ಶುಕ್ರವಾರ, ಮಾರ್ಚ್ 31, 2017

ತಹ ತಹ... 80 ಪುರೋಹಿತಶಾಹಿ ಮನಸುಗಳನ್ನು ಕೆಣಕಿದ “ಸೀತಾಂತರಾಳ” :






ಈ ಪುರೋಹಿತಶಾಹಿ ಪ್ರಣೀತ ಮನಸುಗಳು ಸನಾತನವಾದದ ಕೆಸರಿನಿಂದ ಯಾವಾಗ ಹೊರಗೆ ಬರುತ್ತವೋ ಗೊತ್ತಿಲ್ಲಾ. ಒಂದೇ ಒಂದು ನಾಟಕವನ್ನು ಅರಗಿಸಿಕೊಳ್ಳುವುದೂ ಅವರಿಂದಾಗುತ್ತಿಲ್ಲಾ. ಅಭಿವ್ಯಕ್ತಿ ಸ್ವಾತಂತ್ರಕ್ಕೆ ಕನಿಷ್ಟ ಗೌರವ ಕೊಡುವುದಂತೂ ಗೊತ್ತೇ ಇಲ್ಲಾ. ಯಾರೂ ಏನನ್ನೂ ಪ್ರಶ್ನಿಸುವ ಹಾಗೆಯೇ ಇಲ್ಲಾ.  ಇಷ್ಟಕ್ಕೂ ಆಗಿದ್ದಾದರೂ ಏನೆಂದರೆ..

2017ರ ಮಾರ್ಚ 26ರಂದು ಭಾನುವಾರ ಕೇರಳದ ಕಾಸರಗೋಡಿನಲ್ಲಿ ಮಾತೃದೇವೋಭವ ಹೆಸರಿನ ಕೊಂಕಣಿ ಮಹಿಳಾ  ಪ್ರತಿಭಾನ್ವೇಷಣೆ ಕಾರ್ಯಕ್ರಮವೊಂದನ್ನು ರಂಗಚಿನ್ನಾರಿ ತಂಡವು ಆಯೋಜಿಸಿತ್ತು. ಹಿರಿಯ ರಂಗಕರ್ಮಿ ಕಾಸರಗೋಡು ಚಿನ್ನರವರು ಈ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದ್ದರು. ಕೊಂಕಣಿ ಬ್ರಾಹ್ಮಣ ಸಮುದಾಯದವರಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಹಾಗೂ ಪ್ರೋತ್ಸಾಹಿಸಲು ಈ ಸಾಂಸ್ಕೃತಿಕ ಸ್ಪರ್ದೆಗಳನ್ನು ಏರ್ಪಡಿಸಿದ್ದರಲ್ಲಿ ಅಂತಾದ್ದೇನೂ ಅಕ್ಷೇಪಣೆಗಳಿಲ್ಲಾ. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಿಂದ ಒಂದು ಜಾತಿ ಸಮುದಾಯಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದ್ದು ಪ್ರಶ್ನಾರ್ಹ.

ಆದರೆ.. ಅಲ್ಲಿರುವ ಕೆಲವು ಹಿರಿಯ ತಲೆಮಾರಿನ ಬ್ರಾಹ್ಮಣ್ಯದ ತಲೆಗಳಿಗೆ ತಲೆನೋವಾಗಿದ್ದು ಸೀತಾಂತರಾಳ ನಾಟಕ ನೋಡಿದಾಗ. ನಾನು ಸೀತಾಂತರಾಳ ಎನ್ನುವ ಏಕವ್ಯಕ್ತಿ ನಾಟಕವನ್ನು ಬರೆದಿದ್ದು ಅದನ್ನು ಈಗಾಗಲೇ ಸಾಣೇಹಳ್ಳಿಯ ವೈ.ಡಿ.ಬಾದಾಮಿಯವರು ತಮ್ಮ ಪತ್ನಿ ಮಂಜುಳಾ ಬದಾಮಿಯವರಿಗೆ ನಿರ್ದೇಶಿಸಿದ್ದು ನಾಡಿನಾದ್ಯಂತ 50 ಪ್ರದರ್ಶನಗಳನ್ನು ಕಂಡು ನೂರರತ್ತ ಮುನ್ನುಗ್ಗುತ್ತಿದೆ. ಹೋದಲ್ಲೆಲ್ಲಾ ಈ ನಾಟಕ ತುಂಬಾ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಮಠಮಾನ್ಯಗಳಲ್ಲಿ ಈ ನಾಟಕವನ್ನು ಬದಾಮಿಯವರು ಆಡಿಸಿದ್ದಾರಾದರೂ ಇಲ್ಲಿವರೆಗೂ ಎಲ್ಲಿಯೂ ಅಪಸ್ವರಗಳೇಳಲಿಲ್ಲಾ.


ಯಾವಾಗ ಇದೇ ಸೀತಾಂತರಾಳ ನಾಟಕವನ್ನು ಉಡುಪಿಯ ಕಲಾವಿದೆ ಪ್ರತಿಮಾ ನಾಯಕರವರು ಕೊಂಕಣಿ ಭಾಷೆಯಲ್ಲಿ ಮಾಡಲು ಬಯಸಿದರೋ ಆಗ ಮಾಡಿ ಎಂದು ಅನುಮತಿಸಿದ್ದೆ. ಮೂರೇ ದಿನಗಳಲ್ಲಿ ಇಡೀ ನಾಟಕವನ್ನು ಕೊಂಕಣಿಗೆ ಅನುವಾದಿಸಿ ಹತ್ತಾರು ಪುಟಗಳ ಸುದೀರ್ಘ ಸಂಭಾಷಣೆಗಳನ್ನು ಕಂಠಪಾಠ ಮಾಡಿ ನಾಟಕವನ್ನು ಸಿದ್ದಗೊಳಿಸಿಕೊಂಡ ಪ್ರತಿಮಾ ಕೊಂಕಣಿ ಮಹಿಳಾ ಪ್ರತಿಭಾನ್ವೇಷಣೆಯಲ್ಲಿ ಅಭಿನಯಿಸಿದರು. ಮೊಟ್ಟಮೊದಲನೆಯದಾಗಿ ಪ್ರತಿಮಾರವರಂತಹ ಅಭಿಜಾತ ಪ್ರತಿಭಾವಂತ ಕಲಾವಿದೆ ಇಂತಹ ಪ್ರತಿಭಾನ್ವೇಷಣೆಗಳಲ್ಲಿ ಭಾಗವಹಿಸಲೇಬಾರದಿತ್ತು. ಹೊಸಬರು,  ಯುವಕರು, ಉದಯೋನ್ಮುಖ ಕಲಾವಿದರುಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿಸುವ ಕಾರ್ಯಕ್ರಮವಿದು.  ಆದರೆ ಕಾಸರಗೋಡು ಚಿನ್ನರವರ ಆಗ್ರಹದ ಮೇರೆಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಒಪ್ಪಿ ಬದ್ದತೆ ಹಾಗೂ ಅಪಾರ ಸಿದ್ದತೆಯೊಂದಿಗೆ ತಮ್ಮದೇ ಹಣ ಖರ್ಚುಮಾಡಿಕೊಂಡು ಉಡುಪಿಯಿಂದಾ ಕಾಸರಗೋಡಿಗೆ ಹೋಗಿ ಸೀತಾಂತರಾಳ ನಾಟಕವನ್ನು ಪುಕ್ಕಟೆಯಾಗಿ ಅಭಿನಯಿಸಿದರು. ನಾಟಕವೊಂದರ ಪ್ರದರ್ಶನಕ್ಕೆ ಕನಿಷ್ಟ ಸೌಲಭ್ಯಗಳೂ ಇಲ್ಲದ ವೇದಿಕೆಯ ಮೇಲೆ ಸೀತೆ ತನ್ನ ಒಡಲಾಳದ ಸಂಕಟಗಳನ್ನು ಪ್ರೇಕ್ಷಕರ ಮುಂದೆ ಹೇಳಿಕೊಳ್ಳಲು ಆರಂಭಿಸಿದಳೋ ಆಗ ಕೆಲವು ಸನಾತನವಾದಿಗಳ ಎದೆಯೊಳಗೆ ಸಂಕಟ ಶುರುವಾಯಿತು.

ಮೊದಲು ಈ ನಾಟಕವನ್ನು ನಿಲ್ಲಿಸಲು ಸಂಘಟಕರಿಗೆ ಹೇಳಿರೋ ಎಂದು ಕೆಲವು ವಯೋವೃದ್ದರು ಅವಲತ್ತುಕೊಂಡರು. ಅದನ್ನು ಕೇಳಿದ ಕೆಲವು ಯುವಕರುಗಳು ಆಡಲಿ ಬಿಡಿ.. ಸೀತೆ ಹೇಳುವುದರಲ್ಲಿ ತಪ್ಪೇನಿದೆ ಎಂದು ಅಲ್ಲಿಯೇ ಉತ್ತರಿಸಿದರು.  ಆದರೂ ಬೆಂಕಿಯ ಮೇಲೆ ಕುಳಿತು ಅಂಡು ಸುಟ್ಟುಕೊಂಡಂತೆ ಅಸಾಧ್ಯ ತಳಮಳವನ್ನು ಅನುಭವಿಸಿದ ಆ ಹಿರಿತಲೆಗಳು ನಾಟಕ ಮುಗಿಯುವವರೆಗೂ ಅದು ಹೇಗೋ ಸಹಿಸಿಕೊಂಡಿದ್ದು ನಾಟಕ ಮುಗಿದ ನಂತರ ನಟಿಯನ್ನು ಸುತ್ತುವರೆದು ಯಾರು ಇದನ್ನು ಬರೆದಿದ್ದು.. ರಾಮನನ್ನು ಇಷ್ಟೊಂದು ಕೆಟ್ಟದಾಗಿ ಯಾಕೆ ಚಿತ್ರಿಸಿದ್ದಾರೆ.. ಇದು ರಾಮದೇವರಿಗೆ ಮಾಡಿದ ಅಪಚಾರವಲ್ಲವೇ.. ಎಂದು ನೂರೆಂಟು ಪ್ರಶ್ನೆಗಳನ್ನು ಕೇಳತೊಡಗಿದರು. ಅಭಿನಯದ ಆಯಾಸದಿಂದ ಆಗ ತಾನೇ ಸುಧಾರಿಸಿಕೊಂಡು ಪಾತ್ರದ ಹೊರಗೆ ಬರಲು ಪ್ರಯತ್ನಿಸುತ್ತಿದ್ದ ಪ್ರತಿಮಾ ಕಕ್ಕಾಬಿಕ್ಕಿಯಾದರೂ ಸಾವರಿಸಿಕೊಂಡರು.  ಇದು ರಾಮನ ದೃಷ್ಟಿಕೋನದ ನಾಟಕವಲ್ಲ... ಸೀತೆ ತನಗಾದ ಸಂಕಟಗಳನ್ನು ಹೇಳಿಕೊಳ್ಳುವ ನಾಟಕ.. ಒಬ್ಬ ನಟಿಯಾಗಿ ಪಾತ್ರವನ್ನು ಅಭಿನಯಿಸಿದ್ದೇನೆ. ನಿಮಗೆ ನಾಟಕದ ಬಗ್ಗೆ ಸಂದೇಹಗಳಿದ್ದರೆ ಅದರ ರಚನೆಕಾರರ ಮೊಬೈಲ್ ನಂಬರ್ ಕೊಡುವೆ ನೀವೆ ಮಾತಾಡಿ ನಿಮ್ಮ ಸಂದೇಹಗಳನ್ನು ಬಗೆಹರಿಸಿಕೊಳ್ಳಿ ಎಂದು ಪ್ರತಿಮಾ ಹೇಳಿ ನನ್ನ ನಂಬರ್ ಕೊಟ್ಟು ಸನಾತನಿಗಳ ಪ್ರಶ್ನೆಗಳ ಆಕ್ರಮಣದಿಂದಾ ಪಾರಾಗುವ ಮಾರ್ಗೋಪಾಯವನ್ನು ಕಂಡುಕೊಂಡರು. ಆದರೂ ಅವರ ಪ್ರಶ್ನೆಗಳು ನಿಲ್ಲಲಿಲ್ಲ.. ಅಷ್ಟರಲ್ಲಿ ಅಲ್ಲಿಗೆ ಬಂದ ಅನೇಕ ಯುವಕ ಯುವತಿಯರು ನಾಟಕದ ಬಗ್ಗೆ ಹಾಗೂ ಅಭಿನಯದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಪ್ರತಿಮಾರವರಿಗೆ ಅಭಿನಂದನೆಗಳನ್ನು ತಿಳಿಸಿದರು. ಯಾವಾಗ ಮೆಚ್ಚುಗೆ ವ್ಯಕ್ತಪಡಿಸುವವರ ಸಂಖ್ಯೆ ಹೆಚ್ಚಾಯಿತೋ ಆಗ ಈ ಬ್ರಾಹ್ಮಣ್ಯ ತುಂಬಿದ ತಲೆಗಳು ಗೊಣಗುತ್ತಲೇ ಅಲ್ಲಿಂದಾ ಹೊರಟವು.

ಇಷ್ಟಕ್ಕೂ ಆ ನಾಟಕದಲ್ಲಿ ಇದ್ದುದದ್ದಾದರೂ ಏನು? ಈ ಹಿರಿಯರನ್ನು ಕೆರಳಿಸುವ ಅಂಶಗಳಾದರೂ ಯಾವವು? ತುಂಬು ಬಸುರಿಯಾದ ಸೀತೆಯನ್ನು ರಾಮನ ಆಜ್ಞೆಯಂತೆ ಕಾಡಲ್ಲಿ ಏಕಾಂಗಿಯಾಗಿ ಲಕ್ಷ್ಮಣ ಬಿಟ್ಟುಹೋದ ಮೇಲೆ ಸೀತೆ ತನ್ನೆಲ್ಲಾ ಸಂಕಟಗಳನ್ನು ಹೇಳಿಕೊಳ್ಳುತ್ತಾಳೆ. ತನ್ನ ಸ್ವಯಂವರದಿಂದ ಹಿಡಿದು ವನವಾಸ, ಶೂರ್ಪನಿಕೆಯ ಅಂಗಛೇದ, ರಾವಣ ಸಂಹಾರ, ಅಗ್ನಿಪರೀಕ್ಷೆ ಹಾಗೂ ಸೀತಾಪರಿತ್ಯಾಗದ ವರೆಗೆ ಹೇಳಿಕೊಳ್ಳುತ್ತಾಳೆ. ಎಲ್ಲರನ್ನೂ ಸಲಹುವ ರಾಮ ತನ್ನ ಪತ್ನಿಯನ್ನು ಕಾಡುಪಾಲು ಮಾಡಿ ಸ್ತ್ರೀವಿರೋಧಿ ಪಟ್ಟ ಹೊತ್ತುಕೊಂಡನಲ್ಲಾ ಎಂದು ರಾಮನಿಗಾಗಿಯೇ ಮರಗುತ್ತಾಳೆ. ಇದರಲ್ಲಿ ಅತಿಶಯೋಕ್ತಿ ಏನಿಲ್ಲವಲ್ಲಾ. ವಾಲ್ಮೀಕಿ ರಾಮಾಯಣದ ಮಹಾಕಾವ್ಯವನ್ನೇ ವಿಶ್ಲೇಷಣೆಗೆ ಒಳಪಡಿಸಿ ಈ ಸೀತಾಂತರಾಳ ನಾಟಕವನ್ನು ಕಟ್ಟಲಾಗಿದೆ. ಆದರೆ.. ರಾಮನನ್ನು ಮರ್ಯಾದಾ ಪುರುಷೋತ್ತಮನೆಂದು ನಂಬಿರುವ ಹಾಗೂ ನಂಬಿಸಿರುವ ಈ ಸನಾತನಿ ಪುರೋಹಿತಶಾಹಿ ಮನಸ್ಸುಗಳಿಗೆ ಶ್ರೀರಾಮನ ಕುರಿತು ಒಂದೇ ಒಂದು ಅಪಸ್ವರವನ್ನು ಸಹಿಸಲು ಸಾಧ್ಯವಾಗುತ್ತಿಲ್ಲಾ. ಯಾರ ನಂಬಿಕೆಯನ್ನೂ ಘಾಸಿಮಾಡುವ ಉದ್ದೇಶ ಈ ನಾಟಕಕ್ಕಿಲ್ಲಾ. ಅಷ್ಟಕ್ಕೂ ಯಾರದೋ ನಂಬಿಕೆ ಬುಡಮೇಲಾದರೆ ಅದಕ್ಕೆ ಈ ನಾಟಕ ಜವಾಬ್ದಾರಿಯಲ್ಲಾ. ಈ ಜಗತ್ತಲ್ಲಿ ಯಾವುದೂ ಪ್ರಶ್ನಾತೀತವಲ್ಲ. ಪ್ರಶ್ನಿಸುವವರ ದ್ವನಿಯನ್ನೇ ದಮನಿಸುವ ಪ್ರಯತ್ನ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದೆ.

ಯಾರೋ ಒಬ್ಬರು ಪೋನ್ ಮಾಡಿದ್ದರು. ಹಿರಿಯರ ದ್ವನಿಯಾದ್ದರಿಂದ ಗೌರವದಿಂದಲೇ ಮಾತಾಡಿದೆ. ಆದರೆ ಆ ಹಿರಿತಲೆಗೆ ತನ್ನ ವಯಸ್ಸಿನ ಗಾಂಭೀರ್ಯತೆಯೂ ಇಲ್ಲದೇ ಶ್ರೀರಾಮಚಂದ್ರನಿಗೆ ಅವಮಾನ ಮಾಡಲು ನಿಮಗೇನ್ರಿ ಇದೆ ಹಕ್ಕು ಎಂದು ಜೋರು ದ್ವನಿಯಲ್ಲೇ ಪ್ರಶ್ನಿಸಿತು. ಅವಮಾನ ಆಗಿದ್ದು ಶ್ರೀರಾಮಚಂದ್ರನಿಗೋ ಇಲ್ಲಾ ನಿಮಗೋ ಎಂದು ಮರು ಪ್ರಶ್ನಿಸಿದೆ. ನಿಮ್ಮ ನಂಬಿಕೆಯನ್ನು ನಾನು ಗೌರವಿಸುತ್ತೇನೆ. ಆದರೆ.. ರಾಮ ಬಸುರಿಯಾದ ಹೆಂಡತಿಯನ್ನು ಕಾಡಿಗೆ ಬಿಟ್ಟಿದ್ದು ನಿಮ್ಮ ಪ್ರಕಾರ ಸರಿಯೋ ತಪ್ಪೋ.,.? ಎಂದು ಕೇಳಿದೆ. ಅದು ಲೋಕಕಲ್ಯಾಣಕ್ಕಾಗಿ ಶ್ರೀರಾಮ ಮಾಡಿದ ಕೆಲಸ, ದೇವರನ್ನು ಪ್ರಶ್ನಿಸುವ ಪಾಪ ಮಾಡಲೇಬಾರದು.. ಎಂದು ಆ ತಾತಪ್ಪನವರು ಆದೇಶ ಹೊರಡಿಸಿದರು. ಇನ್ನು ಇವರೊಂದಿಗೆ ಮಾತಾಡಿ ಏನೇನೂ ಪ್ರಯೋಜನ ಇಲ್ಲವೆಂದು ಪೊನ್ ಕಟ್ ಮಾಡಿ ನಿಟ್ಟುಸಿರು ಬಿಟ್ಟೆ. ಯಾರ ತಲೆಯಲ್ಲಿ ಮೌಡ್ಯ ನಂಬಿಕೆಯಾಗಿ ನೆಲೆಯೂರಿದೆಯೋ ಅಂತವರನ್ನು ಏನೇ ಸಮರ್ಥನೆಗಳನ್ನು ಕೊಟ್ಟರೂ ಬದಲಾಯಿಸಲು ಸಾಧ್ಯವೇ ಇಲ್ಲವೆಂಬುದು ನನ್ನ ಅನುಭವದ ಮಾತು. ವಿತಂಡವಾದಿಗಳು ಹಾಗೂ ಭ್ರಮಾಪೀಡಿತರ ಜೊತೆಗೆ ಎಷ್ಟೇ ಮಾತಾಡಿದರೂ ಅದು ತೌಡು ಕುಟ್ಟಿದಂತೆ. ಹೀಗಾಗಿ ಸುಖಾಸುಮ್ಮನೆ ಸಮಯ ಬರಬಾದ್ ಮಾಡಿಕೊಳ್ಳುವುದು ಹಾಗೂ ಆ ಹಿರಿಯರ ನಂಬಿಕೆಯನ್ನು ಇನ್ನಷ್ಟು ಕೆಣಕಿ ಈ ವಯಸ್ಸಿನಲ್ಲಿ ಅವರ ಮನಸ್ಸನ್ನು ಘಾಸಿಮಾಡುವುದು ತರವಲ್ಲ ಎಂದುಕೊಂಡೇ ಸಂಯಮ ತಂದುಕೊಂಡೆ.

ಇಷ್ಟೆಲ್ಲಾ ವಿರೋಧ ಈ ನಾಟಕಕ್ಕೆ ಬಂದರೂ ಆ ಪ್ರತಿಭಾನ್ವೇಷಣೆ ಸ್ಪರ್ಧೆಯಲ್ಲಿ ಸೀತಾಂತರಾಳ ನಾಟಕಕ್ಕೆ ಎರಡನೇ ಬಹುಮಾನ ಬಂದಿದ್ದು ಈ ಪುರೋಹಿತಶಾಹಿ ಮನಸ್ಸುಗಳಿಗೆ ಆಘಾತಕಾರಿಯಾಗಿತ್ತು. ವಿರೋಧವನ್ನು ಮೀರಿ ನಾಟಕ ಹಾಗೂ ಅಭಿನಯ ಗೆದ್ದಿತ್ತು. ಹಳೆ ತಲೆಮಾರಿನ ಕೆಲವು ಕಟ್ಟರ್ ಬ್ರಾಹ್ಮಣ್ಯವಾದಿಗಳಿಗೆ ಹೊಸ ತಲೆಮಾರಿನವರು ಕೊಟ್ಟ ಉತ್ತರದ ಪ್ರತಿರೂಪವಾಗಿ ಫಲಿತಾಂಶ ಬಂದಿತ್ತು. ಶತಮಾನಗಳ ಕಾಲ ದೇವರು ಧರ್ಮಗಳನ್ನು ಪ್ರಶ್ನಿಸುವುದನ್ನೇ ನಿಷೇಧಿಸಿದ ಪುರೋಹಿತಶಾಹಿಗಳಿಗೆ ಬದಲಾಗುತ್ತಿರುವ ಈಗಿನ ತಲೆಮಾರು ತಮ್ಮದೇ ಆದ ರೀತಿಯಲ್ಲಿ  ಉತ್ತರಿಸುತ್ತಿದೆ. ಕೊಂಕಣಿ ಬ್ರಾಹ್ಮಣ ಸಮುದಾಯದಲ್ಲೇ ಸನಾತನ ನಂಬಿಕೆಗಳ ಬೇರುಗಳನ್ನು ಅಲ್ಲಾಡಿಸುವ ಪ್ರಯತ್ನಗಳು ಅದೇ ಸಮುದಾಯದ ಕುಡಿಗಳಿಂದ ನಡೆಯುತ್ತಿರುವುದು ಸಂತಸದ ಸಂಗತಿ. ಅಜ್ಜ ಹಾಕಿದ ಸಂಪ್ರದಾಯದ ಆಲದ ಬಿಳಿಲುಗಳೀಗೆ ಜೋತುಬೀಳದೆ ಹೊಸ ಆಲೋಚನೆಗೆ ತೆರೆದುಕೊಳ್ಳುತ್ತಿರುವ ಯುವಜನರನ್ನು ಅಭಿನಂದಿಸಲೇಬೇಕಿದೆ. ಇದಕ್ಕಾಗಿ ಕಲಾವಿದೆ ಪ್ರತಿಮಾ ನಿಜಕ್ಕೂ ಅಭಿನಂದನಾರ್ಹರು.

ಕಳೆದ ವರ್ಷ ಇದೇ ರೀತಿ ನನ್ನ ನಾಟಕದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡುವ ಪ್ರಯತ್ನ ನಡೆದಿತ್ತು. ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಅಚ್ಚೇ ದಿನ್ ಎನ್ನುವ ಬೀದಿನಾಟಕವನ್ನು ಬರೆದು ನಿರ್ದೇಶಿಸಿ ಆಡಿಸಿದ್ದೆ. ನಾಟಕ ಅರ್ಧದಷ್ಟು ಮುಗಿದಿರುವಾಗಿ ಅಸಹನೆಯಿಂದಾ ಕಂಗಾಲಾದ ಕೆಲವರು ನಾಟಕ ನಿಲ್ಲಿಸಲು ಪ್ರಯತ್ನಿಸಿದರು. ಆಗ ಪ್ರೇಕ್ಷಕರುಗಳೇ ಅವರನ್ನು ಹೊರಕ್ಕೆ ಎಳೆದೊಯ್ದು ನಾಟಕವನ್ನು ಮುಂದುವರೆಸಲು ಒತ್ತಾಯಿಸಿದರು. ಅಚ್ಚರಿಎಂದರೆ.. ನಾಟಕ ನಿಲ್ಲಿಸು ಎಂದು ಆಕ್ರೋಶ ವ್ಯಕ್ತಪಡಿಸಿದವರು ಬ್ರಾಹ್ಮಣ್ಯದಲ್ಲಿ ಮೆದುಳನ್ನು ಅದ್ದಿಕೊಂಡವರು. ಅವರನ್ನು ಎಳೆದೊಯ್ದು ನಾಟಕ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟವರಲ್ಲಿ ಕೆಲವರು ಬ್ರಾಹ್ಮಣ ಸಮುದಾಯದ ಯುವಕರಾಗಿದ್ದರು. ಮೂರು ದಶಕದ ಹಿಂದೆ ಆನೆಕಲ್ಲಿನಲ್ಲಿ ಸಮುದಾಯ ಬೀದಿ ನಾಟಕ ಮಾಡುತ್ತಿದ್ದಾಗ ಕೆಲವು ಆರೆಸ್ಸೆಸ್ಸಿಗರು ಕಲಾವಿದರುಗಳ ಮೇಲೆ ಹಲ್ಲೆ ಮಾಡಿದರು. ಅದರಲ್ಲಿ ಬ್ರಾಹ್ಮಣ ಸಮುದಾಯದ ಗುಂಡಣ್ಣ ತೀವ್ರವಾಗಿ ಹಲ್ಲೆಗೊಳಗಾದರು. ಹಲ್ಲೆಯ ನಂತರ ಕೋಮುವಾದಿಗಳನ್ನು ವಿರೋಧಿಸಲು ಸೇರಿದ ಪ್ರತಿಭಟನೆಯಲ್ಲಿ ಬ್ರಾಹ್ಮಣ ಸಮುದಾಯದ ಅನೇಕ ಕಲಾವಿದರು, ಸಾಹಿತಿಗಳಿದ್ದರು.  ಅಂದರೆ.. ಒಂದಂತೂ ಸ್ಪಷ್ಟ. ಎಲ್ಲಾ ಬ್ರಾಹ್ಮಣರೂ ಪುರೋಹಿತಶಾಹಿ ಮನಸ್ಥಿತಿಯವರಲ್ಲಾ.. ಪುರೋಹಿತಶಾಹಿ ಮನಸ್ಥಿತಿ ಎನ್ನುವುದು ಯಾವುದೇ ಒಂದು ಜಾತಿ ಧರ್ಮಕ್ಕೆ ಸೀಮಿತವಾದದ್ದೂ ಅಲ್ಲಾ.

ಯಾರು ಅದೆಷ್ಟೇ ಅಡ್ಡಿಪಡಿಸಿದರೂ ನಾಟಕವಂತೂ ನಿಲ್ಲುವುದಿಲ್ಲ. ಶತಮಾನಗಳಿಂದಾ ಈ ಪುರೋಹಿತಶಾಹಿ ಮಲಿನ ಮನಸ್ಸುಗಳು ಸಾಹಿತಿ ಕಲಾವಿದರುಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸುತ್ತಲೆ ಬಂದಿವೆ.  ಅಸಂಖ್ಯಾತ ಹಲ್ಲೆ ಹತ್ಯೆಗಳನ್ನು ಮಾಡಿವೆ.  ಆದರೆ.. ಅಂದಿನಿಂದ ಇಂದಿನವರೆಗೂ ಪ್ರಶ್ನಿಸುವುದಂತೂ ನಿಂತಿಲ್ಲಾ. ನಾಟಕ ಕಲೆ ಸಾಹಿತ್ಯಗಳು ವೈದಿಕಶಾಹಿ ಪರಂಪರೆಯ ಸುಳ್ಳು ಹಾಗೂ ಭ್ರಮೆಗಳ ಸೃಷ್ಟಿಯನ್ನು ಸಂದೇಹಿಸದೇ ಬಿಟ್ಟಿಲ್ಲಾ. ದಮನ ಮಾಡಿದಷ್ಟೂ ಪ್ರತಿರೋಧ ತೀವ್ರಗೊಳ್ಳುತ್ತಲೇ ಬಂದಿದೆ. ಒಂದು ಬರಹ, ಒಂದು ನಾಟಕ, ಒಂದು ಚಿತ್ರಕಲೆಯನ್ನೂ ಸಹ ಸಹಿಸಿಕೊಳ್ಳದ ಧರ್ಮ ಹಾಗೂ ಧರ್ಮಿಯರು ಮನುಕುಲದ ಇತಿಹಾಸದಲ್ಲಿ ತಮ್ಮ ನಿರಂತರತೆಯನ್ನು ಕಾಯ್ದುಕೊಳ್ಳಲು ಸಾಧ್ಯವೇ ಇಲ್ಲಾ. ಈ ಹಿಂದೆ ಕೂಡಾ ಸೀತೆಯ ದೃಷ್ಟಿಕೋನದಲ್ಲಿ ಪೋಲಂಕಿ ರಾಮಮೂರ್ತಿಯವರು ಸೀತಾಯಣ ಪುಸ್ತಕ ಬರೆದು ರಾಮನನ್ನು ಹಾಗೂ ರಾಮನ ಸೃಷ್ಟಿಕರ್ತರಾದ ವೈದಿಕಶಾಹಿಗಳನ್ನು ಪ್ರಶ್ನಿಸಿದ್ದರು. ಆದರೆ.. ಆಗ ಪುರೋಹಿತಶಾಹಿಗಳೆಲ್ಲ ಬಹುದೊಡ್ಡ ಗುಲ್ಲೆಬ್ಬಿಸಿ ಆ ಪುಸ್ತಕವನ್ನೇ ಬ್ಯಾನ್ ಮಾಡಿಸಿದ್ದರು. ಅದೇ ರೀತಿ ಸೀತಾಂತರಾಳ ನಾಟಕಕ್ಕೂ ಈಗ ಸಾತ್ವಿಕ ಪ್ರತಿರೋಧವನ್ನು ಒಡ್ಡಿದ್ದಾರೆ. ಕೇವಲ ಲಿಂಗಾಯತ ಮಠಗಳಲ್ಲಿ ಈ ನಾಟಕ ಹೆಚ್ಚು ಪ್ರದರ್ಶನಗೊಂಡಿದ್ದರಿಂದಾ ಅಷ್ಟೊಂದು ಪ್ರತಿರೋಧ ಬಂದಿಲ್ಲಾ. ಆದರೆ.. ವೈದಿಕ ಮಠಗಳಲ್ಲಿ ಈ ನಾಟಕ ಪ್ರದರ್ಶನವಾದರೆ ಮತ್ತೆ ಸಮಸ್ಯೆ ಶುರುವಾಗಬಹುದು. ವೈ.ಡಿ. ಬದಾಮಿಯವರು ಇದೇ ನಾಟಕವನ್ನು ಇದೇ ತಿಂಗಳು ಉಡುಪಿಯಲ್ಲಿ ಪ್ರದರ್ಶನ ಮಾಡುತ್ತಿದ್ದಾರೆ. ಏನಾಗುತ್ತದೋ ನೋಡಬೇಕು. 

                            -ಶಶಿಕಾಂತ ಯಡಹಳ್ಳಿ
      


ಗುರುವಾರ, ಮಾರ್ಚ್ 23, 2017

ತಹ ತಹ... 79 ಗುರ್‌ಮೇಹರ್ ಎಂಬ ಗುಬ್ಬಿಯೂ; ಸಂಘಪರಿವಾರದ ಗಿಡುಗಗಳು..



ಆ ಹೆಣ್ಣು ಮಗುವಿಗೆ ಇನ್ನೂ ಎರಡು ವರ್ಷವಾಗಿತ್ತಷ್ಟೇ. ಕಾರ್ಗಿಲ್ ಯುದ್ದದಲ್ಲಿ ತನ್ನ ತಂದೆ ಕ್ಯಾಪ್ಟನ್ ಮನ್‌ದೀಪ್ ಸಿಂಗ್‌ರವರನ್ನು ಕಳೆದುಕೊಂಡು ಅನಾಥಳಾಗಿದ್ದಳು. ಆಕೆ ಬೆಳೆದಂತೆಲ್ಲಾ ಯುದ್ಧದ ಬಗ್ಗೆ ಅಸಹ್ಯ ಮತ್ತು ಅಸಹನೆಯನ್ನು ಬೆಳೆಸಿಕೊಂಡಳು. ತನ್ನ ತಂದೆಯನ್ನು ಕೊಂದ ಯುದ್ದ ಆಕೆಯ ಮನಸ್ಸನ್ನು ಘಾಸಿಮಾಡಿ ಮಾಯದ ಗಾಯವನ್ನು ಮೂಡಿಸಿದ್ದಂತೂ ಸತ್ಯ. ಮುಂದೆ ಬೆಳೆದು ದೊಡ್ಡವಳಾದಂತೆ ಯುದ್ದವನ್ನು ದ್ವೇಷಿಸಿದಳು, ಶಾಂತಿಯನ್ನು ಬಯಸಿದಳು. ಯುದ್ದದ ಮಾರಿಗೆ ಬಲಿಯಾಗಿ ತನ್ನಂತೆ ಅನಾಥವಾಗಿರುವ ಅಸಂಖ್ಯಾತ ಮಕ್ಕಳ ಬಗ್ಗೆ ಮರುಕಪಟ್ಟಳು. ಕಾಲೇಜು ಸೇರಿದ ನಂತರವೂ ಯುದ್ಧ ವಿರೋಧಿ ಚಳುವಳಿಗಳಲ್ಲಿ ಭಾಗವಹಿಸಿದಳು. ಯುದ್ಧದಾಹದ ಬಗ್ಗೆ ಪ್ರತಿಫಟಿಸಿದಳು. ಆಕೆ.. ಗುರ್‌ಮೆಹರ್ ಕೌರ್. ದೆಹಲಿಯ ಲೇಡಿ ಶ್ರೀರಾಮ ಕಾಲೇಜಿನ ಇಂಗ್ಲೀಷ್ ಸಾಹಿತ್ಯದ ವಿದ್ಯಾರ್ಥಿನಿ.

ಹೀಗೆಯೇ ಯುದ್ಧದಾಹಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂಬ ವಿಷಯದ ಮೇಲೆ ನಡೆದ ಯುದ್ಧವಿರೋಧಿ ಸುದ್ದಿಗೋಷ್ಟಿಯಲ್ಲಿ ತಾನು ಭಾಗವಹಿಸಿದ್ದನ್ನು 2016 ನವೆಂಬರ್ 6 ರಂದು ಗುರ್‌ಮೆಹರ್ ತನ್ನ ಪೇಸ್ಬುಕ್ಕಿನಲ್ಲಿ ಹಾಕಿಕೊಂಡಿದ್ದಳು. ಅದೇ ರೀತಿ 2017 ಫೆ.21 ರಂದು ದೆಹಲಿಯ ರಾಮಜಸ್ ಕಾಲೇಜಿನಲ್ಲಿ ಪ್ರತಿಭಟನೆಯ ಸಂಸ್ಕೃತಿ ಎನ್ನುವ ವಿಷಯದ ಬಗ್ಗೆ ವಿಚಾರಸಂಕಿರಣವೊಂದನ್ನು ಆಯೋಜಿಸಿತ್ತು. ಇದರಲ್ಲಿ ದೆಹಲಿಯ ಜೆಎನ್‌ಯು ಕಾಲೇಜಿನಲ್ಲಿ ಕನ್ಹಯ್ಯನವರ ಹೋರಾಟದ ಸಹಭಾಗಿಗಳಾಗಿದ್ದ ವಿದ್ಯಾರ್ಥಿ ನಾಯಕರಾದ ಶೆಹ್ಲಾ ರಶೀದ್ ಮತ್ತು ಉಮರ್ ಖಾಲಿದ್ ಅವರು ಭಾಗವಹಿಸಬೇಕಿತ್ತು. ಆದರೆ.. ಈ ಇಬ್ಬರೂ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ಸಂಘಪರಿವಾರದ ಅಂಗಸಂಸ್ಥೆ ಎಬಿವಿಪಿ ವಿರೋಧಿಸಿ ಗದ್ದಲ ಆರಂಭಿಸಿ ಹಲ್ಲೆ ಮಾಡಿ ಕಾರ್ಯಕ್ರಮ ರದ್ದಾಗುವಂತೆ ನೋಡಿಕೊಂಡಿತು. ಕೆಲವಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರೂ ಗಾಯಗೊಂಡರು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಲ್ಲೆಗಳ ಮೂಲಕ ಹತ್ತಿಕ್ಕುವ ಎಬಿವಿಪಿಯ ಬಗ್ಗೆ ಗುರ್‌ಮೆಹರ್‌ಗೆ ಅಸಾಧ್ಯವಾದ ಅಸಹನೆಯುಂಟಾಗಿದ್ದರಲ್ಲಿ ಅತಿಶಯವೇನಿಲ್ಲಾ. ಒಂದು ಭಿತ್ತಿಚಿತ್ರ್ರದಲ್ಲಿ ನಾನು ಎಬಿವಿಪಿಗೆ ಹೆದರುವುದಿಲ್ಲಾ ಎಂದು ಬರೆದು ಹಿಡಿದುಕೊಂಡು ಪೇಸ್ಬುಕ್ಕಿನಲ್ಲಿ ಪ್ರಕಟಿಸುವ ಮೂಲಕ ತನ್ನ ಅಸಹನೆಯನ್ನು ಹಾಗೂ ಪ್ರತಿಭಟನೆಯನ್ನು ಸಾತ್ವಿಕವಾಗಿಯೇ ಕೌರ್ ಹೊರಹಾಕಿದರು. ಎಬಿವಿಪಿಯ ಗೂಂಡಾಗಿರಿಯಿಂದಾ ರೋಸಿಹೋದ ಬೇರೆಲ್ಲಾ ವಿದ್ಯಾರ್ಥಿಗಳಿಗೆ ಈ ಬಿತ್ತಿಚಿತ್ರ ಪ್ರೇರಣೆಯನ್ನು ನೀಡಿತು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಬಿತ್ತಿಚಿತ್ರವು ಎಬಿವಿಪಿ ವಿರುದ್ಧ ವಿದ್ಯಾರ್ಥಿ ಚಳುವಳಿಯನ್ನು ತೀವ್ರಗೊಳಿಸಿತು.


ಇದರಿಂದ ಬೆಚ್ಚಿಬಿದ್ದಿತು ಸಂಘ ಪರಿವಾರ. ರೊಚ್ಚಿಗೆದ್ದ ಎಬಿವಿಪಿ ಎಂಬ ವಟುಗಳ ಪಡೆ ಕೌರಳ ಪೇಸ್ಬುಕ್ಕನ್ನು ಜಾಲಾಡ ತೊಡಗಿತು. ಒಂದು ವರ್ಷದ ಹಿಂದೆ ಚಿತ್ರೀಕರಿಸಿದ್ದ ರಾಮನ ದನಿ ಎನ್ನುವ ವಿಡಿಯೋದ ಭಿತ್ತಿಚಿತ್ರವನ್ನು ಹುಡುಕಿ ಕೈಗೆತ್ತಿಕೊಂಡಿತು. ಆ ವಿಡಿಯೋದಲ್ಲಿ ಕೆಲವಾರು ಸ್ಟಿಲ್ ಚಿತ್ರಿಕೆಗಳಿದ್ದವು. ಕಾರ್ಗಿಲ್ ಯುದ್ಧದಲ್ಲಿ ತನ್ನ ತಂದೆ ಕ್ಯಾಪ್ಟನ್ ಮನ್‌ದೀಪ್ ಸಿಂಗ್ ಹುತಾತ್ಮರಾದ ನಂತರ ತಾನು ಅನುಭವಿಸಿದ ನೋವು ಹಾಗೂ ಅದಕ್ಕೆ ಕಂಡುಕೊಂಡ ಪರಿಹಾರಗಳನ್ನು ಬಿತ್ತಿಚಿತ್ರದಲ್ಲಿ ಬರೆಯುವ ಮೂಲಕ ಈ ಹೆಣ್ಣುಮಗು ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿತ್ತು. ಅಂತಹ ಹಲವು ಬಿತ್ತಿಚಿತ್ರಗಳಲ್ಲಿ ಒಂದು ಮಾತ್ರ ಎಬಿವಿಪಿ ವಟುಗಳಿಗೆ ಆಕರ್ಷನೀಯವಾಗಿ ಕಂಡಿತು. ಯಾಕೆಂದರೆ ಅದರಲ್ಲಿ ಪಾಕಿಸ್ತಾನದ ಹೆಸರಿತ್ತು. ಪಾಕಿಸ್ಥಾನದ ಹೆಸರು ಎಲ್ಲಿಯೇ ಕಂಡರೂ ದೇಶಭಕ್ತಿಯ ಉನ್ಮಾದ ಕೆರಳುವ ಹಾಗೆ ಸಂಘಪರಿವಾರವು ತನ್ನ ಎಲ್ಲಾ ಅಂಗ ಉಪಾಂಗಗಳಿಗೂ ಬ್ರೇನ್‌ವಾಷ್ ಮಾಡಿರುವುದು ಬಹಿರಂಗ ಸತ್ಯ. ನನ್ನ ತಂದೆಯನ್ನು ಪಾಕಿಸ್ತಾನ ಕೊಂದಿಲ್ಲ, ಯುದ್ಧ ಕೊಂದಿತು ಎನ್ನುವ ಕೌರಳ ಪ್ಲೇಕಾರ್ಡ ಒಂದನ್ನು ಹೆಕ್ಕಿಕೊಂಡು ಎಬಿವಿಪಿಗೆ ಹೆದರುವುದಿಲ್ಲವೆಂದ ವಿದ್ಯಾರ್ಥಿನಿಯನ್ನು ಭಾರತವಿರೋಧಿ ದೇಶದ್ರೋಹಿ ಎಂದು ಬಿಂಬಿಸುವ ಪ್ರಯತ್ನವನ್ನು ಸಂಘಿಗಳು ಶುರುವಿಟ್ಟುಕೊಂಡವು. ಎಬಿವಿಪಿಗೆ ಹೆದರಲ್ಲ ಎನ್ನುವ ಪ್ಲೇಕಾರ್ಡ ಜೊತೆಗೆ ...ಪಾಕಿಸ್ತಾನ ಕೊಂದಿಲ್ಲಾ ಎನ್ನುವ ಪ್ಲೇಕಾರ್ಡನ್ನೂ ಸಾಮಾಜಿಕ ಜಾಲತಾಣಗಳಲ್ಲಿ ತೇಲಿಸಿ ಕೌರಳನ್ನು ಮುಳುಗಿಸಲು ಶಡ್ಯಂತ್ರ ರಚಿಸಲಾಯಿತು. ಈ ಎರಡೂ ಪ್ಲೇಕಾರ್ಡ ನೋಡಿದವರು ಆಕೆಯನ್ನು ದೇಶದ್ರೋಹಿ ಎಂದು ತೀರ್ಮಾನಿಸಬೇಕು ಹಾಗೂ ಯಾರೆಲ್ಲಾ ಸಂಘಪರಿವಾರದ ಅಂಗಗಳನ್ನು ವಿರೋಧಿಸುತ್ತಾರೋ ಅವರೆಲ್ಲಾ ದೇಶದ್ರೋಹಿಗಳು ಎಂಬುದು ಜನರ ಮನಸ್ಸಲ್ಲಿ ಉಳಿಯಬೇಕು ಎನ್ನುವುದು ಈ ಶಡ್ಯಂತ್ರದ ಹಿಂದಿರುವ ಹುನ್ನಾರವಾಗಿತ್ತು.


ಆದರೆ ಅಸಲಿಯತ್ತೇನೆಂದರೆ ರಾಮನ ದನಿ ವಿಡಿಯೋದಲ್ಲಿ ಕೌರ್ ಹಿಡಿದ ಪ್ಲೇಕಾರ್ಡ ಬರಹಗಳು ಒಂದಕ್ಕೊಂದು ಸಂಬಂಧವನ್ನು ಹೊಂದಿವೆ. ಅಲ್ಲಿ ಎಲ್ಲೂ ಪಾಕಿಸ್ತಾನ ಇಲ್ಲವೇ ಹಿಂದುಸ್ತಾನದ ಪರ ಅಥವಾ ವಿರೋಧಿ ಭಾವನೆಗಳು ಇಲ್ಲವೇ ಇಲ್ಲ. ಆದರೆ.. ಹಿಂದೆ ಮುಂದಿನ ಪ್ಲೇಕಾರ್ಡಗಳನ್ನು ಬಿಟ್ಟು ಪಾಕಿಸ್ತಾನದ ಹೆಸರಿರುವ ಭಿತ್ತಿಚಿತ್ರವನ್ನು ಮಾತ್ರ ತೆಗೆದುಕೊಂಡು ಕೌರಳನ್ನು ದೇಶದ್ರೋಹಿ ಎಂದು ಸಾಬೀತುಪಡಿಸಲು  ಪ್ರಯತ್ನಿಸಲಾಯಿತು. ಹಿಂದೆ ಮುಂದೆ ಏನೂ ಗೊತ್ತಿಲ್ಲದವರು ಇದನ್ನು ಸತ್ಯವೆಂದೇ ನಂಬಿದರು. ಹೀಗೆ ನಂಬಿಸುವುದೇ ಈ ಕೋಮುಪಡೆಯ ಹುನ್ನಾರವೂ ಆಗಿತ್ತು. ಇಷ್ಟಕ್ಕೂ ಗುರ್‌ಮೇಹರ್ ನನ್ನ ತಂದೆಯನ್ನು ಪಾಕಿಸ್ತಾನ ಕೊಂದಿಲ್ಲ, ಯುದ್ಧ ಕೊಂದಿತು ಎಂದು ಹೇಳಿದ್ದರಲ್ಲಿ ತಪ್ಪೇನಿದೆ. ಇದರಲ್ಲಿ ಪಾಕಿಸ್ತಾನದ ಪರವಾದ ಹೇಳಿಕೆಯೂ ಇಲ್ಲಾ.. ಹಿಂದುಸ್ತಾನದ ವಿರೋಧಿ ನಿಲುವೂ ಇಲ್ಲಾ. ಯುದ್ದ ವಿರೋಧಿ ಭಾವನೆ ಸ್ಪೋಟಗೊಂಡಿದೆ. ಹೌದು ಯುದ್ಧ ಎನ್ನುವುದು ಎರಡೂ ದೇಶದ ಯುದ್ಧದಾಹಿಗಳ ಹಿಂಸಾಪಾತದ ಕೃತ್ಯವಾಗಿದೆ. ಮಹಾಭಾರತದ ಕೌರವ ಪಾಂಡವರ ಕುರುಕ್ಷೇತ್ರದಲ್ಲಿ ಯಾರು ಯಾರನ್ನೇ ಕೊಂದರೂ ಅದು ಯುದ್ಧದ ಪರಿಣಾಮವೇ ಆಗಿದೆ. ಅದೇ ರೀತಿ ಭಾರತ ಪಾಕ್ ಯುದ್ಧಗಳಲ್ಲಿ ಯಾವ ದೇಶದ ಸೈನಿಕರು ಇಲ್ಲವೇ ಜನರು ಹತ್ಯೆಯಾದರೂ ಅದಕ್ಕೆ ಯುದ್ಧದಾಹವೇ ಕಾರಣವಾಗಿದೆ. ಹಾಗೂ ಎಲ್ಲಾ ಯುದ್ದಕ್ಕೂ ಯಾವ ದೇಶದ ಜನಸಾಮಾನ್ಯರು ಕಾರಣೀಕರ್ತರಾಗಿರದೇ ಆಯಾ ದೇಶದ ಆಳುವ ವರ್ಗಗಳೇ ಕಾರಣವಾಗಿರುತ್ತವೆ. ಇಲ್ಲಿ ಯಾವುದೇ ದೇಶದ ಹೆಸರು ರೂಪಕವಾಗಿ ಆಗಿ ಪ್ರಸ್ತಾವನೆಗೊಂಡಂತಿದ್ದು ಯುದ್ಧದಾಹವೇ ಎಲ್ಲಾ ಅನಾಹುತಕ್ಕೆ ಮೂಲಕಾರಣ. ಈ ರೀತಿಯ ಯುದ್ಧದ ಸಮರ್ಥನೆಗಾಗಿ ಎಲ್ಲಾ ಯುದ್ಧಕೋರ ಮನಸ್ಥಿತಿಯ ನಾಯಕರುಗಳು ದೇಶಭಕ್ತಿಯನ್ನು ಆರೋಪಿಸುತ್ತಾರೆ ಹಾಗೂ ತಮ್ಮ ಸೈನಿಕರಲ್ಲಿ ಹಾಗೂ ದೇಶವಾಸಿಗಳಲ್ಲಿ ದೇಶಭಕ್ತಿಯ ಉನ್ಮಾದವನ್ನು ಹುಟ್ಟಿಸುತ್ತಾರೆ. ಆದರೆ.. ಈ ಉನ್ಮಾದಕ್ಕೊಳಗಾಗಿ ಸಾವು ನೋವು ಅನುಭವಿಸುವವರು ಮಾತ್ರ ಸೈನಿಕರು ಹಾಗೂ ಜನಸಾಮಾನ್ಯರು. ಹೀಗಾದಾಗ ಈ ಎಲ್ಲಾ ಸಾವು ನೋವುಗಳಿಗೆ ಯುದ್ಧ ಹಾಗೂ ಯುದ್ಧದಾಹ ಮಾತ್ರ ಹೊಣೆಗಾರರಾಗಿದ್ದು ಯಾವುದೇ ದೇಶ ಕಾರಣವಲ್ಲ. ಯಾಕೆಂದರೆ ಪಾಕಿಸ್ತಾನದಲ್ಲಿರುವವರೆಲ್ಲರೂ ಯುದ್ದದಾಹಿಗಳಲ್ಲಾ.. ಭಾರತದಲ್ಲಿರುವವರೆಲ್ಲರೂ ಶಾಂತಿಪ್ರೀಯರೂ ಅಲ್ಲಾ. ಎರಡೂ ದೇಶದಲ್ಲೂ ಯುದ್ದದಾಹಿಗಳಿದ್ದಂತೆ ಶಾಂತಿಪ್ರೇಮಿಗಳೂ ಇದ್ದೇ ಇರುತ್ತಾರೆ. ಹೀಗಾಗಿ ಯುದ್ದೋನ್ಮಾದವೇ ಎಲ್ಲಾ ಸಾವು ನೋವುಗಳಿಗೂ ಕಾರಣವಾಗಿದ್ದು ಗುರ್ ಮೇಹರ್ ತಂದೆಯ ಸಾವಿಗೂ ಯುದ್ಧವೇ ಕಾರಣ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲಾ. ಕಾರ್ಗಿಲ್‌ನಂತಹ ಯುದ್ಧವಾಗದೇ ಇದ್ದಿದ್ದರೆ ಗುರ್‌ಮೇಹರ್ ಹಾಗೂ ಅವರಂತಹ ಹಲವಾರು ಮಕ್ಕಳು ಅನಾಥರಾಗುತ್ತಿರಲಿಲ್ಲ. ಯುದ್ಧವೇ ತನ್ನ ತಂದೆಯ ಸಾವಿಗೆ ಕಾರಣವೆಂದು ಸಾಂದರ್ಭಿಕವಾಗಿ ಹೇಳಿದ್ದನ್ನೇ ಈ ದೇಶಭಕ್ತರು ಇಷ್ಟೊಂದು ದೊಡ್ಡದು ಮಾಡಲು ಸಾಧ್ಯವಿರಲಿಲ್ಲ.  


ಈ ನಕಲಿ ದೇಶಭಕ್ತ ಫೇಕುಗಳ ಮಾತನ್ನು ನಂಬಿ ಅವಿವೇಕದಿಂದ ಪ್ರತಿಕ್ರಿಯಿಸಿದವರಲ್ಲಿ ಕೆಲವು ಸೆಲಿಬ್ರಿಟಿಗಳೂ ಇದ್ದರೆಂಬುದು ವಿಷಾದಕರ ಸಂಗತಿ. ಕ್ರಿಕೆಟಿಗ ವಿರೇಂದ್ರ ಸಹ್ವಾಗ್ ಕ್ರಿಕೆಟಿನಲ್ಲಿ ಎರಡು ಬಾರಿ ತ್ರೀಶತಕ ಬಾರಿಸಿದ್ದು ನಾನಲ್ಲಾ ನನ್ನ ಬ್ಯಾಟ್ ಎಂದು ಟ್ವೀಟರಲ್ಲಿ ಹೇಳುವ ಮೂಲಕ ಕೌರಳನ್ನು ಲೇವಡಿ ಮಾಡಿ ತನ್ನ ಅಜ್ಞಾನವನ್ನು ಹೇಳಿಕೊಂಡ.. ಬಾಲಿವುಡ್ ನಟ ರಣದೀಪ್ ಹೂಡ ಸಹ ತೀರಾ ಅಗ್ಗದ ತಮಾಷೆ ಮಾಡಿ ತಾನೇ ತಮಾಷೆಯ ವಸ್ತುವಾದ. ಯಹೂದಿಗಳನ್ನು ಸಾಯಿಸಿದ್ದು ಹಿಟ್ಲರಲ್ಲಾ ವಿಷಾನಿಲ ಎಂದು ಮೂರ್ಖತನದ ಪ್ರತಿಕ್ರಿಯೆಯನ್ನು ಕುಸ್ತಿಪಟು ಯೋಗೇಶ್ವರ್ ದತ್ತ ಕೊಟ್ಟಿದ್ದಾರೆ. ಕೋಮುವಿಷವನ್ನು ಮೈಯೆಲ್ಲಾ ಮೆತ್ತಿಕೊಂಡ ಸಂಸದ ಪ್ರತಾಪಸಿಂಹನಂತೂ  ಕೌರಳನ್ನು ದಾವೂದ್ ಇಬ್ರಾಹಿಂಗೆ ಹೋಲಿಸಿ ತನ್ನ ದೇಶಭಕ್ತಿಯ ಉನ್ಮಾದವನ್ನು ಕಾರಿಕೊಂಡ. ಗುರ್‌ಮೇಹರ್ ಕೌರಳ ದಾರಿಗೆಡಿಸಿದವರು ಯಾರು? ಎಂದು ಕೇಂದ್ರ ಸಚಿವ ಕಿರುಣ್ ರಿಜಿಜು ಪ್ರಶ್ನಿಸಿದರು. ಇಷ್ಟೇ ಅಲ್ಲದೇ ಇನ್ನೂ ನೀಚತನದ ಪರಮಾವಧಿಗೆ ಇಳಿದ ನಕಲಿ ದೇಶಭಕ್ತರು ಅತ್ಯಾಚಾರದ ಬೆದರಿಕೆಯನ್ನೂ ಹಾಕಿ ತಮ್ಮ ಅಸಲಿ ಮುಖವಾಡವನ್ನು ತೋರಿಸಿಕೊಂಡರು. ಇಷ್ಟಕ್ಕೆ ಸುಮ್ಮನಾಗದ ಈ ಸಂಘದ ಕಮಂಗಿಗಳು ಯಾವದೋ ಹುಡುಗಿ ಕಾರಿನಲ್ಲಿ ಹಾಡೊಂದಕ್ಕೆ ಡಾನ್ಸ್ ಮಾಡುತ್ತಿದ್ದ ವಿಡಿಯೋವೊಂದನ್ನು ಹಾಕಿ ಇದೋ ನೋಡಿ ಗುರ್‌ಮೇಹರ್‌ಳ ಅಸಲಿತನ ಎಂದು ತಮ್ಮ ನೀಚತನವನ್ನು ಮುಂದುವರೆಸಿದ್ದಾರೆ.

ದೇಶದ ವಿಚಾರ ಬಂದರೆ ನಾನು ನನ್ನ ತಂದೆಯ ಹಾಗೆ ಬುಲೆಟ್ ಹಿಡಿಯಲೂ ಹಿಂಜರೆಯುವುದಿಲ್ಲಾ. ನನಗೆ ಯಾರ ಭಯವೂ ಇಲ್ಲ. ನಾನು ಯಾರಿಗೂ ತಲೆಬಾಗುವುದಿಲ್ಲ. ಹಿಂಸಾಚಾರದ ವಿರುದ್ಧ ವಿದ್ಯಾರ್ಥಿಗಳು ದನಿಯೆತ್ತಬೇಕಿದೆ. ಹಿಂಸಾಚಾರವನ್ನು ಸಹಿಸಲು ಸಾಧ್ಯವಿಲ್ಲ ಎಂದು ಘೋಷಣೆ ಕೂಗಬೇಕಿದೆ. ಎಬಿವಿಪಿ ವಿರುದ್ಧ ತಿರುಗಿ ಬಿದ್ದಿರುವುದಕ್ಕೆ ನನಗೆ ಸಾಕಷ್ಟು ಬೆದರಿಕೆ ಕರೆಗಳು ಬಂದಿವೆ. ಇದಕ್ಕೆಲ್ಲಾ ನಾನು ಹೆದರುವುದಿಲ್ಲ. ನಾನು ಸರಿಯಾದ ನಿಲುವಿನಲ್ಲಿ ನಿಂತಿದ್ದೇನೆಂಬ ನಂಬಿಕೆ ನನಗಿದೆ. ನೀವು ಯಾವ ಸಂಘಟನೆ, ಎಷ್ಟು ಪ್ರಮಾಣದಲ್ಲಿ ಶಕ್ತಿಶಾಲಿಯಾಗಿದ್ದೀರಿ ಎಂಬುದು ನನಗೆ ಬೇಕಿಲ್ಲ. ನಾನು ಹೆದರಬೇಕಂದು ಯಾರೊಬ್ಬರೂ ಹೇಳುವಂತಿಲ್ಲ. ದೆಹಲಿಯ ರಾಮಾಸ್ ಕಾಲೇಜಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಲ ಯುವತಿಯರ ಮೇಲೆ ದೌರ್ಜನ್ಯವೆಸಗಲಾಗಿದೆ. ಇದಲ್ಲದೆ ಒಬ್ಬ ಮಹಿಳೆಗೆ ಅತ್ಯಾಚಾರ ಬೆದರಿಕೆ ಹಾಕಿರುವ ವಿಚಾರವೂ ತಿಳಿಯಿತು. ನನ್ನ ಪ್ರಕಾರ ಎಬಿವಿಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಮಯ ಬಂದಿದೆ. ವಿದ್ಯಾರ್ಥಿ ಸಂಘಟನೆಗಳು ಕಾನೂನು ಹಾಗೂ ಸುವ್ಯವಸ್ಥೆಗೆ ಧಕ್ಕೆ ತರುವುದು, ಕೆಟ್ಟದಾಗಿ ವರ್ತಿಸುವುದು ಸರಿಯಲ್ಲ. ಹೀಗಾಗಿಯೇ ನಾವು ಎಬಿವಿಪಿ ವಿರುದ್ಧ ಅಭಿಯಾನವನ್ನು ಆರಂಭಿಸಿದೆವು. ಈ ಮೂಲಕ ನಾನು ದೌರ್ಜನ್ಯ, ಹಿಂಸಾಚಾರವನ್ನು ಸಹಿಸುವುದಿಲ್ಲ ಎಂಬ ಸಂದೇಶ ರವಾನಿಸುತ್ತಿದ್ದೇವೆ. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ಹಾಗೂ ಎಲ್ಲಾ ವಿದ್ಯಾರ್ಥಿಗಳನ್ನೂ ಪ್ರೀತಿಸುತ್ತೇನೆ. ವಿದ್ಯಾರ್ಥಿಗಳ ವಾಕ್ ಸ್ವಾತಂತ್ರ್ಯವನ್ನು ನಾನು ಬೆಂಬಲಿಸುತ್ತೇನೆ. ಎಬಿವಿಪಿ ವಿರುದ್ಧ ತಿರುಗಿ ಬಿದ್ದಿರುವುದಕ್ಕೆ ನನಗೆ ದೇಶವಿರೋಧಿ ಎಂಬ ಪಟ್ಟ ಕಟ್ಟಲಾಗುತ್ತಿದೆ. ನನ್ನ ದೇಶಭಕ್ತಿಯನ್ನು ನಾನು ಸಾಬೀತು ಪಡಿಸುವ ಅಗತ್ಯವಿಲ್ಲ. ಈ ಸಂದರ್ಭದಲ್ಲಿ ಪ್ರಶ್ನೆ ಹಾಕುತ್ತಿರುವವರು ದೇಶಭಕ್ತರಾಗಲು ಸಾಧ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಿದೆ.. ಎಂದು ಧೈರ್ಯದಿಂದ ಪ್ರತಿಕ್ರಿಯಿಸುವ ಮೂಲಕ  ನಕಲಿ ದೇಶಭಕ್ತರ ಅಸಲಿ ದೇಶದ್ರೋಹವನ್ನು ಗುರ್‌ಮೆಹರ್ ಕೌರ್ ಬಯಲಿಗೆಳೆದಿದ್ದಾರೆ.


ಇಷ್ಟಕ್ಕೂ ಸನಾತನವಾದಿ ಸಂತಾನಗಳಾದ ಈ ಸಂಘಿಗಳ ಈ ಕುತಂತ್ರ ಯಾವಾಗಲೂ ಜಾರಿಯಲ್ಲಿರುತ್ತದೆ. ದಶಕದಿಂದ ಇತ್ತೀಚೆಗೆ ಅದು ತಾರಕಕ್ಕೇರಿದೆ. ಯಾರಾದರೂ ಸಂಘಪರಿವಾರದ ಜನವಿರೋಧಿತನದ ವಿರುದ್ಧ ದ್ವನಿಯೆತ್ತಿದರೆ ಅವರನ್ನು ಧರ್ಮದ್ರೋಹಿಗಳು, ದೇಶದ್ರೋಹಿಗಳು ಎಂದು ತೀರ್ಮಾನಿಸಿ ಅವಮಾನಿಸುವುದು ಅವರ ಹಿಡನ್ ಅಜೆಂಡಾದ ಭಾಗವೇ ಆಗಿದೆ. ಅದರಲ್ಲೂ ಮಹಿಳೆಯರೇನಾದರೂ ಪ್ರಶ್ನಿಸಿದರೆ ಮುಗಿಯಿತು ಪುರೋಹಿತಶಾಹಿ ಮನಸ್ಥಿತಿಯ ಈ ಉನ್ಮಾದಿಗಳು ಮಹಿಳೆಯ ಚಾರಿತ್ರ್ಯವದೆಗೆ ಸಂಘಟಿತರಾಗಿ ಎದ್ದು ನಿಲ್ಲುತ್ತಾರೆ. ಹೆಣ್ಣನ್ನು ನಿಯಂತ್ರಿಸಲು ದಮನ, ನಿಂದನೆ, ಹಲ್ಲೆ, ಅತ್ಯಾಚಾರಗಳನ್ನು ಅಸ್ತ್ರವನ್ನಾಗಿಸಿಕೊಂಡು ಮಹಿಳೆಯನ್ನು ಸದಾ ಗುಲಾಮಳನ್ನಾಗಿಯೇ ಇರುವಂತೆ ನೋಡಿಕೊಳ್ಳುವುದು ಮನುವಾದದ ಅಜೆಂಡಾ ಮತ್ತು ಕೋಮುವಾದಿಗಳ ಜಂಡಾ ಆಗಿದೆ.


ಕೇವಲ ಒಂದು ಪ್ಲೇಕಾರ್ಡ ಬರಹ ಸಂಘಪರಿವಾರದವರನ್ನು ಇಷ್ಟೊಂದು ಹೆದರಿಸಲು ಸಾಧ್ಯವಾ? ಒಬ್ಬ ವಿದ್ಯಾರ್ಥಿನಿ ಎಬಿವಿಪಿಗೆ ಹೆದರುವುದಿಲ್ಲ ಎಂದು ಬರೆದು ಪೇಸ್ಬುಕ್ಕಿನ ತನ್ನ ಮುಖಪುಟದಲ್ಲಿ ಹಾಕಿದ್ದಕ್ಕೆ ಈ ವಟುಗಳೂ ಅದ್ಯಾಕೆ ತರಗುಟ್ಟಿ ಹೋದರು? ಯಾಕೆಂದರೆ ಅದು ಬರೀ ಪ್ಲೇಕಾರ್ಡ ಆಗಿರದೇ ಎಬಿವಿಪಿಯ ದಮನದಿಂದ ರೋಸಿಹೋಗಿದ್ದ ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರೇಪಣೆಯನ್ನು ಕೊಟ್ಟಿತ್ತು. ಎಬಿವಿಪಿ ವಿರುದ್ದ ವಿದ್ಯಾರ್ಥಿಗಳೆಲ್ಲಾ ಸಂಘಟಿತರಾಗಿ ಪ್ರತಿಭಟಿಸಲು ಸ್ಪೂರ್ತಿಯಾಗಿತ್ತು. ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ (ಎಐಎಸ್ ಎ)ವು ಎಬಿವಿಪಿಯ ಗೂಂಡಾಗಿರಿಯ  ವಿರುದ್ಧ  ಪ್ರತಿಭಟಿಸಲು ಕರೆಕೊಡುವಂತೆ ಮಾಡಿತ್ತು. ಇದರಿಂದ ಬೆಚ್ಚಿಬಿದ್ದ ಈ ಎಬಿವಿಪಿ ಹಾಗೂ ಅದರ ಪೋಷಕರಾದ ಸಂಘಪರಿವಾರದವರು ಹೇಗಾದರೂ ಮಾಡಿ ಪ್ಲೇಕಾರ್ಡ ಹಿಡಿದ ಹುಡುಗಿಯ ಚಾರಿತ್ರ್ಯದ ಮೇಲೆ ಕಳಂಕ ತರಲು  ಪ್ರಯತ್ನಿಸಿದರು. ಅದಕ್ಕೂ ಆಕೆ ಬೆದರದೇ ದಿಟ್ಟತನದಿಂದ ಉತ್ತರಿಸಿದಾಗ ಅತ್ಯಾಚಾರದ ಬೆದರಿಕೆ ಹಾಕಿದರು. ಇದರ ವಿರುದ್ಧ ದೆಹಲಿ ಮಹಿಳಾ ಆಯೋಗಕ್ಕೆ ಕೌರ್ ದೂರು ನೀಡಿ ರಕ್ಷಣೆ ಕೋರಿದರು. ಆದರೂ ಕೇಂದ್ರ ಸರಕಾರವೇ ಎಬಿವಿಪಿ ಪರವಾಗಿರುವುದರಿಂದ ಹಾಗೂ ದೆಹಲಿಯಲ್ಲಿರುವ ಪೊಲೀಸ್ ವ್ಯವಸ್ಥೆ ಕೇಂದ್ರ ಸರಕಾರದ ಹಿಡಿತದಲ್ಲಿರುವುದರಿಂದ ಗುರುಮೆಹರ್‌ಗೆ ಸಂಪೂರ್ಣ ರಕ್ಷಣೆ ಸಿಗುವ ಸಾಧ್ಯತೆಗಳಿಲ್ಲವಾಯಿತು. ಜೊತೆಗೆ ಎಂತಹ ನೀಚ ಕೆಲಸಕ್ಕೂ ಹೇಸದವರೊಂದಿಗೆ ಕದನಕ್ಕಿಳಿಯುವ ದೊಡ್ಡ ತಾಕತ್ತೂ ಆ ಪುಟ್ಟ ಯುವತಿಗೆ ಇಲ್ಲವಾಯಿತು. ಕೊನೆಗೂ ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ ಹಾಗೂ ಎಬಿವಿಪಿ ವಿರುದ್ದದ ಅಭಿಯಾನದಿಂದ ಹಿಂದೆ ಸರಿಯುತ್ತೇನೆ ಹಾಗೂ ಎಐಎಸ್ ಎ ಪ್ರತಿಭಟನೆಯಲ್ಲಿ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಲಿ” ಎಂದು  ಟ್ವೀಟರ್ ನಲ್ಲಿ ಪ್ರತಿಕ್ರಿಯಿಸಿದ ಕೌರ್ ಹೋರಾಟದ ಕಣದಿಂದ ಒತ್ತಾಯಪೂರ್ವಕವಾಗಿ ಹಿಂದೆ ಸರಿದರು. ಇದು ಎಬಿವಿಪಿಗೆ ದಕ್ಕಿದ ಜಯವೆಂದು ನಕಲಿ ದೇಶಭಕ್ತ ವಟುಗಳು ಕುಣಿದಾಡಿದವು. ಆದರೆ.. ಒಬ್ಬ ಹೆಣ್ಣು ಮಗುವಿಗೆ ಕೊಡಬಾರದ ಕಷ್ಟ ಕೊಟ್ಟು ಚಾರಿತ್ರ್ಯವಧೆ ಮಾಡಿ ತಮ್ಮ ಮುಖವಾಡವನ್ನು ಬಯಲುಮಾಡಿಕೊಂಡವು.

ಪಾಕ್ ನರಕವಲ್ಲಾ ಎಂದು ಹೇಳಿದ ಸಂಸದೆ ರಮ್ಯಾರವರನ್ನು ಅಶ್ಲೀಲ ಭಾಷೆ ಬಳಸಿ ನಿಂದಿಸಿದವರೂ ಇದೇ ಮನುವಾದಿಗಳು. ಇತ್ತೀಚೆಗೆ ಸಾಮಾಜಿಕ ಹೋರಾಟಗಾರ್ತಿ ಪ್ರ್ರಭಾ ಬೆಳವಂಗಲ ಅವರು ಫೇಸ್ಬುಕಲ್ಲಿ ಹಂಚಿಕೊಂಡ ಬರಹವೊಂದನ್ನು ಆಕ್ಷೇಪಿಸಿ ಆಕೆಯ ಜುಟ್ಟು ಹಿಡಿದು ಅತ್ಯಾಚಾರ ನಡೆಸಬೇಕು ಎಂದು ಪ್ರತಿಕ್ರಿಯಿಸಿದ ವಿ.ಆರ್.ಭಟ್ ಎನ್ನುವ ದೇಶಭಕ್ತ ಅಶಿಕ್ಷಿತನಂತೂ ಅಲ್ಲವೇ ಅಲ್ಲ. ಎಲ್ಲೇ ಯಾವುದೇ ಸಂದರ್ಭದಲ್ಲಿ ಮಹಿಳೆ ಪ್ರಶ್ನಿಸಿದರೆ ಅವಳನ್ನು ಬಗ್ಗು ಬಡಿಯಲು ಆಕೆಯ ಮನಸ್ಸು ಹಾಗೂ ದೇಹವನ್ನು ಘಾಸಿಗೊಳಿಸುವ ಹಾಗೂ ಸಮಾಜದಲ್ಲಿ ತಲೆತಗ್ಗಿಸುವಂತೆ ಮಾಡುವ ಹುನ್ನಾರಗಳು ಪುರುಷಪ್ರಧಾನ ವ್ಯವಸ್ಥೆಯೊಳಗಿರುವ ಪುರೋಹಿತಶಾಹಿ ಮನಸ್ಸುಗಳು ಮಾಡುತ್ತಲೇ ಬಂದಿವೆ. ಸಂಘಪರಿವಾರ ದೇಶಾಧಿಕಾರ ಹಿಡಿದ ನಂತರ ಮಹಿಳೆಯರ ಮೇಲೆ ಇಂತಹ ನಿಬಂಧನೆಗಳು ಹೆಚ್ಚುತ್ತಲೇ ಇವೆ. ನಕಲಿ ದೇಶಭಕ್ತರ ಜೀವವಿರೋಧಿತನವನ್ನು ಪ್ರಶ್ನಿಸಿದ ಮಹಿಳೆಯರ ಶೀಲಹರಣ ಮಾಡಬೇಕೆಂಬ ನೀಚತನದ ಮಾತುಗಳು ಕೇಳಿಬರುತ್ತವೆ. ಇದು ನಾಗರೀಕ ಸಮಾಜದ ಅನಾಗರೀಕ ವರ್ತನೆಯಾಗಿದ್ದು ಇಂತಹುದಕ್ಕೆ ಗುರ್ ಮೇಹರ್ ಕೌರನಂತಹ ಗಟ್ಟಿ ಮಹಿಳೆಯರು ದಿಟ್ಟ ಉತ್ತರವನ್ನು ಕೊಡಬೇಕಾಗಿದೆ. ಮಹಿಳೆಯರ ಮೇಲೆ ನಿಂದನೆ, ಹಲ್ಲೆ ಮಾಡುವವರ ಮೇಲೆ, ಅತ್ಯಾಚಾರದ ಬೆದರಿಕೆ ಹಾಕುವವರ ಮೇಲೆ ಗೂಂಡಾ ಕಾಯಿದೆಯನ್ನು ಹಾಕಿ ಜೈಲಿಗಟ್ಟಬೇಕು ಎಂದು ಎಲ್ಲಾ ಪ್ರಗತಿಪರ ಸಂಘಟನೆಗಳು ಸಂಘಟಿತವಾಗಿ ಹೋರಾಟ ಮಾಡಬೇಕಿದೆ. ಸಕಾರಾತ್ಮಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ದಮನಿಸುವ ದುಷ್ಟ ಶಕ್ತಿಗಳ ವಿರುದ್ಧ ಪ್ರಜ್ಞಾವಂತರು ತಿರುಗಿ ಬೀಳಬೇಕಿದೆ. ಇಲ್ಲವಾದರೆ ಈ  ದೇಶದಲ್ಲಿ ಬಲಪಂಥೀಯರನ್ನು ಹೊರತು ಪಡಿಸಿ ಬೇರೆ ಯಾರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ಲದಂತೆ ಮಾಡುವಂತಹ ದಮನಕಾರಿ ಕರಾಳ ಪ್ಯಾಸಿಸ್ಟ್ ವ್ಯವಸ್ಥೆ  ಬರುವುದರಲ್ಲಿ  ಸಂದೇಹವೇ ಇಲ್ಲಾ.  

  -ಶಶಿಕಾಂತ ಯಡಹಳ್ಳಿ


    


ಬುಧವಾರ, ಮಾರ್ಚ್ 22, 2017

ತಹ ತಹ... 78 ವಿದ್ಯುನ್ಮಾನ ಮತಯಂತ್ರಗಳ ಸುತ್ತ ಸಂದೇಹದ ಹುತ್ತ:





ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ನಿಂತಿರುವುದೇ ಪ್ರಜೆಗಳ ಮತಮೌಲ್ಯದ ಮೇಲೆ. ತಮ್ಮ ಪ್ರತಿನಿಧಿಗಳು ಯಾರಿರಬೇಕು?, ಯಾವ ಪಕ್ಷ ಅಧಿಕಾರಕ್ಕೆ ಬರಬೇಕು? ಎನ್ನುವುದನ್ನೆಲ್ಲಾ ನಿರ್ದರಿಸುವವರು ಈ ದೇಶದ ಮತದಾರರು ಎನ್ನುವುದೆಲ್ಲಾ ಸಂವಿಧಾನದ ಸದಾಶಯ. ಆದರೆ.. ಭಾರತದಂತಹ ಬಂಡವಾಳಶಾಹಿ ಪ್ರಜಾಪ್ರಭುತ್ವದ ಚುನಾವಣಾ ರಾಜಕೀಯದಲ್ಲಿ ಅಸಲಿಗೆ ನಡೆಯುತ್ತಿರುವುದೇ ಬೇರೆ. ರಾಜ್ಯಾಧಿಕಾರ ಹಿಡಿಯುವುದೇ ಪರಮ ಗುರಿಯೆಂದು ತಿಳಿದು ತಂತ್ರ ಕುತಂತ್ರಗಳಲ್ಲಿ ನಿರತವಾಗಿರುವ ಎಲ್ಲಾ ನಮೂನಿಯ ರಾಜಕೀಯ ಪಕ್ಷಗಳು ಹಾಗೂ ಅವುಗಳ ರೂವಾರಿಗಳ ಏಕೈಕ ಮಂತ್ರವೇನೆಂದರೆ ಹೇಗಾದರೂ ಮಾಡು, ಏನಾದರೂ ಮಾಡು ಓಟುಗಳನ್ನು ಪಡೆದು ಅಧಿಕಾರ ಹಿಡಿ ಎನ್ನುವುದಾಗಿದೆ. ಜನಪರ ಕಾಳಜಿ ಇರುವ ವ್ಯಕ್ತಿಗಿಂತಲೂ ಜನರ ಮತಗಳನ್ನು ಹಣಬಲ ತೋಳ್ಬಲಗಳಿಂದ ಹೇಗಾದರೂ ಮಾಡಿ ಪಡೆಯಬಹುದಾದ ತಾಕತ್ತಿರುವವನಿಗೆ ಮಾತ್ರ ಇಲ್ಲಿ ಪ್ರಮುಖ ಪಕ್ಷದ ಅಭ್ಯರ್ಥಿಯಾಗಲು ಸಾಧ್ಯವಾಗುತ್ತದೆ.

ಮತದಾರರಿಗೆ ಇಲ್ಲಸಲ್ಲದ ಪೊಳ್ಳು ಭರವಸೆಗಳನ್ನು ಕೊಡುವ ಮೂಲಕ ಆಸೆ ಆಮಿಷಗಳನ್ನೊಡ್ಡಿ ಮತ ಪಡೆಯುವ ತಂತ್ರಗಾರಿಕೆ ಹಳೆಯದಾಗಿದೆ. ಬರುಬರುತ್ತಾ ಈ ಓಟಿನ ಹಪಾಹಪಿ ಅದೆಷ್ಟಾಗಿದೆ ಎಂದರೆ ಮತದಾರರನ್ನು ಜಾತಿ ಧರ್ಮದ ಹೆಸರಲ್ಲಿ ಒಡೆದು ಮತಗಳನ್ನು ದೃವೀಕರಣ ಮಾಡುವ ಸಂವಿಧಾನ ವಿರೋಧಿ ಕೃತ್ಯ ಅವ್ಯಾಹತವಾಗಿ ದೇಶಾದ್ಯಂತ ನಡೆಯುತ್ತಿದೆ. ಇದಕ್ಕೆ ಯಾವುದೇ ಪ್ರಮುಖ ಪಕ್ಷಗಳೂ ಹೊರತಲ್ಲಾ. ಉತ್ತಮ ಜನಪರ ಕೆಲಸಗಳಿಂದ ಜನರನ್ನು ಒಲಿಸಿಕೊಳ್ಳುವ, ಜನರ ಪ್ರೀತಿ ವಿಶ್ವಾಸವನ್ನು ಗಳಿಸಿಕೊಳ್ಳುವ ಜನಪ್ರತಿನಿಧಿಗಳು ಈಗ ಬೆರಳೆಣಿಕೆಗೂ ದಕ್ಕದಾಗಿದ್ದಾರೆ. ಈಗೇನಿದ್ದರೂ ಚುನಾವಣೆಯಲ್ಲಿ ಹಣ, ಹೆಂಡ, ಹುಸಿ ಆಶ್ವಾಸನೆ ಹಾಗೂ ಜಾತಿಗಳೇ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು ಸಂವಿಧಾನದ ಆಶಯವೇ ನೇಪತ್ಯಕ್ಕೆ ಸೇರಿಹೋಗಿದೆ. ಇತ್ತೀಚೆಗಂತೂ ಮತದಾರರ ಮೇಲೆಯೇ ವಿಶ್ವಾಸ ಕಳೆದುಕೊಂಡ ರಾಜಕೀಯ ಪಕ್ಷಗಳು ಮತಯಂತ್ರವನ್ನೇ ತಮ್ಮಿಚ್ಚೆಯಂತೆ ತಿರುಚಿ ತಮಗೆ ಬೇಕಾದಂತೆ ಮತಗಳನ್ನು ಹಾಕಿಸಿಕೊಳ್ಳುವ ತಂತ್ರಗಾರಿಕೆಯನ್ನು ರೂಢಿಸಿಕೊಂಡಿವೆ.

2017 ಫೆಬ್ರವರಿ ಹಾಗೂ ಮಾರ್ಚ ತಿಂಗಳಲ್ಲಿ ನಡೆದ ಉತ್ತರ ಪ್ರದೇಶದ ಚುನಾವಣೆಯಲ್ಲಿ ಮತಯಂತ್ರ ದುರುಪಯೋಗದ ಆರೋಪ ಹಿಂದೆಂದಿಗಿಂತಲೂ ಹೆಚ್ಚಾಗಿ ಕೇಳಿಬಂದಿದೆ. ಯುಪಿ ಎಲೆಕ್ಷನ್ನಿನಲ್ಲಿ ನಿಜಕ್ಕೂ ಇಂತಹುದೊಂದು ದುಷ್ಕೃತ್ಯ ವ್ಯಾಪಕವಾಗಿ ನಡೆದಿದೆಯಾ? ಅನುಮಾನಗಳಂತೂ ಇದ್ದೇ ಇದೆ. ಆದರ ನಡುವೆಯೇ ಬಿಜೆಪಿ ಈ  ರಾಜ್ಯದಲ್ಲಿ ಜಯಬೇರಿ ಬಾರಿಸಿದೆ. ಕೇಂದ್ರದಲ್ಲಿ ಇದೇ ಪಕ್ಷದ ಆಡಳಿತವಿದೆ. ಸೋತು ಸುಣ್ಣವಾಗಿರುವ ವಿರೋಧ ಪಕ್ಷಗಳು ಅದೆಷ್ಟೇ ಮತಯಂತ್ರದ ದುರುಪಯೋಗದ ಬಗ್ಗೆ ಬಾಯಿ ಬಡಿದುಕೊಂಡರೂ ಅವರ ಪರಿಸ್ಥಿತಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎನ್ನುವಂತಾಗಿದೆ.  ನಿಜಕ್ಕೂ ಮತಯಂತ್ರಗಳನ್ನು ತಿರುಚುವ ಸಾಧ್ಯತೆ ಇದೆಯಾ? ಯಾರು ಯಾರಿಗೇ ಮತ ಹಾಕಿದರೂ ಒಂದು ಪಕ್ಷದ ಅಭ್ಯರ್ಥಿಗೆ ಮತಗಳೆಲ್ಲಾ ಬೀಳುವಂತೆ ಮಾಡಲು ಸಾಧ್ಯವಾ? ಹೌದು ಸಾಧ್ಯ ಅನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆತಂಕಕಾರಿಯಾದ ಸಂಗತಿ.

ಮೊದಲು ಮ್ಯಾನುವಲ್ ಬ್ಯಾಲೆಟ್ ಪೇಪರ್‌ನಲ್ಲಿ ಮತಗಳು ಚಲಾವಣೆಗೊಳಗಾಗುತ್ತಿದ್ದವು. ಆಗ ಶಕ್ತಿ ಇದ್ದವರು ಬೂತ್ ಕ್ಯಾಪ್ಚರ್ ಮಾಡಿಯೋ ಇಲ್ಲವೇ ಚುಣಾವಣಾಧಿಕಾರಿಗಳನ್ನು ಸರಿಪಡಿಸಿಕೊಂಡೋ ಮತಗಳನ್ನು ಬಾಚಿಕೊಳ್ಳುತ್ತಿದ್ದರು. ಹಾಗೂ ಮತಪತ್ರಗಳನ್ನು ಮುದ್ರಿಸುವುದು, ಸಾಗಿಸುವುದು ಚುನಾವಣೆಯ ನಂತರ ಸುರಕ್ಷಿತವಾಗಿ ಕಾಪಾಡುವುದು ಅತಿ ಹೆಚ್ಚು ಖರ್ಚು ಸಮಯ ಹಾಗೂ ಶ್ರಮದ ಕೆಲಸವಾಗಿತ್ತು.   ಇದನ್ನೆಲ್ಲಾ ತಡೆಯಲೆಂದು ಚುನಾವಣಾ ಆಯೋಗವು ವಿದ್ಯುನ್ಮಾನ ಮತಯಂತ್ರಗಳು ಅಂದರೆ ಇವಿಎಂ ಗಳು ಬಳಕೆಗೆ ಬಂದವು. ಚುನಾವಣಾ ಅಕ್ರಮಗಳು ಕಡಿಮೆಯಾಗಿ ನ್ಯಾಯಸಮ್ಮತ ರೀತಿಯಲ್ಲಿ ಚುನಾವಣೆಗಳು ನಡೆಯಲಿ ಎನ್ನುವ ಸದುದ್ದೇಶ ಈ ಹೊಸ ವ್ಯವಸ್ಥೆಯ ಹಿಂದಿತ್ತು. ಆದರೆ.. ಚುನಾವಣಾ ಆಯೋಗ ಚಾಪೆ ಕೆಳಗೆ ತೂರಿದರೆ ರಾಜಕೀಯ ಪಕ್ಷಗಳು ರಂಗೋಲಿ ಕೆಳಗೆ ತೂರಿ ತಮ್ಮ ನೀಚತನದ ಆಟ ಆಡುವುದನ್ನು ಮುಂದುವರೆಸಿದವು. ಬ್ಯಾಲೆಟ್ ಪೇಪರ್ ವ್ಯವಸ್ಥೆಯಲ್ಲಿ ಬೂತ್ ಕ್ಯಾಪ್ಚರ್ ಮಾಡಲಿಕ್ಕೆ ಗೂಂಡಾ ಶಕ್ತಿ ಬೇಕಾಗಿತ್ತು. ಅದರೆ.. ಈ ಇವಿಎಂ ವ್ಯವಸ್ಥೆಯಲ್ಲಿ ಯುಕ್ತಿ ಇದ್ದರೆ ಸಾಕು ಮತಗಳನ್ನು ಬೇಕಾದವರ ಖಾತೆಗೆ ಸೇರಿಸಲು.

ಈ ವಿದ್ಯುನ್ಮಾನ ಮತಯಂತ್ರಗಳ ಬಳಕೆ ಮೊಟ್ಟ ಮೊದಲು ಆರಂಭವಾಗಿದ್ದು 1982ರ ಕೇರಳ ರಾಜ್ಯದ ಚುನಾವಣೆಯಲ್ಲಿ. ಆಗಲೇ ಇದರ ದುರುಪಯೋಗದ ಕುರಿತು ಎಚ್ಚೆತ್ತ ಸಿಪಿಎಂ ಪಕ್ಷವು ಹೈಕೋರ್ಟಿನಲ್ಲಿ ಪ್ರಶ್ನಿಸಿತ್ತು. ಆದರೆ ಚುನಾವಣೆ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಲಾಗದೆಂದು ಹೈಕೋರ್ಟ ತನ್ನ ಜವಾಬ್ದಾರಿಯಿಂದಾ ಹಿಂದೆ ಸರಿಯಿತು. ವಿಪರ್ಯಾಸವೆಂದರೆ ಆ ಚುನಾವಣೆಯಲ್ಲಿ ಕಮ್ಯೂನಿಸ್ಟ್ ಪಕ್ಷ ಗೆದ್ದಾಗ ಕಾಂಗ್ರೆಸ್ ಮತಯಂತ್ರಗಳ ದುರುಪಯೋಗವಾಗಿದೆ ಎಂದು ಹೈಕೋರ್ಟಿಗೆ ಮೊರೆಯನ್ನಿಟ್ಟಿತು. ಅಂದಿನಿಂದಾ ಇಂದಿನವರೆಗೂ ಈ ಇವಿಎಂ ಗಳ ಬಗ್ಗೆ ಎಲ್ಲಾ ಪಕ್ಷಗಳಲ್ಲೂ ಒಂದು ರೀತಿ ಗುಮಾನಿ ಇದ್ದೇ ಇದೆ. ಗೆದ್ದಾಗ ಸುಮ್ಮನಿರುವುದು ಸೋತಾಗ ಮತಯಂತ್ರಗಳ ದುರುಪಯೋಗದ ಬಗ್ಗೆ ಗುಲ್ಲೆಬ್ಬಿಸುವುದು ನಡೆದೇ ಇದೆ. ಆದರೆ ಚುನಾವಣಾ ಆಯೋಗ ಮಾತ್ರ ಈ ಇವಿಎಂ ವ್ಯವಸ್ಥೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಲೇ ಬಂದಿದೆ.

ಜಗತ್ತಿನ ಯಾವ ದೇಶಗಳೂ ಭಾರತದಷ್ಟು ವ್ಯಾಪಕವಾಗಿ ಇವಿಎಂ ಗಳನ್ನು ಬಳಸುತ್ತಿಲ್ಲಾ. ಎಂತೆಂತಹ ಸುರಕ್ಷಿತ ವಿದ್ಯುನ್ಮಾನ ವಲಯಗಳನ್ನೇ ಹ್ಯಾಕ್ ಮಾಡುವ ಪ್ರಚಂಡರು ಇರುವಾಗ ಇನ್ನು ಈ ಇವಿಎಂಗಳು ಯಾವ ಲೆಕ್ಕ ಎನ್ನುವ ಗುಮಾನಿ ಎಲ್ಲಾ ದೇಶಗಳಲ್ಲೂ ಇದ್ದೇ ಇದೆ. ಇತ್ತೀಚೆಗೆ ಟ್ರಂಪ್ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆ ಮೀರಿ ಜಯಗಳಿಸಿದಾಗ ರಷ್ಯಾದ ಹ್ಯಾಕರಗಳು ಮತಯಂತ್ರಗಳನ್ನು ಟ್ರಂಪ್ ಪರವಾಗಿ ತಿರುಚಿದ್ದಾರೆಂಬ ಆರೋಪವೂ ಕೇಳಿಬಂದಿತ್ತು.. ಆದರೆ ಅಮೇರಿಕದಲ್ಲಿರುವ 50 ರಾಜ್ಯಗಳಲ್ಲಿ ಕೇವಲ 5 ರಾಜ್ಯಗಳಲ್ಲಿ ಮಾತ್ರ ಈ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸುತ್ತಿದ್ದುದರಿಂದ ಈ ಆರೋಪಕ್ಕೆ ಹೆಚ್ಚು ಮಹತ್ವ ಸಿಗಲಿಲ್ಲ. 2002ರಲ್ಲಿ ಅಮೇರಿಕದಲ್ಲಿ ಇವಿಎಂಗಳ ಬಳಕೆ ಆರಂಭವಾಯಿತು. ಆದರೆ ಈ ಮತಯಂತ್ರಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದೆಂದು ಕಂಪ್ಯೂಟರ್ ಪರಿಣಿತರು ಸಾಬೀತುಗೊಳಿಸಿದರು. ನೆದರ್‌ಲ್ಯಾಂಡ್ ಜರ್ಮಿನಿಗಳಲ್ಲಿ ಸಹ ಒಂದೆರಡು ಚುನಾವಣೆಗಳಲ್ಲಿ ಈ ಮತಯಂತ್ರಗಳನ್ನು ಬಳಸಿದರಾದರೂ ಗೋಲ್ಮಾಲ್ ಸಾಧ್ಯತೆಗಳನ್ನು ಮನಗಂಡು ಮತ್ತೆ ಬ್ಯಾಲೆಟ್ ವ್ಯವಸ್ಥೆಗೆ ಮರಳಿದರು. ಈಗಲೂ ಯುರೋಪಿನ ಎರಡು ಮೂರು ದೇಶಗಳನ್ನು ಹೊರತು ಪಡಿಸಿ ಎಲ್ಲಿಯೂ ವ್ಯಾಪಕವಾಗಿ ಮತಯಂತ್ರಗಳನ್ನು ಬಳಸುತ್ತಿಲ್ಲಾ. ಹಲವಾರು ದೇಶಗಳು ಇವಿಎಂ ಮತಯಂತ್ರಗಳನ್ನು ಬಳಸಿ ನಿಷೇಧಿಸಿವೆ. ಆದರೆ ಭ್ರಷ್ಟಾಚಾರದಲ್ಲಿ ಯಾವಾಗಲೂ ಮುಂದಾಳತ್ವವನ್ನು ಕಾಯ್ದುಕೊಂಡು ಬಂದ ಭಾರತದಂತಹ ದೇಶ ಮಾತ್ರ ಈ ಮತಯಂತ್ರಗಳ ಮೋಹಕ್ಕೊಳಗಾಗಿದೆ. 2009ರ ರಾಜ್ಯಸಭೆ ಚುನಾವಣಾ ಸಂದರ್ಭದಲ್ಲಿ ಬಿಜೆಪಿಯ ನಾಯಕ ಎಲ್.ಕೆ.ಅಡ್ವಾನಿಯವರೇ ಮತಯಂತ್ರಗಳಿಗಿಂತಾ ಬ್ಯಾಲೆಟ್ ಪೇಪರ್ ಬಳಸುವುದುತ್ತಮ ಎಂದು ಹೇಳಿದ್ದರು. ಯಾಕೆಂದರೆ ಮತಯಂತ್ರಗಳ ಅಕ್ರಮಗಳ ಮೂಲಕ ಇಡೀ ಚುನಾವಣಾ ಫಲಿತಾಂಶವನ್ನೇ ಬದಲಾಯಿಸಬಹುದಾದ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲಾ.

ಈಗ ಉತ್ತರ ಪ್ರದೇಶದ ಚುನಾವಣೆಯಲ್ಲಿ ಎಲ್ಲಾ ಸಮೀಕ್ಷೆಗಳ ನಿರೀಕ್ಷೆಯನ್ನು ಮೀರಿ ಬಿಜೆಪಿ ದಿಗ್ವಿಜಯ ಸಾಧಿಸಿದೆ. ಮತಯಂತ್ರಗಳ ದುರುಪಯೋಗವಾಗಿದೆ ಎಂದು ಮಾಯಾವತಿಯವರು ಈ ಬಾರಿ ಮೊದಲು ದ್ವನಿಯೆತ್ತಿದರು. ಶೇ.5 ರಷ್ಟೂ ಮತಗಳನ್ನು ಪಡೆಯದ ಮಯಾವತಿಯವರಿಗೆ ಮತಯಂತ್ರಗಳ ಮೇಲೆ ಸಂದೇಹ ಬಂದಿದ್ದರಲ್ಲಿ ತಪ್ಪೇನಿಲ್ಲಾ. ಕೇಂದ್ರ ಸರಕಾರ ತನ್ನ ಅಧಿಕಾರ ದುರುಪಯೋಗ ಮಾಡಿ ಚುನಾವಣಾ ಅಧಿಕಾರಿಗಳನ್ನೇ ಬುಕ್ ಮಾಡಿಕೊಂಡು ಮತಯಂತ್ರಗಳ ತಿರುಚಿ, ಬೇರೆಪಕ್ಷಗಳ ಅಭ್ಯರ್ಥಿಗಳಿಗೆ ಚಲಾವಣೆಯಾದ ಮತಗಳನ್ನು ಬಿಜೆಪಿ ಅಭ್ಯರ್ಥಿಗಳಿಗೆ ಬರುವಂತೆ ಮಾಡಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸತೊಡಗಿದವು. ಯುಪಿಯಲ್ಲಿ ಮತಯಂತ್ರ ದುರುಪಯೋಗಗೊಂಡು ಬಿಜೆಪಿ ಬಂದಿದ್ದರೆ ಪಂಜಾಬಿನಲ್ಲೂ ಯಾಕೆ ಬಿಜೆಪಿ-ಅಕಾಲಿದಳ ಸೋತುಹೋದವು ಎಂದು ಭಕ್ತರು ಮರುಪ್ರಶ್ನಿಸಿ ಆರೋಪಿಸಿದವರ ಬಾಯಿ ಮುಚ್ಚಲು ಪ್ರಯತ್ನಿಸಿದರು. ಅದರೆ.. ಪಂಜಾಬಿನಲ್ಲಿ  ಆಪ್ ಪಕ್ಷ ಬಹುಮತದಿಂದ ಗೆಲ್ಲುತ್ತದೆ ಎಂದು ಬಿಜೆಪಿ ತಪ್ಪು ಲೆಕ್ಕಾಚಾರ ಮಾಡಿತ್ತು. ಹೀಗಾಗಿ ಆಪ್ ಪಕ್ಷದ ಅಭ್ಯರ್ಥಿಗಳ ಮತಗಳು ಬಿಜೆಪಿ ಕ್ಯಾಂಡಿಡೇಟ್‌ಗೆ ಬೀಳುವಂತೆ ಮಾಡಲಾಗಿತ್ತು. ಆದರೆ.. ಕಾಂಗ್ರೆಸ್ ಪಕ್ಷ ಅಲ್ಲಿ ಲೀಡ್ ಪಡೆಯಿತು. ಹೀಗಾಗಿ ಬಿಜೆಪಿ ಸೋತಿತು ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಆಪ್ ಪಕ್ಷದ ನೇತಾರ ಕೇಜ್ರೀವಾಲ್‌ರವರೂ ಸಹ ಪಂಜಾಬಿನಲ್ಲಿ ಆಪ್‌ನ 20% ರಿಂದ 25% ಮತಗಳು ಬಿಜೆಪಿ-ಅಕಾಲಿದಳಕ್ಕೆ ಹೋಗುವಂತೆ ಯಂತ್ರವನ್ನು ತಿದ್ದಲಾಗಿದೆ ಎಂದು ಆರೋಪಿಸಿದ್ದರು. ಈ ಕುರಿತು ಕೋರ್ಟಿಗೆ ಹೋಗುತ್ತೇನೆ. ಇದು ಪ್ರಜಾಸತ್ತೆಯ ಕೊಲೆ. ಇದನ್ನು ವಿರೋಧಿಸಿ ಪ್ರತಿ ತಿಂಗಳೂ ಒಂದು ದಿನವನ್ನು ಕರಾಳ ದಿನವಾಗಿ ಆಚರಿಸಲಿದ್ದೇನೆ ಎಂದು ಮಾಯಾವತಿ ಗುಡುಗಿದರು.

ಇಂತಹ ಸಂದೇಹಗಳಿಂದಾಗಿ ಪಕ್ಷಾತೀತವಾಗಿ ಕೆಲಸಮಾಡಬೇಕಾದ ಚುನಾವಣಾ ಆಯೋಗದ ಪ್ರಾಮಾಣಿಕತೆಯನ್ನೇ ಪ್ರಶ್ನಿಸಿದಂತಾಯಿತು. ಇಲ್ಲಿವರೆಗೂ ಇವಿಎಂ ವ್ಯವಸ್ಥೆ ಅದೆಷ್ಟೇ ಪಾರದರ್ಶಕವೆಂದು ಆಯೋಗ ಸಮರ್ಥಿಸಿಕೊಳ್ಳುತ್ತಾ ಬಂದರೂ ಅದನ್ನು ಸಂಪೂರ್ಣವಾಗಿ ನಂಬುವುದು ಸಾಧ್ಯವಾಗಿರಲಿಲ್ಲ. ಮತಯಂತ್ರವನ್ನು ಮ್ಯಾನುಪಿಲೇಟ್ ಮಾಡಬಹುದಾದ ಸಾಧ್ಯತೆಗಳ ಬಗ್ಗೆಯೂ ಹಲವಾರು ತಂತ್ರಜ್ಞರು ಬೆಳಕು ಚೆಲ್ಲಿದರು. ಹೀಗಾಗಿ ಇಡೀ ದೇಶವಾಸಿಗಳಲ್ಲಿ ಮತಯಂತ್ರಗಳ ಪ್ರಾಮಾಣಿಕತೆಯ ಬಗ್ಗೆ ಒಂದು ರೀತಿಯ ಗುಮಾನಿ ಉಳಿದುಕೊಂಡಿದೆ. ಚುನಾವಣಾ ಆಯೋಗದ ಆಯುಕ್ತರು ಅದೆಷ್ಟೇ ಸಬೂಬುಗಳನ್ನು ಕೊಟ್ಟರೂ ಸಂಪೂರ್ಣವಾಗಿ ನಂಬುವಂತಿಲ್ಲ. ಯುಪಿ ಎಲೆಕ್ಷನ್ನಿನ ಒಂದು ಕ್ಷೇತ್ರದಲ್ಲಿ ಮತಚಲಾಯಿಸಿದವರಿಗಿಂತಲೂ ಮತಗಳ ಸಂಖ್ಯೆಗಳೇ ಹೆಚ್ಚಿರುವುದು ಮತಯಂತ್ರದ ಮೇಲೆ ಸಂದೇಹವನ್ನು ಹೆಚ್ಚಿಸುವಂತಿದೆ.

ಈ ಎಲ್ಲ ಸಂದೇಹಗಳಿಗೆ ಅಂತ್ಯ ಹಾಡಲು.. ಮತಯಂತ್ರಗಳ ತಿರುಚುವಿಕೆಗೆ ಅಂತ್ಯಹಾಡಲು ದೇಶಾದ್ಯಂತ ಎಲ್ಲಾ ಮತಗಟ್ಟೆಗಳಲ್ಲಿ ವಿವಿಪಿಎಟಿ ವ್ಯವಸ್ಥೆಯಿರುವ ಮತಯಂತ್ರಗಳನ್ನು ಜಾರಿಗೆ ತರಲು ಚುನಾವಣಾ ಆಯೋಗದ ಮಾಜಿ ಆಯುಕ್ತರಾದ ವೈ.ಎಸ್.ಖುರೇಷಿ ಮತ್ತು ಎಚ್.ಎಸ್.ಬ್ರಹ್ಮರವರು ಆಗ್ರಹಿಸಿದ್ದಾರೆ. ವಿವಿಪಿಎಟಿ ಅಂದರೆ ಓಟರ್ ವೆರಿಪೈಡ್ ಆಡಿಟ್ ಟ್ರಯಲ್ ಎಂಬುದು ಇವಿಎಂಗಳ ಸುಧಾರಿತ ಆವೃತ್ತಿಯಾಗಿದ್ದು 2014ರ ಚುನಾವಣೆಯಲ್ಲಿ ಕೆಲವು ಕಡೆ ಪ್ರಯೋಗಿಕವಾಗಿ ಬಳಸಲಾಗಿತ್ತಾದರೂ ವ್ಯಾಪಕವಾಗಿ ಬಳಕೆಯಾಗಲಿಲ್ಲ. ಮತದಾರ ದೃಢೀಕರಣ ಕಾಗದ ಪರಿಶೀಲನಾ ಪ್ರಯೋಗ (ವಿವಿಪಿಎಟಿ) ವೆನ್ನುವ ಈ ಸುಧಾರಿತ ವ್ಯವಸ್ಥೆಯಲ್ಲಿ ಮತದಾರರ ಮತ ಒತ್ತಿದ ತಕ್ಷಣ ಯಂತ್ರದಲ್ಲಿ ಒಂದು ಸಣ್ಣ ಚೀಟಿ ಕಾಣಿಸಿಕೊಂಡು ಮತದಾರ ಯಾರಿಗೆ ಮತ ಹಾಕಿದ್ದಾನೆ ಎನ್ನುವುದನ್ನು ದೃಢೀಕರಿಸುತ್ತದೆ. ಹಾಗೂ ಮತಗಳ ಎಣಿಕೆಯನ್ನು ಮಾಡುವಾಗ ಡಿಜಿಟಲ್ ಓಟುಗಳ ಜೊತೆಗೆ ಈ ಚೀಟಿಗಳ ಸಂಖ್ಯೆಯನೂ ಸಹ ತುಲನೆ ಮಾಡಲಾಗುತ್ತದೆ. ಅಂದರೆ ಎಟಿಎಂಗಳಲ್ಲಿ ಹಣ ಪಡೆದ ನಂತರ ಬರುವ ರಸೀದಿಯನ್ನು ಓದಿ ತುಲನೆ ಮಾಡುವ ಹಾಗೆ.

ಇತ್ತೀಚೆಗೆ ನಡೆದ ಗೋವಾ ವಿಧಾನಸಭೆಯ ಚುನಾವಣೆಯಲ್ಲಿ ಬಿಇಎಲ್ ನಿರ್ಮಾಣದ ಈ ಸುಧಾರಿತ ಯಂತ್ರಗಳನ್ನು ಬಳಸಲಾಗಿದೆ. ಇದರಿಂದಾಗಿಯೇ ಅಲ್ಲಿ ಬಿಜೆಪಿ ಬಹುಮತ ಪಡೆಯಲು ಸಾಧ್ಯವಾಗಿಲ್ಲವೆಂದೂ ಹೇಳಲಾಗುತ್ತದೆ. ಮತಯಂತ್ರದ ವಿಶ್ವಾಸಾರ್ಹತೆಯ ಮೇಲೆ ಪ್ರತಿಪಕ್ಷಗಳು ಹಾಗೂ ಪ್ರಜೆಗಳು ಸಂದೇಹವನ್ನು ವ್ಯಕ್ತಪಡಿಸುತ್ತಿರುವಾಗ ಮತಯಂತ್ರದ ದುರ್ಬಳಕೆಯನ್ನು ತಡೆಗಟ್ಟಲು ಕೂಡಲೇ ಕೇಂದ್ರ ಚುನಾವಣಾ ಆಯೋಗವು ವಿವಿಪಿಎಟಿ ಮತಯಂತ್ರಗಳ ಬಳಕೆಯನ್ನು ವ್ಯಾಪಕವಾಗಿ ಎಲ್ಲಾ ಚುನಾವಣೆಗಳಲ್ಲೂ ಬಳಸುವುದನ್ನು ಖಡ್ಡಾಯವಾಗಿ ಜಾರಿಗೆ ತರಬೇಕಾಗಿದೆ. 2013 ರಲ್ಲಿಯೇ ಈ ವಿವಿಪಿಎಟಿ ವ್ಯವಸ್ಥೆ ಜಾರಿಗೆ ತರಲು ಸುಪ್ರಿಂ ಕೋರ್ಟ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತ್ತು. ಆದರೆ.. ಅದು ಯಾಕೋ ಇಲ್ಲಿವರೆಗೂ ಜಾರಿಯಲ್ಲಿ ಬಂದಿರಲಿಲ್ಲ. ಈಗ ಚುನಾವಣಾ ಆಯೋಗದ ಮೇಲೆಯೇ ಗುರುತರ ಆರೋಪಗಳು ಕೇಳಿ ಬಂದಿದ್ದರಿಂದಾ ಅನಿವಾರ್ಯವಾಗಿ ವಿವಿಪಿಎಟಿ ವ್ಯವಸ್ಥೆ ಜಾರಿಮಾಡಲೇಬೇಕಾದ ಒತ್ತಡ ನಿರ್ಮಾಣವಾಗಿದೆ. ದೇಶದಲ್ಲಿ ಅಗತ್ಯವಿರುವ 16 ಲಕ್ಷ ಹೊಸ ವಿವಿಪಿಎಟಿ ಮತಯಂತ್ರಗಳ ಖರೀದಿಗೆ ಮೂರುಸಾವಿರ ಕೋಟಿ ಹಣವನ್ನು ಖರ್ಚುಮಾಡಬೇಕಾಗುತ್ತದೆ.

ರಾಜಕೀಯ ಭ್ರಷ್ಟಾಚಾರ ಮಿತಿಮೀರಿ ಬೇರುಮಟ್ಟಕ್ಕೆ ಇಳಿದಿರುವ ಇಂದಿನ ಬಂಡವಾಳಶಾಹಿ ಭಾರತದ ವಿಕ್ಷಿಪ್ತ  ಸಂದರ್ಭದಲ್ಲಿ ನ್ಯಾಯಯುತವಾದ ಮತದಾನವೆನ್ನುವುದು ಕನಸಿನ ಮಾತು. ಯಾವುದೇ ಆಧುನಿಕ ಸುಧಾರಿತ ಮತಯಂತ್ರಗಳನ್ನು ತಂದರೂ, ಅದೆಷ್ಟೇ ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ ಪ್ರಾಮಾಣಿಕ ಜನಪರ ಕಾಳಜಿಯುಳ್ಳ ಜನಸೇವಕರು ಈ ಬಂಡವಾಳಶಾಯಿ ವ್ಯವಸ್ಥೆಯಲ್ಲಿ ಹೆಚ್ಚು ಮತ ಪಡೆದು ಪ್ರಜಾಪ್ರತಿನಿಧಿಗಲಾಗುವುದಂತೂ ಸಾಧ್ಯವಿಲ್ಲ. ಅಕಸ್ಮಾತ್ ಆದರೂ ಇಡೀ ವ್ಯವಸ್ಥೆಯ ವಿರುದ್ಧ ಹೋರಾಡುವುದಂತೂ ಅಸಾಧ್ಯದ ಮಾತು. ಎಲ್ಲಿ ಜಾತಿ ಧರ್ಮ ವರ್ಣಗಳ ಆಧಾರದ ಮೇಲೆ ಸಮಾಜವನ್ನು ಒಡೆದು ಮತಗಳನ್ನು ಇಬ್ಬಾಗಿಸಿ ತಂತ್ರ ಕುತಂತ್ರಗಳಿಂದ ಚುನಾವಣೆಯನ್ನು ಗೆಲ್ಲಲಾಗುತ್ತದೆಯೋ ಅಲ್ಲಿ ನಿಜವಾದ ಪ್ರಜಾಪ್ರಭುತ್ವ ಇರಲು ಸಾಧ್ಯವೇ ಇಲ್ಲ. ಎಲ್ಲಿವರೆಗೂ ಹಣಬಲ, ಬಾಹುಬಲ ಹಾಗೂ ಜಾತಿಬಲ ಉಳ್ಳವರು ಚುನಾವಣೆಯಲ್ಲಿ ಅಡ್ಡಹಾದಿಗಳ ಮೂಲಕ ಜಯವನ್ನು ಪಡೆಯುತ್ತಾರೋ ಅಲ್ಲಿವರೆಗೂ ಈ ದೇಶದಲ್ಲಿ ನ್ಯಾಯಸಮ್ಮತ ಚುನಾವಣೆಗಳು ಅಸಾಧ್ಯ. ಎಲ್ಲಾ ಪಕ್ಷಗಳ ಬ್ರಷ್ಟ ರಾಜಕಾರಣಿಗಳು, ಕರಪ್ಟ್ ಅಧಿಕಾರಿಶಾಹಿಗಳು, ಸ್ವಾರ್ಥಿ ಬಂಡವಾಳಗಾರರು ಹಾಗೂ ಲೂಟಿಕೋರ ಕಾರ್ಪೊರೇಟ ಕಂಪನಿಗಳು ಒಳ ಒಪ್ಪಂದ ಮಾಡಿಕೊಂಡು ದುಡಿಯುವ ವರ್ಗದ ಶ್ರಮಜೀವಿಗಳನ್ನು ಯಾಮಾರಿಸಿ ರಾಜ್ಯಾಧಿಕಾರವನ್ನು ಹಿಡಿದು ದೇಶದ ಸಂಪತ್ತು ಹಾಗೂ ಸಂಪನ್ಮೂಲಗಳನ್ನು ಹಂಚಿಕೊಂಡು ಮೆರೆಯುತ್ತಾರೋ ಅಲ್ಲಿವರೆಗೂ ಈ ದೇಶದ ಬಹುಸಂಖ್ಯಾತ ದುಡಿಯುವ ಜನರಿಗೆ ಸ್ವಾತಂತ್ರ್ಯ ಸಮಾನತೆಗಳು ಸಿಕ್ಕಲು ಸಾಧ್ಯವೇ ಇಲ್ಲಾ. ಕೇವಲ ಚುನಾವಣೆ ವ್ಯವಸ್ಥೆ ಮಾತ್ರವಲ್ಲ ಇಡೀ ದೇಶದ ಆಳುವ ವ್ಯವಸ್ಥೆಯೆ ಬದಲಾಗಬೇಕಾಗಿದೆ. ಬಂಡವಾಳಶಾಹಿ  ಹಿತಾಸಕ್ತಿಗೆ ಪೂರಕವಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗಿ ದುಡಿಯುವ ವರ್ಗದ ಹಿತಾಸಕ್ತಿಯನ್ನು ಕಾಪಾಡುವಂತಹ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬರಬೇಕಾಗಿದೆ.


  ಸಧ್ಯಕ್ಕೆ ಅಂತಹ ವ್ಯವಸ್ಥೆ ಬರುವ ಲಕ್ಷಣಗಳಂತೂ ಇಲ್ಲಾ. ಆದರೂ ಜನಾಂದೋಲನಗಳು ಕೆಟ್ಟ ವ್ಯವಸ್ಥೆಯನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ. ದಮನವನ್ನು ವಿರೋಧಿಸಿ ಹೊಸ ವ್ಯವಸ್ಥೆಯೊಂದನ್ನು ತರಬಹುದಾದಂತಹ ಜನಾಂದೋಲನದ ನಿರೀಕ್ಷೆಯೊಂದೇ ಈಗಿನ ತುರ್ತು ಅಗತ್ಯವಿದೆ. ಯಾವುದೇ ವ್ಯವಸ್ಥೆಯ ವಿನಾಶದ ಬೀಜಗಳು ಆ ವ್ಯವಸ್ಥೆಯೊಳಗಿಂದಲೇ ಹುಟ್ಟಿಕೊಳ್ಳುತ್ತವೆ. ಅದೇ ರೀತಿ ಈಗಿನ ಬಂಡವಾಳಶಾಹಿ ಶೋಷಕ ವ್ಯವಸ್ಥೆಯ ಬೀಜಗಳೂ ಸಹ ಇದರಲ್ಲಿಯೇ ಇದೆ. ಶೋಷಣೆ ಹೆಚ್ಚಿದಷ್ಟೂ ಆ ಪ್ರತಿಭಟನೆಯ ಬೀಜಗಳು ಬೆಳೆಯುತ್ತವೆ. ಒಂದಿಲ್ಲೊಂದು ದಿನ ಅದೇ ಬೀಜಗಳು ಜನಾಂದೋಲನದ ರೂಪತಾಳಿ ಈಗಿರುವ ಬಂಡವಾಳಶಾಹಿ ವ್ಯವಸ್ಥೆಯನ್ನು ಆಪೋಷಣತೆಗೆದುಕೊಳ್ಳುವುದರಲ್ಲಿ ಸಂದೇಹವೇ ಇಲ್ಲಾ. ಅಲ್ಲಿವರೆಗೂ ಪ್ರತಿಭಟನೆಯ ಬೀಜಗಳನ್ನು ಕಾಪಿಟ್ಟುಕೊಳ್ಳಬೇಕಿದೆ, ಹೋರಾಟದ ಹಾದಿಯನ್ನು ಮುಂದುವರೆಸಬೇಕಾಗಿದೆ. ಜನರನ್ನು ಬಂಡವಾಳಶಾಹಿಯ ವಿರುದ್ದ ಸದಾ ಜಾಗೃತಗೊಳಿಸುತ್ತಲೇ ಇರಬೇಕಾಗಿದೆ. ಸಂವಿಧಾನದ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ಹಾಗೂ ಮೀಡಿಯಾಂಗಗಳು ಬಂಡವಾಳಶಾಹಿಗಳ ಪರವಾಗಿಯೇ ಇರುವುದರಿಂದ ಹಾಗೂ ನೈತಿಕತೆಯ ಮಿತಿಯನ್ನೂ ಮೀರಿ ಭ್ರಷ್ಟತೆಯನ್ನು ರೂಢಿಸಿಕೊಂಡಿರುವುದರಿಂದ ಅವುಗಳ ವಿರುದ್ಧ ಜನರನ್ನು ಎಚ್ಚರಿಸುವ ಕೆಲಸವನ್ನು ಪ್ರಜ್ಞಾವಂತರು ಒಗ್ಗಟ್ಟಾಗಿ ಮಾಡಬೇಕಿದೆ. ಇಲ್ಲವಾದರೆ ಶತಮಾನಗಳ ಕಾಲ ಬಂಡವಾಳಿಗರ ಶೋಷಣೆಯನ್ನು  ಅನುಭವಿಸಬೇಕಾಗುತ್ತದೆ. 



                   -ಶಶಿಕಾಂತ ಯಡಹಳ್ಳಿ