ಮಂಗಳವಾರ, ಫೆಬ್ರವರಿ 20, 2024

ಪೋಷಕರಿರಬೇಕು ಎಚ್ಚರದಿಂದ; ಮಕ್ಕಳನು ಕಾಪಾಡಿ ಮತಾಂಧರಿಂದ

ತಹ ತಹ - 511

ಪೋಷಕರಿರಬೇಕು ಎಚ್ಚರದಿಂದ; ಮಕ್ಕಳನು ಕಾಪಾಡಿ ಮತಾಂಧರಿಂದ


ಮಂಗಳೂರಿನಲ್ಲಿ ಸಂತ ಜೆರೋಸಾ ಎನ್ನುವ ಕ್ರಿಶ್ಚಿಯನ್‌ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಹಿಂದೂ ಧರ್ಮಕ್ಕೆ ಅವಹೇಳನ ಮಾಡಿದರು ಎನ್ನುವ ಸುದ್ದಿ ಸಂಘಪರಿವಾರಿಗರಿಗೆ ಸಿಟ್ಟು ಉದ್ವೇಗ ಹಾಗೂ ಸಂಭ್ರಮ ತಂದಿದೆ. ಮತೀಯ ಸಾಮರಸ್ಯ ಹಾಳು ಮಾಡಲು ಸದಾ ಕಾಯ್ದು ಕುಳಿತಿರುವ ಈ ಕೇಸರಿಪಡೆ ಕಡ್ಡಿಯನ್ನು ಗುಡ್ಡಮಾಡಿ ಕೋಮುಸಾಮರಸ್ಯಕ್ಕೆ ಬೆಂಕಿ ಹಚ್ಚಲು ಬೀದಿಗಿಳಿದಿದೆ. ಶಿಕ್ಷಕಿಯು ಮಕ್ಕಳ ಮುಂದೆ "ಶ್ರೀರಾಮನ ವಿರುದ್ದ ಮಾತಾಡಿದರಂತೆ, ಹಿಂದೂ ಧರ್ಮವನ್ನು ಅವಮಾನಿಸಿದರಂತೆ, ಕ್ರಿಶ್ಚಿಯನ್ ಧರ್ಮದ ಪರವಾಗಿ ಮಕ್ಕಳಿಗೆ ಪ್ರಚೋದನೆ ಮಾಡಿದರಂತೆ.." ಹೀಗೆ ಅನೇಕ ಗಾಸಿಪ್ ಸುದ್ದಿಗಳು ಕೇಸರಿ ಟ್ರೋಲಿಗರ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಹಿಂದೂ ಧರ್ಮವೇ ನಾಶವಾಗಿ ಮುಳುಗಿಯೇ ಹೋಯ್ತೇನೋ ಎನ್ನುವಂತೆ ಸಂಘಿ ಸಂತಾನಗಳು ಶಾಲೆಯ ಆವರಣದಲ್ಲಿ ಜಮಾವಣೆಗೊಂಡು ಮಕ್ಕಳು ಹಾಗೂ ಪೋಷಕರನ್ನೂ ಸೇರಿಸಿಕೊಂಡು ಘೋಷಣೆ ಕೂಗತೊಡಗಿದರು. ಕೋಮುವ್ಯಾಧಿ ಶಾಸಕ ವೇದವ್ಯಾಸ್  ಕಾಮತ್ ಬೆಂಗಳೂರಿಲ್ಲಿ ನಡೆಯುತ್ತಿದ್ದ ಅಧಿವೇಶನದಲ್ಲಿ ಭಾಗವಹಿಸುವುದು ಬಿಟ್ಟು ಶಾಲೆಯ ಮುಂದೆ ಲೋಕಲ್ ಗೂಂಡಾನಂತೆ ನಿಂತು ಮಕ್ಕಳು ಹಾಗೂ ಪೋಷಕರಲ್ಲಿ ಕೋಮುಭಾವನೆ ಪ್ರಚೋದಿಸುವುದರಲ್ಲಿ ನಿರತರಾದರು. ಶಾಲಾ ಮಕ್ಕಳ ಕೈಗೆ ಕೇಸರಿ ಬಾವುಟ ಕೊಟ್ಟು ಅವರ ಬಾಯಲ್ಲಿ ಜೈಶ್ರೀರಾಂ ಘೋಷಣೆ ಕೂಗಿಸಲಾಯಿತು. ಶಾಲಾ ಮಕ್ಕಳನ್ನು ಅವರು ವಿದ್ಯೆ ಕಲಿಯುವ ಶಾಲೆಯ ವಿರುದ್ಧ, ಪಾಠ ಕಲಿಸುವ ಶಿಕ್ಷಕರ ವಿರುದ್ಧ ಎತ್ತಿಕಟ್ಟುವಲ್ಲಿ ಸಂಘಪರಿವಾರ ಯಶಸ್ವಿಯಾಯಿತು. ಭದ್ರತೆ ಹಾಗೂ ನಿಯಂತ್ರಣಕ್ಕಾಗಿ ಪೊಲೀಸರು ಶಾಲೆಯನ್ನು ಸುತ್ತುವರೆದರು. 

ಇಷ್ಟಕ್ಕೂ ಆಗಿದ್ದಾದರೂ ಏನೆಂದರೆ ಶಾಲಾ ಶಿಕ್ಷಕಿ ರವೀಂದ್ರನಾಥ್ ಠಾಗೋರ್ ಅವರ ‘ವರ್ಕ್ ಇಸ್ ವರ್ಶಿಪ್’ ಎಂಬ ಪದ್ಯದ ಮೇಲೆ ಪಾಠ ಮಾಡುತ್ತಿದ್ದಾಗ ಸಂದರ್ಬೋಚಿತವಾಗಿ "ದೈವ, ದೇವರು ಹೃದಯಲ್ಲಿರಬೇಕು. ಗುಡಿ, ಮಸೀದಿ, ಮಂದಿರಗಳಲ್ಲಿ ಅಲ್ಲ" ಎಂದು ಹೇಳಿದರಂತೆ. "ಕೆಲಸವೇ ದೇವರು, ಕಾಯಕವೇ ಕೈಲಾಸ" ಎಂದು ಪಾಠದ ಭಾಗವಾಗಿ ಶಿಕ್ಷಕರು ವಿವರಿಸುವುದು ಅಪರಾಧವಾ? ಇದರಲ್ಲೇನು ತಪ್ಪಿದೆ. ಇದನ್ನು ಅನೇಕ ಸಾಮಾಜಿಕ ಸುಧಾರಕರು ಹೇಳಿದ್ದಾರೆ. ಕುವೆಂಪುರವರೇ "ನೂರು ದೇವರುಗಳ ನೂಕಾಚೆ ದೂರ" ಎಂದು ಬರೆದಿದ್ದಾರೆ. ಬಸವಣ್ಣನವರು " ಕಲ್ಲು ಮಣ್ಣು ಮರ ಪಂಚಲೋಹದ ದೇವರು ದೇವರಲ್ಲ" ಎಂದು ವಚನ ಬರೆದಿದ್ದಾರೆ. ಆದರೆ ಇಲ್ಲಿ ಈಗ ದೇವರು ಮನದಲ್ಲಿರಲಿ ಎಂದು ಹೇಳಿದ್ದು ಒಬ್ಬ ಕ್ರಿಶ್ಚಿಯನ್ ಶಿಕ್ಷಕಿ ಹಾಗೂ ಅದನ್ನು ಹೇಳಿದ್ದು ಕ್ರಿಶ್ಚಿಯನ್ ಶಾಲೆಯಲ್ಲಿ ಎನ್ನುವುದೇ ಈ ಮತಾಂಧರಿಗೆ ಆಘಾತಕಾರಿ ಎನ್ನಿಸಿತು. ಧರ್ಮದ ಗುತ್ತಿಗೆ ಪಡೆದ ಸಂಘಿಗಳು ಗುಂಪು ಕಟ್ಟಿಕೊಂಡು ಅಲ್ಪಸಂಖ್ಯಾತರ ಶಾಲೆಯ ಮೇಲೆ ದಂಡೆತ್ತಿ ಬಂದು ದಾಳಿಗೆ ಮುಂದಾದರು. ಶಾಲೆಯ ಮಕ್ಕಳು ಹಾಗೂ ಪೋಷಕರಲ್ಲಿ ಕೋಮು ಪ್ರಚೋದನೆಗೆ ಕುಮ್ಮಕ್ಕು ಕೊಟ್ಟರು. ಗೋದಿ ಮಾಧ್ಯಮಗಳು ಇನ್ನಷ್ಟು ಒಗ್ಗರಣೆ ಹಾಕಿ ಸುದ್ದಿ ಪ್ರಸಾರಮಾಡಿದವು. ಶಾಲೆಯ ಆವರಣದಲ್ಲಿ ಸೃಷ್ಟಿಸಲಾದ ಉದ್ವಿಗ್ನತೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಕೇಸರಿಪಡೆ ಪ್ರಯತ್ನಿಸಿತು. ಕೊನೆಗೂ ಈ ಕೋಮುಕ್ರಿಮಿಗಳ ದಬ್ಬಾಳಿಕೆಗೆ ಮಣಿದ ಶಾಲಾಡಳಿತ ಅನಿವಾರ್ಯವಾಗಿ ಆ ಶಿಕ್ಷಕಿಯನ್ನು ಅಮಾನತ್ತು ಮಾಡಿತು. ಮಾನಸಿಕ ಒತ್ತಡ ತಾಳಲಾಗದೇ ಆ ಶಿಕ್ಷಕಿ ಆಸ್ಪತ್ರೆ ಸೇರಬೇಕಾಯ್ತು. ಆದರೂ ಈ ಮತಾಂಧರ ಆಟಾಟೋಪ ಮುಂದುವರೆಯಿತು.

ಇಷ್ಟಕ್ಕೂ ಸಂತ ಜೆರೋಸಾ ಶಾಲೆಯಲ್ಲಿ ಓದುತ್ತಿರುವವರು ಮಧ್ಯಮವರ್ಗದ ಮಕ್ಕಳು. ಬೇರೆ ಖಾಸಗಿ ಶಾಲೆಗೆ ಹೋಲಿಸಿದರೆ ಇಲ್ಲಿ ಪೀಜ್ ತುಂಬಾ ಕಡಿಮೆ. ಉತ್ತಮ ಶಿಕ್ಷಣ ಹಾಗೂ ಶಿಸ್ತಿಗೆ ಹೆಸರಾಗಿದೆ. ಶಿಕ್ಷಣ ದಾಸೋಹ ನಿರತ ವಿದ್ಯಾಲಯಕ್ಕೆ ಮತೀಯ ಮಸಿ ಬಳೆಯುವ ಪ್ರಯತ್ನವೇ ಅಮಾನವೀಯ. ಇಲ್ಲಿಯ ಕೆಲವು ವಿದ್ಯಾರ್ಥಿನಿಯರಲ್ಲಿ ಅದೆಷ್ಟು ಧರ್ಮಾಂಧತೆಯ ವಿಷ ಬೀಜ ಬಿತ್ತಲಾಗಿದೆ ಎಂಬುದು ಕೆಲವು ವಿದ್ಯಾರ್ಥಿನಿಯರ ಹೇಳಿಕೆಯಿಂದಲೇ ಗೊತ್ತಾಗುತ್ತದೆ. "ಶಿಕ್ಷಕಿಯರು ಕ್ರಾಸ್ ಹಾಕಿಕೊಂಡು ಬರುತ್ತಾರೆ, ನಮಗೆ ಏನೂ ಹಾಕಬಾರದು ಎಂದು ನಿರ್ಬಂಧಿಸುತ್ತಾರೆ" ಎಂದು ಒಬ್ಬ ವಿದ್ಯಾರ್ಥಿನಿ ಮೀಡಿಯಾ ಮುಂದೆ ಮಾತಾಡುತ್ತಾಳೆ. ಈ ರೀತಿಯ ಅಸಮಾಧಾನ ಇದ್ದಲ್ಲಿ ಈ ಶಾಲೆಗೆ ಯಾಕೆ ಆ ಹುಡುಗಿ ದಾಖಲಾಗಬೇಕು? ತಮ್ಮ ಆಚಾರ ವಿಚಾರಗಳಿಗೆ ಸೂಕ್ತವಾಗುವ ಶಾಲೆಗೆ ಪೋಷಕರು ಸೇರಿಸಬಹುದಾಗಿತ್ತಲ್ಲವೇ? ಇದಕ್ಕಿಂತಲೂ ಹೆಚ್ಚಾಗಿ ಈ ಹಿಂದೂಧರ್ಮಿಯರಲ್ಲಿ "ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ" ಎಂದು ಗುರುವಿನಲ್ಲಿ ತ್ರಿಮೂರ್ತಿಗಳನ್ನು ಕಾಣಲಾಗುತ್ತದೆ. ಅಂತಹ ಗುರುಗಳ ವಿರುದ್ದವೇ ವಿದ್ಯಾರ್ಥಿಗಳು ತಿರುಗಿ ಬಿದ್ದರೆ, ಬಾಹ್ಯ ಶಕ್ತಿಗಳು ಗುರುಗಳ ಮೇಲೆ ವಿದ್ಯಾರ್ಥಿಗಳನ್ನು ಎತ್ತಿಕಟ್ಟಿದರೆ ಗುರುಶಿಷ್ಯ ಸಂಬಂಧಗಳಿಗೆ ಬೆಲೆ ಎಲ್ಲಿ?

ಆಯ್ತು..ಈ ಸಂಘಿಗಳ ಆರೋಪದಂತೆ ಶಿಕ್ಷಕಿ ಹಿಂದೂ ಧರ್ಮಕ್ಕೆ ಅಪಮಾನ ಆಗುವಂತೆ ಮಾತಾಡಿ ಮಹಾಪರಾಧ ಮಾಡಿದರೂ ಎಂದುಕೊಳ್ಳೋಣ. ಅದನ್ನು ಮಕ್ಕಳು ತಮ್ಮ ಪೋಷಕರಿಗೆ ಹೇಳಿದರು ಎಂದುಕೊಳ್ಳೋಣ. ಆ ಪೋಷಕರು ಹೋಗಿ ದೂರು ಕೊಡಬೇಕಾದದ್ದು ಶಾಲೆಯ ಮುಖ್ಯರಸ್ಥರಿಗೆ ಹೊರತು ಈ ಸಂಘಿ ಭಜರಂಗಿ ನಾಯಕರುಗಳಿಗಲ್ಲ. ಹೋಗಲಿ ಧರ್ಮಕ್ಕೆ ಅಪಚಾರ ಆಗಿದ್ದರೆ  ಮಾಮೂಲಿನಂತೆ 'ಹಿಂದೂ ಧಾರ್ಮಿಕ ನಂಬಿಕೆಗೆ ಧಕ್ಕೆ ಆಗಿದೆ ಹಿಂದೂಗಳ ಭಾವನೆಗೆ ನೋವಾಗಿದೆ' ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದಾಗಿತ್ತು. ಶಿಕ್ಷಣ ಇಲಾಖೆಗೆ ಕಂಪ್ಲೆಂಟ್ ಮಾಡಬಹುದಾಗಿತ್ತು. ತನಿಖೆಗೆ ಆಗ್ರಹಿಸಬಹುದಾಗಿತ್ತು. ನ್ಯಾಯಾಲಯಕ್ಕೂ ಹೋಗಬಹುದಾಗಿತ್ತು. ಹೀಗೆ ಸಾಂವಿಧಾನಿಕ ಕ್ರಮಕ್ಕೆ ಆಗ್ರಹಿಸಿದರೆ ಈ ಸಂಘಿಗಳಿಗೆ ಪ್ರಚಾರ ಸಿಗುತ್ತಿರಲಿಲ್ಲ, ಸಮಾಜದಲ್ಲಿ ಕೋಮುಪ್ರಚೋದನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ, ಹಿಂದೂಗಳನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಅಲ್ಪಸಂಖ್ಯಾತರ ವಿರುದ್ದ ಎತ್ತಿಕಟ್ಟಲು ಆಗುತ್ತಿರಲಿಲ್ಲ. ಶಾಲಾ ಮಕ್ಕಳು ಮತ್ತು ಪೋಷಕರನ್ನು ಪ್ರಚೋದಿಸಿ ಜೈಶ್ರೀರಾಂ ಹೇಳಿಸಲು ಆಗುತ್ತಿರಲಿಲ್ಲ. ಕೋಮುಭಾವನೆ ಕೇರಳಿಸದೇ ಇದ್ದರೆ ಸಂಘ ಪರಿವಾರಕ್ಕೆ ಅಸ್ತಿತ್ವವೇ ಇರುವುದಿಲ್ಲ. ಅನ್ಯ ಧರ್ಮದ್ವೇಷ ಬಿತ್ತದೇ ಹೋದರೆ ಬಿಜೆಪಿಗರಿಗೆ ಓಟು ಸಿಕ್ಕುವುದಿಲ್ಲ.ಈ  ಹಿಂದೆಯೂ ಕೂಡಾ ಉಡುಪಿ ಕಾಲೇಜಲ್ಲಿ ಹಿಜಾಬ್ ವಿಷಯ ಮುಂದಿಟ್ಟುಕೊಂಡು ಕಾಲೇಜು ವಿದ್ಯಾರ್ಥಿಗಳನ್ನು ಶಿಕ್ಷಕರು ಹಾಗೂ ಕಾಲೇಜಿನ ವಿರುದ್ದ ಎತ್ತಿಕಟ್ಟಿದವರೂ ಇದೇ ಸಂಘಿಗಳು. ಇವರ ದ್ವೇಷರಾಜಕೀಯಕ್ಕೆ ಬಲಿಯಾಗಿ ವಿದ್ಯೆಯಿಂದಲೇ ದೂರಾದವರು ಹಲವಾರು ಮುಸ್ಲಿಂ ವಿದ್ಯಾರ್ಥಿನಿಯರು. ಧಾರ್ಮಿಕ ಅಸಹನೆ ಬಿತ್ತಲು ವಿದ್ಯಾಲಯಗಳನ್ನು ಟಾರ್ಗೆಟ್ ಮಾಡುತ್ತಿರುವ ಸಂಘಿಗಳು ಶಾಲಾಕಾಲೇಜು ಮಕ್ಕಳ ಮನಸಲ್ಲೂ ಮತಾಂಧತೆಯ ನಂಜು ತುಂಬುತ್ತಿರುವುದು ಅಕ್ಷಮ್ಯ.

ಈ ಸಂಘಿಗಳು ಪ್ರತಿಪಾದಿಸುವ ಹಿಂದೂ ಧರ್ಮ ಇಷ್ಟೊಂದು ದುರ್ಬಲವಾಗಿದೆಯಾ? ಯಾವುದೋ ಒಂದು ಶಾಲೆಯಲ್ಲಿ ಯಾರೋ ಒಬ್ಬ ಶಿಕ್ಷಕಿ "ದೇವರು ಗುಡಿ ಮಸೀದಿ ಮಂದಿರಗಳಲ್ಲಿ ಇಲ್ಲಾ, ಮನುಷ್ಯರ ಮನಸ್ಸಲ್ಲಿರುವುದು" ಎಂದು ಹೇಳಿದ ಕೂಡಲೇ ಧರ್ಮ ಅವನತಿ ಹೊಂದಿದಂತಾಯಿತಾ? ಹೋಗಲಿ ಹಾಗೆ ಶಿಕ್ಷಕಿ ಹೇಳಿದ್ದರು ಅಂದ ಕೂಡಲೇ ಮಕ್ಕಳೆಲ್ಲಾ ಮಂದಿರಗಳಿಗೆ ಹೋಗುವುದನ್ನು ಬಿಟ್ಟು ಬಿಡುತ್ತಾರಾ? ಅಥವಾ ಮಕ್ಕಳ ಪೋಷಕರು ದೇವರ ಪೂಜೆ ನಿಲ್ಲಿಸುತ್ತಾರಾ? ಇದು ಯಾವುದೂ ಸಾಧ್ಯವಿಲ್ಲವಾದರೂ ಧರ್ಮವೇ ನಾಶವಾದಂತೆ ಈ ಕೋಮುವಾದಿಗಳು ಬೀದಿಗಿಳಿದು ಅಬ್ಬರಿಸುವುದರ ಹಿಂದೆ ಇರುವುದು ದೇವರ ಮೇಲಿನ ಭಕ್ತಿಯೂ ಅಲ್ಲಾ, ಧರ್ಮದ ಮೇಲಿರುವ ಅಭಿಮಾನವು ಅಲ್ಲಾ. ಕೇವಲ ಜನರ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಿ ಮತಾಂಧತೆಯನ್ನು ಕೆರಳಿಸಿ ಮತಕ್ರೂಢಿಕರಣ ಮಾಡುವ ಶಡ್ಯಂತ್ರದ ಭಾಗವಷ್ಟೇ. 

ಶಾಲೆಯಲ್ಲಿ ಕಲಿಯುವ ಮಕ್ಕಳ ಮನಸ್ಸಲ್ಲೂ ಧಾರ್ಮಿಕ ಅಸಹನೆ ಬಿತ್ತುವ ಕೋಮುವಾದಿಗಳ ಪ್ರಯತ್ನ ಅಪಾಯಕಾರಿಯಾಗಿದೆ. ಈ ಮಕ್ಕಳ ಪೋಷಕರು ಈಗಲೇ ಈ ಕೋಮುವ್ಯಾಧಿಗಳ ಹುನ್ನಾರವನ್ನು ಅರ್ಥ ಮಾಡಿಕೊಂಡು ಎಚ್ಚರಗೊಳ್ಳಬೇಕಿದೆ. ಇಲ್ಲದೇ ಹೋದರೆ ಇವರ ಮಕ್ಕಳು ಕೈಯಲ್ಲಿ ಕೇಸರಿ ಬಾವುಟ ಹಿಡಿದು ಬೀದಿಗಳಲ್ಲಿ ಘೋಷಣೆ ಕೂಗುತ್ತಾ ತಮ್ಮ ವಿದ್ಯಾಭ್ಯಾಸ ಹಾಗೂ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಕೋಮು  ಪ್ರಚೋದನೆ ಮಾಡುವ ಸಂಘಿ  ನಾಯಕರುಗಳು, ಬಿಜೆಪಿ ಶಾಸಕರುಗಳ ಮಕ್ಕಳು ಮಾತ್ರ ಪ್ರತಿಷ್ಟಿತ ಶಾಲೆಗಳಲ್ಲಿ, ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಿ, ಸಿಕ್ಕ ಉತ್ತಮ ಅವಕಾಶಗಳನ್ನು ಬಳಸಿಕೊಂಡು ಉದ್ದಾರವಾಗುತ್ತಾರೆ. ಯಾವುದೇ ಬಿಜೆಪಿಯ ಶಾಸಕರು ಹಾಗೂ ನಾಯಕರುಗಳ ಮಕ್ಕಳು ಮೊಮ್ಮಕ್ಕಳು ಯಾವತ್ತಾದರೂ ಕೇಸರಿ ಬಾವುಟ ಹಿಡಿದು ಬೀದಿಯಲ್ಲಿ ನಿಂತು ಘೋಷಣೆ ಕೂಗುತ್ತಿರುವ ಉದಾಹರಣೆಗಳು ಇವೆಯಾ? ತಮ್ಮ ಮಕ್ಕಳು ಕೋಮುಗಲಭೆಗಳಲ್ಲಿ ಭಾಗವಹಿಸಿ ಕೇಸು ಹಾಕಿಸಿಕೊಂಡು ಪೊಲೀಸ್ ಠಾಣೆಯಲ್ಲಿ ಹೊಡೆಸಿಕೊಂಡು ಕೋರ್ಟು ಕಚೇರಿ ಅಲೆದಾಡುತ್ತಾ ಭವಿಷ್ಯವನ್ನು ಹಾಳುಮಾಡಿಕೊಳ್ಳುವುದನ್ನು ಯಾವ ಪೋಷಕರು ಬಯಸುತ್ತಾರೆ? ಹಾಗಾಗಬಾರದು ಎನ್ನುವುದೇ ಆದಲ್ಲಿ ಮತಾಂಧರ ಪ್ರಚೋದನೆಯಿಂದ ಪೋಷಕರು ದೂರ ಇರಬೇಕಾಗಿದೆ. ಧರ್ಮಾಂಧರ ನೆರಳೂ ತಮ್ಮ ಮಕ್ಕಳ ಮೈಮನಸುಗಳ ಮೇಲೆ ಬೀಳದಂತೆ ನೋಡಿಕೊಳ್ಳಬೇಕಿದೆ. ಈ ಕೋಮು ಕಲಹ, ಧಾರ್ಮಿಕ ಅಸಹನೆಗಿಂತಲೂ ತಮ್ಮ ಮಕ್ಕಳ ಭವಿಷ್ಯವೇ ಮುಖ್ಯವೆಂದು ಎಲ್ಲಾ ಪೋಷಕರೂ ಅರಿಯಬೇಕಿದೆ. ಆಗಲೇ ಈ ಸಂಘಪರಿವಾರದ ಶಡ್ಯಂತ್ರಗಳನ್ನು ಸೋಲಿಸಬಹುದಾಗಿದೆ. ಮಕ್ಕಳನ್ನು ಧಾರ್ಮಿಕ ಸಹಿಷ್ಣುಗಳಾಗಿ ಬೆಳೆಸಬೇಕಿದೆ. ಈ ದೇಶವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಬೇಕಿದೆ.

ಏಳನೇ ತರಗತಿಯ ಪಠ್ಯಪುಸ್ತಕದಲ್ಲಿರುವ Work is Worship ಎನ್ನುವ ರವೀಂದ್ರನಾಥ ಟಾಗೋರರ ಕವಿತೆ ಹಾಗೂ ಕನ್ನಡದಲ್ಲಿ ಕವಿತೆಯ  ಸಂಕ್ಷಿಪ್ತ  ಸಾರ ಈ ಕೆಳಗಿನಂತಿದೆ. 

Leave this chanting and singing 
and telling of beads! Whom dost thou 
worship in this lonely dark corner of a 
temple with doors all shut? Open 
thine eyes and see thy God is not before thee
He is there the tiller is tilling 
the hard ground and where the path-maker 
is breaking stones. He is with them 
in sun and shower, and his 
garment is covered with dust. Put off 
thy holy mantle and even like him come 
down on the dusty soil!

Deliverance? Where is this deliverance
to be found? Our master himself
has joyfully  taken upon him the bonds of 
creation; he is bound with us all forever.
Come out of thy meditations and 
leave aside thy flowers and incense!
What harm is there if thy clothes 
become tattered and stained?Meet 
him and stand by him in toil and in 
sweat of thy brow.

ಕವಿತೆಯ ಪ್ರಕಾರ ದೇವರು ಕೇವಲ ಆರಾಧನಾಲಯಗಳಿಗೆ ಸೀಮಿತವಲ್ಲ. ಕಣ್ಣು ಮುಚ್ಚಿ ಪ್ರಾರ್ಥಿಸುವುದರಿಂದ ಏನನ್ನೂ ಸಾಧಿಸಲಾಗದು. ಆದುದರಿಂದ ಭಜನೆ, ಮತ್ತು ಮಣಿಗಳ ಜಪವನ್ನು ತ್ಯಜಿಸಿ ತಮ್ಮ ಅಜ್ಞಾನದ ಕಣ್ಣುಗಳನ್ನು ತೆರೆದು ಉಳುಮೆ ಅಥಾವಾ ಕಾಯಕಕ್ಕೆ ಹೆಚ್ಚಿನ ಗಮನ ಹರಿಸಬೇಕು. ಕಾಯಕದ ಸಂದರ್ಭದಲ್ಲಿ ದೇವರ ಇರುವಿಕೆಯನ್ನು ಗಮನಿಸಬಹುದು. 

ದೇವರನ್ನು ಬಿಸಿಲು,ಮಳೆಯ ರೂಪದಲ್ಲೂ ಸಂಕಲ್ಪಿಸಬಹುದು. ಧೂಳಿನ ರೂಪವನ್ನು ದೇವರ ವಸ್ತ್ರವೆಂದೂ ತಿಳಿದುಕೊಳ್ಳಬಹುದು. ಆದುದರಿಂದ ತನ್ನ ಪಾವಿತ್ರ್ಯತೆಯೆಂಬ ಕವಚವನ್ನು ತೆಗೆದು ದೇವರಂತೆ ಗೋಚರವಾಗುವ ಮಣ್ಣು ಹಾಗೂ ದೇಹಕ್ಕೆ  ಅಂಟಿಕೊಳ್ಳುವ ಧೂಳಿನಲ್ಲಿ ದುಡಿಯುವ ಕಾಯಕಕ್ಕೆ ಇಳಿಯಿರಿ. ಜೊತೆಗೆ ದೇವಾಲಯಗಲ್ಲಿ ಹಾಗೂ ದೇವಾಲಯಗಳಿಗೋಸ್ಕರ  ಸಮಯ ವ್ಯರ್ಥ ಮಾಡುವ ಬದಲು ಕಾಯಕ/ಕೆಲಸಗಳನ್ನು ಮಾಡಿ ಮುಕ್ತಿ ಪಡೆಯಿರಿ ಎಂದು ವಿಶ್ವಾಸಿಗಳಿಗೆ ಟಾಗೋರರು ಕವಿತೆಯ ಮೂಲಕ ಸಲಹೆ ಮಾಡುತ್ತಾರೆ.

ದೇವರು ಸೃಷ್ಟಿಯ ಮಿತಿಗಳನ್ನು ತನ್ನ ಮೇಲೆ ಅರಗಿಸಿಕೊಂಡು ಮನುಷ್ಯನೊಳಗೆ ಶಾಶ್ವತವಾಗಿ ಬೀಡುಬಿಟ್ಟಿದ್ದಾರೆ  . ಆದುದರಿಂದ ಭಕ್ತರು ತನ್ನ ಧ್ಯಾನವನ್ನು ತ್ಯಜಿಸಿ ಮಂದಿರಕ್ಕೆ ಹೂವು ಮತ್ತು ಧೂಪವನ್ನು ಹೊತ್ತುಕೊಂಡು ಹೋಗುವುದನ್ನು ಬಿಟ್ಟು ದೇವರು ನಮ್ಮಲ್ಲಿಯೇ ಇದ್ದಾನೆ ಎಂದು ಅರಿತುಕೊಳ್ಳುವಂತೆ ಟಾಗೋರರು ವಿಶ್ವಾಸಿಗಳನ್ನು ಎಚ್ಚರಿಸುತ್ತಾರೆ.
(ಇಲ್ಲಿ ಮಂದಿರ ಅಂದರೆ  ಎಲ್ಲಾ ಧರ್ಮಗಳ ಅರಾಧಾನಲಯಗಳು ಎಂದರ್ಥ .ರಾಮ ಮಂದಿರ ಎಂಬ ಪ್ರತ್ಯೇಕ ಅರ್ಥವಿಲ್ಲ)

ಹೋಗಲಿ ಈ ಕವಿತೆಯ ಕುರಿತು ಅರ್ಥ ತತ್ವಕ್ಕೆ ಭಂಗ ಬರದಂತೆ ಈ ಮತಾಂಧ ಶಾಸಕರಾದ ವೇದವ್ಯಾಸ ಹಾಗೂ ಭರತ್ ಶೆಟ್ಟಿ ಪಾಠ ಮಾಡಲು ಸಾಧ್ಯವಿದೆಯಾ? ಹೋಗಲಿ ಸಂಘ ಪರಿವಾರದ ಯಾರಾದರೂ ಈ ಕವಿತೆಯ ಅರ್ಥವನ್ನು ತಿರುಚದೇ ವಿವರಿಸಲು ಸಾಧ್ಯವೇ? ಕೋಮುವ್ಯಾಧಿ ಪೀಡಿತರಿಗೆ ಕವಿತೆಯಾಗಲಿ, ಕವಿತೆಯ ಅಂತರಾರ್ಥವಾಗಲೀ ತಿಳಿಯಲು ಸಾಧ್ಯವಿಲ್ಲ. ತಿಳಿದಿದ್ದರೆ ಹೀಗೆ ತನ್ನ ಕೆಲಸ ಮಾಡಿದ ಶಿಕ್ಷಕಿಯ ಅಮಾನತ್ತಿಗೆ ಒತ್ತಾಯಿಸುತ್ತಲೂ ಇರಲಿಲ್ಲ. ಮಕ್ಕಳಲ್ಲಿ ಮತಾಂಧತೆ ಬಿತ್ತುತ್ತಲೂ ಇರಲಿಲ್ಲ.

- ಶಶಿಕಾಂತ ಯಡಹಳ್ಳಿ
14-02-2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ