ತಹ ತಹ - 509
ತೋನಂ ಎಂಬ ಆಪದ್ಬಾಂಧವ
ಮೂರುವರೆ ವರ್ಷಗಳಾದವು ಕನ್ನಡ ರಂಗಭೂಮಿಯ ಸಂಘಟಕ ತೋಟ್ಟವಾಡಿ ನಂಜುಂಡಸ್ವಾಮಿಗಳು (ತೋನಂ) ಅಸ್ತಂಗತರಾಗಿ. ಅವರ ನಿರ್ಗಮನದ ನಂತರವೂ ತೋನಂ ನೆನಪನ್ನು ಜೀವಂತವಾಗಿಡಲು ಸಮುದಾಯದ ಗುಂಡಣ್ಣನವರ ನೇತೃತ್ವದಲ್ಲಿ ಕೆಲವಾರು ರಂಗಕರ್ಮಿಗಳು ಸೇರಿಕೊಂಡು 'ತೋ.ನಂಜುಂಡಸ್ವಾಮಿ ಗೆಳೆಯರ ಬಳಗ' ಕಟ್ಟಿಕೊಂಡು ಪ್ರತಿವರ್ಷ ರಂಗಸಾಧಕರೊಬ್ಬರನ್ನು ಆಯ್ಕೆ ಮಾಡಿ ತೋನಂ ಹುಟ್ಟಿದ ದಿನದಂದು ಅವರ ಹೆಸರಲ್ಲಿ ಪ್ರಶಸ್ತಿಯೊಂದನ್ನು ಕೊಡುತ್ತಾ ಬಂದಿದ್ದಾರೆ. ಕಳೆದ ವರ್ಷ ಬೆಳಕಿನ ತಜ್ಞ ಚಂದ್ರಕುಮಾರ ಸಿಂಗ್ ರವರಿಗೆ ತೋನಂ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದು ಈ ವರ್ಷ ನಾಟಕಕಾರ ಹೂಲಿ ಶೇಖರ್ ರವರಿಗೆ ಪ್ರಶಸ್ತಿ ಕೊಟ್ಟು ಫೆಬ್ರವರಿ 10 ರಂದು ಮಲ್ಲತ್ತಳ್ಳಿಯ ಕಲಾಗ್ರಾಮ ರಂಗಮಂದಿರದಲ್ಲಿ ಸನ್ಮಾನಿಸಲಾಯಿತು.
ತೋನಂ ಒಬ್ಬ ದಣಿವರಿಯದ ರಂಗಸಂಘಟಕ. ಯಾವಾಗಲೂ ಏನಾದರೊಂದು ರಂಗಕೈಂಕರ್ಯವನ್ನು ಮಾಡುತ್ತಲೇ ಇದ್ದವರು. ಹಠಕ್ಕೆ ಬಿದ್ದು ನಾಟಕಗಳನ್ನೂ ಬರೆದವರು. ಬರೆದ ನಾಟಕಗಳನ್ನು ತಾವೇ ಹಣ ಹೂಡಿ ನಿರ್ಮಿಸಿದವರು. ಇವರ ನಾಟಕವನ್ನು ನಿರ್ದೇಶಿಸಿದವರ ಜೊತೆ ನಾಟಕ ನಿರ್ಮಿತಿಯಲ್ಲಿ ಭಿನ್ನಾಭಿಪ್ರಾಯಗಳು ಬಂದಾಗ ತಾವೇ ನಿರ್ದೇಶನವನ್ನೂ ಮಾಡಿದರು. ಇವರು ಬರೆದ ಮಾದಾರ ಚೆನ್ನಯ್ಯ ನಾಟಕವನ್ನು ಸಾಣೇಹಳ್ಳಿಯ ಶಿವಸಂಚಾರ ಸಂಚಾರಿ ತಂಡವು ನಾಡಿನಾದ್ಯಂತ ಪ್ರದರ್ಶಿಸಿತ್ತು. ಇದೇ ನಾಟಕವನ್ನು ಬೆಂಗಳೂರಿನಲ್ಲಿ ಕೃಷ್ಣಮೂರ್ತಿ ಕವತ್ತಾರ್, ಸಬ್ಬನಹಳ್ಳಿ ರಾಜು ಹಾಗೂ ಮೈಕೋ ಶಿವಶಂಕರ್ ಈ ಮೂವರೂ ಒಬ್ಬರಾದ ಮೇಲೆ ಒಬ್ಬರು ನಿರ್ದೇಶಿಸಿದ್ದರು. ಆದರೆ ನಿರ್ದೇಶಕರನ್ನು ಬದಲಾಯಿಸಿದರೂ ತೋನಂ ಗೆ ತೃಪ್ತಿ ಆಗಲೇ ಇಲ್ಲ. "ನಾನು ಹುಟ್ಟಿಸಿದ ಕೂಸನ್ನು ಸರಿಯಾಗಿ ಕಟ್ಟಿ ನಿಲ್ಲಿಸಲಿಲ್ಲ" ಎನ್ನುವ ಕೊರಗಿನಿಂದಾಗಿ ಕೊನೆಗೆ ತಾವೇ ನಿರ್ದೇಶನವನ್ನೂ ಮಾಡಿದರು. ಆದರೆ ಅದ್ಯಾಕೋ ಈ ನಾಟಕ ಯಾರ ತೆಕ್ಕೆಗೂ ದಕ್ಕಲೇ ಇಲ್ಲವಾದರೂ ಈ ನಾಟಕದ ಮೇಲಿನ ವ್ಯಾಮೋಹ ತೋನಂ ರವರಿಗೆ ಕಡಿಮೆಯಾಗಲೇ ಇಲ್ಲ. ಕೊನೆಗೆ ನಯನ ಸೂಡರವರಿಂದಲೂ ನಿರ್ದೇಶನ ಮಾಡಿಸಿ ನೋಡಿದರಾದರೂ ಹೆಚ್ಚು ಪ್ರದರ್ಶನ ಕಾಣಲಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ತಾವು ರಚಿಸಿದ ನಾಟಕಗಳು ರಂಗಚರಿತ್ರೆಯಲ್ಲಿ ಗಟ್ಟಿಯಾಗಿ ನಿಲ್ಲಲಿಲ್ಲವೆನ್ನುವ ಕೊರಗು ಅವರನ್ನು ಕೊನೆಯವರೆಗೂ ಕಾಡುತ್ತಲೇ ಇತ್ತು. ರಂಗ ನಿರ್ದೇಶಕರಾಗಿಯೂ ವಿಫಲರಾಗಿದ್ದು ಅವರಿಗೆ ಬೇಸರವನ್ನೂ ಹುಟ್ಟಿಸಿತ್ತು. ಹಾಗಂತ ಸುಮ್ಮನೇ ಕೂಡುವ ವ್ಯಕ್ತಿತ್ವವೇ ಅವರದ್ದಲ್ಲ.
ಒಂದಲ್ಲಾ ಎರಡ್ಮೂರು ಸಾಂಸ್ಕೃತಿಕ ಸಂಸ್ಥೆಗಳನ್ನು ಹುಟ್ಟುಹಾಕಿ ಈ ಎಲ್ಲಾ ಸಂಸ್ಥೆಗಳನ್ನು ಕ್ರಿಯಾಶೀಲವಾಗಿಟ್ಟಿದ್ದರು. ಪ್ರತಿವರ್ಷ ಕೆಲವಾರು ಸಾಧಕರನ್ನು ಗುರುತಿಸಿ ರಂಗಚೇತನ ಹಾಗೂ ನಾಡಚೇತನ ಎನ್ನುವ ಹೆಸರಿನಲ್ಲಿ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸುತ್ತಲೇ ಬಂದರು. ಅದಕ್ಕಾಗಿ ಅದ್ದೂರಿ ಸಮಾರಂಭಗಳನ್ನು ಆಯೋಜಿಸುತ್ತಾ ವೃತ್ತಿಪರ ಸಂಘಟಕರಾಗಿದ್ದರು. ವಿಪರ್ಯಾಸ ಏನೆಂದರೆ ಸಾಧಕರನ್ನು ಗುರುತಿಸಿ ಪ್ರಶಸ್ತಿಗಳನ್ನು ಕೊಡುತ್ತಲೇ ಬಂದ ತೋನಂ ರವರಿಗೆ ಯಾವುದೇ ಪ್ರಮುಖ ಪ್ರಶಸ್ತಿ ಬರಲೇ ಇಲ್ಲ. ಯಾರೂ ಗುರುತಿಸಿ ಕರೆದು ಕೊಡಲೂ ಇಲ್ಲ. ಆದರೆ ತೋನಂ ಆರಂಭಿಸಿದ ಪ್ರಶಸ್ತಿ ಪ್ರದಾನ ಪರ್ವವನ್ನು ಅವರ ಅನುಪಸ್ಥಿತಿಯಲ್ಲಿ ರಂಗ ಒಡನಾಡಿಗಳು ಮುಂದುವರೆಸಿಕೊಂಡು ಹೋಗುತ್ತಿರುವುದು ಸ್ತುತ್ತಾರ್ಹ.
ತಮ್ಮ ಸಂಘಟನಾ ಸಾಮರ್ಥ್ಯದ ಮೂಲಕ ತೋನಂ ಯಾವಾಗಲೂ ಪ್ರಸಿದ್ದರ ಒಡನಾಟವನ್ನು ಹೊಂದಿರುತ್ತಿದ್ದರು. ರಂಗದಿಗ್ಗಜರಾದ ಸಿಜಿಕೆ ಗರಡಿಯಲ್ಲಿ ಪಳಗಿದ ತೋನಂ ರಂಗಪೋಷಕರಾದ ಡಿ.ಕೆ.ಚೌಟರ ಬಲಗೈ ಬಂಟನಂತಿದ್ದರು. ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮಿಗಳ ಕೃಪಾಕಟಾಕ್ಷವನ್ನೂ ಗಳಿಸಿದ್ದರು. ಜಯದೇವ ಆಸ್ಪತ್ರೆಯ ಮುಖ್ಯಸ್ಥರಾದ ಪ್ರಸಿದ್ಧ ಹೃದಯತಜ್ಞ ಡಾ.ಮಂಜುನಾಥರವರ ನಂಬಿಕೆ ವಿಶ್ವಾಸಕ್ಕೂ ಪಾತ್ರರಾಗಿದ್ದರು. ಇಂತಹ ಹಲವಾರು ಪ್ರಮುಖರ ಸಂಪರ್ಕಗಳನ್ನು ತಮ್ಮ ರಂಗಭೂಮಿ ಕಾಯಕಕ್ಕೆ ಪೂರಕವಾಗಿ ಬಳಸಿಕೊಂಡು ತಮ್ಮ ರಂಗಪಾರಿಚಾರಿಕೆಯನ್ನು ವೃತದಂತೆ ಮಾಡುತ್ತಿದ್ದರು.
ಇಷ್ಟೇ ಆಗಿದ್ದರೆ ತೋನಂ ನೆನಪು ಇಷ್ಟು ಕಾಡುತ್ತಿರಲಿಲ್ಲ. ಆದರೆ ತೋನಂ ವಿಶೇಷತೆ ಇರುವುದು ರಂಗಕರ್ಮಿ ಕಲಾವಿದರ ಅನಾರೋಗ್ಯಕ್ಕೆ ಕೂಡಲೇ ಸ್ಪಂದಿಸುವ ರೀತಿಯಲ್ಲಿ. ವೈದ್ಯರಲ್ಲದಿದ್ದರೂ ರಂಗಭೂಮಿಯ ವೈದ್ಯರೆಂದೇ ಹೆಸರಾದ ತೋನಂ ಕೆಲಸ ಮಾಡುತ್ತಿದ್ದುದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ. ಅಲ್ಲಿ ಕೆಲಸದಲ್ಲಿದ್ದಾಗ ಹಾಗೂ ರಿಟೈರ್ಡ್ ಆದನಂತರವೂ ಸಹ ಯಾವುದೇ ಸಾಹಿತಿ ಕಲಾವಿದರು ಅನಾರೋಗ್ಯಕ್ಕೆ ತುತ್ತಾಗಿದ್ದು ಗೊತ್ತಾದರೆ ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿ, ಸಂಬಂಧಿಸಿದ ವೈದ್ಯರಿಂದ ಚಿಕಿತ್ಸೆ ಕೊಡಿಸಿ, ಅಗತ್ಯವಾದ ಟೆಸ್ಟ್ ಗಳಿಗೆ ವ್ಯವಸ್ಥೆ ಮಾಡಿ, ಉಚಿತ ಔಷದೋಪಚಾರಗಳನ್ನು ಕೊಡಿಸುವ ಮಾನವೀಯ ಕಾಳಜಿ ತೋನಂ ರವರದ್ದಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗದ ಅದೆಷ್ಟೋ ಬಡ ಕಲಾವಿದರು ಅನಾರೋಗ್ಯಕ್ಕೀಡಾದಾಗ ಆಪದ್ಬಾಂಧವನಂತೆ ನಿಂತು ಆರೋಗ್ಯ ಭಾಗ್ಯ ಕೊಡಿಸಿದ್ದನ್ನು ಈಗಲೂ ಅನೇಕರು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ. ಅದೇ ತೋನಂ ರವರ ಬದುಕಿನ ಮಹತ್ತರವಾದ ಸಾರ್ಥಕತೆ. ಆದರೆ ವಿಪರ್ಯಾಸ ಏನೆಂದರೆ ಅನೇಕರಿಗೆ ವೈದ್ಯಕೀಯ ನೆರವನ್ನು ಕೊಟ್ಟು ಕಾಪಾಡಿದ ತೋ.ನಂಜುಂಡಸ್ವಾಮಿಯವರು ಕೊನೆಗೆ ಕರೋನಾ ಮಾರಿಗೆ ತುತ್ತಾಗಿ ತಮ್ಮ 70 ನೇ ವರ್ಷದಲ್ಲಿ (15-09-2020) ತೀವ್ರ ಅನಾರೋಗ್ಯಕ್ಕೀಡಾಗಿ ಕಾಲವಶರಾದದ್ದು ಖಂಡಿತಾ ಖೇದಕರ ಸಂಗತಿ.
ರಂಗಭೂಮಿಯಲ್ಲಿ ಸಂಘಟಕರು ನಾಟಕಕಾರರು ಬರುತ್ತಾರೆ ಹೋಗುತ್ತಾರೆ. ಆದರೆ ಕಲಾವಿದರ ಯೋಗಕ್ಷೇಮಕ್ಕೆ ಸ್ಪಂದಿಸುವ, ಉಚಿತ ವೈದ್ಯಕೀಯ ನೆರವನ್ನು ನೀಡುವಂತಹ ಮಾನವೀಯ ಕಳಕಳಿ ಇರುವ ತೋನಂ ನಂತವರ ಅನುಪಸ್ಥಿತಿ ಬಹುಕಾಲ ಕಾಡದೇ ಇರದು.
ಇಂತಹ ಸಾಂಸ್ಕೃತಿಕ ಕ್ಷೇತ್ರದ ಆಪದ್ಬಾಂಧವನ ಹೆಸರಲ್ಲಿ ಪ್ರತಿವರ್ಷ ಅವರ ಹುಟ್ಟಿದ ದಿನದಂದು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿ ನಾಟಕ ಪ್ರದರ್ಶನವನ್ನೂ ಏರ್ಪಡಿಸಿ ತೋನಂ ಹೆಸರನ್ನು ಉಳಿಸುವ ಸ್ತುತ್ಯಾರ್ಹ ಕಾಯಕವನ್ನು ಮಾಡುತ್ತಿರುವ ಸಿ.ಕೆ.ಗುಂಡಣ್ಣ ಹಾಗೂ ತೋನಂ ಗೆಳೆಯರ ಬಳಗದ ರಂಗಕರ್ಮಿಗಳಿಗೆ ವಂದನೆಗಳು. ಈ ವರ್ಷ ತೋನಂ ಪ್ರಶಸ್ತಿಗೆ ಭಾಜನರಾದ ನಾಟಕಕಾರ ಹೂಲಿ ಶೇಖರ್ ರವರಿಗೆ ಅಭಿನಂದನೆಗಳು. ಇದೇ ಸಂದರ್ಭದಲ್ಲಿ ನಟನಾ ರೆಪರ್ಟರಿ ತಂಡದ "ಕಣಿವೆಯ ಹಾಡು" ಎನ್ನುವ ದೃಶ್ಯಕಾವ್ಯದಂತಹ ನಾಟಕವನ್ನು ಪ್ರದರ್ಶಿಸಿದ್ದು ಆ ನಾಟಕದ ನಿರ್ದೇಶಕರಾದ ಡಾ.ಶ್ರೀಪಾದ ಭಟ್ ರವರಿಗೂ ಹಾಗೂ ತಮ್ಮ ಅಮೋಘ ಅಭಿನಯದಿಂದ ಮನಸೂರೆಗೊಂಡ ಕಲಾವಿದರಾದ ಮೇಘ ಸಮೀರ್ ಹಾಗೂ ದಿಶಾ ರಮೇಶರವರಿಗೆ ಧನ್ಯವಾದಗಳು.
- ಶಶಿಕಾಂತ ಯಡಹಳ್ಳಿ
10-02-2024
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ