ಈ ಪುರೋಹಿತಶಾಹಿ ಪ್ರಣೀತ ಮನಸುಗಳು
ಸನಾತನವಾದದ ಕೆಸರಿನಿಂದ ಯಾವಾಗ ಹೊರಗೆ ಬರುತ್ತವೋ ಗೊತ್ತಿಲ್ಲಾ. ಒಂದೇ ಒಂದು ನಾಟಕವನ್ನು ಅರಗಿಸಿಕೊಳ್ಳುವುದೂ
ಅವರಿಂದಾಗುತ್ತಿಲ್ಲಾ. ಅಭಿವ್ಯಕ್ತಿ ಸ್ವಾತಂತ್ರಕ್ಕೆ ಕನಿಷ್ಟ ಗೌರವ ಕೊಡುವುದಂತೂ ಗೊತ್ತೇ ಇಲ್ಲಾ.
ಯಾರೂ ಏನನ್ನೂ ಪ್ರಶ್ನಿಸುವ ಹಾಗೆಯೇ ಇಲ್ಲಾ. ಇಷ್ಟಕ್ಕೂ
ಆಗಿದ್ದಾದರೂ ಏನೆಂದರೆ..
2017ರ ಮಾರ್ಚ 26ರಂದು ಭಾನುವಾರ
ಕೇರಳದ ಕಾಸರಗೋಡಿನಲ್ಲಿ ‘ಮಾತೃದೇವೋಭವ’ ಹೆಸರಿನ ಕೊಂಕಣಿ ಮಹಿಳಾ ಪ್ರತಿಭಾನ್ವೇಷಣೆ ಕಾರ್ಯಕ್ರಮವೊಂದನ್ನು “ರಂಗಚಿನ್ನಾರಿ” ತಂಡವು ಆಯೋಜಿಸಿತ್ತು. ಹಿರಿಯ
ರಂಗಕರ್ಮಿ ಕಾಸರಗೋಡು ಚಿನ್ನರವರು ಈ ಕಾರ್ಯಕ್ರಮದ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದ್ದರು. ಕೊಂಕಣಿ
ಬ್ರಾಹ್ಮಣ ಸಮುದಾಯದವರಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಹಾಗೂ ಪ್ರೋತ್ಸಾಹಿಸಲು ಈ ಸಾಂಸ್ಕೃತಿಕ
ಸ್ಪರ್ದೆಗಳನ್ನು ಏರ್ಪಡಿಸಿದ್ದರಲ್ಲಿ ಅಂತಾದ್ದೇನೂ ಅಕ್ಷೇಪಣೆಗಳಿಲ್ಲಾ. ಆದರೆ ಕನ್ನಡ ಮತ್ತು ಸಂಸ್ಕೃತಿ
ಇಲಾಖೆಯ ಸಹಕಾರದಿಂದ ಒಂದು ಜಾತಿ ಸಮುದಾಯಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದ್ದು
ಪ್ರಶ್ನಾರ್ಹ.
ಆದರೆ.. ಅಲ್ಲಿರುವ ಕೆಲವು
ಹಿರಿಯ ತಲೆಮಾರಿನ ಬ್ರಾಹ್ಮಣ್ಯದ ತಲೆಗಳಿಗೆ ತಲೆನೋವಾಗಿದ್ದು “ಸೀತಾಂತರಾಳ” ನಾಟಕ ನೋಡಿದಾಗ. ನಾನು “ಸೀತಾಂತರಾಳ” ಎನ್ನುವ ಏಕವ್ಯಕ್ತಿ ನಾಟಕವನ್ನು
ಬರೆದಿದ್ದು ಅದನ್ನು ಈಗಾಗಲೇ ಸಾಣೇಹಳ್ಳಿಯ ವೈ.ಡಿ.ಬಾದಾಮಿಯವರು ತಮ್ಮ ಪತ್ನಿ ಮಂಜುಳಾ ಬದಾಮಿಯವರಿಗೆ
ನಿರ್ದೇಶಿಸಿದ್ದು ನಾಡಿನಾದ್ಯಂತ 50 ಪ್ರದರ್ಶನಗಳನ್ನು ಕಂಡು ನೂರರತ್ತ ಮುನ್ನುಗ್ಗುತ್ತಿದೆ. ಹೋದಲ್ಲೆಲ್ಲಾ
ಈ ನಾಟಕ ತುಂಬಾ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಮಠಮಾನ್ಯಗಳಲ್ಲಿ ಈ ನಾಟಕವನ್ನು ಬದಾಮಿಯವರು ಆಡಿಸಿದ್ದಾರಾದರೂ
ಇಲ್ಲಿವರೆಗೂ ಎಲ್ಲಿಯೂ ಅಪಸ್ವರಗಳೇಳಲಿಲ್ಲಾ.
ಯಾವಾಗ ಇದೇ “ಸೀತಾಂತರಾಳ” ನಾಟಕವನ್ನು ಉಡುಪಿಯ ಕಲಾವಿದೆ
ಪ್ರತಿಮಾ ನಾಯಕರವರು ಕೊಂಕಣಿ ಭಾಷೆಯಲ್ಲಿ ಮಾಡಲು ಬಯಸಿದರೋ ಆಗ ಮಾಡಿ ಎಂದು ಅನುಮತಿಸಿದ್ದೆ. ಮೂರೇ
ದಿನಗಳಲ್ಲಿ ಇಡೀ ನಾಟಕವನ್ನು ಕೊಂಕಣಿಗೆ ಅನುವಾದಿಸಿ ಹತ್ತಾರು ಪುಟಗಳ ಸುದೀರ್ಘ ಸಂಭಾಷಣೆಗಳನ್ನು ಕಂಠಪಾಠ
ಮಾಡಿ ನಾಟಕವನ್ನು ಸಿದ್ದಗೊಳಿಸಿಕೊಂಡ ಪ್ರತಿಮಾ ಕೊಂಕಣಿ ಮಹಿಳಾ ಪ್ರತಿಭಾನ್ವೇಷಣೆಯಲ್ಲಿ ಅಭಿನಯಿಸಿದರು.
ಮೊಟ್ಟಮೊದಲನೆಯದಾಗಿ ಪ್ರತಿಮಾರವರಂತಹ ಅಭಿಜಾತ ಪ್ರತಿಭಾವಂತ ಕಲಾವಿದೆ ಇಂತಹ ಪ್ರತಿಭಾನ್ವೇಷಣೆಗಳಲ್ಲಿ
ಭಾಗವಹಿಸಲೇಬಾರದಿತ್ತು. ಹೊಸಬರು, ಯುವಕರು, ಉದಯೋನ್ಮುಖ
ಕಲಾವಿದರುಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿಸುವ ಕಾರ್ಯಕ್ರಮವಿದು. ಆದರೆ ಕಾಸರಗೋಡು ಚಿನ್ನರವರ ಆಗ್ರಹದ ಮೇರೆಗೆ ಸ್ಪರ್ಧೆಯಲ್ಲಿ
ಭಾಗವಹಿಸಲು ಒಪ್ಪಿ ಬದ್ದತೆ ಹಾಗೂ ಅಪಾರ ಸಿದ್ದತೆಯೊಂದಿಗೆ ತಮ್ಮದೇ ಹಣ ಖರ್ಚುಮಾಡಿಕೊಂಡು ಉಡುಪಿಯಿಂದಾ
ಕಾಸರಗೋಡಿಗೆ ಹೋಗಿ “ಸೀತಾಂತರಾಳ” ನಾಟಕವನ್ನು ಪುಕ್ಕಟೆಯಾಗಿ
ಅಭಿನಯಿಸಿದರು. ನಾಟಕವೊಂದರ ಪ್ರದರ್ಶನಕ್ಕೆ ಕನಿಷ್ಟ ಸೌಲಭ್ಯಗಳೂ ಇಲ್ಲದ ವೇದಿಕೆಯ ಮೇಲೆ ಸೀತೆ ತನ್ನ
ಒಡಲಾಳದ ಸಂಕಟಗಳನ್ನು ಪ್ರೇಕ್ಷಕರ ಮುಂದೆ ಹೇಳಿಕೊಳ್ಳಲು ಆರಂಭಿಸಿದಳೋ ಆಗ ಕೆಲವು ಸನಾತನವಾದಿಗಳ ಎದೆಯೊಳಗೆ
ಸಂಕಟ ಶುರುವಾಯಿತು.
“ಮೊದಲು ಈ ನಾಟಕವನ್ನು ನಿಲ್ಲಿಸಲು
ಸಂಘಟಕರಿಗೆ ಹೇಳಿರೋ” ಎಂದು ಕೆಲವು ವಯೋವೃದ್ದರು ಅವಲತ್ತುಕೊಂಡರು. ಅದನ್ನು ಕೇಳಿದ
ಕೆಲವು ಯುವಕರುಗಳು “ಆಡಲಿ ಬಿಡಿ.. ಸೀತೆ ಹೇಳುವುದರಲ್ಲಿ ತಪ್ಪೇನಿದೆ” ಎಂದು ಅಲ್ಲಿಯೇ ಉತ್ತರಿಸಿದರು. ಆದರೂ ಬೆಂಕಿಯ ಮೇಲೆ ಕುಳಿತು ಅಂಡು ಸುಟ್ಟುಕೊಂಡಂತೆ ಅಸಾಧ್ಯ
ತಳಮಳವನ್ನು ಅನುಭವಿಸಿದ ಆ ಹಿರಿತಲೆಗಳು ನಾಟಕ ಮುಗಿಯುವವರೆಗೂ ಅದು ಹೇಗೋ ಸಹಿಸಿಕೊಂಡಿದ್ದು ನಾಟಕ
ಮುಗಿದ ನಂತರ ನಟಿಯನ್ನು ಸುತ್ತುವರೆದು “ಯಾರು ಇದನ್ನು ಬರೆದಿದ್ದು..
ರಾಮನನ್ನು ಇಷ್ಟೊಂದು ಕೆಟ್ಟದಾಗಿ ಯಾಕೆ ಚಿತ್ರಿಸಿದ್ದಾರೆ.. ಇದು ರಾಮದೇವರಿಗೆ ಮಾಡಿದ ಅಪಚಾರವಲ್ಲವೇ..” ಎಂದು ನೂರೆಂಟು ಪ್ರಶ್ನೆಗಳನ್ನು
ಕೇಳತೊಡಗಿದರು. ಅಭಿನಯದ ಆಯಾಸದಿಂದ ಆಗ ತಾನೇ ಸುಧಾರಿಸಿಕೊಂಡು ಪಾತ್ರದ ಹೊರಗೆ ಬರಲು ಪ್ರಯತ್ನಿಸುತ್ತಿದ್ದ
ಪ್ರತಿಮಾ ಕಕ್ಕಾಬಿಕ್ಕಿಯಾದರೂ ಸಾವರಿಸಿಕೊಂಡರು. “ಇದು ರಾಮನ ದೃಷ್ಟಿಕೋನದ ನಾಟಕವಲ್ಲ...
ಸೀತೆ ತನಗಾದ ಸಂಕಟಗಳನ್ನು ಹೇಳಿಕೊಳ್ಳುವ ನಾಟಕ.. ಒಬ್ಬ ನಟಿಯಾಗಿ ಪಾತ್ರವನ್ನು ಅಭಿನಯಿಸಿದ್ದೇನೆ.
ನಿಮಗೆ ನಾಟಕದ ಬಗ್ಗೆ ಸಂದೇಹಗಳಿದ್ದರೆ ಅದರ ರಚನೆಕಾರರ ಮೊಬೈಲ್ ನಂಬರ್ ಕೊಡುವೆ ನೀವೆ ಮಾತಾಡಿ ನಿಮ್ಮ
ಸಂದೇಹಗಳನ್ನು ಬಗೆಹರಿಸಿಕೊಳ್ಳಿ” ಎಂದು ಪ್ರತಿಮಾ ಹೇಳಿ ನನ್ನ ನಂಬರ್ ಕೊಟ್ಟು ಸನಾತನಿಗಳ
ಪ್ರಶ್ನೆಗಳ ಆಕ್ರಮಣದಿಂದಾ ಪಾರಾಗುವ ಮಾರ್ಗೋಪಾಯವನ್ನು ಕಂಡುಕೊಂಡರು. ಆದರೂ ಅವರ ಪ್ರಶ್ನೆಗಳು ನಿಲ್ಲಲಿಲ್ಲ..
ಅಷ್ಟರಲ್ಲಿ ಅಲ್ಲಿಗೆ ಬಂದ ಅನೇಕ ಯುವಕ ಯುವತಿಯರು ನಾಟಕದ ಬಗ್ಗೆ ಹಾಗೂ ಅಭಿನಯದ ಬಗ್ಗೆ ಅಪಾರ ಮೆಚ್ಚುಗೆ
ವ್ಯಕ್ತಪಡಿಸಿ ಪ್ರತಿಮಾರವರಿಗೆ ಅಭಿನಂದನೆಗಳನ್ನು ತಿಳಿಸಿದರು. ಯಾವಾಗ ಮೆಚ್ಚುಗೆ ವ್ಯಕ್ತಪಡಿಸುವವರ
ಸಂಖ್ಯೆ ಹೆಚ್ಚಾಯಿತೋ ಆಗ ಈ ಬ್ರಾಹ್ಮಣ್ಯ ತುಂಬಿದ ತಲೆಗಳು ಗೊಣಗುತ್ತಲೇ ಅಲ್ಲಿಂದಾ ಹೊರಟವು.
ಇಷ್ಟಕ್ಕೂ ಆ ನಾಟಕದಲ್ಲಿ ಇದ್ದುದದ್ದಾದರೂ
ಏನು? ಈ ಹಿರಿಯರನ್ನು ಕೆರಳಿಸುವ ಅಂಶಗಳಾದರೂ ಯಾವವು? ತುಂಬು ಬಸುರಿಯಾದ ಸೀತೆಯನ್ನು ರಾಮನ ಆಜ್ಞೆಯಂತೆ
ಕಾಡಲ್ಲಿ ಏಕಾಂಗಿಯಾಗಿ ಲಕ್ಷ್ಮಣ ಬಿಟ್ಟುಹೋದ ಮೇಲೆ ಸೀತೆ ತನ್ನೆಲ್ಲಾ ಸಂಕಟಗಳನ್ನು ಹೇಳಿಕೊಳ್ಳುತ್ತಾಳೆ.
ತನ್ನ ಸ್ವಯಂವರದಿಂದ ಹಿಡಿದು ವನವಾಸ, ಶೂರ್ಪನಿಕೆಯ ಅಂಗಛೇದ, ರಾವಣ ಸಂಹಾರ, ಅಗ್ನಿಪರೀಕ್ಷೆ ಹಾಗೂ
ಸೀತಾಪರಿತ್ಯಾಗದ ವರೆಗೆ ಹೇಳಿಕೊಳ್ಳುತ್ತಾಳೆ. ಎಲ್ಲರನ್ನೂ ಸಲಹುವ ರಾಮ ತನ್ನ ಪತ್ನಿಯನ್ನು ಕಾಡುಪಾಲು
ಮಾಡಿ ಸ್ತ್ರೀವಿರೋಧಿ ಪಟ್ಟ ಹೊತ್ತುಕೊಂಡನಲ್ಲಾ ಎಂದು ರಾಮನಿಗಾಗಿಯೇ ಮರಗುತ್ತಾಳೆ. ಇದರಲ್ಲಿ ಅತಿಶಯೋಕ್ತಿ
ಏನಿಲ್ಲವಲ್ಲಾ. ವಾಲ್ಮೀಕಿ ರಾಮಾಯಣದ ಮಹಾಕಾವ್ಯವನ್ನೇ ವಿಶ್ಲೇಷಣೆಗೆ ಒಳಪಡಿಸಿ ಈ “ಸೀತಾಂತರಾಳ” ನಾಟಕವನ್ನು ಕಟ್ಟಲಾಗಿದೆ.
ಆದರೆ.. ರಾಮನನ್ನು ಮರ್ಯಾದಾ ಪುರುಷೋತ್ತಮನೆಂದು ನಂಬಿರುವ ಹಾಗೂ ನಂಬಿಸಿರುವ ಈ ಸನಾತನಿ ಪುರೋಹಿತಶಾಹಿ
ಮನಸ್ಸುಗಳಿಗೆ ಶ್ರೀರಾಮನ ಕುರಿತು ಒಂದೇ ಒಂದು ಅಪಸ್ವರವನ್ನು ಸಹಿಸಲು ಸಾಧ್ಯವಾಗುತ್ತಿಲ್ಲಾ. ಯಾರ
ನಂಬಿಕೆಯನ್ನೂ ಘಾಸಿಮಾಡುವ ಉದ್ದೇಶ ಈ ನಾಟಕಕ್ಕಿಲ್ಲಾ. ಅಷ್ಟಕ್ಕೂ ಯಾರದೋ ನಂಬಿಕೆ ಬುಡಮೇಲಾದರೆ ಅದಕ್ಕೆ
ಈ ನಾಟಕ ಜವಾಬ್ದಾರಿಯಲ್ಲಾ. ಈ ಜಗತ್ತಲ್ಲಿ ಯಾವುದೂ ಪ್ರಶ್ನಾತೀತವಲ್ಲ. ಪ್ರಶ್ನಿಸುವವರ ದ್ವನಿಯನ್ನೇ
ದಮನಿಸುವ ಪ್ರಯತ್ನ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದೆ.
ಯಾರೋ ಒಬ್ಬರು ಪೋನ್ ಮಾಡಿದ್ದರು.
ಹಿರಿಯರ ದ್ವನಿಯಾದ್ದರಿಂದ ಗೌರವದಿಂದಲೇ ಮಾತಾಡಿದೆ. ಆದರೆ ಆ ಹಿರಿತಲೆಗೆ ತನ್ನ ವಯಸ್ಸಿನ ಗಾಂಭೀರ್ಯತೆಯೂ
ಇಲ್ಲದೇ “
ಶ್ರೀರಾಮಚಂದ್ರನಿಗೆ ಅವಮಾನ ಮಾಡಲು ನಿಮಗೇನ್ರಿ ಇದೆ ಹಕ್ಕು” ಎಂದು ಜೋರು ದ್ವನಿಯಲ್ಲೇ
ಪ್ರಶ್ನಿಸಿತು. “ಅವಮಾನ ಆಗಿದ್ದು ಶ್ರೀರಾಮಚಂದ್ರನಿಗೋ ಇಲ್ಲಾ ನಿಮಗೋ” ಎಂದು ಮರು ಪ್ರಶ್ನಿಸಿದೆ.
“ನಿಮ್ಮ
ನಂಬಿಕೆಯನ್ನು ನಾನು ಗೌರವಿಸುತ್ತೇನೆ. ಆದರೆ.. ರಾಮ ಬಸುರಿಯಾದ ಹೆಂಡತಿಯನ್ನು ಕಾಡಿಗೆ ಬಿಟ್ಟಿದ್ದು
ನಿಮ್ಮ ಪ್ರಕಾರ ಸರಿಯೋ ತಪ್ಪೋ.,.?” ಎಂದು ಕೇಳಿದೆ. ಅದು ಲೋಕಕಲ್ಯಾಣಕ್ಕಾಗಿ ಶ್ರೀರಾಮ
ಮಾಡಿದ ಕೆಲಸ, ದೇವರನ್ನು ಪ್ರಶ್ನಿಸುವ ಪಾಪ ಮಾಡಲೇಬಾರದು..” ಎಂದು ಆ ತಾತಪ್ಪನವರು ಆದೇಶ
ಹೊರಡಿಸಿದರು. ಇನ್ನು ಇವರೊಂದಿಗೆ ಮಾತಾಡಿ ಏನೇನೂ ಪ್ರಯೋಜನ ಇಲ್ಲವೆಂದು ಪೊನ್ ಕಟ್ ಮಾಡಿ ನಿಟ್ಟುಸಿರು
ಬಿಟ್ಟೆ. ಯಾರ ತಲೆಯಲ್ಲಿ ಮೌಡ್ಯ ನಂಬಿಕೆಯಾಗಿ ನೆಲೆಯೂರಿದೆಯೋ ಅಂತವರನ್ನು ಏನೇ ಸಮರ್ಥನೆಗಳನ್ನು ಕೊಟ್ಟರೂ
ಬದಲಾಯಿಸಲು ಸಾಧ್ಯವೇ ಇಲ್ಲವೆಂಬುದು ನನ್ನ ಅನುಭವದ ಮಾತು. ವಿತಂಡವಾದಿಗಳು ಹಾಗೂ ಭ್ರಮಾಪೀಡಿತರ ಜೊತೆಗೆ
ಎಷ್ಟೇ ಮಾತಾಡಿದರೂ ಅದು ತೌಡು ಕುಟ್ಟಿದಂತೆ. ಹೀಗಾಗಿ ಸುಖಾಸುಮ್ಮನೆ ಸಮಯ ಬರಬಾದ್ ಮಾಡಿಕೊಳ್ಳುವುದು
ಹಾಗೂ ಆ ಹಿರಿಯರ ನಂಬಿಕೆಯನ್ನು ಇನ್ನಷ್ಟು ಕೆಣಕಿ ಈ ವಯಸ್ಸಿನಲ್ಲಿ ಅವರ ಮನಸ್ಸನ್ನು ಘಾಸಿಮಾಡುವುದು
ತರವಲ್ಲ ಎಂದುಕೊಂಡೇ ಸಂಯಮ ತಂದುಕೊಂಡೆ.
ಇಷ್ಟೆಲ್ಲಾ ವಿರೋಧ ಈ ನಾಟಕಕ್ಕೆ
ಬಂದರೂ ಆ ಪ್ರತಿಭಾನ್ವೇಷಣೆ ಸ್ಪರ್ಧೆಯಲ್ಲಿ “ಸೀತಾಂತರಾಳ” ನಾಟಕಕ್ಕೆ ಎರಡನೇ ಬಹುಮಾನ
ಬಂದಿದ್ದು ಈ ಪುರೋಹಿತಶಾಹಿ ಮನಸ್ಸುಗಳಿಗೆ ಆಘಾತಕಾರಿಯಾಗಿತ್ತು. ವಿರೋಧವನ್ನು ಮೀರಿ ನಾಟಕ ಹಾಗೂ ಅಭಿನಯ
ಗೆದ್ದಿತ್ತು. ಹಳೆ ತಲೆಮಾರಿನ ಕೆಲವು ಕಟ್ಟರ್ ಬ್ರಾಹ್ಮಣ್ಯವಾದಿಗಳಿಗೆ ಹೊಸ ತಲೆಮಾರಿನವರು ಕೊಟ್ಟ
ಉತ್ತರದ ಪ್ರತಿರೂಪವಾಗಿ ಫಲಿತಾಂಶ ಬಂದಿತ್ತು. ಶತಮಾನಗಳ ಕಾಲ ದೇವರು ಧರ್ಮಗಳನ್ನು ಪ್ರಶ್ನಿಸುವುದನ್ನೇ
ನಿಷೇಧಿಸಿದ ಪುರೋಹಿತಶಾಹಿಗಳಿಗೆ ಬದಲಾಗುತ್ತಿರುವ ಈಗಿನ ತಲೆಮಾರು ತಮ್ಮದೇ ಆದ ರೀತಿಯಲ್ಲಿ ಉತ್ತರಿಸುತ್ತಿದೆ. ಕೊಂಕಣಿ ಬ್ರಾಹ್ಮಣ ಸಮುದಾಯದಲ್ಲೇ ಸನಾತನ
ನಂಬಿಕೆಗಳ ಬೇರುಗಳನ್ನು ಅಲ್ಲಾಡಿಸುವ ಪ್ರಯತ್ನಗಳು ಅದೇ ಸಮುದಾಯದ ಕುಡಿಗಳಿಂದ ನಡೆಯುತ್ತಿರುವುದು
ಸಂತಸದ ಸಂಗತಿ. ಅಜ್ಜ ಹಾಕಿದ ಸಂಪ್ರದಾಯದ ಆಲದ ಬಿಳಿಲುಗಳೀಗೆ ಜೋತುಬೀಳದೆ ಹೊಸ ಆಲೋಚನೆಗೆ ತೆರೆದುಕೊಳ್ಳುತ್ತಿರುವ
ಯುವಜನರನ್ನು ಅಭಿನಂದಿಸಲೇಬೇಕಿದೆ. ಇದಕ್ಕಾಗಿ ಕಲಾವಿದೆ ಪ್ರತಿಮಾ ನಿಜಕ್ಕೂ ಅಭಿನಂದನಾರ್ಹರು.
ಕಳೆದ ವರ್ಷ ಇದೇ ರೀತಿ ನನ್ನ
ನಾಟಕದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡುವ ಪ್ರಯತ್ನ ನಡೆದಿತ್ತು. ರವೀಂದ್ರ ಕಲಾಕ್ಷೇತ್ರದ
ಆವರಣದಲ್ಲಿ “ಅಚ್ಚೇ ದಿನ್” ಎನ್ನುವ ಬೀದಿನಾಟಕವನ್ನು
ಬರೆದು ನಿರ್ದೇಶಿಸಿ ಆಡಿಸಿದ್ದೆ. ನಾಟಕ ಅರ್ಧದಷ್ಟು ಮುಗಿದಿರುವಾಗಿ ಅಸಹನೆಯಿಂದಾ ಕಂಗಾಲಾದ ಕೆಲವರು
ನಾಟಕ ನಿಲ್ಲಿಸಲು ಪ್ರಯತ್ನಿಸಿದರು. ಆಗ ಪ್ರೇಕ್ಷಕರುಗಳೇ ಅವರನ್ನು ಹೊರಕ್ಕೆ ಎಳೆದೊಯ್ದು ನಾಟಕವನ್ನು
ಮುಂದುವರೆಸಲು ಒತ್ತಾಯಿಸಿದರು. ಅಚ್ಚರಿಎಂದರೆ.. ನಾಟಕ ನಿಲ್ಲಿಸು ಎಂದು ಆಕ್ರೋಶ ವ್ಯಕ್ತಪಡಿಸಿದವರು
ಬ್ರಾಹ್ಮಣ್ಯದಲ್ಲಿ ಮೆದುಳನ್ನು ಅದ್ದಿಕೊಂಡವರು. ಅವರನ್ನು ಎಳೆದೊಯ್ದು ನಾಟಕ ಪ್ರದರ್ಶನಕ್ಕೆ ಅನುವು
ಮಾಡಿಕೊಟ್ಟವರಲ್ಲಿ ಕೆಲವರು ಬ್ರಾಹ್ಮಣ ಸಮುದಾಯದ ಯುವಕರಾಗಿದ್ದರು. ಮೂರು ದಶಕದ ಹಿಂದೆ ಆನೆಕಲ್ಲಿನಲ್ಲಿ
ಸಮುದಾಯ ಬೀದಿ ನಾಟಕ ಮಾಡುತ್ತಿದ್ದಾಗ ಕೆಲವು ಆರೆಸ್ಸೆಸ್ಸಿಗರು ಕಲಾವಿದರುಗಳ ಮೇಲೆ ಹಲ್ಲೆ ಮಾಡಿದರು.
ಅದರಲ್ಲಿ ಬ್ರಾಹ್ಮಣ ಸಮುದಾಯದ ಗುಂಡಣ್ಣ ತೀವ್ರವಾಗಿ ಹಲ್ಲೆಗೊಳಗಾದರು. ಹಲ್ಲೆಯ ನಂತರ ಕೋಮುವಾದಿಗಳನ್ನು
ವಿರೋಧಿಸಲು ಸೇರಿದ ಪ್ರತಿಭಟನೆಯಲ್ಲಿ ಬ್ರಾಹ್ಮಣ ಸಮುದಾಯದ ಅನೇಕ ಕಲಾವಿದರು, ಸಾಹಿತಿಗಳಿದ್ದರು. ಅಂದರೆ.. ಒಂದಂತೂ ಸ್ಪಷ್ಟ. ಎಲ್ಲಾ ಬ್ರಾಹ್ಮಣರೂ ಪುರೋಹಿತಶಾಹಿ
ಮನಸ್ಥಿತಿಯವರಲ್ಲಾ.. ಪುರೋಹಿತಶಾಹಿ ಮನಸ್ಥಿತಿ ಎನ್ನುವುದು ಯಾವುದೇ ಒಂದು ಜಾತಿ ಧರ್ಮಕ್ಕೆ ಸೀಮಿತವಾದದ್ದೂ
ಅಲ್ಲಾ.
ಯಾರು ಅದೆಷ್ಟೇ ಅಡ್ಡಿಪಡಿಸಿದರೂ
ನಾಟಕವಂತೂ ನಿಲ್ಲುವುದಿಲ್ಲ. ಶತಮಾನಗಳಿಂದಾ ಈ ಪುರೋಹಿತಶಾಹಿ ಮಲಿನ ಮನಸ್ಸುಗಳು ಸಾಹಿತಿ ಕಲಾವಿದರುಗಳ
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸುತ್ತಲೆ ಬಂದಿವೆ.
ಅಸಂಖ್ಯಾತ ಹಲ್ಲೆ ಹತ್ಯೆಗಳನ್ನು ಮಾಡಿವೆ.
ಆದರೆ.. ಅಂದಿನಿಂದ ಇಂದಿನವರೆಗೂ ಪ್ರಶ್ನಿಸುವುದಂತೂ ನಿಂತಿಲ್ಲಾ. ನಾಟಕ ಕಲೆ ಸಾಹಿತ್ಯಗಳು
ವೈದಿಕಶಾಹಿ ಪರಂಪರೆಯ ಸುಳ್ಳು ಹಾಗೂ ಭ್ರಮೆಗಳ ಸೃಷ್ಟಿಯನ್ನು ಸಂದೇಹಿಸದೇ ಬಿಟ್ಟಿಲ್ಲಾ. ದಮನ ಮಾಡಿದಷ್ಟೂ
ಪ್ರತಿರೋಧ ತೀವ್ರಗೊಳ್ಳುತ್ತಲೇ ಬಂದಿದೆ. ಒಂದು ಬರಹ, ಒಂದು ನಾಟಕ, ಒಂದು ಚಿತ್ರಕಲೆಯನ್ನೂ ಸಹ ಸಹಿಸಿಕೊಳ್ಳದ
ಧರ್ಮ ಹಾಗೂ ಧರ್ಮಿಯರು ಮನುಕುಲದ ಇತಿಹಾಸದಲ್ಲಿ ತಮ್ಮ ನಿರಂತರತೆಯನ್ನು ಕಾಯ್ದುಕೊಳ್ಳಲು ಸಾಧ್ಯವೇ
ಇಲ್ಲಾ. ಈ ಹಿಂದೆ ಕೂಡಾ ಸೀತೆಯ ದೃಷ್ಟಿಕೋನದಲ್ಲಿ ಪೋಲಂಕಿ ರಾಮಮೂರ್ತಿಯವರು “ಸೀತಾಯಣ” ಪುಸ್ತಕ ಬರೆದು ರಾಮನನ್ನು
ಹಾಗೂ ರಾಮನ ಸೃಷ್ಟಿಕರ್ತರಾದ ವೈದಿಕಶಾಹಿಗಳನ್ನು ಪ್ರಶ್ನಿಸಿದ್ದರು. ಆದರೆ.. ಆಗ ಪುರೋಹಿತಶಾಹಿಗಳೆಲ್ಲ
ಬಹುದೊಡ್ಡ ಗುಲ್ಲೆಬ್ಬಿಸಿ ಆ ಪುಸ್ತಕವನ್ನೇ ಬ್ಯಾನ್ ಮಾಡಿಸಿದ್ದರು. ಅದೇ ರೀತಿ ಸೀತಾಂತರಾಳ ನಾಟಕಕ್ಕೂ
ಈಗ ಸಾತ್ವಿಕ ಪ್ರತಿರೋಧವನ್ನು ಒಡ್ಡಿದ್ದಾರೆ. ಕೇವಲ ಲಿಂಗಾಯತ ಮಠಗಳಲ್ಲಿ ಈ ನಾಟಕ ಹೆಚ್ಚು ಪ್ರದರ್ಶನಗೊಂಡಿದ್ದರಿಂದಾ
ಅಷ್ಟೊಂದು ಪ್ರತಿರೋಧ ಬಂದಿಲ್ಲಾ. ಆದರೆ.. ವೈದಿಕ ಮಠಗಳಲ್ಲಿ ಈ ನಾಟಕ ಪ್ರದರ್ಶನವಾದರೆ ಮತ್ತೆ ಸಮಸ್ಯೆ
ಶುರುವಾಗಬಹುದು. ವೈ.ಡಿ. ಬದಾಮಿಯವರು ಇದೇ ನಾಟಕವನ್ನು ಇದೇ ತಿಂಗಳು ಉಡುಪಿಯಲ್ಲಿ ಪ್ರದರ್ಶನ ಮಾಡುತ್ತಿದ್ದಾರೆ.
ಏನಾಗುತ್ತದೋ ನೋಡಬೇಕು.
-ಶಶಿಕಾಂತ ಯಡಹಳ್ಳಿ