ಭಾನುವಾರ, ಫೆಬ್ರವರಿ 11, 2024

ತೆರಿಗೆ ಹಂಚಿಕೆಯಲ್ಲಿ ಕೇಂದ್ರದ ಪಾರುಪತ್ಯ; ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಿದ್ದು ಸತ್ಯ

ತಹ ತಹ - 507

ತೆರಿಗೆ ಹಂಚಿಕೆಯಲ್ಲಿ ಕೇಂದ್ರದ ಪಾರುಪತ್ಯ; 
ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಿದ್ದು ಸತ್ಯ


ಉತ್ತರ ಭಾರತದ ಬಿಹಾರ್, ಮಧ್ಯಪ್ರದೇಶ, ರಾಜಸ್ತಾನ ಮತ್ತು ಉತ್ತರಪ್ರದೇಶ ರಾಜ್ಯಗಳ ಮೊದಲ ಇಂಗ್ಲಿಷ್ ಅಕ್ಷರಗಳನ್ನು ಸೇರಿಸಿ BIMARU ರಾಜ್ಯಗಳೆಂದು ಕರೆಯಲಾಗುತ್ತದೆ. ಹಿಂದಿಯಲ್ಲಿ ಬಿಮಾರು ರಾಜ್ಯಗಳೆಂದರೆ  ರೋಗಗ್ರಸ್ತ ರಾಜ್ಯಗಳು ಎಂದೇ ಅರ್ಥ. ಹೀಗೆ ಕರೆಯುವುದಕ್ಕೆ ಅನ್ವರ್ಥಕವಾಗಿ ಈ ರಾಜ್ಯಗಳು ಆರ್ಥಿಕವಾಗಿ ಬಡತನದಲ್ಲಿರುವ, ಅಭಿವೃದ್ದಿಯಲ್ಲಿ ಹಿಂದಿರುವ ರಾಜ್ಯಗಳು ಎಂದು ಪರಿಗಣಿಸಲಾಗುತ್ತದೆ. ಈ ಮಾನದಂಡಗಳ ಲೆಕ್ಕದಲ್ಲಿ ಕೇಂದ್ರ ಸರಕಾರಕ್ಕೆ ಈ ರಾಜ್ಯಗಳಿಂದ 100 ರೂ ತೆರಿಗೆ ಸಂದಾಯವಾದರೆ ಅದಕ್ಕೆ ಪ್ರತಿಯಾಗಿ ಬಿಹಾರಕ್ಕೆ 922.5 ರೂಗಳನ್ನೂ, ಮಧ್ಯಪ್ರದೇಶಕ್ಕೆ 279.1 ರೂಗಳನ್ನೂ, ರಾಜಸ್ಥಾನಕ್ಕೆ 154.1 ರೂ ಹಾಗೂ ಉತ್ತರ ಪ್ರದೇಶಕ್ಕೆ 333.2 ರೂ. ಗಳನ್ನು ಕೇಂದ್ರ ಸರಕಾರ ಹಂಚಿಕೆ ಮಾಡಬೇಕೆಂದು 15 ನೇ ಕೇಂದ್ರ ಹಣಕಾಸು ಆಯೋಗ ನಿಗದಿ ಮಾಡಿದೆ. ಆದರೆ ಕೇಂದ್ರ ಸರಕಾರಕ್ಕೆ ಅತೀ ಹೆಚ್ಚು ತೆರಿಗೆ ಕಟ್ಟುವ ಕರ್ನಾಟಕವು 100 ರೂ ತೆರಿಗೆ ಕೇಂದ್ರಕ್ಕೆ ಕಟ್ಟಿದರೆ ವಾಪಸ್ ಸಿಗೋದು ಕೇಬಲ 13.9 ರೂ ಮಾತ್ರ. 

"ಯಾವ ರಾಜ್ಯಕ್ಕೆ ಎಷ್ಟು ತೆರಿಗೆ ಹಣ ಹಂಚಬೇಕು ಎನ್ನುವುದನ್ನು ಸ್ವಾಯತ್ತ ಸಂಸ್ಥೆಯಾದ ಕೇಂದ್ರ ಹಣಕಾಸು ಆಯೋಗ ನಿರ್ಧರಿಸುತ್ತದೆ. ಅದನ್ನು ಮೀರಲು ನಮಗೆ ಸಾಧ್ಯವಿಲ್ಲ"ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ಫೆ.7 ರಂದು ಸಂಸತ್ತಿನ ಅಧಿವೇಶನದಲ್ಲಿ ಗುಡುಗಿದರು. ಹಾಗಾದರೆ ಐದು ವರ್ಷದ ಅವಧಿಯ ಈ ಪೈನಾನ್ಸ್ ಕಮೀಷನ್ನಿನ ಪದಾಧಿಕಾರಿಗಳನ್ನು ಆಯ್ಕೆ ಮಾಡುವವರು ಯಾರು? ಕೇಂದ್ರ ಸರಕಾರ ತಾನೆ. ತಮಗೆ ಅನುಕೂಲ ಆಗುವವರನ್ನು ಬಿಟ್ಟು ವಿರೋಧಿಸುವವರನ್ನು ಯಾವುದಾದರೂ ಸರಕಾರ ಆಯ್ಕೆ ಮಾಡಲು ಸಾಧ್ಯವೇ? ಹೋಗಲಿ 15 ನೇ ಕಮಿಷನ್ ನಲ್ಲಿ ದಕ್ಷಿಣ ಭಾರತದ ರಾಜ್ಯಗಳನ್ನು ಪ್ರತಿನಿಧಿಸುವ ಸದಸ್ಯರೇ ಇಲ್ಲವಾಗಿರುವಾಗ ದಕ್ಷಿಣದ ರಾಜ್ಯಗಳಿಗೆ ನ್ಯಾಯವಾದ ಪಾಲು ಸಿಗಲು ಸಾಧ್ಯವೇ? ಸಾಧ್ಯವಿಲ್ಲ ಎನ್ನುವುದಾದರೆ ಇದು ಅನ್ಯಾಯವಲ್ಲದೇ ಮತ್ತೇನು?

ಅದಕ್ಕೆ  14 ನೇ ಕಮಿಷನ್  ಕೇಂದ್ರ ಸರಕಾರ ಸಂಗ್ರಹಿಸಿದ ಒಟ್ಟು ತೆರಿಗೆಯಲ್ಲಿ 4.71% ನ್ನು ಕರ್ನಾಟಕಕ್ಕೆ ಹಂಚಿಕೆ ಮಾಡಬೇಕೆಂದು ಆದೇಶಿಸಿದ್ದರೆ ಈ 15 ನೇ ಕಮಿಷನ್ ಅದರಲ್ಲೂ ಖೋತಾ ಮಾಡಿ 3.62% ಹಂಚಿಕೆ ಮಾಡಲು ಆದೇಶಿಸಿತು. ಇದು ಅನ್ಯಾಯ ಅಲ್ವಾ? ಕೇಂದ್ರ ಮತ್ತು ರಾಜ್ಯಗಳ ಪಾಲನ್ನು 14 ನೇ ಹಣಕಾಸು ಆಯೋಗ 58:42 ಅನುಪಾತ ಎಂದು ನಿಗದಿಪಡಿಸಿದ್ದರೆ ಈ 15 ನೇ ಆಯೋಗ ರಾಜ್ಯದ ಪಾಲಿನಲ್ಲೂ 1% ಕಡಿಮೆ ಮಾಡಿ 59:41 ಅನುಪಾತದಲಿ ಕೇಂದ್ರಕ್ಕೆ ಹಂಚಿತು. ಯಾಕೆ ಹೀಗೆಂದು ಕೇಳಿದರೆ ನಾವು 1971 ರ ಜನಗಣತಿ ಬದಲು 2011 ರ ಜನಗಣತಿಯನ್ನು ಪರಿಗಣಿಸಿದ್ದೇವೆಂಬ ಉತ್ತರ ಸಿದ್ದವಾಗಿತ್ತು.  ಹೀಗಾಗಿ 15 ನೇ ಹಣಕಾಸು ಆಯೋಗ ಸಂಪೂರ್ಣವಾಗಿ ಕೇಂದ್ರ ಸರಕಾರದ ನಿಯಂತ್ರಣದಲ್ಲಿದೆ ಎಂಬ ಸಂದೇಹ ಬಲವಾಗತೊಡಗಿತು.


ಇಷ್ಟಕ್ಕೂ ತೆರಿಗೆ ಹಂಚಿಕೆಯ ಮಾನದಂಡಗಳೇ ಔಟಾಪ್ ಡೇಟೆಡ್ ಆಗಿವೆ. ರಾಜ್ಯಗಳ ಜನಸಂಖ್ಯೆ, ವಿಸ್ತೀರ್ಣ, ಅರಣ್ಯ ಪ್ರದೇಶ ಮತ್ತು ತಲಾದಾಯಗಳ ಲೆಕ್ಕದಲ್ಲಿ ಯಾವ ರಾಜ್ಯಕ್ಕೆ ಎಷ್ಟು ತೆರಿಗೆ ಹಂಚಿಕೆ ಎಂದು ನಿರ್ಧರಿಸಲಾಗುತ್ತದೆ. ಸ್ವಾತಂತ್ರ್ತ ಬಂದು 75 ವರ್ಷವಾದರೂ ಜನಸಂಖ್ಯೆಯನ್ನು ನಿಯಂತ್ರಿಸದ, ಆದಾಯ ಹೆಚ್ಚಿಸುವಂತಹ ಯೋಜನೆಗಳನ್ನು ಕೈಗೊಳ್ಳದೇ ನಿರುದ್ಯೋಗ ಸೃಷ್ಟಿಸಿ ತಲಾದಾಯ ಕಡಿಮೆ ಮಾಡಿಕೊಂಡ ಉತ್ತರ ಭಾರತದ ರಾಜ್ಯಗಳು ತೆರಿಗೆಯಲ್ಲಿ ಹೆಚ್ಚಿನ ಪಾಲನ್ನು ಪಡೆಯುತ್ತಲೇ ಇವೆ. ಶಿಕ್ಷಣ ವ್ಯವಸ್ಥೆ, ಕೈಗಾರಿಕೆ ಸ್ಥಾಪನೆಗಳ ಮೂಲಕ ಜನಸಂಖ್ಯೆ ಹಾಗೂ ನಿರುದ್ಯೋಗವನ್ನು ನಿಯಂತ್ರಿಸಿದ ದಕ್ಷಿಣ ರಾಜ್ಯಗಳು ಅತೀ ಕಡಿಮೆ ತೆರಿಗೆ ಪಾಲನ್ನು ಪಡೆಯುತ್ತಿವೆ. ಉತ್ತರದ ರಾಜ್ಯಗಳ ಅರಾಜಕ ವ್ಯವಸ್ಥೆಯ ಭಾರವನ್ನು ಇನ್ನೂ ಎಷ್ಟು ಕಾಲ ದಕ್ಷಿಣದ ರಾಜ್ಯಗಳು ಹೊರಬೇಕು. ಸರ್ವರಿಗೂ ಸಮಪಾಲು ಸಮಬಾಳು ಬರಬೇಕೆಂದರೆ ಇನ್ನೂ ಎಷ್ಟು ದಶಕಗಳ ಕಾಲ ದಕ್ಷಿಣದ ರಾಜ್ಯಗಳು ಕಾಯಬೇಕು? 

ಫೆ. 9 ರಂದು ಲಖನೌ ನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ ಮಾತಾಡುತ್ತಾ "ರಾಜಕೀಯ ಕಾರಣಗಳಿಂದ ಉತ್ತರಪ್ರದೇಶವನ್ನು ಬಿಮಾರು ರಾಜ್ಯವೆಂದು ಬಿಂಬಿಸಲಾಗುತ್ತದೆ. ರಾಜ್ಯವು ಈಗ ಈ ಶ್ರೇಣಿಯನ್ನು ಮೀರಿ ಬೆಳದಿದೆ.ಯುಪಿ ಈಗ ದೇಶದಲ್ಲಿ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ" ಎಂದು ಹೆಮ್ಮೆಯಿಂದ ಪ್ರತಿಪಾದಿಸಿದರು. ಯೋಗಿಯವರು ಹೇಳುವುದು ನಿಜವೇ ಆಗಿದ್ದರೆ ಆ ರಾಜ್ಯ ಕಟ್ಟುವ 100 ರೂ. ಕೇಂದ್ರ ತೆರಿಗೆಯ ಬದಲಾಗಿ 333.2 ರೂ. ಪಡೆಯುತ್ತಿರುವುದಾದರೂ ಯಾಕೆ?  ಸಂಗ್ರಹವಾಗುತ್ತಿರುವ ಆದಾಯಕ್ಕಿಂತಲೂ ಮೂರುಪಟ್ಟು ಹೆಚ್ಚು ಹಣವನ್ನು ಯುಪಿ ಗೆ ಹಂಚಿಕೆ ಮಾಡಿದ ಹಣಕಾಸು ಆಯೋಗದ ಮಾನದಂಡದಲ್ಲಿ ಎಂತಹ ದೋಷವಿದೆ? ಈ ಹಣಕಾಸು ಆಯೋಗದ ಹಂಚಿಕೆಯನ್ನು ಸಮರ್ಥಿಸಿಕೊಳ್ಳುವ ನಿರ್ಮಲಾ ಸೀತಾರಾಂರವರಿಗೆ ಆತ್ಮಸಾಕ್ಷಿ ಎಲ್ಲಿದೆ? ಆರ್ಥಿಕವಾಗಿ ಬಲಿಷ್ಟವಾಗಿರುವ ಯುಪಿ ರಾಜ್ಯಕ್ಕೆ ಮೂರುಪಟ್ಟು ತೆರಿಗೆ ಹಣ ಹಂಚಿಕೆ ಮಾಡಿದ ಹಣಕಾಸು ಆಯೋಗದ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹವಾಗಿರುವಾಗ ತಾರತಮ್ಯದಿಂದ ಕೂಡಿದ ಅದರ ಹಂಚಿಕೆ ನಿರ್ಧಾರಗಳಿಗೆ ಬೆಲೆ ಎಲ್ಲಿದೆ? 

ಹೋಗಲಿ ಅಭಿವೃದ್ಧಿಯಲ್ಲಿ ಮೋದೀಜಿಯವರ ತವರು ರಾಜ್ಯ ಗುಜರಾತ್ ದೇಶದಲ್ಲೇ ನಂಬರ್ ಒನ್ ಎಂದು ಬಿಜೆಪಿ ಪ್ರಚಾರ ಮಾಡುತ್ತಲೇ ಇದೆ. ಅದಕ್ಕೆ ಗುಜರಾತ್ ಮಾಡೆಲ್ ಎಂದೇ ದೇಶವನ್ನು ನಂಬಿಸಲು ಸಂಘ ಪರಿವಾರ ಪ್ರಯತ್ನಿಸುತ್ತಿದೆ. ಗುಜರಾತಿನ ವ್ಯಾಪಾರಿಗಳು ದೇಶದಾದ್ಯಂತ ವ್ಯಾಪಾರ ವಹಿವಾಟನ್ನು ಮಾಡುತ್ತಿದ್ದು ಈ ರಾಜ್ಯ ಆರ್ಥಿಕವಾಗಿ ಶಕ್ತಿಯುತ ಎಂದು ಹೇಳಲಾಗುತ್ತದೆ. ಆದರೆ ಫೈನಾನ್ಸ್ ಕಮಿಷನ್ ಮಾತ್ರ ಗುಜರಾತನ್ನೂ ಬಡ ರಾಜ್ಯವೆಂದು ಪರಿಗಣಿಸಿ ನೂರು ರೂಪಾಯಿ ಬದಲಿಗೆ 31.3 ರೂ ಹಂಚಿಕೆ ಮಾಡುತ್ತಿದೆ. ಅಂದರೆ ಕರ್ನಾಟಕಕ್ಕಿಂತಲೂ 17.4 ರೂ ಹೆಚ್ಚು ಹಣ ಗುಜರಾತಿಗೆ ಹಂಚಿಕೆ ಮಾಡಲಾಗುತ್ತಿದೆ. ನಂ ಒನ್ ಅಭಿವೃದ್ದಿಯ ಗುಜರಾತ್ ಮಾಡೆಲ್ಲಿಗೆ ಯಾಕೆ ಹೆಚ್ಚಿನ ಹಣದ ಹಂಚಿಕೆ? ಎಂದು ಪ್ರಶ್ನಿಸುವವರು ದೇಶದ್ರೋಹಿಗಳಾಗುತ್ತಾರೆ. 

ಈ ರೀತಿಯ ಕೆಲವಾರು ಉದಾಹರಣೆಗಳ ಮೂಲಕ ಅರ್ಥವಾಗುವುದೇನೆಂದರೆ 14 ಮತ್ತು 15 ನೇ ಹಣಕಾಸು ಆಯೋಗವೇ ಕೇಂದ್ರ ಸರಕಾರದ ಕೈಗೊಂಬೆಯಾಗಿದೆ. ಸ್ವಾಯತ್ತತೆ ಎಂಬುದು ಹೆಸರಿಗಷ್ಟೇ. ಆದರೆ ತಮ್ಮ ಮಾತು ಕೇಳುವವರನ್ನೇ  ಬಿಜೆಪಿ ಸರಕಾರ ಆಯೋಗಕ್ಕೆ ನೇಮಕ ಮಾಡಿ ತಮಗೆ ಬೇಕಾದ ರಾಜ್ಯಗಳಿಗೆ ಹೆಚ್ಚು ತೆರಿಗೆ ಹಣ ಹಂಚಿಕೆ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ದಕ್ಷಿಣ ಭಾರತದ ರಾಜ್ಯಗಳು ದುಡಿದುಡಿದು ಹೆಚ್ಚೆಚ್ಚು  ತೆರಿಗೆ ಕಟ್ಟಿ ಉತ್ತರ ಭಾರತದ ರಾಜ್ಯಗಳಿಗೆ ಕೊಡುವಂತಾಗಿದೆ.

ಹೌದು.. ಸಂವಿಧಾನದ 7 ನೇ ಶಡ್ಯೂಲ್ ಪ್ರಕಾರ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರ ಸಂಗ್ರಹಿಸುವ ತೆರಿಗೆಯನ್ನು ರಾಜ್ಯಸರಕಾರಗಳಿಗೆ  ಮರುಹಂಚಿಕೆ ಮಾಡಲು ಕೆಲವು ಮಾನದಂಡಗಳನ್ನು ವಿಧಿಸಲಾಗಿದೆ. ಅತೀ ಹೆಚ್ಚು ಕರ ಪಡೆದು ಅತೀ ಕಡಿಮೆ ಪಾಲನ್ನು ದಕ್ಷಿಣದ ರಾಜ್ಯಗಳಿಗೆ ಕೊಡುವುದು ಅನ್ಯಾಯ ಅಲ್ಲವೇ ಎಂದು ಕೇಳಿದರೆ  "ಸಂವಿಧಾನ ಹೇಳಿದ ಹಂಚಿಕೆ ಸೂತ್ರದ ಪ್ರಕಾರವೇ ತೆರಿಗೆ ರೀ ಅಲೋಕೇಶನ್ ಮಾಡಲಾಗಿದೆ" ಎಂದು ಕೇಂದ್ರ ಸರಕಾರ ಹಾಗೂ ಅದರ ಸಮರ್ಥಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಕಳೆದ ಏಳು ದಶಕದಲ್ಲಿ ದೇಶದಲ್ಲಿ ಬೇಕಾದಷ್ಟು ಆರ್ಥಿಕ ಸಾಮಾಜಿಕ ಬದಲಾವಣೆಗಳಾಗಿವೆ. ಒಕ್ಕೂಟ ವ್ಯವಸ್ಥೆಯ ಸಮತೋಲನ ಕಾಪಾಡಲು 'ಸಮಪಾಲು ಸಮಬಾಳು' ತತ್ವದ ಮೇಲೆ ಈಗ ಸಂವಿಧಾನದ 7 ನೇ ಷೆಡ್ಯೂಲಿಗೆ ತಿದ್ದುಪಡಿ ತರಬೇಕಾದ ಅಗತ್ಯತೆ ಇದೆ. ಅದಕ್ಕಾಗಿ ಕಡಿಮೆ ತೆರಿಗೆ ಪಾಲನ್ನು ಪಡೆದು ಅನ್ಯಾಯಕ್ಕೊಳಗಾದ ರಾಜ್ಯಗಳು ಆಗ್ರಹಿಸಬೇಕಿದೆ.  ಅಭಿವೃದ್ದಿ ಹೊಂದಿದ ರಾಜ್ಯಗಳಿಂದ ಹೆಚ್ಚು ಆದಾಯ ಪಡೆದು ಹಿಂದುಳಿದ ರಾಜ್ಯಗಳಿಗೆ ಇನ್ನೂ ಎಷ್ಟು ವರ್ಷಗಳ ಕಾಲ ಹೆಚ್ಚಿನ ಪಾಲು ಕೊಡುತ್ತಲೇ ಇರುವುದು ಎಂಬ ಪ್ರಶ್ನೆಯನ್ನು ಕೇಂದ್ರ ಸರಕಾರಕ್ಕೆ ಕೇಳಬೇಕಿದೆ. ಇದೇ ರೀತಿಯ ತಾರತಮ್ಯ ಮುಂದುವರೆದರೆ ಒಕ್ಕೂಟ ವ್ಯವಸ್ಥೆಯಲ್ಲಿ ಅಸಮಾಧಾನ ಹೆಚ್ಚಾಗುತ್ತದೆ. ಅನ್ಯಾಯ ಹೆಚ್ಚಾದಂತೆಲ್ಲಾ ಪ್ರತ್ಯೇಕತೆಯ ಕೂಗೂ ಅನಿವಾರ್ಯವಾಗುತ್ತದೆ.

ಅತೀ ಹಿಂದುಳಿದ ರಾಜ್ಯಗಳ ಸರ್ವತೋಮುಖ ಬೆಳವಣಿಗೆ ಕಾಪಾಡಲು ಆರ್ಥಿಕ ಅಭಿವೃದ್ದಿ ಕಾಣದ ರಾಜ್ಯಗಳಿಗೆ ಕೇಂದ್ರ ಸರಕಾರ ಸಂಗ್ರಹಿಸುವ ತೆರಿಗೆಯಲ್ಲಿ ಹೆಚ್ಚಿನ ಪಾಲನ್ನು ಕೊಡುವುದು ತಪ್ಪಲ್ಲ. ಸಂವಿಧಾನದ ಆಶಯವೂ ಅದೇ ಆಗಿದೆ. ಆದರೆ ಅದಕ್ಕೊಂದು ಕಾಲಮಿತಿ ಇರಬೇಕು.‌ ಅತೀ ಹಿಂದುಳಿದ ರಾಜ್ಯಗಳ ಆರ್ಥಿಕ ಆದಾಯ ಹೆಚ್ಚಿಸುವಲ್ಲಿ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು. ಹಾಗೆ ಮಾಡದೇ ಅನ್ಯ ರಾಜ್ಯಗಳ ಆದಾಯವನ್ನು ಹಂಚುತ್ತಲೇ ಹೋದರೆ ಆ ಬೀಮಾರು ರಾಜ್ಯಗಳು ಅಭಿವೃದ್ದಿ ಹೊಂದುವುದು ಯಾವಾಗ? ಅಭಿವೃದ್ದಿ ಅಂದರೆ ಕೇವಲ ಎಕ್ಸಪ್ರೆಸ್ ಹೆದ್ದಾರಿಗಳು, ರೈಲು  ವಿಮಾನ ನಿಲ್ದಾಣಗಳು,  ಭಾರೀ ಕಟ್ಟಡಗಳಲ್ಲ. ಆಯಾ ಪರಿಸರಕ್ಕೆ ಸೂಕ್ತವಾದ ಕೈಗಾರಿಕೆಗಳ ಆರಂಭದ ದೂರದೃಷ್ಟಿ, ಅಲ್ಲಿಯ ಜನರ ತಲಾದಾಯ ಹೆಚ್ಚಿಸುವಂತಹ ಉದ್ಯೋಗ ಸೃಷ್ಟಿ ಮುಖ್ಯವಾಗುತ್ತದೆ.    ತಲಾದಾಯ ಹೆಚ್ಚಿಸುವಂತಹ ಯೋಜನೆಗಳನ್ನು ಜಾರಿ ಮಾಡಲು ಕೇಂದ್ರ ಸರಕಾರ ಹಿಂದುಳಿದ ರಾಜ್ಯಗಳಿಗೆ ಕಾಲಮಿತಿಯಲ್ಲಿ ಸಹಾಯ ಸಹಕಾರ ಕೊಟ್ಟು ಆ ರಾಜ್ಯಗಳನ್ನೂ ಆರ್ಥಿಕ ಸಾಮಾಜಿಕ ಅಭಿವೃದ್ದಿ ಪಥದಲ್ಲಿ ತರುವುದೇ ಈ ಅಸಮಾನ ತೆರಿಗೆ ಹಂಚಿಕೆಯಲ್ಲಾಗುವ ತಾರತಮ್ಯಕ್ಕೆ ಪರಿಹಾರವಾಗಿದೆ.

ಸ್ವಾಯತ್ತ ಸಂಸ್ಥೆಗಳೆಂದೇ ಅಸ್ತಿತ್ವಕ್ಕೆ ಬಂದ ಐಟಿ, ಈಡಿ, ಸಿಬಿಐಗಳನ್ನೇ ತಮ್ಮಿಚ್ಚೆಯಂತೆ ನಿಯಂತ್ರಿಸುವ, ತಮಗಾಗದವರ ವಿರುದ್ದ ದಾಳಿಮಾಡಿಸಿ ಬೆದರಿಸುವ ಮೋದಿ ಸರಕಾರವು ಹಣಕಾಸು ಇಲಾಖೆಯನ್ನು ಸ್ವತಂತ್ರವಾಗಿರಲು ಬಿಡಲು ಸಾಧ್ಯವೇ? ಛಾನ್ಸೇ ಇಲ್ಲ. ಸರಕಾರಿ ವ್ಯವಸ್ಥೆಯನ್ನು ನಿಯಂತ್ರಿಸುವ ಎಲ್ಲಾ ಸಂಸ್ಥೆಗಳನ್ನೂ ತಮ್ಮ ಹಿಡಿತದಲ್ಲಿಟ್ಟುಕೊಂಡ ಈ ಪ್ಯಾಸಿಸ್ಟ್  ಸರ್ವಾಧಿಕಾರಿ ಸರಕಾರದಲ್ಲಿ ನ್ಯಾಯಯುತವಾದ ಪಾಲು ಕೇಳುವುದೇ ಅನ್ಯಾಯ. ಪ್ರಶ್ನಿಸುವುದೇ ಅಕ್ಷಮ್ಯ. ಹಕ್ಕಿಗಾಗಿ ಆಗ್ರಹಿಸುವುದೇ ದೇಶದ್ರೋಹ. ತಾರತಮ್ಯವನ್ನು ವಿರೋಧಿಸುವುದೇ ದೇಶವಿಭಜನೆಯ ಸಂಕೇತ. 

ಇದೆಲ್ಲವನ್ನೂ ಅರಿತುಕೊಂಡ ಜನರು ಸರ್ವಾಧಿಕಾರಿ ಸರಕಾರವನ್ನು ಬರುವ ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳುಹಿಸದೇ ಇದ್ದರೆ ಒಕ್ಕೂಟ ವ್ಯವಸ್ಥೆಯ ಅವಸಾನ ತಡೆಯಲು ಸಾಧ್ಯವೇ ಇಲ್ಲ. ರಾಜ್ಯಗಳು ಕೇಂದ್ರದ ಗುಲಾಮಗಿರಿಗೆ ಒಳಗಾಗದಿರುವುದಕ್ಕೆ ಬೇರೆ ಪರ್ಯಾಯಗಳಿಲ್ಲ.

- ಶಶಿಕಾಂತ ಯಡಹಳ್ಳಿ
10-02-2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ