ಸೋಮವಾರ, ಮಾರ್ಚ್ 13, 2017

ತಹ ತಹ.. 76 ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸಂಘಿಗಳ ದಮನ :



ಯೋಗೇಶ್ ಮಾಸ್ಟರ್ ಮುಖಕ್ಕೆ ಮಸಿ; ಪ್ರಜ್ಞಾವಂತರೆಲ್ಲಾ ತೀವ್ರವಾಗಿ ಪ್ರತಿಭಟಿಸಿ:

ಮತ್ತೊಮ್ಮೆ ಸಂಘಪರಿವಾರದ ಅಂಗಗಳು ತಮ್ಮ ವಿಕೃತತೆಯನ್ನು ಮೆರೆದಿವೆ. ಪ್ರಗತಿಪರ ಚಿಂತಕ ಬರಹಗಾರ ಯೊಗೇಶ್ ಮಾಸ್ಟರ್ ಮುಖ ಮೈಗೆಲ್ಲಾ ಮಸಿ ಬಳಿದು ಹಲ್ಲೆ ಮಾಡುವ ಮೂಲಕ ತಮ್ಮ ಕೊಳಕು ಮನಸ್ಸನ್ನು ಜಗಜ್ಜಾಹೀರು ಮಾಡಿವೆ. ಮಾರ್ಚ 12ರಂದು ದಾವಣಗೆರೆಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಕನ್ನಡ ಭವನದಲ್ಲಿ ಆಯೋಜನೆಗೊಂಡಿದ್ದ ಲಂಕೇಶ್-82 ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಟಿ ಕುಡಿಯಲೆಂದು ಪಕ್ಕದ ಹೊಟೇಲಿಗೆ ಹೋಗಿದ್ದಾಗ ಕಾದು ಕುಳಿತಿದ್ದ ನಕಲಿ ದೇಶಭಕ್ತರು ಸಾಹಿತಿ ಯೊಗೇಶ್‌ರವರ ಮೇಲೆ ರಾಸಾಯನಿಕ ಮಿಶ್ರಿತ ಕಪ್ಪು ಬಣ್ಣದ ಅಭಿಷೇಕ ಮಾಡಿ ಹಲ್ಲೆ ನಡೆಸಿದ್ದಾರೆ. ಸಂಘಿಗಳು ಮತ್ತೆ ಮತ್ತೆ ಪ್ರಗತಿಪರರ ಮೇಲೆ ಹಲ್ಲೆ ಮಾಡುತ್ತಾ ವಿರೋಧಿ ದ್ವನಿಯನ್ನು ದಮನ ಮಾಡುವ ಗುಂಡಾಗಿರಿಯನ್ನು ಕಾಲಕಾಲಕ್ಕೆ ನಡೆಸಿಕೊಂಡು ಬರುತ್ತಲೇ ತಮ್ಮ ವಿಕೃತ ಮನಸ್ಥಿತಿಯನ್ನು ತೋರಿಸುತ್ತಲೇ ಬಂದಿದ್ದಾರೆ. ಯೋಗೇಶ್ ಮಾಸ್ಟರ್ ಮೇಲೆ ಮಸಿ ಬಳಿಯುವ ಮೂಲಕ ಈ ಕೋಮುಪಡೆ ತಮ್ಮ ಮುಖಕ್ಕೆ ತಾವೇ ಮಸಿಬಳಿದುಕೊಂಡು ತಮ್ಮ ಕರಾಳತೆಯನ್ನು ಮೆರೆದಿದ್ದಾರೆ. 
ಈ ಹಿಂದೆಯೂ ಸಹ ಮಂಗಳೂರು ವಿವಿಯ ಪ್ರಾದ್ಯಾಪಕರಾದ ಪಟ್ಟಾಭಿರಾಮ್ ಸೋಮಯಾಜಿ, ಚಿಂತಕ ಸುರೇಶ್ ಭಟ್ ಬಾಕ್ರಬೈಲ್ ಹಾಗೂ ಸಾಹಿತಿ ಭಗವಾನ್ ರವರ ಮೇಲೆಯೂ ಸಹ ಈ ಮಸಿ ಬಳಿಯುವ ಮೂಲಕ ಸಂಘಿಗಳು ತಮ್ಮ ವಿಕಾರತೆಯನ್ನು ಸಾಬೀತುಪಡಿಸಿದ್ದರು. ಯೊಗೇಶ್ ಮಾಸ್ಟರ್ ಈಗ ಹೊಸ ಸೇರ್ಪಡೆ ಅಷ್ಟೆ. ಇದು ಇಲ್ಲಿಗೆ ನಿಲ್ಲುವುದೂ ಇಲ್ಲಾ. ಪ್ರಭುತ್ವಾಧಿಕಾರವನ್ನು ಕೇಂದ್ರದಲ್ಲಿ ಸ್ಥಾಪಿಸಿದಾಗಿನಿಂದಾ ಈ  ಪರಿವಾರಿಗಳು ತಮ್ಮ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಮಾಡುವ ದುಷ್ಕೃತ್ಯವನ್ನು ಮುಂದುವರೆಸಿದ್ದಾರೆ ಹಾಗೂ ಮುಂದುವರೆಸುತ್ತಲೇ ಇರುತ್ತಾರೆ. ಅಷ್ಟೇ ಯಾಕೆ ಸನಾತನ ವಿಕೃತಿಗಳನ್ನು ವಿರೋಧಿಸಿದವರನ್ನು ಕೊಲೆ ಮಾಡುವ ಮೂಲಕ ಸತ್ಯವನ್ನು ಪ್ರತಿಪಾದಿಸುವವರಲ್ಲಿ ಆತಂಕ ಹಾಗೂ ಭಯವನ್ನು ಹುಟ್ಟಿಸಿ ಪ್ರತಿರೋಧದ ನೆಲೆಗಳನ್ನು ಹತ್ತಿಕ್ಕುವ ಹುನ್ನಾರನ್ನು ಸಂಘಿಗಳು ಸಂಘಟನಾತ್ಮಕವಾಗಿಯೇ ಮಾಡುತ್ತಿದ್ದಾರೆ. ಡಾ.ಎಂ.ಎಂ.ಕಲಬುರ್ಗಿಯಂತಹ ವಿಚಾರವಾದಿಗಳನ್ನು ಕೊಲೆ ಮಾಡಿದ್ದೇ ಇದಕ್ಕೆ ಉದಾಹರಣೆಯಾಗಿದೆ.

ಇದು ಸನಾತನವಾದಿಗಳ ಭಯೋತ್ಪಾದನೆಯ ಮಾದರಿಯಾಗಿದೆ. ಪ್ಯಾಸಿಸ್ಟ್ ಪ್ರಭುತ್ವದ ಸ್ಥಾಪನೆಯ ಲಕ್ಷಣವಾಗಿದೆ. ಸೈಂದಾತಿಕ ಭಿನ್ನಾಭಿಪ್ರಾಯಗಳನ್ನು ಸೈಂದಾತಿಕ ಸಂವಾದಗಳ ಮೂಲಕ ಎದುರಿಸುವ ತಾಕತ್ತಿಲ್ಲದ ಈ ಹೇಡಿಗಳು ಹಲ್ಲೆ ಕೊಲೆಗಳನ್ನು ಮಾಡುವ ಮೂಲಕ ಕೋಮುವಾದವನ್ನು ವಿರೋಧಿಸುವ ಹಾಗೂ ಕೋಮುವ್ಯಾದಿಗಳನ್ನು ಖಂಡಿಸುವ ಪ್ರಜ್ಞವಂತರನ್ನು ಹೆದರಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ನಾವು ದ್ವೇಷಿಸುವ ಜನರಿಗೂ ವಾಕ್ ಸ್ವಾತಂತ್ರ್ ಇರಬೇಕೆಂದು ನಂಬಿಕೆ ನಮಗೆ ಇರದಿದ್ದರೆ, ಆಗ ನಮಗೆ ನಿಜವಾಗಿಯೂ ವಾಕ್ ಸ್ವಾತಂತ್ರ್ದಲ್ಲಿ ನಂಬಿಕೆಯಿಲ್ಲವೆಂದೇ ಅರ್ಥ ಎಂದು ನೋಮ್ ಚಾಮ್‌ಸ್ಕಿ ಹೇಳಿದಿಂತೆ ಈ ಕೋಮು ಭಯೋತ್ಪಾದಕರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಯಾವುದೇ ನಂಬಿಕೆ ಇಲ್ಲವೆಂಬುದು ಬೇಕಾದಷ್ಟು ಸಲ ಸಾಬೀತಾಗಿದೆ. ಯೊಗೇಶ್ ಮಾಸ್ಟರ್ ಹೇಳಿದ್ದರಲ್ಲಿ  ಇಲ್ಲವೇ ಬರೆದಿದ್ದರಲ್ಲಿ ಅಸಹನೆ ಇದ್ದರೆ ಅದನ್ನು ವಾದ ಸಂವಾದ ಚರ್ಚೆಗಳ ಮೂಲಕ ಪ್ರತಿಪಾದಿಸುವುದನ್ನು ಬಿಟ್ಟು ಮಸಿ ಬಳಿದು ಹಲ್ಲೆ ಮಾಡಲು ಮುಂದಾದವರಿಗೆ ಪ್ರಜಾಪ್ರಭುತ್ವದ ಮೌಲ್ಯಗಳೆ ಗೊತ್ತಿಲ್ಲಾ.. ಮಾನವೀಯತೆಯಂತೂ ಮೊದಲೇ ಇಲ್ಲಾ.

 ಇಷ್ಟಕ್ಕೂ ಈ ಸಲ ಯೊಗೇಶ್ ಮಾಸ್ಟರರನ್ನೇ ಯಾಕೆ ಈ ದೇಶಭಕ್ತರು ಆಯ್ಕೆ ಮಾಡಿಕೊಂಡರು? ಡುಂಡಿ ಕೊಟ್ಟ ಶಾಕ್ ಗುಂಗಿನಿಂದಾ ಇನ್ನೂ ಹೊರಬರದೇ ಪರಿತಪಿಸುತ್ತಿರುವ ಈ ಅತೃಪ್ತಾತ್ಮಗಳು ತಲ್ಲಣಗೊಂಡಿದ್ದವು. ಯೋಗೇಶ್ ಗಣಪತಿ ಹಾಗೂ ಪಾರ್ವತಿಯ ಕುರಿತು ಡುಂಡಿ  ಎನ್ನುವ ಸಂಶೋಧನಾತ್ಮಕ ಕಾದಂಬರಿಯೊಂದನ್ನು ನಾಲ್ಕು ವರ್ಷಗಳ ಹಿಂದೆ ಬರೆದಿದ್ದರು. ಅದು ಪ್ರಕಟಗೊಂಡಕೂಡಲೇ ಸನಾತನಿಗಳು ಬಾಲ ಸುಟ್ಟ ಕೋತಿಯಂತೆ ತಲ್ಲಣಗೊಂಡು ರುದ್ರನರ್ತನದಲ್ಲಿ ತೊಡಗಿದವು. ಧಾರ್ಮಿಕ ಬಾವನೆಗಳ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂತಾಗಿದೆ ಎಂದು ಆರೋಪಿಸಿ ಕೇಸ್ ದಾಖಲಿಸಿದರು. ಇನ್ನು ಕೆಲವರು ಕೋರ್ಟ ಮೇಲೆ ಒತ್ತಡ ತಂದು ಡುಂಡಿ ಕಾದಂಬರಿಯನ್ನೇ ಬ್ಯಾನ್ ಮಾಡಿಸಿದರು. ಅಷ್ಟಕ್ಕೆ ಬಿಡದೇ ಯೋಗೇಶ್ ಮಾಸ್ಟರ ಎನ್ನುವ ಸೂಕ್ಷ್ಮ ಪ್ರಜ್ಞೆಯ ಲೇಖಕರನ್ನು ಬಂಧಿಸಿ ಜೈಲಿಗೆ ಕಳುಹಿಸಿ ವಿಕೃತಾನಂದ ಪಟ್ಟರು. ಯೋಗೇಶ್ ರವರ ಬಂಧನವನ್ನು ವಿರೋಧಿಸಿ ಕೆಲವರು ಪ್ರತಿಭಟನೆಗಿಳಿದರೂ ಈ ಸಂಘಿಗಳ ಅಬ್ಬರದ ಮುಂದೆ ಅವು ಕ್ಷೀಣವಾಗಿದ್ದವು. ಕೊನೆಗೆ ಸಾಮಾಜಿಕ ಕಾಳಜಿ ಇರುವ ಹಿರಿಯ ವಕೀಲ ಸಿ.ಎಸ್.ದ್ವಾರಕಾನಾಥರವರ ಸಾಮಾಜಿಕ ಕಳಕಳಿಯಿಂದಾಗಿ ಜಾಮೀನಿನ ಮೇಲೆ ಯೋಗೇಶ್ ಬಿಡುಗಡೆಯಾದರು ಆದರೆ ಈಗಲೂ ಕೇಸ್ ನಡೆಯುತ್ತಲೇ ಇದೆ. ಕೇಸ್ ಗೆಲ್ಲುವುದಂತೂ ಈ ಕಮಂಗಿ ಪಡೆಗೆ ಸಾಧ್ಯವಂತೂ ಇಲ್ಲಾ. ಆದರೆ.. ಬರಹಗಾರರನ್ನು ಕಾನೂನಿನ ಕುಣಿಕೆಯಲ್ಲಿ ಸಿಕ್ಕಿಸಿ ಹಿಂಸಿಸುವ ಮೂಲಕ ಅವರ ಆತ್ಮಸ್ತೈರ್ಯವನ್ನು ಕುಗ್ಗಿಸುವ ಕೆಲಸವನ್ನು ಮಾಡುವುದರಲ್ಲಿ ಈ ಕೋಮುಪಡೆ ನಿಸ್ಸೀಮರು. ಆದರೆ.. ಯೊಗೇಶ್ ಮಾಸ್ಟರ್ ಈ ಯಾವ ಕೇಸುಗಳಿಗೆ ಬಗ್ಗದೇ ಕೋಮುವಿರೋಧಿ ಚಳುವಳಿಯ ಜೊತೆ ತೊಡಗಿಸಿಕೊಳ್ಳುತ್ತಲೇ ಬಂದಾಗ ದೇಶಭಕ್ತರ ಸಂಕಟ ಹೆಚ್ಚಾಗತೊಡಗಿತು. ಕೋರ್ಟಲ್ಲಿ ಸೋಲು ಖಂಡಿತ ಎನ್ನುವ ಅರಿವೂ ಅವರಿಗಿತ್ತು. ಆದ್ದರಿಂದ ಈಗ ಕಾನೂನನ್ನು ತಾವೇ ಕೈಗೆ ತೆಗೆದುಕೊಂಡು ಮಸಿ ಬಳಿಯುವ ಹಾಗೂ ಹಲ್ಲೆ ಮಾಡುವ ಮೂಲಕ ಯೋಗೇಶ್ ಮಾಸ್ಟರ್‌ರನ್ನು ಹೆದರಿಸುವ ಹಾಗೂ ಆ ಮೂಲಕ ಕೋಮುವಾದಿಗಳನ್ನು ವಿರೋಧಿಸುವ ಎಲ್ಲಾ ಪ್ರಜ್ಞಾವಂತ ಬರಹಗಾರರಿಗೆ ಎಚ್ಚರಿಕೆ ಕೊಡುವ ಅಮಾನವೀಯ ಕೆಲಸವನ್ನು ಮಾಡಿ ಹೇಡಿಗಳಂತೆ ಓಡಿ ಹೋಗಿದ್ದಾರೆ.  

ಹಲ್ಲೆಯಾದ ದಿನದ ಸಂಜೆಯೇ ಕ್ಯಾಂಪಸ್ ಪ್ರಂಟ್ ಆಪ್ ಇಂಡಿಯಾ ವಿದ್ಯಾರ್ಥಿ ಸಂಘಟನೆ ಮೈಸೂರು ಬ್ಯಾಂಕ್ ಸರ್ಕಲ್ಲಿನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡು ರಾಜ್ಯಾಂದ್ಯಂತ ಪ್ರತಿಭಟನೆಗೆ ಕರೆಕೊಟ್ಟರು. ಮರುದಿನ ಹಲವಾರು ಪ್ರಗತಿಪರ ಸಂಘಟನೆಗಳು ಟೌನ್‌ಹಾಲ್ ಮುಂದೆ ಪ್ರತಿಭಟನೆ ಆಯೋಜಿಸಿವೆ. ದಾವಣಗೆರೆಯಲ್ಲೂ ಪ್ರಗತಿಪರ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿವೆ. ಸಾಮಾಜಿಕ ಜಾಲತಾಣಗಳಲ್ಲಿ ಸಂಘಪರಿವಾರದ ವಟುಗಳಾದ ಎಬಿವಿಪಿಗಳು ಮಾಡಿದ ಈ ದುಷ್ಟಕೃತ್ಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ದಾವಣಗೆರೆ ಎಬಿವಿಪಿ ಪತ್ರಿಕಾ ಪ್ರಕಟಣೆ ಹೊರಡಿಸಿ ಈ ಮಸಿ ಘಟನೆಗೂ ತಮಗೂ ಯಾವುದೇ ಸಂಬಂಧವಿಲ್ಲಾ ಎಂದು ಹೇಳಿಕೊಂಡು ಹೊಣೆಗಾರಿಕೆಯಿಂದಾ ಜಾರಿಕೊಳ್ಳಲು ಪ್ರಯತ್ನಿಸಿತು. ಕಾರ್ಯಪ್ರವೃತ್ತರಾದ ದಾವಣಗೆರೆ ಪೊಲೀಸರು ಹಿಂದೂ ಜಾಗರಣ ವೇದಿಕೆಯ ಶಿವಪ್ರಸಾದ್ ಹಾಗೂ ಚೇತನ್ ಎನ್ನುವ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ಚೇತನ್ ಹಿಂದೂ ಜಾಗರಣ ವೇದಿಕೆಯ ಸದಸ್ಯನಾಗಿದ್ದು ಎಬಿವಿಪಿಯ ಕಾರ್ಯಕರ್ತ. ಹಾಗೂ ಈ ಶಿವಪ್ರಸಾದ್ ಎನ್ನುವ ವ್ಯಕ್ತಿ ವಿಶ್ವವಾಣಿ ಪತ್ರಿಕೆಯಲ್ಲಿ ಕೆಲಸಮಾಡುತ್ತಿದ್ದು ಹಿಂದೂ ಜಾಗರಣ ವೇದಿಕೆಯ ಸದಸ್ಯನಾಗಿದ್ದು ಆರೆಸ್ಸೆಸ್ಸ ಹಾಗೂ ಬಿಜೆಪಿಯ ಸಕ್ರೀಯ ಸದಸ್ಯನಾಗಿದ್ದಾನೆ. ಈತ ಯೊಗೇಶ್ ಮಾಸ್ಟರ್ಗೆ ಮಸಿ ಬಳಿದು ಹಲ್ಲೆ ಮಾಡಿದ ಪ್ರಕರಣದಲ್ಲಿ ಬಂಧಿಯಾದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಕೋರ್ಟಿನಲ್ಲಿ ಜಾಮೀನು ಪಡೆದು ಹೊರಬಂದಿದ್ದಾನೆ. ಅದರೆ... ನಮ್ಮ  ಮುಖ್ಯ ಮಂತ್ರಿಗಳು ತಪ್ಪಿತಸ್ತರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿ ತಮ್ಮ ಹೊಣೆಗಾರಿಕೆಯನ್ನು ಪೊಲೀಸರ ಮೇಲೆ ಹಾಕಿ ನಿರಾಳರಾಗಿದ್ದಾರೆ.  ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಅಭಿವ್ಯಕ್ತ ಸ್ವಾತಂತ್ರ್ಯದ ಮೇಲೆ ನಂಬಿಕೆ ಇದ್ದರೆ ಮೊದಲು ಯೊಗೇಶ್ ಮಾಸ್ಟರರಿಗೆ ಸಾಂತ್ವನ ಹೇಳಬೇಕಿತ್ತು. ತದನಂತರ ತಪ್ಪಿತಸ್ತರನ್ನು ಕೂಡಲೇ ಗೂಂಡಾಕಾಯ್ದೆಯಡಿ ಬಂಧಿಸಿ  ಇತರ ಕೋಮುವಾದಿ ಭಯೋತ್ಪಾದಕರಿಗೆ ತೀವ್ರವಾದ ಎಚ್ಚರಿಕೆಯನ್ನು ಕೊಡಬೇಕಿತ್ತು. ಈ ಶಡ್ಯಂತ್ರವನ್ನು ಕಾರ್ಯರೂಪಕ್ಕೆ ತಂದ ಕಾಲಾಳುಗಳಿಗಿಂತಲೂ ಅದರ ಹಿಂದಿರುವ ಮೆದುಳುಗಳನ್ನು ಹಿಡಿದೆಳೆತಂದು ಜೈಲಿಗಟ್ಟಬೇಕಿತ್ತು.ಈ ಮಸಿ ಬಳಿಯುವ ಗನಂಧಾರಿ ಕೆಲಸವನ್ನು ಮಾಡಿದ್ದು ಶೂದ್ರ ಹುಡುಗರು. ಇವರ ತಲೆಯಲ್ಲಿ ಮತೀಯವಾದವನ್ನು ಬಿತ್ತಿದ ಕಾರಂತ, ಪ್ರಭಾಕರ್ ಭಟ್ ನಂತವರು ಹಿಂದುತ್ವದ ಹೆಸರಲ್ಲಿ ತಮ್ಮ ಬ್ರೇನ್ ವಾಷ್ ಕಾರ್ಯಕ್ರಮವನ್ನು ಮುಂದುವರೆಸಿದ್ದಾರೆ. ಅದರೆ ಈ ಮನುವಾದಿಗಳ ಕುತಂತ್ರವರಿಯದ ಶೂದ್ರ ಯುವಕರು ಇಂತಹ ಹೀನ ಕೆಲಸಕ್ಕೆ ಟೂಲ್ ಆಗಿ ಬಳಕೆಯಾಗುತ್ತಿದ್ದಾರೆ. ಇದೂ ಸಹ ಸಂಘಪರಿವಾರದ ಮಾಸ್ಟರ್ ಮೈಂಡ್ ಗಳ ಶಡ್ಯಂತ್ರದ ಭಾಗವೇ ಆಗಿದೆ. ಶೂದ್ರ ದಲಿತ ಯುವಕರ ತಲೆಯಲ್ಲಿ ಹಿಂದುತ್ವದ ಉನ್ಮಾದವನ್ನು ತುಂಬಿ ಹತ್ಯೆ ಹಲ್ಲೆಗಳನ್ನು ಮಾಡಿಸುತ್ತಲೇ ಬಂದಿರುವ ಪುರೋಹಿತಶಾಹಿಗಳು ಅಬ್ರಾಹ್ಮಣ ಯುವಕರನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದು ಬಹಿರಂಗ ಸತ್ಯ.

ಅಕಸ್ಮಾತ್ ಇದೇ ರೀತಿ ಯಾರಾದರೂ ಸಾಮಾಜಿಕ ಚಳುವಳಿಯ ಹುಡುಗರುಗಳು ಬಲಪಂಥೀಯ ಪ್ರತಿಪಾದಕರಾದ ಬೈರಪ್ಪನವರಿಗೋ ಇಲ್ಲಾ ಚಿದಾನಂದಮೂರ್ತಿಯವರಿಗೋ ಮಸಿ ಬಳಿದು ಹಲ್ಲೆ ಮಾಡಿದ್ದರೆ ಇಷ್ಟೊತ್ತಿಗೆ ಅದನ್ನು ರಾಷ್ಟ್ರೀಯ ದುರಂತ ಎನ್ನುವಂತೆ ಈ ಸಂಘಪರಿವಾರಿಗಳು ಬಿಂಬಿಸಿ ಬೀದಿಬೀದಿಯಲ್ಲಿ ನಿಂತು ಬಾಯಿಬಡಿದುಕೊಳ್ಳುತ್ತಿದ್ದರು. ಈ ಸೂಲಿಬೆಲೆಯಂತಾ ವಿಕೃತ ಮನಸ್ಸಿನ ನಕಾರಾತ್ಮಕ ಜೀವಿಗಳು ಆರು ದಾರಿ ಸೇರುವಲ್ಲಿ ನಿಂತು ಮೆದುಳಿನೊಳಗಿರುವ ಕೊಳಕನ್ನು ವಾಂತಿ ಮಾಡಿಕೊಳ್ಳುತ್ತಿದ್ದರು.   ಕೋಮುವಾದಿತ್ವವನ್ನು ಹಿಡನ್ ಅಜೆಂಡಾ ಮಾಡಿಕೊಂಡಿರುವ ಬಹುತೇಕ ಚಾನೆಲ್‌ನವರು ಅದನ್ನು ದಿನದಿಪ್ಪತ್ತುನಾಲ್ಕು ಗಂಟೆಯೂ ಬ್ರೇಕಿಂಗ್ ನ್ಯೂಸ್ ಹೆಸರಲ್ಲಿ ಮತ್ತೆ ಮತ್ತೆ ತೋರಿಸಿ ಇದೊಂದು ದೇಶದ್ರೋಹದ ಕೃತ್ಯವೆಂದು ಪ್ರತಿಪಾದಿಸಿ ಬಲಪಂಥೀಯರ ಪರವಾಗಿ ಜನಾಭಿಪ್ರಾಯವನ್ನು ರೂಪಿಸಲು ಹಗಲಿರುಳು ಶ್ರಮಿಸುತ್ತಿದ್ದರು. ಆದರೆ.. ಈಗ ಮಸಿ ಬಳಿದು ಹಲ್ಲೆ ಮಾಡಿದ್ದು ಸಂಘಪರಿವಾರಿಗಳೇ ಆಗಿದ್ದರಿಂದಾ ಚಾನೆಲ್‌ಗಳು ಹಾಗೂ ಪೀತ ಪತ್ರಿಕೆಗಳು ಪಂಚೇಂದ್ರಿಯಗಳನ್ನು ಮುಚ್ಚಿಕೊಂಡು ಬೇರೆ ಬ್ರೇಕಿಂಗ ನ್ಯೂಸ್‌ಗಾಗಿ ಅಂಡಲೆಯುತ್ತಿವೆ. ಆತ್ಮಸಾಕ್ಷಿಯನ್ನೇ ಮಾರಿಕೊಂಡ ಮಾಧ್ಯಮಗಳನ್ನು ನಿರ್ಲಕ್ಷಿಸಿ ಜನಪರ ಹೋರಾಟಗಾರರು ಹಾಗೂ ಪ್ರಜ್ಞಾವಂತ ಸಾಹಿತಿ ಕಲಾವಿದರುಗಳು ಬೀದಿಗಿಳಿದು ಪ್ರತಿಭಟಿಸುತ್ತಾ ಈ ದೇಶಭಕ್ತರ ನಿಜವಾದ ಮುಖವಾಡವನ್ನು ಜನತೆಯ ಮುಂದೆ ಕಿತ್ತೆಸೆಯಬೇಕಿದೆ. ಯೊಗೇಶ್ ಮಾಸ್ಟರ್ ಇಲ್ಲಿ ಕೇವಲ ನಿಮಿತ್ತ ಮಾತ್ರ. ಎಲ್ಲಾ ಪ್ರಗತಿಪರರಿಗೂ ಕೋಮುವಾದಿಗಳು ಕೊಟ್ಟ ಎಚ್ಚರಿಕೆ ಎಂದೇ ಪರಿಗಣಿಸಬೇಕಿದೆ. ಅಭಿವ್ಯಕ್ತಿ ಸ್ವಾತಂತ್ರವನ್ನು ದಮನಗೊಳಿಸುವವರ ಎಲ್ಲಾ ರೀತಿಯ ಭಯೋತ್ಪಾದಕತೆಯನ್ನು ಶತಾಯ ಗತಾಯ ವಿರೋಧಿಸಬೇಕಿದೆ. ಪ್ರತಿಯೊಬ್ಬ ಪ್ರಜ್ಞಾವಂತರೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲೇಬೇಕಿದೆ. 
ಪ್ರೀತಿಯ ಸಂಗಾತಿಗಳೇ, ನಿಮ್ಮ ಕಳಕಳಿ ಮತ್ತು ಬದ್ಧತೆಯನ್ನು ಕಂಡು ನನ್ನ ಮೇಲಿನ ಹಲ್ಲೆಯಿಂದ ನನಗಾದ ಆಘಾತ ಕಡಿಮೆಯಾಗಿದೆ. ಜೊತೆಗೆ ನಮ್ಮ ಪ್ರಗತಿಪರವಾದ ಮತ್ತು ಶೋಷಣೆಗಳ ವಿರುದ್ಧವಾದ ಹೋರಾಟ ಮತ್ತು ಚಳುವಳಿಗಳಲ್ಲಿ ನನ್ನ ಬದ್ಧತೆಯ ಪ್ರಜ್ಞೆಯನ್ನು ಮತ್ತಷ್ಟು ಬಲಗೊಳಿಸಿದೆ. ನಮ್ಮ ಹೋರಾಟ ಬಲಗೊಳ್ಳಲಿ ಮತ್ತು ಸಾಧಿಸಬೇಕಾದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಸಾಧಿಸಿಯೇ ತೀರುವ. ಐಕ್ಯತೆ ಚಿರಾಯುವಾಗಲಿ ಎಂದು ಯೋಗೇಶ್ ಮಾಸ್ಟರ್ ವಾಟ್ಸಾಪ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಈ ಸಂಘಪರಿವಾರದ ಉನ್ಮಾದಪೀಡಿತರಿಗೆ ದಮನ ಹೆಚ್ಚಿದಷ್ಟೂ ದಂಗೆ ತೀವ್ರಗೊಳ್ಳುತ್ತದೆ ಎನ್ನುವ ಜಾಗತಿಕ ಸತ್ಯ ಅರಿವಾಗಬೇಕಿದೆ ಹಾಗೂ ಹೀಗೆ ದೌರ್ಜನ್ಯ ಮಾಡುವುದರ ಮೂಲಕ ಜನರ ಪರವಾದ ದ್ವನಿಗಳನ್ನು ಉಡುಗಿಸಲು ಸಾಧ್ಯವೆಂದು ನಂಬಿದ ಕೋಮುವಾದಿ ಭಯೋತ್ಪಾದಕರಿಗೆ ಕಾಲವೇ ಉತ್ತರಿಸುತ್ತದೆ.

ಪೊಲೀಸರು ತಮ್ಮ ಕೆಲಸ ತಾವು ಮಾಡುತ್ತಾರೆ. ಕೋರ್ಟಿನ ವಿಳಂಬ ಧೋರಣೆಯಿಂದಾಗಿ ಇಂತಹ ಕೇಸುಗಳು ಇತ್ಯರ್ಥವಾಗುವುದು ಇನ್ಯಾವ ಕಾಲಕ್ಕೋ. ಈಗಾಗಲೇ ಹಲ್ಲೆ ಮಾಡಿದ ಕೋಮುವಾದಿಗಳಿಗೆ ಇಲ್ಲಿವರೆಗೂ ಶಿಕ್ಷೆಯಾಗಿಲ್ಲಾ.. ಈ ವ್ಯವಸ್ಥೆಯಲ್ಲಿ ಆಗುವುದೂ ಇಲ್ಲಾ. ಈ ಸಂಘಿಗಳಿಗೆ ಯೋಗೇಶ್ ಮಾಸ್ಟರ್ ಆಗಲಿ ಇಲ್ಲವೇ ಡಾ.ಕಲಬುರ್ಗಿಯವರಾಗಲಿ ನಿಜವಾದ ಟಾರ್ಗೆಟ್ ಅಲ್ಲವೇ ಅಲ್ಲಾ. ಈ ರೀತಿಯ ಹಲ್ಲೆ ಕೊಲೆಗಳನ್ನು ಮಾಡುವ ಮೂಲಕ ಎಲ್ಲಾ ಪ್ರಜ್ಞಾವಂತ ಪ್ರಗತಿಪರರು ಹಾಗೂ ಜನಹೋರಾಟಗಾರರಲ್ಲಿ ಭಯಹುಟ್ಟಿಸುವ ಮೂಲಕ ಸಂಘಿಗಳ ಜೀವವಿರೋಧಿ ಸಿದ್ದಾಂತಗಳನ್ನು ಹಾಗೂ ಚರಿತ್ರೆ ಪುರಾಣಗಳ ಸುಳ್ಳುಸೃಷ್ಟಿಗಳನ್ನು ಪ್ರಶ್ನಿಸುವವರ ದ್ವನಿಯನ್ನು ಹತ್ತಿಕ್ಕುವ ಕುತಂತ್ರಗಳನ್ನು ಮಾಡುತ್ತಿದ್ದಾರೆ. 
ಆದ್ದರಿಂದ ಇಂತಹ ಘಟನೆಗಳನ್ನು ವ್ಯಯಕ್ತಿಕ ನೆಲೆಯಲ್ಲಿ ನೋಡದೇ.. ಯಾರೋ ಒಬ್ಬರ ಮೇಲಾದ ದಮನವೆಂದು ನಿರ್ಲಕ್ಷಿಸದೇ ಎಲ್ಲಾ ಪ್ರಗತಿಪರರು ಹಾಗೂ ಜನಹೋರಾಟದ ಪರವಿರುವ ಸಂಘಟನೆಗಳು ಸಂಘನಾತ್ಮಕವಾಗಿ ವಿರೋಧಿಸಲೇಬೇಕಿದೆ. ಇಲ್ಲವಾದರೆ ಅವತ್ತು ಕಲಬುರ್ಗಿಯವರಿಗೆ ಮಾಡಲಾದ ಹತ್ಯೆ ನಾಳೆ ಇನ್ನ್ಯಾರದೋ ಮೇಲಾಗಬಹುದು. ಇವತ್ತು ಯೋಗೇಶ್ ಮೇಷ್ಟ್ರ ಮೇಲಾದ ಹಲ್ಲೆ ನಾಳೆ ಇನ್ಯಾರೋ ಪ್ರಗತಿಪರರ ಮೇಲಾಗಬಹುದು. ನಮ್ಮ ಸರದಿ ಬರುವವರೆಗೆ ಕಾಯುವುದನ್ನು ಬಿಟ್ಟು ಹಾಗೂ ಕೇವಲ ಸಾಂಕೇತಿಕ ಪ್ರತಿಭಟನೆಗಳ ಜೊತೆಗೆ ಸಂಘಪರಿವಾರದ ಹುನ್ನಾರದ ವಿರುದ್ದ ಜನಾಭಿಪ್ರಾಯವನ್ನು ರೂಪಿಸುವುದು ಈ ಸಧ್ಯದ ಅಗತ್ಯವಾಗಿದೆ. ಇನ್ನೊಮ್ಮೆ ಪ್ರಗತಿಪರರ ಮೇಲೆ ಹಲ್ಲೆ ಮಾಡುವ ಮೊದಲು ಸಂಘಿಗಳ ಗೂಂಡಾಪಡೆ ಸಾವಿರ ಸಲ ಯೋಚಿಸುವಂತೆ ಮಾಡಬೇಕಿದೆ. ಅವರು ಮಾಡುವ ಒಂದೊಂದು ಹತ್ಯೆ ಹಲ್ಲೆಗಳೂ ಅವರ ಮುಖವಾಡಗಳನ್ನು ಜನರ ಮುಂದೆ ಬಯಲುಗೊಳಿಸುವಂತೆ ಮಾಡುವುದು ಪ್ರಸ್ತುತ ಅನಿವಾರ್ಯತೆಯಾಗಿದೆ. ಎಲ್ಲಿವರೆಗೂ ಇನ್ನೂ ಜೀವಂತ ಇರುವ ಹಾಗೂ ಜೀವ ಹಿಡಿದುಕೊಂಡಿರುವ ಜನಪರವಾದ ಸಂಘಟನೆಗಳು ಸಂಘಿಗಳ  ದಮನದ ಮೇಲೆ ಒಂದಾಗಿ ತಿರುಗಿ ಬೀಳಬೇಕಿದೆ. ಇಲ್ಲವಾದರೆ ಪ್ರತಿರೋಧದ ದ್ವನಿಗಳನ್ನು ಅಡಗಿಸುವ ಶಡ್ಯಂತ್ರಕ್ಕೆ ಎಲ್ಲರೂ ಕಾಲಕಾಲಕ್ಕೆ ಬಲಿಯಾಗುವುದು ಶತಸಿದ್ದ. ಈ ದೇಶವನ್ನು ಪ್ಯಾಸಿಸ್ಟ್ ಪ್ರಭುತ್ವ ಆಪೋಷನ ತೆಗೆದುಕೊಳ್ಳುವುದು ಹಾಗೂ ಮುಂದಿನ ನೂರಿನ್ನೂರು ವರ್ಷಗಳ ಕಾಲ ಮನುವಾದಿಗಳೇ ಈ ದೇಶವನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡು ಆಳುವುದನ್ನು ಯಾರಿಂದಲೂ ತಡೆಯಲು ಸಾಧ್ಯವೇ ಇಲ್ಲಾ  

 -ಶಶಿಕಾಂತ ಯಡಹಳ್ಳಿ  



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ