ಯಾ ಅಲ್ಲಾ...
ಕೊನೆಗೂ ಅಂಧಕಾರದಲ್ಲಿ ಭರವಸೆಯ ಬೆಳ್ಳಿ ಕಿರಣವನ್ನಾದರೂ ತೋರಿದೆಯಲ್ಲಾ. ನಿನಗೆ ಲಾಕ್ ಲಾಕ್ ಶುಕ್ರಿಯಾ.
ಅಲಹಾಬಾದ್ ಹೈಕೋರ್ಟಾದರೂ ನನ್ನಂತಾ ನತದೃಷ್ಟ ಮಹಿಳೆಯರ ಮೇಲೆ ಕರುಣೆ ಇಟ್ಟು ತ್ರಿವಳಿ ತಲಾಕನ್ನು ಅಸಾಂವಿಧಾನಿಕ
ಅಂತಾ ತೀರ್ಪು ಕೊಟ್ಟಿತಲ್ಲಾ.. ಉಸಿರುಗಟ್ಟಿದ ವಾತಾವರಣದಲ್ಲಿ ಬೆಳಕಿಂಡಿಯೊಂದು ತೆರೆದಂತಾಯಿತು.
ನಾನೆಷ್ಟು
ಪುಣ್ಯ ಮಾಡಿದ್ದೇನೋ ಇಲ್ಲಾ ಪಾಪ ಮಾಡಿದ್ದೇನೋ ಗೊತ್ತಿಲ್ಲಾ.. ಮುಸ್ಲಿಂ ಧರ್ಮದಲ್ಲಿ ಹುಟ್ಟಿಬಿಟ್ಟೆ.
ಪ್ರವಾದಿ ಪೈಗಂಬರರು ಹೇಳಿದ ಪ್ರತಿಯೊಂದು ಮಾತುಗಳನ್ನು ಓದುತ್ತಿದ್ದರೆ ಮುಸ್ಲಿಂ ಆಗಿ ಹುಟ್ಟಿರುವುದಕ್ಕೆ
ಅತೀವ ಹೆಮ್ಮೆ ಅನ್ನಿಸುತ್ತದೆ. ಆದರೆ.. ಆದರೆ... ಈ ಧರ್ಮಾಂಧರು ಪುರುಷ ಹಿತಾಸಕ್ತಿಯ ಪರವಾಗಿ ಮಾರ್ಪಡಿಸಿಕೊಂಡ
ಧರ್ಮದ ಹೆಸರಿನ ಕಾನೂನು ಕಟ್ಟಳೆಗಳನ್ನು ಕಂಡುಂಡು ಅನುಭವಿಸಿದವರಿಗೆ ಗೊತ್ತು ಇಸ್ಲಾಂ ಮತದಲ್ಲಿ ಹುಟ್ಟಿದ್ದೇ
ಯಾವುದೋ ಪಾಪ ಮಾಡಿದ ಪ್ರಾಯಶ್ಚಿತ್ತಕ್ಕೆ ಶಿಕ್ಷೆ ಅನುಭವಿಸಲೆಂದು. ಅದರಲ್ಲೂ ಹೆಣ್ಣಾಗಿ ಹುಟ್ಟಿದ್ದಂತೂ
ಪರಮಶಿಕ್ಷೆಯಲ್ಲದೇ ಮತ್ತೇನು.
ನನ್ನಜ್ಜಿ
ನನ್ನ ಅಜ್ಜನ ನಾಲ್ಕನೆ ಹೆಂಡತಿಯಾಗಿ ಅನುಭವಿಸಬಾರದ ಪಡಿಪಾಟಲು ಅನುಭವಿಸಿ ದುರುಳ ಗಂಡಸರಿಗೆ ಶಾಪಹಾಕುತ್ತಲೇ ನರನರಳಿ ಸತ್ತಳು. ನನ್ನ ಅಮ್ಮಿ ಕೂಡಾ ನಮ್ಮಪ್ಪನ ಎರಡನೇ
ಬೀಬಿಯಾಗಿದ್ದವಳು. ಮದುವೆಯಾಗಿ ಮೂರೇ ವರ್ಷಕ್ಕೆ ಅಬ್ಬಾಜಾನ್ ಮೂರು ಸಲ ತಲಾಖ್ ಹೇಳಿ ದೂರ ಮಾಡಿಬಿಟ್ಟ.
ಆಗ ನಾನಿನ್ನೂ ಚಿಕ್ಕವಳು. ನನಗಿನ್ನೊಬ್ಬಳು ತಂಗಿ ಬೇರೆ. ಇಬ್ಬರು ಮಕ್ಕಳನ್ನು ಕಟ್ಟಿಕೊಂಡು ಪಡಬಾರದ
ಕಷ್ಟಪಟ್ಟು ಸವೆದು ಸವಕಲಾದ ಅಮ್ಮಿಜಾನ್ ತೀರಿಕೊಂಡು ಇಂದಿಗೆ ಸರಿಯಾಗಿ ಒಂದುವರ್ಷ ಆಯ್ತು. ಎರಡು ವರ್ಷಗಳ
ಹಿಂದೆ ಅಲ್ತಾಪ್ ನನ್ನನ್ನ ನಿಖಾ ಆಗುತ್ತೇನೆ ಅಂತಾ ಮನೆಗೆ ಬಂದಾಗ ನಾನು ನಿರಾಕರಿಸಿದ್ದಂತೂ ಸತ್ಯ.
ಎಲ್ಲಿ ನನ್ನ ಅಜ್ಜಿ ಅಮ್ಮನ ಹಾಗೆಯೇ ನನ್ನ ಬದುಕೂ ಅತಂತ್ರ ಆಗುತ್ತದೋ ಎನ್ನುವುದು ನನ್ನ ಮನದೊಳಗಿದ್ದ
ಆತಂಕ. ಆದರೆ.. ನನ್ನ ಅನಿಸಿಕೆ ಕೇಳುವ ವ್ಯವಧಾನ ಯಾರಿಗಿತ್ತು. ನನಗೆ ಗೊತ್ತಿಲ್ಲದೇ ಎಲ್ಲಾ ನಿರ್ಧಾರವಾಗಿ
ಹೋಗಿತ್ತು. ನಿಖಾ ವಿರೋಧಿಸೋಣವೆಂದರೆ ಅನಾರೋಗ್ಯದಿಂದ ಬಸವಳಿದ ಅಮ್ಮಿಜಾನ್ ಇದ್ದ ದುಸ್ಥಿತಿಯನ್ನು
ನೆನೆದು ನನ್ನ ಮನಸ್ಸಿಗೆ ವಿರುದ್ಧವಾಗಿ ನಿಖಾ ಆಗಲು ಒಪ್ಪಿಕೊಳ್ಳಬೇಕಾಯ್ತು.
ಅಲ್ತಾಪ್
ನೋಡಲು ಸುಂದರವಾಗಿದ್ದ. ಸ್ಕೂಟರ್ ಗ್ಯಾರೆಜ್ ಇಟ್ಟುಕೊಂಡಿದ್ದ. ಆದಾಯಕ್ಕೂ ಸಮಸ್ಯೆ ಇರಲಿಲ್ಲ. ನಿಖಾ
ಆಗಿ ಒಂದು ವರ್ಷದವರೆಗೂ ಎಲ್ಲಾ ಚೆನ್ನಾಗೆ ಇತ್ತು. ಆದರೆ.. ಬರ್ತಾ ಬರ್ತಾ ನನ್ನ ಮೇಲೆ ಆತನ ಆಸಕ್ತಿ
ಕಡಿಮೆಯಾಗತೊಡಗಿತು. ಮನೆಗೆ ಬರೋದೆ ಅಪರೂಪವಾಯ್ತು. ಬಂದರೂ ಮಾತು ನಾಮಕಾವಸ್ತೇ ಆಗಿತ್ತು. ಆತ ಬೇರೆ
ಹುಡುಗಿ ಜೊತೆ ಪ್ಯಾರಲ್ಲಿ ಬಿದ್ದಿದ್ದಾನೆಂದು ಬೇರೆಯವರಿಂದಾ ಗೊತ್ತಾಯ್ತು. ಒಂದಿನಾ ಹಿಡಿದು ಕೇಳಿದೆ..
“ನನ್ನಲ್ಲಿ ಏನು ಕಡಿಮೆ ಆಗಿದೆ ಎಂದು
ಬೇರೆಯವಳಲ್ಲಿ ಹೋದೆ’ ಎಂದು.
ಮಾತಿಗೆ ಮಾತು ಬೆಳೀತು. ಹಿಡಿದು ಹೊಡೆದಾ. ಅವಳನ್ನೆ ಮದುವೆ ಆಗ್ತೀನಿ ಏನು ಮಾಡ್ಕೊಂತಿಯೋ ಮಾಡ್ಕೋ
ಅಂದಾ. ಕೊನೆಗೂ ಮೂರು ಸಲ ತಲಾಕ್ ತಲಾಕ್ ತಲಾಕ್ ಅಂತಾ ಹೇಳಿ ಹೋಗೇ ಬಿಟ್ಟಾ. ನನಗೆ ಭೂಮಿನೇ ಬಾಯ್ಬಿಟ್ಟಂತಾಯ್ತು.
ಇಷ್ಟು ದಿನಾ ಮನಸ್ಸು ದೇಹಾ ಹಂಚಿಕೊಂಡ ವ್ಯಕ್ತಿ ಇವತ್ತು ಎಲ್ಲಾ ಸಂಬಂಧ ಕಡಿದುಕೊಂಡು ದೂರಾಗಿಬಿಟ್ಟಿದ್ದಾ.
ನಾನೊಬ್ಬಳೇ ಇದ್ದರೆ ಹೇಗೋ ಬದುಕಬಹುದಾಗಿತ್ತೇನೋ? ಆದರೆ ಆರು ತಿಂಗಳ ಹಸುಗೂಸು ಅಂಗೈಯಲ್ಲಿಟ್ಟುಕೊಂಡು
ಹೋಗೋದಾದರೂ ಎಲ್ಲಿಗೆ.? ನನ್ನ ಬದುಕೂ ನನ್ನಜ್ಜಿ ನನ್ನಮ್ಮನ ಹಾದಿಯಲ್ಲೇ ಸಾಗತೊಡಗಿದಂತಾಯ್ತು. ಅವರಿವರನ್ನು
ಕೇಳಿದೆ, ಮಸೀದಿಯ ಮುಲ್ಲಾಗಳನ್ನು ಬೇಡಿಕೊಂಡೆ, ಅಲ್ತಾಪ್ ಇನ್ನೊಂದು ಮದುವೆಯಾದರೂ ಪರವಾಗಿಲ್ಲಾ ನನಗೆ
ಗಂಡನಾಗಿ ಇರಲಿ ಎಂದು ಅವಲತ್ತುಕೊಂಡೆ. ಗಂಡನಾಗದಿದ್ದರೂ ಚಿಂತೆಯಿಲ್ಲಾ ಮಗುವಿಗೆ ತಂದೆಯಾದರೂ ಆಗಿರಲಿ
ಎಂದು ವಿನಂತಿಸಿಕೊಂಡೆ. ಆದರೆ.. ಯಾರೆಂದರೆ ಯಾರೂ ಸಹಾಯಕ್ಕೆ ಬರಲೇ ಇಲ್ಲಾ. “ತಲಾಕ್ ಹೇಳಿಯಾಗಿದೆ ಮತ್ತೆ ಒಂದಾಗಲು ಚಾನ್ಸೇ ಇಲಾ” ಎಂದು ತಲೆ ಅಡ್ಡಡ್ಡ ಅಲ್ಲಾಡಿಸಿದರು. ಅಮ್ಮಿಜಾನ್ ತೀರಿಕೊಂಡಾಗಿದೆ. ಇರುವ
ತಂಗಿಯ ಗಂಡ ಈಗಷ್ಟೇ ಮೂರನೆ ಮದುವೆ ಮಾಡಿಕೊಂಡು ಬಂದಿದ್ದಾನೆ. ಎಲ್ಲಿಗೆ ಹೋಗಲಿ.. ಹೇಗೆ ಬದುಕಲಿ..
ಹಸಿಗೂಸನ್ನು ಹೇಗೆ ಸಾಕಲಿ.. ಇಡೀ ಬದುಕೇ ಅಂಧಕಾರದಲ್ಲಿ ಮುಳುಗಿದಂತೆನಿಸಿತು.
ಮಿಯಾ
ಬೀಬಿ ಸಂಬಂಧ ಅಂದ್ರೆ ಇಷ್ಟೇನಾ? ಹೆಣ್ಮಕ್ಕಳು ಅಂದ್ರೆ ಬೇಕಾದಾಗ ಬಳಸಿ ಬೇಡವಾದಾಗ ಬಿಸಾಕೋ ವಸ್ತುನಾ?
ಹೆಣ್ಮಕ್ಕಳಾದ ತಪ್ಪಿಗೆ ನಾವು ದರ್ಗಾಕ್ಕೆ ಹೋಗೋವಂತಿಲ್ಲಾ... ಮಸೀದಿ ಪ್ರವೇಶಿಸೋ ಹಾಗಿಲ್ಲಾ, ನಮಗಿಷ್ಟವಾದ
ಉಡುಗೆ ತೊಟ್ಟು ಮನೆಯ ಹೊರಗೆ ಕಾಲಿಡೋ ಹಾಗಿಲ್ಲಾ. ಇಲ್ಲಾ.. ಇದಲ್ಲಾ.. ಪ್ರವಾದಿಗಳು ಹೇಳಿದ್ದು..
ಕುರಾನ್ ಎಂದೂ ಮಹಿಳಾವಿರೋಧಿ ಆಗಿದ್ದಿಲ್ಲ. ಎಂದೋ ಯಾವುದೋ ಕಾಲದ ಅಗತ್ಯಕ್ಕೆ ತಕ್ಕಂತೆ ಮಾಡಿದ ಧರ್ಮದ
ರೀತಿ ರಿವಾಜುಗಳು ಎಲ್ಲಾ ಕಾಲಕ್ಕೂ ಅನುಕರಣೀಯವೂ ಅಲ್ಲಾ. “ತಮ್ಮ
ಸ್ಥಿತಿಯನ್ನು ಜನರು ತಾವೇ ಬದಲಿಸಿಕೊಳ್ಳುವವರೆಗೂ ದೇವರು ಖಂಡಿತವಾಗಿ ಅದನ್ನು ಬದಲಿಸುವುದಿಲ್ಲ” (೧೩:೧೧) ಎಂದು ಕುರಾನಿನಲ್ಲೇ
ಸ್ಪಷ್ಟವಾಗಿ ಬರೆದಿದೆಯಲ್ಲಾ. ಹಾಗಾದರೆ ಯಾಕೆ ಈಗಿನ ಕಾಲಕ್ಕೆ ತಕ್ಕಂತೆ ಜನರು ಧರ್ಮದ ಆಚರಣೆಗಳನ್ನು
ಬದಲಿಸಿಕೊಳ್ಳಬಾರದು. ಧರ್ಮದ ಹೆಸರಿನಲ್ಲಿ ಪುರುಷರಿಗೆ ಬೇಕಿರುವುದು ಜನ್ನತ್ ಅಲ್ಲಾ, ಅಬಲೆಯರಾದ ಮಹಿಳೆಯರ
ಮೇಲೆ ಅಧಿಕಾರ.
ಎಷ್ಟು
ದಿನ ಹೀಗೆ ಮುಸ್ಲಿಂ ವ್ಯಯಕ್ತಿಕ ಕಾನೂನಿನಡಿಯಲ್ಲಿ ಮಹಿಳಾ ವಿರೋಧಿಯಾದ ತಲ್ಲಾಕ್ ಮತ್ತು ಬಹುಪತ್ನಿತ್ವಗಳಂತಾ
ಅನಿಷ್ಟ ಆಚರಣೆಗಳನ್ನು ಹೆಣ್ಣು ಮಕ್ಕಳ ಮೇಲೆ ಹೇರಿ ದಮನಿಸುವುದು. ಇನ್ನೆಷ್ಟು ದಿನ ಧರ್ಮದ ಹೆಸರಲ್ಲಿ
ಮಹಿಳೆಯರನ್ನು ಅಡಿಯಾಳಾಗಿಸಿಕೊಂಡು ಈ ಪುರುಷರು ತಮ್ಮಿಚ್ಚೆಯಂತೆ ಆಳುವುದು. ಎಲ್ಲದಕ್ಕೂ ಒಂದು ಮಿತಿ
ಇದೆ. ಕಾಲಕ್ಕೆ ತನ್ನದೇ ಆದ ಗತಿ ಇದೆ. ಎಲ್ಲವೂ ಬದಲಾಗಲೇಬೇಕು. ಬದಲಾಗಲಾರನೆಂದರೂ ಕಾಲಕ್ಕೆ ಮಣಿಯಲೇಬೇಕು.
ಹೆಣ್ಣು ಗಂಡಿನ ನಡುವಿನ ತಾರತಮ್ಯದ ರೀತಿ ಬದಲಾಗಿ ಸಮಾನ ನೀತಿ ಸಂಹಿತೆ ಜಾರಿಯಾಗಲೇಬೇಕು. ನಾನು ಇಸ್ಲಾಂ
ಧರ್ಮೀಯಳಾಗಿದ್ದಕ್ಕೆ ಹೆಮ್ಮೆ ಪಡುತ್ತೇನೆ. ಆದರೆ ಧರ್ಮಾಂಧರು ಸೃಷ್ಟಿಸಿರುವ ಅಸಮಾನತೆ ಹಾಗೂ ಜೀವವಿರೋದಿತನವನ್ನು
ಶತಾಯ ಗತಾಯ ವಿರೋಧಿಸುತ್ತೇನೆ. ನನಗೆ ನ್ಯಾಯಾ ಬೇಕು. ಅನಾಥವಾದ ನನ್ನ ಮಗುವಿಗೆ ನೆಲೆಬೇಕು. ತಾಯಿ
ಮಗು ನಾವಿಬ್ಬರೂ ನೆಮ್ಮದಿಯಾಗಿ ಬದುಕಬೇಕು. ಆದರೆ.. ಅದು ಸಾಧ್ಯವಾಗುತ್ತಿಲ್ಲಾ.. ಎಲ್ಲಾ ದಾರಿಗಳು
ಮುಚ್ಚಿರುವಾಗ ಬೇರೆ ಮಾರ್ಗ ಹುಡುಕಿಕೊಳ್ಳಬೇಕು. ನಂಬಿಸಿ ಮದುವೆಯಾಗಿ ಅಕಾರಣವಾಗಿ ನಡುನೀರಲ್ಲಿ ಬಿಟ್ಟು
ಹೋದವನ ವಿರುದ್ಧ ಹೋರಾಡಬೇಕು. ಹೆಣ್ಣು ಎಂದರೆ ಬಾಳೆ ಹಣ್ಣು ತಿಂದು ಸಿಪ್ಪೆ ಬೀದಿಗೆಸೆದಂತಲ್ಲಾ ಎಂಬುದನ್ನು
ಈ ಮತಾಂಧ ಗಂಡಸರಿಗೆ ಪಾಠ ಕಲಿಸಲೇಬೇಕು.
ಹೋ..
ಅಲ್ಲಾ.. ನಿನಗೆ ಕೋಟಿ ಸಲಾಂ. ಈಗ ನ್ಯಾಯಾಲಯದ ಮೂಲಕವಾದರೂ ಈ ತ್ರಿವಳಿ ತಲಾಕ್ ಎನ್ನುವ ಪುರುಷರ ಏಕಪಕ್ಷೀಯ
ದುಷ್ಟ ನಿರ್ಧಾರವನ್ನು ಅಸಂವಿಧಾನಿಕ ಎಂದು ಹೇಳಿಸಿದೆಯಲ್ಲಾ. ಮಹಿಳೆಯರ ಹಕ್ಕುಗಳಿಗೆ ಒಂದಿಷ್ಟಾದರೂ
ಬಲ ತುಂಬಿದೆಯಲ್ಲಾ. ತಮ್ಮದಲ್ಲದ ತಪ್ಪಿಗೆ ಜೀವಮಾನವಿಡೀ ಕೊರಗಬೇಕಾದ ಅಸಂಖ್ಯಾತ ಮುಸ್ಲಿಂ ಮಹಿಳೆಯರ
ಕತ್ತಲ ಬದುಕಿಗೆ ಒಂದು ಆಶಾಕಿರಣವನ್ನಾದರೂ ಒದಗಿಸಿದೆಯಲ್ಲಾ.
ಪುರುಷರ
ಪರವಾಗಿರುವ ನಿಖಾನಾಮಾ ಬದಲಾಗಬೇಕು. ಅಮಾನುಷ ಏಕಪಕ್ಷೀಯ ತ್ರಿವಳಿ ತಲಾಕ್ ಕೊನೆಯಾಗಬೇಕು. ಹೆಂಡತಿಯ
ಜೊತೆ ಬಾಳಲಾಗದವ ಹೆಂಡತಿ ಮಕ್ಕಳ ಮುಂದಿನ ಜೀವನೋಪಾಯಕ್ಕೆ ದಾರಿಯನ್ನಾದರೂ ಮಾಡಿಕೊಡುವಂತಾಗಬೇಕು. ಅಜನ್ಮ
ಪೂರ್ತಿ ಜೀವನಾಂಶ ತೆರುವಂತಾಗಬೇಕು. ಯಾರು ಏನೇ ಹೇಳಲಿ, ನನಗಾದ ಅನ್ಯಾಯಕ್ಕೆ ನ್ಯಾಯ ಕೇಳಿ ನ್ಯಾಯಾಲಯದ
ಮೊರೆ ಹೋಗುತ್ತೇನೆ. ಪುರುಷಪ್ರಧಾನ ವ್ಯವಸ್ಥೆಯ ದೌರ್ಜನ್ಯದ ವಿರುದ್ದ ಹೋರಾಡುತ್ತೇನೆ. ನನ್ನಂತೆ ನೊಂದು
ಬೆಂದ ಅಗಣಿತ ಮಹಿಳೆಯರ ಪರವಾಗಿ ನಿಲ್ಲುತ್ತೇನೆ. ನನಗೆ ನನ್ನಂತವರಿಗೆ ನ್ಯಾಯ ಸಿಗುವವರೆಗೂ ವಿರಮಿಸುವುದಿಲ್ಲಾ.
ನೆಲೆ ಬೆಲೆ ಇಲ್ಲದೇ ಈಗಾಗಲೇ ಇದ್ದೂ ಸತ್ತಂತಾಗಿರುವೆ. ಇನ್ನು ಈ ಧರ್ಮಾಂಧರ ಗೊಡ್ಡು ಬೆದರಿಕೆಗೆ ಹೆದರಲಾರೆ.
ಸಾವಿಗೆ ಸನ್ನದ್ದವಾಗಿಯೇ ಬದುಕಿನ ಹೋರಾಟಕ್ಕಿಳಿಯುವೆ. ನನ್ನಜ್ಜಿ.. ಮುತ್ತಜ್ಜಿ.. ನನ್ನವ್ವಂದಿರು
ಹರಿಸಿದ ಕಣ್ಣೀರನ್ನು ನನ್ನ ಮಗಳು.. ಅವಳ ಮಗಳು ಹರಿಸದಿರಲೆಂದು ಈ ದಿಟ್ಟ ಹೆಜ್ಜೆ.
ಮಹಿಳೆಯರ
ಬಂಧನದ ಸಂಕೇತವಾದ ಈ ಕರಿ ಪೋಷಾಕನ್ನು ಈಗಲೇ ತೆಗೆದು ಬಿಸಾಕುವೆ. ಸಹಿಸಿದ್ದು ಸಾಕಿನ್ನು. ಸಮಾನತೆ
ಬೇಕಿನ್ನು. ಧರ್ಮ ಬದುಕಿಗಿರಲಿ. ಬದುಕಿನ ಬೆಳಕನ್ನೇ ಕೊಲ್ಲುವ ಧರ್ಮಾಂಧತೆ ತೊಲಗಲಿ. ಯಾ.. ಅಲ್ಲಾ..
ನನಗೆ ಶಕ್ತಿ ನೀಡು. ನನ್ನಂತವರ ಮೇಲೆ ಕರುಣೆ ಇಡು. ನಿನ್ನ ಹೆಸರಲ್ಲಿ ದಮನ ನಡೆಸುವ ಮತಾಂಧರಿಗೆ ಮಾನವೀಯತೆ
ರೂಢಿಸಿಕೊಳ್ಳುವ ಬುದ್ದಿಕೊಡು. ಬಾ.. ಮಗು.. ನೀನಿನ್ನು ಅನಾಥೆಯಲ್ಲಾ. ನಿನಗೆ ನಾನಿದ್ದೇನಲ್ಲಾ. ನಮ್ಮ
ಜೊತೆ ಆ ಕರುಣಾಳು ಅಲ್ಲಾ ಇದ್ದಾನಲ್ಲಾ. ಬಾ ಕಂದಾ.. ಹೋಗೋಣ.. ಅನ್ಯಾಯವನ್ನು ಮಟ್ಟಹಾಕಲು ನ್ಯಾಯದೇಗುಲದ
ಕದ ತಟ್ಟೋಣ. ಕತ್ತಲ ಬದುಕಿಗೆ ಬೆಳಕಾಗುವ ದಾರಿ ಹುಡುಕೋಣ. ಅಗೋ ಅಲ್ಲಿ ನೋಡು ಬೆಳಕಾಗುತ್ತಿದೆ. ಸೂರ್ಯನ
ಕಿರಣ ಕಿಟಕಿಯ ಸರಳುಗಳ ದಾಟಿ ನಿನ್ನ ಕಣ್ಣೊಳಗೆ ಬೆಳಕು ತುಂಬುತ್ತಿದೆ. ಸೋತು ಬಸವಳಿದ ನನ್ನ ಮನದೊಳಗೆ
ಜೀವನೋತ್ಸಾಹದ ಚಿಲುಮೆ ಹೊಮ್ಮಿಸುತ್ತಿದೆ. ಬಾ ಹೋಗೋಣ ಹೊಸ ಬದುಕಿನ ಹುಡುಕಾಟಕೆ..
ಬಾ ಹೋಗೋಣ
ಹೊಸ ಬದುಕಿನ ಹುಡುಕಾಟಕೆ
ಕತ್ತಲ
ಕಳೆಯಲು ಹಿಡಿದು ಸ್ವಾಭಿಮಾನದ ದೀವಟಿಗೆ..
ಸಾಕು
ಸಾಕಿನ್ನು ಶತಮಾನಗಳ ದಮನ
ಸಮಾನತೆ
ಸಹಜೀವನದತ್ತಿರಲಿ ಎಲ್ಲರ ಗಮನ..
-ಶಶಿಕಾಂತ
ಯಡಹಳ್ಳಿ
Yes super sir.
ಪ್ರತ್ಯುತ್ತರಅಳಿಸಿ