ್ಕಿಸಿಕೊಳ್ಳುವ ಹಪಾಹಪಿಯಲ್ಲಿರುತ್ತಾರೆ. ಸಂಘ ಪರಿವಾರದ ಮೆದುಳಾದ ನಾಗಾಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂತಿಮ ಆಶಯವೇ ಹಿಂದುತ್ವವಾದವನ್ನು ಪ್ರಚೋದಿಸುವ ಹಾಗೂ ರಾಷ್ಟ್ರೀಯವಾದವನ್ನು ಪ್ರಯೋಗಿಸುವ ಮೂಲಕ ಮನುಸ್ಮೃತಿಯನ್ನ ಜಾರಿಗೆ ತರುವುದು. ಇದನ್ನು ಹೆಗ್ಡೇವಾರ್ ರವರಿಂದ ಹಿಡಿದು ಮೋಹನ್ ಭಾಗವತರವರ ವರೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪ್ರತಿಪಾದಿಸಿಕೊಂಡೇ ಬಂದಿದ್ದಾರೆ. ಆರೆಸ್ಸೆಸ್ಸಿನ ನಿಜವಾದ ಉದ್ದೇಶವೇ ಸಂಘ ಪರಿವಾರದ ಎಲ್ಲಾ ಅಂಗಗಳಲ್ಲೂ ಹಿಂದುತ್ವವಾದಿ ಬೇರುಗಳನ್ನು ವ್ಯಾಪಕವಾಗಿ ಹಬ್ಬಿಸುವುದು ಹಾಗೂ ಸಂಘದ ರಾಜಕೀಯ ಮುಖವಾದ ಬಿಜೆಪಿ ಪಕ್ಷದ ಮೂಲಕ ದೇಶಾಧಿಕಾರವನ್ನು ಸಂಪೂರ್ಣವಾಗಿ ಕೈವಶಮಾಡಿಕೊಂಡು ವೈದಿಕಶಾಹಿ ಪ್ರಣೀತ ಮನುವಾದಿ ಸಂವಿಧಾನವನ್ನು ಜಾರಿಗೆ ತರುವುದು.
ದೇಶದ ಜನಸಂಖ್ಯೆಯಲ್ಲಿ ಕೇವಲ ಶೇಕಡಾ 2 ರಷ್ಟಿರುವ ಬ್ರಾಹ್ಮಣ ವರ್ಗದವರಿಂದ ಮಾತ್ರ ಈ ಗುರಿ ಮುಟ್ಟುವುದು ಅಸಾಧ್ಯವಾಗಿದ್ದರಿಂದ ಶೂದ್ರರ ಮೆದುಳಿನಲ್ಲಿ ಹಿಂದೂರಾಷ್ಟ್ರದ ಮೇನಿಯಾ ಸೃಷ್ಟಿಸಿ, ಅನ್ಯಧರ್ಮದ್ವೇಷವನ್ನು ಹುಟ್ಟಿಸಿ ಸಂಘದ ಕಾಲಾಳುಗಳನ್ನಾಗಿ ಮಾಡಿಕೊಂಡು ತಮ್ಮ ಅಂತಿಮ ಗುರಿ ತಲುಪಲು ಹಂತ ಹಂತವಾಗಿ ಪ್ರಯತ್ನಿಸುತ್ತಲೇ ಬರುತ್ತಿದ್ದಾರೆ. ಅಗತ್ಯವಿದ್ದಾಗ ಅಗತ್ಯವಿರುವಷ್ಟೇ ಶೂದ್ರರನ್ನು ಬಳಸಿ ಬಿಸಾಕುವುದು ಆರೆಸ್ಸೆಸ್ಸಿನ ಗುಣವಿಶೇಷವಾಗಿದೆ. ಕೋಮುಗಲಭೆಗಳನ್ನು ಎಲ್ಲೇ ಸೃಷ್ಟಿಸಿದರೂ ಅದಕ್ಕೆ ಮುಂಚೂಣಿಯಲ್ಲಿರುವವರು ಇದೇ ಮೇನಿಯಾ ಪೀಡಿತ ಶೂದ್ರ ಸಮುದಾಯದ ಯುವಕರು. ಅದರ ರಾಜಕೀಯ ಲಾಭ ಪಡೆಯುವುದು ಮಾತ್ರ ಈ ಹಿಂದುತ್ವವಾದಿಗಳು. ಸಂಘದ ಮೆದುಳುಗಳು ಗಟ್ಟಿಯಾಗಿ ಮಾತಾಡುವುದಿಲ್ಲ, ಜೋರಾಗಿ ಕೂಗಾಡುವುದಿಲ್ಲ. ಬೀದಿಗಿಳಿದು ಹೋರಾಡುವುದಿಲ್ಲ. ಬೆಂಕಿ ಹಚ್ಚಿ ಗಲಭೆಯನ್ನೂ ಹುಟ್ಟಿಸುವುದಿಲ್ಲ. ಇದಕ್ಕೆಲ್ಲಾ ಅಬ್ರಾಹ್ಮಣರು ಇದ್ದಾರಲ್ಲ. ಅವರ ತಲೆಯಲ್ಲಿ ಹಿಂದೂ ಹುಚ್ಚು ಹಾಗೂ ಮುಸ್ಲಿಂ ವಿರೋಧಿ ರೊಚ್ಚನ್ನು ತುಂಬಿದರಾಯ್ತಲ್ಲಾ. ಶೂದ್ರ ಸಮುದಾಯದಿಂದ ಬಂದ ನಾಯಕರುಗಳಿಗೆ ಆಡಳಿತಾಧಿಕಾದಲ್ಲಿ ಅಲ್ಪ ಸ್ವಲ್ಪ ಪಾಲು ಕೊಟ್ಟರೆ ಸಾಕು ಅವರೇ ದೊಡ್ಡ ದ್ವನಿಯಲ್ಲಿ ಹಿಂದೂವಾದ ಮಂಡಿಸುತ್ತಾರೆ ಅನ್ಯಧರ್ಮೀಯರನ್ನು ಖಂಡಿಸುತ್ತಾರೆ. ಅಂತವರ ಪ್ರಯೋಜನ ಮುಗಿದ ಮೇಲೆ ಅವಮಾನಕಾರಿಯಾಗಿ ಮೂಲೆಗೆ ದೂಕಲ್ಪಡುತ್ತಾರೆ.
ಇದಕ್ಕೆ ಲೇಟೆಸ್ಟ್ ಉದಾಹರಣೆ ಲಿಂಗಾಯತ ಸಮುದಾಯದ ದೊಡ್ಡ ನಾಯಕರಾದ ಯಡಿಯೂರಪ್ಪ. ಬಿಜೆಪಿಯನ್ನು ಕರ್ನಾಟಕದಲ್ಲಿ ಕಟ್ಟಿ ಬೆಳೆಸಿದ ಇವರ ಅಧಿಕಾರವನ್ನು ಕಿತ್ತುಕೊಂಡು, ಅದೆಷ್ಟು ಸಲ ಕಣ್ಣೀರು ಹಾಕಿಸಿ ಕೊನೆಗೆ ದುರಂತ ನಾಯಕನನ್ನಾಗಿ ಮಾಡಿದ್ದಕ್ಕೆ ಇಡೀ ಕರ್ನಾಟಕವೇ ಸಾಕ್ಷಿ. ಯಡಿಯೂರಪ್ಪನವರ ಜೊತೆಗೆ ಬಿಜೆಪಿ ಪಕ್ಷ ಕಟ್ಟಿದವರು ಕುರುಬ ಸಮಾಜದ ಈಶ್ವರಪ್ಪ. ಅವರ ಬಾಯಿಂದ ಸತತವಾಗಿ ಮುಸ್ಲಿಂ ದ್ವೇಷದ ಬೆಂಕಿಯನ್ನು ಉಗುಳಿಸಿ, ಕಾರ್ಯಕರ್ತರನ್ನು ಕೆರಳಿಸಿ, ಗಲಭೆಗಳನ್ನು ಸೃಷ್ಟಿಸಿ ಪಕ್ಷದ ಬೇರುಗಳನ್ನು ಗಟ್ಟಿಮಾಡಿಕೊಂಡ ನಂತರ ಈಗ ಈಶ್ವರಪ್ಪ ತೆರೆಮರೆಗೆ. ಇದೇ ರೀತಿ ಲಕ್ಷಣ್ ಸವದಿ, ಎಸ್.ಅಂಗಾರ ಮುಂತಾದವರು. ಹಿಜಾಬ್ ವಿವಾದ ಸೃಷ್ಟಿಸಿ ನೂರಾರು ಮುಸ್ಲಿಂ ಹೆಣ್ಣುಮಕ್ಕಳನ್ನು ವಿದ್ಯೆಯಿಂದ ವಂಚಿತರಾಗುವಂತೆ ಮಾಡಿದ ಉಡುಪಿ ಶಾಸಕ ರಘುಪತಿ ಭಟ್ ರವರದ್ದೂ ಬಳಸಿ ಬಿಸಾಕಿದೆ ಕೇಸೇ. ಈಗ ಒಕ್ಕಲಿಗರ ನಾಯಕ ಆರ್.ಅಶೋಕ್ ಹಾಗೂ ಲಿಂಗಾಯತರ ನಾಯಕ ವಿ.ಸೋಮಣ್ಣನವರನ್ನೂ ಸಹ ಅವರ ಇಚ್ಚೆಗೆ ವಿರುದ್ಧವಾದ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿ ಅವರನ್ನೂ ರಾಜಕೀಯದಾಟಕ್ಕೆ ದಾಳವಾಗಿ ಬಳಸಿ ಮುಂದೊಮ್ಮೆ ಬಿಸಾಡುವ ತಂತ್ರಗಾರಿಕೆ ಗುಟ್ಟಾಗೇನೂ ಇಲ್ಲ.
ಪಾಕಿಸ್ತಾನಕ್ಕೆ ಹೋದಾಗ ಜಿನ್ನಾರವರ ಪರವಾಗಿ ಮಾತಾಡಿದರು ಎಂಬ ಕಾರಣಕ್ಕೆ ಮಂದಿರ ರಾಜಕೀಯದ ಮೂಲಕ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಲಾಲಕೃಷ್ಣ ಅದ್ವಾನಿಯವರನ್ನೇ ಮೂಲೆಗುಂಪು ಮಾಡಿದ ಸಂಘಕ್ಕೆ ಇನ್ನು ನಮ್ಮ ರಾಜ್ಯದ ಶೂದ್ರ ನಾಯಕರು ಅದ್ಯಾವ ಗಿಡದ ತೊಪ್ಪಲು. ಹೀಗೆ ಬಳಸಿ ಬಿಸಾಕಲು ಕೇವಲ ಶೂದ್ರರು ದಲಿತರೇ ಆಗಬೇಕೆಂದೇನೂ ಇಲ್ಲ. ಈ ಆರೆಸ್ಸೆಸ್ಸಿನ ಗರ್ಭಗುಡಿಯಲ್ಲಿರುವವರು ಅಗತ್ಯ ಬಿದ್ದರೆ ತಮ್ಮದೇ ಜಾತಿಯವರನ್ನೂ ಸಹ ಬಳಸಿ ನಂತರ ಬಲಿಪಡೆಯುತ್ತಾರೆ. ಅವರಿಗೆ ಅವರ ಮನುವಾದಿ ಸಿದ್ದಾಂತವೇ ಮುಖ್ಯ. ವೈದಿಕಶಾಹಿ ಹಿಂದುತ್ವವಾದವೇ ಅಂತಿಮ. ಮನುಸ್ಮೃತಿಯ ವರ್ಣಬೇಧ ನೀತಿಯ ಆಚರಣೆಯೇ ಗುರಿ. ಅದನ್ನು ಸಾಧಿಸಲು ಯಾವುದೇ ದಾರಿಯನ್ನು ಹಿಡಿಯಲಾಗುತ್ತದೆ. ಯಾರನ್ನು ಬೇಕಾದರೂ ಬಳಸಿಕೊಳ್ಳಲಾಗುತ್ತದೆ. ಪ್ರತಿರೋಧ ತೋರಿದರೆ, ಅಪ್ರಯೋಜಕರು ಎಂದೆನಿಸಿದರೆ ಅವರು ಅದೆಷ್ಟೇ ದೊಡ್ಡ ನಾಯಕರಾಗಿರಲಿ ಅವರನ್ನೂ ಸಹ ನಿರ್ದಾಕ್ಷಿಣ್ಯವಾಗಿ ಅಪಮಾನ ಮಾಡಿ ನೇಪತ್ಯಕ್ಕೆ ತಳ್ಳುವ ತಂತ್ರಗಾರಿಕೆಗಳಿಗೆ ಕೊನೆಮೊದಲಿಲ್ಲ.
ಇಂದು ಯಡಿಯೂರಪ್ಪ ಮತ್ತು ಈಶ್ವರಪ್ಪನವರಿಗೆ ಬಂದ ದುರಂತ ಸ್ಥಿತಿಯೇ ಮುಂದೆ ಆರ್.ಅಶೋಕ್, ಸಿ.ಟಿ.ರವಿ, ವಿ.ಸೋಮಣ್ಣ, ಶೋಬಕ್ಕ ಮುಂತಾದ ಶೂದ್ರ ನಾಯಕಮಣಿಗಳಿಗೆ ಕಾಯ್ದಿದೆ. ಹಣ ಹಾಗೂ ಅಧಿಕಾರದಾಸೆಗೆ ಬೇರೆ ಪಕ್ಷಗಳಿಂದ ವಲಸೆ ಬಂದವರ ಗತಿಯೂ ಅವನತಿಯತ್ತ ಎಂಬುದನ್ನು ಮುಂದಿನ ದಿನಮಾನದಲ್ಲಿ ಸಾಬೀತಾಗಲಿದೆ. ಇಂತವರು ತಾವು ಅವನತಿ ಹೊಂದುವುದಷ್ಟೇ ಅಲ್ಲ ಭವಿಷ್ಯದಲ್ಲಿ ಇಡೀ ಜನ ಸಮೂಹವನ್ನು ಬ್ರಾಹ್ಮಣ್ಯದ ದಾಸ್ಯಕ್ಕೆ ಈಡುಮಾಡುತ್ತಾರೆ. ಸಮಾನತೆಯನ್ನು ಸಾರುವ ಸಂವಿಧಾನವನ್ನು ನಾಶಮಾಡುವ ಪ್ರಯತ್ನಕ್ಕೆ ಬೆಂಬಲವಾಗುತ್ತಾರೆ. ಅಸಮಾನತೆಯನ್ನು ಸಾರುವ ಮನುಧರ್ಮಶಾಸ್ತ್ರವನ್ನು ಅಧೀಕೃತವಾಗಿ ಆಚರಣೆಗೆ ತರುವ ಗುರಿಗೆ ಕಾಲಾಳುಗಳಾಗಿ, ದಾಳಗಳಾಗಿ ಬಳಕೆಯಾಗುತ್ತಾರೆ.
ಆರೆಸ್ಸೆಸ್ಸಿನ ಆಳ ಅಗಲಗಳನ್ನು ಮೇನಿಯಾ ಪೀಡಿತ ಪ್ರತಿಯೊಬ್ಬ ಸಂಘ ಪರಿವಾರದ ಸಮರ್ಥಕರು ಹಾಗೂ ಸಮಸ್ತ ಕಾರ್ಯಕರ್ತರು ಅರ್ಥಮಾಡಿಕೊಳ್ಳಲೇಬೇಕಿದೆ. ಬಿಜೆಪಿಯ ರಾಜಕೀಯ ಚದುರಂಗದಾಟಕ್ಕೆ ದಾಳವಾಗಿ ಬಳಕೆಯಾಗುತ್ತಿರುವ ಪ್ರತಿಯೊಬ್ಬ ಶೂದ್ರ ದಲಿತ ನಾಯಕರುಗಳು ಅರಿತುಕೊಳ್ಳಲೇಬೇಕಿದೆ. ಸಿಕ್ಕ ಅಧಿಕಾರದ ಅಮಲಿನಲ್ಲಿ ಮೈಮರೆತರೆ ಈಗ ಯಡಿಯೂರಪ್ಪ, ಈಶ್ವರಪ್ಪನಂತವರಿಗೆ ಬಂದ ದುಸ್ಥಿತಿಯೇ ಎಲ್ಲರಿಗೂ ಬರುವುದರಲ್ಲಿ ಸಂದೇಹವಿಲ್ಲ. ಸಿಕ್ಕ ಅಧಿಕಾರದಲ್ಲಿ ತೇಲಿಸುತ್ತಿರುವಾಗ ಏನೂ ಗೊತ್ತಾಗದೇ ಮೆರೆಯುವವರಿಗೆ ಮುಳುಗಿದಾಗಲೇ ಬುದ್ದಿ ಬರುತ್ತದೆ. ಆದರೆ ಅಷ್ಟರಲ್ಲಿ ಅಧಿಕಾರ ಅಂತಸ್ತುಗಳು ದೂರವಾಗಿರುತ್ತವೆ. ಕಾಣದ ಕೈಗಳು ಹೇಳಿದಂತೆ ಮಾಡಿದ ಕೆಟ್ಟ ಕೆಲಸಗಳು ಮನುಕುಲದ ಇತಿಹಾಸದಲ್ಲಿ ಖಳನಾಯಕರನ್ನಾಗಿ ಚಿತ್ರಿಸಿರುತ್ತವೆ.
-ಶಶಿಕಾಂತ ಯಡಹಳ್ಳಿ
12-04-2023
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ