ಬುಧವಾರ, ಮಾರ್ಚ್ 22, 2017

ತಹ ತಹ... 78 ವಿದ್ಯುನ್ಮಾನ ಮತಯಂತ್ರಗಳ ಸುತ್ತ ಸಂದೇಹದ ಹುತ್ತ:





ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ನಿಂತಿರುವುದೇ ಪ್ರಜೆಗಳ ಮತಮೌಲ್ಯದ ಮೇಲೆ. ತಮ್ಮ ಪ್ರತಿನಿಧಿಗಳು ಯಾರಿರಬೇಕು?, ಯಾವ ಪಕ್ಷ ಅಧಿಕಾರಕ್ಕೆ ಬರಬೇಕು? ಎನ್ನುವುದನ್ನೆಲ್ಲಾ ನಿರ್ದರಿಸುವವರು ಈ ದೇಶದ ಮತದಾರರು ಎನ್ನುವುದೆಲ್ಲಾ ಸಂವಿಧಾನದ ಸದಾಶಯ. ಆದರೆ.. ಭಾರತದಂತಹ ಬಂಡವಾಳಶಾಹಿ ಪ್ರಜಾಪ್ರಭುತ್ವದ ಚುನಾವಣಾ ರಾಜಕೀಯದಲ್ಲಿ ಅಸಲಿಗೆ ನಡೆಯುತ್ತಿರುವುದೇ ಬೇರೆ. ರಾಜ್ಯಾಧಿಕಾರ ಹಿಡಿಯುವುದೇ ಪರಮ ಗುರಿಯೆಂದು ತಿಳಿದು ತಂತ್ರ ಕುತಂತ್ರಗಳಲ್ಲಿ ನಿರತವಾಗಿರುವ ಎಲ್ಲಾ ನಮೂನಿಯ ರಾಜಕೀಯ ಪಕ್ಷಗಳು ಹಾಗೂ ಅವುಗಳ ರೂವಾರಿಗಳ ಏಕೈಕ ಮಂತ್ರವೇನೆಂದರೆ ಹೇಗಾದರೂ ಮಾಡು, ಏನಾದರೂ ಮಾಡು ಓಟುಗಳನ್ನು ಪಡೆದು ಅಧಿಕಾರ ಹಿಡಿ ಎನ್ನುವುದಾಗಿದೆ. ಜನಪರ ಕಾಳಜಿ ಇರುವ ವ್ಯಕ್ತಿಗಿಂತಲೂ ಜನರ ಮತಗಳನ್ನು ಹಣಬಲ ತೋಳ್ಬಲಗಳಿಂದ ಹೇಗಾದರೂ ಮಾಡಿ ಪಡೆಯಬಹುದಾದ ತಾಕತ್ತಿರುವವನಿಗೆ ಮಾತ್ರ ಇಲ್ಲಿ ಪ್ರಮುಖ ಪಕ್ಷದ ಅಭ್ಯರ್ಥಿಯಾಗಲು ಸಾಧ್ಯವಾಗುತ್ತದೆ.

ಮತದಾರರಿಗೆ ಇಲ್ಲಸಲ್ಲದ ಪೊಳ್ಳು ಭರವಸೆಗಳನ್ನು ಕೊಡುವ ಮೂಲಕ ಆಸೆ ಆಮಿಷಗಳನ್ನೊಡ್ಡಿ ಮತ ಪಡೆಯುವ ತಂತ್ರಗಾರಿಕೆ ಹಳೆಯದಾಗಿದೆ. ಬರುಬರುತ್ತಾ ಈ ಓಟಿನ ಹಪಾಹಪಿ ಅದೆಷ್ಟಾಗಿದೆ ಎಂದರೆ ಮತದಾರರನ್ನು ಜಾತಿ ಧರ್ಮದ ಹೆಸರಲ್ಲಿ ಒಡೆದು ಮತಗಳನ್ನು ದೃವೀಕರಣ ಮಾಡುವ ಸಂವಿಧಾನ ವಿರೋಧಿ ಕೃತ್ಯ ಅವ್ಯಾಹತವಾಗಿ ದೇಶಾದ್ಯಂತ ನಡೆಯುತ್ತಿದೆ. ಇದಕ್ಕೆ ಯಾವುದೇ ಪ್ರಮುಖ ಪಕ್ಷಗಳೂ ಹೊರತಲ್ಲಾ. ಉತ್ತಮ ಜನಪರ ಕೆಲಸಗಳಿಂದ ಜನರನ್ನು ಒಲಿಸಿಕೊಳ್ಳುವ, ಜನರ ಪ್ರೀತಿ ವಿಶ್ವಾಸವನ್ನು ಗಳಿಸಿಕೊಳ್ಳುವ ಜನಪ್ರತಿನಿಧಿಗಳು ಈಗ ಬೆರಳೆಣಿಕೆಗೂ ದಕ್ಕದಾಗಿದ್ದಾರೆ. ಈಗೇನಿದ್ದರೂ ಚುನಾವಣೆಯಲ್ಲಿ ಹಣ, ಹೆಂಡ, ಹುಸಿ ಆಶ್ವಾಸನೆ ಹಾಗೂ ಜಾತಿಗಳೇ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು ಸಂವಿಧಾನದ ಆಶಯವೇ ನೇಪತ್ಯಕ್ಕೆ ಸೇರಿಹೋಗಿದೆ. ಇತ್ತೀಚೆಗಂತೂ ಮತದಾರರ ಮೇಲೆಯೇ ವಿಶ್ವಾಸ ಕಳೆದುಕೊಂಡ ರಾಜಕೀಯ ಪಕ್ಷಗಳು ಮತಯಂತ್ರವನ್ನೇ ತಮ್ಮಿಚ್ಚೆಯಂತೆ ತಿರುಚಿ ತಮಗೆ ಬೇಕಾದಂತೆ ಮತಗಳನ್ನು ಹಾಕಿಸಿಕೊಳ್ಳುವ ತಂತ್ರಗಾರಿಕೆಯನ್ನು ರೂಢಿಸಿಕೊಂಡಿವೆ.

2017 ಫೆಬ್ರವರಿ ಹಾಗೂ ಮಾರ್ಚ ತಿಂಗಳಲ್ಲಿ ನಡೆದ ಉತ್ತರ ಪ್ರದೇಶದ ಚುನಾವಣೆಯಲ್ಲಿ ಮತಯಂತ್ರ ದುರುಪಯೋಗದ ಆರೋಪ ಹಿಂದೆಂದಿಗಿಂತಲೂ ಹೆಚ್ಚಾಗಿ ಕೇಳಿಬಂದಿದೆ. ಯುಪಿ ಎಲೆಕ್ಷನ್ನಿನಲ್ಲಿ ನಿಜಕ್ಕೂ ಇಂತಹುದೊಂದು ದುಷ್ಕೃತ್ಯ ವ್ಯಾಪಕವಾಗಿ ನಡೆದಿದೆಯಾ? ಅನುಮಾನಗಳಂತೂ ಇದ್ದೇ ಇದೆ. ಆದರ ನಡುವೆಯೇ ಬಿಜೆಪಿ ಈ  ರಾಜ್ಯದಲ್ಲಿ ಜಯಬೇರಿ ಬಾರಿಸಿದೆ. ಕೇಂದ್ರದಲ್ಲಿ ಇದೇ ಪಕ್ಷದ ಆಡಳಿತವಿದೆ. ಸೋತು ಸುಣ್ಣವಾಗಿರುವ ವಿರೋಧ ಪಕ್ಷಗಳು ಅದೆಷ್ಟೇ ಮತಯಂತ್ರದ ದುರುಪಯೋಗದ ಬಗ್ಗೆ ಬಾಯಿ ಬಡಿದುಕೊಂಡರೂ ಅವರ ಪರಿಸ್ಥಿತಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎನ್ನುವಂತಾಗಿದೆ.  ನಿಜಕ್ಕೂ ಮತಯಂತ್ರಗಳನ್ನು ತಿರುಚುವ ಸಾಧ್ಯತೆ ಇದೆಯಾ? ಯಾರು ಯಾರಿಗೇ ಮತ ಹಾಕಿದರೂ ಒಂದು ಪಕ್ಷದ ಅಭ್ಯರ್ಥಿಗೆ ಮತಗಳೆಲ್ಲಾ ಬೀಳುವಂತೆ ಮಾಡಲು ಸಾಧ್ಯವಾ? ಹೌದು ಸಾಧ್ಯ ಅನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆತಂಕಕಾರಿಯಾದ ಸಂಗತಿ.

ಮೊದಲು ಮ್ಯಾನುವಲ್ ಬ್ಯಾಲೆಟ್ ಪೇಪರ್‌ನಲ್ಲಿ ಮತಗಳು ಚಲಾವಣೆಗೊಳಗಾಗುತ್ತಿದ್ದವು. ಆಗ ಶಕ್ತಿ ಇದ್ದವರು ಬೂತ್ ಕ್ಯಾಪ್ಚರ್ ಮಾಡಿಯೋ ಇಲ್ಲವೇ ಚುಣಾವಣಾಧಿಕಾರಿಗಳನ್ನು ಸರಿಪಡಿಸಿಕೊಂಡೋ ಮತಗಳನ್ನು ಬಾಚಿಕೊಳ್ಳುತ್ತಿದ್ದರು. ಹಾಗೂ ಮತಪತ್ರಗಳನ್ನು ಮುದ್ರಿಸುವುದು, ಸಾಗಿಸುವುದು ಚುನಾವಣೆಯ ನಂತರ ಸುರಕ್ಷಿತವಾಗಿ ಕಾಪಾಡುವುದು ಅತಿ ಹೆಚ್ಚು ಖರ್ಚು ಸಮಯ ಹಾಗೂ ಶ್ರಮದ ಕೆಲಸವಾಗಿತ್ತು.   ಇದನ್ನೆಲ್ಲಾ ತಡೆಯಲೆಂದು ಚುನಾವಣಾ ಆಯೋಗವು ವಿದ್ಯುನ್ಮಾನ ಮತಯಂತ್ರಗಳು ಅಂದರೆ ಇವಿಎಂ ಗಳು ಬಳಕೆಗೆ ಬಂದವು. ಚುನಾವಣಾ ಅಕ್ರಮಗಳು ಕಡಿಮೆಯಾಗಿ ನ್ಯಾಯಸಮ್ಮತ ರೀತಿಯಲ್ಲಿ ಚುನಾವಣೆಗಳು ನಡೆಯಲಿ ಎನ್ನುವ ಸದುದ್ದೇಶ ಈ ಹೊಸ ವ್ಯವಸ್ಥೆಯ ಹಿಂದಿತ್ತು. ಆದರೆ.. ಚುನಾವಣಾ ಆಯೋಗ ಚಾಪೆ ಕೆಳಗೆ ತೂರಿದರೆ ರಾಜಕೀಯ ಪಕ್ಷಗಳು ರಂಗೋಲಿ ಕೆಳಗೆ ತೂರಿ ತಮ್ಮ ನೀಚತನದ ಆಟ ಆಡುವುದನ್ನು ಮುಂದುವರೆಸಿದವು. ಬ್ಯಾಲೆಟ್ ಪೇಪರ್ ವ್ಯವಸ್ಥೆಯಲ್ಲಿ ಬೂತ್ ಕ್ಯಾಪ್ಚರ್ ಮಾಡಲಿಕ್ಕೆ ಗೂಂಡಾ ಶಕ್ತಿ ಬೇಕಾಗಿತ್ತು. ಅದರೆ.. ಈ ಇವಿಎಂ ವ್ಯವಸ್ಥೆಯಲ್ಲಿ ಯುಕ್ತಿ ಇದ್ದರೆ ಸಾಕು ಮತಗಳನ್ನು ಬೇಕಾದವರ ಖಾತೆಗೆ ಸೇರಿಸಲು.

ಈ ವಿದ್ಯುನ್ಮಾನ ಮತಯಂತ್ರಗಳ ಬಳಕೆ ಮೊಟ್ಟ ಮೊದಲು ಆರಂಭವಾಗಿದ್ದು 1982ರ ಕೇರಳ ರಾಜ್ಯದ ಚುನಾವಣೆಯಲ್ಲಿ. ಆಗಲೇ ಇದರ ದುರುಪಯೋಗದ ಕುರಿತು ಎಚ್ಚೆತ್ತ ಸಿಪಿಎಂ ಪಕ್ಷವು ಹೈಕೋರ್ಟಿನಲ್ಲಿ ಪ್ರಶ್ನಿಸಿತ್ತು. ಆದರೆ ಚುನಾವಣೆ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಲಾಗದೆಂದು ಹೈಕೋರ್ಟ ತನ್ನ ಜವಾಬ್ದಾರಿಯಿಂದಾ ಹಿಂದೆ ಸರಿಯಿತು. ವಿಪರ್ಯಾಸವೆಂದರೆ ಆ ಚುನಾವಣೆಯಲ್ಲಿ ಕಮ್ಯೂನಿಸ್ಟ್ ಪಕ್ಷ ಗೆದ್ದಾಗ ಕಾಂಗ್ರೆಸ್ ಮತಯಂತ್ರಗಳ ದುರುಪಯೋಗವಾಗಿದೆ ಎಂದು ಹೈಕೋರ್ಟಿಗೆ ಮೊರೆಯನ್ನಿಟ್ಟಿತು. ಅಂದಿನಿಂದಾ ಇಂದಿನವರೆಗೂ ಈ ಇವಿಎಂ ಗಳ ಬಗ್ಗೆ ಎಲ್ಲಾ ಪಕ್ಷಗಳಲ್ಲೂ ಒಂದು ರೀತಿ ಗುಮಾನಿ ಇದ್ದೇ ಇದೆ. ಗೆದ್ದಾಗ ಸುಮ್ಮನಿರುವುದು ಸೋತಾಗ ಮತಯಂತ್ರಗಳ ದುರುಪಯೋಗದ ಬಗ್ಗೆ ಗುಲ್ಲೆಬ್ಬಿಸುವುದು ನಡೆದೇ ಇದೆ. ಆದರೆ ಚುನಾವಣಾ ಆಯೋಗ ಮಾತ್ರ ಈ ಇವಿಎಂ ವ್ಯವಸ್ಥೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಲೇ ಬಂದಿದೆ.

ಜಗತ್ತಿನ ಯಾವ ದೇಶಗಳೂ ಭಾರತದಷ್ಟು ವ್ಯಾಪಕವಾಗಿ ಇವಿಎಂ ಗಳನ್ನು ಬಳಸುತ್ತಿಲ್ಲಾ. ಎಂತೆಂತಹ ಸುರಕ್ಷಿತ ವಿದ್ಯುನ್ಮಾನ ವಲಯಗಳನ್ನೇ ಹ್ಯಾಕ್ ಮಾಡುವ ಪ್ರಚಂಡರು ಇರುವಾಗ ಇನ್ನು ಈ ಇವಿಎಂಗಳು ಯಾವ ಲೆಕ್ಕ ಎನ್ನುವ ಗುಮಾನಿ ಎಲ್ಲಾ ದೇಶಗಳಲ್ಲೂ ಇದ್ದೇ ಇದೆ. ಇತ್ತೀಚೆಗೆ ಟ್ರಂಪ್ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆ ಮೀರಿ ಜಯಗಳಿಸಿದಾಗ ರಷ್ಯಾದ ಹ್ಯಾಕರಗಳು ಮತಯಂತ್ರಗಳನ್ನು ಟ್ರಂಪ್ ಪರವಾಗಿ ತಿರುಚಿದ್ದಾರೆಂಬ ಆರೋಪವೂ ಕೇಳಿಬಂದಿತ್ತು.. ಆದರೆ ಅಮೇರಿಕದಲ್ಲಿರುವ 50 ರಾಜ್ಯಗಳಲ್ಲಿ ಕೇವಲ 5 ರಾಜ್ಯಗಳಲ್ಲಿ ಮಾತ್ರ ಈ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸುತ್ತಿದ್ದುದರಿಂದ ಈ ಆರೋಪಕ್ಕೆ ಹೆಚ್ಚು ಮಹತ್ವ ಸಿಗಲಿಲ್ಲ. 2002ರಲ್ಲಿ ಅಮೇರಿಕದಲ್ಲಿ ಇವಿಎಂಗಳ ಬಳಕೆ ಆರಂಭವಾಯಿತು. ಆದರೆ ಈ ಮತಯಂತ್ರಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದೆಂದು ಕಂಪ್ಯೂಟರ್ ಪರಿಣಿತರು ಸಾಬೀತುಗೊಳಿಸಿದರು. ನೆದರ್‌ಲ್ಯಾಂಡ್ ಜರ್ಮಿನಿಗಳಲ್ಲಿ ಸಹ ಒಂದೆರಡು ಚುನಾವಣೆಗಳಲ್ಲಿ ಈ ಮತಯಂತ್ರಗಳನ್ನು ಬಳಸಿದರಾದರೂ ಗೋಲ್ಮಾಲ್ ಸಾಧ್ಯತೆಗಳನ್ನು ಮನಗಂಡು ಮತ್ತೆ ಬ್ಯಾಲೆಟ್ ವ್ಯವಸ್ಥೆಗೆ ಮರಳಿದರು. ಈಗಲೂ ಯುರೋಪಿನ ಎರಡು ಮೂರು ದೇಶಗಳನ್ನು ಹೊರತು ಪಡಿಸಿ ಎಲ್ಲಿಯೂ ವ್ಯಾಪಕವಾಗಿ ಮತಯಂತ್ರಗಳನ್ನು ಬಳಸುತ್ತಿಲ್ಲಾ. ಹಲವಾರು ದೇಶಗಳು ಇವಿಎಂ ಮತಯಂತ್ರಗಳನ್ನು ಬಳಸಿ ನಿಷೇಧಿಸಿವೆ. ಆದರೆ ಭ್ರಷ್ಟಾಚಾರದಲ್ಲಿ ಯಾವಾಗಲೂ ಮುಂದಾಳತ್ವವನ್ನು ಕಾಯ್ದುಕೊಂಡು ಬಂದ ಭಾರತದಂತಹ ದೇಶ ಮಾತ್ರ ಈ ಮತಯಂತ್ರಗಳ ಮೋಹಕ್ಕೊಳಗಾಗಿದೆ. 2009ರ ರಾಜ್ಯಸಭೆ ಚುನಾವಣಾ ಸಂದರ್ಭದಲ್ಲಿ ಬಿಜೆಪಿಯ ನಾಯಕ ಎಲ್.ಕೆ.ಅಡ್ವಾನಿಯವರೇ ಮತಯಂತ್ರಗಳಿಗಿಂತಾ ಬ್ಯಾಲೆಟ್ ಪೇಪರ್ ಬಳಸುವುದುತ್ತಮ ಎಂದು ಹೇಳಿದ್ದರು. ಯಾಕೆಂದರೆ ಮತಯಂತ್ರಗಳ ಅಕ್ರಮಗಳ ಮೂಲಕ ಇಡೀ ಚುನಾವಣಾ ಫಲಿತಾಂಶವನ್ನೇ ಬದಲಾಯಿಸಬಹುದಾದ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲಾ.

ಈಗ ಉತ್ತರ ಪ್ರದೇಶದ ಚುನಾವಣೆಯಲ್ಲಿ ಎಲ್ಲಾ ಸಮೀಕ್ಷೆಗಳ ನಿರೀಕ್ಷೆಯನ್ನು ಮೀರಿ ಬಿಜೆಪಿ ದಿಗ್ವಿಜಯ ಸಾಧಿಸಿದೆ. ಮತಯಂತ್ರಗಳ ದುರುಪಯೋಗವಾಗಿದೆ ಎಂದು ಮಾಯಾವತಿಯವರು ಈ ಬಾರಿ ಮೊದಲು ದ್ವನಿಯೆತ್ತಿದರು. ಶೇ.5 ರಷ್ಟೂ ಮತಗಳನ್ನು ಪಡೆಯದ ಮಯಾವತಿಯವರಿಗೆ ಮತಯಂತ್ರಗಳ ಮೇಲೆ ಸಂದೇಹ ಬಂದಿದ್ದರಲ್ಲಿ ತಪ್ಪೇನಿಲ್ಲಾ. ಕೇಂದ್ರ ಸರಕಾರ ತನ್ನ ಅಧಿಕಾರ ದುರುಪಯೋಗ ಮಾಡಿ ಚುನಾವಣಾ ಅಧಿಕಾರಿಗಳನ್ನೇ ಬುಕ್ ಮಾಡಿಕೊಂಡು ಮತಯಂತ್ರಗಳ ತಿರುಚಿ, ಬೇರೆಪಕ್ಷಗಳ ಅಭ್ಯರ್ಥಿಗಳಿಗೆ ಚಲಾವಣೆಯಾದ ಮತಗಳನ್ನು ಬಿಜೆಪಿ ಅಭ್ಯರ್ಥಿಗಳಿಗೆ ಬರುವಂತೆ ಮಾಡಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸತೊಡಗಿದವು. ಯುಪಿಯಲ್ಲಿ ಮತಯಂತ್ರ ದುರುಪಯೋಗಗೊಂಡು ಬಿಜೆಪಿ ಬಂದಿದ್ದರೆ ಪಂಜಾಬಿನಲ್ಲೂ ಯಾಕೆ ಬಿಜೆಪಿ-ಅಕಾಲಿದಳ ಸೋತುಹೋದವು ಎಂದು ಭಕ್ತರು ಮರುಪ್ರಶ್ನಿಸಿ ಆರೋಪಿಸಿದವರ ಬಾಯಿ ಮುಚ್ಚಲು ಪ್ರಯತ್ನಿಸಿದರು. ಅದರೆ.. ಪಂಜಾಬಿನಲ್ಲಿ  ಆಪ್ ಪಕ್ಷ ಬಹುಮತದಿಂದ ಗೆಲ್ಲುತ್ತದೆ ಎಂದು ಬಿಜೆಪಿ ತಪ್ಪು ಲೆಕ್ಕಾಚಾರ ಮಾಡಿತ್ತು. ಹೀಗಾಗಿ ಆಪ್ ಪಕ್ಷದ ಅಭ್ಯರ್ಥಿಗಳ ಮತಗಳು ಬಿಜೆಪಿ ಕ್ಯಾಂಡಿಡೇಟ್‌ಗೆ ಬೀಳುವಂತೆ ಮಾಡಲಾಗಿತ್ತು. ಆದರೆ.. ಕಾಂಗ್ರೆಸ್ ಪಕ್ಷ ಅಲ್ಲಿ ಲೀಡ್ ಪಡೆಯಿತು. ಹೀಗಾಗಿ ಬಿಜೆಪಿ ಸೋತಿತು ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಆಪ್ ಪಕ್ಷದ ನೇತಾರ ಕೇಜ್ರೀವಾಲ್‌ರವರೂ ಸಹ ಪಂಜಾಬಿನಲ್ಲಿ ಆಪ್‌ನ 20% ರಿಂದ 25% ಮತಗಳು ಬಿಜೆಪಿ-ಅಕಾಲಿದಳಕ್ಕೆ ಹೋಗುವಂತೆ ಯಂತ್ರವನ್ನು ತಿದ್ದಲಾಗಿದೆ ಎಂದು ಆರೋಪಿಸಿದ್ದರು. ಈ ಕುರಿತು ಕೋರ್ಟಿಗೆ ಹೋಗುತ್ತೇನೆ. ಇದು ಪ್ರಜಾಸತ್ತೆಯ ಕೊಲೆ. ಇದನ್ನು ವಿರೋಧಿಸಿ ಪ್ರತಿ ತಿಂಗಳೂ ಒಂದು ದಿನವನ್ನು ಕರಾಳ ದಿನವಾಗಿ ಆಚರಿಸಲಿದ್ದೇನೆ ಎಂದು ಮಾಯಾವತಿ ಗುಡುಗಿದರು.

ಇಂತಹ ಸಂದೇಹಗಳಿಂದಾಗಿ ಪಕ್ಷಾತೀತವಾಗಿ ಕೆಲಸಮಾಡಬೇಕಾದ ಚುನಾವಣಾ ಆಯೋಗದ ಪ್ರಾಮಾಣಿಕತೆಯನ್ನೇ ಪ್ರಶ್ನಿಸಿದಂತಾಯಿತು. ಇಲ್ಲಿವರೆಗೂ ಇವಿಎಂ ವ್ಯವಸ್ಥೆ ಅದೆಷ್ಟೇ ಪಾರದರ್ಶಕವೆಂದು ಆಯೋಗ ಸಮರ್ಥಿಸಿಕೊಳ್ಳುತ್ತಾ ಬಂದರೂ ಅದನ್ನು ಸಂಪೂರ್ಣವಾಗಿ ನಂಬುವುದು ಸಾಧ್ಯವಾಗಿರಲಿಲ್ಲ. ಮತಯಂತ್ರವನ್ನು ಮ್ಯಾನುಪಿಲೇಟ್ ಮಾಡಬಹುದಾದ ಸಾಧ್ಯತೆಗಳ ಬಗ್ಗೆಯೂ ಹಲವಾರು ತಂತ್ರಜ್ಞರು ಬೆಳಕು ಚೆಲ್ಲಿದರು. ಹೀಗಾಗಿ ಇಡೀ ದೇಶವಾಸಿಗಳಲ್ಲಿ ಮತಯಂತ್ರಗಳ ಪ್ರಾಮಾಣಿಕತೆಯ ಬಗ್ಗೆ ಒಂದು ರೀತಿಯ ಗುಮಾನಿ ಉಳಿದುಕೊಂಡಿದೆ. ಚುನಾವಣಾ ಆಯೋಗದ ಆಯುಕ್ತರು ಅದೆಷ್ಟೇ ಸಬೂಬುಗಳನ್ನು ಕೊಟ್ಟರೂ ಸಂಪೂರ್ಣವಾಗಿ ನಂಬುವಂತಿಲ್ಲ. ಯುಪಿ ಎಲೆಕ್ಷನ್ನಿನ ಒಂದು ಕ್ಷೇತ್ರದಲ್ಲಿ ಮತಚಲಾಯಿಸಿದವರಿಗಿಂತಲೂ ಮತಗಳ ಸಂಖ್ಯೆಗಳೇ ಹೆಚ್ಚಿರುವುದು ಮತಯಂತ್ರದ ಮೇಲೆ ಸಂದೇಹವನ್ನು ಹೆಚ್ಚಿಸುವಂತಿದೆ.

ಈ ಎಲ್ಲ ಸಂದೇಹಗಳಿಗೆ ಅಂತ್ಯ ಹಾಡಲು.. ಮತಯಂತ್ರಗಳ ತಿರುಚುವಿಕೆಗೆ ಅಂತ್ಯಹಾಡಲು ದೇಶಾದ್ಯಂತ ಎಲ್ಲಾ ಮತಗಟ್ಟೆಗಳಲ್ಲಿ ವಿವಿಪಿಎಟಿ ವ್ಯವಸ್ಥೆಯಿರುವ ಮತಯಂತ್ರಗಳನ್ನು ಜಾರಿಗೆ ತರಲು ಚುನಾವಣಾ ಆಯೋಗದ ಮಾಜಿ ಆಯುಕ್ತರಾದ ವೈ.ಎಸ್.ಖುರೇಷಿ ಮತ್ತು ಎಚ್.ಎಸ್.ಬ್ರಹ್ಮರವರು ಆಗ್ರಹಿಸಿದ್ದಾರೆ. ವಿವಿಪಿಎಟಿ ಅಂದರೆ ಓಟರ್ ವೆರಿಪೈಡ್ ಆಡಿಟ್ ಟ್ರಯಲ್ ಎಂಬುದು ಇವಿಎಂಗಳ ಸುಧಾರಿತ ಆವೃತ್ತಿಯಾಗಿದ್ದು 2014ರ ಚುನಾವಣೆಯಲ್ಲಿ ಕೆಲವು ಕಡೆ ಪ್ರಯೋಗಿಕವಾಗಿ ಬಳಸಲಾಗಿತ್ತಾದರೂ ವ್ಯಾಪಕವಾಗಿ ಬಳಕೆಯಾಗಲಿಲ್ಲ. ಮತದಾರ ದೃಢೀಕರಣ ಕಾಗದ ಪರಿಶೀಲನಾ ಪ್ರಯೋಗ (ವಿವಿಪಿಎಟಿ) ವೆನ್ನುವ ಈ ಸುಧಾರಿತ ವ್ಯವಸ್ಥೆಯಲ್ಲಿ ಮತದಾರರ ಮತ ಒತ್ತಿದ ತಕ್ಷಣ ಯಂತ್ರದಲ್ಲಿ ಒಂದು ಸಣ್ಣ ಚೀಟಿ ಕಾಣಿಸಿಕೊಂಡು ಮತದಾರ ಯಾರಿಗೆ ಮತ ಹಾಕಿದ್ದಾನೆ ಎನ್ನುವುದನ್ನು ದೃಢೀಕರಿಸುತ್ತದೆ. ಹಾಗೂ ಮತಗಳ ಎಣಿಕೆಯನ್ನು ಮಾಡುವಾಗ ಡಿಜಿಟಲ್ ಓಟುಗಳ ಜೊತೆಗೆ ಈ ಚೀಟಿಗಳ ಸಂಖ್ಯೆಯನೂ ಸಹ ತುಲನೆ ಮಾಡಲಾಗುತ್ತದೆ. ಅಂದರೆ ಎಟಿಎಂಗಳಲ್ಲಿ ಹಣ ಪಡೆದ ನಂತರ ಬರುವ ರಸೀದಿಯನ್ನು ಓದಿ ತುಲನೆ ಮಾಡುವ ಹಾಗೆ.

ಇತ್ತೀಚೆಗೆ ನಡೆದ ಗೋವಾ ವಿಧಾನಸಭೆಯ ಚುನಾವಣೆಯಲ್ಲಿ ಬಿಇಎಲ್ ನಿರ್ಮಾಣದ ಈ ಸುಧಾರಿತ ಯಂತ್ರಗಳನ್ನು ಬಳಸಲಾಗಿದೆ. ಇದರಿಂದಾಗಿಯೇ ಅಲ್ಲಿ ಬಿಜೆಪಿ ಬಹುಮತ ಪಡೆಯಲು ಸಾಧ್ಯವಾಗಿಲ್ಲವೆಂದೂ ಹೇಳಲಾಗುತ್ತದೆ. ಮತಯಂತ್ರದ ವಿಶ್ವಾಸಾರ್ಹತೆಯ ಮೇಲೆ ಪ್ರತಿಪಕ್ಷಗಳು ಹಾಗೂ ಪ್ರಜೆಗಳು ಸಂದೇಹವನ್ನು ವ್ಯಕ್ತಪಡಿಸುತ್ತಿರುವಾಗ ಮತಯಂತ್ರದ ದುರ್ಬಳಕೆಯನ್ನು ತಡೆಗಟ್ಟಲು ಕೂಡಲೇ ಕೇಂದ್ರ ಚುನಾವಣಾ ಆಯೋಗವು ವಿವಿಪಿಎಟಿ ಮತಯಂತ್ರಗಳ ಬಳಕೆಯನ್ನು ವ್ಯಾಪಕವಾಗಿ ಎಲ್ಲಾ ಚುನಾವಣೆಗಳಲ್ಲೂ ಬಳಸುವುದನ್ನು ಖಡ್ಡಾಯವಾಗಿ ಜಾರಿಗೆ ತರಬೇಕಾಗಿದೆ. 2013 ರಲ್ಲಿಯೇ ಈ ವಿವಿಪಿಎಟಿ ವ್ಯವಸ್ಥೆ ಜಾರಿಗೆ ತರಲು ಸುಪ್ರಿಂ ಕೋರ್ಟ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತ್ತು. ಆದರೆ.. ಅದು ಯಾಕೋ ಇಲ್ಲಿವರೆಗೂ ಜಾರಿಯಲ್ಲಿ ಬಂದಿರಲಿಲ್ಲ. ಈಗ ಚುನಾವಣಾ ಆಯೋಗದ ಮೇಲೆಯೇ ಗುರುತರ ಆರೋಪಗಳು ಕೇಳಿ ಬಂದಿದ್ದರಿಂದಾ ಅನಿವಾರ್ಯವಾಗಿ ವಿವಿಪಿಎಟಿ ವ್ಯವಸ್ಥೆ ಜಾರಿಮಾಡಲೇಬೇಕಾದ ಒತ್ತಡ ನಿರ್ಮಾಣವಾಗಿದೆ. ದೇಶದಲ್ಲಿ ಅಗತ್ಯವಿರುವ 16 ಲಕ್ಷ ಹೊಸ ವಿವಿಪಿಎಟಿ ಮತಯಂತ್ರಗಳ ಖರೀದಿಗೆ ಮೂರುಸಾವಿರ ಕೋಟಿ ಹಣವನ್ನು ಖರ್ಚುಮಾಡಬೇಕಾಗುತ್ತದೆ.

ರಾಜಕೀಯ ಭ್ರಷ್ಟಾಚಾರ ಮಿತಿಮೀರಿ ಬೇರುಮಟ್ಟಕ್ಕೆ ಇಳಿದಿರುವ ಇಂದಿನ ಬಂಡವಾಳಶಾಹಿ ಭಾರತದ ವಿಕ್ಷಿಪ್ತ  ಸಂದರ್ಭದಲ್ಲಿ ನ್ಯಾಯಯುತವಾದ ಮತದಾನವೆನ್ನುವುದು ಕನಸಿನ ಮಾತು. ಯಾವುದೇ ಆಧುನಿಕ ಸುಧಾರಿತ ಮತಯಂತ್ರಗಳನ್ನು ತಂದರೂ, ಅದೆಷ್ಟೇ ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ ಪ್ರಾಮಾಣಿಕ ಜನಪರ ಕಾಳಜಿಯುಳ್ಳ ಜನಸೇವಕರು ಈ ಬಂಡವಾಳಶಾಯಿ ವ್ಯವಸ್ಥೆಯಲ್ಲಿ ಹೆಚ್ಚು ಮತ ಪಡೆದು ಪ್ರಜಾಪ್ರತಿನಿಧಿಗಲಾಗುವುದಂತೂ ಸಾಧ್ಯವಿಲ್ಲ. ಅಕಸ್ಮಾತ್ ಆದರೂ ಇಡೀ ವ್ಯವಸ್ಥೆಯ ವಿರುದ್ಧ ಹೋರಾಡುವುದಂತೂ ಅಸಾಧ್ಯದ ಮಾತು. ಎಲ್ಲಿ ಜಾತಿ ಧರ್ಮ ವರ್ಣಗಳ ಆಧಾರದ ಮೇಲೆ ಸಮಾಜವನ್ನು ಒಡೆದು ಮತಗಳನ್ನು ಇಬ್ಬಾಗಿಸಿ ತಂತ್ರ ಕುತಂತ್ರಗಳಿಂದ ಚುನಾವಣೆಯನ್ನು ಗೆಲ್ಲಲಾಗುತ್ತದೆಯೋ ಅಲ್ಲಿ ನಿಜವಾದ ಪ್ರಜಾಪ್ರಭುತ್ವ ಇರಲು ಸಾಧ್ಯವೇ ಇಲ್ಲ. ಎಲ್ಲಿವರೆಗೂ ಹಣಬಲ, ಬಾಹುಬಲ ಹಾಗೂ ಜಾತಿಬಲ ಉಳ್ಳವರು ಚುನಾವಣೆಯಲ್ಲಿ ಅಡ್ಡಹಾದಿಗಳ ಮೂಲಕ ಜಯವನ್ನು ಪಡೆಯುತ್ತಾರೋ ಅಲ್ಲಿವರೆಗೂ ಈ ದೇಶದಲ್ಲಿ ನ್ಯಾಯಸಮ್ಮತ ಚುನಾವಣೆಗಳು ಅಸಾಧ್ಯ. ಎಲ್ಲಾ ಪಕ್ಷಗಳ ಬ್ರಷ್ಟ ರಾಜಕಾರಣಿಗಳು, ಕರಪ್ಟ್ ಅಧಿಕಾರಿಶಾಹಿಗಳು, ಸ್ವಾರ್ಥಿ ಬಂಡವಾಳಗಾರರು ಹಾಗೂ ಲೂಟಿಕೋರ ಕಾರ್ಪೊರೇಟ ಕಂಪನಿಗಳು ಒಳ ಒಪ್ಪಂದ ಮಾಡಿಕೊಂಡು ದುಡಿಯುವ ವರ್ಗದ ಶ್ರಮಜೀವಿಗಳನ್ನು ಯಾಮಾರಿಸಿ ರಾಜ್ಯಾಧಿಕಾರವನ್ನು ಹಿಡಿದು ದೇಶದ ಸಂಪತ್ತು ಹಾಗೂ ಸಂಪನ್ಮೂಲಗಳನ್ನು ಹಂಚಿಕೊಂಡು ಮೆರೆಯುತ್ತಾರೋ ಅಲ್ಲಿವರೆಗೂ ಈ ದೇಶದ ಬಹುಸಂಖ್ಯಾತ ದುಡಿಯುವ ಜನರಿಗೆ ಸ್ವಾತಂತ್ರ್ಯ ಸಮಾನತೆಗಳು ಸಿಕ್ಕಲು ಸಾಧ್ಯವೇ ಇಲ್ಲಾ. ಕೇವಲ ಚುನಾವಣೆ ವ್ಯವಸ್ಥೆ ಮಾತ್ರವಲ್ಲ ಇಡೀ ದೇಶದ ಆಳುವ ವ್ಯವಸ್ಥೆಯೆ ಬದಲಾಗಬೇಕಾಗಿದೆ. ಬಂಡವಾಳಶಾಹಿ  ಹಿತಾಸಕ್ತಿಗೆ ಪೂರಕವಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗಿ ದುಡಿಯುವ ವರ್ಗದ ಹಿತಾಸಕ್ತಿಯನ್ನು ಕಾಪಾಡುವಂತಹ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬರಬೇಕಾಗಿದೆ.


  ಸಧ್ಯಕ್ಕೆ ಅಂತಹ ವ್ಯವಸ್ಥೆ ಬರುವ ಲಕ್ಷಣಗಳಂತೂ ಇಲ್ಲಾ. ಆದರೂ ಜನಾಂದೋಲನಗಳು ಕೆಟ್ಟ ವ್ಯವಸ್ಥೆಯನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ. ದಮನವನ್ನು ವಿರೋಧಿಸಿ ಹೊಸ ವ್ಯವಸ್ಥೆಯೊಂದನ್ನು ತರಬಹುದಾದಂತಹ ಜನಾಂದೋಲನದ ನಿರೀಕ್ಷೆಯೊಂದೇ ಈಗಿನ ತುರ್ತು ಅಗತ್ಯವಿದೆ. ಯಾವುದೇ ವ್ಯವಸ್ಥೆಯ ವಿನಾಶದ ಬೀಜಗಳು ಆ ವ್ಯವಸ್ಥೆಯೊಳಗಿಂದಲೇ ಹುಟ್ಟಿಕೊಳ್ಳುತ್ತವೆ. ಅದೇ ರೀತಿ ಈಗಿನ ಬಂಡವಾಳಶಾಹಿ ಶೋಷಕ ವ್ಯವಸ್ಥೆಯ ಬೀಜಗಳೂ ಸಹ ಇದರಲ್ಲಿಯೇ ಇದೆ. ಶೋಷಣೆ ಹೆಚ್ಚಿದಷ್ಟೂ ಆ ಪ್ರತಿಭಟನೆಯ ಬೀಜಗಳು ಬೆಳೆಯುತ್ತವೆ. ಒಂದಿಲ್ಲೊಂದು ದಿನ ಅದೇ ಬೀಜಗಳು ಜನಾಂದೋಲನದ ರೂಪತಾಳಿ ಈಗಿರುವ ಬಂಡವಾಳಶಾಹಿ ವ್ಯವಸ್ಥೆಯನ್ನು ಆಪೋಷಣತೆಗೆದುಕೊಳ್ಳುವುದರಲ್ಲಿ ಸಂದೇಹವೇ ಇಲ್ಲಾ. ಅಲ್ಲಿವರೆಗೂ ಪ್ರತಿಭಟನೆಯ ಬೀಜಗಳನ್ನು ಕಾಪಿಟ್ಟುಕೊಳ್ಳಬೇಕಿದೆ, ಹೋರಾಟದ ಹಾದಿಯನ್ನು ಮುಂದುವರೆಸಬೇಕಾಗಿದೆ. ಜನರನ್ನು ಬಂಡವಾಳಶಾಹಿಯ ವಿರುದ್ದ ಸದಾ ಜಾಗೃತಗೊಳಿಸುತ್ತಲೇ ಇರಬೇಕಾಗಿದೆ. ಸಂವಿಧಾನದ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ಹಾಗೂ ಮೀಡಿಯಾಂಗಗಳು ಬಂಡವಾಳಶಾಹಿಗಳ ಪರವಾಗಿಯೇ ಇರುವುದರಿಂದ ಹಾಗೂ ನೈತಿಕತೆಯ ಮಿತಿಯನ್ನೂ ಮೀರಿ ಭ್ರಷ್ಟತೆಯನ್ನು ರೂಢಿಸಿಕೊಂಡಿರುವುದರಿಂದ ಅವುಗಳ ವಿರುದ್ಧ ಜನರನ್ನು ಎಚ್ಚರಿಸುವ ಕೆಲಸವನ್ನು ಪ್ರಜ್ಞಾವಂತರು ಒಗ್ಗಟ್ಟಾಗಿ ಮಾಡಬೇಕಿದೆ. ಇಲ್ಲವಾದರೆ ಶತಮಾನಗಳ ಕಾಲ ಬಂಡವಾಳಿಗರ ಶೋಷಣೆಯನ್ನು  ಅನುಭವಿಸಬೇಕಾಗುತ್ತದೆ. 



                   -ಶಶಿಕಾಂತ ಯಡಹಳ್ಳಿ

     
    





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ