ತಹ ತಹ…
ಹತ್ಯಾಕಾಂಡದ ಆರೋಪಿಗಳು ಖುಲಾಸೆ; ಕಳೆದುಹೋಗುತ್ತಿದೆ ನ್ಯಾಯಾಂಗದ ಮೇಲಿನ ಭರವಸೆ.
ಪ್ಯಾಸಿಸ್ಟ್ ಪ್ರಭುತ್ವದಲ್ಲಿ ಇಂತಹದ್ದೊಂದು ತೀರ್ಪು ನಿರೀಕ್ಷಿತವಾಗಿಯೇ ಇತ್ತು. ಆದರೆ ತುಂಬಾ ತಡವಾಗಿ ಪ್ರಕಟಗೊಂಡಿತು. ಈ ದೇಶ ಕಂಡ ಅತ್ಯಂತ ಹೀನಾತಿಹೀನ ಮತಾಂಧ ಹತ್ಯಾಕಾಂಡವೊಂದು ಘಟಿಸಿ 21 ವರ್ಷಗಳೇ ಸಂದಿವೆ. ಅಯೋಧ್ಯೆಯಿಂದ ಮರಳುತ್ತಿದ್ದ ಸಾಬರಮತಿ ರೈಲು ಗೋದ್ರಾದಲ್ಲಿ ಅಗ್ನಿದುರಂತಕ್ಕೊಳಗಾಗಿ ಕರಸೇವಕರು ಬಲಿಯಾದ ನಂತರ ಗುಜರಾತಿನಾದ್ಯಂತ ಆರಂಭವಾದ ಸಂಘಟಿತ ಪ್ರಭುತ್ವ ಪ್ರಾಯೋಜಿತ ಹಿಂಸಾಚಾರ ಅತ್ಯಂತ ಕ್ರೂರ ಹಾಗೂ ಅಮಾನವೀಯವಾಗಿತ್ತು. ಅದರ ಭಾಗವಾಗಿ 2002 ಎಪ್ರಿಲ್ 21 ರಂದು ಅಹಮದಾಬಾದ್ ನ ನರೋದಾ ಗಾಮ್ ನಲ್ಲಿ ಕೋಮುವಾದಿ ಮತಾಂಧರು ನಡೆಸಿದ ನರಮೇಧದಲ್ಲಿ 12 ವರ್ಷದ ಬಾಲಕಿಯೂ ಸೇರಿದಂತೆ ಮುಸ್ಲಿಂ ಸಮುದಾಯದ 11 ಜನರು ಬರ್ಭರವಾಗಿ ಹಾಡುಹಗಲೇ ಹತ್ಯೆಯಾಗಿದ್ದರು.
ಈ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಕಳೆದ 21 ವರ್ಷದಿಂದ 86 ಜನ ಕೊಲೆ ಆರೋಪಿತ ನರಹಂತಕರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಲೇ ಬಂದಿತ್ತು. ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ ನೇಮಿಸಿದ ವಿಶೇಷ ತನಿಖಾ ತಂಡದಿಂದ ನಡೆಸಲಾಗಿತ್ತು. ಸುದೀರ್ಘ ಕಾಲದ ವಿಚಾರಣೆಯ ಅವಧಿಯಲ್ಲಿ 18 ಜನ ತೀರಿಕೊಂಡಿದ್ದರು. ಕೊನೆಗೂ ನಿನ್ನೆ ಅಹ್ಮದಾಬಾದ್ ವಿಶೇಷ ನ್ಯಾಯಾಲಯದಿಂದ ತೀರ್ಪು ಹೊರಬಿತ್ತು. ಹತ್ಯಾರೋಪಿಗಳಾದ ಎಲ್ಲಾ 67 ಜನರನ್ನು ದೋಷಮುಕ್ತರನ್ನಾಗಿಸಿ ಬಿಡುಗಡೆ ಮಾಡಲಾಯಿತು. ಹೀಗೆ ಬಿಡುಗಡೆಯಾದವರಲ್ಲಿ ಹತ್ಯಾಕಾಂಡ ನಡೆದಾಗ ಗುಜರಾತ್ ಸರಕಾರದಲ್ಲಿ ಸಚಿವೆಯಾಗಿದ್ದ ಮಾಯಾ ಕೊಡ್ನಾನಿ ಹಾಗೂ ಬಜರಂಗದಳದ ನಾಯಕ ಬಾಬು ಬಜರಂಗಿ ಸಹ ಸೇರಿದ್ದಾರೆ.
ನ್ಯಾಯದಾನ ಎಂದರೆ ಇದೇನಾ? ಈ ತೀರ್ಮಾನಕ್ಕೆ ಬರಲು ನ್ಯಾಯಾಂಗಕ್ಕೆ 21 ವರ್ಷ ಬೇಕಾಗಿತ್ತಾ? ಆರೋಪಿತರು ಅಪರಾಧಿಗಳು ಅಲ್ಲವೆಂದಾದರೆ ಹಾಡುಹಗಲೇ ನಡೆದ ಅಲ್ಪಸಂಖ್ಯಾತರ ಮಾರಣಹೋಮ ಮಾಡಿದವರು ಯಾರು? ತನಿಖಾ ಸಂಸ್ಥೆಗಳ ವೈಫಲ್ಯವಾ ಅಥವಾ ತನಿಖಾಧಿಕಾರಿಗಳೇ ನ್ಯಾಯಾಲಯದ ದಿಕ್ಕು ತಪ್ಪಿಸುತ್ತಿವೆಯಾ? ನ್ಯಾಯಾಧೀಶರ ಮೇಲೆ ಹೇರಲಾದ ಒತ್ತಡವಾ? ಸತ್ತವರು ಅಲ್ಪಸಂಖ್ಯಾತರು ಎಂಬ ನಿರ್ಲಕ್ಷವಾ? ಆಳುವ ಸರಕಾರದ ಹುನ್ನಾರವಾ? ಅಂತೂ ಇಂತೂ ನ್ಯಾಯಾಲಯದಲ್ಲಿ ನ್ಯಾಯದಾನ ಸಿಕ್ಕಲಿಲ್ಲ. ಸತ್ತವರಿಗೆ ಹಾಗೂ ಅವರ ಕುಟುಂಬದವರಿಗೆ ನ್ಯಾಯ ದೊರೆಯಲಿಲ್ಲ. ಹೋಗಲಿ ಮೇಲಿನ ಕೋರ್ಟಿಗಾದರೂ ಮನವಿ ಸಲ್ಲಿಸಬಹುದಾ ಅಂದರೆ ಅದೂ ಇಲ್ಲವಂತೆ. ತನಿಖಾ ಸಂಸ್ಥೆ ಮೇಲ್ಮನವಿ ಸಲ್ಲಿಸುವುದಿಲ್ಲವೆಂದು ಹೇಳಿಯಾಗಿದೆಯಂತೆ.
“ನ್ಯಾಯಾಲಯದ ವಿಚಾರಣೆಗಳಲ್ಲಿ ಒಂದರ ಹಿಂದೆ ಒಂದರಂತೆ ಅನ್ಯಾಯವೇ ವಿಜ್ರಂಭಿಸುತ್ತಿದೆ. ಇದನ್ನು ನ್ಯಾಯಾಲಯಗಳು ಮೂಕ ಪ್ರೇಕ್ಷಕರಂತೆ ನೋಡುತ್ತಿವೆಯೇ..? ಎಂದು ಹಿರಿಯ ವಕೀಲರಾದ ಕಪಿಲ್ ಸಿಬಲ್ ರವರು ಆತಂಕದಿಂದ ಪ್ರಶ್ನಿಸಿದ್ದಾರೆ. ಬಿಲ್ಕಿಸ್ ಭಾನು ಅತ್ಯಾಚಾರ ಪ್ರಕರಣದ ಆರೋಪಿಗಳ ಬಿಡುಗಡೆಯೂ ಸಹ ಸಿಬಲ್ ರವರ ಮಾತಿಗೆ ಪೂರಕವಾಗಿದೆ. ಯಾಕೆ ಗುಜರಾತಿನ ಅಹ್ಮದಾಬಾದ್ ನ್ಯಾಯಾಲಯದಲ್ಲಿ ತೀರ್ಪುಗಳು ಯಾವಾಗಲೂ ಸಂಘಪರಿವಾರದ ಪರವಾಗಿಯೇ ಬರುತ್ತಿವೆ. ಯೋಚಿಸಬೇಕಾದ ಸಂಗತಿ.
ಕರ್ನಾಟಕದ ಕೋಲಾರದಲ್ಲಿ ರಾಹುಲ್ ಗಾಂಧಿಯವರು ಮಾಡಿದ ಭಾಷಣದ ವಿಚಾರಣೆಯನ್ನು ಅತ್ಯಂತ ತ್ವರಿತಗತಿಯಲ್ಲಿ ಅಂದರೆ ಕೇವಲ 22 ದಿನಗಳಲ್ಲಿ ನಡೆಸಿದ ಗುಜರಾತ್ ರಾಜ್ಯದ ಅಹ್ಮದಾಬಾದ್ ಕೋರ್ಟು ಅವರಿಗೆ 2 ವರ್ಷ ಶಿಕ್ಷೆ ವಿಧಿಸಿ ಸಂಸದ ಸ್ಥಾನವನ್ನು ಕಿತ್ತುಕೊಳ್ಳಲು ಕಾರಣವಾಯ್ತು. ಬಿಜೆಪಿಯ ಶಾಸಕ ಮಾಡಾಳ್ ವಿರುಪಾಕ್ಷಪ್ಪನವರ ಮನೆಯಲ್ಲಿ ಕೋಟಿ ಕೋಟಿ ಹಣಗಳು ಸಿಕ್ಕರೂ ಕೇವಲ ಒಂದೇ ದಿನದಲ್ಲಿ ಜಾಮೀನು ಕೊಡಲಾಯ್ತು. ರೆಡ್ ಹ್ಯಾಂಡ್ ಆಗಿ ಲಂಚದ ಹಣದ ಜೊತೆಗೆ ಸಿಕ್ಕಿಬಿದ್ದ ಅವರ ಮಗನಿಗೂ ನಿನ್ನೆ ಜಾಮೀನು ಮಂಜೂರು ಮಾಡಲಾಯ್ತು. ಅಂದರೆ ನ್ಯಾಯಾಧೀಶರು ಯಾರ ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತಿದ್ದಾರೆ? ಯಾರ ಒತ್ತಡಕ್ಕೆ ಮಣಿಯುತ್ತಿದ್ದಾರೆ? ಯಾಕೆ ಹೀಗೆ ಯಾವಾಗಲೂ ಪ್ರಭುತ್ವದ ಪರವಾಗಿದ್ದವರ ಪರವಾಗಿಯೇ ನ್ಯಾಯಾಲಯಗಳು ಸ್ಪಂದಿಸುತ್ತಿವೆ? ಪ್ರಭುತ್ವ ವಿರೋಧಿ ಪತ್ರಕರ್ತರು ಹಾಗೂ ವಿಚಾರವಂತರ ಮೇಲಿನ ಕೇಸುಗಳಲ್ಲಿ ಜಾಮೀನು ಕೊಡದೇ ಜೈಲಲ್ಲಿ ಕೊಳೆಯುವಂತೆ ಮಾಡುವ ನ್ಯಾಯಾಲಯಗಳು ಆಳುವವವರ ಪರವಾಗಿರುವವರ ಹಿತಾಸಕ್ತಿಯನ್ನು ಯಾಕೆ ಕಾಪಾಡಲು ಮುಂದಾಗುತ್ತವೆ? ಎಂಬುದು ಜನಸಾಮಾನ್ಯರ ಅಸಾಮಾನ್ಯ ಪ್ರಶ್ನೆಯಾಗಿದೆ.
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಒಂದೇ.. ದೇಶದಲ್ಲಿ ಪ್ಯಾಸಿಸ್ಟ್ ಪ್ರಭುತ್ವ ತನ್ನ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುತ್ತಿದೆ. ಅದಕ್ಕಾಗಿ ಶಾಸಕಾಂಗ, ಕಾರ್ಯಾಂಗ ಹಾಗೂ ಪತ್ರಿಕಾರಂಗಗಳನ್ನು ಕೈವಶಮಾಡಿಕೊಳ್ಳಲಾಗಿದ್ದು ಈಗ ಒಂದಿಷ್ಟು ಜನರ ನಂಬಿಕೆಯನ್ನು ಉಳಿಸಿಕೊಂಡಿರುವ ನ್ಯಾಯಾಂಗವನ್ನೂ ತನ್ನ ಹಿತಾಸಕ್ತಿಗೆ ಪೂರಕವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎನ್ನುವ ಅನುಮಾನ ಕಾಡುತ್ತಿದೆ. ಅದಕ್ಕೆ ಪೂರಕವಾಗಿ ತೀರ್ಪುಗಳು ಪ್ರಕಟಗೊಳ್ಳುತ್ತಿವೆ. ಹೀಗಾಗಿಯೇ ನ್ಯಾಯಾಲಯದಲ್ಲಿ ಉಳ್ಳವರ ಪರ, ಮೇಲ್ಚಾತಿಯವರ ಪರ, ಆಳುವವರ ಪರ, ಹಿಂದುತ್ವವಾದಿಗಳ ಪರ ತೀರ್ಪುಗಳು ಬರುತ್ತಿವೆ. ದಲಿತರು, ಅಲ್ಪಸಂಖ್ಯಾತರು, ವಿಚಾರವಾದಿಗಳು ಹಾಗೂ ಪ್ರಭುತ್ವವನ್ನು ಪ್ರಶ್ನಿಸುವವರ ವಿರುದ್ಧವಾಗಿಯೇ ನ್ಯಾಯನಿರ್ಣಯಗಳಾಗುತ್ತಿವೆ.
ಯಾಕೆ ಹೀಗೆ? ಯಾಕೆಂದು ಪ್ರಜ್ಞಾವಂತರಾದ ಎಲ್ಲರಿಗೂ ಗೊತ್ತಿರುವಂತಹುದೇ. ಇದು ಹೀಗೆ ಮುಂದುವರೆದರೆ ಎಲ್ಲರೂ ‘ನ್ಯಾಯಾ ಎಲ್ಲಿದೆ? ಎಲ್ಲಿದೆಯೋ ನ್ಯಾಯಾ..’ ಎಂದು ಮನದೊಳಗೆ ಹಾಡು ಗುಣುಗುವುದನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಬಹಿರಂಗವಾಗಿ ಹಾಡಿದರೆ ದೇಶದ್ರೋಹದ ಕೇಸು ದಾಖಲಾಗುತ್ತದೆ. ಸರ್ವಾಧಿಕಾರಕ್ಕೆ ಬಲಿಯಾಗಬಾರದೆಂದರೆ ಈ ದೇಶವನ್ನು ಚುನಾವಣೆಯ ಸಂದರ್ಭದಲ್ಲಿ ಎಚ್ಚೆತ್ತ ಮತದಾರರೇ ಬಚಾವ್ ಮಾಡಬೇಕು. ಅದು ಬಿಟ್ಟು ಸಂವಿಧಾನವನ್ನು ಉಳಿಸಲು, ಪ್ರಜಾಪ್ರಭುತ್ವವನ್ನು ಕಾಪಾಡಲು ಬೇರೆ ದಾರಿ ಯಾವುದಿದೆ?
-ಶಶಿಕಾಂತ ಯಡಹಳ್ಳಿ
22-04-2023
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ