ಗುರುವಾರ, ಡಿಸೆಂಬರ್ 8, 2016

ತಹ ತಹ.....65 ನೋಟು ರದ್ದತಿಯಿಂದ ದೇಶಕ್ಕೆ ಆಘಾತ: ಅಪ್ರಾಮಾಣಿಕ ಆದೇಶದಿಂದಾದ ಅನಾಹುತ;


ಕೆರೆ ಖಾಲಿಮಾಡಿಸಿದ ದೊರೆ: ಉಸಿರುಗಟ್ಟಿದ ಮೀನುಗಳು.. ಪಾರಾದವು ಮೊಸಳೆಗಳು...



ಹೊಸ ನೋಟಿನ ಕಥೆ ಹಾಗೂ ಜನಸಾಮಾನ್ಯರ ವ್ಯಥೆ ಆರಂಭಗೊಂಡು ಡಿಸೆಂಬರ್ ೮ಕ್ಕೆ ಸರಿಯಾಗಿ ಒಂದು ತಿಂಗಳು ತುಂಬಿತು. ದಿನದಿಂದ ದಿನಕ್ಕೆ ಸಮಸ್ಯೆಗಳು ಬಿಗಡಾಯಿಸಿ ಹೊಸ ಆಯಾಮಗಳನ್ನು ಪಡೆದವೇ ಹೊರತು ಸಧ್ಯಕ್ಕೆ ತಾಪತ್ರಯಗಳು ಬಗೆಹರಿಯುವ ಲಕ್ಷಣಗಳೇನಿಲ್ಲ. ಪೂರ್ವಸಿದ್ದತೆ ಇಲ್ಲದೇ ತೆಗೆದುಕೊಂಡ ಆಘಾತಕಾರಿ ಆರ್ಥಿಕ ನಿರ್ಣಯಗಳಿಂದಾಗುತ್ತಿರುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಕೇಂದ್ರ ಸರಕಾರ ಹರಸಾಹಸ ಮಾಡುತ್ತಿದೆಯಾದರೂ ನಿಯಂತ್ರಣಕ್ಕೆ ಬರುತ್ತಿಲ್ಲಾ. ಕಾಳಧನವೆಂಬ ರೋಗದ ಮೂಲಕ್ಕೆ ಮದ್ದರೆಯುವುದು ಬಿಟ್ಟು ಇಡೀ ದೇಹಕ್ಕೆ ತುರಿಕೆ ಪುಡಿ ಸವರಿ ವ್ಯಾಧಿ ಗುಣವಾಗುವವರೆಗೂ ಉರಿ ತಡೆದುಕೊಳ್ಳಿ ಎಂದರೆ ರೋಗ ಗುಣವಾಗುವುದೇ? ಕಾಳಧನಿಕರನ್ನೇ ಜೊತೆಯಲ್ಲಿಟ್ಟುಕೊಂಡು ರಕ್ಷಿಸುತ್ತಾ ಕಪ್ಪುಹಣವನ್ನು ಬೇರುಸಮೇತ ಕಿತ್ತುಹಾಕುತ್ತೇನೆ ಎನ್ನುವ ಮೋದಿಯ ಮೋಡಿ ಮಾತುಗಳಲ್ಲಿ ಸತ್ಯವೆಂಬುದೇನಾದರೂ ಇದೆಯಾ?   

ಕಳೆದ ಚುನಾವಣೆಯ ಸಂದರ್ಭದಲ್ಲಿ ಹರ್ ಬಚ್ಚಾ ಜಾನತಾ ಹೈ ಕಾಲಾ ಧನ್ ಸ್ವಿಸ್ ಬ್ಯಾಂಕ್ ಮೇ ಹೈ ಎಂದು ದೇಶಾದ್ಯಂತ ಬಾಯಿ ಮತ್ತೊಂದು ಬಡಿದುಕೊಂಡ ಮೋದಿ ಸಾಹೇಬರು ವಿದೇಶದಲ್ಲಿರುವ ಸ್ವದೇಶಿ ಕಾಳಧನಿಕರ ಕಪ್ಪು ಹಣವನ್ನು ಮರಳಿ ತಂದು ಪ್ರತಿಯೊಬ್ಬ ದೇಶವಾಸಿಗಳ ಬ್ಯಾಂಕ್ ಅಕೌಂಟಿಗೆ ಹದಿನೈದು ಲಕ್ಷ ರೂಪಾಯಿ ಹಣ ಜಮಾವಣೆ ಮಾಡಲಾಗುವುದೆಂದು ಸುಳ್ಳು ಭರವಸೆ ಕೊಟ್ಟು ಜನರಲ್ಲಿ ಇಲ್ಲದ ಭ್ರಮೆ ಹುಟ್ಟಿಸಿ ದೇಶವಾಳುವ ಪಟ್ಟ ಗಿಟ್ಟಿಸಿಕೊಂಡರು. ಆದರೆ.. ದೇಶದ ಚುಕ್ಕಾಣಿ ಹಿಡಿದ ನಂತರ ಮೋದಿ ಸಾಹೇಬರಿಗೆ ಗೊತ್ತಾಯಿತು ಸ್ವಿಸ್ ಬ್ಯಾಂಕಿನ ಹಣಕ್ಕೆ ಕೈ ಹಾಕಿದರೆ ತಮ್ಮ ಸಂಘಪರಿವಾರದ ಮಿತ್ರರ ಹಣವೂ ಅಲ್ಲಿ ಅಧಿಕವಾಗಿದೆಯೆಂದು, ಬಿಜೆಪಿ ಸರಕಾರದ ಆರ್ಥಿಕ ಆಧಾರ ಸ್ತಂಭವಾಗಿರುವ ಅಂಬಾನಿ ಆದಾನಿಯವರ ಕಪ್ಪು ಹಣ ಸ್ವಿಸ್ ಬ್ಯಾಂಕಲ್ಲಿರುವುದೆಂದು, ಪನಾಮಾ ಪೇಪರ‍್ಸ್‌ಗಳ ವಹಿವಾಟಿನಲ್ಲಿ ಹೊರಬಂದ ಹೆಸರುಗಳಲ್ಲಿ ಬಿಜೆಪಿ ಸಮರ್ಥಕ ಉದ್ಯಮಿಗಳ ದೊಡ್ಡ ಪಟ್ಟಿಯೇ ಇದೆಯೆಂದು ಮತ್ತು ಸ್ವಿಸ್ ಬ್ಯಾಂಕಿಂದಾ ಕಾಳಧನ ಹೊರತರುವುದು ಅಂದುಕೊಂಡಷ್ಟು ಸುಲಭ ಸಾಧ್ಯವಿಲ್ಲವೆಂದು.

ಆದರೆ.. ಭರವಸೆ ಕೊಟ್ಟು ಸುಮ್ಮನಿದ್ದರೆ ಜನ ಸುಮ್ಮನಿದ್ದಾರಾ? ಅಲ್ಲಲ್ಲಿ ಭಿನ್ನ ದ್ವನಿಗಳು ಮೊಳಗಿದವು. ಕಪ್ಪುಹಣ ಎಲ್ಲಿ ಎಂದು ಪ್ರಶ್ನೆಗಳು ಎದ್ದವು. ಸಾವಕಾಶವಾಗಿ ಜನಸಾಮಾನ್ಯರಲ್ಲಿ ಮೋದಿ ಮತ್ತೊಬ್ಬ ಸುಳ್ಳುಗಾರ ಎನ್ನುವುದು ಸಾಬೀತಾಗತೊಡಗಿತು. ಜನರಲ್ಲಿ ಹುಟ್ಟಿದ ಪ್ರತಿಕೂಲಕರ ಭಾವನೆಯನ್ನು ಹೊಡೆದು ಹಾಕಲು ಸರ್ಜಿಕಲ್ ಸ್ಟ್ರೈಕ್ ದಾಳವನ್ನು ಎಸೆದು ದೇಶಭಕ್ತಿಯ ಉನ್ಮಾದವನ್ನು ಹುಟ್ಟಿಸಲಾಯಿತಾದರೂ ಅದು ಕೇವಲ ಮೋದಿ ಭಕ್ತರ ಭಜನೆಗೆ ಸೀಮಿತವಾಯಿತು. ದೇಶಪ್ರೇಮ ಎನ್ನುವ ಉನ್ಮಾದವೂ ಹೆಚ್ಚು ದಿನ ಬಾಳಲಿಲ್ಲ. ಜನ ಮತ್ತೆ ಮತ್ತೆ ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣದ ಲೆಕ್ಕ ಕೇಳತೊಡಗಿದರು. ಇದು ಮೋದಿ ಸರಕಾರಕ್ಕೆ ನುಂಗಲಾರದ ತುತ್ತಾಯಿತು.

ಸರಕಾರ ಸುಮ್ಮನೇ ಕೂತಿಲ್ಲಾ. ಜನರ ಒಳತಿಗಾಗಿ ಏನೋ ಮಾಡುತ್ತಿದೆ ಎನ್ನುವಂತೆ ತೋರಿಸಬೇಕಾದ ಅನಿವಾರ್ಯತೆ ಮೋದಿ ಮೇಲೆ ಒತ್ತಡವನ್ನು ಹೇರಿತು. ವಿದೇಶದಲ್ಲಿರುವ ಕಪ್ಪು ಹಣ ತರಲಾಗದಿದ್ದರೂ ಸ್ವದೇಶದಲ್ಲಿರುವ ಕಪ್ಪುಹಣವನ್ನಾದರೂ ಹೊರತಂದು ತನ್ನ ಜನಪ್ರೀಯತೆಯನ್ನು ಉಳಿಸಿ ಬೆಳೆಸಿಕೊಳ್ಳುವ ಮಹಾ ಕೆಲಸಕ್ಕೆ ಮೋದಿ ತಯಾರಿ ಮಾಡಿಕೊಂಡರು. ಆಗ ಉರ್ಜಿತ್ ಪಟೇಲ್ ಎನ್ನುವ ರಿಲೈಯನ್ಸ್ ಕಂಪನಿಯ ಮಾಜಿ ಅಧಿಕಾರಿ ಹಾಗೂ ಗುಜರಾತಿ ಆರ್ಥಿಕ ತಜ್ಞ ಊರ್ಜಿತ್ ಪಟೇಲ್‌ರವರನ್ನು ರಿಜರ್ವ ಬ್ಯಾಂಕ್ ನಿರ್ದೇಶಕರನ್ನಾಗಿ ನಿಯಮಿಸಿ ದೇಶಾದ್ಯಂತ ಸಂಚಲನವನ್ನು ಹುಟ್ಟುಹಾಕುವ ಮಹತ್ವಾಂಕಾಂಕ್ಷೀ ಯೋಜನೆಯೊಂದನ್ನು ಗುಟ್ಟಾಗಿ ರೂಪಿಸಲಾಯಿತು. ಭಕ್ತರ ಭಾಷೆಯಲ್ಲಿ ಹೇಳುವುದಾದರೆ ಅದು ನೋಟಿನ ಮೇಲೆ ಸರ್ಜಿಕಲ್ ಸ್ಟ್ರೈಕ್. ಮೋದಿ ಭಾಷೆಯಲ್ಲಿ ಕಾಳಧನಿಕರ ಮೇಲೆ ಸರ್ಜಿಕಲ್ ಸ್ಟ್ರೈಕ್. ತಮ್ಮ ಪಕ್ಷ ಹಾಗೂ ಸಂಘಪರಿವಾರದ ಪ್ರಮುಖ ಕುಳಗಳಿಗೆ ಇದರ ಬಗ್ಗೆ ಎಂಟು ತಿಂಗಳ ಮೊದಲೇ ಗುಟ್ಟಾಗಿ ತಿಳಿಸಿ ಅವರಲ್ಲಿದ್ದ ಎಲ್ಲಾ ಅಕ್ರಮ ಹಣವನ್ನು ಸಕ್ರಮಗೊಳಿಸಲು ಅವಕಾಶಮಾಡಿಕೊಟ್ಟು, ಅಂಬಾನಿಯಂತವರಿಗೆ ಕಪ್ಪು ಹಣದಲ್ಲಿ  ಜಿಯೋದಂತಹ ಭವಿಷ್ಯದ ಲೂಟಿ ಯೋಜನೆಯನ್ನು ರೂಪಿಸಲು ಸಮಯಕೊಟ್ಟು ಅತ್ಯಧಿಕ ಮೌಲ್ಯದ ನೋಟುಗಳನ್ನೆಲ್ಲಾ ಹಿಂಪಡೆದು ಎರಡು ಸಾವಿರ ರೂಪಾಯಿಗಳ ಹೊಸ ನೋಟನ್ನು ರಿಸರ್ವ ಬ್ಯಾಂಕ್ ಮೂಲಕ ನವೆಂಬರ್ 8 ರಂದು ಬಿಡುಗಡೆ ಮಾಡಲಾಯಿತು. ಅವತ್ತಿಂದಾ ಜನರ ಪರದಾಟ ದಿನನಿತ್ಯದ ಗೋಳಾಯಿತು.

ದೇಶದ ಒಳಗೆ ಕಪ್ಪು ಹಣ ಶ್ರೀಮಂತರ ಬಳಿ ಹೇರಳವಾಗಿದೆ. ನೋಟು ಅಮಾನ್ಯತೆಯಿಂದಾಗಿ ಅದೆಲ್ಲಾ ನಿರ್ಣಾಮವಾಗುತ್ತದೆ. ಬ್ಯಾಂಕ್ ಮೂಲಕವೇ ಹಣದ ವಿನಿಮಯ ನಡೆಯುವುದರಿಂದ ಬಿಳಿ ಹಣ ಮಾತ್ರ ಹೊರಗೆ ಬರುತ್ತದೆ. ಜೊತೆಗೆ ಪಾಕಿಸ್ತಾನ ಪ್ರಾಯೋಜಿತ ಕೋಟಾ ನೋಟುಗಳ ಹಾವಳಿ ನಿಂತುಹೋಗುತ್ತದೆ. ಭಯೋತ್ಪಾದಕರ ಖರ್ಚಿಗೆ ಕೂಡಾ ಹಣವಿಲ್ಲದೇ ಭಯೋತ್ಪಾದನೆ ನಿಂತೇ ಹೋಗುತ್ತದೆ.., ಎನ್ನುವ ಭಾರಿ ಭರವಸೆಗಳನ್ನು ಮೋದಿ ಹಾಗೂ ಅವರ ವೃಂದಗಾಣ ಮಾಡುವ ಭಕ್ತರು ಪ್ರಚಾರ ಮಾಡತೊಡಗಿದರು. ಐವತ್ತು ದಿನಗಳ ಕಾಲ ಸಂಕಷ್ಟ ತಡೆದುಕೊಳ್ಳಿ.. ಎಲ್ಲಾ ಕಪ್ಪು ಹಣ ರದ್ದಾಗಿ ಬರುವ ದಿನಗಳು ಸುಖಮಯವಾಗುತ್ತವೆ.. ಅಕ್ರಮ ಹಣವನ್ನು ಸಕ್ರಮ ಮಾಡಿದಾಗ ರಿಕವರಿ ಆಗುವ ಹಣವನ್ನು ಬಡಜನರ ಅಬ್ಯುದಯಕ್ಕೆ ಬಳಕೆ ಮಾಡಲಾಗುವುದು ಎನ್ನುವ ಮತ್ತೊಂದು ಭ್ರಮೆಯನ್ನು ವ್ಯವಸ್ಥಿತವಾಗಿ ಸೃಷ್ಟಿಸಲಾಯಿತು. ಸಂಕಷ್ಟ ಪೀಡಿತ ಜನರ ಮೂಗಿಗೆ ಬೆನ್ನೆ ಸವರಲಾಯಿತು. ಮಧ್ಯಮ ವರ್ಗದ ಜನರೂ ಸಹ ಇದನ್ನು ನಂಬಿದರು. ದೇಶದ ಒಳಿತಿಗಾಗಿ ತಾವು ಮಾಡುವ ಅಲ್ಪ ತ್ಯಾಗವೆಂದು ನಂಬಿದ ಕೆಲವರು ಬ್ಯಾಂಕಿನ ಸರದಿ ಸಾಲಲ್ಲಿ ನಿಂತು ಕೊಟ್ಟಷ್ಟು ಪಡೆದು ಸಂಕಷ್ಟದಲ್ಲೇ ತೃಪ್ತರಾದರು. ಅದರೆ.. ಅಂದುಕೊಂಡಿದ್ದೇ ಒಂದು.  ಆಗಿದ್ದೇ ಮತ್ತೊಂದು

ಮೋದಿ ಪಟಾಲಂ ಹೇಳಿಕೊಳ್ಳುವಂತೆ ದೇಶದೊಳಗಿನ ಕಪ್ಪು ಹಣ ಬ್ರಹತ್ ಸಂಖ್ಯೆಯಲ್ಲಿ ಹೊರಗೆ ಬರಲೇ ಇಲ್ಲ. ಅದು ಬರುವುದೂ ಇಲ್ಲಾ. ಆದಾಯ ತೆರಿಗೆ ಇಲಾಖೆಯ ಮಾಹಿತಿಯ ಪ್ರಕಾರವೇ ಇಡೀ ದೇಶದಲ್ಲಿ ನಗದು ರೂಪದಲ್ಲಿರುವ ಕಪ್ಪುಹಣ ಶೆ.4 ರಿಂದ ಶೆ.6 ರಷ್ಟಿದೆ. ಈ ರೀತಿ ಕಪ್ಪು ಹಣ ಇರುವವರು ವ್ಯವಸ್ಥೆಯೊಳಗೆ ಇರುವ ದೌರ್ಬಲ್ಯಗಳನ್ನು ಬಳಸಿಕೊಂಡು ತಮ್ಮಲ್ಲಿರವ ಕಪ್ಪು ಹಣವನ್ನೆಲ್ಲಾ ತಿಜೋರಿಯಿಂದ ತೆಗೆದು ಅಡ್ಡದಾರಿಗಳ ಮೂಲಕ ಹೊಸನೋಟುಗಳನ್ನು ಪಡೆದು ಮತ್ತೆ ತಮ್ಮ ಖಜಾನೆಗಳಿಗೆ ಸೇರಿಸಿಕೊಂಡರು. ಸಾಮಾನ್ಯ ಜನರು ತಮ್ಮದೇ ಹಣವನ್ನು ಬ್ಯಾಂಕಿನಿಂದ ಪಡೆಯಲು ಉದ್ದನೆಯ ಲೈನುಗಳಲ್ಲಿ ನಿಂತು ಹರಸಾಹಸಪಡುತ್ತಿರುವಾಗ.. ದೊಡ್ಡ ದೊಡ್ಡ ಬಂಡವಾಳಿಗರು ಬ್ಯಾಂಕು ಮ್ಯಾನೇಜರುಗಳು ಹಾಗೂ ಬ್ಯಾಂಕ್ ಸಿಬ್ಬಂದಿಗಳನ್ನೇ ಆಮಿಷಕ್ಕೆ ಒಳಪಡಿಸಿ ರದ್ದಾದ ನೋಟುಗಳನ್ನು ಕೋಟಿಗಳ ಲೆಕ್ಕದಲ್ಲಿ ಹೊಸ ನೋಟುಗಳಿಗೆ ಬದಲಾಯಿಸಿಕೊಂಡರು. ಇನ್ನು ಕೆಲವು ದುರುಳರು ಬಡವರು ಹಾಗೂ ಮಧ್ಯಮ ವರ್ಗದವರ ಅಕೌಂಟುಗಳಿಗೆ ತಮ್ಮ ಹಳೆಯ ನೋಟುಗಳನ್ನು ಹಾಕಿಸಿ.. ಹೊಸ ನೋಟುಗಳನ್ನು ಮರಳಿ  ಪಡೆದು ತಮ್ಮ ಸಂಪತ್ತನ್ನು ಸೇಫ್ ಮಾಡಿಕೊಂಡರು. ಅಧಿಕಾರಿಗಳಾದ ಜಯಚಂದ್ರ, ಚಿಕ್ಕರಾಯಪ್ಪ ಹಾಗೂ ಅವರ ಜೊತೆಗಾರ ಗುತ್ತಿಗೆದಾರರ ಮನೆಯಲ್ಲಿ ಕೊಟ್ಯಾಂತರ ರೂಪಾಯಿ ಹೊಸ ನೋಟುಗಳು ದೊರೆತವು. ಒಂದೇ ಒಂದು ಸಲವೂ ಬ್ಯಾಂಕಿನ ಮುಂದೆ ಸರದಿಯಲ್ಲಿ ನಿಲ್ಲದ ಇಂತಹ ಸಹಸ್ರಾರು ಅಧಿಕಾರಿಗಳು, ಗುತ್ತಿಗೆದಾರರು, ಸಿರಿವಂತರುಗಳು ತಮ್ಮ ಅಗಣಿತ ಹಣವನ್ನು ಅಕ್ರಮ ಮಾರ್ಗಗಳಲ್ಲಿ ಬದಲಾಯಿಸಿಕೊಂಡರು. ಇನ್ನೊಬ್ಬ ಅಧಿಕಾರಿ ಭೀಮಾನಾಯಕ್ ಜನಾರ್ಧನ ರೆಡ್ಡಿ ಮಗಳ ಮದುವೆಗೆ ನೂರು ಕೋಟಿ ಬೆಲೆಯ ರದ್ದಾದ ನೋಟುಗಳನ್ನು ಹೊಸ ನೋಟಿಗೆ ಬದಲಾಯಿಸಿಕೊಟ್ಟಿದ್ದನ್ನು ಭೀಮಾನಾಯಕ್ ಕಾರ್ ಡ್ರೈವರ್ ರಮೇಶ್ ಎನ್ನುವಾತ ವಿವರವಾಗಿ ಬರೆದಿಟ್ಟು ಸತ್ತಿದ್ದಾನೆ. ಚೆನೈನಲ್ಲಿ  ಮರಳುದಣಿ ಶೇಖರ್ ರೆಡ್ಡಿ ಎನ್ನುವ ಉದ್ಯಮಿ ಹಾಗೂ ಅವನ ಸಹಚರರಿಂದ ವಶಪಡಿಸಿಕೊಂಡ 90 ಕೋಟಿ ಬ್ರಹತ್ ಪ್ರಮಾಣದ ಹಣದಲ್ಲಿ ಹತ್ತು ಕೋಟು ರೂಪಾಯಿಗಳಷ್ಟು ಹೊಸದಾದ ಎರಡು ಸಾವಿರ ರೂಪಾ ನೋಟುಗಳು ಸೇರಿವೆ. ಅದು ಹೇಗೆ ಹಳೆಯ ನೋಟುಗಳನ್ನು ಈ ದಗಾಕೋರರು ಅಡ್ಡದಾರಿಯಲ್ಲಿ ಹೊಸ ನೋಟನ್ನಾಗಿ ಪರಿವರ್ತಿಸುತ್ತಾರೆ ಎನ್ನುವುದಕ್ಕೆ ಸಾಕ್ಷಿಗಳು ಅಲ್ಲಲ್ಲಿ ದೊರೆಯುತ್ತಿವೆ. ಅಂದರೆ ಅಕ್ರಮವಾಗಿ ಸಂಗ್ರಹವಾಗಿದ್ದ ಹಳೆಯ ನೋಟುಗಳು ನಾಶವಾಗುವ ಬದಲಾಗಿ ಹೊಸನೋಟಾಗಿ ಪರಿವರ್ತನೆಗೊಂಡು ಮತ್ತೆ ಕಪ್ಪುಹಣವಾಗಿಯೇ ಭಾಗ್ಯವಂತರ ಪೆಟ್ಟಿಗೆ ಸೇರುತ್ತಿರುವುದು ಈಗಾಗಲೇ ಸಾಬೀತಾಗಿದೆ.

ಇಷ್ಟಕ್ಕೂ ಹೀಗೆ ತೆರಿಗೆ ಇಲಾಖೆಗಳ ದಾಳಿಗಳಿಂದಲೇ ಕಪ್ಪು ಹಣ ಹೊರಗೆ ತಂದು ಕಾಳಧನಿಕರನ್ನು ಮಟ್ಟಹಾಕುವುದಿದ್ದರೆ ಈ ನೋಟು ರದ್ದತಿಯ ಪ್ರಹಸನವಾದರೂ ಯಾಕೆ ಬೇಕಾಗಿತ್ತು. ತೆರಿಗೆ ಇಲಾಖೆಗೆ ದಂಡ ಕಟ್ಟಿ ಅಕ್ರಮ ಸಂಪಾದನೆಯನ್ನು ಸಕ್ರಮ ಮಾಡಿಕೊಳ್ಳಲು ಸರಕಾರವೇ ಅಧೀಕೃತವಾಗಿ ಅವಕಾಶ ಮಾಡಿಕೊಟ್ಟಿದ್ದರಿಂದ ಜನರನ್ನು ಶೋಷಿಸಿ ಸಂಪಾದಿಸಿದ ಕಳ್ಳ ಕದೀಮರಿಗೆ ಶಿಕ್ಷೆ ಇಲ್ಲದಂತಾಗಿದ್ದಷ್ಟೇ ಅಲ್ಲಾ ಅಂತಾ ಬಲುಗಳ್ಳರ ಹೆಸರನ್ನೂ ಗೌಪ್ಯವಾಗಿಟ್ಟು ಸರಕಾರ ಕಳ್ಳಕಾಕರ ರಕ್ಷಣೆಗೆ ನಿಂತಿದ್ದು ಸೂರ್ಯ ಸತ್ಯವಾಗಿರುವಾಗ ಈ ಆರ್ಥಿಕ ಸರ್ಜಿಕಲ್ ಸ್ಟ್ರೈಕ್ ನಡೆಸಿ ಜನಸಾಮಾನ್ಯರನ್ನ್ಯಾಕೆ ಹೀಗೆ ಗೋಳು ಹೋಯ್ದುಕೊಳ್ಳಬೇಕಿತ್ತು? ನೋಟು ರದ್ದು ಮಾಡಿ ಹೊಸ ನೋಟು ವಿತರಿಸಿದರೆ ಕಪ್ಪುಹಣ ನಿಲ್ಲುತ್ತದೆ ಎನ್ನುವುದು ದಿಟವಾದರೆ ಈಗ ದಿನನಿತ್ಯ ಕಾಳಧನಿಕರ ಮನೆಯನ್ನು ರೇಡ್ ಮಾಡಿ ಹಿಡಿಯುವ ಅಗತ್ಯವಾದರೂ ಏನಿತ್ತು? ಅಂದರೆ.. ಕೆಲವು ಕಳ್ಳರಿನ್ನು ಹಿಡಿಯಲು ಬಹುಸಂಖ್ಯಾತ ಜನರ ಬದುಕನ್ನೇ ಅಲ್ಲೋಲ ಕಲ್ಲೋಲ ಮಾಡಿದ್ದು ಅಕ್ಷಮ್ಯ. ಮೊಸಳೆಗಳ ಹಿಡಿಯಲೆಂದು ಕೆರೆಯ ನೀರನ್ನು ಬರಿದುಗೊಳಿಸಿ ಮೀನುಗಳು ಉಸಿರುಗಟ್ಟುವಂತೆ ಮಾಡುವ ಹುನ್ನಾರವಿದು. ಈಗ ಆಗಿದ್ದೂ ಅದೇ.. ಮೊಸಳೆಗಳು ತಮ್ಮ ತಂತ್ರ ಬದಲಾಯಿಸಿ ಬದುಕಿದವು. ಆದರೆ.. ಏನೂ ಅರಿಯದ ಅಮಾಯಕ ಮೀನುಗಳು ಬದುಕಲು ಏದುಸಿರು ಬಿಡತೊಡಗಿದವು. ಕಳೆದ ಒಂದು ತಿಂಗಳ ದೇಶದ ವಿದ್ಯಮಾನಗಳನ್ನು ಗಮನಿಸಿದರೆ ಈ ಮೊಸಳೆ ಮತ್ತು ಮೀನಿನ ಉದಾಹರಣೆ ಸೂಕ್ತವೆನಿಸುತ್ತದೆ. ದೇಶವಾಳುವ ಪ್ರಭುಗಳ ಹುಚ್ಚಾಟ ಮಿತಿಮೀರುತ್ತಿದೆ. ಜನಸಾಮಾನ್ಯರ ಪರದಾಟ ಅತಿಯಾಗುತ್ತಿದೆ.


ಅಂದರೆ.. ನೋಟು ಅಮಾನ್ಯೀಕರಣದಿಂದಾ ದೇಶದ ಬಹುತೇಕ ಕಪ್ಪು ಹಣವೆಲ್ಲಾ ಕರಗಿಹೋಗಿ ದೇಶ ಸುಭೀಕ್ಷೆಯಾಗುತ್ತದೆ.. ಬಹುತೇಕ ಶ್ರೀಮಂತರೆಲ್ಲಾ ಬೀದಿಗೆ ಬರುತ್ತಾರೆ ಎಂದು ಭಾಷಣಗಳಲ್ಲೆಲ್ಲಾ ಬಾಯಿಬಡಿದುಕೊಂಡ ಈ ದೇಶದ ಪ್ರಧಾನಿಗಳು ಬಡಾಯಿ ಕೊಚ್ಚಿಕೊಂಡಂತೆ ಏನೂ ಆಗಲೇ ಇಲ್ಲಾ. ಕಪ್ಪು ಹಣ ನಾಶವೂ ಆಗಲಿಲ್ಲ.. ಹೊರಬಂದು ದಂಡ ತೆರಿಗೆ ಪಾವತಿಸಿ ಬಿಳಿಯಾಗಲಿಲ್ಲ. ಅಕಸ್ಮಾತ್ ಆಗಿದ್ದರೂ ಒಟ್ಟು ಹಣದಲ್ಲಿ ಅದು ನಗಣ್ಯವಾಗಿದೆ. ಇದರಿಂದಾಗಿ ಜನಸಾಮಾನ್ಯರಂತೆಯೇ ಮೋದಿಗೂ ಸಹ ಅಪಾರವಾದ ನಿರಾಶೆಯಾಗಿದ್ದಂತೂ ಸತ್ಯ. ಕಾನೂನಾತ್ಮಕವಾಗಿ ತಾನೇನೆ  ಮಾಡಿದರೂ ಈ ಖದೀಮರು ಒಳದಾರಿಗಳನ್ನು ಹುಡುಕುಕೊಳ್ಳುತ್ತಿರುವುದು ಮೋದಿಗೆ ನುಂಗಲಾರದ ತುತ್ತಾಗಿದೆ. ದೇಶದ ಮುಂದೆ ಮತ್ತೊಮ್ಮೆ ಸುಳ್ಳುಗಾರನಾಗಿ ನಿಲ್ಲಬೇಕಾದ ಅನಿವಾರ್ಯತೆ ಇದೆ. ದೇಶದಲ್ಲಿ ಒಟ್ಟು ಹದಿನೈದು ಲಕ್ಷ ಕೋಟಿಯಷ್ಟು ದೊಡ್ಡ ಮೊತ್ತದ ನೋಟುಗಳಿದ್ದವು. ಅದರಲ್ಲಿ ಶೆ.86ರಷ್ಟು ಮೌಲ್ಯದ ಐನೂರು ಹಾಗೂ ಸಾವಿರ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. ಶೆ.14ರಷ್ಟು ನೋಟುಗಳು ಅಕ್ರಮವಾಗಿ ಕೂಡಿಡಲ್ಪಟ್ಟಿತ್ತು. ಇದು ಗೊತ್ತಿಲ್ಲದಷ್ಟು ಮುಗ್ದರೇನಲ್ಲ ಮೋದಿ. ಆದರೆ. ಭಾರೀ ಮೊತ್ತ ಕಪ್ಪುಹಣವಾಗಿದೆ. ಅದನ್ನೆಲ್ಲಾ ಹೊರಗೆ ತಂದೇ ತೀರುವೆ ಎಂದು ಜನರನ್ನು ನಂಬಿಸುವ ಪ್ರಯತ್ನವನ್ನು ಮಾಡಿ ವಿದೇಶಿ ಬ್ಯಾಂಕಿನಲ್ಲಿರುವ ಕಪ್ಪು ಹಣವನ್ನು ತರುವಲ್ಲಿ ಆದ ವಿಫಲತೆಯನ್ನು ಮರೆಸುವ ಪ್ರಯತ್ನವನ್ನು ಮಾಡಲಾಯಿತು. ಹಿಂದೆ ಮುಂದೆ ಗೊತ್ತಿಲ್ಲದ ಜನರೂ ಸಹ ಮೊದಮೊದಲು ಮೋದಿ ಮಾತಿಗೆ ತಲೆದೂಗಿದರು.

ಹಾಗಾದರೆ ಈ ದೇಶದಲ್ಲಿ ಕಪ್ಪು ಹಣವೇ ಇಲ್ಲವಾ? ಯಾಕಿಲ್ಲ... ಇದೆ.. ಬೇಕಾದಷ್ಟು ಇದೆ. ಆದರೆ ಅದೆಲ್ಲವೂ ನಗದು ರೂಪದಲ್ಲಿಲ್ಲ. ಹಾಗೂ ನೋಟಿನ ರೂಪದಲ್ಲಿ ನೂರಾರು ಕೋಟಿಗಳನ್ನು ಮನೆಯಲ್ಲಿಟ್ಟುಕೊಳ್ಳುವಷ್ಟು ಕಾಳಧನಿಕರು ಮೂರ್ಖರೂ ಅಲ್ಲಾ. ಯಾವಾಗ ಆದಾಯ ತೆರಿಗೆ ಇಲಾಖೆಯ ದಾಳಿಯಾಗುತ್ತದೋ ಎನ್ನುವ ಆತಂಕ ತೆರಿಗೆ ಕಳ್ಳರಿಗೆ ಸದಾ ಇದ್ದೇ ಇರುತ್ತದೆ. ಆದ್ದರಿಂದ ಭಾರತೀಯ ಕಪ್ಪುಹಣವು ಬೇನಾಮಿ ಆಸ್ತಿ ಹಾಗೂ ಸಂಪತ್ತಿನ ರೂಪದಲ್ಲಿದೆ. ವಿದೇಶಿ ಬ್ಯಾಂಕುಗಳಲ್ಲಿ ಡಾಲರ್ ರೂಪದಲ್ಲಿ ಭದ್ರವಾಗಿದೆ. ಪನಾಮಾ ಬೋಗಸ್ ಕಂಪನಿಗಳಲ್ಲಿ ತೊಡಗಿಸಿಕೊಂಡಿದೆ. ಆದರೆ.. ಇದೆಲ್ಲವುಳನ್ನು ಜಪ್ತಿ ಮಾಡುವುದು ಬಿಟ್ಟು... ಶೇ.96 ರಷ್ಟಿರುವ ಅನಧೀಕೃತ ಬೇನಾಮಿ ಆಸ್ತಿಗಳ ಮೇಲೆ ಕ್ರಮ ತೆಗೆದುಕೊಳ್ಳುವುದು ಬಿಟ್ಟು ಶೆ.4 ರಷ್ಟಿರುವ ಕಪ್ಪು ಹಣವನ್ನು ಹೊರತೆಗೆಯುತ್ತೇನೆಂದು ಕೊಟ್ಯಾಂತರ ಜನರ ದಿನನಿತ್ಯದ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಮೋದಿ ಮಹಾತ್ಮರ ಲೀಲೆ ಅತಿರೇಕವೆನಿಸುತ್ತದೆ. 

ಆದರೆ ಮೋದಿ ವರಸೆ ಹಾಗೂ ಭರವಸೆಗಳೆಲ್ಲಾ ಹುಸಿ ಎಂಬುದು ತಿಳಿಯಲು ಜನರಿಗೆ ಈ ಒಂದು ತಿಂಗಳು ಸಾಕಾಗಿತ್ತು. ಯಾಕೆಂದರೆ ದೇಶದಲ್ಲಿ ಯಾವುದೇ ಕಪ್ಪು ಹಣ ಕ್ಯಾಶ್ ರೂಪದಲ್ಲಿ ಇರಲೇ ಇಲ್ಲ. ಅದೆಲ್ಲವೂ ಭೂಮಿ ಬಂಗಾರ ಡಾಲರ್ ರೂಪದಲ್ಲಿ ಸೇಫಾಗಿತ್ತು. ಕ್ಯಾಶ್ ರೂಪದಲ್ಲಿದ್ದರೂ ಅದೂ ಸಹ ಶೆ.3 ರಷ್ಟಿತ್ತು. ದೇಶದಲ್ಲಿರುವ ದೊಡ್ಡಮೊತ್ತದ ಒಟ್ಟು ಹದಿನೈದು ಲಕ್ಷ ಕೋಟಿಯಲ್ಲಿ ಕಳೆದ ಮೂವತ್ತು ದಿನಗಳಲ್ಲಿ  ಹನ್ನೊಂದುವರೆ ಲಕ್ಷ ಕೋಟಿ ಹಣ ಬ್ಯಾಂಕಿಗೆ ಹರಿದು  ಬಂದಿದೆ ಹಾಗೂ ಹೊಸ ನೋಟಾಗಿ ಬದಲಾವಣೆಗೊಂಡಿದೆ. ಅಂದರೆ ಶೇ.76 ರಷ್ಟು ಹಣ ಅಧೀಕೃತವಾಗಿಯೇ ಬದಲಾವಣೆಗೊಳಗಾಗಿದೆ. ಬಾಕಿ ಹಣ ಬರಲು ಇನ್ನೂ ಇಪ್ಪತ್ತು ದಿನ ಸಮಯವೂ ಇದೆ. ಅಂದರೆ.. ಹಳೆಯ ನೋಟು ಅಮಾನ್ಯ ಮಾಡಿ ಹೊಸ ನೋಟನ್ನು ಕೊಟ್ಟಿದ್ದರಿಂದ ಬಂದ ಭಾಗ್ಯವಾದರೂ ಏನು? ಪೆಟ್ಟಿಗೆಯಲ್ಲಿ ಸಂಗ್ರಹಗೊಂಡಿದ್ದ ಹಣ ಹೊರಗೆ ಬಂದು ಚಲಾವಣೆಗೆ ತರಲಾಯಿತಲ್ಲಾ ಎಂದು ಮೋದಿ ಭಕ್ತರು ಸಮಾಧಾನ ಹೇಳುತ್ತಿದ್ದಾರೆ. ಆದರೆ.. ಹಾಗೆ ಹೊರಗೆ ಬಂದು ಯಾವುಯಾವುದೋ ರೂಪದಲ್ಲಿ ಜಮಾ ಆದ ಹಣವು ಹೊಸ ನೋಟಾಗಿ ಪರಿವರ್ತನೆಗೊಂಡು ಮತ್ತೆ ಮೊದಲು ಎಲ್ಲಿತ್ತೋ ಅಲ್ಲಿಯೇ ಹೋಗಿ ಸೇರುತ್ತದೆ ಎನ್ನುವ ಸಾಮಾನ್ಯ ಜ್ಞಾನವೂ ಪಂಚೇಂದ್ರಿಯಗಳನ್ನು  ಮೋದಿಗೆ ಅಡವಿಟ್ಟ ಈ ಭಕ್ತಮಹಾಶಯರಿಗೆ ತಿಳಿಯಲು ಹೇಗೆ ಸಾಧ್ಯ? ಯಾವಾಗ ನೋಟು ಅಮೌಲ್ಯೀಕರಣದಿಂದಾಗಿ ಕಪ್ಪುನೋಟಿನ ಸಂಗ್ರಹ ನಾಶವಾಗುತ್ತದೆಂದು ಸರಕಾರವು ಭಾವಿಸಿತ್ತೋ ಅದು ಆಗದಿದ್ದಾಗ ತೆರಿಗೆ ಕಳ್ಳರಿಗೆ ದಂಡ ಹಾಕಿ ಕ್ಷಮಾಧಾನ ಯೋಜನೆಯೊಂದನ್ನು ಘೋಷಿಸಿತು. ಆದರೆ..  ಈ ಯೋಜನೆಯಡಿಯಲ್ಲಿ ಘೋಷಣೆಯಾದ ಕಪ್ಪುಹಣವೂ ಸಹ ನಗಣ್ಯವಾಗಿ ಸರಕಾರದ ಈ ಯೋಜನೆಯೂ ವಿಫಲವಾಯಿತು.

ಯಾವಾಗ ನೋಟು ಅಮಾನ್ಯತೆ ಹಾಗೂ ಕಾಳಧನಿಕರಿಗೆ ಕ್ಷಮಾಧಾನ ಎನ್ನುವ ಮಹತ್ವಾಂಕಾಂಕ್ಷಿ ಯೋಜನೆಗಳು ವಿಫಲವಾದವೋ ಆಗ ಮೋದಿ ಮಂಡಳಿಗೆ ಮುಖಭಂಗವಾಗುವುದರಿಂದ ತಪ್ಪಿಸಿಕೊಳ್ಳಲು ಬೇರೆ ಅಸ್ತ್ರ ಬೇಕಿತ್ತು. ಆಗ ಕ್ಯಾಶಲೆಸ್ ಅಸ್ತ್ರ ಪ್ರಯೋಗಿಸಲಾಯಿತು. ಬಡವರು, ಅನಕ್ಷರಸ್ತರು, ಅಲೆಮಾರಿ ಹಾಗೂ ಬುಡಕಟ್ಟು ಸಮುದಾಯಗಳು ಬಹುಸಂಖ್ಯೆಯಲ್ಲಿರುವ ಭಾರತದಂತಹ ಗ್ರಾಮ್ಯ ಪ್ರಧಾನ ದೇಶದಲ್ಲಿ ಮಾಡರ್ನ ತಂತ್ರಜ್ಞಾನದ ಅವಿಷ್ಕಾರವಾದ ಈ ಮೊಬೈಲ್ ಬ್ಯಾಂಕಿಂಗ್ ಹಾಗೂ ಕಾರ್ಡ ಸ್ವೈಂಪಿಂಗಗಳು ಪ್ರಯೋಜನಕ್ಕೆ ಬರುವಂತಹುದಲ್ಲಾ. ದೇಶದ ಜನರನ್ನು ಅಕ್ಷರಸ್ತರನ್ನಾಗಿ ಹಾಗೂ ಆರ್ಥಿಕವಾಗಿ ಸಬಲರನ್ನಾಗಿ ಮಾಡದ ಹೊರತು ಈ ತಂತ್ರಜ್ಞಾನವು ಕೆಳವರ್ಗದ ಜನರಿಗೆ ದಕ್ಕುವಂತಹುದಲ್ಲಾ. ಇದೆಲ್ಲಾ ಗೊತ್ತಿದ್ದರೂ ತಮ್ಮ ತಪ್ಪುಗಳನ್ನು ಮುಚ್ಚಲು ಕ್ಯಾಶಲೆಸ್ ವಹಿವಾಟನ್ನು ಘೋಷಿಸಿ ಕಳೆದುಹೋಗುತ್ತಿರುವ ಮರ್ಯಾದೆಯನ್ನು ಮತ್ತೆ ಗಳಿಸಿಕೊಳ್ಳುವ ವ್ಯರ್ಥ ಪ್ರಯತ್ನವನ್ನು ಮೋದಿ ಹಾಗೂ ಅವರ ಸಮರ್ಥಕ ಪಡೆ ಮಾಡುತ್ತಿದೆ. ಇದು ಹೇಗಿದೆ ಎಂದರೆ ಒಂದು ತಪ್ಪನ್ನು ಮುಚ್ಚಲು ಇನ್ನೊಂದು ತಪ್ಪನ್ನು ಮಾಡುತ್ತಲೇ ಇಡೀ ವ್ಯವಸ್ಥೆಯನ್ನೆ ಹದಗೆಡಿಸಿ ಜನಸಾಮಾನ್ಯರ ಬದುಕಿನ ಜೊತೆಗೆ ಚೆಲ್ಲಾಟವಾಡುವಂತಿದೆ.

ಕೋಟಾ ನೋಟಿನ ದಂದೆ ಸಂಪೂರ್ಣ ನಿಂತು ಹೋಗುತ್ತದೆ ಹಾಗೂ ಭಯೋತ್ಪಾದಕರಿಗೆ ಹಣಕಾಸಿನ ಮುಗ್ಗಟ್ಟು ಉಂಟಾಗಿ ಭಯೋತ್ಪಾದನೆ ಬಂದಾಗುತ್ತದೆ ಎನ್ನುವ ಇನ್ನೆರಡು ತಲೆಬುಡವಿಲ್ಲದ ಸಿದ್ದಾಂತಗಳನ್ನು ಮೋದಿ ಪಡೆ ಪ್ರಚಾರಗೊಳಿಸುತ್ತಿದೆ. ಆದರೆ.. ಇವರೆಲ್ಲಾ ಹೇಳುತ್ತಿರುವ ಕಣ್ಕಟ್ಟಿನ ಹಿಂದೆ ಸತ್ಯ ಬೇರೆಯಾಗಿದೆ. ದೇಶದಲ್ಲಿ ಚಲಾವಣೆಯಲ್ಲಿರುವ ಒಟ್ಟು ಕೋಟಾ ನೋಟುಗಳ ಸಂಖ್ಯೆ ಶೆ.0002 ರಷ್ಟಾಗಿದೆ. ಅಂದರೆ ಒಟ್ಟು ಚಲಾವಣೆಯಲ್ಲಿರುವ ಮೊತ್ತದಲ್ಲಿ ನಾನೂರು ಕೋಟಿಯಷ್ಟು ನಕಲಿ ನೋಟುಗಳಿವೆ. ಈ ನಾನೂರು ಕೋಟಿ ನಕಲಿ ನೋಟು ರದ್ದು ಮಾಡಲು ಹದಿನೈದು ಲಕ್ಷ ಕೋಟಿ ನೋಟುಗಳನ್ನು ಬ್ಯಾನ್ ಮಾಡುವುದು ನಿಜಕ್ಕೂ ಹುಚ್ಚಾಟವಲ್ಲದೇ ಮತ್ತೇನು? ಇಷ್ಟಕ್ಕೂ ಕೋಟಾ ನೋಟು ದಂದೆ ನಿಲ್ಲಲು ಸಾಧ್ಯವೇ ಇಲ್ಲಾ. ಹೊಸನೋಟು ಬಂದ ಹತ್ತೇ ದಿನಗಳಲ್ಲಿ ನಕಲಿ  ನೋಟುಗಳು ಪತ್ತೆಯಾಗಿವೆ. ದೊಡ್ಡ ಸಂಖ್ಯೆಯಲ್ಲಿ ಹೊಸ ನೋಟುಗಳನ್ನು ಮುದ್ರಿಸಲು ದಂದೆಕೋರರಿಗೆ ಒಂದೆರಡು ತಿಂಗಳು ಸಮಯ ಬೇಕಾಗಬಹುದಷ್ಟೇ. ಪಾಕಿಸ್ತಾನವೇ ಭಾರತದ ನೋಟುಗಳನ್ನು ನಕಲಿ ಮಾಡಿ ಈ  ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡುತ್ತದೆ ಎನ್ನುವುದು ನಿಜವಾದರೆ ಈಗ ಹೊರತರುತ್ತಿರುವ ನೋಟುಗಳನ್ನೂ ನಕಲಿ ಮಾಡಲು ಸಾಧ್ಯವಿಲ್ಲ ಎಂದು ಹೇಳುವುದು ಮೂರ್ಖತನವಾಗುತ್ತದೆ. ಹೊಸ ನೋಟಿನಲ್ಲಿ ಚಿಪ್ ಇದೆ ಎನ್ನುವುದೆಲ್ಲಾ ಕಪೋಲಕಲ್ಪಿತ ಮಾತುಗಳಷ್ಟೇ. ಎರಡುಮೂರು ತಿಂಗಳ ನಂತರ ಮತ್ತೆ ನಕಲಿ ನೋಟುಗಳ ಹಾವಳಿ ಶುರುವಾಗುತ್ತದೆ. ಇನ್ನು ಭಯೋತ್ಪದನೆ ತೊಲಗುತ್ತದೆ ಎನ್ನುವವರು ಜನಸಾಮಾನ್ಯರ ಕಿವಿಯ ಮೇಲೆ ಹಿಮಾಲಯ ಪರ್ವತ ಇಡುವ ಹುನ್ನಾರ ಮಾಡುವಷ್ಟೇ ಸತ್ಯ. ಯಾಕೆಂದರೆ ನೋಟು ರದ್ದಿನ ನಂತರವೂ ಭಯೋತ್ಪಾದಕ ದಾಳಿಗಳಾಗಿವೆ. ನಮ್ಮ ಯೋಧರು ಕೊಲೆಯಾಗಿದ್ದಾರೆ ಹಾಗೂ ಆ ಭಯೋತ್ಪಾದಕ ಜಿಹಾದಿಗಳ ಜೇಬಿನಲ್ಲಿ ಹೊಸ ಎರಡುಸಾವಿರದ ನೋಟುಗಳು ಪತ್ತೆಯಾಗಿವೆ. ಹಾಗೂ ಪಾಕಿಸ್ಥಾನ ಪ್ರಾಯೋಜಿತ ಭಯೋತ್ಪಾದನೆಗೆ ಹಣ ರೂಪಾಯಿಗಳಲ್ಲೇ ಬರಬೇಕೆಂದೇನಿಲ್ಲ. ಡಾಲರ್ ಗಳನ್ನು ರೂಪಾಯಿಗಳಲ್ಲಿ ಬದಲಾಯಿಸಿ ಜಿಹಾದಿಗಳಿಗೆ ಒದಗಿಸಲಾಗುತ್ತದೆ. ಹಣಕಾಸಿನ ವಿಷಯಕ್ಕಾಗಿಯೇ ಭಯೋತ್ಪಾದನೆ ನಡೆಯುತ್ತದೆ ಎನ್ನುವುದು ಅರ್ಥಹೀನ ತರ್ಕ.. ಹಣಕಾಸಿನ ಕೊರತೆಯಿಂದಾಗಿ ಭಯೋತ್ಪಾದನೆ ನಿಲ್ಲುತ್ತದೆ ಎನ್ನುವುದಂತೂ ಹಾಸ್ಯಾಸ್ಪದವಾಗಿದೆ. ಭಕ್ತರು ಬಾಲಿಷವಾಗಿ ಅದೆಷ್ಟೇ ಸಮರ್ಥನೆಗಳನ್ನು  ಕೊಟ್ಟರೂ ಅವುಗಳೆಲ್ಲವೂ ಸುಳ್ಳು ಎನ್ನುವುದನ್ನು ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ತೋರಿಸುತ್ತವೆ. ಸದುದ್ದೇಶವಿಲ್ಲದೇ ಮಾಡುವ ಯಾವುದೇ ಕೆಲಸಗಳೂ ಫಲಕಾರಿಯಾಗುವುದಿಲ್ಲ ಎನ್ನುವ ಸತ್ಯವನ್ನು ಈ ಮೋದಿ ಆಂಡ್ ಕಂಪನಿ ಅರ್ಥ ಮಾಡಿಕೊಳ್ಳಬೇಕಿದೆ. ಇನ್ನು ಬ್ರಷ್ಟಾಚಾರ ಕೊನೆಯಾಗುತ್ತದೆ ಎನ್ನುವ ವದಂತಿಯನ್ನೂ ಭಕ್ತರು ಹಬ್ಬಿಸುತ್ತಿದ್ದಾರೆ. ಕಾಳಧನಿಕರು ಬ್ಯಾಂಕ್ ಮ್ಯಾನೇಜರುಗಳಿಗೆ ಕಮಿಶನ್ ಫಿಕ್ಸ್ ಮಾಡಿ ಹಳೆ ನೋಟುಗಳನ್ನು ಹೊಸದಕ್ಕೆ ಬದಲಾಯಿಸಿಕೊಳ್ಳುವುದೇ ಹೊಸ ರೀತಿಯ ಭ್ರಷ್ಟಾಚಾರದ ಉಗಮಕ್ಕೆ ಪರಮ ಸಾಕ್ಷಿಯಾಗಿದೆ. ಇನ್ನೇನು ಲಂಚ ರುಶುವತ್ತುಗಳಿಲ್ಲದೇ ಯಾವ ನೌಕರಶಾಹಿ ಹಾಗೂ ಅಧಿಕಾರಶಾಹಿಗಳು ಕೆಲಸ ಮಾಡಲು ಸಾಧ್ಯವೇ ಇಲ್ಲಾ. ಇಡೀ ಆಡಳಿತ ವ್ಯವಸ್ಥೆಯೇ ಕರಪ್ಟ್ ಆಗಿರುವಾಗ ಬರೀ ನೋಟುಗಳ ಬದಲಾವಣೆ ಮಾಡಿದರೆ ಬ್ರಷ್ಟಾಚಾರ ತೊಲಗಲು ಸಾಧ್ಯವೆ?   


ನೋಟು ಅಮಾನ್ಯತೆಯಿಂದಾಗಿ ಆದ ಅನಾಹುತಗಳ ಪಟ್ಟಿ ಬಲು ದೊಡ್ಡದಿದೆ. ದೇಶದ ಡಿಜಿಪಿ ಬೆಳವಣಿಗೆ ಕುಸಿದಿದೆ. ದೇಶವಾಸಿಗಳಿಗೆ ಹಣದ ಕೊರತೆಯುಂಟಾಗಿ ತಮ್ಮದೇ ಹಣವನ್ನು ಪಡೆದುಕೊಳ್ಳಲು ಬ್ಯಾಂಕು ಎಟಿಎಂ ಗಳ ಮುಂದೆ ಸರದಿಯಲ್ಲಿ ನಿಂತು ಅಪಾರವಾದ ಮಾನವ ಸಂಪನ್ಮೂಲ ಅಪವ್ಯಯ ಆಗುತ್ತಿದೆ. ದಿನನಿತ್ಯದ ಅಗತ್ಯಗಳಿಗೆ ಹಣವಿಲ್ಲದೇ ಬಡ ಕೂಲಿಕಾರ ಜನರು ಪರದಾಡುತ್ತಿದ್ದಾರೆ. ಪಟ್ಟಣಗಳಲ್ಲಿ ಕೆಲಸಕ್ಕೆಂದು ವಲಸೆಬಂದವರಿಗೆ ಸಂಬಳ ಕೊಡಲು ಕೆಲಸದಾತರು ಅಸಹಾಯಕರಾಗಿದ್ದರಿಂದಾಗಿ ಕೂಲಿಯಾಳುಗಳು ನಿರಾಶೆಯಿಂದಾ ಕೆಲಸಗೇಡಿಗಳಾಗಿ ತಮ್ಮ ಊರುಗಳಿಗೆ ವಾಪಸ್ ಹೋಗುತ್ತಿದ್ದಾರೆ. ಹಲವಾರು ಕಂಪನಿಗಳು ಸಂಬಳಕೊಡಲು ಆಗದೇ ಅನೇಕ ಉದ್ಯೋಗಿಗಳನ್ನು ಕಡಿತಗೊಳಿಸುತ್ತಿದ್ದಾರೆ. ನಿರುದ್ಯೋಗ ಎನ್ನುವುದು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕಾಪೋರೇಟ್ ಕಂಪನಿಗಳು ಉದ್ಯೋಗ ಸೃಷ್ಟಿಯನ್ನು ಕೈಬಿಟ್ಟಿವೆ. ಇರುವ ಉದ್ಯೋಗಿಗಳಿಗೂ ಯಾವತ್ತು ಕೆಲಸಕ್ಕೆ ಕುತ್ತು ಬರುತ್ತದೋ ಎನ್ನುವ ಆತಂಕ ಕಾಡುತ್ತಿದೆ. ಹಣದ ಒಳಹೊರ ಹರಿವು ನಿರ್ಬಂಧವಾಗಿದ್ದರಿಂದಾಗಿ ದೇಶಾದ್ಯಂತ ಉತ್ಪಾದನೆ ಕುಸಿದಿದೆ. ವ್ಯಾಪಾರ ವಹಿವಾಟುಗಳು ಅರ್ಧಕ್ಕರ್ಧ ನಿಂತಿವೆ. ಆಹಾರೋತ್ಪನ್ನಗಳ ವಹಿವಾಟುಗಳು ಎಪಿಎಂಸಿಗಳಲ್ಲಿ ಶೆಕಡಾ ನಲವತ್ತರಷ್ಟು ಕುಸಿದಿದೆ. ರೈತಾಪಿ ಜನರಿಗೆ ತೀವ್ರವಾದ ಅನಾನುಕೂಲವಾಗಿ ಇಡೀ ಕೃಷಿ ಕ್ಷೇತ್ರವೇ ತತ್ತರಿಸುತ್ತಿದೆ. ಆಯೋಜನೆಗೊಂಡ ಅನೇಕಾನೇಕ ಮದುವೆಗಳು ಮುರಿದುಬಿದ್ದು ಇಲ್ಲವೇ ಮುಂದಕ್ಕೆ ಹೋಗಿ ಜನರ ಕೌಟುಂಬಿಕ ಭಾವನೆಗಳಿಗೆ ದಕ್ಕೆಯಾಗಿದೆ ಹಾಗೂ ಸಂಬಂಧಗಳು ಹಳಸುತ್ತಿವೆ. ಅಗತ್ಯವಾದ ಹಣ ಸಿಗದೇ ಜನರಲ್ಲಿ ಕೊಂಡುಕೊಳ್ಳುವ ಶಕ್ತಿ ಕ್ಷೀಣಗೊಂಡು ಚಿಕ್ಕಪುಟ್ಟ ವ್ಯಾಪಾರಸ್ತರಷ್ಟೇ ಅಲ್ಲಾ ಮಾಲ್‌ಗಳಲ್ಲಿ ಕೂಡಾ ವ್ಯಾಪಾರ ವಹಿವಾಟು ಕುಸಿದು ವ್ಯಾಪಾರಸ್ತರ ಆದಾಯ ಗಣನೀಯ ಪ್ರಮಾಣದಲ್ಲಿ  ಕುಸಿದಿದೆ. ಜನರಲ್ಲಿ ಹಣ ಇದ್ದರೂ ಬಳಕೆಗೆ ಸಿಗದಂತಾಗಿ ಉತ್ಪನ್ನಗಳ ಬೇಡಿಕೆಯೂ ಕಡಿತಗೊಂಡು ಸರಕು ಉತ್ಪಾದಕ ವಲಯ ತಲ್ಲಣಗೊಂಡಿದೆ.

ಅಷ್ಟೇ ಅಲ್ಲದೇ ಹಣಕ್ಕಾಗಿ ಸರತಿ ಸಾಲಲ್ಲಿ ನಿಂತು ಹಣ ವಿನಿಮಯದ ಪ್ರಯತ್ನದಲ್ಲಿದ್ದಾಗ ಒಂದು ತಿಂಗಳ ಅವಧಿಯಲ್ಲಿ ದೇಶಾದ್ಯಂತ ಎಂಬತ್ನಾಲ್ಕು ಅಮೂಲ್ಯ ಜೀವಗಳು ಬಲಿಯಾಗಿವೆ. ಕ್ಯೂನಲ್ಲಿ ನಿಂತಾಗಲೇ ಹೆರಿಗೆಯಾದ ಉದಾಹರಣೆಗಳೂ ಇದೆ. ಆಸ್ಪತ್ರೆಗೆ ಸಕಾಲಕ್ಕೆ ಹಣ ಕಟ್ಟಲಾಗದೇ ಸಂಕಷ್ಟಕ್ಕೊಳಗಾದ ಜೀವಗಳಿಗೆ ಲೆಕ್ಕವಿಲ್ಲ. ಪ್ರವಾಸೋದ್ಯಮ ವಹಿವಾಟು ಹಳ್ಳಹಿಡಿದಿದೆ. ಸಿನೆಮಾಹಾಲ್‌ಗಳು ಪ್ರೇಕ್ಷಕರಿಲ್ಲದೇ ಬೀಕೋ ಎನ್ನುತ್ತಿದ್ದು ಸಿನೆಮಾಕ್ಷೇತ್ರವೇ ತಳಮಳಿಸಿದೆ. ಹೀಗೆ.. ಒಂದೆರಡಲ್ಲಾ.. ಹಲವಾರು ಆರ್ಥಿಕ, ಸಾಮಾಜಿಕ ಅವಗಢಗಳು ದಿನನಿತ್ಯ ಸಂಭವಿಸುತ್ತಲೇ ಇವೆ. ಇವೆಲ್ಲಕ್ಕೂ ಮೋದಿ ಸರಕಾರ ಹಾಗೂ ಅದರ ಸಮರ್ಥಕ ಸಂಘಿಗಳು ಕೊಡುವುದು ಒಂದೇ ಉತ್ತರ ಬಂದಿದ್ದನ್ನೆಲ್ಲಾ ಸಹಿಸಿಕೊಳ್ಳಿ ಅಚ್ಚೇ ದಿನ್ ಬಂದೆ ಬರುತ್ತದೆ. ಆದರೆ.. ಈಗಿನ ಈ ಅವ್ಯವಸ್ಥೆ ಹಾಗೂ ತುಘಲಕ್ ಮಾದರಿ ಆಡಳಿತವನ್ನು ನೋಡಿದರೆ ಅಚ್ಚೇ ದಿನ್ ಬರುವುದಂತೂ ಕನಸಿನ ಮಾತು. ಈ ಹಿಂದ ಇರುವ ವ್ಯವಸ್ಥೆಯೂ ಹಾಳಾಗಿ ಇಡೀ ದೇಶಕ್ಕೆ ದೇಶವೇ ಆರ್ಥಿಕವಾಗಿ ಅಧೋಗತಿಗಿಳಿಯುವ ಸಮಯ ಹತ್ತಿರವಾಗುತ್ತಿದೆ. ಅಂತಹ ಸಂದರ್ಭ ಬಂದಾಗ.. ಜನಸಾಮಾನ್ಯರು ರೋಸತ್ತಿ ಹೋದಾಗ.. ಮತ್ತೆ ಪಾಕಿಸ್ತಾನದ ಜೊತೆಗೆ ಕದನವನ್ನು ಘೋಷಿಸಿ ದೇಶವಾಸಿಗಳಲ್ಲಿ ದೇಶಭಕ್ತಿಯ ಉನ್ಮಾದವನ್ನು ತುಂಬಿ ಎಲ್ಲಾ ವಿಫಲತೆಗಳನ್ನು ಮರೆಮಾಚುವ ಪ್ರಯತ್ನವನ್ನು ಈ ಪ್ಯಾಸಿಸ್ಟ್ ಸರಕಾರ ಮಾಡುವುದರಲ್ಲಿ ಸಂದೇಹವೇ ಇಲ್ಲಾ. ಬರುವ ವಿಕ್ಷಿಪ್ತ ದಿನಮಾನಗಳಿಗೆ ಜನತೆ ಹೊಂದಿಕೊಂಡು ಹೋಗಬೇಕು ಇಲ್ಲವೇ ತಮ್ಮ ನಾಗರೀಕ ಹಕ್ಕುಗಳಿಗಾಗಿ ದಂಗೆ ಎದ್ದು ಹೊಸ ವ್ಯವಸ್ಥೆಯೊಂದನ್ನು ತರಬೇಕು. ಅಲ್ಲಿವರೆಗೂ ಮೋದಿ ಪರಿವಾರದ ವಿಫಲ ಪ್ರಯತ್ನಗಳಿಗೆ ತಲೆಕೊಡಬೇಕು. ಒಂದಂತೂ ನಿಜ, ಹಿಟ್ಲರ್‌ನಿಗೆ ದೇಶದ ಚುಕ್ಕಾಣಿ ಹಿಡಿಯಲು ಅವಕಾಶ ಕೊಟ್ಟವರು ಆತನ ಹುಚ್ಚಾಟಗಳನ್ನು ಸಹಿಸಿಕೊಳ್ಳಲೇಬೇಕು. ಸಹಿಸಿಕೊಳ್ಳಲು ಸಾಧ್ಯವಿಲ್ಲದವರು ಭ್ರಮೆಗಳನ್ನು ಬಿಟ್ಟು ಪ್ರತಿರೋಧಿಸಬೇಕು. ಇಲ್ಲವಾದರೆ ಈ  ದೇಶವನ್ನು ಯಾರಿಂದಲೂ ಕಾಪಾಡಲು ಸಾಧ್ಯವೇ ಇಲ್ಲಾ. ಸಾಧ್ಯವಾಗುವಷ್ಟರ ಹೊತ್ತಿಗೆ ಇಡೀ ದೇಶವೇ ಸರ್ವನಾಶವಾಗಿಹೋಗಿರುತ್ತದೆ. ಮುಂದಿನ ತಲೆಮಾರು ಇಂದಿನವರ ಅಸಹಾಯಕತೆಗೆ ಶಾಪಹಾಕುವುದರಲ್ಲಿ ಸಂದೇಹವೇ ಇಲ್ಲ. 

-ಶಶಿಕಾಂತ ಯಡಹಳ್ಳಿ       



1 ಕಾಮೆಂಟ್‌:

  1. Baseless allegations and assumptions. I have confidence in this scheme and with this PM. I don't agree your arguments. Wait and see. Don't behave like a mad who ಕೊತ್ತಂಬರಿ ಬೀಜ ಬಿತ್ತನೆ ಮಾಡಿ ದಿನಾ ಕಿತ್ ನೋಡ್ತಾ ಇದ್ದನಂತೆ ಹಾಗಾಯಿತು.

    ಪ್ರತ್ಯುತ್ತರಅಳಿಸಿ