ತಹ ತಹ
ಅಂಬೇಡ್ಕರ್ ಮತ್ತು ಚುನಾವಣೆ ವ್ಯವಸ್ಥೆ
ಬಂಡವಾಳಶಾಹಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಎನ್ನುವುದು ಉಳ್ಳವರ ಮೇಲ್ವರ್ಗದವರ ಹಣಬಲ ಜಾತಿಬಲ ತೋಳ್ಬಲ ಇದ್ದವರ ಆಡಂಬೋಲವಾಗಿದೆ ಎಂಬುದು ಬಹಿರಂಗ ಸತ್ಯ. ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ರವರಂತಹ ಮಹಾನ್ ಮಾನವತಾವಾದಿಯವರೂ ಸಹ ಈ ಚುನಾವಣಾ ವ್ಯವಸ್ಥೆಯಲ್ಲಿ ಸೋಲನ್ನು ಅನುಭವಿಸಿದ್ದು ಮಹಾ ವಿಪರ್ಯಾಸ.
ಅಂಬೇಡ್ಕರ್ ರವರು ಮೊದಲ ಸಲ ಚುನಾವಣೆಗೆ ಸ್ಪರ್ಧಿಸಿದ್ದು 1952 ರಲ್ಲಿ ಉತ್ತರ ಮುಂಬಯಿ ಮೀಸಲು ಕ್ಷೇತ್ರದಿಂದ.ಅಖಿಲ ಭಾರತ ಪರಿಶಿಷ್ಟ ಜಾತಿ ಒಕ್ಕೂಟದ ಅಭ್ಯರ್ಥಿಯಾಗಿ. (ನಂತರ ಈ ಒಕ್ಕೂಟವು ರೀಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾ ಆಯಿತು.) ಆಗ ಅಂಬೇಡ್ಕರ್ ರವರಿಗೆ ಅವಿರೋಧವಾಗಿ ಆಯ್ಕೆಯಾಗಬಹುದೆಂಬ ನಿರೀಕ್ಷೆ ಇತ್ತು. ಆದರೆ.. ಅಂಬೇಡ್ಕರ್ ರವರನ್ನು ಸೋಲಿಸಲೇಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷವು ನಾರಾಯಣ ಕಾಜರೋಳ್ಕರ್ ಎನ್ನುವವರನ್ನು ಸ್ಪರ್ಧೆಗೆ ಇಳಿಸಿತು. ಹಿಂದುಳಿದ ವರ್ಗದ ಈ ನಾರಾಯಣ್ ಅಂಬೇಡ್ಕರ್ ರವರಿಗೆ ಸಹಾಯಕರಾಗಿದ್ದವರು. ಅವರನ್ನೇ ಎತ್ತಿಕಟ್ಟಿದ ಕಾಂಗ್ರೆಸ್ ನವರು ಅಂಬೇಡ್ಕರ್ ವಿರುದ್ದವೇ ಸ್ಪರ್ಧಿಸುವಂತೆ ಮಾಡಿದ್ದರು. ಬಾಬಾಸಾಹೇಬರ ವಿರುದ್ಧ ಮೇಲ್ಜಾತಿ ಉಳಿಗಮಾನ್ಯ ಶಕ್ತಿಗಳು ಒಂದಾದವು. ಅಂಬೇಡ್ಕರ್ ರವರ ವಿರುದ್ಧ ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷ ಹಾಗೂ ಹಿಂದೂ ಮಹಾಸಭಾದವರೆಲ್ಲಾ ಒಟ್ಟಾಗಿ ಅಂಬೇಡ್ಕರ್ ರವರ ವಿರುದ್ಧ ಅಬ್ಯರ್ಥಿಗಳನ್ನು ಹಾಕಿ ಮತವಿಭಜನೆ ತಂತ್ರ ಹೂಡಿದರು. ಆಗಿನ ಕಾಲದಲ್ಲೆ ಮತದಾರರಿಗೆ ಹಣ ಹಂಚಿದರು, ಪರಿಶಿಷ್ಟ ಜಾತಿ ಪಂಗಡಗಳ ನಡುವೆಯೇ ದ್ವೇಷದ ಬೀಜ ಬಿತ್ತಿದರು. ಅಶೋಕ ಮೆಹತಾ ನೇತೃತ್ವದ ಸಮಾಜವಾದಿಗಳು ಮಾತ್ರ ಚುನಾವಣೆಯಲ್ಲಿ ಅಂಬೇಡ್ಕರ್ ರವರನ್ನು ಬೆಂಬಲಿಸಿದ್ದರು.
ಚುನಾವಣೆಯಲ್ಲಿ ಅಂಬೇಡ್ಕರ್ ವಿರುದ್ದ ತೀವ್ರವಾಗಿ ಪ್ರಚಾರ ಮಾಡಿದವರು ಸಿಪಿಐ ಪಕ್ಷದ ಎಸ್.ಐ. ಡಾಂಗೆ. ಕಮ್ಯೂನಿಸ್ಟ್ ಪಕ್ಷ ಮಾಡಿದ ಈ ಅವಗಡದಿಂದಾಗಿ ಅಂದಿನಿಂದ ಇಂದಿನವರೆಗೂ ಮಹಾರಾಷ್ಟ್ರದಲ್ಲಿ ದಲಿತ ಹಾಗೂ ಕಮ್ಯೂನಿಸ್ಟರ್ ನಡುವಿನ ಅಸಹನೆ ಕಡಿಮೆಯಾಗಿಲ್ಲ. ಎಲ್ಲಾ ಶಕ್ತಿಗಳೂ ಸೇರಿ ಚುನಾವಣೆಯಲ್ಲಿ ಅಂಬೇಡ್ಕರ್ ರವರನ್ನು ಹೀನಾಯವಾಗಿ ಸೋಲಿಸಿದರು. ಕಾಜರೋಳ್ಕರ್ ಹದಿನೈದು ಸಾವಿರ ಮತಗಳಿಂದ ಗೆದ್ದರು. ಬಾಬಾಸಾಹೇಬರು ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಾಗಿದ್ದರಿಂದ ಮತದಾರರಿಗೆ ಮತದಾನದ ಬಗ್ಗೆ ತಿಳುವಳಿಕೆಯ ಕೊರತೆಯೂ ಇದ್ದಿದ್ದರಿಂದ ಐವತ್ತು ಸಾವಿರದಷ್ಟು ಮತಗಳು ತಿರಸ್ಕೃತಗೊಂಡಿದ್ದವು. ಸರಿಯಾಗಿ ಮತ ಚಲಾವಣೆಗಳಾಗಿದ್ದರೆ ಅಂಬೇಡ್ಕರ್ ರವರು ಗೆಲ್ಲುವ ಸಾಧ್ಯತೆಯೇ ಹೆಚ್ಚಿತ್ತು. ಈ ಹಿನ್ನೆಡೆ ಅಂಬೇಡ್ಕರ್ ರವರಿಗೆ ಘಾಸಿಯನ್ನುಂಟು ಮಾಡಿತು. ಆಳುವ ವರ್ಗಗಳು ಅದು ಹೇಗೆ ದಲಿತ ವರ್ಗದವರನ್ನೇ ಒಡೆದು ತಮ್ಮ ಹಿತಾಸಕ್ತಿಗೆ ಪೂರಕವಾಗಿರುವವರನ್ನು ಆಯ್ಕೆಯಾಗುವಂತೆ ಮಾಡುತ್ತವೆ ಎಂಬ ಸತ್ಯ ಅರಿವಿಗೆ ಬಂತು.
ಈ ಚುನಾವಣೆಯಲ್ಲಿ ಸೋತ ನಂತರ ಅಂಬೇಡ್ಕರ್ ರವರು ಚಾರಿತ್ರಿಕ ಭಾಷಣ ಮಾಡಿದರು. “ಹೌದು ನಾವು ಮಾರಾಟಕ್ಕೆ ಸಿದ್ದರಿಲ್ಲವಾದ್ದರಿಂದ ಸೋತಿದ್ದೇವೆ . ಪಕ್ಷಾಂತರ ಮಾಡಲಾರದ ನಾವು ಮುಂದೆಯೂ ಸೋಲುತ್ತೇವೆ. ಗೆಲ್ಲುವುದಷ್ಟೇ ನಮ್ಮ ಆದ್ಯತೆಯಲ್ಲ. ನಾವು ನಮ್ಮ ತತ್ವ ಆದರ್ಶಕ್ಕೆ ಬದ್ದರಾದವರು, ಉತ್ತಮ ಮೌಲ್ಯ ಮತ್ತು ಅರಿವಿಗಾಗಿ ಹೋರಾಡೋಣ” ಎಂದು ಕರೆಕೊಟ್ಟರು.
ಹಣಬಲ ಜಾತಿಬಲ ಹಾಗೂ ತೋಳ್ಬಲಗಳಿಂದ ಉಳ್ಳವರೇ ಚುನಾವಣೆಗಳಲ್ಲಿ ನಿರಂತರವಾಗಿ ಆಯ್ಕೆಯಾಗಿ ದೇಶದ ನೀತಿ ನಿರೂಪಣೆ ತೀರ್ಮಾನ ಮಾಡುವ ಆಡಳಿತದ ಕೇಂದ್ರದಲ್ಲಿ ಹಿಂದುಳಿದವರು ಹಾಗೂ ದಲಿತರಿಗೆ ಸೂಕ್ತ ಪ್ರಾತಿನಿದ್ಯ ಸಿಕ್ಕಲಾರದು ಎಂಬುದನ್ನು ಮನಗಂಡ ಅಂಬೇಡ್ಕರ್ ರವರು 1927 ರಲ್ಲಿ ದಲಿತರಿಗೆ ಪ್ರತ್ಯೇಕ ಪ್ರಾತಿನಿಧ್ಯಕ್ಕಾಗಿ ಒತ್ತಾಯಿಸಿದರು. ತಳ ಕೆಳ ಸಮುದಾಯದ ದಲಿತರು ಎರಡು ಮತಗಳನ್ನು ಹಾಕುವ ವ್ಯವಸ್ಥೆ ಜಾರಿಗೆ ಬರಬೇಕೆಂಧೂ ಹೋರಾಡಿದರು. ಇದರಿಂದಾಗಿ ಮೇಲ್ವರ್ಗದವರು ಬೆಚ್ಚಿ ಬಿದ್ದರು. ಅಂಬೇಡ್ಕರ್ ರವರ ನ್ಯಾಯಯುತ ಬೇಡಿಕೆಯನ್ನು ಎಲ್ಲಿ ಬ್ರೀಟೀಷರು ಜಾರಿಗೆ ತರುತ್ತಾರೋ ಎಂದು ಆತಂಕಗೊಂಡರು. ಆಗಲೇ ಮಹಾತ್ಮಾ ಗಾಂಧೀಜಿ ಈ ಬೇಡಿಕೆಯ ವಿರುದ್ಧ ಅಮರಣಾಂತ ಉಪವಾಸ ಕೈಗೊಂಡರು. ಗಾಂಧೀಜಿಯವರ ಪ್ರಾಣವನ್ನು ಉಳಿಸಿ ಎಂದು ಅನೇಕರು ಅಂಬೇಡ್ಕರರ ಮೇಲೆ ಭಾವನಾತ್ಮಕವಾದ ಒತ್ತಡವನ್ನು ಹಾಕತೊಡಗಿದರು. ಎಲ್ಲಿ ಗಾಂಧೀಜಿಯವರು ತೀರಿಕೊಂಡು ಸ್ವಾತಂತ್ರ್ಯ ಚಳುವಳಿಕೆ ಹಿನ್ನಡೆಯಾಗುತ್ತದೋ ಎಂದು ಆತಂಕಗೊಡ ಅಂಬೇಡ್ಕರರವರು ಒಲ್ಲದ ಮನಸ್ಸಿನಿಂದ 1932 ರಲ್ಲಿ ಪೂನಾ ಒಪ್ಪಂದಕ್ಕೆ ಸಹಿ ಹಾಕಿ ದಲಿತರ ಪ್ರತ್ಯೇಕ ಪ್ರಾತಿನಿಧ್ಯದ ಬೇಡಿಕೆಯಿಂದ ಹಿಂದೆ ಸರಿದರು. ಮೇಲ್ವರ್ಗದವರ ಕೈ ಮೇಲಾಯಿತು.
ತದನಂತರ 1954 ರಲ್ಲಿ ವಿದರ್ಭ ಭಂಡಾರ ಲೋಕಸಭಾ ಮೀಸಲು ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲೂ ಬಾಬಾಸಾಹೇಬರು ಸ್ಪರ್ಧಿಸಿದರು. ಆಗಲೂ ಸಹ ಈ ಮೇಲ್ವರ್ಗದವರ ಕುತಂತ್ರ ಹಾಗೂ ಕಾಂಗ್ರೆಸ್ ಕಮ್ಯೂನಿಸ್ಟ್ ಪಕ್ಷಗಳ ತಂತ್ರಗಾರಿಕೆಯಿಂದಾಗಿ ಮೂರು ಸಾವಿರ ಮತಗಳಲ್ಲಿ ಅಂಬೇಡ್ಕರ್ ರವರು ಸೋತರು. ಅಂಬೇಡ್ಕರ್ ರವರ ಈ ಸೋಲುಗಳಿಗೆ ನಿಜವಾದ ಕಾರಣ ಜಾತೀಯತೆ ಮತ್ತು ಉಳಿಗಮಾನ್ಯ ವ್ಯವಸ್ಥೆಯಾಗಿತ್ತು. ಜಾತಿವ್ಯವಸ್ಥೆ ನಾಶವಾಗಬೇಕು, ಆರ್ಥಿಕ ಅಸಮಾನತೆ ತೊಲಗಬೇಕು, ದಲಿತರಿಗೂ ಭೂಮಿಯ ಒಡೆತನ ದೊರೆಯಬೇಕು, ಇದಕ್ಕೆ ಪೂರಕವಾಗಿ ಕಾನೂನುಗಳು ರೂಪಗೊಳ್ಳಬೇಕು ಎಂದು ಪ್ರತಿಪಾದಿಸುತ್ತಿದ್ದ ಅಂಬೇಡ್ಕರ್ ರವರನ್ನು ಭೂಮಾಲೀಕರುಗಳೂ, ಮೇಲ್ಜಾತಿಯವರು ಒಪ್ಪಿಕೊಳ್ಳಲು ಸಾಧ್ಯವೇ ಇರಲಿಲ್ಲ. 1950 ಜನವರಿ 26 ರಂದು ಜಾರಿಗೆ ಬಂದ ಭಾರತದ ಸಂವಿಧಾನದಲ್ಲಿ ಸಮಾನತೆಯ ಅಂಶಗಳನ್ನು ಕಟ್ಟಿಕೊಟ್ಟ ಅಂಬೇಡ್ಕರ್ ರವರು ಜಾತಿ ಮತ ವರ್ಗ ತಾರತಮ್ಯವನ್ನು ಕಾನೂನಾತ್ಮಕವಾಗಿ ಬಹಿಷ್ಕರಿಸಿದ್ದರು. ಇದೂ ಕೂಡಾ ಈ ಮೇಲ್ಜಾತಿ ವರ್ಗದವರ ಅಸಮಾಧಾನಕ್ಕೆ ಕಾರಣವಾಗಿತ್ತು. ಎಲ್ಲಿ ಅಂಬೇಡ್ಕರರವರು ಚುನಾವಣೆಯಲ್ಲಿ ಗೆದ್ದು ಸಂಸತ್ತಿಗೆ ಬಂದರೆ ತಮ್ಮ ಅಸ್ತಿತ್ವಕ್ಕೆ ದಕ್ಕೆ ಬರುತ್ತದೋ ಎಂದು ಆತಂಕಗೊಂಡು ಚುನಾವಣೆಯಲ್ಲಿ ಗೆಲ್ಲದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.
ಆದರೆ.. ಅಂಗೈಯನ್ನು ಅಡ್ಡಹಿಡಿದು ಸೂರ್ಯಕಾಂತಿ ತಡೆಯಬಹುದೇ? ಚುನಾವಣಾ ಸೋಲಿನಿಂದ ಅಂಬೇಡ್ಕರ್ ರವರು ಹತಾಶರಾಗಲಿಲ್ಲ. ದೀನ ದಲಿತ ದಮನಿತರ ಪರವಾದ ಹೋರಾಟಗಳನ್ನು ಕೈಬಿಡಲಿಲ್ಲ. ಸಮಸಮಾಜ ಕಟ್ಟುವ ನಿಟ್ಟಿನಲ್ಲಿ ವಿರಮಿಸಲಿಲ್ಲ. ಮೇಲ್ವರ್ಗದವರು ಒಡ್ಡಿದ ಅಡೆತಡೆಗಳಿಗೆ ಬಗ್ಗಲಿಲ್ಲ. ತಮ್ಮ ಪತ್ರಿಕೆ, ಲೇಖನ, ಭಾಷಣ ಮತ್ತು ಹೋರಾಟಗಳ ಮೂಲಕ ಜನಜಾಗೃತಿ ಮಾಡುವುದನ್ನು ಬಿಡಲಿಲ್ಲ. ಏನೇ ಆದರೂ ಈ ಜಾತಿವಾದಿ ವ್ಯವಸ್ಥೆಯ ಕಿರುಕುಳ ತಪ್ಪಲಿಲ್ಲ. ಕೊನೆಗೆ ಅಸಮಾನತೆಯ ಕೂಪವಾದ ಹಿಂದೂ ಧರ್ಮವನ್ನೇ ತ್ಯಜಿಸಿದ ಬಾಬಾಸಾಹೇಬರು 1956 ಅಕ್ಟೋಬರ್ 14 ರಂದು ಸಂಘ ಪರಿವಾರದ ಶಕ್ತಿ ಕೇಂದ್ರವಾದ ನಾಗಪುರದಲ್ಲಿ ತಮ್ಮ ಲಕ್ಷಾಂತರ ಅನುಯಾಯಿಗಳಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಹಿಂದೂ ಧರ್ಮೀಯ ಮೇಲ್ಜಾತಿ ವರ್ಗಕ್ಕೆ ಮರ್ಮಾಘಾತವನ್ನುಂಟು ಮಾಡಿದರು.
ಭಾರತದ ಭಾಗ್ಯ ವಿಧಾತರಾದ ಅಂಬೇಡ್ಕರ್ ರವರು ಬೌತಿಕವಾಗಿ ಇಲ್ಲವಾಗಿರಬಹುದು. ಆದರೆ ಅವರು ಬಿಟ್ಟು ಹೋದ ಸಮಾನತೆ ಸಹೋದರತ್ವ ಸಿದ್ದಂತಗಳು ಇಂದಿನವರಿಗೆ ಮಾರ್ಗದರ್ಶಕವಾಗಿವೆ. ಅವರು ಕೊಟ್ಟು ಹೋದ ಸಂವಿಧಾನವು ಭಾರತೀಯರಿಗೆಲ್ಲಾ ಧರ್ಮಗ್ರಂಥವಾಗಿವೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಚುನಾವಣಾ ವ್ಯವಸ್ಥೆ ಪ್ರಾಮಾಣಿಕವಾಗಿರಲಂತೂ ಸಾಧ್ಯವೇ ಇಲ್ಲ. ಆದರೆ ಅಂಬೇಡ್ಕರ್ ರವರು ಪ್ರತಿಪಾದಿಸಿದ ಮೌಲ್ಯಗಳು, ತತ್ವಗಳನ್ನು ಅಳವಡಿಸಿಕೊಳ್ಳಬೇಕಿದೆ. ಸಂವಿಧಾನವನ್ನು ಉಳಿಸಿಕೊಳ್ಳಬೇಕಿದೆ. ಜೈ ಭೀಮ್
-ಶಶಿಕಾಂತ ಯಡಹಳ್ಳಿ
14-04-2023
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ