ತಹ ತಹ..
ಪ್ರಧಾನಿಯ ಸಫಾರಿಯೂ …..ಸಿಂಹನ ದುರಹಂಕಾರವು..
“ಕುರಿ ಚರ್ಬಿ ತಿಂದು ತಿಂದು ಕೊಬ್ಬು ಜಾಸ್ತಿಯಾಗಿದೆ, ಹುಲಿ ಯೋಜನೆಗೆ 50 ವರ್ಷ ತುಂಬಿದ ಕಾರಣಕ್ಕೆ ಮೋದಿ ಬಂಡೀಪುರಕ್ಕೆ ಬಂದು ಹೋಗಿದ್ದಾರೆ. ಬೇಸಿಗೆ ಇರುವ ಕಾರಣಕ್ಕೆ ಹುಲಿ ಕಾಣಿಸಿಲ್ಲ. ಅದಕ್ಕೂ ಕೊಂಕು ಮಾತಾಡುವುದೇಕೆ?” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಸಂಸದ ಪ್ರತಾಪ ಸಿಂಹ ಹೇಳಿದ್ದು ಅತಿರೇಕದ ಗುಲಾಮಗಿರಿ ವರ್ತನೆ.
ಮೊದಲನೆಯದಾಗಿ.. ‘ಕುರಿ ತಿನ್ನುವವರಿಗೆ ಕೊಬ್ಬು ಜಾಸ್ತಿ’ ಎನ್ನುವ ಹೇಳಿಕೆ ಮಾಂಸಾಹಾರ ಸಂಸ್ಕೃತಿಗೆ ಅವಮಾನ ಮಾಡುವಂತಹುದಾಗಿದೆ. “ಮಾಂಸ ತಿನ್ನುವವರು ಕನಿಷ್ಟ ಹಾಗೂ ಸಸ್ಯಾಹಾರಿಗಳು ಶ್ರೇಷ್ಠ’ ಎನ್ನುವ ಇಂತಹ ಬ್ರಾಹ್ಮಣ್ಯದ ಭ್ರಮೆಯೇ ಮನುಕುಲದ ವಿರೋಧಿಯಾಗಿದೆ. ಸಿದ್ದರಾಮಯ್ಯನವರು ಕುರುಬ ಸಮಾಜದವರಾಗಿದ್ದರಿಂದ ಇಂತಹ ಕೊಬ್ಬಿನ ಮಾತಾಡಿದ ಈ ಕಾಗದದ ಸಿಂಹ ಕುರುಬ ಜನಾಂಗಕ್ಕೂ ಅವಮಾನ ಮಾಡಿ ತನ್ನ ಮೇಲ್ಜಾತಿ ಅಹಂಕಾರವನ್ನು ತೋರಿಸಿದೆ. “ಈ ತುಪ್ಪ ತಿನ್ನುವವರಿಂದ ಈ ದೇಶ ಹಾಳಾಗಿದೆಯೇ ಹೊರತು ಮಾಂಸ ತಿನ್ನುವವರಿಂದಲ್ಲ” ಎಂದು ನಿಜಗುಣಾನಂದ ಸ್ವಾಮೀಜಿಯವರು ಹೇಳಿದ್ದನ್ನು ಈ ವಿಕ್ಷಿಪ್ತ ವ್ಯಕ್ತಿಗೆ ನೆನಪಿಸಿಕೊಡಬೇಕಾಗಿದೆ. ಯಾಕೆ ಸಂಘಪರಿವಾರದವರಲ್ಲಿ ಯಾರೂ ಮಾಂಸ ತಿನ್ನುವವರು ಇಲ್ಲವಾ?. ಸಿ.ಟಿ.ರವಿ ಮೀನು ತಿಂದು ದೇವಸ್ಥಾನಕ್ಕೆ ಹೋಗಲಿಲ್ಲವಾ? ಈಶ್ವರಪ್ಪನಂತವರು ಕುರಿ ತಿಂದು ತಿಂದು ಕೊಬ್ಬಿದ್ದಾರಾ?. ಬಿಜೆಪಿಗರಲ್ಲಿ ಮುಕ್ಕಾಲು ಭಾಗ ಮಾಂಸಾಹಾರಿಗಳಿದ್ದಾರೆಂಬುದು ಈ ಹುಚ್ಚು ಹಿಡಿದು ಕಚ್ಚುವ ಸಿಂಹಕ್ಕೆ ಗೊತ್ತಿಲ್ಲವೆ.
ಎರಡನೆಯದಾಗಿ… ಮೋದಿಯವರು ಬಂಡೀಪುರ ಅಭಿಯಾರಣ್ಯಕ್ಕೆ ಬಂದಿದ್ದರ ಕುರಿತು.. “ಎಲ್ಲಿ ಹಿಡಿದು ಮಾರಿಬಿಡುತ್ತಾರೋ ಎಂದು ಹೆದರಿ ಮೋದಿಯವರ ಕಣ್ಣಿಗೆ ಬೀಳದೇ ಹುಲಿಗಳು ಅಡಗಿ ಕುಳಿತಿವೆ” ಎಂದು ಸಿದ್ದರಾಮಯ್ಯನವರು ಟೀಕಿಸಿದ್ದಾರೆ. ಹಾಗೆ ಟೀಕಿಸುವುದಕ್ಕೂ ಬಲವಾದ ಕಾರಣವಿದೆ. ಕಳೆದ 9 ವರ್ಷಗಳಿಂದ ಈ ದೇಶದ ಪ್ರಮುಖವಾದ ಅನೇಕ ಸರಕಾರಿ ಕಂಪನಿಗಳನ್ನು ಕೇಂದ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಖಾಸಗಿಯವರಿಗೆ ಮಾರಾಟ ಮಾಡಿದ್ದು ಸುಳ್ಳೇನಲ್ಲವಲ್ಲ. ಬಂದರು ವಿಮಾನ ನಿಲ್ದಾಣಗಳನ್ನೂ ಬಿಡದೇ ಆದಾನಿಗೆ ಮಾರಿದ್ದು ಮರೆಮಾಚುವಂತಹುದೇನೂ ಅಲ್ಲವಲ್ಲ. ಮೋದಿಯವರು ಪ್ರಧಾನಿಯಾದ ಮೇಲೆ ಖಾಸಗಿಯವರಿಗೆ ಮಾರಾಟ ಮಾಡಲಾದ ಸರಕಾರಿ ಒಡೆತನದ ಸ್ವತ್ತು, ಆಸ್ತಿ, ಕಂಪನಿಗಳ ಲೆಕ್ಕ ಎಲ್ಲರಿಗೂ ಗೊತ್ತಿರುವಂತಹುದಲ್ಲ. ಈ ಹಿನ್ನೆಲೆಯಲ್ಲಿ ಎಂದೂ ಬರದೇ ಇರುವ ಮೋದಿ ಇಂದು ಬಂಡೀಪುರಕ್ಕೆ ಬಂದಿದ್ದಾರೆ ಅಂದಮೇಲೆ ಅದನ್ನು ಖಾಸಗಿಯವರಿಗೆ ಮಾರಬಹುದು ಇಲ್ಲವೇ ನಿರ್ವಹಣೆಯ ಹೆಸರಲ್ಲಿ ಲೀವೆವಾರಿ ಮಾಡಬಹುದು ಎನ್ನುವ ಆತಂಕ ಯಾರಿಗಾದರೂ ಅನ್ನಿಸದೇ ಇರದು. ವಿಪಕ್ಷ ನಾಯಕರಾಗಿ ಟೀಕೆಯನ್ನೇ ಮಾಡಬಾರದು ಎಂಬುದು ಈ ಸಂಘಿಗಳ ಅಸಹನೆಯ ಪರಮಾವಧಿ.
ಹೋಗಲಿ..ಹುಲಿ ಯೋಜನೆ ಘೋಷಣೆಯಾಗಿ 50 ವರ್ಷ ಆಗಿದ್ದಕ್ಕೆ ಪ್ರಧಾನಿ ಮೋದಿಯವರು ದೆಲ್ಲಿಯಿಂದಾ ಬಂಡಿಪುರಕ್ಕೆ ಸಪಾರಿ ಹಾಕಿ ಸಫಾರಿ ನಡೆಸಲು ತಮ್ಮ ಐರನ್ ಲೆಗ್ ಬೆಳಸಿದ್ದಾರೆ ಎಂದೇ ಅಂದುಕೊಳ್ಳೋಣ. 1973 ರಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ರಾಷ್ಟ್ರೀಯ ಉದ್ಯಾನ ಹಾಗೂ ಹುಲಿ ಯೋಜನೆ ಜಾರಿಮಾಡಿದ್ದರು. ಆಯ್ತು ಈ ಸುವರ್ಣ ಸಂಭ್ರಮಕ್ಕೆ ಸಾಕ್ಷಿಯಾಗಲು ಮೋದಿಯವರು ಬಂದಿದ್ದಾರೆ ಎಂದುಕೊಳ್ಳೋಣ. ಅದಕ್ಕೆ ಬಂಡೀಪುರ ಅರಣ್ಯವೇ ಯಾಕೆ? ದೇಶದಲ್ಲಿ ಒಟ್ಟು 53 ಹುಲಿ ಸಂರಕ್ಷಿತಾ ಅಭಿಯಾರಣ್ಯಗಳಿವೆಯಲ್ಲಾ. ದೆಲ್ಲಿಗೆ ಹತ್ತಿರವಿರುವ ಮಧ್ಯಪ್ರದೇಶದಲ್ಲಿಯೇ ಕರ್ನಾಟಕಕ್ಕಿಂತ ಹೆಚ್ಚು ಹುಲಿಗಳಿವೆಯಲ್ಲಾ. ಯಾಕೆ ಎಲ್ಲಿಯೂ ಹೋಗದೇ ಕರ್ನಾಟಕದ ಕಾಡನ್ನು ಹುಡುಕಿ ಬಂದರು? ಯಾಕೆಂದರೆ ಈಗ ಕರ್ನಾಟಕದಲ್ಲಿ ಚುನಾವಣೆ ಘೋಷಣೆಯಾಗಿದೆ. ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಪಕ್ಷಕ್ಕೆ ನೆಲೆ ಇಲ್ಲವಾಗಿದೆ. ಮತ್ತೆ ಮತ್ತೆ ಬಂದು ಇಲ್ಲಿ ಜನರನ್ನು ಮರಳು ಮಾಡಬೇಕಿದೆ. ಧರ್ಮದ್ವೇಷ ಹುಟ್ಟಿಸುವ ಹಾಗೂ ಭಾವತೀವ್ರತೆ ಬಡಿದೆಬ್ಬಿಸುವ ತಂತ್ರಗಳು ಮೊದಲಿನಂತೆ ಫಸಲು ನೀಡುತ್ತಿಲ್ಲ. ಹೀಗಾಗಿ ಇಂತಹ ಹೊಸ ಗಿಮಿಕ್ ಗಳನ್ನು ಮಾಡಿ ಜನರ ಗಮನ ಸೆಳೆದು ಮತಗಳನ್ನು ಪಡೆಯುವ ಹುನ್ನಾರದ ಭಾಗವೇ ಪ್ರಧಾನಿಯವರ ಅಭಿಯಾರಣ್ಯದ ಸಫಾರಿ.
ಈ ದೇಶದ ಪ್ರಧಾನಿಗೆ ತನಗನ್ನಿಸಿದಲ್ಲಿ ಹೋಗುವ ಸ್ವಾತಂತ್ರ್ಯ ಇಲ್ಲವೇ? ಎನ್ನುವುದು ಭಕ್ತಾದಿಗಳ ಪ್ರಶ್ನೆ. ಇದೆ.. ಹೋಗಬಹುದಾಗಿದೆ. ಆದರೆ.. ನೆರೆ ಬರ ಕೋವಿಡ್ ಸಾವು ನೋವಿನಿಂದ ಕನ್ನಡ ನಾಡಿನ ಜನರು ಸಂಕಷ್ಟದಲ್ಲಿದ್ದಾಗ ಎಂದೂ ಬರದ ಪ್ರಧಾನಿ ಮೋದಿಯವರು ಕರ್ನಾಟಕದಲ್ಲಿ ಚುನಾವಣೆ ಇರುವುದರಿಂದ ಮತ್ತೆ ಮತ್ತೆ ಈಗೇಕೆ ಬರುತ್ತಿದ್ದಾರೆ? ‘ಬಂದರೆ ನಿಮಗೇನು ಹೊಟ್ಟೆಉರಿ’ ಎಂಬುದು ಮೋದಿ ಮೇನಿಯಾ ಪೀಡಿತರ ಮರುಪ್ರಶ್ನೆ. ಬರಲಿ ಬೇಡವೆಂದವರು ಯಾರು? ಆದರೆ ಪ್ರಧಾನಿಗಳು ಪ್ರತಿ ಸಲ ಸರಕಾರಿ ಕಾರ್ಯಕ್ರಮಗಳ ನೆಪದಲ್ಲಿ ಬಂದು ತಮ್ಮ ಪಕ್ಷದ ಪರವಾಗಿ ಚುನಾವಣಾ ಪ್ರಚಾರ ಮಾಡುವುದು ಯಾಕೆ? ಎಂದರೆ, ಪ್ರಚಾರ ಮಾಡಲಿ ಬಿಡಿ ಇದರಲ್ಲಿ ತಪ್ಪೇನು? ಮತ್ತೆ ಮರು ಪ್ರಶ್ನೆ. ಆದರೆ.. ಮೋದಿ ಮಹಾತ್ಮರು ಪ್ರತಿ ಸಲವೂ ಬಂದು ಹೋದಾಗ ಕನಿಷ್ಟ 10 ರಿಂದ 20 ಕೋಟಿಯಷ್ಟು ಹಣ ರಾಜ್ಯಸರಕಾರದ ಬೊಕ್ಕಸದಿಂದ ಖರ್ಚಾಗುತ್ತದಲ್ಲಾ ಇದಕ್ಕೆ ಯಾರು ಹೊಣೆ. ಹೀಗೆ ಖರ್ಚಾಗುವ ಹಣ ಕನ್ನಡಿಗರು ಕಟ್ಟಿದ ತೆರಿಗೆಯಿಂದ ಬಂದಿದ್ದು ಅದನ್ನು ಯಾವುದೇ ಒಂದು ಪಕ್ಷದ ಕಾರ್ಯಕ್ರಮಕ್ಕೆ ಅದು ಹೇಗೆ ಬಳಸಿಕೊಳ್ಳುತ್ತಿದ್ದಾರೆ? ಎಂದು ಕೇಳಿದರೆ ನಿರುತ್ತರ. ಸರಕಾರಿ ಯೋಜನೆಗಳ ಉದ್ಘಾಟನೆಗೋ, ಶಿಲಾನ್ಯಾಸಕ್ಕೋ ಇಲ್ಲವೇ ಅಭಯಾರಣ್ಯದ ಸಫಾರಿಗೋ ಬರುವ ಪ್ರಧಾನಿಗಳು ತಮ್ಮ ಪಕ್ಷದ ಪ್ರಚಾರಕ್ಕೆ ಪೂರಕವಾಗಿ ಕೆಲಸ ಮಾಡಿದರೆ ಅದನ್ನು ತೆರಿಗೆ ಕಟ್ಟುವ ಜನರು ಪ್ರಶ್ನಿಸಬಾರದಾ? ವಿರೋಧ ಪಕ್ಷದವರು ಆಕ್ಷೇಪಿಸಬಾರದಾ?
“ವಾಯುದಳದ ಮೂರು ಹೆಲಿಕಾಪ್ಟರ್ಗಳು ಏಕಕಾಲಕ್ಕೆ ಬಂದಿದ್ದರಿಂದ ಉಂಟಾದ ಶಬ್ದಮಾಲಿನ್ಯದಿಂದ ಪ್ರಾಣಿಗಳು ದಟ್ಟ ಅರಣ್ಯದೊಳಗೆ ಹೋಗಿ ಹುಲಿಗಳು ಕಣಿಸಿಲ್ಲ. ಈ ಸಾಮಾನ್ಯ ಜ್ಞಾನವೂ ಸಿದ್ದರಾಮಯ್ಯನವರಿಗೆ ಇಲ್ಲವೆ?” ಎಂದು ಈ ನಾಡಿನ ಸಿಂಹ ಪ್ರಶ್ನಿಸಿದೆ. ಪ್ರಧಾನಿ ಬಂದಿದ್ದರಿಂದ ಶಬ್ದಮಾಲಿನ್ಯ ಉಂಟಾಗಿ ಪ್ರಾಣಿಗಳಿಗೆ ಹಿಂಸೆಯಾಗಿದೆ ಎಂದು ಒಪ್ಪಿಕೊಂಡಂತಾಯ್ತು. ಆಮೇಲೆ ಪ್ರಧಾನಿಗಳ ಸಫಾರಿ ಸಮಯದಲ್ಲಿ ಜಿಂಕೆಗಳು ಜಿಗಿದಾಡುತ್ತಿದ್ದವಲ್ಲಾ ಅವುಗಳಿಗೆ ಶಬ್ದಮಾಲಿನ್ಯದ ಕಿರಿಕಿರಿ ಆಗಿಲ್ಲವೇ? ಅಥವಾ ಹುಲಿಗಳನ್ನು ಹೊರತು ಪಡಿಸಿ ಬೇರೆ ಪ್ರಾಣಿಗಳೆಲ್ಲಾ ಕಿವುಡಾಗಿವೆಯಾ? ಇಷ್ಟು ಸಾಮಾನ್ಯ ಪರಿಜ್ಞಾನ ಇಲ್ಲದವನನ್ನು ಸಂಸದನನ್ನಾಗಿ ಆರಿಸಿ ಕಳಿಸಿದವರು ಮತ್ತೊಮ್ಮೆ ಯೋಚಿಸಬೇಕಾಗಿದೆ.
ಇಂತಹ ಅಹಾರ ಸಂಸ್ಕೃತಿ ವಿರೋಧಿ, ಶ್ರೇಷ್ಟತೆಯ ವ್ಯಸನ ಪೀಡಿತ ಪಕ್ಷದವರಿಗೆ ಕರ್ನಾಟಕದ ಜನತೆ ಚುನಾವಣೆಯಲ್ಲಿ ಮುಟ್ಟಿ ನೋಡಿಕೊಳ್ಳುವಂತಹ ಪಾಠ ಕಲಿಸಬೇಕಿದೆ. ಇವತ್ತು ‘ನಂದಿನಿ’ ಯನ್ನು ನುಂಗಲು ನೋಡಿದವರು ಮುಂದೆ ಮತ್ತೆ ಅಧಿಕಾರಕ್ಕೆ ಬಂದರೆ ಅಭಿಯಾರಣ್ಯವನ್ನೂ ಸ್ವಾಹಾ ಮಾಡುವುದರಲ್ಲಿ ಸಂದೇಹವಿಲ್ಲ.
-ಶಶಿಕಾಂತ ಯಡಹಳ್ಳಿ
10-4-2023
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ