“ಚೆಂದಕ್ಕಿಂತ ಚೆಂದ ನೀನೆ ಸುಂದರ
“ನಿನ್ನ ನೋಡ ಬಂದ ಬಾನ ಚಂದಿರ..” ಎನ್ನುವ ಗಜಲ್ ಮಾದರಿಯ ‘ಸ್ಪರ್ಶ’ ಸಿನೆಮಾ ಹಾಡನ್ನು ಕೇಳಿ ಖುಷಿಪಟ್ಟವರು
ಅಸಂಖ್ಯಾತರು. ಈ ಹಾಡು ಬರೆದ ಕವಿ ಪ್ರೊ.ಇಟಗಿ ಈರಣ್ಣ ಮಾರ್ಚ 12ರಂದು ಚೆಂದದ ಲೋಕ ಬಿಟ್ಟು ಮರಳಿ ಬಾರದ
ಲೋಕಕ್ಕೆ ಹೊರಟುಬಿಟ್ಟರು. ಉರ್ದು ಹಾಗೂ ಹಿಂದಿಯಲ್ಲಿ ಪ್ರಸಿದ್ದಿಯಾದ ಶಾಯರಿ (ಗಜ್ಹಲ್) ಪ್ರಕಾರವನ್ನು
ಕನ್ನಡ ಭಾಷೆಯಲ್ಲಿ ರೂಢಿಸಿಕೊಂಡು ಸಾವಿರಕ್ಕೂ ಹೆಚ್ಚು ಕನ್ನಡ ಶಾಯರಿಗಳನ್ನು ಬರೆದ ಈರಣ್ಣ ಕನ್ನಡ
ಕಾವ್ಯ ಲೋಕಕ್ಕೆ ಕೊಟ್ಟ ಕೊಡುಗೆ ಬಲು ವಿಶಿಷ್ಟವಾದದ್ದು. ಅವರ ಕನ್ನಡದ ಶಾಯರಿಗಳು ಕವಿತೆ ಸಂಗ್ರಹದ
ಪುಸ್ತಕ ಹದಿನೈದಕ್ಕೂ ಹೆಚ್ಚು ಮರುಮುದ್ರಣಗಳನ್ನು ಕಂಡಿದೆ. ಉರ್ದು ಮತ್ತು ಪರ್ಷಿಯನ್ ಭಾಷೆಯನ್ನೂ
ಬಲ್ಲವರಾಗಿದ್ದ ಪ್ರೊ.ಈರಣ್ಣ ಆ ಭಾಷೆಗಳ ಕೆಲವಾರು ಗಜ್ಹಲ್ಗಳನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡ
ಕಾವ್ಯಾಸಕ್ತರಿಗೆ ಶಾಯರಿ ಪ್ರಕಾರವನ್ನು ಪರಿಚಯಿಸಿದ್ದರು.
ಒಂದೇ ಒಂದು ಸಲ ಅವರನ್ನು ಮಾತಾಡಿಸಿದರೆ
ಸಾಕಿತ್ತು.. ಅವರು ಅಪರಿಚಿತರಾಗಿದ್ದರೂ ಸಹ ಜನುಮ ಜನುಮದ ಸಂಬಂಧಿಕರೇನೋ ಎನ್ನುವಂತೆ.. ಹಲವಾರು ವರ್ಷಗಳ
ಆತ್ಮೀಯ ಪರಿಚಯವಿದೆಯೇನೋ ಎನ್ನುವಂತೆ ಆತ್ಮೀಯತೆಯಿಂದ ಮಾತಾಡಿಸುತ್ತಿದ್ದ ಅಂತಃಕರಣದ ಕವಿ ಈರಣ್ಣನವರ
ನೆನಪು ಅವರ ಆತ್ಮೀಯ ಬಳಗವನ್ನು ಬಹುಕಾಲ ಕಾಡುವುದಂತೂ ಸತ್ಯ. ಚೆಂದಕ್ಕಿಂತಾ ಚೆಂದದ ವ್ಯಕ್ತಿತ್ವ ಹೊಂದಿದ್ದ
ಈರಣ್ಣನವರ ಮಾನವೀಯ ಪ್ರೀತಿ ಹಾಗೂ ಅದರ ರೀತಿಯನ್ನು ಅನುಭವಿಸಿದವರು ಎಂದೂ ಮರೆಯಲಾರರು. ಅವರ ಬಹುತೇಕ
ಕನ್ನಡ ಶಾಯರಿಗಳಲ್ಲಿ ಸಹ ಗಂಡು ಹೆಣ್ಣಿನ ನಡುವಿನ ಆತ್ಮೀಯ ಕ್ಷಣಗಳೇ ಅಕ್ಷರಗಳಾಗಿವೆ. ಸಂಬಂಧಗಳ ಚೌಕಟ್ಟಿನೊಳಗೇ
ತಮ್ಮ ಶಾಯರಿ ಕೃಷಿಯನ್ನು ನಿರಂತರವಾಗಿ ಮಾಡಿದವರು ಈರಣ್ಣ.
ಅವರ ಮಾನವೀಯ ಅಂತಃಕರಣಕ್ಕೆ
ಸಾಕ್ಷಿಯಾಗಿದ್ದು ಅವರು ಹೆತ್ತವ್ವನ ಮೇಲಿಟ್ಟಿದ್ದ ಅಪಾರ ಪ್ರೀತಿ. ಅತ್ಯಂತ ಕಡುಬಡತನದಲ್ಲಿ ಅವರಿವರ
ಮನೆ ಕೆಲಸ ಮಾಡಿ ಮಗನನ್ನು ಕಷ್ಟಪಟ್ಟು ಓದಿಸಿ ಬೆಳೆಸಿದ ಅವ್ವ ಕೊಟ್ರಮ್ಮನ ಮೇಲೆ ಈರಣ್ಣನವರಿಗೆ ಅಪಾರವಾದ
ಗೌರವಾಭಿಮಾನ. ಕೊನೆಯವರೆಗೂ ತಾವೇ ಹಾಸಿಗೆ ಹಿಡಿದ ತಾಯಿಯ ಸೇವೆಯನ್ನು ಈರಣ್ಣನವರು ಮಾಡುತ್ತಿದ್ದರು.
87 ವರ್ಷದ ಕೊಟ್ರಮ್ಮನವರು ಮಾರ್ಚ 8 ರಂದು ವಯೋಸಹಜ ಅನಾರೋಗ್ಯದಿಂದ ತೀರಿಕೊಂಡರು. ಇದರಿಂದ ತೀವ್ರ
ತಳಮಳಗೊಂಡ ಈರಣ್ಣನವರನ್ನು ತಾಯಿಯ ಅಗಲಿಕೆ ಕಂಗೆಡಿಸಿತು. ಉಕ್ಕಿ ಬರುತ್ತಿದ್ದ ದುಃSವನ್ನು ಹತ್ತಿಕ್ಕಿಕೊಂಡು
ಅವ್ವನ ಅಂತ್ಯಕ್ರಿಯೆ ಮುಗಿಸಿದ ನಂತರ 5ನೇ ದಿನ ಶಿವಗಣಾರಾಧನೆ ಮುಗಿಸಿ ತಮ್ಮ ಕರ್ತವ್ಯವನ್ನು ಮಾಡಿದ
ಕೂಡಲೇ ಎದೆ ಹಿಡಿದುಕೊಂಡು ಕುಸಿದು ಕುಳಿತ ಈರಣ್ಣ ಮತ್ತೆ ಮೇಲಕ್ಕೇಳಲೇ ಇಲ್ಲಾ. ಹೃದಯವಂತನ ಹೃದಯ ಸ್ಥಬ್ದವಾಗಿತ್ತು.
ಅವ್ವನ ಜಾಡನ್ನು ಹಿಡಿದು ಮಗ ಮರಳಿ ಬಾರದ ಊರಿಗೆ ಪಯಣಿಸಿದ್ದರು. “ಉಸಿರು ಉಸಿರಿಗೊಮ್ಮೆ ನಿನ್ನ
ಹೆಸರು ತಗೋತೇನಿ. ಉಸಿರು ಉಸಿರಿಗೊಮ್ಮೆ ನಿನ್ನ ಹೆಸರು ಬಿಡತೇನಿ. ಈ ಉಸಿರಿರೋ ತನಕ ಅದರಾಗ ನಿನ್ನ
ಹೆಸರಿರಲಿ. ನಿನ್ನ ಹೆಸರಿನ್ಯಾಗ ಒಂದಿನಾ ನನ್ನೀ ಉಸರು ಹೋಗಲಿ..” ಎಂದು ಶಾಯರಿ ಬರೆದ ಈರಣ್ಣನವರ
ಮನದಲ್ಲಿ ತಾಯಿಯ ಹೆಸರೇ ಇತ್ತಾ? ಉಸಿರು ಕೊಟ್ಟ ಅವ್ವ ಕೊನೆಯುಸಿರೆಳೆದಾಗ ಮಗನ ಉಸಿರೂ ಎದುಸಿರು ಬಿಡುತ್ತಾ
ಉಸಿರು ನಿಂತೇ ಹೋಯಿತಾ...?
ಇಟಗಿ ಈರಣ್ಣನವರು ಹುಟ್ಟಿಬೆಳೆದಿದ್ದು
ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿಯಲ್ಲಿ. ಬಿಸಿಲೂರಿನಲ್ಲೂ ತಂಗಾಳಿಯಂತಹ ಶಾಯರಿಗಳನ್ನು
ಬರೆದ ಈರಣ್ಣನವರು ಹರಪನಹಳ್ಳಿ, ಕೊಟ್ಟೂರುಗಳಲ್ಲಿ ವಿದ್ಯಾಬ್ಯಾಸ ಮುಗಿಸಿದ ನಂತರ ಬಳ್ಳಾರಿಯ ವೀರಶ್ಯವ
ವಿದ್ಯಾವರ್ಧಕ ಕಾಲೇಜಿನಲ್ಲಿ ಮೇಷ್ಟ್ರಗಿರಿ ಆರಂಭಿಸಿದ್ದರು. ತದನಂತರವೂ ಸಹ ಹೂವಿನಹಡಗಲಿಯ ಜಿಬಿಆರ್
ಕಾಲೇಜ್ ಮತ್ತು ವಿಜಯನಗರ ಕಾಲೇಜುಗಳಲ್ಲಿ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿದರು. ಏಳು ವರ್ಷಗಳ ಹಿಂದೆ
ನಿವೃತ್ತರಾದ ನಂತರ ಶಿವಮೊಗ್ಗಕ್ಕೆ ಬಂದು ತಾಯಿ, ಹೆಂಡತಿ ಹಾಗೂ ಮಕ್ಕಳ ಜೊತೆಗೆ ನೆಮ್ಮದಿಯ ವಿಶ್ರಾಂತ
ಜೀವನ ನಡೆಸುತ್ತಿದ್ದರು. ಕೊನೆಗೂ ಬಯಲುನಾಡು ಬಳ್ಳಾರಿಯ ಈ ಪ್ರತಿಭೆ ಮಲೆನಾಡು ಶಿವಮೊಗ್ಗದ ಪಂಚಭೂತಗಳಲ್ಲಿ
ಐಕ್ಯವಾಯಿತು.
ಪ್ರೊ.ಇಟಗಿ ಈರಣ್ಣನವರು ರಂಗಭೂಮಿಗೆ
ಕೊಟ್ಟ ಕೊಡುಗೆಗಳನ್ನು ಮರೆಯುವಂತಿಲ್ಲ. ನಾನು ನೀನು ರಾಜಿ ಏನ್ ಮಾಡ್ತಾನ್ ಖಾಜಿ, ರಾವಿ ನದಿಯ ದಂಡೆ,
ತಾಜ್ ಮಹಲ್ ಟೆಂಡರ್, ಯಹೂದಿ ಹುಡುಗಿ.. ಹೀಗೆ ಬೇರೆ ಭಾಷೆಯ ಕೆಲವು ಪ್ರಸಿದ್ದ ನಾಟಕಗಳನ್ನು ಕನ್ನಡಕ್ಕೆ
ಅನುವಾದ ಮಾಡಿ ನಾಟಕಗಳ ಕೊರತೆಯನ್ನು ಅನುಭವಿಸುತ್ತಿದ್ದ ಕನ್ನಡ ರಂಗಭೂಮಿಗೆ ಅಗತ್ಯ ಕೊಡುಗೆ ನೀಡಿದ್ದರು.
ಇಡೀ ಆಳುವ ವ್ಯವಸ್ಥೆಯನ್ನು ಅಣಕಿಸುವಂತಹ ‘ತಾಜ್ಮಹಲ್ ಟೆಂಡರ್’ ನಾಟಕವಂತೂ ಮರೆಯಲು ಸಾಧ್ಯವಿಲ್ಲ.
ಕೋಮು ಸಾಮರಸ್ಯವನ್ನು ಸಾರುವ “ಯಹೂದಿ ಹುಡುಗಿ..” ಎನ್ನುವ ಅಪರೂಪದ ನಾಟಕವನ್ನು
ರೂಪಾಂತರ ರಂಗತಂಡಕ್ಕೆ ವಿಶೇಷ ಆಸಕ್ತಿಯಿಂದಾ ಅನುವಾದಿಸಿಕೊಟ್ಟಿದ್ದರು ಹಾಗೂ ಕೆಎಸ್ಡಿಎಲ್ ಚಂದ್ರುರವರ
ನಿರ್ದೇಶನದಲ್ಲಿ ಈ ನಾಟಕ ಯಶಸ್ವಿಯಾಗಿ ಹಲವಾರು ಪ್ರದರ್ಶನಗಳನ್ನು ಕಂಡಿತ್ತು. ಈರಣ್ಣನವರು ಶಾಯರಿಗಳ
ಸಂಕಲನವನ್ನು ರೂಪಾಂತರ ತಂಡವೇ ಪ್ರಕಟಿಸಿತ್ತು. ಈರಣ್ಣನವರು
ಕಬೀರ್ದಾಸರ ದೋಹೆಗಳು ಹಾಗೂ ಹರಿವಂಶರಾಯ್ ಬಚ್ಚನ್ ರವರ ಮಧುಶಾಲಾ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ
ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಜೊತೆಗೆ ಈಶನ ವಚನಗಳು ಹಾಗೂ ಬಸವಣ್ಣನವರ ವಚನಗಳ ಸಂಗ್ರಹ
ಕೃತಿಗಳೂ ಮಹತ್ತರವಾದದ್ದು. ಇವರ ನಾಟಕಗಳು ಹಾಗೂ ಕವಿತೆಗಳು ಕೆಲವು ವಿಶ್ವವಿದ್ಯಾಲಯಗಳಿಗೆ ಪಠ್ಯವಾಗಿ
ಬೋಧನೆಗೊಳ್ಳುತ್ತಿವೆ. 2010ರಲ್ಲಿ ನಡೆದ 14ನೇ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ
ಪ್ರೊ.ಈರಣ್ಣನವರು ಗೌರವಿಸಲ್ಪಟ್ಟಿದ್ದರು.
“ಉಸಿರು ನಿಲ್ಲುವ ಮುನ್ನ ಹೆಸರು
ನಿಲ್ಲುವ ಕೆಲಸ ಮಾಡಬೇಕು..” ಎಂದು ಶಾಯರಿ ಬರೆದ ಈ ಶಾಯರಿ ಕವಿ ನಿಜಕ್ಕೂ ಹೆಸರು ನಿಲ್ಲುವಂತಹ
ಕೊಡುಗೆಗಳನ್ನು ತಮ್ಮ ಗಜ್ಹಲ್ಗಳ ಮೂಲಕ ಹಾಗೂ ನಾಟಕಗಳ ಮೂಲಕ ಕೊಟ್ಟಿದ್ದು ಕನ್ನಡ ಸಾಹಿತ್ಯಕ ಹಾಗೂ
ಸಾಂಸ್ಕೃತಿಕ ಲೋಕ ಬಹುಕಾಲ ನೆನಪಿಸಿಕೊಳ್ಳದೇ ಇರದು. ಪ್ರೊ.ಇಟಗಿ ಈರಣ್ಣ ತಮ್ಮ ಕವಿತೆಗಳು, ಶಾಯರಿಗಳು
ಹಾಗೂ ನಾಟಕಗಳ ಮೂಲಕ ಸದಾಕಾಲ ನಮ್ಮೊಂದಿಗೆ ಜೀವಂತವಾಗಿಯೇ
ಇರುತ್ತಾರೆನ್ನುವ ಸಂಗತಿಯೇ ಅವರ ಅಗಲಿಕೆಯ ನೋವನ್ನು ಮರೆಸುವಂತಹುದು. ಸಾರ್ಥಕ ಬದುಕನ್ನು ಬದುಕಿದ
ಈರಣ್ಣನವರಿಗೆ ರಂಗನಮನಗಳು.
“ಕನ್ನಡದೊಳಗ ಶಾಯಿರಿ’ನಂತೂ ಯಾರೂ ಬರೆದಿಲ್ಲ ಇವತ್ತಿನ
ತನಕ
ನನಗಂತೂ ಬರೀಬೇಕನಸತೈತಿ ಸಾಯೋತನಕ..”
ಎಂದು ಶಾಯರಿ ಬಗ್ಗೆಯೇ ಈರಣ್ಣನವರು
ಕನ್ನಡದಲ್ಲಿ ಶಾಯರಿ ಬರೆದಿದ್ದರು. ಹಾಗೂ ತಾವು ಬರೆದುಕೊಂಡಂತೆಯೇ ಕೊನೆವರೆಗೂ ಶಾಯರಿಗಳನ್ನು ಬರೆಯುತ್ತಲೇ
ಬದುಕಿದ್ದರು. ಈರಣ್ಣನವರು ಕೊನೆಯಾಸೆ ಎನ್ನುವ ಶಾಯರಿಯಲ್ಲಿ
“ಸುಡುಗಾಡ
ತನಕ ಬಂದು ಕಳಿಸಿ ಬಿಡು ನೀ ನನ್ನ. ಅತ್ತಾಗಿಂದ ನಾ ಒಬ್ನ ಹೊಕ್ಕೇನಿ. ಮಣ್ಣಾಗ ಮುಚ್ಚಿ ನನ್ನ ಮಣ್ಣು
ಮಾಡಿ ಹೋಗು ನೀನು. ನಿನ್ನ ನೆನಪು ನನ್ನ ಎದಿಯಾಗಿಟಗೊಂಡು ನಾ ಸುಮ್ಮ ಹೊಕ್ಕೇನಿ...” ಎಂದು ಬರೆದಿದ್ದಾರೆ. ಈಗ
ಅವರು ಮಣ್ಣಲ್ಲಿ ಮಣ್ಣಾಗಿದ್ದಾರೆ. ಅದೆಷ್ಟು ಜನ ಸುಡುಗಾಡ ತನಕ ಬಂದು ಕಳಿಸಿ ಹೋದರು.. ಆದರೆ.. ಈರಣ್ಣನವರು
ಎಲ್ಲರ ನೆನಪು ಎದೆಯಾಗಿಟಗೊಂಡು ಹೋದರೋ ಇಲ್ಲವೋ ಗೊತ್ತಿಲ್ಲಾ.. ಆದರೆ ಈರಣ್ಣನವರ ನೆನಪನ್ನು ಮಾತ್ರ
ಕಳಿಸಲು ಹೋದವರು ತಮ್ಮ ಎದಿಯಾಗಿಟಗೊಂಡು ಮರಳಿ ಬಂದ್ರು. ಇನ್ನೂ ಸಾಧ್ಯ ಇದ್ರ ಕೊನೆಗಳಿಗೆಯಲ್ಲಿ ಒಂದು
ಶಾಯರಿ ಮೂಲಕ ಹೇಳಿ ಬಿಡ್ತಿದ್ದರೋ ಏನೋ.. ಆದರೆ ಸತ್ತ ನಂತರ ಹೇಳಲಾಗದ ಅನಿವಾರ್ಯತೆಯನ್ನು ಮೊದಲೇ ಊಹಿಸಿ
ಬರೆದ ಶಾಯರಿ ಹೀಗಿದೆ..” ಸಾಯೋತನಕ ಜೀವನಾಂದ್ರ ಏನು ಅಂತ ಯಾರಿಗೂ ಹೇಳಾಕ ಬರಾಂಗಿಲ್ಲಾ...!
ಸತ್ತ ಮ್ಯಾಲೆ ಹೇಳಬೇಕಂದ್ರ ಹೇಳಾಕ ಬಾಯಿ ಇರಾಂಗಿಲ್ಲಾ..!!”. ಸಾವು ಹಾಗೂ ಬದುಕಿನ ಬಗ್ಗೆ ಅವರು ಬರೆದ ಶಾಯರಿ ತುಂಬಾನೇ
ಸೊಗಸಾಗಿದೆ..”ಸಾವನ್ನೂದು ನಮಗ ಗೊತ್ತಿದ್ದೂ ಬೀಳೋ ಏಟು.. ನಾ ಅದ್ಕ ಅಷ್ಟು
ಹೆದರಾಂಗಿಲ್ಲಾ! ಜೀವನ ಅನ್ನೋದು ನಮಗ ಗೊತ್ತಿಲ್ದ
ಬಿದ್ದ ಏಟು ನಾ ಇದ್ಕ ಬಾಳಾ ಹೆದರತೇನಿ...” ಹೀಗೆ ಸಾವಿಗೂ ಹೆದರದ ಈರಣ್ಣ
ಬದುಕಿನಲ್ಲಿ ಹೆದರುತ್ತಾ ನೊಂದು ಬೆಂದು ಅನುಭವಗಳಿಂದಾ ಗಟ್ಟಿಗೊಳ್ಳುತ್ತಾ ಬೆಳೆದಿದ್ದು ಸೋಜಿಗದ ಸಂಗತಿ.
ಸಾವಿನ ಬಗ್ಗೆ ಈರಣ್ಣ ಬೇಕಾದಷ್ಟು ಶಾಯರಿಗಳನ್ನು ಬರೆದಿದ್ದಾರೆ. ಅದರಲ್ಲಿ ಒಂದು ಹೀಗಿದೆ..” ತಮ್ಮಾ ನಿನ್ನ ಜೀವನಾ ಅನ್ನೋದು
ನಿನ್ನ ಸಾವಿನ ಆಸ್ತಿ ಐತಿ. ತನ್ನ ಆಸ್ತೀನ ಅದು ತಾನು ಯಾವಾಗ ಬೇಕಾದರೂ ತಗೊಂತೈತಿ..!!. ಈರಣ್ಣ ಸಾವಿಗಿಂತಲೂ
ಜೀವನಕ್ಕೆ ಹೆಚ್ಚು ದಿಗಿಲುಗೊಂಡಿದ್ದು ಅವರ ಶಾಯರಿಗಳಲ್ಲಿ ಗೊತ್ತಾಗುತ್ತದೆ. ಅದು ಹೇಗೆಂದರೆ.. “ ಸಾವನ್ನೋದು ವೈರಿಯಲ್ಲಾ ನನಗ
ಅದು ಎದುರಿಗೆ ಬಂದು ಗುಂಡು ಹೊಡೀತೈತಿ..! ಜೀವನ ಅನ್ನೋದು ಗೆಳೆಯಾ ಅಲ್ಲ ನನಗ ಅದು ಹಿಂದಿನಿಂದ ಬಂದು
ಚೂರಿ ಹಾಕತೈತಿ..”.
ಬದುಕು ಸಾವು ಪ್ರೀತಿ ವಿರಹ
ಹೀಗೆ ಹಲವಾರು ವಿಷಯಗಳ ಬಗ್ಗೆ ಈರಣ್ಣ ಶಾಯರಿ ಬರೆದಿದ್ದಾರೆ. ಪ್ರೊ. ಇಟಗಿ ಈರಣ್ಣನವರ ಕೆಲವು ಕನ್ನಡ ಶಾಯರಿಗಳು ಹೀಗಿವೆ..
ಈ ಕತ್ತಲ ರಾತ್ರಿ
ನಿನ್ನ ದಾರಿ ಕಾದೂ ಕಾದೂ
ನನ್ನೆದಿ ಒಂದ ಅಳತಿ
ಸುಡಾಕ್ ಹತ್ತೇತಿ !!
ಕತ್ತಲಾಗೇತಂದ
ಹೆದರಿ ಕುಂದರಬ್ಯಾಡ
ನನ್ನ ಸುಡೂ ಎದಿ
ನಿನ್ನ ದರ್ಯಾಗ ಬೆಳಕು ಚೆಲ್ಲೇತಿ.
.!
* * * * *
ನನಗನಸತೈತಿ
ಈ ಹರಿಯೂ ಬೆಳದಿಂಗಳಾ
ಹೆಪ್ಪಾಗಿ ನಿನ್ ಮೈ ಆಗಿರಬೇಕು
ಇಲ್ಲಾಂದ್ರ ನನ್ನ ಬಿಸಿ
ನಿನ್ನ ಮೈಗೆ ತಾಗಿ
ಅದು ಕರಗಿ ಈ
ಬೆಳದಿಂಗಳಾಗಿ ಹರಡಿರಬೇಕು..
* * * * *
ಕಡಿಮಿ ಸಾಮಾನಿದ್ರ ರೇಲ್ವೇ
ಪ್ರಯಾಣಾ
ಭಾಳ ಚೆಂದ ಇರತೈತಿ..!
ಕಡಿಮೆ ಆಸೆ ಇದ್ರ ಬಾಳ ಪ್ರಯಾಣಾನೂ
ಭಾಳ ಚೆಂದ ಇರತೈತಿ..!!
* * * * *
ಹೊಳಿ ದಾಟಿ ಹೋಗಬೇಕನ್ನಂಗಿದ್ರ
ಡೋಣೀ ಒಳಗ ತೂತು ಇರಬಾರದು..!
ಜೀವನಾನೂ ಜಯಿಸಬೇಕನ್ನಂಗಿದ್ರ
ಸಂಸಾರದಾಗ ಸಂಶೆ ಇರಬಾರದು..!!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ